ಶುಕ್ರವಾರ, ಮೇ 19, 2017

ಪತ್ರಿಕೋದ್ಯಮದ ಘನತೆಗೆ ಸಂದ ಎರಡು ಪ್ರಶಸ್ತಿಗಳು



ಕನ್ನಡ ಪತ್ರಿಕೋದ್ಯಮ ರಂಗದಲ್ಲಿ ಅತ್ಯುನ್ನತ ಪ್ರಶಸ್ತಿಗಳು ಎಂದು ಪರಿಗಣಿಸಲ್ಪಟ್ಟಿರುವ ಹಾಗೂ  ಕರ್ನಾಟಕ ಸರ್ಕಾರ  ಪ್ರತಿ ವರ್ಷ ನೀಡುತ್ತಿರುವ ಪ್ರತಿಷ್ಟಿತ  ಟಿ.ಎಸ್.ಆರ್  ಹಾಗೂ ಮೊಹರೆ ಹನುಮಂತರರಾಯರ ಸ್ಮಾರಕ ಪ್ರಶಸ್ತಿಗಳು ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ನೆಲದ ಇಬ್ಬರು ಪ್ರತಿಭಾನ್ವಿತ ಪತ್ರಕರ್ತರಿಗೆ ಸಂದಾಯವಾಗಿರುವುದು ವಿಶೇಷವಾಗಿದೆ. ಜೊತೆಗೆ ವೈಯಕ್ತಿಕವಾಗಿ ನನಗೆ ಅತ್ಯಂತ ಸಮಾಧಾನ ಮತ್ತು ಖುಷಿ ಕೊಟ್ಟಸಂಗತಿಯಾಗಿದೆ. ಏಕೆಂದರೆ. ಪ್ರಶಸ್ತಿ ನೀಡುವವರಿಗೂ ಮತ್ತು ಸ್ವೀಕರಿಸುವ ವ್ಯೆಕ್ತಿಗಳಿಗೂ ಘನತೆ ಎಂಬುದುಇರಬೇಕು ಎಂದು ದೃಢವಾಗಿ ನಂಬಿದವನು ನಾನು. ಪ್ರಶ್ಸಸ್ತಿಗಳು ಅಪಮೌಲ್ಯಗೊಳ್ಳುತ್ತಿರುವ ಈ ದಿನಗಳಲ್ಲಿ ಈ ಎರಡು ಪ್ರಶಸ್ತಿಗಳು  ಅರ್ಹರಿಗೆ  ಸಂದಾಯವಾಗುವುದರ ಮೂಲಕ ತಮ್ಮ ಮೌಲ್ಯವನ್ನು  ಮತ್ತಷ್ಟು ಹೆಚ್ಚಿಸಿಕೊಂಡಿವೆ ಎಂದು ಭಾವಿಸುತ್ತೇನೆ.
ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದು  ಹಾಗೂ ಕಳೆದ  ಮೂರು ದಶಕಗಳಿಂದ ವಿಜ್ಞಾನ ಮತ್ತು ಪರಿಸರ ಕುರಿತ ನನ್ನ ಅಧ್ಯಯನ ಮತ್ತು ಬರೆವಣಿಗೆಗೆ   ಮಾರ್ಗದರ್ಶಕರಂತಿರುವ ನಾಗೇಶ್ ಹೆಗ್ಡೆಯವರಿಗೆ ಟಿ.ಎಸ್.ಆರ್ ಪ್ರಶಸ್ತಿ ಮತ್ತು  ಅದೇ ರೀತಿ  ಮೂರು ದಶಕಗಳಿಂದ ನನ್ನ ಆತ್ಮೀಯ ಮಿತ್ರ,ನಾಗಿ, ಉದಯ  ಟಿ.ವಿ.ಯ ಸಹೋದ್ಯೋಗಿಯಾಗಿ, ಹಾಗೂ  ಖಾಸಾಗಿಯಾಗಿ ಕುಟುಂಬದ ಸದಸ್ಯ ಹೀಗೆ  ಎಲ್ಲವೂ ಆಗಿರುವ ಗಂಗಾಧರ ಹಿರೇಗುತ್ತಿಗೆ ಮೊಹರೆ ಹನುಮಂತರಾಯರ ಸ್ಮಾರಕ ಪ್ರಶಸ್ತಿ ದೊರೆತಿದೆ. ಈ ಎರಡೂ ಪ್ರಶಸ್ತಿಗಳು ತಲಾ ಒಂದು ಲಕ್ಷ ರೂಪಾಯಿ ನಗದು,ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರತಿ ವರ್ಷ ವಿಧಾನ ಸೌಧದ ಬಾಂಕ್ವೆಂಟ್ ಹಾಲ್ ನಲ್ಲಿ ಮುಖ್ಯಮಂತ್ರಿಗಳ ಮೂಲಕ ವಿತರಿಸಲಾಗುತ್ತದೆ.
