ಸೋಮವಾರ, ಡಿಸೆಂಬರ್ 2, 2019

ಹರಿಲಾಲ್ ಗಾಂಧಿಯ ಮತಾಂತರ ಪ್ರಸಂಗ



ಇದೇ ನವಂಬರ್ ೩೦ ರಂದು ವರ್ಷದ ನನ್ನ ಮೊದಲ ಕೃತಿ ಮಹಾತ್ಮನ ಪುತ್ರ ಶೀರ್ಷಿಕೆ ಹರಿಲಾಲ್ ಗಾಂಧಿಯ ದುರಂತಗಾಥೆ ಸಪ್ನ ಬುಕ್ ಹೌಸ್ ಪ್ರಕಾಶನದಿಂದ ಬಿಡುಗಡೆಯಾಗಿದೆ.
\ಗಾಂಧೀಜಿಯವರ ಮೊದಲ ಪುತ್ರ ಎಂದರೆ, ಕುಡುಕ, ವ್ಯಭಿಚಾರಿ ಎಂದು ನಂಬಿಕೊಂಡು ಬಂದಿರುವ ವರ್ಗ ಒಂದು ಕಡೆಯಾದರೆ, ಗಾಂಧಿಯನ್ನು ಖಳನಾಯಕನನ್ನಾಗಿ ಮಾಡಿ, ಅವರ ಪುತ್ರ ಹರಿಲಾಲ್ ನನ್ನು ಕ್ರಾಂತಿಕಾರಿ ಪುತ್ರನನ್ನಾಗಿ ಚಿತ್ರಿಸಿ ಗಾಂಧಿ v/sಗಾಂಧಿ ಹೆಸರಿನಲ್ಲಿ ನಾಟಕ ಬರೆದು ಹಾಗೂ ಪ್ರದರ್ಶಿಸಿ ರೋಮಾಂಚನಗೊಂಡ ವರ್ಗ ಇನ್ನೊಂದು ಕಡೆ ಇದೆ.
ಇಂತಹ ಹುಸಿನಂಬಿಕೆ ಹಾಗೂ ಕಟ್ಟುಕಥೆಗಳನ್ನು ಗುಡಿಸಿ ಹಾಕುವ ನೈಜ ಘಟನೆಗಳನ್ನು ಹಾಗೂ ತಂದೆ ಮಗ ಇಬ್ಬರ ಪತ್ರ ಹಾಗೂ ಗುಜರಾತಿ ಮತ್ತು ಇಂಗ್ಲೀಷ್ಭಾಷೆಯಲ್ಲಿ ಬಂದಿರುವ ಕೃತಿಗಳನ್ನು ಆಧರಿಸಿ ಕೃತಿ ರಚನೆ ಮಾಡಿದ್ದೇನೆ.
೧೯೧೧ ಮೇ ೧೬ ರಂದು ದಕ್ಷಿಣ ಆಫ್ರಿಕಾದಲ್ಲಿ ಕುಟುಂವನ್ನು ತೊರೆದು ಹರಿಲಾಲ್ ಭಾರತಕ್ಕೆಬಂದದ್ದು ನಿಜ. ವಿದೇಶಿ ಶಿಕ್ಷಣ ಕುರಿತಂತೆ ತಂದೆ ಮಗನ ನಡುವೆ ಇದ್ದ ಭಿನ್ನಾಭಿಪ್ರಾಯ ಇದಕ್ಕೆ ಕಾರಣ. ಆದರೆ, ಹರಿಲಾಲ್ ದೈಹಿಕವಾಗಿ ಕುಟುಂಬದಿಂದ ದೂರವಿದ್ದರೇ ಹೊರತು, ಮಾನಸಿಕವಾಗಿ ತುಂಬಾ ಹತ್ತಿರವಿದ್ದರು. ೧೯೧೫ ರವರೆಗೆ ಭಾರತದಲ್ಲಿ ಹರಿಲಾಲ್ ಕುಟುಂಬದ ವೆಚ್ಚ ಮತ್ತು ಶಿಕ್ಷಣದ ವೆಚ್ಚವನ್ನು ಗಾಂಧಿ ಜಿ ಭರಿಸುತ್ತಿದ್ದರು. ಭಾರತಕ್ಕೆ ಬಂದ ನಂತರ ತನ್ನ ಸಹೋದರ 
ಲಕ್ಷ್ಮಿ ದಾಸ್ ಗಾಂಧಿ ಹರಿಲಾಲ್ ವಿವಾಹಕ್ಕೆ ಮಾಡಿದ್ದ ಖರ್ಚನ್ನು ಪಾವತಿಸಿದರು. ನಂತರ, ನನಗೆ ಈಗ ಭಾರದಲ್ಲಿ ಯಾವುದೇ ಸಂಪಾದನೆಯಿಲ್ಲ, ಸಾರ್ವಜನಿಕರ ಹಣದಿಂದ ಆಶ್ರಮದಲ್ಲಿ ಆಶ್ರಮವಾಸಿಗಳ ಜೊತೆ ಬದುಕುತ್ತಿದ್ದೇನೆ. ನಿನ್ನ ಬದುಕನ್ನು ನೀನೇ ರೂಪಿಸಿಕೊ ಎಂದು ಹರಿಲಾಕ್ ಗೆ ತಿಳಿಸಿದ್ದರು.
