ಶನಿವಾರ, ಜೂನ್ 27, 2026

ಒಂದು ತಿಂಗಳ ಅವಧಿಯಲ್ಲಿ ತಮಿಳು ಚಿತ್ರರಂಗದ ಪ್ರತಿಭಾವಂತ ಗುರು ಶಿಷ್ಯರ ನಿರ್ಗಮನ.



ಇಂದು ಬೆಳಿಗ್ಗೆ ತಮಿಳು ಚಿತ್ರರಂಗದಲ್ಲಿ ಶ್ರೇಷ್ಠ ಚಿತ್ರಕಥೆ ಮತ್ತು ಸಂಭಾಷಣೆ ಮೂಲಕ ಹಾಗೂ ನಟ ಮತ್ತು ನಿರ್ದೇಶಕರಾಗಿ ಪ್ರಸಿದ್ಧಿ ಪಡೆದಿದ್ದ ಭಾರತಿರಾಜ ಅವರ ಶಿಷ್ಯ ಕೆ.ಭಾಗ್ಯರಾಜ್ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ. ಕೇವಲ 73 ವರ್ಷ ವಯಸ್ಸಿನ ಭಾಗ್ಯರಾಜ್ ಇತ್ತೀಚೆಗೆ ಸಿನಿಮಾ ಸಮಾರಂಭಗಳಲ್ಲಿ ಮತ್ತು ಿತ್ತೀಚೆಗೆ ನಿಧನರಾದ ಭಾರತಿರಾಜರ ಶ್ರದ್ಧಾಂಜಲಿ ಸಭೆಯಲ್ಲಿ ಲವಲವಿಕೆಯಿಂದ ಪಾಲ್ಗೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು.
ಹಿರಿಯ ನಟಿ ರಾಧಿಕಾ ಅವರ ಶ್ರೇಷ್ಠ ಅಭಿನಯದ ಇತ್ತೀಚೆಗಿನ ಚಿತ್ರವಾದ ತಾಯ್ ಕಿಳವಿ ಚಿತ್ರದ ಸಮಾರಂಭದಲ್ಲಿ ನಟಿ ರಾಧಿಕಾ ಅವರು ಭಾರತಿರಾಜ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುವಾಗ, ಸಹಾಯಕ ನಿರ್ದೇಶಕರಾಗಿದ್ದ ಭಾಗ್ಯರಾಜ್ ಜೊತೆ ನಡುವೆ ನಡೆಯುತ್ತಿದ್ದ ಜಗಳವನ್ನು ನೆನಪಿಸಿಕೊಂಡರು. ಒಮ್ಮೆ ಭಾರತಿರಾಜರ ಬಳಿ ರಾಧಿಕಾ ದೂರು ಸಲ್ಲಿಸಿದಾಗ, ಭಾರತೀರಾಜ ಅವರು ‘’ ಮಗಳೇ, ನೀನು ಭಾಗ್ಯರಾಜನನ್ನು ಸಾಮಾನ್ಯ ಯುವಕ ಎಂದು ಕಡೆಗಣಿಸಬೇಡ. ನಟನೆಯ ಸಂದರ್ಭದಲ್ಲಿ ತಕ್ಷಣ ಹುಟ್ಟುವ ಸಂಭಾಷಣೆಗಳನ್ನು ಸೃಷ್ಟಿಸುವಲ್ಲಿ ಅವನು ಪ್ರತಿಭಾವಂತ. ಆತನ ಮಾತನ್ನು ಶ್ರದ್ಧೆಯಿಂದ ಕೇಳು’’ ಎಂದು ಬುದ್ದಿವಾದ ಹೇಳಿದ್ದರು.

ಇಂದಿಗೂ ಸಹ ತಮಿಳುಚಿತ್ರರಂಗದಲ್ಲಿ ಶ್ರೇಷ್ಟ ಚಿತ್ರಕಥೆ ಮತ್ತು ಸಂಭಾಷಣೆಗಾರ ಎಂದು ಅವರು ಹೆಸರಾಗಿದ್ದರು. ಕೆ.ಭಾಗ್ಯರಾಜ್ ನಟಿಸಿ, ನಿರ್ದೇಶನ ಮಾಡಿದ ಇಪ್ಪತ್ತೈದಕ್ಕೂ ಹೆಚ್ಚುಸಿನಿಮಾಗಳಲ್ಲಿ ಚಿತ್ರಕಥೆ ಅವರ ಸಿನಿಮಾಗಳ ಮೂಲಬಂಡವಾಳವಾಗಿತ್ತು. ಈರೋ್ಡ್ ಜಿಲ್ಲೆಯ ಹಾಗೂ ಕರ್ನಾಟಕ ಗಡಿಭಾಗದ ಗೋಪಿನಾಥಂ ಚೆಟ್ಟಿಪಾಳ್ಯಂ ಎಂಬ ಕಾಡುಗಳ್ಳ ವೀರಪ್ಪನ್ ಊರಿನ ಸಮೀಪದ ವೆಲ್ಲನ್ ಕೋವಿಲ್ ಎಂಬ ಸಾಮಾನ್ಯ ಗ್ರಾಮದಲ್ಲಿ 1953 ರಲ್ಲಿ ಜನಿಸಿದ ಕೆ.ಭಾಗ್ಯರಾಜ್, ಬಾಲ್ಯದಿಂದಲೂ ಸಿನಿಮಾ ಮತ್ತು ನಾಟಕಗಳ ಮೇಲೆ ಮೋಹ ಇದ್ದುದರಿಂದ 1970 ರ ದಶಕದಲ್ಲಿ ಚೆನ್ನೈನಗರಕ್ಕೆ ಆಗಮಿಸಿ, ಸಿನಿಮಾಗಳಿಗೆ ಸಂಭಾಷಣೆ ಬರೆಯುವುದರ ಮೂಲಕ ಬದುಕು ಕಟ್ಟಿಕೊಂಡರು. ಭಾರತೀರಾಜರವರು ಭಾಗ್ಯರಾಜ್ ಪಾಲಿಗೆ ಗುರುವಾಗಿ ತಮಿಳು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದರು.
1976 ರಲ್ಲಿ ಸುಧಾಕರ್ ನಾಯಕನಾಗಿ ಮತ್ತು ಸುಮತಿ ನಾಯಕಿಯಾಗಿ ನಟಿಸಿದ ಸುವರಿಲ್ಲಾದ ಚಿತ್ತಿರಂಗಳ್ ಎಂಬ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಒಂದು ಸಣ್ಣ ಪಾತ್ರದಲ್ಲಿಯೂ ಭಾಗ್ಯರಾಜ್ ನಟಿಸುವುದರ ಮೂಲಕ ತಮಿಳು ಚಿತ್ರರಂಗದ ಗಮನ ಸೆಳೆದರು. ಈ ಸಿನಿಮಾವು ತೆಲುಗು ಭಾಷೆಗೆ ರಿಮೇಕ್ ಆದಾಗ, ಸುಧಾಕರ್ ಅವರನ್ನೇ ನಾಯಕರನ್ನಾಗಿ ಮಾಡಿಕೊಂಡು ನಿರ್ದೇಶನ ಮಾಡಿದ್ದರು. ಮುಂದಾನೈ ಮುಡಿಚ್ಚು ಎಂಬ ಸಿನಿಮಾವು ಕೆ. ಭಾಗರಾಜ್ ಅವರನ್ನು ಜನಪ್ರಿಯತೆಯ ಶಿಖರಕ್ಕೇರಿಸಿತು. ಹಳ್ಳಿಮೇಷ್ಟ್ರು ಹೆಸರಿನಲ್ಲಿ ಕನ್ನಡದಲ್ಲಿಯೂ ರಿಮೇಕ್ ಆಗಿರುವ ಈ ಸಿನಿಮಾಕ್ಕೆ ನೀನೇ ನಾಯಕನಾಗಿ ನಟಿಸು ಎಂದು ಭಾರತಿರಾಜ ಸಲಹೆ ನೀಡಿದ್ದರು.

ಗ್ರಾಮೀಣ ಕಥೆಗಳನ್ನು ದೃಶ್ಯಕ್ಕೆ ಅಳವಡಿಸುವಲ್ಲಿ ಅವರ ಗುರು ಭಾರತಿರಾಜ ನಿಸ್ಸಿಮರಾದರೆ, ಸಾಮಾಜಿಕವಾಗಿ ಗಂಭೀರವಾದ ಹಾಗೂ ಕುಟುಂಬದ ಸಮಸ್ಯೆಗಳನ್ನು ಲಘು ಹಾಸ್ಯದ ದಾಟಿಯಲ್ಲಿ ಹೇಳುವುದರಲ್ಲಿ ಶಿಷ್ಯ ಭಾಗ್ಯರಾಜ್ ಹೆಸರಾದರು. ಇವರ ದಾವುಣಿ ಕನವುಗಳ್, ಚಿನ್ನವೀಡು, ಅಂದ ಏಳ್ ನಾಟಕ್ಕಳ್ , ತೊರಲ್ ನಿನ್ನು ಪೊಚ್ಚು , ಮೌನ ಗೀತಂಗಳ್ ಇಂತಹ ಸಿನಿಮಾಗಳು ತಮಿಳು ಚಿತ್ರರಂಗದಲ್ಲಿ ಹೊಸದಾಖಲೆ ಬರೆದವು. ಎಂ.ಜಿ.ಆರ್. ಶಿವಾಜಿಗಣೇಶನ್, ಕಮಲ್ ಹಾಸನ್ , ರಜನಿಕಾಂತ್ ರಂತಹ ಜನಪ್ರಿಯ ನಟರ ಮೇಲೆ ಅವಲಂಬಿತವಾಗಿ ತಮಿಳು ಸಿನಿಮಾರಂಗಕ್ಕೆ, ನಟರಿಗಿಂತ ಒಳ್ಳೆಯ ಚಿತ್ರಕಥೆ ಮತ್ತು ಸಂಭಾಷಣೆ ಮುಖ್ಯ ಎಂದು ಕೆ.ಭಾಗ್ಯರಾಜ್ ತೋರಿಸಿಕೊಟ್ಟರು.

