ಶುಕ್ರವಾರ, ಏಪ್ರಿಲ್ 28, 2017

ದಿಲ್ಲಿಯಲ್ಲಿ ಅನ್ನದಾತರ ಆಕ್ರಂಧನ




ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಲವತ್ತು ದಿನಗಳ ಕಾಲ  ತಮಿಳುನಾಡು ರೈತರು  ನಿರಂತರವಾಗಿ ನಡೆಸಿದ ವಿಶಿಷ್ಟವಾದ ಅರಬೆತ್ತಲೆಯ ಪ್ರತಿಭಟನೆಯು ಇಡೀ ಭಾರತ ಮಾತ್ರವಲ್ಲ, ಜಗತ್ತಿನ ಮಾಧ್ಯಮಗಳ ಗಮನ ಸೆಳೆಯಿತು. ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಬೇಕು ಎನ್ನುವ ರೈತರ ಏಕೈಕ ಗುರಿ  ಮಾತ್ರ ಈಡೇರಲಿಲ್ಲ. 23-4-16 ರಂದು  ನೀತಿ ಆಯೋಗದ ಸಭೆಗಾಗಿ ದೆಹಲಿಗೆ ಆಗಮಿಸಿದ್ದ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ. ಪಳನಿ ಅವರ ಮನವಿಯ ಮೇರೆಗೆ ರೈತರು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.  ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳೊಂದಿಗೆ ಆರಂಭವಾದ ರೈತರ  ಪ್ರತಿಭಟನೆ, ಅರ್ಧ ಮೀಸೆ ಮತ್ತು ತಲೆ ಬೋಳಿಸಿಕೊಳ್ಳುವುದು, ಸುಟ್ಟ ಇಲಿ ತಿನ್ನುವುದು, ಅರೆ ಬೆತ್ತಲೆ ಪ್ರದರ್ಶನ ಇವುಗಳಿಂದ ಮುಂದುವರಿದು ಮೂತ್ರ ಕುಡಿಯುವವರೆಗೂ ನಡೆಯಿತು.
ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿರುವ ತಮಿಳುನಾಡಿನಲ್ಲಿ ರೈತರು ಮಾಡಿರುವ ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿಗಳ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂಬುದು ರೈತರ ಬೇಡಿಕೆಯಾಗಿತ್ತು. ವಾಸ್ತವವಾಗಿ ಇದು ತಮಿಳುನಾಡು ರಾಜ್ಯ ಸರ್ಕಾರಕ್ಕೆ ಸೇರಿದ ವಿಷಯವಾಗಿದ್ದರೂ ಸಹ, ಕೇಂದ್ರದ ಅನುದಾನವಿಲ್ಲದೆ ನಾವೇನು ಮಾಡಲು ಬರುವುದಿಲ್ಲ ಎಂದು ತಮಿಳುನಾಡು ಸರ್ಕಾರ ಕೈಚೆಲ್ಲಿದ್ದರಿಂದ ರೈತರು ನೇರವಾಗಿ ದೆಹಲಿಗೆ ಬಂದು ಧರಣಿ ಕೂತರು. ಇದೇ ವೇಳೆಗೆ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ ಯೋಗಿ ನೇತೃತ್ವದ  ಬಿ.ಜೆ.ಪಿ. ಸರ್ಕಾರ ಅಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿದ್ದರಿಂದ ಇಂತಹದ್ದೇ ಅವಕಾಶ ತಮಿಳುನಾಡು ರೈತರಿಗೆ ದೊರೆಯಬೇಕು ಎಂಬುದು ರಾಧಾಕೃಷ್ಣನ್ ನೇತೃತ್ವದ ರೈತ ಸಂಘಟನೆಯ ಆಸೆಯಾಗಿತ್ತು. ಆದರೆ, ಈ ರೈತರು ನಡೆಸಿದ ಪ್ರತಿಭಟನೆ ಮಾತ್ರ ನಿಜಕ್ಕೂ ಇಡೀ ರೈತ ಸಮುದಾಯ ತಲೆ ತಗ್ಗಿಸುವಂತಹ ರೀತಿಯಲ್ಲಿತ್ತು.

ಏಕೆಂದರೆ, ಎಂತಹದ್ದೇ ಕಷ್ಟ ಕಾರ್ಪಣ್ಯಗಳ ನಡುವೆ, ಬಿಸಿಲು ಬಿರುಗಾಳಿ, ಮಳೆಗಳ ಮಧ್ಯೆ, ಭೂಮಿಯ ಮೇಲಿನ ನಂಬಿಕೆ ಕಳೆದುಕೊಳ್ಳದ ಈ ದೇಶದ ರೈತ ಎಂದಿಗೂ ಯಾರ ಮುಂದೆಯೂ ದೈನೆಸಿ ಸ್ಥಿತಿಯಲ್ಲಿ ಕೈಯೊಡ್ಡಿ ಬೇಡಿದವನಲ್ಲ. ತಾನು ಬೆಳೆದದ್ದನ್ನು ಅಥವಾ ಬೇಯಿಸಿದ್ದನ್ನು ಇತರರೊಂದಿಗೆ ಹಂಚಿಕೊಂಡು ಉಣ್ಣುತ್ತಾ, ಬಡತನದ ನಡುವೆಯೂ ಘನತೆಯ ಬದುಕು ಕಟ್ಟಿಕೊಂಡು ಬದುಕಿದವನು. ಆದರೆ, ಕಳೆದ ಎರಡು ದಶಕದ ಅವಧಿಯಲ್ಲಿ ಆತನ ಬದುಕು ಮೂರಾಬಟ್ಟೆಯಾಗಿದೆ. ಸಾಂಪ್ರದಾಯಿಕ ಕೃಷಿ ಮತ್ತು ಆಧುನಿಕತೆಯ ತಂತ್ರಜ್ಞಾನ ಹಾಗೂ ಹೈಬ್ರಿಡ್ ಬೀಜಗಳು, ರಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು  ನೀರು ಬಾರದ ಕೊಳವೆ ಬಾವಿಗಳು ಎಂಬ  ಸುಳಿಯೊಳಗೆ ಸಿಲುಕಿ , ಸಾಲವೆಂಬ ಶೂಲವನ್ನು ಎದೆಗೆ ಇಕ್ಕಿಸಿಕೊಂಡು ಹೈರಾಣಾಗಿದ್ದಾನೆ. ಯಾವ ರಾಜಕೀಯ ಪಕ್ಷಗಳಿಂದಾಗಲಿ, ಸರ್ಕಾರಗಳಿಂದಾಗಲಿ ಅಥವಾ ಸಂಘಟನೆಗಳಿಂದಾಗಲಿ ಅವನಿಗೆ ಮೋಕ್ಷವೆಂಬುದು ಕೇವಲ ಭ್ರಮೆಯ ಮಾತಾಗಿದೆ. ಭಾರತದ ಪ್ರಪಥಮ ಸಂಘಟಿತ ರೈತರ ಹೋರಾಟ ಎನಿಸಿಕೊಂಡ ಬಿಹಾರದ ಚಂಪಾರಣ್ಯ ಸತ್ಯಾಗ್ರಹಕ್ಕೆ ಇದೀಗ ಶತಮಾನ ತುಂಬಿದೆ.(1917 ರ ಹೋರಾಟ) ಈ ಹೋರಾಟದ ಯಶಸ್ಸನ್ನು ನಾವು ಒಂದಿಷ್ಟು ಪರಾಮರ್ಶೆಗೆ ಒಡ್ಡಿದರೆ ಕಗ್ಗತ್ತಲ ಕಾಡಿನಲ್ಲಿ ಕಳೆದು ಹೋಗಿರುವ ರೈತ ಸಮುದಾಯಕ್ಕೆ ಒಂದಿಷ್ಟು ಬೆಳಕಿನ ಹಾದಿ ತೋರಬಹುದು
1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದ ಗಾಂಧೀಜಿಯವರು, ಭಾರತವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ .ತಮ್ಮ ಪತ್ನಿ ಕಸ್ತೂರಬಾ ಜೊತೆ ಭಾರತ ಪ್ರವಾಸ ಕೈಗೊಂಡಿದ್ದರು. 1917 ರಲ್ಲಿ ಉತ್ತರ ಪ್ರದೇಶದ ಲಕ್ನೊ ನಗರದಲ್ಲಿ ನಡೆಯುತ್ತಿದ್ದ ಕಾಂಗ್ರೇಸ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಗಾಂಧೀಜಿಯವರನ್ನು ಭೇಟಿ ಮಾಡಿದ ಚಂಪಾರಣ್ಯದ ರೈತರು, ಬ್ರಿಟಿಷ್ ಸರ್ಕಾರ ಹಾಗೂ ಶ್ರೀಮಂತ ರೈತರು ನೀಲಿ ಬೆಳೆ ಬೆಳೆಯುವಂತೆ ತಮ್ಮ ಮೇಲೆ ಹೇರುತ್ತಿರುವ ಒತ್ತಡದ ಬಗ್ಗೆ ವಿವರಿಸಿ, ನಾವು ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಆಗಿನ ಯುವ ವಕೀಲರಾಗಿದ್ದ ರಾಜೇಂದ್ರ ಪ್ರಸಾದ್ ಜೊತೆ ಚಂಪಾರಣ್ಯಕ್ಕೆ ಭೇಟಿ ನೀಡಿದ ಗಾಂಧೀಜಿಯವರು ಅಲ್ಲಿನ ರೈತರ ಬವಣೆಯನ್ನು ಕೂಲಂಕುಶವಾಗಿ ಗಮನಿಸಿದರು. ರೈತರ ಮೇಲಿನ ದಬ್ಬಾಳಿಕೆಗೆ ಆ ಪ್ರದೇಶದ ರೈತರ ಬಡತನ, ಅನಕ್ಷರತೆ, ಮೌಡ್ಯ ಮತ್ತು ಆರೋಗ್ಯದಲ್ಲಿ ಶುಚಿತ್ವ ಇಲ್ಲದಿರುವಿಕೆ ಇವುಗಳನ್ನು ಸಹ ಅವರು ಮನಗಂಡರು. ನಂತರ ಏಕಕಾಲಕ್ಕೆ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ರೈತರ ದೌರ್ಬಲ್ಯಗಳನ್ನು ಸರಿಪಡಿಸಿ, ಉತ್ತಮ ಬದುಕು ಬದುಕುವಂತೆ ಮಾಡಿದರು. ಚಂಪಾರಣ್ಯ ಸತ್ಯಾಗ್ರಹ ಗಾಂಧೀಜಿಯವರ ಪಾಲಿಗೆ ಕೇವಲ ಹೋರಾಟ ಮಾತ್ರವಾಗಿರದೆ ನಿಜ ಭಾರತದ ದರ್ಶನವಾಗಿತ್ತು.

