ಬುಧವಾರ, ಜೂನ್ 10, 2026

ತಮಿಳು ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ಭಾರತೀರಾಜ ಈಗ ನೆನಪು ಮಾತ್ರ.

 


 


ಇಡೀ ಭಾರತೀಯ ಚಿತ್ರರಂಗವು ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದತ್ತ ತಿರುಗಿ ನೋಡುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಾದ ಕ್ರಾಂತಿಕಾರಕ ಬದಲಾವಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ತಮಿಳು ಚಿತ್ರರಂಗಕ್ಕೆ ವಿನೂತನ ಹಾಗೂ ವೈಚಾರಿಕತೆಯಿಂದ ಕೂಡಿದ ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಕೆ. ಬಾಲಚಂದರ್ ಹಾಗೂ ಗ್ರಾಮೀಣ ಪ್ರದೇಶದ ಕಥೆಗಳ ನಿರೂಪಣೆಯಲ್ಲಿ ಭಾರತೀರಾಜ ಹೊಸ ಇತಿಹಾಸವನ್ನು ಬರೆದರು. ಇವರು ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಇಂದು ತಮಿಳು ಚಿತ್ರರಂಗ ಸಾಗುತ್ತಿದೆ. ತೆಲುಗು ಚಿತ್ರರಂಗದ ಕೆ.ವಿಶ್ವನಾಥ್, ತಮಿಳು ಚಿತ್ರರಂಗದ ಬಾಲಚಂದರ್ ಮತ್ತು ಭಾರತೀರಾಜ ಮೂವರು ತ್ರಿಮೂರ್ತಿಗಳು ಒಂದು ರೀತಿಯಲ್ಲಿ ದಕ್ಷಿಣ ಭಾರತದ ಶ್ರೇಷ್ಠ ಸಾಹಿತಿಗಳ ಜೊತೆ ನಿಲ್ಲಬಲ್ಲ ಪ್ರತಿಬೆ ಹಾಗೂ ಗೌರವವನ್ನು ಪಡೆದಿದ್ದರು.

 ಕಳೆದ ಆರುತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀರಾಜರವರು  ಚೇತರಿಸಿಕೊಂಡು ಕಳೆದ ತಿಂಗಳು ಚೆನ್ನೈ ನಗರದ ತಮ್ಮ ನಿವಾಸಕ್ಕೆ  ಹಿಂತಿರುಗಿದ್ದರು. ಇಂದು  ಬೆಳಿಗ್ಗೆ ತಮ್ಮ 84 ನೇ ವಯಸ್ಸಿಗೆ ನಮ್ಮನ್ನು ಅಗಲಿದರು. ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ, ನಟರಾಗಿ ದಂತಕಥೆಯಂತೆ ಬದುಕಿದ ಭಾರತೀರಾಜ ನಮ್ಮ ಕನ್ನಡಿಗರಾದ ಪುಟ್ಟಣ್ಣ ಕಣಗಾಲ್ ರವರ ಶಿಷ್ಯರು. ಪುಟ್ಟಣ್ಣ ಅವರ ಗರಡಿಯಲ್ಲಿ ಪಳಗಿದ ಭಾರತೀರಾಜರವರು ತಮ್ಮದೇ ಆದ ಶಿಷ್ಯ ಪರಂಪರೆಯನ್ನು ಹುಟ್ಟು ಹಾಕುವುದರ ಮೂಲಕ ಇಡೀ ತಮಿಳು ಸಿನಿಮಾರಂಗವನ್ನು ಶ್ರೀಮಂತ ಗೊಳಿಸಿದ್ದಾರೆ.

