ಮಂಗಳವಾರ, ಮಾರ್ಚ್ 24, 2015

ಭಾರತದ ಇಬ್ಬರು ಪರಿಸರದ ಸಂತರಿಗೆ ಅಂತರಾಷ್ಟ್ರೀಯ ಮನ್ನಣೆ


ಗಾಂಧೀಜಿ ಚಿಂತನೆಗಳ ವಾರಸುದಾರರು ಮತ್ತು ಈ ದೇಶದ ನೆಲ,ಜಲ ಮತ್ತು ಜೈವಿಕ ವೈವಿಧ್ಯತೆ ಹಾಗೂ ಪರಿಸರವನ್ನು ತಮ್ಮ ಜೀವದ ಉಸಿರಿನಂತೆ ಪ್ರೀತಿಸುತ್ತಾ, ಧ್ಯಾನಿಸುತ್ತಾ  ಬಂದಿರುವ ಭಾರತ ಪರಿಸರದ ಸಂತರಿಬ್ಬರೂ ಈ ವಾರ ಎರಡು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿರುವುದು,ಪರಿಸರ ಪ್ರಿಯರಿಗೆ ಖುಷಿಯ ಸಂಗತಿಯಾಗಿದೆ.
ಪ್ರೊ. ಮಾಧವ ಗಾಡ್ಗಿಲ್ ಅವರಿಗೆ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಜೀವ ವೈವಿಧ್ಯತೆಗಳ ಕಾಳಜಿ ಮತ್ತು ರಕ್ಷಣೆಗಾಗಿ ಸಲ್ಲಿಸಿದ ಸೇವೆಗಾಗಿ ಅಮೇರಿಕಾದ ದಕ್ಷಿಣ ಕ್ಯಾಲಿಪೊರ್ನಿಯಾದ ವಿಶ್ವ ವಿದ್ಯಾಲಯ ಸ್ಥಾಪಿಸಿರುವ “ ಟೈಲರ್ ಪರಿಸರ ಪ್ರಶಸ್ತಿ” ಲಭಿಸಿದೆ.
ಈ ದೇಶದ ಜಲಸಂಪನ್ಮೂಲಗಳು ಮತ್ತು ನದಿಗಳನ್ನು ಪುನಶ್ಚೇತನಗೊಳಿಸುವುದರ ಮೂಲಕ ಜಲಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ರಾಜೇಂದ್ರ ಸಿಂಗ್ ಅವರಿಗೆ  ನೀರಿನ ನೊಬೆಲ್ ಎಂದು ಕರೆಯಲಾಗುವ 2015 ರ ಅಮೇರಿಕಾದ ಸ್ಟಾಕ್ ಹೋಮ್ ಪ್ರಶಸ್ತಿ ಲಭ್ಯವಾಗಿದೆ.
ಇಂದಿನ ದಿನಮಾನಗಳಲ್ಲಿ ಅಭಿವೃದ್ಧಿಯ ವಾಖ್ಯಾನದ ಮೂಲ ಆಶಯ ಪಲ್ಲಟಗೊಂಡ ಪರಿಣಾಮವಾಗಿ ಉಳ್ಳವರ ನೆಮ್ಮೆದಿಯ ಬದುಕಿಗಾಗಿ ಇಲ್ಲದವರ  ಬದುಕನ್ನು ಬಲಿ ಪಡೆಯುವುದೇ ಅಭಿವೃದ್ಧಿ ಎಂಬಾಂತಾಗಿದೆ. ಕೊಳ್ಳುಬಾಕುತನವನ್ನು ಬದುಕಿನ ಮೂಲ ಮಂತ್ರವಾಗಿರಿಸಿಕೊಂಡ ಆಧುನಿಕ ಜಗತ್ತಿಗೆ ಈ ನೆಲದ ನೈಸರ್ಗಿಕ ಕೊಡುಗೆಗಳು ಇರುವುದು, ಯಥೇಚ್ಛವಾದ ಹಾಗೂ  ಮಿತಿ ಮೀರಿದ ಬಳಕೆಗಾಗಿ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ನಾವು ಈ ಭೂಮಿಯ ಹಕ್ಕುದಾರರಲ್ಲ, ಕೇವಲ ವಾರಸುದಾರರು ಮಾತ್ರ,, ನಿಸರ್ಗವನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೆ ದಾಟಿಸುವ ನೈತಿಕ ಜವಾಬ್ದಾರಿಯೊಂದು ನಮ್ಮ ಮೇಲಿದೆ ಎಂಬ ಪ್ರಜ್ಞೆ ನಮ್ಮ ಸ್ಮೃತಿಯಿಂದ ಅಳಿಸಿಹೋಗಿ ಎಷ್ಟೋ ವರ್ಷಗಳಾಗಿವೆ. ಹಾಗಾಗಿ ಪರಿಸರ ಕುರಿತು ಮಾತನಾಡುವುದು ಸಿನಿಕತನವೇನೋ ಎಂಬ ಧ್ವಂದ್ವದ ಜಗತ್ತಿನಲ್ಲಿ ಮುಳುಗಿ ಏಳುತ್ತಿರುವ ನಮ್ಮಂತಹವರಿಗೆ ಪ್ರೊ. ಮಾಧವ ಗಾಡ್ಗಿಲ್ ಮತ್ತು ರಾಜೇಂದ್ರಸಿಂಗ್ ಆತ್ಮ ವಿಶ್ವಾಸದ ಪ್ರತೀಕವಾಗಿ, ಕಗ್ಗತ್ತಲ ಜಗತ್ತಿನ ಬೆಳಕಿನ ಕಿರಣವಾಗಿ ಗೋಚರಿಸುತ್ತಾರೆ.


 ಪುಣೆ ಎಂದು ಕರೆಸಿಕೊಳ್ಳುವ ಈಗಿನ ಪೂನಾ ನಗರದ ಪ್ರತಿಷ್ಟಿತ ಮನೆತನದಲ್ಲಿ 1942 ರಲ್ಲಿ ಜನಿಸಿದ ಪ್ರೊ .ಗಾಡ್ಗಿಲ್ ಬಾಲ್ಯದಿಂದಲೂ ಒಬ್ಬ ಜೀವಶಾಸ್ತ್ರಜ್ಷನಾಗಬೇಕೆಂದು ಕನಸುಕಂಡವರು. ಅದರಂತೆ ಪೂನಾ. ಫರ್ಗುಸನ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮತ್ತು ಬಾಂಬೆ. ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ  ಅವರು ಅಮೇರಿಕಾದ ಹಾರ್ವಡ್ ವಿ.ವಿ.ಯಲ್ಲಿ ಪರಿಸರ ಮತ್ತು ಜೈವಿಕ ವೈವಿಧ್ಯತೆ ಕುರಿತು ಡಾಕ್ಟರೇಟ್ ಪದವಿ ಪಡೆದರು.
