ಶನಿವಾರ, ಏಪ್ರಿಲ್ 25, 2020

ನರಹತ್ಯೆ ಮತ್ತು ಜಗುಲಿ ಸಂಸ್ಕೃತಿ





ಮೊನ್ನೆ ಮಹಾರಾಷ್ಟ್ರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾಧುಗಳನ್ನು ಹಾಗೂ  ಚಾಲಕನನ್ನು ಮಕ್ಕಳ ಕಳ್ಳರೆಂದು ಭಾವಿಸಿ ಜನರು  ಹತ್ಯೆ ಮಾಡಿದ್ದಾರೆ. ಈ ಸುದ್ದಿ ಪ್ರಸಕ್ತ ಭಾರತದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಕಳೆದ  ಆರರೇಳು ವರ್ಷಗಳಿಂದ ಮಕ್ಕಳ ಕಳ್ಳರು, ಮಾತಗಾತಿಯರು, ಗೋವುಗಳ ಕಳ್ಳಸಾಗಾಣಿಕೆದಾರರು ಎಂಬ ಹಣೆಪಟ್ಟಿಯೊಂದಿಗೆ ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಮತ್ತು ಅಮಾಯಕರನ್ನು ಗ್ರಾಮ ಭಾರತದಲ್ಲಿ  ನಿರ್ಧಯವಾಗಿ ಕೊಲ್ಲಲಾಗುತ್ತಿದೆ. ಮನುಷ್ಯ ಮನಷ್ಯನನ್ನು ಕೊಲ್ಲುವುದು ಅನಾಗರೀಯಕತೆಯ ಕಾಲದಲ್ಲಿ ಮತ್ತು ಯುದ್ಧದಲ್ಲಿ ಎಂದು ತಿಳಿದುಕೊಂಡಿದ್ದ ನಮಗೆ ಈಗ ನಾವು ಬದುಕುತ್ತಿರುವ ಕಾಲಘಟ್ಟ ಯಾವುದು ಎಂಬ ಪ್ರಶ್ನೆ ಎದುರಾಗಿದೆ.
ಈ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಯಾವೊಬ್ಬ ಅಪರಿಚಿತ ವ್ಯಕ್ತಿಯೂ ಹಳ್ಳಿಗಳಿಗೆ ಕಾಲಿಡದಂತೆ ಅವನನ್ನು ಅಥವಾ ಅವಳನ್ನು ಅಸಹಾಯಕತೆಗೆ ದೂಡಿದೆ. ಭಾರತದ ನಿಜವಾದ ಆತ್ಮದಂತಿರುವ ಹಳ್ಳಿಗಳಿಗೆ ಮತ್ತು ಅಲ್ಲಿನ ಜನರ ಎದೆಯೊಳಕ್ಕೆ ಈ ಕ್ರೌರ್ಯದ ಹಾಗೂ ಅಪನಂಬಿಕೆಯ ವಿಷವನ್ನು ತುಂಬಿದವರು ಯಾರು? ಇದು ಉತ್ತರವಿಲ್ಲದ ಪ್ರಶ್ನೆ. ನಾನು ಹಳ್ಳಿಗಾಡಿನ ಸಂಸ್ಕೃತಿಯಿಂದ ಬಂದವನು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಕಾಲ ಒಂದಿತ್ತು ಆದರೆ, ಈಗ ಆ ಮಾತನ್ನು ಹೇಳಲು ನನಗೀಗ ಹಿಂಜರಿಕೆಯಾಗುತ್ತಿದೆ. ಇಂದಿನ ಹಳ್ಳಿಗಳು ಅಪನಂಬಿಕೆ, ದ್ವೇಷ ಮತ್ತು ದಳ್ಳುರಿಗಳ ಕೊಂಪೆಯಾಗಿವೆ. ನಗರ ಸಂಸ್ಕೃತಿಯ ಕಾಡ್ಗಿಚ್ಚಿನಿಂದ ಅರಬೆಂದ ನಿತ್ಯ ಹರಿದ್ವರ್ಣದ ಕಾಡಿನಂತೆ ಗೋಚರಿಸುತ್ತಿವೆ.
1981 ರಲ್ಲಿ ತಮಿಳುಭಾಷೆಯಲ್ಲಿ ಬಿಡುಗಡೆಯಾದ ಕೆ.ಬಾಲಚಂದರ್ ರವರ “ ತಣ್ಣೀರ್, ತಣ್ಣೀರ್” ಸಿನಿಮಾವನ್ನು ನಾನು ಪ್ರಥಮವಾಗಿ ನೋಡಿದ್ದು ತಿರುಪತಿಯ ಚಿತ್ರಮಂದಿರದಲ್ಲಿ.ಆ ಚಿತ್ರದ ನಾಯಕಿ ಹೇಳುವ ಒಂದು ಡೈಲಾಗ್ ಇವೊತ್ತಿಗೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡು ಬಿಟ್ಟಿದೆ.
ಒಬ್ಬ ಖೈದಿ ರಾತ್ರೋ ರಾತ್ರಿ ಜೈಲಿನಿಂದ ತಪ್ಪಿಸಿಕೊಂಡು ನಡೆಯುತ್ತಾ ಅನೇಕ ಹಳ್ಳಿಗಳನ್ನು ದಾಟುತ್ತಾ ಹೋಗುತ್ತಿರುತ್ತಾನೆ. ಮಧ್ಯಾಹ್ನದ ವೇಳೆಗೆ ಹಸಿವು ಮತ್ತು ನೀರಡಿಕೆಯಿಂದ ಒಂದು ಹಳ್ಳಿಯನ್ನು ತಲುಪುತ್ತಾನೆ. ಆ ಹಳ್ಳಿ ಒಂದು ಕುಗ್ರಾಮ. ಕುಡಿಯುವ ನೀರಿಗಾಗಿ ಎಂಟತ್ತು ಕಿಲೊಮೀಟರ್ ದೂರ ಹೋಗಿ ಮಹಿಳೆಯರು ನೀರು ಹೊತ್ತು ತರಬೇಕಾದ ಸ್ಥಿತಿ.  ಯಾರೊಬ್ಬರೂ ಅವನಿಗೆ ನೀರು ಕೊಡಲು ನಿರಾಕರಿಸುತ್ತಾರೆ. ನಿರಾಸೆಯಿಂದ ಹಳ್ಳಿಯಿಂದ ಹೋಗುತ್ತಿರುವ  ಸಮಯದಲ್ಲಿ ಖೈದಿಗೆ ಆಗ ತಾನೆ  ಉರಿಬಿಸಿನಲ್ಲಿ ತಲೆಯ ಮೇಲೆ ಹಾಗೂ ಸೊಂಟದಲ್ಲಿ ನೀರು ಹೊತ್ತು ಹಳ್ಳಿಗೆ ಬರುತ್ತಿರುವ ಹೆಣ್ಣುಮಗಳು ಕಾಣುತ್ತಾಳೆ. ಅವಳ ಬಳಿ ತೆರಳಿ ನೀಗಿಗಾಗಿ ಕೈಯೊಡ್ಡಿದ್ದಾಗ ಆಕೆ ಹೇಳುವ ಮಾತಿದು, “ ಅಣ್ಣಯ್ಯಾ, ಈ ಊರಿನಲ್ಲಿ ನೀನು ಹೆಂಗಸರ ಶೀಲ ಬೇಕಾದರೆ ಕೇಳು ಕೊಟ್ಟುಬಿಡುತ್ತಾರೆ ಆದರೆ, ನೀರು ಕೊಡಲಾರರು” ಒಂದು ಹಳ್ಳಿಯ ಕುಡಿಯುವ ನೀರಿನ ಅಭಾವ ಕುರಿತು ಕಟು ವಾಸ್ತವ ಸಂಗತಿಯನ್ನು ಹೀಗೂ ಹೇಳಬಹುದೆ ಎಂದು ನಮಗೆ ಆಶ್ಚರ್ಯವಾಗುತ್ತದೆ. ನಂತರ  ಅನುಕಂಪದಿಂದ ಆತನ ಬೊಗಸೆಗೆ ನೀರು ಸುರಿಯುತ್ತಾಳೆ, ಆತನ ದಾಹವನ್ನು ನೀಗಿಸುತ್ತಾಳೆ.