 ಭಾರತೀರಾಜ ಅವರು  ಕೆ.ಭಾಗ್ಯರಾಜ್ ಅವರನ್ನು ಸೃಷ್ಟಿಸಿದರು. ಭಾಗ್ಯರಾಜ್ ಬಳಿ, ಚೇರನ್ ಹಾಗೂ ಚೇರನ್ ಬಳಿ ಆರ್ ಪ್ರತಿಭನ್ ಹೀಗೆ ಎಲ್ಲರೂ ನಟರಾಗಿ, ನಿರ್ದೇಶಕರಾಗಿ ಹೊಸ ದಾಖಲೆಯನ್ನು ನಿರ್ಮಿಸಿದರು. ಇವರೆಲ್ಲರ ಕಥೆ ಆಯ್ಕೆ ಮಾಡಿಕೊಳ್ಳುವ ವಿಧಾನ, ಹೇಳುವ ಶೈಲಿ ಹೀಗೆ ಪ್ರತಿಯೊಂದರಲ್ಲಿಯೂ ಪುಟ್ಟಣ್ಣ ಕಣಗಾಲ್ ಅವರು ಭಾರತೀರಾಜರ ಎದೆಯೊಳಗೆ ಬಿತ್ತಿದ್ದ ಬೀಜದ ಪ್ರಭಾವವಿರುವುದನ್ನು ನಾವು ಕಾಣಬಹುದು,

 ದಕ್ಷಿಣ ತಮಿಳುನಾಡಿನ ಮಧುರೈ ಸಮೀಪದ ಥೇಣಿ ಜಿಲ್ಲೆಯ ಹಳ್ಳಿಯೊಂದರಲ್ಲಿ 1941 ರಲ್ಲಿ ಜನಿಸಿದ ಭಾರತೀರಾಜ ಬಾಲ್ಯದಿಂದಲೂ ನಾಟಕಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಇವರು ಮತ್ತು ಇಳೆಯರಾಜ ಐವತ್ತೈದು ವರ್ಷಗಳ ಹಿಂದ ಏಕಕಾಲಕ್ಕೆ ಚಿತ್ರರಂಗಕ್ಕೆ ಬಂದವರು. ಭಾರತೀರಾಜ ಅವರ ಬಹುತೇಕ ಸಿನಿಮಾಗಳಿಗೆ ಇಳೆಯರಾಜ ಅವರ ಸಂಗೀತ ಇರುವುದು ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ಇಬ್ಬರ ನಡುವೆ ಬಿರುಕುಂಟಾಗಿ ದೂರವಾಗಿದ್ದರು. ಆದರೆ, ಒಂಬತ್ತು ವರ್ಷಗಳ ಹಿಂದೆ ಭಾರತೀರಾಜರ 75 ನೇ ವರ್ಷದ ಹುಟ್ಟುಹಬ್ಬದಲ್ಲಿ ಏಕವಚನದ ಗೆಳೆಯರಾಗಿದ್ದ ಇಬ್ಬರು ಗೆಳೆಯರು ಮತ್ತೇ  ಒಂದುಗೂಡಿದರು.