ವಿದೇಶದಿಂದ ಹಿಂತಿರುಗಿದ ನಂತರ ಒಂದಷ್ಟು ವರ್ಷಗಳ ಕಾಲ ಪೂನಾದಲ್ಲಿದ್ದ ಗಾಡ್ಗಿಲ್ ಅವರು 1973 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004 ರವರೆಗೆ ಕರ್ನಾಟಕವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡರು. ಗಾಡ್ಗಿಲ್ ಅವರಿಗಿಂತ ಮೊದಲು ಅವರ ಪತ್ನಿ ಸುಲೋಚನಾ ಅವರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಕೆಲಸಕ್ಕೆ ಸೇರುವಾಗ ಅವರು ತಮ್ಮ ಪತಿಯ ವಿವರಗಳನ್ನು ಜೊತೆಯಲ್ಲಿ ತಂದಿದ್ದ ಕಾರಣ, ಪತ್ನಿಯ ಮೂಲಕ ಮಾಧವ ಗಾಡ್ಗಿಲ್ ರವರಿಗೂ ಸಂಸ್ಥೆಯಲ್ಲಿ  ಉದ್ಯೋಗ ದೊರೆಯಿತು. ಮುಂದಿನ ಸತತ ಮೂರು ದಶಕಗಳ ಕಾಲ ಅವರು ಪಶ್ಚಿಮಘಟ್ಟದ ಪರಿಸರ, ಅಲ್ಲಿರುವ ಜೈವಿಕ ವೈವಿಧ್ಯತೆ ಹಾಗೂ ಅಪರೂಪದ ಜೀವ ಜಾಲಗಳ ಸರಪಳಿ ಕುರಿತಂತೆ ಅಧ್ಯಯನ ನಡೆಸಿ, ಭಾರತೀಯರಿಗೆ ವಿಶೇಷವಾಗಿ  ಶಿಕ್ಷಕರಿಗೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಮತ್ತು ಸ್ವಯಂ ಸೇವಾ ಸಂಘಟನೆಗಳ ಕಾಯಕರ್ತರಿಗೆ ಪರಿಸರದ ಪ್ರಜ್ಞೆ ಮೂಡಿಸಿದರು. ಇಂತಹ ಅಧ್ಯಯನಗಳ ನಡುವೆಯೂ ಸಹ  ಭಾರತೀಯ ವಿಜ್ಞಾನ ಸಂಸ್ಥೆಯ ಇತರೆ ವಿಭಾಗಗಳ ತಜ್ಞರ ಜೊತೆಗೂಡಿ, ಆಸ್ಟ್ರಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಸುಧಾರಿತ ತಂತ್ರಜ್ಞಾನಗಳನ್ನು ಅವಿಷ್ಕರಿಸಿ ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು. ಇವುಗಳಲ್ಲಿ ಸುಧಾರಿತ ಸೌದೆಯ ಒಲೆಗಳು, ಗೋಬರ್ ಅನಿಲ ದಿಂದ ಅಡುಗೆ ಮಾಡುವುದು, ದೀಪ ಉರಿಸುವ ತಂತ್ರಜ್ಞಾನ ಇತ್ಯಾದಿ.
ಈವರೆಗೆ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಟ್ಟದ ಪ್ರಬಂಧಗಳು ಹಾಗೂ ಪರಿಸರ ಅಧ್ಯಯನ ಕುರಿತಂತೆ ಎಂಟು ಕೃತಿಗಳನ್ನು ರಚಿಸಿರುವ ಪ್ರೊ. ಮಾಧವ ಗಾಡ್ಗಿಲ್ ಅವರು ಭಾರತದ ಪ್ರಧಾನ ಮಂತ್ರಿಯವರ ಕಾರ್ಯಾಲಯದ ವಿಜ್ಞಾನ ಮತ್ತು ಪರಿಸರ ಕುರಿತ ಸಲಹೆಗಾರರಾಗಿ, ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಗಾಡ್ಗಿಲ್ ನೇತೃತ್ವದಲ್ಲಿ ಒಂದು ಅಧ್ಯಯನ ಸಮಿತಿಯನ್ನು ರಚಿಸಿತ್ತು. ಅತ್ಯಂತ ಆಳವಾದ ಜ್ಞಾನ, ಮತ್ತು ಖಚಿತ ಅಂಕಿ ಅಂಶಗಳ ಆಧಾರಿತ ಇವರ ಅಧ್ಯಯನ ವರದಿಯನ್ನು ಹಿಂದಿನ ಎನ್.ಡಿ.ಎ. ಸರ್ಕಾರವು 2013 ರಲ್ಲಿ  ತಿರಸ್ಕರಿಸಿತು. ನಂತರ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚನೆ ಮಾಡಿ, ಆ ವರದಿಯನ್ನು ಸ್ವೀಕರಿಸಿತು. ಆದರೆ, ಕಸ್ತೂರಿ ರಂಗನ್ ವರದಿ ಕುರಿತು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ.
 ತಮ್ಮ ವರದಿ ತಿರಸ್ಕೃತವಾದ ನಂತರ ಕೇಂದ್ರ ಸರ್ಕಾರದ ಎಲ್ಲಾ ಸಲಹಾ ಸಮಿತಿಗಳಿಗೆ ರಾಜಿನಾಮೆ ನೀಡಿದ ಪ್ರೊ. ಮಾಧವ ಗಾಡ್ಗೀಲ್ ಇದೀಗ ತಮ್ಮ ನಿವೃತ್ತಿಯ ವಯಸ್ಸನ್ನು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಓಡಾಡುತ್ತಾ ಕಳೆಯುತ್ತಿದ್ದಾರೆ. ಗೋವಾ ರಾಜ್ಯದಲ್ಲಿ ಗಣಿಗಾರಿಕೆಯಿಂದಾಗಿ ಅಲ್ಲಿನ ಅರಣ್ಯ ಮತ್ತು ಸಮುದ್ರ ಮತ್ತು ಕಡಲಜೀವಿಗಳ ಮೇಲಾಗುತ್ತಿರುವ ಪರಿಣಾಮವನ್ನು ಸ್ಥಳಿಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ವಿವರಿಸುತ್ತಾ ಜನರನ್ನು ಸಂಘಟಿಸುತ್ತಿದ್ದಾರೆ. ಅದೇ ರೀತಿ ಕೇರಳ ರಾಜ್ಯದಲ್ಲಿಯೂ ಕೂಡ ಅಣೆಕಟ್ಟುಗಳ ನಿರ್ಮಾಣ, ಹೆದ್ದಾರಿಯ ಅಗಲೀಕರಣ, ವಿದ್ಯುತ್ ಯೋಜನೆಗಳು, ಟೌನ್ ಶಿಪ್ ಗಳಿಂದ ಪಶ್ಚಿಮ ಘಟ್ಟಕ್ಕೆ ಆಗಿರುವ ದುರಂತವನ್ನು ವಿವರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರದಿಂದ ಪದ್ಮಶ್ರಿ, ಪದ್ಮಭೂಷಣ ಪ್ರಶಸ್ತಿ,  ಹಾಗೂ ಶಾಂತಿ ಸ್ವರೂಪ್ ಭಟ್ನಾಗರ್  ವಿಜ್ಞಾನಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಗಾಡ್ಗಿಲ್ ಅವರಿಗೆ 2003 ರಲ್ಲಿ ಪರಿಸರ ಕ್ಷೇತ್ರದಲ್ಲಿನ ಅಧ್ಯಯನ ಮತ್ತು ಸೇವೆಗಾಗಿ “ ವೋಲ್ವೊ ಪರಿಸರ ಅಂತರಾಷ್ಟ್ರೀಯ ಪ್ರಶಸ್ತಿ” ಲಭ್ಯವಾಗಿತ್ತು. ಇದೀಗ  ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಅಂತರಾಷ್ಟ್ರಿಯ ಪ್ರಶಸ್ತಿಯ ಗರಿಯೊಂದು ದೊರಕಿದಂತಾಗಿದೆ.
