ಸೋಮವಾರ, ಸೆಪ್ಟೆಂಬರ್ 14, 2026

ದಕ್ಷಿಣ ಭಾರತದಲ್ಲಿ ದ್ರಾವಿಡ ಪ್ರಜ್ಞೆ ಬಿತ್ತಿದ ಅಪ್ಪಟ ಕನ್ನಡಿಗ ಪೆರಿಯಾರ್ ರಾಮಸ್ವಾಮಿ.



ಭಾರತದ ೨೨ ರಾಷ್ಟç ಭಾಷೆಗಳಲ್ಲಿ ಒಂದಾದ ಹಿಂದಿಭಾಷೆಯನ್ನು ಇಡೀ ದೇಶದ ಮೇಲೆ ಹೇರುವ ನಿಟ್ಟಿನಲ್ಲಿ ಸೆಪ್ಟಂಬರ್ ೧೪ ಅನ್ನು ಹಿಂದಿ ದಿನವನ್ನಾಗಿ ಆಚರಿಸುವುದರ ಮೂಲಕ ಬಹುಭಾಷೆ ಮತ್ತು ಬಹುಸಂಸ್ಕೃತಿಯ ನೆಲೆಯಾದ ಭಾರತದ ಇತರೆ ಭಾಷೆಗಳಿಗೆ ಅಪಮಾನ ಎಸೆಗುವ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ, ೧೯೩೭ ರಲ್ಲಿ ಅಂದಿನ ಮದ್ರಾಸ್ ರೆಸಿಡೆನ್ಸಿ ಪ್ರಾಂತ್ಯದಲ್ಲಿ ( ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ಮಂಗಳೂರು ಹಾಗೂ ಕೇರಳ) ರಾಜಾಜಿಯವರು ಮುಖ್ಯಮಂತ್ರಿಯಾಗಿದ್ದಾಗ, ಹಿಂದಿ ಭಾಷೆ ಹೇರುವ ಕೆಲಸಕ್ಕೆ ಮೊದಲು ಪ್ರತಿಭಟಿಸಿದವರು ಕನ್ನಡಿಗ ಇ.ವಿ. ಪೆರಿಯಾರ್ ರಾಮಸ್ವಾಮಿಯವರು. ಹಿಂದಿ ಮತ್ತು ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿದ ಅವರು ನಾನು ದ್ರಾವಿಡ ಭಾಷೆಗಳನ್ನು ಮಾತ್ರ ಮಾತನಾಡುತ್ತೇನೆ ಎಂಬ ಪ್ರತಿಭಟನೆಯ ಬೀಜವನ್ನು ಬಿತ್ತಿದವರು. ಅದರಂತೆ ಕನ್ನಡ ಮತ್ತು ತಮಿಳು ಭಾಷೆಗಳನ್ನು ಮಾತ್ರ ಮಾತನಾಡುತ್ತಿದ್ದರು.

ಅದರ ಫರಿಣಾಮ ಎಂಬಂತೆ ಇಂದಿಗೂ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರ ಆಚರಣೆಯಲ್ಲಿ ಇಲ್ಲ. ಜೊತೆಗೆ ತಮಿಳುನಾಡಿನ ಮಧುರೈ ಹೈಕೋರ್ಟ್ ಪೀಠವು ಕೇಂದ್ರ ಸರ್ಕಾರವು ತಮಿಳುನಾಡು ಜೊತೆ ವ್ಯವಹರಿಸುವಾಗ ಹಿಂದಿ ಭಾಷೆಯನ್ನು ಬಳಸುವಂತಿಲ್ಲ, ಸಂವಹನ ಭಾಷೆಯಾಗಿ ಇಂಗ್ಲೀಷ್ ಬಳಸಬೇಕೆಂದು ಆದೇಶ ಮಾಡಿದೆ.ಜೊತೆಗೆ ಮದ್ರಾಸ್ ಹೈಕೋರ್ಟ್ ನ್ಯಾಯಾಲಯುವು ಸಂಸ್ಕೃತ ಮಾತ್ರ ದೇವ ಭಾಷೆಯಲ್ಲ, ತಮಿಳು ಭಾಷೆ ಕೂಡ ದೇವ ಭಾಷೆಯಾಗಿದ್ದು ತಮಿಳುನಾಡಿನ ದೇವಾಲಯಗಳಲ್ಲಿ ತಮಿಳು ಭಾಷೆಯಲ್ಲಿ ಸ್ತೋತ್ರಗಳನ್ನು ಹೇಳಬೇಕೆಂದು ಆದೇಶಿಸಿದೆ. ಹನ್ನೇರೆಡನೇ ಶತಮಾನದ ಆಚರಣೆಯಲ್ಲಿದ್ದ ತೇವಾರಂ ಎಂಬ ತಮಿಳು ಪ್ರಾರ್ಥನೆಗಳು ಅಥವಾ ಭಕ್ತಿಗೀತೆಗಳು ಸುಮಾರು ಮೂರು ಶತಮಾನಗಳ ಕಾಲ ಕತ್ತಲೆಗೆ ದೂಡಲ್ಪಟ್ಟಿದ್ದವು. ಹದಿನೈದನೇ ಶತಮಾನದಲ್ಲಿ ಚಿದಂಬರಂ ಪಟ್ಟಣದ ಬೃಹತ್ ನಟರಾಜ ದೇವಾಲಯದ ಕೊಠಡಿಯಲ್ಲಿ ಮುನ್ನೂರು ತಾಮ್ರದ ತೇವಾರಂ ಕಟ್ಟುಗಳು ಸಿಕ್ಕಿದ ಫಲವಾಗಿ ವಿಜಯ ನಗರ ಅರಸರ ಆಳ್ವಿಕೆಯಲ್ಲಿ ಮತ್ತು ಮರಾಠರ ಆಳ್ವಿಕೆಯಲ್ಲಿ ಇಪ್ಪತ್ತನೇ ಶತಮಾನದವರೆಗೆ ಜಾರಿಯಲ್ಲಿದ್ದು ನಂತರ ಸಂಸ್ಕೃತದ ನೆಪದಲ್ಲಿ ಹಿನ್ನಲೆಗೆ ಸರಿದಿದ್ದವು. ಪೆರಿಯಾರ್ ಅವರ ದೂರದೃಷ್ಟಿಯ ಚಿಂತನೆಗಳು ದ್ರಾವಿಡ ಸಂಸ್ಕೃತಿಯ ಭಾಗವಾಗಿ ಇಂದು ತಮಿಳುನಾಡಿನಲ್ಲಿ ಫಲಕೊಡುತ್ತಿವೆ.

ಅವರು ಪುರೋಹಿತಶಾಹಿ ವರ್ಗವು ಪೋಷಿಸಿಕೊಂಡು ಬಂದಿದ್ದ ಜಾತಿಯತೆ, ಲಿಂಗ ಅಸಮಾನತೆ ಇವುಗಳ ವಿರುದ್ಧ ಧ್ವನಿ ಎತ್ತುವ ಸಲುವಾಗಿ ಮೇಲ್ಜಾತಿಯ ಬ್ರಾಹ್ಮಣ ವರ್ಗವನ್ನು ತಿರಸ್ಕರಿಸಿದ್ದರು.
ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲಾ ಅಸಮಾನತೆಗಳನ್ನು ತಿರಸ್ಕರಿಸಿದ ಅವರು ದೇವರ ಅಸ್ತಿತ್ವವನ್ನು ಸಹ ನಿರಾಕರಿಸಿದರು. ಇಂದು ರಾಮನ ಹೆಸರಿನಲ್ಲಿ ನಡೆಯುತ್ತಿರುವ ಅಪಚಾರಗಳನ್ನು ಗಮನಿಸಿದಾಗ, ಶ್ರೀರಾಮನು ದೇವರಾಗುವ ಬದಲಾಗಿ ನಿರ್ಧಿಷ್ಟ ರಾಜಕೀಯ ಪಕ್ಷವೊಂದಕ್ಕೆ ಮತ ಗಳಿಕೆಯ ಸಂಕೇತವಾಗಿದ್ದಾನೆ. ಪೆರಿಯಾರ್ ರಾಮಸ್ವಾಮಿಯವರು 1957 ರಲ್ಲಿ ಮದ್ರಾಸ್ ನಗರದ ಮೆರಿನಾ ಬೀಚ್ ಪ್ರದೇಶದಲ್ಲಿ ಶ್ರೀ ರಾಮನ ಭಾವಚಿತ್ರವನ್ನು ಬಹಿರಂಗವಾಗಿ ಸುಟ್ಟು ಹಾಕಿ ಬಂಧನಕ್ಕೆ ಒಳಗಾಗಿದ್ದರು. ದೇವರು ಮನುಷ್ಯರ ಕೈಗೊಂಬೆಯಾಗುವುದನ್ನು ಅವರು ಆರು ದಶಕಗಳ ಹಿಂದೆಯೇ ಮನಗಂಡಿದ್ದರು.
ದೇವರು ಇಲ್ಲ, ಇಲ್ಲವೇ ಇಲ್ಲ ಎಂಬ ಆತ್ಮವಿಶ್ವಾಸದ ಘೋಷಣೆಯೊಂದಿಗೆ 1920 ರ ದಶಕದಲ್ಲಿ ಆಚರಣೆಯಲ್ಲಿದ್ದ ಬ್ರಾಹ್ಮಣ್ಯ, ಜಾತಿಯತೆ ಮತ್ತು ಲಿಂಗ ಸಮಾನತೆಗೆ ದೊಡ್ಡ ಪೆಟ್ಟು ನೀಡಿದ ಪೆರಿಯಾರ್ ರಾಮಸ್ವಾಮಿ ತಾವು ಜನಿಸಿದ (1879 ರ ಸೆಪ್ಟಂಬರ್ .17) ತಮಿಳುನಾಡಿನಲ್ಲಿ ಸಾಮಾಜಿಕ ಕ್ರಾಂತಿಕಾರರಾಗಿ ಇಂದಿಗೂ ಗೌರವಿಸಲ್ಪಡುತ್ತಿದ್ದಾರೆ.

ಇಂದು ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿರುವ ಎರಡು ರಾಜಕೀಯ ಪಕ್ಷಗಳಾದ ಡಿ.ಎಂ.ಕೆ ಮತ್ತು ಅಣ್ಣಾ ಡಿಎಂಕೆ ಪಕ್ಷಗಳ ಮೂಲ ಸಂಸ್ಥಾಪಕರು ಪೆರಿಯಾರ್ ಆಗಿರುವುದು ವಿಶೇಷ. ಅವರು ಸ್ಥಾಪಿಸಿದ ಜಸ್ಟಿಸ್ ಪಾರ್ಟಿ ನಂತರದ ದಿನಗಳಲ್ಲಿ ದ್ರಾವಿಡ ಕಳಗಂ ಪಕ್ಷವಾಗಿ ಆನಂತರ ಸಿ.ಎನ್. ಅಣ್ಣಾದರ್ಯೆ ತನ್ನ ಗುರುವಾದ ಪೆರಿಯಾರ್ ವಿರುದ್ಧ ಸಿಡಿದೆದ್ದು ದ್ರಾವಿಡ ಮುನ್ನೇತ್ರ ಕಳಗಂ ( ಡಿ.ಎಂ.ಕೆ.) ಪಕ್ಷ ಕಟ್ಟಿದ್ದು ಆನಂತರ ಅಣ್ನಾದರ್ಯೆ ನಿಧನಾನಂತರ ಪಕ್ಷದ ಮುಂಚೂಣಿ ನಾಯಕರಾದ ಎಂ.ಕರುಣಾನಿಧಿ ಹಾಗೂ ನಟ ಎಂ,ಜಿ.ರಾಮಚಂದ್ರನ್ ನಡುವೆ ವೈಮನಸ್ಸು ಉಂಟಾದ ಫರಿಣಾಮ ಎಂ.ಜಿ. ರಾಮಚಂದ್ರನ್ ಅಣ್ಣಾ ಡಿ.ಎಂ.ಕೆ. ಪಕ್ಷ ಸ್ಥಾಪಿಸಿದ್ದು ಈಗ ಇತಿಹಾಸ.