 ಭಾರತೀರಾಜ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆಯು ಇಪ್ಪತ್ತಕ್ಕೂ ಹೆಚ್ಚಿವೆ. ಆದರೆ, ಇವರ  ಪದಿನಾರು ವಯನಿದಿಲೆ,  ಕೀಳಕ್ಕೆ ಪೋಗುಂ ರೈಲ್, ಅಲೈಗಳ್ ಒಯುವುದಿಲ್ಲೈ, ಮಣ್ ವಾಸನೈ, ಮೊದಲ್ ಮಯಾದೈ, ಸಿಗಪ್ಪು ರೋಜಾಕ್ಕಳ್, ಪುದಿಯ ವಾರ್ಪುಗಳ್, ವೇದಂ ಪುತಿದು, ಒರು ಕೈದಿಯ ಡೈರಿ, ಕಡಲೂರ ಕವಿತೈಗಳ್, ಕರುತ್ತಮ್ಮ, ಕಾದಲ್ ಪೂಕ್ಕಳ್ ಹೀಗೆ ಹೆಸರಿಸುತ್ತಾ ಹೋಗಬಹುದು. ಚಿತ್ರ ನಿರ್ದೇಶನಕ್ಕಾಗಿ ಒಟ್ಟು ಆರುಬಾರಿ ರಾಷ್ಟ್ರಪ್ರಶಸ್ತಿ, ಆರು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಮತ್ತು  ನಾಲ್ಕು ಫಿಲಂಪೇರ್ ಪ್ರಶಸ್ತಿಯನ್ನು ಪಡೆದಿದ್ದ ಭಾರತೀರಾಜ ಗ್ರಾಮೀಣ ಕಥನಗಳನ್ನು ಹೇಳುವಲ್ಲಿ ಪ್ರಸಿದ್ಧರಾಗಿದ್ದರು. ಅವರ ಬಹುತೇಕ ಗ್ರಾಮೀಣ ಚಿತ್ರಗಳನ್ನು  ಅವರು ಮಂಡ್ಯ ಜಿಲ್ಲೆಯ  ಮಳವಳ್ಳಿಯಿಂದ ಕೊಳ್ಳೆಗಾಲಕ್ಕೆ ಹೋಗುವಾಗ ಸಿಗುವ ಬೆಳಕವಾಡಿ ಗ್ರಾಮದ ಬಳಿ ಇರುವ ಕಾವೇರಿ ನದಿ ತೀರ ಮತ್ತುಅಲ್ಲಿನ ಗದ್ದೆಗಳಲ್ಲಿ ಚಿತ್ರೀಕರಿಸಿರುವುದು ವಿಶೇಷ. ಶಿಂಷಾ ಬಳಿಯ ಕಾವೇರಿ ನದಿಯ ಸೇತುವೆ, ಮತ್ತು ನದಿ, ತಲಕಾಡಿನ ನದಿತೀರಾ ಇವೆಲ್ಲವುಗಳ ಕುರಿತು ಭಾರತೀರಾಜ ಭಾವನಾತ್ಮಕ ಸಂಬಂಧ ಹೊಂದಿದ್ದರು.

 ಇಂದು ತಮಿಳು ಚಿತ್ರನಿರ್ದೇಶಕರು ಇಪ್ಪತ್ತೈದರಿಂದ ಐವತ್ತು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಿರ್ದೇಶಕರು ಇದ್ದಾರೆ. ಆದರೆ ಬಾಲಚಂದರ್ ಮತ್ತು ಭಾರತೀರಾಜ ಅವರ ಸಂಭಾವನೆಯು ಅವರ ಸಿನಿಮಾ ಜೀವನದಲ್ಲಿ ಲಕ್ಷ ರೂಪಾಯಿ ದಾಟಿರಲಿಲ್ಲ. ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆ ಮಾತನಾಡುತ್ತಿದ್ದ ಕೆ.ಬಾಲಚಂದರ್, ಮರೋಚರಿತ್ರವನ್ನು ಹಿಂದಿಗೆ ಏಕ್ ದುಜೆ ಕೆ ಲಿಯೆ ಹೆಸರಿನಲ್ಲಿ ನಿರ್ದೇಶನ ಮಾಡಿದಾಗ, ಜೀವನದಲ್ಲಿ ಪ್ರಥಮ ಬಾರಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದೆ ಎಂದು ಹೇಳಿದ್ದರು. ಭಾರತೀರಾಜ ಅವರು ತಮ್ಮ ಕೊನೆಯ ದಿನಗಳ ಜೀವನ ನಿರ್ವಹಣೆಗೆ ಸನ್ ಟಿ.ವಿ.ಗೆ ತಮಿಳು ಧಾರವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದರು. ಹಾಗೂ  ಹತ್ತು ಲಕ್ಷ ರೂಪಾಯಿ ನಿಗದಿತ ಸಂಭಾವನೆಗೆ ವರ್ಷಕ್ಕೆ ಒಂದೆರೆಡು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದರು.


