ಗುರುವಾರ, ಜುಲೈ 16, 2026

ಕೆ.ವಿ. ಸುಬ್ಬಣ್ಣನವರ ನೆನಪುಗಳು.



  ಹೆಗ್ಗೋಡು ಎಂದರೆ, ನೀನಾಸಂ, ನೀನಾಸಂ ಎಂದರೆ, ಕೆ.ವಿ. ಸುಬ್ಬಣ್ಣ ಎಂದು ಇಡೀ ಕನ್ನಡನಾಡಿಗೆ ಪರಿಚಯವಾಗಿದ್ದ, ಸಾಂಸ್ಕೃತಿಕ ಚಿಂತಕ, ನಾಟಕಕಾರ ಮತ್ತು ಅನುವಾದಕ ಕೆ.ವಿ. ಸುಬ್ಬಣ್ಣನವರು. ನಮ್ಮನ್ನು ಅಗಲಿ, (2005 ರ ಜುಲೈ 16) ಇಂದಿಗೆ ಇಪ್ಪತ್ತೊಂದು ವರ್ಷವಾದರೂ ಸದಾ ತಮ್ಮ ವಿಭಿನ್ನ ಆಸಕ್ತಿಗಳ ಕಣಜವಾಗಿ ನಮ್ಮನ್ನು ಕಾಡುತ್ತಲೇ ಇದ್ದಾರೆ. ಬಹುಶಃ ನನಗೆ ತಿಳಿದ ಮಟ್ಟಿಗೆಅರವತ್ತರ ದಶಕದಲ್ಲಿ ಮೈಸೂರು ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿ, ಉಪನ್ಯಾಸಕರ ಹುದ್ದೆಗೆ ಆಸಕ್ತಿ ತೋರಿಸದೆ, ಕೃಷಿ ಲೋಕದತ್ತ ತೆರಳಿದವರು ಪೂರ್ಣಚಂದ್ರ ತೇಜಸ್ವಿ ಮತ್ತು ಕೆ.ವಿ. ಸುಬ್ಬಣ್ಣನವರು ಮಾತ್ರ. ಈ ಹಿರಿಯ ಚೇತನಗಳು ಮಲೆ ಮತ್ತು ಮಳೆನಾಡಿನಲ್ಲಿ ಕೃಷಿ ಲೋಕದಲ್ಲಿದ್ದುಕೊಂಡು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಸಾಗರದಿಂದ ಸುಮಾರು ಹದಿನೈದು ಕಿಲೊಮೀಟರ್ ದೂರದಲ್ಲಿರುವ ಹೆಗ್ಗೋಡು ಎಂಬ ಪುಟ್ಟಗ್ರಾಮದಲ್ಲಿ ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡು, ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಅವರು ಮಾಡಿದ ದಾಖಲೆಗಳು ಹೆಗ್ಗೋಡಿನತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದವು. ಹೆಗ್ಗೋಡಿನಲ್ಲಿ ಅವರು ಸ್ಥಾಪಿಸಿದ ನೀಲಕಂಠೇಶ್ವರ ನಾಟ್ಯ ಸಂಘವು ನೀನಾಸಂ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಿತು. ತಮ್ಮ ಪುತ್ರ ಅಕ್ಷರ ಇವರ ಹೆಸರಿನಲ್ಲಿ ಸ್ಥಾಪಿಸಿದ ಅಕ್ಷರ ಪ್ರಕಾಶನವು ಕನ್ನಡದ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಯಿತು.. ಪ್ರಕಾಶನ ಸಂಸ್ಥೆಗಾಗಿ, ನಿನಾಸಂ ನಾಟಕ ಮಂದಿರದ ಪಕ್ಕದಲ್ಲಿ ಸರಸ್ವತಿ ಮುದ್ರಣಾಲಯವನ್ನು ಸ್ಥಾಪಿಸಿ, ಐದಾರು ಮಂದಿಗೆ ಶಾಶ್ವತ ಉದ್ಯೋಗ ದೊರಕುವಂತೆ ಮಾಡಿದ್ದರು. ನಿನಾಸಂ ನ ನಾಟಕಗಳು, ಮತ್ತು ಅಕ್ಷರ ಪ್ರಕಾಶನದ ಪ್ರಕಟಣೆಗಳು ಅಲ್ಲಿಯೇ ಮುದ್ರಣವಾಗುತ್ತಿದ್ದವು.

ನನಗೆ ಎಂಬತ್ತರ ದಶಕದಲ್ಲಿ, ಬೆಂಗಳೂರಿನಲ್ಲಿ ಯು.ಆರ್.ಅನಂತಮೂರ್ತಿಯವರ ಪರಿಚಯವಾದ ಕೆ.ವಿ. ಸುಬ್ಬಣ್ಣನವರ ಬಹುಮುಖಿ ಪ್ರತಿಭೆಯ ಕುರಿತು ಆಸಕ್ತಿಯ ಜೊತೆಗೆ ಅಪಾರ ಗೌರವವಿತ್ತು. ಅನಂತಮೂರ್ತಿ ಮತ್ತು ಸುಬ್ಬಣ್ಣನವರ ಬಳಿ ನಾನು ಕಂಡ ಒಂದೇ ರೀತಿಯ ಗುಣವೆಂದರೆ, ಎಲ್ಲಾ ಬಗೆಯ ಟೀಕೆಗಳನ್ನು ನಗು ಮುಖದಿಂದ ಸ್ವೀಕರಿಸಿ, ಶಾಂತವಾಗಿ ಉತ್ತರಿಸುತ್ತಿದ್ದರು. ನನಗೆ ಅಕ್ಷರ ಪ್ರಕಾಶನದ ಬಗ್ಗೆ ಒಂದು ರೀತಿಯಲ್ಲಿ ಸಾತ್ವಿಕ ಸಿಟ್ಟಿತ್ತು. ನಾನು ಅದನ್ನು ಅಗ್ರಹಾರದ ಪ್ರಕಾಶನ ಎಂದು ಕರೆಯುತ್ತಿದ್ದೆ. ಏಕೆಂದರೆ, ಕೇವಲ ಪ್ರಸಿದ್ಧ ಬ್ರಾಹ್ಮಣ ಬರಹಗಾರರ ಕೃತಿಗಳು ಮಾತ್ರ ಪ್ರಕಟವಾಗುತ್ತಿದ್ದವು. 1988 ರಲ್ಲಿ ಜೋಗದ ಜಲಪಾತ ನೋಡಲು ಹೋಗಿದ್ದ ನಾನು, ಸಾಗರದಲ್ಲಿ ಉಳಿದುಕೊಂಡಿದ್ದೆ. ಬೆಳಿಗ್ಗೆ ಎದ್ದು ಹೆಗ್ಗೋಡಿಗೆ ಹೋಗಿ ಇಡೀ ದಿನ ಸುಬ್ಬಣ್ಣನರ ಜೊತೆ ಕಾಲ ಕಳೆದಿದ್ದೆ. ಈ ಸಂದರ್ಭದಲ್ಲಿ ನನ್ನ ಅಸಮಾಧಾನವನ್ನು ಅವರೆದುರು ಹೊರಹಾಕಿದ್ದೆ.
ಆ ದಿನ ನನ್ನನ್ನು ಮುದ್ರಣಾಲಯಕ್ಕೆ ಕರೆದೊಯ್ದು, ಅಲ್ಲಿನ ಕೆಲಸಗಾರರು, ನಡೆಯುತ್ತಿದ್ದ ಪುಸ್ತಕಗಳ ಮುದ್ರಣ ಮತ್ತು ಬೈಂಡಿಂಗ್ ಕೆಲಸ ತೋರಿಸಿ, ಇವರ ಹೊಟ್ಟೆ ತುಂಬಿಸುವುದು ನಮ್ಮ ಆದರ್ಶಗಳಲ್ಲ ಕಣೋ ಎಂದು ನುಡಿದಿದ್ದರು. ನಂತರ, ನಾಟ್ಯಮಂದಿರದ ಮುಂದೆ ಇದ್ದ ಕಿರಾಣಿ ಅಂಗಡಿ ಬಳಿ ಕರೆದೊಯ್ದು, ಅಲ್ಲಿನ ಜಗುಲಿಯ ಮೇಲೆ ಕಾಲು ಮೇಲೆ ಕಾಲು ಹಾಕಿಕೊಂಡು ಗೋಡೆಗೆ ಒರಗಿ ಕುಳಿತು, ಎಲೆ ಅಡಿಕೆ ಜಗಿಯುತ್ತಾ, ಪ್ರಕಾಶನ ಸಂಸ್ಥೆ ಮತ್ತು ನಿನಾಸಂ ಸಂಸ್ಥೆಯ ಉದ್ಯೋಗಿಗಳಿಗೆ ನೆಮ್ಮದಿ ಒದಗಿಸಲು, ನಮ್ಮೊಳಗೆ ಒಂದಿಷ್ಟು ವ್ಯವಹಾರಿಕ ಬುದ್ದಿಯೂ ಇರಬೇಕು ಜಗದೀಶಾ ಎಂದು ಶಾಂತವಾಗಿ ನುಡಿದಿದ್ದರು.

ಎಂಬತ್ತೈದರ ವೇಳೆಗೆ ಕರ್ನಾಟಕಕ್ಕೆ ಕಂಪ್ಯೂಟರ್, ಡಿ.ಟಿ.ಪಿ. ವ್ಯವಸ್ಥೆ ಬಂದಿತ್ತು. ಅವರಿಗೆ ಪ್ರಕಾಶನದ ಪುಸ್ತಕಗಳನ್ನು ಆಫ್ ಸೆಟ್ ಮುದ್ರಣ ಮಾಡಿಸುವ ಒಲವಿರಲಿಲ್ಲ. ನಾನು ಪದೇ ಪದೆ ಈ ಕುರಿತು ಹೇಳುತ್ತಿದ್ದೆ. ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ, ಅವರನ್ನು ಚಾಮರಾಜಪೇಟೆಯ ಲಕ್ಷ್ಮಿ ಮುದ್ರಣಾಲಯಕ್ಕೆ ಕರೆದುಕೊಂಡು ಹೋಗಿ ಹೊಸ ವ್ಯವಸ್ಥೆಯನ್ನು ತೋರಿಸಿದ್ದೆ. ನಿಮ್ಮ ಪ್ರೆಸ್ ಕೆಲಸಗಾರರಿಗೆ ಬೇರೆ ಕೆಲಸ ಕೊಡಿ ಸಾರ್, ಪುಸ್ತಕಗಳು ಅಚ್ಚುಕಟ್ಟಾಗಿ ಮುದ್ರಣವಾಗಲಿ ಎಂದು ಹೇಳಿದ್ದೆ. ಕೊನೆಗೂ ಸುಬ್ಬಣ್ಣ ಒಪ್ಪಿದರು. ನನಗೆ ನೆನಪಿರುವಂತೆ, ಯು.ಆರ್. ಅನಂತಮೂರ್ತಿಯವರ ಭವ ಎಂಬ ಕಾದಂಬರಿಯನ್ನು ಆಪ್ ಸೆಟ್ ಮುದ್ರಣ ಮಾಡಿಸಿದರು. ದೆಹಲಿಯಲ್ಲಿ ವಾಸವಾಗಿದ್ದ ಶಾ.ಬಾಲುರಾವ್ ಅವರನ್ನು ನನಗೆ ಪರಿಚಯ ಮಾಡಿಕೊಟ್ಟು, ಅವರ ಬ್ರೆಕ್ಟ್ ನ ಕವಿತೆಗಳ ಕೃತಿಯನ್ನು ಉಡುಗೊರೆಯಾಗಿ ಕೊಡಿಸಿದ್ದರು. ಶಾ.ಬಾಲುರಾವ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದವರು ಎಂಬುದು ಅಲ್ಲಿಯವರೆಗೂ ನನಗೆ ತಿಳಿದಿರಲಿಲ್ಲ