ತಮಿಳುನಾಡಿನ ಸಾಮಾಜಿಕ ಇತಿಹಾಸದಲ್ಲಿ ವೈಚಾರಿಕತೆಯ ಪ್ರಜ್ಞೆಯ ಭಾಗದಂತಿರುವ ಪೆರಿಯಾರ್ ರಾಮಸ್ವಾಮಿ ಮೂಲತಃ ಕನ್ನಡಿಗರು. ಅವರ ತಂದೆ ವೆಂಕಟಪ್ಪನಾಯ್ಕರ್ ಕರ್ನಾಟಕದಿಂದ ವಲಸೆ ಹೋಗಿ ಈರೋಡ್ ನಗರದಲ್ಲಿ ದೊಡ್ಡ ಮಂಡಿ ವರ್ತಕರಾಗಿದ್ದರು. ಈಗಿನ ಈರೋಡ್ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಅವರ ನಿವಾಸವನ್ನು ರಾಮಸ್ವಾಮಿಯವರ ನೆನಪಿಗಾಗಿ ಸ್ಮಾರಕವನ್ನಾಗಿ ಮಾಡಲಾಗಿದೆ. ಅರಿಶಿನ ಮತ್ತು ಹುಣಸೆ ಹಣ್ಣು ವ್ಯಾಪಾರಕ್ಕಾಗಿ ಈರೋಡಿಗೆ ಹೋದ ವೆಂಕಪ್ಪನಾಯ್ಡು ಮೂಲತಃ ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆಗರ್ಭ ಶ್ರೀಮಂತರಾಗಿದ್ದ ಅವರು ತಮಿಳುನಾಡಿನಲ್ಲಿ ವೆಂಕಟಪ್ಪ ನಾಯ್ಕರ್ ಆಗಿ ಗುರುತಿಸಿಕೊಂಡು ದೊಡ್ಡ ಮಂಡಿ ವರ್ತಕರು. ( ಪೆರಿಯಾರ್) ಎಂದು ಕರೆಯಲ್ಪಡುತ್ತಿದ್ದರು. ಆಗಿನ ಕಾಲದಲ್ಲಿ ತಮಿಳುನಾಡಿನನಿಂದ ಕೇರಳಕ್ಕೆ ರೈಲು ಮಾರ್ಗ ಇರಲಿಲ್ಲ. ತಿರುವಾಂಕೂರಿನ ದೊರೆ ( ತಿರುನಂತಪುರ) ಈರೋಡ್ ನಗರದವರೆಗೆ ಬಂದು ಪೆರಿಯಾರ್ ರಾಮಸ್ವಾಮಿಯವರ ನಿವಾಸದಲ್ಲಿ ವಿಶ್ರಾಂತಿ ಪಡೆದು ನಂತರ ಮದ್ರಾಸ್ ನಗರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ರಾಮಸ್ವಾಮಿಯವರಿಗೆ ಅವರ ತಂದೆ ಹತ್ತೊಂಬತ್ತನೇ ವಯಸ್ಸಿನಲ್ಲಿ ವಿವಾಹ ಮಾಡಿದ್ದರು. ಆದರೆ, ಕೇವಲ ಎರಡು ಮೂರು ವರ್ಷದ ಅವಧಿಯೊಳಗೆ ಅವರ ಐದು ತಿಂಗಳ ಪುತ್ರಿ ನಂತರ ಮಡದಿ ಅಕಾಲಿಕ ಮರಣಕ್ಕೆ ತುತ್ತಾದರು. ಆನಂತರ ಲೌಕಿಕ ಬದುಕಿನ ಬಗ್ಗೆ ಜಿಗುಪ್ಸೆಗೊಂಡ ಅವರು ಅನುಭಾವದತ್ತ ತೆರಳುವ ನಿಟ್ಟಿನಲ್ಲಿ ಕಾಶಿ ಯಾತ್ರೆ ಕೈಗೊಂಡರು. ಆದರೆ, ಕಾಶಿ ನಗರದಲ್ಲಿ ಕಂಡ ದೃಶ್ಯಗಳು ಹಾಗೂ ಬ್ರಾಹ್ಮಣರಿಂದ ಆದ ಅಪಮಾನಗಳು ಅವರನ್ನು ತೀವ್ರ ವೈಚಾಕತೆಯ ವ್ಯಕ್ತಿಯನ್ನಾಗಿ ರೂಪಿಸಿದವು. ಅಲ್ಲಿನ ಕಾಶಿ ವಿಶ್ವನಾಥ ದೇಗುಲದ ಪೂಜಾರಿಗಳ ವರ್ತನೆ, ಯಾತ್ರಾರ್ಥಿಗಳನ್ನು ದೋಚುವ ಪರಿ ಇವುಗಳಿಂದ ಹತಾಶಗೊಂಡ ರಾಮಸ್ವಾಮಿಯವರು ತಮಿಳುನಾಡಿನ ಬ್ರಾಹ್ಮಣೇತರ ವರ್ತಕರು ನಿರ್ಮಿಸಿದ್ದ ಛತ್ರವೊಂದಕ್ಕೆ ಊಟ ಮಾಡಲು ಹೋದಾಗ ಇಲ್ಲಿ ಬ್ರಾಹ್ಮಣರಿಗೆ ಮಾತ್ರ ಪ್ರವೇಶ ಎಂದು ಹೇಳಿ ಅವರನ್ನು ಹೊರದಬ್ಬಿದರು. ಬ್ರಾಹ್ಮಣತೇರರಿಂದ ಹಣ ಪಡೆದು ಅವರನ್ನು ಅಸ್ಪೃಶ್ಯರಂತೆ ಕಾಣುವ ಬ್ರಾಹ್ಣಣರ ರೀತಿ ನೀತಿಗಳ ಕುರಿತು ಸಿಟ್ಟಿಗೆದ್ದ ಅವರು ಅಂದಿನಿAದ ಬ್ರಾಹ್ಮಣ್ಯದ ವಿರುದ್ಧ ಯುದ್ಧ ಸಾರಿದರು.

ತಮಿಳುನಾಡಿಗೆ ಹಿಂತಿರುಗಿ ಗಾಂಧೀಜಿಯವರ ಕಾಂಗ್ರೇಸ್ ಪಕ್ಷದ ಜೊತೆ ಕೈ ಜೋಡಿಸಿ ತಮಿಳುನಾಡು ಮತ್ತು ಕೇರಳದ ವೈಕಂ ಪಟ್ಟಣದ ದೇಗುಲಗಳಿಗೆ ಹರಿಜರಿಗೆ ಪ್ರವೇಶ ದೊರಕಿಸಿಕೊಡಲು ಹೋರಾಡಿದರು. ಕಾಂಗ್ರೇಸ್ ಪಕ್ಷದಲ್ಲಿ ಮೇಲ್ಜಾತಿಯ ಜನ ನಾಯಕತ್ವ ವಹಿಸಿಕೊಂಡಾಗ ಅದನ್ನು ಪ್ರತಿಭಟಿಸಿ ಪಕ್ಷದಿಂದ ಹೊರಬಂದು ಜಸ್ಟಿಸ್ ಪಾರ್ಟಿ ಎಂಬ ಪಕ್ಷವನ್ನು ಕಟ್ಟಿ ಹಿಂದುಳಿದ ವರ್ಗಗಳ ಕಾರ್ಯಕರ್ತರನ್ನು ಕಟ್ಟಿಕೊಂಡು ಅವರಲ್ಲಿ ದ್ರಾವಿಡ ಪ್ರಜ್ಞೆಯನ್ನು ಬೆಳಸುತ್ತಾ ನಾಯಕರನ್ನಾಗಿ ರೂಪಿಸಿದರು. ಇವರಲ್ಲಿ ಕಾಂಚಿಪುರಙ ನ ನೇಕಾರ ಕುಟುಂಬದಿಂದ ಬಂದ ಸಿ.ಎನ್. ಅಣ್ಣಾದೊರೈ ಎಂಬ ಬಿ.ಎ. ಪದವೀಧರ ಹಾಗೂ ತಂಜಾವೂರು ಜಿಲ್ಲೆಯ ಹಳ್ಳಿಯ ಹಾಗೂ ದೇವಸ್ಥಾನಗಳಲ್ಲಿ ಡೋಲು ಬಾರಿಸುವ ಕಾಯಕದ ಸವಿತಾ ಸಮಾಜದ ಎಂ.ಕರುಣಾನಿಧಿ ಎಂಬ ಬಿಎಸ್ಸಿ ಪದವೀಧರ ಮುಖ್ಯರಾದವರು. ಇವರಿಬ್ಬರೂ ಆ ಕಾಲದ ತಮಿಳು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆಯುತ್ತಾ ಅನಕ್ಷರಸ್ತ ತಮಿಳು ಜನರಿಗೆ ದ್ರಾವಿಡ ಪ್ರಜ್ಞೆ ಹಾಗೂ ತಮಿಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಉಂಟಾಗುವಂತೆ ಮಾಡಿದರು.

1944 ರಲ್ಲಿ ಪೆರಿಯಾರ್ ಅವರು ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ತಮ್ಮ ಆರೋಗ್ಯ ನೋಡಿಕೊಳ್ಳುವ ನಿಟ್ಟಿನಲ್ಲಿ ಹಾರೈಕೆಗಾಗಿ 32 ವಯಸ್ಸಿನ ಕಾರ್ಯಕರ್ತೆ ಮಣಿಯಮ್ಮ ಎಂಬುವರನ್ನು ವಿವಾಹವಾದಾಗ ಇದನ್ನು ಪ್ರತಿಭಟಿಸಿದ ಇಬ್ಬರು ಶಿಷ್ಯರೂ ಗುರುವಿನ ವಿರುದ್ಧ ಸಿಡಿದೆದ್ದು ಗುರುವಿನ ದ್ರಾವಿಡ ಕಳಗಂ ಗೆ ಪ್ರತಿಯಾಗಿ ದ್ರಾವಿಡ ಮುನೇತ್ರ ಕಳಗಂ ಎಂಬ ಪಕ್ಷವನ್ನು ಕಟ್ಟಿದರು. ಗುರುವಿನ ವೈಯಕ್ತಿಕ ನಿರ್ಧಾರದ ವಿರುದ್ಧ ಅಣ್ನಾದೊರೈ ಮತ್ತು ಕರುಣಾನಿಧಿಯವರಿಗೆ ಬೇಸರವಿತ್ತೇ ಹೊರತು ಅವರ ಸಿದ್ಧಾಂತಗಳ ಕುರಿತಂತೆ ಯಾವುದೇ ವೈಮನಸ್ಸು ಇರಲಿಲ್ಲ. ಗುರು ಪೆರಿಯಾರ್ ಅವರ ಕನಸು ಮತ್ತು ಹೋರಾಟಗಳನ್ನು ಮುಂದುವರಿಸಿದರು. 1967ರಲ್ಲಿ ತಮಿಳುನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಯಾಗಿದ್ದ ಕಾಂಗ್ರೇಸ್ ಪಕ್ಷದ ಕಾಮರಾಜ ನಾಡರ್ ಅವರನ್ನು ಸೋಲಿಸಿ, ತಮಿಳುನಾಡಿನಲ್ಲಿ ಪ್ರಥಮ ಬಾರಿಗೆ ಡಿ.ಎಂ.ಕೆ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. 1967 ರಲ್ಲಿ ನೆಲೆ ಕಳೆದುಕೊಂಡ ಕಾಂಗ್ರೇಸ್ ಪಕ್ಷ ಇಂದಿನವರೆಗೂ ತಮಿಳುನಾಡಿನಲ್ಲಿ ಬೇರು ಬಿಡಲು ಸಾಧ್ಯವಾಗಲಿಲ್ಲ.
ಕಾಮರಾಜ ನಾಡರ್ ತಮ್ಮ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಅನೇಕ ಜನಪರ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅಣ್ಣಾದೊರೈ ಮತ್ತು ಕರುಣಾನಿಧಿ ಇಬ್ಬರೂ ಮುಂದುವರಿಸಿದರು, ಇವುಗಳಲ್ಲಿ ಮುಖ್ಯವಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ ಪ್ರಮುಖವಾದುದು.

ಇಂದು ತಮಿಳುನಾಡಿನಲ್ಲಿ ಡಿ.ಎಂ.ಕೆ ಮತ್ತು ಅಣ್ಣಾ ಡಿ.ಎಂ.ಕೆ. ಪಕ್ಷಗಳು ಕಳೆದ ಐವತ್ತು ವರ್ಷಗಳಿಂದ ಆಳ್ವಿಕೆ ನಡೆಸುತ್ತಿವೆ. ಆದರೆ, ತಮಿಳು ಭಾಷೆ ಸಂಸ್ಕೃತಿ ಕುರಿತಂತೆ ಪಕ್ಷಗಳ ನಿಲುವು ಎಂದಿಗೂ ಬದಲಾಗಿಲ್ಲ. ಹಾಗಾಗಿ ಉತ್ತರದವರ ಹಿಂದಿ ಭಾಷೆ ತಮಿಳುನಾಡಿಗೆ ಈವರೆಗೂ ಕಾಲಿಡಲು ಸಾಧ್ಯವಾಗಿಲ್ಲ. ಈಗಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪೆರಿಯಾರ್ ರಾಮಸ್ವಾಮಿಯವರ ಜನ್ಮದಿನವಾದ ಸೆಪ್ಟಂಬರ್ 17ಅನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದು ಪೆರಿಯಾರ್ ಗೆ ಸಂದ ನಿಜವಾದ ಗೌರವ. ತಮಿಳುನಾಡಿನಲ್ಲಿ ತಿರುವಳ್ವರ್ ನಂತರ ಪೆರಿಯಾರ್ ಗೌರವದ ಸ್ಥಾನ ಪಡೆದಿದ್ದಾರೆ.

