ಶುಕ್ರವಾರ, ಏಪ್ರಿಲ್ 12, 2024

ಬದಲಾಗದ ಮಮತಾ ಬ್ಯಾನರ್ಜಿಯ ಮನೋಭಾವ

 


ರಾಷ್ಟ್ರಮಟ್ಟದಲ್ಲಿ ಪ್ರಧಾನಿಗೆ ದಿಟ್ಟ ಹೋರಾಟ ನೀಡಬಲ್ಲ ಛಲಗಾತಿ ಹೆಣ್ಣು ಮಗಳು ಎಂದು ಪ್ರಸಿದ್ಧರಾದ ಮಮತಾ ಬ್ಯಾನರ್ಜಿ ಇಂದಿನ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿ ಪಕ್ಷಗಳ ಜೊತೆಯಲ್ಲಿ ಇರಬೇಕಾಗಿತ್ತು. ಇಂದು ಪ್ರಧಾನಿ ನರೇಂದ್ರಮೋದಿಗೆ ಸವಾಲುಗಳಾಗಿರುವ ರಾಜ್ಯಗಳೆದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಹಾಗೂ ಉತ್ತರದಲ್ಲಿ ದೆಹಲಿ ಮತ್ತು ಪೂರ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯಗಳು ಮಾತ್ರ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹದಿನೆಂಟು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿ.ಜೆ.ಪಿ. ಪಕ್ಷಕ್ಕೆ ಈ ವರ್ಷ ಅಷ್ಟೇ ಸ್ಥಾನಗಳು ಲಭ್ಯವಾಗುತ್ತವೆ ಎಂದು ಹೇಳಲಾಗದು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೇಸ್ ಪಕ್ಷಕ್ಕೆ ಸರಿ ಸಮಾನಾಗಿ ಕಾಂಗ್ರೇಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಬಿ.ಜೆ.ಪಿ.ಯನ್ನು ವಿರೋಧಿಸುವ ಪಕ್ಷಗಳಾಗಿರುವುದರಿಂದ ಅವುಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು.ಏಕೆಂದರೆ, ಬಿ.ಜೆ.ಪಿ.ಯ ವಿರೋಧಿ ಮತಗಳು ಛಿದ್ರವಾಗುವುದರ ಮೂಲಕ  ಇದು ಪರೋಕ್ಷವಾಗಿ ಬಿ.ಜೆ.ಪಿ.  ಪಕ್ಷಕ್ಕೆ ನೆರವಾಗಬಲ್ಲದು.

ಕೊಲ್ಕತ್ತ ನಗರದ ಸಾಮಾನ್ಯ ಕುಟುಂಬದಿಂದ ಬಂದಿರುವ 69 ವರ್ಷ ವಯಸ್ಸಿನ ಮಮತಾ ಬ್ಯಾನರ್ಜಿ ಅವರು ಬಾಲ್ಯದಿಂದಲೂ, ವಿಶೇಷವಾಗಿ ವಿದ್ಯಾರ್ಥಿ ಜೀವನದಿಂದಲೂ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡು ಬಂದವರು. 1975 ರ ವೇಳೆಗೆ ಕಾಂಗ್ರೇಸ್ ಯುವ ಸಂಘಟನೆಗೆ ಸೇರಿದ ಮಮತಾ ಅವರು ಆ ಸಂಧರ್ಭದಲ್ಲಿ ಇಂದಿರಾಗಾಂಧಿ ಅವರು ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ ನಾರಾಯಣ್ ಅವರು ವಿದ್ಯಾರ್ಥಿ ಚಳುವಳಿ ಹೋರಾಟ ಹಮ್ಮಿಕೊಂಡಾಗ ಕೊಲ್ಕತ್ತ ನಗರದಲ್ಲಿ ಅವರ ಕಾರಿನ ಮೇಲೆ  ನಿಂತು ಕಾಳಿ ನೃತ್ಯ ಮಾಡುತ್ತಾ, ಅವರ ಹೋರಾಟವನ್ನು ವಿರೋಧಿಸುವದರ ಮೂಲಕ  ಇಡೀ  ಪಶ್ಚಿಮ ಬಂಗಾಳ ರಾಜ್ಯದ ಗಮನ ಸೆಳೆದಿದ್ದರು.

ಜ್ಯೋತಿ ಬಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಓರ್ವ ಬಾಲಕಿಯು ಅತ್ಯಾಚಾರಕ್ಕೆ ಒಳಗಾದಾಗ ಆ ಬಾಲಕಿಯನ್ನು ಮುಖ್ಯಮಂತ್ರಿ ಕಚೇರಿಗೆ ಕರೆದೊಯ್ದು, ಈಕೆಗೆ ನ್ಯಾಯ ಕೊಡಿಸಿ ಇಲ್ಲದಿದ್ದರೆ, ನಾವು ನಾಳೆ ಈ ರೈಟರ್ಸ್ ಬಿಲ್ದಿಂಗ್ ನಲ್ಲಿ ಅಧಿಕಾರ ನಡೆಸಬೇಕಾಗುತ್ತದೆ ಎಂದು ಸವಾಲು ಹಾಕಿದ್ದರು. ಅದರಂತೆ ಮುಂದಿನ ದಿನಗಳಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಂಸತ್ತನ್ನು ಪ್ರವೇಶಿಸುವುದರ ಮೂಲಕ ರಾಜಕೀಯ ಪ್ರವೇಶ ಮಾಡಿದರು.  ಇಷ್ಟು ಮಾತ್ರವಲ್ಲದೆ, ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ ಸೋಮನಾಥ ಮುಖರ್ಜಿಯನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಿದ್ದರು. ಕೇಂದ್ರ ಸರ್ಕಾರದಲ್ಲಿ  ಎರಡು ಬಾರಿ ರೈಲ್ವೆ ಸಚಿವೆ, ಒಂದು ಬಾರಿ ಕಲ್ಲಿದ್ದಲು ಖಾತೆ ಸಚಿವೆಯಾಗಿ ಕಾಂಗ್ರೇಸ್ ನಲ್ಲಿ ಭವಿಷ್ಯದ ನಾಯಕಿ ಎಂದು ಭರವಸೆ ಮೂಡಿಸಿದ್ದ ಮಮತಾ ಬ್ಯಾನರ್ಜಿ ನನಗೆ ನೆನಪಿರುವ ಹಾಗೆ 1997 ಅಥವಾ 1998 ರಲ್ಲಿ ಪಕ್ಷ ತೊರೆದು ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿದರು.