ನಾನು 1989 ರಲ್ಲಿ ವಿವಾಹವಾದ ನಂತರ ವಿದ್ಯಾಭ್ಯಾಸ ಮುಂದುವರಿಸುವ ಉದ್ದೇಶದಿಂದ, ಪತ್ನಿಯನ್ನು ಊರಿನಲ್ಲಿರಿಸಿ, ಮೈಸೂರು ವಿ.ವಿ.ಗೆ ಎಂ.ಎ. ಗೆ ಸೇರಿದ್ದೆ. ಸ್ನಾತಕೋತ್ತರ ಪದವಿ ಮುಗಿದ ನಂತರ ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಗೆ ಸೇರ್ಪಡೆಯಾಗಿದ್ದೆ. ಕೊಪ್ಪದ ನನ್ನ ಮನೆಗೆ ದೂರವಾಣಿ ಸಂಪರ್ಕವಿತ್ತು. 1993 ರ ಸೆಪ್ಟಂಬರ್ ತಿಂಗಳಲ್ಲಿ ಒಂದು ರಾತ್ರಿ ಫೋನ್ ಮಾಡಿದ ಸುಬ್ಬಣ್ಣನವರು, ಜಗದೀಶಾ, ನೀನು ಈ ವರ್ಷ ಅಕ್ಟೋಬರ್ ತಿಂಗಳ ನೀನಾಸಂ ಶಿಬಿರಕ್ಕೆ ಬಾರೋ, ದೆಹಲಿಯ ಆಶೀಷ್ ನಂದಿ ಮತ್ತು ಬೆಂಗಳೂರಿನ ಡಿ.ಆರ್.ನಾಗರಾಜ್ ಅವರ ವಿಶೇಷ ಉಪನ್ಯಾಸಗಳಿವೆ. ಶಾ.ಬಾಲುರಾವ್ ಕೂಡಾ ಪತ್ನಿಯ ಜೊತೆಗೆ ಹೆಗ್ಗೋಡಿಗೆ ಬರ್ತಿದ್ದಾರೆ. ಅನಂತಮೂರ್ತಿ ಕೂಡಾ ಒಂದು ವಾರ ಇಲ್ಲೇ ಇರ್ತಾರೆ’’ ಎಂದು ತಿಳಿಸಿದಾಗ, ಮರು ಮಾತಿಲ್ಲದೆ, ಆ ವರ್ಷ ನೀನಾಸಂ ಶಿಬಿರದಲ್ಲಿ ಭಾಗವಹಿಸಿದ್ದೆ.

ಆ ವೇಳೆಗಾಗಲೇ, ಅನಂತಮೂರ್ತಿಯವರು ಕೇರಳದ ತಿರುವನಂತಪುರಂ ಮಹಾತ್ಮಗಾಂಧಿ ವಿ.ವಿ. ಉಪಕುಲಪತಿಯಾಗಿ ಸೇವೆ ಸಲ್ಲಿಸಿ, ಮಣಿಪಾಲದ ಟಿ.ಎಂ. ಪೈ ಪ್ರತಿಷ್ಟಾನದ ಮಹಾತ್ಮಗಾಂಧಿ ಪೀಠದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ, ಮಣಿಪಾಲ್ ನಲ್ಲಿ ವಾಸವಾಗಿದ್ದರು. ಹೆಗ್ಗೋಡಿನಲ್ಲಿ ನನ್ನನ್ನು ನೋಡಿದಾಕ್ಷಣ, ಓಹೋ ನೀನು ಬಂದಿದ್ದೀಯಾ? ಎಂದು ಕೇಳಿದಾಗ, ಸುಬ್ಬಣ್ಣನವರು, ಅನಂತಮೂರ್ತಿಯವರಿಗೆ, ‘’ ಅನಂತು ನೀನು ಭವ ಕಾದಂಬರಿ ಬರೆಯಲು ನೇಪಾಳದ ಕಠ್ಮಂಡು ವರೆಗೆ ಹೋಗಬೇಕಿರಲಿಲ್ಲ. ಅಂತಹ ಕೆಟ್ಟ ಕಾದಂಬರಿಯನ್ನು ಹೆಗ್ಗೋಡಿನಲ್ಲಿ ಕುಳಿತು ಬರೆಯಬಹುದಿತ್ತು’’ ಎಂದು ಜಗದೀಶ ಹೇಳ್ತಾ ಇದ್ದ ಕಣೋ’’ ಎನ್ನುತ್ತಿದ್ದಂತೆ, ಅನಂತಮೂರ್ತಿಯವರ ಪತ್ನಿ ಎಸ್ತರ್ ಮೇಡಂ ಜೋರಾಗಿ ನಕ್ಕುಬಿಟ್ಟರು. ಅವರಿಗೂ ಕೂಡಾ ಆ ಕಾದಂಬರಿ ಇಷ್ಟವಾಗಿರಲಿಲ್ಲ.

ಸುಬ್ಬಣ್ಣನರ ಮಾತಿಗೆ ಮನಸಾರೆ ನಕ್ಕು ಅನಂತಮೂರ್ತಿಯವರು, ‘’ ಇವನು ಮಂಡ್ಯದ ನಡೆದಾಡುವ ನಾಡ ಬಾಂಬ್ ಕಣೋ, ಎನ್ನುತ್ತಾ, 1980 ರ ಗಿರಿಯವರ ಗತಿ ಸ್ಥಿತಿ ಕಾದಂಬರಿ ಕುರಿತು ಬೆಂಗಳೂರು ಸೆಂಟ್ರಿಲ್ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯುತ್ತಿದ್ದಾಗ, ನನ್ನ ಮೇಲೆ ಮತ್ತು ನವ್ಯ ಸಾಹಿತ್ಯದ ಮೇಲೆ ಕೋಗಾಡಿದ್ದ ಕಣೊ, ಎಂದು ಹೇಳುತ್ತಾ ನಗಾಡಿದ್ದರು. ಈ ಕಾರಣದಿಂದಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಕಟು.ಟೀಕೆ ಮತ್ತು ವಿಮರ್ಶೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದ ಕೆ.ವಿ.ಸುಬ್ಬಣ್ಣ ಮತ್ತು ಅನಂತಮೂರ್ತಿಯವರ ಬಗ್ಗೆ ಇಂದಿಗೂ ನನಗೆ ಅಪಾರ ಗೌರವವಿದೆ.

ಕೆ.ವಿ.ಸುಬ್ಬಣ್ಣನವರು ಪೋರ್ಡ್ ಪೌಂಡೇಶನ್ ವತಿಯಿಂದ ಹಣ ಪಡೆದ ಕಾರಣದಿಂದಾಗಿ 1980 ಮತ್ತು 90 ರ ದಶಕದಲ್ಲಿ ಬಂಡಾಯ ಸಾಹಿತಿಗಳಿಂದ ವ್ಯಾಪಕ ಟೀಕೆಯನ್ನು ಎದುರಿಸಿದರು. ಆದರೆ, ಅವರು ಆ ಹಣವನ್ನು ಮತ್ತು ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುವ ಫಿಲಿಪೈನ್ಸ್ ನ ಮ್ಯಾಗ್ಸಸೆ ಪ್ರಶಸ್ತಿಯ ಹಣವನ್ನು ನೀನಾಸಂ ಕೇಂದ್ರದ ಅಭಿವೃದ್ಧಿಗೆ ಬಳಸಿರುವುದನ್ನು ಕಣ್ಣಾರೆ ನೋಡಿದಾಗಲೇ ನಮಗೆ ಅರ್ಥವಾಗುವುದು. ಅಂತಹ ಬದ್ಧತೆಯ ಬದುಕು ಕೆ.ವಿ.ಸುಬ್ಬಣ್ಣನವರದು. ಅವರ ಅಭಿರುಚಿಗಳು ವಿಶೇಷವಾದವು ಸುಬ್ಬಣ್ಣನವರ ಸಂಗ್ರಹದಲ್ಲಿ ಐವತ್ತಕ್ಕೂ ಹೆಚ್ಚು ಜಗತ್ತಿನ ಶ್ರೇಷ್ಠ ಸಿನಿಮಾ ಸಂಗ್ರಹಗಳಿದ್ದವು. ನಾನು ಸತ್ಯಜಿತ್ ರಾಯ್ ಅವರ ಪಥೇರ್ ಪಾಂಚಾಲಿ ಹಾಗೂ ಇಂಗ್ಲೀಷ್ ಸಿನಿಮಾ ಬೈಸಿಕಲ್ ಥೀವ್ಸ್ ಸಿನಿಮಾಗಳನ್ನು ಅಲ್ಲಿಯೇ ನೋಡಿ ಪ್ರಭಾವಿತನಾಗಿದ್ದೆ.

ಶಿಬಿರದಲ್ಲಿ ಇದ್ದಾಗ, ನಾನು ಪ್ರತಿದಿನ ಸಂಜೆ ಮಾಂಸಹಾರ ಊಟಕ್ಕಾಗಿ. ಸಾಗರಕ್ಕೆ ಹೋಗುತ್ತಿದ್ದೆ ನಾಟಕ ಮತ್ತು ನೃತ್ಯ ಕುರಿತಂತೆ ಆಸಕ್ತಿ ಇರಲಿಲ್ಲ. ಒಂದು ದಿನ ಸುಬ್ಬಣ್ಣನವರು ನನ್ನನ್ನುಕರೆದು ಜಗದೀಶಾ, ನೀನು ಈ ದಿನ ಎಲ್ಲಿಯೂ ಹೋಗಬೇಡ. ತೇಜಸ್ವಿಯವರ ‘’ ಕಿರಗೂರಿನ ಗಯ್ಯಾಳಿಗಳು’’ ನಾಟಕವಿದೆ ಎಂದು ಹೇಳಿದಾಗ, ಆ ರಾತ್ರಿ ನೀನಾಸಂ ರಂಗಮಂದಿರದಲ್ಲಿ ನಾಟಕ ನೋಡಿ ವಿಸ್ಮಯಗೊಂಡೆ. ಒಂದು ಕೃತಿಯನ್ನು ಹೀಗೂ ನಾಟಕ ರೂಪಕ್ಕೆ ಇಳಿಸಬಹುದೆಂದು ಆ ದಿನ ನನಗೆ ಮನವರಿಕೆಯಾಯಿತು. ಇಂದಿಗೂ ನನಗೆ ಆಶ್ಚರ್ಯಕರ ಸಂಗತಿ ಎಂದರೆ, ತೇಜಸ್ವಿ, ಸುಬ್ಬಣ್ಣ ಇಬ್ಬರೂ ನಗರ ಸಂಸ್ಕೃತಿಯನ್ನು ತೊರೆದು, ತಾವಿದ್ದ ಸ್ಥಳವನ್ನೇ ಸೃಜಶೀಲತೆಯ ಕೇಂದ್ರವನ್ನಾಗಿ ಮಾಡಿಕೊಂಡದ್ದು ಸಾಮಾನ್ಯ ವಿಷಯವಲ್ಲ.

ತೇಜಸ್ವಿಯವರು ಮೂಡಿಗೆರೆಯ ತೋಟದಲ್ಲಿ ಕುಳಿತು, ಕರ್ವಾಲೋ, ಕಾಡು ಮತ್ತು ಕ್ರೌರ್ಯ ಜುಗಾರಿ ಕ್ರಾಸ್, ಚಿದಂಬರರಹಸ್ಯ, ಮಾಯಾಲೋಕ ಕಾದಂಬರಿಗಳು ಮತ್ತು ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಹುಲಿಯೂರಿನ ಸರಹದ್ದು ಕಥಾ ಸಂಕಲನಗಳು ಸೇರಿದಂತೆ ಅನುವಾದವೂ ಸೇರಿದಂತೆ ಹಲವಾರು ಕೃತಿಗಳನ್ನು ಬರೆದರು. ಕೆ.ವಿ.ಸುಬ್ಬಣ್ಣನವರು ಕುವೆಂಪುಗೆ ಪುಟ್ಟ ಕನ್ನಡಿ ಮತ್ತು ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಎರಡು ಮಹತ್ವದ ಕೃತಿಗಳ ಜೊತೆಗೆ ಅಸಂಖ್ಯಾತ ಸಂಸ್ಕೃತ ಮತ್ತು ಗ್ರೀಕ್, ನಾಟಕಗಳು ಸೇರಿದಂತೆ, ಜಗತ್ತಿನ ಅತ್ಯುತ್ತಮ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ನೀನಾಸಂ ಮೂಲಕ ತಿರುಗಾಟ ಕಾರ್ಯಕ್ರಮದ ಅಡಿಯಲ್ಲಿ ಇಡೀ ಕರ್ನಾಟಕಕ್ಕೆ ಪರಿಚಯಿಸಿದರು. ಇಂದು ಕರ್ನಾಟಕದಲ್ಲಿ ನೂರಾರು ರಂಗಭೂಮಿಯ ಕಲಾವಿದರು, ರಂಗಕರ್ಮಿಗಳು ಉದಯವಾಗಲು ಕೆ.ವಿ.ಸುಬ್ಬಣ್ಣ ಅವರ ನೀನಾಸಂ ಸಂಸ್ಥೆ ಕಾರಣವಾಗಿದೆ.

