ಶುಕ್ರವಾರ, ಜನವರಿ 27, 2017

ಗಾಂಧಿವಾದವೆಂದರೆ, ಗಂಟೆ-ಜಾಗಟೆ-ಶಂಖಗಳ ನೀನಾದವಲ್ಲ



ಇದನ್ನು ನೀವು ಮಹಾತ್ಮ ಗಾಂಧಿಯವರ  ಶಕ್ತಿ ಎಂದಾದರೂ ಭಾವಿಸಿ ಅಥವಾ ಅವರ ವ್ಯೆಕ್ತಿತ್ವದ ವೈರುಧ್ಯವೆಂದಾದರೂ ಕರೆಯಿರಿ ಚಿಂತೆಯಿಲ್ಲ.  ಗಾಂಧೀಜಿಯವರು ತಾವು ಬದುಕಿದ್ದಾಗ ತಮ್ಮ ಪ್ರಖರ ನಿಲುವು ಮತ್ತು ಚಿಂತನೆಗಳ ಮೂಲಕ  ಪಾಶ್ಚಿಮಾತ್ಯ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ್ದರು.   ಅದೇ ರೀತಿ ಅವರು ತಮ್ಮ ನಿಧನಾನಂತರವು ಸಹ ಹುಟ್ಟಿ ಬೆಳೆದ ಭಾರತದ ನೆಲವನ್ನು   ಕಾಡುತ್ತಿದ್ದಾರೆ ಇದು ಅವರ ವ್ಯೆಕ್ತಿತ್ವದ ಗುಣ ಮತ್ತು ವಿಶೇಷ.
ಭಾರತದ ಜನ ಮಾನಸದಲ್ಲಿ ಗಾಂಧೀಜಿ ಎಂದರೆ ಚರಕ    ಎಂಬ ಮಾತು ಮನೆ ಮಾತಾಗಿದೆ ಅದೇ ರೀತಿ  ಸತ್ಯ ಹಾಗೂ  ಅಹಿಂಸೆಗೆ ಪರ್ಯಾಯ ಹೆಸರೇ ಗಾಂಧೀಜಿ ಎಂಬ ನಂಬಿಕೆ ಬಲವಾಗಿ ಬೇರೂರಿದೆ.  ಅವುಗಳೊಂದಿಗೆ ಗಾಂಧೀಜಿಯವರಿಗೆ ಇರುವ ನಂಟನ್ನು ಅಷ್ಟೊಂದು ಸುಲಭವಾಗಿ ಕಳಚಲಾಗದು. ಈ ಕಾರಣಕ್ಕಾಗಿ  ಸ್ವಾತಂತ್ರ್ಯಾನಂತರದ ದಿನಗಳಿಂದ ಖಾದಿ ಮತ್ತು ಖಾದಿ ಗ್ರಾಮೋದ್ಯೋಗ ಕೇಂದ್ರದ ಕ್ಯಾಲೆಂಡರ್ ಗಳು ಮತ್ತು ದಿನಚರಿ ಪುಸ್ತಕ ಇವುಗಳಲ್ಲಿ  ಚರಕದಿಂದ ನೂಲು ನೇಯುತ್ತಿದ್ದ ಗಾಂಧಿಯವರ ಭಾವ ಚಿತ್ರಗಳು  ಶಾಶ್ವತ ಸ್ಥಾನ ಪಡೆದಿವೆ. ಆದರೆ, .ಈ ವರ್ಷ ಮಾತ್ರ ಗಾಂಧೀಜಿಯ ಚಿತ್ರ ಪಲ್ಲಟಗೊಂಡಿದೆ. ಅವರ ಜಾಗದಲ್ಲಿ ಒಂಟಿ ಕೈಯಲ್ಲಿ  ಚರಕದಿಂದ ನೂಲು ನೇಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ ಕಾಣಿಸಿಕೊಂಡು ಹಲವು ವಿವಾದ ಹಾಗೂ ವಾಗ್ವಾದಕ್ಕೆ ಕಾರಣವಾಗಿದೆ. ಇಲ್ಲಿಯವರೆಗೆ ಯಾವೊಬ್ಬ ಪ್ರಧಾನಿಯೂ ಗಾಂಧೀಜಿಯವರ ಭಾವಚಿತ್ರವನ್ನು ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಈ ಬಾರಿ ನರೇಂದ್ರ ಮೋದಿಯವರ  ಭಕ್ತರು ಈ ಸಾಹಸಕ್ಕೆ ಕೈ ಹಾಕಿದರು. ಇದು ಪ್ರಜ್ಞಾವಂತ ನಾಗರೀಕರ ಪಾಲಿಗೆ ಅನಿರೀಕ್ಷಿತ ಘಟನೆಯಾಗಿರಲಿಲ್ಲ ಏಕೆಂದರೆ,   ಗಾಂಧೀಜಿಯನ್ನು ಕೊಂದ ಪಾತಕಿಯನ್ನು ಹುತಾತ್ಮನ ಪಟ್ಟಕ್ಕೆ ಏರಿಸಿ ಗುಡಿ ಕಟ್ಟುತ್ತಿರುವ ಈ ವರ್ತಮಾನದ ಭಾರತದಲ್ಲಿ ಸಾಮಾಜಿಕ ಮೌಲ್ಯಗಳು ಯಾವ ಕ್ಷಣದಲ್ಲಾದರೂ ಪಲ್ಲಟಗೊಳ್ಳಬಲ್ಲವು ಎಂಬುದನ್ನು ಅವರೆಲ್ಲರೂ ಅರಿತಿದ್ದಾರೆ.
