ಭಾನುವಾರ, ಸೆಪ್ಟೆಂಬರ್ 6, 2026

ಅಕ್ಷರ ಕಲಿಸಿದ ದಲಿತ ಗುರು ಮಾದಪ್ಪ ನವರ ನೆನಪುಗಳು.

 


ಅದು 1962 ನೇ ಇಸವಿ. ನನ್ನೂರಿನ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಯಾರದೋ ಹಳೆಯ ನಾಡಹೆಂಚಿನ ಬೃಹತ್ತಾದ ಮನೆಯಲ್ಲಿ ಪಾಠ ನಡೆಯುತ್ತಿತ್ತು.
ನನ್ನೂರು ಪಕ್ಕದ ಆಬಲವಾಡಿ ಗ್ರಾಮದಲ್ಲಿ ದಲಿತ ಸಮುದಾಯದ ಮಾದಿಗರ ಎಂಟತ್ತು ಕುಟುಂಬಗಳು ಊರಾಚೆ ಕೆರೆ ಬದಿಯಲ್ಲಿ ವಾಸಿಸುತ್ತಿದ್ದವು. ಅಂತಹ ಕುಟುಂಬದಲ್ಲಿ ಮಾದಪ್ಪನವರು ಜನಿಸಿ ಎಲ್.ಎಸ್. ಎಂದು ಕರೆಯಲಾಗುತ್ತಿದ್ದ ಏಳನೆಯ ತರಗತಿ ಓದಿ ಶಿಕ್ಷಕರಾಗಿದ್ದರು.
ಬ್ರಾಹ್ಮಣ ಶ್ರೀಮಂತ ಕುಟುಂಬದ ಗೋವಿಂದಪ್ಪನವರು ನೀಡಿದ್ದ ಆ ಹಳೆಯ ಹೆಂಚಿನ ಮನೆಯ ಕಿಟಿಕಿಗಳಿಗೆ ಮತ್ತು ಬಾಗಿಲುಗಳಿಗೆ ಕದಗಳಿರಲಿಲ್ಲ. ಹಾಗಾಗಿ ನಾನು ಮತ್ತು ನನ್ನ ಸಹಪಾಠಿಗಳು ಸದಾ ಕಿಟಿಕಿಯ ಮೂಲಕ ತರಗತಿಗೆ ಹಾಜರಾಗುತ್ತಿದ್ದೆವು. ಒಂದರಿಂದ ನಾಲ್ಕನೇ ತರಗತಿಯವರೆಗೆ ಎಲ್ಲಾ ಕ್ಲಾಸ್ ಗಳು ವಿಶಾಲ ವಾಗಿದ್ದ ಹಾಲ್ ನಲ್ಲಿ ನಡೆಯುತ್ತಿದ್ದವು. ದಲಿತ ಹುಡುಗರನ್ನು ಬಾಗಿಲಿನಿಂದ ಹೊರಗಡೆ ಕೂರಿಸಲಾಗುತ್ತಿತ್ತು. ಅವರು ಜಗುಲಿಯ ಆವರಣದಲ್ಲಿ ಕುಳಿತು, ಬಾಗಿಲು ಮತ್ತು ಕಿಟಕಿಯ ಮೂಲಕ ಪಾಠ ಕೇಳುತ್ತಿದ್ದರು.
1961 ರಲ್ಲಿ ಶಾಲೆಗೆ ಸೇರಿದ್ದ ನನಗೆ 1962 ರಲ್ಲಿ ಮಾದಪ್ಪನವರು, ಬೋರ್ಡ್ ಮೇಲೆ ಅ, ಆ, ಇ. ಈ. ಅಕ್ಷರಗಳನ್ನು ಬರೆದು, ತಮ್ಮ ಕೈಯಲ್ಲಿ ಇದ್ದ ಕೋಲನ್ನು ಅಕ್ಷರಗಳ ಮೇಲೆ ಇಡುತ್ತಿದ್ದರು. ನಾವು ಅಕ್ಷರವನ್ನು ಗುರುತಿಸಿ ಹೇಳಬೇಕಾಗಿತ್ತು. ಸರಿಯಾಗಿ ಅಕ್ಷರ ಗುರುತಿಸಿದ ನನ್ನ ಮುಂದೆ ಮಾದಪ್ಪನವರು ಕೋಲನ್ನು ನೀಡಿ, ತುದಿ ಹಿಡಿದುಕೊಳ್ಳಲು ಹೇಳಿದರು ಅದನ್ನು. ಹಿಡಿದುಕೊಂಡಾಗ, ನನ್ನನ್ನ ಕರೆದುಕೊಂಡು ಹೋಗಿ ಎರಡನೇ ತರಗತಿ ಗುಂಪಿನಲ್ಲಿ ಕೂರಿಸಿದರು.
ಶಿಕ್ಷಕರಾಗಿದ್ದರೂ ಸಹ, ಮಾದಪ್ಪನವರು ಮೇಲ್ಜಾತಿಯ ಹುಡುಗರನ್ನು ಮುಟ್ಟಲು ಅಂಜುತ್ತಿದ್ದರು. ಇಂತಹ ಮಹಾನ್ ದಲಿತ ಗುರುವಿನಿಂದ ಅಕ್ಷರ ಕಲಿತ ನಾನು, ಬಾಲ್ಯದಿಂದಲೂ ದಲಿತರ ನೋವು, ಅಪಮಾನಗಳಿಗೆ ಸಾಕ್ಷಿಯಾದ ಕಾರಣದಿಂದ ಇಂದಿನವರೆಗೂ ಜಾತಿಯ ಎಲ್ಲೆಯನ್ನು ಮೀರಿ ಬದುಕಲು ಸಾಧ್ಯವಾಗಿದೆ. ಅಂತಹ ಶಿಕ್ಷಕರಿಂದ ಅ,ಆ. ಕಲಿತ ನನ್ನ ಬದುಕು ಸಾರ್ಥಕ ಎನಿಸಿದೆ.
2002 ರಲ್ಲಿ ಹುಬ್ಬಳ್ಳಿಯಿಂದ ಹಬ್ಬದ ನಿಮಿತ್ತ ಊರಿಗೆ ಬಂದಾಗ, ಬಸ್ ಇಳಿಯುತ್ತಿದ್ದಂತೆ, ಸಂತೆಮೈದಾನದ ಅರಳಿ ಕಟ್ಟೆಯ ಬಳಿ ಆಬಲವಾಡಿಗೆ ಹೋಗಲು ಕುಳಿತಿದ್ದ ಹಾಗೂ ವಯಸ್ಸಾಗಿದ್ದ ಮಾದಪ್ಪನವರನ್ನು ನೋಡಿ, ತಕ್ಷಣ ಅವರ ಬಳಿ ಹೋಗಿ ಕಾಲು ಮುಟ್ಟಿ ನಮಸ್ಕರಿಸಿದೆ. ಅವರಿಗೆ ಶಾಕ್ ಆಯಿತು. ಯಾರು ಸ್ವಾಮಿ ನೀವು? ಏಕೆ ನನ್ನ ಕಾಲಿಗೆ ಬೀಳುತ್ತಿದ್ದೀರಿ? ಎಂದರು.
ಅವರ ಕೈ ಹಿಡಿದು, ಪಕ್ಕದಲ್ಲಿದ್ದ‌ ನಂಜುಂಡನ ಟೀ ಅಂಗಡಿಗೆ ಕರೆದೊಯ್ದು, ಚಹಾ ಕುಡಿಸಿ, ಬಾಲ್ಯದಲ್ಲಿ ಅಕ್ಷರ ಕಲಿಸಿದ ಕಥೆ ಹೇಳಿದೆ. ಈಗ ಉದಯ ಟಿವಿಯಲ್ಲಿ ಉದ್ಯೋಗದಲ್ಲಿ ಇರುವುದಾಗಿ ತಿಳಿಸಿದೆ. ಮೇಷ್ಟ್ರು, ಎಷ್ಟೋಂದು ಭಾವುಕರಾದರೆಂದರೆ, ನನ್ನ ಕೈಗಳನ್ನು ಹಿಡಿದು, ತಮ್ಮ ಹಣೆಗೆ ಒತ್ತುಕೊಂಡು, ನನ್ನ ಜನ್ಮ ಸಾರ್ಥಕವಾಯ್ತು ಬುಡಪ್ಪಾ ಎಂದರು.
ಅವರೂರಿನ ಮಂದಿ ಮೇಸ್ಟೇ ಬಸ್ ಬಂತು ಬನ್ನಿ ಎಂದು ಕರೆಯಲು ಬಂದಾಗ, ಅವರೆಲ್ಲರಿಗೂ ಹೆಮ್ಮೆಯಿಂದ ನನ್ನನ್ನು ಪರಿಚಯಿಸಲು ಹೋದಾಗ, ಅವರ ಕಣ್ಣುಗಳು ಒದ್ದೆಯಾಗಿದ್ದವು. ಜಗಣ್ಣಾ, ನಮಗೆಲ್ಲಾ ಗೊತ್ತು, ನಿಮ್ಮ ಶಿಷ್ಯ ಎಂದು ಗೊತ್ತಿರಲಿಲ್ಲ ಎಂದು ಅವರೆಲ್ಲಾ ಹೇಳಿದಾಗ, ಮಾದಪ್ಪ ಮೇಷ್ಟ್ರ ಮುಖದ ಮೇಲೆ ಮೂಡಿದ ಹೆಮ್ಮೆಯ ಭಾವನೆ ನೋಡಿ, ಇಂತಹ ಗುರುವಿನ ಬಳಿ ಶಿಕ್ಷಣ ಕಲಿತದ್ದು ನನ್ನ ಜನ್ಮ ಸಾರ್ಥಕ ಎನಿಸಿತು.
ಶಿಕ್ಷಕರ ದಿನಾಚರಣೆಯ ಇಂದು ನನಗೆ ಅಕ್ಷರ ಧಾರೆಯೆರೆದ ಆ ಮಹಾನ್ ಗುರು ನೆನಪಾದರು.
ಚಿತ್ರಸೌಜನ್ಯ- ವಿಜಯ ಕರ್ನಾಟಕ

ಸೋನಿಯಾ ಗಾಂಧಿ ಎಂಬ ಹಿರಿಯ ಜೀವವೊಂದರ ಬದುಕಿನ ಒಳನೋಟಗಳು.



ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಚುಕ್ಕಾಣಿಯಾಗಿರುವ ಸೋನಿಯಾ ಗಾಂಧಿಯವರ ಮೊದಲ ಆತ್ಮಕಥೆ 2009 ರಲ್ಲಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡಿತ್ತು. ಇದೀಗ ಎಂಬತ್ತು ವರ್ಷ ಪೂರೈಸಿರುವ ಈ ಹಿರಿಯ ಜೀವ ತಮ್ಮ ಪೂರ್ಣಪ್ರಮಾಣದ ಆತ್ಮ ಚರಿತ್ರೆಯನ್ನು ಬರೆದಿದ್ದು, ಅಮೇರಿಕಾದ ಪ್ರಕಾಶನ ಸಂಸ್ಥೆಯೊಂದು ನವಂಬರ್ ಹತ್ತರಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಸೋನಿಯಾ ಅವರ ನೂತನ ಆತ್ಮಚರಿತ್ರೆ ಬಿಲಾಂಗಿಗ್ ಕೃತಿಯನ್ನು ಪ್ರಕಟಿಸಲು ಒಪ್ಪಿಕೊಂಡಿದ್ದ ಪೆಂಗ್ವಿನ್ ಇಂಡಿಯಾ ಸಂಸ್ಥೆ ಇದೀಗ ಹಲವು ನೆಪಗಳನ್ನು ಹೇಳುತ್ತಾ ಹಿಂದೇಟು ಹಾಕಿದೆ. ಸೋನಿಯಾ ಗಾಂಧಿಯವರು ತಮ್ಮ ಎರಡನೇ ಕೃತಿಯಲ್ಲಿ ದಾಖಲಿಸಿರುವ ರಾಜಕೀಯ ಚಿಂತನೆಗಳು ಮತ್ತು ಬಿ.ಜೆ.ಪಿ. ಸರ್ಕಾರಗಳ ವೈಫಲ್ಯ ಕುರಿತಾದ ದೃಷ್ಟಿಕೋನಗಳು ಪೆಂಗ್ವಿನ್ ಪ್ರಕಾಶನಕ್ಕೆ ತೊಡಕಾಗಿವೆ.

