ಸೋಮವಾರ, ಡಿಸೆಂಬರ್ 26, 2016

ನೋಟು ನಿಷೇದವೆಂಬ ಪ್ರಹಸನ


ಸ್ವಾತಂತ್ರ್ಯಾನಂತರದ ಭಾರತದಲ್ಲಿ ಯಾವೊಬ್ಬ ಪ್ರಧಾನಿಯೂ ಇಷ್ಟೊಂದು ಮೂರ್ಖತನ ಮತ್ತು ಅವಿವೇಕತನದಿಂದ ನಡೆದುಕೊಂಡಿರಲಿಲ್ಲ. ನರೇಂದ್ರ ಮೋದಿಯವರ ಹುಚ್ಚಾಟಗಳು ಮತ್ತು ಆವೇಶಗಳಿಗೆ ಭಾರತದ ಆರ್ಥಿಕತೆಯು ಅಧಃಪತನದತ್ತ ಕುಸಿಯುತ್ತಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ ಭಾರತದ ಪ್ರಧಾನ ಮಂತ್ರಿಯ ಹುದ್ದೆಯ ಘನತೆ ಮತ್ತು ಅದಕ್ಕಿರುವ ಗೌರವ  ಇವೆರೆಡೂ  ನರೇಂದ್ರಮೋದಿಯವರಿಗಾಗಲಿ, ಅಥವಾ ಅವರ ಹುಚ್ಚಾಟಗಳನ್ನು ಬೆಂಬಲಿಸುತ್ತಿರುವ ನಮೋ ಬ್ರಿಗೆಡ್  ಭಕ್ತರೆಂಬ ಅವಿವೇಕಿಗಳಾಗಲಿ ಈವರೆಗೆ ಅರ್ಥವಾಗಿಲ್ಲ.
ಬಹುಮುಖಿಯ ಭಾಷೆ ಮತ್ತು ಸಂಸ್ಕೃತಿಯ ನೆಲವಾದ ಭಾರತಲ್ಲಿ ನಿಜವಾದ ಹೃದಯವಿರುವುದು ಅನಕ್ಷರಸ್ತರು ಮತ್ತು ಅಮಾಯಕ ಕೃಷಿಕರು ಹಾಗೂ ಕೂಲಿಕಾರ್ಮಿಕರು ಅಗಾಧವಾಗಿ ವಾಸವಾಗಿರುವ ಹಳ್ಳಿಗಳಲ್ಲಿ ಎಂಬ ಸೂಕ್ಷ್ಮತೆಯನ್ನು ಅರಿಯಲಾಗದ ಒಬ್ಬ ಜನನಾಯಕ ಅಥವಾ ಪ್ರಧಾನಿ ಈ ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಕುರಿತು ಮಾತನಾಡುವುದು ಅಥವಾ ಕ್ಯಾಶ್ ಲೆಸ್ ಎಕಾನಮಿ ( ನಗದು ರಹಿತ ಆರ್ಥಿಕ ವ್ಯವಸ್ಥೆ) ಬಗ್ಗೆ ಮಾತನಾಡುವುದೆಂದರೆ, ಆತನಿಗೆ ಗ್ರಾಮ ಭಾರತದ ಆರ್ಥಿಕ ವ್ಯವಸ್ಥೆಯಾಗಲಿ, ಅಲ್ಲಿನ ಆರ್ಥಿಕ ಚಟುವಟಿಕೆಗಳ ಕುರಿತಾಗಲಿ ಎಳ್ಳಷ್ಟು ಜ್ಞಾನವಿಲ್ಲ ಎಂದರ್ಥ.  