ಓರ್ವ ವ್ಯಕ್ತಿಯನ್ನು ಜಾತಿ ಅಥವಾ ಧರ್ಮದ ಗೂಟಕ್ಕೆ ಬಿಗಿದು ನೋಡುವುದರ ಬದಲು ಆ ವ್ಯಕ್ತಿಯ ಸೃಜನಶೀಲತೆಯನ್ನು ಮತ್ತು ಸಾಧನೆಯನ್ನು ಮುಕ್ತವಾಗಿ ವ್ಯಾಖ್ಯಾನಿಸುವ ಗುಣ ಇಂದಿನ ವರ್ತಮಾನದ ಜಗತ್ತಿಗೆ ತುರ್ತು ಅಗತ್ಯವಾಗಿದೆ. ನನ್ನ ಪಾಲಿಗೆ ಲಂಕೇಶ್, ತೇಜಸ್ವಿ, ಅನಂತಮೂರ್ತಿಯವರ ಜೊತೆಗೆ ಕೆ.ವಿ.ಸುಬ್ಬಣ್ಣ ಕೂಡಾ ಮುಖ್ಯರು. ಇವರೆಲ್ಲರಿಂದ ನನ್ನ ಬೌದ್ಧಿಕ ಪ್ರಜ್ಞೆ ವಿಸ್ತಾರಗೊಂಡಿದೆ. ಈಗ ಗಿರೀಶ್ ಕಾರ್ನಾರ್ಡ್ ಬಿ.ವಿ.ಕಾರಾಂತ ಮತ್ತು ಕೆ.ವಿ.ಸುಬ್ಬಣ್ಣನವರ ನಾಟಕಗಳ ಕುರಿತಾಗಿ ಮತ್ತು ರಂಗಭೂಮಿಗೆ ಅವರ ಕೊಡುಗೆ ಕುರಿತಾಗಿ ಗಂಭೀರ ಅಧ್ಯಯನ ನಡೆಯಬೇಕಿದೆ. ಕರ್ನಾಟಕದಲ್ಲಿರುವ ವಿ.ವಿ.ಗಳು ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಾಗಿರುವ ಕಾರಣ ಅವುಗಳಿಂದ ಏನನ್ನೂ ನಿರೀಕ್ಷಿಸಲಾಗದು.
ಜಗದೀಶ್ ಕೊಪ್ಪ, ಮೈಸೂರು.

ಸೋಮವಾರ, ಜುಲೈ 6, 2026

ಲಾಹೋರ್ ಹೀರಾಮಂಡಿಯ ಗತ ವೈಭವದ ಇತಿಹಾಸ

 


ಅವಿಭಜಿತ ಭಾರತದ ಪ್ರಸಿದ್ದ ಸಾಂಸ್ಕೃತಿಕ ನಗರವಾಗಿದ್ದ ಪಾಕಿಸ್ತಾನದ ಲಾಹೋರ್ ನಗರವು ಇಂದಿಗೂ ಅದೇ ಗತವೈಭವವನ್ನು ಉಳಿಸಿಕೊಂಡಿದೆ. ಇಡೀ ಪಾಕಿಸ್ತಾನದಲ್ಲಿ ಸಾಹಿತ್ಯ ಸಂಗೀತ, ನೃತ್ಯಕಲೆಗಳ ತವರೂರು ಎಂಬಂತಿರುವ ಲಾಹೋರ್ ನಗರದಲ್ಲಿನ ಹೀರಾಮಂಡಿ ಎಂಬ ಪ್ರದೇಶವು ಹಲವು ಶತಮಾನಗಳಿಂದ ವಿವಿಧ ಕಾರಣಗಳಿಂದಾಗಿ ಪ್ರಸಿದ್ಧವಾಗಿದೆ. ದಿನದ ಇಪ್ಪತ್ತುನಾಲ್ಕು ಗಂಟೆಯೂ ಚಟುವಟಿಕೆಯಲ್ಲಿರುವ ಈ ಪ್ರದೇಶವು ಸದಾ ತನ್ನ ಬಣ್ಣ ಮತ್ತು ಚಹರೆಯನ್ನು ಬದಲಾಯಿಸುತ್ತದೆ. ಹಗಲಿನ ವೇಳೆಯಲ್ಲಿ ದವಸ ಧಾನ್ಯಗಳು, ತರಕಾರಿ ವ್ಯಾಪಾರ ನಡೆದರೆ, ಸಂಜೆಯಾಗುತ್ತಿದ್ದಂತೆ ಬಗೆ ಬಗೆಯ ಸಿಹಿತಿಂಡಿ ಹಾಗೂ ಆಹಾರ ಪದಾರ್ಥಗಳಿಗೆ ಹೆಸರಾಗಿದೆ. ಸಂಜೆಯ ವೇಳೆಗೆ ಕತ್ತಲಾದಂತೆ ನೃತ್ಯ ಸಂಗೀತದ ಜೊತೆಗೆ ಮಹಿಳೆಯರ ದೇಹ ಮಾರಾಟದ ಮಾರುಕಟ್ಟೆಯಾಗುತ್ತದೆ.
ನೋವಿನ ಸಂಗತಿ ಎಂದರೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಸಾವಿರಾರು ನತದೃಷ್ಟ ಮಹಿಳೆಯರು ಮುಸ್ಲಿಮರಿಂದ ಅತ್ಯಾಚಾರಕ್ಕೆ ಒಳಗದಾಗ, ಸಿಖ್ ಧರ್ಮದ ಕುಟುಂಬದ ಹಿರಿಯರಿಂದ ವiರ್ಯಾದೆ ಹತ್ಯೆಯ ಹೆಸರಿನಲ್ಲಿ ಕೊಲ್ಲಲ್ಪಟ್ಟರು ಮತ್ತು ಸಿಖ್ ಧರ್ಮ ಗುರುಗಳ ಆದೇಶದ ಮೇರೆಗೆ ಸಾಮೂಹಿಕವಾಗಿ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು. ಸಾವಿಗೆ ಹೆದರಿ ತಪ್ಪಿಸಿಕೊಂಡ ಯುವತಿಯರಿಗೆ ಅಂದಿನ ದಿನಗಳಲ್ಲಿ ಹೀರಾಮಂಡಿಯ ನೃತ್ಯಗಾತಿಯರ ಕೋಥಾಗಳು ಆಸರೆಯಾದವು. ಹೀರಾಮಂಡಿಯು ಒಂದು ಬಗೆಯಲ್ಲಿ ವೇಶ್ಯಾವಾಟಿಕೆಯ ಕೇಂದ್ರವೂ ಹೌದು, ಇನ್ನೊಂದು ಬಗೆಯಲ್ಲಿ ನೊಂದವರ, ಹಾಗೂ ಹಸಿವಿನಿಂದ ಬಳಲಿದ ಹೆಣ್ಣುಮಕ್ಕಳ ಆಶ್ರಯ ತಾಣವೂ ಹೌದು. ಇದರಿಂದಾಗಿ ಹೀರಾಮಂಡಿ ಪ್ರದೇಶವನ್ನು ಅವಿಭಜಿತ ಭಾರತದ ಪುರಾತನ ವೇಶ್ಯಾವಾಟಿಕೆಯ ಕೇಂದ್ರ ಎಂದು ಗುರುತಿಸಲಾಗಿದೆ. ಮುಂಬೈನ ಕಾಮಾಟಿಪುರ, ಕೊಲ್ಕತ್ತ ನಗರದ ಸೋನಾಗಚಿ, ಪುಣೆಯ ಬುಧುವಾರ್ ಪೇಟ್, ಬಿಹಾರದ ಮುಜಾಪರ್ ನಗರದ ಚತುರ್ಬುಜ್ ಸ್ಥಾನ್ ಹಾಗೂ ದೆಹಲಿಯಲ್ಲಿ ಬ್ರಿಟಿಷ್ ಗವರ್ನರ್ ಗ್ಯಾಸ್ಟಿನ್ ಬಸ್ಟೆಲ್ ಎಂಬುವನು ತನಗಾಗಿ ಮತ್ತು ಸೈನಿಕರಿಗಾಗಿ ಅಜ್ಮೀರ್ ಗೇಟ್ ಮತ್ತು ಲಾಹೋರ್ ಗೇಟ್ ಗಳ ನಡುವೆ ಸ್ಥಾಪಿಸಿದ ಕೋಥಾಗಳು ಈಗ ಜಿ.ಬಿ.ರೋಡ್ ವೇಶ್ಯಾ ಕೇಂದ್ರವೆಂದು ಹೆಸರಾಗಿದೆ.
ವಿಶ್ವ ಏಡ್ಸ್ ನಿಯಂತ್ರಣ ಮಂಡಲಿಯು 2016 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಆರು ಲಕ್ಷದ ಐವತ್ತೇಳು ಸಾವಿರ ಮಹಿಳೆಯರು ವೇಶ್ಯಾವೃತ್ತಿಯನ್ನು ಕಾಯಕ ಮಾಡಿಕೊಂಡಿದ್ದಾರೆ ಎಂಬ ವರದಿಯನ್ನು ಪ್ರಕಟಿಸಿತ್ತು. ವಾಸ್ತವವಾಗಿ ಮುವತ್ತು ಲಕ್ಷ ಮಹಿಳೆಯರು ಈ ವೃತ್ತಿಯಲ್ಲಿದ್ದು, ಹನ್ನೆರಡು ಲಕ್ಷ ಅಪ್ರಾಪ್ತ ಬಾಲಕಿಯರು ಇದ್ದಾರೆ. ಇದು ಪರೋಕ್ಷವಾಗಿ ಈ ದೇಶದ ಬಡತನ, ಮಕ್ಕಳ ಕಳ್ಳಸಾಗಾಣಿಕೆ, ಕಾನೂನು ನಿಯಂತ್ರಣದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ವೇಶ್ಯಾವೃತ್ತಿಯು ಪ್ರತಿಯೊಂದು ದೇಶದ ಸಾಮಾಜಿಕ ಕಳಂಕ ಎಂದು ನಾವು ಗುರುತಿಸಿದರೂ ಸಹ, ಅದು ಅನೇಕ ಅನಾಥ ಹೆಣ್ಣುಮಕ್ಕಳ ಪಾಲಿಗೆ ತವರು ಮನೆಯಾಗಿರುವುದನ್ನು ಕಡೆಗಣಿಸುವಂತಿಲ್ಲ. ಈ ಕಾರಣದಿಂದ ಲಾಹೋರಿನ ಹೀರಾಮಂಡಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಮತ್ತು ಇತಿಹಾಸ ನಮ್ಮನ್ನು ಹದಿನಾರನೇ ಶತಮಾನಕ್ಕೆ ಕರೆದೊಯ್ಯುತ್ತದೆ.
ಇಂದಿನ ಪಾಕಿಸ್ತಾನದ ಲಾಹೋರ್ ಹಾಗೂ ಮಲ್ತಾನ್ ನಗರಗಳೆರೆಡೂ ಐತಿಹಾಸಿಕ ನಗರಗಳಾಗಿವೆ. ಪರ್ಷಿಯನ್ ದೊರೆಗಳು, ಸೂಫಿ ಸಂತರು, ವ್ಯಾಪಾರಸ್ಥರು ಇಂದಿನ ಟರ್ಕಿ, ಇರಾನ್ ಮತ್ತು ಇರಾಕ್ ರಾಷ್ಟçಗಳಿಂದ ಭಾರತಕ್ಕೆ ಬರುವಾಗ ಮಲ್ತಾನ್ ನಗರವು ಅವರ ಪಾಲಿಗೆ ವಿಶ್ರಾಂತಿಯ ತಂಗುದಾಣವಾಗಿತ್ತು. ಅದೇ ರೀತಿಯಲ್ಲಿ ಮೊಗಲ್ ಸಾಮ್ರಾಜ್ಯದ ಅಕ್ಬರ್ ನ ಅವಧಿಯಲ್ಲಿ ಲಾಹೋರ್ ನಗರವು ಆತನ ಆಡಳಿತಕ್ಕೆ ಸೇರಿತ್ತು. ರಾವಿ ನದಿಯ ದಂಡೆಯಲ್ಲಿರುವ ಲಾಹೋರ್ ನಗರವನ್ನು ಅಕ್ಬರ್ನ ಪುತ್ರ ಸಲೀಂ ತನ್ನ ಪಟ್ಟಾಭಿಷೇಕದ ನಂತರ ಜಹಾಂಗೀರ್ ಎಂದು ಹೆಸರಿನಿಂದ ಲಾಹೋರ್ ನಗರವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದನು. ಇಂದಿಗೂ ಸಹ, ಜಹಾಂಗೀರ್ ಮತ್ತು ಆತನ ಪತ್ನಿ ನೂರ್ ಜಹಾನ್ ದಂಪತಿಗಳ ಭವ್ಯ ಸಮಾಧಿಯ ಕಟ್ಟಡವು ಲಾಹೋರಿನ ಪ್ರಮುಖ ಆಕರ್ಷಣೆಯಾಗಿದೆ.. ಲಾಹೋರ್ ಕೋಟೆಯ ದಕ್ಷಿಣದ ಒಂದು ಪ್ರದೇಶವನ್ನು ರಾಜಮನೆತನದ ಮತ್ತು ಚಕ್ರವರ್ತಿಯ ಸೇವಕರು ಮತ್ತು ಸೇನೆಪಡೆಯ ವಸತಿಗಾಗಿ ಅಭಿವೃದ್ಧಿಪಡಿಸಲಾಯಿತು. ಈ ಪ್ರದೇಶ ಕೋಟೆಗೆ ಹತ್ತಿರದಲ್ಲಿರುವುದರಿಂದ, 'ಶಾಹಿ ಮೊಹಲ್ಲಾ' ಅಥವಾ 'ಸಾಮ್ರಾಟನ ನೆರೆಹೊರೆ' ಎಂದು ಕರೆಯಲಾಯಿತು.