ಇಂದು ಭಾಲಚಂದರ್, ಭಾರತೀರಾಜ ನಮ್ಮೊಡನೆ ಇಲ್ಲ. ಆದರೆ ಅವರು ಸೃಷ್ಟಿಸಿದ ಸಿನಿಮಾ ಎಂಬ ದೃಶ್ಯಕಾವ್ಯಗಳು ಸದಾ ನಮ್ಮೊಂದಿಗೆ ಇರುತ್ತವೆ.  ನನ್ನ ಬೌದ್ಧಿಕ ಜ್ಞಾನದ ವಿಸ್ತರಣೆಯಲ್ಲಿ ಪ್ರಭಾವ ಬೀರಿದ ಈ ಇಬ್ಬರು ಮಹನೀಯರು ನನ್ನ ಪಾಲಿಗೆ ಗುರುಗಳಾಗಿದ್ದರು.

ಹೋಗಿ ಬನ್ನಿ ಗುರುವೇ, ನಿಮ್ಮ ಹೆಸರು ನನ್ನೊಳಗೆ ಸದಾ ಶಾಶ್ವತವಾಗಿ ಉಳಿದಿದೆ.

 

ಜಗದೀಶ್ ಕೊಪ್ಪ, ಮೈಸೂರು

 

ಸೋಮವಾರ, ಜೂನ್ 8, 2026

ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪೊಲೀಸ್ ಅಧಿಕಾರಿ ಬರೆದಿದ್ದ ಬಹಿರಂಗ ಪತ್ರ.

 


ಮುಂಬೈ ನಗರದ ಪೊಲೀಸ್ ಕಮೀಷನರ್ ಹಾಗೂ ಮಹಾರಾಷ್ಟ್ರದ ಪೊಲೀಸ್ ಮಹಾ ನಿದರ್ಶಕರಾಗಿ ಸೇವೆ ಸಲ್ಲಿಸಿದ ಹಾಗೂ ದೇಶದ ಹೆಸರಾಂತ ನಿಷ್ಟಾವಂತ  ಅಧಿಕಾರಿಯಾಗಿದ್ದ ಜುಲಿಯೊ ರಿಬೈರೋ ಅವರು ಪ್ರಧಾನ ಮಂತ್ರಿ ಮೋದಿಗೆ ಬರೆದ ಇಂಗ್ಲೀಷ್ ಪತ್ರವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂಗ್ಲೀಷ್ ಪತ್ರದ ಕನ್ನಡ ಅನುವಾದ ಹೀಗಿದೆ.

ಭಾರತ ದೇಶದ ಓರ್ವ ಹಿರಿಯ ನಾಗರಿಕನಾಗಿ ಇದನ್ನು ಪ್ರಧಾನಿ ಅವರಿಗೆ ತಿಳಿಸಬೇಕು ಎಂದು ನಾನು ಭಾವಿಸಿದೆ. ಕಾರಣದಿಂದ ಪತ್ರವನ್ನು ಬರೆದೆ.