ಪೆಂಗ್ವಿನ್ ಅಥವಾ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಸೇರಿದಂತೆ ಬಹುತೇಕ ಬಹುರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು, ಯಾವುದೇ ಕೃತಿಯನ್ನು ಪ್ರಕಟಿಸುವ ಮುನ್ನ, ಲೇಖಕ ಅಥವಾ ಲೇಖಕಿ ಎಷ್ಟೇ ಪ್ರಸಿದ್ಧರಾಗಿದ್ದರೂ ಸಹ, ತಾವು ನೇಮಕ ಮಾಡಿಕೊಂಡಿರುವ ಸಂಪಾದಕರ ಮೂಲಕ ಕೃತಿಗಳನ್ನು ಪರಿಶೀಲನೆಗೆ ಒಳಪಡಿಸುತ್ತವೆ. ಅಲ್ಲಿ, ಭಾಷೆ, ನಿರೂಪಣೆಯ ಶೈಲಿ ಮತ್ತು ಕೃತಿಯ ವಿಷಯಗಳು ಪರಿಷ್ಕರಣೆಗೆ ಕೃತಿಯ ಲೇಖಕರ ಸಹಮತದೊಂದಿಗೆ ಒಳಪಡುವುದು ಸಹಜ ಕ್ರಿಯೆ. ಕಳೆದ ಒಂದೂವರೆ ದಶಕದಿಂದ, ದೇಶದ ನ್ಯಾಯಾಂಗ ವ್ಯವಸ್ಥೆ, ಚುನಾವಣಾ ಆಯೋಗ, ಬ್ಯಾಂಕಿಂಗ್, ಮತ್ತು ಇ.ಡಿ ಹಾಗೂ ಸಿ.ಬಿ.ಐ ಮುಂತಾದ ತನಿಖಾ ಸಂಸ್ಥೆಗಳಲ್ಲಿ ಮೂಗು ತೂರಿಸುವುದನ್ನು ಕಾಯಕ ಮಾಡಿಕೊಂಡಿರುವ ಕೇಂದ್ರ ಬಿ.ಜೆ.ಪಿ. ಸರ್ಕಾರವು, ಪ್ರಕಾಶನ ಸಂಸ್ಥೆಯ ಮೇಲೆ ಪ್ರಭಾವ ಬೀರಿರುವುದನ್ನು ತಳ್ಳಿಹಾಕುವಂತಿಲ್ಲ.
ಇಟಲಿ ಮೂಲದ ಸೋನಿಯಾ ಗಾಂಧಿಯವರು ಆರಂಭದ ಇಪ್ಪತ್ತು ವರ್ಷಗಳನ್ನು ತಾಯ್ನಾಡಿನಲ್ಲಿ ಕಳೆದದ್ದನ್ನು ಹೊರತು ಪಡಿಸಿದರೆ, ಉಳಿದ ಅರವತ್ತು ವರ್ಷಗಳನ್ನು, ಭಾರತದ ಸೊಸೆಯಾಗಿ, ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿಯಾಗಿ, ಇಬ್ಬರು ಮಕ್ಕಳ ತಾಯಿಯಾಗಿ ಅಪ್ಪಟ ಭಾರತೀಯ ಹೆಣ್ಣುಮಗಳಂತೆ ಬದುಕಿದ ಅವರ ಬದುಕು ನಿಜಕ್ಕೂ ಮಾದರಿಯಾಗುವಂತಹದ್ದು. ನನಗೆ ಅವರ ಆತ್ಮ ಚರಿತ್ರೆಯನ್ನು ಓದುವುದು ಬೇಕಿಲ್ಲ. ಅವರ ಬದುಕಿನ ಬಹುತೇಕ ಘಟನೆಗಳಿಗೆ ನಾನು ಮತ್ತು ನನ್ನ ತಲೆಮಾರು ಸಾಕ್ಷಿಯಾಗಿದ್ದೀವಿ. 1975 ರಿಂದಲೂ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತ ಮತ್ತು ಕೌಟುಂಬಿಕ ಬದುಕನ್ನು ಸೂಕ್ಷಮವಾಗಿ ಗಮನಿಸಿಕೊಂಡು ಬಂದಿರುವ ನನಗೆ, ಸೋನಿಯಾ ಗಾಂಧಿಯವರು ಇಂದಿರಾ ಅವರಿಗೆ ಕೇವಲ ಸೊಸೆ ಮಾತ್ರವಲ್ಲದೆ, ಮಗಳಂತೆ ಇದ್ದರು. ಎರಡನೇ ಪುತ್ರ ಸಂಜಯ್ ಗಾಂಧಿಯವರ ಪತ್ನಿ ಮನೇಕಾ ಗಾಂಧಿ ಎಂದಿಗೂ ಇಂದಿರಾ ಕುಟುಂಬದ ಜೊತೆ ಭಾಂದವ್ಯದಿಂದ ಇರಲು ಸಾಧ್ಯವಾಗಲಿಲ್ಲ. ಸೋನಿಯಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಅಥವಾ ಸಿದ್ಧಾಂತಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಹಲವಾರು ಭಿನ್ನಾಭಿಪ್ರಾಯಗಳಿವೆ. ಆದರೆ, ದೇಶದ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದರ ಸೊಸೆಯಾಗಿ, ಅವರು ನೋಡಿದ ಮತ್ತು ಅನುಭವಿಸಿದ ದುರಂತ ಘಟನೆಗಳನ್ನು ತಣ್ಣನೆಯ ಭಾವದಿಂದ ಮೌನವಾಗಿ ಸಹಿಸಿಕೊಂಡ ಅವರ ಕುರಿತಾಗಿ ಅಪಾರ ಗೌರವವಿದೆ.
ದೆಹಲಿಯಲ್ಲಿ1980 ರಲ್ಲಿ ನಡೆದ ಲಘು ವಿಮಾನ ಅಪಘಾತದಲ್ಲಿ ಮೈದುನ ಸಂಜಯ್ ಗಾಂಧಿಯ ಸಾವು, 1984 ರ ಅಕ್ಟೋಬರ್ ತಿಂಗಳಲ್ಲಿ ತನ್ನ ಸ್ವಂತ ಅಂಗರಕ್ಷಕರ ಗುಂಡೇಟಿಗೆ ಬಲಿಯಾದ ಅತ್ತೆ ಇಂದಿರಾಗಾಂಧಿ ಹಾಗೂ 1991ರ ಮೇ ತಿಂಗಳಲ್ಲಿ ತಮಿಳುನಾಡಿನ ಶ್ರೀ ಪೆರಬಂದೂರು ಪಟ್ಟಣದಲ್ಲಿ ಶ್ರೀ ಲಂಕಾದ ಎಲ್.ಟಿ.ಟಿ. ಉಗ್ರರ ಬಾಂಬ್ ದಾಳಿಗೆ ಪ್ರಾಣತೆತ್ತ ಪತಿ . ರಾಜೀವ್ ಗಾಂಧಿಯವರ ಸಾವು ಇಂತಹ ಅಘಾತಕಾರಿ ಘಟನೆಗಳ ನಡುವೆಯೂ ಸೋನಿಯಾ ಗಾಂಧಿ ಭಾರತದಲ್ಲಿ ಉಳಿಯಲು ನಿರ್ಧಾರ ಮಾಡಿದ್ದು, ಅವರ ಜೀವನದಲ್ಲಿ ಬಹು ದೊಡ್ಡ ಸಾಧನೆ. ಬೇರೆ ಯಾರೇ ಆಗಿದ್ದರೂ ತನ್ನ ಇಬ್ಬರು ಮಕ್ಕಳಾದ ರಾಹುಲ್, ಮತ್ತು ಪ್ರಿಯಾಂಕರನ್ನು ಕರೆದುಕೊಂಡು, ಭವಿಷ್ಯದ ದೃಷ್ಟಿಯಿಂದ ದೇಶ ತ್ಯೆಜಿಸಿ ಹೊರ ಹೋಗುತ್ತಿದ್ದರು. ನನಗೆ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಕೆಲವು ಚಿತ್ರಗಳು ನೆನಪಿವೆ. 1984 ರಲ್ಲಿ ಇಂದಿರಾಗಾಂಧಿಯವರ ಅಂತ್ಯಕ್ರಿಯೆಯು ದೆಹಲಿಯಲ್ಲಿ ನಡೆಯುತ್ತಿರುವಾಗ, ಹತ್ತು ಅಥವಾ ಹನ್ನೆರಡು ವರ್ಷದ ರಾಹುಲ್, ತನ್ನ ತಂದೆ ರಾಜೀವ್ ಗಾಂಧಿಯವರ ಎದೆಗೆ ಮುಖ ಹುದುಗಿಸಿಕೊಂಡು ಅಳುತ್ತಿರುವ ದೃಶ್ಯವನ್ನು ಇಂಡಿಯ ಟುಡೆ ಪತ್ರಿಕೆಯ ಖ್ಯಾತ ಛಾಯಾಚಿತ್ರಕಾರ ರಘುರಾಯ್ ಅದ್ಭುತವಾಗಿ ಸೆರೆ ಹಿಡಿದಿದ್ದರು.

