ಬುಧವಾರ, ಮೇ 27, 2020

ಆಹಾರ ಸಂಸ್ಕೃತಿಗೆ ಅಂಟಿದ ಜಾತಿಯತೆಯ ಜಾಡ್ಯ



ಈ ಇಪ್ಪತ್ತೊದನೆಯ ಶತಮಾನದಲ್ಲಿ ಆಧುನಿಕ ತಂತ್ರಜ್ಞಾನಗಳ ನಡುವೆ ಬದುಕುತ್ತಿರುವ ಭಾರತೀಯರಿಗೆ  ಕ್ರಿಶ್ತ ಪೂರ್ವದ ವೇದ ಉಪನಿಷತ್ತುಗಳ ಕಾಲದಲ್ಲಿ  ಅಂಟಿದ ಜಾತಿಯ ಸೊಂಕು   ಎರಡೂವರೆ ಸಾವಿರ ಕಳೆದರೂ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಇತ್ತೀಚೆಗೆ  ಸಾಮಾಜಿಕ ಜಾಲತಾಣದಲ್ಲಿ  ಬ್ರಾಹ್ಮಣ ಮಹಿಳೆಯೊಬ್ಬಳು  “ ಬ್ರಾಹ್ಮಣರಿಂದ ತಯಾರಾದ ಶುದ್ಧವಾದ ಸಾಂಬಾರ್ ಪುಡಿ” ಎಂಬ  ಶೀರ್ಷಿಕೆಯಡಿ ಹಾಕಿದ ಚಿತ್ರವು ಹಲವು ಬಗೆಯ ಹೇಳಿಕೆ, ಟೀಕೆ, ವಾದ, ಪ್ರತಿ ವಾದಕ್ಕೆ ಕಾರಣವಾಗುವುದರ ಜೊತೆಗೆ ಬ್ರಾಹ್ಣಣರ ಸಂಘಟನೆಗೆ ಪರೋಕ್ಷವಾಗಿ ಕಾರಣವಾಯಿತು. ಇಷ್ಟು ಮಾತ್ರ ಸಾಲದೆಂಬಂತೆ ಕೆಲವು ಮಹಾ ಬ್ರಾಹ್ಮಣರು  “ ಬ್ರಾಹ್ಮಣರಿಂದ ತಯಾರಾಗುವ ಆಹಾರ ಪದಾರ್ಥಗಳನ್ನು  ( ಹಪ್ಪಳ, ುಪ್ಪಿನ ಕಾಯಿ, ಸಂಡಿಗೆ, ಸಾಂಬಾರ್ ಪುಡಿ ಇತ್ಯಾದಿ) ಖರೀದಿಸುವಂತೆ ಫರ್ಮಾನು ಹೊರಡಿಸಿದರು.
ಭಾರತದ ನೆಲಮೂಲ ಸಂಸ್ಕೃತಿಯ ಬೇರು ತಿಳಿಯಲಾರದ ಮೂರ್ಖರು ಮಾತ್ರ ಇಂತಹ ಅವಿವೇಕದ ನಡೆಗಳನ್ನು ಸಮರ್ಥಿಸಿಕೊಳ್ಳಬಲ್ಲರು. ನಮ್ಮಲ್ಲಿ ಐವತ್ತು ವರ್ಷಗಳ ಹಿಂದೆ ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ,  ಐಯ್ಯಂಗಾರ್ ಬೇಕರಿ, ವೀರಶೈವರ ಖಾನಾವಳಿ ಎಂಬ ಹೆಸರಿನಲ್ಲಿ ಜಾತಿ ಸೂಚಕ ಹೊಟೇಲ್ ಮತ್ತು ಬೇಕರಿಗಳಿದ್ದುದು ನಿಜ.. ಜಾತಿಯತೆ, ಅಸ್ಪೃಶ್ಯತೆ ಜಾರಿಯಲ್ಲಿದ್ದ ಕಾಲಘಟ್ಟದಲ್ಲಿ ಇಂತಹ ವ್ಯವಸ್ಥೆಯನ್ನು ಅಂದಿನ ಸಮಾಜ ಿಪ್ಪಿಕೊಂಡಿತ್ತು.  ಈ ಆಧುನಿಕತೆಯ ಕಾಲಘಟ್ಟದಲ್ಲಿ  ಎಲ್ಲಾ ಬಗೆಯ ಗಡಿ ರೇಖೆಗಳು ಅಳಿಸುತ್ತಾ, ವಿಶ್ವವೇ ಒಂದು ಹಳ್ಳಿಯಾಗುತ್ತಿರುವಾಗ  ಗೌಡರ ಮಿಲಿಟರಿ ಹೋಟೆಲ್, ಬ್ರಾಹ್ಮಣರ ಶೂದ್ಧ ಸಸ್ಯಹಾರಿ ಫಲಹಾರ ಮಂದಿರ, ಲಿಂಗಾಯತರ ಖಾನಾವಳಿ ಎಂಬ ಹೆಸರಿಡುವುದು ನಿಜಕ್ಕೂ ಮೂರ್ಖತನದ ಪರಮಾವಧಿ.