ಈ ಪ್ರದೇಶವು ರಾಜಮನೆತನದ ಆಸ್ಥಾನದ ವೃತ್ತಿಪರ ಮನರಂಜಕರಾದ ತವೈಫ್ ಹೆಸರಿನ ನೃತ್ಯಗಾತಿಯರಿಗೆ ನೆಲೆಯಾಗಿತ್ತು. ಮೊಘಲ್ ಯುಗದಲ್ಲಿ ಪ್ರವರ್ಧಮಾನಕ್ಕೆ ಬಂದ ತವೈಫ್ ಸಂಸ್ಕೃತಿಯು ಮಧ್ಯಕಾಲೀನ ಭಾರತೀಯ ದೊರೆಗಳ ಆಸ್ಥಾನದಲ್ಲಿ ಮುಜ್ರಾ ಎಂಬ ನೃತ್ಯವನ್ನು ಪ್ರದರ್ಶಿಸುವ ಪ್ರತಿಭಾನ್ವಿತ ಕಲಾವಿದರನ್ನು ಒಳಗೊಂಡಿತ್ತು. ಆ ಕಾಲಘಟ್ಟದ ಬಹುತೇಕ ಕಲಾವಿದರು ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಗೆ ಹೆಚ್ಚಿನ ಕೊಡುಗೆ ನೀಡಿದ ಅತ್ಯಂತ ಯಶಸ್ವಿ ಮನರಂಜನೆಯ ಕಲಾವಿದÀರಾಗಿದ್ದರು. ಆಸ್ಥಾನದಲ್ಲಿ ಹಾಡು ಮತ್ತು ನೃತ್ಯವನ್ನು ವೃತ್ತಿಯಾಗಿಸಿಕೊಂಡಿದ್ದ ತವೈಫ್ ಹೆಸರಿನ ಕಲಾವಿದಎಯರಿಗೆ ಆಸ್ಥಾನದಲ್ಲಿದ್ದ ಅತ್ಯುತ್ತಮ ಉಸ್ತಾದ್ಗಳು ಸಂಗೀತ ಮತ್ತು ನೃತ್ಯದಲ್ಲಿ ತರಬೇತಿ ನೀಡುತ್ತಿದ್ದರು. ಇವರೆಲ್ಲರೂ ಶಾಹಿ ಮೊಹಲ್ಲಾದ ಗಣ್ಯ ವ್ಯಕ್ತಿಗಳಾಗಿ ಸಾಮಾಜಿಕ ಸಂಕೇತವಾಗಿದ್ದರು; ಅನೇಕ ವೃತ್ತಿಪರ ಕಲಾವಿದೆಯರು ಹೆಚ್ಚಾಗಿ ಲೈಂಗಿಕ ಕಾರ್ಯಕರ್ತರಾಗಿದ್ದರೂ ಕೂಡಾ, ಶಾಹಿ ಮೊಹಲ್ಲಾದ ತವೈಫ್ ಕಲಾವಿದೆಯರು ಆ ವೃತ್ತಿಯಲ್ಲಿರಲಿಲ್ಲ. ಗಣ್ಯರು ತಮ್ಮ ಮಕ್ಕಳನ್ನು ಶಿಷ್ಟಾಚಾರ, ಸಂಗೀತ, ಮತ್ತು ನೃತ್ಯ ಕಲಿಯಲು ಅವರ ಬಳಿಗೆ ಕಳುಹಿಸುತ್ತಿದ್ದರು.
ಹದಿನೆಂಟನೇ ಶತಮಾನದ ಮೊದಲಾರ್ಧದ ವೇಳೆಗೆ, ಲಾಹೋರ್ ನಗರವು ಹಲವಾರು ಆಕ್ರಮಣಗಳು ಮತ್ತು ದಾಳಿಗಳಿಗೆ ಸಾಕ್ಷಿಯಾಯಿತು. ಇರಾನಿನ ದೊರೆ ನಾದಿರ್ ಷಾ ಮತ್ತು ಆನಂತರ ಅಹ್ಮದ್ ಷಾ ಅಬ್ದಾಲಿಯ ನೇತೃತ್ವದಲ್ಲಿ ಆಫ್ಘನ್ನರ ದಾಳಿಯು ಪಂಜಾಬ್ನಲ್ಲಿ ಮೊಘಲ್ ಆಳ್ವಿಕೆಯನ್ನು ದುರ್ಬಲಗೊಳಿಸಿದವು. ಇದರಿಂದಾಗಿ ತವೈಫ್ಗಳ ರಾಜಮನೆತನದ ಪ್ರೋತ್ಸಾಹ ಕೊನೆಗೊಂಡಿತು. ಇದೇ ಸಮಯದಲ್ಲಿ ಲಾಹೋರ್ ನಗರದಲ್ಲಿ ವೇಶ್ಯಾಗೃಹಗಳು ಕಾಣಿಸಿಕೊಂಡವು. ಆಕ್ರಮಣಕಾರಿ ಮುಸ್ಲಿಂ ಸೈನ್ಯವು ೧೭೪೮ ಮತ್ತು ೧೭೬೭ ರ ನಡುವೆ ಭಾರತದ ಉಪಖಂಡದಲ್ಲಿ ದಾಳಿ ನಡೆಸಿ ಲೂಟಿ ಮಾಡಿದ ಪಟ್ಟಣಗಳಿಂದ ಅಪಹರಿಸಿದ ಮಹಿಳೆಯರನ್ನು ಕರೆತಂದು, ಇಲ್ಲಿ ಎರಡು ವೇಶ್ಯಾಗೃಹಗಳನ್ನು ಸ್ಥಾಪಿಸಿದವು. ಅವುಗಳು ಇಂದಿಗೂ ಧೋಬಿ ಮಂಡಿ ಮತ್ತು ದಾರಾ ಶಿಕೋ ಮೊಹಲ್ಲಾ ಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ. 1762ರಲ್ಲಿ ಅಫ್ಘಾನ್ ಸೈನ್ಯವು ಸಿಖ್ಖರ ಪವಿತ್ರ ದೇವಾಲಯವಾದ ಶ್ರೀ ಹರ್ಮಂದಿರ್ ಸಾಹಿಬ್ ಅನ್ನು ಕೆಡವಿದಾಗ ಸಿಖ್ ಸಮುದಾಯವು ಒಗ್ಗೂಡಿ ಮಸ್ಲಿಂ ಪಡೆಗಳನ್ನು ಲಾಹೋರ್ ಒಳಗೊಂಡಂತೆ ಇಡೀ ಪಂಜಾಬ್ ಪ್ರಾಂತ್ಯದಿಂದ ಹೊರದಬ್ಬಿತು,
ರಂಜಿತ್ ಸಿಂಗ್ ಎಂಬ ಯುವಕನು 1799 ರಲ್ಲಿ, ಲಾಹೋರ್ ನಗರವನ್ನು ವಶಪಡಿಸಿಕೊಂಡು. 1801 ರಲ್ಲಿ, ಪಂಜಾಬಿನ ದೊರೆ ಎಂದು ಸ್ವಯಂ ಘೋಷಿಸಿಕೊಂಡನು. ರಂಜಿತ್ ಸಿಂಗ್ ಮೊಘಲರ ಹಲವಾರು ರಾಜ ಪದ್ಧತಿಗಳನ್ನು ಪುನಃ ಪರಿಚಯಿಸಿದನು. ಅವುಗಳಲ್ಲಿ ತವೈಫ್ ಗಳ ನೃತ್ಯ ಸಂಸ್ಕೃತಿ ಕೂಡಾ ಒಂದಾಗಿತ್ತು. ಆಸ್ಥಾನದಲ್ಲಿ ನೃತ್ಯ ಪ್ರದರ್ಶನಗಳಿಂದಾಗಿ ಶಾಹಿ ಮೊಹಲ್ಲಾದ ಕಲಾವಿದೆಯರು ಮತ್ತೊಮ್ಮೆ ಆಸ್ಥಾನದಿಂದ ಪ್ರೋತ್ಸಾಹವನ್ನು ಪಡೆದರು. ವಾಸ್ತವವಾಗಿ, ದೊರೆ ರಂಜಿತ್ ಸಿಂಗ್ ಅಮೃತಸರ ಬಳಿಯ ಮಖನ್ ಪುರ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ ಕಾಶ್ಮೀರದ ಮುಸ್ಲಿಂ ಹೆಣ್ಣುಮಗಳು 'ಮೊರನ್' ಎಂಬ ಕಲಾವಿದೆಯನ್ನು ಪ್ರೀತಿಸುತ್ತಿದ್ದ ಕಾರಣದಿಂದ, ಹೀರಾ ಮಂಡಿಯ ಕಲಾವಿದೆಯರಿಗೆ ರಾಜಮನೆತನದ ಪ್ರೋತ್ಸಾಹವನ್ನು ನೀಡುತ್ತಿದ್ದನು. ಆದರೆ, ಎರಡು ನಿರ್ಣಾಯಕ ಆಂಗ್ಲೋ-ಸಿಖ್ ಯುದ್ಧಗಳ ನಂತರ (1845-49), ಸಿಖ್ ಸಾಮ್ರಾಜ್ಯವು ಪಂಜಾಬ್ ಪ್ರಾಂತ್ಯದಲ್ಲಿ ಕೊನೆಗೊಂಡಿತು. ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಈ ಪ್ರದೇಶವನ್ನು ವಶಪಡಿಸಿಕೊಂಡಿತು.
ಈ ಸಂದರ್ಭದಲ್ಲಿ ಜೀವನೋಪಾಯವನ್ನು ಕಳೆದುಕೊಂಡ ಅನೇಕ ತವೈಫ್ ಕಲಾವಿದೆಯರು ಲಾಹೋರಿನ ಹಳೆಯ ನಗರದ ಕಂಟೋನ್ಮೆAಟ್ ಪ್ರದೇಶದಲ್ಲಿ ಬ್ರಿಟಿಷ್ ಸೈನಿಕರಿಗೆ ಲೈಂಗಿಕ ಕಾರ್ಯಕರ್ತರಾದರು. ಈ ಪ್ರದೇಶವು ಮೊಘಲ್ ಯುಗದ ಶಾಹಿ ಮೊಹಲ್ಲಾದಿಂದ ಹತ್ತಿರವಿದ್ದು ಹೀರಾ ಮಂಡಿ ಎಂದೂ ಕರೆಯಲ್ಪಡುತ್ತಿದ್ದ ಕಾರಣ, ಇಲ್ಲಿಂದಲೂ ಅವರು ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ೧೮೫೦ ರ ದಶಕದ ಆರಂಭದಲ್ಲಿ, ನಗರದಲ್ಲಿ ಪ್ಲೇಗ್ ರೋಗ ಹರಡಿತು. ಸ್ಥಳೀಯ ಬ್ರಿಟಿಷ್ ಆಡಳಿತವು ತಮ್ಮ ಕಂಟೋನ್ಮೆಂಟ್ ಅನ್ನು ನಗರದ ಹೊರಗಿನ ಧರ್ಮಪುರಕ್ಕೆ ಸ್ಥಳಾಂತರಿಸಿತು. ಇಂತಹ ಏಳು ಬೀಳುಗಳ ನಡುವೆ ಹೀರಾ ಮಂಡಿಯು ಪ್ರದರ್ಶನ ಕಲೆಗಳ ಕೇಂದ್ರವಾಗಿ ತನ್ನ ಖ್ಯಾತಿಯನ್ನು ಉಳಿಸಿಕೊಂಡಿತು. ಚಕ್ರವರ್ತಿಗಳ ಬದಲಾಗಿ ಅಲ್ಲಿನ ಶ್ರೀಮಂತರು. ತವೈಫ್ ಗಳ ಪೋಷಕರಾದರು. ಹೀಗಾಗಿ ಹೀರಾಮಂಡಿ ಪ್ರದರ್ಶನ ಕಲೆಗಳ ಸಂಸ್ಕೃತಿಯು. ನೂರ್ ಜಹಾನ್, ಖುರ್ಷಿದ್ ಬೇಗಂ, ಮುಮ್ತಾಜ್ ಸೇರಿದಂತೆ ಅನೇಕ ಅತ್ಯುತ್ತಮ ಕಲಾವಿದೆಯರನ್ನು ಹುಟ್ಟುಹಾಕಿದೆ.