ಖಲಿಸ್ತಾನ್ ಉಗ್ರರ ನಿಯಂತ್ರಣಕ್ಕೆ ಅಮೃತ್ ಸರದ ಸ್ವರ್ಣದೇವಾಲಯದ ಯಾತ್ರಿಗಳ ನಿವಾಸದಲ್ಲಿ ಅಡಗಿದ್ದ ಬಿಂದ್ರನ್ ವಾಲೆ ಹಾಗೂ ಸಹಚರರನ್ನು ಆಪರೇಶನ್ ಬ್ಲೂಸ್ಟಾರ್ ಹೆಸರಿನಲ್ಲಿ1984 ರ ಜನವರಿ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ, ಹುಟ್ಟಡಗಿಸಿದ ಇಂದಿರಾಗಾಂಧಿಯವರು, ಅದೇ ಸಿಖ್ ಸಮುದಾಯ ಅಂಗರಕ್ಷರ ಗುಂಡಿಗೆ ಜೀವತೆತ್ತರು. ಈ ಕಾರ್ಯಾಚರಣೆ ನಡೆದ ನಂತರ, ನಿಮ್ಮ ನಿವಾಸದಲ್ಲಿ ಸಿಖ್ ಸಮುದಾಯದ ಒಬ್ಬ ಸಿಬ್ಬಂದಿಯೂ ಇರಕೂಡದು ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ತಿರಸ್ಕರಿಸಿದ್ದ ಅವರು ನನ್ನ ರಕ್ಷಣೆಗೆ ಇರುವ ಹಿಂದೂ-ಮುಸ್ಲಿಂ ಅಥವಾ ಎರಡು-ಸಿಕ್ ಸಮುದಾಯದ ಯೋಧರನ್ನು ನಾನು ಸಂದೇಹ ಪಡಲಾರೆ ಎಂದು ಘೋಷಿಸಿಕೊಂಡಿದ್ದರು. ಇಂತಹ ಉದಾತ್ತ ನಂಬಿಕೆ ಮತ್ತು ವಿಶ್ವಾಸ ಇಂದಿರಾ ಗಾಂಧಿಯವವರನ್ನು ಬಲಿ ತೆಗೆದುಕೊಂಡಿತು. ಇದೀಗ ಬಿ.ಜೆ.ಪಿ. ಪಕ್ಷವು ಮುಂಬರುವ ಪಂಜಾಬ್ ವಿಧಾನ ಸಭೆಯ ಚುನಾವಣೆಗೆ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್ ಸಿಂಗ್ ಪುತ್ರನಿಗೆ ಟಿಕೇಟ್ ಘೋಷಣೆ ಮಾಡಿದೆ.
ರಾಜೀವ್ ಗಾಂಧಿಯವರು ಪ್ರಬಲ ಬಾಂಬ್ ಸ್ಪೋಟಕ್ಕೆ ತುತ್ತಾದ ಸಂದರ್ಭದಲ್ಲಿ ಅವರ ಇಡೀ ದೇಹವು ಗುರುತು ಸಿಗಲಾರದಷ್ಟು ಛಿದ್ರವಾಗಿತ್ತು. ಎಡಗಾಲಿನ ಶೋ ಧರಿಸಿದ್ದ ಪಾದವೊಂದು ಮಾತ್ರ ಅವರ ಗುರುತಾಗಿ ಉಳಿದುಕೊಂಡಿತ್ತು ಇಂತಹ ಕೌಟುಂಬಿಕ ದುರಂತಗಳನ್ನು ಸಹಿಸಿಕೊಂಡು, ನೆಹರು ಮತ್ತು ಇಂದಿರಾ ಪೋಷಿಸುಕೊಂಡು ಬಂದಿದ್ದ ಕಾಂಗ್ರೇಸ್ ಪಕ್ಷವನ್ನು ಜೀವಂತವಾಗಿಟ್ಟ ಸೋನಿಯಾ ವರ ಬದ್ಧತೆಯು ಯಾವುದೇ ರಾಜಕೀಯ ನಾಯಕರಿಗೆ ಇಂದಿಗೂ ಮಾರ್ಗದರ್ಶಿಯಾಗಬಲ್ಲದು ಪದೇ ಪದೇ ಸೋನಿಯಾಗಾಂಧಿಯವರ ಇಟಲಿ ಮೂಲವನ್ನು ಪ್ರಸ್ತಾಪಿಸುವ ಸಂಘಪರಿವಾರದ ಅವಿವೇಕಿಗಳು ಒಮ್ಮೆ ಕಳೆದ ನಾಲ್ಕು ದಶಕಗಳ ಭಾರತದ ರಾಜಕೀಯ ಇತಿಹಾಸವನ್ನು ಗಂಭೀರವಾಗಿ ಕುಳಿತು ಓದುವದು ಒಳಿತು. 2004 ರ ಮೇ ತಿಂಗಳಲ್ಲಿ ಸೋನಿಯಾ ಗಾಂಧಿಯವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಕೂಡಿ ಬಂದಿತು. ಆದರೆ, ಅವರು ಅದನ್ನು ತಿರಸ್ಕರಿಸಿ, ಈ ನೆಲದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದು, ಸೋನಿಯಾ ಗಾಂಧಿಯವರು ಭಾರತಕ್ಕೆ ನೀಡಿದ ಅತಿ ದೊಡ್ಡ ಕೊಡುಗೆ ಎಂಬುದು ನನ್ನ ಅಚಲವಾದ ನಂಬಿಕೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿರುವ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದಕ್ಕೆ ಮನಮೋಹನ್ ಸಿಂಗ್ ಅವರ ಚಿಂತನೆಗಳು ಮೂಲ ಕಾರಣ. ಇಂದಿರಾಗಾಂಧಿಯವರ ಸಾವಿನ ನಂತರ ಅನಿರೀಕ್ಷಿತವಾಗಿ ಪ್ರಧಾನಿಯಾದ ರಾಜೀವ್ ಗಾಂಧಿಯವರಿಗೆ ರಾಜಕೀಯ ಅನುಭವ ಇರಲಿಲ್ಲ. ಅವರು ಆರಂಭದಿಂದಲೂ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಅವಧಿಯಲ್ಲಿ ನಡೆದ ಮೂರು ಐತಿಹಾಸಿಕ ತಪ್ಪುಗಳಲ್ಲಿ ಒಂದನ್ನು ಸಂಘಪರಿವಾರ ದುರಪಯೋಗಿಸಿಕೊಂಡಿದ್ದನ್ನು ಯಾರೂ ಮರೆಯಲಾಗದು. ರಾಜಕೀಯ ಅನುಭವವಿಲ್ಲದ ರಾಜೀವ್ ಗಾಂಧಿಯವರ ಬಳಿ ಸುತ್ತುವರಿದ ಹಾಗೂ ಬೌದ್ಧಿಕ ಕೊರತೆಯಿಂದ ನರಳುತ್ತಿದ್ದ ಮತ್ತು ಅಧಿಕಾರಕ್ಕಾಗಿ ಹಪಾಹಪಿಸುತ್ತಿದ್ದ ಕಾಂಗ್ರೆಸ್ ನಾಯಕರು ಅವರನ್ನು ಆಡಳಿತದುದ್ದಕ್ಕೂ ದಿಕ್ಕು ತಪ್ಪಿಸಿದರು. 1978ರಲ್ಲಿ ಐದು ಮಕ್ಕಳ ತಾಯಾಗಿದ್ದ ಮಧ್ಯಪ್ರದೆಶದ ಇಂದೂರಿನ ಶಾ ಬಾನು ಬೇಗಂ ಎಂಬಾಕೆಯನ್ನು ವಕೀಲನಾಗಿದ್ದ ಪತಿಯು ನಲವತ್ತಾರು ವರ್ಷ ದಾಂಪತ್ಯ ಜೀವನ ನಡೆಸಿ, ತಲಾಖ್ ನೀಡುವುದರ ಮೂಲಕ ಮನೆಯಿಂದ ಹೊರದಬ್ಬಿದ್ದ.
ಜೀವನ ನಿರ್ವಹಣೆಗೆ ನ್ಯಾಯಾಲಯದ ಮೆಟ್ಟಿಲೇರಿದ 62 ವರ್ಷದ ಆಕೆಗೆ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು, 1985 ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ನಿಯಮಗಳನ್ನು ತಿರಸ್ಕರಿಸಿ, ಮಾಸಾಶನ ನೀಡುವಂತೆ ಐತಿಹಾಸಿಕ ತೀರ್ಪು ನೀಡಿತು. ಆದರೆ, ಈ ತೀರ್ಪಿನ ವಿರುದ್ಧ ಇಸ್ಲಾಂ ಧರ್ಮದ ಮೌಲ್ವಿಗಳು ಪ್ರತಿಭಟನೆ ನಡೆಸಿ, ಮಹಿಳೆಯರನ್ನು ಶೋಷಿಸುವುದು ನಮ್ಮ ಧಾರ್ಮಿಕ ಹಕ್ಕು ಎಂಬಂತೆ ನಡೆದುಕೊಂಡರು. ಈ ಸಂಧರ್ಭದಲ್ಲಿ ರಾಜೀವ್ ಗಾಂಧಿಯವರು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸುವುದರ ಬದಲಾಗಿಗೆ ಮಸೂದೆಗೆ ತಿದ್ದುಪಡಿ ತಂದು ಐತಿಹಾಸಿಕ ತಪ್ಪನ್ನು ಎಸಗಿದರು.
ಎರಡನೆಯದಾಗಿ ಅಯೋಧ್ಯೆಯ ಬಾಬರಿ ಮಸೀದಿಗೆ ತಂದು ಇಡಲಾಗಿದ್ದ ರಾಮಲಲ್ಲಾ ವಿಗ್ರಹಗಳನ್ನು ದರ್ಶನ ಮಾಡದಂತೆ ಫೈಜಾಬಾದ್ ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಗೆ ಬೀಗ ಹಾಕಲಾಗಿತ್ತು. ಆದರೆ, 1986 ರ ಪೆಬ್ರವರಿ ತಿಂಗಳಲ್ಲಿ ರಾಜೀವ್ ಗಾಂಧಿಯವರು ಬಾಬರಿ ಮಸೀದಿಯ ಬಾಗಿಲು ತೆಗೆಸಿ, ರಾಮನ ವಿಗ್ರಹದ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟರು. ಇದು ಪರೋಕ್ಷವಾಗಿ , ಬಾಬರಿ ಮಸೀದಿಯ ಧ್ವಂಸದ ಜೊತೆಗೆ ರಥಯಾತ್ರೆ ನಡೆದು ಅಂತಿಮವಾಗಿ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು. ನನ್ನ ದೃಷ್ಟಿಯಲ್ಲಿ ಇದು ರಾಜೀವ್ ಗಾಂಧಿಯವರು ಎಸೆಗಿದ ಎರಡನೆಯ ಐತಿಹಾಸಿಕ ತಪ್ಪು .
ಶ್ರೀಲಂಕಾದ ಭಾರತೀಯ ಮೂಲದ ತಮಿಳರು ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ, ಹೋರಾಟ ನಡೆಸುತ್ತಿದ್ದಾಗ, ಅವರನ್ನು ಸದೆ ಬಡೆಯಲು 1988 ರಲ್ಲಿ ಭಾರತದ ಸೇನೆಯನ್ನು ಶ್ರೀಲಂಕಾಗೆ ಕಳಿಸಿಕೊಟ್ಟಿದ್ದು ಅವರ ಮೂರನೇ ತಪ್ಪು. ಅಂತಿಮವಾಗಿ ತಾವು ಮಾಡಿದ ತಪ್ಪಿಗೆ ಪ್ರಾಣ ತೆತ್ತರು. ಯಾವೊಂದು ದೋಷ ಎಸಗದೆ ಎಲೆ ಮರೆಯ ಕಾಯಿಯಂತೆ ಬದುಕಿದ್ದ ಸೋನಿಯಾ ಗಾಂಧಿ ಅಂತಿಮವಾಗಿ ಎಲ್ಲಾ ಹೊರೆಗಳನ್ನು ತಮ್ಮ ಹೆಗಲ ಮೇಲೆ ಹೊತ್ತು, ಮಕ್ಕಳನ್ನು ಸಾಕಿ ಬೆಳೆಸಿದರು. ಇಂತಹ ಮಹಾನ್ ತಾಯಿಯೊಬ್ಬಳ ಆತ್ಮಕಥನ ಪ್ರಕಟವಾಗುವ ಮುನ್ನವೇ ಅಡ್ಡಿಪಡಿಸುವುದು ನ್ಯಾಯ ಸಮ್ಮತವಲ್ಲ. ಒಂದು ಕೃತಿ ಲೋಕಾರ್ಪಣೆಗೊಂಡನಂತರ ಅದು ಈ ಸಮಾಜದ ಕೃತಿಯಾಗುತ್ತದೆ. ಅದನ್ನು ವಿಮರ್ಶಿಸಲು ನಮಗೆ ಹಕ್ಕಿದೆ. ಕನಿಷ್ಠ ಈ ಜ್ಞಾನ ನಮ್ಮಲ್ಲಿರಬೇಕು.

ಮಂಗಳವಾರ, ಆಗಸ್ಟ್ 18, 2026

ನೊಂದವರ ನೋವ ನೋಯದವರೆತ್ತ ಬಲ್ಲರೋ?

 



ಕಳೆದ ಜುಲೈ ತಿಂಗಳಲ್ಲಿ ನಮ್ಮ ಮಕ್ಕಳು ದೆಹಲಿಯಲ್ಲಿ ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ನಡೆಸಿದ ಧರಣಿಯ ಸಂದರ್ಭದಲ್ಲಿ ನಮ್ಮ ಮುಸ್ಲಿಂ ಮತ್ತು ಸಿಖ್ ಸಹೋದರರು ಹಸಿದ ಮಕ್ಕಳಿಗೆ ಆಹಾರ, ಕುಡಿಯಲು ನೀರು ಒದಗಿಸುತ್ತಿದ್ದಾಗ, ನನಗೆ 2004 ಡಿಸಂಬರ್ ತಿಂಗಳಲ್ಲಿ ಸಂಭವಿಸಿದ ಸುನಾಮಿ ದುರಂತದ ಘಟನೆ ನೆನಪಾಗುತ್ತಿತ್ತು. ಏಳು ವರ್ಷದ ಹಿಂದೆ ಬರೆದಿದ್ದ ಲೇಖನವನ್ನು ಇಲ್ಲಿ ಮತ್ತೆ ಹಂಚಿಕೊಳ್ಳುತ್ತಿದ್ದೀನಿ.

ನಾನು ಕರ್ನಾಟಕದಲ್ಲಿ ಈವರೆಗೆ ಕಂಡರಿಯದ ಪ್ರಕೃತಿಯ ವಿಕೋಪಕ್ಕೆ ಮತ್ತು ಸಂತ್ರಸ್ತರ ಬವಣೆಗೆ ಸಾಕ್ಷಿಯಾದ ನಂತರ ನನ್ನೊಳಗೆ ಒಂದು ರೀತಿಯ ಸೂತಕದ ಛಾಯೆ ಮನೆ ಮಾಡಿದೆ. ಬರದ ಬವಣೆಯಲ್ಲಿ ಕಳೆದ ಐದಾರು ವರ್ಷಗಳಿಂದ ನರಳಿದ ರೈತ ಸಮುದಾಯದ ಬದುಕು ಬಾರಿ ನೆರೆಯಲ್ಲಿ  ಕೊಚ್ಚಿ ಹೋಗಿದೆ. ಅನ್ನದಾತ ಎಂದು ಕರೆಸಿಕೊಂಡ ರೈತ  ಈಗ ನಿರಾಶ್ರಿತರ ಶಿಬಿರದಲ್ಲಿ ಕುಳಿತು ತುತ್ತು ಅನ್ನಕ್ಕೆ ಕೈಚಾಚುವುದನ್ನು ನೋಡಿ ಮನಸ್ಸು ಭಾರವಾಗಿದೆ.

ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಭಾಷಣ ಬಿಗಿದು ಓಟು ಗಿಟ್ಟಿಸಿಕೊಂಡವರು ದಿಲ್ಲಿಯೆಂಬ ನಾಯಕಸಾನಿಯ ಸೆರಗಿನಲ್ಲಿ ಮರೆಯಾಗಿದ್ದಾರೆ. ಉತ್ತರ ಕರ್ನಾಟಕದ ಅದರಲ್ಲೂವಿಶೇಷವಾಗಿ ಬೆಳಗಾವಿ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳ ಬದುಕು ಮೂರಾಬಟ್ಟೆಯಾಗಿದೆ. ಭವಿಷ್ಯದಬದುಕಿನ ಆತಂಕ, ಸಾವು ಮತ್ತು ನೋವು ಇವುಗಳು ಎಲ್ಲರನ್ನೂ ಜಾತಿ, ಧರ್ಮದ ಬೇಧವಿಲ್ಲದೆ ಒಂದುಗೂಡಿಸಿವೆ. ಸಂದರ್ಭದಲ್ಲಿ ನನಗೆ ಹದಿನಾಲ್ಕು ವರ್ಷಗಳ ಹಿಂದಿನ ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿ ದುರಂತ ನೆನಪಾಯಿತು.

2004 ಡಿಸೆಂಬರ್ ತಿಂಗಳಲ್ಲಿ ನಡೆದ ದುರಂತದಲ್ಲಿ ನಾಗಪಟ್ಟಣಂ ಜಿಲ್ಲೆಗೆ ಅತೀವ ಹಾನಿಯಾಯಿತು. ಚಿದಂಬರಂ, ಕಾರೈಕಲ್ ಹಾಗೂ ಕಡಲೂರು ಮತ್ತು ನಾಗಪಟ್ಟಣಂ ಸಮೀಪದ ಕಡಲತೀರದ ಮೀನುಗಾರರ ಹಳ್ಳಿಗಳನ್ನು ಸಮುದ್ರ ಆಪೋಶನ ತೆಗೆದುಕೊಂಡಿತ್ತು. ಬದುಕುಳಿದಸಾವಿರಾರು ಜನ ಅನ್ನ ಮತ್ತು ಸೂರಿಲ್ಲದೆ ಬಯಲಿಗೆ ಬಿದ್ದ ಸಂದರ್ಭದಲ್ಲಿ ನಾಗಪಟ್ಟಣಂ ಸಮೀಪದ ನಾಗೂರ್ ದರ್ಗಾ ಎಂಟು ಸಾವಿರ ಮಂದಿಗೆ ನಲವತ್ತು ದಿನಗಳ ಕಾಲ ಊಟ ಹಾಕಿ ಬಹುತ್ವದ ನೆಲದಲ್ಲಿ ಮಾನವೀಯತೆ ಸತ್ತಿಲ್ಕ ಎಂಬುದನ್ನ ಸಾಬೀತು ಪಡಿಸಿತು. ತಂಜಾವೂರು ದೊರೆಯ ಕಣ್ಣಿನ ಬೇನೆ ವಾಸಿಮಾಡಿದ ಮುಸ್ಲಿಂ ಸಂತನಿಗೆ ದೊರೆ ನೀಡಿದ ಜಾಗದಲ್ಲಿ ದರ್ಗಾ ನಿರ್ಮಾಣಗೊಂಡಿದೆ. ಜೊತೆಗೆ ತಮಿಳುನಾಡಿನ ಹಿಂದೂ ಮತ್ತು ಮುಸ್ಲಿಂ ಬಾಂಧವರ ಶ್ರದ್ಧಾ ಕೇಂದ್ರವಾಗಿದೆ.

