ಸೋಮವಾರ, ಜನವರಿ 19, 2015

ಬುಡಕಟ್ಟು ಜನಾಂಗದ ಬವಣೆಗಳು ಮತ್ತು ಅಭಿವೃದ್ಧಿಯ ತೊಡುಕುಗಳು



 ನಾವು ಬದುಕುತ್ತಿರುವ ವರ್ತಮಾನದ ಜಗತ್ತು ಇಪ್ಪತ್ತನೆಯ ಶತಮಾನದ ಹೊಸ್ತಿಲನ್ನು ದಾಟಿ, ಇಪ್ಪತ್ತೊಂದನೆಯ ಶತಮಾನ ಅಂಗಳಕ್ಕೆ ಕಾಲಿಡುತ್ತಿದ್ದಂತೆ, ನಾವು ಈವರೆಗೆ ನಿರ್ವಚಿಸಿಕೊಂಡು ಬಂದಿದ್ದ ಅಭಿವೃದ್ಧಿಯ ವಾಖ್ಯಾನಗಳು ಬದಲಾಗಿ ಹೋದವು. ತೀವ್ರ ಪೈಪೋಟಿಯಿಂದ ಕೂಡಿದ ಮಾರುಕಟ್ಟೆ ಆಧಾರಿತ  ಜಗತ್ತಿನಲ್ಲಿ ಕಲ್ಯಾಣ ರಾಷ್ಟ್ರ ಎಂಬ ಪರಿಕಲ್ಪನೆ ಪಲ್ಲಟಗೊಳ್ಳುವುದರ ಜೊತೆಗೆ, ಮಾನವೀಯತೆಗಿಂತ ಮುಖ್ಯವಾಗಿ ಲಾಭಕೋರತನ ಮುಖ್ಯವಾಯಿತು. ಜಾಗತೀಕರಣ ವ್ಯವಸ್ಥೆಯು ಎಲ್ಲಾ ದೇಶಗಳ ಭಾಷೆ ಮತ್ತು ಗಡಿಗಳನ್ನು ಮೀರಿ ಎಲ್ಲರ ಬದುಕಿನಲ್ಲಿ ಆವರಿಸಿಕೊಳ್ಳುತ್ತಿದ್ದಂತೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುವ ಸರ್ಕಾರಗಳನ್ನು ಮತ್ತು ನಮ್ಮ ಬದುಕನ್ನು  ಅದು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.
ಇವೆಲ್ಲವುಗಳ ಒಟ್ಟು ಪರಿಣಾಮ ಎಂಬಂತೆ ನಗರ ಮತ್ತು ಹಳ್ಳಿಗಳ ಚಹರೆ ಬದಲಾಗುತ್ತಾ ಹೋದಂತೆ ಹಳ್ಳಿಗಳು ಸ್ಮಶಾನ ಸದೃಶ್ಯವಾದವು. ನಗರಗಳ ಅಭಿವೃದ್ಧಿಗೆ ಆದ್ಯತೆ ಹೆಚ್ಚಾದಂತೆ ಜೊತೆ ಜೊತೆಯಲ್ಲಿ ಸಮಸ್ಯೆಗಳು ಸೃಷ್ಟಿಯಾದವು. ಪಂಚತಂತ್ರ ಕಥೆಗಳಲ್ಲಿ ಬರುವ ವಿಕ್ರಮನ ಹೆಗಲಿಗೆ ಜೋತು ಬಿದ್ದ ಬೇತಾಳದಂತೆ ಭಾರತದ ಹೆಗಲಿಗೆ ಜೋತು ಬಿದ್ದಿರುವ ಸಮಸ್ಯೆಗಳಲ್ಲಿ ಭಾರತದ ಬುಡಕಟ್ಟು ಜನಾಂಗದ ಅಭಿವೃದ್ಧಿಯೂ ಸಹ ಒಂದು. ಭಾರತದ ಬುಡಕಟ್ಟು ಜನಾಂಗದ ಸಮಸ್ಯೆ ಇಂದಿಗೂ ಸಹ ಜೀವಂತ ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಜೊತೆಗೆ ನಕ್ಸಲ್ ಹೋರಾಟಕ್ಕೆ ಮೂಲ ಕಾರಣವಾಗಿದೆ.