ಶತಮಾನ ಕಳೆದರೂ ಸಹ ಭಾರತದ ರೈತರ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ,  ರೈತರ ಮೇಲಿನ ವ್ಯೆವಸ್ಥೆಯ ಕ್ರೌರ್ಯ ಮತ್ತು ದಬ್ಬಾಳಿಕೆ ಕೂಡ ನಿಂತಿಲ್ಲ. ಅದೇ ರೀತಿ ರೈತರ ಹೋರಾಟವೂ ನಿಂತಿಲ್ಲ. ಜೊತೆಗೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಆಯುಧಗಳಂತೆ ಬದಲಾಗಬೇಕಿದ್ದ ರೈತರ ಹೋರಾಟದ ಸ್ವರೂಪ ಬದಲಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ, ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಎಂಬ ಸಂಘಟನೆಯೊಂದು ಸಾಂಸ್ಥಿಕ ರೂಪ ತಳೆಯುವ ಮೊದಲು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಲೆನಾಡಿನ ಶಿವಮೊಗ್ಗ ಮುಂತಾದ ಕಡೆ ಪ್ರಾಂತೀಯ ರೈತ ಹೋರಾಟದ ಸಮಿತಿಗಳಿದ್ದವು. ಪ್ರೊ. ಎಂ.ಡಿ. ನಂಜುಂಡಸ್ವಾಮಿ,  ಹೆಚ್.ಎಸ್.ರುದ್ರಪ್ಪ. ಎಂ.ಡಿ.ಸುಂದರೇಶ್, ಮಂಜುನಾಥ ದತ್ತ, ಮುಂತಾದ ನಾಯಕರು ಪ್ರಬಲ ರೈತ ಸಂಘಟನೆಯನ್ನು ಕಟ್ಟಲು ಪ್ರೇರೇಪಣೆ ಸಿಕ್ಕಿದ್ದು ತಮಿಳುನಾಡು ರೈತರಿಂದ ಎಂಬುದು ಗಮನಾರ್ಹ ಸಂಗತಿ. 1980 ರ ಸೆಪ್ಟಂಬರ್ ತಿಂಗಳಿನಲ್ಲಿ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ್ದ “ತಮಿಳ್ ವ್ಯವಸಾಯಿಗಳ್ ಸಂಘಂ “ ಸಂಘಟನೆಯ ಮುಖ್ಯಸ್ಥ  ನಾರಾಯಣಸ್ವಾಮಿ ನಾಯ್ಡು ಅವರು ಮಾಡಿದ ಭಾಷಣ ಮತ್ತು ನೀಡಿದ ಸಲಹೆಗಳು ( ಹಸಿರು ಟವಲ್ ಅಥವಾ ಶಾಲು) ಕರ್ನಾಟಕದಲ್ಲಿ ಪ್ರಬಲ ರೈತ ಸಂಘಟನೆ ಬೆಳೆಯಲು ಸಾಧ್ಯವಾಯಿತು. ಇದಾದ ಆರು ವರ್ಷಗಳ ನಂತರ ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಟಿಕಾಯತ್ ಕರ್ನಾಟಕದಿಂದ ಸ್ಪೂರ್ತಿಗೊಂಡು ಉತ್ತರ ಭಾರತದಲ್ಲಿ ಭಾರತೀಯ ಕಿಸಾನ್ ಯುನಿಯನ್ ಎಂಬ ಸಂಘಟನೆ ರೂಪಿಸಿದರು. ಹೀಗೆ ಭಾರತದಾದ್ಯಂತ ಹಲವಾರು ಪ್ರಬಲ ರೈತ ಸಂಘಟನೆಗಳು ಜೀವಂತವಾಗಿದ್ದರೂ ಸಹ ರೈತರ ಬದುಕು ಹಸನಾಗಲಿಲ್ಲ.
ಇದಕ್ಕೆ ಪರ್ಯಾಯ ಎಂಬಂತೆ ಯಾವೊಂದು ಸಂಘಟನೆಗಳು ಅಥವಾ ಸರ್ಕಾರಗಳನ್ನು ನಂಬದೆ ಇಲ್ಲವೆ ಆಶ್ರಯಿಸದೆ ಭೂಮಿಯನ್ನು ಮತ್ತು ಬೇಸಾಯವನ್ನು ನಂಬಿ ಘನತೆಯ ಹಾಗೂ ನೆಮ್ಮದಿಯ ಬದುಕು ಕಂಡಿರುವ ಸಾವಿರಾರು ರೈತರ ಉದಾಹರಣೆಗಳು ನಮ್ಮಲ್ಲಿವೆ. ಈ ವರ್ಷ ಕರ್ನಾಟಕದಲ್ಲಿ ತಲೆದೂರಿರುವ  ಭೀಕರ ಬರಗಾಲದ ಹಿನ್ನಲೆಯಲ್ಲಿ ರೈತರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಪ್ರಜಾವಾಣಿ ಪತ್ರಿಕೆಯು ಆರಂಭಿಸಿರುವ ಅಭಿಯಾನದಲ್ಲಿ ದಿನಕ್ಕೊಂದು ರೈತರ ಯಶೋಗಾಥೆ ಪ್ರಕಟವಾಗುತ್ತಿದೆ. ಈ ಯಶಸ್ವಿ ರೈತರು ಕೃಷಿ ಹೊಂಡದ ಮೂಲಕ ಮಳೆ ನೀರನ್ನು ಹಿಡಿದಿಟ್ಟು ಬರಗಾಲದಲ್ಲೂ ಬೆಳೆ ತೆಗೆಯುತ್ತಿದ್ದಾರೆ. ಯಾವುದೇ ವಾಣಿಜ್ಯ ಬೆಳೆಯ ಮೋಹಕ್ಕೆ ಒಳಗಾಗದೆ, ಅನೇಕ ಪಾರಂಪರಿಕ ಬೆಳೆಗಳು, ಪರ್ಯಾಯ ಕೃಷಿ ಮತ್ತು ಹೈನುಗಾರಿಕೆ, ಕೋಳಿಸಾಗಾಣಿಕೆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸ್ವಾತಂತ್ರ್ಯಾನಂತರ ಭಾರತದಲ್ಲಿ  ನಮ್ಮನ್ನಾಳಿದ ಮತ್ತು ಆಳುತ್ತಿರುವ ಸರ್ಕಾರಗಳಿಂದ ನಿರಂತರವಾಗಿ ಕಡೆಗಣಿಸಲ್ಪಟ್ಟ  ಕ್ಷೇತ್ರವೆಂದರೆ, ಅದು ಕೃಷಿ ಕ್ರೇತ್ರ ಮಾತ್ರ. ಇವೊತ್ತಿಗೂ ರೈತ ತಾನು ಬೆಳೆದ ಕೃಷಿ ಉತ್ಪನ್ನಗಳಿಗೆ ನಿರ್ಧಿಷ್ಟ ಬೆಲೆ ಕಟ್ಟುವ ಹಕ್ಕನ್ನು ಹೊಂದಿಲ್ಲವೆಂದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ. ಒಬ್ಬ ಗುಂಡು ಸೂಜಿ ತಯಾರಕನಿಗೆ ಮತ್ತು ಪಾದರಕ್ಷೆ ತಯಾರು ಮಾಡುವವನಿಗೆ ತನ್ನ ವಸ್ತುಗಳಿಗೆ ಬೆಲೆ ಕಟ್ಟಲು ಇರುವ ಸ್ವಾತಂತ್ರ್ಯ ಈ ದೇಶದ ಅನ್ನದಾತ ಎನಿಸಿಕೊಂಡ ರೈತನಿಗಿಲ್ಲ. ಅಂತಹ ಸ್ವಾತಂತ್ರ್ಯವಿದ್ದರೆ ಇಂದು ತಮಿಳುನಾಡು ರೈತರು ಅರೆ ಬೆತ್ತಲೆಯಲ್ಲಿ ದಯನೀಯವಾದ ಸ್ತಿತಿಯಲ್ಲಿ 43 ಸೆಂಟಿಗ್ರೇಡ್ ಉಷ್ಣಾಂಶದ ದೆಹಲಿಯ ಬೀದಿಯಲ್ಲಿ ಕೂರಬೇಕಾದ ಸ್ಥಿತಿ ಒದಗಿ ಬರುತ್ತಿರಲಿಲ್ಲ. ದೇಶದ ಯಾವುದೋ ಮೂಲೆಯಿಂದ ಯಾರೋ ಒಬ್ಬ ಬಾಲಕಿ ಅಥವಾ ಬಾಲಕ ಪತ್ರ ಬರೆದರೆ ರೋಮಾಂಚನಗೊಳ್ಳುವ ನಮ್ಮ ಪ್ರಧಾನ ಮಂತ್ರಿಗೆ ನಲವತ್ತು ದಿನಗಳ ಕಾಲ ಬಿಸಿಲಲ್ಲಿ ಕುಳಿತ ರೈತರನ್ನು  ಭೇಟಿ ಮಾಡಿ ಸಾಂತ್ವನ ಹೇಳುವ ಹೃದಯವೂ ಇಲ್ಲವೆಂದರೆ,ಇದು ಈ ನಾಡಿನ ದುರಂತವೆ ಸರಿ..
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಅಲ್ಲಿನ ರೈತರ ಸಾಲ ಮನ್ನಾ ಮಾಡಿದ ಘಟನೆ ಕುರಿತು ಅತೃಪ್ತಿ ವ್ಯಕ್ತ ಪಡಿಸಿರುವ ರಿಸರ್ವ್ ಬ್ಯಾಂಕ್ ಗೌರ್ನರ್ ಊರ್ಜಿತ್ ಪಟೇಲ್ “ ಇದು ಒಳ್ಳೆಯ ಬೆಳವಣಿಗೆಯಲ್ಲ, ಇನ್ನು ಮುಂದೆ ರೈತರು ತಾವು ಪಡೆದ ಕೃಷಿ ಸಾಲವನ್ನು ಮರು ಪಾವತಿಸದೆ ಇರುವಂತಹ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ” ಎಂದಿದ್ದಾರೆ. ಇಂತಹ ಮಾತನ್ನಾಡುವ ಮಹಾಶಯನಿಗೆ “ನಿಮ್ಮ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಸೂಲಿಯಾಗದ ಸಾಲದ ಮೊತ್ತ ಹದಿನಾಲ್ಕು ಲಕ್ಷ ಕೋಟಿ ಇದೆಯೆಲ್ಲಾ! ಇದು ಒಳ್ಳೆಯ ಬೆಳವಣಿಗೆಯಾ” ಎಂದು ಕೆಳಬೇಕಿದೆ. ಕಿಂಗ್ ಫಿಷರ್ ನ ವಿಜಯ ಮಲ್ಯ ನಂತಹವರಿಗೆ ಯಾವ ವಿಶ್ವಾರ್ಹತೆಯ ಮೇಲೆ ಸಾಲ ಕೊಟ್ಟಿರಿ? ಪ್ರಧಾನಿಗೆ ಆಪ್ತನಾಗಿರುವ ಅದಾನಿ ಗ್ರೂಪ್ ನ ಸ್ಥಾಪಕ ಗೌತಮ್ ಶಾಂತಿಲಾಲ್ ಅದಾನಿ ಎಂಬ ಗುಜರಾತಿನ ಮಾರವಾಡಿಗೆ ಬರೋಬ್ಬರಿ 90 ಸಾವಿರ ಕೋಟಿ ಸಾಲ ನೀಡಿರುವ ನೀವು ಅದರ ಅಂಕಿ ಅಂಶಗಳನ್ನು ಮಾಹಿತಿ ಹಕ್ಕಿನ ಅಡಿ ನಾಗರೀಕರಿಗೆ ನೀಡಲು ಏಕೆ ನಿರಾಕರಿಸುತ್ತಿದ್ದೀರಿ? ಎಂಬ ಪ್ರಶ್ನೆಗಳನ್ನು ನಾವೀಗ ರೈತ ಸಮುದಾಯದ ಪರವಾಗಿ ಕೇಳಬೇಕಾಗಿದೆ. ರೈತರನ್ನು  ಹಾಗೂ ವಾಣಿಜ್ಯೋದ್ಯಮಿಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡುವ ಮನೋಭಾವವನ್ನು ನಮ್ಮನ್ನಾಳುವ ಸರ್ಕಾರಗಳು ಬದಲಿಸಿಕೊಳ್ಳುವವರೆಗೆ ಭಾರತದ ಕೃಷಿಕನ ಬದುಕು ಹಸನಾಗಲಾರದು. ಈ ಕಾರಣದಿಂದಾಗಿ ಇತ್ತೀಚೆಗೆ ಬಹುತೇಕ ಮಂದಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಜೊತೆಗೆ ಕೆಟ್ಟು ಪಟ್ಟಣ ಸೇರು ಎಂಬ ಮಾತಿನಂತೆ ನಗರದತ್ತ ಮುಖಮಾಡಿದ್ದಾರೆ.
(ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕೆ ಬರೆದ ಲೇಖನ)



