ಭಾನುವಾರ, ಜುಲೈ 12, 2020

ಇಸ್ವ ಗುರುವಿನ ಆತ್ಮ ನಿರ್ಭರತೆ ಮತ್ತು ಜೆ.ಸಿ. ಕುಮಾರಪ್ಪನವರ ಗ್ರಾಮಭಾರತ




ಅದು 1954  ಒಂದು ದಿನ. ಗಾಂಧೀಜಿಯವರ ಶಿಷ್ಯರಲ್ಲಿ ಒಬ್ಬರಾದ ವಿನೋಭಾ ಭಾವೆಯವರು ಭೂದಾನ ಚಳುವಳಿಯ ಅಂಗವಾಗಿ ಇದೇ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಾ, ಶ್ರೀಮಂತರಿಂದ ಜಮೀನುಗಳನ್ನು ಪಡೆದು, ಬಡವರಿಗೆ ಹಂಚುತ್ತಾ ಬರಿಗೈ ಫಕೀರನಂತೆ ತಿರುಗುತ್ತಿದ್ದರು. ತಮಿಳುನಾಡಿಗೆ ಬಂದ ಅವರು ತಮ್ಮ ಮಿತ್ರ ಹಾಗೂ ಗಾಂಧಿವಾದಿ ಜೆ.ಸಿ ಕುಮಾರಪ್ಪನವರನ್ನು ನೆನಪು ಮಾಡಿಕೊಂಡು ಮಧ್ಯರೈಯತ್ತ ಪ್ರಯಾಣ ಬೆಳೆಸಿದರು.
ಗಾಂಧಿ ನಿಧನಾನಂತರ 1952 ರಲ್ಲಿ ವಾರ್ಧಾ ಆಶ್ರಮವನ್ನು ತೊರೆದ ಜೆ.ಸಿ. ಕುಮಾರಪ್ಪನವರು ಮಧುರೈ ಸಮೀಪದ ಕಳ್ಳುಪಟ್ಟಿ ಎಂಬ ಗ್ರಾಮದಲ್ಲಿ ಗಾಂಧಿವಾದಿ ಹಾಗೂ ತಮಿಳುನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಟಾಚಲಪತಿ ನಡೆಸುತ್ತಿದ್ದ ಗಾಂಧಿ ಸೇವಾಶ್ರಮ ಸೇರಿಕೊಂಡು, ವಾರ್ಧಾ ಆಶ್ರಮದಲ್ಲಿ ಬಿಟ್ಟು ಬಂದ ಗುಡಿ ಕೈಗಾರಿಕೆಗಳ ಪ್ರಯೋಗವನ್ನು ಮುಂದುವರಿಸಿದ್ದರು. ಕಳ್ಳುಪಟ್ಟಿಗೆ ಬಂದ ವಿನೋಭಾ ಅವರನ್ನು ಪ್ರೀತಿ ಮತ್ತು ಗೌರವಗಳೊಂದಿಗೆ ಆಶ್ರಮಕ್ಕೆ ಕರೆದೊಯ್ದ ಕುಮಾರಪ್ಪ  ನಂತರ ಅವರನ್ನು ತಾವು ವಾಸಿಸುತ್ತಿದ್ದ ಕೊಠಡಿಯೊಳಕ್ಕೆ ಕರೆದೊಯ್ದರು.
ನೆಲದ ಮೇಲೆ ಖಾದಿ ಜಮಖಾನವನ್ನು ಹಾಸಿ,  ಅದರ ಕುಳಿತು ಬರೆಯಲು ಸಣ್ಣ ಮೇಜನ್ನು ಇಟ್ಟುಕೊಂಡಿದ್ದ ಕುಮಾರಪ್ಪ, ತಾವು ಕೂರುವ ಹಿಂಬದಿಯ ಗೋಡೆಯ ಮೇಲೆ ಎರಡು ಭಾವ ಚಿತ್ರಗಳನ್ನು ನೇತು ಹಾಕಿದ್ದರು. ಒಂದು ಗಾಂಧೀಜಿಯ ಚಿತ್ರ, ಇನ್ನೊಂದು  ಗಾಂಧೀಜಿಯ ಹಾಗೆ ಅರೆಬೆತ್ತಲೆಯಲ್ಲಿದ್ದ ತಮಿಳುನಾಡಿನ ಒಬ್ಬ ರೈತನ ಚಿತ್ರವನ್ನು ಹಾಕಿದ್ದರು. ತನ್ನ ಗುರುವಾದ ಗಾಂಧಿಯವರ ಭಾವಚಿತ್ರಕ್ಕೆ ನಮಿಸಿದ ವಿನೊಭಾರವರು, ರೈತನ ಚಿತ್ರ ನೋಡಿ, ಪ್ರಶ್ನಾರ್ಥಕವಾಗಿ ಕುಮಾರಪ್ಪನವರ ಕಡೆ ತಿರುಗಿದರು. ವಿನಾಭಾ ಅವರ ಪ್ರಶ್ನೆಗೆ ಜೆ.ಸಿ. ಕುಮಾರಪ್ಪನವರು ನೀಡಿದ  ಉತ್ತರ ಹೀಗಿತ್ತು.
ಗಾಂಧಿಯ ಚಿತ್ರವನ್ನು ತೋರಿಸಿ, ಇವರು ನನ್ನ ಗುರು ಎಂದು ನುಡಿದು ನಂತರ  ರೈತನ ಚಿತ್ರವನ್ನು ತೋರಿಸಿ ಇವನು ನನ್ನ ಗುರುವಿನ ಗುರು ಎಂದರು. ಕುಮಾರಪ್ಪನವರ ಉತ್ತರ ಕೇಳಿ ವಿನೊಭಾ ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಕುಮಾರಪ್ಪನವರಿಗಿಂತ ಹಿರಿಯವರಾದ ವಿನೋಭಾರವರು ಒದ್ದೆ ಕಣ್ಣುಗಳಲ್ಲಿ ತಮ್ಮ ಎರಡು ಹಸ್ತಗಳನ್ನು ಕೊಡಿಸಿ, ಅವುಗಳನ್ನು ತಮ್ಮ ಹಣೆಗೆ ಒತ್ತಿಕೊಂಡು ತಲೆಬಾಗಿ  ಕುಮಾರಪ್ಪನವರಿಗೆ ನಮಸ್ಕರಿಸಿದರು.
ಗಾಂಧೀಜಿಯವರ ಗ್ರಾಮಭಾರತ ಹಾಗೂ ಸ್ವಾಬಲಂಬನೆಯ ಭಾರತದ ಕನಸುಗಳನ್ನು ಸ್ಪಷ್ಟವಾಗಿ ಗ್ರಹಿಸಿ ಅವುಗಳನ್ನು ಸಾಕಾರಗೊಳಿಸಲು ತಮ್ಮ ಜೀವವನ್ನು ಮೀಸಲಾಗಿಟ್ಟ ಕುಮಾರಪ್ಪನವರು ಕ್ಷಣದಲ್ಲಿ ಆಚಾರ್ಯ ವಿನೋಭಾ ಅವರ ದೃಷ್ಟಿಯಲ್ಲಿ ದೊಡ್ಡ ಮನುಷ್ಯನಾಗಿ ಕಂಡರು. ಇದು ಗಾಂಧಿ ಶಿಷ್ಯರಿಬ್ಬರ ದೊಡ್ಡ ಗುಣ ಮತ್ತು ತ್ಯಾಗಕ್ಕೆ ಒಂದು ದೊಡ್ಡ ಉದಾಹರಣೆ.  ಇಡೀ ದೇಶದಲ್ಲಿ ಅಂದರೆ,  ಅಂದಿನ ಗ್ರಾಮ ಭಾರತದಲ್ಲಿ ರೈತನ ಶಕ್ತಿ, ದುಡಿಮೆ ಮತ್ತು ಆತನ ಕಾಯಕದ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಮಹನೀಯರೆಂದರೆ, ಗಾಂಧಿ, ಕುಮಾರಪ್ಪ ಮತ್ತು ನಮ್ಮ ಕುವೆಂಪು ಮಾತ್ರ. ಕುವೆಂಪುರವರು ರೈತನನ್ನು ಮಾತು ಅಥವಾ ಶಬ್ದದಲ್ಲಿ ಪರಕಾಷ್ಟೆ ಎನ್ನಬಹುದಾದನೇಗಿಲ ಯೋಗಿಎಂದು ಕರೆದರು.