ಭಾರತದಲ್ಲಿ ಪ್ರಾದೇಶಿಕತೆಗೆ ಅನುಗುಣವಾಗಿ ನಮ್ಮ ಆಹಾರ ಸಂಸ್ಕೃತಿ  ಇತ್ತೇ ಹೊರತು ಜಾತಿಗೆ ಅನುಗುಣವಾಗಿ ಇರಲಿಲ್ಲ. ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ  ಬಯಲುಸೀಮೆಯ ಪ್ರದೇಶಗಳಲ್ಲಿ ರಾಗಿ ಮುದ್ದೆ, ಸೊಪ್ಪಿನ ಸಾರಿನ ಊಟ  ಕೇವಲ ಒಕ್ಕಲಿಗರ ಆಹಾರವಾಗಿಲ್ಲ. ಅದರ ಮೇಲೆ ಯಾವ ಗೌಡನ ಹೆಸರನ್ನು ಛಾಪಿಸಿಲ್ಲ. ಬಯಲುಸೀಮೆಯಲ್ಲಿ ಬದುಕುವ ಒಕ್ಕಲಿಗ, ಬಣಜಿಗ, ದಲಿತರೂ ಸೇರಿದಂತೆ ಬ್ರಾಹ್ಮಣರ ಮನೆಗಳಲ್ಲಿ ಮುದ್ದೆ ಊಟ ಸಾಮಾನ್ಯವಾಗಿದೆ
.
ಇದೇ ರೀತಿಯಲ್ಲಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕದ ಜೋಳದ ರೊಟ್ಟಿ, ಫಲ್ಯ, ಶೇಂಗಾ ಚೆಟ್ನಿ, ಪುಂಡಿ ಪಲ್ಯ, ಮೊಸರು ಇಂತಹ ಆಹಾರ ಕೇವಲ ಲಿಂಗಾಯತರ ಆಹಾರ ಪದ್ಧತಿಯಾಗಿ  ಉಳಿದಿಲ್ಲ. ಅಲ್ಲಿನ ಪ್ರತಿಯೊಂದು ಜಾತಿಯ ಆಹಾರ ಸಂಸ್ಕೃತಿಯಾಗಿದೆ, ಕೆಲವು ವಿಶೇಷ ಸಿಹಿ ತಿಂಡಿಗಳು  ಆಯಾ ಊರಿನ ಜೊತೆ ಪ್ರಸಿದ್ಧಿ ಪಡೆದಿವೆಯೇ ಹೊರತು, ಜಾತಿಯ ಜೊತೆ ಅಲ್ಲ. ಧಾರವಾಡ ಪೇಡ, ಬೆಳಗಾವಿ ಕುಂದಾ, ಮೈಸೂರು ಪಾಕ್, ದಾವಣಗೆರೆಯ ಬೆಣ್ಣೆ ದೋಸೆ, , ಕರಾವಳಿಯ ಪ್ರದೇಶಗಳ ಮೀನು ಊಟ, ಹೈದರಾಬಾದ್ ಬಿರಿಯಾನಿ ಹೀಗೆ  ಈ ಆಹಾರ ಪದಾರ್ಥಗಳನ್ನು ಯಾರೂ ಬೇಕಾದರೂ ತಯಾರಿಸಬಹುದು. ಇವುಗಳನ್ನು ತಯಾರಿಸುವವರ ಜಾತಿ ಯಾವುದೆಂದು ಯಾರೂ ಈವರೆಗೆ ಪ್ರಶ್ನಿಸಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಜಾತಿಯತೆಯ ಶ್ರೇಷ್ಠತೆಯ ವ್ಯಸನ ಏಕೆ ಮೂಡಿಬಂದಿತು? ಅರ್ಥವಾಗುತ್ತಿಲ್ಲ. ಬ್ರಾಹ್ಮಣರಿಂದ ತಯಾರಾದ ಸಾಂಬಾರ್ ಪುಡಿಗೆ ಬ್ರಾಹ್ಣ್ಯದ  ಶ್ರೇಷ್ಠತೆ ಹೇಗೆ ಬಂದಿತು?  ಸಾಂಬಾರ್ ಪುಡಿಗೆ ಬಳಸಿದ ಮೆಣಸಿನಕಾಯಿ, ಮೆಣಸು, ಬೇಳೆಕಾಳು ಇತ್ಯಾಧಿಗಳನ್ನು ಬೆಳೆದವನು  ರೈತ, ಅದನ್ನು ಕುಯ್ಲು ಮಾಡಿ, ಶುದ್ದೀಕರಿಸಿದವರು ದಲಿತ ಹಾಗೂ ಹಿಂದುಳಿದ ವರ್ಗಗಳ ಕೂಲಿ ಕಾರ್ಮಿಕರು. ಅವರೆಲ್ಲಾ ತಮ್ಮ ನೆತ್ತರನ್ನು ಬೆವರಾಗಿ ಹರಿಸಿದ ಪರಿಣಾಮ ಸಾಂಬಾರು ಪದಾರ್ಥಗಳು ಬ್ರಾಹ್ಮಣರ ಕೈಗೆ ನಿಲುಕಿದವು. ನೈಜ ಸ್ಥಿತಿ ಹೀಗಿರುವಾಗ  ಇದನ್ನು ಬ್ರಾಹ್ಮಣರ ಪರಿಶುದ್ಧ ಸಾಂಬಾರ್ ಪುಡಿ  ಹೇಗೆ  ಕರೆಯುವುದು? ಸಾಂಬಾರ್ ಗೆ ಬಳಸುವ ಅಡುಗೆ ಉಪ್ಪನ್ನು ತಯಾರಿಸುವವರು ತಮಿಳುನಾಡು ಹಾಗೂ ಗುಜರಾತಿನ ಕಡಲ ತೀರದ ದಲಿತರು. ಅವರ ಬೆವರಿನ  ಶ್ರಮದ ಉತ್ಪಾದನೆಗಳ ಮೇಲೆ ಬ್ರಾಹ್ಮಣ್ಯದ ಹೆಸರು ಟಂಕಿಸುವ ಕ್ರಿಯೆಯನ್ನು ಮುಠಾಳತನ ಎನ್ನಬಹುದೇ ಹೊರತು, ಪರಮ ಶ್ರೇಷ್ಠ ಕಾರ್ಯ ಎಂದು ಕರೆಯಲಾಗದು.
.
