ಶುಕ್ರವಾರ, ಫೆಬ್ರವರಿ 28, 2020

ಬಡವರ ಬಾಪು ಕೃತಿ ಪ್ರಕಟಣೆಗೆ ಮುನ್ನ




 ಭಾರತದ ರಕ್ತ ಸಿಕ್ತ ನಕ್ಸಲ್  ಇತಿಹಾಸ ಕುರಿತಂತೆ 2011 ಸೆಪ್ಟಂಬರ್ ತಿಂಗಳಲ್ಲಿ ಅಧ್ಯಯನ ಮಾಡುತ್ತಿದ್ದ ನಾನು ನಕ್ಸಲ್ ಸಂಘಟನೆಯ ನಾಯಕರಾಗಿದ್ದ ಚಾರು ಮುಜಂದಾರ್ ಮತ್ತು ಕನು ಸನ್ಯಾಲ್ ರವರ ದುರಂತ ಕಥೆಯನ್ನು ಅರಸುತ್ತಾ ಕೊಲ್ಕತ್ತ ನಗರ ಹಾಗೂ ಡಾರ್ಜಿಲಿಂಗ್ ಬಳಿಯ ಸಿಲುಗುರಿ ಪಟ್ಟಣ ಮತ್ತು ನಕ್ಸಲ್ ಬಾರಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದೆ. ನಂತರ, ಕೊಲ್ಕತ್ತ ನಗರದಲ್ಲಿ ನಾನು ಉಳಿದುಕೊಂಡಿದ್ದ ಯೂತ್ ಹಾಸ್ಟಲ್ ಗೆ ಸಮೀಪವಿದ್ದ ರವಿಂದ್ರ ನಾಥ್ ಟ್ಯಾಗೂರ್ ವಿ.ವಿ.ಗೆ ಭೇಟಿ ನೀಡಿದೆ.  ಪಶ್ಚಿಮ ಬಂಗಾಳದ ರಾಜಕೀಯ ಮತ್ತು ಸಾಮಾಜಿಕ ವಲಯದ ಮೇಲೆ ನಕ್ಸಲ್ ಹೋರಾಟದಿಂದ  ಆಗಿರುವ ಪರಿಣಾಮವನ್ನು ಅರಿಯುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಅಲ್ಲಿನ ಅರ್ಥಶಾಸ್ತ್ರ ಪ್ರಾಧ್ಯಾಪಕರು “ ನೀವು ಶಾಂತಿನಿಕೇತನದ ವಿಶ್ವ ಭಾರತಿ ವಿ.ವಿ.ಗೆ ಹೋಗುವುದು ಒಳಿತು. ಅಲ್ಲಿ ವಿಸ್ತೃತ ಅಧ್ಯಯನಗಳು ನಡೆದಿವೆ” ಎಂಬ ಸಲಹೆ ನೀಡಿದರು. ಮರುದಿನ  ಕೊಲ್ಕತ್ತ ನಗರದಿಂದ ಸುಮಾರು 140  ಕಿಲೊಮೀಟರ್ ದೂರವಿರುವ ಶಾಂತಿನಿಕೇತನಕ್ಕೆ ಭೇಟಿ ನೀಡಿದೆ. ಅಲ್ಲಿರುವ ಹಾಗೂ  ಸೇನ್ ಹೌಸ್ ಎಂದು ಕರೆಸಿಕೊಳ್ಳುವ ಪ್ರಖ್ಯಾತ  ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ರವರ ಅಜ್ಜನ ನಿವಾಸವು ಈಗ  ವಿಶ್ವ ಭಾರತಿ ವಿ.ವಿ. ಯ ಅರ್ಥಶಾಸ್ತ್ರದ  ಅಧ್ಯಯನ ಕೇಂದ್ರವಾಗಿದೆ. ( ಅಮಾರ್ತ್ಯ ಸೇನ್ ಹಿಂಭಾಗದಲ್ಲಿರುವ ನಿವಾಸ) ಅವರ ಅಜ್ಜ ಅಂದರೆ, ತಾಯಿಯ ತಂದೆ ಶಾಂತಿನಿಕೇತನದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು, ವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಾಗಿ ಸೇನ್ ಹೌಸ್ ಈಗ ಅಮಾರ್ತಯ ಸೇನರ ವಶದಲ್ಲಿದ್ದು, ಅವರು ತಮಗೆ ಬಂದ ನೊಬೆಲ್ ಪ್ರಶಸ್ತಿ ಹಣ, ಇತರೆ ಪ್ರಶಸ್ತಿ ಹಾಗೂ ಸಂಭಾವನೆಯ ಹಣವನ್ನು ಠೇವಣಿಯನ್ನಾಗಿ ಇಟ್ಟು ಪ್ರಾಚಿ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದಾರೆ.  ಠೇವಣಿ ಹಣದಿಂದ ಬರುವ ವಾರ್ಷಿಕ  ನಲವತ್ತು ಲಕ್ಷ ರೂಪಾಯಿಗಳನ್ನು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯು ಅಧ್ಯಯನಕ್ಕಾಗಿ ವಿನಿಯೋಗಿಸುತ್ತಿದ್ದಾರೆ.