ನಾಗಪಟ್ಟಣಂ ಜಿಲ್ಲಾಧಿಕಾರಿ ಕಚೇರಿ ಎದುರುಗಿನ ಹತ್ತು ಎಕರೆ ಭೂಮಿಯಲ್ಲಿ ಹಾಕಲಾಗಿದ್ದ ತೆಂಗಿನ ಗರಿಯಚಪ್ಪರದಲ್ಲಿ ಆರು ಸಾವಿರ ಮಂದಿ ಮತ್ತು ದರ್ಗಾದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಎರಡು ಸಾವಿರ ಮಂದಿ ಆಶ್ರಯ ಪಡೆದಿದ್ದರುಬೆಳಿಗ್ಗೆ ಇಡ್ಲಿ ಅಥವಾ ಪೊಂಗಲ್, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರ್ ಬಡಿಸಲಾಗುತ್ತಿತ್ತು.

ಅಲ್ಲಿ ನೊಂದವರು ಮತ್ತು ನೋಯದವರ ನಡುವೆ ಮನುಷ್ಯತ್ವ ಸೇತುವೆ ನಿರ್ಮಾಣವಾಗಿತ್ತು.  ಅನ್ನ ನೀಡುವವನಿಗೆ ನಾನು ನೀಡುತ್ತಿದ್ದೇನೆ ಎಂಬ ಅಹಂಕಾರವಿರಲಿಲ್ಲ. ಬೇಡುವವನಿಗೆ ಪಡೆಯುತ್ತಿದ್ದೇನೆ ಎಂಬ ಕೀಳರಿಮೆಯಿರಲಿಲ್ಲ. ಅಕ್ಕಿ, ಬೇಳೆ ಕೊಟ್ಟವನು ಯಾವ ಧರ್ಮದವನು, ಅಡುಗೆ ಮಾಡಿದವನು ಯಾವ ಜಾತಿ? ಬಡಿಸುತ್ತಿರುವವನು ಯಾವ ಕುಲ? ಎಂಬ ಪ್ರಶ್ನೆ ಅಲ್ಲಿ ಯಾರ ಎದೆಯಲ್ಲೂ ಉದ್ಭವಿಸಲಿಲ್ಲ. ಕಾರೈಕಲ್, ನಾಗಪಟ್ಟಣಂ ಮತ್ತು ಕುಂಭಕೋಣಂ ತಾಲೋಕಿನಲ್ಲಿ ಅಸಂಖ್ಯಾತ ಮುಸ್ಲಿಂ ಕುಟುಂಬಗಳು ಕೃಷಿ ಮತ್ತು ವ್ಯಾಪಾರದ ಮೂಲಕ ಶ್ರೀಮಂತವಾಗಿವೆ. ಪ್ರತಿ ಕುಟುಂಬಗಳು ಲಾರಿ, ವ್ಯಾನುಗಳ ಮೂಲಕ ನಾಗೂರು ದರ್ಗಾಕ್ಕೆ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಕಳುಹಿಸಿ ತಮ್ಮ ಹೆಸರು ಎಲ್ಲಿಯೂ ಪ್ರಚಾರಕ್ಕೆ ಬರದಂತೆ ನೋಡಿಕೊಂಡವು.

ಆ ವರ್ಷ ಡಿಸೆಂಬರ ಕೊನೆಯವಾರ ಐದು ದಿನಗಳ ಕಾಲ ನೆಲದ ಮೇಲಿನ ನರಕ ಮತ್ತು ಸ್ಮಶಾನದಂತಿದ್ದ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ನಾನು ಒಂದು ದಿನ ದರ್ಗಾದಲ್ಲಿದ್ದೆ. ಮುಸ್ಲಿ ಸಂತನ ಕುಟುಂಬದ ವಾರಸುದಾರರ ನೇತೃತ್ವದಲ್ಲಿ ನಡೆಯುತ್ತಿರುವ ದರ್ಗಾದ ಮುಖ್ಯಸ್ಥ ರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ  ರೀತಿ ಊಟ ಹಾಕುವ ಧೈರ್ಯ ನಿಮಗೆ ಹೇಗೆ ಬಂತು? ಎಂದು ಪ್ರಶ್ನಿಸಿದೆ. ಅವರು ನಗುತ್ತಾ ಹೀಗೆ ಉತ್ತರಿಸಿದರು.

‘’ದೇವರು ನೆರವಿಗೆ ಬರುತ್ತಾನೆ ಎಂಬ ಇಚ್ಚಾಶಕ್ತಿಯಿಂದ ಆರಂಭಿಸಿದೆ. ದರ್ಗಾದ ಭಕ್ತರುದೇವರ ರೂಪದಲ್ಲಿ ಸಹಕರಿಸಿದರು’’ ಎಂದು ಹೇಳಿದರು. ಜೊತೆಗೆ ಮಧ್ಯಾಹ್ನದ ಭೊಜನಕ್ಕೆ ಆಹ್ವಾನಿಸಿದರು. ಹತ್ತು ಕಿ.ಮಿ. ದೂರದ ನಾಗಪಟ್ಟಣಂ ಗೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ರವಾನೆಯಾಗುತ್ತಿದ್ದ ಅನ್ನ,‌ಸಾಂಬಾರ್ ನೋಡುತ್ತಾ ದರ್ಗಾದ ಮುಖ್ಯಸ್ಥರ ಜೊತೆ ಊಟ ಮಾಡುವಾಗ ನನಗೆ ಅನಿಸಿದ್ದು ಹೀಗೆ.

ಮಠ, ಮಂದಿರ, ಮಸೀದಿಗಳೆಂದರೆ ಕೇವಲ ಧಾರ್ಮಿಕಶ್ರದ್ಧಾಕೇಂದ್ರಗಳಲ್ಲ, ಮಾನವೀಯತೆಯ ಶ್ರದ್ಧಾಕೇಂದ್ರಗಳೂ ಹೌದು.

ಜಿಮೊಟೊ ಎಂಬ ಆಹಾರ ಸರಬರಾಜು ಮಾಡುವ ಕಂಪನಿಯ ಡೆಲಿವರಿ ಬಾಯ್ ಮುಸ್ಲಿಂ ಎನ್ನುವ ಕಾರಣಕ್ಕೆ ಆಹಾರ ನಿರಾಕರಿಸಿದ ಹಾಗೂ ಕಂಪನಿಯ ವಿರುದ್ಧ ಸಿಡಿದೆದ್ದ  ನಮ್ಮ ನವನಾಗರೀಕತೆಯ ಅನಾಗರಿಕರಿಗೆ ಇಂತಹ ಸುನಾಮಿ ಒಮ್ಮೆ ಅವರ ಬದುಕಿನಲ್ಲಿ ಅಪ್ಪಳಿಸಬಾರದೆ ಎಂದು ಕ್ಷಣದಲ್ಲಿ ಹಂಬಲಿಸುತ್ತಿದ್ದೇನೆ.

ನೊಂದವರ ನೋವ ನೋಯದವರೆತ್ತ ಬಲ್ಲರೊ? ಎಂಬ ಅಕ್ಕನ ವಚನದ ಸಾಲು ಸಂತ್ರಸ್ತರನ್ನು ನೋಡಿದಾಗನೆನಪಾಗುತ್ತಿದೆ.

ಜಗದೀಶ್ ಕೊಪ್ಪ.