ಇನ್ನು, ಕಳೆದ ಮೂರು ದಶಕಗಳಿಂದ ( 1984) ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದುದ್ದಕ್ಕೂ ಓಡಾಡುತ್ತಾ, ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ಉತ್ತರ ಪ್ರದೇಶದ ಮೂಲದ ರಾಜೇಂದ್ರ ಸಿಂಗ್ ರವರ ಬದುಕು ಮತ್ತು ಸಾಧನೆ ಈ ತಲೆಮಾರಿಗೆ ಆದರ್ಶನೀಯವಾದುದು.

ರಾಜೇಂದ್ರ ಸಿಂಗ್ ರು 1959 ರಲ್ಲಿ ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯ ದೌಲ ಎಂಬ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ಗಾಂಧೀಜಿ ಅನುಯಾಯಿ ರಮೇಶ್ ಶರ್ಮ ಎಂಬುವರು  ಮೀರತ್ ನಗರಕ್ಕೆ ಆಗಮಿಸಿ, ಸುತ್ತ ಮುತ್ತಲಿ ಹಳ್ಳಿಗನ್ನು ಗಾಂಧೀಜಿಯ “ ಗ್ರಾಮ ಸ್ವರಾಜ್ಯ” ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದನ್ನು ಕಣ್ಣಾರೆ ಕಂಡ ರಾಜೇಂದ್ರ ಸಿಂಗರು ಭಾಲ್ಯದಲ್ಲಿಯೆ ಗಾಂಧೀಜಿ ಪರಿಕಲ್ಪನೆಯ ಮಾದರಿಯಲ್ಲಿ ಅಭಿವೃದ್ಧಿಯ ಕನಸು ಕಂಡವರು. ಹಿಂದಿ ಸಾಹಿತ್ಯದಲ್ಲಿ ಅಲಹಬಾದ್ ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಮತ್ತು ಆರ್ಯುವೇದ ವಿಜ್ಞಾನದಲ್ಲಿ ಪದವಿ ಪಡೆದ ರಾಜೇಂದ್ರ ಸಿಂಗ್ ರವರು ಕೇಂದ್ರ ಸರ್ಕಾರದ ಉದ್ಯೋಗಿಯಾಗಿ ನೇಮಕಗೊಂಡು, ರಾಜಸ್ಥಾನದ ಜೈ ಪುರಕ್ಕೆ ಬಂದರು. ರಾಜಸ್ಥಾನದ ನೀರಿನ ಬವಣೆ, ಅಲ್ಲಿನ ರೈತರ ಗೋಳು,  ಪಡಿಪಾಟಲು ಇವುಗಳಿಗೆ ಸಾಕ್ಷಿಯಾದ ಅವರು 1984 ರಲ್ಲಿ ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿ, ತಮ್ಮಲ್ಲಿದ್ದ ಗೃಹಪಯೋಗಿ ವಸ್ತುಗಳನ್ನು 23 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿ, ಖಾದಿ ಜುಬ್ಬ, ಪೈಜಾಮ ಮತ್ತು ಹೆಗಲ ಮೇಲಿನ ಒಂದು ಕೈ ಚೀಲದೊಂದಿಗೆ ಆಳ್ವಾರ್ ಜಿಲ್ಲೆಗೆ ಆಗಮಿಸಿ ಬದುಕ ತೊಡಗಿದರು. ಜೀವನ ನಿರ್ವಹಣೆಗೆ ಆರ್ಯುವೇದ ವೈದ್ಯರಾಗಿ ಕೆಲಸ ಮಾಡತ್ತಾ,  ರಾಜಸ್ಥಾನದ ಹಳ್ಳಿಗಳಲ್ಲಿ ಓಡಾಡುತ್ತಾ, “ ತರುಣ್ ಭಾರತ್” ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿದರು. ಅದರ ಮೂಲಕ ನದಿ ಮತ್ತು ಕಾಲುವೆಗಳಿಗೆ ಒಡ್ಡುಗಳನ್ನು ನಿರ್ಮಾಣ ಮಾಡುವುದರ ಮೂಲಕ ಅಲ್ಲಿನ ಹಳ್ಳಿಗಳಲ್ಲಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಯಶಸ್ಸು ಸಾಧಿಸಿದರು.  ಗ್ರಾಮ ಮಟ್ಟದಲ್ಲಿ ರೈತರ ಸಮಿತಿಗಳನ್ನು ನಿರ್ಮಿಸಿ, ಅವುಗಳ ಮೂಲಕ ನೀರಿನ ಹಂಚಿಕೆ ಮತ್ತು ಬೆಳೆಯ ಬಹುದಾದ ಬೆಳೆಗಳ ಕುರಿತು ಸಹಕಾರ ತತ್ವದಡಿಯ ಜ್ಞಾನವನ್ನು ಮೂಡಿಸಿದರು.  ಒಂದೆಡೆ ಜಲಮೂಲಗಳ ಸಂರಕ್ಷಣೆಗೆ ಒತ್ತು ಕೊಡುತ್ತಾ, ಇನ್ನೊಂದು ಕಡೆ ಅರಣ್ಯ ಅಭಿವೃದ್ಧಿಗೂ ಒತ್ತು ನೀಡತೊಡಗಿದರು. ಇದರ ಫಲವಾಗಿ ರಾಜಸ್ಥಾನದ ರೈತರ ಬದುಕು ಹಸನಾಯಿತು. ರಾಜೇಂದ್ರಸಿಂಗರ  ಈ ಜಲ ಸಂರಕ್ಷಣೆಯ ಅಭಿಯಾನ ಭಾರತದ ಇತರೆ ರಾಜ್ಯಗಳ ರೈತರಿಗೂ ಮಾದರಿಯಾಯಿತು.



ಭಾರತದ ಸ್ಥಳಿಯ ಸಂಘ ಸಂಸ್ಥೆಗಳಿಂದ ನೂರಕ್ಕೂ ಹೆಚ್ಚು ಪ್ರಶಸ್ತಿಗೆ ಪಾತ್ರರಾಗಿರುವ ರಾಜೇಂದ್ರ ಸಿಂಗ್ ಅವರಿಗೆ ಭಾರತದ ಪ್ರತಿಷ್ಟಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ( 2005 ರಲ್ಲಿ) ಮತ್ತು 2001 ರಲ್ಲಿ ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯುವ ಮ್ಯಾಗ್ಸಸೆ ಪ್ರಶಸ್ತಿಗಳು ದೊರಕಿವೆ. ಇದೀಗ  “ ನೀರಿನ ನೊಬೆಲ್ ಪ್ರಶಸ್ತಿ” ಎಂದು ಕರೆಯಲಾಗುವ “ಸ್ಟಾಕ್ ಹೊಂ ವಾಟರ್ ಪ್ರೈಜ್” ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಲಭ್ಯವಾಗಿದೆ. ಈ ಇಬ್ಬರು ಭಾರತದ ಪರಿಸರ ಸಂತರಿಗೆ ದೊರೆತಿರುವ ಮನ್ನಣೆಗಳು, ಈ ನೆಲದಲ್ಲಿ ಇನ್ನೂ ಜೀವಪರ ಕಾಳಜಿಗೆ ಮಹತ್ವವಿದೆ ಎಂಬುದನ್ನು ದೃಢ ಪಡಿಸುತ್ತಿದೆ.