ಹೀರಾ ಮಂಡಿ ಪ್ರದೆಶವು ಹಿಂದೂಸ್ತಾನಿ ಸಂಗೀತದ ಕೇಂದ್ರ ಬಿಂದುವಾಗಿತ್ತು. ಭಾರತದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಡೇ ಗುಲಾಂ ಆಲಿಖಾನ್ ಅವರ ಕಿರಿಯ ಸಹೋದರರಾದ ಬರ್ಕತ್ ಅಲಿ ಖಾನ್ ಮತ್ತು ಮುಬಾರಕ್ ಅಲಿ ಖಾನ್ ಅವರ ನಿತ್ಯ ಸಂಗೀತ ಕಚೇರಿ ಅಥವಾ ಬೈಠಕ್ ಗಳು ಇಲ್ಲಿ ನಡೆಯುತ್ತಿದ್ದವು, ಈ ಸಂಗೀತಗಾರರನ್ನು ಅಲ್ಲಿನ ಜನರು ಇಂದಿಗೂ ಬಹಳ ಗೌರವದಿಂದ ನೆನಪಿಸಿಕೊಳ್ಳುತ್ತಾರೆ. ಆ ಕಾಲದಲ್ಲಿ ಈ ಬೈಠಕ್ಗಳು ಸಂಗೀತ ಕಲಿಕೆಯ ಕೇಂದ್ರಗಳಾಗಿದ್ದವು. ಉಸ್ತಾದ್ ದಮನ್ನ, ಉಸ್ತಾದ್ ಅಮೀರ್ ಖಾನ್ ಅವರ ನಿವಾಸಗಳು ಇಲ್ಲಿದ್ದವು. ಈ ಬೈಠಕ್ ಅನ್ನು 'ಹುಜ್ರಾ-ಎ ಶಾ ಹುಸೇನ್' ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಇದು ಅದೇ ಹೆಸರಿನ ಮಹಾನ್ ಸೂಫಿ ಕವಿಗೆ ವಿಶ್ರಾಂತಿ ನೀಡುತ್ತಿದ್ದ ಸ್ಥಳವಾಗಿತ್ತು. ಹೀರಾ ಮಂಡಿ ಚೌಕದ ವೇದಿಕೆಯು ಉಸ್ತಾದ್ ಬರ್ಕತ್ ಅಲಿ ಖಾನ್ ಅವರ ಬೈಠಕ್, ಠುಮ್ರಿ ಮತ್ತು ಗಜಲ್ ಗಾಯನಕ್ಕೆ ಹೆಸರುವಾಸಿಯಾಗಿತ್ತು, ಉಸ್ತಾದ್ ಚೋಟೆ ಆಶಿಕ್ ಅಲಿ ಖಾನ್ ಖಯಾಲ್ ಗಾಯನದ ಶ್ರೇಷ್ಠ ಪ್ರತಿಪಾದಕರಾಗಿದ್ದರು. ಉತ್ತರ ಭಾರತವೂ ಸೇರಿದಂತೆ ಇಡೀ ಧೇಶಾದ್ಯಂತ ಪ್ರಸಿದ್ಧವಾಗಿರುವ ಖವ್ವಾಲಿ ಎಂಬ ಸೂಫಿ ಭಕ್ತಿ ಗಾಯನದ ಸೃಷ್ಟಿಗೆ ಮತ್ತು ಸ್ಪೂರ್ತಿಗೆ ಲಾಹೋರ್ ನಗರದ ಹೀರಾಮಂಡಿ ಮೂಲಕಾರಣವಾಗಿದೆ.
ಇಲ್ಲಿನ ಹೆಚ್ಚಿನ ಮಹಿಳಾ ಲೈಂಗಿಕ ಕಾರ್ಯಕರ್ತೆಯರು ಮುಸ್ಲಿಮರಾಗಿದ್ದು, ಹೀರಾಮಂಡಿಯಲ್ಲಿ ಉತ್ತಮ ಆಸ್ತಿಗಳನ್ನು ಹೊಂದಿದ್ದರು. ಅವರು ನಿಧನರಾದಾಗ ತಮ್ಮ ಆಸ್ತಿಯನ್ನು ಮಸೀದಿ ಅಥವಾ ಇತರ ಕಲ್ಯಾಣ ಕಾರ್ಯಗಳಿಗೆ ದಾನ ಮಾಡುತ್ತಿದ್ದರು. ಬ್ರಿಟಿಷ್ ಆಳ್ವಿಕೆಯಲ್ಲಿ ಹೀರಾ ಮಂಡಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು, ಆ ಸಮಯದಲ್ಲಿ ದೂರದ ಪ್ರದೇಶಗಳಿಂದ ಜನರು ತಮ್ಮ ಹೆಣ್ಣುಮಕ್ಕಳನ್ನು ಲಾಹೋರ್ ಗೆ ಕರೆತಂದು ಸಂಗೀತ ಮತ್ತು ನೃತ್ಯ ಕಲೆಯನ್ನು ಕಲಿಯುವಂತೆ ಮಾಡುತ್ತಿದ್ದರು. ಲಖನ್ವಾಲ್ ಕಸೂರ್, ಸಿಯಾಲ್ ಕೋಟ್, ಫೈಜಾಬಾದ್, ಫಿರೋಜ್ ಪುರ್, ಲೂಧಿಯಾನ, ಜಲಂಧರ್, ಫಾಗ್ವಾರಾ ಸೇರಿದಂತೆ ಹಲವು ನಗರಗಳ ನೃತ್ಯ ಹುಡುಗಿಯರ ಕುಟುಂಬಗಳು ಹೀರಾ ಮಂಡಿ ಪ್ರದೇಶದಲ್ಲಿ ನೆಲೆಗೊಂಡಿದ್ದವು. ಲೈಂಗಿಕ ಕಾರ್ಯಕರ್ತರಿಗೆ ಮತ್ತು ಸಂಗೀತ, ನೃತ್ಯ ರಸಿಕರಿಗೆ ಮನರಂಜನೆಯ ಕೇಂದ್ರವಾಗಿದ್ದ ಹೀರಾ ಮಂಡಿಯ ದ್ವಂದ್ವ ಸಂಸ್ಕೃತಿಯು ಭಾರತದ ಸ್ವಾತಂತ್ರ್ಯದ ನಂತರವೂ ಮುಂದುವರೆಯಿತು.
ಇಲ್ಲಿನ ತವೈಫ್ಗಳಲ್ಲಿ ಹಲವಾರು ಮಂದಿ ಲೈಂಗಿಕ ಕಾರ್ಯಕರ್ತರಾಗಿದ್ದು, ಕಂಜರ್ ಸಮುದಾಯದಿಂದ ಬಂದವರಾಗಿದ್ದರು. ಪೂರ್ವ ಪಾಕಿಸ್ತಾನ ಸೇರಿದಂತೆ ಇತರ ಪ್ರದೇಶಗಳ ಮಹಿಳೆಯರನ್ನು ಬಡತನದಿಂದಾಗಿ ಅವರನ್ನು ಅಕ್ರಮವಾಗಿ ಸಾಗಣೆ ಮಾಡಿ ಹೀರಾ ಮಂಡಿಗೆ ಕರೆಕರಲಾಗಿತ್ತು. ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಮುಹಮ್ಮದ್ ಜಿಯಾ-ಉಲ್-ಹಕ್, 1978 ರಿಂದ 1988 ರವರೆಗೆ, ಹೀರಾ ಮಂಡಿಯಲ್ಲಿ ಮುಜ್ರಾಗಳು ಮತ್ತು ಲೈಂಗಿಕ ಕಾರ್ಯಕರ್ತರ ಸಂಸ್ಕೃತಿಯನ್ನು ಕೊನೆಗೊಳಿಸಲು ಕಠಿಣ ಪ್ರಯತ್ನ ಮಾಡಿದ್ದರು. ಆದರೆ, ಅದು ಯಶಸ್ವಿಯಾಗಲಿಲ್ಲ. ಅನೇಕ ವೇಶ್ಯಾಗೃಹಗಳು ಲಾಹೋರ್ನಿಂದ ಇತರ ಭಾಗಗಳಿಗೆ ಸ್ಥಳಾಂತರಗೊಂಡವು. ಇಂದಿಗೂ ಕೂಡಾ ಅನೇಕ ತವೈಫ್ ಪ್ರಸಿದ್ಧ ಕಲಾವಿದೆಯರ ಮಹಲುಗಳು ಹೀರಾಮಂಡಿಯ ವೈಭವಕ್ಕೆ ಸಾಕ್ಷಿಯಾಗಿವೆ. ಮಟ್ಟಿ ಬಾಯಿ ಎಂಬಾಕೆ ಕೆಂಪು ದೀಪ ಪ್ರದೇಶದ ಪ್ರಸಿದ್ಧ ನೃತ್ಯಗಾರ್ತಿಯಾಗಿದ್ದಳು ಅಲ್ಲಿನ ಒಂದು ವೃತ್ತಕ್ಕೆ ಆಕೆಯ ಹೆಸರಿಡಲಾಗಿದೆ. ಅಖ್ತರಿ ಎಂಬ ಕಲಾವಿದೆ ಸಿನಿಮಾ ನಟಿಯಾಗಿ ಹೀರಾ ಮಂಡಿಯ ಮುಖ್ಯ ರಸ್ತೆಯಲ್ಲಿ ವಾಸಿಸುತ್ತಿದ್ದಳು. ಜಮೀನ್ದಾರ್ ಮತ್ತು ಖಾಂದಾನ್ ಎಂಬ ಪ್ರಸಿದ್ಧ ಚಲನಚಿತ್ರಗಳಲ್ಲಿ ಆಕೆ ನಟಿಸಿದ್ದಳು. ಪಾಕಿಸ್ತಾನದ ಪ್ರಸಿದ್ಧ ಕಾದಂಬರಿಕಾರ ಗುಲಾಮ್ ಅಬ್ಬಾಸ್ ಈ ಪ್ರದೇಶದ ನಿವಾಸಿಯಾಗಿದ್ದರಿಂದ ಅದೇ ಹೀರಾ ಮಂಡಿಯಲ್ಲಿ ಕುಳಿತು ತಮ್ಮ 'ಆನಂದಿ' ಎಂಬ ಕಾದಂಬರಿಯನ್ನು ಬರೆದಿದ್ದಾರೆ.
ಪಂಜಾಬಿನ ದೊರೆ ರಂಜೀತ್ ಸಿಂಗ್ ಆಳ್ವಿಕೆಯ ಸಮಯದಲ್ಲಿ ಆತನ ಸೇನಾ ದಳಪತಿ ಕಾಲೂ ಸಿಂಗ್ ಎಂಬುವನು ಕಾಶ್ಮೀರದ ನೂರಾರು ಮಹಿಳೆಯರನ್ನು ಬಂಧಿಸಿ ಲಾಂಡಾ ಬಜಾರ್ ಪ್ರದೇಶದಲ್ಲಿ ಲೈಂಗಿಕ ಕಾರ್ಯಕರ್ತರನ್ನಾಗಿ ಮಾಡಿದ್ದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ಐತಿಹಾಸಿಕ ಉಲ್ಲೇಖಗಳ ಪ್ರಕಾರ, ಮೊಘಲ್ ಆಳ್ವಿಕೆಯಲ್ಲಿ ಕೇವಲ ನೃತ್ಯ ಹುಡುಗಿಯರು ಮಾತ್ರ ಇದ್ದರು ಆದರೆ ಸಿಖ್ ದೊರೆಯ ಆಳ್ವಿಕೆಯಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಪರಿಚಯಿಸಲಾಯಿತು. ಸಿಖ್ ಸರ್ದಾರ್ಗಳು ಯಾವಾಗಲೂ ಸುಂದರ ಹುಡುಗಿಯರನ್ನು ಸಂತೋಷಕ್ಕಾಗಿ ತಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಭಾರತ ಮತ್ತು ಪಾಕ್ ವಿಭಜನೆಯ ಸಂದರ್ಭದಲ್ಲಿ ನೊಂದವರ ಬದುಕನ್ನು ‘’ಮಾಯದ ಗಾಯಗಳು’’ ಎಂಬ ಶೀರ್ಷಿಕೆಯಡಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ಲೇಖಕನಿಗೆ ಗಡಿಯಾಚೆಗಿನ ಲಾಹೋರ್ ಪ್ರದೇಶದ ಹೆಣ್ಣು ಮಕ್ಕಳ ಕುರಿತಂತೆ ಸಿಕ್ಕ ಮಾಹಿತಿಗಳವು.
( ಜುಲೈ ತಿಂಗಳ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಮಂಗಳವಾರ, ಜೂನ್ 30, 2026