ಆ ಹೆಣ್ಣುಮಗಳ ಅಂತಃಕರಣ ಮತ್ತು ಪ್ರೀತಿಗೆ ಮನಸೋತ ಖೈದಿ, ನೀರಿನ ಅಭಾವ ಕುರಿತು  ಆಕೆಯನ್ನು ಕೇಳಿದಾಗ, ಎಂಟತ್ತು ಕಿ.ಮಿ.ದೂರದ ನಾಲೆಯನ್ನು ಹಳ್ಳಿಯತ್ತ ತಿರುಗಿಸಲು  ಊರಿನ ಗಂಡಸರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮನಸ್ಸಿಲ್ಲ ಎಂಬ ಸಂಗತಿ ನಾಯಕಿಯಿಂದ ತಿಳಿಯುತ್ತದೆ. ತನ್ನ ಹಿನ್ನಲೆಯನ್ನು ಹೇಳಿಕೊಳ್ಳದ ಖೈದಿ, ಆ ಹೆಣ್ಣುಮಗಳನ್ನು ತಂಗಿಯೆಂದು ಭಾವಿಸಿ, ಆಕೆಯ ಆಶ್ರಯದಲ್ಲಿ ಉಳಿದುಕೊಂಡು ಏಕಾಂಗಿಯಾಗಿ ನಾಲುವೆ ತೋಡಿ ಊರಿಗೆ ನೀರು ಹರಿಸಲು ಪ್ರಯತ್ನಿಸುತ್ತಾನೆ. ಒಂದು ಬೊಗಸೆ ನೀರು ಮತ್ತು ಹೆಣ್ಣಿನ ಅಂತಃಕರಣ ಹೇಗೆ ಒಬ್ಬ ಖೈದಿಯ ಮನಪರಿವರ್ತನೆ ಮಾಡಬಲ್ಲದು ಎಂಬುದಕ್ಕೆ ಹಾಗೂ ಹಳ್ಳಿಗಳ ನಿಜವಾದ ಮಾನವೀಯ ಮುಖಕ್ಕೆ ಈ ಚಿತ್ರ ಇವೊತ್ತಿಗೂ ಸಾಕ್ಷಿಯಾಗಿದೆ. ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸರಿತಾಳ ಪಾತ್ರ ಆಕೆ ನಿಜಕ್ಕೂ ಭಾರತದ ಶ್ರೇಷ್ಠ ಅಭಿನೇತ್ರಿ ಎಂದು ಸಾಬೀತು ಪಡಿಸಿದೆ,
ನಾನು ಮತ್ತು ನನ್ನ ತಲೆಮಾರಿನ ಅನೇಕ ಬರಹಗಾರರು ಹುಟ್ಟಿ ಬೆಳೆದ ಹಳ್ಳಿಗಳು ಹೀಗೆಯೇ ಇದ್ದವು. ಎಲ್ಲರ ಮನೆಯ ಮುಂದೆ ಜಗುಲಿಗಳಿದ್ದವು. ಊರಿಗೆ ಬರುತ್ತಿದ್ದ ಮಡಿಕೆ ಮಾರುವವರುಮ ಕಸಬರಿಕೆ ಮಾರುವವರು, ಪಾತ್ರೆ ಹಾಗೂ ಬಟ್ಟೆಗಳನ್ನು ತಲೆಯ ಮೇಲೆ ಹೊತ್ತು ಮಾರುವವರು ನಮ್ಮ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಬಾಯಾರಿಯಾದಾಗ ಮಜ್ಜಿಗೆ, ಹಸಿವಾಗಿದ್ದಾಗ ಊಟ ಎಲ್ಲರ ಮನೆಗಳಲ್ಲಿ ಅವರಿಗೆ ದೊರೆಯುತ್ತಿತ್ತು. ಎಂತಹ ಬಡರೈತನ ಮನೆಯಲ್ಲಿಯೂ ಸಹ ಯಾರಾದರೂ ಬಂದರೆ ಇರಲಿ ಎಂದು ಅಗತ್ಯಕ್ಕಿಂತ ಎರಡು ಅಥವಾ ಮೂರು ಮುದ್ದೆಗಳನ್ನು ಹೆಚ್ಚಿಗೆ ಮಾಡಿ ಇಡುತ್ತಿದ್ದರು.
ಇನ್ನು, ಹಳ್ಳಿಗಾಡಿನ ಹೆಣ್ಣು ಮಕ್ಕಳಿಗೆ ಸೂಜಿ, ದಾರ, ಕರಿಮಣಿ, ಹೇರ್ ಪಿನ್, ಪೌಡರ್ ಇತ್ಯಾದಿಗಳನ್ನು  ಸೂಟ್ ಕೇಸ್ ನಂತಹ ಪೆಟ್ಟಿಗೆಯಲ್ಲಿ ಇಟ್ಟುಕೊಂಡು, ಕಂಕುಳಲ್ಲಿ ಮಗು ಇಟ್ಟುಕೊಂಡು ಬರುತ್ತಿದ್ದ ಹೆಣ್ಣುಮಕ್ಕಳಿಗೆ ನಮ್ಮ ಅವ್ವಂದಿರು ಅಥವಾ ಅಕ್ಕ ತಂಗಿಯರು ಮಧ್ಯಾಹ್ನದ ವೇಳೆ ಅವರಿಗೆ ಊಟ ಹಾಕಿ, ಮಗುವಿಗೆ ಕುಡಿಯಲು ಹಾಲು ಒದಗಿಸುತ್ತಿದ್ದರು.
ಎಂತಹ ಬಡತನದ ನಡುವೆಯೂ ಸಹ ಬಡವರು ತಮ್ಮ ವೃತ್ತಿಯನ್ನು ಬಿಡುತ್ತಿರಲಿಲ್ಲ. ಹಳ್ಳಿಗೆ ಹೋದರೆ, ಊಟಕ್ಕೆ ತೊಂದರೆಯಿಲ್ಲ ಎಂಬ ಭರವಸೆ ಅವರ ಬದುಕಿಗೆ ಬೆಳಕಿನ ದಾರಿಯಂತೆ ತೋರುತ್ತಿತ್ತು. ಹುಣಸೆ ಬೀಜ, ಬೇವು ಮತ್ತು ಹೊಂಗೆ ಬೀಜ ಕಲೆ ಹಾಕಲು ಬರುತ್ತಿದ್ದ ಮುಸ್ಲಿಂ ಮಂದಿ ಊರಿನ ಜನತೆಗೆಲಾ ಸಾಬಣ್ಣ ಆಗಿರುತ್ತಿದ್ದರು.ಅವರ ಹೆಣ್ಣು ಮಕ್ಕಳ ಮದುವೆಗೆ ಅಕ್ಕಿ, ತೆಂಗಿನ ಕಾಯಿ, ಬಾಳೆಹಣ್ಣು, ಆರ್ಥಕ ಸಹಾಯ ಇವೆಲ್ಲವೂ  ಹಳ್ಳಿಗಳಿಂದ ಧಾರಾಳವಾಗಿ ಸಿಗುತ್ತಿತ್ತು. ಅಲ್ಲಿನ ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಅವರೂ ಸಹ  ನಮ್ಮಂತೆ ಮನನುಷ್ಯರು ಎಂಬ ಉದಾತ್ತ ಮಾನವೀಯ ಪ್ರಜ್ಞೆ ಅಶಿಕ್ಷಿತರಾದ ಹಳ್ಳಿಗರಲ್ಲಿ ಮನೆ ಮಾಡಿತ್ತು.