ಕೊನೆಯ ಮಾತು- ಪಶ್ಚಿಮ ಘಟ್ಟ ಗಳ ಇತಿಹಾಸ ಮತ್ತು ಪ್ರೊ. ಮಾಧವ ಗಾಡ್ಗೀಲ್ ಹಾಗೂ ಕಸ್ತೂರಿ ರಂಗನ್ ರವರ ವರದಿಯ ಬಗ್ಗೆ  ಹೆಚ್ಚಿನ ಮಾಹಿತಿಗಾಗಿ ಇದೇ ಬ್ಲಾಗಿನ 2013 ರ ಮೇ ತಿಂಗಳಿನಲ್ಲಿ ಪ್ರಕಟವಾದ  ಲೇಖನಗಳ ಮೇಲೆ ಕ್ಲಿಕ್ ಮಾಡಿದರೆ, ಮೂರು ಲೇಖನಗಳು ದೊರೆಯುತ್ತವೆ.

ಭಾನುವಾರ, ಮಾರ್ಚ್ 8, 2015

ಕೆ.ಎಸ್. ನ. ಅವರ ಕವಿತೆಗಳಗುಚ್ಚ " ಹೂಬುಟ್ಟಿ" ಯ ನೆಪದಲ್ಲಿ ಕನ್ನಡ ಕಾವ್ಯ ಕುರಿತು ಒಂದಿಷ್ಟು ನೆನಪುಗಳು.



ಕಳೆದ ಪೆಬ್ರವರಿ 22 ರಂದು ಧಾರವಾಡ ದಿಂದ ಮೈಸೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ,   ಚನ್ನರಾಯಪಟ್ಟಣ ದಾಟಿ ಕಿಕ್ಕೇರಿಗೆ ಬಸ್ ಬರುತ್ತಿದ್ದಂತೆ ನನ್ನ ನೆಚ್ಚಿನ ಕವಿ ಕೆ.ಎಸ್. ನರಸಿಂಹಸ್ವಾಮಿ ನೆನಪಾದರು. ಅವರು ಹುಟ್ಟಿ ಬೆಳೆದ ಮನೆಯ ಹಾಗೂ ಬ್ರಾಹ್ಮಣರ ಬೀದಿಯನ್ನೊಮ್ಮೆ ಬಸ್ ನ ಕಿಟಿಕಿಯಲ್ಲಿ ನೋಡುತ್ತಾ, ಕೆ.ಆರ್. ಪೇಟೆಯವರೆಗೆ ಅವರ ಬಗ್ಗೆ ಯೋಚಿಸುತ್ತಾ ಬಂದಿದ್ದೆ. ಅದೇ ದಿನ ಮಧ್ಯಾಹ್ನ ಮಂಡ್ಯ ನಗರದಲ್ಲಿ ಬೇಟಿಯಾದ  ಕಿರಿಯ ಮಿತ್ರ ರಾಜೇಂದ್ರ ಪ್ರಸಾದ್ ನನಗೆ ಕೆ.ಎಸ್. ನ. ಕವಿತೆಗಳ ಕುರಿತು ಯುವ ಮನಸ್ಸುಗಳ ಬರೆದಿರುವ ಲೇಖನಗಳನ್ನು ಒಳಗೊಂಡ “ಹೂಬುಟ್ಟಿ” ಹಾಗೂ ತನ್ನ ನಾಲ್ಕನೆಯ ಕವನ ಸಂಕಲನ “ ಕೋವಿ ಮತ್ತು ಕೊಳಲನ್ನು” ಉಡುಗೊರೆಯಾಗಿ ನೀಡಿದ್ದು ಕಾಕತಾಳಿಯವಾಯಿತು. ವಾಸ್ತವವಾಗಿ ನನ್ನ ಮತ್ತು ರಾಜೇಂದ್ರಪ್ರಸಾದ್ ನಡುವೆ ಅದು ಮೊದಲ ಮುಖಾ ಮುಖಿ ಬೇಟಿಯಾಗಿತ್ತು. ಕಳೆದ ಐದು ವರ್ಷಗಳಿಂದ ಫೇಸ್ ಬುಕ್ ಮೂಲಕ ಪರಿಚಯಾಗಿ ಮಂಡ್ಯ ನಗರದಲ್ಲಿದ್ದರೂ, ಸಹ ಇಬ್ಬರೂ ಬೇಟಿಯಾಗಿರಲಿಲ್ಲ. ನಾನು ರಾಜೇಂದ್ರಪ್ರಸಾದ್ 34 ಅಥವಾ 35 ವರ್ಷದ ಯುವ ಲೇಖಕ ಭಾವಿಸಿದ್ದೆ. ರಾಜೇಂದ್ರನ ವಯಸ್ಸು ಆಜು ಬಾಜು ನನ್ನ ಮಗನ ವಯಸ್ಸು. ಅಂದರೆ ಕೇವಲ 28 ವರ್ಷ ವಯಸ್ಸು. ಇಷ್ಟು  ಚಿಕ್ಕ ವಯಸ್ಸಿಗೆ ರಾಜೇಂದ್ರ ಪ್ರಸಾದ್, ಕಾವ್ಯ, ಸಂಗೀತ, ಇತಿಹಾಸ, ತತ್ವ ಜ್ಞಾನ, ಸೂಫಿ ಕಾವ್ಯ, ಜಾನಪದ ಸಂಗೀತ ಇವುಗಳ  ಕುರಿತ  ಆಸಕ್ತಿ ಬೆಳಸಿಕೊಂಡಿರಿವ ಸಂಗತಿಗಳು ನನ್ನನ್ನುವಿಸ್ಮಯಕ್ಕೆ ದೂಡಿವೆ. ಮಾತು ಮತ್ತು  ಕೃತಿಯಲ್ಲಿ ಕೃತಿಮತೆಯಿಲ್ಲದ ರಾಜೇಂದ್ರ ಪ್ರಸಾದ್, ಕನ್ನಡ ಕಾವ್ಯ ಕ್ಷೇತ್ರದಲ್ಲಿ ಗಂಭಿರವಾಗಿ ತೊಡಗಿಸಿಕೊಂಡಿರುವ ಪರಿಗೆ ಕೆ.ಎಸ್.ನ. ಶತಮಾನೋತ್ಸವದ ನೆನಪಿಗೆ ತನ್ನ ಸಂಪಾದಕೀಯದಲ್ಲಿ ಹೊರ ತಂದಿರುವ “ ಹೂ ಬುಟ್ಟಿ” ಕೃತಿ ಸಾಕ್ಷಿಯಾಗಿದೆ. ಸುಮಾರು ಮುವತ್ತು ಮಂದಿ ಯುವ ಲೇಖಕ-ಲೇಖಕಿಯರು ಕೆ.ಎಸ್. ನ. ಅವರ ಕವಿತೆಗಳನ್ನು ಹೊಸ ಬಗೆಯಲ್ಲಿ ವಿಶ್ಲೇಷಿಸಿದ್ದಾರೆ. ಜೊತೆಗೆ ನನ್ನ ಗೆಳೆಯ ರವಿಬೆಳೆಗೆರೆ ಮತ್ತು ಜೋಗಿ ಒಳಗೊಂಡಂತೆ ಹಲವರ ಮೌಲಿಕ ಬರಹಗಳು ಈ ಕೃತಿಯಲ್ಲಿ ಅಡಕವಾಗುವುದರ ಮೂಲಕ ಕೃತಿಯ ಮೌಲ್ಯವನ್ನು  ಮತ್ತಷ್ಟು ಹೆಚ್ಚಿಸಿವೆ.