ಭಾಗ್ಯರಾಜ್ ಪರಂಪರೆಯನ್ನು ನಟನೆ ಮತ್ತು ನಿರ್ದೇನದ ಮೂಲಕ ಚೇರನ್ ಮತ್ತು ಆರ್. ಪಾರ್ಥಿಭನ್ ಮುಂದಿನ ದಿನಗಳಲ್ಲಿ ತೋರಿಸಿಕೊಟ್ಟರು. ಭಾಗ್ಯರಾಜ್ ಅವರಿಂದ ಪ್ರಭಾವಿತರಾಗಿ ತಮಿಳುನಾಡಿನ ಅಂದಿನ ಯಶಸ್ವಿ ನಾಟಕಕಾರ ವಿಶು ಎಂಬುವರು ಸಹ ಅನೇಕ ನಾಟಕಗಳನ್ನು ಸಿನಿಮಾಗಳನ್ನಾಗಿ ಪರಿವರ್ತಿಸಿ, ನಟಿಸಿ, ನಿರ್ದೇಶನ ಮಾಡುವುದರ ಮೂಲಕ ಯಶಸ್ವಿಯಾಗಿದ್ದರು.

ಕೆ.ಭಾಗ್ಯರಾಜ್ ತಂದೆಯಾಗಿ ನಟಿಸಿದ ಹಾಗೂ 2011 ರಲ್ಲಿ ಬಿಡುಗಡೆಯಾದ ವಾಂಗೈ ಸೂಡ ವಾ ಎಂಬ ಸಿನಿಮಾವನ್ನು ನಾನು ಕಡೆಯ ಬಾರಿಗೆ ನೊಡಿದ್ದೆ. ವಿಮಲ್ ಎಂಬ ನಟ ನಾಯಕನಾಗಿ ನಟಿಸುರುವ ಈ ಸಿನಿಮಾವು ತನ್ನ ಶ್ರೇಷ್ಠ ಕಥೆಯಿಂದಾಗಿ ಎಂಟು ಅಂತರಾಷ್ಟ್ರೀಯ ಚಿತ್ರೊತ್ಸವಗಳ ಪ್ರಶಸ್ತಿಗಳ ಜೊತೆಗೆ ಶ್ರೇಷ್ಠ ತಮಿಳು ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ಮತ್ತು ನಾಲ್ಕು ಸ್ಥಳೀಯ ಫಿಲಂ ಪೇರ್ ಪ್ರಶಸ್ತಿಗಳನ್ನು ಪಡೆಯಿತು. ಕೆ.ಭಾಗ್ಯರಾಜ್ ಅವರಿಂದ ಪ್ರಭಾವಿತನಾಗಿದ್ದ ಕೆ.ಶರಕುನಮ್ ಎಂಬಾತ ನಿರ್ದೇಶಿಸಿದ ಈ ಸಿನಿಮಾದಲ್ಲಿ ಶಾಲಾಶಿಕ್ಷಕನಾಗಿ ದೂರದ ಹಳ್ಳಿಗಾಡಿನಲ್ಲಿ ಸರ್ಕಾರಿ ಹುದ್ದೆ ದೊರೆತಾಗ, ಹೋಗಲು ಹಿಂದೇಟು ಹಾಕುವ ಪುತ್ರನಿಗೆ ತಂದೆ ಬುದ್ದಿವಾದ ಹೇಳಿ ಕಳಿಸಿಕೊಡುತ್ತಾನೆ.

ಒಂದು ರೀತಿಯಲ್ಲಿ ಸ್ಮಶಾನದಂತಿರುವ ಬೆಂಗಾಡಿನಂತಹ ಆ ಊರಿನಲ್ಲಿ ಧಾಖಲೆಗಳಲ್ಲಿ ಮಾತ್ರ ಶಾಲೆ ಇರುತ್ತದೆ. ಕುಡಿಯುವ ನೀರಿಲ್ಲದೆ, ನಿಲ್ಲಲು ಹಸಿರು ಮರಗಳಿಲ್ಲದ ಅನಕ್ಷರಸ್ಥರ ಆ ಊರಿನಲ್ಲಿ ಬಹುತೇಕ ಮಂದಿ ಇಟ್ಟಿಗೆ ತಯಾರಿಸುವ ಕೂಲಿಯಾಳುಗಳಾಗಿ ಜೀವಿಸುವ ಕಾಯಕದಲ್ಲಿರುತ್ತಾರೆ. ಅವರ ಮಕ್ಕಳು ಶಾಲೆಗೆ ಹೋದರೆ, ದುಡಿಯುವ ಕೂಲಿ ಹಣ ಕಡಿಮೆಯಾಗುತ್ತೆ ಎಂಬ ಆತಂಕ. ಇಂತಹ ಊರಿನಲ್ಲಿ ಶಿಕ್ಷಕನಾಗಿ ಯಶಸ್ವಿಯಾಗುವ ಯುವಕನಿಗೆ ಸ್ಪೂರ್ತಿಯಾಗುವ ತಂದೆಯ ಪಾತ್ರದಲ್ಲಿ ಕೆ.ಭಾಗ್ಯರಾಜ್ ಅಭಿನಯಿಸಿದ್ದರು.

ಭಾಗ್ಯರಾಜ್, ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಇತರೆ ನಿರ್ದೇಶಕರ ಅಡಿಯಲ್ಲಿಯೂ ನಟಿಸಿದ್ದರು. ಭಾಗ್ಯ ಎಂಬ ವಾರಪತ್ರಿಕೆಯನ್ನು ಸಹ ಪ್ರಕಟಿಸುತ್ತಿದ್ದರು. ತಮಿಳು ನಟರ ಹುಚ್ಚು ಹವ್ಯಾಸಗಳಲ್ಲಿ ಒಂದಾದ ರಾಜಕೀಯ ರಂಗಕ್ಕೆ ಇಳಿದು ಮೊದಲಿಗೆ ಎ.ಐ.ಡಿ.ಎಂ.ಕೆ ನಂತರ ಡಿ.ಎಂ.ಕೆ. ಪಕ್ಷದಲ್ಲಿ ಗುರುತಿಸಿಕೊಂಡು, ಇದು ನನ್ನ ಕ್ಷೇತ್ರವಲ್ಲ ಎಂದು ಮನದಟ್ಟಾದ ನಂತರ ತಮಿಳು ಸಿನಿಮಾ ಚಾನಲ್ ಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ನೆಮ್ಮದಿಯ ಬದುಕು ಕಟ್ಟಿಕೊಂಡು, ಸಿನಿಮಾ ನಿರ್ಮಾಣದ ಬಗ್ಗೆ ಯುವ ತಲೆಮಾರಿಗೆ ಸ್ಪೂರ್ತಿಯಾಗಿದ್ದ ಭಾಗ್ಯರಾಜ್ ಅನಿರೀಕ್ಷಿತವಾಗಿ ನಮ್ಮನ್ನು ಅಗಲಿದ್ದಾರೆ
, ಎಂ.ಜಿ.ಆರ್ ಮತ್ತು ಶಿವಾಜಿಗಣೇಶನ್ ಅವರಂತಹ ಮಹಾನ್ ನಾಯಕರ ಎದುರು ಖಳನಾಯಕನಾಗಿ ನಟಿಸಿ ಜನಪ್ರಿಯರಾಗಿದ್ದ ನಂಬಿಯಾರ್ ಎಂಬ ಹಿರಿಯ ನಟರನ್ನು ಮನವೊಲಿಸಿ, ದಾವುಣಿ ಕನವು ಗಳ್ ಚಿತ್ರದಲ್ಲಿ ಹಾಸ್ಯನಟನನ್ನಾಗಿ ಇವರು ಪರಿವರ್ತಿಸಿದ್ದರು.

ತಮಿಳು ಸಿನಿಮಾ ರಂಗಕ್ಕೆ ಹೊಸ ಇತಿಹಾಸದ ಅಧ್ಯಾಯ ಬರೆದ ಗುರು ಶಿಷ್ಯರನ್ನು ಕಳೆದುಕೊಂಡ ತಮಿಳುನಾಡು ಸಾಂಸ್ಕೃತಿಕ ಲೋಕ ನಿಜಕ್ಕೂ ಬಡವಾಯಿತು.

ಶುಕ್ರವಾರ, ಜೂನ್ 26, 2026

ಪತುರಕರುತ ಮುತುನ ರತುನಗಳಿಗೆ ಒಂದಿಷ್ಟು ಪ್ರಶ್ನೆಗಳು.