ಇನ್ನು, ಪೆರಿಯಾರ್ ಚಿಂತನೆಗಳು ಕನ್ನಡಕ್ಕೆ ಬರಲು ಮೂಲಕಾರಣಕರ್ತರು ಬೆಂಗಳೂರಿನ ವಸುದೇವ ಭೂಪಾಲಂ ಎಂಬ ಮಹನೀಯರು. ಇವರು 1974 ರಲ್ಲಿ ಸಿಟಿಮಾರ್ಕೆಟ್ ಬಳಿಯ ಬಾಳೆಕಾಯಿ ಮಂಡಿ ಪ್ರದೇಶದ ಗುಂಡೂಪಂತ್ ರಸ್ತೆಯ ಕಟ್ಟಡವೊಂದರ ಮಹಡಿ ಮೇಲಿನ ಕೊಠಡಿಯಲ್ಲಿ “ ಚಿಂತಕರ ಚಾವಡಿ” ಎಂಬ ಸಂಸ್ಥೆಯನ್ನು ಆರಂಭಿಸಿ, ಕೇವಲ ನಾಲ್ಕಾಣೆಗೆ ನಲವತ್ತು ಪುಟಗಳ ಕ್ರೌನ್ ಆಕಾರದ ಪುಸ್ತಕಗಳ ಮೂಲಕ ನನ್ನ ತಲೆಮಾರಿಗೆ ಪೆರಿಯಾರ್ ಚಿಂತನೆಗಳನ್ನು ಧಾರೆಯೆರೆದರು. 1972ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ್ದರೂ ಸಹ ಬಡತನದ ಕಾರಣ ಮೂರು ವರ್ಷಗಳ ಕಾಲ ಮನೆಯಲ್ಲಿದ್ದ ನಾನು, ಚಾಮರಾಜಪೇಟೆಯ ಅಕ್ಕನ ಮನೆಗೆ ಬಂದಾಗ, ಅಕ್ಕನ ಬಳಿ ಎಂಟಾಣಿ ಪಡೆದು, ಮಿಂಟೊ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಒಳಗೆ ನಡೆದುಕೊಂಡು ಹೋಗಿ ಚಿಂತಕರ ಚಾವಡಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದೆ. ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಡಿ.ಆರ್ ನಾಗರಾಜ್ ಇವರನ್ನು ಓದುವ ಮೊದಲೇ ಕುವೆಂಪು ಹಾಗೂ ಪೆರಿಯಾರ್ ಅವರ ವಿಚಾರಧಾರೆ ನನ್ನೊಳಗೆ ಮನೆ ಮಾಡಿತ್ತು.

ಗೌರಿ ಗಣೇಶ ಹಬ್ಬದ ದಿನದಂದು ಬಿದಿರು ನೆನಪಾಯಿತು.

 


ಗ್ರಾಮೀಣ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದ ನನ್ನಂತಹವರಿಗೆ ಬಿದಿರಿನ ಮೊರ ಕೇವಲ‌ ದಾನ್ಯಗಳನ್ನು ಶುದ್ಧೀಕರಿಸುವ ಸಾಧನವಲ್ಲ. ಅದು ಹೆತ್ತು, ಪೊರೆದ ತಾಯಿಯಷ್ಟೇ ಸಮಾನ.
ಏಕೆಂದರೆ, ನಮ್ಮ ಕಾಲದ ಗ್ರಾಮೀಣ ಪ್ರದೇಶದಲ್ಲಿ ಹೆರಿಗೆಯ ಸಮಯದಲ್ಲಿ ತಾಯಿಯ ಹೊಟ್ಟೆಯಿಂದ ಹೊರಬಂದ ಮಗುವನ್ನು ಮೊದಲು ಮೊರದಲ್ಲಿ ಮಲಗಿಸುತ್ತಿದ್ದರು. ನಂತರ ಬಿದಿರಿನ ತೊಟ್ಟಿಲಲ್ಲಿ ಮಲಗಿ ಬೆಳೆಯುತ್ತಿದ್ದೆವು. ವೃದ್ಧಾಪ್ಯದಲ್ಲಿ ನನ್ನ ಅಪ್ಪಂದಿರ ಜೀವಕ್ಕೆ ಆಸರೆಯಾದ್ದು ಕೂಡಾ ಇದೇ ಬಿದಿರಿನ ಕೋಲು.
ಈ ಕಾರಣದಿಂದ ನಮ್ಮ ಸಂಸ್ಕೃತಿಯಲ್ಲಿ ಬಿದಿರು ಮತ್ತು ಮೊರಕ್ಕೆ ವಿಶಿಷ್ಠ ಸ್ಥಾನವಿದೆ. ಗೌರಿ ಹಬ್ಬದ ದಿನ ನನ್ನೂರಿನ ಬ್ರಾಹ್ಮಣರ ಮನೆಗಳಲ್ಲಿ ಮೊರದಲ್ಲಿ ಗೌರಿಯ ಮೂರ್ತಿ, ಹಣ್ಣು,ಹಂಪಲು, ಹೂ ಹೀಗೆ ಅನೇಕ ವಸ್ತುಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು. ನಮ್ಮ ಮನೆಗಳಲ್ಲಿ ಅಂದಿಗೂ ಮತ್ತು ಇಂದಿಗೂ ಗೌರಿ ಅಥವಾ ಗಣೇಶನ ಹಬ್ಬ ಆಚರಿಸುವುದಿಲ್ಲ. ಹಾಗಾಗಿ ಗೌರಿ ಹಬ್ಬದಲ್ಲಿ ಮೊರ ಬಳಕೆಯಾಗುವುದು ಮಾತ್ರ ಗೊತ್ತು.
ನಮ್ಮ ರೈತರ ಮನೆಗಳಲ್ಲಿ ಮೊರ ಎಂಬುದು, ನೇಗಿಲು, ಗುದ್ದಲಿಯಷ್ಟೇ ಅವಿಭಾಜ್ಯ ಅಂಗ. ನಮ್ಮ ಅಪ್ಪಂದಿರಗೆ ನೇಗಿಲು ಉಳುಮೆಯ ಸಾಧನವಾದರೆ, ಅವ್ವಂದರಿಗೆ, ರಾಗಿ, ಅಕ್ಕಿ, ನಮ್ಮ‌ ಹೊಲಗಳಲ್ಲಿ ಬೆಳೆಯುತ್ತಿದ್ದ ಹುರುಳಿ, ಅವರೆ, ಹಲಸಂದೆ, ಮುಂತಾದ ದ್ವಿದಳ ದಾನ್ಯಗಳನ್ನು ಸ್ವಚ್ಚ ಮಾಡುತ್ತಿದ್ದ ಅವರ ಪಾಲಿನ ಅವಿಭಾಜ್ಯ ಅಂಗವಾಗಿತ್ತು.
ಗೌರಿ ಹಬ್ಬವಾದ ನಂತರ ನಮ್ಮ ರೈತರ ಮನೆಗಳಲ್ಲಿ ಶಿವನ ಹಬ್ಬ ಆಚರಿಸಲಾಗುತ್ತಿತ್ತು. ಮಣ್ಣಿನ ಗೋಡೆಯ ಮೇಲೆ ನನ್ನಪ್ಪ ವಿಭೂತಿ ಉಂಡೆಯಿಂ.ದ ನೇಗಿಲು, ಗುದ್ದಲಿ ಚಿತ್ರಗಳನ್ನು ಬರೆದು, ನೆಲದ ಮೇಲೆ ಮಣೆಯನ್ನು ಅಥವಾ ಹಲಗೆ ಇಟ್ಟು ಅದರ ಮೇಲೆ ಶುದ್ಧ ಬಿಳಿಯ ಪಂಚೆ ಹಾಗೂ ಕೆರೆಯ ನೀರನ್ನು ತಂದಿರುವ ಹಾಗೂ ತುಳಸಿ ಸೊಪ್ಪು ಮತ್ತು ಹೂವಿನಂದ ಶೃಂಗರಿಸಿದ ಕಳಸಕ್ಕೆ ಪೂಜೆ ಮಾಡುತ್ತಿದ್ದರು.
ಆ ದಿನ ಮನೆಯಲ್ಲಿ ಅಕ್ಕಿಯ ಶಾವಿಗೆ, ಬೆಲ್ಲದ ಪಾಯಸ ಮತ್ತು ರಾಗಿ ಶ್ಯಾವಿಗೆ ಹಾಗೂ ಮೊಳಕೆ ಬಂದ ಹುರುಳಿಕಾಳಿನ ಮಸಾಲೆ ಸಾರು ನಮ್ಮ ಪಾಲಿಗೆ ಹಬ್ಬದೂಟವಾಗಿತ್ತು.
ಈ ಕಾರಣದಿಂದ ಹತ್ತೊಂಬತ್ತನೇ ಶತಮಾನದ 1870 ರ ಆಸುಪಾಸಿನಲ್ಲಿ ಜನಸಿದ ಖ್ಯಾತ ತ್ವತ್ವಪದಕಾರ ಶಿಶುನಾಳ ಷರೀಪಜ್ಜ ಬರೆದ
ಬಿದಿರು ನಾನಾರಿಗಲ್ಲದವಳು ಎಂಬ ಪದ ಇಂದಿಗೂ ನನ್ನ ಪಾಲಿಗೆ ಮಹಾ ಕಾವ್ಯವಾಗಿದೆ.
ಹುಟ್ಟುತ್ತಾ ಸಸಿಯಾದೆ
ಬೆಳೆಯುತ್ತಾ ಮರವಾದೆ
ಸುಂದರ ಸ್ರೀಯರಿಗೆ ಕೇರುವ ಮರವಾದೆ
ಪಲ್ಲಕ್ಕಿಗೆ ದಂಡಗೆಯಾದೆ
ಪತ್ರೆಗೆ ಬುಟ್ಟಿಯಾದೆ
ದೊಡ್ಡ ಮಠದೊಳಗೆ ಕಜ್ಜಾಯದ ಬುಟ್ಟಿಯಾದೆ.
ಆಡುವ ಹುಡುಗನ ಕೈಯಲ್ಲಿ
ಊದುವ ಕೊಳಲಾದೆ.
ಮುದಿಕೆಗೆ ಬಡಿಗೆಯಾದೆ, ಮತ್ಯಾಗೆ ಕೋಲಾದೆ
ನನಗೆ ನೆನಪಿರುವ ಹಾಗೆ, ಹೀಗೆ ಸಾಗುವ ಶಿಶುನಾಳರ ಪದದಲ್ಲಿ ಒಂದು ಬಿದಿರು, ಬಿಸಿಲಿಗೆ ಚಪ್ಪರವಾಗುವ ಕಂಬವಾಗಿ, ಕೊಳಲಿಗೆ, ಪಲ್ಲಕ್ಕಿಗೆ, ಮಂಟಪಕ್ಕೆ ಹೀಗೆ ಗ್ರಾಮೀಣ ಬದುಕಿನ ಜನರ ಪಾಲಿಗೆ ಅವಿಭಾಜ್ಯ ಅಂಗವಾಗಿ, ಅಂತಿಮವಾಗಿ ಮನುಷ್ಯನ ಅಂತಿಮ ಯಾತ್ರೆಗೆ ಚಟ್ಟವಾಗಿ ಬಳಕೆಯಾಗುವ ಪರಿಯನ್ನು ಬಣ್ಣಿಸಿರುವ ಪರಿಯನ್ನು ಓದುವಾಗ ಅಥವಾ ಕೇಳುವಾಗ ಇಂದಿಗೂ ರೋಮಾಂಚನವಾಗುತ್ತದೆ.
ಒಂದು ಗ್ರಾಮೀಣ ಸಂಸ್ಕೃತಿ ಸಾಶವಾಗುವುದರ ಜೊತೆಗೆ, ಅದರೊಂದಿಗೆ ಬೆಸೆದುಕೊಂಡಿದ್ದ ಇಂತಹ ಮಹತ್ತರ ಪದಗಳು ಇಂದಿನ ತಲೆಮಾರಿಗೆ ಕೇವಲ ಮನರಂಜನೆಯ ಹಾಡಾಗಬಲ್ಲವು ಅಷ್ಟೆ.
ಏಕೆಂದರೆ, ಈಗ ಮಕ್ಕಳು ಹುಟ್ಟುವುದು ಮನೆಯಲ್ಲಿ ಅಲ್ಲ, ಹೆರಿಗೆ ಆಸ್ಪತ್ರೆಯಲ್ಲಿ. ಅಲ್ಲಿ ಶುದ್ಧವಾದ ಬಟ್ಟೆಯಿಂದ ಪ್ಯಾಕ್ ಮಾಡಿ ಮಕ್ಕಳನ್ನು ತಂದೆ ತಾಯಿಗಳಿಗೆ ಒಪ್ಪಿಸುತ್ತಾರೆ. ನಂತರ ಮನೆಯಲ್ಲಿ ಬೆಳೆಯುವುದು ಮಡಚಬಹುದಾದ ಪ್ಲಾಸ್ಟಿಕ್ ತೊಟ್ಟಿಲುಗಳಲ್ಲಿ. ಇಂದಿನ ದಿನಗಳಲ್ಲಿ ಶವಸಂಸ್ಕಾರ ಅಥವಾ ಅಂತಿಮ ಯಾತ್ರೆಗೆ ಬಿದಿರಿನ ಚಟ್ಟ ಬಳಸುವುದು ತೀರಾ ಕಡಿಮೆ.
ನಗರಗಳಲ್ಲಿ ಶವಸಂಸ್ಕಾರದ ವಾಹನಗಳು ಬಂದಿದ್ದರೆ, ಹಳ್ಳಿಗಳಲ್ಲಿ ಸ್ಟೀಲ್ ಚಟ್ಟಗಳು ಬಂದಿವೆ. ಹಾಗಾಗಿ ಗ್ರಾಮೀಣ ಬದುಕಿನ ಸಂಸ್ಕೃತಿಯ ಸೂಕ್ಷ್ಮತೆ ನಿಧಾನವಾಗಿ ಮರೆಯಾಗುತ್ತಿದೆ.