ಶುಕ್ರವಾರ, ಏಪ್ರಿಲ್ 21, 2017

ಸ್ವಯಂ ಸೇವಾ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರದ ಗಧಾ ಪ್ರಹಾರ



ಇದೇ ಏಪ್ರಿಲ್ 16 ರ ಭಾನುವಾರ ದ ಹಿಂದು ಇಂಗ್ಲೀಷ್ ದಿನಪತ್ರಿಕೆಯಲ್ಲಿ ಒರಿಸ್ಸಾ ಮತ್ತು ಜಾರ್ಖಾಂಡ್ ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಹಕ್ಕುಗಳ ಪರವಾಗಿ ಕಳೆದ ಒಂದು ದಶಕದಿಂದ ಹೋರಾಡುತ್ತಿರುವ ಎರಡು ಸ್ವಯಂ ಸೇವಾ ಸಂಘಟನೆಗಳು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಡಿರುವ ಗಂಭೀರ ಆರೋಪದ ವರದಿಯೊಂದು ಪ್ರಕಟವಾಯಿತು.  ಒರಿಸ್ಸಾ ಅಥವಾ ಒಡಿಸ್ಸಾ ಎಂದು ಕರೆಸಿಕೊಳ್ಳುವ  ಹಾಗೂ ಬಹುತೇಕ ಹೆಚ್ಚಿನ ಆದಿವಾಸಿಗಳ ಸಮುದಾಯಗಳು ವಾಸಿಸುತ್ತಿರುವ ಈ ರಾಜ್ಯದ ಕಾಳಹಂದಿ ಮತ್ತು ರಾಯಗಡ ಜಿಲ್ಲೆಗಳ ಸರಹದ್ದಿನಲ್ಲಿ ನಿಯಮಗಿರಿ ಎಂಬ ಪರ್ವತ ಶ್ರೇಣಿಯಿದೆ. ಅತ್ಯಧಿಕ ಬಾಕ್ಷೈಟ್ ಅದಿರು ( ಅಲ್ಯೂಮಿನಿಯಂ ತಯಾರಿಕೆಗೆ ಬಳಸುವ ಖನಿಜ ಸಂಪತ್ತು) ಇರುವ ಈ ಪ್ರದೇಶದಲ್ಲಿ  “ದೇವರ ಡೋಂಗ್ರಿಕೊಂಡ” ಎಂಬ ವಿಶಿಷ್ಟ ಆದಿವಾಸಿ ಸಮುದಾಯ ಶತ ಶತಮಾನಗಳಿಂದ ವಾಸಿಸುತ್ತಿದೆ. ಈ ಆದಿವಾಸಿಗಳ  ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ 2005 ರಿಂದ   “ನಿಯಮಗಿರಿ ಸುರಕ್ಷಾ ಸಮಿತಿ”  ಎಂಬ ಸಂಘಟನೆಯೊಂದು ಹೋರಾಟ ಮಾಡುತ್ತಿದೆ.  ಅದೇ ರೀತಿ ಜಾರ್ಖಾಂಡ್ ರಾಜ್ಯದಲ್ಲಿ ಗಣಿಗಾರಿಕೆಯ  ನೆಪದಲ್ಲಿ ಅರಣ್ಯದಲ್ಲಿರುವ ಬುಡಕಟ್ಟು ಜನಾಂಗಗಳ ಒಕ್ಕಲೆಬ್ಬಿಸುವುದರ ವಿರುದ್ಧ ಹೋರಾಡುತ್ತಿರುವ “ವಿಸ್ತಾಪನ್ ವಿರೋಧಿ ಆಂಧೋಲನ್” ಎಂಬ ಸಂಘಟನೆಯು ಸಹ ಕ್ರಿಯಾಶೀಲವಾಗಿದೆ. ಆದಿವಾಸಿಗಳ ಕೃಷಿ ಭೂಮಿಯನ್ನು ಇತರರು ಕೊಳ್ಳುವಂತಿಲ್ಲ ಮತ್ತು ಬೇರೆ ಯಾವುದೇ ಚಟುವಟಿಕೆಗೆ ಉಪಯೋಗಿಸುವಂತಿಲ್ಲ ಎಂದು 1908 ರಲ್ಲಿ ಜಾರಿಗೆ ಬಂದಿದ್ದ ಕಾನೂನನ್ನು ಜಾರ್ಖಾಂಡ್ ಸರ್ಕಾರ ಇದೀಗ ತಿದ್ದುಪಡಿ ಮಾಡಲು ಹೊರಟಿದೆ. ಇಂತಹ ಸರ್ಕಾರದ  ಕೃತ್ಯಗಳನ್ನು  ವಿರೋಧಿಸಿದ ಏಕೈಕ ಕಾರಣಕ್ಕಾಗಿ  ಕೇಂದ್ರ ಸರ್ಕಾರ ಮತ್ತು ಒಡಿಸ್ಸಾ ಹಾಗೂ ಜಾರ್ಖಾಂಡ್ ರಾಜ್ಯ ಸರ್ಕಾರಗಳು “ಈ ಸಂಘಟನೆಗಳು  ಮಾನವ ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ಮಾವೋವಾದಿ ನಕ್ಷಲರ ಹೋರಾಟವನ್ನು ಹುಟ್ಟು ಹಾಕುತ್ತಿವೆ : ಎಂದು ಗಂಭೀರ ಆರೋಪ ಮಾಡುತ್ತಿವೆ.
 ಭಾರತದ ನಕ್ಸಲ್ ಇತಿಹಾಸ ಕುರಿತ “ ಎಂದೂ ಮುಗಿಯದ ಯುದ್ಧ” ಎಂಬ ಕೃತಿ ರಚನೆಯ ಸಂದರ್ಭದಲ್ಲಿ  ಈ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದ ಈ ಲೇಖಕನೂ ಒಳಗೊಂಡಂತೆ ದೇಶದ ಅನೇಕ ಪತ್ರಕರ್ತರು, ಬರಹಗಾರರು ಮತ್ತು ಮಾನವ ಹಕ್ಕು ಹೋರಾಟಗಾರರು ಶಾಂತಿಯುತವಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸುತ್ತಿರುವ  ಆದಿವಾಸಿಗಳ ಅನೇಕ ಪ್ರತಿಭಟನಾ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದಾರೆ.  ಶಾಂತಿಯುತವಾಗಿ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡುತ್ತಿರುವ ಇಲ್ಲಿನ ಕಾರ್ಯಕರ್ತರಿಗೆ   ಅಭಿವೃದ್ದಿಯ ವಿರೋಧಿಗಳೆಂದು  ಹಾಗೂ ನಕ್ಸಲ್ ಹೋರಾಟಗಾರರ ಬೆಂಬಲಿಗರೆಂದು ಹಣೆ ಪಟ್ಟಿ ಕಟ್ಟಿರುವ ಕೇಂದ್ರ ಸರ್ಕಾರವು  ಬಂಡವಾಳಶಾಹಿ ಜಗತ್ತಿಗೆ ಕೆಂಪುಗಂಬಳಿಯನ್ನು ಹಾಸುವ ಉದ್ದೇಶದಿಂದ ಇಂತಹ ಸಂಘಟನೆಗಳ ಮೇಲೆ ನಿಷೇಧ ಹೇರಲು  ಹೊರಟಿದೆ. ಇದು ಹುನ್ನಾರವೆಂದು ಘಂಟಾಘೋಷವಾಗಿ ಹೇಳಬಹುದು.
ಒಡಿಸ್ಸಾದ ನಿಯಮಗಿರಿ ಪರ್ವತದ ಡೋಂಗ್ರಿಕೊಂಡ ಆದಿವಾಸಿಗಳ ಹೊರಾಟದ ಕಥೆ ಇಂದು ನಿನ್ನೆಯದಲ್ಲ. ಅದಕ್ಕೆ ಹನ್ನೆರಡು  ವರ್ಷಗಳ ಇತಿಹಾಸವಿದೆ. 2005 ರಲ್ಲಿ ಬಿಜುಪಟ್ನಾಯಕ್ ನೇತೃತ್ವದ ಬಿ.ಜೆ.ಡಿ. ಸರ್ಕಾರವು ಲಂಡನ್ ಮೂಲದ ಹಾಗೂ ಇಂಗ್ಲೇಂಡ್ ನಲ್ಲಿ ಕೇಂದ್ರ ಕಛೇರಿ ಹೊಂದಿರುವ ಬಹುರಾಷ್ಟ್ರೀಯ ಕಂಪನಿಯಾದ ವೇದಾಂತ ರಿಸೋರ್ಸ್ ಲಿಮಿಟೆಡ್ ಎಂಬ ಬೃಹತ್ ಅಲ್ಯೂಮಿನಿಯಂ ತಯಾರಿಕೆಯ ಬಹುರಾಷ್ಟ್ರೀಯ ಸಂಸ್ಥೆಗೆ ಬಾಕ್ಸೈಟ್ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಈ ಕಂಪನಿಯ ಪ್ರವರ್ತಕ ಅನಿಲ್ ಅಗರ್ ವಾಲ್ ರವರು ಮೂಲತಃ ಬಿಹಾರದವರಾಗಿದ್ದು, ಭಾರತದ ನಾಗರೀಕರಾಗಿದ್ದು ಲಂಡನ್  ನಗರದ ನಿವಾಸಿಯಾಗಿದ್ದಾರೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿ. ನಲವತ್ತು ಸಾವಿರ ಕೋಟಿ ರೂಪಾಯಿ ಬಂಡವಾಳದೊಂದಿಗೆ  ಒಡಿಸ್ಸಾದ ನಿಯಮಗಿರಿಯಲ್ಲಿ ಗಣಿಗಾರಿಕೆ ಮತ್ತು ಅಲ್ಯೂಮಿನಿಯಂ ತಯಾರಿಕಾ ಘಟಕವನ್ನು  ಸ್ಥಾಪಿಸಲು ಹೊರಟ ವೇದಾಂತ ಕಂಪನಿಗೆ ಆರಂಭದಲ್ಲಿ ಸ್ಥಳೀಯ ಆದಿವಾಸಿಗಳಿಂದ ತೀವ್ರ ಪ್ರತಿಭಟನೆ ಎದುರಾಯಿತು. ಏಕೆಂದರೆ, ಇಲ್ಲಿ ವಾಸಿಸುತ್ತಿರುವ ಡೋಂಗ್ರಿ ಕೊಂಡ ಆದಿವಾಸಿ ಸಮುದಾಯ ಹೊರ ಜಗತ್ತಿನ ಜೊತೆ ಯಾವುದೇ ಸಂಪರ್ಕವಿಲ್ಲದೆ, ಕೃಷಿ, ಮೀನುಗಾರಿಕೆಯನ್ನು ನಂಬಿಕೊಂಡು, ಅರಣ್ಯದಲ್ಲಿ ಯಥೇಚ್ಚವಾಗಿ ಸಿಗುವ ಹಣ್ಣು ಮತ್ತು ಜೇನುತುಪ್ಪ ಸೆರಿದಂತೆ ಇತರೆ ಅರಣ್ಯದ ಕಿರು ಉತ್ಪನ್ನಗಳನ್ನು ಅರಣ್ಯದಂಚಿನ ರಸ್ತೆಯಲ್ಲಿ ಮತ್ತು ಈ ಮಾರ್ಗದಲ್ಲಿ ಸಾಗುವ ರೈಲು ಪ್ರಯಾಣಿಕರಿಗೆ ಮಾರಾಟ ಮಾಡಿ, ನಿಸರ್ಗದ ಮಕ್ಕಳಂತೆ ಪ್ರಕೃತಿಗೆ ಯಾವುದೇ ರೀತಿಯಲ್ಲಿ ಎರವಾಗದಂತೆ ಬದುಕುತ್ತಿದೆ..

ಬಾಕ್ಸೈಟ್ ಅದಿರು ಗಣಿಗಾರಿಕೆಯಿಂದ ಇಡೀ ನಿಯಮಗಿರಿ ಪರ್ವತವನ್ನು ಕರಗಿಸುವುದರಲ್ಲಿ ಯಾವುದೇ ಸಂಶವಿಲ್ಲ ಎಂದು ಮನಗಂಡ  ಇಲ್ಲಿನ ಆದಿವಾಸಿಗಳು ಗಣಿ ಉದ್ಯಮಕ್ಕೆ ಪ್ರತಿರೋಧ ಒಡ್ಡಿದ ಸಂದರ್ಭದಲ್ಲಿ ಪರಿಸರ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಲಂಡನ್ ನಗರದ ಸ್ವಯಂ ಸೇವಾ ಸಂಘಟನೆಯ ಕಾರ್ಯಕರ್ತರು ಒಡಿಸ್ಸಾ ರಾಜ್ಯಕ್ಕೆ ಆಗಮಿಸಿ, ಅರಣ್ಯವಾಸಿಗಳಿಗೆ ಕಾನೂನು ಬದ್ಧ ಹೋರಾಟ ಮಾಡಲು ಪ್ರೇರೇಪಣೆ ಮಾಡಿದರು. ಇದಕ್ಕಾಗಿ ಕಾಳಹಂದಿ ಮತ್ತು ರಾಯಗಡ ಜಿಲ್ಲೆಗಳಲ್ಲಿ ಬರುವ  ಹದಿನೇಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿವಾಸಿಗಳನ್ನು ಸಂಘಟಿಸಿ “ ನಿಯಮಗಿರಿ ಸಂರಕ್ಷಣಾ ಸಮಿತಿ” ಎಂಬ ಹೋರಾಟದ ವೇದಿಕೆಯನ್ನು ಹುಟ್ಟು ಹಾಕಿದರು.
ವೇದಾಂತ ಕಂಪನಿ ಮತ್ತು ಆದಿವಾಸಿಗಳ ನಡುವಿನ ಹೋರಾಟವು  ಸುಪ್ರಿಂ ಕೋರ್ಟ್ ಮೆಟ್ಟಿಲು ಏರಿದ ಸಂದರ್ಭದಲ್ಲಿ 2015 ರಲ್ಲಿ ಸುಪ್ರಿಂ ಕೋರ್ಟ್ ಚರಿತ್ರಾರ್ಹವಾದ ತೀರ್ಪು ನೀಡಿತು. ಗಣಿಗಾರಿಕೆಗೆ ಅವಕಾಶ ನೀಡುವ ಹಕ್ಕು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಸೇರಿದೆ ಎಂದು ನ್ಯಾಯಾಲಯ ತಿಳಿಸಿತು. ಅದರಂತೆ ನಿಯಮಗಿರಿ ಪರ್ವತ ತಪ್ಪಲಿನಲ್ಲಿರುವ ಹದಿನೇಳು ಗ್ರಾಮ ಪಂಚಾಯಿತಿಗಳು ಸರ್ವ ಸದಸ್ಯರ ಸಭೆ ನಡೆಸಿ, ಸ್ಥಳೀಯ ಪರಿಸರಕ್ಕೆ ಧಕ್ಕೆ ತರುವ ಹಾಗೂ ಇಲ್ಲಿನ ನೆಲಮೂಲ ನಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಗಣಿಗಾರಿಕೆಯ ಚಟುವಟಿಕೆಗೆ ಅವಕಾಶ ಇಲ್ಲ ಎಂಬ ಐತಿಹಾಸಿಕ ನಿರ್ಣಯ ಕೈಗೊಂಡವು. ಈ ತೀರ್ಪಿನ ಅನ್ವಯ ಸುಮಾರು ಆರು ಸಾವಿರ ಕೋಟಿ ಪ್ರಾಥಮಿಕ ಬಂಡವಾಳವನ್ನು ಹೂಡಿದ್ದ ವೇದಾಂತ ಕಂಪನಿಯು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಕಾಲ್ತೆಗೆಯಿತು.
ಬಹುರಾಷ್ಟ್ರೀಯ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ಯಥೇಚ್ಛವಾದ ದೇಣಿಗೆ ಎಂಬ ಎಂಜಲು ಕಾಸಿಗೆ ಬಲಿ ಬಿದ್ದ ಒಡಿಸ್ಸಾದ ಬಿಜುಪಟ್ನಾಯಕ್ ಸರ್ಕಾರ ಕಳೆದ ವರ್ಷ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಕಂಪನಿಯ ಪರವಾಗಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದಾಗ ಸರ್ವೋಚ್ಛ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು. ಬೇರೇ ದಾರಿ ಕಾಣದ ಈಗ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಒಟ್ಟುಗೂಡಿ ಮಾನವ ಹಕ್ಕುಗಳು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಶ್ರೇಯಸ್ಸಿಗೆ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಗಳ ಮೇಲೆ ಮುಗಿ ಬಿದ್ದಿವೆ.

ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಮೇಲೆ ವಿದೇಶದಿಂದ ಸಹಾಯ ಧನ ಪಡೆಯುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ನೊಂದಣಿಯನ್ನು ರದ್ದುಗೊಳಿಸಲಾಗುತ್ತಿದೆ. ಈವರೆಗೆ ಭಾರತದ ಮುವತ್ತು ಸಾವಿರ ಸ್ವಯಂಸೇವಾ ಸಂಘಟನೆಗಳಲ್ಲಿ ಇಪ್ಪತ್ತು ಸಾವಿರ ಸಂಸ್ಥೆಗಳ ಪರವಾನಗಿಯನ್ನು ರದ್ದು ಪಡಿಸಲಾಗಿದೆ. ಇವುಗಳಲ್ಲಿ ಹನ್ನೊಂದು ಸಾವಿರ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಪಡೆಯುತ್ತಿದ್ದವು. ಕೇಂದ್ರ ಸರ್ಕಾರವು ನಿಷೇಧ ಹೇರಿರುವ ಅರವತ್ತೊಂಬತ್ತು ಸ್ವಯಂ ಸೇವಾಸಂಘಟನೆಗಳಲ್ಲಿ ಮುವತ್ತು ಸ್ವಯಂ ಸೇವಾ ಸಂಘಟನೆಗಳು ಭಾರತದಲ್ಲಿ ಹಿಂದುಳಿದ ಜಾತಿ ಮತ್ತು ವರ್ಗಗಳ ಶಿಕ್ಷಣ, ಆರೋಗ್ಯ  ಮತ್ತು  ವಸತಿ ಮುಂತಾದ ಕ್ರೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದವು. ಆಂಧ್ರಪ್ರದೇಶ ರಾಜ್ಯದಲ್ಲಿ ನಿಷೇಧಕ್ಕೆ ಒಳಗಾದ ಹದಿನಾಲ್ಕು ಸಂಘಟನೆಗಳಲ್ಲಿ ಎಂಟು ಸಂಸ್ಥೆಗಳು, ತಮಿಳುನಾಡಿನ ಹನ್ನೆರಡು ಸಂಘಟನೆಗಳಲ್ಲಿ  ಐದು ಸಂಸ್ಥೆಗಳು, ಗುಜರಾತಿನ ಐದು ಸಂಘಟನೆಗಳಲ್ಲಿ ನಾಲ್ಕು ಸಂಸ್ಥೆಗಳು ಬಡವರು ಮತ್ತು ಆದಿವಾಸಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದವು.
ಶಿಕ್ಷಣ ಮತ್ತು ಆರೋಗ್ಯ ಮುಂತಾದ ವಲಯಗಳಿಂದ ತಮ್ಮ ಹೊಣೆಗಾರಿಕೆಯನ್ನು ತಪ್ಪಿಸಿಕೊಂಡಿರುವ ದೇಶದ ಬಹುತೇಕ ಸರ್ಕಾರಗಳು ಎಲ್ಲವನ್ನೂ ಖಾಸಾಗಿ ವಲಯಕ್ಕೆ ಒಪ್ಪಿಸಿ, ಬಂಡವಾಳ ಶಾಹಿ ಜಗತ್ತಿನ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.. “ಬಡತನದ ನಿವಾರಣೆ ಎಂದರೆ ಬಡವರ ನಿರ್ಮೂಲನೆ ಎಂಬುದು” ಈಗಿನ  ಜಾಗತೀಕರಣ ವ್ಯವಸ್ಥೆಯ ವೇದ ವ್ಯಾಖ್ಯವಾಗಿದೆ. ಏಕೆಂದರೆ, ಬಡವರು ಉಪಭೂಗದ ಲೋಲುಪತೆಯ ಸಂಸ್ಕೃತಿಯ ಈ ಆಧುನಿಕ ಜಗತ್ತಿನಲ್ಲಿ ಬಹರಾಷ್ಟ್ರೀಯ ಕಂಪನಿಗಳು ತಂದು ಸುರಿಯುತ್ತಿರುವ ಸರಕುಗಳಿಗೆ ಗ್ರಾಹಕರಲ್ಲ. ಹಾಗಾಗಿ ಅವರು ಈ ಆಧುನಿಕ ಜಗತ್ತಿನಲ್ಲಿ ಇರಲು ಅನರ್ಹರು. ಇದು ಇವೊತ್ತಿನ ಜಗದ  ಹೊಸ ನಿಯಮ ಎಂದರೆ, ತಪ್ಪಾಗಲಾರದು.
ಕೊನೆಯ ಮಾತು- ಭಾರತದಲ್ಲಿ ಕಳೆದ ಎರಡು ದಶಕಗಳಿಂದ ಏಡ್ಸ್ ಕಾಯಿಲೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿಲ್ ಗೆಟ್-ಮಿಲಿಂದ ಟ್ರಸ್ಟ್ ಮೇಲೂ ಕೇಂದ್ರ ಸರ್ಕಾರ ನಿಷೇಧ ಹೇರುವ ಸೂಚನೆಗಳು ಕಾಣುತ್ತಿವೆ. ಈ ನಡುವೆ ಕಳೆದವಾರ  ನಿಯಮಗಿರಿ ಸುರಕ್ಷಾ ಸಮಿತಿಗೆ, ಅಂತರಾಷ್ಟ್ರೀಯ ಮಟ್ಟದ ಪರಿಸರ ಪ್ರಶಸ್ತಿ ಲಭ್ಯವಾಗಿದೆ.
( ಕರಾವಳಿ ಮುಂಜಾವು ಪತ್ರಿಕೆಯ : ಜಗದಗಲ” ಅಂಕಣಕ್ಕಾಗಿ ಬರೆದ ಲೇಖನ)