 


ಅಯ್ಯಾ ಕಾಮಿಡಿ ಪೀಸುಗಳಿರಾ, ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರ ಪ್ರಿಯಾಂಕ ಖರ್ಗೆ ಇಬ್ಬರೂ ಆರ್.ಎಸ್.ಎಸ್. ಮೇಲೆ ಮುಗಿಬಿದ್ದ ಕಾರಣದಿಂದ ರಾಷ್ಟ್ರೀಯ ಬಿ.ಜೆ.ಪಿ. ಪದಾಧಿಕಾರಿಗಳು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.
ಖರ್ಗೆ ಕುಟುಂಬವು, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿ ಸರ್ಕಾರದಿಂದ ನೂರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ಅಕ್ರಮವಾಗಿ ಪಡೆದಿದೆ ಎಂಬ ಸುದ್ದಿಯನ್ನು ಅತ್ಯಂತ ಶ್ರದ್ಧೆಯಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದೀರಿ. ಅದು ಕರ್ತವ್ಯ ಕೂಡಾ ಹೌದು.
ಇದನ್ನು ಪ್ರಶ್ನಿಸಲು, ಕಾಂಗ್ರೆಸ್ ಪಕ್ಷದ ಖಾಲಿ ತಲೆಗಳಿಗೆ ಮಿದುಳು, ಬುದ್ದಿ ಎರಡೂ ಇಲ್ಲ. ಆದರೆ, ನಿಮ್ಮ ಬುದ್ದಿ ಎಲ್ಲಿ ಹೋಗಿತ್ತು? ಕತ್ತೆ ಕಾಯಲಿಕ್ಕೆ ಹೋಗಿತ್ತಾ? ಸುದ್ದಿಗೋಷ್ಟಿಯಲ್ಲಿ ಬೊಗಳಿದ್ದನ್ನು ಚಾಚೂ ತಪ್ಪದೆ ಬರೆಯುವುದು ಪತ್ರಿಕೋದ್ಯಮವೆ?
ಬಿ.ಎಸ್.ಯಡಿಯೂಪ್ಪ ಮತ್ತು ಬಸವರಾಜ ಬೊಮ್ಮಾಯಿ ಇವರ ಆಳ್ವಿಕೆಯ ಅವಧಿಯಲ್ಲಿ, ಬೆಂಗಳೂರು- ಮಾಗಡಿ ರಸ್ತೆಯ ಚನ್ನಸಂದ್ರದಲ್ಲಿ ಇರುವ ಆರ್.ಎಸ್.ಎಸ್. ವಿದ್ಯಾಸಂಸ್ಥೆಗೆ ಹೆಸರುಘಟ್ಟ ಬಳಿ ಹಾಗೂ ಧಾರವಾಡದ ಗರಗ ಬಳಿ ಇರುವ ಶಿಕ್ಷಣ ಸಂಸ್ಥೆಗೆ ಧಾರವಾಡ ಹೊರ ವಲಯದಲ್ಲಿ ನೂರಾರು ಕೋಟೆ ಬೆಲೆ ಬಾಳುವ ಭೂಮಿ ನೀಡಿದ್ದು ಅಕ್ರಮ ಅಲ್ಲವೆ? ಎಂದು ಸುದ್ದಿಗೋಷ್ಟಿಯಲ್ಲಿ ನೀವು ಪ್ರಶ್ನೆ ಕೇಳಬಹುದಿತ್ತಲ್ಲವೆ? ಅಥವಾ ವರದಿಯನ್ನು ಪ್ರಕಟಿಸುವಾಗ, ಬಿ.ಜೆ.ಪಿ. ಸರ್ಕಾರದ ಈ ಪ್ರಕರಣಗಳನ್ನು ಕೊನೆಯಲ್ಲಿ ಟಿಪ್ಪಣಿ ರೂಪದಲ್ಲಿ ಬರೆಯ ಬಹುದಿತ್ತಲ್ಲವೆ?
ಇದು ರಾಜ್ಯದ ಸುದ್ದಿಯಾಯಿತು. ರಾಷ್ಟ್ರ ಮಟ್ಟದಲ್ಲಿ ಡೋಂಗಿ ಸಾಧಕ ರಾಮದೇವ್ ಎಂಬ ಯೋಗ ಗುರುವಿಗೆ ಉತ್ತರಖಾಂಡ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಒಂದು ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಪತಾಂಜಲಿ ಎಂಬ ಗೊಬ್ಬರದ ಉತ್ಪಾದನೆಗೆ ಬಿ.ಜಿ ಪಿ.ಸರ್ಕಾರ ಇರುವ ರಾಜ್ಯಗಳು ನೀಡಿರುವುದು ತಪ್ಪಲ್ಲವೆ? ಇದು ಅಕ್ರಮವಲ್ಲವೆ? ಎಂಬ ಪ್ರಶ್ನೆಯನ್ನು ನೀವು ಕೇಳಿದ್ದರೆ, ಸುದ್ದಿಗೋಷ್ಟಿಯಲ್ಲಿದ್ದ ನಾಯಕರ ಚೆಡ್ಡಿಯೊಳಗೆ ಬೋಂಡಾ, ಸಾಂಬಾರ್ ಚೆಲ್ಲಾಡುತ್ತಿತ್ತು.
ನಿಮ್ಮ ನಿಷ್ದೆ ಮತ್ತು ದೇಶಭಕ್ತಿ ಎಲ್ಲವನ್ನೂ ಗಮನಿಸುತ್ತಿರುವ ನನಗೆ, ನಿಮಗಾಗಿ, ಹರೇ ರಾಮ, ಹರೇ ಕೃಷ್ಣ ಸಂಘದ ಮಾದರಿಯಲ್ಲಿ ಹರೇ ಮೋದಿ, ಹರೇ ಶಾ ಎಂಬ ಸಂಘವನ್ನು ಕಟ್ಟಿಕೊಡಬೇಕು ಎಂದು ಆಸೆಯಾಗುತ್ತಿದೆ.
ಭಜನೆಗೆ‌ ನಾನೇ ಹಾಡುಗಳನ್ನು ಬರೆದು, ಅವುಗಳಿಗೆ ಕಥಕ್ಕಳಿ, ಮೋಹಿನಿಯಾಟ್ಟಂ, ಭರತನಾಟ್ಯ, ಕೂಚುಪುಡಿ, ಕಥಕ್ ನೃತ್ಯವನ್ನು ಅಳವಡಿಸಿ, ನಿಮಗೆ ತರಬೇತು ನೀಡಿದರೆ, ಇಡೀ ಜಗತ್ತಿನಲ್ಲಿ ಭಾರತದ ಪತ್ರಿಕೋದ್ಯಮವನ್ನು ಮುಗಿಲೆತ್ತರಕ್ಕೆ ನೀವು ಮುಟ್ಟಿಸಬಲ್ಲಿರಿ.
ಹೌದಲ್ಲವೆ?

ಮಹಾತ್ಮನ ಭಾರತ ಮತ್ತು ಇಂದಿನ ಮೋದಿಯ ಭಾರತ

 


ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಇಬ್ಬರು ಉದ್ಯಮಿಗಳು ಮಹಾತ್ಮನ ಬೆಂಗಲಿಗರಾಗಿ, ಸೇವಕರಾಗಿ ಜೀವನ ಪೂರ್ತಿ ನಿಂತದ್ದನ್ನು ಗಮನಿಸಿದರೆ ಆಶ್ಚರ್ಯ ವಾಗುತ್ತದೆ.
ವ್ಯಾಪಾರ ಮತ್ತು ಉದ್ದಿಮೆಗಳ ಜೊತೆ ಲಾಭವನ್ನು ಗುರಿಯಾಗಿಸಿಕೊಂಡ ಈ ವ್ಯಕ್ತಿಗಳ ಮೇಲೆ ಪರಿಣಾಮ ಬೀರಿದ ಮಹಾತ್ಮನ ಪ್ರಭಾವ ಎಂತಹದ್ದು ಎಂಬುದನ್ನು ಕೊಲ್ಕತ್ತಾ ನಗರದ ಜಿ.ಡಿ. ಬಿರ್ಲಾ ಮತ್ತು ವಾರ್ಧಾ ಮೂಲದ ಜಮ್ನಾಲಾಲ್ ಬಜಾಜ್ ಅವರ ಸೇವೆಯನ್ನು ನಾವು ಗಮನಿಸಬೇಕು.
ಗುಡಿ ಕೈಗಾರಿಕೆಗಳ ತರಬೇತಿ ಕೇಂದ್ರ ಮತ್ತು ಗ್ರಾಮ ಭಾರತದ ಬಗ್ಗೆ ಕಾರ್ಯಕರ್ತರಿಗೆ ತಿಳುವಳಿಕೆ ನೀಡಲು ಸೇವಾ ಗ್ರಾಮ ಸ್ಥಾಪಿಸಲು ಮಧ್ಯಭಾರತದ ನಾಗಪುರದಿಂದ ಅರವತ್ತು ಕಿಲೊಮೇಟರ್ ದೂರದ ವಾರ್ಧಾನಗರವನ್ನು ಗಾಂಧೀಜಿಯವರು ಆಯ್ಕೆ ಮಾಡಿಕೊಂಡಾಗ, ಅವರು ಕೇಳಿದಷ್ಟು ಭೂಮಿ, ಹಣ, ಮತ್ತು ಮೂಲಭೂತ ಸೌಕರ್ಯವನ್ನು ಜಮ್ನಾಲಾಲ್ ಬಜಾಜ್ ಒದಗಿಸಿಕೊಟ್ಟರು.
ಆರಂಭದಲ್ಲಿ ವಾರ್ಧಾ ನಗರದಲ್ಲಿ ಗುಡಿಕೈಗಾರಿಕೆಗಳ ತರಬೇತಿ ಕೇಂದ್ರವು ಜೆ.ಸಿ.ಕುಮಾರಪ್ಪನವರ ನೇತೃತ್ವದಲ್ಲಿ ಆರಂಭವಾಯಿತು. ನಂತರ ವಾರ್ಧಾದಿಂದ ಎಂಟು ಕಿಲೊಮೀಟರ್ ದೂರದ ಹಳ್ಳಿಯಲ್ಲಿ ಸೇವಾಗ್ರಾಮ ಮತ್ತು ನಯಾ ತಾಲೀಮ್ ಹೆಸರಿನಲ್ಲಿ ನೂತನ ಶಿಕ್ಷಣ ಶಾಲೆ ಆರಂಭವಾದವು.
ಇಂದು ದೊಡ್ಡ ನಗರ ಹಾಗೂ ಜಿಲ್ಲಾ ಕೇಂದ್ರವಾಗಿ ಬೆಳೆದಿರುವ ವಾರ್ಧಾ ನಗರದಲ್ಲಿ ರಾಷ್ಟ್ರೀಯ ಹೈನುಗಾರಿಕೆ ಕೇಂದ್ರ,ಮತ್ತು ದೆಹಲಿಯ ಐ.ಐ.ಟಿ. ಸಂಸ್ಥೆಯ ಒಡೆತನದಲ್ಲಿ ಇರುವ ಸಣ್ಣ ಮತ್ತು ಗುಡಿ ಕೈಗಾರಿಕೆಯ ಕೇಂದ್ರದ ವಿಸ್ತೀರ್ಣ ಸುಮಾರು ಅರವತ್ತು ಎಕರೆಗೂ ಮಿಗಿಲಾಗಿದೆ. ಇವೆಲ್ಲವೂ ಗಾಂಧಿ ಸ್ಥಾಪುಸಿದ ಸಂಸ್ಥೆಗಳು.
ಅದೇ ರೀತಿ ಸೇವಾಗ್ರಾಮಕ್ಕೆ ಹೋಗುವಾಗ, ಮಹಾತ್ಮಗಾಂಧಿ ಆಸ್ಪತ್ರೆ, ಕಸ್ತೂರಬಾ ನರ್ಸಿಂಗ್ ಕಾಲೇಜ್ ಮತ್ತು ಹಾಸ್ಟಲ್ ಪ್ರದೇಶ ಮುವತ್ತು ಎಕರೆಗಿಂತ ದೊಡ್ಡದಾಗಿದೆ. ಸೇವಾಗ್ರಾಮ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ನಯಾ ತಾಲೀಮ್ ಶಿಕ್ಣಣ ಹತ್ತು ಎಕರೆ ಒಳಗೊಂಡಿದೆ. ಇವೆಲ್ಲವನ್ನು ಉಚಿತವಾಗಿ ನೀಡಿದ ಜಮ್ನಾಲಾಲ್ ಬಜಾಜ್ ಅವರ ನಿವಾಸದ ಬಳಿ ಹೋಗಿ ಅವರ ಭಾವಚಿತ್ರಕ್ಕೆ ತಲೆ ಬಾಗಿ ನಮಿಸಿ ಬಂದಿದ್ದೆ.( ಟೋಪಿ ಧರಿಸಿರುವವರು) ಇವರ ಕುರಿತು ನನ್ನ ಗಾಂಧಿಗಿರಿಯ ಫಸಲುಗಳು ಕೃತಿಯಲ್ಲಿ ಸವಿವರವಾಗಿ ಒಂದು ಅಧ್ಯಾಯವನ್ನು ಬರೆದಿದ್ದೀನಿ.