ಶ್ರೀ ಮೋದಿಯವರೇ, ಕಳೆದ 60 ವರ್ಷಗಳಲ್ಲಿ ಭಾರತ ಏನು ಸಾಧಿಸಿದೆ ಎಂದು ವೇದಿಕೆ ಮೇಲೆ ನಿಂತು ನೀವು ಪದೇ ಪದೆ ಪ್ರಶ್ನೆ ಕೇಳುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶದ ಪ್ರಜೆಗಳು ಮೂರ್ಖರು ಎಂದು ನೀವು ಖಂಡಿತಾ ಭಾವಿಸಬೇಡಿ. ನೀವು 300 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತ ದೇಶದ ಪ್ರಧಾನಿಯಾಗಿದ್ದೀರಿ. ನಮ್ಮ ಜನ ಬ್ರಿಟೀಷರ ಆಳ್ವಿಕೆಯಲ್ಲಿ ಗುಲಾಮರಂತೆ ಬದುಕುತ್ತಿದ್ದರು. ಸ್ವಾತಂತ್ರ್ಯದ ನಂತರ ಭಾರತದಲ್ಲಿ 1947 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು ಮತ್ತು ಎಲ್ಲವೂ ಶೂನ್ಯದಿಂದ ಪ್ರಾರಂಭವಾಯಿತು.  ದೇಶದಲ್ಲಿ ಬಿಟ್ಟು ಹೋಗಿದ್ದ ಕಸವನ್ನು ಹೊರತು ಪಡಿಸಿದರೆ ಬೇರೇನೂ ಇರಲಿಲ್ಲ.  ಬ್ರಿಟಿಷರು ಭಾರತವನ್ನು ತೊರೆದ ನಂತರ ಭಾರತವು ಒಂದು ಸೂಜಿಯನ್ನು ಉತ್ಪಾದಿಸುವ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ದೇಶದ ಇಪ್ಪತ್ತು ಹಳ್ಳಿಗಳಿಗೆ ಮಾತ್ರ ವಿದ್ಯುತ್ಲಭ್ಯವಿತ್ತು. ದೇಶದಲ್ಲಿದ್ದ ಒಂದಿಷ್ಟು ದೊರೆಗಳಿಗೆ (ರಾಜರಿಗೆ) ಮಾತ್ರ ದೂರವಾಣಿ ಸೌಲಭ್ಯವಿತ್ತು. ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಕೇವಲ ಹತ್ತು ಸಣ್ಣ ಪ್ರಮಾಣದ ಅಣೆಕಟ್ಟುಗಳಿದ್ದವು. ಆಸ್ಪತ್ರೆಗಳಿರಲಿಲ್ಲ, ಶಿಕ್ಷಣ ಸಂಸ್ಥೆಗಳಿರಲಿಲ್ಲ, ಕೃಷಿ ಉತ್ಪಾದನೆಗೆ ಗೊಬ್ಬರವಿರಲಿಲ್ಲ, ಜನತೆಗೆ ತಿನ್ನುವ ಆಹಾರವಿರಲಿಲ್ಲ, ಕೃಷಿಗೆ ನೀರು ಇಲ್ಲ.  ಯಾವುದೇ ಉದ್ಯೋಗಗಳು ಇರಲಿಲ್ಲ. ಅಂದಿನ ಕಾಲಘಟ್ಟದಲ್ಲಿ ಭಾರತ ದೇಶದಾದ್ಯಂತ ಹಸಿವನ್ನು ಮಾತ್ರ ಕಾಣಬಹುದಾಗಿತ್ತು. ಅನೇಕ ಶಿಶು ಮರಣಗಳು ಸಂಭವಿಸಿದವು. 

ಗಡಿಯಲ್ಲಿ ಕೆಲವೇ ಕೆಲವು ಸೇನಾ ಸಿಬ್ಬಂದಿ. ಕೇವಲ ನಾಲ್ಕು ವಿಮಾನಗಳು, ಇಪ್ಪತ್ತು ಟ್ಯಾಂಕ್ಗಳು ಮತ್ತು ದೇಶದ ಎಲ್ಲಾ ನಾಲ್ಕುಕಡೆಗಳಲ್ಲಿ ಸಂಪೂರ್ಣವಾಗಿ ತೆರೆದ ಗಡಿಗಳು.  ಅತ್ಯಂತ ಕನಿಷ್ಠ ರಸ್ತೆಗಳು ಮತ್ತು ಸೇತುವೆಗಳು. ಖಾಲಿ ಖಜಾನೆ. ಪರಿಸ್ಥಿತಿಯಲ್ಲಿ ನೆಹರೂ ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು.

60 ವರ್ಷಗಳ ನಂತರ ಭಾರತ ಎಂದರೇನು? ನಿಮ್ಮ ಪ್ರಶ್ನೆಗೆ ಇತಿಹಾಸ ನಮ್ಮ ಕಣ್ಣ ಮುಂದಿದೆ.