ಭಾರತ ಪತ್ರಿಕೋದ್ಯಮದ ನಿಜಧ್ವನಿ, ಸಿದ್ಧಾರ್ಥ ವರದರಾಜನ್



ಕಳೆದ ಎರಡು ದಶಕಗಳಿಂದ ದೇಶದ ಪತ್ರಿಕೋದ್ಯಮವೆಂಬುದು, ಜನರ ವಿಶ್ವಾಸ ಕಳೆದುಕೊಂಡು, ಆಳುವವರ ತುತ್ತೂರಿಯಾಗಿರುವ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ರವೀಶ್ ಕುಮಾರ್ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಿದ್ಧಾರ್ಥ ವರದರಾಜನ್ ಮಾಧ್ಯಮ ಅಥವಾ ಪತ್ರಕರ್ತನ ನಿಲುವು ಹೇಗಿರಬೇಕು ಎಂಬುದಕ್ಕೆ ಇಂದಿಗೂ ನಮಗೆ ಮಾದರಿಯಾಗಿದ್ದಾರೆ.
ಇಂಗ್ಲೀಷ್ ದಿನಪತ್ರಿಕೆಗಳಾದ ಟೈಮ್ಸ್ ಆಫ್ ಇಂಡಿಯಾದಲ್ಲಿ 1995 ರಲ್ಲಿ ಪತ್ರಕೋದ್ಯಮ ಪ್ರವೇಶಿಸಿದ ಸಿದ್ಧಾರ್ಥ ವರದರಾಜನ್ ತಮ್ಮ ನಿಷ್ಟುರ ಹಾಗೂ ಪ್ರಾಮಾಣಿಕ ಮತ್ತು ಪಾರ್ದರ್ಶಕತೆಯ ವರದಿಗಳಿಗೆ ಹೆಸರಾಗಿದ್ದರು ನಂತರ . 2011 ರಿಂದ 2013 ರ ವರೆಗೆ ಪ್ರತಿಷ್ಠಿತ ದ ಹಿಂದೂ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಇವರು, ಸಂಪಾದಕ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದೊಂದಿಗೆ ಹುದ್ದೆ ತೊರೆದು, 2015 ರಲ್ಲಿ ಅಂತರ್ಜಾಲ ಪತ್ರಿಕೆಯಾದ ದವೈರ್ ಎಂಬ ಪತ್ರಿಕೆಯನ್ನು ಆರಂಭಿಸಿ, ಸ್ವತಂತ್ರ ಪತ್ರಿಕೋದ್ಯಮ ಹೇಗಿರಬೇಕು ಎಂಬುದನ್ನು ಇಡೀ ಭಾರತಕ್ಕೆ ತೋರಿಸಿಕೊಟ್ಟರು. ಇಂದಿಗೂ ಕೂಡಾ ಗಂಭೀರ ಓದುಗರು ಸಿದ್ದಾರ್ಥಅವರಿಗೆ ಬೆಂಬಲವಾಗಿ ನಿತು, ಚಂದಾದಾರರಾಗಿ ದ ವೈರ್ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ.
ಅವರ ಈ ಪ್ರಯೋಗ ಭಾರತದಲ್ಲಿ ಅನೇಕ ನಿಷ್ಟಾವಂತ ಪತ್ರಕರ್ತರಿಗೆ ಮಾದರಿಯಾಯಿತು. ಇಂದಿಗೂ ಕೂಡಾ, ಆಳುವ ಸರ್ಕಾರಗಳ ದೌರ್ಬಲ್ಯ ಮತ್ತು ದೌರ್ಜನ್ಯಗಳು ಮತ್ತು ದೇಶದ ಗಂಭೀರ ಸಮಸ್ಯೆಗಳ ಕುರಿತ ವರದಿಗಾಗಿ ನಾವು ದ ವೈರ್ ಪತ್ರಿಕೆಯನ್ನು ಅವಲಂಭಿಸಬೇಕಾಗಿದೆ. ಈ ಕಾರಣಕ್ಕಾಗಿ ಸಿದ್ಧಾರ್ಥ ವರದರಾಜನ್ ಕೇಂದ್ರದ ಬಿ.ಜೆ.ಪಿ. ಸರ್ಕರದಿಂದ ಅನೇಕ ಕಿರುಕುಳಗಳನ್ನು ಎದುರಿಸಬೇಕಾಯಿತು. ಅ ವರ ಮನೆ ಮತ್ತು ಕಚೇರಿಗಳನ್ನು ಹಲವಾರು ಬಾರಿ ತಪಾಸಣೆ ನಡೆಸಿ, ಮೊಕದ್ದಮೆಗಳನ್ನು ಹೂಡಿ ಕಿರುಕುಳ ನೀಡಲಾಯಿತು.
ಸಾರ್ವಜನಿಕ ಬದುಕಿನಲ್ಲಿ ಒಬ್ಬ ಪತ್ರಕರ್ತನಾದವನು ನೈತಿಕತೆ ಮತ್ತು ನಿಷ್ಠುರತೆ ಕಾಪಾಡಿಕೊಂಡು ಬಂದರೆ, ಈ ಜಗತ್ತಿನಲ್ಲಿ ಯಾರಿಗೂ ಹೆದರಬೇಕಾಗಿಲ್ಲ. ಈ ವಿಷಯದಲ್ಲಿ ಇಂದಿಗೂ ಸಿದ್ಧಾರ್ಥ ವರದರಾಜನ್ ಮುಂಚೂಣಿಯಲ್ಲಿದ್ದಾರೆ. 61 ವರ್ಷದ ಇವರು ಈಗಾಗಲೇ ಭಾರತದ ಪ್ರತಿಷ್ಠಿತ ರಾಮನಾಥ್ ಗೋಯಂಕ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಎಲ್ ಮುಂಡೊ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭಾರತದ ಪತ್ರಿಕೋದ್ಯಮ ನಿಜಧ್ವನಿ ಎಂದು ಇವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ.
ರಾಜಸ್ತಾನ ಮತ್ತು ಉತ್ತರ ಪ್ರದೇಶದಲ್ಲಿ ಹಿರಿಯ ಐ.ಎ.ಎಸ್. ಅಧಿಕಾರಿಯಾಗಿದ್ದ ಸಿದ್ಧಾರ್ಥ ಅವರ ತಂದೆ ಮುನಿಸ್ವಾಮಿ ವರದರಾಜನ್ ನಂತರದ ದಿನಗಳಲ್ಲಿ ಇಂಗ್ಲೆಂಡ್ ಹೈ ಕಮಿಷನರ್ ಕಚೇರಿಯಲ್ಲಿ ರಾಯಭಾರಿಯಾಗಿದ್ರು. ಈ ಕಾರಣದಿಂದಾಗಿ, ಸಿದ್ಧಾರ್ಥ ಅವರು ಬಾಲ್ಯದ ಶಿಕ್ಷಣವನ್ನು ಅಜ್ಮೀರ್ ಮತ್ತು ಲಕ್ನೋ ನಗರದಲ್ಲಿ ಮುಗಿಸಿ, ನಂತರ ಲಂಡನ್ ನಗರದ ಲಂಡನ್ ಸ್ಕೂಲ್ ಆಫ್ ಎಕನಾಮ್ಸ್ ಸಂಸ್ಥೆಯಲ್ಲಿ ಪದವಿ ಹಾಗೂ ಅಮೇರಿಕಾದ ಕೊಲಂಬಿಯಾ ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಪಡೆದರು.
ಅಮೇರಿಕಾದಲ್ಲಿ ಉಪನ್ಯಾಸಕ ವೃತ್ತಿ ತೊರೆದು ಭಾರತಕ್ಕೆ ಆಗಮಿಸಿದ ಇವರು ಪತ್ರಿಕೋದ್ಯಮವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು, ವೃತ್ತಿಗೆ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಘನತೆ ತಂದಿತ್ತರು. ಇಂತಹ ಸಂತತಿಯು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಲಿ ಎಂದು ನಾವೆಲ್ಲರೂ ಮನದುಂಬಿ ಶುಭ ಹಾರೈಸೋಣ.

ತಮಿಳು ವಿದ್ವಾಂಸ ಸಾಲೊಮನ್ ಪಾಪಯ್ಯ



ಕಳೆದ ಮೂರು ದಶಕಗಳಿಂದ ತಮ್ಮ ನಿಷ್ಕಲ್ಮಶ ನಗು, ವಾಕ್ಚಾತುರ್ಯ ಮತ್ತು ತಮಿಳು ಭಾಷೆ. ಸಂಸ್ಕೃತಿಯ ಕುರಿತು ಮಾತನಾಡುತ್ತಾ, ಜನಪ್ರಿಯರಾಗಿದ್ದ ಸಾಲೊಮನ್ ಪಾಪಯ್ಯನವರು ನಿನ್ನೆ ಮಧುರೈ ನಗರದಲ್ಲಿ ತಮ್ಮ ತೊಂಬತ್ತನೇ ವಯಸ್ಸಿಗೆ ವಯೋಸಹಜ ಕಾಯಿಲೆಗಳಿಂದ ನಿಧನರಾದರು.
ನಿನ್ನೆ ಮಧ್ಯಾಹ್ನ ಮೂರೂವರೆ ಸಮಯದಲ್ಲಿ ನಾನು ಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಕಾರಣ,ಮೊಬೈಲ್ ಅನ್ನು ಸೈಲೆಂಟ್ ಮಾಡಿದ್ದೆ. ಮಧುರೈ ನಗರದ ಸನ್ ಟಿ.ವಿ. ವರದಿಗಾರ, ಹತ್ತು ನಿಮಿಣಗಳ ಅವಧಿಯಲ್ಲಿ ಆರು ಬಾರಿ ಕರೆ ಮಾಡಿದ್ದ. ಕಾರ್ಯಕ್ರಮದಲ್ಲಿದ್ದೀನಿ. ಕರೆ ಮಾಡುತ್ತೀನಿ ಎಂದು ಮೆಸೇಜ್ ಹಾಕಿ ಸಂಜೆ ಮನೆಗೆ ಬಂದ ನಂತರ ಕರೆ ಮಾಡಿದಾಗ, ಪಾಪಯ್ಯನವರ ನಿಧನದ ಸುದ್ದಿ ತಿಳಿಸಿದಾಗ ಮನಸ್ಸಿಗೆ ಸಂಕಟವಾಯಿತು.
ನಾನು ತಮಿಳುನಾಡಿನಲ್ಲಿ ಭಾಷೆ ಮತ್ತು ಸಂಸ್ಕೃತಿ ಕುರಿತಾಗಿ ಅಧಿಕೃತವಾಗಿ ಮಾತುನಾಡುತ್ತಿದ್ದ ಎಂ.ಕರುಣಾನಿಧಿಯವರ ನಂತರ ಸಾಲೊಮನ್ ಪಾಪಯ್ಯನವರ ಮಾತುಗಳಿಗೆ ಮರುಳಾಗಿದ್ದೆ. ಮಧುರೈ ಸಮೀಪದ ಪುಟ್ಟ ಗ್ರಾಮವೊಂದರಲ್ಲಿ ಓರ್ವ ರೈಲ್ವೆ ಉದ್ಯೋಗಿಯ ಪುತ್ರನಾಗಿ ಜನಿಸಿದ ಪಾಪಯ್ಯನವರು ತಂಜಾವೂರಿನಲ್ಲಿ ತಮಿಳು ಭಾಷೆಯ ಕುರಿತಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು, ತಮಿಳು ಪ್ರಾಧ್ಯಾಪಕರಾಗಿದ್ದರು.
ತಮಿಳುನಾಡಿನ ಸಾಂಸ್ಕೃತಿಕ ಜಿಲ್ಲೆಗಳಾದ ತಂಜಾವೂರು ಹಾಗೂ ಮಧುರೈ ನಲ್ಲಿ ಇಡೀ ಬದುಕನ್ನ ಕಳೆದ ಪಾಪಯ್ಯನವರ ನಾಲಿಗೆ ಮೇಲೆ ತಮಿಳು ಪ್ರಾಚೀನ ಕಾವ್ಯದ ನುಡಿಗಟ್ಟುಗಳು ಸದಾ ಹರಿದಾಡುತ್ತಿದ್ದವು. ಉಪನ್ಯಾಸದಲ್ಲಿ ಅವರ ಮಾತುಗಳನ್ನು ಕೇಳಲು ಸಾವಿರಾರು ಮಂದಿ ನೆರೆಯುತ್ತಿದ್ದರು. ಅವರಿಂದ ಪ್ರಭಾವಿತರಾದ ನೂರಾರು ಮಂದಿ ಇಂದು ಯಾವುದೇ ಅಡೆ ತಡೆಯಿಲ್ಲದೆ, ನೋಟ್ಸ್ ಬರೆದಿಟ್ಟುಕೊಳ್ಳದೆ ತಮಿಳು ಭಾಷೆಯ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಿದ್ದಾರೆ
ಪಾಪಯ್ಯನವರ ಪ್ರತಿಭೆಯನ್ನು ಗಮನಿಸಿದ್ದ ಸನ್ ತಮಿಳು ಟಿ.ವಿ.ಯವರು ಮೂರು ದಶಕಗಳ ಹಿಂದೆ ಅವರ ನೇತೃತ್ವದಲ್ಲಿ ಪತ್ತಿ ಮಂಡ್ರಮ್ಸ್ ಹೆಸರಿನ ಚರ್ಚೆಯ ಕಾರ್ಯಕ್ರಮ ಆರಂಭಿಸಿತು. ಪಾಪಯ್ಯನವರ ಕಾರ್ಯಕ್ರಮ ಎಷ್ಟು ಜನಪ್ರಿಯವಾಯಿತೆಂದರೆ, ಹಬ್ಬದ ದಿನಗಳಲ್ಲಿ ಪ್ರಸಾರವಾಗುತ್ತಿದ್ದ ರಜನಿ ಅಥವಾ ಕಮಲ್ ಸಿನಿಮಾಗಳಿಂದ ಹೆಚ್ಚು ಪ್ರೇಕ್ಷಕರು ಪಾಪಯ್ಯನವರ ಮಾತು ಕೇಳಲು ಇಷ್ಟ ಪಡುತ್ತಿದ್ದರು.
ಪಾಪಯ್ಯನವರು ಒಂದು ನಿರ್ಧಿಷ್ಟ ವಿಷಯ ಇಟ್ಟುಕೊಂಡು ನಾಲ್ಕೈದು ಮಂದಿಯನ್ನು ಚರ್ಚೆಗೆ ಆಹ್ವಾನಿಸಿ ನಂತರ ತೀರ್ಪುಗಾರನ ಸ್ಥಾನದಲ್ಲಿರುತ್ತಿದ್ದ ಅವರು ನೀಡುತ್ತಿದ್ದ ವ್ಯಾಖ್ಯಾನಗಳನ್ನು ಮರೆಯಲಾಗದು. ಕಾರ್ಯಕ್ರಮದಲ್ಲಿ ರಾಜಕೀಯ ಕ್ಷೇತ್ರವನ್ನು ಹೊರತು ಪಡಿಸಿ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದ್ದವು.
ಇದೇ ಕಾರ್ಯಕ್ರಮವನ್ನು ನಾನು ಕಾರ್ಯನಿರ್ವಹಿಸುತ್ತಿದ್ದ ಉದಯ ಟಿ.ವಿ.ಯಲ್ಲಿ ಹರಟೆ ಹೆಸರಿನಲ್ಲಿ ಪ್ರಾರಂಭಿಸಲಾಯಿತು. ಚಿಕ್ಕಮಗಳೂರು ಕಣ್ಣನ್ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮ ಶುದ್ಧ ಹರಟೆಯಾಗಿ ಪರಿವರ್ತನೆಯಾಗಿ, ಜನಪ್ರಿಯವಾಗಲಿಲ್ಲ. ಪ್ರಾಣೇಶ, ಸುಧಾ ಬರಗೂರು ಮತ್ತು ಎಂ. ಕೃಷ್ಣೇಗೌಡ ಮುಂತಾದ ಕಾಮಿಡಿ ಪೀಸ್ ಗಳು ವಿಷಯದ ಎಲ್ಲೆಯನ್ನು ದಾಟಿ, ತಮ್ಮ ಹಾಸ್ಯ ಪ್ರತಿಭೆ ತೋರಲು ಮುಂದಾದರು.
ಸೊಲೊಮನ್ ಪಾಪಯ್ಯನವರು ತಮಿಳುನಾಡಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ‌ನಡೆಸಿಕೊಟ್ಟರು. ಚಿತ್ರರಂಗದಿಂದ ಆಹ್ವಾನ ಬಂದರೂ ತಿರಸ್ಕರಿಸಿದರು. ರಜನಿಕಾಂತ್ ಆಹ್ವಾನದ ಮೇರೆಗೆ ಮೂರು ಅಥವಾ ನಾಲ್ಕು ಸಿನಿಮಾ ಹೊರತು ಪಡಿಸಿದರೆ, ಇಡೀ ಬದುಕನ್ನು ತಮಿಳುನಾಡಿನ ಸಮಗ್ರ ವಿಷಯಗಳ ಚಿಂತನೆಗೆ ಮೀಸಲಾಗಿಟ್ಟಿದ್ದರು. ಇವರಿಗೆ ತಮಿಳು ಸರ್ಕಾರದ ಕಲೈ ಮಾಮಣಿ ಮತ್ತು ಪದ್ಮಶ್ರೀ ಪ್ರಶಸ್ತಿಗಳು ದೊರೆತಿದ್ದವು.
ನಿನ್ನೆ ಮಧುರೈ ಆಸ್ಪತ್ರೆಯಲ್ಲಿ ಅಂತ್ಯಕ್ರಿಯೆಗೆ ಪಾಪಯ್ಯನವರ ದೇಹವನ್ನು ಸಿದ್ಧಪಡಿಸುತ್ತಿರುವಾಗ, ಅವರ ಎದೆಯ ಮೇಲೆ ತಮಿಳ ಪ್ರಾಚೀನ ಕಾವ್ಯ ಕುರಿತ ಒಂದು ಪುಸ್ತಕವನ್ನು ಇಟ್ಟು ನಂತರ ಬಿಳಿಯ ಬಟ್ಟೆಯಿಂದ ಅವರ ದೇಹವನ್ನು ಪ್ಯಾಕ್ ಮಾಡಲಾಯಿತು.