1970 ರ ದಶಕದಲ್ಲಿ ಕನ್ನಡದ ನವ್ಯ ಕಾವ್ಯ ಮತ್ತು ಸಾಹಿತ್ಯ  ಈ ಎರಡೂ ಉತ್ತುಂಗದಲ್ಲಿ ಇದ್ದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಕಾವ್ಯದಿಂದ ಎರವಲು ಪಡೆದ  ಅಸಂಗತ  ಕಾವ್ಯ ಗಳ ಪರಿಕಲ್ಪನೆಯಲ್ಲಿ ಕನ್ನಡದಲ್ಲಿಯೂ ಸಹ  ಒಂದಿಷ್ಟು ಕಾವ್ಯ ರಚನೆಯಾಗಿತ್ತು. ಕನ್ನಡ ನವೋದಯ ಕಾವ್ಯವವನ್ನು ಸಾರಾಸಗಟಾಗಿ ತಿರಸ್ಕರಿಸುವ ಭರದಲ್ಲಿ ಕೆಲವು ಕವಿತೆಗಳು ಸಹ ಸೃಷ್ಟಿಯಾಗಿದ್ದವು. ಚಂದ್ರಕಾಂತ ಕುಸುನೂರು ಬರೆದ
                           ಕತ್ತಲೆಯಲ್ಲಿ ಬೆತ್ತಲೆ ತಿರುಗುವ
                           ನಮ್ಮ ಕಾವ್ಯ ಕನ್ನಿಕೆಗೊಂದು
                           ಬೆಳಕಿನ ಸೀರೆ ತರುವುದಿದೆ
                           ಬರುವಿರಾ?
ಎಂಬ ಕವಿತೆಯೂ ಈ ಸಂದರ್ಭದಲ್ಲಿ  ಮುಖ್ಯವಾಗಿತ್ತು. ಆದರೆ, ನವ್ಯದ ಹಂಗಿಲ್ಲದೆ, ಬದುಕಿ, ಕಾವ್ಯ ಬರೆಯುತ್ತಲೇ ಹೋದ   ನಮ್ಮ ಕೆ.ಎಸ್. ನರಸಿಂಹ ಸ್ವಾಮಿ, ಚನ್ನವೀರ ಕಣವಿ, ಪು.ತಿ.ನ. ಕೆ.ಎಸ್. ನಿಸಾರ್ ಅಹಮ್ಮದ್, ಜಿ.ಎಸ್.ಶಿವರುದ್ರಪ್ಪ, ಸು.ರಂ. ಯಕ್ಕುಂಡಿ  ಮುಂತಾದವರು ಕನ್ನಡ ಕಾವ್ಯ ಕನ್ನಿಕೆಗೆ ಸದಾ ಬೆಳಕಿನ ಸೀರೆ ಉಡಿಸುತ್ತಾ  ಆಕೆಯನ್ನು ಜೀವಂತವಿಟ್ಟಿದ್ದರು.
ಕನ್ನಡ ಕಾವ್ಯ ಲೋಕದಲ್ಲಿ ಕಾವ್ಯ ಪ್ರೇಮಿಗಳಷ್ಟೇ ಅಲ್ಲದೆ, ಜನಸಾಮಾನ್ಯರ ಎದೆಯಲ್ಲೂ ಸಹ ಬೇಂದ್ರೆ ಮತ್ತು ಕೆ.ಎಸ್.ನ. ಕವಿತೆಗಳು ಸದಾ ಹಸಿರಾಗಿವೆ. ಜೊತೆಗೆ ಈ ಇಬ್ಬರೂ ಕವಿಗಳು ಕಾವ್ಯಕ್ಕೆ ವಸ್ತುವಾಗುವ ವಿಷಯವಲ್ಲ ಎಂದು ಕನ್ನಡ ಕಾವ್ಯ ಜಗತ್ತು ತಿರಸ್ಕರಿಸಿದ ಸಾಮಾನ್ಯ ಸಣ್ಣ ಸಂಗತಿಗಳನ್ನು ಇಟ್ಟುಕೊಂಡು ಕಾವ್ಯ ರಚನೆ ಮಾಡಿದವರು. ಅಲ್ಲದೆ ಇತರೆ ಕನ್ನಡದ ಕವಿಗಳಿಗಿಂತ ಹೆಚ್ಚಾಗಿ ತಮ್ಮನ್ನು ತಾವು ಹೆಣ್ಣಾಗಿ ಪರಿಭಾವಿಸಿಕೊಂಡು ಅತ್ಯುತ್ತಮ ಕವಿತೆಗಳನ್ನು ರಚಿಸಿದವರು.
ನವ್ಯದ ಕಾಲಘಟ್ಟದಲ್ಲಿ ಇತರೆ ಕವಿಗಳಿಗಿಂತ ಅತ್ಯಂತ ಹೆಚ್ಚು ಲೇವಡಿಗೆ ಒಳಗಾದವರು ಕೆ.ಎಸ್.ನ. ಇದನ್ನು ಮೀರಲೆಂಬಂತೆ ಅವರು ತೆರೆದ ಬಾಗಿಲು ಮತ್ತು ಶಿಲಾಲತೆ ಎಂಬ ಎರಡು ಸಂಕಲನಗಳನ್ನು ಹೊರ ತರುವುದರ ಮೂಲಕ ನವ್ಯರ ಬಾಯಿಯನ್ನು ಮುಚ್ಚಿಸಿದ್ದರು. ದಾಂಪತ್ಯವನ್ನು , ಮಧ್ಯಮ ವರ್ಗದ ಭಾವನೆಗಳನ್ನು ಅವರಷ್ಟೂ ಪರಿಣಾಮಕಾರಿಯಾಗಿ ಕಾವ್ಯದಲ್ಲಿ ತಂದವರು ಮತ್ತೊಬ್ಬರಿಲ್ಲ ಎಂದರೆ, ಉತ್ಪೇಕ್ಷೆಯಾಗಲಾರದು. ಅವರನ್ನು ಕನ್ನಡದ ಕಾವ್ಯ ಜಗತ್ತು “ಮಲ್ಲಿಗೆಯ ಕವಿ” ಎಂದು ಹಾಡಿ ಹೊಗಳಿದೆ. ಅದೇ ರೀತಿ ನವ್ಯ ಸಾಹಿತ್ಯ “ ಪುಷ್ಪ ಕವಿಯ ಪರಾಕು” ಎಂದು ಸಹ ಗೇಲಿ ಮಾಡಿದೆ.  ಮಲ್ಲಿಗೆ ಮೊಗ್ಗುಗಳನ್ನು ಹೂಮಾಲೆಯಾಗಿ ಕಟ್ಟುವ ಹೂವಾಡಿಗನಿಗೆ ಮಾತ್ರ ಗೊತ್ತು ಅದರ ನಿಜವಾದ ಕಷ್ಟ. ಇತರೆ ಹೂಗಳಂತೆ ಮಲ್ಲಿಗೆ ಮಾಲೆಯನ್ನು ಸರಾಗವಾಗಿ ಕಟ್ಟಲಾಗದು.  ಈ ಕಾರಣಕ್ಕೆ ಅವರ ಹೃದಯಾಂತರಾಳದಿಂದ ‘ ಹಿಂಡ ಬಾರದು ದುಂಡು ಮಲ್ಲಿಗೆಯನು; ಒಣಗಬಾರದು ಒಡಲ ಚಿಲುಮೆ” ಎಂಬ ಕಾವ್ಯದ ಸಾಲುಗಳು ಸೃಷ್ಟಿಯಾಗಲು ಸಾಧ್ಯವಾಯಿತು. ನನ್ನ ಗೆಳೆಯ ರವಿ ಬೆಳೆಗೆರೆ  ಕೆ.ಎಸ್. ನ. ಕುರಿತಂತೆ  ನೆನಪಿನಲ್ಲಿಡುವ ಮಾತುಗಳನ್ನು   ಪರಿಣಾಮಕಾರಿಯಾಗಿ  ಹೀಗೆ ದಾಖಲಿಸಿದ್ದಾನೆ.