ಲೇಖನದ ಜೊತೆ ಇರುವ ಚಿತ್ರವನ್ನು ಗಮನಿಸಿ. ಇದು 1934 ಅವಧಿಯಲ್ಲಿ ವಾರ್ಧಾ ಬಳಿಯ ಸೇವಾಗ್ರಾಮದಲ್ಲಿ ತೆಗೆದಿರುವ ಚಿತ್ರ. ಗುರು ಶಿಷ್ಯ ಇಬ್ಬರೂ ಅರೆ ಬೆತ್ತಲೆಯ ಫಕೀರರಾಗಿ ನಿಂತಿರುವ ಚಿತ್ರ. ಸುಮ್ಮನೆ ಒಂದು ಕ್ಷಣ ಯೋಚಿಸಿ. ಗಾಂಧೀಜಿ ಗುಜರಾತಿನ ವ್ಯಾಪಾರಿ ಸಮುದಾಯದಿಂದ ಬಂದವರು. ಇಪ್ಪತ್ತನೇ ಶತಮಾನಕ್ಕೆ ಮುಂಚೆ ಕಾಲದ ಅತ್ಯುನ್ನತ ಪದವಿಯಾದ ಬ್ಯಾರಿಸ್ಟರ್ ಪದವಿಯನ್ನು ಇಂಗ್ಲೆಂಡ್ ನಲ್ಲಿ ಪಡೆದವರು. ಜೆ.ಸಿ. ಕುಮಾರಪ್ಪ ತಮಿಳುನಾಡಿನ ತಂಜಾವೂರಿನಲ್ಲಿ ಹಿಂದೂಧರ್ಮದಿಂದ ಪರಿವರ್ತನೆಗೊಂಡ  ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಅಮೇರಿಕಾದ ಕೊಲಂಬಿಯಾ ವಿಶ್ವ ವಿದ್ಯಾಯದಲ್ಲಿ  ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಂದು ಮುಂಬೈನಲ್ಲಿ ದೇವರ್ ಅಂಡ್ ಕಂಪನಿ ಎಂಬ ಲೆಕ್ಕ ಪರಿಶೋಧನಾ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಚಾರ್ಟಡ್ ಅಕೌಟೆಂಟ್ ಆಗಿ ಕೈ ತುಂಬಾ ಹಣ ಸಮಪಾದಿಸುತ್ತಿದ್ದವರು. ಇಬ್ಬರೂ  ಈ ಜಗದ ಗೊಡವೆ ನಮಗೇಕೆ ಎಂದು ಸುಮ್ಮನಾಗಿಬಿಟ್ಟಿದ್ದರೆ, ಗಾಂಧೀಜಿ ವ್ಯಾಪಾರ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ, ಜೆ.ಸಿ. ಕುಮಾರಪ್ಪ ಅಂತಹವೇ ಸಂಸ್ಥೆಗಳಿಗೆ ತೆರಿಗೆ ಸಲಹೆಗಾರರಾಗಿ ಕೈ ತುಂಬಾ ಸಂಪಾದಿಸಿಕೊಂಡು ತಮ್ಮ ತಮ್ಮ ಕುಟುಂಬವನ್ನು ಶ್ರೀಮಂತಿಕೆಯತ್ತ ಕೊಂಡೊಯ್ಯಬಹುದಿತ್ತು. ತನ್ನ ಕಣ್ಣ ಮುಂದಿನ ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಭಾವಿಸಿದ ಗಾಂಧಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರೆ, ಸ್ವಾತಂತ್ರ್ಯದ ಜೊತೆಗೆ ಭಾರತದ ಜನತೆಯನ್ನು ಬಡತನದಿಂದ  ಮುಕ್ತಗೊಳಿಸಬೇಕೆಂದು ಕುಮಾರಪ್ಪ ಗಾಂಧೀಜಿಯವರೊಂದಿಗೆ ಕೈ ಜೋಡಿಸಿದರು. ಸದಾ ದುಬಾರಿ ಬೆಲೆಯ ಸೂಟು, ಬೂಟು ಧರಿಸುತ್ತಿದ್ದ ಕುಮಾರಪ್ಪ, ಗಾಂಧೀಜಿಯವರನ್ನು ಸಬರಮತಿ ಆಶ್ರಮದಲ್ಲಿ ಭೇಟಿಯಾದ ಮರುದಿನವೆ, ಅವೆಲ್ಲವಕ್ಕೂ ತಿಲಾಚಿಜಲಿ ಇತ್ತು ಖಾದಿ ಜುಬ್ಬಾ, ಟೋಪಿ ಮತ್ತು ಪ್ಶೆಜಾಮ ಇವುಗಳನ್ನು ಧರಿಸತೊಡಗಿದರು. ನಂತರ  ವಾರ್ಧಾ ಆಶ್ರಮದಲ್ಲಿ ಕೇವಲ ಅಂಗಿ, ಚಡ್ಡಿ ಧರಿಸುವ ಸ್ಥಿತಿ ತಲುಪಿದರು. ( ಜೆ.ಸಿ. ಕುಮಾರಪಪ್ಪನವರ ಪೂರ್ಣ ಮಾಹಿತಿಯ ಲೇಖನಕ್ಕಾಗಿಗಾಂಧಿ ಅರ್ಥಶಾಸ್ತ್ರದ ರೂವಾರಿ ಜೆ.ಸಿಕುಮಾರಪ್ಪಎಂದು ಕನ್ನಡದಲ್ಲಿ ಟೈಪಿಸಿ ಗೂಗಲ್ ಸರ್ದ್ಗೆ ಹಾಕಿದರೆ ನನ್ನ ಲೇಖನವನ್ನು ಓದಬಹುದು)

ತಮ್ಮ ಶಿಷ್ಯ ಕುಮಾರಪ್ಪನವರ ವಿದ್ವತ್ ಮತ್ತು ಬದ್ಧತೆಯ ಬಗ್ಗೆ ಅರಿವಿದ್ದ ಗಾಂಧೀಜಿಯವರು 1938 ರಲ್ಲಿ ವಾರ್ಧಾ ಆಶ್ರಮದಲ್ಲಿ  ಅಖಿಲ ಭಾರತ ಗುಡಿ ಕೈಗಾರಿಕೆಗಳ ಒಕ್ಕೂಟಎಂಬ ಸಂಸ್ಥೆಯನ್ನು ಸ್ಥಾಪಿಸಿ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು. ಗಾಂಧೀಜಿಯವರು ಸಮರ್ಥವಾದ ಸ್ವಾವಲಂಬನೆಯ ಗ್ರಾಮಭಾರತ ಕುರಿತಾಗಿ ಕಂಡಿದ್ದ ಯೋಜನೆಗಳನ್ನು ಕುಮಾರಪ್ಪ ಸಾಕಾರಗೊಳಿಸ ತೊಡಗಿದರು. ಮೊದಲಿಗೆ ಮಾನವ ಶ್ರಮವನ್ನು ಕಡಿಮೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಳೆಯದಾದ ಚರಕಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರು. ಐವತ್ತಕ್ಕೂ ಹೆಚ್ಚು ಬಗೆಯ ಚರಕಗಳನ್ನು ನಾವಿಂದು  ವಾರ್ಧಾ ನಗರದ ಮಗನ್ ಸಂಗ್ರಹಾಲಯದಲ್ಲಿ ನೊಡಬಹುದು. ರೈತರ ನೇಗಿಲುಗಳನ್ನು ಸುಧಾರಿಸಿದರು. ರಸಾಯನಿಕ ಗೊಬ್ಬರಕಕ್ಕೆ ಬದಲಾಗಿ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಬಳಸುವಂತೆ ಒತ್ತಾಯಿಸಿದರು. ಬೇಸಾಯಕ್ಕೆ ಟ್ರಾಕ್ಟರ್ ಮತ್ತು ಟಿಲ್ಲರ್ ಗಳನ್ನು ಬಳಕೆ ಮಾಡುವುದನ್ನು ವಿರೋಧಿಸಿದರು. ಭೂಮಿಯಿಂದ ತೆಗೆಯುವ ಕಲ್ಲಿದ್ದಲು, ತೈಲಗಳ ಅತಿಯಾದ ಬಕೆಯನ್ನು ದುರ್ಬಳಕೆ ಎಂದು