ಈ ಘಟನೆಗೆ ಪೂರಕವಾಗಿ ಹರಿಯಾಣದ ಬಿ.ಜೆ.ಪಿ. ಸರ್ಕಾರದ ಸಚಿವನೊಬ್ಬ ನೀಡಿದ ಹೇಳಿಕೆ ಇವೆರೆಲ್ಲರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. “ಖಾದಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಿರುವ ಪ್ರಯುಕ್ತ, ಗಾಂಧಿ ಚಿತ್ರವನ್ನು ಬದಲಾಯಿಸಿ, ಮೋದಿಯವರ ಚಿತ್ರವನ್ನು ಹಾಕಲಾಗಿದೆ” ಎಂಬ ಸಚಿವನ ಮಾತು, ಭಾರತದ ಸಂದರ್ಭದಲ್ಲಿ ಖಾದಿ ಮತ್ತು ಚರಕ ಕುರಿತಂತೆ ಎಳ್ಳಷ್ಟು ಮಾಹಿತಿ ಇರದ ಅಜ್ಞಾನಿಗಳು ಮಾತ್ರ ಆಡಬಹುದಾದ ಮಾತುಗಳು ಎಂಬುದಕ್ಕೆ ಸಾಕ್ಷಿಯಾಗಿವೆ. ಈ ದೇಶದ . ಖಾಸಾಗಿ ದೈತ್ಯ ಕಂಪನಿಯೊಂದರ ಮೊಬೈಲ್ ಜಾಹಿರಾತಿಗೆ ( ಮುಖೇಶ್ ಅಂಬಾನಿಯವರ ಜಿಯೋ ಮೊಬೈಲ್) ಈ ದೇಶದ ಪ್ರಧಾನಿಯ ಚಿತ್ರ ಬಳಕೆಯಾಗುತ್ತದೆ ಎಂದರೆ,  ಸರಳತೆ ಮತ್ತು ಸ್ವಾಭಿಮಾನದ ಪ್ರತೀಕವಾದ ಖಾದಿಗೂ ಮತ್ತು ಐಷಾರಾಮಿ ಹಾಗೂ ಉಪಭೋಗ ಸಂಸ್ಕೃತಿಯ ಪ್ರತೀಕವಾದ  ಮೊಬೈಲ್ ಗೂ ಇದೀಗ  ವೆತ್ಯಾಸವಿಲ್ಲದಂತಾಗಿದೆ ಅಂದರೆ, . ದೇಶಿಯತೆ ಮತ್ತು ಆಧುನಿಕತೆಯ ಗಡಿ ರೇಖೆಗಳು ಅಳಿಸಿಹೋಗಿವೆ ಎಂದರ್ಥ. ಆಶ್ಚರ್ಯದ ಸಂಗತಿಯೆಂದರೆ, ಈ ವಿವಾದ ಕುರಿತು ಪ್ರಧಾನಿ ಮೋದಿಯವರು ಈವರೆಗೆ ತುಟಿ ಬಿಚ್ಚಿಲ್ಲ. ದೇಶ ಭಕ್ತರು  ಗಾಂಧಿವಾದ ವೆಂಬುದು ಗುಡಿಯೊಳಗಿನ  ಗಂಟೆ, ಜಾಗಟೆಗಳ  ಶಬ್ಧವೆಂದುಕೊಂಡಿದ್ದಾರೆ.  ಅದು ಈ ನೆಲದ ದುರಂತವೆಂದರೆ ತಪ್ಪಾಗಲಾರದು.
 ಗಾಂಧಿ ಅಥವಾ ಗಾಂಧಿವಾದವೆಂಬುದು  ಕೇವಲ ವಿಚಾರ ಧಾರೆ ಮಾತ್ರವಲ್ಲ, ಅದು ಶಬ್ದದೊಳಗಿನ ನಿಶಬ್ದ.  ಗಾಂಧಿವಾದವೆಂಬುದು ಮಾತಿನ ಸಂಗತಿಯಲ್ಲ, ಒಂದು ಜೀವನ ಕ್ರಮ ಅಥವಾ ಬದುಕಿನ ತಾತ್ವಿಕ ಸಿದ್ದಾಂತ. ಇಂತಹ  ತಿಳುವಳಿಕೆಯಿಲ್ಲದ ಮಂದಿಯಿಂದ ಇದೀಗ ಗಾಂಧೀಜಿಯವರ  ವ್ಯೆಕ್ತಿತ್ವದ ಮತ್ತು ಅವರ ವಿಚಾರಧಾರೆ ಮೌಲ್ಯ ಮಾಪನ ನಡೆಯುತ್ತಿರುವುದು ಈ ನೆಲದ ದುರಂತ. ತಮ್ಮ ಜೀವಿತದಲ್ಲಿ  ಎಂದೂ ಗಾಂಧಿಯನ್ನು ನೋಡದ, ಕೇಳದ, ಗಾಂಧಿಯನ್ನು ಓದದ ಕೋಟ್ಯಾಂತರ ಭಾರತದ ಜನತೆ ಅದರಲ್ಲೂ ಅನಕ್ಷರತೆ ಮತ್ತು ಬಡತನ ತಾಂಡವಾಡುತ್ತಿದ್ದ ಸ್ವಾತಂತ್ರ್ಯ ಪೂರ್ವ ಭಾರತದ ಜನತೆ ಗಾಂಧೀಜಿಯವರು  ನೀಡುತ್ತಿದ್ದ ಹೋರಾಟದ ಕರೆಗೆ ಪ್ರವಾಹೋಪಾದಿಯಲ್ಲಿ ಬೀದಿಗಳಿಯುತ್ತಿದ್ದರು. ಹಲವು ಭಾಷೆ, ಸಂಸ್ಕೃತಿಗಳ ನಾಡಾದ ಈ ದೇಶದಲ್ಲಿ ಜನಸಾಮಾನ್ಯರ ಮನಸ್ಸು ಗೆಲ್ಲುವುದು ಅಷ್ಟು ಸುಲಭದ ಸಂಗತಿಯಲ್ಲ. ಒಂದು ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂದು ಭಾವಿಸಿಕೊಳ್ಳುವ ಮತ್ತು ಒಬ್ಬ ವ್ಯೆಕ್ತಿಗಾದ ಅಪಮಾನವನ್ನು ತನ್ನ ವ್ಯಯಕ್ತಿಕ ಅಪಮಾನವೆಂದು ಭಾವಿಸಿಕೊಳ್ಳುವ ಮಾತೃಹೃದಯ ಗಾಂಧೀಜಿಯವರಿಗಿತ್ತು. ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದೊಡನೆ ದಿಡಿರ್ ನಾಯಕರಾಗಿ ಉದ್ಭವಿಸಲಿಲ್ಲ. ಭಾರತದುದ್ದಕ್ಕೂ ಓಡಾಡಿ ಇಲ್ಲಿನ ಜನರ ಸುಖ ದುಃಖಗಳನ್ನು ಅರಿತರು. ಅನೇಕ ಪ್ರಾಮಾಣಿಕ ದೇಶಭಕ್ತ ಯುವಕರನ್ನು ಗುರುತಿಸಿ, ಅವರ ಎದೆಯೊಳಗೆ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಅದನ್ನು ಆರದಂತೆ ನೋಡಿಕೊಂಡರು. ಹಿರಿಯರು, ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಅಭಿಪ್ರಾಯಗಳಿಗೆ ಕಿವಿಗೊಟ್ಟು ಆಲಿಸುವ ಗುಣ ಅವರಲ್ಲಿತ್ತು. ತನ್ನೊಂದಿಗೆ ಶಾಶ್ವತವಾಗಿ ಸೈದ್ಧಾಂತಿಕವಾಗಿ  ಭಿನ್ನಾಭಿಯ ಹೊಂದಿದ್ದ  ಅಂಬೇಡ್ಕರ್, ಲೋಹಿಯಾ ಮತ್ತು ನಿರ್ಮಲ್ ಕುಮಾರ್ ಬೋಸ್ ಮುಂತಾದ ಕಿರಿಯ ಮಿತ್ರರ ಜೊತೆ ನಿಕಟ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದರು.
ಒಂದು ಕಾಲದಲ್ಲಿ ಮಹಾತ್ಮ ಗಾಂಧಿಯವರ ನಿಕಟ ಅನುಯಾಯಿಯಾಗಿದ್ದ ರಾಮಮನೋಹರ ಲೋಹಿಯಾರವರು ಸ್ವಾತಂತ್ರ್ಯ ಹತ್ತಿರವಾಗುತ್ತಿದ್ದಂತೆ, ಗಾಂಧಿಜಿಯವರು ನೆಹರೂ ಮತ್ತು ಪಟೇಲ್ ಮುಂತಾದವರ ಮಾತುಗಳಿಗೆ  ನೀಡುತ್ತಿದ್ದ ಆದ್ಯತೆ ಮತ್ತು ನೆಹರೂ ಅವರ ಧೋರಣೆಗಳನ್ನು ಖಂಡಿಸಿ ಗಾಂಧಿಯವರಿಂದ ಮಾನಸಿಕವಾಗಿ ದೂರವಾಗಿದ್ದರು. ಆದರೆ 1948 ರ ಜನವರಿ 30 ರಂದು ಗಾಂಧೀಜಿ ಹಂತಕನ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ ತೀರಾ ಅಘಾತಕ್ಕೆ ಒಳಗಾದ ಲೋಹಿಯಾ ರವರು ನೆಹರೂ ಜೊತೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ತಮ್ಮ ನಾಯಕನ ಅಂತಿಮ ಸಂಸ್ಕಾರದಿಂದ ಹಿಡಿದು, ಚಿತಾಭಸ್ಮ ವಿಸರ್ಜನೆ ಮಾಡುವವರೆಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿಯವರು  ನಿಧನರಾದ ನಾಲ್ಕು ದಿನಗಳ ನಂತರ ಅವರ ಚಿತಾಭಸ್ಮವನ್ನು ಅಲಹಾಬಾದಿನ ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲು ದೆಹಲಿಯಿಂದ ವಿಶೇಷ ರೈಲನ್ನು ಏರ್ಪಾಡು ಮಾಡಲಾಗಿತ್ತು. ಚಿತಾಭಸ್ಮದ ಜೊತೆ ಗಾಂಧಿಯವರ ಪುತ್ರ ದೇವದಾಸ್, ನೆಹರೂ ಹಾಗೂ ಪಟೇಲ್ ಸಹ ಇದ್ದರು. ಇವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಲೋಹಿಯಾರವರು ಗಾಂಧೀಜಿಯ ನಿಧನದಿಂದ ಮಾತು ಕಳೆದುಕೊಂಡು ಮೌನವಾಗಿ ರೈಲಿನ ಕಿಟಕಿಯ ಬಳಿ ಕುಳಿತು ಹೊರಗಿನ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು.