ಸೋಮವಾರ, ಆಗಸ್ಟ್ 17, 2026

ಆರ್.ಎಸ್.ಎಸ್. ಕಾರ್ಯಕರ್ತರಿಗೆ ಸ್ವಾತಂತ್ರ್ಯ ಇತಿಹಾಸದ ಪಾಠಗಳು



ಅಯ್ಯಾ ಮಿತ್ರರೇ, ನನ್ನೊಳಗೆ ನಿಮ್ಮ ಕುರಿತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದನ್ನು ಹೊರತು ಪಡಿಸಿದರೆ, ಬೇರೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲಕಣ್ರಪ್ಪ. . ನಿಮ್ಮ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ನನಗೆ ಕಳೆದ ಮೂರು ದಶಕಗಳಿಂದಲೂ ಪರಿಚಯ. ಬೆಂಗಳೂರು ಮಲ್ಲೇಶ್ವರಂ ನ ಕ್ರೀಡಾಂಗಣ ಸಮೀಪವಿದ್ದ ನಿಮ್ಮ ರಾಜ್ಯ ಬಿ.ಜೆ.ಪಿ. ಕಚೇರಿಯಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿದ್ದುಕೊಂಡು, ಪತ್ರಕರ್ತರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿಗೆ ನಾನು ವಿಸ್ಮಯಗೊಂಡಿದ್ದೆ. ಸಾಮಾನ್ಯ ಹೆಂಚಿನ ಹಳೆಯ ಕಟ್ಟಡವಾಗಿದ್ದ ನಿಮ್ಮ ಕಚೇರಿಗೆ ನಾವು ಒಂದಿಷ್ಟು ಜನ ಪತ್ರಕರ್ತರು ನಿಮ್ಮ ನಾಯಕರನ್ನು ಭೇಟಿ ಮಾಡಲು ಹೋದರೆ, ಅತ್ಯಂತ ಗೌರವದಿಂದ ನಮ್ಮನ್ನು ನಡೆಸಿಕೊಳ್ಳುತ್ತಿದ್ದರು. ಸಮೀಪದ ವಿದ್ಯಾರ್ಥಿ ಭವನದಿಂದ ಕಾಫಿ ತರಿಸಿ ಕುಡಿಸಿ, ನಾಯಕರಿಗೆ ದೂರವಾಣಿ ಕರೆ ಮಾಡಿ ನಾವು ಬಂದಿರುವ ವಿಷಯ ತಿಳಿಸಿ, ಅವರೊಂದಿಗೆ ಸಂಪರ್ಕ ಕಲ್ಪಿಸುತ್ತಿದ್ದರು.
ವೈಯಕ್ತಿಕ ಭಿನ್ನಾಭಿಪ್ರಾಯದ ನಡುವೆಯೂ ಅವರ ಬಗ್ಗೆ ಇಟ್ಟುಕೊಂಡಿದ್ದ ಗೌರವವು ನಿನ್ನೆ ಕರಗಿ ಹೋಯಿತು. ಭಾರತಕ್ಕೆ ಚರಕದಿಂದ ಅಥವಾ ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬರಲಿಲ್ಲ ಎಂಬ ಅವಿವೇಕದ ಮಾತುಗಳನ್ನಾಡುವ ಮೊದಲು ಈ ವ್ಯಕ್ತಿ, ಭಾರತದಲ್ಲಿ ಯಾರಾದರೂ ಗಾಂಧಿಜಿ ಒಬ್ಬರಿಂದ ಮಾತ್ರ ಸ್ವಾತಂತ್ರ್ಯ ಲಭಿಸಿತು ಎಂದು ಹೇಳಿರುವ ಮಾತುಗಳನ್ನು ದಾಖಲೆಯ ಮೂಲಕ ಸಾಬೀತು ಪಡಿಸಿಬೇಕಿತ್ತು. ಅದು ಸಾಧ್ಯವೆ? ಅನಕ್ಷಸ್ತರು ತುಂಬಿದ್ದ ಅಂದಿನ ಭಾರತದಲ್ಲಿ ಗಾಂಧಿಯನ್ನು ಎಂದೂ ನೋಡದ ಕೋಟ್ಯಾಂತರ ಜನತೆ ಆ ಮಹಾತ್ಮನ ಮಾತಿಗೆ ಮತ್ತು ಚಿಂತನೆಗೆ ಹೇಗೆ ಒಲಿದರು ಎಂಬುದನ್ನು ಸಂತೋಷ್ ಒಮ್ಮೆ ತಣ್ಣಗೆ ಕುಳಿತು ಯೋಚಿಸಿದ್ದರೆ, ಇಂತಹ ಅವಿವೇಕತನದ ಮಾತುಗಳು ಅವರ ಬಾಯಿಂದ ಹೊರಬರುತ್ತಿರಲಿಲ್ಲ.
ಮದನ್ ಲಾಲ್ ಡಿಂಗ್ರಾ, ಸಾವರ್ಕರ್, ಭಗತ್ ಸಿಂಗ್, ಚೆಂದ್ರಶೇಖರ ಅಜಾದ್ ಮುಂತಾದವರನ್ನು ತಮ್ಮ ಮಾತುಗಳಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಎಂದು ಸ್ಮರಿಸಿದ್ದಾರೆ. ಈ ಮಾತುಗಳನ್ನು ಅತಿಶಯದ ಮಾತುಗಳು ಎಂದು ನಾನು ಹೇಳಲಾರೆ ಆದರೆ, ಡಿಂಗ್ರಾ ಮತ್ತು ಸಾವರ್ಕರ್ ಕುರಿತ ಇತಿಹಾಸವನ್ನು ಮಾತ್ರ ನಿಮ್ಮ ಮುಂದೆ ತರಲು ಇಚ್ಚಿಸುತ್ತೇನೆ. ಮದನ್ ಲಾಲ್ ಡಿಂಗ್ರಾ ಲಂಡನ್ ನಗರದಲ್ಲಿ ಓದುತ್ತಿದ್ದಾಗಲೇ ಬ್ರಿಟಿಷರ ಬಗ್ಗೆ ಆಕ್ರೋಶಗೊಂಡಿದ್ದನು. ಸಾವರ್ಕರ್ ಸಂಪರ್ಕಕ್ಕೆ ಬಂದು, ಅವರ ಅಭಿನವ್ ಭಾರತ್ ಮಂಡಲ ಎಂಬ ರಹಸ್ಯ ಸಂಘಟನೆಯನ್ನು ಸೇರಿಕೊಂಡಿದ್ದನು. ಆತನಿಗೆ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಕರ್ಜನ್ ನನ್ನು ಕೊಲ್ಲುವ ಉದ್ದೇಶ ವಿತ್ತು. ಆದರೆ, ಅದೇ ಹೆಸರಿನ ಸರ್.ವಿಲಿಯಂ ಕರ್ಜನ್ ಎಂಬ ಇನ್ನೊಬ್ಬ ಅಧಿಕಾರಿಯನ್ನು ಹತ್ಯೆ ಮಾಡಿ, ಬ್ರಿಟಿಷ್ ಸರ್ಕಾರದಿಂದ ಬಂಧನಕ್ಕೆ ಒಳಗಾಗಿ, 1909 ರ ಆಗಸ್ಟ್ ತಿಂಗಳಿನಲ್ಲಿ ಲಂಡನ್ ನಗರದಲ್ಲಿ ಮರಣ ದಂಡನೆಗೆ ಒಳಗಾದನು.
ಮದನ್ ಲಾಲ್ ಡಿಂಗ್ರಾಗೆ ಆಶ್ರಯ ಮತ್ತು ಶಸ್ತ್ರಾಸ್ತ್ರ ( ಪಿಸ್ತೂಲ್) ಒದಗಿಸಿದ ಆರೋಪದಡಿ ಬಂದನಕ್ಕೆ ಒಳಗಾದ ಮತ್ತು ವಿನಾಯಕ ದಾಮೋದರ್ ಎಂದು ಆ ವೇಳೆಯಲ್ಲಿ ಕರೆಸಿಕೊಳ್ಳುತ್ತಿದ್ದ ಸಾವರ್ಕರ್ ಅವರನ್ನು ಹೆಚ್ಚಿನ ವಿಚಾರಣೆಗೆ ಭಾರತಕ್ಕೆ ( ಮುಂಬೈಗೆ) ಕರೆತರುವಾಗ, ಹಡಗು ಪ್ರಾನ್ಸ್ ನ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದಾಗ, ಈ ಮಹಾಶಯ ತಪ್ಪಿಸಿಕೊಳ್ಳಲು ಯತ್ನಿಸಿ, ಸಮುದ್ರಕ್ಕೆ ಹಾರಿದಾಗ, ಪ್ರಾನ್ಸ್ ಪೊಲೀಸರು ಬಂಧಿಸಿ ಸೆರೆಮನೆಗೆ ತಳ್ಳಿದರು. ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದ ಸಾವರ್ಕರ್ ಅವರನ್ನು ಬ್ರಿಟಿಷ್ ಸರ್ಕಾರ ಮತ್ತೆ ವಶಕ್ಕೆ ಪಡೆದು ಐವತ್ತು ವರ್ಷಗಳ ಸುಧೀರ್ಘ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾ್ ಸೆಲ್ಯೂಲರ್ ಜೈಲಿಗೆ ತಳ್ಳಿತು. ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾವರ್ಕರ್, ಬ್ರಿಟಿಷ್ ಸರ್ಕಾರಕ್ಕೆ ನಿರಂತರ ಕ್ಷಮಾರ್ಪಣೆಯ ಪತ್ರ ಬರೆಯುತ್ತಾ, ( ಒಟ್ಟು ಹನ್ನೊಂದು ಬಾರಿ) ಅಲ್ಲಿಂದ ಬಿಡುಗಡೆಗೊಂಡು, ಸ್ವಂತ ಊರಾದ ಮಹಾರಾಷ್ಟ್ರದ ರತ್ನಗಿರಿ ಬಳಿ ಗೃಹಬಧನದಲ್ಲಿದ್ದರು.
ಜೀವನ ನಿರ್ವಹಣೆಗಾಗಿ ಬ್ರಿಟಿಷ್ ಸರ್ಕಾರದ ಬಳಿ ಬಿಕ್ಷೆ ಬೇಡಿ, ಅಂಗಲಾಚಿದ ಪರಿಣಾಮ ಮಾಸಿಕ ನಿರ್ಬಂಧಿತ ಭತ್ಯೆ ಪಡೆಯುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಯಾವ ಹೋರಾಟಗಾರನು ಬ್ರಿಟಿಷರಿಂದ ಅಂತಹ ಎಂಜಲು ಕಾಸನ್ನು ಪಡೆದಿರಲಿಲ್ಲ. ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿ ಲಾಹೋರ್ ಜೈಲಿನಲ್ಲಿದ್ದು,1931 ರ ಮಾರ್ಚ್ ತಿಂಗಳಲ್ಲಿ ಗಲ್ಲಿಗೇರಿದ ಭಗತ್ ಸಿಂಗ್ ಮತ್ತು ಆತನ ಸಹಚರರು ಬ್ರಿಟಿಷರಿಗೆ ಕ್ಷಮಾರ್ಪಣೆ ಪತ್ರ ಬರೆಯಲಿಲ್ಲ, ಭತ್ಯೆ ಹೆಸರಿನಲ್ಲಿ ಹಣ ಪಡೆಯಲಿಲ್ಲ. ಈಗ ಹೇಳಿ, ಯಾರು ನಿಜವಾದ ಸ್ವಾತಂತ್ರ್ಯ ಹೋರಾಟಗಾರು?
ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಹಾನ್ ದೇಶಭಕ್ತರಂತೆ ಮತ್ತು ಇತಿಹಾಸಕಾರರಂತೆ ಮಾತನಾಡುವ ನಿಮಗೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಟಿಪ್ಪು ಸುಲ್ತಾನ್ ಹೆಸರು ಹೇಳಲು ಏಕೆ ಹಿಂಜರಿಕೆ? ಸ್ವತಃ ಬ್ರಿಟಿಷ್ ಸರ್ಕಾರ ಅಂದರೆ, ಈಸ್ಟ್ ಇಂಡಿಯಾ ಕಂಪನಿ ಒಪ್ಪಿಕೊಂಡಿರುವಂತೆ ಭಾರತದಲ್ಲಿ ಅವರಿಗೆ ದೊಡ್ಡ ಸವಾಲು ಒಡ್ಡಿದ ಏಕೈಕ ಸಂಸ್ಥಾನದ ದೊರೆ ಟಿಪ್ಪು ಸುಲ್ತಾನ್ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಅಯ್ಯಾ, ಮಿತ್ರರಾ, ಕೊಲ್ಕತ್ತಾ ನಗರದಲ್ಲಿರುವ ಬೃಹತ್ ವಿಕ್ಟೊರಿಯಾ ಸ್ಮಾರಕ ಭವನದಲ್ಲಿ ಎರಡನೇ ಮಹಡಿಯಲ್ಲಿ ಇಡೀ ಶ್ರೀರಂಗಪಟ್ಟಣದ ಕೃತಕ ಮಾದರಿಯನ್ನು ಹತ್ತು ಅಡಿ ಅಗಲ ಇಪ್ಪತ್ತುಅಡಿ ಉದ್ದದ ಟೇಬಲ್ ಮೇಲೆ ಸೃಷ್ಟಿ ಮಾಡಿ ಇಡಲಾಗಿದೆ. ಜೊತೆಗೆ ಇತರೆ ವಿವರಗಳಿವೆ. ಬ್ರಿಟಿಷರನ್ನು ಹಗಲಿರುಳು ಕಾಡಿದ ಟಿಪ್ಪುವಿನ ಹೆಸರನ್ನು ಹೇಳಲು ನಿಮ್ಮ ನಾಲಿಗೆಗೆ ಯಾವ ಬಗೆಯ ಲಕ್ವಾ ಹೊಡೆದಿದೆ? ಹೇಳಬಲ್ಲಿರಾ?
ಹದಿನೆಂಟನೇ ಶತಮಾನದ ಟಿಪ್ಪು ಸುಲ್ತಾನ್ ಇರಲಿ, ಇಪ್ಪತ್ತನೇ ಶತಮಾನದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿ ಜೊತೆ ಕೈ ಜೋಡಿಸಿ ಹೋರಾಡಿದ ಮೌಲನಾ ಅಜಾದ್ ಮತ್ತು ಭಾರತದ ವಾಯುವ್ಯ ಪ್ರಾಂತ್ಯದ ಬೆಲೂಚಿಸ್ಥಾನದಿಂದ ಬಂದ ಖಾನ್ ಅಬ್ದಲ್ ಗಫರ್ ಖಾನ್ ಹಾಗೂ ಇತರೆ ನಾಯಕರ ಹೆಸರು ಬಿ.ಎಲ್.ಸಂತೋಷ್ ಅಥವಾ ನಿಮ್ಮಿಂದ ಎಂದಾದರೂ ಕೇಳಿ ಬಂದಿರುವ ಇತಿಹಾಸ ಉಂಟೆ? ನಿಮಗೆ ಕನಿಷ್ಠ ಇಪ್ಪತ್ತೈದು ಮಂದಿ ಮುಸ್ಲಿಂ ಮಹಿಳೆಯರ ದಾಖಲೆಯನ್ನು ನಾನು ನೀಡಬಲ್ಲೆ. ನನ್ನ ಪದಗಳಿವೆ ಎದೆಯೊಳಗೆ ಎಂಬ ಸಂಶೋಧನಾ ಕೃತಿಯಲ್ಲಿ 1875 ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಾರ್ಯಕರ್ತರಿಗೆ ಆಶ್ರಯ ನೀಡಿ, ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಕಾರಣಕ್ಕೆ ಕಾನ್ಪುರದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲ್ಪಟ್ಟ ಇಪ್ಪತ್ತೊಂದು ಮುಸ್ಲಿಂ ಸಂಗೀತಗಾರ್ತಿಯರು ಮತ್ತು ನೃತ್ಯಗಾತಿಯರ ವಿವರಗಳಿವೆ. ದಯವಿಟ್ಟು ಓದಿ ಮತ್ತು ಎದೆಯೊಳಗಿನ ವಿಷವನ್ನು ಕಡಿಮೆ ಮಾಡಿಕೊಳ್ಳಿ.
ಅಯ್ಯಾ ಅವಿವೇಕಿ ಮಿತ್ರರಾ, ನಿಮ್ಮ ಹಿಂದೂ ರಾಷ್ಟ್ರದ ಹುಚ್ಚುತನವನ್ನು ದಯವಿಟ್ಟು ತ್ಯೆಜಿಸಿ. ನಿಮ್ಮಂತೆ, ಪಾಕಿಸ್ತಾನದಲ್ಲಿ ಮುಸ್ಲಿಂ ರಾಷ್ಟ್ರಕ್ಕಾಗಿ ಹಗಲಿರುಳು ಶ್ರಮಿಸಿದ ಓರ್ವ ವ್ಯಕ್ತಿ 1948 ರಲ್ಲಿ ಅಲ್ಲಿಂದ ಗಡಿಪಾರಾಗಿ ಲಂಡನ್ ನಗರದಲ್ಲಿ ಬೀದಿ ನಾಯಿಯಂತೆ ಪ್ರಾಣ ಬಿಟ್ಟನು. ಆತನ ಇತಿಹಾಸವನ್ನು ಒಮ್ಮೆ ಓದಿ ನೋಡಿ. ಚೌಧುರಿ ರೆಹಮತ್ ಆಲಿ ಎಂಬ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಗಳಿಸಿದ್ದ ಈ ವ್ಯಕ್ತಿ 1933 ರಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕೆ ಪಾಕಿಸ್ತಾನ ಎಂಬ ಹೆಸರನ್ನು ನೀಡಿದ ಕೀರ್ತಿಗೆ ಒಳಗಾಗಿದ್ದಾನೆ. ಪಾಕಿಸ್ತಾನ ಎಂಬ ಹೆಸರಿನ ಪ್ರತಿಯೊಂದು ಅಕ್ಷರದ ಹಿಂದೆ ಪಂಜಾಬ್, ಆಫ್ಘಾನಿಸ್ತಾನ್, ಕಾಶ್ಮೀರ್, ಸಿಂದ್, ಮತ್ತು ಬೆಲೂಚಿಸ್ತಾನ್ ಹೆಸರುಗಳಿರುವುದನ್ನು ನಾವು ಗಮನಿಸಬಹುದು.
1947 ರಲ್ಲಿ ಭಾರತ ಪಾಕ್ ವಿಭಜನೆಯಾದಾಗ, ಅಲ್ಲಿನ ಅಧ್ಯಕ್ಷ ಜಿನ್ನಾ ಮತ್ತು ಪ್ರಥಮ ಪ್ರಧಾನಿ ಲಿಯಾಕತ್ ಖಾನ್ ಅವರಿಗೆ ನೂತನ ಪಾಕಿಸ್ತಾನದ ಹಿಂದೂ, ಸಿಖ್ ಹಾಗೂ ಪಾರ್ಸಿ ಗಳ ಬಗ್ಗೆ ಯಾವುದೇ ಅಸಮಾಧಾನ ಇರಲಿಲ್ಲ. ಅವರೆಲ್ಲರೂ ಪಾಕಿಸ್ತಾನದ ಗೌರವಾನ್ವಿತ ನಾಗರೀಕರು ಎಂದು ಪರಿಗಣಿಸಿದ್ದರು. ಆದರೆ, ಚೌಧಿರಿ ರೆಹಮತ್ ಮಾತ್ರ ಇಲ್ಲಿನ ಹಿಂದೂ ರಾಷ್ಟ್ರ ಭಕ್ತರ ಶೈಲಿಯಲ್ಲಿ ಪಾಕಿಸ್ತಾನದ ಹಿಂದೂ ಮತ್ತು ಸಿಖ್ ಸಮುದಾಯದ ವಿರುದ್ಧ ವಿಷ ಕಾರುತ್ತಾ, ಲೇಖನಗಳನ್ನು ಬರೆಯುತ್ತಾ, ಸರ್ಕಾರದ ನೀತಿಗಳನ್ನು ಖಂಡಿಸುತ್ತಿದ್ದನು. 1948 ರ ಸೆಂಪ್ಟಂಬರ್ ತಿಂಗಳಲ್ಲಿ ಮಹಮದ್ ಆಲಿ ಜಿನ್ನಾ ನಿಧನಾನಂತರ, ಪ್ರಧಾನಿ ಲಿಯಾಕತ್ ಆಲಿ ಖಾನ್ ಅವರು 1948 ರ ಅಕ್ಟೋಬರ್ ತಿಂಗಳಲ್ಲಿ ಈ ಪರಮ ಮುಸ್ಲಿಂ ವಾದಿಯನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಿದರು.
ದೇಶಭ್ರಷ್ಟನಾದ ಚೌಧುರಿ ರೆಹಮತ್ ಲಂಡನ್ ನಗರಕ್ಕೆ ಬಂದು ಅಲ್ಲಿನ ಕಾನೂನು ಸೇವಾ ಸಂಸ್ಥೆಗಳಲ್ಲಿ ಗುಮಾಸ್ತನಾಗಿ ದುಡಿಯುತ್ತಾ, ಒಂಟಿಯಾಗಿ ಬದುಕು ದೂಡುತ್ತಿದ್ದನು. 1951 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ನಿಧನವಾಗಿ ಅನಾಥ ಹೆಣವಾದನು. ಆನಂತರ ಪಾಕ್ ಸರ್ಕಾರವು ಲಂಡನ್ ನಗರದಲ್ಲಿದ್ದ ರಾಯಭಾರಿ ಕಚೇರಿ ಮೂಲಕ ಆಸ್ಪತ್ರೆ ಬಿಲ್ ಹಣವನ್ನು ಪಾವತಿಸಿ, ಲಂಡನ್ ನಗರದಲ್ಲಿ ಅಂತ್ಯಕ್ರಿಯೆ ನೆರವೇರಿಸಿತು.