ಕರೆದರು. ದೀಪ ಮತ್ತು ಲಾಂಟಿನ್ ಗಳಿಗೆ  ಸೀಮೆ ಎಣ್ಣೆ ಬದಲಾಗಿ ಹೊಂಗೆ ಎಣ್ಣೆ, ಹಿಪ್ಪೆ ಎಣ್ಣೆಗಳ ಬಳಕೆಗೆ ಕರೆ ನೀಡಿ, ಎಣ್ಣೆ ಗಾಣಗಳನ್ನು  ಎತ್ತುಗಳ  ಸಹಾಯವಿಲ್ಲದೆ. ಮನೆಯಲ್ಲಿ ುಪಯೋಗಿಸುವ ರೀತಿಯಲ್ಲಿ ಸಣ್ಣ ಮಟ್ಟದಲ್ಲಿ ತಯಾರಿಸಿದರು. ಕಾಗದದ ಮರು ಬಳಕೆಗೆ ಉತ್ತೇಜನ ನೀಡಿದರು. ಬೇಸಾಯದ ಉಪಕರಣಗಳು, ಕೈಮಗ್ಗ, ದುಡಿಯುವ ವರ್ಗಕ್ಕೆ  ಸೈಕಲ್ ರಿಕ್ಷಾ,  ಕಬ್ಬಿನ ಹಾಲು ತೆಗೆಯುವ ಪುಟ್ಟ ಗಾಣ, ಅಕ್ಕಿ, ರಾಗಿ, ಬೇಳೆ ಕಾಳುಗಳ ಗಿರಿಣಿ ಹೀಗೆ ಗ್ರಾಮಗಳ ಗುಡಿ ಕೈಗಾರಿಕೆಗೆ ಬೇಕಾಗುವ ಎಲ್ಲಾ ವಿಧವಾದ ಯಂತ್ರೋಪಕರಣಗಳನ್ನು ಸುಧಾರಿಸಿದರು. ಸೂರ್ಯನ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಿಕೊಳ್ಳಲು ಸದಾ ಒತ್ತಾಯಿಸುತ್ತಿದ್ದ ಕುಮಾರಪ್ಪನವರು ಹಳ್ಳಿಗಳು ಸ್ವಾವಲಂಬನೆಯಾದರೆ ಮಾತ್ರ ಸದೃಢ ಭಾರತ ಸಾಧ್ಯ ಎಂಬ ಗಾಂಧಿಯವರ ನಂಬಿಕೆಯಲ್ಲಿ ಅಚಲ ವಿಶ್ವಾಸವನ್ನು ಇಟ್ಟುಕೊಂಡಿದ್ದರು. ಅವರ ಒಟ್ಟು ಚಿಂತನೆಯನ್ನು ಕುಮಾರಪ್ಪನವರು Econamy of Prmanenae  ಎಂಬ ಹೆಸರಿನಲ್ಲಿಕರತಿ ಬರೆದರು. ಸ್ಥಿರತೆಯ ಅರ್ಥಶಾಸ್ತ್ರ ಎನ್ನಬಹುದಾದ ಕೃತಿಯು ಈಗ ಗಾಂಧಿ ಅರ್ಥಶಾಸ್ತ್ರ ಎಂದು ಪ್ರಸಿದ್ಧ ಪಡೆದಿದೆ. ಕೃತಿಗೆ ಗಾಂಧೀಜಿಯವರು ಮುನ್ನಡಿ ಬರೆದಿದ್ದಾರೆ. ( ಕೃತಿ ಬೇಕಿದ್ದರೆ, ಆಸಕ್ತರು -ಮೈಲ್ ವಿಳಾಸ ಕಳಿಸಿಕೊಟ್ಟರೆ, ಅದರ ಪಿ.ಡಿ.ಎಫ್. ಕಾಪಿಯನ್ನು ಕಳಿಸಿಕೊಡಬಲ್ಲೆ) 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ, ಪ್ರಧಾನಿಯಾಗಿದ್ದ ನೆಹರೂ ಕುಮಾರಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಯೋಜನಾ ಆಯೋಗದ ಸಲಹೆಗಾರರಾಗಿ ನೇಮಕ ಮಾಡಿದರು. ಗ್ರಾಮಭಾರತದ ಅಭಿವೃದ್ಧಿ ಕುರಿತಂತೆ ಕಾಂಗ್ರೇಸ್ ಪಕ್ಷಕ್ಕೆ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಡಲು ಕುಮಾರಪ್ಪನವರ ಅದ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಿದರು. ಜೊತೆಗೆ ಚೀನಾ, ಜಪಾನ್ ಹಾಗೂ ಯುರೋಪ್ ದೇಶಗಳಲ್ಲಿ ಅಧ್ಯಯನ ಮಾಡಲು ಕಳಿಸಿಕೊಟ್ಟರು. ಆದರೆ, ಗಾಂಧೀಜಿಯ ಗ್ರಾಮಾಭಿದ್ಧಿ ಕನಸುಗಳಿಗೆ ತಿಲಾಚಂಜಲಿ ಇತ್ತ ನೆಹರೂ ಬೃಹತ್ ಯಂತ್ರನಾಗರೀಕತೆ, ಬೃಹತ್ ಅಣೆಕಟ್ಟು, ಬೃಹತ್ ಕೈಗಾರಿಕೆ ಬೃಹತ್ ನಗರಗಳು ಎಂದು ಕನಸಿತೊಡಗಿದಾಗ, ತಮ್ಮೆಲ್ಲಾ ಹುದ್ದೆಗಳಿಗೆ 1952 ರಲ್ಲಿ ರಾಜಿನಾಮೆ ನೀಡಿದ ಕುಮಾರಪ್ಪನವರು  ಮಧುರೆ ಬಳಿಯ ಕಲ್ಲುಪಟ್ಟಿ ಗ್ರಾಮಕ್ಕೆ ಬಂದು ನೆಲೆಸಿದರು. ವಾರ್ಧಾ ಆಶ್ರಮದಲ್ಲಿ ತಾವು ನಿಲ್ಲಿಸಿದ ಚಟುªಟಿಕೆಯನ್ನು ಮುಂದುವರಿದರು
.
ಈಗ ವಾರ್ಧಾನಗರದಲ್ಲಿ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಗುಡಿಕೈಗಾರಿಗಳ ಯಂತ್ರೋಪಕರಣ ತಯಾರಿಕೆ ಮತ್ತು ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಕಳೆದ ಎಂಟು ತಿಂಗಳ ಹಿಂದೆ ವಾರ್ಧಾ ನಗರದಲ್ಲಿದ್ದ  ಸಂರ್ಭದಲ್ಲಿ ನಾನು ಕುಮಾರಪ್ಪನವರ ಸಂಸ್ಥೆಯಲ್ಲಿ ಎರಡ ದಿನ ಹಾಗೂ ವಾರ್ಧಾ ನಗರದಿಂದ ಎಂಟು ಕಿ.ಮಿ. ದೂರವಿರುವ ಸೇವಾಗ್ರಾಮದ ಬಾಪು ಕುಟಿಯಲ್ಲಿ ಒಂದು ದಿನ ಇದ್ದೆ. ವಾರ್ಧಾ ನಗರದಲ್ಲಿರುವ ಖಾದಿ ತಯಾರಿಕಾ ಘಟಕದ ಸಮೀಪ ಕುಮಾರಪ್ಪ ನೆಲೆಸಿದ್ದ ಕುಟಿರವನ್ನು ಈಗಲೂ ಕಾಪಾಡಿಕೊಂಡು ಬರಲಾಗಿದೆ.  1960 ಜನವರಿಯಲ್ಲಿ ಕುಮಾರಪ್ಪ ನಿಧನರಾದರು. ಅವರ ಸಾವಿಗೆ ಮುನ್ನ ಸ್ಮಾಲ್ ಹೀಸ್ ಬ್ಯೂಟಿಪುಲ್ ( ಸಣ್ಣದು ಸುಂದರ) ಎಂಬ ಗಾಂಧಿ ಅರ್ಥಶಾಸ್ತ್ರದ ತಳಹದಿಯ ಮೇಲೆ ಜಗದ್ವಿಖ್ಯಾತ ಕೃತಿ ಬರೆದ ಶೂ ಮಾಕರ್ ಹಾಗೂ ಗಾಂಧಿಯವರಿಂದ ಪ್ರಭಾವಿತಗೊಂಡು ಅಮೇರಿಕಾದಲ್ಲಿ ಕರಿಯರ ಪರವಾಗಿ ಹೋರಾಟ ನಡೆಸಿದ ಮಾಟಿನ್ ಲೂಥರ್ ಕಿಂಗ್ ಮುಂತಾದವರು ಮಧುರೈ ನಗರಕ್ಕೆ ಆಗಮಿಸಿ ಕುಮಾರಪ್ಪನವರ ಸಲಹೆ ಸೂಚನೆ ಪಡೆದಿದ್ದರು.