ಇದು ಒಬ್ಬ ನಿಜ ಹಾಗೂ ಸತ್ವಯುತ ವಿದ್ವಾಂಸನಿಗೆ ನೀಡಲಾದ ಗೌರವ ಎಂದು ಆಕ್ಷಣಕ್ಕೆ ನನಗೆ ಅನಿಸಿತು. 

ಭಾನುವಾರ, ಸೆಪ್ಟೆಂಬರ್ 6, 2026

ಅಕ್ಷರ ಕಲಿಸಿದ ದಲಿತ ಗುರು ಮಾದಪ್ಪ ನವರ ನೆನಪುಗಳು.

 


ಅದು 1962 ನೇ ಇಸವಿ. ನನ್ನೂರಿನ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಯಾರದೋ ಹಳೆಯ ನಾಡಹೆಂಚಿನ ಬೃಹತ್ತಾದ ಮನೆಯಲ್ಲಿ ಪಾಠ ನಡೆಯುತ್ತಿತ್ತು.
ನನ್ನೂರು ಪಕ್ಕದ ಆಬಲವಾಡಿ ಗ್ರಾಮದಲ್ಲಿ ದಲಿತ ಸಮುದಾಯದ ಮಾದಿಗರ ಎಂಟತ್ತು ಕುಟುಂಬಗಳು ಊರಾಚೆ ಕೆರೆ ಬದಿಯಲ್ಲಿ ವಾಸಿಸುತ್ತಿದ್ದವು. ಅಂತಹ ಕುಟುಂಬದಲ್ಲಿ ಮಾದಪ್ಪನವರು ಜನಿಸಿ ಎಲ್.ಎಸ್. ಎಂದು ಕರೆಯಲಾಗುತ್ತಿದ್ದ ಏಳನೆಯ ತರಗತಿ ಓದಿ ಶಿಕ್ಷಕರಾಗಿದ್ದರು.
ಬ್ರಾಹ್ಮಣ ಶ್ರೀಮಂತ ಕುಟುಂಬದ ಗೋವಿಂದಪ್ಪನವರು ನೀಡಿದ್ದ ಆ ಹಳೆಯ ಹೆಂಚಿನ ಮನೆಯ ಕಿಟಿಕಿಗಳಿಗೆ ಮತ್ತು ಬಾಗಿಲುಗಳಿಗೆ ಕದಗಳಿರಲಿಲ್ಲ. ಹಾಗಾಗಿ ನಾನು ಮತ್ತು ನನ್ನ ಸಹಪಾಠಿಗಳು ಸದಾ ಕಿಟಿಕಿಯ ಮೂಲಕ ತರಗತಿಗೆ ಹಾಜರಾಗುತ್ತಿದ್ದೆವು. ಒಂದರಿಂದ ನಾಲ್ಕನೇ ತರಗತಿಯವರೆಗೆ ಎಲ್ಲಾ ಕ್ಲಾಸ್ ಗಳು ವಿಶಾಲ ವಾಗಿದ್ದ ಹಾಲ್ ನಲ್ಲಿ ನಡೆಯುತ್ತಿದ್ದವು. ದಲಿತ ಹುಡುಗರನ್ನು ಬಾಗಿಲಿನಿಂದ ಹೊರಗಡೆ ಕೂರಿಸಲಾಗುತ್ತಿತ್ತು. ಅವರು ಜಗುಲಿಯ ಆವರಣದಲ್ಲಿ ಕುಳಿತು, ಬಾಗಿಲು ಮತ್ತು ಕಿಟಕಿಯ ಮೂಲಕ ಪಾಠ ಕೇಳುತ್ತಿದ್ದರು.
1961 ರಲ್ಲಿ ಶಾಲೆಗೆ ಸೇರಿದ್ದ ನನಗೆ 1962 ರಲ್ಲಿ ಮಾದಪ್ಪನವರು, ಬೋರ್ಡ್ ಮೇಲೆ ಅ, ಆ, ಇ. ಈ. ಅಕ್ಷರಗಳನ್ನು ಬರೆದು, ತಮ್ಮ ಕೈಯಲ್ಲಿ ಇದ್ದ ಕೋಲನ್ನು ಅಕ್ಷರಗಳ ಮೇಲೆ ಇಡುತ್ತಿದ್ದರು. ನಾವು ಅಕ್ಷರವನ್ನು ಗುರುತಿಸಿ ಹೇಳಬೇಕಾಗಿತ್ತು. ಸರಿಯಾಗಿ ಅಕ್ಷರ ಗುರುತಿಸಿದ ನನ್ನ ಮುಂದೆ ಮಾದಪ್ಪನವರು ಕೋಲನ್ನು ನೀಡಿ, ತುದಿ ಹಿಡಿದುಕೊಳ್ಳಲು ಹೇಳಿದರು ಅದನ್ನು. ಹಿಡಿದುಕೊಂಡಾಗ, ನನ್ನನ್ನ ಕರೆದುಕೊಂಡು ಹೋಗಿ ಎರಡನೇ ತರಗತಿ ಗುಂಪಿನಲ್ಲಿ ಕೂರಿಸಿದರು.
ಶಿಕ್ಷಕರಾಗಿದ್ದರೂ ಸಹ, ಮಾದಪ್ಪನವರು ಮೇಲ್ಜಾತಿಯ ಹುಡುಗರನ್ನು ಮುಟ್ಟಲು ಅಂಜುತ್ತಿದ್ದರು. ಇಂತಹ ಮಹಾನ್ ದಲಿತ ಗುರುವಿನಿಂದ ಅಕ್ಷರ ಕಲಿತ ನಾನು, ಬಾಲ್ಯದಿಂದಲೂ ದಲಿತರ ನೋವು, ಅಪಮಾನಗಳಿಗೆ ಸಾಕ್ಷಿಯಾದ ಕಾರಣದಿಂದ ಇಂದಿನವರೆಗೂ ಜಾತಿಯ ಎಲ್ಲೆಯನ್ನು ಮೀರಿ ಬದುಕಲು ಸಾಧ್ಯವಾಗಿದೆ. ಅಂತಹ ಶಿಕ್ಷಕರಿಂದ ಅ,ಆ. ಕಲಿತ ನನ್ನ ಬದುಕು ಸಾರ್ಥಕ ಎನಿಸಿದೆ.
2002 ರಲ್ಲಿ ಹುಬ್ಬಳ್ಳಿಯಿಂದ ಹಬ್ಬದ ನಿಮಿತ್ತ ಊರಿಗೆ ಬಂದಾಗ, ಬಸ್ ಇಳಿಯುತ್ತಿದ್ದಂತೆ, ಸಂತೆಮೈದಾನದ ಅರಳಿ ಕಟ್ಟೆಯ ಬಳಿ ಆಬಲವಾಡಿಗೆ ಹೋಗಲು ಕುಳಿತಿದ್ದ ಹಾಗೂ ವಯಸ್ಸಾಗಿದ್ದ ಮಾದಪ್ಪನವರನ್ನು ನೋಡಿ, ತಕ್ಷಣ ಅವರ ಬಳಿ ಹೋಗಿ ಕಾಲು ಮುಟ್ಟಿ ನಮಸ್ಕರಿಸಿದೆ. ಅವರಿಗೆ ಶಾಕ್ ಆಯಿತು. ಯಾರು ಸ್ವಾಮಿ ನೀವು? ಏಕೆ ನನ್ನ ಕಾಲಿಗೆ ಬೀಳುತ್ತಿದ್ದೀರಿ? ಎಂದರು.
ಅವರ ಕೈ ಹಿಡಿದು, ಪಕ್ಕದಲ್ಲಿದ್ದ‌ ನಂಜುಂಡನ ಟೀ ಅಂಗಡಿಗೆ ಕರೆದೊಯ್ದು, ಚಹಾ ಕುಡಿಸಿ, ಬಾಲ್ಯದಲ್ಲಿ ಅಕ್ಷರ ಕಲಿಸಿದ ಕಥೆ ಹೇಳಿದೆ. ಈಗ ಉದಯ ಟಿವಿಯಲ್ಲಿ ಉದ್ಯೋಗದಲ್ಲಿ ಇರುವುದಾಗಿ ತಿಳಿಸಿದೆ. ಮೇಷ್ಟ್ರು, ಎಷ್ಟೋಂದು ಭಾವುಕರಾದರೆಂದರೆ, ನನ್ನ ಕೈಗಳನ್ನು ಹಿಡಿದು, ತಮ್ಮ ಹಣೆಗೆ ಒತ್ತುಕೊಂಡು, ನನ್ನ ಜನ್ಮ ಸಾರ್ಥಕವಾಯ್ತು ಬುಡಪ್ಪಾ ಎಂದರು.
ಅವರೂರಿನ ಮಂದಿ ಮೇಸ್ಟೇ ಬಸ್ ಬಂತು ಬನ್ನಿ ಎಂದು ಕರೆಯಲು ಬಂದಾಗ, ಅವರೆಲ್ಲರಿಗೂ ಹೆಮ್ಮೆಯಿಂದ ನನ್ನನ್ನು ಪರಿಚಯಿಸಲು ಹೋದಾಗ, ಅವರ ಕಣ್ಣುಗಳು ಒದ್ದೆಯಾಗಿದ್ದವು. ಜಗಣ್ಣಾ, ನಮಗೆಲ್ಲಾ ಗೊತ್ತು, ನಿಮ್ಮ ಶಿಷ್ಯ ಎಂದು ಗೊತ್ತಿರಲಿಲ್ಲ ಎಂದು ಅವರೆಲ್ಲಾ ಹೇಳಿದಾಗ, ಮಾದಪ್ಪ ಮೇಷ್ಟ್ರ ಮುಖದ ಮೇಲೆ ಮೂಡಿದ ಹೆಮ್ಮೆಯ ಭಾವನೆ ನೋಡಿ, ಇಂತಹ ಗುರುವಿನ ಬಳಿ ಶಿಕ್ಷಣ ಕಲಿತದ್ದು ನನ್ನ ಜನ್ಮ ಸಾರ್ಥಕ ಎನಿಸಿತು.
ಶಿಕ್ಷಕರ ದಿನಾಚರಣೆಯ ಇಂದು ನನಗೆ ಅಕ್ಷರ ಧಾರೆಯೆರೆದ ಆ ಮಹಾನ್ ಗುರು ನೆನಪಾದರು.
ಚಿತ್ರಸೌಜನ್ಯ- ವಿಜಯ ಕರ್ನಾಟಕ

