ಶುಕ್ರವಾರ, ಮೇ 3, 2019

ಆದಿವಾಸಿಗಳ ಪಾಲಿಗೆ ಮರಣ ಶಾಸನವಾದ ನೂತನ ಅರಣ್ಯ ಕಾಯ್ದೆ



.

ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಪೆಬ್ರವರಿ 13 ರಂದು  ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು  ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಅರಣ್ಯದ ಮೇಲಿನ ಹಕ್ಕುಗಳ ಅರ್ಜಿಗಳ ಪರಿಶೀಲನಾ ಕಾರ್ಯಕೂಡ ಬಿರುಸಿನಿಂದ ನಡೆಯುತ್ತಿದೆ. 2006 ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಆದಿವಾಸಿಗಳಿಗೆ ದಯಪಾಲಿಸಿದ್ದ ಇದೇ ಸರ್ವೋಚ್ಛನ್ಯಾಯಾಲಯವು  ಇದೀಗ ಎಲ್ಲರನ್ನು ಸಾಮೂಹಿಕವಾಗಿ ಅರಣ್ಯಗಳಿಂದ ತೆರವುಗೊಳಿಸಬೇಕು ಎಂಬ ತೀರ್ಪು ನೀಡುವುದರ ಮೂಲಕ ತನ್ನ ಧ್ವಂದ್ವ ನೀತಿಯನ್ನು ಅನಾವರಣಗೊಳಿಸಿದೆ
ಮೂರು ಕೋಟಿಗೂ ಅಧಿಕ ಮಂದಿ ಬುಡಕಟ್ಟು ಸಮುದಾಯದ ಜನತೆ ಭಾರತದ ಅರಣ್ಯಗಳಲ್ಲಿ ಅನೇಕ ಶತಮಾನಗಳದಿಂದಲೂ ಬದುಕು ಕಟ್ಟಿಕೊಂಡಿದ್ದಾರೆ. ಅವರ ಜೊತೆಗೆ ಅರಣ್ಯದಂಚಿನಲ್ಲಿ ಬದುಕುತ್ತಿರುವ ಹಿಂದುಳಿದ ಹಲವಾರು ಸಮುದಾಯಗಳು, ಬೇಸಾಯ ಮತ್ತು ಅರಣ್ಯದ ಕಿರುಉತ್ಪನ್ನಗಳನ್ನು ನಂಬಿ ಬದುಕುತ್ತಿವೆ.  ಈ ತೀರ್ಪಿನ ವಿರುದ್ಧ  ಈಗಾಗಲೇ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ. ಜೊತೆಗೆ ದೇಶ್ಯಾದ್ಯಂತ ನಾಗರೀಕರಿಂದ ಪ್ರತಿಭಟನೆ ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಮನಗಂಡ ನ್ಯಾಯಾಲಯ ತಾತ್ಕಾಲಿಕವಾಗಿ ತನ್ನ ತೀರ್ಪನ್ನು ತಡೆ ಹೊಡಿದಿದೆ. ಈ ನಡುವೆ ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯವು ಅತ್ಯಂತ ಗುಪ್ತವಾಗಿ ನೂತನ ಅರಣ್ಯಕಾಯ್ದೆಯೊಂದನ್ನು ರಚಿಸಿದ್ದು, ಅದನ್ನು ಜಾರಿಗೆ ತರಲು  ಹುನ್ನಾರ ನಡೆಸಿದೆ. ಅಕಸ್ಮಾತ್ ಈ ಕಾಯ್ದೆಯು ಜಾರಿಗೆ ಬಂದಿದ್ದೇ ಆದರೆ, ಇದನ್ನು ನಾವು ಭಾರತದ ಆದಿವಾಸಿಗಳ  ಪಾಲಿಗೆ ಮರಣ ಶಾಸನ   ಎಂದು ಬಣ್ಣಿಸಬಹುದು.