ಅಲ್ಲಿನ ಪ್ರಾಧ್ಯಾಪಕರಾದ ಡಾ. ಬ್ರಹ್ಮಾನಂದ ಚಟ್ಟೋಪದ್ಯಾಯ  ಅವರನ್ನು ಭೇಟಿ ಮಾಡಿದಾಗ, ಅವರು ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಜೊತೆ  ಸಂತಾಲ್ ಬುಡಕಟ್ಟ ಜನಾಂಗವಿರುವ ಹಳ್ಳಿಗಳತ್ತ ಸೈಕಲ್ ನಲ್ಲಿ ಹೊರಟಿದ್ದರು. ನನಗೂ ಸಹ ಸೈಕಲ್ ಕೊಡಿಸಿ  ಜೊತೆಯಲ್ಲಿ  ಕರೆದುಕೊಂಡು ಕರೆದುಕೊಂಡು ಹೋದರು. ಅವರು ತಮ್ಮ ಪ್ರಯಾಣದ ಜೊತೆ ಅಲ್ಲಿ ಆಗಿರುವ ಅನೇಕ ಅಧ್ಯಯನಗಳ ಮಾಹಿತಿ ನೀಡುವುದರ ಜೊತೆಗೆ ನಕ್ಸಲ್ ಹೋರಾಟದಿಂದ ಪಶ್ಚಿಮ ಬಂಗಾಳ ರಾಜ್ಯದ ಮೇಲೆ ಆಗಿರುವ ಒಳಿತು-ಕೆಡುಕು ಎರಡನ್ನೂ ವಿವರಿಸಿದರು. ಗೇಣಿದಾರರ ಮೇಲೆ ಮತ್ತು ಕೃಷಿ ಕೂಲಿ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಜಮೀನ್ದಾರರ ದಬ್ಬಾಳಿಕೆ ಸಂಪೂರ್ಣ ಸ್ಥಗಿತಗೊಂಡಿರುವುದನ್ನು ವಿವರಿಸಿದರು. ಏಕೆಂದರೆ, ಶಾಂತಿನಿಕೇತನ  ಅಥವಾ ವಿಶ್ವ ಭಾರತಿ ವಿ.ವಿ. ಇರುವ ಬೀರ್ ಭೂಮಿ ( ವೀರ ಭೂಮಿ) ಜಿಲ್ಲೆಯು ಒಂದು ಕಾಲದಲ್ಲಿ ಜಮೀನ್ದಾರರ ಜಿಲ್ಲೆಯಾಗಿತ್ತು. ಈಗ ಅವರೆಲ್ಲರೂ ಭೂಮಿ ಮಾರಾಟ ಮಾಡಿ ಕೊಲ್ಕತ್ತ ನಗರ ಸೇರಿಕೊಂಡಿರುವ ವಿಷಯ ತಿಳಿಸಿದರು.
ದಕ್ಷಿಣ ಭಾರತದಿಂದ ಅಧ್ಯಯನಕ್ಕಾಗಿ ಅಷ್ಟು ದೂರು ಬಂದಿರುವುದು ಮತ್ತು ನಾನು ಅರ್ಥಶಾಸ್ತ್ರದ ವಿದ್ಯಾರ್ಥಿ ಎಂದು ತಿಳಿದ ನಂತರ ನನ್ನ ಜೊತೆ ಮುಕ್ತವಾಗಿ ಮಾತನಾಡಿದರು. ಜೊತೆಗೆ 2012 ರ ಜನವರಿ ಎರಡನೆಯ ವಾರ  ಪ್ರಾಚಿ ಟ್ರಸ್ಟ್ ನಲ್ಲಿ “ಭಾರತದ ಅಭಿವೃದ್ಧಿಯ  ಸವಾಲುಗಳು” ಕುರಿತು ಐದು ದಿನಗಳ ಕಾರ್ಯಾಗಾರ ಇರುವುದಾಗಿ, ಇದರಲ್ಲಿ ಅಮಾರ್ತ್ಯ ಸೇನ್ ಮತ್ತು ಮಹಮ್ಮದ್ ಯೂನಸ್ ಪಾಲ್ಗೊಳ್ಳುವುದಾಗಿ ತಿಳಿಸಿದರು.  ಜೊತೆಗೆ ನನಗೂ ಶಿಬಿರದ  ಅಭ್ಯರ್ಥಿಯಾಗಿ  ಪಾಲ್ಗೊಳ್ಳಲು ಆಮಂತ್ರಣವಿತ್ತರು. ನನ್ನ ಮೇಲೆ ಅಗಾಧ ಪ್ರಭಾವ ಬೀರಿರುವ ಜಗದ್ವಿಖ್ಯಾತ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರ ಮಾತು ಕೇಳುವ ಉದ್ದೇಶದಿಂದ ಆಹ್ವಾನವನ್ನು  ಮರು ಮಾತಿಲ್ಲದೆ ಒಪ್ಪಿಕೊಂಡೆ.
2012 ರ ಜನವರಿಯಲ್ಲಿ ಕಾರ್ಯಾಗಾರಕ್ಕೆ ಹೋದಾಗ,   ಅಲ್ಲಿನ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ನಲ್ಲಿ ಉಳಿದುಕೊಂಡಿದ್ದೆ. ನನ್ನ ಅದೃಷ್ಟವೆಂಬಂತೆ ಮಹಮದ್ ಯೂನಸ್ ಸಹ ಅದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಅಮಾರ್ತ್ಯ ಸೇನ್ ಎಂದಿನಂತೆ ತಮ್ಮ ಪೂರ್ವಿಕರ ನಿವಾಸದಲ್ಲಿ ಉಳಿದುಕೊಂಡಿದ್ದರು. ನನಗೆ ಮಹಮ್ಮದ್ ಯೂನಸ್ ರವರ ಉಪನ್ಯಾಸಗಳನ್ನು ಕಾರ್ಯಾಗಾರದಲ್ಲಿ ಮತ್ತು ಸಂಜೆಯ ವೇಳೆ ಹೋಟೆಲ್ ಸಭಾಂಗಣದಲ್ಲಿ ನಡೆಯುತ್ತಿದ್ದ ಖಾಸಾಗಿ ಸಮಾರಂಭಗಳಲ್ಲಿ ಕೇಳುವ ಅವಕಾಶ ದೊರೆಯಿತು.