ಈಗ ಅಂತಹ ಪ್ರಜ್ಞೆಯನ್ನು ಮತ್ತು ಮನುಷ್ಯ ಸಂಬಂಧ ಕುರಿತಾದ ನಂಬಿಕೆಯನ್ನು ಎಲ್ಲಿ ಹುಡುಕಿ ತರೋಣ. ಊರುಗಳಲ್ಲಿದ್ದ ಜಗುಲಿ ಮನೆ ಮಾಯವಾಗಿವೆ, ಆರ್.ಸಿ.ಸಿ. ಮನೆ ಎದ್ದು ನಿಂತಿವೆ. ಅಪರಿಚತರು, ಭಿಕ್ಷುಕರು, ವ್ಯಾಪಾರಿಗಳು ರಾತ್ರಿಯ ವೇಳೆ ತಂಗುತ್ತಿದ್ದ ದೇವಸ್ಥಾನದ ಆವರಣ, ಶಾಲೆಗಳ ಹೊರಜಗುಲಿ ಇವುಗಳಿಗೆ ಕಾಂಪೌಂಡ್ ನಿರ್ಮಿಸಿ ಬೀಗ ಜಡಿಯಲಾಗಿದೆ. ಈ ಬೀಗ ಒಂದರ್ಥದಲ್ಲಿ ನಮ್ಮ ಮನಸ್ಸಿಗೆ ನಾವು ಹಾಕಿಕೊಂಡಿರುವ ಬೀಗಗಳಲ್ಲದೆ ಬೇರೇನೂ ಅಲ್ಲ,

ಶನಿವಾರ, ಏಪ್ರಿಲ್ 4, 2020

ಭಾರತಕ್ಕೆ ಬೇಕಾಗಿರುವ ಸಾಕ್ರೇಟಿಸ್ ನ ಸಂತತಿ



ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದ ನೇತಾರನಿಗೆ ಸುಗಮ ಆಡಳಿತಕ್ಕೆ ಬೇಕಾದ ಸೂತ್ರಗಳೇನು? ಎಂದು ಕೇಳಿದರೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜನತೆಯ ಶ್ರೇಯೋಭಿವೃದ್ಧಿ ಕುರಿತ ಬದ್ಧತೆ ಇವುಗಳು ಮಾತ್ರ ಎಂಬುವುದು ಎಲ್ಲಾ ಪ್ರಜ್ಞಾವಂತ ನಾಗರೀಕರ ನಂಬಿಕೆಯಾಗಿತ್ತು.