1927 ರ ಸ್ವಾತಂತ್ರ ಪೂರ್ವದಲ್ಲಿ ಬ್ರಿಟೀಷರು ಜಾರಿಗೆ ತಂದಿದ್ದ ಅರಣ್ಯ ಕಾಯ್ದೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವುದರ ಮೂಲಕ   “ ತಿದ್ದುಪಡಿಯಾದ ಅರಣ್ಯ ಕಾಯ್ದೆ-1927” ಎಂದು ಕರೆಯಲಾಗಿರುವ  ಈ ನೂತನ ಕಾಯ್ದೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸಾರ್ವಭೌಮ ಹಕ್ಕನ್ನು ನೀಡಲಾಗಿದೆ. ಅರಣ್ಯದೊಳಕ್ಕೆ ಅತ್ರಿಕ್ರಮ ಪ್ರವೇಶ ಮಾಡಿದವರನ್ನು ಗುಂಡಿಟ್ಟ ಕೊಲ್ಲುವ ಅವಕಾಶವನ್ನು ನೀಡುವುದರ ಜೊತೆಗೆ, ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳನ್ನು ರಾಜ್ಯ ಸರ್ಕಾರಗಳು ವಿಚಾರಣೆ ಒಳಪಡಿಸದಂತೆ ನಿರ್ಬಂಧಿಸಲಾಗಿದೆ. ಇದಿಷ್ಟೂ ಸಾಲದೆಂಬಂತೆ ಈ ಅಧಿಕಾರಿಗಳು ಯಾವುದೇ ಅರಣ್ಯವನ್ನು ಕಾಯ್ದಿಟ್ಟ ಅರಣ್ಯ ಎಂದು ಘೋಷಿಸುವ ಹಕ್ಕನ್ನು ನೀಡಲಾಗಿದೆ. ಒಟ್ಟಾರೆ ಈ ಕಾಯ್ದೆಯು ಟಿಂಬರ್ ಮಾಫಿಯಾಗಳಿಗೆ ಮತ್ತು ಒಡಿಸ್ಸಾ, ಮಧ್ಯಪ್ರದೇಶ, ಛತ್ತೀಸ್ ಗಡ ರಾಜ್ಯಗಳ ಅರಣ್ಯ ಭೂಮಿಯಲ್ಲಿ ಹೇರಳವಾಗಿರುವ ಖನಿಜ ಸಂಪತ್ತಿನ ಮೇಲೆ ಕಣ್ಣಿರುವ ಕಾರ್ಪೊರೇಟ್ ಬೃಹತ್ ಕಂಪನಿಗೆ ನೆರವಾಗುವ ದೃಷ್ಟಿಕೋನದಿಂದ ರಚಿತವಾದ ಕಾನೂನು ಎಂದು ಹೇಳಬಹುದು. ಜನಪ್ರತಿನಿಧಿಗಳು ಮತ್ತು ಕಾರ್ಪೊರೇಟ್ ಕುಳ ಅಂಗ್ಯೆ ಮೇಲೆ ಆಡುವ ಗಿಣಿಗಳಂತಾಗಿರುವ ಅಧಿಕಾರಿಗಳು ರೂಪಿಸಿರುವ ಈ ನೂತನ ಅರಣ್ಯ ಕಾಯ್ದೆಯನ್ನು ಜಾರಿಗೆ ಬಾರದಂತೆ ನೊಡಿಕೊಳ್ಳುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತ ನಾಗರೀಕರ ಮೇಲಿದೆ. ಇಲ್ಲದಿದ್ದರೆ, ಆದಿವಾಸಿಗಳ ಪರ ಕಾಳಜಿ ಇರುವ ಮಾನವ ಹಕ್ಕುಗಳ ಹೋರಾಟಗಾರರನ್ನು ಈವರೆಗೆ ನಗರ ನಕ್ಸಲರು ಎಂದು ಕರೆಯುತ್ತಿದ್ದ ಆಡಳಿತ ವ್ಯವಸ್ಥೆ ಇನ್ನು ಮುಂದೆ ಅವರನ್ನು ವಿಚಾರಣೆಗೆ ಒಳಪಡಿಸದೆ, ಗುಂಡಿಟ್ಟು ಕೊಂದರೂ ಆಶ್ಚರ್ಯ ಪಡಬೇಕಿಲ್ಲ. ಈಗಾಗಲೇ ದೆಹಲಿಯ ಜವಹರಲಾಲ್ ವಿ.ವಿ.ಯ ಪ್ರೊಫೆಸರ್ ಸಾಯಿಭಾಬಾ, ಛತ್ತೀಸ್ ಘಡದ ರಾಯ್ ಪುರದ ಡಾ.ಬ್ರಿಯಾಂಕ್ ಸೇನ್.ಅವರ ಪತ್ನಿ ಇಳಾ ಸೇನ್, ಮಾನವ ಹಕ್ಕುಗಳ ಹೋರಾಟಗಾರರಾದ ಸುಮಾ ಭಾರದ್ವಜ್ ಮತ್ತು ಅರುಣ್ ಫೆರಿರಾ ಇವರೆಲ್ಲಾ ಒಂದಲ್ಲಾ ಒಂದು ಬಗೆಯಲ್ಲಿ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.