                                                                                                            







ಶುಕ್ರವಾರ, ಏಪ್ರಿಲ್ 14, 2017

ಉಪಚುನಾವಣೆಯ ಫಲಿತಾಶ: ರಾಜಕೀಯ ಪಕ್ಷಗಳ ಸೋಲು ಮತ್ತು ಮತದಾರರ ಗೆಲುವು



ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ದಿಕ್ಸೂಜಿ ಎಂದು ಪರಿಗಣಿಸಲ್ಪಟ್ಟಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಯ ಫಲಿತಾಂಶ ಇದೀಗ ಹೊರಬಿದ್ದಿದೆ. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಜಯಗಳಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಒಂದಿಷ್ಟು ನೈತಿಕ ಬಲವನ್ನು ತಂದುಕೊಟ್ಟಿದೆ. ಮುಂದಿನ ಬಾರಿಯ  ಚುನಾವಣೆಗೆ ನಿಲ್ಲುವುದಿಲ್ಲ,  ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಸಿದ್ಧರಾಮಯ್ಯನವರು ಇದೀಗ ತಮ್ಮ ಮಾತಿನ ವರಸೆಯನ್ನು ಬದಲಿಸಿ, ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯಲಿದೆ ಜೊತೆಗೆ ನಾನು ಸಹ ಚುನಾವಣೆಗೆ ನಿಲ್ಲುತ್ತೇನೆ ಎಂಬ ಉತ್ಸಾಹದ ಮಾತನ್ನಾಡಿದ್ದಾರೆ.
ಕರ್ನಾಟಕದ ಈ ಎರಡು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವನ್ನು ಕೂಲಂಕುಶವಾಗಿ ಅವಲೋಕನ ಮಾಡಿದರೆ, ಈ ಅಗ್ನಿ ಪರೀಕ್ಷೆಯಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಎರಡೂ ಪಕ್ಷಗಳು ನೈತಿಕವಾಗಿ ಸೋತಿವೆ ಎಂದು ಹೇಳಬಹುದು. ಇಲ್ಲಿ ಗೆದ್ದಿರುವುದು ಮತದಾರ ಮಾತ್ರ. ಏಕೆಂದರೆ,ನಂಜನಗೂಡು ಕ್ಷೇತ್ರದಲ್ಲಿ  ಜಾತಿ ರಾಜಕೀಯದ ಲೆಕ್ಕಾಚಾರವನ್ನು ಮತ್ತು ಗುಂಡುಪೇಟೆ ಕ್ಷೇತ್ರದಲ್ಲಿ ಸಚಿವ ಮಹಾದೇವ ಪ್ರಸಾದ್ ಸಾವಿನ ನಂತರ ಅನುಕಂಪದ ಲೆಕ್ಕಾಚಾರವನ್ನು ಮತದಾರ ಪ್ರಭುಗಳು ತಲೆಕಳಗು ಮಾಡಿ ರಾಜಕೀಯ ಪಕ್ಷಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಈ ಚುನಾವಣೆ ಫಲಿತಾಂಶವು  ರಾಜ್ಯ ಬಿ.ಜೆ.ಪಿ. ನಾಯಕರಿಗೆ ತೀವ್ರ ಮುಖಭಂಗವನ್ನುಂಟು ಮಾಡುವುದರ ಜೊತೆಗೆ  ಸ್ವಾಭಿಮಾನದ ಹೆಸರಿನಲ್ಲಿ, ಸಾರ್ವಜನಿಕ ಬದುಕಿಗೆ ಇರಬೇಕಾದ ಲಜ್ಜೆ, ಘನತೆ ಎಲ್ಲವನ್ನು ತೊರೆದು ಆಹಂಕಾರಿಯಂತೆ ಮೆರೆದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಇತಿಹಾಸದ ಕಸದ ಬುಟ್ಟಿಗೆ ಸೇರುವಂತೆ ಮಾಡಿತು.
 ಕಳೆದ ಮೂರೂವರೆ ದಶಕಗಳಿಂದ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಹಲವಾರರು ಬಾರಿ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದ ಶ್ರೀನಿವಾಸ್ ಪ್ರಸಾದ್  ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಸಂಪುಟದಲ್ಲಿ ಒಮ್ಮೆ ಸಚಿವರಾಗಿದ್ದರು.  ಕರ್ನಾಟಕ ಕಂಡ ಸಜ್ಜನ ರಾಜಕಾರಣಿಗಳಲ್ಲಿ ಶ್ರೀನಿವಾಸ್ ಪ್ರಸಾದ್ ಒಬ್ಬರಾಗಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ನಂಜನಗೂಡು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರನ್ನು ಹಿರಿಯ ಹಾಗೂ ನುರಿತ ರಾಜಕಾರಣಿ ಎಂಬ ಏಕೈಕ ಕಾರಣಕ್ಕಾಗಿ ಸಿದ್ಧರಾಮಯ್ಯನವರು ತಮ್ಮ ಸಚಿವ ಸಂಪುಟದಲ್ಲಿ ಮಂತ್ರಿಯನ್ನಾಗಿ ಅತ್ಯಂತ ಪ್ರಮುಖ ಖಾತೆಗಳಲ್ಲಿ ಒಂದಾಗಿದ್ದ ಕಂದಾಯ ಖಾತೆಯನ್ನು ನೀಡಿದ್ದರು. ಆದರೆ,  ತಮ್ಮ ಅನಾರೋಗ್ಯದ ಜೊತೆಗೆ  ವಯಸ್ಸು ಮತ್ತು ಹಿರಿತನವನ್ನು ಬಂಡವಾಳ ಮಾಡಿಕೊಂಡ ಶ್ರೀನಿವಾಸ್ ಪ್ರಸಾದ್ ಖಾತೆಯ ನಿರ್ವಹಣೆಗಿಂತ ತಮಗೆ  ಅಧಿಕಾರದ ಖುರ್ಚಿ ಮುಖ್ಯ ಎಂಬಂತೆ ನಡೆದುಕೊಂಡರು.
ತಮ್ಮ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಮೈಸೂರು ಮತ್ತು ಬೆಂಗಳೂರು ನಗರಗಳನ್ನು ಹೊರತು ಪಡಿಸಿದರೆ, ಇವರು  ಕರ್ನಾಟಕದ ಯಾವೊಂದು ಜಿಲ್ಲೆಗೂ ಭೇಟಿ ನೀಡಲಿಲ್ಲ.  ಕಂದಾಯ ಇಲಾಖೆಯಿಂದ ರೈತರೂ ಸೇರಿದಂತೆ ಜನಸಾಮಾನ್ಯರ ಬವಣೆಗಳಿಗೆ ಕಿವಿಕೊಡಲಾರದೆ, ಅಧಿಕಾರಿಗಳನ್ನು ನಿಯಂತ್ರಿಸಲಾರದೆ  ಅಧಿಕಾರವನ್ನು ಅನುಭವಿಸಿದರು. ವಯಸ್ಸು ಮತ್ತು ಅನಾರೋಗ್ಯ ಅವರ ನಿಷ್ಕ್ರಿಯತೆಗೆ ಮೂಲಕಾರಣವಾಗಿದ್ದವು.  ಅವರೊಳಗೆ ಆತ್ಮ ಸಾಕ್ಷಿ ಎಂಬುದು  ಇದ್ದಿದ್ದರೆ ಸಚಿವ ಸ್ಥಾನವನ್ನು ತೊರೆದು ಬೇರೊಬ್ಬ ದಲಿತ ರಾಜಕಾರಣಿಗೆ ಅವಕಾಶ ಮಾಡಿಕೊಡಬಹುದಿತ್ತು. ಆದರೆ ನಾನು ದಲಿತ ರಾಜಕಾರಣಿಯಾಗಿ ಅಧಿಕಾರದ  ಸವಲತ್ತುಗಳನ್ನು ಪಡೆಯುವುದು ತನ್ನ ಜನ್ಮ ಸಿದ್ಧ ಹಕ್ಕು ಎಂಬಂತೆ  ಶ್ರೀನಿವಾಸ್ ಪ್ರಸಾದ್ ನಡೆದುಕೊಂಡರು.
ಮುಖ್ಯ ಮಂತ್ರಿ ಸಿದ್ಧರಾಮಯ್ಯನವರಿಗೆ ತಮ್ಮ ನೇತೃತ್ವದ ಸರ್ಕಾರ ಆಮೆ ವೇಗದಲ್ಲಿ ಚಲಿಸುತ್ತಿರುವುದು ಗೊತ್ತಿದ್ದರೂ ಸಹ ಜಾತಿ ಹಾಗೂ ಇನ್ನಿತರೆ ಕಾರಣದಿಂದ ಒಕ್ಕಲಿಗ ಸಮುದಾಯದ ಅಂಬರೀಶ್, ಲಿಂಗಾಯುತ ಸಮುದಾಯದ ಶ್ಯಾಮನೂರು ಶಿವಶಂಕರಪ್ಪ, ಮುಸ್ಲಿಂ ಸಮುದಾಯದ ಕಮರುಲ್ ಇಸ್ಲಾಂ, ಹಾಗೂ ದಲಿತ ಸಮುದಾಯದ ವಿ.ಶ್ರೀನಿವಾಸ ಪ್ರಸಾದ್ ಇಂತಹ ನಿಷ್ಕ್ರಿಯ ಸಚಿವರನ್ನು  ಮೂರು ವರ್ಷಗಳ ಕಾಲ ಸಹಿಸಿಕೊಂಡಿದ್ದರು. ಆದರೆ, ತಮ್ಮದೇ ಪಕ್ಷದ ಭಿನ್ನಮತೀಯ ನಾಯಕರ ಟೀಕೆಯಿಂದ  ಮುಖ್ಯ ಮಂತ್ರಿಯ ಕುರ್ಚಿ  ಕಳೆದು ಕೊಳ್ಳುವ ಭೀತಿ ಎದುರಾದಾಗ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು ಅವರಿಗೆ ಅನಿವಾರ್ಯವಾಯಿತು. ಈ ಕಾರಣಕ್ಕಾಗಿ  ವಯಸ್ಸು, ಹಿರಿತನ, ಜಾತಿ ಇವುಗಳನ್ನು ಲೆಕ್ಕಿಸದೆ, ಈ ನಾಲ್ವರನ್ನು ಸಚಿವ ಸಂಪುಟದಿಂದ ಕಳೆದ ವರ್ಷ ಕೈ ಬಿಟ್ಟರು. ಶ್ರೀನಿವಾಸ್ ಪ್ರಸಾದ್ ಹೊರತು ಪಡಿಸಿ, ಇತರೆ ಮೂರು ಮಂದಿ ಸಚಿವರು ಒಂದಿಷ್ಟು ಅಸಮಾಧಾನ ಹೊರಹಾಕಿ  ನಂತರ ಮೌನಕ್ಕೆ ಶರಣಾದರು. ಆದರೆ ಶ್ರೀನಿವಾಸ್ ಪ್ರಸಾದ್ ಮಂತ್ರಿ ಸ್ಥಾನ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಮಾನಸಿಕ ಸ್ಥಿಮಿತವನ್ನು ಸಹ ಕಳೆದುಕೊಂಡರು. ಸಿದ್ಧರಾಮಯ್ಯನವರ ಲೋಪದೋಷಗಳು ಏನೇ ಇರಲಿ ಅವರೊಬ್ಬ ಈ ನಾಡಿನ ಮುಖ್ಯಮಂತ್ರಿ ಮತ್ತು ಪ್ರಥಮ ಪ್ರಜೆ ಎಂಬ ಕನಿಷ್ಠ ವಿವೇಕವಿಲ್ಲದೆ ಏಕವಚನದಲ್ಲಿ ಅವರನ್ನು ಸಾರ್ವಜನಿಕವಾಗಿ ನಿಂದಿಸುತ್ತಾ ಬಂದರು. ಇದೂ ಸಾಲದೆಂಬಂತೆ ತಮ್ಮನ್ನು ಆಯ್ಕೆ ಮಾಡಿದ  ನಂಜನಗೂಡು ಕ್ಷೇತ್ರದ ಮತದಾರರ ಸಲಹೆ ಅಥವಾ ಅಭಿಪ್ರಾಯ ಪಡೆಯದೆ ಶಾಸಕರ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಜೊತೆಗೆ ಕಾಂಗ್ರೇಸ್ ಪಕ್ಷವನ್ನೂ ಸಹ ತೊರೆದರು.
ನಿವೃತ್ತಿ ಹೊಂದಿ ಮನೆಯಲ್ಲಿ ಇರಬೇಕಾದ ವ್ಯಕ್ತಿಯನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಸಿ, ಕಸದಂತೆ ಹೊರ ಬಿಸಾಡಿತು. ಕಾಂಗ್ರೇಸ್ ಪಕ್ಷಕ್ಕೆ ಕಸವಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನು ಮುತ್ತು ರತ್ನದಂತೆ ಬಿ.ಜೆ.ಪಿ. ಪಕ್ಷ ಅಪ್ಪಿಕೊಂಡಿದ್ದು ಮಾತ್ರ  ಅದರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಯಿತು. ಜೊತೆಗೆ ಮರು ಚುನಾವಣೆಗೆ  ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿ ದಲಿತರ ಮತ ಬ್ಯಾಂಕ್ ತಮ್ಮದಾಗುವುದೆಂದು ಬಿ.ಜೆ.ಪಿ. ಪಕ್ಷದ ನಾಯಕ ಯಡಿಯೂರಪ್ಪ ಕನಸು ಕಂಡರು. ಚುನಾವಣೆಯ ಪ್ರಚಾರಕ್ಕೂ ಸಹ ಆಗಮಿಸದೆ ಮನೆಯಲ್ಲಿ ಕುಳಿತ ಶ್ರೀನಿವಾಸ್ ಪ್ರಸಾದ್ ರವರ ವರ್ತನೆ ಬಿ.ಜೆ.ಪಿ. ಪಾಲಿಗೆ ಹಗ್ಗವನ್ನು ಕೊಟ್ಟಿ ಕೈ ಕಟ್ಟಿಸಿಕೋಡಂತಾಯಿತು. ಸತತ ಮೂರು ವಾರಗಳ ಕಾಲ ಯಡಿಯೂರಪ್ಪ ಬಿ.ಜೆ.ಪಿ. ನಾಯಕರ ದಂಡನ್ನು ಕಟ್ಟಿಕೊಂಡು ರಣ ಬಿಸಿಲಿನಲ್ಲಿ ಬೀದಿ ಬೀದಿ ಅಲೆದು ಹಣ್ಣಾಗುವುದರ ಜೊತೆಗೆ ಹೈರಾಣಾದರು. ಪಕ್ಷದ ಪ್ರತಿಷ್ಟೆಗಾಗಿ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನೀರಿನಂತೆ ಹಣ ಸುರಿದರೂ ಸಹ ಮತದಾರ ಬಿ.ಜೆ.ಪಿ. ಗೆ ಒಲಿಯಲಿಲ್ಲ. ಅತ್ತ ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ನೀಡಿದ ವಾರದಲ್ಲಿ ನಂಜನಗೂಡು ಕ್ಷೇತ್ರಕ್ಕೆ 525 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶ್ರೀನಿವಾಸ್ ಪ್ರಸಾದ್ ರವರ ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದರು. ಅವರ ವಿರುದ್ಧ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ ಅವರು ಜೆ.ಡಿ.ಎಸ್. ಪಕ್ಷದಿಂದ ಎರಡು ಬಾರಿ ಸ್ಪರ್ಧಿಸಿ ಸೋಲುಂಡಿದ್ದ ಕಳಲೆ ಕೇಶವವಮೂರ್ತಿಯನ್ನು ಕಾಂಗ್ರೇಸ್ ಗೆ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಿದರು. ಜೆ.ಡಿ.ಎಸ್. ಪಕ್ಷವು ಸೂಕ್ತ ಅಭ್ಯರ್ಥಿಗಳ ಕೊರತೆಯಿಂದಾಗಿ ಚುನಾವಣೆಯಿಂದ ದೂರ ಸರಿದದ್ದು ಕಾಂಗ್ರೇಸ್ ಪಕ್ಷಕ್ಕೆ ಪರೋಕ್ಷವಾಗಿ ವರದಾನವಾಯಿತು. ಹಾಗಾಗಿ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ರೇತ್ರಗಳ ಗೆಲುವನ್ನು ಕಾಂಗ್ರೇಸ್ ಗೆಲುವು ಎನ್ನುವುದರ ಬದಲಾಗಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ಮೈತ್ರಿ ಕೂಟದ ಗೆಲುವು ಎಂದು ಕರೆಯಬಹುದು
ಅದೇ ರೀತಿ ಗುಂದ್ಲುಪೇಟೆಯ ಕ್ರೇತ್ರದ ಚುನಾವಣೆಯಲ್ಲಿ ಸಚಿವ ಮಹಾದೇವ್ ಪ್ರಸಾದ್ ಅವರ ಪತ್ನಿ ಮೋಹನ್ ಕುಮಾರಿ ಯವರು ಅನುಕಂಪದ ಆಧಾರದ ಮೇಲೆ ಅಲ್ಪ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಚುನಾವಣೆಗೆ ಮುನ್ನ ಬಿ.ಜೆ.ಪಿ. ಸಂಸದ ಪ್ರತಾಪ ಸಿಂಹ ಆಡಿದ ತುಟಿ ಮೀರಿದ ಮಾತುಗಳು ಬಿ.ಜೆ.ಪಿ. ಪಕ್ಷಕ್ಕೆ ಮುಳುವಾಗಿ ಪರಿಣಮಿಸಿದವು. ಜೊತೆಗೆ ಕಾಂಗ್ರೇಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲ್ಲಲಾರದು ಎಂಬ ಸೂಚನೆಯನ್ನೂ ಸಹ  ಈ ಬಾರಿಯ ಗುಂಡ್ಲುಪೇಟೆ ಕ್ರೇತ್ರದ ಫಲಿತಾಂಶ ನೀಡಿದೆ.