ಸೋನಿಯಾ ಗಾಂಧಿ ಎಂಬ ಹಿರಿಯ ಜೀವವೊಂದರ ಬದುಕಿನ ಒಳನೋಟಗಳು.



ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಚುಕ್ಕಾಣಿಯಾಗಿರುವ ಸೋನಿಯಾ ಗಾಂಧಿಯವರ ಮೊದಲ ಆತ್ಮಕಥೆ 2009 ರಲ್ಲಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡಿತ್ತು. ಇದೀಗ ಎಂಬತ್ತು ವರ್ಷ ಪೂರೈಸಿರುವ ಈ ಹಿರಿಯ ಜೀವ ತಮ್ಮ ಪೂರ್ಣಪ್ರಮಾಣದ ಆತ್ಮ ಚರಿತ್ರೆಯನ್ನು ಬರೆದಿದ್ದು, ಅಮೇರಿಕಾದ ಪ್ರಕಾಶನ ಸಂಸ್ಥೆಯೊಂದು ನವಂಬರ್ ಹತ್ತರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಸೋನಿಯಾ ಅವರ ನೂತನ ಆತ್ಮಚರಿತ್ರೆ ಬಿಲಾಂಗಿಗ್ ಕೃತಿಯನ್ನು ಪ್ರಕಟಿಸಲು ಒಪ್ಪಿಕೊಂಡಿದ್ದ ಪೆಂಗ್ವಿನ್ ಇಂಡಿಯಾ ಸಂಸ್ಥೆ ಇದೀಗ ಹಲವು ನೆಪಗಳನ್ನು ಹೇಳುತ್ತಾ ಹಿಂದೇಟು ಹಾಕಿದೆ. ಸೋನಿಯಾ ಗಾಂಧಿಯವರು ತಮ್ಮ ಎರಡನೇ ಕೃತಿಯಲ್ಲಿ ದಾಖಲಿಸಿರುವ ರಾಜಕೀಯ ಚಿಂತನೆಗಳು ಮತ್ತು ಬಿ.ಜೆ.ಪಿ. ಸರ್ಕಾರಗಳ ವೈಫಲ್ಯ ಕುರಿತಾದ ದೃಷ್ಟಿಕೋನಗಳು ಪೆಂಗ್ವಿನ್ ಪ್ರಕಾಶನಕ್ಕೆ ತೊಡಕಾಗಿವೆ.

ಪೆಂಗ್ವಿನ್ ಅಥವಾ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಸೇರಿದಂತೆ ಬಹುತೇಕ ಬಹುರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು, ಯಾವುದೇ ಕೃತಿಯನ್ನು ಪ್ರಕಟಿಸುವ ಮುನ್ನ, ಲೇಖಕ ಅಥವಾ ಲೇಖಕಿ ಎಷ್ಟೇ ಪ್ರಸಿದ್ಧರಾಗಿದ್ದರೂ ಸಹ, ತಾವು ನೇಮಕ ಮಾಡಿಕೊಂಡಿರುವ ಸಂಪಾದಕರ ಮೂಲಕ ಕೃತಿಗಳನ್ನು ಪರಿಶೀಲನೆಗೆ ಒಳಪಡಿಸುತ್ತವೆ. ಅಲ್ಲಿ, ಭಾಷೆ, ನಿರೂಪಣೆಯ ಶೈಲಿ ಮತ್ತು ಕೃತಿಯ ವಿಷಯಗಳು ಪರಿಷ್ಕರಣೆಗೆ ಕೃತಿಯ ಲೇಖಕರ ಸಹಮತದೊಂದಿಗೆ ಒಳಪಡುವುದು ಸಹಜ ಕ್ರಿಯೆ. ಕಳೆದ ಒಂದೂವರೆ ದಶಕದಿಂದ, ದೇಶದ ನ್ಯಾಯಾಂಗ ವ್ಯವಸ್ಥೆ, ಚುನಾವಣಾ ಆಯೋಗ, ಬ್ಯಾಂಕಿಂಗ್, ಮತ್ತು ಇ.ಡಿ ಹಾಗೂ ಸಿ.ಬಿ.ಐ ಮುಂತಾದ ತನಿಖಾ ಸಂಸ್ಥೆಗಳಲ್ಲಿ ಮೂಗು ತೂರಿಸುವುದನ್ನು ಕಾಯಕ ಮಾಡಿಕೊಂಡಿರುವ ಕೇಂದ್ರ ಬಿ.ಜೆ.ಪಿ. ಸರ್ಕಾರವು, ಪ್ರಕಾಶನ ಸಂಸ್ಥೆಯ ಮೇಲೆ ಪ್ರಭಾವ ಬೀರಿರುವುದನ್ನು ತಳ್ಳಿಹಾಕುವಂತಿಲ್ಲ.
ಇಟಲಿ ಮೂಲದ ಸೋನಿಯಾ ಗಾಂಧಿಯವರು ಆರಂಭದ ಇಪ್ಪತ್ತು ವರ್ಷಗಳನ್ನು ತಾಯ್ನಾಡಿನಲ್ಲಿ ಕಳೆದದ್ದನ್ನು ಹೊರತು ಪಡಿಸಿದರೆ, ಉಳಿದ ಅರವತ್ತು ವರ್ಷಗಳನ್ನು, ಭಾರತದ ಸೊಸೆಯಾಗಿ, ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿಯಾಗಿ, ಇಬ್ಬರು ಮಕ್ಕಳ ತಾಯಿಯಾಗಿ ಅಪ್ಪಟ ಭಾರತೀಯ ಹೆಣ್ಣುಮಗಳಂತೆ ಬದುಕಿದ ಅವರ ಬದುಕು ನಿಜಕ್ಕೂ ಮಾದರಿಯಾಗುವಂತಹದ್ದು. ನನಗೆ ಅವರ ಆತ್ಮ ಚರಿತ್ರೆಯನ್ನು ಓದುವುದು ಬೇಕಿಲ್ಲ. ಅವರ ಬದುಕಿನ ಬಹುತೇಕ ಘಟನೆಗಳಿಗೆ ನಾನು ಮತ್ತು ನನ್ನ ತಲೆಮಾರು ಸಾಕ್ಷಿಯಾಗಿದ್ದೀವಿ. 1975 ರಿಂದಲೂ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತ ಮತ್ತು ಕೌಟುಂಬಿಕ ಬದುಕನ್ನು ಸೂಕ್ಷಮವಾಗಿ ಗಮನಿಸಿಕೊಂಡು ಬಂದಿರುವ ನನಗೆ, ಸೋನಿಯಾ ಗಾಂಧಿಯವರು ಇಂದಿರಾ ಅವರಿಗೆ ಕೇವಲ ಸೊಸೆ ಮಾತ್ರವಲ್ಲದೆ, ಮಗಳಂತೆ ಇದ್ದರು. ಎರಡನೇ ಪುತ್ರ ಸಂಜಯ್ ಗಾಂಧಿಯವರ ಪತ್ನಿ ಮನೇಕಾ ಗಾಂಧಿ ಎಂದಿಗೂ ಇಂದಿರಾ ಕುಟುಂಬದ ಜೊತೆ ಭಾಂದವ್ಯದಿಂದ ಇರಲು ಸಾಧ್ಯವಾಗಲಿಲ್ಲ. ಸೋನಿಯಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಅಥವಾ ಸಿದ್ಧಾಂತಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಹಲವಾರು ಭಿನ್ನಾಭಿಪ್ರಾಯಗಳಿವೆ. ಆದರೆ, ದೇಶದ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದರ ಸೊಸೆಯಾಗಿ, ಅವರು ನೋಡಿದ ಮತ್ತು ಅನುಭವಿಸಿದ ದುರಂತ ಘಟನೆಗಳನ್ನು ತಣ್ಣನೆಯ ಭಾವದಿಂದ ಮೌನವಾಗಿ ಸಹಿಸಿಕೊಂಡ ಅವರ ಕುರಿತಾಗಿ ಅಪಾರ ಗೌರವವಿದೆ.
ದೆಹಲಿಯಲ್ಲಿ1980 ರಲ್ಲಿ ನಡೆದ ಲಘು ವಿಮಾನ ಅಪಘಾತದಲ್ಲಿ ಮೈದುನ ಸಂಜಯ್ ಗಾಂಧಿಯ ಸಾವು, 1984 ರ ಅಕ್ಟೋಬರ್ ತಿಂಗಳಲ್ಲಿ ತನ್ನ ಸ್ವಂತ ಅಂಗರಕ್ಷಕರ ಗುಂಡೇಟಿಗೆ ಬಲಿಯಾದ ಅತ್ತೆ ಇಂದಿರಾಗಾಂಧಿ ಹಾಗೂ 1991ರ ಮೇ ತಿಂಗಳಲ್ಲಿ ತಮಿಳುನಾಡಿನ ಶ್ರೀ ಪೆರಬಂದೂರು ಪಟ್ಟಣದಲ್ಲಿ ಶ್ರೀ ಲಂಕಾದ ಎಲ್.ಟಿ.ಟಿ. ಉಗ್ರರ ಬಾಂಬ್ ದಾಳಿಗೆ ಪ್ರಾಣತೆತ್ತ ಪತಿ . ರಾಜೀವ್ ಗಾಂಧಿಯವರ ಸಾವು ಇಂತಹ ಅಘಾತಕಾರಿ ಘಟನೆಗಳ ನಡುವೆಯೂ ಸೋನಿಯಾ ಗಾಂಧಿ ಭಾರತದಲ್ಲಿ ಉಳಿಯಲು ನಿರ್ಧಾರ ಮಾಡಿದ್ದು, ಅವರ ಜೀವನದಲ್ಲಿ ಬಹು ದೊಡ್ಡ ಸಾಧನೆ. ಬೇರೆ ಯಾರೇ ಆಗಿದ್ದರೂ ತನ್ನ ಇಬ್ಬರು ಮಕ್ಕಳಾದ ರಾಹುಲ್, ಮತ್ತು ಪ್ರಿಯಾಂಕರನ್ನು ಕರೆದುಕೊಂಡು, ಭವಿಷ್ಯದ ದೃಷ್ಟಿಯಿಂದ ದೇಶ ತ್ಯೆಜಿಸಿ ಹೊರ ಹೋಗುತ್ತಿದ್ದರು. ನನಗೆ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಕೆಲವು ಚಿತ್ರಗಳು ನೆನಪಿವೆ. 1984 ರಲ್ಲಿ ಇಂದಿರಾಗಾಂಧಿಯವರ ಅಂತ್ಯಕ್ರಿಯೆಯು ದೆಹಲಿಯಲ್ಲಿ ನಡೆಯುತ್ತಿರುವಾಗ, ಹತ್ತು ಅಥವಾ ಹನ್ನೆರಡು ವರ್ಷದ ರಾಹುಲ್, ತನ್ನ ತಂದೆ ರಾಜೀವ್ ಗಾಂಧಿಯವರ ಎದೆಗೆ ಮುಖ ಹುದುಗಿಸಿಕೊಂಡು ಅಳುತ್ತಿರುವ ದೃಶ್ಯವನ್ನು ಇಂಡಿಯ ಟುಡೆ ಪತ್ರಿಕೆಯ ಖ್ಯಾತ ಛಾಯಾಚಿತ್ರಕಾರ ರಘುರಾಯ್ ಅದ್ಭುತವಾಗಿ ಸೆರೆ ಹಿಡಿದಿದ್ದರು.