ಆರ್.ಎಸ್.ಎಸ್. ಹಿಂದೂ ರಾಷ್ಟ್ರದ ಭಕುತ ಮಣಿಗಳಾ, ಭಾರತದ ಇತಿಹಾಸವನ್ನು ಗಂಭೀರವಾಗಿ ಓದಿಕೊಳ್ಳಿರಯ್ಯ, ಈ ಜಗತ್ತಿನ ನೆಲದಲ್ಲಿ ಹಾರಾಡಿದ ಯಾವ ಸಾಮ್ರಾಟನೂ ಶಾಶ್ವತವಾಗಿ ಉಳಿದಿಲ್ಲ. ಎಲ್ಲರೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿರುವ ಗಾಂಧೀಜಿ ಮತ್ತು ಅವರ ಸಹವರ್ತಿಗಳಾದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪೊಳ್ಳು ಭಾಷಣಗಳಿಂದ ಅಳಿಸಲು ಸಾಧ್ಯವಿಲ್ಲ. ಏಕೆಂದರೆ, ಈ ನೆಲದಲ್ಲಿ ದಾರ್ಶನಿಕ ಚಿಂತನೆಗಳಿಗೆ ಎಂದಿಗೂ ಸಾವಿಲ್ಲ.
ಪಾಕಿಸ್ತಾನದ ಚೌಧುರಿ ರೆಹಮತ್ ರೀತಿಯಲ್ಲಿ ನೀವೂ ಬೀದಿಯ ಹೆಣವಾಗುವುದು ಬೇಡ ಕಣ್ರಯ್ಯಾ. ಈಗ ಎದ್ದು ನಿಂತಿರವ ಜೆನ್ ಜಿ ಎಂಬ ಯುವತಲೆಮಾರಿನ ಚಿಂತನೆಯು ನಮ್ಮ ತಲೆ ಮಾಸಿದ ಚಿಂತನೆಗಳಿಂತ ಅರ್ಧ ಶತಮಾನಗಳ ಕಾಲ ಮುಂದಿದೆ. ಈ ವಾಸ್ತವ ಸತ್ಯವನನ್ನು ಅರ್ಥ ಮಾಡಿಕೊಂಡು ಮಾತನಾಡಲು ಕಲಿಯಿರಿ.
ಚಿತ್ರ ಒಂದು- ಚೌಧುರಿ ರೆಹಮತ್
ಚಿತ್ರ ಎರಡು- ಲಂಡನ್ ನಗರದಲ್ಲಿರುವ ಆತನ ಸಮಾಧಿ.

ಮಂಡ್ಯ ರೈತ ಸಂಘದ ಹಿರಿಯ ನಾಯಕ ಹೆಚ್.ಶ್ರೀನಿವಾಸ್ ಈಗ ನೆನಪು ಮಾತ್ರ.

 