ಮಮತಾಗೆ ಕೇಂದ್ರದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ತನ್ನ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್ ಪಕ್ಷವನ್ನು ಮಣಿಸಿ ಮುಖ್ಯಮಮತ್ರಿಯಾಗಬೇಕೆಂಬ ಆಸೆ ಆ ಸಂದರ್ಭದಲ್ಲಿ ಮೂಡಿ ಬಂದಿತ್ತು. ನಂತರ ಅದು 2010 ಮತ್ತು 2011 ರ ವೇಳೆಗೆ ನೆರೆವೇರಿತು. ಜ್ಯೋತಿಬಸು ಅವರು ಸುಧೀರ್ಘ 24 ವರ್ಷಗಳ ಮುಖ್ಯಮಂತ್ರಿ ಅವದಿಯನ್ನು ಮುಗಿಸಿ, ಅಧಿಕಾರದಿಂದ ಇಳಿದಾಗ, ಅವರ ಉತ್ತರಾಧಿಕಾರಿಯಾಗಿ ಬುದ್ಧದೇವ ಭಟ್ಟಾಚಾರ್ಯ ಮುಂಖ್ಯಮಂತ್ರಿಯಾದರು. ಇವರ ಅವಧಿಯಲ್ಲಿ ಟಾಟಾ ಕಂಪನಿಯು ನ್ಯಾನೊ ಕಾರನ್ನು ತಯಾರಿಸಲು ಸಂಗೂರ್ ಎಂಬಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಜೊತೆ ಒಪ್ಪಂಧ ಮಾಡಿಕೊಂಡಿತು. ಜೊತೆಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಭೂಮಿಗೆ ವಿನಿಯೋಗಿಸಿತು. ಇದರ ಜೊತೆಗೆ ಸರ್ಕಾರವು ನಂದಿ ಗ್ರಾಮದ ಬಳಿ ಕೈಗಾರಿಕಾ ಪ್ರದೇಶವನ್ನು ಮಾಡಲು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಾಗ ಮಮತಾ ಬ್ಯಾನರ್ಜಿ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿತು.

ಪಕ್ಷದಲ್ಲಿ ಒಡಹುಟ್ಟಿದ ಸಹೋದರನಂತೆ ಇದ್ದ ಸುವೆಂದು ಅಧಿಕಾರಿ ಯ ಜೊತೆ ಹೋರಾಟ ಮಾಡಿ ನಂದಿಗ್ರಾಮ ಮತ್ತು ಸಂಗೂರ್ ಎರಡರಲ್ಲಿಯೂ ಜಯಗಳಿಸಿದ ಮಮತಾ ಅವರು 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಅವಿವಾಹಿತೆಯಾಗಿ ಉಳಿದುಕೊಂಡು ತನ್ನ ನೆಲದ ಜನರ ಬವಣೆಗಳಿಗೆ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸಬಲ್ಲ ಗುಣವುಳ್ಳ ಈ ಹೆಣ್ಣುಮಗಳ  ಆತ್ಮಸ್ಥೈರ್ಯ ಮೆಚ್ಚುವಂತಹದ್ದು ನಿಜ. ಆದರೆ, ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವುದು ಈಕೆಯ ದೌರ್ಭಲ್ಯವಾಗಿದೆ.  ಈ ಕಾರಣದಿಂದಾಗಿ ಸುವೆಂದು ಅದಿಕಾರಿ ಐದು ವರ್ಷಗಳ ಹಿಂದೆ ಪಕ್ಷ ತೊರೆದು ಈಗ ಬಿ.ಜೆ.ಪಿ. ನಾಯಕನಾಗಿದ್ದಾನೆ.

ಸಾಮಾನ್ಯ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದ ಜನರಿಗೆ ಆಸರೆಯಾಗಿ ನಿಂತಿರುವ ಮಮತಾ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಈಗ ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳನ್ನು ಮೀರಿಸುವಂತಿವೆ. ಆದರೆ, ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಂಭವಿಸುತ್ತಿರುವ ಅನೇಕ ಅಹಿತಕರ ಘಟನೆಗಳು (ವಿಶೇಷವಾಗಿ ಸಂದೇಶ್ ಖಾಲಿ ಘಟನೆ) ಭವಿಷ್ಯದಲ್ಲಿ ಮಮತಾ ಅವರ ಭವಿಷ್ಯವನ್ನು ಮಸುಕಾಗಿಸಬಲ್ಲವು.

ಭಾರತದ ಇತಿಹಾಸದಲ್ಲಿ ಜಯಲಲಿತಾ, ಮಾಯಾವತಿ ಇವರಿಬ್ಬರೂ ತಮ್ಮ ಪಕ್ಷಗಳನ್ನು ತಮ್ಮ ಅವನತಿಯ ಜೊತೆ ಕೊನೆಗಾಣಿಸಿದ ರೀತಿಯಲ್ಲಿ ಮಮತಾ ಬ್ಯಾನರ್ಜಿ ಕೂಡಾ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಕೊನೆಗಾಣಿಸಲು ತೀರ್ಮಾನಿಸಿದ ಹಾಗೆ ಕಾಣುತ್ತೆ. ಭವಿಷ್ಯದ ಭಾರತದ ದೃಷ್ಟಿಯಿಂದ ಸುಳ್ಳುಗಳ ಮೂಲಕ ದೇಶ ಆಳುತ್ತಿರುವ ನಕಲಿ ಶಾಮಣ್ಣರನ್ನು ಕಿತ್ತೊಗೆಯಲು ಮಮತಾ ಬ್ಯಾನರ್ಜಿ ತನ್ನ ಮನೋಭಾವವನ್ನು ಬದಲಿಸಿಕೊಳ್ಳುವುದು ಈಗ ಅನಿವಾರ್ಯವಾಗಿದೆ.

ಹತ್ತು ವರ್ಷಗಳ ಹಿಂದೆ ಕೊಲ್ಕತ್ತ ನಗರದಿಂದ ಮಮತಾ ಆತ್ಮಕಥೆಯನ್ನು ಕೊಂಡು ತಂದಿದ್ದೆ. ಅದರಲ್ಲಿ ಆಕೆ ಮುಖ್ಯಮಂತ್ರಿಯಾಗುವವರೆಗೂ ಹೋರಾಡದ ಕಥನ ಮತ್ತು ಬಾಲ್ಯದ ವಿವರಗಳಿದ್ದವು. ನಿರೂಪಣೆಯು ಇಂಗ್ಲೀಷ್ ಭಾಷೆಯಲ್ಲಿ ತೃಪ್ತಕರವಾಗಿರಲಿಲ್ಲ. ಹಾಗಾಗಿ ಅನುವಾದಿಸುವ ಕ್ರಿಯೆಯನ್ನು ಕೈ ಬಿಟ್ಟು ಇನ್ನಷ್ಟು ವರ್ಷ ಕಾಯೋಣ  ಎಂದು ನಿರ್ಧರಿಸಿದ್ದೆ. ಈಗ ನನ್ನ ನಿರ್ಧಾರ ಸರಿ ಎನಿಸಿದೆ.


ಜಗದೀಶ್ ಕೊಪ್ಪ.

ಬುಧವಾರ, ಏಪ್ರಿಲ್ 3, 2024

ಭಾರತ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ ಸಿಂಗ್. ಒಂದಿಷ್ಟು ನೆನಪುಗಳು.