ಆದರೆ, ಈಗ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಎಂಬ ಮಹಾಶಯ ಹೊಸ ಸೂತ್ರವನ್ನು ಕಂಡು ಹಿಡಿದಿದ್ದಾರೆ. ಜನತೆಯನ್ನು ಮುಠಾಳರನ್ನಾಗಿ ಮಾಡಿದರೆ, ಅವರು ಏನನ್ನೂ ಪ್ರಶ್ನಿಸಿದರೆ
 ಪ್ರಭುತ್ವ ಮತ್ತು ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿ ತೋರಿಸಿದ್ದಾರೆ, ಅವರ ಈ ಸಂಶೋಧನೆಗೆ 2020 ರ ಸಾಲಿನ ನೋಬೆಲ್ ಪ್ರಶಸ್ತಿ ಸಿಗಲೇಬೇಕು. ( ಸಿಕ್ಕರೂ ಆಶ್ಚರ್ಯವಿಲ್ಲ)

ಜಗತ್ತನ್ನು ಬಾಧಿಸುತ್ತಿರುವ ಕೊರೊನಾ ವೈರಸ್ ಕುರಿತಂತೆ ಎಲ್ಲಾ ರಾಷ್ಟ್ರಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಹೋರಾಟ ಮಾಡುತ್ತಿದ್ದರೆ, ಭಾರತದಲ್ಲಿ ತಣಿಗೆ, ಚೊಂಬು, ತಟ್ಟೆ, ಲೋಟ, ಗಂಟೆ ಜಾಗಟೆಗಳ ಮೂಲಕ ಬೀದಿಗಿಳಿದು ಹೋರಾಟ ಮಾಡಲು ಕರೆ ನೀಡಿದ್ದಾಯಿತು. ಈಗ ಮೊಂಬತ್ತಿ ಬೆಳಗಿರಿ ಎಂಬ ಕರೆ ನೀಡಲಾಗಿದೆ.  ದೀಪದ ಬೆಳಕಿಗೆ ವೈರಸ್ ಗಳು ಆಕರ್ಷಿತವಾಗಿ ಸುಟ್ಟು ಹೋಗುತ್ತವೆ ಎಂದು ಕರ್ನಾಟಕ ಬಿ,ಜೆ,ಪಿ. ಶಾಸಕ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾನೆ, ಈತ ಹಿಂದೆ ಕರ್ನಾಟಕದ ಆರೋಗ್ಯ ಸಚಿವನಾಗಿದ್ದ ಎಂಬುದು ನಮ್ಮ ದುರಂತ, ( ಕೆ.ರಾಮದಾಸ್) ಇದಕ್ಕಿಂತ ದುರಂತೆವೆಂದರೆ, ಹೆಚ್.ಆರ್. ರಂಗನಾಥ್ ಎಂಬ ಮಾನಸಿಕ ಅಸ್ವಸ್ಥನಾದ ಪತ್ರಕರ್ತನೊಬ್ಬ ತನ್ನ ಚಾನಲ್ ನಲ್ಲಿ ( ಪಬ್ಲಿಕ್ ಟಿ.ವಿ) ನರೇಂದ್ರ ಮೋದಿಯ ದೀಪದ ರಜಸ್ಯ ಎಂಬ ಹೆಸರಿನಲ್ಲಿ ಮುಖಹೇಡಿ ಜ್ಯೋತಿಷಿಗಳನ್ನು ಕೂರಿಸಿಕೊಂಡು ತೌಡು ಕುಟ್ಟುತ್ತಿದ್ದಾನೆ.

ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಕ್ರಿಶ್ತಪೂರ್ವ 399 ರಲ್ಲಿ ಬದುಕಿದ್ದ ಹಾಗೂ ತನ್ನ ನಿಷ್ಟುರ ಸತ್ಯಗಳ ಮೂಲಕ ಜಗತ್ತಿಗೆ ರಾಜಕೀಯ ಮತ್ತು ತತ್ವಶಾಸ್ತ್ರಗಳ ಸಿದ್ಧಾಂತಗಳನ್ನು ನೀಡಿದ ಗ್ರೀಕ್ ನ ಸಾಕ್ರೇಟಿಸ್ ಎಂಬ ತತ್ವಜ್ಞಾನಿ.
1969 ರಿಂದ ಕಥೆ, ಕಾದಂಬರಿ ಓದುತ್ತಿದ್ದ ನಾನು 1976 ರಲ್ಲಿ ಪ್ರಥಮ ಬಾರಿಗೆ ಎ.ಎನ್. ಮೂರ್ತಿರಾಯರ “ ಸಾಕ್ರೇಟಿಸನ ಕೊನೆಯ ದಿನಗಳು” ಎಂಬ ಕೃತಿಯನ್ನು ಓದಿದೆ. ನನ್ನ ಬದುಕಿನಲ್ಲಿ ನಾನು ಓದಿದ ಮೊದಲ ವೈಚಾರಿಕ ಕೃತಿ ಅದು. ಅದೇ ವರ್ಷ ನಾನು ಓದುತ್ತಿದ್ದ ಬೆಸಗರಹಳ್ಳಿಯ ಸರ್ಕಾರಿ ಪಿ.ಯು.ಸಿ. ಕಾಲೇಜಿನ ಇಕ್ಷು ಸುಧಾ ಎಂಬ ವಾರ್ಷಿಕ ವಿಶೇಷಾಂಕಕ್ಕೆ ಇದೇ ಸಾಕ್ರೇಟಿಸ್ ಕುರಿತು ಜೀವನದಲ್ಲಿ ಪ್ರಥಮ ಲೇಖನವನ್ನು ಬರೆದೆ.