1980 ರ ದಶಕದ ಆರಂಭದಲ್ಲಿ ಶಿವಮೊಗ್ಗದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ರೈತ ಸಂಘವು ಹಾಸನ ಜಿಲ್ಲೆಗೆ ವಿಸ್ತರಿಸಿ, ಅಲ್ಲಿಂದ ಮಂಡ್ಯ ಜಿಲ್ಲೆಗೆ ಕಾಲಿಟ್ಟಾಗ, ರಾಜ್ಯ ರೈತಸಂಘವನ್ನು ಪ್ರೀತಿಯಿಂದ ಮತ್ತು ಶ್ರದ್ಧೆಯಿಂದ ಮಂಡ್ಯ ನೆಲದಲ್ಲಿ ಕಟ್ಟಿ ಬೆಳೆಸಿದವರಲ್ಲಿ ಹೆಚ್. ಶ್ರೀನಿವಾಸ್ ಪ್ರಮುಖರು.
ನಿನ್ನೆ ಮಂಡ್ಯ ನಗರದಲ್ಲಿ ಈ ಹಿರಿಯ ಜೀವ ತಮ್ಮ 88 ನೇ ವಯಸ್ಸಿಗೆ ನಿಧನರಾದರು. ಮೈಸೂರು- ಬೆಂಗಳೂರು ಮುಖ್ಯರಸ್ತೆಯ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಬಂದಿಗೌಡ ಬಡಾವಣೆ ಎಂದರೆ, ನಮ್ಮ ಪಾಲಿಗೆ ಅಪ್ಪ ಮತ್ತು ಅಣ್ಣನ ಮನೆಗಳು ಎಂಬಂತಿತ್ತು. ನಾವೆಲ್ಲರೂ ಅಪ್ಪಾ ಎಂತಲೇ ಕರೆಯುತ್ತಿದ್ದ ಜಿ.ಮಾದೇಗೌಡರು ಅಲ್ಲಿದ್ದರು. ಅವರ ಮನೆಯ ಕೂಗಳತೆಯಲ್ಲಿ ಅಣ್ಣಾ ಎನ್ನುತ್ತಿದ್ದ ಮಂಡ್ಯ ಜಿಲ್ಲೆಯ ರೈತ ಸಂಘದ ಪ್ರಥಮ ಅಧ್ಯಕ್ಷರಾದ ಶ್ರೀನಿವಾಸ್ ಮನೆ ಇತ್ತು.
ನಮ್ಮ ಮಂಡ್ಯ ನೆಲದ ಸಂಸ್ಕೃತಿಯ ಮೂಲ ಲಕ್ಷಣವೆಂದರೆ, ಮನೆಗೆ ಬಂದವರನ್ನು ಕಾಫಿ ಕುಡಿಯುತ್ತೀರಾ? ಊಟ ಮಾಡುತ್ತೀರಾ? ಎಂದು ಕೇಳುವುದು ಅತಿಥಿಗಳಿಗೆ ಅಪಮಾನ ಮಾಡಿದಂತೆ.
ಊಟದ ಸಮಯವಾಗಿದ್ದರೆ, ಊಟದ ತಟ್ಟೆ ಮತ್ತು ಕಾಫಿ ಅಥವಾ ಚಹಾ ಸಮಯವಾಗಿದ್ದರೆ ಪಾನೀಯ ಲೋಟಗಳು ಮನೆಗೆ ಬಂದ ಅತಿಥಿಗಳ ಮುಂದೆ ಹಾಜರಾಗುತ್ತವೆ.
ಮನೆಯಲ್ಲಿರುವ ಸದಸ್ಯರ ಸಂಖ್ಯೆಗಿಂತ ಎರಡು ಮೂರು ಮಂದಿಗೆ ಹೆಚ್ಚಿನ ಮುದ್ದೆ, ಅನ್ನ ಮಾಡುವುದು ನಮ್ಮ ಪದ್ಧತಿ. ಹಾಗಾಗಿ‌ ಅಪ್ಪ ಮಾದೇಗೌಡರ ಮನೆಗೆ ಹೋದರೆ, ಅಪ್ಪನವರ ಬೈಗುಳ, ಬುದ್ಧಿವಾದದ ಜೊತೆಗೆ ಊಟ ದೊರೆಯುತ್ತಿತ್ತು. ಶ್ರೀನಿವಾಸ್ ಅಣ್ಣನವರ ಮನೆಗೆ ಹೋದರೆ, ಪ್ರೀತಿ ಹಾಗೂ ಚಳುವಳಿಯನ್ನು ಕಟ್ಟಿ ಬೆಳೆಸುವುದರ ಜೊತೆಗೆ ಕುವೆಂಪು ಮಂತ್ರ ಮಾಂಗಲ್ಯದ ವಿವಾಹವಾಗುವುದರೊಂದಿಗೆ ವರದಕ್ಷಿಣೆ, ಅದ್ದೂರಿ ವಿವಾಹ ವಿರೋದಿಸುವ ಬಗೆ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣ ಮಾಡುವುದರ ಕುರಿತು ಮಾರ್ಗದರ್ಶನ ನೀಡುತ್ತಾ, ಊಟ ಮಾಡಿಸಿ ಕಳಿಸುತ್ತಿದ್ದರು.
ಹಳ್ಳಿಗಳಿಂದ ನಗರಕ್ಕೆ ಬಂದವರು ಹಸಿದ ಹೊಟ್ಟೆಯಲ್ಲಿ ಇರುತ್ತಾರೆ ಎಂಬ ಮನುಷ್ಯ ಪ್ರಜ್ಞೆಯು ನಮ್ಮ ಮಂಡ್ಯದ ಜನರಿಗೆ ವಂಶವಾಹಿಯಂತೆ, ಪರಂಪರೆಯಂತೆ ಬೆಳೆದು ಬಂದಿತ್ತು. ಅದು ಇಂದಿಗೂ ಜೀವಂತವಿದೆ. ಹೆಚ್. ಶ್ರೀನಿವಾಸ್ ಮದ್ದೂರು ತಾಲ್ಲೂಕು ವಳಗೇರಹಳ್ಳಿಯ ಶ್ರೀಮಂತ ರೈತ ಕುಟುಂಬದಿಂದ ಬಂದು ಮಂಡ್ಯದಲ್ಲಿ ವಕೀಲರಾಗಿದ್ದರು
ಅವರ ಮಾರ್ಗದರ್ಶನಿಂದ ಪ್ರೇರಿತರಾದ ನನ್ನ ತಲೆಮಾರಿನ ಬಹುತೇಕ ಗೆಳೆಯರು ಕುವೆಂಪು ಮಂತ್ರ ಮಾಂಗಲ್ಯದ ವಿವಾಹವಾಗಿ ಬದುಕು ಕಟ್ಟಿಕೊಂಡೆವು. ನನ್ನ ಪ್ರೇಮ ವಿವಾಹಕ್ಕೆ ಹದಿನಾಲ್ಕು ವರ್ಷ ವಿರೋಧ ವ್ಯಕ್ತ ಪಡಿಸಿ, ತಡೆಯೊಡ್ಡಿದ್ದ ನನ್ನ ಮಾವನವರು, ನಾನು 1989 ರಲ್ಲಿ ಸರಳ ವಿವಾಹವಾದ ಬಗೆ ನೋಡಿ, ವಿವಾಹವಾದ ಕ್ಷಣಾರ್ಧದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದರು. ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಶ್ರೀಮಂತ ಕುಟುಂಬದಿಂದ ಬಂದಿದ್ದ ಅವರಿಗೆ ಬಡ ರೈತನ ಮಗನಾದ ನನಗೆ ಮಗಳನ್ನು ನೀಡಲು ಇಷ್ಟವಿರಲಿಲ್ಲ.
ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘ ಸ್ಥಾಪನೆಯಾದಾಗ, ಶ್ರೀನಿವಾಸ್ ಅಣ್ಣ ಅಧ್ಯಕ್ಷರಾದರೆ, ಹನಕರೆ ಗ್ರಾಮದ ಹಾಗೂ ವಕೀಲರಾಗಿದ್ದ ಎಂ. ಶ್ರೀನಿವಾಸ್ ಖಜಾಂಚಿಯಾಗಿದ್ದರು. ಇನ್ನೊಬ್ಬ ಯುವ ನಾಯಕ ಮಂಡ್ಯ ಸಮೀಪದ ಸೂನಗಹಳ್ಳಿ ಗ್ರಾಮದ ಎಸ್.ಡಿ.ಜಯರಾಂ ಸಂಘಟನಾ ಕಾರ್ಯದರ್ಶಿಯಾದರು. ಮುಂದಿನ ದಿನಗಳಲ್ಲಿ ಎಸ್.ಡಿ. ಜಯರಾಂ ಮತ್ತು ಶ್ರೀನಿವಾಸ್ ಜೆ.ಡಿ.ಎಸ್. ಸೇರಿ ಶಾಸಕರಾದರು. ಆದರೆ, ಹೆಚ್. ಶ್ರೀನಿವಾಸ್ ತಟಸ್ಥರಾಗಿ ರೈತ ಸಂಘದಲ್ಲಿ ಉಳಿದರು. 1983 ರಲ್ಲಿ ಪಾಂಡುವಪುರದ ಮಿತ್ರ ಪುಟ್ಟಣ್ಣಯ್ಯನವರು ರೈತ ಸಂಘಕ್ಕೆ ಬಂದ ನಂತರ ರೈತ ಚಳುವಳಿಗೆ ಹೊಸ ಸ್ವರೂಪ ಮತ್ತು ಚಿಂತನೆ ಧಕ್ಕಿತು.
ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಮಂಡ್ಯ ಜಿಲ್ಲಾ ರೈತ ಸಂಘ ಆರ್ಥಿಕವಾಗಿ ದೊಡ್ಡ ಶಕ್ತಿಯನ್ನು ತುಂಬಿತು. ಮಂಡ್ಯ ಜಿಲ್ಲೆಯಲ್ಲಿದ್ದ ಮೂರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುತ್ತಿದ್ದ ರೈತರು ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ನೀಡುತ್ತಿದ್ದ ದರದಲ್ಲಿ ಐವತ್ತು ಪೈಸೆ ಹಣವನ್ನು ಸಂಘಕ್ಕೆ ನೀಡುವಂತೆ ಶ್ರೀನಿವಾಸ್ ಮನವೊಲಿಸಿದ್ದರು. ಐವತ್ತು ಟನ್ ಕಬ್ಬು ಬೆಳೆದ ರೈತನಿಂದ ಸಂಘಕ್ಕೆ ಇಪ್ಪತ್ತೈದು ರೂಪಾಯಿ ಸಂದಾಯವಾಗುತ್ತಿತ್ತು.
ಈ ಕಾರಣದಿಂದ ಬೆಂಗಳೂರು ನಗರದ ಕಬ್ಬನ್ ಪಾರ್ಕ್ ನಲ್ಲಿ ರೈತರ ಬೃಹತ್ ಸಮಾವೇಶ ಮತ್ತು ಪ್ರೊ.ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಕಡಿದಾಳು ಶಾಮಣ್ಣ ಮುಂತಾದ ನಾಯಕರು ರಾಜ್ಯಾದ್ಯಂತ ಓಡಾಡಿ ರೈತ ಸಂಘಟನೆಯನ್ನು ರೂಪಿಸಲು ಸಾಧ್ಯವಾಯಿತು. ಬೆಸಗರಹಳ್ಳಿ ಸಮೀಪದ ಶಿವಾರಗುಡ್ಡದಲ್ಲಿ ಒಂದು ವಾರ ಕಾಲ ರಾಜ್ಯ ರೈತ ಸಂಘಟನೆಯ ಪದಾಧಿಕಾರಿಗಳಿಗೆ ತರಬೇತಿ ಶಿಬಿರ ಏರ್ಪಡಿಸಿ, ಕಾನೂನು ಮತ್ತು ರೈತರ ಹಕ್ಕುಗಳನ್ನು ಪರಿಚಯ ಮಾಡಿಕೊಟ್ಟಿದ್ದು ಮಂಡ್ಯ ರೈತ ಸಂಘದ ಸಾಧನೆ.
ಈ ಶಿಬಿರದಲ್ಲಿ ಪ್ರೊ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಕಡಿದಾಳು ಶಾಮಣ್ಣ. ಪ್ರೊ.ರವಿವರ್ಮಕುಮಾರ್, ಹಾಸನದ ಮಂಜುನಾಥ ದತ್ತಣ್ಣ, ಆರ್.ಪಿ. ವೆಂಕಟೇಶ ಮೂರ್ತಿ, ಶಿವಮೊಗ್ಗದ ಕೆ.ಟಿ. ಗಂಗಾಧರ್ ಮುಂತಾದವರು ಆಗಮಿಸಿ ಉಪನ್ಯಾಸ ನೀಡಿದ್ದರು. ಅಂದು ಪರಿಚಯವಾದ ಈ ಅಣ್ಣಂದಿರು ಮತ್ತು ಗುರುಗಳ ಜೊತೆ ಈಗಲೂ ನಿಕಟ ಸಂಪರ್ಕ ಇಟ್ಟುಕೊಂಡಿದ್ದೀನಿ.
ಈಗ ಮಂಡ್ಯ ಜಿಲ್ಲೆಯ ರೈತ ಸಂಘದ ಸ್ಥಾಪಕರಲ್ಲಿ ಮೂರು ಬಾರಿ ಶಾಸಕರಾಗಿದ್ದ ಎಂ. ಶ್ರೀನಿವಾಸ್ ಮಾತ್ರ ಇದ್ದಾರೆ. ಎಸ್.ಡಿ.ಜಯರಾಂ, ನನ್ನೂರಿನ ಕೆ.ಕೃಷ್ಣ, ಕ್ಯಾತನಹಳ್ಳಿ ಪುಟ್ಟಣ್ಣಯ್ಯ,ವಳಗೇರಹಳ್ಳಿಯ ಅಶೋಕ, ಬೆಸಗರಹಳ್ಳಿಯ ನನ್ನ ಹೈಸ್ಕೂಲ್ ಸಹಪಾಠಿ ಕೋಣಸಾಲೆ‌ ನರಸರಾಜು ಈಗಿಲ್ಲ. ಈ ದಿನ ಹೆಚ್. ಶ್ರೀನಿವಾಸ್ ಅಣ್ಣ ಕೂಡಾ ಮರಳಿ ಬಾರಲಾರದ ಊರಿಗೆ ತೆರಳಿದರು.
ರಾಜ್ಯ ಮಟ್ಟದಲ್ಲಿ ಸುಂದರೇಶ್, ಪ್ರೊಫೆಸರ್,ನಂಜುಂಡಸ್ವಾಮಿ, ಹೆಚ್.ಎಸ್. ರುದ್ರಪ್ಪ, ಇಲ್ಲ. ಕಡಿದಾಳು ಶಾಮಣ್ಣನವರು ಹಾಸಿಗೆ‌ಹಿ ಡಿದಿದ್ದಾರೆ. ಶಿವಮೊಗ್ಗಕ್ಕೆ ಹೋದರೆ, ಕಡದಕಟ್ಟೆ ಗಂಗಾಧರಣ್ಣ ಸಿಗುತ್ತಾರೆ. ಹಾಸನಕ್ಕೆ ಹೋದರೆ, ದತ್ತಣ್ಣ ಮತ್ತು ವೆಂಕಟೇಶ್ ಮೂರ್ತಿ ಅಣ್ಣ ಸಿಗುತ್ತಾರೆ. ನೋವಿನ ಸಂಗತಿ ಎಂದರೆ, ನಲವತ್ತು ವರ್ಷಗಳ ಕಾಲ ರಾಮಲಕ್ಷ್ಮಣರಂತೆ ಬದುಕಿ, ಹಾಸನದಲ್ಲಿ ಜನತಾ ಮಾಧ್ಯಮ ಪತ್ರಿಕೆ ನಡೆಸಿದ ಈ ಅಣ್ಣಂದಿರು ಈಗ ಬೇರೆಯಾಗಿದ್ದಾರೆ.
ಯಾಕ್ರಣ್ಣಾ? ಏನಾಯ್ತು ನಿಮಗೆ ಎಂದು ಕೇಳುವ ದ್ಯರ್ಯ ನನಗಿಲ್ಲ.ಏಕೆಂದರೆ, ಈ ಅಣ್ಣಂದಿರಿಂದ, ನೈತಿಕತೆ ಮತ್ತು‌ನಿಷ್ಟುರತೆಯನ್ನು ಕಲಿತವನು ನಾನು
ಹಾಗಾಗಿ ಈಗ ಎಲ್ಲಾ ಸಾರ್ವಜನಿಕ ಚಳುವಳಿಗಳಿಂದ ದೂರ ಉಳಿದಿದ್ದೀನಿ.
ಧಾರವಾಡ ಕುರಿತಂತೆ ಹಿಂದೆ ಒಂದು ಜನಪ್ರಿಯ ಜೋಕ್ ಚಾಲ್ತಿಯಲ್ಲಿತ್ತು. ಧಾರವಾಡ ನೆಲದಲ್ಲಿ ನಿಂತು‌ ನೀವು ಕಲ್ಲು ಬೀಸಿದರೆ, ಅದು ಯಾವುದಾದರೂ ಒಬ್ಬ ಕವಿಯ ಮನೆ ಮೇಲೆ ಬೀಳುತ್ತದೆ ಎಂದು.
ಈಗ‌ ಕರ್ನಾಟದ ನೆಲದಲ್ಲಿ ನಿಂತು ಒಂದು ಕಲ್ಲು ಬೀಸಿದರೆ, ಅದು ಯಾವುದಾದರೂ ಒಬ್ಬ ರಾಜ್ಯ ರೈತ ಸಂಘದ ಅಧ್ಯಕ್ಷನ ಮನೆಯ ಮೇಲೆ ಅಥವಾ ರಾಜ್ಯ ದಲಿತ ಸಂಘಟನೆಯ ಅಧ್ಯಕ್ಷನ ಮನೆಯ ಮೇಲೆ ಬೀಳುತ್ತದೆ
ಊರಿಗೊಬ್ಬ ದೊಣ್ಣೆ ನಾಯಕ ಸೃಷ್ಟಿಯಾದರೆ, ಸಾರ್ವಜನಿಕ ಚಳುವಳಿಗೆ ಅರ್ಥ, ಘನತೆ ಮತ್ತು ಗಾಂಭಿರ್ಯ ಉಳಿಯುವುದಿಲ್ಲ.
ಕ್ಷಮಿಸಿ, ಅಣ್ಣನವರ ಅಗಲಿಕೆಯ ನೋವಿನಲ್ಲಿ ಇವೆಲ್ಲವನ್ನೂ ಬರೆಯಬೇಕಾಯಿತು.