ನೆಹರು ವ್ಯಕ್ತಿತ್ವ ಕುರಿತ ಮಹತ್ವದ ಕೃತಿ ನೆಹರು ಕಲ್ಪನೆಯ ಭಾರತ

 


 


ಕಳೆದ ಹದಿನಾಲ್ಕು ವರ್ಷಗಳಿಂದ ನೆಹರು ಅವರನ್ನು ತೆಗೆಳುವುದನ್ನೇ ಕಾಯಕ ಮಾಡಿಕೊಂಡಿರುವ ಬಿ.ಜೆ.ಪಿ. ನಾಯಕರು  ಗಾಂಧಿ ಮತ್ತು ನೆಹರು ಕುರಿತಾಗಿ  ಮಾನಸಿಕ ರೋಗಿಗಳಾಗಿದ್ದಾರೆ.  ಹಸಿ ಸುಳ್ಳುಗಳಿಂದ ಕೂಡಿದ ನಕಲಿ ಇತಿಹಾಸವನ್ನು ಸೃಷ್ಟಿ ಮಾಡುವುದು ಅವರೆಲ್ಲರ ಮುಖ್ಯ ಗುರಿಯಾಗಿದೆ. ನೆಹರು ಹೆಸರು ಹೇಳಲು ಯೋಗ್ಯತೆ ಇಲ್ಲದ ಪ್ರಧಾನಿ ನರೇಂದ್ರ ಮೋದಿಗೆ  ತನ್ನ ಆಡಳಿದ ವೈಫಲ್ಯಗಳನ್ನು ಮುಚ್ಚಿಹಾಕಲು ಜನರನ್ನು ನೆಹರು ಅವರತ್ತ ಗಮನ ಸೆಳೆಯುವುದು ದಿನನಿತ್ಯದ ಕಾಯಕವಾಗಿದೆ.   ನೆಹರು ಪ್ರಧಾನಿಯಾಗಿ ಐನೂರು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿಹೋಗಿದ್ದರೆ, ನಾನು ರಾಷ್ಟçಕ್ಕಾಗಿ ಸಾಲ ಮಾಡುವ ಸ್ಥಿತಿ ಬರುತ್ತಿರಲಿಲ್ಲ  ಎಂಬ ಮಾತುಗಳು ಮಾತ್ರ ಈ ಮಹಾಶಯನಿಂದ  ಬಾಕಿ ಉಳಿದಿದೆ.  ಇಂತಹ ಸಮಯದಲ್ಲಿ ಭಾರತದ ಶ್ರೇಷ್ಠ ಇತಿಹಾಸ ತಜ್ಞರಾದ ಆದಿತ್ಯ ಮುಖರ್ಜಿಯವರು ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ್ದ ನೆಹರು ಕಲ್ಪನೆಯ ಭಾರತ ಎಂಬ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೃತಿಯಾಗಿ ಇದೀಗ ಸೇರ್ಪಡೆಯಾಗಿದೆ. ಕೃತಿಯನ್ನು ಕನ್ನಡಕ್ಕೆ ತಂದ ಡಾ.ಬಿ.ಆರ್.ಮಂಜುನಾಥ್ ಮತ್ತು ಡಾ.ಹೆಚ್.ಕೆ.ಜಯಲಕ್ಷಿö್ಮ ಹಾಗೂ ಕೃತಿಯನ್ನು ಪ್ರಕಟಿಸಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆಗೆ ಅಭಿನಂದನೆಗಳು.

 ಕನ್ನಡದ ಓರ್ವ ಲೇಖಕನಾಗಿ ಹಾಗೂ ಹಿರಿಯ ಪತ್ರಕರ್ತನಾಗಿ ಆಧುನಿಕ ಭಾರತದ ಇತಿಹಾಸವನ್ನು ವಿಶೇಷವಾಗಿ ಸ್ವಾತಂತ್ರ್ಯಾನಂತರದ ಇತಿಹಾಸವನ್ನು ಗಂಭೀರವಾಗಿ ಓದಿಕೊಂಡಿರುವ ಮತ್ತು ಓದುತ್ತಿರುವ ನನಗೆ, ಇಂದಿನ ಕಲಸು ಮೇಲೋಗರ ಇತಿಹಾಸದ ಭಾರತದಲ್ಲಿ ಆದಿತ್ಯ ಮುಖರ್ಜಿ, ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಕೆ.ಎನ್. ಪಣಿಕ್ಕರ್ ರಂತಹ ವಾಸ್ತವ ದೃಷ್ಟಿಕೋನದ ಇತಿಹಾಸ ತಜ್ಞರು ಆಶಾಕಿರಣವಾಗಿ ಕಾಣುತ್ತಾರೆ. ಟಿಪ್ಪು ಸುಲ್ತಾನ್ ನಿಂದ ಹಿಡಿದುಗಾಂಧಿ ಮತ್ತು ನೆಹರು ಕುರಿತು ಹುಸಿ ಇತಿಹಾಸವನ್ನು ಸೃಷ್ಟಿ ಮಾಡುತ್ತಿರುವ ಬಿ.ಜೆ.ಪಿ. ಆಸ್ಥಾನದ ವಿದೂಷಕರಿಗೆ ಇವರೆಲ್ಲರೂ ಹೊಟ್ಟೆಯೊಳಗಿನ ಕರುಳು ಹುಣ್ಣುಗಳಂತೆ ಬಾಧಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ, ಆದಿತ್ಯಾ ಮುಖರ್ಜಿ ಮತ್ತು ಮೃದುಲಾ ಮುಖರ್ಜಿ ಇಬ್ಬರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದ  ‘’ ಆರ್.ಎಸ್.ಎಸ್. ಸ್ಕೂಲ್ ಟೆಕ್ಸ್ಟ್ ಅಂಡ್ ಮರ್ಡರ್ ಆಫ್ ಮಹಾತ್ಮ’’ ಎಂಬ ಕೃತಿಯು ಸಂಘ ಪರಿವಾರದ ಮುಖವಾಡವನ್ನು ಕಳಚಿ ಹಾಕಿತ್ತು. ಕೇವಲ ನೂರ ಮುವತ್ತು ಪುಟಗಳಷ್ಟು ಇರುವ ಕೃತಿಯಲ್ಲಿ ನಲವತ್ತು ಪುಟಗಳಷ್ಟು ಹೆಚ್ಚುವರಿಯಾಗಿ ಇತಿಹಾಸದ ಅಧಿಕೃತ ಅಂಕಿ ಅಂಶದ ಟಿಪೊಣಿಗಳ ದಾಖಲೆಗಳನ್ನು ನೀಡಿ, ವಿ.ಡಿ. ಸಾವರ್ಕರ್, ಹುಸಿ ಸ್ವಾತಂತ್ರ ಹೋರಾಟಗಾರ ಮತ್ತು ಪೊಳ್ಳು ವ್ಯಕ್ತಿತ್ವವುಳ್ಳ ಮನುಷ್ಯ ಎಂಬುದನ್ನು ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ.

 ಗಾಂಧೀಜಿಯವರು ಹತ್ಯೆಯಾದ ನಂತರ, ನಾಥುರಾಮ್ ಗೋಡ್ಸೆ ಮತ್ತು ಸಂಗಡಿಗರ ಜೊತೆ ಸಾವರ್ಕರ್ ಕೂಡಾ ಬಂಧಿತರಾಗಿದ್ದರುದೆಹಲಿ ಕೆಂಪುಕೋಟೆ ಒಳಗೆ ಮೊಘಲ್ ದೊರೆಗಳು ಟಗರು ಪಂದ್ಯ ನಡೆಸುತ್ತಿದ್ದ ನೆಲಮಹಡಿಯಲ್ಲಿ  ಗಾಂಧಿ ಹತ್ಯೆ ಕುರಿತು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ನಡೆಯುತ್ತಿದ್ದ ವಿಚಾರಣೆಯ ಸಂದರ್ಭದಲ್ಲಿ   ವಿ.ಡಿ.ಸಾವರ್ಕರ್, ಎಂದಿಗೂ ಗೋಡ್ಸೆ ಮತ್ತು ಸಂಗಡಿಗರತ್ತ ತಿರುಗಿ ನೋಡಲಿಲ್ಲ ಮತ್ತು ಅವರೊಂದಿಗೆ  ಮಾತನಾಡಲಿಲ್ಲ. ನನಗೂ ಇವರಿಗೂ ಯಾವ ಸಂಬಂಧವಿಲ್ಲ, ಇವರೆಲ್ಲರೂ ನನಗೆ ಅಪರಿಚಿತರು ಎಂಬಂತೆ ನಡೆದುಕೊಂಡರು. ವಾಸ್ತವವಾಗಿ ಗಾಂಧೀಜಿಯವರ ಹತ್ಯೆಗಾಗಿ ಬಳಸಿದ ಪಿಸ್ತೂಲ್ ಅನ್ನು ಗ್ವಾಲಿಯರ್ ನಗರ ಆರ್ಯುವೇದ ವೈದ್ಯ ಡಾ.ದತ್ತಾತ್ರೇಯ ಪರ್ಚುರೆ ಎಂಬಾತನ ಮೂಲಕ  ಸಾವರ್ಕರ್ ಕೊಡಿಸಿದ್ದರು ಎಂಬುದನ್ನು ಅಂದಿನ ಬಾಂಬೆ ಪೊಲೀಸರು ಪತ್ತೆ ಹಚ್ಚಿದ್ದರು. ಬಾಂಬೆ ಪೊಲೀಸ್ ಡೈರಿ ಎಂಬ 750 ಪುಟಗಳ ಮಾಹಿತಿಯನ್ನು ಇಟ್ಟುಕೊಂಡು ಪ್ರಾನ್ಸ್ ಲೇಖಕ ಡಾಮಿನಿಕ್ಯೂ ಲೇಪಿಯರ್ ಎಂಬುವರು ಲ್ಯಾರಿ ಕೊಲಿನ್ಸ್ ಜೊತೆಗೂಡಿ ರಚಿಸಿರುವ  ‘’ಫ್ರೀಡಂ ಅಟ್ ಮಿಡ್ ನೈಟ್ ‘’ ಎಂಬ ಕೃತಿಯಲ್ಲಿ ವಿಷಯವನ್ನು ವಿವರವಾಗಿ ದಾಖಲಿಸಿದ್ದಾರೆ.