ಪ್ರಜಾವಾಣಿ ದಿನಪತ್ರಿಕೆಯನ್ನು ಕಟ್ಟಿ ಬೆಳೆಸಿದ ಸಂಪಾದಕರಲ್ಲಿ ಒಬ್ಬರಾಗಿದ್ದ ಟಿ.ಎಸ್.ರಾಮಚಂದ್ರರಾವ್ ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ನಿಷ್ಟಾವಂತ ಹಾಗೂ ನಿಷ್ಟುರ ಪತ್ರಕರ್ತರಲ್ಲಿ ಒಬ್ಬರು. ಮಾಜಿಮುಖ್ಯಮಂತ್ರಿ ದೇವರಾಜ ಅರಸ್ ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದ ಟಿ.ಎಸ್.ಆರ್. ಅವರು ಎಂದಿಗೂ ತಮ್ಮ ಖಾಸಾಗಿ ಗೆಳೆತನವನ್ನು ಪತ್ರಿಕೋದ್ಯಮದಲ್ಲಿ ದುರುಪಯೋಗಪಡಿಸಿಕೊಂಡವರಲ್ಲ. ಅರಸು ಆಡಳಿತದ ಲೋಪ ಧೋಷಗಳನ್ನು ಪತ್ರಿಕೆಯ ಮೂಲಕ ಮುಲಾಜಿಲ್ಲದೆ ಎತ್ತಿ ತೋರಿಸುತ್ತಿದ್ದರು. ಅವರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ “ಛೂಬಾಣ” ಎಂಬ ವ್ಯೆಂಗೋಕ್ತಿಗಳ ಅಂಕಣ ಅತ್ಯಂತ ಜನಪ್ರಿಯವಾಗಿತ್ತು. ಜೊತೆಗೆ ಇಂದಿಗೂ ಆ ಅಂಕಣ ದಂತಕಥೆಯಂತೆ ಪತ್ರಕರ್ತರ ನಡುವೆ ಚರ್ಚೆಯಾಗುತ್ತಿದೆ.
ಪರ್ತಕರ್ತರಿಗೆ ಮನರಂಜನೆ ಇರಬೇಕು, ಜೊತೆಗೆ ಅವರಿಗೊಂದು ಖಾಸಾಗಿತನವಿರಬೇಕು ಎಂದು ಮೊದಲು ಮನಗಂಡವರಲ್ಲಿ ಟಿ.ಎಸ್. ಆರ್. ಪ್ರಮುಖರು.  ಅವರ ಈ ಪ್ರಯತ್ನದಿಂದಾಗಿ 1966 ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಹೈಕೋರ್ಟ್ ಕಟ್ಟಡದ ಬಲಭಾಗದಲ್ಲಿ “ ಬೆಂಗಳೂರು ಪ್ರೆಸ್ ಕ್ಲಬ್” ಎಂಬ ಪತ್ರಕರ್ತರ ಖಾಸಾಗಿ ತಾಣವೊಂದು ತಲೆಯೆತ್ತಲು ಸಾಧ್ಯವಾಯಿತು.ಇಂದು ಈ ಕ್ಲಬ್ ರಾಜ್ಯದ ಪ್ರತಿಷ್ಟಿತ ಕ್ಲಬ್ ಗಳಲ್ಲಿ ಒಂದಾಗಿದ್ದು, ಬೆಂಗಳೂರುನಗರ ಸುದ್ದಿಮಾಧ್ಯಮಗಳ ಚಟುವಟಿಕೆಯ ತಾಣವಾಗಿದೆ.  ಇಂತಹ ಮಹಾನ್ ಪತ್ರಕರ್ತರ ನೆನಪಿನಲ್ಲಿ ಪತ್ರಿಕೋದ್ಯಮದಲ್ಲಿ  ಅಪ್ರತಿಮ ಸಾಧನೆ ಮಾಡಿದ ನಾಡಿನ ಪತ್ರಕರ್ತನೊಬ್ಬನಿಗೆ ಪ್ರತಿ ವರ್ಷ ಟಿ.ಎಸ್. ಆರ್. ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಭಾರಿ ನಾಗೇಶ್ ಹೆಗ್ಡೆಯವರಿಗೆ ದೊರೆತಿರುವುದು  ಪತ್ರಿಕೋಧ್ಯಮದ ಘನತೆಗೆ ಸಂದ ಗೌರವವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನವರಾದ ನಾಗೇಶ್ ಹೆಗ್ಡೆಯವರು  ಶಿರಸಿಯಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿದ ನಂತರ ಪಶ್ಚಿಮ ಬಂಗಾಳದ . ಖರಗ್ ಪುರದ ಐ.