 

ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ರಾಜಕೀಯ ಬದುಕು ಅಧಿಕೃತವಾಗಿ ನಿನ್ನೆ ಕೊನೆಗೊಂಡಿತು. ಕಳೆದ 33 ವರ್ಷಗಳಿಂದ ನಿರಂತರವಾಗಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಸಿಂಗ್ ಅವರು ನನ್ನ ನಿವೃತ್ತರಾದರು.  ತಮ್ಮ ವಿದ್ವತ್, ಸೌಜನ್ಯ ಹಾಗೂ ಆರ್ಥಿಕ ಚಿಂತನೆಗಳ ಮೂಲಕ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗೌರವ ಗಳಿಸಿದ್ದರು.

1990 ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ತಮಿಳು ನಾಡಿನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಹತ್ಯೆಯಾದಾಗ, ಸಹಜವಾಗಿ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಎಲ್ಲರೂ ಊಹಿಸಿದ್ದರುಆದರೆ, ಸಂದರ್ಭದಲ್ಲಿ ಬಿ.ಜೆ.ಪಿ. ಆಡಿದ ನಾಟಕಗಳು  ತೀವ್ರ ಅಸಹ್ಯ ಮೂಡಿಸಿದವು. ವಿದೇಶಿ ಹೆಣ್ಣುಮಗಳಿಗೆ ಪ್ರಧಾನಿ ಹುದ್ದೆ ಬೇಡ ಎಂದು ಕಾರ್ಯಕರ್ತರು ಬೀದಿಗಳಿದರು. ಅಂದಿನ ಬಿ.ಜೆ.ಪಿ. ಸ್ಟಾರ್ ಪ್ರಚಾರಕಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಪ್ರಧಾನಿಯಾದರೆ, ನಾನು ತಲೆಬೋಳಿಸಿಕೊಂಡು ವಿಧವೆಯ ಹಾಗೆ ಬಿಳಿಸೀರೆ ಉಟ್ಟು ಬದುಕುತ್ತೇನೆ ಎಂದು ಘೋಷಿಸಿದ್ದರು.

ತನ್ನ ಪತಿಯ ಸಾವಿನ ದುಃಖದಲ್ಲಿದ್ದ ಸೋನಿಯಾ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಂದು ದಿನ ಅನಿರೀಕ್ಷಿತವಾಗಿ ನಾನು ಪ್ರಧಾನಿಯಾಗುವುದಿಲ್ಲ ಎಂದು ಘೋಷಿಸಿದರು.  2004 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಭಾರತದ  ಪ್ರಧಾನಿಯಾಗಿ ಡಾ.ಮನಮೋಹನ ಸಿಂಗ್ ಹುದ್ದೆ ನಿರ್ವಹಿಸುತ್ತಾರೆ ಎಂದು ಹೇಳುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದರುಸೋನಿಯಾ ಗಾಂಧಿಯವರು 33 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರದಿಂದ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ತೀವ್ರವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬ ಪ್ರಸಿದ್ಧಿಗೆ ಬರಲು ಕಾರಣವಾಯಿತು.


ಸ್ವಾತಂತ್ರ್ಯ ಪೂರ್ವದಲ್ಲಿ ಇಂದಿನ ಪಾಕಿಸ್ತಾನದಲ್ಲಿ ಜನಿಸಿದ ಡಾ.ಸಿಂಗ್ ಪಂಜಾಬ್ ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ನಂತರ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದರು ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಆ್ಯಡಂ ಸ್ಮಿತ್ ಸ್ಮಾರಕ ನೀಡಲಾಗುವ ಚಿನ್ನದ ಪದಕ ವನ್ನು ಪಡೆದ ಮೊದಲ ಏಷ್ಯಾದ ನಾಗರೀಕ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಭಾರತದ ರಿಸರ್ವ ಬ್ಯಾಂಕ್ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್  ಅರ್ಥಖಾತೆಯ ಸಚಿವರನ್ನಾಗಿ ನೇಮಕ ಮಾಡಿಕೊಂಡರು. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ಭಾರತ ಕಾಲಘಟ್ಟದಲ್ಲಿ ಜಾಗತೀಕರಣಕ್ಕೆ ತೆರೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿತ್ತು.

ದೇಶವನ್ನು ತಮ್ಮ ಪ್ರಖರ ಆರ್ಥಿಕ ಚಿಂತನೆಗಳ ಮೂಲಕ ಹಾಗೂ ಅನುಷ್ಠಾನಕ್ಕೆ ತಂದ ಯೋಜನೆಗಳ ಮೂಲಕ ಸಂಕಷ್ಠದಿಂದ ಪಾರುಮಾಡಿ ದೇಶದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು.

ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಮೊದಲ ಐದು ವರ್ಷ ನಿಜಕ್ಕೂ ಭಾರತದ ಪಾಲಿಗೆ ಸುವರ್ಣ ಅಧ್ಯಾಯ ಎಂದು ಕರೆಯಬಹುದು. ಆದರೆ, ಎರಡನೇ ಅವಧಿಯಲ್ಲಿ ದೂರವಾಣಿಗೆ ಸಂಬಂಧಿಸಿದಂತೆ 2G ಹಗರಣ, ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಪ್ರಧಾನಿಯಾಗಿದ್ದುಕೊಂಡು ನಿಯಂತ್ರಿಸಲಾಗದ ಅಸಹಾಯಕತೆಗೆ ಒಳಗಾದರು.

ಕಾಂಗ್ರೇಸ್ ಪಕ್ಷ ತನ್ನೊಂದಿಗೆ ಅಧಿಕಾರ ಹಂಚಿಕೊಂಡಿದ್ದ ಮಿತ್ರ ಪಕ್ಷಗಳ ಭ್ರಷ್ಟಾಚಾರಕ್ಕೆ ಕಣ್ಮುಚ್ಚಿ ಕುಳಿತಿತು. ಅಂತಿಮವಾಗಿ ಸುಳ್ಳಿನ ಹರಿಶ್ಚಂದ್ರ ಅಧಿಕಾರಕ್ಕೆ ಬರಲು ಕಾರಣವಾಯಿತು.