ಸದಾ ಗ್ರೀಕ್ ನ ರಸ್ತೆಗಳಲ್ಲಿ ನಿಂತು ಯುವಕರನ್ನು ಪ್ರಶ್ನೆಗಳ ಮೂಲಕ ಪ್ರಚೋದಿಸುವ ಜೊತೆಗೆ ತಪ್ಪುದಾರಿಗೆ ಎಳೆಯುತ್ತಿದ್ದಾನೆ ಎಂದು ಆರೋಪಿಸಿ, ಅಂದಿನ ಗ್ರೀಕ್ ನ ಪ್ರಭುತ್ವ ಸಾಕ್ರೇಟಿಸ್ನನ್ನು ನ್ಯಾಯಾಲಯಕ್ಕೆ ಎಳೆಯಿತು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕ್ಷಮೆ ಕೋರಲು ನಿರಾಕರಿಸಿದ ಸಾಕ್ರೇಟಿಸ್ ಗೆ ನ್ಯಾಯಾಲಯ ವಿಷ ಕುಡಿಸಿ ಸಾಯಿಸುವ ಮರಣ ದಂಡನೆ ವಿಧಿಸಿದಾಗ ಎದೆಗುಂದದ ಸಾಕ್ರೇಟೀಸ್, “ ನಾನು ಸತ್ಯವನ್ನು ಹೇಳಿ ಸಾಯಲು ಹೊರಟಿದ್ದೇನೆ. ನೀವು ಸುಳ್ಳುಗಳನ್ನು ಸಮರ್ಥಿಸಿಕೊಂಡು ಬದುಕಲು ಹೊರಟಿದ್ದೀರಿ” ಇವುಗಳನ್ನು ಶ್ರೇಷ್ಠ ಮಾರ್ಗ ಯಾವುದು ಎಂಬುದನ್ನು ಎದೆ ಮುಟ್ಟಿ ಪರೀಕ್ಷಿಸಿಕೊಳ್ಳಿ” ಎಂದು ಪ್ರಭತ್ವಕ್ಕೆ ನೇರ ಸವಾಲನ್ನು ಎಸೆದ.

ಸಾಕ್ರೇಟಿಸ್ ನ ಶಿಚ್ಯರಲ್ಲಿ ಪ್ಲೇಟೊ ಪ್ರಮುಖನಾದವನು. ( ರಾಜಕೀಯ ಶಾಸ್ತ್ರದ ಪಿತಾ ಮಹಾ ಎಂದು ಕರೆಯುವ  ಅರಿಸ್ಟಾಟಲ್ ಪ್ಲೇಟೊನ ಶಿಷ್ಯ)  ತನ್ನ ಗುರುವನ್ನು ಕ್ಷಮೆ ಕೋರಲು ಒತ್ತಾಯಿಸಿದಾಗ, ಶಿಷ್ಯರ ಒತ್ತಾಯವನ್ನು ನಿರಾಕರಿಸಿ, ಜೈಲು ಅಧಿಕಾರಿ ತಂದಿತ್ತ ವಿಷದ ಬಟ್ಟಲನ್ನು ನಗುತ್ತಾ ಕುಡಿದುಬಿಟ್ಟ. ಶರೀರಕ್ಕೆ ವಿಷ ಏರುವವರೆಗೂ ಮಾತನಾಡುತ್ತಲೇ ಇದ್ದ ಸಾಕ್ರೇಟಿಸ್, ಜೈಲಿನ ಅಧಿಕಾರಿಯ ಕುಟುಂಬದ ಬಗ್ಗೆ ವಿಚಾರಿಸಿದ. ನಂತರ ಶಿಷ್ಯರತ್ತ ತಿರುಗಿ ಸತ್ಯ ಎಷ್ಟೇ ಕಠೋರವಾಗಿರಲಿ ಅಥವಾ ಕಹಿಯಾಗಿರಲಿ ಅದರಿಂದ ದೂರ ಸರಿಯಬೇಡಿ ಎಂದು ತನ್ನ ಕೊನೆಯ ಸಂದೇಶವನ್ನು ಹೇಳಿದ.

ಸತ್ಯಕ್ಕಿಂತ, ಧರ್ಮ, ಜಾತಿ, ಮುಠಾಳತನ ಮತ್ತು ಅವಿವೇಕತನ ಅಧಿಕವಾಗಿರುವ ಇಂದಿನ ಭಾರತಕ್ಕೆ ತುರ್ತಾಗಿ ಸಾಕ್ರೇಟಿಸ್ ನ ಸಣತತಿ ಬೇಕಾಗಿದೆ.