ಪ್ರತಿ ದಿನ ಬೆಳಿಗ್ಗೆ 5-30 ಕ್ಕೆ ಎದ್ದು ಬೋಲ್ ಪುರ್ ರೈಲು ನಿಲ್ದಾಣದ ಬಳಿ ತೆರಳಿ ಅವರಿಗಾಗಿ  ದ ಟೆಲಿಗ್ರಾಪ್  (ಇಂಗ್ಲೀಷ್) ಹಾಗೂ ಆನಂದ್ ಬಜಾರ್ ( ಬಂಗಾಳಿ) ದಿನ ಪತ್ರಿಕೆಗಳನ್ನು ತಂದು ಅವರಿಗೆ  ನೀಡುತ್ತಿದ್ದೆ. ಒಂದು ದಿನ ಬೆಳಿಗ್ಗೆ ಹೋಟೆಲ್ ಮುಂದಿನ ಆವರಣದಲ್ಲಿ ವಾಕ್ ಮಾಡುತ್ತಿದ್ದಾಗ, ನಾನು ಅವರ ಬಡತನ ಕುರಿತ ಉಪನ್ಯಾಸಗಳ ಪ್ರಬಂಧಗಳನ್ನು ಓದಿರುವುದಾಗಿ ತಿಳಿಸಿದೆ. ನನಗೆ ತಮ್ಮ ಆತ್ಮ ಚರಿತ್ರೆಯ ಕೃತಿ ನೀಡುವುದರ ಜೊತೆಗೆ ಅನೇಕ ಚಿಂತನೆಗಳನ್ನು   ಅವರು ಹಂಚಿಕೊಂಡರು, ನಾನು ಇಸ್ಲಾಂ ಧರ್ಮದಲ್ಲಿ ಜನಿಸಿದ್ದರೂ ಸಹ  ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದು ಅಥವಾ ರಂಜಾನ್ ಹಬ್ಬದ ಉಪವಾಸ ಮಾಡುವುದಿಲ್ಲ. ಸದಾ ಜಗತ್ತಿನಾದ್ಯಂತ ತಿರುಗುತ್ತಿರುವುದರಿಂದ ಸಾಧ್ಯವಾಗಿಲ್ಲ ಎಂದರು.

ಚಂದ್ರನ ಮೇಲೆ ಕಾಲಿಡುವುದು ಅಥವಾ ಮಂಗಳ ಗ್ರಹದಲ್ಲಿ ನೀರು ಇದೆಯಾ? ಎಂದು ಹುಡುಕುವುದು ನನಗೆ ಮಹತ್ವದ ಸಂಗತಿಗಳಲ್ಲ.  ಈ ನೆಲದ ಮೇಲಿನ ಪ್ರತಿಯೊಂದು ಜೀವವು ಗಂಡು-ಹೆಣ್ಣು ಎಂಬ ಬೇಧವಿಲ್ಲದೆ, ಜಾತಿ, ಧರ್ಮ, ದೇಶಗಳು ಎಂಬ ಗಡಿಗಳಿಲ್ಲದೆ  ಆಹಾರ ಮತ್ತು ನೀರಿನ ಕೊರತೆಯಿಲ್ಲದೆ ಬದುಕುವುದು ಮತ್ತು ಪೌಷ್ಟಿಕತೆಯ ಆಹಾರದ ಮೂಲಕ ಗಟ್ಟಿಯಾಗಿ ಈ ನೆಲದ ಮೇಲೆ ಕಾಲೂರುವುದು ಮುಖ್ಯ ಎಂದು  ಮಹಮ್ಮದ್ ಯೂನಸ್ ನುಡಿದಾಗ ನನಗೆ ರೋಮಾಂಚನ ವಾಯಿತು. ಅವರು ಪ್ರತಿಪಾದಿಸುವ ಮೂರು ಶೂನ್ಯಗಳು ( ಶೂನ್ಯ ಬಡತನ, ಶೂನ್ಯ ನಿರುದ್ಯೋಗ, ಶೂನ್ಯ  ಕಲ್ಮಷ ವಾತಾವರಣ)  ಇವುಗಳು  ನನ್ನ ಮೇಲೆ ಅಗಾಧ ಪರಿಣಾಮ ಬೀರಿದವು. ಇವೆಲ್ಲವನ್ನೂ ಅಡಕಗೊಳಿಸಿ, ಅವರ ಸಂದರ್ಶನದೊಂದಿಗೆ (2017 ರಲ್ಲಿ ನಡೆದ ಭೇಟಿ)  ಮಹಮ್ಮದ್ ಯೂನಸ್ ರವರ  ಜೀವನ ಚರಿತ್ರೆ, “ ಬಡವರ ಬಾಪು” ಕೃತಿ ಮಾರ್ಚ್ ತಿಂಗಳಿನಲ್ಲಿ ಅಭಿರುಚಿ ಪ್ರಕಾಶನದಿಂದ  ಮೈಸೂರಿನಲ್ಲಿ ಬಿಡುಗಡೆಯಾಗುತ್ತಿದೆ.

ಬುಧವಾರ, ಫೆಬ್ರವರಿ 26, 2020

ದೇಶಭಕ್ತಿಯೆಂಬ ಉನ್ಮಾದ



 ಕಳೆದ ಒಂದು ವರ್ಷದಿಂದೇಚೆಗೆ ದೇಶದ ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ದೇಶಭಕ್ತಿ ಎಂಬ ಪದ ಅಥವಾ ಪರಿಕಲ್ಪನೆ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರುವದರ ಮೂಲಕ ಪರ-ವಿರೋಧಗಳ ಸಂಘರ್ಷದಲ್ಲಿ ಹಲವು ಅವಘಡಗಳಿಗೆ ಕಾರಣವಾಗುತ್ತಿದೆ. ಜೊತೆಗೆ ಸಮುದಾಯಗಳ ಮತ್ತು  ನಾಗರೀಕರ ನಡುವೆ ಸೌಹಾರ್ದದತೆಯ ಬದಲಾಗಿ ವೈಷಮ್ಯವನ್ನು ಹುಟ್ಟುಹಾಕುತ್ತಿದೆ. ಮೂಲಕ ಎರಡು ವಿಭಿನ್ನ ತಾತ್ವಿಕ ಸಿದ್ಧಾಂತ ಹೊಂದಿದ ಬಣಗಳ ನಡುವೆ ಯಾವುದೇ ಸಂವಾದ ಸಾಧ್ಯವಿಲ್ಲ ಎಂಬ ನಿರ್ಣಾಯಕ ಹಂತವನ್ನು ತಲುಪಿದೆ.

ಮೊನ್ನೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಮುಸ್ಲಿಂ ಸಮುದಾಯದ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ದಿಡೀರನ್ ಕಾಣಿಸಿಕೊಂಡ ಅಮೂಲ್ಯ ಲಿನಯೋ ಎಂಬ ಯುವತಿ ಯಾವ ಕಾರಣವೂ ಇಲ್ಲದೆ ಪಾಕಿಸ್ತಾನ ಜಿಂದಾಬಾದ್ ಎಂದು ಮೂರು ಬಾರಿ ಘೋಷಣೆಯನ್ನು  ಕೂಗುವುದರ ಮೂಲಕ ಜೈಲು ಪಾಲಾದಳು.   ಘಟನೆ ಸಂಭವಿಸಿದ ಮರುದಿನ  ಟೌನ್ ಬಳಿ ಪ್ರತಿಭಟಿಸುತ್ತಿದ್ದವರ ನಡುವೆ ಭಿತ್ತಿ ಪತ್ರವನ್ನು ಪ್ರದರ್ಶಿಸುವುದರ   ಮೂಲಕ  ಆದ್ರಾ ಎಂಬ ಮತ್ತೊಬ್ಬ  ಯುವತಿಯೂ ಸಹ  ಅಮೂಲ್ಯಳ ಹಾಗೆ ದೇಶ ದ್ರೋಹದ ಆರೋಪದಡಿ ಬಂಧಿತಳಾಗಿ ಪರಪ್ಪನ ಅಗ್ರಹಾರದ ಸೆರೆಮನೆಗೆ  ಸೇರ್ಪಡೆಯಾದಳು.  ಹಸಿ ಹಸಿಯಾದ ಹಾಗೂ ಪ್ರೌಢತೆಯಿಲ್ಲದ ಇಂತಹ ಇಂತಹ ನಡುವಳಿಕೆಗಳಿಂದಾಗಿ ಈಗ ಭಾರತದಲ್ಲಿ ದೇಶ ಭಕ್ತಿಯೆಂಬುದು ಒಂದು ರೀತಿಯ ಉನ್ಮಾದವಾಗಿದೆ ಎಂದು ವ್ಯಾಖ್ಯಾನಿಸಬಹುದು.
ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂಬಂತೆ ಇತ್ತಿಚೆಗಿನ ದಿನಗಳಲ್ಲಿ ದೇಶದ  ಎಲ್ಲಾ ವಿಷಯಗಳಿಗೂ ಪಾಕಿಸ್ತಾನವನ್ನು ಎಳೆ ತರುವ ಚಾಳಿ ಹೆಚ್ಚಾಗುತ್ತಿದೆ. ಜೊತೆಗೆ ಸರ್ಕಾರಗಳು ಆಡಳಿತಾತ್ಮಕವಾಗಿ ಎಸೆಗಿದ ತಮ್ಮ ತಪ್ಪುಗಳನ್ನು ಪಾಕಿಸ್ತಾನದ ನೆಪದಲ್ಲಿ ಮುಚ್ಚಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಚಾಲ್ತಿಯಲ್ಲಿದೆ.  ಆಡಳಿತದ ಚುಕ್ಕಾಣಿ ಹಿಡಿದ ರಾಷ್ಟ್ರವೊಂದg ನಾಯಕ ಅಥವಾÀ ಸರ್ಕಾರ ಎಸೆಗುವ  ಪ್ರಮಾದಗಳಿಗೆ ಅಲ್ಲಿನ ನಾಗರೀಕರನ್ನು ದ್ವೇಷಿಸುವ ಹಂತಕ್ಕೆ ನಾವು ಬೆಳೆದುನಿಂತಿದ್ದೆವೆ. ಕೇವಲ ಎಪ್ಪತ್ಮೂರು ವರ್ಷಗಳ ಹಿಂದೆ ನಮ್ಮ ಸಹೋದರರಾಗಿ ಬದುಕಿದ್ದ ಪಾಕಿಸ್ತಾನದ  ಜನತೆ ಈಗ  ಭಾರತದ ಪಾಲಿಗೆ ಶತೃಗಳಾಗಿದ್ದಾರೆ. ಇದು ನಮ್ಮ ದೃಷ್ಟಿಕೋನದ ಕೊರತೆಯಲ್ಲದೆ ಬೇರೇನೂ ಅಲ್ಲ. ಪಾಕಿಸ್ತಾನವನ್ನು ಆಳಿದ ಬಹುತೇಕ  ರಾಜಕೀಯ ಪಕ್ಷಗಳ ನಾಯಕರು ಭಾರತದ ಮೇಲಿನ ದ್ವೇಷದಿಂದ ಭಯೊತ್ವಾದನೆಯನ್ನು ಹುಟ್ಟು ಹಾಕುವುದರ ಜೊತೆಗೆ ಅದನ್ನು ಪೋಷಿಸುತ್ತಾ ಬಂದರು. ಅದರ ಅಂತಿಮ ಫಲವನ್ನು ಇದೀಗ ಅಲ್ಲಿನ ಜನತೆ ಅನುಭವಿಸಬೇಕಿದೆ.  ಕೇವಲ 1972 ರಲ್ಲಿ ಉದಯಿಸಿದ ನಮ್ಮ ನೆರೆಯ ಬಾಂಗ್ಲಾ ದೇಶವು ಏಷ್ಯಾ ಖಂಡದ ಅತ್ಯಂತ ಬಡರಾಷ್ಟ್ರ ಎಂಬ  ಶಾಪವನ್ನು ಕಳಚಿಕೊಂಡು, ಬಡತನ ಮತ್ತು ನಿರುದ್ಯೋಗ ನಿವಾರಣೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ರಗಳನ್ನು ಹಿಂದಿಕ್ಕುವುದರ ಮೂಲಕ ಜಗತ್ತಿನ ಗಮನ ಸೆಳೆದಿದೆ. ಪಾಕಿಸ್ತಾನದ ಸರ್ಕಾರಕ್ಕೆ ಮತ್ತು ಅಲ್ಲಿನ ನಾಯಕರಿಗೆ ತಮ್ಮ ನೆಲದ ಬಡತನದ ನಿವಾರಣೆಗಿಂತ ಭಾರತದ ಮೇಲಿನ ದ್ವೇó ಪ್ರಥಮ ಆದ್ಯತೆಯಾದ ಕಾರಣ  ಪಾಕಿಸ್ತಾನವೆಂಬುದು ಅನಕ್ಷರತೆ, ಬಡತನ, ಮೌಡ್ಯ ಹಾಗೂ ನಿರುದ್ಯೋಗ, ಭಯೋತ್ಪಾದನೆಗಳ ಕೂಪವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ರಗಳ ವಿಶ್ವಾಸವನ್ನು ಕಳೆದುಕೊಂಡು ಏಕಾಂಗಿಯಾಗಿದೆ.

ಇಂತಹ ದಯನೀಯವಾದ ಸ್ಥಿತಿಯಲ್ಲಿರುವ ಪಾಕಿಸ್ತಾನವನ್ನು ಮತ್ತು ಅಲ್ಲಿನ ಜನತೆಯನ್ನು ನಮ್ಮ ದೇಶದ ರಾಜಕೀಯದಲ್ಲಿ ಎಳೆದು ತಂದು ಚರ್ಚಿಸುವುದು ಅಥವಾ ದ್ವೇಷಿಸುವುದು ದೇಶಭಕ್ತಿ ಎಂಬ ಹಂತ ತಲುಪಿರುವ ಇಲ್ಲಿನ  ಬಲಪಂಥೀಯರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ. ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಥವಾ ಮಾಧ್ಯಮಗಳು ಪರಿಣಾಮಕಾರಿಯಾಗಿರುವ ಹಿನ್ನಲೆಯಲ್ಲಿ ಎಲ್ಲರಿಗೂ ದಿಡೀರ್ ಪ್ರಸಿದ್ಧಿ ಪಡೆಯುವ ಮಾನಸಿಕ ಜಾಡ್ಯ ಅಂಟಿಕೊಂಡಿದೆ.. ಅಮೂಲ್ಯ ಮತ್ತು ಆದ್ರಾ ಎಂಬ ಯುವತಿಯರ ನಡೆ  ಕೂಡ ಇಂತಹದ್ದೆ. ಹಾಗಾದರೆ ದೇಶಭಕ್ತಿ ಎದರೇನು? ವಂದೇ ಮಾತರಂ ಗೀತೆಯನ್ನು ಹಾಡುವುದು, ಸಾರ್ವಜನಿಕವಾಗಿ ಹನುಮಾನ್ ಚಾಲಿಸ ಶ್ಲೋಕ ಪಠಿಸುವುದು ದೇಶಭಕ್ತಿಯಾಗಬಲ್ಲದೆ?  ನಿಜ ಹೇಳಬೇಕೆಂದರೆ, ನನಗೆ ಇಂದಿಗೂ ಸಹ ಒಂದು ಸಾಲು ತಪ್ಪಿಲ್ಲದೆ ರಾಷ್ಟ್ರ ಗೀತೆಯನ್ನಾಗಲಿ, ಜಯಭಾರತ ಜನನಿಯ ತನುಜಾತೆ ಎಂಬ ಕರ್ನಾಟಕದ ನಾಡಗೀತೆಯನ್ನಾಗಲಿ ಹಾಡಲು ಬರುವುದಿಲ್ಲ. ಹಾಗಾದರೆ, ನಾನು ದೇಶದ್ರೋಹಿಯೇ? ಇಲ್ಲಿ ವಾಸಿಸಲು ನನಗೆ ಹಕ್ಕಿಲ್ಲವೆ?