ಅತ್ಯಂತ ಮಿತಭಾಷಿಯಾಗಿದ್ದ ಮನಮೋಹನ ಸಿಂಗ್ ಅವರು ಎಂದಿಗೂ ಮಾಧ್ಯಮಗಳಿಗೆ ಉತ್ತರ ಹೇಳದೆ ತಪ್ಪಿಸಿಕೊಂಡವರಲ್ಲ. ವರ್ಷಕ್ಕೆ ಕನಿಷ್ಠ ಹತ್ತು ಬಾರಿ ನೇರವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಅಭಿವೃದ್ಧಿ ಚಟುವಟಿಕೆಗಾಗಿ ಇಡೀ ಭಾರತದ ಮೂಲೆ ಮೂಲೆ ಸುತ್ತಾಡಿದರೆ ಹೊರತು, ಸಾರ್ವಜನಿಕರ ಹಣದಲ್ಲಿ ಇಂದಿನ ಸುಳ್ಳಿನ ಸಾರ್ವಭೌಮನ ಮಾದರಿಯಲ್ಲಿ ಪಕ್ಷ ಕಟ್ಟಲು ತಿರುಗಾಡಲಿಲ್ಲ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ಅಥವಾ ನಾಲ್ಕು ಬಹಿರಂಗ ಸಭೆಯಲ್ಲಿ ಭಾಗವಹಿಸುವುದನ್ನು ಹೊರತು ಪಡಿಸಿದರೆ,  ಅವರು ಬಹುತೇಕ ಸಮಯವನ್ನು ಆಡಳಿತದ ವಿಷಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ನೇರವಾಗಿ ಏನನ್ನೂ ಹೇಳಲಾರದೆ ಇರುವ ದೌರ್ಬಲ್ಯವನ್ನು  ಹೊರತು ಪಡಿಸಿದರೆ, ಡಾ.ಸಿಂಗ್ ದೇಶ ಕಂಡ ಅತ್ಯುತ್ತಮ ಪ್ರಧಾನಿ ಕೂಡಾ ಒಬ್ಬರು. ಅವರು ನಿರ್ಮಿಸಿದ ಸೌಧದಲ್ಲಿ ಆಸೀನರಾಗಿರುವ ಇಂದಿನ ನಕಲಿ ಶಾಮಣ್ಣರಿಗೆ ದೇಶದ ಇತಿಹಾಸ ಅಥವಾ ಅರ್ಥಶಾಸ್ತ್ರದ .ಬಿ.ಸಿ.ಡಿ.ಗೊತ್ತಿಲ್ಲ.

ಅವರಿಗೆ ಗೊತ್ತಿರುವುದು ರಾಮ ಮತ್ತು ಕೃಷ್ಣ ಹಾಗೂ ಕೊಚ್ಚು ಮತ್ತು ಕೊಲ್ಲು ಎಂಬ ಶಬ್ದಗಳು ಮಾತ್ರ.

ಶನಿವಾರ, ಮಾರ್ಚ್ 30, 2024

ಕೊಲ್ಕತ್ತ ನಗರದ ಪುಸ್ತಕ ಲೋಕ

 


ಭಾರತದ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಕೊಲ್ಕತ್ತಾ ನಗರವು ಸಹ ಒಂದು ಕಾಲದಲ್ಲಿ ಅತ್ಯಂತ ಜನಸಂದಣಿಯ ನಗರವೆಂದು ಹೆಸರುವಾಸಿಯಾಗಿತ್ತು. ಭಾರತವು ಜಾಗತೀರಣಕ್ಕೆ  ತೆರೆದುಕೊಂಡ ನಂತರ ಮಾಹಿತಿ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದಾಗಿ ದೆಹಲಿ, ಬೆಂಗಳೂರು, ಪುಣೆ ನಗರಗಳು ಜನಸಂಖ್ಯೆಯ ಬೆಳವಣಿಗೆ ದರದಲ್ಲಿ ಕೊಲ್ಕತ್ತವನ್ನು ಹಿಂದಿಕ್ಕಿ ನೆಲದ ಮೇಲಿನ ನರಕದಂತಹ ನಗರಗಳು ಎಂಬ ಕುಖ್ಯಾತಿಯನ್ನು ಪಡೆದವು. ಕೊಲ್ಕತ್ತ ನಗರವು ಜನಸಂದಣಿಯ ನಗರವಾಗಿದ್ದರೂ ಸಹ ತನ್ನ ಒಡಲಲ್ಲಿ ಅನೇಕ ಇತಿಹಾಸದ ಕುರುಹುಗಳನ್ನು ಹುದುಗಿಸಿಕೊಂಡು ಇಂದಿಗೂ ಸಹ ಸಾಂಸ್ಕೃತಿಕವಾಗಿ ಜೀವಂತವಾಗಿದೆ. ಸಂಗೀತ, ನೃತ್ಯ, ಕಲೆ, ಸಿನಿಮಾ, ನಾಟಕ, ವಿಜ್ಞಾನ ಕ್ಷೇತ್ರಗಳಲ್ಲಿ ಭಾರತಕ್ಕೆ ಕೊಲ್ಕತ್ತ ನಗರವು ನೀಡಿರುವ ಕೊಡುಗೆ ಅಪಾರವಾದುದು.

ಭಾರತಕ್ಕೆ ಕಾಲಿಟ್ಟ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯು 1912 ರವರೆಗೆ ತನ್ನ ಕೇಂದ್ರ ಕಚೇರಿಯನ್ನು ದೆಹಲಿಗೆ ವರ್ಗಾಯಿಸುವರೆಗೂ ಕೊಲ್ಕತ್ತ ನಗರವು ಬ್ರಿಟೀಷರ ರಾಜಧಾನಿಯಾಗಿತ್ತು. ಕಾರಣದಿಂದಾಗಿ ಪಶ್ಚಿಮ ಬಂಗಾಳದ ಜನತೆ ಹಾಗೂ ಕೊಲ್ಲತ್ತ ನಗರದ ಸುಸಂಸ್ಕೃತರು ಭಾರತದಲ್ಲಿ ಪ್ರಥಮ ಬಾರಿಗೆ ಪಾಶ್ಚಿಮಾತ್ಯ ಜಗತ್ತಿನ ಚಿಂತನೆಗಳಿಗೆ ಮತ್ತು ಇಂಗ್ಲೀಷ್ ಭಾಷೆಗೆ ತೆರೆದುಕೊಳ್ಳಲು ಸಾಧ್ಯವಾಯಿತು. ರಾಜಾರಾಂ ಮೋಹನರಾಯ್ ಅವರಿಂದ ಹಿಡಿದು ಸುಭಾಷ್ ಚಂದ್ರಬೋಸ್, ರವೀಂದ್ರನಾಥ ಟ್ಯಾಗೂರ್, ವಿಜ್ಞಾನಿ ಜಗದೀಶ್ ಚಂದ್ರಬೋಸ್, ಸತ್ಯಜಿತ್ ರಾಯ್, ಅಮಾರ್ಥ್ಯ ಸೇನ್ ಹೀಗೆ ಹಲವಾರು ಪ್ರತಿಭಾವಂತ ಮಹನೀಯರು ಹೊಸ ಆಧುನಿಕ ಜಗತ್ತಿನ ಚಿಂತನೆಗಳಿಗೆ, ಕಲೆ, ಸಾಹಿತ್ಯ ಮತ್ತು ವಿಜ್ಞಾನದ ಕ್ಷೇತ್ರಗಳಿಗೆ ಮಹತ್ವ ಕೊಡುಗೆಗಳನ್ನು ನೀಡಲು ಸಾಧ್ಯವಾಯಿತು.