ಉಳ್ಳವರ ಭಾರತದಲ್ಲಿ ನರಳುತ್ತಿರುವ ಬಡ ಭಾರತ


ನಮ್ಮ ನಡುವಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ಮಾನವೀಯ ಮುಖದ ಹೃದಯವಂತ ಅಮಾರ್ತ್ಯ ಸೇನ್ ದಶಕದ ಹಿಂದೆ ಭಾರತದ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಾ, ಭಾರತದಲ್ಲಿ ಎರಡು ಭಾರತಗಳಿವೆ, ಒಂದು ಉಳ್ಳವರ ಭಾರತ, ಇನ್ನೊಂದು ನರಳುವವರ ಭಾರತ ಎಂದು ಹೇಳಿದ್ದರು. ಅವರ ಮಾತು ಇಂದಿನ ಭಾರತಕ್ಕೆ ಯಾವುದೇ ಅನುಮಾನವಿಲ್ಲದೆ ಅನ್ವಯಿಸಬಹುದಾಗಿದೆ.
ಜಗತ್ತಿನಾದ್ಯಂತ ಸುನಾಮಿಯಂತೆ ಅಪ್ಪಳಿಸಿರುವ ಕೋವಿಡ್-19 ಅಥವಾ ಕೊರನಾ ವೈರಸ್ ಹಾವಳಿಗೆ ಇದೀಗ ಭಾರತದಲ್ಲಿ ಶ್ರೀಮಂತರು ಅಥವಾ ಮಧ್ಯಮ ವರ್ಗದವರಿಗಿಂತ ಬಡವರನ್ನು ಬಲಿಕೊಡಲಾಗುತ್ತದೆ. ಒಂದು ದೇಶದ ಪ್ರಧಾನಿಯಾದ ವ್ಯಕ್ತಿಗೆ ದೇಶದ ಆರ್ಥಿಕ ಚಟುವಟಿಕೆಗಳ ಬಗ್ಗೆಯಾಗಲಿ, ದೇಶದ ಬಹುದೊಡ್ಡ ಅಸಂಘಟಿತ ವಲಯವಾದ ಕಾರ್ಮಿಕರ ಕುರಿತಂತೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮಧ್ಯ ಚೀನಾದ ವುಹಾನ್ ನಗರದಲ್ಲಿ ಅತಿ ದೊಡ್ಡ ಕಸಾಯಿಖಾನೆ ಕೇಂದ್ರಗಳಿದ್ದು ನಗರದಿಂದ ಪ್ರಥಮ ಬಾರಿಗೆ ಕಳೆದ ವರ್ಷದ ಕೊನೆಯಲ್ಲಿ ವುಹಾನ್ ನಗರದಲ್ಲಿ ಕೊರನಾ ವೈರಸ್ ಹಾವಳಿ ಕಾಣಿಸಿಕೊಂಡಿತು. ಅದನ್ನು ಅಲ್ಲಿಯ ಸರ್ಕಾರ ಸಮರ್ಥವಾಗಿ ಹಿಮ್ಮೆಟ್ಟಿಸಿತು. ಜೊತೆಗೆ ಅಲ್ಲಿದ್ದ ವಿದೇಶಿ ಪ್ರಜೆಗಳ ಮೂಲಕ ಜಗತ್ತಿನ ಇತರೆ ರಾಷ್ಟ್ರಗಳಿಗೂ ಹರಡಿ ಈಗ ಚೀನಾ ಕಣ್ಮುಚ್ಚಿ ಕುಳಿತಿದೆ.
ವೈರಸ್ ಬಗ್ಗೆ ಹಾಗೂ ಅವರ ಗುಣ ಲಕ್ಷಣಗಳ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ವೆಬ್ ಸೈಟ್ ನಲ್ಲಿ ವಿವರವಾಗಿ ಪ್ರಕಟಿಸಿದ್ದರೂ ಕೂಡ ಇಲ್ಲಿನ ಆಳುವ ವರ್ಗ ಪುಂಖಾನುಪುಂಖವಾಗಿ ಕಟ್ಟು ಕಥೆಯನ್ನು ಹುಟ್ಟು ಹಾಕಿ ಜನತೆಯಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟು ಹಾಕಿತು.
ಬ್ಯಾಕ್ಟಿರಿಯಾಗಿಂತ ಅತಿ ಸಣ್ಣ ಹಾಗೂ ಸೂಕ್ಮವಾಗಿರುವ ವೈರಾಣಣು ಜೀವಕೋಶಗಳ ನೆರವಿಲ್ಲದೆ ವಾತಾವರಣದಲ್ಲಿ ಹೆಚ್ಚು ಕಾಲ ಬದುಕಿರುವುದಿಲ್ಲ. ಯಾವುದೇ ವಸ್ತುವಿನ ಮೇಲೆ ಇದ್ದರೂ ಸಹ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಇದು ಸಾಯುತ್ತದೆ ಎಂದು ವಿಶ್ಸಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಬೆಂಗಳೂರಿನ ಮಾನಸಿಕ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಗಿರೀಶ್ ಉಪಾಧ್ಯಾಯ ವಿವರಿಸಿದ್ದಾರೆ. ವೈರಾಣು ಬಾಯಿ ಅಥವಾ ಮೂಗಿನ ಉಸಿರಾಟದ ಮೂಲಕ ಮನುಷ್ಯನೊಳಗೆ ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ನಿರ್ಧಿಷ್ಟ ಅಂತರ ಕಾಪಾಡಿಕೊಳ್ಳಬೇಕು ಮತ್ತು ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಮುನ್ನಚ್ಚೆರಿಕೆಯ ಕ್ರಮಗಳನ್ನು ವಿವರಿಸಿದ್ದಾರೆ.
ಭಾರತಕ್ಕೆ ವೈರಾಣು ಪ್ರವೇಶ ಪಡೆದದ್ದು ವಿದೇಶಗಳಲ್ಲಿದ್ದು ಭಾರತಕ್ಕೆ ಹಿಂತಿರುಗಿದ ಭಾರತೀಯರಿಂದ, ಕುರಿತಂತೆ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಯನ್ನು ಕಳೆದ ಜನವರಿಯಲ್ಲಿ ಜಾರಿಗೆ ತರಬಹುದಿತ್ತು. ಆದರೆ, ಹೆದರಿದವರ ಮೇಲೆ ಸತ್ತ ಹಾವನ್ನು ಎಸೆದರು ಎಂಬ ಗಾದೆಯಂತೆ ಸಿರಿವಂತರನ್ನು ನಿಯಂತ್ರಿಸಲಾರದ ಪ್ರಧಾನಿಯೆಂಬ ಮಹಾನ್ ನಟರು ದೇಶದ ಎಲ್ಲಾ ಪ್ರಜೆಗಳ ಮೇಲೆ ಬರೆ ಎಳೆದರು.