ಗಾಂಧೀಜಿಯ ಚಿತಾ ಬಸ್ಮವನ್ನು ಹೊತ್ತು ಅಲಹಾಬಾದ್ ನತ್ತ  ಸಾಗುತ್ತಿದ್ದ ರೈಲಿನ ಹಳಿಗಳ ಪಕ್ಕದ ಹೊಲದಲ್ಲಿ ನಿಂತಿದ್ದ ರೈತನೊಬ್ಬ ತನ್ನ ಹೊಲದಲ್ಲಿ ಬೆಳದಿದ್ದ ಸೂರ್ಯಕಾಂತಿಯ ಹೂಗಳನ್ನು ಕಿತ್ತು  ಚಲಿಸುತ್ತಿದ್ದ ರೈಲಿನತ್ತ ತೂರಿ ಕೈ ಮುಗಿಯುತ್ತಾ ನಿಂತಿದ್ದ ದೃಶ್ಯವನ್ನು ನೋಡಿ ಅವಕ್ಕಾದ ಲೋಹಿಯಾರವರ ಕಣ್ಣುಗಳಲ್ಲಿ ಕಣ್ಣೀರ ಧಾರೆ ಕೆನ್ನೆಗಳ ಮೇಲೆ ಹರಿದು ಅವರ ಎದೆಯನ್ನು ತೋಯಿಸಿದವು. ಅನಾಮಿಕ ರೈತನೊಬ್ಬ ಗಾಂಧಿಗೆ ಸಲ್ಲಿಸಿದ ಅಂತಿಮ ಪ್ರಣಾಮವು ಗಾಂಧೀಜಿಯವರ ಜೊತೆಗಿದ್ದ ಲೋಹಿಯಾ ಅವರ ಭಿನ್ನಾಭಿಪ್ರಾಯಗಳನ್ನು ಕರಗಿಸಿಬಿಟ್ಟಿದ್ದವು. ಈ ನಾಡಿನ ಅನಕ್ಷರಸ್ತರಿಗೆ , ಬಡವರಿಗೆ ಮತ್ತು ಜನಸಾಮಾನ್ಯರಿಗೆ ಗಾಂಧೀಜಿಯವರು ತಲುಪಿದ್ದ ಬಗೆಯನ್ನು ಅವರು ವಿಶ್ಲೇಷಿಸುತ್ತಾ ತಮ್ಮ ಆತ್ಮಕಥೆಯಲ್ಲಿ ಪರಿಣಾಮಕಾರಿಯಾಗಿ ಬಣ್ಣಿಸಿದ್ದಾರೆ.
ಅದೇ ರೀತಿ 1942 ರ ಅವದಿಯಲ್ಲಿ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಪಶ್ಚಿಮ ಬಂಗಾಳದ ಪ್ರೊ.ನಿರ್ಮಲ್ ಕುಮಾರ್ ಬೋಸ್ ರವರು ಗಾಂಧೀಜಿಯವರು ತಮ್ಮ ಮೊಮ್ಮಕ್ಕಳ ಸಮಾನರಾದ ಮನುಬೆಹನ್ ಅವರ ಜೊತೆ ನಡೆಸಿದ ಬ್ರಹ್ಮ ಚರ್ಯೆಯ ಪ್ರಯೋಗ ಕುರಿತು ನಾಯಕನೊಂದಿಗೆ ಬಿನ್ನಾಭಿಪ್ರಾಯ ತಳೆದರು. ಅಷ್ಟೇ ಅಲ್ಲದೆ ತಮ್ಮ ತೀಕ್ಷ್ಣ ಹಾಗೂ ಹರಿತವಾದ ಮಾತುಗಳು ಮತ್ತು ವೈಜ್ಞಾನಿಕ ವಿಶ್ಲೇಷಣೆಗಳ ಮೂಲಕ ಗಾಂಧಿ ಜೊತೆ ಪತ್ರ ವ್ಯವಹಾರ ನಡೆಸಿ, ಅವರನ್ನು ಆತ್ಮಸಾಕ್ಷಿಯ ನೇಣುಗಂಬಕ್ಕೇರಿಸಿದರು. ಗಾಂಧೀಜಿಯವರು ಮನಸ್ಸು ಮಾಡಿದ್ದರೆ, ತಮ್ಮ ಶಿಷ್ಯ ನಿರ್ಮಲ್ ಕುಮಾರ್ ಬೋಸ್ ರವರ ಪತ್ರಗಳನ್ನು ನಿರ್ಲಕ್ಷಿಸಬಹುದಿತ್ತು. ಆದರೆ. ಬೋಸ್ ಎತ್ತಿದ ಎಲ್ಲಾ ಪ್ರಶ್ನೆಗಳಿಗೆ ಒಬ್ಬ ವಿಧೇಯ ವಿದ್ಯಾರ್ಥಿಯಂತೆ ಉತ್ತರ ನೀಡಿದರು. ಇದರಿಂದ ತೃಪ್ತರಾಗದ ನಿರ್ಮಲ್ ಕುಮಾರ್ ಬೋಸ್ ಗಾಂಧೀಜಿಯವರಿಂದ ದೂರವಾದರು. 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ ತಮ್ಮ ಮತ್ತು ಗಾಂಧೀಜಿ ಜೊತೆಗಿನ ಸಂಬಂಧವನ್ನು ಮರು ವಿಮರ್ಶೆಗೆ ಒಳಪಡಿಸಿಕೊಂಡ ಬೋಸ್ 1953 ರಲ್ಲಿ “ ಮೈ ಡೇಸ್ ವಿತ್ ಗಾಂಧಿ” ಎಂಬ ಕೃತಿಯನ್ನು ಹೊರ ತಂದರು. ಈ ಕೃತಿಯಲ್ಲಿ ಗುರು-ಶಿಷ್ಯರ ನಡುವೆ ನಡೆದ ಪತ್ರ ಸಂವಾದವೆಲ್ಲವೂ ವಿವರವಾಗಿ ದಾಖಲಾಗಿವೆ. ಈ ಮೊದಲು ಈ ಕೃತಿಯನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದ ನವಜೀವನ ಟ್ರಸ್ಟ್ ಸಂಸ್ಥೆ ಕೆಲವು ಆಯ್ದ ಪತ್ರಗಳ ಭಾಗಗಳನ್ನು ತೆಗೆದು ಹಾಕುವಂತೆ ಬೊಸ್ ರವರಿಗೆ ಸೂಚಿಸಿತ್ತು. ಆದರೆ ಇದನ್ನು ನಿರಾಕರಿಸಿದ ನಿರ್ಮಲ್ ಕುಮಾರ್ ಬೋಸ್ ತಾವೇ ಸ್ವತಃ ಕೃತಿಯನ್ನು ಪ್ರಕಟಿಸಿದರು. ಈವರೆಗೆ ಗಾಂಧೀಜಿ ಕುರಿತಂತೆ ಬಂದಿರುವ ಶ್ರೇಷ್ಠ ಕೃತಿಗಳಲ್ಲಿ ಇದೂ ಕೂಡ ಒಂದಾಗಿದೆ.