ಆದಿವಾಸಿಗಳೆಂದರೆ, ಆರಣ್ಯ ನಾಶಕರು ಎಂದು ನಂಬಿರುವ ಇಂದಿನ ಆಡಳಿತ ವ್ಯವಸ್ಥೆಯ ತಲೆಯೊಳಗೆ ಮಲ ತುಂಬಿಕೊಂಡಿದೆ ಎಂದರೆ, ತಪ್ಪಾಗಲಾರದು. ಈ ದೇಶದಲ್ಲಿ ಇನ್ನೂ ಅರಣ್ಯ ಮತ್ತು ಅಲ್ಲಿನ ಜೀವಸಂಕುಲ ಜೀವಂತವಾಗಿದ್ದರೆ ಅಥವಾ ಸುರಕ್ಷಿತವಾಗಿದ್ದರೆ ಅದು ಅರಣ್ಯವಾಸಿಗಳಾದ ಆದಿವಾಸಿಗಳಿಂದ ಮತ್ತು ಅವರು ನಂಬಿಕೊಂಡು ಬಂದಿರುವ  ನಮ್ಮ ನೆಲಮೂಲ ಸಂಸ್ಕೃತಿ ಮತ್ತು ಪರಂಪರೆಯಿಂದ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಇದರ ಜೊತೆಗೆ ನಮ್ಮ ಜನಪದರು ಗ್ರಾಮೀಣ ಭಾಗದಲ್ಲಿ ನಾಗಬಮ. ದೇವರ ಕಾಡು ಹೆಸರಿನಲ್ಲಿ ಅರಣ್ಯವನ್ನು ಪೋಷಿಸಿಕೊಂಡು ಬಂದಿದ್ದಾರೆ. ಅರಣ್ಯಾಧಿಕಾರಿಗಳು ಎಂಬ ಈ ಬಿಳಿಯಾನೆಗಳಿಂದ  ಭಾರತದಲ್ಲಿ ಅರಣ್ಯಗಳು ಮತ್ತು ಅಲ್ಲಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಅಭಿವೃದ್ಧಿಯಾಗಿದ್ದರೆ ಅದು ಅವರ ಕಡತಗಳಲ್ಲಿ ಮಾತ್ರ.
ಈಗಾಗಲೇ ಭಾರತದ ಗ್ರಾಮೀಣ ಜಗತ್ತನ್ನು ನರಕ ಮಾಡಿರುವ ಆಡಳಿತ ವ್ಯವಸ್ಥೆಯಿಂದಾಗಿ ಹಳ್ಳಿಗಳು ನರಕಗಳಾಗಿ, ಕೃಷಿ ಉದ್ಯಮ ನೆಲಕಚ್ಚುವುದರ ಎಲ್ಲರೂ ನಗರದತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮವೆಂಬಂತೆ ದೇಶದ ನಗರಗಳು ತುಂಬಿತುಳುಕಾಡುತ್ತಾ, ಅಡ್ಡಾದಿಡ್ಡಿ ಬೆಳೆಯುತ್ತಾ, ಕುಡಿಯುವ ನೀರು, ಒಳಚರಂಡಿ, ಸಾರಿಗೆ, ರಸ್ತೆ, ವಸತಿ, ಕಸವಿಲೇವಾರಿ ಹೀಗೆ ಎಲ್ಲಾ ಸೇವಾ ವಲಯಗಳು ಮತ್ತು ಯೋಜನೆಗಳು ಹಿಡಿತಕ್ಕೆ ಸಿಗದೆ ತಲೆಕೆಳಕಾಗಿವೆ. ಇಂತಹ ಸ್ಥಿತಿಯಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿದರೆ ಅವರ ಭವಿಷ್ಯದ ಗತಿಯೇನು?  ಅವರೂ ಸಹ ನೆಲದ ಮೇಲಿನ ನರಕಗಳಂತಿರುವ ನಗರಗಳಿಗೆ ಜಮೆಯಾಗಬೇಕೆ?