ಹದಿನೈದು ದಿನಗಳ ಹಿಂದೆ ಆತ್ಮ ನಿರ್ಭರತೆ ಕುರಿತು ಭಯಂಕರ ಭಾಷಣ ಬಿಗಿದ ನಮ್ಮ ಇಸ್ವ ಗುರು ಪ್ರಧಾನಿಯವರು  ಮೊನ್ನೆ ಅಂದರೆ, ಜಲೈ ಹತ್ತರ ಭಾನುವಾರದಂದುಕೆಂಪು ಕಂಬಳಿಯನ್ನು ಹಾಸಿ ನಾನು ವಿದೇಶಿ ಬೃಹತ್ ಕಂಪನಿಗಳನ್ನು ಭಾರತಕ್ಕೆ ಸ್ವಾಗತಿಸುತ್ತೇನೆಎಂಬ ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ದಿನಪತ್ರಿಕೆಯ ಮುಖಪುಟದಲ್ಲಿ ವರದಿ ಪ್ರಕಟವಾಗಿದೆ.  ಆಡುವ ಮಾತಿಗೆ ಒಂದು ಖಚಿತತೆ ಅಥವಾ ಬದ್ಧತೆ ಇಲ್ಲದ ನಾಯಕರಿಂದ ದೇಶ ಮತ್ತು ಅದರ ಆರ್ಥಿಕತೆ ಹೇಗೆ ಹಳ್ಳ ಹಿಡಿಯಬಹುದು ಎಂಬುದಕಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ.


ಸೋಮವಾರ, ಜುಲೈ 6, 2020

ಆತ್ಮ ನಿರ್ಭರತೆಯೆಂಬ ಆತ್ಮವಂಚನೆಯ ಮಾತುಗಳು ಮತ್ತು ಸ್ವದೇಶಿ ಎಂಬ ನೆಲಮೂಲ ಸಂಸ್ಕೃತಿಯು



ಇತ್ತೀಚೆಗೆ ಇಸ್ವ ಗುರು  ಎಂಬ ನಾಯಕ ಬಾಯಿಂದ ಉದುರಿದ ಅಣಿಮುತ್ತುಗಳಲ್ಲಿ ಒಂದಾದ  ಆತ್ಮ ನಿರ್ಭರತೆ ಎಂಬ ಶಬ್ದ ಈಗ ದೇಶ ಭಕ್ತರ ಪಾಲಿಗೆ ಸದಾ ಜಪಿಸುವಂತಾದ ಮಂತ್ರವಾಗಿ ಪರಿವರ್ತನೆಯಾಗಿದೆ.
ಕರ್ನಾಟಕದಲ್ಲಿ ಬಳಾಂಗ್ ಭೂಪತಿ ಎಂದು ಕುಖ್ಯಾತಿ ಪಡೆದ ಚಕ್ರವರ್ತಿ ಸೂಲಿಬೆಲೆ ಎಂಬ ಸುಳ್ಳೇ ನಮ್ಮ ಮನೆದೇವರು ಎಂದು ನಂಬಿರುವ ವ್ಯಕ್ತಿಗೆ  ಆದಾಯದ ಮೂಲ ಕೂಡ ಆಗಿದೆ. ಖಾಲಿ ತಲೆಗಳಿಗೆ ಸುಳ್ಳು ಉಪನ್ಯಾಸ, ಮಕ್ಕಳ ಮುಕುಳಿ ಒರೆಸಲು ಅಯೋಗ್ಯವಾದ ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಾ “ ಆತ್ಮ ನಿರ್ಭರತೆ ಎಂಬ ಯಜ್ಞಕ್ಕೆ ನಾವು ಸಮಿತ್ತುಗಳಾಗೋಣ” ಎಂದು ಅಪ್ಪಣೆ  ಕೊಡಿಸಿದ್ದಾನೆ. ಈಗಾಗಲೇ ಹಲವು ಲೇಖಕರು ಮತ್ತು ಪ್ರಕಾಶಕರು ಪುಸ್ತಕ ಹೊಸೆದು ಬಿಸಾಕಲು ಅಣಿಯಾಗುತ್ತಿದ್ದಾರೆ. ಒಟ್ಟಾರೆ ಈ ಎಲ್ಲಾ ವಿದ್ಯಾಮಾನಗಳು ನಮ್ಮ ಬೌದ್ಧಿಕ ದಾರಿದ್ಯಕ್ಕೆ ಸಾಕ್ಷಿ ಎಂಬಂತಿವೆ.
ಇತ್ತೀಚೆಗೆ ಭಾರತ ಮತ್ತು ಚೀನಾ ನಡುವಿನ  ಗಡಿ ವಿವಾದಕ್ಕೆ ಸಂಬಂಧಿಸಿದಂತೆ  ನಡೆದ ಘರ್ಷಣೆಗೆ ಸಂಬಂಧಿಸಿದಂತೆ  ಭಾರತದ  ಇಸ್ವ ಗುರು ಎಂದು ಪ್ರಸಿದ್ಧರಾದ ಪ್ರಧಾನಿಯಾದ  ಮೋದಿ  ಆತ್ಮ ನಿರ್ಭರ್ ಹೆಸರಿನಲ್ಲಿ ಚೀನಾ ವಸ್ತುಗಳನ್ನು ನಿಷೇಧಿಸಲು ಕರೆ ನೀಡಿದ ಮೇಲೆ ದೇಶ ಭಕ್ತರ ಭರಾಟೆ ಜೋರಾಗಿದೆ. ಇದು ನಮ್ಮ ವಿಸ್ಮೃತಿಗೆ ಒಂದು ಉದಾಹರಣೆ ಮಾತ್ರ.
1990 ರ ದಶಕದಲ್ಲಿ ಜಾಗತಿಕರಣದ ಹೆಸರಿನಲ್ಲಿ ಸರಕು ಮತ್ತು ಸೇವೆಗಳಿಗೆ  ಜಗತ್ತಿನಾದ್ಯಂತ ದೇಶಗಳು ತಮ್ಮ ತಮ್ಮ ಗಡಿ ಬಾಗಿಲುಗಳನ್ನು ತೆರೆದಿಟ್ಟ ನಂತರ  ನಿಷೇಧ  ಎನ್ನುವ ಮಾತು ಹಾಸ್ಯದ ಮಾತಿನಂತೆ ಕೇಳಿಬರುತ್ತದೆ. ಇತಿಹಾಸದ ಪ್ರಜ್ಞೆ ಇದ್ದವರಿಗೆ ಈ ಸಂಗತಿಯನ್ನು ನಾನು ಹೊಸದಾಗಿ ಹೇಳಬೇಕಾಗಿಲ್ಲ. ಸ್ವಾವಲಂಬಿತನ ಎಂಬ ನಮ್ಮ ಬದುಕಿನ ಪ್ರಕ್ರಿಯೆಗೆ  ಶತಮಾನಗಳ ಹಿಂದೆಯೇ ಗಾಂಧೀಜಿಯವರು ಚಾಲನೆ ನೀಡಿದ್ದರು. ಅದಕ್ಕೆ ಅವರು ಸ್ವದೇಶಿ ಎಂದು ಹೆಸರು ನೀಡಿದ್ದರು. ಇದೀಗ ಗಾಂಧೀಜಿಯವರ ಚಿಂತನೆಗೆ ಸಂಸ್ಕೃತದ ಲೇಪನ ಬಳಿದು ಆತ್ಮ ನಿರ್ಭರ್ ಎಂದು ಪ್ರಧಾನಿಯವರು  ಚಲಾವಣೆಗೆ ಬಿಟ್ಟಿದ್ದಾರೆ.