ಈ ಉಪಚುನಾವಣೆಗಳ ಸೋಲು ಒಂದು ರೀತಿಯಲ್ಲಿ ಬಿ.ಜೆ.ಪಿ ಪಕ್ದ ಹಲವು .ನಾಯಕರಿಗೆ ಸಮಾಧಾನ ತಂದಿದೆ, ಏಕೆಂದರೆ, ಯಡಿಯೂರಪ್ಪನವರಿಗಿಂತ ಅವರ ಹಿಂದಿರುವ ಶೋಭಾ ಕರಂದ್ಲಾಜೆಯವರ ಭಯ ಬಿ.ಜೆ.ಪಿ. ನಾಯಕರನ್ನು ಕಾಡುತ್ತಿರುವುದನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಯಾರ ಮಾತಿಗೂ ಸೊಪ್ಪು ಹಾಕದೆ, ಏಕಾಏಕಿ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ ಯಡಿಯೂರಪ್ಪನವರಿಗೆ, ನಾನು ಮುಂದಿನ ಮುಖ್ಯ ಮಂತ್ರಿ ಎಂದು ಎದೆ ತಟ್ಟಿ ಹೇಳಿಕೊಳ್ಳಲಾರದಷ್ಟು ಅಧೈರ್ಯವನ್ನು ಈ ಚುನಾವಣೆಯ ಫಲಿತಾಶ ತಂದೊಡ್ಡಿದೆ. ಜಾತಿಯ ಲೆಕ್ಕಾಚಾರ  ಕೂಡ ಬದಲಾಗಿದೆ. ಪ್ರತಿ ಐದು ವರ್ಷಕ್ಕೆ ಹೊಸ ತಲೆ ಮಾರು ಮತದಾರರಾಗಿ ಸೇರ್ಪಡೆಯಾಗುತ್ತಿರುವುದು ಮತ್ತು ಜನತೆ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಬದಿಗೊತ್ತಿ ತಮಗೆ ಸೂಕ್ತ ಅನಿಸಿದ  ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವುದು ರಾಜಕೀಯ ಪಕ್ಷಗಳಿಗೆ ಸವಾಲಾಗಿದೆ.  ನಿಜಕ್ಕೂ ಇದನ್ನು ಪ್ರಜಾ ಪ್ರಭುತ್ವದ ಸೌಂಧರ್ಯ ಎಂದು ಕರೆಯಬಹುದು.

ಕೊನೆಯ ಮಾತು- ದೇಶದ ರಾಜಧಾನಿ ದೆಹಲಿಯಲ್ಲಿ ಪೊರಕೆ ಗುರುತಿನ ಚಿಹ್ನೆಯ ಮೂಲಕ ಅಧಿಕಾರಕ್ಕೆ ಬಂದ ಅರವಿಂದ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷವನ್ನು ಅದೇ ಪೊರಕೆಯಿಂದ ಗುಡಿಸಿ ಹಾಕುವ ಮುನ್ಸೂಚನೆಯನ್ನು ದಿಲ್ಲಿಯ ಮತದಾರರು ಈ ಉಪ ಚುನಾವಣೆಯಲ್ಲಿ ನೀಡಿದ್ದಾರೆ. ಅಪ್ ಆದ್ಮಿ ಪಕ್ಷ ಅಭ್ಯರ್ಥಿ ಕಾಂಗ್ರೇಸ್ ಅಭ್ಯರ್ಥಿಯ ವಿರುದ್ಧ  ಠೇವಣಿ ಕಳೆದು ಕೊಂಡಿರುವುದು  ಅಲ್ಲಿನ ಮತದಾರರ ಸೂಕ್ಷ್ಮತೆಗೆ ಸಾಕ್ಷಿ ಎಂಬಂತಿದೆ.
(ಕರಾವಳಿ ಮುಂಜಾವು ದಿನಪತ್ರಿಕೆಯ ""ಜಗದಗಲ " ಅಂಕಣಕ್ಕೆ ಬರೆದ ಲೇಖನ)