 ಸಾಕ್ಷಾಧಾರಗಳ ಕೊರತೆಯ ಆಧಾರದ ಮೇಲೆ ಗಾಂಧಿ ಹತ್ಯೆಯ ಆರೋಪಿಗಳ ಪಟ್ಟಿಯಿಂದ ವಿ.ಡಿ.ಸಾವರ್ಕರ್ ಬಿಡುಗಡೆಯಾದರು. ನಾಥುರಾಂ ಗೋಡ್ಸೆ ಮತ್ತು ನಾರಾಯಣ್ ಆಪ್ಟೆಗೆ ಮರಣದಂಡನೆಯ ಶಿಕ್ಷೆ ಹಾಗೂ  ಇತರರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಶಿಕ್ಷೆ ಪ್ರಕಟವಾದ ನಂತರ  ಗೋಡ್ಸೆ, ತನ್ನ ವಕೀಲರ ಜೊತೆ ಮಾತನಾಡುತ್ತಾ, ‘’ ಮನುಷ್ಯನನ್ನು ಹಿಂದೂ ಧರ್ಮದ ಮಹಾನ್ ರಕ್ಷಕ ಎಂದು ನಾವು ನಂಬಿದ್ದು ತಪ್ಪಾಯಿತು’’ ಎಂದು ನುಡಿದಿದ್ದ ಮಾತನ್ನು ಆದಿತ್ಯ ಮುಖರ್ಜಿಯವರು ತಮ್ಮ ಕೃತಿಯಲ್ಲಿ ವಕೀಲರ ಡೈರಿಯ ಪುಟದ ಜೊತೆಗೆ ಉಲ್ಲೇಖಿಸಿದ್ದರು. ಹಿರಿಯ ವಕೀಲರಾಗಿದ್ದ ಎಲ್.ಜಿ. ನೂರಾನಿಯವರು ಸಹ ತಮ್ಮ ಒಂದು ಕೃತಿಯಲ್ಲಿ ಪ್ರಸಂಗವನ್ನು ದಾಖಲಿಸಿದ್ದಾರೆ. ಇಂತಹ ವಸ್ತುನಿಷ್ಠ ಇತಿಹಾಸಕಾರ ಹಾಗೂ ದೆಹಲಿಯ ಜವಹರಲಾಲ್ ನೆಹರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಆದಿತ್ಯ ಮುಖರ್ಜಿಯವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇತಿಹಾಸ ಕುರಿತು ಗಮನ ಸೆಳೆದವರು. ನೆಹರು ಕಲ್ಪನೆಯ ಭಾರತ ಕೃತಿಯಲ್ಲಿ ಅವರು ನೀಡಿರುವ ಅಧಿಕೃತ ದಾಖಲೆಗಳು ನೆಹರು ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜೊತೆಗೆ ಅವರ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತವೆ.

 ಪೀಠಿಕೆ ಮತ್ತು ಪ್ರಸ್ತಾವನೆಯ ಅಧ್ಯಾಯಗಳಲ್ಲಿ ನೆಹರು ಅವರನ್ನು ಸಂಘ ಪರಿವಾರವು ರಾಕ್ಷಸೀಕರಿಸುವ ಕೃತ್ಯವನ್ನು ಆಧಾರಗಳ ಸಮೇತ, ನಿರಾಕರಿಸುವ ಲೇಖಕರು, ಭಾರತದಲ್ಲಿ ನೆಹರು ಕೂಡಾ ಓರ್ವ ಶ್ರೇಷ್ಠ ಇತಿಹಾಸಕಾರ ಎಂದು ಹೇಳಿರುವುದು ಗಮನಾರ್ಹ ಸಂಗತಿ. ನೆಹರು ಸೆರೆಮನೆಯಲ್ಲಿ  ಬ್ಯಾಡ್ಮಿಂಟನ್ ಆಟ ಆಡುತ್ತಾ ಕಾಲಕಳೆಯುತ್ತಿದ್ದರು ಎಂದು  ಹೇಳುವ ಸಂಘ ಪರಿವಾರದ ಮೂರ್ಖರು  ಆದಿತ್ಯ ಮುಖರ್ಜಿಯವರ ಕೃತಿಯನ್ನು  ಓದಲೇಬೇಕುಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಒಟ್ಟು ಒಂಬತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ನೆಹರು, ಶಿಕ್ಷೆ ಅನುಭವಿಸುತ್ತಿದ್ದ ದಿನಗಳಲ್ಲಿ ಓದು ಮತ್ತು ಬರೆವಣಿಗೆಯಲ್ಲಿ ನಿರತರಾಗಿದ್ದರು. ಅವರು ಸಂದರ್ಭದಲ್ಲಿ ರಚಿಸಿಸುವ ಡಿಸ್ಕವರಿ ಆಫ್ ಇಂಡಿಯಾ ಎಂಬ ಕೃತಿಯು ಇಡೀ ಭಾರತದ ಇತಿಹಾಸವನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುತ್ತದೆತಮ್ಮ ಪುತ್ರಿ ಇಂದಿರಾ ಅವರಿಗೆ  ಸೆರೆಮನೆಯಿಂದ ಬರೆದಿರುವ ಪತ್ರಗಳ ಸಂಕಲನವಾದ ‘’ ಲೆಟರ್ಸ್ ಫ್ರಮ್ ಪಾದರ್ ಟು ಹಿಸ್ ಡಾಟರ್’’ ಎಂಬ ಕೃತಿಯನ್ನು ಓದಿದಾಗ ಮಾತ್ರ ನೆಹರು ಅವರ ಅಪರಿಮಿತ ಜ್ಞಾನದ ಬಗ್ಗೆ ನಮಗೆ ಅರಿವಾಗಬಲ್ಲದು. ಲಂಡನ್ ನಗರದಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಆಗಮಿಸಿದ ನೆಹರು, ಕಾಲ ಘಟ್ಟದ ವಕೀಲಿ ವೃತ್ತಿಯಲ್ಲಿ ಹೇರಳವಾಗಿ ಹಣ ಸಂಪಾದಿಸಬಹುದಿತ್ತು. ಆದರೆ, ಅವರು ನೇರವಾಗಿ ಸ್ವಾತಂತ್ರö್ಯ ಹೋರಾಟಕ್ಕೆ ದುಮುಕಿದರು. 1916 ರಲ್ಲಿ ಲಕ್ನೋ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮವಾಗಿ ಗಾಂಧಿಯವರನ್ನು ಭೇಟಿ ಮಾಡಿದ ನೆಹರು ಅಂದಿನಿಂದ ಅವರ ಮಾನಸ ಪುತ್ರನಂತೆ ಬದುಕಿದರು.

 ನೆಹರು ಧರಿಸುತ್ತಿದ್ದ ಅತ್ಯಾಧುನಿಕ ವೇಷ ಭೂಷಣಗಳನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ಅವರು ನೀಡಿದ್ದ ‘’ ನಾನು ಪೂರ್ವ ಮತ್ತು ಪಶ್ಚಿಮಗಳ ಸಂಸ್ಕೃತಿಯ ಸಂಗಮದಂತೆ ಕಾಣಿಸುತ್ತೇನೆ ನಿಜಆದರೆ, ನನ್ನ ಎದೆಯೊಳಗೆ ಸದಾ ಮಿಡಿಯುವುದು ಭಾರತದ ಬಹುಸಂಸ್ಕೃತಿ ಮಾತ್ರ’’ ಎಂಬ ಉತ್ತರವು ಅವರ ವಿಶಾಲ ಮನೋಭಾವಕ್ಕೆ ಸಾಕ್ಷಿಯಾಗಿದೆ. ವಾಸ್ತವವಾಗಿ ಧರ್ಮದ ಹೆಸರಿನಲ್ಲಿ ಭಾರತ ವಿಭಜನೆಯಾಗುವುದು ಅವರಿಗೆ ಬೇಕಿರಲಿಲ್ಲ. ಆದರೆ, ಮಹಮ್ಮದ್ ಆಲಿ ಜಿನ್ನಾ ಭಾರತೀಯ ಕಾಂಗ್ರೆಸ್ ಪಕ್ಷವನ್ನು ಹಿಂದುಗಳ ಪಕ್ಷ ಎಂಬ ಲೇಪನ ಹಚ್ಚಿ ಮುಸ್ಲಿಂರ ಮನವೊಲಿಸಲು ಹೊರಟಾಗ, ವಿಭಜನೆ  ಅವರ ಪಾಲಿಗೆ ಅನಿವಾರ್ಯವಾಯಿತು. ಸ್ವಾತಂತ್ರ್ಯಾ ನಂತರದ ಭಾರತದ ಕೋಮುವಾದ ಕುರಿತು ಅವರ ತಾಳಿದ ನಿಷ್ಠುರ ನಿಲುವು ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ. ಆದಿತ್ಯ ಮುಖರ್ಜಿಯವರು, ಕೋಮುವಾದ ಕುರಿತಂತೆ ನೆಹರು ಅವರಿಗೆ ಇದ್ದ ಸ್ಪಷ್ಠವಾದ ಪರಿಕಲ್ಪನೆಯನ್ನು ಹೀಗೆ ವಿವರಿಸಿದ್ದಾರೆ. ‘’ ವಾಸ್ತವವಾಗಿ ನೆಹರು ಬಹುಸಂಖ್ಯಾತ ಕೋಮುವಾದದ ಬಗ್ಗೆ ಎಷ್ಟು ವಿಮರ್ಶಾತ್ಮಕವಾಗಿದ್ದರೋ, ಅಲ್ಪ ಸಂಖ್ಯಾತ ಕೋಮುವಾದದ ಬಗ್ಗೆಯೂ ಹಾಗೆಯೇ ಇದ್ದರು. ಇವೆರೆಡರ ಮಧ್ಯೆ ಯಾವುದೇ ಮುಖ್ಯ ವ್ಯೆತ್ಯಾಸವಿಲ್ಲ ಎಂದು ಅವರು ಹೇಳುತ್ತಿದ್ದರು

ಸ್ವಾತಂತ್ರ್ಯಾ ನಂತರದ ಭಾರತವನ್ನು ಮುನ್ನಡೆಸುವ ಜವಾಬ್ದಾರಿಯು ನೆಹರು ಹೆಗಲಿಗೆ ಬಿದ್ದಾಗ, ಅವರ ಮುಂದೆ ಪರ್ವತದಷ್ಟು  ಸಮಸ್ಯೆಗಳಿದ್ದವುಮುವತ್ತೇಳು ಕೋಟಿ ಜನಸಂಖ್ಯೆ ಇದ್ದ ಅಂದಿನ ಭಾರತದಲ್ಲಿ ಶೇಕಡಾ ಎಂಬತ್ತರಷ್ಟು ಮಂದಿ ಅನಕ್ಷರಸ್ಥರಿದ್ದರು. ಬಡತನ, ಹಸಿವು, ಜಾತಿಯತೆ ಆಧಾರಿತ ಶ್ರೇಣಿಕೃತ ಸಮಾಜ ಹಾಗೂ ಭೂಮಿಯ ಮೇಲಿನ ನರಕಗಳು ಎಂಬಂತಿದ್ದ ಗ್ರಾಮೀಣ ಪ್ರದೇಶದ ಹಳ್ಳಿಗಳು, ದುಡಿಯುವ ಕೈಗಳಿಗೆ ಕೆಲಸವಿಲ್ಲದ ಸ್ಥಿತಿ ಇಂತಹ ಸಮಸ್ಯೆಗಳು ಅವರ ಮುಂದಿದ್ದವುಇಡೀ ದೇಶಾದ್ಯಂತ ಬರಡು ಹಾಗೂ ಮಳೆಯಾಶ್ರಿತ ಭೂಮಿ, ಆಹಾರ ಧಾನ್ಯಗಳ ಕೊರತೆಯ ಜೊತೆಗೆ ಜನಸಾಮಾನ್ಯರನ್ನು ಶಿಕ್ಷಣದತ್ತ ಕರೆದೊಯ್ಯುವ ಜವಾಬ್ದಾರಿಗಳಿದ್ದವುಇವೆಲ್ಲವುಗಳಿಗೆ ಅವರು ಗಾಂಧೀಜಿಯವರ ಹಿಂದ್ ಸ್ವರಾಜ್ ಕೃತಿಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ಅವರು ಗಾಂಧಿಯವರ ಚಿಂತನೆಗಳಿಗೆ ವಿರುದ್ಧವಾಗಿ ಸಮೃದ್ಧ ಭಾರತವನ್ನು ನಿರ್ಮಿಸಲು, ಮಿಶ್ರ ಆರ್ಥಿಕತೆ ಯೋಜನೆಯಡಿ, ಪಂಚವಾರ್ಷಿಕ ಯೋಜನೆಗಳ ಅಡಿಯಲ್ಲಿ ಅಣೆಕಟ್ಟು, ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಿದರು ಜೊತೆಗೆ ವಿಜ್ಞಾನದ ಬೆಳವಣಿಗೆ ಆದ್ಯತೆ ನೀಡಿದರು. ಅಣೆಕಟ್ಟುಗಳ ಮೂಲಕ ಏಕಕಾಲಕ್ಕೆ ಜಲವಿದ್ಯುತ್ ಉತ್ಪಾದನೆ ಮತ್ತು ಕೃಷಿ ಚಟುವಟಿಕೆಗೆ ನೀರು ಒದಗಿಸುವುದು ಅವರಿಗೆ ಮುಖ್ಯವಾಗಿತ್ತು.