“ಹೊರಗೆ ಇದೆಲ್ಲಾ ಗಲಿಬಿಲಿ ನಡೆಯುತ್ತಿದ್ದರೂ ಒಳಗೆ ತೂಗೂಯ್ಯಾಲೆಯ ಮೇಲೆ ಕುಳಿತು ತಮ್ಮ ಪಾಡಿಗೆ ತಾವು “ ಮನೆಯ ಹಾಡುಗಳನ್ನು ಕೆ.ಎಸ್. ನರಸಿಂಹಸ್ವಾಮಿ ಬರೆಯುತ್ತಲೇ ಹೋದರು. ಹೆಣ್ಣು, ಅವಳ ಕಣ್ಣು, ಅವಳ ಮನಸ್ಸು, ಜೋಯಿಸರ ಕರು, ಹೆಂಡತಿಯ ಮುಟ್ಟು, ದಿಂಬಿನ ಚಿತ್ತಾರ, ಒಳಮನೆಯ ಬಡತನ, ಅದನ್ನು ಮರೆಸುವ ಪ್ರೀತಿ, ಎರಡೇ ಎರಡು ಹಲ್ಲು ಬಂದ ಹನುಮಂತನಂಥ ಮುದ್ದು ಮಗು, ಅವಳ ಮೂಗೂತಿಯ ತಿರುಪು, ಅಕ್ಕಿ ನುಚ್ಚಿನ ನಡುವೆ ಸರಿದಾಡುವ ಬಲಗೈ, ಇವುಗಳ ಸುತ್ತುತ್ತಲೇ ಅಲೆಯಿತು ನರಸಿಂಹಸ್ವಾಮಿಯವರ ಕಾವ್ಯ. ಪ್ರತಿ ಸಲವೂ ಮನುಷ್ಯನಿಗೆ ಮನೆಯ ನೆನಪು ಮಾಡಿಕೊಟ್ಟಿತು ಮಲ್ಲಿಗೆಯ ಕಾವ್ಯ.
ನಮಗೆ ಕ್ರಾಂತಿ ಗೀತೆ ಬರೆದು ಕೊಟ್ಟವರು ಬೇಕಾದಷ್ಟು ಇದ್ದಾರೆ. ಅರ್ಥವಾಗದ ಹಾಗೆ ಕವಿತೆ ಬರೆದಿಟ್ಟು, ಅದಕ್ಕೆ ಅರ್ಥ ಬರೆಸಿ ಓದಲು ಬಿಟ್ಟವರೂ ಇದ್ದಾರೆ. ಮಹಾನ್ ಕ್ರಾಂತಿಕಾರಿಗಳು ವಿಧಾನಸೌಧದ ಕಟಾಂಜನದ ಮುಂದೆ ಬೋರಲು ಮಲಗಿದ್ದನ್ನು ನಾವು ನೋಡಿದ್ದೇವೆ. ಜ್ಞಾನಪೀಠಿಗಳ ಭಾಷಣಗಳು ಇವತ್ತಿಗೂ, ನಾಳೆಗೂ ಉಲ್ಟಾ ಹೊಡೆದದ್ದನ್ನು ನೊಡಿದ್ದೀವಿ. ಸಾಕು ನಮ್ಮ ಮಿದುಳು ತುಂಬಿದೆ. ನಮಗೆ ಬೇಕಾದ್ದು ಹೆಂಡತಿಯೊಂದಿಗೆ ಕೂತು ಹಾಡಿಕೊಂಡು ಹಗುರಾಗಬಲ್ಲ ಒಂದು ನಿತ್ಯಗೀತೆ. ಅದನ್ನು ಬದುಕಿನುದ್ದಕ್ಕೂ ಬರೆದುಕೊಟ್ಟವರು ನರಸಿಂಹಸ್ವಾಮಿ. ಅವರಿಗೆ ನಾವು ಋಣಿ.
ಕಳೆದ ವಾರ ಮೈಸೂರು ನಗರದಲ್ಲಿದ್ದೆ. ಮೈಸೂರು ಮುಕ್ತ ವಿ.ವಿ. ಸಹಯೋಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಲಿತ ಹಾಗೂ ಹಿಂದುಳಿದ ಯುವ ಲೇಖಕರಿಗೆ ಮೂರು ದಿನಗಳ ಕಮ್ಮಟವನ್ನು ಹಮ್ಮಿಕೊಂಡಿತ್ತು. ಕೊನೆಯ ನನ್ನ ಮಿತ್ರರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್ ಹನುಮಂತಯ್ಯನವರ ಸಮಾರೋಪ ಭಾಷಣವಿತ್ತು. ಹಾಗಾಗಿ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೆ. ಹನುಮಂತಯ್ಯನವರು ಮಾತನಾಡುತ್ತಾ, ಇತ್ತೀಚೆಗೆ ಪ್ರಕಟವಾಗುವ ನಾಲ್ಕೈದು ಸಾವಿರ ಕನ್ನಡ ಕೃತಿಗಳಲ್ಲಿ ಶೇಕಡ 75 ರಷ್ಟು ಜೊಳ್ಳು ಸಾಹಿತ್ಯ. ಅದನ್ನು ಗ್ರಂಥಾಲಯಕ್ಕೆ ತುಂಬುವ ಕೆಲಸ ನಡೆಯುತ್ತಿದೆ ಎಂದರು. ಇದಕ್ಕಿಂತ ಮುಖ್ಯವಾಗಿ ಕಳೆದ ಎರಡು ದಶಕಗಳಿಂದ  ಕನ್ನಡ ಸಾಹಿತ್ಯ ವಿಮರ್ಶೆ ಎಂಬುದು ನಿಂತ ನೀರಾಗಿದೆ ಎಂದು ಅಭಿಪ್ರಾಯ ಪಟ್ಟರು. ಕಳೆದ ಒಂದು ವರ್ಷದಿಂದ ನಾನು ಯೋಚಿತ್ತಿದ್ದ ವಿಷಯವನ್ನು ಅವರು ಬಹಿರಂಗಗೊಳಿಸಿದ್ದು ನನಗೆ ಅಚ್ಚರಿಯಾಯಿತು. ಕಾವ್ಯಕ್ಕೆ ಸೀಮಿತವಾಗಿರಿಸಿಕೊಂಡು, ಈ ಮಾತನ್ನು ನಾನು ಗಂಭೀರವಾಗಿ ಆಲೋಚಿಸುತ್ತಿದ್ದೇನೆ.