ಖಲಿಸ್ತಾನ್ ಉಗ್ರರ ನಿಯಂತ್ರಣಕ್ಕೆ ಅಮೃತ್ ಸರದ ಸ್ವರ್ಣದೇವಾಲಯದ ಯಾತ್ರಿಗಳ ನಿವಾಸದಲ್ಲಿ ಅಡಗಿದ್ದ ಬಿಂದ್ರನ್ ವಾಲೆ ಹಾಗೂ ಸಹಚರರನ್ನು ಆಪರೇಶನ್ ಬ್ಲೂಸ್ಟಾರ್ ಹೆಸರಿನಲ್ಲಿ1984 ರ ಜನವರಿ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ, ಹುಟ್ಟಡಗಿಸಿದ ಇಂದಿರಾಗಾಂಧಿಯವರು, ಅದೇ ಸಿಖ್ ಸಮುದಾಯ ಅಂಗರಕ್ಷರ ಗುಂಡಿಗೆ ಜೀವತೆತ್ತರು. ಈ ಕಾರ್ಯಾಚರಣೆ ನಡೆದ ನಂತರ, ನಿಮ್ಮ ನಿವಾಸದಲ್ಲಿ ಸಿಖ್ ಸಮುದಾಯದ ಒಬ್ಬ ಸಿಬ್ಬಂದಿಯೂ ಇರಕೂಡದು ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ತಿರಸ್ಕರಿಸಿದ್ದ ಅವರು ನನ್ನ ರಕ್ಷಣೆಗೆ ಇರುವ ಹಿಂದೂ-ಮುಸ್ಲಿಂ ಅಥವಾ ಎರಡು-ಸಿಕ್ ಸಮುದಾಯದ ಯೋಧರನ್ನು ನಾನು ಸಂದೇಹ ಪಡಲಾರೆ ಎಂದು ಘೋಷಿಸಿಕೊಂಡಿದ್ದರು. ಇಂತಹ ಉದಾತ್ತ ನಂಬಿಕೆ ಮತ್ತು ವಿಶ್ವಾಸ ಇಂದಿರಾ ಗಾಂಧಿಯವವರನ್ನು ಬಲಿ ತೆಗೆದುಕೊಂಡಿತು. ಇದೀಗ ಬಿ.ಜೆ.ಪಿ. ಪಕ್ಷವು ಮುಂಬರುವ ಪಂಜಾಬ್ ವಿಧಾನ ಸಭೆಯ ಚುನಾವಣೆಗೆ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್ ಸಿಂಗ್ ಪುತ್ರನಿಗೆ ಟಿಕೇಟ್ ಘೋಷಣೆ ಮಾಡಿದೆ.
ರಾಜೀವ್ ಗಾಂಧಿಯವರು ಪ್ರಬಲ ಬಾಂಬ್ ಸ್ಪೋಟಕ್ಕೆ ತುತ್ತಾದ ಸಂದರ್ಭದಲ್ಲಿ ಅವರ ಇಡೀ ದೇಹವು ಗುರುತು ಸಿಗಲಾರದಷ್ಟು ಛಿದ್ರವಾಗಿತ್ತು. ಎಡಗಾಲಿನ ಶೋ ಧರಿಸಿದ್ದ ಪಾದವೊಂದು ಮಾತ್ರ ಅವರ ಗುರುತಾಗಿ ಉಳಿದುಕೊಂಡಿತ್ತು ಇಂತಹ ಕೌಟುಂಬಿಕ ದುರಂತಗಳನ್ನು ಸಹಿಸಿಕೊಂಡು, ನೆಹರು ಮತ್ತು ಇಂದಿರಾ ಪೋಷಿಸುಕೊಂಡು ಬಂದಿದ್ದ ಕಾಂಗ್ರೇಸ್ ಪಕ್ಷವನ್ನು ಜೀವಂತವಾಗಿಟ್ಟ ಸೋನಿಯಾ ವರ ಬದ್ಧತೆಯು ಯಾವುದೇ ರಾಜಕೀಯ ನಾಯಕರಿಗೆ ಇಂದಿಗೂ ಮಾರ್ಗದರ್ಶಿಯಾಗಬಲ್ಲದು ಪದೇ ಪದೇ ಸೋನಿಯಾಗಾಂಧಿಯವರ ಇಟಲಿ ಮೂಲವನ್ನು ಪ್ರಸ್ತಾಪಿಸುವ ಸಂಘಪರಿವಾರದ ಅವಿವೇಕಿಗಳು ಒಮ್ಮೆ ಕಳೆದ ನಾಲ್ಕು ದಶಕಗಳ ಭಾರತದ ರಾಜಕೀಯ ಇತಿಹಾಸವನ್ನು ಗಂಭೀರವಾಗಿ ಕುಳಿತು ಓದುವದು ಒಳಿತು. 2004 ರ ಮೇ ತಿಂಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಕೂಡಿ ಬಂದಿತು. ಆದರೆ, ಅವರು ಅದನ್ನು ತಿರಸ್ಕರಿಸಿ, ಈ ನೆಲದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದು, ಸೋನಿಯಾ ಗಾಂಧಿಯವರು ಭಾರತಕ್ಕೆ ನೀಡಿದ ಅತಿ ದೊಡ್ಡ ಕೊಡುಗೆ ಎಂಬುದು ನನ್ನ ಅಚಲವಾದ ನಂಬಿಕೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿರುವ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದಕ್ಕೆ ಮನಮೋಹನ್ ಸಿಂಗ್ ಅವರ ಚಿಂತನೆಗಳು ಮೂಲ ಕಾರಣ. ಇಂದಿರಾಗಾಂಧಿಯವರ ಸಾವಿನ ನಂತರ ಅನಿರೀಕ್ಷಿತವಾಗಿ ಪ್ರಧಾನಿಯಾದ ರಾಜೀವ್ ಗಾಂಧಿಯವರಿಗೆ ರಾಜಕೀಯ ಅನುಭವ ಇರಲಿಲ್ಲ. ಅವರು ಆರಂಭದಿಂದಲೂ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಅವಧಿಯಲ್ಲಿ ನಡೆದ ಮೂರು ಐತಿಹಾಸಿಕ ತಪ್ಪುಗಳಲ್ಲಿ ಒಂದನ್ನು ಸಂಘಪರಿವಾರ ದುರಪಯೋಗಿಸಿಕೊಂಡಿದ್ದನ್ನು ಯಾರೂ ಮರೆಯಲಾಗದು. ರಾಜಕೀಯ ಅನುಭವವಿಲ್ಲದ ರಾಜೀವ್ ಗಾಂಧಿಯವರ ಬಳಿ ಸುತ್ತುವರಿದ ಹಾಗೂ ಬೌದ್ಧಿಕ ಕೊರತೆಯಿಂದ ನರಳುತ್ತಿದ್ದ ಮತ್ತು ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಅವರನ್ನು ಆಡಳಿತದುದ್ದಕ್ಕೂ ದಿಕ್ಕು ತಪ್ಪಿಸಿದರು. 1978ರಲ್ಲಿ ಐದು ಮಕ್ಕಳ ತಾಯಾಗಿದ್ದ ಮಧ್ಯಪ್ರದೆಶದ ಇಂದೂರಿನ ಶಾ ಬಾನು ಬೇಗಂ ಎಂಬಾಕೆಯನ್ನು ವಕೀಲನಾಗಿದ್ದ ಪತಿಯು ನಲವತ್ತಾರು ವರ್ಷ ದಾಂಪತ್ಯ ಜೀವನ ನಡೆಸಿ, ತಲಾಖ್ ನೀಡುವುದರ ಮೂಲಕ ಮನೆಯಿಂದ ಹೊರದಬ್ಬಿದ್ದ.
ಜೀವನ ನಿರ್ವಹಣೆಗೆ ನ್ಯಾಯಾಲಯದ ಮೆಟ್ಟಿಲೇರಿದ 62 ವರ್ಷದ ಆಕೆಗೆ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು, 1985 ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ನಿಯಮಗಳನ್ನು ತಿರಸ್ಕರಿಸಿ, ಮಾಸಾಶನ ನೀಡುವಂತೆ ಐತಿಹಾಸಿಕ ತೀರ್ಪು ನೀಡಿತು. ಆದರೆ, ಈ ತೀರ್ಪಿನ ವಿರುದ್ಧ ಇಸ್ಲಾಂ ಧರ್ಮದ ಮೌಲ್ವಿಗಳು ಪ್ರತಿಭಟನೆ ನಡೆಸಿ, ಮಹಿಳೆಯರನ್ನು ಶೋಷಿಸುವುದು ನಮ್ಮ ಧಾರ್ಮಿಕ ಹಕ್ಕು ಎಂಬಂತೆ ನಡೆದುಕೊಂಡರು. ಈ ಸಂಧರ್ಭದಲ್ಲಿ ರಾಜೀವ್ ಗಾಂಧಿಯವರು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸುವುದರ ಬದಲಾಗಿಗೆ ಮಸೂದೆಗೆ ತಿದ್ದುಪಡಿ ತಂದು ಐತಿಹಾಸಿಕ ತಪ್ಪನ್ನು ಎಸಗಿದರು.
ಎರಡನೆಯದಾಗಿ ಅಯೋಧ್ಯೆಯ ಬಾಬರಿ ಮಸೀದಿಗೆ ತಂದು ಇಡಲಾಗಿದ್ದ ರಾಮಲಲ್ಲಾ ವಿಗ್ರಹಗಳನ್ನು ದರ್ಶನ ಮಾಡದಂತೆ ಫೈಜಾಬಾದ್ ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಗೆ ಬೀಗ ಹಾಕಲಾಗಿತ್ತು. ಆದರೆ, 1986 ರ ಪೆಬ್ರವರಿ ತಿಂಗಳಲ್ಲಿ ರಾಜೀವ್ ಗಾಂಧಿಯವರು ಬಾಬರಿ ಮಸೀದಿಯ ಬಾಗಿಲು ತೆಗೆಸಿ, ರಾಮನ ವಿಗ್ರಹದ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟರು. ಇದು ಪರೋಕ್ಷವಾಗಿ , ಬಾಬರಿ ಮಸೀದಿಯ ಧ್ವಂಸದ ಜೊತೆಗೆ ರಥಯಾತ್ರೆ ನಡೆದು ಅಂತಿಮವಾಗಿ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು. ನನ್ನ ದೃಷ್ಟಿಯಲ್ಲಿ ಇದು ರಾಜೀವ್ ಗಾಂಧಿಯವರು ಎಸೆಗಿದ ಎರಡನೆಯ ಐತಿಹಾಸಿಕ ತಪ್ಪು .
ಶ್ರೀಲಂಕಾದ ಭಾರತೀಯ ಮೂಲದ ತಮಿಳರು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ, ಹೋರಾಟ ನಡೆಸುತ್ತಿದ್ದಾಗ, ಅವರನ್ನು ಸದೆ ಬಡೆಯಲು 1988 ರಲ್ಲಿ ಭಾರತದ ಸೇನೆಯನ್ನು ಶ್ರೀಲಂಕಾಗೆ ಕಳಿಸಿಕೊಟ್ಟಿದ್ದು ಅವರ ಮೂರನೇ ತಪ್ಪು. ಅಂತಿಮವಾಗಿ ತಾವು ಮಾಡಿದ ತಪ್ಪಿಗೆ ಪ್ರಾಣ ತೆತ್ತರು. ಯಾವೊಂದು ದೋಷ ಎಸಗದೆ ಎಲೆ ಮರೆಯ ಕಾಯಿಯಂತೆ ಬದುಕಿದ್ದ ಸೋನಿಯಾ ಗಾಂಧಿ ಅಂತಿಮವಾಗಿ ಎಲ್ಲಾ ಹೊರೆಗಳನ್ನು ತಮ್ಮ ಹೆಗಲ ಮೇಲೆ ಹೊತ್ತು, ಮಕ್ಕಳನ್ನು ಸಾಕಿ ಬೆಳೆಸಿದರು. ಇಂತಹ ಮಹಾನ್ ತಾಯಿಯೊಬ್ಬಳ ಆತ್ಮಕಥನ ಪ್ರಕಟವಾಗುವ ಮುನ್ನವೇ ಅಡ್ಡಿಪಡಿಸುವುದು ನ್ಯಾಯ ಸಮ್ಮತವಲ್ಲ. ಒಂದು ಕೃತಿ ಲೋಕಾರ್ಪಣೆಗೊಂಡನಂತರ ಅದು ಈ ಸಮಾಜದ ಕೃತಿಯಾಗುತ್ತದೆ. ಅದನ್ನು ವಿಮರ್ಶಿಸಲು ನಮಗೆ ಹಕ್ಕಿದೆ. ಕನಿಷ್ಠ ಈ ಜ್ಞಾನ ನಮ್ಮಲ್ಲಿರಬೇಕು.

ಮಂಗಳವಾರ, ಆಗಸ್ಟ್ 18, 2026

ನೊಂದವರ ನೋವ ನೋಯದವರೆತ್ತ ಬಲ್ಲರೋ?