ಶುಕ್ರವಾರ, ಏಪ್ರಿಲ್ 7, 2017

ಕಾಶ್ಮೀರವೆಂಬ ನೆಲದ ಮೇಲಿನ ನರಕ




ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಕವಿತೆಗಳನ್ನು ಬರೆಯುತ್ತಿದ್ದ ಕಾಲದಲ್ಲಿ “ ಕಾಶ್ಮೀರದ ಹಾಡು” ಎಂಬ ನನ್ನ ಪ್ರಸಿದ್ಧ ಕವಿತೆಯೊಂದರಲ್ಲಿ  ಬರೆದಿದ್ದ ಸಾಲುಗಳಿವು.
ರೆಕ್ಕೆ ಮರೆತ ಹಕ್ಕಿಯ ಹಾಗೆ/ಚಲಿಸದೆ ನಿಂತ ನಾವೆಯ ಹಾಗೆ /ಬದುಕು ಸ್ತಬ್ಧವಾದ ಇಲ್ಲಿ/ನಿತ್ಯ ಸಾವಿನ ಮೆರವಣಿಗೆ./ಬಂದೂಕು ನಳಿಕೆಯ /ಕೆಳಗೆ ನರಳಿ ಹೊರಳಿದ/ಇವರ ಬದುಕ ಬಾಂದಳದಲ್ಲಿ/ಬಾನು ಬೆಳದಿಂಗಳಿಲ್ಲ/ಚೆಂದ್ರ ತಾರೆಯರಂತೂ ಮೊದಲೇ ಇಲ್ಲ/ಗೆಳತೀ/ಕಾಶ್ಮೀರದಲ್ಲೀಗ ಕನಸುಗಳಿಲ್ಲ/ನಮ್ಮ ಕನಸುಗಳಲ್ಲೂ ಕಾಶ್ಮೀರವಿಲ್ಲ.
ಎರಡು ದಶಕಗಳ ನಂತರ ಕಾಶ್ಮೀರ ಕುರಿತು ಅವಲೋಕಿಸಿದಾಗ ಅಲ್ಲಿನ ಸಾಮಾಜಿಕ ಮತ್ತು ರಾಜಕೀಯ ಹಾಗೂ ಧಾರ್ಮಿಕ ಬದುಕಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪ್ರತಿ ನಿತ್ಯ ಸಾವು, ನೋವು, ಬಂದೂಕಿನ ಗುಂಡಿನ ಮೊರೆತ, ಭಯೋತ್ಪಾದಕರ ದಾಳಿ, ಮುಷ್ಕರ, ಪ್ರತಿಭಟನೆ ಮತ್ತು ಪ್ರಕ್ಷುಬ್ಧತೆ ಇವುಗಳು ಒಂದು ಕಾಲದಲ್ಲಿ ನೆಲದ ಮೇಲಿನ ಸ್ವರ್ಗ ಎನಿಸಿದ್ದ ಕಾಶ್ಮೀರದ ಅವಿಭಾಜ್ಯ ಅಂಗಗಳಾಗಿವೆ. ಹಾಗಾಗಿ ಭಾರತದ ಸರ್ಕಾರ ಮತ್ತು ಇಲ್ಲಿನ ಜನತೆಯ ಜನತೆಯ ಪಾಲಿಗೆ ಕಾಶ್ಮೀರವೆಂಬುದು  ಈಗ ನೆಲದ ಮೇಲಿನ ನರಕವೆಂಬಂತೆ ಕಾಣುತ್ತಿದೆ. 1947 ರ ಸ್ವಾತಂತ್ರ್ಯಾ.ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಪ್ರದೇಶ ಯಾರಿಗೆ ಸೇರಬೇಕು ಎಂಬುದರ ಕುರಿತಾಗಿ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿ ಇಂದಿಗೂ ತಣ್ಣಗಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿರುವ ಬಹು ಸಂಖ್ಯಾತ ಸುನ್ನಿ ಮುಸ್ಲಿಂ ಸಮುದಾಯದಲ್ಲಿ ಈ ಕುರಿತು ಯಾವುದೇ ನಿರ್ಧಾರವಿಲ್ಲದೆ, ಪ್ರತ್ಯೇಕ ಕಾಶ್ಮೀರಿವಾದಿಗಳು ಮತ್ತು ಭಾರತ ಸರ್ಕಾರದ ನಡುವೆ ರಾಜಕೀಯ ದಾಳವಾಗಿದ್ದಾರೆ. ಇನ್ನು ಜಮ್ಮು ಪ್ರದೇಶ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಶತ ಶತಮಾನ ಕಾಲ ಬದುಕಿದ್ದ ಕಾಶ್ಮೀರಿ ಪಂಡಿತರು ನೆಲೆ ಕಳೆದುಕೊಂಡು ದೆಹಲಿಯ ಬೀದಿಯಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಜಮ್ಮು ಕಾಶ್ಮೀರ ಸೇರಿದಂತೆ ಕೇಂದ್ರ ಸರ್ಕಾರ ಕಾಶ್ಮೀರಿ ಪಂಡಿತರಿಗೆ ಅನೇಕ ಸವಲತ್ತುಗಳನ್ನು ಒದಗಿಸಿ ಕೊಡಲು ಸಿದ್ಧರಿದ್ದರೂ ಸಹ, ಪಾಕ್ ಪ್ರೇರಿತ ಭಯೋತ್ಪಾದಕರ ಭಯದಿಂದಾಗಿ ತಮ್ಮ ತವರು ನೆಲಕ್ಕೆ ಹಿಂತಿರುಗಿ ಬದುಕು ಕಟ್ಟಿಕೊಟ್ಟಲು ಹಿಂಜರಿಯುತ್ತಿದ್ದಾರೆ.
ಈ ದೇಶದ ಸಂವಿಧಾನ ಮತ್ತು ಭಾರತೀಯ ಅಪರಾಧ ಸಂಹಿತೆ ಪುಸ್ತಕಗಳಲ್ಲಿನ  ಯಾವುದೇ ಕಾನೂನು ಅಥವಾ ನಿಯಾಮಾವಳಿಗಳು ಕಾಶ್ಮೀರಿ ಜನತೆಗೆ ಅನ್ವಯವಾಗುವುದಿಲ್ಲ. ಪ್ರತಿಯೊಂದು ಸಂಹಿತೆ “ ಜಮ್ಮು ಕಾಶ್ಮೀರವನ್ನು ಹೊರತು ಪಡಿಸಿ ಬಾರತದ ನಾಗರೀಕರಿಗೆ ಇದು ಅನ್ವಯವಾಗುತ್ತದೆ” ಎಂಬ ವಾಕ್ಯದಿಂದ ಕೊನೆಗೊಳ್ಳುತ್ತದೆ.  ಭಾರತದ ಒಟ್ಟು ಜನ ಸಂಖ್ಯೆಯ ಕೇವಲ ಒಂದು ಭಾಗದಷ್ಟಿರುವ ಕಾಶ್ಮೀರಿ ಜನತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ವಿಶೇಷ ಪರಿಹಾರದ ಹೆಸರಿನಲ್ಲಿ ನೀಡುತ್ತಿರುವ  ಆರ್ಥಿಕ ಸವಲತ್ತುಗಳನ್ನು ಗಮನಿಸಿದರೆ, ಈ ಪುಟ್ಟ ರಾಜ್ಯವನ್ನು ನೆರೆಯ ಪಾಕಿಸ್ತಾನಕ್ಕೆ  ಕೊಡುಗೆಯಾಗಿ ನೀಡುವುದು ಒಳಿತು ಎನಿಸುತ್ತದೆ. ಕೇವಲ ಹದಿನಾರು ವರ್ಷಗಳ ಅವಧಿಯಲ್ಲಿ ( 2000 ರಿಂದ 2016 ರವರೆಗೆ) ಜಮ್ಮ ಕಾಶ್ಮೀರದ ಜನತೆಗೆ  ಒಂದು ಲಕ್ಷದ ಹದಿನಾಲಕ್ಷ ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಘೊಷಿಸಲಾಗಿದೆ. ಇದರಲ್ಲಿ ಮಿಲಿಟರಿ ಸೇನೆಯ ವೆಚ್ಚವನ್ನು ಸೇರಿಸಲಾಗಿಲ್ಲ. ಅಲ್ಲಿನ ಈಗಿನ ಜನಸಂಖ್ಯೆಗೆ ಈ ಹಣವನ್ನು ಹಂಚಿದರೆ, ಪ್ರತಿ ವ್ಯಕ್ತಿಗೆ ತಲಾ 91 ಸಾವಿರದ 300 ರೂಪಾಯಿ ಸಂದಾಯವಾಗಿದೆ. ( ಜಮ್ಮು ಕಾಶ್ಮೀರದ ಜನಸಂಖ್ಯೆ ಒಂದು ಕೋಟಿ ಇಪ್ಪತ್ತೈದು ಲಕ್ಷ)  ಅಂದರೆ ಭಾರತದ ಜನಸಂಖ್ಯೆಯಲ್ಲಿ ಶೇಕಡ ಒಂದರಷ್ಟು ಭಾಗವಿರುವ ಜನತೆ ಶೇಕಡ ಹತ್ತರಷ್ಟು ಅನುದಾನ ಪಡೆಯುತ್ತಿದ್ದರೆ, ಭಾರತದ ಜನಸಂಖ್ಯೆಯ ಶೇಕಡ ಹದಿಮೂರರಷ್ಟು ಇರುವ ಉತ್ತರ ಪ್ರದೇಶದ ಜನತೆ ಶೇಕಡ 8.2 ರಷ್ಟನ್ನು ಪಡೆಯುತ್ತಿದ್ದಾರೆ.
ಜಮ್ಮು ಕಾಶ್ಮೀರದ ಜನತೆಯ ಬಡತನ ಕುರಿತಂತೆ ಆಶ್ಚರ್ಯಕರ ಅಂಕಿ ಅಂಶಗಳು ಸಮೀಕ್ಷೆಯಿಂದ ಹೊರಬೀಳುತ್ತಿವೆ. 1980 ರಲ್ಲಿ  ಬಡತನದ ರೇಖೆಯ ಕೆಳಗೆ ವಾಸಿಸುತ್ತಿದ್ದವರ ಸಂಖ್ಯೆ ಶೇಕಡ 24.34 ರಷ್ಟು ಇದ್ದದ್ದು, 2000 ದ ಇಸವಿಯ ವೇಳೆಗೆ ಶೇಕಡ 3.48 ಕ್ಕೆ ಇಳಿದಿತ್ತು.  ಕಳೆದೊಂದು ದಶಕದಿಂದ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರದ ಫಲವಾಗಿ ಈಗ ಪುನಃ  ಶೇಕಡ 21.3 ಕ್ಕೆ ಏರಿಕೆಯಾಗಿದೆ..

ಜಮ್ಮು ಕಾಶ್ಮೀರದ ಒಟ್ಟು ವಿಸ್ತೀರ್ಣ 2 ಲಕ್ಷದ 22 ಸಾವಿರದ 236 ಚದುರ ಕಿಲೊಮೀಟರ್. ಇದರಲ್ಲಿ ಭಾರತದ ಹಿಡಿತದಲ್ಲಿ  ಕೇವಲ 1 ಲಕ್ಷದ 1 ಸಾವಿರ 387 ಕಿಲೊಮೀಟರ್ ವ್ಯಾಪ್ತಿ ಪ್ರದೇಶ ಮಾತ್ರ ಉಳಿದಿದೆ. ಇನ್ನುಳಿದ ಪ್ರದೇಶದಲ್ಲಿ ಮುಕ್ಕಾಲು ಪಾಲು ಪಾಕ್ ಆಕ್ರಮಿತ ಕಾಶ್ಮೀರವೆಂದು ಹಾಗೂ ಉಳಿದ ಭಾಗ ಚೀನಾ ಆಕ್ರಮಿತ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಈ ಪ್ರದೇಶಗಳಿಂದ ಚೀನಾ ಮತ್ತು ಪಾಕ್ ಸರ್ಕಾರಗಳು ಭಯೋತ್ಪಾದಕರಿಗೆ ನಿರಂತರವಾಗಿ ನೆರವು ನೀಡುತ್ತಾ ಜಮ್ಮು ಕಾಶ್ಮೀರದಲ್ಲಿ ಹಿಂಸೆ ಮತ್ತು ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿವೆ. ಭಾರತೀಯ ಸೇನಾ ಪಡೆಗೆ ಗಡಿ ಪ್ರದೇಶದಲ್ಲಿ ಪ್ರತಿ ದಿನ ನುಸುಳುವ ಭಯೋತ್ಪಾದಕರನ್ನು ಗುರುತಿಸಿ ಹೊಡೆದು ಉರುಳಿಸುವುದು ನಿತ್ಯ ಕಾಯಕವೆಂಬಂತಾಗಿದೆ. ಇಂತಹ ಹಿಂಸಾ ಚಾರಕ್ಕೆ ಸ್ಥಳೀಯರು ಪ್ರೋತ್ಸಾಹ ನೀಡುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ. ಎರಡು ತಿಂಗಳ ಹಿಂದೆ ಶ್ರೀನಗರದಲ್ಲಿ ಹಿಜ್ ಬುಲ್ ಮುಜಾಹಿದ್ದಿನ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ  ಬುರಾನ್ ಮುಜಾಫರ್ ವಾನಿ ಎಂಬ ಇಪ್ಪತ್ತೊಂದು ವಯಸ್ಸಿನ ಯುವಕ ಭದ್ರತಾ ಪಡೆಯ ಗುಂಡಿಗೆ ಬಲಿಯಾದ ನಂತರ ಶ್ರೀನಗರದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಹಿಂಸಾಚಾರದಲ್ಲಿ 43 ಮಂದಿ ಗುಂಡಿಗೆ ಬಲಿಯಾದರು. ನೂರಾರು ಮಂದಿ ಸೇನಾ ಸಿಬ್ಬಂದಿ ಸಿಡಿಸಿದ ರಬ್ಬರ್ ಗುಂಡುಗಳಿಂದ ಗಾಯಗೊಂಡರು. ಭಯೋತ್ಪಾದಕನನ್ನು ಹುತಾತ್ಮನೆಂದು ಸ್ಥಳೀಯರು ಪ್ರತಿಬಿಂಬಿಸಿದರ ಪರಿಣಾಮವಾಗಿ ಯುವಕನ ಕುಟುಂಬಕ್ಕೆ ಕೇಂದ್ರ ಸರ್ಕಾರವು  ಹತ್ತು ಲಕ್ಷ ರೂಪಾಯಿ ಘೋಷಿಸಿ ಹಿಂಸೆಯನ್ನು ತಣ್ಣಾಗಿಸಿತು.
ಕಾಶ್ಮೀರದಲ್ಲಿ ಮುಸ್ಲಿಂ ನಿರುದ್ಯೋಗಿ ಯುವಕರನ್ನು ಸೆಳೆಯುತ್ತಿರುವ ಭಯೋತ್ಪಾನೆಯ ಸಂಘಟನೆಗಳು ಅಲ್ಲಿನ ಯುವಕರ ಕುಟುಂಬಗಳಿಗೆ  ಸುಮಾರು ಐದರಿಂದ  ಹಿಡಿದು ಹತ್ತು ಲಕ್ಷ ರೂಪಾಯಿ ಹಣವನ್ನು ನೀಡಿ ಅವರನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ದು ತರಬೇತಿ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮನೆಯಲ್ಲಿ ಬೆಳೆದು ನಿಂತ ತಂಗಿಯರ ವಿವಾಹದ ಖರ್ಚಿಗಾಗಿ, ಮತ್ತು ಬಡತನದ ಕುಟುಂಬದ ನಿರ್ವಹಣೆಗಾಗಿ ಹಣದ ಆಮೀಷಕ್ಕೆ ಬಲಿಯಾಗುತ್ತಿರುವ  ಮುಗ್ದ ಯುವಕರು ಇಂದು ಭಯೋತ್ಪಾದಕರಾಗಿ ಪರಿವರ್ತನೆ ಹೊಂದಿ ಹುಟ್ಟಿ ಬೆಳದ ತಾಯ್ನಾಡಿನ ವಿರುದ್ಧ ಜೆಹಾದ್ ಹೆಸರಿನಲ್ಲಿ ( ಧರ್ಮ ಯುದ್ಧ) ಬಂದೂಕು ಹಿಡಿದಿರುವುದು ವರ್ತಮಾನ ಭಾರತದ ದುರಂತಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ಜ್ವಲಂತ ಸಮಸ್ಯೆಗಳನ್ನು ವಿಷಯವನ್ನಾಗಿ ಇಟ್ಟುಕೊಂಡು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತ ಬರೆದ “ our Moon has Blood Clots” ಎಂಬ  ಆತ್ಮಕಥಾನಕದ  ಕೃತಿ ಹಾಗೂ ಶ್ರೀನಗರದ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮವನ್ನು ಬೋಧಿಸುತ್ತಿರುವ ಯುವ ಉಪನ್ಯಾಸಕ  ಶಹನಾಜ್ ಬಷೀರ್ ಎಂಬಾತ ಬರೆದ “ Scattered Soulsಎಂಬ ಕಥಾ ಸಂಕಲನ ಈ ಎರಡೂ ಕೃತಿಗಳೂ ಕಾಶ್ಮೀರದ ಹಿಂದೂ-ಮುಸ್ಲಿಂ ಸಮುದಾಯದ ನೋವು ಮತ್ತು ಬವಣೆಗಳನ್ನು ನಮ್ಮ ಮುಂದೆ ತೆರದಿಡುತ್ತವೆ.
ಸುಮಾರು  ಮೂರು ವರ್ಷಗಳ ಹಿಂದೆ ಪ್ರಕಟವಾದ  ಹಾಗೂ ದೆಹಲಿಯಲ್ಲಿ ಪತ್ರಕರ್ತನಾಗಿರುವ ರಾಹುಲ ಪಂಡಿತನ ಆತ್ಮಕಥೆಯಲ್ಲಿ ಲೇಖಕನು ಕಾಶ್ಮೀರದ ತನ್ನ ಬಾಲ್ಯದ ದಿನಗಳನ್ನು ಮತ್ತು ಅಲ್ಲಿದ್ದ ಹಿಂದು-ಮುಸ್ಲಿಂ ಸಮುದಾಯದ ಸಹಬಾಳ್ವೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ.. ಅದೇ ರೀತಿ ಹಂತ ಹಂತ ಮುಸ್ಲಿಂ ಮೂಲಭೂತವಾದಿಗಳ ಕೈಗೆ ಸಿಲುಕಿ ನಲುಗಿ ಹೋದ ಕಾಶ್ಮೀರಿ ಪಂಡಿತ ಕುಟುಂಬಗಳ ಗೋಳಿನ ಕಥೆಯನ್ನು ,ಹಾಗೂ  ಅವರ ವಲಸೆಯ ಅತಂತ್ರ ಬದುಕನ್ನು ಮನ ಮಿಡಿಯುವಂತೆ ದಾಖಲಿಸಿದ್ದಾನೆ. ಈ ಕೃತಿಯ  ಪಸ್ತಾವನೆಯಲ್ಲಿ ರಾಹುಲ ಪಂಡಿತ ದಾಖಲಿಸಿರುವ ಕಾಶ್ಮೀರಿ ಪಂಡಿತರ ಇತಿಹಾಸ ನಿಜಕ್ಕೂ ಅಮೂಲ್ಯವಾದುದು. ಶೈವ ಮತ್ತು ಬೌದ್ಧ ದರ್ಮಕ್ಕೆ ಹಾಗೂ ಹಿಂದೂ ಧರ್ಮದ ಸಂಸ್ಕೃತಿಗೆ ಕಾಶ್ಮೀರಿ ಪಂಡಿತರು ಅಥವಾ ಬ್ರಾಹ್ಮಣರೆಂದು ಗುರುತಿಸಿಕೊಂಡಿರುವ ವಿದ್ವಾಂಸರು ನೀಡಿರುವ ಕೊಡುಗೆಗಳ ವಿವರಗಳನ್ನು ದಾಖಲಿಸಿದ್ದಾನೆ. ಹನ್ನೆರೆಡನೆಯ ಶತಮಾನದಲ್ಲಿ “ರಾಜತರಂಗಿಣಿ” ಎಂಬ ಅಮೂಲ್ಯವಾದ ಹಾಗೂ ಕಾಶ್ಮೀರದ ರಾಜರ ಇತಿಹಾಸವನ್ನು ಹೇಳುವ ಕೃತಿಯನ್ನು ಬರೆದ ಕಲಃಣ, ಹತ್ತನೇ ಶತಮಾನದಲ್ಲಿ ಬದುಕಿದ್ದ ಹಾಗೂ ತಂತ್ರಾಲೋಕ ಮತ್ತು ಅಭಿನವಭಾರತಿ ಎಂಬ  ಭರತನ ನಾಟ್ಯಶಾಸ್ತ್ರದ ಮೇಲೆ ಟಿಪ್ಪಣಿ ಬರೆದ ಅಭಿನವಗುಪ್ತ, ಹನ್ನೊಂದನೆಯ ಶತಮಾನದ ಕವಿ ಹಾಗೂ ಬೃಹತ್ ಕಥಾ ಮಂಜರಿ ಬರೆದ ಕ್ಷೇಮೆಂದ್ರ, “ಕಥಾ ಸರಿತ್ಸಾಗರ” ಬರೆದ ಸೋಮೇಂದ್ರ, ಹೀಗೆ ಪುರಾತನ ವಿದ್ವಾಸರಿಂದ ಹಿಡಿದು, ಕ್ರಿಸ್ತಪೂರ್ವದಲ್ಲಿ ಬೌದ್ಧ ಧರ್ಮದ ವಿಸ್ತರಣೆಗೆ ಶ್ರಮಿಸಿದ ಗುಣವರ್ಮನ್, ಕುಮಾರಜೀವ, ಗುರು ಪದ್ಮಸಂಬ ಹೀಗೆ ಅನೇಕರನ್ನು ಹೆಸರಿಸಿ, ಕಾಶ್ಮೀರದ ಭವ್ಯವಾದ ಗತಕಾಲದ ಇತಿಹಾಸವನ್ನು ನಮ್ಮ ಮುಂದೆ ಇರಿಸಿದ್ದಾನೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಶಹನಾಜ್ ಬಷೀರ್ ನ  ಕಥಾ ಸಂಕಲನದಲ್ಲಿ ಲೇಖಕ ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ, ತಾನು ಕಂಡ ದುರಂತ ಘಟನೆಗಳನ್ನು ಕಥೆಯಾಗಿಸಿದ್ದಾನೆ.. ಕಾಶ್ಮೀರದ ಹಿಂಸಾಚಾರದಲ್ಲಿ ಪರಿಸ್ಥಿತಿಯ ಕೂಸುಗಳಾಗಿ ಛಿದ್ರಗೊಂಡಿರುವ ಮುಸ್ಲಿಂ ಕುಟುಂಬಗಳ ಕಥೆಗಳು ಓದುಗರ ಮನಸ್ಸನ್ನು ಕಲಕುವಂತಿವೆ. ಕಥೆಗಳಷ್ಟೇ ಆಕರ್ಷಕವಾಗಿ ಅವುಗಳಿಗೆ  ನೀಡಿರುವ ಶೀರ್ಷಿಕೆ  ಈ ಕೃತಿಯ ವಿಶೇಷವಾಗಿದೆ.