                                                ( ರಾಜೇಂದ್ರ ಪ್ರಸಾದ್)

ನನ್ನ ಕಾಲೇಜು ದಿನಗಳಲ್ಲಿ “ ಹೌದು ಕಣೇ ಉಷಾ ನಾವು ಹುಡುಗಿಯರೇ ಹೀಗೆ” ಕವಿತೆ ಬರೆದು ಬೆಚ್ಚಿ ಬೀಳಿಸಿದ ಪ್ರತಿಭಾ ನಂದ ಕುಮಾರ್, ದ್ರೌಪತಿಯ ಸ್ವಗತ ಕವಿತೆ ಬರೆದ ಸರಸ್ವತಿ ಗೌಡ ಇವರನ್ನು ಒಳಗೊಂಡಂತೆ, ಲಲಿತಾ ಸಿದ್ದಬಸವಯ್ಯ, ಹೆಚ್.ಎನ್.ಆರತಿ, ಹೆಚ್.ಎಲ್. ಪುಷ್ಪ, ರೂಪಾ ಹಾಸನ, ನಮ್ಮನ್ನಗಲಿದ ವಿಭಾ, ಎಂ.ಆರ್.ಕಮಲ,  ಸುಬ್ಬು ಹೊಲೆಯಾರ್, ವಿಕ್ರಂ ವಿಸಾಜಿ, ಪೀರ್ ಬಾಷಾ, ಚಂದ್ರು ತುರುವಿಹಾಳ್, ಬಿ.ಶ್ರೀನಿವಾಸ, ವಿಜಯಕಾಂತಪಾಟೀಲ, ಅರುಣ್ ಜೋಳದ ಕೂಡ್ಲಿಗಿ, ವೀರಣ್ಣ ಮಡಿವಾಳರ, ದೊಡ್ಡ ಆಲೂರು ನಿಂಗಪ್ಪ, ಬಿ.ರಾಜಣ್ಣ, ಹೀಗೆ ಅನೇಕ ಕವಿ ಮತ್ತು ಕವಿಯತ್ರಿಯರಿಗೆ ಮತ್ತು ಅವರ ಕವಿತೆಗಳಿಗೆ  ಕನ್ನಡ ವಿಮರ್ಶಾ ಲೋಕದಲ್ಲಿ ಸೂಕ್ತವಾದ ನ್ಯಾಯ ದೊರಕಿಲ್ಲ ಎಂಬುದು ನನ್ನ ಧೃಡ ನಂಬಿಕೆ.
ಹೌದು, ಒಬ್ಬ ನಿಜವಾದ ಸಶಕ್ತನಾದ  ಕವಿಗೆ ವಿಮರ್ಶೆ ಅಥವಾ ಪ್ರಶಸ್ತಿ, ಬಿರುದು ಬಾವಲಿಗಳೆಂಬ ಯಾವ ಉಪಾಧಿಗಳು ಬೇಕಿಲ್ಲ. ಇದನ್ನು ನಂಬಿ ಬದುಕಿದವರು ಕವಿ. ಕೆ.ಎಸ್.ನರಸಿಂಹಸ್ವಾಮಿಯವರು. ಅವರು ಎಷ್ಟೋ ಬಾರಿ ನಮ್ಮ ಸಿಟ್ಟು, ಆಕ್ರೋಶಗಳಿಗೆ ತಂಗಾಳಿಯಾಗುತ್ತಾರೆ. ನರಸಿಂಹಸ್ವಾಮಿಯವರು ಒಮ್ಮೆ ಹೇಳಿಕೊಂಡಿದ್ದ ಈ ಅನುಭವವನ್ನು ನಾನು ಮರೆತಿಲ್ಲ. ಅವರು ಒಮ್ಮೆ ಮೈಸೂರು ನಗರದಲ್ಲಿ ನಗರ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಕುರುಡ ಬಿಕ್ಷುಕನೊಬ್ಬ ‘ ಬಳೆಗಾರ ಚನ್ನಯ್ಯನ ಗೀತೆ ಹಾಡಿಕೊಂಡು ಅವರ ಬಳಿ ಬಂದ. ಆತನ ಕೈಗೆ ಎಂಟಾಣೆಯನ್ನು ಕೊಟ್ಟ ನರಸಿಂಹಸ್ವಾಮಿಯವರು, ಆತನನ್ನು “ ಈ ಹಾಡು ಯಾರದಪ್ಪ? ಎಂದು ಕೇಳಿದರು. ಅದಕ್ಕೆ ಕುರುಡ ನೀಡಿದ ಉತ್ತರ ಹೀಗಿತ್ತು. “ ಗೊತ್ತಿಲ್ಲ ಸ್ವಾಮಿ, ಈ ಹಾಡು ಹಾಡಿದರೆ ನನ್ನ ಅಂಗೈಗೆ ನಾಲ್ಕು ಕಾಸು ಹೆಚ್ಚಿಗೆ ಬೀಳ್ತದೆ”
ತನ್ನ ಒಂದು ಕವಿತೆಯೊಂದು ಅನಾಥ ಜೀವಕ್ಕೆ ಅನ್ನ ದೊರಕಿಸಿಕೊಡುವುದನ್ನು ಹಾಗೂ ಕುರುಡ ಬಿಕ್ಷುಕುನ  ಮಾತನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದ ನರಸಿಂಹಸ್ವಾಮಿಯವರು, ನನಗೆ  ಮತ್ತು ನನ್ನ ಕವಿತೆಗಳಿಗೆ ಇದಕ್ಕಿಂತ ಬೇರೆ ಭಾಗ್ಯ ಬೇಡ ಎನ್ನುತ್ತಿದ್ದರು. ವರ್ತಮಾನದ ಕನ್ನಡ ಸಾಹಿತ್ಯ ಲೋಕದಲ್ಲಿ  65 ಅಥವಾ 75 ವರ್ಷ ತುಂಬುತ್ತಿಂದ್ದಂತೆ, ಪಂಪ, ನೃಪತುಂಗ, ಬಸವ, ನಾಡೋಜ ಮತ್ತು ಜ್ಞಾನ ಪೀಠ ಪ್ರಶಸ್ತಿಯ ಕನಸು ಮತ್ತು ಕನವರಿಕೆಗಳಲ್ಲಿ ಜ್ವರ ಪೀಡಿತರಾಗುವ  ಸಾಹಿತಿಗಳ ಜೊತೆ ನರಸಿಂಹ ಸ್ವಾಮಿ ಮತ್ತು ಇನ್ನೂ ಪಂಪ ಪ್ರಶಸ್ತಿ ಪಡೆಯಲಾರದ , ಸಂಕೋಚ ಪ್ರವೃತ್ತಿಯ ನಿಸಾರ್ ಅಹಮದ್ ಅವರನ್ನು ಹೋಲಿಕೆ ಮಾಡಲು ನನಗೆ ಮನಸ್ಸು ಬರುತ್ತಿಲ್ಲ.
ನರಸಿಂಹ ಸ್ವಾಮಿಯವರ ಆಯ್ದ 31  ಕವಿತೆಗಳನ್ನು ಇಟ್ಟುಕೊಂಡು ಹೂಬುಟ್ಟಿ ಕೃತಿಯಲ್ಲಿ ಕನ್ನಡದ ಆಧುನಿಕ ಮನಸ್ಸುಗಳು ವಿವೇಚಿಸಿರುವ ಬಗೆಯನ್ನು ನೊಡಿದರೆ, ಇವರು ಕನ್ನಡ ವಿಮರ್ಶೆಗೆ ಹೊಸ ಭಾಷ್ಯವೊಂದನ್ನು ಬರೆದಿದ್ದಾರೆ ಎಂದು ಅನಿಸುತ್ತದೆ.