ಕೇವಲ ಶಬ್ದಗಳನ್ನು ಚಲಾವಣೆಗೆ ಬಿಡುವುದು ಮುಖ್ಯವಲ್ಲ, ಅದನ್ನು ಸ್ವತಃ ಗಾಂಧೀಜಿ ಕಾಯಾ, ವಾಚಾ, ಮನಸಾ ಆಚರಣೆಗೆ ತರುತ್ತಿದ್ದರು.  ವಿದೇಶಿ ವಸ್ತ್ರಗಳನ್ನು ತ್ಯೆಜಿಸುವಂತೆ ಗಾಂಧೀಜಿ ಕರೆ ನೀಡಿದಾಗ ಅವರಿಗಿಂತ ಎಂಟು ವರ್ಷ ದೊಡ್ಡವರಾದ ರವೀಂದ್ರ ನಾಥ ಟ್ಯಾಗೂರ್ ಇದನ್ನು ವಿರೋಧಿಸಿದ್ದರು. ಆನಂತರ ಆ ಇಬ್ಬರ ನಡುವೆ ಅನೇಕ ಚರ್ಚೆಗಳು ಮತ್ತು ಪತ್ರ ವ್ಯವಹಾರಗಳು ನಡೆದವು. ಗಾಂಧೀಜಿಯವರಿಗೆ ತಾವು ಹಮ್ಮಿಕೊಳ್ಳುತ್ತಿದ್ದ ಸತ್ಯಾಗ್ರಹ ಅಥವಾ ಚಳುವಳಿಗಳ ಕುರಿತಾಗಿ ಸ್ಪಷ್ಟವಾದ  ಕಲ್ಪನೆಗಳಿರುತ್ತಿದ್ದವು. ಅದನ್ನು ಅವರು ಸಮರ್ಥಿಸುತ್ತಿದ್ದರು. ಜೊತೆಗೆ ಸ್ವತಃ ಪಾಲಿಸುತ್ತಿದ್ದರು. ಏಕೆಂದರೆ, ಅವರು ಎಲ್ಲವನ್ನೂ ನಮ್ಮ ನೆಲಮೂಲ ಸಂಸ್ಕೃತಿಯಾದ ದೇಸಿ ಚಿಂತನೆಗಳಿಂದ ಆಯ್ದುಕೊಳ್ಳುತ್ತಿದ್ದರು. ಅವುಗಳ ಕುರಿತು ಹೇಳಿಕೆ ನೀಡುವುದರ ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಮೊದಲು ಆಚರಣೆಗೆ ತರುತ್ತಿದ್ದರು. ನಿಸರ್ಗದ ಕೊಡುಗೆಗಳು ಮತ್ತು ಮನುಷ್ಯನ ಮಿತಿ ಮೀರಿದ ಲಾಲಸೆಗಳನ್ನು ಚೆನ್ನಾಗಿ ಅರಿತಿದ್ದ ಅವರು ಮಿತಿಯಾದ  ಹಾಗೂ ಸರಳವಾದ ಜೀವನಕ್ಕೆ ಒತ್ತು ನೀಡುತ್ತಿದ್ದರು. ನಾವು ಬಳಸುವ  ಅಗತ್ಯ ವಸ್ತುಗಳು ನಾವಿರುವ ಸ್ಥಳದ  ಐದು ಅಥವಾ ಹತ್ತು ಕಿಲೊಮೀಟರ್ ವ್ಯಾಪ್ತಿಯಲ್ಲಿ ದೊರೆಯುವಂತಿರಬೇಕು. ಅವುಗಳನ್ನು ಬಳಸಬೇಕು ಎಂದು ಅವರು ಮನೆಗಳ ನಿರ್ಮಾಣದ ವಿಷಯದಲ್ಲಿ ಒತ್ತಿ ಹೆಳುತ್ತಿದ್ದರು.
ಯಂತ್ರ ನಾಗರೀತೆಯ ಕುರಿತು ಅವರು  ಹೇಳುತ್ತಿದ್ದ ಮಾತುಗಳಲ್ಲಿ ಸ್ಪಷ್ಟತೆ ಇತ್ತು. ಬೃಹತ್ ಯಂತ್ರಗಳಿಂದ ಮನುಷ್ಯನ ಉದ್ಯೋಗ  ಕಿತ್ತುಕೊಳ್ಳದ ಹಾಗೂ ಅವನ ಶ್ರಮವನ್ನು ಕಡಿಮೆ ಮಾಡುವ , ಹೆಚ್ಚು ಉತ್ಪಾದನೆಗೆ ಮಹತ್ವ ನೀಡುವ ಯಂತ್ರಗಳನ್ನು ಅವರೆಂದೂ ವಿರೋಧಿಸಲಿಲ್ಲ
ಸ್ಥಳಿಯ ಉತ್ಪಾದನೆ, ಸ್ಥಳಿಯ ಮಾರುಕಟ್ಟೆ ಇವುಗಳಿಗೆ ಆದ್ಯತೆ ನೀಡಿದರೆ, ದೇಶದ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದಂತೆ ಎಂಬ ಅವರ ಮಾತುಗಳನ್ನು ಅವರ ಸಾವಿನ ಜೊತೆ ಅವರೊಂದಗೆ ಚಿತೆಗೆ ಇಟ್ಟು ಬೆಂಕಿ ಹಚ್ಚಿದವರು ನಾವು. ಅತಿಯಾದ ಭೋಗಲಾಲಸೆ ಮತ್ತು ಭಕಾಸುರತನದಿಂದ  ಇಡಿ ಜಗತ್ತನ್ನು ಕಬಳಿಸಲು ಹೊರಟ ಜನಕ್ಕೆ ಈಗ ಬೇಕಿರುವುದು ಮಂತ್ರದಂತಹ  ಚಾಲಕಿತನದ ಮಾತುಗಳಲ್ಲ. ಸ್ವಯಂ ಆಚರಣೆಯ ಬದ್ಧತೆ.  ಭಾರತದದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯ ಅಂಕಿ ಅಂಶಗಳನ್ನು ಗಮನಿಸಿದಾಗ  ಆತ್ಮ ನಿರ್ಭರ್ ಎನ್ನುವ ಮಾತು ಪೊಳ್ಳು ಘೋಷಣೆ ಎಂದು ನಮಗೆ ಮನದಟ್ಟಾಗುತ್ತದೆ.
 ಈ ಕ್ಷಣದಲ್ಲಿ ಗಾಂಧಿ ಚಿಂತನೆಗಳನ್ನು ಇಂದಿಗೂ ಆಚರಣೆಗೆ ತರುತ್ತಿರುವ ಹಾಗೂ ನಮ್ಮ ನಡುವೆ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ  ದೀದಿ ಕಂಟ್ರಾಕ್ಟರ್ ಎಂಬ ತೊಂಬತ್ತು ವಯಸ್ಸಿನ ತಾಯಿ ಹಾಗೂ ಭಾರತ ಕಂಡ ನೆಲಮೂಲ ಸಂಸ್ಕೃತಿಯ ವಾಸ್ತು ಶಿಲ್ಪಿ ನಮಗೆ ಮಾದರಿಯಾಗಿದ್ದಾರೆ. . ನಿನ್ನೆ ಭಾನುವಾರ ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಅವರ ಸಂದರ್ಶನ ಪ್ರಕಟವಾಗಿದ್ದು “ ಸ್ವಾತಂತ್ರ್ಯಾನಂತರದ ಭಾರತದ ನಗರಗಳು ವಿಕೃತಿಗಳಾಗಿವೆ” ಎನ್ನುವ ಅವರ ಮಾತುಗಳು  ನಮ್ಮ ಬದುಕಿನ ವಿಕಾರಕ್ಕೆ ಹಿಡಿದ ಕೈಗನ್ನಡಿಯಂತಿವೆ. ಜೊತೆಗೆ  ನಾವು ಬದುಕುತ್ತಿರುವ ಬದುಕು ಎಷ್ಟು ಲಡಾಸು ಎದ್ದಿಹೋಗಿದೆ ಎಂಬುದು ತಿಳಿಯುತ್ತದೆ.

ಭಾರತದ ಅತ್ಯುನ್ನುತ ಪ್ರಶಸ್ತಿಯಾದ “ ನಾರಿ ಪುರಸ್ಕಾರ್” ಗೌರವಕ್ಕೆ ಪಾತ್ರರಾಗಿರುವ ಅವರು ಅಮೇರಿಕನ್ ಪ್ರಜೆ ಹಾಗೂ ಮೆಕ್ಷಿಕೊ ಮಹಿಳೆ  ಈ ದಂಪತಿಗಳಿಗೆ ಜನಿಸಿದ ಹೆಣ್ಣು ಮಗಳು . ಮೆಕ್ಷಿಕೊ ನಗರದಲ್ಲಿ ಆರ್ಕಿಟೆಕ್ ಓದುತ್ತಿರುವಾಗ ನಾರಾಯಣ್ ಕಂಟ್ರಾಕ್ಟರ್ ಎಂಬ ಮಹಾರಾಷ್ಟ್ರ ಮೂಲದ ಯುವಕನ್ನು ಪ್ರೀತಿಸಿ, ವಿವಾಹವಾಗಿ ಭಾರತಕ್ಕೆ ಬಂದವರು. 1955 ರಲ್ಲಿ ಅವರು ಮುಂಬೈ ನಗರಕ್ಕೆ ಬಂದಾಗ ಗಾಂಧೀಜಿ ನಿಧನರಾಗಿ ಎಂಟು ವರ್ಷಗಳಾಗಿದ್ದವು. ದೀದಿಯವರು ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತರಾಗಿ ತಾವು ನಿರ್ಮಿಸುವ ಮನೆಗಳಿಗೆ ಸ್ಥಳೀಯ ಕಲ್ಲು, ಮಣ್ಣುಮ ಮರಗಳನ್ನು  ಬಳಸತೊಡಗಿದರು. ನನಗೆ ಮಣ್ಣಿನೊಂದಿಗೆ ವಿವಾಹವಾಗಿದೆ. ಅದರೊಂದಿಗೆ ಸಹಬಾಳ್ವೆ ಅನಿವಾರ್ಯ  ಎಂದು ಹೇಳುತ್ತಿದ್ದ ದೀದಿಯವರು ಇದೀಗ ಹಿಮಾಲಯದ ಕಾಂಗ್ರಾ ಕಣಿವೆಯಲ್ಲಿ ವಾಸಿಸುತ್ತಾ ತಮ್ಮ ನೆನಪುಗಳನ್ನು ದಾಖಲಿಸುತ್ತಿದ್ದಾರೆ. ಅವರ ಕುರಿತ ಸಾಕ್ಷ್ಯ ಚಿತ್ರವನ್ನು ಆಸಕ್ತರು ಯೂಟ್ಯುಬ್ ನಲ್ಲಿ ಗಮನಿಸಬಹುದು. ಗಾಂಧಿ ಚಿಂತನೆಗಳಿಗೆ ಇದೇ ರೀತಿಯಲ್ಲಿ ಮಾರು ಹೋದವರೆಂದರೆ, ಇಂಗ್ಲೇಂಡ್ ಮೂಲದ ಲಾರಿ ಬೇಕರ್. (ಅವರ ಕುರಿತು ನನ್ನ ಗಾಂಧಿಗಿರಿಯ ಫಸಲುಗಳು ಕೃತಿಯಲ್ಲಿ ದಾಖಲಿಸಿದ್ದೇನೆ. ಭೂಮಿಗೀತ ಬ್ಲಾಗ್ ನಲ್ಲಿ ಲೇಖನ ದೊರೆಯುತ್ತದೆ. ಲಾರಿಬೇಕರ್ ಎಂದು ಕನ್ನಡದಲ್ಲಿ ಟೈಪಿಸಿ, ಗೂಗಲ್ ಸರ್ಚ್ ಗೆ ಹಾಕಿದರೆ ಲೇಖನ ದೊರೆಯುತ್ತದೆ)
ಈ ನೆಲಕ್ಕೆ ಸಂಬಂಧವಿಲ್ಲದ  ಎರಡು ಜೀವಗಳು ಗಾಂಧೀಜಿ ಚಿಂತನೆಗಳ ವಾರಸುದಾರರೆಂಬಂತೆ ಬದುಕಿ ತೋರಿಸಿರುವಾಗ  ಮಹಾತ್ಮನನ್ನು ಕೊಂದ ದುಷ್ಟನಿಗೆ ಹುತಾತ್ಮ ಎಂದು ಕರೆಯುವ ಜನಕ್ಕೆ ಸ್ವಾವಲಂಬನೆ ಎಂಬುವುದು ಕೇವಲ  ರಸ್ತೆ ಪ್ರದರ್ಶನ ಅಂದರೆ, ರೋಡ್ ಷೋ ಅಥವಾ ತುಟಿ ಸೇವೆ ಆಗಬಲ್ಲದೇ ಹೊರತು, ಬದುಕಿನ ಭಾವಗೀತೆಯಾಗಲಾರದು.
ಜಗದೀಶ್ ಕೊಪ್ಪ.

ಗುರುವಾರ, ಜುಲೈ 2, 2020

ಬಾಲ್ಯದ ನೆನಪುಗಳು-2 ಆಹಾ ಗಾಳಿಪಟ, ಹಾರೋ ಪಟ



ನಿನ್ನೆ ಉಪವಾಸ ಅಥವಾ ಏಕಾದಶಿ ಹಬ್ಬ ಎಂದು ನನ್ನ ಪತ್ನಿ ನೆನಪಿಸಿದಳು. ನನ್ನ ಮಂಡ್ಯ ಜಿಲ್ಲೆಯಲ್ಲಿ ಉಪವಾಸದ ಹಬ್ಬವೆಂದರೆ, ಗಾಳಪಟದ ಹಬ್ಬ ಎಂದು ಅರ್ಥ.  ಹಬ್ಬದ ದಿನದಂದು ಹೋಳಿಗೆ ಇಲ್ಲವೆ ವಡೆ, ಪಾಯಸ ಮಾಡುತ್ತಿದ್ದರು.  ಮಾರನೇ ದಿನ ಮಾಂಸದೂಟವೂ ಇರುತ್ತದೆ. ಹೊಸದಾಗಿ ಮದುವೆಯಾದ ಅಳಿಯಂದಿರು ಆಷಾಡ ಮಾಸದಲ್ಲಿ ಅತ್ತೆ ಮನೆಗೆ ಹೊಗಬಾರದು ಎಂದು ನಿಯಮವಿದ್ದ ಕಾರಣ ದಿನಗಳಲ್ಲಿ ಮಾವನ ಮನೆಯಿಂದ ಒಂದು ಬುಟ್ಟಿ ತುಂಬಾ ವಡೆ, ಕಜ್ಜಾಯ, ಕೋಡುಬಳೆ, ಚಕ್ಕುಲಿ, ಒಬ್ಬಟ್ಟು ಬಂದರೆ, ಮರುದಿನ ಕೋಳಿ ಮಾಂಸ ಇಲ್ಲವೆ ಕುರಿ ಅಥವಾ ಮೇಕೆ ಮಾಂಸವನ್ನು ಕಳಿಸುವ ಪದ್ಧತಿಯಿತ್ತು. ನಾವು  ವಿವಾಹವಾಗುವ ವೇಳೆಗೆ ಪದ್ಧತಿ ಬಹುತೇಕ ಮರೆಯಾಗಿತ್ತು.
ಬಾಲ್ಯದಲ್ಲಿ ನಮಗೆ ಉಪವಾಸ ಹಬ್ಬದ ಮುಂಚಿನ ದಿನಗಳಲ್ಲಿ ಗಾಳಿಪಟ ಹಾರಿಸುವುದು ಕೇವಲ ಸಂಭ್ರಮ ಮಾತ್ರವಾಗಿರದೆ ಕಾಯಕವೂ ಆಗಿತ್ತು. ಈಗ ಗ್ರಾಮಾಂತರ ಪ್ರದೇಶದ ಬಯಲಿನಲ್ಲಿ ಗಾಳಿಪಟ ಹಾರಿಸುವ ಹುಡುಗರು ಕಾಣಿಸುವುದಿಲ್ಲ. ನಗರದ ಪ್ರದೇಶದಲ್ಲಿ ಮನೆಗಳ ಮೇಲೆ ನಿಂತು ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಒಂದಿಷ್ಟು ಹುಡುಗರು ಮಾತ್ರ ಕಾಣಸಿಗುತ್ತಾರೆ. ನಮ್ಮ ಬಾಲ್ಯದ ಗಾಳಿಪಟಗಳೆಂದರೆ, ಈಗಿನ ಬಾಲಿವುಡ್ ಚಿತ್ರರಂಗದ ಚಮಕ್ ತಾರೆಯರಂತೆ ಇರಲಿಲ್ಲ. ಕಪ್ಪು ಬಿಳಪು ಸಿನಿಮಾ ತಾರೆಯರಾದ ಪದ್ಮಿನಿ, ಸಾವಿತ್ರಿ, ಭಾರತಿ, ಬಿ.ಸರೋಜಾದೇವಿ, ಲೀಲಾವತಿ, ಕೃಷ್ಣವೇಣಿ ತರಹ ಇದ್ದವು.