ಭಾರತದ ಸೇನಾ ಬಲವು ವಿಶ್ವದ ಅತಿದೊಡ್ಡ ಸೈನ್ಯಗಳಲ್ಲಿ ಒಂದಾಗಿದೆ. ಸಾವಿರಾರು ಯುದ್ಧ ವಿಮಾನಗಳು, ಟ್ಯಾಂಕರ್ ಗಳು ನಮ್ಮಲ್ಲಿವೆ. ದೇಶಾದ್ಯಂತ  ಲಕ್ಷಾಂತರ ಕೈಗಾರಿಕಾ ಸಂಸ್ಥೆಗಳಿವೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿದೆ. ನೂರಾರು ವಿದ್ಯುತ್ ಶಕ್ತಿ ಕೇಂದ್ರಗಳು. ಲಕ್ಷ ಕಿಲೋಮೀಟರ್ಗಳಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇತುವೆಗಳು. ಹೊಸ ರೈಲ್ವೇ ಯೋಜನೆಗಳು, ಕ್ರೀಡಾಂಗಣಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ದೂರದರ್ಶನವನ್ನು ಹೊಂದಿರುವ ಹೆಚ್ಚಿನ ಭಾರತೀಯ ಮನೆಗಳು, ಎಲ್ಲಾ ದೇಶವಾಸಿಗಳಿಗೆ ದೂರವಾಣಿ.  ದೇಶದ ಒಳಗೆ ಮತ್ತು ಹೊರಗೆ ಕೆಲಸ ಮಾಡಲು ಎಲ್ಲಾ ಮೂಲಸೌಕರ್ಯಗಳು, ಬ್ಯಾಂಕ್ಗಳು, ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ನೀಡುವ ವೈದ್ಯಕೀಯ ಮತ್ತು ತಾಂತ್ರಿಕ ಜ್ಞಾನದ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿವೆ. ಪರಮಾಣು ಶಸ್ತ್ರಾಸ್ತ್ರಗಳು, ಉಪ-ನೌಕೆಗಳು, ಪರಮಾಣು ಕೇಂದ್ರಗಳು, ಇಸ್ರೋ ಸಂಸ್ಥೆಯನ್ನು ಒಳಗೊಂಡಂತೆ ನವರತ್ನ ಗಳು ಹೆಸರಿನಲ್ಲಿ ಸಾರ್ವಜನಿಕ ವಲಯದ ಘಟಕಗಳು ನಮ್ಮಲ್ಲಿವೆ. ಇವುಗಳು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅರವತ್ತು ವರ್ಷಗಳ ಅವಧಿಯಲ್ಲಿ ನೆಹರೂ, ಲಾಲ್ ಬಹುದ್ದೂರ್ ಶಾಸ್ತ್ರಿ, ಇಂದಿರಾ ಮತ್ತು ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಸೃಷ್ಟಿಯಾಗಿವೆ.

ಕೆಲವು ವರ್ಷಗಳ ಹಿಂದೆ ಭಾರತೀಯ ಸೇನೆಯು  ಪಾಕಿಸ್ತಾನವನ್ನು ಲಾಹೋರ್ನವರೆಗೂ ಅಟ್ಟಿಸಿಕೊಂಡು ಹೋಗಿತ್ತು. ಪಾಕಿಸ್ತಾನದ ಒಂದು ಲಕ್ಷ  ಸೈನಿಕರು ಮತ್ತು ಕಮಾಂಡರ್ಗಳು ಭಾರತೀಯ ಸೇನೆಗೆ ಶರಣಾಗಿದ್ದರು. ಭಾರತವು ಖನಿಜಗಳು ಮತ್ತು ಆಹಾರ ಪದಾರ್ಥಗಳನ್ನು  ವಿದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಿತು. ಶ್ರೀಮತಿ ಇಂದಿರಾ ಗಾಂಧಿ ಅವರ ಆಡಳಿತದ ಅವಧಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮಾಡುವುದರ ಜೊತೆಗೆ  ಕಂಪ್ಯೂಟರ್ಗಳನ್ನು ಭಾರತಕ್ಕೆ ಪರಿಚಯಿಸಲಾಯಿತು. ಮಾಹಿತಿ ತಂತ್ರ ಜ್ಞಾನದ ಬೆಳವಣಿಯಿಂದ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ನಮ್ಮ ಯುವಕ, ಯುವತಿಯರಿಗೆ ಹೇರಳವಾದ   ಉದ್ಯೋಗಾವಕಾಶಗಳು ದೊರೆತವು.