ಕೊಲ್ಕತ್ತ ನಗರದಲ್ಲಿ ನಾವು ನೋಡಬಹುದಾದ ಅನೇಕ ಪ್ರಮುಖ ಸ್ಥಳಗಳಿವೆ.  ರಾಮಕೃಷ್ಣ ಆಶ್ರಮ, ಸ್ವಾಮಿ ವಿವೇಕಾನಂದರು ಜನಿಸಿದ ನಿವಾಸ,  ಕಾಳಿಘಾಟ್ ಬಳಿ ಇರುವ ಕಾಳಿ ದೇವಾಲಯ,  ಅದರ ಪಕ್ಕದಲ್ಲಿರುವ ಮದರ್ ಥೆರೆಸಾ ಅವರ ಅನಾಥರ ಆಶ್ರಮವಾದ ಕಾಳಿಘಾಟ್ ನಿರಾಶ್ರಿತರ ತಾಣ, ಮೈಸೂರು ಗಾರ್ಡನ್ ( 1894ರಲ್ಲಿ ಕೊಲ್ಕತ್ತ ನಗರದಲ್ಲಿ ನಿಧನ ಹೊಂದಿದ ಮೈಸೂರಿನ ದೊರೆ ಹತ್ತನೇ ಚಾಮರಾಜ ಒಡೆಯರ್ ಅವರ ಸಮಾಧಿ ಸ್ಥಳ) ಟಿಪ್ಪು ಮಸೀದಿ, ವಿಲಿಯಂ ಪೋರ್ಟ್, ವಿಕ್ಟೋರಿಯಾ ಸ್ಮಾರಕ ಭವನ, ಏಷ್ಯಾಟಿಕ್ ಸೊಸೈಟಿಯ ಲೈಬ್ರರಿ  ಹೀಗೆ ಅನೇಕ ಸ್ಥಳಗಳನ್ನು ಹೆಸರಿಸಬಹುದು. ಇವುಗಳ ಜೊತೆಗೆ ಪುಸ್ತಕ ಪ್ರೇಮಿಗಳ ಪಾಲಿಗೆ ಪುಣ್ಯ ಕ್ಷೇತ್ರವಾಗಿರುವ ಹಾಗೂ ಸ್ಥಳಿಯ ಭಾಷೆಯಲ್ಲಿ ಬೊಯಿ ಪಾರ ಅಂದರೆ, ಪುಸ್ತಕಗಳ ನಗರ ಅಥವಾ ಕಾಲೋನಿ ಎಂದು ಕರೆಸಿಕೊಳ್ಳುವ  ಕಾಲೇಜ್ ಸ್ಟಿçÃಟ್ ಎನ್ನುವ ಪ್ರದೇಶಕ್ಕೆ ಎರಡು ಶತಮಾನಗಳ ಭವ್ಯ ಇತಿಹಾಸವಿದೆ.  ಪ್ರೆಸಿಡೆನ್ಸಿ  ಕಾಲೇಜ್ ಕೊಲ್ಕತ್ತ ಮೆಡಿಕಲ್ ಕಾಲೇಜ್, ಕೊಲ್ಕತ್ತ ವಿಶ್ವವಿದ್ಯಾನಿಲಯಕ್ಕೆ  ಹೊಂದಿಕೊಂಡಮತೆ ಇರುವ ಪುಸ್ತಕ ಅಂಗಡಿಗಳ ರಸ್ತೆಯು  ಇಡೀ ಏಷ್ಯಾ ಖಂಡದ ಅತ್ಯಂತ ದೊಡ್ಡ ಪುಸ್ತಕಗಳ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.   ಕಾಲೇಜ್ ರಸ್ತೆಯಲ್ಲಿನ ಅಂಗಡಿಗಳಲ್ಲಿ ನಾವು ಜಗತ್ತಿನಲ್ಲಿ ಪ್ರಕಟವಾಗಿರುವ ಬಹುತೇಕ ಇಂಗ್ಲೀಷ್ ಕೃತಿಗಳನ್ನು ಮತ್ತು ಬಂಗಾಳಿ ಭಾಷೆಯ ಎಲ್ಲಾ ಪ್ರಕಾರದ ಕೃತಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.


ಎಡಗೈಯಲ್ಲಿ ಉರಿಯುತ್ತಿರುವ ಸಿಗರೇಟ್, ಬಲಗೈಯಲ್ಲಿ ಮಣ್ಣಿನ ಬಟ್ಟಲಲ್ಲಿ ಹಾಕಿಕೊಟ್ಟ ಖಡಕ್ ಚಹಾವನ್ನು ಹೀರುತ್ತಾ ಗಂಭೀರವಾಗಿ ಸಾಹಿತ್ಯದ ಚರ್ಚೆಯಲ್ಲಿ ತೊಡಗಿಸಿಕೊಂಡು ನಿಂತಿರುವ ಅಥವಾ ಕುಳಿತಿರುವ  ಲೇಖಕರು, ಕಲಾವಿದರನ್ನು ನಾವು ನೋಡಬಹುದಾಗಿದೆ. ಇವರ  ನಡುವೆ  ಐಸ್ ಕ್ರೀಮ್ ತಿನ್ನುತ್ತಾ ಇಲ್ಲವೆ, ಹಣ್ಣಿನ ರಸ ಹೀರುತ್ತಾ ತಮಗೆ ಬೇಕಾದ ವಿಜ್ಞಾನ, ಕಲೆ ಅಥವಾ ಸಾಹಿತ್ಯದ ಕೃತಿಗಳನ್ನು ಅರೆಸುತ್ತಾ ಓಡಾಡುವ ವಿದ್ಯಾರ್ಥಿಗಳನ್ನು ಸಹ ಕಾಣಬಹುದು. ಸದಾ ತುಂಬಿ ತುಳುಕುವ ಕಾಲೇಜ್ ರಸ್ತೆಯಲ್ಲಿ ಬಹುತೇಕ ಕೃತಿಗಳು ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತವೆ. ಸೆಕೆಂಡ್ ಹ್ಯಾಂಡ್ ಬುಕ್ಸ್ ಶಾಪ್  ಎಂದು ಕರೆಸಿಕೊಳ್ಳುವ ಅಂಗಡಿಗಳಿಗೆ  ಓದುಗರು ತಾವು ಓದಿ ಮುಗಿಸಿದ ಪುಸ್ತಕಗಳನ್ನು ಮರು ಮಾರಾಟ ಮಾಡಿರುವ ಪುಸ್ತಕಗಳು ದೇಶದ ಇತರೆ ಪ್ರದೇಶಗಳಿಂದ ಇಲ್ಲಿಗೆ ತಲುಪುವ ಕಾರಣ ಬಹುತೇಕ ಮಳಿಗೆಗಳಲ್ಲಿ ಪುಸ್ತಕಗಳು ಅರ್ಧ ಬೆಲೆಗೆ ದೊರೆಯುತ್ತವೆ. ಇಲ್ಲಿನ ಪುಸ್ತಕ ಅಂಗಡಿಗಳ ವಿಶೇಷವೆಂದರೆ, ಒಬ್ಬ ಮಾರಾಟಗಾರ ಎಲ್ಲಾ ರೀತಿಯ ಪುಸ್ತಕಗಳನ್ನು ತನ್ನ ಮಳಿಗೆಯಲ್ಲಿ ಮಾರಾಟ ಮಾಡುವುದಿಲ್ಲ. ಒಂದೊಂದು ಅಂಗಡಿಯೂ ಒಂದೊಂದು ಬಗೆಯ ಪುಸ್ತಕ ಮಾರಾಟಕ್ಕೆ ಪ್ರಸಿದ್ಧವಾಗಿದೆ. ಬಂಗಾಳಿ ಭಾಷೆಯ  ಕಾದಂಬರಿ, ಕಥೆ, ಕಾವ್ಯ ಮತ್ತು ವೈಚಾರಿಕಕೆ ಮತ್ತು  ವಿಜ್ಞಾನ, ತಂತ್ರಜ್ಞಾನ ಹಾಗೂ  ಇತಿಹಾಸಕ್ಕೆ ಪ್ರತ್ಯೇಕ ಅಂಗಡಿಗಳು ಇರುವ ಹಾಗೆ ಇಂಗ್ಲೀಷ್ ಸಾಹಿತ್ಯದ ಷೇಕ್ಸ್ ಪಿಯರ್ ಕೃತಿಗಳಿಗೆ ಪ್ರತ್ಯೇಕ ಅಂಗಡಿಗಳಿವೆ. ಅದೇ ರೀತಿ ಬರ್ನಾಡ್ ಷಾ, ಎಲಿಯಟ್, ವಡ್ಸ್ ವರ್ತ್, ಬ್ರೆಕ್ಟ್ ಇವರುಗಳ ಕೃತಿಗಳಿಗೂ ಸಹ ಪ್ರತ್ಯೇಕ ಮಳಿಗೆಗಳಿವೆ.