ಈಗ ಬಗೆ ಬಗೆಯ ಪಕ್ಷಿಗಳು, ದೇವತೆಯ ಚಿತ್ರಗಳು, ಪ್ರಾಣಿಗಳನ್ನು ಹೋಲುವ ಅಥವಾ ಬಾಲಗೋಂಚಿ ಇಲ್ಲದ, ಬಣ್ಣ ಬಣ್ಣದ ಹಾಗೂ ಹರಿಯದ ಪ್ಲಾಸ್ಟಿಕ್ ನಿಂದ ತಯಾರಾದ ಗಾಳಿಪಟಗಳು ಎಲ್ಲಾ ಅಂಗಡಿಗಳಲ್ಲಿ ದೊರೆಯುತ್ತವೆ. ಆದರೆ, ನಾವು ಗಾಳಿಪಟ ಹಾರಿಸುವುದು ಮಾತ್ರವಲ್ಲ, ಅವುಗಳನ್ನು ತಯಾರಿಸುವುದರಲ್ಲೂ ನಿಪುಣರಾಗಿದ್ದೆವು. ಒಂದಿಷ್ಟು, ತೆಂಗಿನ ಕಡ್ಡಿ, ಬಳಸಿ ಬಿಸಾಡಿದ ದಿನಪತ್ರಿಕೆಯ ಕಾಗದ, ಅವ್ವನ ಹಳೆಯ ಸೀರೆ ಅಥವಾ ಅಪ್ಪನ ಹಳೆಯ ಪಂಚೆ ಅಥವಾ ಟವಲ್ ಸಿಕ್ಕರೆ ಸಾಕು. ನಮ್ಮ ಜನಸಿನ ಕನಕ ಎಂಬ ಸರಳವಾದ ಗಾಳಿಪಟ ಚಿತ್ರದಲ್ಲಿರುವಂತಹದ್ದು ಮತ್ತು ಬೋರಂಟಿ ಎಂಬ ಚೌಕಕಾರದ ದೊಡ್ಡದಾದ ಗಾಳಿ ತಯಾರು ಮಾಡುತ್ತಿದ್ದೆವು. ಅವ್ವ, ಅಪ್ಪಂದಿರ ಹಳೆಯ ವಸ್ತ್ರಗಳನ್ನು  ಟೇಪುಗಳಂತೆ ಉದ್ದಕ್ಕೆ  ಹರಿದು ಬಾಲಗೊಂಚಿಗೆ ಬಳಸುತ್ತಿದ್ದೆವು. ದಾರದ ಉಂಡೆಗೆ ಮಾತ್ರ ನಾವು ಬಂಡವಾಳ ಉಪಯೋಗಿಸಬೇಕಿತ್ತು. ಎಲ್ಲರ ಮನೆಯಲ್ಲಿ ನಾವು ಹಳೇ ಮಿಷನ್ ಗಳೆಂದು ಕರೆಯುತ್ತಿದ್ದ ನಮ್ಮ ಅಜ್ಜ, ಅಜ್ಜಿಯರು ಇರುತ್ತಿದ್ದರಿಂದ ಅವರನ್ನು ಬೇತಾಳದಂತೆ ಬೆನ್ನು ಹತ್ತಿ ಒಂದಾಣೆ, ಎರಡಾಣೆ ಸಂಪಾದಿಸುತ್ತಿದ್ದೆವು.
ನಮ್ಮ ಶಾಲಾ ದಿನಗಳಲ್ಲಿ  ಮನೆಗೆ  ಸಂತೆಯಲ್ಲಿ ಸಾಮಾನು ತರಬಹುದಾದ ಅಥವಾ ನಮ್ಮ ಸ್ಲೇಟು, ಬಳಪ ಕ್ಕಾಗಿ ಶಾಲೆಗೆ ಬಳಸಬಹುದಾದ ಉದ್ದನೆಯ ಖಾಕಿಯ ಕೈ ಚೀಲದಲ್ಲಿ ಸ್ಲೇಟು ಬಳಪದ ಜೊತೆಗೆ ತೆಂಗಿನ ಕಟ್ಟಿ, ಹಳೆಯ ಪೇಪರು, ಬಾಲಂಗೋಚಿ, ಮತ್ತು ಪಟವನ್ನು ಸಿದ್ಧಪಡಿಸುವುದಾಗಿ ಮನೆಯಲ್ಲಿ ಅವ್ವಂದಿರಿಗೆ ಕಾಣದಂತೆ ಅಡುಗೆ ಮನೆಯಲ್ಲಿ ಕದ್ದ ಹೆಬ್ಬೆಟ್ಟು ಗಾತ್ರದ ಮುದ್ದೆಯ ಚೂರು ಇಲ್ಲವೆ ಅನ್ನದ ಅಗುಳಿನ ಉಂಡೆ ಇವೆಲ್ಲವೂ ಇರುತ್ತಿದ್ದವು. ಅನ್ನ ಮತ್ತು ಮದ್ದೆಯ ಚೂರುಗಳನ್ನು ಗೊಂದು ರೀತಿಯಲ್ಲಿ ಪಟಗಳನ್ನು ಅಂಟಿಸುವುದಕ್ಕೆ ಬಳಕೆ ಮಾಡುತ್ತಿದ್ದವು.
ಶಾಲೆಗೆ ತೆರಳುವ ಮುನ್ನ ಹಾಗೂ ಶಾಲೆ ಬಿಟ್ಟ ನಂತರ ನಮಗೆ ಗಾಳಿಪಟದ ಲೋಕವಲ್ಲದೆ ಬೇರೇನೂ ಇರಲ್ಲಿಲ್ಲ. ನಿಜ ಹೇಳಬೇಕೆಂದರೆ, ನಮಗೆ ಬೇಕಾಗಿಯೂ ಇರಲಿಲ್ಲ. ಅತಿ ಹೆಚ್ಚು ಗಾಳಿ ಬೀಸುವ ಊರ ಹಿಂದಿನ ಕೆರೆ ಸಮೀಪದ ಕಲ್ಲು ಮಟ್ಟಿ ಎಂಬ ಜಾಗ, ಕೆರೆಯ ಏರಿ ಇಲ್ಲವೇ ಶಾಲಾ ಮೈದಾನ ಕಾಲದಲ್ಲಿ ನಮ್ಮ ಗಾಳಿಪಟಗಳ ಕರ್ಮ ಭೂಮಿಯಾಗಿತ್ತು.
ಶಾಲೆಯ ರಜಾ ದಿನಗಳಲ್ಲಿ ಬೆಳಿಗ್ಗೆ ಮನೆ ಬಿಟ್ಟರೆ ಸಂಜೆ ಮನೆಗೆ ಹಿಂತಿರುಗುತ್ತಿದ್ದೆವು. ಹಸಿವು, ನೀರಡಿಕೆ ಯಾವುವೂ ನಮ್ಮನ್ನ ಬಾಧಿಸುತ್ತಿರಲಿಲ್ಲ. ಅತಿ ಎತ್ತರಕ್ಕೆ ಪಟ ಹಾರಿಸುವುದು ಮಾತ್ರ ನಮ್ಮ ಏಕೈಕ ಗುರಿಯಾಗಿತ್ತು. ಕನಕ ಪಟದ ತಯಾರಿಕೆ ಸುಲಭವಾಗಿತ್ತು. ಬಿಲ್ಲಿನ ಆಕಾರದಲ್ಲಿ ತೆಂಗಿನ ಕಡ್ಡಿಯನ್ನು ಬಾಗಿಸಿ ಅದಕ್ಕೆ ದಾರದಿಂದ ಕಟ್ಟುತ್ತಿದ್ದೆವು. ನಂತರ ಬಿಲ್ಲಿನ ಮಧ್ಯ ಒಂದು ಕಡ್ಡಿಯನ್ನು ನೇರವಾಗಿ ನಿಲ್ಲಿಸಿ, ಅವುಗಳನ್ನು ತ್ರಿಕೋನಾಕಾರದ ಕಾಗದಕ್ಕೆ ಅನ್ನ ಅಥವಾ ಮುದ್ದೆಯಿಂದ ಅಂಟಿಸಿದರೆ ಗಾಳಿಪಟ ಸಿದ್ಧವಾಗುತ್ತಿತ್ತು. ಆದರೆ, ಬೋರಂಟಿ ಪಟದ ಸಿದ್ಧತೆಗೆ ಒಂದಿಷ್ಟು ಕಸುಬುದಾರಿಕೆ ಬೇಕಿತ್ತು. ಚೌಕಾಕಾರದಲ್ಲಿ ಗಟ್ಟಿಯಾದ ಕಡ್ಡಿಗಳನ್ನು ದಾರದಲ್ಲಿ ಕಟ್ಟಿ ನಂತರ ಒಳಭಾಗದಲ್ಲಿ ಅಡ್ಡಡ್ಡ ಮತ್ತು ಉದ್ದವಾಗಿ ಕಡ್ಡಿಗಳನ್ನು ಇರಿಸಿ, ತಡಿಕೆಯ ರೂಪದಲ್ಲಿ ಸಿದ್ಧಪಡಿಸಿಕೊಂಡು ನಂತರ ಗಟ್ಟಿಯಾದ ಕಾಗದದ ಮೇಲೆ ಕಡ್ಡಿಗಳ ತಡಿಕೆ ಇಟ್ಟು ಅಂಟಿಸಲಾಗುತ್ತಿತ್ತು.