ಕೊಲ್ಕತ್ತಾ ಮೂಲದ ಜಿ.ಡಿ. ಬಿರ್ಲಾರವರು ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಅಂದಿನ ಕಾಂಗ್ರೇಸ್ ಸಮಿತಿಗೆ ಆರ್ಥಿಕವಾಗಿ ಆಧಾರ ಸ್ಥಂಭವಾಗಿದ್ದರು ಕಾಂಗ್ರೇಸ್ ಅಧಿವೇಶನದ ವೆಚ್ಚವನ್ನು ಭರಿಸುತ್ತಿದ್ದರು.. ಶಾಂತಿ ನಿಕೇತನದಲ್ಲಿ ವಿಶ್ವ ವಿದ್ಯಾನಿಲಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ರವೀಂದ್ರನಾಥ್ ಟ್ಯಾಗೂರ್, ಒಮ್ಮೆ ಆರ್ಥಿಕವಾಗಿ ಕಷ್ಟದಲ್ಲಿದ್ದರು.
ಗಾಂಧೀಜಿಯವರು ಟ್ಯಾಗೋರ್ ಗೆ ಐದು ಸಾವಿರ ನೆರವು ನೀಡಿ ಎಂದು ಹೇಳಿದಾಕ್ಷಣ, ಜಿ.ಡಿ. ಬಿರ್ಲಾರವರು, ಟ್ಯಾಗೂರ್ ಅವರಿಗೆ ನಲವತ್ತೈದು ಸಾವಿರ ಹಣವನ್ನು ನೀಡಿ, ಇದನ್ನು ಮಹಾತ್ಮರು ಸಾರ್ವಜನಿಕವಾಗಿ ಸಂಗ್ರಹಿಸಿ, ನನ್ನ ಮುಖಾಂತರ ನಿಮಗೆ ಕಳಿಸಿಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದರು.
ನೌಖಾಲಿ ಪ್ರದೇಶದ ಕೋಮು ಗಲಭೆ ನಿಯಂತ್ರಿಸಲು ಗಾಂಧೀಜಿಯವರು ನಾಲ್ಕು ತಿಂಗಳ ಕಾಲ ಅಲ್ಲಿ ಪಾದಯಾತ್ರೆ ಮಾಡಿದಾಗ, ಗಾಂಧಿ ಮತ್ತು ಸಂಗಡಿಗರಿಗೆ ಪ್ರತಿ ಹಳ್ಳಿಗಳಲ್ಲಿ ನೆಲೆಸಲು ತಾತ್ಕಾಲಿಕ ಗುಡಾರಗಳು, ಆಹಾರದ ವ್ಯವಸ್ಥೆ ಮತ್ತು ಗಾಂಧೀಜಿಯವರಿಗೆ ಕಿತ್ತಲೆ, ದ್ರಾಕ್ಷಿ, ಹಾಲು, ಮೊಸರು , ಸರಬರಾಜು ಮಾಡುವುದರ ಜೊತೆಗೆ ಸಾಮಾನುಗಳನ್ನು ಹಳ್ಳಿಯಿಂದ ಹಳ್ಳಿಗೆ ಸಾಗಿಸಲು ಸೇವಕರ ವ್ಯವಸ್ಥೆ ಮಾಡಿದ್ದರು.
ಗಲಭೆಯಲ್ಲಿ ನೊಂದವರ ಕುಟುಂಬಕ್ಕೆ ನೆರವಾಗುವ ದೃಷ್ಡಿಯಿಂದ ಗಾಂಧೀಜಿಯವರು ನಿಧಿಯೊಂದನ್ನು ಸ್ಥಾಪಿಸಿದಾಗ, ತಮ್ಮ ಉದ್ದಿಮೆಗಳ ಎಲ್ಲಾ ನೌಕರರಿಂದ ಹಣವನ್ನು ಸಂಗ್ರಹಿಸಿ, ಎರಡೂವರೆ ಸಾವಿರ ಹಣವನ್ನು ನಿಧಿಗೆ ನೀಡಿದ್ದರು.
ಕೊಲ್ಕತ್ತ ನಗರದಲ್ಲಿ ತಾವು ವಾಸಿಸುತ್ತಿದ್ದ ಅರಮನೆಯಂತಹ ಬೃಹತ್ ಬಂಗಲೆಯನ್ನು ಸ್ವಾತಂತ್ರ್ಯಾನಂತರ, ಕೇಂದ್ರ ಸರ್ಕಾರಕ್ಕೆ ದಾನ ಮಾಡಿ, ಈ ಮನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮ್ಯೂಸಿಯಂ ಮಾಡಲು ನೆರವಾದರು.
ಇಂತಹ ಮಹನೀಯರು ಗಾಂಧಿ ಮಹಾತ್ಮನ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ಸೇವೆ ಕೂಡ ದೇಶ ಸೇವೆ ಎಂದು ನಂಬಿಕೊಂಡಿದ್ದರು.

ಈಗ ಮೋದಿ ಮಹಾತ್ನನ ಪ್ರಭಾವದಿಂದ ಅದಾನಿ ಮತ್ತು ಅಂಬಾನಿ ಇಬ್ಬರೂ ದೇಶದ ತೈಲ ಉದ್ದಿಮೆ, ಕಲ್ಲಿದ್ದಲು ಘಟಕಗಳು ಒಳಗೊಂಡಂತೆ, ಇಡೀ ಭಾರತದ ಬಂದರು, ವಿಮಾನ ನಿಲ್ದಣಗಳನ್ನು ತಮ್ಮ ವಶಕ್ಕೆ ಪಡೆದು ದೇಶ ಸೇವೆ ಮಾಡುತ್ತಿದ್ದಾರೆ. ಈಗ ಸಧ್ಯಕ್ಕೆ ಉಳಿದಿರುವುದು ದೆಹಲಿಯ ರಾಷ್ಟ್ರಪತಿ ಭವನ ಮತ್ತು ಹಳೆಯ ಪಾರ್ಲಿಮೆಂಟ್ ಭವನಗಳು ಮಾತ್ರ.
ಇವೆರೆಡೂ ಕಟ್ಟಡಗಳು ಮೋದಿ‌ ಮಹಾತ್ಮನ ಕೃಪೆಯಿಂದ ಅದಾನಿ ಅಥವಾ ಅಂಭಾನಿ ಒಡೆತನದಲ್ಲಿ ಪಂಚತಾರಾ ಹೋಟೆಲ್ ಗಳಾಗುವ ದಿನಗಳು ದೂರವಿಲ್ಲ.
ಕೊನೆಯ ಚಿತ್ರ, ಈಗ ಮ್ಯೂಸಿಯಂ ಆಗಿರುವ ಬಿರ್ಲಾ ನಿವಾಸ.

ಗುರುವಾರ, ಜೂನ್ 11, 2026

ಅಭಿವೃದ್ಧಿಯ ಅರ್ಥಶಾಸ್ತ್ರಜ್ಞ ಜೀನ್ ಡೇಕ್ ಅವರ ಭಾರತದ ಅಸಮಾನತೆಯ ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಗೌರವ.

 


ಬೆಲ್ಜಿಯಂ ಮೂಲದ ಜೀನ್ ಡೇಕ್ ಅವರು, ಅಭಿವೃದ್ಧಿಯ ಅಥವಾ ಕಲ್ಯಾಣ ಅರ್ಥಶಾಸ್ತ್ರದಲ್ಲಿ( Welfare Econamics ) ಇಂಗ್ಲೆಂಡಿನಲ್ಲಿ ಡಾಕ್ಟರೇಟ್ ಪದವಿ ಪಡೆದು, ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ಚಿಂತನೆಗಳಿಂದ ಪ್ರಭಾವಿತರಾದವರು. ಹಾಗಾಗಿ 1977 ರಲ್ಲಿ ಭಾರತಕ್ಕೆ ಆಗಮಿಸಿದ ಇವರು, 2002 ರಲ್ಲಿ ಭಾರತೀಯ ಪೌರತ್ವ ಸ್ವೀಕರಿಸಿ, ಇಂದಿನ ಜಾರ್ಖಂಡ್ ರಾಜ್ಯದ ರಾಂಚಿ ನಗರದಲ್ಲಿ ವಾಸವಾಗಿದ್ದಾರೆ.
ಇಂಗ್ಲೇಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಭಾರತದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿರುವ ಜೀನ್ ಡ್ರೇಜ್ ಇದೀಗ, ರಾಂಚಿ. ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತೀಯರ ಬಡತನಕ್ಕೆ ಮೂಲ ಕಾರಣವಾದ, ಇಲ್ಲಿನ ಶ್ರೇಣಿಕೃತ ಸಮಾಜ, ಜಾತಿ ಮತ್ತು ಲಿಂಗ ಅಸಮಾನತೆ. ಆಹಾರ ಪಡಿತರ ವ್ಯವಸ್ಥೆಯ ದೋಷಗಳು ಮತ್ತು ಗ್ರಾಮೀಣ ಉದ್ಯೋಗ ಯೋಜನೆಗಳ ವೈಫಲ್ಯಗಳ ಕುರಿತು ನಿರಂತರವಾಗಿ ಅಧ್ಯಯನ ಮಾಡುತ್ತಾ, ದೇಶದ ಪ್ರಸಿದ್ಧ ಇಂಗ್ಲೀಷ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ.
ಪ್ರಧಾನಿಯಾಗಿದ್ದ ಡಾ. ಮನ್ ಮಹೋನ್ ಸಿಂಗ್ ಅವರ ಆಳ್ವಿಕೆಯಲ್ಲಿ ರಾಷ್ಟ್ರೀಯ ಸಲಹೆಗಾರರ ಸಮಿತಿಯ ಸದಸ್ಯರಾಗಿದ್ದ ಜೀನ್ ಡ್ರೇಜ್, ಮನೆರೇಗಾ ಎಂದು ಕರೆಯುತ್ತಿದ್ದ ಗ್ರಾಮೀಣ ಉದ್ಯೋಗ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ತಮ್ಮ ನಿಷ್ಟುರ ಚಿಂತನೆಗಳಿಂದ ಕಳೆದ ಹನ್ನೆರಡು ವರ್ಷಗಳಿಂದ ಇಂದಿನ ಕೇಂದ್ರ ಸರ್ಕಾರದ ಪಾಲಿಗೆ ದೇಶ ದ್ರೋಹಿಯಾಗಿದ್ದಾರೆ. ಅವರಿಗೆ ಭಾರತೀಯ ಪೌರತ್ವ ಇಲ್ಲದಿದ್ದರೆ, ಈ ವೇಳೆಗೆ ಅವರನ್ನು ದೇಶದಿಂದ ಹೊರದಬ್ಬಲಾಗುತ್ತಿತ್ತು.
ಓರ್ವ ಅರ್ಥಶಾಸ್ತ್ರದ ವಿದ್ಯಾರ್ಥಿ ಮತ್ತು ಸಂಶೋಧಕನಾಗಿ ನಾನು ಕಂಡುಕೊಂಡ ಸತ್ಯವೇಂದರೆ, ಕಣ್ಣ ಮುಂದಿನ ವಾಸ್ತವ ಸಂಗತಿಗಳನ್ನು ಮರೆಮಾಚಲು ಯಾವುದೇ ಅರ್ಥಶಾಸ್ತ್ರಜ್ಞನಿಗೆ ಮರೆ ಮಾಚಲು ಸಾಧ್ಯವಾಗುವುದಿಲ್ಲ. ಹೂಸನ್ನು ಪರಿಮಳ ಎಂದು ಬಣ್ಣಿಸುವುದು ಅರ್ಥಶಾಸ್ತ್ರಜ್ಞರ ಕರ್ತವ್ಯವಲ್ಲ. ಇಂತಹ ಕೆಲಸಗಳಿಗೆ ಅವರ ಮನಸಾಕ್ಷಿ ಒಪ್ಪುವುದಿಲ್ಲ.

ಈ ಕಾರಣದಿಂದ, ದೇಶದ ಅನೇಕ ಜನಪರ ಚಳುವಳಿಗಳ ಜೊತೆ ಗುರುತಿಸಿಕೊಂಡಿರುವ ಡ್ರೇಜ್, ಆಹಾರ ಪಡಿತರ ವ್ಯವಸ್ಥೆಗೆ ಆಧಾರ್ ಕಡ್ಡಾಯ ಮಾಡಿದಾಗ ಪ್ರಭಲವಾಗಿ ವಿರೋಧಿಸಿದರು. ಹಲವಾರು ಬಾರಿ ಬಂಧನಕ್ಕೆ ಒಳಗಾಗಿದ್ದರು. ಸದಾ ಸೈಕಲ್ ನಲ್ಲಿ ಓಡಾಡುವ ಇವರು ದೂರದ ಕಾಡಂಚಿನ ಊರಿಗೆ ಮೊಟಾರ್ ಬೈಕ್ ನಲ್ಲಿ ಹೋಗುವಾಗ ರಾಂಚಿ ಪೊಲೀಸರು ಇವರ ಬೈಕ್ ಅನ್ನು ವಶಪಡಿಸಿಕೊಂಡಿದ್ದರು. ಬಿಡುಗಡೆಗೆ ಐನೂರು ರೂಪಾಯಿ ಲಂಚ ಕೇಳಿದಾಗ, ಜೀನ್ ಡ್ರೇಜ್ ಈ ಸಂಗತಿಯನ್ನ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು.
ಇವರು ಅಂತರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞ ಎಂದು ಅರಿತುಕೊಂಡಿರುವ ಜಾರ್ಖಂಡ್ ರಾಜ್ಯದ ಪೊಲೀಸರು ಈಗ ಡ್ರೇಜ್ ಹತ್ತಿರ ಸುಳಿಯುವುದಿಲ್ಲ. ಕಳೆದವಾರ ಜೂನ್ 5 ರಂದು ಪ್ರಾರಿಸ್ ಸ್ಕೂಲ್ ಆಫ್ ಎಕನಾಮಿಸ್ಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಾಗತಿಕ ಅಸಮಾನತೆಯ ಕುರಿತ ಸಮಾವೇಶದಲ್ಲಿ ಇವರಿಗೆ ಬಡತನ ಮತ್ತು ಅಸಮಾನತೆಯ ಕುರಿತು ನಡೆಸಿದ ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಯಾವುದೇ ಹಣದ ಪ್ರಶಸ್ತಿಯಾಗಿರದೆ, ಓರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞನನ್ನು ಗೌರವಿಸುವ ಸಂಪ್ರದಾಯವಾಗಿದೆ. ಆದರೆ, ನಮ್ಮ ಗೊದಿ ಮಾಧ್ಯಮಗಳಿಗೆ ಇದು ಸುದ್ದಿಯಾಗಲಿಲ್ಲ.

ಜೀನ್ ಡ್ರೇಜ್ ಅವರು ಅಮಾರ್ತ್ಯಸೇನ್ ಜೊತೆಗೂಡಿ ರಚಿಸಿರುವ ಇಂಡಿಯಾ; ಡೆವಲಪ್ ಮೆಂಟ್ ಕೃತಿಯಲ್ಲದೆ, ಸ್ವತಃ ಅಧ್ಯಯನ ಮಾಡಿರುವ ಸೆನ್ಸ್ ಅಂಡ್ ಸಾಲಿಡಾರಿಟಿ ಹಾಗೂ ಹ್ಯಾನ್ ಅನ್ ಸರ್ಟೈನ್ ಗ್ಲೋರಿ; ಇಂಡಿಯಾ ಅಟ್ ಕನ್ಟ್ರಾಡ್ರಿಕ್ಷನ್ ಈ ಮೂರು ಕೃತಿಗಳು ನಾವು ನೋಡುತ್ತಿರುವ ಭಾರತ ಮತ್ತು ಗ್ರಹಿಸಬೇಕಾದ ಭಾರತದ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತವೆ.

ಸಧ್ಯದಲ್ಲೇ ಜೀನ್ ಡ್ರೇಜ್ ಅವರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸಿಗಲಿದೆ ಎಂಬ ವಿಶ್ವಾಸ ನನಗಿದೆ.
ಜಗದೀಶ್ ಕೊಪ್ಪ. ಮೈಸೂರು.

ಬುಧವಾರ, ಜೂನ್ 10, 2026

ತಮಿಳು ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ಭಾರತೀರಾಜ ಈಗ ನೆನಪು ಮಾತ್ರ.

 


 


ಇಡೀ ಭಾರತೀಯ ಚಿತ್ರರಂಗವು ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದತ್ತ ತಿರುಗಿ ನೋಡುತ್ತಿದೆ. ಅದರಲ್ಲೂ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಾದ ಕ್ರಾಂತಿಕಾರಕ ಬದಲಾವಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ತಮಿಳು ಚಿತ್ರರಂಗಕ್ಕೆ ವಿನೂತನ ಹಾಗೂ ವೈಚಾರಿಕತೆಯಿಂದ ಕೂಡಿದ ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಕೆ. ಬಾಲಚಂದರ್ ಹಾಗೂ ಗ್ರಾಮೀಣ ಪ್ರದೇಶದ ಕಥೆಗಳ ನಿರೂಪಣೆಯಲ್ಲಿ ಭಾರತೀರಾಜ ಹೊಸ ಇತಿಹಾಸವನ್ನು ಬರೆದರು. ಇವರು ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಇಂದು ತಮಿಳು ಚಿತ್ರರಂಗ ಸಾಗುತ್ತಿದೆ. ತೆಲುಗು ಚಿತ್ರರಂಗದ ಕೆ.ವಿಶ್ವನಾಥ್, ತಮಿಳು ಚಿತ್ರರಂಗದ ಬಾಲಚಂದರ್ ಮತ್ತು ಭಾರತೀರಾಜ ಮೂವರು ತ್ರಿಮೂರ್ತಿಗಳು ಒಂದು ರೀತಿಯಲ್ಲಿ ದಕ್ಷಿಣ ಭಾರತದ ಶ್ರೇಷ್ಠ ಸಾಹಿತಿಗಳ ಜೊತೆ ನಿಲ್ಲಬಲ್ಲ ಪ್ರತಿಬೆ ಹಾಗೂ ಗೌರವವನ್ನು ಪಡೆದಿದ್ದರು.