ಕಾಲೇಜ್ ಸ್ಟೀಟ್ ಎಂದು ಕರೆಸಿಕೊಳ್ಳುವ ಪುಸ್ತಕ ಅಂಗಡಿಗಳ ರಸ್ತೆಗೆ ಎರಡು ಶತಮಾನಗಳ ಇತಿಹಾಸವಿದೆ. 1817 ಜನವರಿ ತಿಂಗಳಿನಲ್ಲಿ ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಕೊಲ್ಕತ್ತದ ಅಧಿಕಾರಿ ಡೆವಿಡ್ ಹೇರ್ ಎಂಬಾತನು ಸ್ಥಳೀಯ ಹಿಂದೂಗಳಿಗೆ ಇಂಗ್ಲೀಷ್ ಭಾಷೆಯ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಹಿಂದೂ ಕಾಲೇಜ್ ಅನ್ನು ಸ್ಥಾಪಿಸಿದನು. ನಂತರ ಸಂಸ್ಥೆ ಪ್ರೆಸಿಡೆನ್ಸಿ ಕಾಲೇಜ್ ಆಗಿ ಈಗ ವಿಶ್ವ ವಿದ್ಯಾನಿಲಯವಾಗಿ ಪರಿವರ್ತನೆಗೊಂಡಿದೆ.  ಕೊಲ್ಕತ್ತ ನಗರದಲ್ಲಿದ್ದ  ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರ ಮತ್ತು ಲೆಕ್ಕ ಪತ್ರಗಳನ್ನು ನೋಡಿಕೊಳ್ಳಲು ಸ್ಥಳಿಯವಾಗಿ ಇಂಗ್ಲೀಷ್ ಬಲ್ಲ ವ್ಯಕ್ತಿಗಳು ಇಲ್ಲದಿರುವ ಕಾರಣದಿಂದಾಗಿ  ಇಂಗ್ಲೇಂಡಿನಿಂದ ಗುಮಾಸ್ತರನ್ನು  ಭಾರತಕ್ಕೆ ಕರೆ ತರಲಾಗುತ್ತಿತ್ತು. ಅವರ ಆಡಳಿತ ಕಚೇರಿ ಮತ್ತು ವಸತಿ ನಿಲಯದ ಸಂಕೀರ್ಣವನ್ನು ಕಾಲದಲ್ಲಿ ರೈರ‍್ಸ್ ಬಿಲ್ಡಿಂಗ್ ಎಂದು ಕರೆಯಲಾಗುತ್ತಿತ್ತು. ಈಗ ಐತಿಹಾಸಿಕ ಭವನವು ಪಶ್ಚಿಮ ಬಂಗಾಳದ ವಿಧಾನಸಭೆಯ ಮುಖ್ಯ ಕಚೇರಿಯಾಗಿದ್ದು ಅದೇ ಹೆಸರಿನಿಂದ ಕರೆಯಲ್ಪಡುತ್ತಿದೆ. ಸ್ಥಳಿಯ ಭಾಷೆ, ಸಂಸ್ಕೃತಿ ಮತ್ತು ಕಾನೂನು ಅರಿತುಕೊಳ್ಳಲು  ಬ್ರಿಟೀಷರಿಗೆ ದುಭಾಷಿಗಳ ಕೊರತೆ ಕಾಡುತ್ತಿತ್ತು. ಕೊಲ್ಕತ್ತ ಮತ್ತು ಮದ್ರಾಸ್ ನಗರದಲ್ಲಿ ಇದ್ದ ಬೆರಳಿಕೆಯಷ್ಟು ಬ್ರಾಹ್ಮಣ ವಿದ್ಯಾವಂತರನ್ನು ಬ್ರಿಟೀಷರು ಆಶ್ರಯಿಸಿದ್ದರು. ದುಭಾಷಿಗಳ ಕೊರತೆಯನ್ನು ನೀಗಿಸಲು ಅವರು ಸ್ಥಳಿಯರಿಗೆ ಇಂಗ್ಲೀಷನಲ್ಲಿ ಶಿಕ್ಷಣ ನೀಡಲು ನಿರ್ಧರಿಸಿ ಇಪ್ಪತ್ತು ಮಂದಿ ವಿದ್ವಾಂಸರ ನೇತೃತ್ವದಲ್ಲಿ ಹಿಂದೂ ಕಾಲೇಜ್ ಹೆಸರಿನಲ್ಲಿ ಪ್ರಥಮ ಬಾರಿಗೆ ಆರಂಬಿಸಿದರು. ನಂತರ ಅಂದಿನ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯು ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ವೈದ್ಯಕೀಯ ಕಾಲೇಜು, ಪ್ರೆಸಿಡೆನ್ಸಿ ಕಾಲೇಜುಗಳುಗಳಿಗೆ ಹೊಂದಿಕೊಳ್ಳುವAತೆ ಕಾಲೇಜ್ ರಸ್ತೆಯನ್ನು ನಿರ್ಮಾಣ ಮಾಡಿದನು. ಅದಕ್ಕೂ ಮೊದಲು ಗ್ರೇಟ್ ಅರ್ಟಿರಿಯಲ್ ರೋಡ್ ಎಂದು ಕರೆಸಿಕೊಳ್ಳುತ್ತಿದ್ದ ರಸ್ತೆಯು ವಿಸ್ತೀರ್ಣಗೊಂಡ ನಂತರ ಕಾಲೇಜ್ ಸ್ಟಿçÃಟ್ ಎಂದು ಹೆಸರಾಯಿತು.