ಭಾನುವಾರ, ಆಗಸ್ಟ್ 9, 2026

ಗೆಳೆಯ ಎನ್.ಕೆ. ಹನುಮಂತಯ್ಯನ ನೆನಪುಗಳು



ಕಳೆದ ಹದಿನೈದು ವರ್ಷಗಳಿಂದ ಈ ಫೇಸ್ ಬುಕ್ ನಲ್ಲಿರುವ ಕವಿಪುಂಗವರು ಮತ್ತು ಪುಂಗಿಣಿಯರ ಕಾಟದಿಂದ ನಾನು ಕವಿತೆಗಳನ್ನು ಓದುವುದನ್ನು ನಿಲ್ಲಿಸಿದ್ದೀನಿ. ವಾಸ್ತವವಾಗಿ ನಾನು ಕಾವ್ದದ ಕಡು ವ್ಯಾಮೋಹಿ. ಬೇಸರವಾದಾಗೆಲ್ಲಾ ನನ್ನ ಸಂಗ್ರಹದಲ್ಲಿರುವ ಕವಿತೆಗಳನ್ನು ಓದುವುದು ನನ್ನ ಹವ್ಯಾಸ.
ಇತ್ತೀಚೆಗಿನ ವರ್ಷಗಳಲ್ಲಿ ಸುಬ್ಬು ಹೊಲೆಯಾರ್ ಮತ್ತು ಎನ್.ಕೆ.ಹನುಮಂತಯ್ಯ ನನ್ನ ಇಷ್ಟದ ಕವಿಗಳಲ್ಲಿ ಮುಖ್ಯರಾದವರು. ಮಿತ್ರ ಮೊಗಳ್ಳಿ ಗಣೇಶ್ ಮೂಲಕ ಪರಿಚಯವಾಗಿದ್ದ ಹನುಮಂತಯ್ಯನ ಒಂದು ಪದ್ಯ ‘’ ಅವ್ವ ನಿಂತೇಯಿದ್ದಾಳೆ’’ ಎನ್ನುವ ಕವಿತೆ ನನನ್ನ ಅಲುಗಾಡಿಸಿ ಬಿಟ್ಟಿತ್ತು ಪಿ.ಲಂಕೇಶ್ ಅವರ ‘’ ನನ್ನವ್ವ ಫಲವತ್ತಾದ ಕಪ್ಪು ನೆಲ’’ ಕವಿತೆಯ ಹಾಗೆ ಹನುಮಂತಯ್ಯನ ಈ ಕವಿತೆ ಯಾವಾಗಲೂ ನನಗೆ ನೆನಪಾಗುತ್ತಿತ್ತು.
ಹನುಮಂತಯ್ಯ ಪ್ರೀತಿಸಿ, ವಿವಾಹವಾಗಿ, ನಂತರ ಇನ್ನೊಂದು ಪ್ರೇಮಪ್ರಕರಣಕ್ಕೆ ಸಿಲುಕಿ, ಪ್ರಾಪಪ್ರಜ್ಞೆ ಮತ್ತು ಅದರಿಂದ ಹೊರಬಾರದೆ ಆತ್ಮಹತ್ಯೆಗೆ ಶರಣಾಗಿದ್ದು ಕನ್ನಡ ಕಾವ್ಯಲೋಕದ ದುರಂತಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾಗ, 2010 ಎಂದು ನೆನಪು. ಬೆಳಿಗ್ಗೆ ಕಾಲೇಜಿಗೆ ಹೋದ ತಕ್ಷಣ, ಅಧ್ಯಾಪಕರ ಕೊಠಡಿಯಲ್ಲಿ ಜೇಬಿನಲ್ಲಿ ತಂದಿದ್ದ ವಿಷ ಕುಡಿದುಬಿಟ್ಟ.
ಮಧ್ಯಾಹ್ನದ ವೇಳೆಗೆ ತಿಪಟೂರಿನಿಂದ ಎಸ್. ಗಂಗಾಧರಯ್ಯ ನನಗೆ ಕರೆ ಮಾಡಿ, ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿರುವ ಹನುಮಂತಯ್ಯನನ್ನು ಹೇಗಾದರು ಮಾಡಿ ಉಳಿಸಬೇಕು ಗುರುವೇ ಎಂದು ಹೇಳಿದಾಗ, ನನಗೆ ಶಾಕ್ ಆಯಿತು. ಗಂಗಾಧರಯ್ಯನವರ ಪುತ್ರಿ ಸ್ಮಿತಾ ಮಾಕಳ್ಳಿಗೆ ಧಾರವಾಡದಲ್ಲಿ ನನ್ನ ಮಕ್ಕಳು ಓದುತ್ತಿದ್ದ ಜೆ.ಎಸ್.ಎಸ್. ಕಾಲೇಜಿನಲ್ಲಿ ಸೀಟ್ ಕೊಡಿಸಿದ್ದೆ. ಹಾಗಾಗಿ ಗಂಗಾಧರಯ್ಯ ದಂಪತಿಗಳು ಧಾರವಾಡದ ಮನೆಗೆ ಬರುವುದು ಸಾಮಾನ್ಯವಾಗಿತ್ತು. ಬಂದಾಗಲೆಲ್ಲಾ , ಹನುಮಂತಯ್ಯ, ಪ್ರೀತಿಸಿ ಮದುವೆಯಾದ ನಂತರವೂ, ಇನ್ನೊಂದು ಪ್ರಕರಣದಲ್ಲಿ ಸಿಲುಕಿ ನರಳಾಡುತ್ತಿರುವುದನ್ನು ಇಬ್ಬರೂ ಸಾಮಾನ್ಯವಾಗಿ ಚರ್ಚಿಸುತ್ತಿದ್ದೆವು. ಎರಡು ಮೂರು ಬಾರಿ ಕರೆ ಮಾಡಿ ತಮ್ಮನಿಗೆ ಬುದ್ದಿವಾದ ಹೇಳುವ ಹಾಗೆ ಹನುಮಂತಯ್ಯನಿಗೆ ಹೇಳಿದ್ದೆ.
ಉಡುಪಿ ಮತ್ತು ಮಂಗಳೂರು ಈ ಎರಡು ಜಿಲ್ಲೆಗಳು ಉದಯ ಟಿ.ವಿ.ಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದಾಗ, ನನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ. ಉತ್ತರ ಕನ್ನಡ ಜಿಲ್ಲೆ ಮಾತ್ರ ನನ್ನ ವ್ಯಾಪ್ತಿಯಲ್ಲಿತ್ತು. ಉಡುಪಿಯ ವರದಿಗಾರ ಗಣೇಶ್ ಮತ್ತು ಮಂಗಳೂರು ವರದಿಗಾರ ಶ್ರೀನಿವಾಸ ನಾಯಕ್ ಇಬ್ಬರೂ ನನಗೆ ಪರಿಚಿತರು ನಾನು ಅತ್ತ ಕಡೆ ಹೋದಾಗ, ಸದಾ ನನ್ನ ಜೊತೆ ಇರುತ್ತಿದ್ದರು. .
ಕೂಡಲೇ ಪೋನ್ ಮಾಡಿ ಮಾತನಾಡಿದಾಗ ಉಡುಪಿ ವರದಿಗಾರ ಗಣೇಶ್, ಆಸ್ಪತ್ರೆಗೆ ಹೋಗಿ ಬಂದು ವಿವರವಾಗಿ ಪರಿಸ್ಥಿತಿಯನ್ನು ವಿವರಿಸಿದ.ನು. ಗಣೇಶ್ ನ ಸ್ವಂತ ಸಹೋದರಿ ತ್ರಿವೇಣಿ ಎಂಬುವರು ಅಲ್ಲಿ ನರ್ಸ್ ಆಗಿ, ಕಾರ್ಯ ನಿರ್ವಹಿಸುತ್ತಾ, ಹನುಮಂತಯ್ಯನ ಚಿಕಿತ್ಸೆಯ ಜವಾಬ್ದಾರಿ ಹೊತ್ತಿದ್ದರು.
ನನಗೆ ಕರೆ ಮಾಡಿದ ಅವರು, ಇಡೀ ಬಾಟಲ್ ಪೂರ್ತಿ ವಿಷ ಕುಡಿದಿದ್ದಾರೆ ಸರ್, . ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಜೊತೆಗೆ ಉಳಿಯುವ ಸಾಧ್ಯತೆ ಇಲ್ಲ ಎಂದು ನುಡಿದುಬಿಟ್ಟರು. ನಂತರ ಆ ಇಬ್ಬರು ವರದಿಗಾರರ ಮೂಲಕ ಯಾವ ಕಾರಣಕ್ಕೂ ಇದು ಆತ್ಮಹತ್ಯೆ ಕೇಸ್ ಎಂದು ದಾಖಲಾಗದಂತೆ ನೋಡಿಕೊಂಡೆ. ಉ.ಕ. ಜಿಲ್ಲೆಯ ವರದಿಗಾರಾಗಿದ್ದ ಗಂಗಾಧರ ಹಿರೇಗುತ್ತಿ ಮೂಲಕ ಪೊಲೀಸ್ ಕೇಸ್ ನಲ್ಲಿ ಈ ಅಂಶ ದಾಖಲಾಗದಂತೆ ನೋಡಿಕೊಂಡೆ. ಗಂಗಾಧರ ಹಿರೇಗುತ್ತಿ ಕರಾವಳಿ ಮುಂಜಾವು ದಿನಪತ್ರಿಕೆ ನಡೆಸುತ್ತಿದ್ದರೂ ಸಹ, ಉದಯ ಟಿ.ವಿ. ವರದಿಗಾರಿಕೆಯನ್ನು ತಮ್ಮ ಪತ್ರಿಕೆಯ ವರದಿಗಾರರ ಮೂಲಕ ನಿರ್ವಹಿಸುತ್ತಿದ್ದರು. ಉದಯ ಟಿ.ವಿ. ವಾರ್ತೆಯು ಆರ್.ಎಸ್.ಎಸ್. ಮನೋಭಾವದ ಹವ್ಯಕ್ಯ ಬ್ರಾಹ್ಮಣ ವರದಿಗಾರರಿಗೆ ಸಿಗದಂತೆ , ನನ್ನ ಮಾತಿಗೆ ಬೆಲೆ ಕೊಟ್ಟು, ಗಂಗಾಧರ್ ನೋಡಿಕೊಳ್ಳುತ್ತಿದ್ದರು.
ಹನುಮಂತಯ್ಯ ತೀರಿಕೊಂಡ ಮೂರು ವರ್ಷಗಳ ನಂತರ ಹಾಸನದಲ್ಲಿ ನಡೆದ ನನ್ನ ಮರುಭೂಮಿಯ ಹೂ ಕೃತಿಯ ಕುರಿತ ವಿಚಾರ ಸಂಕಿರಣ ಸಮಾರಂಭದಲ್ಲಿ ಹನುಮಂತಯ್ಯನವರ ಪತ್ನಿ ಶೈಲಜಾ ಮತ್ತು ಪುತ್ರಿಯನ್ನು ಪ್ರಥಮ ಬಾರಿಗೆ ಭೇಟಿ ಮಾಡಿದೆ. ಒಡಹುಟ್ಟಿದ ಕಿರಿಯ ಸಹೋದರಿಯನ್ನು ಹರಸುವ ಹಾಗೆ ಕೈ ಹಿಡಿದು ಸಾಂತ್ವನ ಹೇಳಿ, ಮಗಳ ತಲೆಯ ಮೇಲೆ ಕೈ ಯಿಟ್ಟು ಹರಸಿ ಮಾತನಾಡಿಸಿ ಬಂದೆ.
ನಿನ್ನೆ ಸಂಜೆಯಿಂದ ಹನುಮಂತಯ್ಯನ ಕವಿತೆಗಳನ್ನು ಓದುವಾಗ, ಹಳೆಯ ನೆನಪುಗಳು ನುಗ್ಗಿಬಂದವು.
ಇಲ್ಲಿ ಮಿತ್ರನ ಎರಡು ಕವಿತೆಗಳನ್ನು ಹಾಕಿದ್ದೀನಿ. ಸುಮ್ಮನೇ ಓದಿ ಬಿಡಿ. ಮಾತುಗಳು ಬೇಡ ಎನಿಸುತ್ತಿದೆ.
ಜಗದೀಶ್ ಕೊಪ್ಪ.
ಕವಿತೆ- ಒಂದು
ಬಾ ಗೆಳತಿ
ಚೂರಾದ ಮುಖಗಳನು ಆಯೋಣ
ಎಲ್ಲಾದರೂ
ನಗು ಮೆತ್ತಿಕೊಂಡಿದ್ದರೆ
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ.
ಎಲ್ಲಾದರೂ
ಅಳು ಅಂಟಿಕೊಂಡಿದ್ದರೆ…
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ.
ಬಾ ಗೆಳತಿ
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ
ಅಲ್ಲಿ ಬೀಜಗಳಾಗಿ ಮೊಳೆಯೋಣ
*****************
ಕವಿತೆ-ಎರಡು
ಅವ್ವ ನಿಂತೇಯಿದ್ದಾಳೆ
ಕಿಟಕಿಯ ಕಂಬಿಗಳ ಹಿಂದೆ
ಅವ್ವ ನಿಂತಿದ್ದಾಳೆ
ಕಣ್ಣಲ್ಲಿ ನೀರು ಈಚಲು ಮರದಲ್ಲಿ
ಸೇಂಧಿ ತೊಟ್ಟಿಕ್ಕುವಂತೆ
ಅವಳ ಕಣ್ಣೀರ ಆತುಕೊಳ್ಳಲು ಹೋದೆ
ಕೈ ಸುಟ್ಟಿತು
ಮನೆ ತುಂಬಾ ಹೊಗೆಯ ಬಲೆ
ಮುರಿದ ತೀರುಗಳ ತೂರಿ ಬರುವ
ಸೂರ್ಯನಾಲಗೆ
ನಿಂತಲ್ಲೇ ಉರಿಯುವೆನು
ಯಾರಿಟ್ಟ ಕಿಚ್ಚಿಗೋ…
ಅವ್ವ ನಿಂತೇ ಇದ್ದಾಳೆ
ಕಪ್ಪು ಜಡೆ ಉದುರಿ ಒಣ ಗರಿಕೆಯಂತಾಗಿ
ಶಿಲೆಯಂತೆ
ಹತ್ತಿರ ಹೋಗಿ ಅವಳ ಕಿಟಕಿ ದಾಟಿದ
ನೋಟವನೇರಿ ನೋಡಿದರೆ
ಆಚೆ ಆ ಕೊಪ್ಪಲಲಿ ಅವನು ಮಲಗಿದ್ದಾನೆ
ನಿನ್ನೆ ಮದುವೆಯಾದ ಹೆಂಡಿರೊಡನೆ
ಮೊಲೆ ಚೆಂಡಿನೊಡನೆ
ಅವನೇ ನಾನು ನಿದ್ದೆಗಣ್ಣಲಿ ಎದ್ದಾಗ
ಸೇಬು ಕೊಟ್ಟವನು
ಅಪ್ಪನ ಹೆಣ ಬೀದಿಯಲಿ ಸಾಗುವಾಗ
ಅಳುವ ಅವ್ವನ ತುಟಿಗೆ ನಗುವ
ಬಳಿದವನು
ಹೊಲಸ ಕೆರೆ ತೊರೆದು ವಲಸೆ ಹೋದ ಹಕ್ಕಿ ನಾನು
ಮತ್ತೆ ಬಂದಿರುವೆ ಮೈ ಸುಟ್ಟು
ಅವ್ವ ನಿಂತೇಯಿದ್ದಾಳೆ
ನೀರಿಲ್ಲದ ಕೆರೆಯಲ್ಲಿ ಒಣಗಿದ ಏಡಿಯಂತೆ
ನನ್ನ ನೋಡದೆ.