ಪಕ್ಷ ಬೇಧವಿಲ್ಲದೆ ಎಲ್ಲಾ ಕೇಂದ್ರ ಸರ್ಕಾರಗಳು ಆದಿವಾಸಿಗಳ ಬದುಕಿನ ಜೊತೆ ನಿರಂತರವಾಗಿ  ಚೆಲ್ಲಾಟವಾಡುತ್ತಲೇ ಬಂದಿವೆ. ಅವರಿಗೊಂದು  ಶಾಶ್ವತ ನೆಲೆ ಕಲ್ಪಿಸಿಕೊಡಲು ವಿಫಲವಾಗಿವೆ. ಈಗವರೆಗಿನ ಕಾನೂನುಗಳು, ತಿದ್ದುಪಡಿಗಳು ಮತ್ತು ಶಿಫಾರಸ್ಸುಗಳು ಅವರನ್ನೂ ಸದಾ ಅತಂತ್ರದ ಸ್ಥಿತಿಯಲ್ಲಿ ನಿಲ್ಲಿಸಿವೆ. 1976 ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ಆದಿವಾಸಿಗಳನ್ನು ಅರಣ್ಯದಿಂದ ಹೊರದಬ್ಬಬೇಕೆಂದು ಶಿಫಾರಸ್ಸು ಮಾಡಿತ್ತು. ಇದರ ಅನ್ವಯ  1980ರಲ್ಲಿ ಭಾರತದ ಅರಣ್ಯ ರಕ್ಷಣಾ ಕಾಯ್ದೆಯು ಜಾರಿಗೆ ಬಂದಿತು. ಆದರೆ, 1988 ರಲ್ಲಿ ಜಾರಿಯಾದ ಮತ್ತೊಂದು ಭಾರದ ಅರಣ್ಯ ನಿಯಮವೊಂದು ಜಾರಿಗೆ ಬಂದು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದೆ ಕರುಣೆ ತೋರಿತು. ಜೊತೆಗೆ 1996 ರಲ್ಲಿ ಅಸ್ತಿತ್ವಕ್ಕೆ ತರಲಾದ  ಬುಡಕಟ್ಟು ಜನಾಂಗಗಳ ರಕ್ಷಾಣಾ ಕಾಯ್ದೆಯು ಆದಿವಾಸಿಗಳ ಪಾಲಿಗೆ ರಕ್ಷಣಾ ಗೋಡೆಯಾಗಿ ಪರಿಣಮಿಸಿತು. ಇವೆಲ್ಲಾ ಗೊಂದಲಗಳ ನಡುವೆಯೂ ಅರಣ್ಯವಾಸಿಗಳ ಬಲುದಿನಗಳ ಬೇಡಿಕೆಯಾದ “ ಜಲ್, ಜಂಗಲ್, ಜಮೀನ್’ ( ಜಲ, ಅರಣ್ಯ ಮತ್ತು ಜಮೀನು) ಪೂರ್ಣವಾಗಿ ಯಶಸ್ವಿಯಾಗಲಿಲ್ಲ.  ನಕ್ಸಲ್ ಹಿಂಸಾಚಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮತ್ತು ಆದಿವಾಸಿಗಳು ಮಾವೋವಾದಿ ನಕ್ಸಲ ರ ಹಿಡಿತಕ್ಕೆ ಸಿಲುಕದಿರಲಿ ಎಂಬ ಆಲೋಚನೆಯಿಂದ 2006 ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ದಯಪಾಲಿಸಿದ ಸುಪ್ರೀಂ ಕೋರ್ಟ್ ನ  ಮಹತ್ವದ ತೀರ್ಪಿನಿಂದಾಗ ಅವರುಗಳು ಒಂದಿಷ್ಟು  ಕಾಲ ನೆಮ್ಮದಿಯಿಂದ ಇದ್ದರು. ಜೊತೆಗೆ ತಮ್ಮ ಹಕ್ಕು ಸ್ಥಾಪಿಸಲು ಹೋರಾಡುತ್ತಿದ್ದಾರೆ. ಇಂದಿಗೂ ಕೂಡ ದೇಶಾದ್ಯಂತ ರಾಜ್ಯಗಳ ಅರಣ್ಯ ಇಲಾಖೆಗಳಲ್ಲಿ ಅರಣ್ಯವಾಸಿಗಳು ಅಧಿಕೃತ ವಾಸ ಕುರಿತಂತೆ ಮತ್ತು ಅವರು ಹೊಂದಿರುವ ಭೂಮಿ ಕುರಿತಂತೆ ನಾಲ್ಕು ಲಕ್ಷದ 21 ಸಾವಿರ ಅರ್ಜಿಗಳು ವಿಲೆವಾರಿಯಾಗದೆ ಕೊಳೆಯುತ್ತಿವೆ. ಈವರೆ 79 ಸಾವಿರ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಕರ್ನಾಟಕದಲ್ಲಿ 53 ಸಾವಿರದ 785 ಅರ್ಜಿಗಳು ಬಾಕಿ ಉಳಿದಿವೆ. ಛತ್ತೀಸ್ ಗಡ ರಾಜ್ಯದ  ಒಟ್ಟು ವಿಸ್ತಿರ್ಣದ ಶೇಕಡ 44 ರಷ್ಟು ಅರಣ್ಯ ಭೂಮಿಯಿದ್ದು ಅರಣ್ಯವಾಸಿಗಳಿಗೆ ಅದು ಶಾಶ್ವತ ನೆಲೆಯಾಗಿದೆ. ಜೊತೆಗೆ ಮಧ್ಯಪ್ರದೇಶ ಮತ್ತು ಒಡಿಸ್ಸಾ ರಾಜ್ಯದಲ್ಲಿಯೂ ಕೂಡ ಅತ್ಯಧಿಕ ಮಂದಿ ಅರಣ್ಯವಾಸಿಗಳಿದ್ದಾರೆ. ಸರ್ವೋಚ್ಛ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮವಾದ ವಿಷಯಗಳನ್ನು ಎಲ್ಲಾ ಆಯಾಮಗಳಿಂದಲೂ ಹಾಗೂ ಆದಿವಾಸಿಗಳ ಇತಿಹಾಸವನ್ನು, ಅವರ ವರ್ತಮಾನದ ಬದುಕನ್ನು ಮತ್ತು ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ತನ್ನ ತೀರ್ಪನ್ನು ನೀಡಬೇಕಿದೆ.

ಒಂದು ವೇಳೆ ರಾಜ್ಯಗಳ ಒತ್ತಡ ಅಥವಾ ಮೇಲ್ಮನವಿಯನ್ನು ಪರಿಗಣಿಸಿ ಅವರ ಒಕ್ಕಲೆಬ್ಬಿಸುವಿಕೆಯನ್ನು ನ್ಯಾಯಾಲಯವು ತಡೆದು. ಅವರಿಗೆ ಹಕ್ಕನ್ನು ದಯಪಾಲಿಸಿದರೂ ಸಹ ಆದಿವಾಸಿಗಳ ಹೋರಾಟ ಕೊನೆಗೊಳ್ಳುವುದಿಲ್ಲ. ಏಕೆಂದರೆ, ತೆರೆಮರೆಯಲ್ಲಿ ಹೊಸ ಅರಣ್ಯ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ಬಗ್ಗೆ ಆದಿವಾಸಿಗಳು ಸೇರಿದಂತೆ ಪ್ರಜ್ಞಾವಂತ ನಾಗರೀಕರು ಎಚ್ಚರದಿಂದ ಇರಬೇಕಾಗಿದೆ. , ಈ ಹೊಸ ಕಾಯ್ದೆಯನ್ನು ರೂಪಿಸುವಾಗ ಪ್ರಜ್ಞಾಪೂರ್ವಕವಾಗಿ ಕೇಂದ್ರ ಬುಡಕಟ್ಟು ಸಚಿವಾಲಯದ ಅಧಿಕಾರಿಗಳನ್ನು ಮತ್ತು ಪರಿಸರವಾದಿಗಳು ಮತ್ತು ಮಾನವ ಹಕ್ಕು ಆಯೋಗದ ಸದಸ್ಯರನ್ನು ದೂರ ಇಟ್ಟು ಕೇವಲ ಅರಣ್ಯಧಾಇಕಾರಿಗಳು ಮಾತ್ರ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಆಡಳಿತ ಶಾಹಿಯ ಹುನ್ನಾರದಂತೆ ಕಾಣುತ್ತಿದೆ.
( ಮಾಹಿತಿ ಸೌಜನ್ಯ-  ಡೌನ್ ಟು ಅರ್ಥ್, ಇಂಗ್ಲೀಷ್ ಪಾಕ್ಷಿಕ, ನವದೆಹಲಿ)