ಐ.ಟಿ ಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯಲ್ಲಿ ಎಂ.ಫಿಲ್ ಪಡೆದವರು.  ಉತ್ತರಕಾಂಡದ ನೈನಿತಾಲ್ ಗಿರಿಧಾಮದಲ್ಲಿರುವ ನೈನಿತಾಲ್ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ನಾಗೇಶ್ ಹೆಗ್ಡೆಯವರು  ಅದೇ ವೃತ್ತಿಯಲ್ಲಿ ಮುಂದುವರಿದಿದ್ದರೆ, ಇಂದು  ಈ ದೇಶದ ಪ್ರಸಿದ್ಧ ವಿಜ್ಞಾನಿಯಾಗಿ ಅಥವಾ ಯಾವುದೋ ಒಂದು ಪ್ರತಿಷ್ಟಿತ ವಿ.ವಿ.ಯ ಕುಲಪತಿಯಾಗಿ ರಾರಾಜಿಸಬಹುದಿತ್ತು. ಆದರೆ ಅವರು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಮಡರು. ಇದನ್ನು ನಾವು ಕನ್ನಡ ಪತ್ರಿಕೋದ್ಯಮದ ಪುಣ್ಯ ಎಂದು ಭಾವಿಸಬಹುದು.  ಪರಿಸರ ಮತ್ತು ಈ ನಾಡಿನ ನೆಲ ಮತ್ತು ಜಲ , ದೇಶಿ ಜ್ಞಾನ ಪರಂಪರೆ ಕುರಿತು ಅವರಿಗಿದ್ದ ಆಸಕ್ತಿಯು ಅವರನ್ನು ಮತ್ತೆ ಹುಟ್ಟಿ ಬೆಳೆದ ಕನ್ನಡ ನಾಡಿಗೆ ಕರೆದುಕೊಂಡು ಬಂದಿತು.

ಪ್ರಜಾವಾಣಿ ಪತ್ರಿಕಾ ಬಳಗವನ್ನು ಸೇರಿ. ಕನ್ನಡಿಗರ ಪಾಲಿಗೆ ಕಬ್ಬಿಣದ ಕಡಲೆಯಂತಿದ್ದ ವಿಜ್ಞಾನದ ಹಾಗೂ ಪರಿಸರದ ವಿಷಯಗಳನ್ನು ಅತ್ಯಂತ ಸರಳವಾಗಿ ನಿರೂಪಿಸುತ್ತಾ  ಬಂದ  ನಾಗೇಶ್ ಹೆಗ್ಡೆಯವರು ಕನ್ನಡ ನಾಡಿನಲ್ಲಿ ಉಂಟು ಮಾಡಿರುವ ಜಾಗೃತಿಯನ್ನು ಅನನ್ಯ ಸಾಧನೆ ಎಂದು ಬಣ್ಣಿಸಬಹುದು. ಒಂದು ಕಾಲದಲ್ಲಿ ಸುಧಾ ಮತ್ತು ಇತರೆ ವಾರಪತ್ರಿಕೆಗಳೆಂದರೆ, ಕಾದಂಬರಿಗಳ ಧಾರವಾಹಿಗಳ ಕಾರಣದಿಂದಾಗಿ ಅವುಗಳು  ಗೃಹಿಣಿಯರ ಪತ್ರಿಕೆಗಳು ಎಂಬ ನಂಬಿಕೆಯಿತ್ತು. ಅಂತಹ ಸಮಯದಲ್ಲಿ ಸುಧಾ ಪತ್ರಿಕೆಯ ಸಂಪಾದಕನ ಸ್ಥಾನದಲ್ಲಿ ಕುಳಿತು ಪತ್ರಿಕೆಯನ್ನು ಅಮೂಲಾಗ್ರವಾಗಿ ಬದಲಾಯಿಸಿ, ವಿಜ್ಞಾನ ಮತ್ತು ಪರಿಸರ, ಪ್ರಾಣಿ, ಪಕ್ಷಿಗಳ ಜಗತ್ತಿನ ವಿಷಯಗಳನ್ನು ಅಡಕಗೊಳಿಸಿ ಎಲ್ಲಾ ವಯೋಮಾನ ಮತ್ತು ವರ್ಗದವರ ಪತ್ರಿಕೆಯಾಗಿ ರೂಪಿಸಿದ ಕೀರ್ತಿ ನಾಗೇಶ್ ಹೆಗ್ಡೆಯವರಿಗೆ ಸಲ್ಲುತ್ತದೆ.
ಯಾವುದೇ ಸದ್ದು ಗದ್ದಲವಿಲ್ಲದೆ, ಎಲೆ ಮರೆಯ ಕಾಯಿಯಂತೆ, ಕಾಡು ಕುಸುಮದಂತೆ ಇರುವ ನಾಗೇಶ್ ಹೆಗ್ಡೆಯವರು ಕೇವಲ ಬರಹದ ಮೂಲಕ ಪರಿಸರದ ಕಾಳಜಿಯನ್ನು ತೋರಿದವರಲ್ಲ. ಸ್ವತಃ ಬದುಕಿನಲ್ಲಿ ಅದನ್ನು ಅಳವಡಿಸಿಕೊಂಡವರು. ಅವರ ಇಂತಹ ಬದ್ಧತೆ ಮತ್ತು ಪಾರದರ್ಶಕವಾದ ಬದುಕು, ಹಾಗೂ ಕಿರಿಯವರನ್ನು ಪ್ರೋತ್ಸಾಹಿಸುವ ಉತ್ಸಾಹ ಇವುಗಳಿಂದಾಗಿ ಇಂದು ಕನ್ನಡ ಪತ್ರಿಕೋದ್ಯಮದಲ್ಲಿ ಪರಿಸರ ಪ್ರಜ್ಞೆಯು ಆಳವಾಗಿ ಬೇರೂರಿದೆ. ಜೊತೆಗೆ ನೂರಾರು ಪತ್ರಕರ್ತರು, ಲೇಖಕರು ಹುಟ್ಟಿಕೊಂಡಿದ್ದಾರೆ. ಹಾಗಾಗಿ ಕನ್ನಡದ ವಿಜ್ಞಾನ ಬರೆವಣಿಯ ಭೀಷ್ಮರಂತಿರುವ ನಾಗೇಶ್ ಹೆಗ್ಡೆಯವರಿಗೆ ಟಿ.ಎಸ್.ಆರ್. ಪ್ರಶಸ್ತಿ ಲಭಿಸಿರುವುದು ನ್ಯಾಯೋಚಿತವಾದ ಆಯ್ಕೆ ಎಂದು ಹೇಳಬಹುದು.
ಇನ್ನು ಮೊಹರೆ ಹನುಮಂತರರಾಯರು ಸ್ವಾತಂತ್ರ್ಯ ಪೂರ್ವದಿಂದಲ್ಲೂ ಓರ್ವ ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಿಕೋದ್ಯಮಿಯಾಗಿ ಉತ್ತರ ರ್ನಾಟಕದಲ್ಲಿ ಮನೆ ಮಾತಾದವರು. ಸರ್ಕಾರ ಅಥವಾ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಸಂಹವನ ಸೇತುವೆಯಾಗಿ ಪತ್ರಿಕೆ ಇರಬೇಕೆಂದು  ಮನಗಂಡವರಲ್ಲಿ ಮೊಹರೆಯವರು ಪ್ರಮುಖರು. ಅವರು ಕಟ್ಟಿ ಬೆಳೆಸಿದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ಕನ್ನಡದ ಹಿರಿಯ ಹಾಗೂ ಪ್ರತಿಷ್ಟಿತ ಕನ್ನಡದ ದಿನಪತ್ರಿಕೆಗಳಲ್ಲಿ ಒಂದಾಗಿದ್ದು ಈಗಲೂ ಸಹ ಉತ್ತರ ಕರ್ನಾಟಕದ ಜನರ ಅವಿಭಾಜ್ಯ ಅಂಗವಾಗಿದೆ. ಈ ಮಹನೀಯರ ನೆನಪಿನಲ್ಲಿ ಅವರ  ಹಾಗೆ ಪತ್ರಿಕೆಗಳನ್ನು ಕಟ್ಟಿ ಬೆಳೆಸಿ ಸಾಧನೆ ಮಾಡಿದ ಪತ್ರಕರ್ತರಿಗೆ ಮೊಹರೆ ಹನುಮಂತರಾಯರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು. ಈ ಪ್ರಶಸ್ತಿಯು ಈ ವರ್ಷ  ಗಂಗಾಧರ ಹಿರೇಗುತ್ತಿಗೆ ಲಭ್ಯವಾಗಿದೆ. ಈಗಿನ ಕನ್ನಡದ ದಿನಪತ್ರಿಕೆಗಳ ಅಬ್ಬರಗಳ ನಡುವೆ ಜಲ್ಲಾ ಮಟ್ಟದ ದಿನಪತ್ರಿಕೆಗಳು ಒಂದೊಂದಾಗಿ ಕಣ್ಣುಮಚ್ಚುತ್ತಿರುವಾಗ, ಅಂತಹ ನಾಡಿನ ದಿನಪತ್ರಿಕೆಗಳಿಗೆ ಸೆಡ್ಡು ಹೊಡೆದು ಅವುಗಳ ಸಮಾನ ಎತ್ತರಕ್ಕೆ ಕರಾವಳಿ ಮುಂಜಾವು ದಿನಪತ್ರಿಕೆಯನ್ನು ಗಂಗಾಧರ್ ಬೆಳೆಸಿರುವುದನ್ನು ನಾನು ಪವಾಡ ಎಂದು ಕರೆಯುವುದಿಲ್ಲ. ಏಕೆಂದರೆ. ಪತ್ರಿಕೆಯನ್ನು ಆರಂಭದ ದಿನಗಳಿಂದಲೂ, (ಅದು ಕಪ್ಪು ಬಿಳುಪಿನ ಹಾಗೂ ಟಬ್ಲಾಯಡ್ ಪತ್ರಿಕೆ ಆಕಾರದಲ್ಲಿ ಪ್ರಕಟವಾಗುತ್ತಿದ್ದ ಕಾಲದಿಂದಲೂ) ನಾನು ಓದುತ್ತಾ ಬಂದಿದ್ದೇನೆ, ಒಬ್ಬ ಪತ್ರಕರ್ತನಿಗೆ ಇರಬೇಕಾದ ಛಲ, ನಿಷ್ಟೆ, ಹಾಗೂ ಪ್ರೀತಿ ಮತ್ತು ಧ್ವೇಷವಿಲ್ಲದ ನಿರ್ಭಾವುಕತನದ ವ್ಯೆಕ್ತಿತ್ವ ಇವುಗಳು ಗಂಗಾದರ ಹಿರೇಗುತ್ತಿಯಲ್ಲಿ ಇರುವುದರಿಂದಾಗಿ ಕರಾವಳಿ ಮುಂಜಾವು ಪತ್ರಿಕೆಯು ಉತ್ತರ ಕನ್ನಡ ಜಿಲ್ಲೆಯ ಜನರ ಬದುಕಿನ ಒಂದು ಭಾಗವಾಗಿ ಮಿಳಿತಗೊಂಡಿದೆ. ನಾನು ಮತ್ತು ಗಂಗಾಧರ ಹಿರೇಗುತ್ತಿ ಇಬ್ಬರೂ ವಡ್ಡರ್ಸೆ ರಘುರಾಮಶೆಟ್ಟರ “ನೈತಿಕತೆಯ ಪತ್ರಿಕೋದ್ಯಮ” ಎಂಬ ಅಗೋಚರ ಶಾಲೆಯ ವಿದ್ಯಾರ್ಥಿಗಳು ಎನ್ನುವುದು  ನನ್ನ ಪಾಲಿಗೆ ಹೆಮ್ಮೆಯ ಸಂಗತಿ.