ಪಟಗಳ ನಿರ್ಮಾಣಕ್ಕಿಂತ ಅವುಗಳಿಗೆ ಕಟ್ಟುತ್ತಿದ್ದ ಸೂತ್ರ ಎನ್ನುವ ಮೂರು ದಾರಗಳ ಗಂಟು ನಿಜಕ್ಕೂ ಸವಾಲಿನ ಕ್ರಿಯೆಯಾಗಿತ್ತು. ಕನಕ ಪಟಕ್ಕೆ ಮೇಲಿನ ತುದಿ ಹಾಗೂ ಪಟದ ಮಧ್ಯ ಬಾಗದಲ್ಲಿ ಅರ್ಧ ಅಡಿ ಉದ್ದ ದಾರದಲ್ಲಿ ಕಡ್ಡಿಗಳಿಗೆ ಸೂತ್ರವನ್ನು ಅಳವಡಿಸಿದರೆ, ಬೋರಂಟಿ ಪಟಕ್ಕೆ ಮೇಲಿನ ಎರಡು ಬದಿ ಹಾಗೂ ಮಧ್ಯ ಬಾಗದಲ್ಲಿ ಸೂತ್ರದ ದಾರವನ್ನು ಅಳವಡಿಸಲಾಗುತ್ತಿತ್ತು. ದಾರವು ಗಟ್ಟಿಯಾಗಿರಬೇಕು ಮತ್ತು ಒಂದು ಕಿಲಿಮೀಟರ್ ವೆತ್ಯಾಸವಿರದೆ ಸಮಾನವಾಗಿರಬೇಕಿತ್ತು. ಏಕೆಂದರೆ ಎಡಬದಿ ಚಿಕ್ಕದಾದರೆ, ಎಡಭಾಗಕ್ಕೆ. ಬಲಬದಿ ಚಿಕ್ಕದಾದರೆ ಬಲಬದಿಗೆ ಪಟವು ವಾಲುತ್ತಿತ್ತು. ಇದಾದ ನಂತರ ಪಟಕ್ಕೆ ಎಷ್ಟು ಉದ್ದದ ಬಾಲಂಗೋಚಿ ಬೇಕು ಎಂಬುದನ್ನು ಅದನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸಿ, ನಿಧ್ರಿಸುತ್ತಿದ್ದೆವು. ಉದ್ದ ಜಾಸ್ತಿyAdaದರೆ, ಹಾರುತ್ತಿರಲಿಲ್ಲ. ಕಡಿಮೆಯಾದರೆ ಲಾಗ ಹೊಡೆಯುತ್ತಿತ್ತು. ಒಟ್ಟಾರೆ, ನಮ್ಮಗಳ ಪಟಗಳ ತಯಾರಿಕೆ ಮತ್ತು ಹಾರಾಟದ ತಂತ್ರಜ್ಞಾನ ಇವೆಲ್ಲವೂ ಈಗಿನ ವಿಮಾನ, ಹೆಲಿಕಾಪ್ಟರ್, ದ್ರೋಣ್ ಗಳ ತಯಾರಿಕೆಗೆ ಆಧಾರವಾಗಿರಬೇಕೆಂದು ನಮ್ಮಗಳ ಬಲವಾದ ನಂಬಿಕೆ.
ಪಟವನ್ನು ಆಗಸದಲ್ಲಿ ಅತಿ ಎತ್ತರಕ್ಕೆ ಹಾರಿಸುವುದು ನಮ್ಮಗಳ ಗುರಿಯಾಗಿತ್ತು. ಏಕೆಂದರೆ, ಹಬ್ಬದ ಸಮಯದಲ್ಲಿ ನನ್ನೂರಿನ ಆಕಾಶವು ಹಕ್ಕಿಗಳ ಚಿತ್ತಾರದಂತೆ ಪಟಗಳಿಂದ ಗೋಚರಿಸುತ್ತಿತ್ತು. ಒಮ್ಮೊಮ್ಮೆ ಗೆಳೆಯರ ದಾರದ ಉಂಡೆಗಳನ್ನು ಒಟ್ಟುಗೂಡಿಸಿ ಒಂದೇ ಪಟವನ್ನು ಎತ್ತರಕ್ಕೆ, ಬಹುದೂರಕ್ಕೆ ಹಾರಿಸುತ್ತಿದ್ದೆವು. ಒಮ್ಮೊಮ್ಮೆ ಸೂತ್ರ ಹರಿದುಕೊಂಡು ಗಾಳಿಪಟವು ಊರಾಚೆಗಿನ ತೆಂಗಿನತೋಟ ಅಥವಾ ಕಬ್ಬಿನ ಗದ್ದೆಯಲ್ಲಿ ಹೋಗಿ ಬೀಳುತ್ತಿತ್ತು. ಪತನವಾದ ವಿಮಾನವನ್ನು ವಾಯುಪಡೆ ಪತ್ತೆ ಹಚ್ಚುವ ಮಾದರಿಯಲ್ಲಿ ಹುಡುಕಿ ತರುತ್ತಿದ್ದೆವು. ಹರಿದು ಹೋದ ಗಾಳಿಪಟವನ್ನು ಕಂಡು ದಿನ ನಾವು ಶೋಕಾಚರಣೆ ಆಚರಿಸುತ್ತಿದ್ದೆವು. ಮರುದಿನ ಮತ್ತೇ ಹೊಸ ಗಾಳಿಪಟಕ್ಕೆ ಸಿದ್ಧವಾಗುತ್ತಿದ್ದೆವು.
ಸ್ವೀಡಿಷ್ ನೋಬಲ್ ಪ್ರಶಸ್ತಿ ಸಮಿತಿಯು ಗಾಳಿಪಟ ತಂತ್ರಜ್ಞಾನಕ್ಕೆ ಪ್ರಶಸ್ತಿಯನ್ನು ಇಟ್ಟರೆ, ಅದನ್ನು ಮೊದಲು ನನ್ನ ತಲೆಮಾರಿಗೆ ನೀಡಬೇಕು. ನಂತರ ಇತರರಿಗೆ ನೀಡಬೇಕು. ಏಕೆಂದರೆ, ನಮ್ಮ ಬಾಲ್ಯದ ಆಯಷ್ಯವನ್ನು ನಾವು ಅದಕ್ಕಾಗಿ ತ್ಯಾಗ ಮಾಡಿದ್ದೇವೆ. ( ವಿ.ಸೂ.- ಮಂಡ್ಯ ಜಿಲ್ಲೆಯಲ್ಲಿ ಅತಿಯಾಗಿ ಸುಳ್ಳು ಹೇಳುವ ವ್ಯಕ್ತಿಗೆ ಬೋರಂಟಿ ಬುಡ್ತಾ ಅವ್ನೆ ಎಂದು ರೇಗಿಸುವ ಶಬ್ದ ಈಗಲೂ ಚಾಲ್ತಿಯಲ್ಲಿದೆ)
ಚಿತ್ರ ಸೌಜನ್ಯ- ಪ್ರತಿಲಿಪಿ