ಒಂದು ರಾಷ್ಟ್ರದ ಪ್ರಧಾನಿಯಾದವನು ಎಲ್ಲಾ ವಿಷಯಗಳಲ್ಲೂ ಪಾರಂಗತನಾಗಿರಬೇಕಿಲ್ಲ ನಿಜ  ಆದರೆ, ತನ್ನ ಬಳಿ ಕನಿಷ್ಟ ಎಲ್ಲಾ ವಲಯಗಳ ವಿಷಯ ತಜ್ಞರನ್ನು ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಆಡಳಿತವೆಂಬುವುದು ಮಂಗನಾಟ ಇಲ್ಲವೆ ದೊಂಬರಾಟವಾಗುತ್ತದೆ. ನಂವಂಬರ್ 8 ರಂದು ಸಾವಿರ ಮತ್ತು ಐನೂರು ಮುಖಬೆಲೆಯ ಕರೆನ್ಸಿ ನೋಟುಗಳ ಮೇಲೆ ನಿಷೇಧ ಹೇರಿದ ನಂತರ ಈವರೆಗೆ ಕೇಂದ್ರ ಹಣಕಾಸು ಇಲಾಖೆ ಮತ್ತು ಕೇಂದ್ರ ಬ್ಯಾಂಕಾದ ರಿಸರ್ವ್ ಬ್ಯಾಂಕ್ ನಿಂದ ತಿದ್ದುಪಡಿ ಮಾಡಲಾದ ಮತ್ತು ವಾಪಸ್ ಪಡೆಯಲಾದ ಒಟ್ಟು ಸುತ್ತೋಲೆಗಳ ಸಂಖ್ಯೆ 59 ಕ್ಕೆ ಏರಿದೆ. ಇದನ್ನು ಹುಚ್ಚಾಟ ಎಂದು ಕರೆಯದೆ ಬೇರೇನೆಂದು ಕರೆಯಲು ಸಾಧ್ಯ?
ಕೇಂದ್ರಸರ್ಕಾರದ  ಮೇಲುಸ್ತುವಾರಿ ಇದ್ದರೂ ಸಹ ಇಲ್ಲಿಯವರೆಗೆ ಭಾರತದ ಆರ್ಥಿಕತೆಯ ಮೇಲೆ ನಿಗಾ ಇರಿಸಿಕೊಂಡು, ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿದ್ದ ರಿಸರ್ವ್ ಬ್ಯಾಂಕ್ ಎಂಬ ಸಂಸ್ಥೆಯ ಗೌರವ ಮಣ್ಣು ಪಾಲಾಗಿದೆ. ಭಾರತದ ಭ್ಯಾಂಕುಗಳ ಮೇಲೆ ನಿಗಾ ಇರಿಸಿ, ಆರ್ಥಿಕ ಅಪರಾಧಗಳು ಸಂಭವಿಸದಂತೆ ತಡೆಯೊಡ್ಡುತ್ತಿದ್ದ ರಿಸರ್ವ್ ಬ್ಯಾಂಕಿನ ಅಧಿಕಾರಿಗಳು ಭ್ರಷ್ಟರಾಗಿ ಜೈಲು ಸೇರುತ್ತಿದ್ದಾರೆ. ಎಂತಹ ವಿಷಮ ಸ್ಥಿತಿಯಲ್ಲಿಯೂ ಸಹ ಕೇಂದ್ರ ಸರ್ಕಾರದೊಂದಿಗೆ ರಾಜಿಯಾಗದೆ, ಭಾರತದ ಆರ್ಥಿಕ ಚಟುವಟಿಕೆಗೆ ರಕ್ಷಕನಂತಿದ್ದ ರಿಸರ್ವ್ ಬ್ಯಾಂಕಿನ ಗೌರ್ನರ್ ಹುದ್ದೆ ಇದೀಗ ಪ್ರಧಾನಿಯೊಬ್ಬನ ಸೇವಕನ ಹುದ್ದೆಯ ಮಟ್ಟಕ್ಕೆ ಕುಸಿದೆ. ಈಗಿನ ಗೌರ್ನರ್ ಊರ್ಜಿತ್ ಪಟೇಲ್ ಒಬ್ಬ ಬೆನ್ನುಮೂಳೆಯಿಲ್ಲದ ಆರ್ಥಿಕ ತಜ್ಞ ಎಂಬುದು ಸಾಬೀತಾಗಿದೆ. ರಘರಾಂ ರಾಜನ್ ಎಂಬ ನೇರ ನಡುವಳಿಕೆಯ ನಿಷ್ಟುರ ವ್ಯೆಕ್ತಿ ಗೌರ್ನರ್ ಸ್ಥಾನದಲ್ಲಿ ಇರುವವರೆಗೂ ಪ್ರಧಾನಿ ಮೋದಿಯ ಈ ಹುಚ್ಚಾಟಕ್ಕೆ ಕಡಿವಾಣವಿತ್ತು. ಅವರು ಸ್ಥಾನ ತ್ಯೆಜಿಸುತ್ತಿದ್ದಂತೆ ನೋಟು ನಿಷೇಧದ ಪ್ರಹಸನದಿಂದಾಗಿ ಭಾರತದ ಆರ್ಥಿಕ ಚಟುವಟಿಕೆಗೆ ದೊಡ್ಡ ಹೊಡೆತ ಬಿದ್ದಿತು. ಜಪಾನ್ ಸಂಸ್ಥೆಯೊಂದರ ಸಮೀಕ್ಷೆಯ ಪ್ರಕಾರ ಭಾರತದ ಆರ್ಥಿಕತೆ ಇಪ್ಪತ್ತು ವರ್ಷದ ಹಿಂದಿನ ಬೆಳವಣಿಗೆಯ ಮಟ್ಟಕ್ಕೆ ಕುಸಿದಿದೆ. ಕೃಷಿ, ಕೈಗಾರಿಕೆ ಮತ್ತು ವಾಹನ ಉದ್ಯಮ, ಪ್ರವಾಸೋದ್ಯಮ ಮತ್ತು ಮನರಂಜನೆ ಹಾಗೂ ಸೇವೆ ಸೇರಿದಂತೆ ಎಲ್ಲಾ ರಂಗಗಳಿಗೂ ಪಾರ್ಶ್ವವಾಯು ಬಡಿದಂತಾಗಿದೆ. ರಫ್ತಿನ ಪ್ರಮಾಣ ಕುಸಿದಿದೆ. ಪ್ರತಿ ನಿತ್ಯ ಈ ದೊಂಬರಟದಿಂದ ಬ್ಯಾಂಕುಗಳಿಗೆ  ಪ್ರತಿ ದಿನ ಮೂರು ಸಾವಿರ ಕೋಟಿ ಖರ್ಚು ವೆಚ್ಚವಾಗುತ್ತಿದೆ. ಶೇಕಡ 86 ರಷ್ಟು ಪಾಲು ಚಲಾವಣೆಯಲ್ಲಿದ್ದ ನೋಟುಗಳನ್ನು ಹಿಂತೆಗೆದುಕೊಂಡ ನಂತರ ಕೇವಲ ಮೂರನೇ ಒಂದರಷ್ಟು ಭಾಗ ಮಾತ್ರ ಹೊಸ ನೋಟುಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ಬಿಡಲು ಸಾಧ್ಯವಾಗಿದೆ.