ನೀವು ಭಾರತದಲ್ಲಿ ಬಳಕೆಯಲ್ಲಿದ್ದ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಧಾನಿ ಆಗಿದ್ದೀರಿ.

ನೀವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತವು ವಿಶ್ವದ ಹತ್ತು ಬಲಿಷ್ಟ ಆರ್ಥಿಕತೆಯ ರಾಷ್ಟ್ರಗಳಲ್ಲಿ ಒಂದಾಗಿತ್ತು.  ಇಷ್ಟು ಮಾತ್ರವಲ್ಲದೆ ಜಿಎಸ್ಎಲ್ವಿ, ಮಂಗಳಯಾನ, ಮೆಟ್ರೋ ರೈಲು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು, ಪೃಥ್ವಿ, ಅಗ್ನಿ, ನಾಗ್, ಪರಮಾಣು ಜಲಾಂತರ್ಗಾಮಿ ನೌಕೆಗಳು. ಇವೆಲ್ಲವನ್ನೂ ನೀವು ಪ್ರಧಾನಿಯಾಗುವ ಮೊದಲೇ ಭಾರತದಲ್ಲಿ ಅಸ್ತಿತ್ವದಲ್ಲಿದ್ದವು. ಇಂತಹ ಭವ್ಯ ಇತಿಹಾಸ ನಮ್ಮ ಮುಂದೆ ಇರುವಾಗ  60 ವರ್ಷಗಳಲ್ಲಿ ಕಾಂಗ್ರೆಸ್ ಏನು ಸಾಧಿಸಿದೆ ಎಂದು ಪ್ರಶ್ನೆ ಕೇಳಬೇಡಿ ಹಾಗೂ ಜನರ ಬಳಿಗೆ ಬರಬೇಡಿ.

ಈಗಿನ ಭಾರತದ ಸ್ಥಿತಿಗತಿ ಹೇಗಿದೆ ಎಂದು ಇಡೀ ಜಗತ್ತಿಗೆ ಗೊತ್ತಿದೆ.

ಹೆಸರು ಬದಲಾಯಿಸುವುದು, ಪ್ರತಿಮೆ ಸ್ಥಾಪಿಸುವುದು ಮತ್ತು ನಿರಂತರವಾಗಿ ಗೋವಿನ ರಾಜಕಾರಣ ಮಾಡುವುದನ್ನು ಹೊರತುಪಡಿಸಿ ಹಾಗೂ ಹಿಂದೂಗಳು ಮತ್ತು ಮುಸ್ಲಿಮರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ದಲಿತರು, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ನಡುವೆ ಬಿರುಕು ಮೂಡಿಸುವುದನ್ನು  ಕಾಯಕ ಮಾಡಿಕೊಂಡ ನೀವು ಕಳೆದ ಒಂಬತ್ತು ವರ್ಷಗಳಲ್ಲಿ ಏನು ಸಾಧಿಸಿದ್ದೀರಿ ಎಂಬುದನ್ನು ದಯವಿಟ್ಟು ಜನರಿಗೆ ತಿಳಿಸಿ.