ಲೋಹಿಯಾ ಮತ್ತು ಬೋಸ್ ರವರ ಈ ಎರಡು ಘಟನೆಗಳು ಮಹಾತ್ಮ ಗಾಂಧಿಯವರನ್ನು ಇನ್ನೊಂದು ದಿಕ್ಕಿನಲ್ಲಿ  ಅರ್ಥಮಾಡಿಕೊಳ್ಳಲು ನಮಗೆ ಮಾದರಿಯಾಗಿವೆ ಎಂದರೆ ತಪ್ಪಾಗಲಾರದು. ಗಾಂಧಿಜಿಯವರ ವ್ಯೆಕ್ತಿತ್ವವೇ ಅಂತಹದ್ದು. ಅದು ದಾರ್ಶನಿಕನ ಸ್ಥಾನಕ್ಕೇರಿದ ದೈವ ಸ್ವರೂಪದ್ದು. ಅವರೊಂದಿಗೆ ಯಾರಾದರು ಹೋಲಿಸಿಕೊಳ್ಳುವುದು ಇಲ್ಲವೆ ಅವರ ಚಿತ್ರ ಕದಲಿಸುವುದರ ಮೂಲಕ ಮರೆ ಮಾಚುತ್ತೇನೆ ಎನ್ನುವುದು ಕೇವಲ ನಗೆಪಾಟಿಲಿನ ಸಂಗತಿ ಮಾತ್ರ ಆಗಬಲ್ಲದು.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕಾ ಬರೆದ ಲೇಖನ)


ಸೋಮವಾರ, ಜನವರಿ 23, 2017

ಭಾರತ ಮತ್ತು ಬಯಲು ಶೌಚಾಲಯ


ಹದಿನೇಳು ವರ್ಷಗಳ ಹಿಂದೆ ಅಂದರೆ, ಇದೇ  ಎರಡು ಸಾವಿರದ ಇಸವಿಯಲ್ಲಿ F DzsÀĤPÀ ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವಿಶ್ವ ಸಂಸ್ಥೆಶತಮಾನದ ಅಭಿವೃದ್ಧಿಯ ಗುರಿಗಳು( Millenium Devlopments Goals) ಎಂಬ ಹದಿನೈದು ವರ್ಷಗಳ ಯೋಜನೆಯನ್ನು ರೂಪಿಸಿತು. ಯೋಜನೆಯಲ್ಲಿ ಜಾಗತಿಕವಾಗಿ ಸಾಧಿಸಬೇಕಾದ  ಎಂಟು ವಿಷಯಗಳನ್ನು ಗುರಿಗಳನ್ನಾಗಿ ನಿರ್ಧರಿಸಲಾಗಿತ್ತು. ಅವುಗಳಲ್ಲಿ ಪ್ರಮಖವಾದವುಗಳೆಂದರೆ, ಬಡತನ ನಿವಾರಣೆ, ಲಿಂಗತಾರತಮ್ಯ ನಿವಾರಣೆ, ಮಹಿಳೆಯರಿಗೆ ಪುರುಷರಿಗೆ ಸಮಾನವಾಗಿ ಇರುವ ಹಕ್ಕುಗಳನ್ನು ಅಸ್ತಿತ್ವಕ್ಕೆ ತರುವುದು, ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವುದು, ಹೆರಿಗೆ ಸಂದರ್ಭದಲ್ಲಿನ ಮಹಿಳೆಯರ ಸಾವು ತಡೆಗಟ್ಟುವುದು, ಜಗತ್ತಿನ ಎಲ್ಲಾ ಪ್ರಜೆಗಳಿಗೆ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಹಾಗೂ ವಸತಿ ನಿರ್ಮಾಣಏಡ್ಸ್, ಹೆಚ್, , ವಿ ಒಳಗೊಂಡಂತೆ ಮಲೇರಿಯಾ, ವಾಂತಿ ಬೇಧಿ ಮುಂತಾದ ಕಾಯಿಲೆಗಳನ್ನು ತಡೆಗಟ್ಟುವುದು. ಹೀಗೆ ಜಗತ್ತಿನ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳ ವಿವಿಧ ರಂಗಗಳ ತಜ್ಙರ ನೇತೃತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಯಿತು. ಯೋಜನೆ ಜಾರಿಗೆ ಬಂದ ಏಳೂವರೆ ವರ್ಷಗಳ ನಂತರ ಕ್ರಮಿಸಿದ ಅರ್ಧ ದಾರಿಯಲ್ಲಿ ನಿಂತು, ಗುರಿಗಳ ಸಾಧನೆ ಕುರಿತು ನಡೆಸಿದ ಅಧ್ಯಯನ  ವರದಿ 2008ರಲ್ಲಿ ಪ್ರಕಟವಾಯಿತು. ವರದಿಯಲ್ಲಿ ತಜ್ಙರು ನಿರಾಸೆ ಮತ್ತು ಸಾಧಿಸಲಾಗದ ಅಸಹಾಯಕತೆಯನ್ನು ವ್ಯಕ್ತ ಪಡಿಸಿದ್ದರು. ಕೆಲವು ರಂಗಗಳಲ್ಲಿ ಯೋಜನೆ ವಿಫಲವಾಗಿತ್ತು. ( ನೋಡಿ- Millenium Devlopment goals Report-2008)   ವಿಶೇಷವಾಗಿ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ಥಾನ, ನೇಪಾಳ, ಬಂಗ್ಲಾ ಮುಂತಾದ ರಾಷ್ಟ್ರಗಳಲ್ಲಿ ಬಡತನ ನಿವಾರಣೆ ಮತ್ತು ಕುಡಿಯುವ ನೀರು, ಶೌಚಾಲಯ ಸಮಸ್ಯೆಗಳಲ್ಲಿ ಗಮನಾರ್ಹ ಬದಲಾವಣೆಯಾಗಿರಲಿಲ್ಲ. 2012 ವರದಿಯ ಪ್ರಕಾರ  ನೇಪಾಳ ಮತ್ತು ಶ್ರೀಲಂಕಾ ಒಂದಿಷ್ಟು ಪ್ರಗತಿ ಸಾಧಿಸಿವೆ. ಇಂತಹ ವೈಪಲ್ಯಗಳನ್ನು ಗುರಿಯಾಗಿಟ್ಟು ಕೊಂಡು ಭಾರತ ಸರ್ಕಾರ ಶೌಚಾಲಯ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲುನಿರ್ಮಲ್ ಭಾರತ್ ಅಭಿಯಾನ್ಎಂಬ ಆಂಧೋಲನವನ್ನು ಆರಂಭಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ ಇಪ್ಪತ್ತು ಲಕ್ಷ ಮನೆಗಳನ್ನು 35 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ  »A¢£À ಯು.ಪಿ.. ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಗಿರಿಜಾ ವ್ಯಾಸ್ ಘೋಷಿಸಿದ್ದರು.
ಭಾರತದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನೇತಾರರು ಬಣ್ಣ ಬಣ್ಣದ ಮಾತು ಮತ್ತು ಅಕರ್ಷಕ ಯೋಜನೆಗಳನ್ನು ಘೋಷಿಸಬಲ್ಲರೆ ಹೊರತು ಜಾರಿಯಾದ ಯೋಜನೆಗಳನ್ನು ಸುಸ್ಥಿಯಲ್ಲಿ ಕಾಪಾಡಿಕೊಳ್ಳಲು ಅಸಮರ್ಥರು. ದೇಶದ ಎಲ್ಲಾ ಸಮಸ್ಯೆಗಳಿಗೆ ಖಾಸಾಗಿಕರಣವೇ ಮದ್ದು ಎಂದು ನಂಬಿರುವ ಮಹಾನುಭಾವರು ಆದ್ಯತೆಯ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮುಂತಾವುಗಳನ್ನು ಖಾಸಾಗಿ ಕ್ಷೇತ್ರಕ್ಕೆ ಒಪ್ಪಿಸಿ ಕಣ್ಮುಚ್ಚಿ ಕುಳಿತ್ತಿದ್ದಾರೆ. ಇಂತಹವರ ಅಸಮರ್ಥತೆಯಿಂದಾಗಿ ಭಾರತದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ, ಆರೋಗ್ಯ, ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮಗಳಾಗಿ ದೇಶದ ಜ್ವಲಂತ ಸಮಸ್ಯೆಗಳಾಗಿ ಉಳಿದಿವೆ, ಮುಂದಕ್ಕೂ ಉಳಿಯುತ್ತವೆ.
ಭಾರತದ ಶೌಚಾಲಯ ಸಮಸ್ಯೆಗಳನ್ನು ಕುರಿತು. 2009ರಲ್ಲಿ ಏಷ್ಯಾ ಡೆವಲಪ್ ಮೆಂಟ್ ಬ್ಯಾಂಕ್ ಪ್ರಕಟಿಸಿರುವ ಅಧ್ಯಯನ ವರದಿIndia sanitation for All” ಹಾಗೂ ವಿಶ್ವ ಬ್ಯಾಂಕ್ 2011ರಲ್ಲಿ ಪ್ರಕಟಿಸಿರುವWater and sanitation program-2011 ಎಂಬ ಅಧ್ಯಯನಗಳು ಇಲ್ಲಿನ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿದಂತಿವೆ. ಜಗತ್ತಿನ ಇಪ್ಪತ್ತು ರಾಷ್ಟ್ರಗಳಲ್ಲಿ ಅಲ್ಲಿನ ಜನಸಂಖ್ಯೆಯ ಶೇಕಡ 35 ರಷ್ಟು ಜನ ಶೌಚಾಲಯದಿಂದ ವಂಚಿತರಾಗಿದ್ದರೆ, ಭಾರತದಲ್ಲಿ ಜನಸಂಖ್ಯೆಯ ಶೇಕಡ 53ರಷ್ಟು ಜನ ಶೌಚಾಲಯಗಳಲ್ಲದೆ ಬಯಲು ವಿಸರ್ಜನೆಯ ಮೊರೆ ಹೋಗುತ್ತಿದ್ದಾರೆ. ಇವರಲ್ಲಿ ಶೇಕಡ 74 ರಷ್ಟು ಜನಸಂಖ್ಯೆ ಭಾರತದ ಗ್ರಾಮಾಂತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಭಾರತದ ಇಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಐದು ವರ್ಷಗಳ ಕೆಳಗಿನ ಮಕ್ಕಳು ರೋಗರುಜಿನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕುತೂಹಲಕಾರಿಯಾದ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಇಂಗ್ಲೆಂಡಿನ ಸಸ್ಸೆಕ್ಸ್ ವಿ.ವಿ. Institute of Devlopment studies ವಿಭಾಗದ ರಾಬರ್ಟ್ ಛೆಂಬರ್ಸ್ ಎಂಬುವರು ಕುರಿತು ಅಧ್ಯಯನ ನಡೆಸಿದ್ದಾರೆ. ಯೂನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ. ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ , ನೈರ್ಮಲ್ಯದ ಕೊರತೆ ಹಾಗೂ ಜಲ ಮೂಲಗಳ ಶುಚಿತ್ವ ನಾಶಗೊಳ್ಳುತ್ತಿದ್ದು ಇವುಗಳ ನೇರ ಪರಿಣಾಮಕ್ಕೆ ಮಕ್ಕಳು  ಬಲಿಯಾಗುತ್ತಿದ್ದಾರೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ.