ನನ್ನನ್ನು ಬೆಳಿಸಿದ ಪೋಷಕರಾಗಲಿ, ಕಲಿಸಿದ ಗುರು ಹಿರಿಯರಾಗಲಿ, ರಾಷ್ಟ್ರಗೀತೆ ಅಥವಾ ನಾಡಗೀತೆ ಕಂಠಪಾಠ ಮಾಡಿಕೊಳ್ಳುವುದು ದೇಶಭಕ್ತಿ ಎಂದು ಹೇಳಿಕೊಡಲಿಲ್ಲ. ಬದಲಾಗಿ, ರಾಷ್ಟ್ರದ ಚಿಹ್ನೆಯಾದ ರಾಷ್ಟ್ರ ಧ್ವಜ,  ನಮ್ಮೆಲ್ಲರ ಆತ್ಮದಂತಿರುವ ಸಂವಿಧಾನ, ಅಲ್ಲಿನ ಕಾನೂನುಗಳನ್ನು ಗೌರವಿಸುವುದರ ಜೋತೆಗೆ  ನಮ್ಮ ನೆರೆ ಹೊರೆಯವರನ್ನು ಜಾತಿ, ಧರ್ಮಗಳ  ಎಲ್ಲೆ ಮೀರಿ ಪ್ರೀತಿಸುವುದನ್ನು ಹೇಳಿಕೊಟ್ಟರು. ಬಸವಣ್ಣ, ಗಾಂಧೀಜಿಯರಿಂದ ಹಿಡಿದು ನನ್ನ ತಲೆಮಾರಿನ ಕುÉವೆಂಪು, ನೆರೆಯ ತಮಿಳುನಾಡಿನ ಸುಬ್ರಮಣ್ಯ ಭಾರತಿಯಾರ್ ಹಾಗೂ ಕವಿ ಮಹಮ್ಮದ್ ಇಕ್ಬಾಲ್ ರವರಿಂದ ಕಲಿತ ದೇಶ ಭಕ್ತಿ ಗೀತೆಗಳಲ್ಲಿನ  ವಿಶ್ವ ಮಾನವ ಪರಿಕಲ್ಪನೆ ಕೂಡ ಇದಾಗಿದೆ. ಬಹುಮುಖಿ ಸಂಸ್ಸøತಿಯ ನೆಲವಾದ ಭಾರತದಲ್ಲಿ ಬಾಳಿದ ಸಾಧು ಸಂತರು, ತತ್ವ ಪದಕಾರರು ಹಾಗೂ  ಸೂಫಿಗಳು ಜಪಿಸಿದ ಮಂತ್ರ ಇದೇ ಅಲ್ಲವೆ? ನಮ್ಮ ಉತ್ತರ ಕರ್ನಾಟಕದ ಹಿಂದೂ ಧರ್ಮದ ಬ್ರಾಹ್ಮಣ ಗುರು ಗೋವಿಂದ ಭಟ್ಟರಿಗೂ. ಮುಸ್ಲಿಂನಾದ  ಶಿಶುನಾಳರಿಗೂ ಎಲ್ಲಿಯ ಸಂಬಂಧ? “ ಹಾಕಿದ ಜನಿವಾರವ, ಸದ್ಗುರುನಾಥ ಹಾಕಿದ ಜನಿವಾರವಎಂದು ಹಾಡಿದ ಶಿಶುನಾಳ  ಷರೀಪರನ್ನು ಮರೆಯಲು ಸಾಧ್ಯವೆ? ಇಡೀ ನಾಡಿಗೆ ಸೌಹಾರ್ಧತೆತೆಯನ್ನು ಸಾರಿದ ಇಂತಹ ಅಪರೂಪದ ಗುರುಶಿಷ್ಯರ ಜೋಡಿ, ಎಲ್ಲರೂ  ವಿಷ ಕಕ್ಕುತ್ತಿರುವ ದುರಿತ ಕಾಲದಲ್ಲಿ ನೆನಪಾಗುತ್ತಿಲ್ಲ.   ಇದು ವರ್ತಮಾನದ ದುರಂತವೂ ಹೌದು ನಾವುಗಳು ವಿಸ್ಮೃತಿಗೆ ಜಾರಿರುವ ಕುರುಹು ಹೌದು..