 ಕಳೆದ ಆರುತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀರಾಜರವರು  ಚೇತರಿಸಿಕೊಂಡು ಕಳೆದ ತಿಂಗಳು ಚೆನ್ನೈ ನಗರದ ತಮ್ಮ ನಿವಾಸಕ್ಕೆ  ಹಿಂತಿರುಗಿದ್ದರು. ಇಂದು  ಬೆಳಿಗ್ಗೆ ತಮ್ಮ 84 ನೇ ವಯಸ್ಸಿಗೆ ನಮ್ಮನ್ನು ಅಗಲಿದರು. ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ, ನಟರಾಗಿ ದಂತಕಥೆಯಂತೆ ಬದುಕಿದ ಭಾರತೀರಾಜ ನಮ್ಮ ಕನ್ನಡಿಗರಾದ ಪುಟ್ಟಣ್ಣ ಕಣಗಾಲ್ ರವರ ಶಿಷ್ಯರು. ಪುಟ್ಟಣ್ಣ ಅವರ ಗರಡಿಯಲ್ಲಿ ಪಳಗಿದ ಭಾರತೀರಾಜರವರು ತಮ್ಮದೇ ಆದ ಶಿಷ್ಯ ಪರಂಪರೆಯನ್ನು ಹುಟ್ಟು ಹಾಕುವುದರ ಮೂಲಕ ಇಡೀ ತಮಿಳು ಸಿನಿಮಾರಂಗವನ್ನು ಶ್ರೀಮಂತ ಗೊಳಿಸಿದ್ದಾರೆ.

 ಭಾರತೀರಾಜ ಅವರು  ಕೆ.ಭಾಗ್ಯರಾಜ್ ಅವರನ್ನು ಸೃಷ್ಟಿಸಿದರು. ಭಾಗ್ಯರಾಜ್ ಬಳಿ, ಚೇರನ್ ಹಾಗೂ ಚೇರನ್ ಬಳಿ ಆರ್ ಪ್ರತಿಭನ್ ಹೀಗೆ ಎಲ್ಲರೂ ನಟರಾಗಿ, ನಿರ್ದೇಶಕರಾಗಿ ಹೊಸ ದಾಖಲೆಯನ್ನು ನಿರ್ಮಿಸಿದರು. ಇವರೆಲ್ಲರ ಕಥೆ ಆಯ್ಕೆ ಮಾಡಿಕೊಳ್ಳುವ ವಿಧಾನ, ಹೇಳುವ ಶೈಲಿ ಹೀಗೆ ಪ್ರತಿಯೊಂದರಲ್ಲಿಯೂ ಪುಟ್ಟಣ್ಣ ಕಣಗಾಲ್ ಅವರು ಭಾರತೀರಾಜರ ಎದೆಯೊಳಗೆ ಬಿತ್ತಿದ್ದ ಬೀಜದ ಪ್ರಭಾವವಿರುವುದನ್ನು ನಾವು ಕಾಣಬಹುದು,

 ದಕ್ಷಿಣ ತಮಿಳುನಾಡಿನ ಮಧುರೈ ಸಮೀಪದ ಥೇಣಿ ಜಿಲ್ಲೆಯ ಹಳ್ಳಿಯೊಂದರಲ್ಲಿ 1941 ರಲ್ಲಿ ಜನಿಸಿದ ಭಾರತೀರಾಜ ಬಾಲ್ಯದಿಂದಲೂ ನಾಟಕಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಇವರು ಮತ್ತು ಇಳೆಯರಾಜ ಐವತ್ತೈದು ವರ್ಷಗಳ ಹಿಂದ ಏಕಕಾಲಕ್ಕೆ ಚಿತ್ರರಂಗಕ್ಕೆ ಬಂದವರು. ಭಾರತೀರಾಜ ಅವರ ಬಹುತೇಕ ಸಿನಿಮಾಗಳಿಗೆ ಇಳೆಯರಾಜ ಅವರ ಸಂಗೀತ ಇರುವುದು ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ಇಬ್ಬರ ನಡುವೆ ಬಿರುಕುಂಟಾಗಿ ದೂರವಾಗಿದ್ದರು. ಆದರೆ, ಒಂಬತ್ತು ವರ್ಷಗಳ ಹಿಂದೆ ಭಾರತೀರಾಜರ 75 ನೇ ವರ್ಷದ ಹುಟ್ಟುಹಬ್ಬದಲ್ಲಿ ಏಕವಚನದ ಗೆಳೆಯರಾಗಿದ್ದ ಇಬ್ಬರು ಗೆಳೆಯರು ಮತ್ತೇ  ಒಂದುಗೂಡಿದರು.

 ಭಾರತೀರಾಜ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆಯು ಇಪ್ಪತ್ತಕ್ಕೂ ಹೆಚ್ಚಿವೆ. ಆದರೆ, ಇವರ  ಪದಿನಾರು ವಯನಿದಿಲೆ,  ಕೀಳಕ್ಕೆ ಪೋಗುಂ ರೈಲ್, ಅಲೈಗಳ್ ಒಯುವುದಿಲ್ಲೈ, ಮಣ್ ವಾಸನೈ, ಮೊದಲ್ ಮಯಾದೈ, ಸಿಗಪ್ಪು ರೋಜಾಕ್ಕಳ್, ಪುದಿಯ ವಾರ್ಪುಗಳ್, ವೇದಂ ಪುತಿದು, ಒರು ಕೈದಿಯ ಡೈರಿ, ಕಡಲೂರ ಕವಿತೈಗಳ್, ಕರುತ್ತಮ್ಮ, ಕಾದಲ್ ಪೂಕ್ಕಳ್ ಹೀಗೆ ಹೆಸರಿಸುತ್ತಾ ಹೋಗಬಹುದು. ಚಿತ್ರ ನಿರ್ದೇಶನಕ್ಕಾಗಿ ಒಟ್ಟು ಆರುಬಾರಿ ರಾಷ್ಟ್ರಪ್ರಶಸ್ತಿ, ಆರು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಮತ್ತು  ನಾಲ್ಕು ಫಿಲಂಪೇರ್ ಪ್ರಶಸ್ತಿಯನ್ನು ಪಡೆದಿದ್ದ ಭಾರತೀರಾಜ ಗ್ರಾಮೀಣ ಕಥನಗಳನ್ನು ಹೇಳುವಲ್ಲಿ ಪ್ರಸಿದ್ಧರಾಗಿದ್ದರು. ಅವರ ಬಹುತೇಕ ಗ್ರಾಮೀಣ ಚಿತ್ರಗಳನ್ನು  ಅವರು ಮಂಡ್ಯ ಜಿಲ್ಲೆಯ  ಮಳವಳ್ಳಿಯಿಂದ ಕೊಳ್ಳೆಗಾಲಕ್ಕೆ ಹೋಗುವಾಗ ಸಿಗುವ ಬೆಳಕವಾಡಿ ಗ್ರಾಮದ ಬಳಿ ಇರುವ ಕಾವೇರಿ ನದಿ ತೀರ ಮತ್ತುಅಲ್ಲಿನ ಗದ್ದೆಗಳಲ್ಲಿ ಚಿತ್ರೀಕರಿಸಿರುವುದು ವಿಶೇಷ. ಶಿಂಷಾ ಬಳಿಯ ಕಾವೇರಿ ನದಿಯ ಸೇತುವೆ, ಮತ್ತು ನದಿ, ತಲಕಾಡಿನ ನದಿತೀರಾ ಇವೆಲ್ಲವುಗಳ ಕುರಿತು ಭಾರತೀರಾಜ ಭಾವನಾತ್ಮಕ ಸಂಬಂಧ ಹೊಂದಿದ್ದರು.

 ಇಂದು ತಮಿಳು ಚಿತ್ರನಿರ್ದೇಶಕರು ಇಪ್ಪತ್ತೈದರಿಂದ ಐವತ್ತು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಿರ್ದೇಶಕರು ಇದ್ದಾರೆ. ಆದರೆ ಬಾಲಚಂದರ್ ಮತ್ತು ಭಾರತೀರಾಜ ಅವರ ಸಂಭಾವನೆಯು ಅವರ ಸಿನಿಮಾ ಜೀವನದಲ್ಲಿ ಲಕ್ಷ ರೂಪಾಯಿ ದಾಟಿರಲಿಲ್ಲ. ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆ ಮಾತನಾಡುತ್ತಿದ್ದ ಕೆ.ಬಾಲಚಂದರ್, ಮರೋಚರಿತ್ರವನ್ನು ಹಿಂದಿಗೆ ಏಕ್ ದುಜೆ ಕೆ ಲಿಯೆ ಹೆಸರಿನಲ್ಲಿ ನಿರ್ದೇಶನ ಮಾಡಿದಾಗ, ಜೀವನದಲ್ಲಿ ಪ್ರಥಮ ಬಾರಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದೆ ಎಂದು ಹೇಳಿದ್ದರು. ಭಾರತೀರಾಜ ಅವರು ತಮ್ಮ ಕೊನೆಯ ದಿನಗಳ ಜೀವನ ನಿರ್ವಹಣೆಗೆ ಸನ್ ಟಿ.ವಿ.ಗೆ ತಮಿಳು ಧಾರವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದರು. ಹಾಗೂ  ಹತ್ತು ಲಕ್ಷ ರೂಪಾಯಿ ನಿಗದಿತ ಸಂಭಾವನೆಗೆ ವರ್ಷಕ್ಕೆ ಒಂದೆರೆಡು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದರು.


ಇಂದು ಭಾಲಚಂದರ್, ಭಾರತೀರಾಜ ನಮ್ಮೊಡನೆ ಇಲ್ಲ. ಆದರೆ ಅವರು ಸೃಷ್ಟಿಸಿದ ಸಿನಿಮಾ ಎಂಬ ದೃಶ್ಯಕಾವ್ಯಗಳು ಸದಾ ನಮ್ಮೊಂದಿಗೆ ಇರುತ್ತವೆ.  ನನ್ನ ಬೌದ್ಧಿಕ ಜ್ಞಾನದ ವಿಸ್ತರಣೆಯಲ್ಲಿ ಪ್ರಭಾವ ಬೀರಿದ ಈ ಇಬ್ಬರು ಮಹನೀಯರು ನನ್ನ ಪಾಲಿಗೆ ಗುರುಗಳಾಗಿದ್ದರು.

ಹೋಗಿ ಬನ್ನಿ ಗುರುವೇ, ನಿಮ್ಮ ಹೆಸರು ನನ್ನೊಳಗೆ ಸದಾ ಶಾಶ್ವತವಾಗಿ ಉಳಿದಿದೆ.

 

ಜಗದೀಶ್ ಕೊಪ್ಪ, ಮೈಸೂರು

 

ಸೋಮವಾರ, ಜೂನ್ 8, 2026

ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪೊಲೀಸ್ ಅಧಿಕಾರಿ ಬರೆದಿದ್ದ ಬಹಿರಂಗ ಪತ್ರ.

 


ಮುಂಬೈ ನಗರದ ಪೊಲೀಸ್ ಕಮೀಷನರ್ ಹಾಗೂ ಮಹಾರಾಷ್ಟ್ರದ ಪೊಲೀಸ್ ಮಹಾ ನಿದರ್ಶಕರಾಗಿ ಸೇವೆ ಸಲ್ಲಿಸಿದ ಹಾಗೂ ದೇಶದ ಹೆಸರಾಂತ ನಿಷ್ಟಾವಂತ  ಅಧಿಕಾರಿಯಾಗಿದ್ದ ಜುಲಿಯೊ ರಿಬೈರೋ ಅವರು ಪ್ರಧಾನ ಮಂತ್ರಿ ಮೋದಿಗೆ ಬರೆದ ಇಂಗ್ಲೀಷ್ ಪತ್ರವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂಗ್ಲೀಷ್ ಪತ್ರದ ಕನ್ನಡ ಅನುವಾದ ಹೀಗಿದೆ.

ಭಾರತ ದೇಶದ ಓರ್ವ ಹಿರಿಯ ನಾಗರಿಕನಾಗಿ ಇದನ್ನು ಪ್ರಧಾನಿ ಅವರಿಗೆ ತಿಳಿಸಬೇಕು ಎಂದು ನಾನು ಭಾವಿಸಿದೆ. ಕಾರಣದಿಂದ ಪತ್ರವನ್ನು ಬರೆದೆ.

ಶ್ರೀ ಮೋದಿಯವರೇ, ಕಳೆದ 60 ವರ್ಷಗಳಲ್ಲಿ ಭಾರತ ಏನು ಸಾಧಿಸಿದೆ ಎಂದು ವೇದಿಕೆ ಮೇಲೆ ನಿಂತು ನೀವು ಪದೇ ಪದೆ ಪ್ರಶ್ನೆ ಕೇಳುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶದ ಪ್ರಜೆಗಳು ಮೂರ್ಖರು ಎಂದು ನೀವು ಖಂಡಿತಾ ಭಾವಿಸಬೇಡಿ. ನೀವು 300 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತ ದೇಶದ ಪ್ರಧಾನಿಯಾಗಿದ್ದೀರಿ. ನಮ್ಮ ಜನ ಬ್ರಿಟೀಷರ ಆಳ್ವಿಕೆಯಲ್ಲಿ ಗುಲಾಮರಂತೆ ಬದುಕುತ್ತಿದ್ದರು. ಸ್ವಾತಂತ್ರ್ಯದ ನಂತರ ಭಾರತದಲ್ಲಿ 1947 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು ಮತ್ತು ಎಲ್ಲವೂ ಶೂನ್ಯದಿಂದ ಪ್ರಾರಂಭವಾಯಿತು.  ದೇಶದಲ್ಲಿ ಬಿಟ್ಟು ಹೋಗಿದ್ದ ಕಸವನ್ನು ಹೊರತು ಪಡಿಸಿದರೆ ಬೇರೇನೂ ಇರಲಿಲ್ಲ.  ಬ್ರಿಟಿಷರು ಭಾರತವನ್ನು ತೊರೆದ ನಂತರ ಭಾರತವು ಒಂದು ಸೂಜಿಯನ್ನು ಉತ್ಪಾದಿಸುವ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ದೇಶದ ಇಪ್ಪತ್ತು ಹಳ್ಳಿಗಳಿಗೆ ಮಾತ್ರ ವಿದ್ಯುತ್ಲಭ್ಯವಿತ್ತು. ದೇಶದಲ್ಲಿದ್ದ ಒಂದಿಷ್ಟು ದೊರೆಗಳಿಗೆ (ರಾಜರಿಗೆ) ಮಾತ್ರ ದೂರವಾಣಿ ಸೌಲಭ್ಯವಿತ್ತು. ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಕೇವಲ ಹತ್ತು ಸಣ್ಣ ಪ್ರಮಾಣದ ಅಣೆಕಟ್ಟುಗಳಿದ್ದವು. ಆಸ್ಪತ್ರೆಗಳಿರಲಿಲ್ಲ, ಶಿಕ್ಷಣ ಸಂಸ್ಥೆಗಳಿರಲಿಲ್ಲ, ಕೃಷಿ ಉತ್ಪಾದನೆಗೆ ಗೊಬ್ಬರವಿರಲಿಲ್ಲ, ಜನತೆಗೆ ತಿನ್ನುವ ಆಹಾರವಿರಲಿಲ್ಲ, ಕೃಷಿಗೆ ನೀರು ಇಲ್ಲ.  ಯಾವುದೇ ಉದ್ಯೋಗಗಳು ಇರಲಿಲ್ಲ. ಅಂದಿನ ಕಾಲಘಟ್ಟದಲ್ಲಿ ಭಾರತ ದೇಶದಾದ್ಯಂತ ಹಸಿವನ್ನು ಮಾತ್ರ ಕಾಣಬಹುದಾಗಿತ್ತು. ಅನೇಕ ಶಿಶು ಮರಣಗಳು ಸಂಭವಿಸಿದವು. 

ಗಡಿಯಲ್ಲಿ ಕೆಲವೇ ಕೆಲವು ಸೇನಾ ಸಿಬ್ಬಂದಿ. ಕೇವಲ ನಾಲ್ಕು ವಿಮಾನಗಳು, ಇಪ್ಪತ್ತು ಟ್ಯಾಂಕ್ಗಳು ಮತ್ತು ದೇಶದ ಎಲ್ಲಾ ನಾಲ್ಕುಕಡೆಗಳಲ್ಲಿ ಸಂಪೂರ್ಣವಾಗಿ ತೆರೆದ ಗಡಿಗಳು.  ಅತ್ಯಂತ ಕನಿಷ್ಠ ರಸ್ತೆಗಳು ಮತ್ತು ಸೇತುವೆಗಳು. ಖಾಲಿ ಖಜಾನೆ. ಪರಿಸ್ಥಿತಿಯಲ್ಲಿ ನೆಹರೂ ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು.

60 ವರ್ಷಗಳ ನಂತರ ಭಾರತ ಎಂದರೇನು? ನಿಮ್ಮ ಪ್ರಶ್ನೆಗೆ ಇತಿಹಾಸ ನಮ್ಮ ಕಣ್ಣ ಮುಂದಿದೆ.

ಭಾರತದ ಸೇನಾ ಬಲವು ವಿಶ್ವದ ಅತಿದೊಡ್ಡ ಸೈನ್ಯಗಳಲ್ಲಿ ಒಂದಾಗಿದೆ. ಸಾವಿರಾರು ಯುದ್ಧ ವಿಮಾನಗಳು, ಟ್ಯಾಂಕರ್ ಗಳು ನಮ್ಮಲ್ಲಿವೆ. ದೇಶಾದ್ಯಂತ  ಲಕ್ಷಾಂತರ ಕೈಗಾರಿಕಾ ಸಂಸ್ಥೆಗಳಿವೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿದೆ. ನೂರಾರು ವಿದ್ಯುತ್ ಶಕ್ತಿ ಕೇಂದ್ರಗಳು. ಲಕ್ಷ ಕಿಲೋಮೀಟರ್ಗಳಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇತುವೆಗಳು. ಹೊಸ ರೈಲ್ವೇ ಯೋಜನೆಗಳು, ಕ್ರೀಡಾಂಗಣಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ದೂರದರ್ಶನವನ್ನು ಹೊಂದಿರುವ ಹೆಚ್ಚಿನ ಭಾರತೀಯ ಮನೆಗಳು, ಎಲ್ಲಾ ದೇಶವಾಸಿಗಳಿಗೆ ದೂರವಾಣಿ.  ದೇಶದ ಒಳಗೆ ಮತ್ತು ಹೊರಗೆ ಕೆಲಸ ಮಾಡಲು ಎಲ್ಲಾ ಮೂಲಸೌಕರ್ಯಗಳು, ಬ್ಯಾಂಕ್ಗಳು, ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ನೀಡುವ ವೈದ್ಯಕೀಯ ಮತ್ತು ತಾಂತ್ರಿಕ ಜ್ಞಾನದ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿವೆ. ಪರಮಾಣು ಶಸ್ತ್ರಾಸ್ತ್ರಗಳು, ಉಪ-ನೌಕೆಗಳು, ಪರಮಾಣು ಕೇಂದ್ರಗಳು, ಇಸ್ರೋ ಸಂಸ್ಥೆಯನ್ನು ಒಳಗೊಂಡಂತೆ ನವರತ್ನ ಗಳು ಹೆಸರಿನಲ್ಲಿ ಸಾರ್ವಜನಿಕ ವಲಯದ ಘಟಕಗಳು ನಮ್ಮಲ್ಲಿವೆ. ಇವುಗಳು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅರವತ್ತು ವರ್ಷಗಳ ಅವಧಿಯಲ್ಲಿ ನೆಹರೂ, ಲಾಲ್ ಬಹುದ್ದೂರ್ ಶಾಸ್ತ್ರಿ, ಇಂದಿರಾ ಮತ್ತು ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಸೃಷ್ಟಿಯಾಗಿವೆ.