 ನೆಹರು ಅವರ ಬಹುತೇಕ ಕ್ರಿಯೆಗಳು 1947 ಆಗಸ್ಟ್ 15 ರಿಂದ ಶೂನ್ಯದಿಂದ ಪ್ರಾರಂಭವಾದವು. ಭಾರತವನ್ನಾಳಿದ ಬ್ರಿಟಿಷರು ನಮಗೆ  ದೇಶದಲ್ಲಿ ಕಸವನ್ನು ಹೊರತು ಪಡಿಸಿದರೆ ಬೇರೇನೂ ಬಿಟ್ಟು ಹೋಗಿರಲಿಲ್ಲಅವರು ದೇಶವನ್ನು  ತೊರೆದ ನಂತರ ಭಾರತವು ಒಂದು ಸೂಜಿಯನ್ನು ಉತ್ಪಾದಿಸುವ ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ದೇಶದ ಇಪ್ಪತ್ತು ನಗರಗಳಿಗೆ ಮಾತ್ರ ವಿದ್ಯುತ್ ಲಭ್ಯವಿತ್ತುದೇಶದ ಸಂಸ್ಥಾನದ ಮಾಜಿ ದೊರೆಗಳ ಅರಮನೆಯಂತಹ ನಿವಾಸಗಳಿಗೆ  ದೂರವಾಣಿ ಸೌಲಭ್ಯವಿತ್ತು. ಯಾವುದೇ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಇರಲಿಲ್ಲ. ಕೆಲವು ನದಿಗಳಿಗೆ ನಿರ್ಮಿಸಲಾಗಿದ್ದ ಕೃಷ್ಣರಾಜ ಸಾಗರಂತಹ  ಸಣ್ಣ ಪ್ರಮಾಣದ ಅಣೆಕಟ್ಟುಗಳು ಮಾತ್ರ ಇದ್ದವು. ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯಾಗಲಿ, ಶಿಕ್ಷಣ ಸಂಸ್ಥೆಗಳಿರಲಿಲ್ಲ, ಕೃಷಿ ಉತ್ಪಾದನೆಗೆ ಬೇಕಾದ ರಸಾಯನಿಕ ಗೊಬ್ಬರ ಮತ್ತು  ಕಟ್ಟಡ ನಿರ್ಮಾಣಕ್ಕೆ ಅವಶ್ಯಕತೆ ಇದ್ದ ಸಿಮೆಂಟ್ ಉತ್ಪಾದಿಸುವ ಕಾರ್ಖಾನೆಗಳು ಇರಲಿಲ್ಲದೇಶದ ಎಲ್ಲೆಡೆ  ಹಸಿವು ಮತ್ತು ಅಪೌಷ್ಟಿಕತೆ ತಾಂಡವಾಡುತ್ತಿತ್ತು. ಇಡೀ ದೇಶಾದ್ಯಂತ ಬಾಣಂತಿಯರು ಹಾಗೂ ಶಿಶು ಮರಣಗಳು ಸಾಮಾನ್ಯವಾಗಿದ್ದವು.

 ಇಂತಹ ಸ್ಥಿತಿಯಲ್ಲಿ ಹದಿನೇಳು ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ ನೆಹರು, ದೇಶಾದ್ಯಂತ ಎಲ್ಲಾ ಮೂಲಭೂತ ಸೌಕರ್ಯಗಳ ಜೊತೆಗೆ  ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ನೀಡುವ ವೈದ್ಯಕೀಯ ಮತ್ತು ತಾಂತ್ರಿಕ ಜ್ಞಾನದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರುಇಸ್ರೋ ಸಂಸ್ಥೆಯನ್ನು ಒಳಗೊಂಡAತೆ ನವರತ್ನ ಸಾರ್ವಜನಿಕ ಸಂಸ್ಥೆಗಳು ಹೆಸರಿನಲ್ಲಿ  ಹೆಚ್.ಎಂ.ಟಿ. ಹೆಚ್.,ಎಲ್. ಬಿ..ಎಲ್. .ಟಿ. ನಂತಹ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಸ್ಥಾಪಿಸಿಭವ್ಯ ಭಾರತದ ನಿರ್ಮಾಣಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟರು. ಕೃತಿಯಲ್ಲಿ ಆದಿತ್ಯ ಮುಖರ್ಜಿಯವರು ನೆಹರು ಅವರು ಸಂಸತ್ತಿನ ಒಳಗೆ ವಿರೋಧ ಪಕ್ಷಗಳ ನಾಯಕರ ಜೊತೆ ಸಂಹವನ ನಡೆಸುತ್ತಿದ್ದ ವೈಖರಿಯ ಜೊತೆಗೆ ಅವರ ಅಪರೂಪದ ಭಾಷಣದ ತುಣುಕುಗಳನ್ನು ದಾಖಲಿಸಿದ್ದಾರೆ. ಅದೇ ರೀತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುರಿತಂತೆ ನೆಹರು ಹೇಳಿದ ‘’ ನಮಗೆ ಯಾವುದು ಇಷ್ಟವೋ ಅಂತಹ ವಿಷಯಗಳಿಗೆ ಮಾತ್ರ ಒಪ್ಪಿಗೆ ನೀಡುವುದು ಪತ್ರಿಕಾ ಸ್ವಾತಂತ್ರ್ಯ ಎನಿಸುವುದಿಲ್ಲ, ನಾಗರೀಕ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯ ಎಂದರೆ, ನಮ್ಮ ಇಷ್ಟಕ್ಕೆ ವಿರೋಧವಾಗಿ ಅಥವಾ ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ವಿಷಯಗಳಿಗೂ ಮುಕ್ತ ಸ್ವಾತಂತ್ರ್ಯವಿರಬೇಕು.’’ ವಿಷಯವನ್ನು ನೆಹರು ಕುರಿತು ಭಜನೆ ಮಾಡುವ ಇಂದಿನ ಪ್ರಧಾನಿ ಮೋದಿಯವರು ಅರ್ಥ ಮಾಡಿಕೊಳ್ಳಬೇಕಿದೆ.

 ಅಪರೂಪದ ಮಾಹಿತಿಯ ಕೃತಿಯ ಜೊತೆಗೆ ಅಮೇರಿಕಾದ ಲೇಖಕಿ ಕ್ಯಾಥರಿನ್ ಪ್ರಾಂಕ್ ಇಂದಿರಾ ಗಾಂಧಿ ಕುರಿತು ‘’ ಲೈಫ್ ಆಫ್ ಇಂದಿರಾ  ಗಾಂಧಿ’’ ಎಂಬ ಐನೂರು ಪುಟಗಳ ಜೀವನ ಚರಿತ್ರೆಯನ್ನು ಎಲ್ಲರೂ ಓದಬೇಕಿದೆ. ಕೃತಿಯ ಮೊದಲ ನೂರು ಪುಟಗಳಲ್ಲಿ ನೆಹರು ಕುರಿತಂತೆ ಅಪರೂಪದ ಮಾಹಿತಿಗಳಿವೆ. ಇಂದಿರಾ ಅವರ ಪತಿ ಫಿರೋಜ್ ಗಾಂಧಿಯವರು ನೆಹರು ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದುಕೊಂಡು, ತಮ್ಮ ಮಾವನವರ ಆಳ್ವಿಕೆಯಲ್ಲಿ ನಡೆದ ಸಾರ್ವಜನಿಕರ ಹಣದ ದುರಪಯೋಗದ ಬಗ್ಗೆ ಧ್ವನಿ ಎತ್ತಿ ಹಣಕಾಸು ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರನ್ನು ಸಚಿವ ಸಂಪುಟಕ್ಕೆ ರಾಜಿನಾಮೆ ನೀಡುವಂತೆ ಮಾಡಿದ್ದರು. ಖಾಸಾಗಿ ಉದ್ಯಮಿ ಹರಿದಾಸ್ ಮುಂಧ್ರಾ ಎಂಬಾತನು ನಷ್ಟದಲ್ಲಿರುವ ಕೈಗಾರಿಕೆಗಳ ಶೇರು ಖರೀದಿಸಲು ಎಲ್..ಸಿ. ಸಂಸ್ಥೆ ಜೊತೆಗೆ ಗುಪ್ತವಾಗಿ ಒಪ್ಪಂದ ಮಾಡಿಕೊಂಡಿದ್ದ ಹಗರಣವನ್ನು 1957 ಡಿಸಂಬರ್ ತಿಂಗಳ ಸಂಸತ್ ಅಧಿವೇಶನದಲ್ಲಿ ಫಿರೋಜ್ ಗಾಂಧಿಯವರು  ಬಯಲಿಗೆಳೆದಿದ್ದರು. ನೆಹರು ಅವರ ಇಂತಹ  ಪ್ರಾಮಾಣಿಕ ನಡುವಳಿಕೆಯನ್ನು ನಾವು ಇಂದಿನ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಕಾಣಲು ಸಾಧ್ಯವೆ?

 ಕಾಂಗ್ರೆಸ್ ಕಾರ್ಯಕರ್ತರು ಎಂದರೆ, ನಾಯಕರ  ಭಜನೆ ಮಾಡುವುದು ಮತ್ತು ಸಚಿವ  ಸ್ಥಾನದ  ಹುದ್ದೆಗಾಗಿ  ರಸ್ತೆಯಲ್ಲಿ ಕುಳಿತು ಘೋಷಣೆ ಮಾಡುವುದಲ್ಲ. ಇಂತಹ  ಬೌದ್ಧಿಕ ಗುಲಾಮಗಿರಿತನವನ್ನು ದೇಶ ಸೇವೆ ಅಥವಾ ಸಮಾಜ ಸೇವೆ ಎನ್ನಲಾಗುವುದಿಲ್ಲ. ಸಂಘಪರಿವಾರದ ಕಾರ್ಯಕರ್ತರಿಗಿಂತ ಬೌದ್ಧಿಕವಾಗಿ ದಿವಾಳಿ ಎದ್ದು ಹೋಗಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಇಂತಹ ಕೃತಿಯನ್ನು ಕಡ್ಡಾಯವಾಗಿ ಓದಲೇ ಬೇಕಿದೆ. ಸಂಘಪರಿವಾರದ ಟೀಕೆ ಅಥವಾ ವಿರೋಧವನ್ನು ಎದುರಿಸಬೇಕಾದರೆ, ನಮ್ಮ ಬೌದ್ಧಿಕ ಜ್ಞಾನದ ಅಡಿಪಾಯ ಗಟ್ಟಿಯಾಗಿರಬೇಕು. ಅಂಶ ಇಂದಿನ ಕಾಂಗ್ರೆಸ್ ಕಾರ್ಯಕರ್ತರ ಮೂಲ ಗುರಿಯಾಗಬೇಕಿದೆ. ಇಂದು ಸಂಘಪರಿವಾರದ ಟೀಕೆಗಳಿಗೆ ಸಮರ್ಥವಾಗಿ ಉತ್ತರ ನೀಡುತ್ತಿರುವವರು ಮತ್ತು ನೆಹರು ಅವರ ಇತಿಹಾಸವನ್ನು ಮುನ್ನೆಲೆಗೆ ತರುತ್ತಿರುವವರು ಎಡಪಂಥೀಯ ಲೇಖಕರು ಮತ್ತು ಚಿಂತಕರು ಮಾತ್ರ. ಅವರಿಗೆ ಕಾಂಗ್ರೆಸ್ ಅಥವಾ ಬಿ.ಜೆ.ಪಿ. ಪಕ್ಷಗಳ ಕುರಿತಾಗಿ ಯಾವುದೇ ಮೋಹ ಅಥವಾ ಸಿಟ್ಟುಗಳಿಲ್ಲ. ವಾಸ್ತವಿಕ ಅಂಶಗಳನ್ನು ಸಮಾಜದ ಮುಂದೆ ಇರಿಸುವುದು ಅವರ ಕರ್ತವ್ಯವಾಗಿದೆ ಅಷ್ಟೇ.

 ಡಾ.ಎನ್.ಜಗದೀಶ್ ಕೊಪ್ಪ.