ಶ್ರೀಮಂತರು ಮತ್ತು ಅವರ ಮಕ್ಕಳನ್ನು ವಿದೇಶದಿಂದ ಕರೆತರಲು ವಿಮಾನ ಯಾನ, ವಿಶೇಷ ವಿಮಾನ ವ್ಯವಸ್ಥೆ ಮಾಡಿದ ಪ್ರಧಾನಿಗೆ ದೇಶಾದ್ಯಂತ ಜಾರಿಗೆ ತಂದ ಲಾಕ್ ಡೌನ್ ವ್ಯವಸ್ಥೆಗೆ ಮುನ್ನ ದೇಶದ ಮಹಾನ್ ನಗರಗಳಲ್ಲಿ ಕಟ್ಟಡ, ರಸ್ತೆ, ಹೋಟೆಲ್ ಇತ್ಯಾದಿ ವಲಯಗಳಲ್ಲಿ ದುಡಿಯುತ್ತಿರುವ ಸೂರಿಲ್ಲದ ಬಡ ಕಾರ್ಮಿಕರಿಗೆ ಕನಿಷ್ಠ ರೈಲುಗಳ ಮೂಲಕ ಅವರನ್ನು ಊರಿಗೆ ತಲುಪಿಸುವ ಯೋಚನೆ ಹೊಳೆಯಲಿಲ್ಲ.
ಎಂತಹ ಅಯೋಗ್ಯರು ಮತ್ತು ಮುಠಾಳರು ಕೇಂದ್ರ ಸಚಿವ ಸಂಪುಟದಲ್ಲಿ ಇದ್ದಾರೆ ಎಂದರೆ, ಹಳೆಯ ರಾಮಾಯಣ, ಮಹಾಭಾರತ ಧಾರವಾಹಿಗಳನ್ನು ದೂರದರ್ಶನದಲ್ಲಿ ಮರು ಪ್ರಸಾರ ಮಾಡುತ್ತಿದ್ದೇವೆ ನೋಡಿ ಎಂದು ಪ್ರಕಾಶ್ ಜಾವೇದ್ಡ್ಕರ್ ಎಂಬ ಸಚಿವ ಹೇಳಿಕೆ ನೀಡುತ್ತಾನೆ. ಅವಿವೇಕಿಗೆ ವಲಸೆ ಕಾರ್ಮಿಕರು ಬದುಕುವ ಸೂರಿನಡಿ, ವಿದ್ಯುತ್ ಅಥವಾ ಟಿ.ವಿ. ಇಲ್ಲ ಎಂಬ ಕನಿಷ್ಠ ವಿವೇಕವೂ ಇಲ್ಲ.. ದೇಹಲಿಯಲ್ಲೇ ಇರುವ ಪ್ರಧಾನಿ ಮತ್ತು ಅವರ ನಲವತ್ತು ಮಂದಿ ಸಚಿವ ಸಂಪುಟದ ಮೂರ್ಖ ಸಚಿವರು ದೆಹಲಿಯ ಕಾಶ್ಮೀರಿ ಗೇಟ್, ಜಾಮೀಯ ಮಸೀದಿ ಪ್ರದೇಶ, ಕರೋಲ್ ಬಾಗ್ ಹಾಗೂ ಕನಾಟ್ ಸರ್ಕಲ್ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಂಚರಿಸಿದ್ದರೆ, ವಲಸೆ ಕಾರ್ಮಿಕರು ಭೂಮಿಯನ್ನು ಹಾಸಿಗೆ ಮಾಡಿಕೊಂಡು, ಆಕಾಶವನ್ನು ಹೊದಿಕೆಯನ್ನಾಗಿಸಿಕೊಂಡು ಮಲಗಿರುವ ದೃಶ್ಯ ಕಾಣುತ್ತಿತ್ತು. ಬಡವರ ಕಷ್ಟ ಅರಿವಾಗುತ್ತಿತ್ತು. ದೇಶದ ಬಹುತೇಕ ಮಹಾನಗರಗಳಲ್ಲಿ ಲಕ್ಷಾಂತರ ಮಂದಿ ಇಂತಹ ದುಸ್ಥಿತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.ಇಂತಹವರು, ಹಣ್ಣು, ತರಕಾರಿ, ಸೊಪ್ಪು ಮಾರುವವರು ಮತ್ತು ರೈತರ ಬವಣೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ಪೊಲೀಸರಿಗೆ ಅಧಿಕಾರ ನೀಡಲಾಯಿತು.
ಕೈಯಲ್ಲಿ ಸುತ್ತಿಗೆ ಹಿಡಿದವನಿಗೆ ಜಗತ್ತಿನಲ್ಲಿರುವ ವಸ್ತುಗಳು ಮೊಳೆಯಂತೆ ಕಾಣುತ್ತವೆ ಎಂಬ ಮಾತಿನಂತೆ ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಎಲ್ಲರ ಮೇಲೆ ಬೀಸುತ್ತಾ, ತಮ್ಮ ರಾಕ್ಷಸತನವನ್ನು ಮೆರೆಯುತ್ತಿದ್ದಾರೆ. ಮೈಸೂರಿನ ಚೆಲುವಾಂಬ ಎಂಬ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆ ಹಾಗೂ ಕೆ.ಆರ್. ಆಸ್ಪತ್ರೆ ಬಳಿ ರೋಗಿಗಳಿಗೆ ತಿನ್ನಲು ಹಣ್ಣುಗಳು ದೊರೆಯುತ್ತಿಲ್ಲ. ಕುಡಿಯಲು ಒಂದು ಲೋಟ ಬಿಸಿ ಹಾಲು ಅಥವಾ ಬಿಸಿ ಬ್ರೆಡ್ ಸಿಗುತ್ತಿಲ್ಲ. ಮೈಸೂರಿನಲ್ಲಿ ಒಂದೂವರೆ ಸಾವಿರ ವಿದೇಶಿ ಪ್ರವಾಸಿಗಳು ಉಳಿದುಕೊಂಡಿದ್ದು ಅವರು ಉಪಯೋಗಿಸುವ ಲಘು ಆಹಾರವಾದ ಹಣ್ಣು, ಬ್ರೆಡ್, ಕೇಕ್, ಬಿಸ್ಕೆಟ್, ಇತ್ಯಾದಿ ವಸ್ತುಗಳಿಗಾಗಿ ಬೀದಿ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ.. ಇದು ವ್ಯಸ್ಥೆಯ ಕ್ರೌರ್ಯವಲ್ಲದೆ ಇನ್ನೇನು?
ರೋಗ ನಿಯಂತ್ರಣಕ್ಕೆ ಸಭೆ, ಸಮಾರಂಭ, ಸಿನಿಮಾ ಹಾಲ್, ಬೃಹತ್ ಮಾಲ್ ಗಳನ್ನು ಮುಚ್ಚಿಸಿ, ನಿಗದಿತ ಮಾರ್ಗದಲ್ಲಿ ತಪಾಸಣೆ ಮಾಡಿ ಸ್ಥಳಿಯರ ಓಡಾಟಕ್ಕೆ ಅನುವು ಮಾಡಿಕೊಡಬಹುದಿತ್ತು. ಅದೇ ರೀತಿ ದಿನಸಿ ಅಂಗಡಿ ವಸ್ತುಗಳನ್ನು ಸರಬರಾಜು ಮಾಡುವ ಮಂಡಿಗಳಿಗೆ ನಿಗದಿತ ಅವಧಿಗೆ ಅವಕಾಶ ನೀಡಬಹುದಿತ್ತು., ಇವೆಲ್ಲವನ್ನೂ ಬದಿಗೆ ಸರಿಸಿ ತರಕಾರಿ, ಮತ್ತು ಹಣ್ಣಿನ ಮಾರುಕಟ್ಟೆಗಳನ್ನು ಮುಚ್ಚಿಸಿ, ಕಾರ್ಮಿಕರ ಜೊತೆಗೆ ರೈತರಿಗೂ ಸರ್ಕಾರ ಬರೆ ಎಳಿಯಿತು.