ಕೆಲವು ವರ್ಷಗಳ ಹಿಂದೆ ಭಾರತೀಯ ಸೇನೆಯು  ಪಾಕಿಸ್ತಾನವನ್ನು ಲಾಹೋರ್ನವರೆಗೂ ಅಟ್ಟಿಸಿಕೊಂಡು ಹೋಗಿತ್ತು. ಪಾಕಿಸ್ತಾನದ ಒಂದು ಲಕ್ಷ  ಸೈನಿಕರು ಮತ್ತು ಕಮಾಂಡರ್ಗಳು ಭಾರತೀಯ ಸೇನೆಗೆ ಶರಣಾಗಿದ್ದರು. ಭಾರತವು ಖನಿಜಗಳು ಮತ್ತು ಆಹಾರ ಪದಾರ್ಥಗಳನ್ನು  ವಿದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಿತು. ಶ್ರೀಮತಿ ಇಂದಿರಾ ಗಾಂಧಿ ಅವರ ಆಡಳಿತದ ಅವಧಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮಾಡುವುದರ ಜೊತೆಗೆ  ಕಂಪ್ಯೂಟರ್ಗಳನ್ನು ಭಾರತಕ್ಕೆ ಪರಿಚಯಿಸಲಾಯಿತು. ಮಾಹಿತಿ ತಂತ್ರ ಜ್ಞಾನದ ಬೆಳವಣಿಯಿಂದ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ನಮ್ಮ ಯುವಕ, ಯುವತಿಯರಿಗೆ ಹೇರಳವಾದ   ಉದ್ಯೋಗಾವಕಾಶಗಳು ದೊರೆತವು.

ನೀವು ಭಾರತದಲ್ಲಿ ಬಳಕೆಯಲ್ಲಿದ್ದ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಧಾನಿ ಆಗಿದ್ದೀರಿ.

ನೀವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತವು ವಿಶ್ವದ ಹತ್ತು ಬಲಿಷ್ಟ ಆರ್ಥಿಕತೆಯ ರಾಷ್ಟ್ರಗಳಲ್ಲಿ ಒಂದಾಗಿತ್ತು.  ಇಷ್ಟು ಮಾತ್ರವಲ್ಲದೆ ಜಿಎಸ್ಎಲ್ವಿ, ಮಂಗಳಯಾನ, ಮೆಟ್ರೋ ರೈಲು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು, ಪೃಥ್ವಿ, ಅಗ್ನಿ, ನಾಗ್, ಪರಮಾಣು ಜಲಾಂತರ್ಗಾಮಿ ನೌಕೆಗಳು. ಇವೆಲ್ಲವನ್ನೂ ನೀವು ಪ್ರಧಾನಿಯಾಗುವ ಮೊದಲೇ ಭಾರತದಲ್ಲಿ ಅಸ್ತಿತ್ವದಲ್ಲಿದ್ದವು. ಇಂತಹ ಭವ್ಯ ಇತಿಹಾಸ ನಮ್ಮ ಮುಂದೆ ಇರುವಾಗ  60 ವರ್ಷಗಳಲ್ಲಿ ಕಾಂಗ್ರೆಸ್ ಏನು ಸಾಧಿಸಿದೆ ಎಂದು ಪ್ರಶ್ನೆ ಕೇಳಬೇಡಿ ಹಾಗೂ ಜನರ ಬಳಿಗೆ ಬರಬೇಡಿ.

ಈಗಿನ ಭಾರತದ ಸ್ಥಿತಿಗತಿ ಹೇಗಿದೆ ಎಂದು ಇಡೀ ಜಗತ್ತಿಗೆ ಗೊತ್ತಿದೆ.

ಹೆಸರು ಬದಲಾಯಿಸುವುದು, ಪ್ರತಿಮೆ ಸ್ಥಾಪಿಸುವುದು ಮತ್ತು ನಿರಂತರವಾಗಿ ಗೋವಿನ ರಾಜಕಾರಣ ಮಾಡುವುದನ್ನು ಹೊರತುಪಡಿಸಿ ಹಾಗೂ ಹಿಂದೂಗಳು ಮತ್ತು ಮುಸ್ಲಿಮರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ದಲಿತರು, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ನಡುವೆ ಬಿರುಕು ಮೂಡಿಸುವುದನ್ನು  ಕಾಯಕ ಮಾಡಿಕೊಂಡ ನೀವು ಕಳೆದ ಒಂಬತ್ತು ವರ್ಷಗಳಲ್ಲಿ ಏನು ಸಾಧಿಸಿದ್ದೀರಿ ಎಂಬುದನ್ನು ದಯವಿಟ್ಟು ಜನರಿಗೆ ತಿಳಿಸಿ.

ನಿಮ್ಮ ವಿಫಲವಾದ ನೋಟು ಅಮಾನ್ಯೀಕರಣ, ಅತ್ಯಂತ ಕಳಪೆ ಜ್ಞಾನದಿಂದ ಜಾರಿಗೊಂಡ ಜಿಎಸ್ಟಿ ತೆರಿಗೆ ಪದ್ಧತಿಯಿಂದ ಸಾಮಾನ್ಯರು ನರಳುವಂತೆ ಮಾಡಿದಿರಿ. ಮತ್ತು ಜನರನ್ನು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿ, ಅನಗತ್ಯ ಸಾವುಗಳಿಗೆ ಕಾರಣವಾದಿರಿ.    ಪ್ರದರ್ಶನವನ್ನೇ ಬಂಡವಾಳ ಮಾಡಿಕೊಂಡ ನಿಮ್ಮ  ಬಿಜೆಪಿಗರು ವಿದೇಶಿ ನೇರ ಬಂಡವಾಳವನ್ನು  ವಿರೋಧಿಸಿದರು ಮತ್ತು ಈಗ ಯಾವುದೇ ಸಂಕೋಚ ಅಥವಾ ನಾಚಿಕೆಯಿಲ್ಲದೆ ನಿಮ್ಮ ಸರ್ಕಾರ  ಬೆಂಬಲ ನೀಡುತ್ತಿದೆ.. ಬಿಜೆಪಿಯು ಭಾರತವನ್ನು ಅಂಬಾನಿಗೆ ಮಾರಾಟ ಮಾಡುತ್ತಿದೆ ಮತ್ತು ಭಾರತ ಸರ್ಕಾರದ ಒಡೆತನದ ಹಿಂದೂಸ್ಥಾನ್ ಏರೋನಾಟಿಕ್ ಸಂಸ್ಥೆಯ  ವ್ಯವಹಾರಿಕ ಒಪ್ಪಂಧಗಳನ್ನು ಅದಾನಿ ಗೆಮತ್ತು ರಫೇಲ್ ಡೀಲ್ ಅನ್ನು ಅನಿಲ್ ಅಂಬಾನಿಯ ಕೇವಲ ಎರಡು ತಿಂಗಳ ಹಳೆಯ ಕಂಪನಿಗೆ ಮಾರಾಟ ಮಾಡಲಾಗುತ್ತಿದೆ.

ನಿಮ್ಮ ನೇತೃತ್ವದ  ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರವನ್ನು ಹೆಚ್ಚು ತೆರಿಗೆ ಹಾಕುವ ಮೂಲಕ ಹೆ

ಚ್ಚಿಸಿತು, ಕಚ್ಚಾ ತೈಲದ ಬೆಲೆ ಅಗ್ಗವಾಗಿದ್ದರೂ ಸಹ ಬೆಲೆ ಮಾತ್ರ ಇಳಿಯುತ್ತಿಲ್ಲ. ಭಾರತದಲ್ಲಿ ಅಮಿತ್ ಶಾ ಅವರ ಪುತ್ರ, ಅಂಬಾನಿ, ಅದಾನಿ, ಬಾಬಾ ರಾಮದೇವ್  ಇಂತಹ  ಬಿಜೆಪಿ ಪ್ರಾಯೋಜಕರ  ವಿಕಾಸ ಮಾತ್ರ  ನಡೆಯುತ್ತಿದೆ.   ದಯಮಾಡಿ ನೀವು ಪ್ರತಿನಿಧಿಸುವ ವಾರಣಾಸಿಯ ಗಂಗಾ ನದಿಯಲ್ಲಿ ಸ್ನಾನ ಮಾಡಿ ಹೊರಬನ್ನಿ.  ಕಲ್ಮಶಗಳಿಂದ ತುಂಬಿರುವ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಸ್ವಚ್ಛವಾಗುತ್ತದೆ.

ವಿ.ಸೂ. – ಇದು ಕಾಂಗ್ರೇಸ್ ಪಕ್ಷದ ಪರವಾಗಿ ನೀಡಿದ ಹೇಳಿಕೆ ಅಲ್ಲ. ಪಕ್ಷಾತೀತವಾಗಿ ಬದುಕುತ್ತಿರುವ ಓರ್ವ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ನಾನು ಕಂಡ ಸತ್ಯಗಳನ್ನು ನಿಮ್ಮೆದುರು ತೆರೆದಿಟ್ಟಿದ್ದಿನಿ.

ಕನ್ನಡಕ್ಕೆ:ಜಗದೀಶ್ ಕೊಪ್ಪ.

ವಿ.ಸೂ. ಮೂರು ವರ್ಷದ ಹಿಂದೆ ಅನುವಾದಿಸಿದ್ದ ಈ ಲೇಖನ ಇಂದಿಗೂ ಕೂಡಾ. ಪ್ರಸ್ತುತ  ಎನಿಸಿದೆ.