ಭಾರತೀಯ ಸಂಸ್ಕೃತಿ ಕುರಿತು ಪುಂಖಾನು ಪುಂಖವಾಗಿ ಬೊಗಳೆ ಬಿಡುವ ಹಾಗೂ ಬ್ರಾಹ್ಮಣ್ಯದ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಮಾನಸಿಕ ರೋಗಿಗಳಿಗೆ ಈ ಚಾರಿತ್ರಿಕ ಸತ್ಯದ ಅರಿವಿರಲಿ. ಭಾರತದಲ್ಲಿ ವ್ಯಕ್ತಿಯೊಬ್ಬ ಯಾವ ಜಾತಿಗೆ ಸೇರಿರಲಿ, ಅವನು ಬದುಕಿನಲ್ಲಿ ಸೋತಾಗ ಅಥವಾ ವಿಮುಕ್ತನಾದಾಗ ಇಲ್ಲವೇ ವೈರಾಗಿಯಾದಾಗ  ಅವನಿಗೆ ಬದುಕಲು ಇದ್ದ ಏಕೈಕ ಮಾರ್ಗ ಭಿಕ್ಷಾನ್ನ ಅಥವಾ ಭಿಕ್ಷಯಾಗಿತ್ತು..  ಅವನು ಮನೆಯ ಮುಂದೆ ನಿಂತು ಕರೆದದ್ದು ಅಮ್ಮಾ ಎಂಬ ಶಬ್ದವೇ ಹೊತು ಅಯ್ಯಾ, ಅಥವಾ ಅಪ್ಪಾ ಎಂಬ ಶಬ್ದವಲ್ಲ. ಏಕೆಂದರೆ, ಭಾರತೀಯ ಸಂಸ್ಕೃತಿಯಲ್ಲಿ ಅಮ್ಮಾ ಎಂಬ ಶಬ್ದಕ್ಕೆ ಜಾತಿಯ, ಧರ್ಮದ ಸೋಂಕು ಅಂಟಿಲ್ಲ. ಭಾರತದ ಎಲ್ಲಾ ಭಾಷೆಗಳಲ್ಲಿಯೂ ಹೆತ್ತೊಡಲಿಗೆ ಅಮಾ ಎಂಬ ಹೆಸರು ಹೊರತು ಪಡಿಸಿದರೆ ಬೇರೆ ಶಬ್ದವಿಲ್ಲ ಹಾಗಾಗಿ ಯಾವೊಬ್ಬ ಭಿಕ್ಷಕನೂ ತನಗೆ ಭಿಕ್ಷೆ ನೀಡುವವರು ಯಾವ ಜಾತಿಯವರು ಎಂದು ಪ್ರಶ್ನೆ ಕೇಳುವುದಿಲ್ಲ. ಅವನ ಅನ್ನದ ಬಟ್ಟಲಿಗೆ ಆಹಾರ ಅಥವಾ ಆತನ ಹೆಗಲ ಮೇಲಿನ ಜೋಳಿಗೆಗೆ ಅಕ್ಕಿ, ಜೋಳ, ರಾಗಿ  ಹಾಕುವವಳು ಒಬ್ಬ ತಾಯಿಯಾಗಿರುತ್ತಾಳೆ.  ತಾಯಿ ಜಾತಿಯ ಸೂತಕದಿಂದ ಹೊರಗಾದವಳು. ಅದೇ ರೀತಿ ನಾವು ಸೇವಿಸುವ ಆಹಾರವು ಜಾತಿ ಮತ್ತು ಧರ್ಮದ ಸೋಂಕಿನಿಂದ ಹೊರತಾದುದು..
ಈ ನೆಲಮೂಲ ಸಂಸ್ಕೃತಿ ಕಲಿಯಲು ವ್ಯಕ್ತಿಯೊಬ್ಬನಿಗೆ  ಯಾವ ಬ್ರಾಹ್ಮಣ್ಯ ಅಥವಾ ಪಾಂಡಿತ್ಯ ಬೇಕಾಗಿಲ್ಲ. ನಾವು ಉಸಿರಾಡುವ ಗಾಳಿಗೆ, ಹರಿಯುವ ನೀರಿಗೆ ಮತ್ತು ಉರಿಯುವ  ಅಗ್ನಿಗೆ ಜಾತಿ,  ಧರ್ಮದ ಹಂಗಿಲ್ಲ ಎಂಬ ಕನಿಷ್ಠ  ಜ್ಞಾನವಿದ್ದರೆ ಸಾಕು.  ಅಂತಹವನು ಬ್ರಾಹ್ಮಣ, ಲಿಂಗಾಯುತ, ಒಕ್ಕಲಿಗೆ, ಕುರುಬ ಇತ್ಯಾದಿ  ಜಾತಿಗಳನ್ನು ಮೀರಿದ ಅಪ್ಪಟ ಮನುಷ್ಯನಾಗಿ ಬಾಳಲು ಸಾಧ್ಯವಿದೆ. ಅಂತಹ ಬದುಕನ್ನು ಬದುಕಿ ತೋರಿಸಿದ ಬುದ್ದ, ರಾಮಾನುಜ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ನಮಗೆ ಇಂದಿಗೂ ಮಾದರಿಯಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