ಕೇವಲ ಅವದೂತನಂತೆ ಅವತರಿಸಿ ರೇಡಿಯೊ ಮತ್ತು ಟಿ.ವಿಗಳಲ್ಲಿ ಭಾಷಣ ಮಾಡುವ ಪ್ರಧಾನಿಗೆ ರಾಜ್ಯ ಸರ್ಕಾರಗಳಿಗೆ ಯಾವುದೇ ಆರ್ಥಿಕ ನೆರವು ನೀಡುವ ಮನಸ್ಸಿಲ್ಲ, ಕಳೆದ ಆಗಸ್ಟ್ ನಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ 50 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿದರೆ, ಕೇಂದ್ರದಿಂದ ದೊರೆತ ಪರಿಹಾರ ಎರಡು ಕಂತುಗಳಲ್ಲಿ ( 600+1200) ಬರ ಪರಿಹಾರವೂ ಸೇರಿ ಕೇವಲ 1800 ಕೋಟಿ ರೂಪಾಯಿಗಳು ಮಾತ್ರ. ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಇಪ್ಪತ್ತೈದು ಬಿ.ಜೆ.ಪಿ. ಸಂಸದರು ಬಾಯಿಗೆ ಬಗನಿ ಗೂಟ ಜಡಿದುಕೊಂಡು ಮೌನವಾಗಿದ್ದಾರೆ. ಇಡೀ ದೇಶದಲ್ಲಿ ಕೊರನಾ ಸೊಂಕಿನಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಪರಿಹಾರ ಸಿಕ್ಕಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಂದ್ರ ಸರ್ಕಾರ ಏನೂ ಕೊಡದಿದ್ದರೂ ಚಿಂತೆ ಇಲ್ಲ, ಅವರನ್ನು ಅಧಿಕಾರದ ಕುರ್ಚಿಯಿಂದ ಕದಲಿಸದಿದ್ದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಇಂತಹವರನ್ನ ಆಯ್ಕೆ ಮಾಡಿಕಳಿಸಿದ ಗೋಮೂತ್ರ, ಸಗಣಿ, ಶಂಖ ಮತ್ತು ಜಾಗಟೆಯ ಗಿರಾಕಿಗಳು ಒಮ್ಮೆ ಎದೆಮುಟ್ಟಿಕೊಂಡು ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳಬೇಕು.
ಬಿ.ಎಲ್. ಸಂತೋಷ್ ಎಂಬ ಅವಿವೇಕಿಯೊಬ್ಬನನ್ನು ಬಿ.ಜೆ.ಪಿ. ಪಕ್ಷದ ರಾಷ್ಟ್ರಮಟ್ಟದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈತ ಎಂತಹ ವಿಕೃತ ಮನಸ್ಥಿತಿಯವನು ಎಂದರೆ, ಬೆಂಗಳೂರು ಬಳಿಯ ಅತ್ತಿಬೆಲೆಯ ಗಡಿಯಿಂದ ತಮಿಳುನಾಡಿನ ಚೆನ್ನೈ ನಗರ ಕೇವಲ ನೂರು ಕಿಲೊಮೀಟರ್ ಗಿಂತಲೂ ಕಡಿಮೆಯಿದೆ, ಕಾರ್ಮಿಕರು ನಡೆದುಕೊಂಡು ಹೋಗಲಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾನೆ. ದುರಂಕಾರಿಗೆ ಬೆಂಗಳೂರು-ಚೆನ್ನೈ ನಡುವಿನ ಅಂತರ 347 ಕಿ.ಮಿ. ಎಂಬ ಕನಿಷ್ಠ ಜ್ಞಾನವೂ ಇಲ್ಲ. ಭೌಗೂಳಿಕ ಜ್ಞಾನವಿಲ್ಲದ ಇಂತಹ ಜಾತಿಯ ಕ್ರಿಮಿಗಳು ಈಗ ರಾಷ್ಟ್ರ ಮಟ್ಟದಲ್ಲಿ ನಾಯಕರಾಗಿ ಬೆಳೆಯುತ್ತಿದ್ದಾರೆ. ಇವುಗಳನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಈಗ ಆರ್.ಎಸ್.ಎಸ್, ಶಾಖಾಮಠಗಳಾಗಿರುವ ಕಾರಣ ದಿವ್ಯ ಮೌನಕ್ಕೆ ಶರಣಾಗಿವೆ.
ಕಾಲ್ನಡಿಗೆಯಲ್ಲಿ ಹುಟ್ಟಿದ ಊರಿನತ್ತ ಪ್ರಯಾಣ ಹೊರಟ ನತದೃಷ್ಟರು, ಆಹಾರ, ನೀರು ಇಲ್ಲದೆ, ನಡುರಸ್ತೆಯಲ್ಲಿ ಬಸವಳಿಯುತ್ತಾ ಸಾಗುತ್ತಿದ್ದಾರೆ. ನಾವು ಮೌನ ಸಾಕ್ಷಿಗಳಾಗಿದ್ದೇವೆ.