ಇದು ಭಾರತದ ವೈರುಧ್ಯವೆಂದರೂ ತಪ್ಪಾಗಲಾರದುಭಾರತದ ಸುಮಾರು 120ಕೋಟಿ ಜನಸಂಖ್ಯೆಗೆ 92 ಕೋಟಿ ಮೊಬೈಲ್ ಗಳಿಗೆ, ಆದರೆ,  ದೇಶದಲ್ಲಿ ಶೇಕಡ 50 ರಷ್ಟು ಶೌಚಾಲಯಗಳಿಲ್ಲ. ಈ ದೇಶದಲ್ಲಿ ಪ್ರತಿದಿನ ಅರ್ಥವಿಲ್ಲದ ಖಾಲಿಮಾತುಗಳಿಗೆ ಮೊಬೈಲ್ ಮೂಲಕ  ಜನ ಕೋಟ್ಯಾಂತರ ರೂಪಾಯಿ ಹಣ ವ್ಯಯಮಾಡುತ್ತಿದ್ದಾರೆ.   ಹಣದಲ್ಲಿ ತಮ್ಮ ಮನೆಗೊಂದು ಶೌಚಾಲಯ ಕಟ್ಟಿಸಬಹುದು ಎಂಬ ಜ್ಙಾನ ಕೂಡ ನಮ್ಮ ಜನರಿಗಿಲ್ಲ. ಪ್ರತಿದಿನ ಭಾರತದಲ್ಲಿ ಮೊಬೈಲ್ ಕಂಪನಿಗಳಿಗೆ ಹರಿದು ಹೋಗುತ್ತಿರುವ ಹಣದಲ್ಲಿ ಕನಿಷ್ಟ ದಿನವೊಂದಕ್ಕೆ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಬಯಲು ವಿಸರ್ಜನೆ ಗ್ರಾಮದಿಂದ ದೂರದ ಹೊಲ ಗದ್ದೆ, ಕೆರೆ ಕಟ್ಟೆ ಸಮೀಪ ನಡೆದರೆ, ನಗರಗಳಲ್ಲಿ ಮನೆಯ ಸಮೀಪ, ಅಥವಾ ರೈಲ್ವೆ ಹಳಿಗಳ ಸಮೀಪವೆ ನಡೆಯುತ್ತದೆ. ಮುಂಬೈ ನಗರಕ್ಕೆ ಬೆಳಗಿನ ಜಾವ ರೈಲಿನ ಮೂಲಕ ತಲುಪುವ ಪ್ರಯಾಣಿಕರಿಗೆ ನಗರದ ಹಳಿಗಳುದ್ದಕ್ಕೂ ಸಾಲಾಗಿ ಅಂಡು ತೋರಿಸುತ್ತಾ ಕುಳಿತ ಜನರು ಎದುರಾಗುತ್ತಾರೆ. ಇವರು ನಮಗೆ ಸ್ವಾಗತ ಕೋರುತ್ತಿದ್ದಾರಾ? ಅಥವಾ ಧಿಕ್ಕಾರದ ಪ್ರದರ್ಶನ ಮಾಡುತ್ತಿದ್ದಾರಾ? ಎಂಬ ಗೊಂದಲ ಕ್ಷಣಕಾಲ ಪ್ರಯಾಣಕರಲ್ಲಿ ಉಂಟಾದರೆ ಆಶ್ಚರ್ಯವಿಲ್ಲ.. ಕೊಳಗೇರಿಯಲ್ಲಿ ವಾಸಿಸುವ ಮಂದಿ ಎಷ್ಟು ನಿರ್ಲಿಪ್ತರೆಂದರೆ, ಅವರ ಗುಪ್ತಾಂಗಗಳನ್ನು ಪ್ರದರ್ಶನಕ್ಕಿಟ್ಟು ಕುಳಿತ ಅವರ ಮುಖದಲ್ಲಿ  ದಿಗಂಬರ ಜೈನ ಮುನಿಯ ಸ್ಥಿತಿ ಪ್ರಜ್ಙತೆ ಮನೆ ಮಾಡಿಕೊಂಡಿರುತ್ತದೆ.
ಇಂತಹ ಅಪಮಾನ ಹಾಗು ಆತಂಕಕಾರಿ ವಿಷಯಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಭಾರತ ವಿಶ್ವದ ಬಲಿಷ್ಟ ಆರ್ಥಿಕ ಬೆಳವಣಿಗೆಯ ರಾಷ್ಟ್ರ ಎಂದು ಪ್ರತಿಬಿಂಬಿಸಿಕೊಳ್ಳುವುದು ನಿಜಕ್ಕೂ ಆತ್ಮವಂಚನೆಯ ಕೆಲಸವಾಗುತ್ತದೆ. ಭಾರತದಲ್ಲಿ ಶೌಚಾಲಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಪ್ರತಿ ಮನೆಗೂ ಕಡ್ಡಾಯ ಮಾಡಲು ಅನೇಕ ಜಾಗತಿಕ ಸಂಸ್ಥೆಗಳು ಸಲಹೆ ಸೂಚನೆ ನೀಡಿವೆ. ಇದಲ್ಲದೆ, ಅನೇಕ ಯುವ ವಿಜ್ಙಾನಿಗಳು, ಸ್ವಯಂಸೇವಾ ಸಂಸ್ಥೆಗಳು ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ವೆಚ್ಚದ ಆಧುನಿಕ ತಂತ್ರಜ್ಙಾನ ಮತ್ತು ಪರಿಸರ ಸ್ನೇಹಿಯಾದ ಶೌಚಾಲಯದ ಉಪಕರಣಗಳನ್ನು ಅವಿಷ್ಕರಿಸಿದ್ದಾರೆ.ಇದರ ಪ್ರಯೋಜನವನ್ನು ನಮ್ಮ ಸರ್ಕಾರಗಳು ಪ್ರಮಾಣಿಕವಾಗಿ ಬಳಸಿಕೊಳ್ಳಬೇಕು. ನಗರಗಳಲ್ಲಿ ವಸತಿ ಸಮಸ್ಯೆಯಿಂದಾಗಿ ಕೊಳಗೇರಿಗಳಲ್ಲಿ ವಾಸಿಸುವ ಬಡವರಿಗೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಗ್ರಾಮಾಂತರ ಪ್ರದೇಶದ ಜನತೆಯಲ್ಲಿ ಬಯಲು ಮಲ ವಿಸರ್ಜನೆಯ ಪರಿಣಾಮಗಳನ್ನು ತಿಳಿಸಿ ಶೌಚಾಲಯಗಳನ್ನು ಹೊಂದುವಂತೆ ಅವರ ಮನ ಒಲಿಸಬೇಕು. ಕೆಲಸ ಮಾಡಬೇಕಾದ ಸರ್ಕಾರದ ಕಛೇರಿಗಳ ಶೌಚಾಲಯಗಳು, ಬಸ್ ನಿಲ್ದಾಣದ ಶೌಚಾಲಯಗಳು, ಮತ್ತು ನಗರ ಸಭೆ, ಮಹಾನಗರ ಪಾಲಿಕೆ ನಿರ್ಮಿತ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವಾಗ ಜನತೆ ಸರ್ಕಾರದ ಮಾತುಗಳನ್ನು ಕೇಳಬಲ್ಲರೆ? ಇದು ಸಧ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ. ಈಗಿನ ನಮ್ಮ ಸರ್ಕಾರದ ಯೋಜನೆಗಳು ಹೇಗಿವೆಯೆಂದರೆ, ತಿಪ್ಪೆಗುಂಡಿಯ ಮೇಲೆ ನಿಂತು ಶುಚಿತ್ವದ ಪಾಠ ಹೇಳುವ ಮೂರ್ಖ ಶಿಖಾಮಣಿಯ ಚಿಂತನೆಗಳಂತಿವೆ.