ಈ ಎರಡೂ ಕೃತಿಗಳು ನಮ್ಮ ಪಾಲಿಗೆ ಕೇವಲ ಸಾಹಿತ್ಯ ಕೃತಿಗಳಾಗಿರದೆ, ಕಾಶ್ಮೀರದ ವಾಸ್ತವ ಸ್ಥಿತಿ ಗತಿಗಳನ್ನು ತರದಿಡುವ ಮಹತ್ವದ ದಾಖಲೆಗಳಂತೆ ತೋರುತ್ತವೆ.. ಇವುಗಳನ್ನು ಆಧಾರವಾಗಿಟ್ಟು ಕಾಶ್ಮಿರದ ಸಮಸ್ಯೆಗೆ ಈ ದೇಶದ ಚಿಂತಕರು, ಮತ್ತು ರಾಜಕೀಯ ಧುರೀಣರು ಪರಿಹಾರ ಹುಡುಕಲು ಈ ಕೃತಿಗಳು ಸಹಾಯಕವಾಗಬಲ್ಲವು.. 
(ಕರಾವಳಿ ಮುಂಜಾವು ದಿನಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)

ಭಾನುವಾರ, ಏಪ್ರಿಲ್ 2, 2017

ಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆ ಎಂಬ ಪ್ರಯೋಗಶೀಲತೆಯ ಕೃತಿ ಕುರಿತು


ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಥೆಗಾರರಾಗಿ, ಕಾದಂಬರಿಗಾರ ಮತ್ತು ಪ್ರಬಂಧಕಾರರಾಗಿ ಗುರುತಿಸಿಕೊಂಡಿರುವ ಕೆ.ಸತ್ಯನಾರಾಯಣರವರು ಕಳೆದ ಮೂರು ದಶಕಗಳಿಂದ ತಮ್ಮ ಲವ ಲವಿಕೆಯ ಬರೆವಣಿಗೆ ಮತ್ತು ಪ್ರಯೋಗಶೀಲತೆಯ ಗುಣದ ಮೂಲಕ ಬರಹಗಳಲ್ಲಿ   ವಿಶಿಷ್ಟ ಹೆಜ್ಜೆಯ ಗುರುತುಗಳನ್ನು ದಾಖಲಿಸಿದವರು. ಇಲ್ಲಿಯವರೆಗೆ ವರ್ತಮಾನ ಜಗತ್ತಿನ ಯಾವುದೇ ರೀತಿಯ  ತತ್ವಗಳಿಗೆ ಅಥವಾ ಪಂಥಗಳ ಜೊತೆ ಗುರುತಿಸಿಕೊಳ್ಳದೆ ನಿರಂತರವಾಗಿ ಒಂದು ನಿರ್ಧಿಷ್ಟ ಮಟ್ಟದ  ಅಂತರವನ್ನು ಕಾಯ್ದುಕೊಂಡು ಬಂದಿರುವ ಲೇಖಕರು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ, ಸಾಹಿತಿಯಾಗಿ ಅವುಗಳನ್ನು ಯಾವುದೇ ರಾಗ ದ್ವೇಷವಿಲ್ಲದೆ ನಿರುದ್ವಿಗ್ನವಾಗಿ ವಿಶ್ಲೇಷಿಸುತ್ತಾ ಬಂದಿದ್ದಾರೆ. ಎಲ್ಲಾ ಸಿದ್ಧಾಂತಗಳಿಗಿಂತ  ಬದುಕಿನಲ್ಲಿ ಜೀವನಾನುಭವ ಮುಖ್ಯ ಎಂದು ನಂಬಿರುವ ಸತ್ಯನಾರಾಯಣರವರು  ಅಕ್ಷರದ ಬಗೆಗಿನ ಪ್ರೀತಿ ಮತ್ತು ಬದ್ಧತೆಯನ್ನು ಜೀವನ ಪೂರ್ತಿ ಕಾಪಾಡಿಕೊಂಡು ಬಂದವರುಹಾಗಾಗಿ ಅವರ ಬಹುತೇಕ ಎಲ್ಲಾ ಬರಹಗಳಲ್ಲಿ ಹೊಸ ಬಗೆಯ ಒಳನೋಟಗಳ ಜೊತೆಗೆ ವೈಚಾರಿಕತೆ ಮತ್ತು ವಿವೇಕ ಇವೆಲ್ಲವೂ ಎದ್ದು ಕಾಣುತ್ತವೆ.   ವೃತ್ತಿಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ  ಭಾರತದ  ಬಹು ಮುಖ್ಯನಗರಗಳಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲಾ ಬಗೆಯ ಭಾಷೆ, ಧರ್ಮ, ಸಂಸ್ಕøತಿಯ ಜೊತೆ ಒಡನಾಡುವುದರ ಮೂಲಕ ಅಪಾರವಾದ ಜೀವನಾನುಭವವನ್ನು ದಕ್ಕಿಸಿಕೊಂಡಿರುವ ಕೆ.ಸತ್ಯನಾರಾಯಾಣರು ಇದೀಗ  ತಮ್ಮ  ನಿವೃತ್ತಿಯ ನಂತರ ಆತ್ಮಕಥೆಯ  ಮೂಲಕ  ವೃತ್ತಿಜೀವನದ ನೆನಪುಗಳು ಹಾಗೂ  ಬಾಲ್ಯದ ನೆನಪುಗಳನ್ನು ಪ್ರತ್ಯೇಕವಾಗಿ  ದಾಖಲಿಸತೊಡಗಿದ್ದಾರೆ. ಈಗಾಗಲೇ   ಆತ್ಮ ಚರಿತ್ರೆಯ ಪ್ರಕಾರದಲ್ಲಿ ಮೊದಲನೆಯ ಭಾಗವಾಗಿನಾವೇನೂ ಬಡವರಲ್ಲಎಂಬ ಕೃತಿಯನ್ನು ಹೊರತಂದು ಸಾಹಿತ್ಯಾಸಕ್ತರ ಗಮನ ಸೆಳದಿರುವ  ಲೇಖಕರು, ಇದೀಗಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆಎಂಬ ಕೃತಿಯ ಮೂಲಕ ಆತ್ಮ ಚರಿತ್ರೆಯ ಪ್ರಕಾರಕ್ಕೆ ಹೊಸ ಸಾಧ್ಯತೆಯನ್ನು ಸಂಲಗ್ನಗೊಳಿಸಿದ್ದಾರೆ.

ಪ್ರಯೋಗಶೀಲತೆಯು ಕೆ.ಸತ್ಯನಾರಾಯಣರವರ  ಬರಹದ ವೈಶಿಷ್ಟಮತ್ತು ಅವರ ಮನೋಧರ್ಮ ಎನ್ನುವುದಕ್ಕೆ ಕೃತಿ ಕೂಡ  ಸಾಕ್ಷಿಯಾಗಿದೆಭಿನ್ನ ಭಿನ್ನವಾದ ಸಾಹಿತ್ಯಪ್ರಕಾರದಲ್ಲಿ ಕೈ ಆಡಿಸುತ್ತಾ, ಕಥೆ, ವಸ್ತು, ನಿರೂಪಣಾ ಶೈಲಿ  ಹೀಗೆ ಎಲ್ಲವುಗಳಲ್ಲಿ ತಮ್ಮದೇ ಆದ  ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವ ಇವರು; ಸೃಜನಶೀಲತೆ ಎನ್ನುವುದು ಮುರಿದು ಕಟ್ಟಲು ಲೇಖಕರಿಗೆ ಇರುವ ಪ್ರಕ್ರಿಯೆ ಎಂದು ನಂಬಿದವರು. ಹಾಗಾಗಿ ಇವರ ಕಥೆ, ಕಾದಂಬರಿಗಳು, ಪ್ರಬಂಧಗಳು ಸದಾ ನವ ನವೀನ ಕಥಾ ವಸ್ತುಗಳಿಂದ ಕೂಡಿರುವುದು ಮಾತ್ರವಲ್ಲದೆ, ಅವುಗಳ ಶೀರ್ಷಿಕೆ ಮತ್ತು ನಿರೂಪಣಾ ಶೈಲಿಗಳಿಂದ ಓದುಗರಿಗೆ ಆಪ್ತವಾಗುತ್ತವೆ. ಅವರ ಪ್ರಯೋಗದ ಮುಂದುವರಿದ ಭಾಗದಂತೆ ಕಾಣುವಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆಕೃತಿಯು  ಹಲವು ಕಾರಣಕ್ಕಾಗಿ ಮುಖ್ಯ ಕೃತಿಯಾಗಿ ನಾವು ಪರಿಗಣಿಸಬೇಕಿದೆ. ಇಂದಿನ ದಿನಮಾನಗಳಲ್ಲಿ ಆತ್ಮ ಚರಿತ್ರೆಗಳೆನ್ನುವುದು  ಬರಹಗಾರರ ಆತ್ಮರತಿಯ ಅತಿರೇಕದ ದಾಖಲೆಗಳನೋ ಎಂಬಂತೆ ಅಥವಾ ತಮ್ಮ ಸಮಕಾಲೀನ ಬರಹಗಾರರ ಬಗ್ಗೆ   ಜೀವಮಾನವಿಡಿ ಕಾಯ್ದಿಟ್ಟುಕೊಂಡು ಬಂದಿದ್ದ ಅಸಹನೆದ್ವೇಷ, ಸಿಟ್ಟು ಇವುಗಳನ್ನು ಹೊರಹಾಕಿ, ಸೇಡು ತೀರಿಸಿಕೊಳ್ಳಬಹುದಾದ ಪ್ರಕ್ರಿಯೆಯ ರೂಪದಂತೆ ಕಾಣುತ್ತಿರುವಾಗ, ಇಂತಹ ತಥಾಕಥಿತ ಮಾರ್ಗವನ್ನು ಸತ್ಯನಾರಾಯಣರು ಇಲ್ಲಿ ತ್ಯೆಜಿಸಿರುವುದು ಮುಖ್ಯ ಅಂಶವಾಗಿದೆ

ಓದುಗರಲ್ಲಿ ಯಾವುದೇ ರೀತಿಯ  ಅನುಕಂಪವನ್ನು ಬಯಸದೆ  ತಮ್ಮ ಬಾಲ್ಯದ ಬವಣೆಗಳನ್ನು ಮತ್ತು ಆಸೆಗಳನ್ನು ಬರೆದಿರುವ ಲೇಖಕರು ಕೃತಿಯುದ್ದಕ್ಕೂ ತಮ್ಮ  ಅನುಭವಗಳನ್ನು ದಾಖಲಿಸುವುದರ ಮೂಲಕಅರೆ, ಇವುಗಳು ನಮ್ಮ ಅನುಭವಗಳಾಗಿವೆಯಲ್ಲ!” ಎಂದು ಓದುಗರು ಅಚ್ಚರಿಪಡವ ರೀತಿಯಲ್ಲಿ ನಿರೂಪಿಸಿದ್ದಾರೆ.