ಡಿ.ಎಂ. ಪ್ರಶಾಂತ್ ಕುರ್ಕೆ, ಅವಿರತ ಮಾವಿನ ಕುಳಿ, ಕುಸುಮಾ ಆಯರಹಳ್ಳಿ, ಕಾವ್ಯ ಸಂತೋಷ್, ಭವಾನಿ ಲೋಕೇಶ್, ವಿಕಾಸ ನೇಗಿಲೋಣಿ, ಎಂ.ಎಸ್. ರುದ್ರಸ್ವಾಮಿ, ಸಂಯುಕ್ತ ಪುಲಿಗಲ್, ಸುಧಾ ಚಿದಾನಂದಗೌಡ, ವಿದ್ಯಾಶಂಕರ ಹರಪನಳ್ಳಿ, ಸಂತೋಷ ಕುಮಾರ್ ಎಂ.ಎಲ್ ಹೀಗೆ ಬಹುತೇಕ ಎಲ್ಲರ ಒಳ ನೋಟಗಳಲ್ಲಿ ಹೊಸತನವಿದೆ. ಅದೇ ರೀತಿ ಪ್ರತಿಭಾ ನಂದಕುಮಾರ್, ಶ್ರೀದೇವಿ ಕೆರೆಮನೆ, ಅಕ್ಷತಾ. ಶ್ರೀಧರ್ ತಾಳ್, ರಾಜೇಂದ್ರ ಪ್ರಸಾದ್, ಚಿದಂಬರ ನರೇಂದ್ರ, ಉಷಾಕಟ್ಟೆ ಇವರ ವಿವೇಚನೆಗಳಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತದೆ.
ಒಟ್ಟಾರೆ ಕೆ.ಎಸ್.ನ. ಕವಿತೆಗಳ ನೆಪದಲ್ಲಿ ಹೂಬುಟ್ಟಿ ಕೃತಿಯ ಮೂಲಕ ಕನ್ನಡ ವಿಮರ್ಶೆಗೆ ಹೊಸ ಸಾಧ್ಯತೆಯನ್ನು ತೋರಿದ ಸಂಪಾದಕ ರಾಜೇಂದ್ರ ಪ್ರಸಾದ್ ಮತ್ತು ಈ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲಾ ಯುವ ಮನಸ್ಸುಗಳು  ನಿಜಕ್ಕೂ ಅಭಿನಂದನೆ ಅರ್ಹರಾಗಿದ್ದಾರೆ.


ಇನ್ನು, ರಾಜೇಂದ್ರ ಪ್ರಸಾದ್ ಹೊರ ತಂದಿರುವ ನಾಲ್ಕನೆಯ ಸಂಕಲನ “ ಕೋವಿ ಮತ್ತು ಕೊಳಲು” ಕೃತಿಯ ಕವಿತೆಗಳನ್ನು ಓದಿದಾಗ, ಕಾವ್ಯದ ಭಾಷೆ ಮತ್ತು ಲಯಗಾರಿಕೆ ಇವುಗಳಲ್ಲಿ ತೋರಿರುವ ಪ್ರಬುದ್ಧತೆ ಮೆಚ್ಚುವಂತಹದ್ದು. ಕಾವ್ಯವನ್ನು ಅಪಾರವಾಗಿ ಪ್ರೀತಿಸುವ ಮತ್ತು ಓದುವ ನನಗೆ ಈವರೆಗೆ ರಾಜೇಂದ್ರನ ಕವಿತೆಗಳೇಕೆ ಕಣ್ಣಿಗೆ ಬೀಳಲಿಲ್ಲ ಎಂದು ಆಶ್ಚರ್ಯವಾಯಿತು. ಪತ್ರಿಕೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ತಾಣಗಳಲ್ಲಿ ರಾಜೇಂದ್ರ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು. “ ಇವತ್ತು ಕವಿತೆ ಕಟ್ಟ ಬೇಕಿರುವುದು, ಕುಣಿಯುವುದಕ್ಕಲ್ಲ; ಎದೆಯಲ್ಲಿ ಮನುಷ್ಯನನ್ನು ಮನುಷ್ಯನಾಗಿ ಉಳಿಸಿಕೊಳ್ಳಲು” ಎಂಬ ಅಪ್ಪಟ ಮನುಷ್ಯನೊಬ್ಬ ಮಾತ್ರ ಚಿಂತಿಸಬಹುದಾದ ಮಾತುಗಳನ್ನು ಬರೆದಿರುವ ರಾಜೇಂದ್ರಪ್ರಸಾದ್ ಭವಿಷ್ಯದ ಕನ್ನಡ ಕಾವ್ಯ ಜಗತ್ತಿನಲ್ಲಿ ಗಮನಿಸಲೇ ಬೇಕಾದ ಗಂಭೀರ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಹಿರಿಯ ಕವಿಯತ್ರಿ ಪ್ರತಿಭಾ ನಂದಕುಮಾರ್ ಮತ್ತು ಟಿನಾ ಶಶಿಕಾಂತ್  ತುಂಬಾ ಮೌಲಿಕವಾದ ಮಾತುಗಳನ್ನು ಈ ಸಂಕಲನಕ್ಕೆ ಬರೆದಿದ್ದಾರೆ. ಉರಿನಾಲಿಗೆ, ಮೌನ ಹೊದ್ದ  ಒಂದು ನಿಟ್ಟುಸಿರು, ತೆವರು ತಿಟ್ಟಿನ ಹಾದಿ, ಅಡ್ಡ ಪಲ್ಲಕ್ಕಿಯ ಜಂಗಮ, ಒಂದು ರಸ್ತೆ ಮತ್ತು ಹತ್ಯೆ ಯಂತಹ ಕವಿತೆಗಳು ಗಮನ ಸೆಳೆಯುತ್ತವೆ. ರಾಜೇಂದ್ರನ ಕವಿತೆಗಳಲ್ಲಿ ಅಲ್ಲಮನ ಭಾಷೆಯ ಪ್ರಭಾವ ಎದ್ದು ಕಾಣುತ್ತದೆ. ಒಮ್ಮೊಮ್ಮೆ ಕಾವ್ಯದ ಭಾಷೆಯೊಳಗೆ ಅನಪೇಕ್ಷಿತವಾಗಿ ನುಗ್ಗಿ ಬಂದಿರು ಇಂಗ್ಲೀಷ್ ಪದಗಳು, ಕಾವ್ಯದ ಭಾಷೆಗೆ ಮತ್ತು ಅದರ ಶಿಲ್ಪ ಹಾಗೂ ಬಂಧಕ್ಕೆ ಧಕ್ಕೆಯನ್ನುಂಟು ಮಾಡಿವೆ, ಇದನ್ನು ರಾಜೇಂದ್ರ ಪ್ರಸಾದ್ ಕಾವ್ಯದಲ್ಲಿ ಪ್ರತಿಭಾ ನಂದಕುಮಾರ್ ಗುರುತಿಸಿದ್ದಾರೆ. ರಾಜೇಂದ್ರ ಪ್ರಸಾದ್ ಈ ಲೋಪವನ್ನು ತಿದ್ದುಕೊಳ್ಳುವುದರ ಮೂಲಕ ತನ್ನ ಕಾವ್ಯ ಕ್ಷೇತ್ರವನ್ನು; ಸಾಮಾಜಿಕ ತಾಣಗಳ ಪರಿಧಿಯಿಂದ ಪತ್ರಿಕೆಗಳವರೆಗೂ  ವಿಸ್ತರಿಸಿಕೊಳ್ಳುವ ಅಗತ್ಯವಿದೆ.,