ಭಾರತೀಯ ಸಾಹಿತ್ಯದ  ಕಥಾ ಲೋಕದಲ್ಲಿ ತನ್ನ ವಿಭಿನ್ನ ಕಥಾವಸ್ತುಗಳಿಂದ ಹೆಸರಾಗಿದ್ದ  ಮಲೆಯಾಳಂ ಭಾಷೆಯ ಕಥಾ ಕಣಜವೆನಿಸಿರುವ ದಿವಂಗತ ವೈಕಂ ಮಹಮ್ಮದ್ ಬಷೀರ್ ತಮ್ಮ ಆತ್ಮಕಥೆಯ ಭಾಗದಂತಿರುವಜನ್ಮ ದಿನಂಎಂಬ ಸಣ್ಣ ಕಥೆಯಲ್ಲಿ ಒಂದು ಕಡೆ ಹೀಗೆ ಹೇಳಿಕೊಂಡಿದ್ದಾರೆ. “ ಭಾರತದ ಪ್ರತಿಯೊಂದು ಪಟ್ಟಣಗಳಲ್ಲಿ ನಾನು ಎಷ್ಟೋ ವರ್ಷಗಳವರೆಗೆ ಅಲೆದಾಡಿದೆ. ಅಲ್ಲಿ ನಡೆದಾಡುತ್ತಾ ಎಷ್ಟೋ ಜಾತಿಗಳಾಗಿ ಬದುಕಿದೆ. ಯಾರ್ಯಾರೋ ಕೊಟ್ಟ ಆಹಾರವನ್ನು ಅವರ ಜಾತಿ ಯಾವುದು? ಧರ್ಮ ಯಾವುದು? ಎಂದು ಪ್ರಶ್ನಿಸಿದೆ ಕೃತಜ್ಞಾಪೂರ್ವಕವಾಗಿ ಸ್ವೀಕರಿಸಿ ಹಸಿವನ್ನು ನೀಗಿಸಿಕೊಂಡೆ. ಹಾಗಾಗಿ ನನ್ನ ರಕ್ತ, ಮಾಂಸ, ಮಜ್ಜೆ ಇವೆಲ್ಲವೂ ಕೇವಲ ನನ್ನದು ಮಾತ್ರವಲ್ಲ, ಇಡೀ ಭಾರತದ್ದಾಗಿವೆ. ಕರಾಚಿಯಿಂದ ಕೊಲ್ಕತ್ತದವರೆಗೆ, ಕಾಶ್ಮಿರದಿಂದ ಕನ್ಯಾಕುಮಾರಿಯವರೆಗೆ ನನಗೆ ಎಲ್ಲೆಡೆ ಸ್ನಹಿತರಿದ್ದಾರೆ. ಇಂದಿಗೂ ಸಹ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಸ್ನೇಹವು ಸುಗಂಧದ ಹಾಗೆ ಎಲ್ಲೆಡೆ ಹರಡಲಿ ಎಂಬುದು ನನ್ನ ಮಹಾದಾಸೆಅಷ್ಟೇನೂ ಓದದ ವೈಕಂರಬರು ತಮ್ಮ ಕೊನೆಯ ದಿನಗಳಲ್ಲಿಯೂ ಸಹ ಇದೇ ಮಾತನ್ನು ಪುನರುಚ್ಚರಿಸುತ್ತಿದ್ದರು.  ಭಾರತದ ನೆಲದಲ್ಲಿ ಜನಿಸಿದ   ಕಲಾವಿದನಿಗೆ,  ಕವಿಗೆ, ಬರಹಗಾರನಿಗೆ ಹಾಗೂ  ರಾಜಕೀಯ ನೇತಾರ ಎನಿಸಿಕೊಂಡವನಿಗೆ  ಜಾತಿ ಮತ್ತು ಧರ್ಮಗಳ ಸೂತಕವಿರಬಾರದು. ನಮ್ಮ ಅನೇಕ ಪ್ರಾತಃ ಸ್ಮರಣೀಯರು ಇಂತಹ ಆದರ್ಶದ ಬದುಕನ್ನು ಬದುಕಿ ಹೋಗಿರುವಾಗ, ನಮ್ಮಗಳ ನಡುವೆ ಏಕೆ ಇಂತಹ ಅಸಹನೆ ಮತ್ತು ದ್ವೇಷ ಹುಟ್ಟಿತು?  ಗಾಂಧೀಜಿಯವರು ಮತ್ತು ಬಾಲ ಗಂಗಾಧರ ತಿಲಕರು ಪ್ರತಿಪಾದಿಸಿದ ರಾಷ್ಟ್ರ ಭಕ್ತಿ ಅಥವಾ ದೇಶಭಕ್ತಿ ಖಂಡಿತಾ ಇದಾಗಿರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು.
ನಮ್ಮ ನಡುವಿನ  ಕನ್ನಡದ ಕವಿ ಹಾಗೂ ಮಿತ್ರ ಪೀರ್ ಭಾಷಾ ದಶಕದ ಹಿಂದೆ ಬರೆದ ಕವಿತೆಯೊಂದರ ಸಾಲುಗಳಿವು.

ಅಕ್ಕಾ ಸೀತಾ, ನಿನ್ನಂತೆ
ನಾನೂ ಸಹ ಇಲ್ಲಿ ಕಳಂಕಿತನು
 ನೀನು ಪಾತಿವೃತ್ಯಕ್ಕೆ, ನಾನು ದೇಶಭಕ್ತಿಗೆ
ಪ್ರತಿದಿನ  ಇಲ್ಲಿ ಕೊಂಡ ಹಾಯಬೇಕು.