 



ಕಳೆದ ಜುಲೈ ತಿಂಗಳಲ್ಲಿ ನಮ್ಮ ಮಕ್ಕಳು ದೆಹಲಿಯಲ್ಲಿ ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ನಡೆಸಿದ ಧರಣಿಯ ಸಂದರ್ಭದಲ್ಲಿ ನಮ್ಮ ಮುಸ್ಲಿಂ ಮತ್ತು ಸಿಖ್ ಸಹೋದರರು ಹಸಿದ ಮಕ್ಕಳಿಗೆ ಆಹಾರ, ಕುಡಿಯಲು ನೀರು ಒದಗಿಸುತ್ತಿದ್ದಾಗ, ನನಗೆ 2004 ಡಿಸಂಬರ್ ತಿಂಗಳಲ್ಲಿ ಸಂಭವಿಸಿದ ಸುನಾಮಿ ದುರಂತದ ಘಟನೆ ನೆನಪಾಗುತ್ತಿತ್ತು. ಏಳು ವರ್ಷದ ಹಿಂದೆ ಬರೆದಿದ್ದ ಲೇಖನವನ್ನು ಇಲ್ಲಿ ಮತ್ತೆ ಹಂಚಿಕೊಳ್ಳುತ್ತಿದ್ದೀನಿ.

ನಾನು ಕರ್ನಾಟಕದಲ್ಲಿ ಈವರೆಗೆ ಕಂಡರಿಯದ ಪ್ರಕೃತಿಯ ವಿಕೋಪಕ್ಕೆ ಮತ್ತು ಸಂತ್ರಸ್ತರ ಬವಣೆಗೆ ಸಾಕ್ಷಿಯಾದ ನಂತರ ನನ್ನೊಳಗೆ ಒಂದು ರೀತಿಯ ಸೂತಕದ ಛಾಯೆ ಮನೆ ಮಾಡಿದೆ. ಬರದ ಬವಣೆಯಲ್ಲಿ ಕಳೆದ ಐದಾರು ವರ್ಷಗಳಿಂದ ನರಳಿದ ರೈತ ಸಮುದಾಯದ ಬದುಕು ಬಾರಿ ನೆರೆಯಲ್ಲಿ  ಕೊಚ್ಚಿ ಹೋಗಿದೆ. ಅನ್ನದಾತ ಎಂದು ಕರೆಸಿಕೊಂಡ ರೈತ  ಈಗ ನಿರಾಶ್ರಿತರ ಶಿಬಿರದಲ್ಲಿ ಕುಳಿತು ತುತ್ತು ಅನ್ನಕ್ಕೆ ಕೈಚಾಚುವುದನ್ನು ನೋಡಿ ಮನಸ್ಸು ಭಾರವಾಗಿದೆ.

ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಭಾಷಣ ಬಿಗಿದು ಓಟು ಗಿಟ್ಟಿಸಿಕೊಂಡವರು ದಿಲ್ಲಿಯೆಂಬ ನಾಯಕಸಾನಿಯ ಸೆರಗಿನಲ್ಲಿ ಮರೆಯಾಗಿದ್ದಾರೆ. ಉತ್ತರ ಕರ್ನಾಟಕದ ಅದರಲ್ಲೂವಿಶೇಷವಾಗಿ ಬೆಳಗಾವಿ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳ ಬದುಕು ಮೂರಾಬಟ್ಟೆಯಾಗಿದೆ. ಭವಿಷ್ಯದಬದುಕಿನ ಆತಂಕ, ಸಾವು ಮತ್ತು ನೋವು ಇವುಗಳು ಎಲ್ಲರನ್ನೂ ಜಾತಿ, ಧರ್ಮದ ಬೇಧವಿಲ್ಲದೆ ಒಂದುಗೂಡಿಸಿವೆ. ಸಂದರ್ಭದಲ್ಲಿ ನನಗೆ ಹದಿನಾಲ್ಕು ವರ್ಷಗಳ ಹಿಂದಿನ ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿ ದುರಂತ ನೆನಪಾಯಿತು.

2004 ಡಿಸೆಂಬರ್ ತಿಂಗಳಲ್ಲಿ ನಡೆದ ದುರಂತದಲ್ಲಿ ನಾಗಪಟ್ಟಣಂ ಜಿಲ್ಲೆಗೆ ಅತೀವ ಹಾನಿಯಾಯಿತು. ಚಿದಂಬರಂ, ಕಾರೈಕಲ್ ಹಾಗೂ ಕಡಲೂರು ಮತ್ತು ನಾಗಪಟ್ಟಣಂ ಸಮೀಪದ ಕಡಲತೀರದ ಮೀನುಗಾರರ ಹಳ್ಳಿಗಳನ್ನು ಸಮುದ್ರ ಆಪೋಶನ ತೆಗೆದುಕೊಂಡಿತ್ತು. ಬದುಕುಳಿದಸಾವಿರಾರು ಜನ ಅನ್ನ ಮತ್ತು ಸೂರಿಲ್ಲದೆ ಬಯಲಿಗೆ ಬಿದ್ದ ಸಂದರ್ಭದಲ್ಲಿ ನಾಗಪಟ್ಟಣಂ ಸಮೀಪದ ನಾಗೂರ್ ದರ್ಗಾ ಎಂಟು ಸಾವಿರ ಮಂದಿಗೆ ನಲವತ್ತು ದಿನಗಳ ಕಾಲ ಊಟ ಹಾಕಿ ಬಹುತ್ವದ ನೆಲದಲ್ಲಿ ಮಾನವೀಯತೆ ಸತ್ತಿಲ್ಕ ಎಂಬುದನ್ನ ಸಾಬೀತು ಪಡಿಸಿತು. ತಂಜಾವೂರು ದೊರೆಯ ಕಣ್ಣಿನ ಬೇನೆ ವಾಸಿಮಾಡಿದ ಮುಸ್ಲಿಂ ಸಂತನಿಗೆ ದೊರೆ ನೀಡಿದ ಜಾಗದಲ್ಲಿ ದರ್ಗಾ ನಿರ್ಮಾಣಗೊಂಡಿದೆ. ಜೊತೆಗೆ ತಮಿಳುನಾಡಿನ ಹಿಂದೂ ಮತ್ತು ಮುಸ್ಲಿಂ ಬಾಂಧವರ ಶ್ರದ್ಧಾ ಕೇಂದ್ರವಾಗಿದೆ.

ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿ ಎದುರುಗಿನ ಹತ್ತು ಎಕರೆ ಭೂಮಿಯಲ್ಲಿ ಹಾಕಲಾಗಿದ್ದ ತೆಂಗಿನ ಗರಿಯಚಪ್ಪರದಲ್ಲಿ ಆರು ಸಾವಿರ ಮಂದಿ ಮತ್ತು ದರ್ಗಾದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಎರಡು ಸಾವಿರ ಮಂದಿ ಆಶ್ರಯ ಪಡೆದಿದ್ದರುಬೆಳಿಗ್ಗೆ ಇಡ್ಲಿ ಅಥವಾ ಪೊಂಗಲ್, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್ ಬಡಿಸಲಾಗುತ್ತಿತ್ತು.

ಅಲ್ಲಿ ನೊಂದವರು ಮತ್ತು ನೋಯದವರ ನಡುವೆ ಮನುಷ್ಯತ್ವ ಸೇತುವೆ ನಿರ್ಮಾಣವಾಗಿತ್ತು.  ಅನ್ನ ನೀಡುವವನಿಗೆ ನಾನು ನೀಡುತ್ತಿದ್ದೇನೆ ಎಂಬ ಅಹಂಕಾರವಿರಲಿಲ್ಲ. ಬೇಡುವವನಿಗೆ ಪಡೆಯುತ್ತಿದ್ದೇನೆ ಎಂಬ ಕೀಳರಿಮೆಯಿರಲಿಲ್ಲ. ಅಕ್ಕಿ, ಬೇಳೆ ಕೊಟ್ಟವನು ಯಾವ ಧರ್ಮದವನು, ಅಡುಗೆ ಮಾಡಿದವನು ಯಾವ ಜಾತಿ? ಬಡಿಸುತ್ತಿರುವವನು ಯಾವ ಕುಲ? ಎಂಬ ಪ್ರಶ್ನೆ ಅಲ್ಲಿ ಯಾರ ಎದೆಯಲ್ಲೂ ಉದ್ಭವಿಸಲಿಲ್ಲ. ಕಾರೈಕಲ್, ನಾಗಪಟ್ಟಣಂ ಮತ್ತು ಕುಂಭಕೋಣಂ ತಾಲೋಕಿನಲ್ಲಿ ಅಸಂಖ್ಯಾತ ಮುಸ್ಲಿಂ ಕುಟುಂಬಗಳು ಕೃಷಿ ಮತ್ತು ವ್ಯಾಪಾರದ ಮೂಲಕ ಶ್ರೀಮಂತವಾಗಿವೆ. ಪ್ರತಿ ಕುಟುಂಬಗಳು ಲಾರಿ, ವ್ಯಾನುಗಳ ಮೂಲಕ ನಾಗೂರು ದರ್ಗಾಕ್ಕೆ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಕಳುಹಿಸಿ ತಮ್ಮ ಹೆಸರು ಎಲ್ಲಿಯೂ ಪ್ರಚಾರಕ್ಕೆ ಬರದಂತೆ ನೋಡಿಕೊಂಡವು.

ಆ ವರ್ಷ ಡಿಸೆಂಬರ ಕೊನೆಯವಾರ ಐದು ದಿನಗಳ ಕಾಲ ನೆಲದ ಮೇಲಿನ ನರಕ ಮತ್ತು ಸ್ಮಶಾನದಂತಿದ್ದ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ನಾನು ಒಂದು ದಿನ ದರ್ಗಾದಲ್ಲಿದ್ದೆ. ಮುಸ್ಲಿ ಸಂತನ ಕುಟುಂಬದ ವಾರಸುದಾರರ ನೇತೃತ್ವದಲ್ಲಿ ನಡೆಯುತ್ತಿರುವ ದರ್ಗಾದ ಮುಖ್ಯಸ್ಥ ರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ  ರೀತಿ ಊಟ ಹಾಕುವ ಧೈರ್ಯ ನಿಮಗೆ ಹೇಗೆ ಬಂತು? ಎಂದು ಪ್ರಶ್ನಿಸಿದೆ. ಅವರು ನಗುತ್ತಾ ಹೀಗೆ ಉತ್ತರಿಸಿದರು.

‘’ದೇವರು ನೆರವಿಗೆ ಬರುತ್ತಾನೆ ಎಂಬ ಇಚ್ಚಾಶಕ್ತಿಯಿಂದ ಆರಂಭಿಸಿದೆ. ದರ್ಗಾದ ಭಕ್ತರುದೇವರ ರೂಪದಲ್ಲಿ ಸಹಕರಿಸಿದರು’’ ಎಂದು ಹೇಳಿದರು. ಜೊತೆಗೆ ಮಧ್ಯಾಹ್ನದ ಭೊಜನಕ್ಕೆ ಆಹ್ವಾನಿಸಿದರು. ಹತ್ತು ಕಿ.ಮಿ. ದೂರದ ನಾಗಪಟ್ಟಣಂ ಗೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ರವಾನೆಯಾಗುತ್ತಿದ್ದ ಅನ್ನ,‌ಸಾಂಬಾರ್ ನೋಡುತ್ತಾ ದರ್ಗಾದ ಮುಖ್ಯಸ್ಥರ ಜೊತೆ ಊಟ ಮಾಡುವಾಗ ನನಗೆ ಅನಿಸಿದ್ದು ಹೀಗೆ.

ಮಠ, ಮಂದಿರ, ಮಸೀದಿಗಳೆಂದರೆ ಕೇವಲ ಧಾರ್ಮಿಕಶ್ರದ್ಧಾಕೇಂದ್ರಗಳಲ್ಲ, ಮಾನವೀಯತೆಯ ಶ್ರದ್ಧಾಕೇಂದ್ರಗಳೂ ಹೌದು.

ಜಿಮೊಟೊ ಎಂಬ ಆಹಾರ ಸರಬರಾಜು ಮಾಡುವ ಕಂಪನಿಯ ಡೆಲಿವರಿ ಬಾಯ್ ಮುಸ್ಲಿಂ ಎನ್ನುವ ಕಾರಣಕ್ಕೆ ಆಹಾರ ನಿರಾಕರಿಸಿದ ಹಾಗೂ ಕಂಪನಿಯ ವಿರುದ್ಧ ಸಿಡಿದೆದ್ದ  ನಮ್ಮ ನವನಾಗರೀಕತೆಯ ಅನಾಗರಿಕರಿಗೆ ಇಂತಹ ಸುನಾಮಿ ಒಮ್ಮೆ ಅವರ ಬದುಕಿನಲ್ಲಿ ಅಪ್ಪಳಿಸಬಾರದೆ ಎಂದು ಕ್ಷಣದಲ್ಲಿ ಹಂಬಲಿಸುತ್ತಿದ್ದೇನೆ.

ನೊಂದವರ ನೋವ ನೋಯದವರೆತ್ತ ಬಲ್ಲರೊ? ಎಂಬ ಅಕ್ಕನ ವಚನದ ಸಾಲು ಸಂತ್ರಸ್ತರನ್ನು ನೋಡಿದಾಗನೆನಪಾಗುತ್ತಿದೆ.

ಜಗದೀಶ್ ಕೊಪ್ಪ.