 ಕೊಲ್ಕತ್ತ ನಗರದ ಕಾಲೇಜ್ ಸ್ಟಿçÃಟ್ ನಲ್ಲಿ ಇರುವ ಕಾಫಿ ಹೌಸ್ ಗೂ ಸಹ ಭವ್ಯವಾದ ಇತಿಹಾಸವಿದೆ. ಇದು ೧೮೭೬ ರಿಂದ ಇಂದಿನವರೆಗೂ ಸಾಹಿತಿಗಳು ಮತ್ತು ಕಲಾವಿದರ ಅಡ್ಡೆಯಾಗಿದೆ. ಮೊದಲ ಮಹಡಿಯಲ್ಲಿ ಇರುವ ವಿಶಾಲವಾದ ಹಾಲ್ ನಲ್ಲಿ ಕಾಫಿಯ ಜೊತೆಗೆ ಹೊಸದಾಗಿ ಬಿಡುಗಡೆಯಾದ ಕೃತಿಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದರೆ, ಎರಡನೇ ಮಹಡಿಯಲ್ಲಿ ಕಿಟಕಿಯ ಬಳಿ ಕೂತು ಸಂಗೀತ ಮತ್ತು ಇತರೆ ವಿಷಯಗಳ ಕುರಿತು ಗಂಭೀರ ಚರ್ಚೆಯಲ್ಲಿ ತೊಡಗಿರುವ ಕಲಾವಿದರು, ಸಿನಿಮಾ ಮತ್ತು ನಾಟಕಗಳ ನಿರ್ದೇಶಕರನ್ನು ನಾವು ನೋಡಬಹುದಾಗಿದೆ. ಕಾರಣದಿಂದಾಗಿ  ಕಾಲೇಜ್ ರಸ್ತೆ ಮತ್ತು ಕಾಫಿ ಹೌಸ್ ಕಟ್ಟಡ ಕೊಲ್ಕತ್ತ ನಗರದ ಹೆಗ್ಗುರುತುಗಳಾಗಿವೆ. 1876 ರಲ್ಲಿ ಬ್ರಿಟೀಷರಿಂದ ಆಲ್ಬರ್ಟ್ ಹಾಲ್ ಎಂದು ಕರೆಸಿಕೊಳ್ಳುತ್ತಿದ್ದ ಕಟ್ಟಡದಲ್ಲಿ  1942 ರಲ್ಲಿ ಇಂಡಿಯನ್ ಕಾಫಿ ಬೋರ್ಡ್ ಸ್ಥಾಪನೆಯಾದ ನಂತರ ಕಾಫಿ ಹೌಸ್ ಎಂದು  ಬದಲಾಯಿತು. 1958 ರಲ್ಲಿ ಅಲ್ಪ ಕಾಲ ಸ್ಥಗಿತಗೊಂಡಿದ್ದ ಕಟ್ಟಡದಲ್ಲಿ ತಮ್ಮಗಳ ವಿಚಾರಮಂಥನಕ್ಕೆ ಅನುಕೂಲವಾಗಲೆಂದು ಪ್ರೆಸಿಡೆನ್ಸಿ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಮತ್ತು ಕೊಲ್ಕತ್ತ ವಿ.ವಿ.  ಪ್ರೊಫೆಸರ್ ಗಳು ಮತ್ತೇ ಕಾಫಿ ಹೌಸ್ ಚಾಲನೆಯಾಗುವಂತೆ ಒತ್ತು ನೀಡಿದರು. ಇದು ಖ್ಯಾತ ಸಿನಿಮಾ ನಿದೇಶಕರಾದ ಸತ್ಯಜಿತ್ ರಾಯ್, ಋತ್ವಿಕ್ ಘಟಕ್, ನಟಿ ಅರ್ಪಣಾ ಸೇನ್, ಗಾಯಕ ಮನ್ನಾಡೆ ಮುಂತಾದವರ ಚರ್ಚೆಯ ತಾಣವಾಗಿತ್ತು. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತçಜ್ಞರಾದ ಅಮಾರ್ಥ್ಯ ಸೇನ್ ಅವರು ತಮ್ಮ ಆತ್ಮಕಥೆಯಲ್ಲಿ ಕಾಫಿ ಹೌಸ್ ಕಟ್ಟಡವನ್ನು ಅತ್ಯಂತ ಪ್ರೀತಿಯಿಂದ ಸ್ಮರಿಸಿಕೊಂಡಿದ್ದಾರೆ.



ಅಮಾರ್ಥ್ಯ ಸೇನ್ ಅವರು 1950 ದಶಕದಲ್ಲಿ ಅಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಕಾಫಿ ಹೌಸ್ ಅಮಾರ್ಥ್ಯ ಸೇನ್ ಮತ್ತು ಅವರ ಸಹಪಾಠಿಗಳ ಪಾಲಿಗೆ ನೆಚ್ಚಿನ ಅಡ್ಡೆಯಾಗಿತ್ತು. ಇದೇ ಕಾಲೇಜಿನ ಪದವಿ ತರಗತಿಗೆ ಬರುತ್ತಿದ್ದ ನವನೀತಾದೇವಿ ಎಂಬ ಬಂಗಾಳಿ ಸುಂದರಿಗೆ ಕಾಫಿ ಹೌಸ್ ಕಿಟಕಿ ಬಳಿ ಕುಳಿತು ಕಣ್ಣು ಮಿಟುಕಿಸಿ ನಗುತ್ತಾ ಅವರನ್ನು ಪ್ರೇಮದ ಬಲೆಗೆ ಹಾಕಿಕೊಂಡಿದ್ದರು. 1958 ರಲ್ಲಿ ವಿವಾಹವಾದ ಅಮಾರ್ಥ್ಯಸೇನ್ ಮತ್ತು ನವನೀತಾ ದೇವಿ ಅವರು  ಸುಮಾರು ಹದಿನೆಂಟು ವರ್ಷಗಳ ಕಾಲ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ. ಕ್ಯಾಂಪಸ್ ನಲ್ಲಿ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನೂ ಸಹ ಪಡೆದಿದ್ದರು. ವೇಳೆಗೆ ಬಂಗಾಳಿ ಭಾಷೆಯ ಪ್ರಸಿದ್ಧ ಕವಿಯತ್ರಿ ಮತ್ತು ಕಾಂದAಬರಿಗಾರ್ತಿಯಾಗಿ ಹೊರಹೊಮ್ಮಿದ್ದ ನವನೀತಾದೇವಿಯವರು ಮಾತೃಭಾಷೆಯ ಮೇಲಿನ ಮೋಹವನ್ನು ತೊರೆಯಲಾಗದೆ ದಾಂಪತ್ಯ ಜೀವನಕ್ಕೆ ವಿದಾಯ ಹೇಳುವುದರ ಮೂಲಕ ಮರಳಿ ಕೊಲ್ಕತ್ತ ನಗರಕ್ಕೆ ಬಂದು ಸಾಹಿತ್ಯ ಕ್ಷೇತ್ರದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾಗಿದ್ದ ಅವರು 2019   ನವಂಬರ್ ತಿಂಗಳಿನಲ್ಲಿ ನಿಧನರಾದರು.