ನಗದು ರಹಿತ ವ್ಯವಸ್ಥೆ ಎಂಬುದು ಒಂದು ರೀತಿಯಲ್ಲಿ ಭಾರತದ ನಾಗರೀಕನಿಗೆ ಇರುವ ಸಂವಿಧಾನಬದ್ಧ ಖಾಸಾಗಿ ಬದುಕಿನ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ದೀಪಕ್ ಸಿಂಗ್ ಎಂಬ ತಜ್ಞರು ಅರ್ಥಪೂರ್ಣವಾದ ವಾದವನ್ನು ನಮ್ಮ ಮುಂದಿಟ್ಟಿದ್ದಾರೆ. ಎಲ್ಲವೂ ಡೆಬಿಟ್ ಕಾರ್ಡ್ ಅಥವಾ ಕ್ರಡಿಟ್ ಕಾರ್ಡ್ ಮೂಲಕ ನಡೆದರೆ, ವ್ಯಕ್ತಿಯೊಬ್ಬ ಏನನ್ನು ಖರೀದಿಸಿದ, ಏನನ್ನು ಕುಡಿದ, ಏನನ್ನು ತಿಂದ ಎಂಬುವುದರಿಂದ ಹಿಡಿದು, ಆತ ಎಲ್ಲಿ ಹೋಗಿದ್ದ? ಯಾವ ಹೋಟೆಲ್ ನಲ್ಲಿ ಮಲಗಿ ಎದ್ದು ಬಂದ ಎಲ್ಲವೂ ಜಾಹಿರಾಗುವುದರ ಮೂಲಕ ನಾಗರೀಕನಿಗೆ ಖಾಸಾಗಿ ಬದುಕು ಎಂಬುವುದು ಇರುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕಾಗಿ ಜರ್ಮನಿ ಸೇರಿದಂತೆ ಅನೇಕ ಮುಂದುವರಿದ ಯುರೋಪ್ ರಾಷ್ಟ್ರಗಳಲ್ಲಿ ನಾಗರೀಕರ ಗೌಪ್ಯತೆಯ ಬದುಕನ್ನು ಕಾಪಾಡುವ ನಿಟ್ಟಿನಲ್ಲಿ ಶೇಕಡ 98 ರಷ್ಟು ವ್ಯವಹಾರವು ನಗದು ರೂಪದಲ್ಲಿ ನಡೆಯುವದನ್ನು ನಮ್ಮ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಮೇರಿಕಾದಲ್ಲಿ ಶೇಕಡ 46 ರಿಂದ 48 ರಷ್ಟು ವ್ಯವಹಾರವು ನಗದು ರೂಪದಲ್ಲಿ ನಡೆಯುತ್ತಿದೆ ಎಂಬುದನ್ನು ದಾಖಲಿಸಿದ್ದಾರೆ. ಭಾರತದಂತಹ ಶೇಕಡ 60 ರಷ್ಟು ಅನಕ್ಷರಸ್ತರು ಇರುವ ದೇಶದಲ್ಲಿ ಮತ್ತು ಶೇಕಡ 98 ರಷ್ಟು ಮಂದಿ ಅಸಂಘಟಿತ ವಲಯದ ಕಾರ್ಮಿಕರು ದುಡಿದು ತಿನ್ನುವುದು ನಗದು ರೂಪಾಯಿಗಳ  ವ್ಯವಹಾರದಲ್ಲಿ ಎಂಬ ಕನಿಷ್ಟ ಜ್ಞಾನ ಈ ದೇಶದ ಪ್ರಧಾನಿಗೆ ಇಲ್ಲ ಎಂದರೆ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಈ ದೇಶದ ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ ಈವರೆಗೆ ಬ್ಯಾಂಕುಗಳಲ್ಲಿ ಇರುವ ಖಾತೆಗಳ ಸಂಖ್ಯೆ 47 ಕೋಟಿ ಮಾತ್ರ. ಇವುಗಳಲ್ಲಿ ಒಬ್ಬ ವ್ಯೆಕ್ತಿ ಎರಡು ಮೂರು ಉಳಿತಾಯ ಖಾತೆಗಳನ್ನು ವಿವಿಧ ಬ್ಯಾಂಕುಗಳಲ್ಲಿ ತೆರೆದಿರುವುದುಂಟು. ಅಂದರೆ ಸುಮಾರು 35 ರಿಂದ 40 ಕೋಟಿ ನಾಗರೀಕರು ಖಾತೆ ಹೊಂದಿರಬಹುದು. ಇಂತಹ ವಾತಾವರಣದಲ್ಲಿ ನಗದು ರಹಿರ ವ್ಯವಹಾರವೆಂಬುವುದು ಭಾರತದ ಸಂದರ್ಭದಲ್ಲಿ ಪ್ರಹಸನವಲ್ಲದೆ ಬೇರೇನೂ ಆಗಲಾರದು. ಇಲ್ಲಿನ ಬಡಜನತೆಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಮೂಲಭೂತ ಬೇಡಿಕೆಗಳಾದ ನೀರು, ವಸತಿ, ಶೌಚಾಲಯ, ಆರೋಗ್ಯ ವ್ಯವಸ್ಥೆ ಇವುಗಳಿಗೆ ಒತ್ತು ನೀಡುವುದನ್ನು ಬಿಟ್ಟು, ಕಾಳಧನವನ್ನು ಮಟ್ಟ ಹಾಕುತ್ತೀನಿ, ನಕಲಿ ನೋಟುಗಳ ಹಾವಳಿ ತಡೆಯುತ್ತೀನಿ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಭಾರತಕ್ಕೆ ನೆರೆಯ ಪಾಕಿಸ್ತಾನದ ಉಗ್ರ ಸಂಘಟನೆಗಳ ಮೂಲಕ ನಕಲಿ ನೋಟುಗಳು  ಹರಿದು ಬರುತ್ತಿರುವುದು ನಿಜ. ಇದರ ಬಗ್ಗೆ ಎರಡು ಮಾತಿಲ್ಲ. ನಕಲಿ  ನೋಟುಗಳು ಭಾರತಕ್ಕೆ ನೇಪಾಳದ ಮೂಲಕ ಹರಿದು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಏಕೆಂದರೆ, ಭಾರತ ಮತ್ತು ನೇಪಾಳ ಗಡಿಭಾಗದಲ್ಲಿ ವೀಸಾ/ಪಾಸ್ ಪೋರ್ಟ್ ಗಳ ತಪಾಸಣೆಯಿಲ್ಲದೆ, ಭಾರತ ಮತ್ತು ನೇಪಾಳ ನಾಗರೀಕರು ಮುಕ್ತವಾಗಿ ಸಂಚರಿಸಬಹುದು. ಇದನ್ನು ಉಗ್ರಗಾಮಿ ಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಜೊತೆಗೆ ಭಾರತ ಮತ್ತು ಬಂಗ್ಲಾ ಹಾಗು ಭಾರತ ಮತ್ತು ಮ್ಯಾನ್ಮರ್ ಗಡಿಭಾಗಳಲ್ಲಿ ಬಿಗಿಯಾದ ತಪಾಸಣೆ ಇಲ್ಲ. ಈ ದೇಶದ ಪ್ರಧಾನಿಗೆ ನಕಲಿ ನೋಟುಗಳ ಹಾವಳಿ ತಡೆಯುವ ಮನಸ್ಸಿದ್ದರೆ ಈ ಗಡಿ ಭಾಗಗಳನ್ನು ಬಿಗಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಯಾವುದೇ ಮುಂದಾಲೋಚನೆಯಿಲ್ಲದೆ, ತಜ್ಞರ ಸಲಹೆ ಪಡೆಯದೆ, ಜಾರಿಗೆ ತಂದ ನೋಟು ನಿಷೇಧ ಪ್ರಕ್ರಿಯೆಯಿಂದಾಗಿ ದೇಶದ ಆರ್ಥಿಕ ಚಟುವಟಿಕೆ ನಲುಗಿ ಹೋಗಿದೆ. ದಿನ ನಿತ್ಯ ದುಡಿದು ತಿನ್ನುವ ಮಂದಿ ಹೈರಾಣಾಗಿದ್ದಾರೆ. ನರೇಂದ್ರಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಲಕ್ಷಾಂತರ ರೇಷ್ಮೆ ಕೈಮಗ್ಗ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಪಂಜಾಬಿನ ಲೂಧಿಯಾನದಲ್ಲಿ ಹಾಗೂ ಕಾಶ್ಮೀರದಲ್ಲಿ ಉಣ್ಣೆ ಉಡುಪು ತಯಾರು ಮಾಡುವ ಗುಡಿ ಕೈಗಾರಿಕೆಗಳು ಮುಚ್ಚಿವೆ. ನಗರಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕೆಲಸವಿಲ್ಲದೆ ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ.  ಡಿಸಂಬರ್ ತಿಂಗಳ 16-31 ರ ಸಂಚಿಕೆ “ ಡೌನ್ ಟು ಅರ್ಥ್” ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯಲ್ಲಿ ಭಾರತದ ಕೃಷಿ, ಸಣ್ಣ ಉದ್ಯಮಗಳು, ಮೀನುಗಾರಿಕೆ, ಹೀಗೆ ಹಲವು ರಂಗಗಳು ನಿಸ್ತೇಜನ ಗೊಂಡಿರುವ ಸಂಗತಿಗಳನ್ನು ಆರ್ಥಿಕ ತಜ್ಞರು ಅಂಕಿ ಅಂಶಗಳ ಸಮೇತ ನಮ್ಮ ಮುಂದಿರಿಸಿದ್ದಾರೆ. ಹೊಸ ನೋಟುಗಳು ಮಾತ್ರ ನೇರವಾಗಿ ಬ್ಯಾಂಕಿನಿಂದ ಉಳ್ಳವರ ಮನೆಯ ತಿಜೋರಿಗಳಿಗೆ ಜಮೆಯಾಗುತ್ತಿವೆ. ಪ್ರತಿ ನಿತ್ಯ ಹೊರ ಬರುತ್ತಿರುವ ಕರ್ಮಕಾಂಡಗಳು ನೋಟು ನಿಷೇಧ ಪ್ರಕ್ರಿಯೆಯ ವಿಫಲತೆಗೆ ನಮಗೆ ಸಾಕ್ಷಿಯನ್ನು ಒದಗಿಸುತ್ತಿವೆ. ಯಾವುದೇ ರಾಷ್ಟ್ರದ ಆರ್ಥಿಕ ಚಟುವಟಿಕೆ ಎನ್ನುವುದು ಒಂದು ಸರಪಳಿಯ ಕ್ರಿಯೆ ಇದ್ದಂತೆ. ಅಕಸ್ಮಾತ್ ಸರಪಳಿಯ ಒಂದು ಕೊಂಡಿ ಕಳಚಿಬಿದ್ದರೆ, ಇಡೀ ವ್ಯವಸ್ಥೆ ಕಳಚಿ ಬೀಳುವ ಸಾಧ್ಯತೆಯಿದೆ. ಭಾರತದ ಆರ್ಥಿಕತೆ ಇದೀಗ ಅಂತಹ ಅಪಾಯದ ಮಟ್ಟವನ್ನು ತಲುಪಿದೆ. ಈ ಕಾರಣಕ್ಕಾಗಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ನುಡಿದಿರುವ “ ನೋಟು ನಿಷೇಧ ವಿಷಯದಲ್ಲಿ  ಯಾರೊಬ್ಬರೂ ಆರ್ಥಿಕ ತಜ್ಞರಾಗುವ ಅವಶ್ಯಕತೆಯಿಲ್ಲ. ಆದರೆ, ಕನಿಷ್ಟ ದೇಶದ ಆರ್ಥಿಕ ಚಟುವಟಿಕೆಗಳ ಕುರಿತು ಪ್ರಾಥಮಿಕ ಜ್ಞಾನವಿರಬೇಕು” ಎಂದು ಹೇಳಿರುವ ಮಾತು ಪ್ರಧಾನಿ ನರೇಂದ್ರಮೋದಿಗೆ ತಾಕುವಂತಿದೆ.
( ಕರಾವಳಿ ಮುಂಜಾವು ದಿನ ಪತ್ರಿಕೆಯ "ಜಗದಗಲ" ಅಂಕಣಕ್ಕಾಗಿ ಬರೆದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