ಕೃತಿಯ ಪ್ರಸ್ತಾವನೆಯಲ್ಲಿ ತಮ್ಮ ಬಾಲ್ಯದ ಸ್ಮತಿಯಾಗಿ ಕಾಡಿದ "ಒಂದು ಬೂರಗ ಮರ ಮತ್ತು ಕಟ್ಟೆಯ "ಕುರಿತು  ಲೇಖಕರು ಬರೆದಿರುವ ಮಾತುಗಳು ಹೀಗಿವೆಬೂರಗದ ಮರದ ಕೆಳಗೆ ದಕ್ಕಿದ ಲೋಕಜ್ಞಾನಕ್ಕೂ, ದೊಡ್ಡ ಕಟ್ಟೆಯಲ್ಲಿ ವ್ಯಕ್ತವಾಗುತ್ತಿದ್ದ ಲೋಕ ಜ್ಞಾನಕ್ಕೂ ಸಂಬಂಧವಿದೆ. ದೊಡ್ಡ ಕಟ್ಟೆಯಲ್ಲಿ ಕೂಡ ವ್ಯಕ್ತವಾಗುದ್ದುದು ಕೂಡ ಸಣ್ಣ ಪುಟ್ಟ ಆಸೆಗಳನ್ನು , ದಾಯಾದಿ ಮತ್ಸರಗಳನ್ನು ಪೂರೈಸಿಕೊಳ್ಳಲಾರದವರು ಬಂದು ಅಡಗಿಕೊಂಡು ಕಾತರಿಸುತ್ತಿದ್ದ ರೀತಿಯೇ, ಮಧ್ಯಾಹ್ನವು ಸಂಜೆಗೆ ಹೊರಳುವ ನೀರವ-ನಿಶ್ಚಲ ಹೊತ್ತಿನಲ್ಲಿ ಬೂರಗದ ಮರದ ಕೆಳಗೆ ನಿಂತ ಆಧ್ಯಾತ್ಮಿಕ ಪಿಪಾಸುಗಳು ಎಷ್ಟೇ ಹೊತ್ತಾದರೂ ಕಾಯುತ್ತಾ ನಿಲ್ಲುವರು. ಸಣ್ಣ ಪುಟ್ಟ ಜನರ ಸಣ್ಣ ಪುಟ್ಟ ಆಕಾಂಕ್ಷೆಗಳು ಎರಡೂ ಕಡೆ ವ್ಯಕ್ತವಾಗುತ್ತಿದ್ದುದೇ ಬೂರಗದ ಮರ ಮತ್ತು  ದೊಡ್ಡ ಕಟ್ಟೆಗೆ ಇರುವ ಆಧ್ಯಾತ್ಮಿಕ ಒಳಸಂಬಂಧವಿರಬಹುದೆ? ಒಳಸಂಬಂಧದ ದೆಸೆಯಿಮದಾಗಿಯೇ ಮರ ಮತ್ತು ಕಟ್ಟೆ ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆಯನ್ನು ಬರೆಯುತ್ತಿರುವ ನನಗೆ ಈಗ ಒಟ್ಟಿಗೆ ಒಟ್ಟಂದದಲ್ಲಿ ಕಾಣುತ್ತಿರಬಹುದೆ?’ ಎಂಬ ಅರ್ಥಪೂರ್ಣ ಪ್ರಶ್ನೆಯನ್ನು ಹಾಕಿಕೊಂಡಿದ್ದಾರೆ. ಲೇಖಕರು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿರುವ ಘಟನೆಗಳನ್ನು ಓದುತ್ತಿದ್ದಾಗ ಮಾತು ನಿಜವೆನಿಸುತ್ತದೆ.

ಮಂಡ್ಯನಗರಕ್ಕೆ ಹೊಂದಿಕೊಂಡಂತೆ ಇರುವ ತಾಯಿಯ ಊರು (ಗುತ್ತಲು ಎಂಬ ಗ್ರಾಮ) ಹಾಗೂ ತಂದೆಯ ಊರಾದ ಕೊಪ್ಪ ಗ್ರಾಮವೂ ಒಳಗೊಂಡಂತೆ ಬಾಲ್ಯದಲ್ಲಿ ತಾವು ಓದಿದ ಕೊಳ್ಳೆಗಾಲದ ಸುತ್ತ ಮುತ್ತಲಿನ ಪರಿಸರವನ್ನು ದಾಖಲಿಸಿರುವ ಲೇಖಕರು ಯಾವುದೇ ಮುಜುಗರವಿಲ್ಲದೆ, ಒಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಸರ್ಕಾರಿ ನೌಕರರಾಗಿದ್ದ ತಮ್ಮ ತಂದೆಯ ಸೀಮಿತ ಆದಾಯದಲ್ಲಿ ಬದುಕು ಕಟ್ಟಿಕೊಂಡ ಬಗೆಯನ್ನು ಮತ್ತು ತಮ್ಮ ಬಾಲ್ಯದ ಕನಸುಗಳು ಹಾಗೂ ಬವಣೆಗಳನ್ನು ನಿಸ್ಸಂಕೋಚವಾಗಿ ದಾಖಲಿಸಿರುವುದು ಕೃತಿಯ ವಿಶೇಷವಾಗಿದೆ. ಬಾಲಕನಾಗಿದ್ದ ಸಂದರ್ಭದಲ್ಲಿ  ತನ್ನ ವಿಧವೆ ಅಜ್ಜಿಗೆ ಪ್ರತಿ ತಿಂಗಳೂ ಕ್ಷೌರಿಕನೊಬ್ಬ ತಲೆ ಬೋಳಿಸುವ ಕ್ರಿಯೆ ಮತ್ತು  ತಲೆ ಬೋಳಿಸಿದ ನಂತರ ಅಜ್ಜೆಯ ತಲೆಯ ಮೇಲೆ  ಅಲ್ಲಲ್ಲಿ ಕಾಣುವ ರಕ್ತದ ಕಲೆಗಳನ್ನು ಕಂಡು ನೊಂದುಕೊಂಡು, ಮುಂದೆ ಒಳ್ಳೆಯ ಕ್ಷೌರಿಕನಾಗುವ ಕನಸು ಕಾಣುವನಾಪಿತನಾಗುವ ಆಸೆ, ಎಂಬ ಲೇಖನ, ತನ್ನ ಸಹಪಾಠಿಯೊಬ್ಬ ತಂದೆಯ ಆಕಸ್ಮಿಕ ನಿಧನಾನಂತರ ಪೆಟ್ಟಿಗೆ ಅಂಗಡಿ ಮಾಲೀಕನಾದದ್ದನ್ನು ಕಂಡು ತಾನೂ ಮಾಲೀಕನಾಗಬೇಕೆಂದು ಬಯಸುವ ಪ್ರಸಂಗ, ಸಹಪಾಠಿ ಹೆಣ್ಣು ಮಕ್ಕಳ ಮನಗೆಲ್ಲಲು ಪ್ರಯತ್ನಿಸುವ ಬಹು ವಲ್ಲಬನಾಗುವ ಆಸೆ, ತಂದೆ ಹೊಲಿಸಿಕೊಟ್ಟ ಕೆಟ್ಟದಾದ ದೊಗಳ ಕಾಕಿ ಚಡ್ಡಿ ಕುರಿತು ಬರೆದಿರುವನನ್ನ ಚಡ್ಡಿ ಕಳುವಾಗಲಿಎಂಬ ಘಟನೆಗಳ ಕುರಿತಾದ ಬರಹಗಳು ಹೀಗೆ ಇಲ್ಲಿನ ಬಹುತೇಕ ಅನುಭವಗಳು ಓದುಗರ ಮುಖದ ಮೇಲೆ ಮಂದಹಾಸ ಮೂಡಿಸುವುದರ ಜೊತೆಗೆ ನೆನಪಿನಲ್ಲಿ ಬಹುಕಾಲ ಉಳಿಯುತ್ತವೆ. ಎಲ್ಲಾ ವ್ಯಕ್ತಿಗಳಿಗೆ ವಯಸ್ಸಿಗೆ ಸಹಜವಾಗಿ ಬರುವ ಆಸೆಗಳನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಸತ್ಯನಾರಾಯಣರು ಕೃತಿಯಲ್ಲಿ  ದಾಖಲಿಸುತ್ತಾ ಹೋಗುತ್ತಾರೆ.

ಕೃತಿಯಲ್ಲಿ ಕಾಣುವ ಹೆಂಗಸರಿಂದ ಪಾಠ ಕಲಿಯುವ ಆಸೆ, ಮುಂಗೂದಲು ಸವರಬೇಕು, ಬಾಗಿಲು ರಿಪೇರಿ ಬೇಡವೇ ಬೇಡ, ಕೊನೆ ಪ್ರಯಾಣಿಕನಾಗುವ ಆಸೆ, ಚೀಟಿ ಬರೆದು ಬಿಸಾಕುವ ಆಸೆ, ರೈತನಾಗಬೇಕು, ಬೈತಲೆ ತೆಗೆಯುವ ಆಸೆ, ಸಂಪಾದಕನಾಗುವ ಆಸೆ, ಬಡವನಾಗುವ ಆಸೆ, ಡೈನಮೊ ಸೈಕಲ್ ಆಸೆ, ಬಡ್ಡಿ ಸಾಹುಕಾರನಾಗುವ ಆಸೆ ಹೀಗೆ ನಲವತ್ತು ಬಾಲ್ಯದ ಆಸೆಗಳನ್ನು ಲೇಖಕರು ಕೃತಿಯಲ್ಲಿ ದಾಖಲಿಸಿದ್ದಾರೆ. ಇವುಗಳೆಲ್ಲವೂ ಕೇವಲ ಕೆ.ಸತ್ಯನಾರಾಯಣರ ಆಸೆಗಳಾಗಿರದೆ ನಮ್ಮೆಲ್ಲರ ಬಾಲ್ಯದ ಆಸೆಗಳೂ ಸಹ ಆಗಿದ್ದವು ಎಂಬ ಕಾರಣಕ್ಕಾಗಿ ಕೃತಿಯು ಓದುಗರಿಗೆ ಆಪ್ತವೆನಿಸುತ್ತದೆ. ಆತ್ಮಚರಿತ್ರೆಯನ್ನೂ ಹೀಗೂ ಸಹ ಯಾವುದೇ ರಾಗ ದ್ವೇಷವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ಬರೆಯಬಹುದು ಎಂಬುದಕ್ಕೆ ಕೃತಿ ಕನ್ನಡದ ಆತ್ಮಕಥೆಯ ಪ್ರಕಾರಕ್ಕೆ ಹೊಸ ಹೊಳಹು ಮತ್ತು ದಾರಿಯನ್ನು ತೋರಿಸಿರುವುದು ವಿಶೇಷ. ಕೆ.ಸತ್ಯನಾರಾಯಣರು ತಮ್ಮ  ಯಕ್ಷ ಪ್ರಶ್ನೆ ಎಂಬ ಕಥೆಯಲ್ಲಿ ಬದುಕಿನ ಸಾರ್ಥಕತೆಯ ಅಳತೆಗೋಲುಗಳು ಯಾವುವು? ನಾವು ಎಷ್ಟು ವರ್ಷ ಬದುಕಿದೆವು ಎನ್ನುವುದೊ? ಹೇಗೆ ಬದುಕಿದೆವು ಎನ್ನುವುದೊ? ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಅದೇ ರೀತಿ ಅವರ ಮತ್ತೊಂದು  “ ಲೇಖಕನ ರಾಜಿನಾಮೆಎಂಬ ಕಥೆಯಲ್ಲಿ ನಾವು ಬರೆದ ಬರೆವಣಿಗೆ ಸಹೃದಯ ಲೇಖಕರ ಸ್ಪಂದನಕ್ಕೆ ಒಳಗಾಗದೆ, ಕಪಾಟುಗಳಲ್ಲಿ ಬರಿದೇ ಗೆದ್ದಲು ಹಿಡಿಯುತ್ತಾ ಹೋದರೆ, ಬರೆವಣಿಗೆಯ ಸಾರ್ಥಕತೆ ಏನು ಎಂಬ ಪ್ರಶ್ನೆಯಿದೆ. ಎಲ್ಲಾ ಪ್ರಶ್ನೆಗಳು ಕೇವಲ ಲೇಖಕರ ಕಥೆಗಳ ಪ್ರಶ್ನೆಯಾಗಿರದೆ, ಅವರ ಬದುಕಿನ ಪ್ರಶ್ನೆಗಳಾಗಿದ್ದವು ಎಂಬುದಕ್ಕೆ  ಆತ್ಮಕಥನದ ಬರಹಗಳು ನಮಗೆ ಪುರಾವೆ ಒದಗಿಸುತ್ತವೆ. ನಿಟ್ಟಿನಲ್ಲಿ ಲೇಖಕರ ಬದುಕು ಮತ್ತು ಬರೆವಣೆಗೆ ಎರಡೂ ಸಾರ್ಥಕವಾಗಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

( ಸಮಾಹಿತ, ದ್ವೈಮಾಸಿಕ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)