1981 ರಲ್ಲಿ ಪ್ರಜಾವಾಣಿ ಪತ್ರಿಕೆಯ ಬಳಗಕ್ಕೆ  ನಾನು, ಜಾಹಿರಾತು ವಿಭಾಗದಲ್ಲಿ ಕೆಲಸ ಮಾಡುತ್ತಾ ಅಂದಿನ ಮದ್ರಾಸ್ ನಗರದಲ್ಲಿ ಕಳೆದು ಹೋಗಿದ್ದೆ.. ನನ್ನಲ್ಲಿದ್ದ ಬರೆವಣಿಗೆ ಮತ್ತು ಅನುವಾದ ಮಾಡುವ ಶಕ್ತಿಯನ್ನು ಗುರುತಿಸಿ, ಬಿ.ವಿ.ವೈಕುಂಠರಾಜುರವರ ಮೂಲಕ  ಬರೆವಣಿಗೆಗೆ ಹಚ್ಚಿದವರು ವಡ್ಡರ್ಸೆಯವರು. ಇದೇ ವಡ್ಡರ್ಸೆಯವರು 1984 ರಲ್ಲಿ ಪ್ರಜಾವಾಣಿ ತೊರೆದು ಮಂಗಳೂರಿನಲ್ಲಿ ಮುಂಗಾರು ದಿನಪತ್ರಿಕೆ ಆರಂಭಿಸಿದಾಗ ಆಗ ತಾನೆ ಪದವಿ ಮುಗಿಸಿದ್ದ ಗಂಗಾಧರ್  ಎಂಬ ಹಿರೇಗುತ್ತಿಯ    ಯುವಕ ಮುಂಗಾರು ದಿನಪತ್ರಿಕೆಗೆ  ವರದಿಗಾರನಾಗಿ ,ಜೊತೆಗೆ  ಪ್ರತಿನಿಧಿಯಾಗಿ ಪತ್ರಿಕೋಧ್ಯಮದ ಬದುಕು ಆರಂಭಿಸಿ , ಕಾರವಾರದ  ಬಿರು ಬಿಸಿಲಿನಲ್ಲಿ ಸೈಕಲ್ ತುಳಿದು ತನ್ನ ಮೈ ನೆತ್ತರನ್ನು ಬೆವರಾಗಿ ಹರಿಸಿ ಇಂದು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ.

ಒಂದು ಜಾತಿ, ಸಮುದಾಯ ಅಥವಾ ಧರ್ಮ ಇಲ್ಲವೆ ರಾಜಕೀಯ ಪಕ್ಷಗಳಿಗೆ ತಮ್ಮ ನಿಷ್ಟೆಯನ್ನು ಒತ್ತೆ ಇಟ್ಟು ಸಮಾಜವನ್ನು ಒಡೆಯುತ್ತಿರುವ ಪತ್ರಕರ್ತರು ಮತ್ತು ಪತ್ರಿಕೆಗಳ ನಡುವೆ ಗಂಗಾಧರ ಹಿರೇಗುತ್ತಿ , ಏಕೆ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ ಎಂಬುವುದಕ್ಕೆ ಅನೇಕ ಕಾರಣಗಳಿವೆ. ಅವರಲ್ಲಿರುವ ಮಾನವೀಯ ಮುಖವುಳ್ಳ ಸಂವೇದನೆ,, ಸದಾ ಬಡವರ ಪರವಾಗಿ ಇರುವ ಅಚಲವಾದ ಕಾಳಜಿ, ಮತ್ತು    ಸಮಾಜದ ಕಟ್ಟ ಕಡೆಯ ವ್ಯಕ್ತಿಯೊಬ್ಬನ  ಧ್ವನಿಯಾಗಬೇಕು ಎಂಬ ವೈಯಕ್ತಿಕ ಹಂಬಲ ಇವುಗಳು ಕೇವಲ ಹಿರೇಗುತ್ತಿಯವರ ಕಾಳಜಿ ಮಾತ್ರ ಆಗಿರದೆ, ಪತ್ರಿಕೆಯ ಕಾಳಜಿ ಕೂಡ ಆಗಿದೆ.ಇಂತಹ ಪತ್ರಿಕೆ ಮತ್ತು ಸಂಪಾದಕನಿಗಲ್ಲದೆ ಬೇರೆ ಯಾರಿಗೆ ತಾನೆ ಮೊಹರೆ ಪ್ರಶಸ್ತಿ ನೀಡಲು ಸಾಧ್ಯ? ನಿಜಕ್ಕೂ ಇದು ಪತ್ರಿಕೋದ್ಯಮ ಘನತೆಗೆ ಮಾತ್ರವಲ್ಲ, ಬದ್ಧತೆ ಮತ್ತು ಪ್ರಾಮಾಣಿಕತೆಗೆ ಸಂದ ಗೌರವ ಎಂದು ಹೇಳಬಹುದು.

( ಕರಾವಳಿ ಮುಂಜಾವು ಪತ್ರಿಕೆಯ “ಜಗದಗಲ” ಅಂಕಣಕ್ಕೆಬರೆದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