ಕವಿ ಪೀರ್ ಭಾಷಾ ದಾಖಲಿಸಿದ  ದುಸ್ವಪ್ನದಂತಹ ಅಕ್ಷರ ರೂಪದÀ ಭಾವನೆಗಳು ಇಂದಿಗೂ ಬದಲಾಗಲಿಲ್ಲ. ಅನುಮಾನಗಳು ಮತ್ತು ಅಪಮಾನಗಳ ನಡುವೆ ಬದುಕುವ ಅಲ್ಪ ಸಂಖ್ಯಾತರಿಗೆ, ಇಲ್ಲಿನ ದಲಿತರು ಮತ್ತು ಆದಿವಾಸಿಗಳಿಗೆ ತುರ್ತು ಅಗತ್ಯವಿರುವುದು  ಘನತೆಯಿಂದ ಕೂಡಿದ ಬದುಕೇ ಹೊರತು, ದೇಶಭಕ್ತಿ ಪಾಠವಲ್ಲ, ಇದು ಇಲ್ಲಿನ ಪ್ರತಿಯೋಬ್ಬ ನಾಗರೀಕನ ಪ್ರಜ್ಞೆಯ ಭಾಗವಾಗಬೇಕು.  ದೇಶದ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಬೇಕೆ? ಬೇಡವೆ? ಎಂಬುದರ ಕುರಿತು ಸುಪ್ರೀಂ ಕೋರ್ಟ್ ರೀತಿ ವ್ಯಾಖ್ಯಾನಿಸಿದೆ.
ಒಂದು ರಾಷ್ಟ್ರದ ನಾಗರೀಕನಾಗಿ ಅಥವಾ ಪ್ರಜೆಯಾಗಿ , ರಾಷ್ಟ್ರದ ಘನತೆ. ಗೌರವ, ಪ್ರತಿಷ್ಟೆ ಮತ್ತು ಅಲ್ಲಿನ ಅಸ್ಮಿತೆಗಳನ್ನು ಗೌರವಿಸುವುದು ಪ್ರತಿಯೋಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿರುತ್ತದೆ. ದೇಶದ ಅಖಂಡತೆ ಮತ್ತು ಭದ್ರತೆಯ ದೃಷ್ಟಿಯಿಂದ ಇದು ಅನಿವಾರ್ಯ. ಆದರೆ, ಇಂತಹ ಸಾಂಕೇತಿಕವಾದ ಅಲಿಖಿತ ನಿಯಮಗಳನ್ನು  ವ್ಯಾಖ್ಯಾನಿಸುವವರು ಮತ್ತು ನಿಯಂತ್ರಿಸುವವರು ಯಾರು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ದೇಶಭಕ್ತಿ ಎಂದರೆ, ಆಡಳಿತಾರೂಢ ಪಕ್ಷದ ಎಲ್ಲಾ ನೀತಿ, ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದಲ್ಲ, ಅಂತಹ ದೇಶಭಕ್ತಿಯನ್ನು ತಿರಸ್ಕರಿಸುವ ಸಾರ್ವಭಾಮ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಕೆಲವು ಸಂದರ್ಭಗಳಲ್ಲಿ ಪ್ರಭುತ್ವ ವಿರೋಧಿ ನಿಯಮಗಳನ್ನು ವಿರೋಧಿಸುವ  ಸಾಂವಿಧಾನಕ ಹಕ್ಕನ್ನು ಭಾರತೀಯ ನಾಗರೀಕರಿಗೆ ನಮ್ಮ ಸಂವಿಧಾನ ನೀಡಿದೆ

ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿರುವ ದೇಶಭಕ್ತಿ ಕುರಿತಾದ ಅಂಶಗಳು ಪರ-ವಿರೋಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಕಣ್ಣನ್ನು ತೆರಸುವಂತಿವೆ. ಮಹಾತ್ಮ ಗಾಂಧೀಜಿಯವರು ಕೂಡ ತಮ್ಮಪ್ರಭುತ್ವ ಮತ್ತು ಜನತೆಎಂಬ ಲೇಖನದಲ್ಲಿನಾನು ವ್ಯೆಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡುತ್ತೇನೆ. ಆದರೆ. ಮನುಷ್ಯ ಮೂಲತಃ ಸಂಘ ಜೀವಿ ಎಂಬುದನ್ನು ಮರೆಯಬಾರದು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಂಯಮ ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ಕಡ್ಡಾಯ. ಇಲ್ಲದಿದ್ದರೆ, ಅನಿಯಮಿತ ಸ್ವಾತಂತ್ರ್ಯವೆಂಬುದು ಅರಣ್ಯದ ಮೃಗಗಳ ವರ್ತನೆಯ ಪ್ರತಿರೂಪವಾಗಿ ಬಿಡುತ್ತದೆಎಂದು ಪ್ರತಿಪಾದಿಸಿದ್ದಾರೆ.
ಪರಸ್ಪರ ನಂಬಿಕೆ, ವಿಶ್ವಾದ ಕುಸಿದು ಹೋಗುತ್ತಿರುವ ಅಪನಂಬಿಕೆಯ ಕಾಲಘಟ್ಟದಲ್ಲಿ ಮಹಾತ್ಮರ ಬದುಕು, ಸಂದೇಶಗಳು ಮಾತ್ರ ದೇಶವನ್ನು  ಮುನ್ನೆಡಸಬಲ್ಲವು. ಮತ್ತು ಬಹುಸಂಸ್ಕತಿಯ ಭಾರತವನ್ನು ಕಾಪಾಡಬಲ್ಲವು.
.