ಸರ್ಕಾರಗಳ ಇಂತಹ ಅವಿವೇಕಗಳ ಪರಿಣಾಮವಾಗಿ ಭಾರತದ ಪ್ರಜೆ ವರ್ಷವೊಂದಕ್ಕೆ ಸರಾಸರಿ 48 ಡಾಲರ್ ಹಣವನ್ನು ( ಅಂದಾಜು ಮೂರುಸಾವಿರ ರೂಪಾಯಿ) ನೈರ್ಮಲ್ಯ ಕೊರತೆಯಿಂದಾದ ರೋಗ ರುಜಿನಗಳಿಗೆ ವ್ಯಯಮಾಡುತ್ತಿದ್ದಾನೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದ ಶೇಕಡ ಆರರಷ್ಟಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಪ್ರಮಾಣ ಕೇವಲ ಶೇಕಡ ಒಂದರಿಂದ ಎರಡರಷ್ಟಿದೆ. ಭಾರತದ ಗ್ರಾಮಾಂತರ ಪ್ರದೇಶಗಳ ಸ್ಥಿತಿ ಗತಿ ಹಿಂದೆಂದಿಗಿಂತಲೂ ಈಗ  ಶೋಚನೀಯವಾಗಿದೆ ಎಂಬ ಕಟು ವಾಸ್ತವ ಸಂಗತಿಯನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಲು, ಮಾನಸಿಕರಾಗಿ ಸಿದ್ದರಾಗಿಲ್ಲ. ಆದರೆ, ಗ್ರಾಮಭಾರತದ ಎಲ್ಲಾ ನೋವು, ಸಂಕಟಗಳಿಗೆ ನೇರ ಬಲಿಯಾಗುತ್ತಿರುವವರು ನಮ್ಮ ಮಹಿಳೆಯರು. JA§ÄzÀ£ÀÄß £ÁªÀÅ ªÀÄ£ÀUÁt¨ÉÃQzÉ.  ಇವೊತ್ತಿಗೂ,ನಮ್ಮ ಗ್ರಾಮಭಾರತದ  ಮಹಿಳೆಯರು ಕುಡಿಯುವ ನೀರಿಗಾಗಿ, ಮತ್ತು ಉರವಲು ಕಟ್ಟಿಗೆಗಾಗಿ ಪ್ರತಿದಿನ ಆರರಿಂದ ಎಂಟು ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಾರೆ ಎಂಬ ಸತ್ಯವನ್ನು ವರ್ತಮಾನದ ಸಮಾಜಕ್ಕೆ ಮನದಟ್ಟು ಮಾಡಿಕೊಡುವುದು ನಿಜಕ್ಕೂ ತ್ರಾಸದಾಯಕ ಸಂಗತಿ.
 ದೇಶದ ಬಹುತೇಕ ದಲಿತರು, ಹಿಂದುಳಿದ ವರ್ಗದ ಕುಟುಂಬಗಳು, ಮತ್ತು ಆದಿವಾಸಿ ಜನಾಂಗ ನಿಸರ್ಗದಲ್ಲಿ ಸಿಗುವ ಸೌದೆ ಮತ್ತು ಜಾನುವಾರುಗಳ ಸಗಣಿಯನ್ನು ತಮ್ಮ ದಿನನಿತ್ಯದ ಅಡುಗೆಯ ಬಳಕೆಗಾಗಿ ಅವಲಂಬಿಸಿವೆ. ಇದರಿಂದಾಗಿ ಹದಗೆಟ್ಟ ಬಡವರ ಆರೋಗ್ಯ ಸಧ್ಯದ ಸ್ಥಿತಿಯಲ್ಲಿ ದೇಶದ ಅಪೌಷ್ಟಿಕತೆ ಮತ್ತು ಕಲುಷಿತ ನೀರು ಸೇವನೆ ಹಾಗೂ ಶೌಚಾಲಯ ಸಮಸ್ಯೆಯ ನಂತರ ಮೂರನೇ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.

( ಕರಾವಳಿ ಮುಂಜಾವು ದಿನ ಪತ್ರಿಕೆಯ " ಜಗದಗಲ" ಅಂಕಣಕ್ಕೆ ಬರೆದ ಲೇಖನ)