ಹರಿಲಾಲ್ ಕುಟುಂಬದ ಜೊತೆ ಕೊಲ್ಕತ್ತ ನಗರದಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿರುವಾಗ ಅವರ ಪತ್ನಿ ಗುಲಾಬ್ ಬೆಹನ್ ಕೊನೆಯ ಮಗುವಿನ ಹೆರಿಗೆಗೆ ತವರು ಮನೆ ರಾಜ್ ಕೋಟ್ ನಗರಕ್ಕೆ ಬಂದಾಗ ಕಾಲರಾ ಬೇನೆಗೆ ತುತ್ತಾಗಿ ಮಗುವಿನ ಜೊತೆ ಅವರು ನಿಧನರಾದರು. ಅನಾಥರಾದ ನಾಲ್ಕು ಮಕ್ಕಳನ್ನು ಹರಿಲಾಲ್ ಸಬರಮತಿ ಆಶ್ರಮಕ್ಕೆ ತಂದು ತಂದೆ ತಾಯಿಗಳ ವಶಕ್ಕೆ ಒಪ್ಪಿಸಿದರು. ರಾಮಿ ಬೆಹನ್, ಮನು ಬೆಹನ್, ಕಾಂತಿಲಾಲ್, ರಸಿಕ್ ಲಾಲ್ ಇವರೆಲ್ಲರೂ ಅಜ್ಜ ಅಜ್ಜಿಯ ಆಶ್ರಯದಲ್ಲಿ ಬೆಳೆದರು.
ಚಿಕ್ಕ ವಯಸ್ಸಿನಲ್ಲಿ ಪತ್ನಿಯ ಸಾವು, ಆನಂತರ ಹದಿನೇಳು ವರ್ಷದ ಮಗ ರಸಿಕ್ ಲಾಲ್ ಟೈಪಾಯಿಡ್ ಜ್ವರದಿಂದ ನಿಧನನಾದದ್ದು ಜೊತೆಗೆ ವ್ಯವಹಾರದಲ್ಲಿ ವೈಫಲ್ಯ ಇವೆಲ್ಕವೂ ಹರಿಕಾಲ್ ರವರ ಬದುಕನ್ನು ಸೂತ್ರ ಹರಿದ ಗಾಳಿ ಪಟದಂತೆ ಮಾಡಿದವು.
ಚಿಂತೆ ಮರೆಯಲು ಧೂಮಪಾನ ಮತ್ತು ಮದ್ಯಪಾನಕ್ಕೆ ಶರಣಾದರು. ದಿಕ್ಕೆಟ್ಟಾಗ ತಂದೆ ತಾಯಿಗೆ ಪತ್ರ ಬರೆದು ಇಲ್ಲವೆ ಭೇಟಿಯಾಗಿ ಮಾರ್ಗದರ್ಶನ ಕೋರುತ್ತಿದ್ದರು.
೧೯೪೭ ಜೂನ್ ೨೨ ರಂದು ಗಾಂಧೀಜಿಯವರು ಹರಿಲಾಲ್ ಬರೆದ ಪತ್ರ ಅವರ ಕೊನೆಯ ಪತ್ರವಾಯಿತು. ಸ್ವಾತಂತ್ರ್ಯ ಹೋರಾಟದ ನಡುವೆ ತನ್ನ ವೈಯಕ್ತಿಕ ಕುಟುಂಬದ ದುರಂತವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳದೆ ಶಿಲುಬೆ ಹೊತ್ತ ಏಸುಕ್ರಿಸ್ತನಂತೆ ನೋವನ್ನ ಜೀವನವಿಡಿ ಹೊತ್ತು ತಿರುಗಿದ ಮಹಾತ್ಮನ ಜೀವನವನ್ನು ನೆನದಾಗ ಕಣ್ಣುಗಳು ಒದ್ದೆಯಾಗುತ್ತವೆ.
ಪಾಶ್ಚಿಮಾತ್ಯ ಶಿಕ್ಷಣವೆಂಬುದು ಗಾಂಧಿಯವರ ದೃಷ್ಟಿಯಲ್ಲಿ ಅಧರ್ಮವಾಗಿತ್ತುಮನುಷ್ಯರನ್ನು ಮನುಷ್ಯರಾಗಿ ನೋಡದ ಕಾಲಘಟ್ಟದ ಬಿಳಿಯರ ಧೋರಣೆಯಿಂದಾಗಿ ಜೊತೆಗೆ ತಾವು ವಿದೇಶದಲ್ಲಿ ಪಡೆದ ಶಿಕ್ಷಣ ಅನುಭವದಿಂದ ಅವರು ನಿಲುವು ತಾಳಿದ್ದರು. ಅವರ ದೃಢ ನಿಲುವು ಕುಟುಂಬದ ದುರಂತಕ್ಕೆ ಪರೋಕ್ಷವಾಗಿ ಕಾರಣವಾಯಿತು.
ಹಾಗಾಗಿ ಕೃತಿ ಏಕಕಾಲಕ್ಕೆ ಹರಿಲಾಲ್ ಗಾಂಧಿಯ ದುರಂತಗಾಥೆಯೂ ಹೌದು, ಗಾಂಧಿ ಮತ್ತು ಕಸ್ತೂರಬಾ ಅವರ ಒಡಲಾಳದ ನೋವಿನ ಕಥೆಯೂ ಹೌದು.
ಡಿಸೆಂಬರ್ ಮೊದಲವಾರದಿಂದ ರಾಜ್ಯದ ಎಲ್ಲಾ ಪುಸ್ತಕದ ಅಂಗಡಿಗಳಲ್ಲಿ ದೊರೆಯುತ್ತದೆ. ಜೊತೆಗೆ ಸಪ್ನ ಬುಕ್ ಹೌಸ್ ನಿಂದ ಆನ್ ಲೈನ್ ಮೂಲಕ ಖರೀದಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