ನಿಮ್ಮ ವಿಫಲವಾದ ನೋಟು ಅಮಾನ್ಯೀಕರಣ, ಅತ್ಯಂತ ಕಳಪೆ ಜ್ಞಾನದಿಂದ ಜಾರಿಗೊಂಡ ಜಿಎಸ್ಟಿ ತೆರಿಗೆ ಪದ್ಧತಿಯಿಂದ ಸಾಮಾನ್ಯರು ನರಳುವಂತೆ ಮಾಡಿದಿರಿ. ಮತ್ತು ಜನರನ್ನು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ, ಅನಗತ್ಯ ಸಾವುಗಳಿಗೆ ಕಾರಣವಾದಿರಿ.    ಪ್ರದರ್ಶನವನ್ನೇ ಬಂಡವಾಳ ಮಾಡಿಕೊಂಡ ನಿಮ್ಮ  ಬಿಜೆಪಿಗರು ವಿದೇಶಿ ನೇರ ಬಂಡವಾಳವನ್ನು  ವಿರೋಧಿಸಿದರು ಮತ್ತು ಈಗ ಯಾವುದೇ ಸಂಕೋಚ ಅಥವಾ ನಾಚಿಕೆಯಿಲ್ಲದೆ ನಿಮ್ಮ ಸರ್ಕಾರ  ಬೆಂಬಲ ನೀಡುತ್ತಿದೆ.. ಬಿಜೆಪಿಯು ಭಾರತವನ್ನು ಅಂಬಾನಿಗೆ ಮಾರಾಟ ಮಾಡುತ್ತಿದೆ ಮತ್ತು ಭಾರತ ಸರ್ಕಾರದ ಒಡೆತನದ ಹಿಂದೂಸ್ಥಾನ್ ಏರೋನಾಟಿಕ್ ಸಂಸ್ಥೆಯ  ವ್ಯವಹಾರಿಕ ಒಪ್ಪಂಧಗಳನ್ನು ಅದಾನಿ ಗೆಮತ್ತು ರಫೇಲ್ ಡೀಲ್ ಅನ್ನು ಅನಿಲ್ ಅಂಬಾನಿಯ ಕೇವಲ ಎರಡು ತಿಂಗಳ ಹಳೆಯ ಕಂಪನಿಗೆ ಮಾರಾಟ ಮಾಡಲಾಗುತ್ತಿದೆ.

ನಿಮ್ಮ ನೇತೃತ್ವದ  ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರವನ್ನು ಹೆಚ್ಚು ತೆರಿಗೆ ಹಾಕುವ ಮೂಲಕ ಹೆ

ಚ್ಚಿಸಿತು, ಕಚ್ಚಾ ತೈಲದ ಬೆಲೆ ಅಗ್ಗವಾಗಿದ್ದರೂ ಸಹ ಬೆಲೆ ಮಾತ್ರ ಇಳಿಯುತ್ತಿಲ್ಲ. ಭಾರತದಲ್ಲಿ ಅಮಿತ್ ಶಾ ಅವರ ಪುತ್ರ, ಅಂಬಾನಿ, ಅದಾನಿ, ಬಾಬಾ ರಾಮದೇವ್  ಇಂತಹ  ಬಿಜೆಪಿ ಪ್ರಾಯೋಜಕರ  ವಿಕಾಸ ಮಾತ್ರ  ನಡೆಯುತ್ತಿದೆ.   ದಯಮಾಡಿ ನೀವು ಪ್ರತಿನಿಧಿಸುವ ವಾರಣಾಸಿಯ ಗಂಗಾ ನದಿಯಲ್ಲಿ ಸ್ನಾನ ಮಾಡಿ ಹೊರಬನ್ನಿ.  ಕಲ್ಮಶಗಳಿಂದ ತುಂಬಿರುವ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಸ್ವಚ್ಛವಾಗುತ್ತದೆ.

ವಿ.ಸೂ. – ಇದು ಕಾಂಗ್ರೇಸ್ ಪಕ್ಷದ ಪರವಾಗಿ ನೀಡಿದ ಹೇಳಿಕೆ ಅಲ್ಲ. ಪಕ್ಷಾತೀತವಾಗಿ ಬದುಕುತ್ತಿರುವ ಓರ್ವ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ನಾನು ಕಂಡ ಸತ್ಯಗಳನ್ನು ನಿಮ್ಮೆದುರು ತೆರೆದಿಟ್ಟಿದ್ದಿನಿ.

ಕನ್ನಡಕ್ಕೆ:ಜಗದೀಶ್ ಕೊಪ್ಪ.

ವಿ.ಸೂ. ಮೂರು ವರ್ಷದ ಹಿಂದೆ ಅನುವಾದಿಸಿದ್ದ ಈ ಲೇಖನ ಇಂದಿಗೂ ಕೂಡಾ. ಪ್ರಸ್ತುತ  ಎನಿಸಿದೆ.