ಭಾರತದ ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲಿ ದೆಹಲಿಯ ಜವಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯ ಮತ್ತು ಈಗ ವಿಶ್ವ ವಿದ್ಯಾನಿಲಯವಾಗಿ ಪರಿವರ್ತನೆಗೊಂಡಿರುವ ಕೊಲ್ಕತ್ತದ  ಪ್ರೆಸಿಡೆನ್ಸಿ ಕಾಲೇಜು ಎರಡು ಶಿಕ್ಷಣ ಸಂಸ್ಥೆಗಳು ವಿವಿಧ ಕ್ಷೇತ್ರಗಳಿಗೆ ಶ್ರೇಷ್ಠ ತಜ್ಞರನ್ನು ನೀಡಿದ ಕೀರ್ತಿಗೆ ಪಾತ್ರವಾಗಿವೆ.  ಎರಡೂ ಸಂಸ್ಥೆಗಳು ಎಡಪಂಥೀಯ ಚಿಂತನೆಗಳ ತೊಟ್ಟಿಲಾಗಿರುವುದು ವಿಶೇಷ. 2011 ರಲ್ಲಿ ನಾನು ಭಾರತದ ನಕ್ಸಲ್ ಇತಿಹಾಸ ಕುರಿತು ಅಧ್ಯಯನ ಮಾಡುತ್ತಿದ್ದಾಗ ನನಗೆ ಕೊಲ್ಕತ್ತ ನಗರದಲ್ಲಿ  ನನ್ನದೇ ವಯಸ್ಸಿನ ಐದು ಮಂದಿ ಎಂ.ಎಸ್ಸಿ ಸ್ನಾತಕೋತ್ತರ ಪದವೀಧರರು ಇದೇ ಪ್ರೆಸಿಡೆನ್ಸಿ ಕಾಲೇಜಿನ ಪದವೀಧರರಾಗಿದ್ದರು. ಅವರೆಲ್ಲರೂ ನಕ್ಸಲ್ ಚಳುವಳಿಯ ಪಿತಾಮಹಾ ಎಂದು ಕರೆಯಬಹುದಾದ ಚಾರು ಮುಂಜುಂದಾರ್ ಅವರ ಶಿಷ್ಯರಾಗಿದ್ದರು. ನನ್ನನ್ನು ಪ್ರೆಸಿಡೆನ್ಸಿ ಕಾಲೇಜಿನ ಒಳಗಡೆ ಸುತ್ತಾಡಿಸಿ, ಅಲ್ಲಿನ ತರಗತಿಗಳ ಕೊಠಡಿಗಳು, ಗ್ರಂಥಾಲಯವನ್ನು ತೋರಿಸಿ ಪ್ರಾಂಶುಪಾಲರಿಗೆ ಪರಿಚಯಿಸಿದ್ದರು. ನಂತರ ಕಾಫಿಹೌಸ್ ಗೆ ಕರೆದೊಯ್ದು ಅಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ವಿವರಿಸಿದ್ದರು.

ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಓರ್ವ ಬಡ ರೈತನ ಮಗನಾಗಿ ಜನಿಸಿದ ನನಗೆ ಬಾಲ್ಯದಿಂದಲೂ  ದೈಹಿಕ ಹಸಿವಿಗಿಂತ ಹೆಚ್ಚಾಗಿ ಜ್ಞಾನದ ಹಸಿವು ತುಂಬಾ ಕಾಡಿತು. ಹಸಿವು ಇನ್ನೂ ಸಹ ನೀಗಿಲ್ಲ. ಕಳೆದ ನಲವತ್ತು ವರ್ಷಗಳಿಂದ  ಹೈದರಾಬಾದ್ ನಗರದ ಅಬೀದ್ ರಸ್ತೆ,   ಮುಂಬೈ ನಗರದ ವಿಕ್ಟೋರಿಯಾ ಟರ್ಮಿನಲ್ ಸ್ಟೇಷನ್ ನಿಂದ ಪೌಂಟೆನ್ ಸರ್ಕಲ್ ವರೆಗಿನ ದಾದಾಬಾಯಿ ನವರೋಜಿ ರಸ್ತೆ, ಹಾಗೂ ದೆಹಲಿಯ ಕನ್ನಾಟ್ ಪ್ಲೇಸ್ ಹಾಗೂ ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಕ್ರಾಸ್ನಲ್ಲಿರುವ ರಾವ್ ಎಂಬುವವರ ಹಳೆಯ ಅಂಗಡಿಯಲ್ಲಿ ಕೊಂಡು ತಂದ ಪುಸ್ತಕಗಳು ನನ್ನ ಪಾಲಿನ ಅಮೂಲ್ಯ ಆಸ್ತಿಯಾಗಿವೆ. 

ಇಂದಿಗೂ ಸಹ ಭಾರತದ ಈಶಾನ್ಯ ರಾಜ್ಯಗಳು ಅಥವಾ ಡಾರ್ಜಿಲಿಂಗ್ನತ್ತ  ಪ್ರವಾಸ ಹೋದಾಗ,  ರೈಲು ಪ್ರಯಾಣದಲ್ಲಿ ಒಂದು ದಿನ ಬಿಡುವು ತೆಗೆದುಕೊಂಡು ಕೊಲ್ಕತ್ತದ ಕಾಲೇಜ್ ರಸ್ತೆಗೆ ತೆರಳಿ ಒಂದೆರೆಡು ಕೃತಿಗಳನ್ನು ಕೊಂಡು, ಕಾಫಿ ಹೌಸ್ ನಲ್ಲಿ ಕಾಫಿ ಕುಡಿಯುತ್ತಾ ಅವುಗಳನ್ನು ತಿರುವು ಹಾಕಿದಾಗ ತಿರ್ಥಯಾತ್ರಿಯೊಬ್ಬನಿಗೆ ದೇವರ ದರ್ಶನವಾದಂತೆ ನನಗೆ ಜ್ಞಾನದ ದರ್ಶನವಾಗುತ್ತದೆ, ಬಡತನವನ್ನು ಮೀರಿ ನಿಲ್ಲುವ ಶಕ್ತಿಯನ್ನು ಪುಸ್ತಕಗಳು ನನಗೆ ನೀಡಿವೆ. ಹಾಗಾಗಿ ಪುಸ್ತಕಗಳೆಂದರೆ ನನ್ನ ಪಾಲಿಗೆ ಯಾರೂ ಕದಿಯಲಾಗದ ಜ್ಞಾನ ಮತ್ತು ಆಸ್ತಿಯಾಗಿವೆ.

( ಏಪ್ರಿಲ್ ತಿಂಗಳ ಹೊಸತು ಮಾತ್ರಿಕೆಯಲ್ಲಿ ಪ್ರಕಟವಾದ ಬಹುಸಂಸ್ಕೃತಿ ಅಂಕಣ ಬರಹ)

ಜಗದೀಶ್ ಕೊಪ್ಪ