ಈಗಾಗಲೆ ಅರ್ಧಶತಮಾನದಷ್ಟು ಕಾಲ ಹೋರಾಟದ ಮೂಲಕ ಹಾದು ಬಂದಿರುವ ಭಾರತದ ನಕ್ಸಲ್ ಹೋರಾಟವನ್ನು  2015 ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದಾಗ ಸಂಭ್ರಮ ಪಡುವ ವಿಷಯಕ್ಕಿಂತ ಸಂಕಟ ಪಡುವ ಸಂಗತಿಗಳೇ ಹೆಚ್ಚಾಗಿವೆ.
1930 ದಶಕದಲ್ಲಿ ಆಂಧ್ರ ಪ್ರದೇಶದ ಉತ್ತರ ಭಾಗದ ಗೋದಾವರಿ ನದಿಯಾಚೆ ಕೃಷಿ ಕಾರ್ಮಿಕರು ಮತ್ತು ಗೇಣಿದಾರ ರೈತರ ಹೋರಾಟವಾಗಿ ಮತ್ತು ಇದೇ ವೇಳೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಪ್ರಾಂತ್ಯದ ಡಾರ್ಜಿಲಿಂಗ್ ಗಿರಿಧಾಮದ ಸುತ್ತ ಮುತ್ತ ಇದ್ದ ಬ್ರಿಟೀಷರ ಒಡೆತನಲ್ಲಿ ಇದ್ದ ಚಹಾ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಬುಡುಕಡ್ಡು ಜನಾಂಗದ ಕೂಲಿ ಹೆಚ್ಚಳಕ್ಕಾಗಿ ಎಡಪಂಥೀಯ ಸಂಘಟನೆಗಳಿಂದ ಆರಂಭವಾದ ನಕ್ಸಲ್ ಹೋರಾಟ, ನಂತರದ ದಿನಗಳಲ್ಲಿ ಹಲವು ಮಜಲುಗಳನ್ನು ತಲುಪಿ ನಂತರ ನಕ್ಸಲ್ ಚಳುವಳಿಯಾಗಿ ರೂಪುಗೊಂಡಿತುಸೈದ್ಧಾಂತಿಕ ಹಿನ್ನಲೆಯಲ್ಲಿ ಆರಂಭಗೊಂಡ ಹೋರಾಟಕ್ಕೆ ಚಾರು ಮುಜುಂದಾರ್, ಕನುಸನ್ಯಾಲ್, ಕನಾಯ್ ಚಟರ್ಜಿ, ಜಗಲ್ ಸಂತಾಲ್, ಸುಬತ್ರಾದತ್, ನಾಗಭೂಷಣ್ ಪಟ್ನಾಯಕ್, ಎನ್.ಪ್ರಸಾದ್ ವಿನೋದ್ ಮಿಶ್ರಾ ಮತ್ತು  ಆಂಧ್ರದ ನಾಗಿರೆಡ್ಡಿ, ವೆಂಪಟಾಪು ಸತ್ಯನಾರಾಯಣ, ಕೃಷ್ಣಮೂರ್ತಿ, ಕೊಂಡಪಲ್ಲಿ ಸೀತಾರಾಮಯ್ಯ ಹೀಗೆ ಅನೇಕ ನಾಯಕರು ತಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ನಕ್ಸಲ್ ಹೋರಾಟಕ್ಕೆ ಭದ್ರ ಬುನಾದಿ ಹಾಕಿದ್ದರು. 1980 ದಶಕದಲ್ಲಿ ಹೋರಾಟ ಸರ್ಕಾರ ಮತ್ತು ನಕ್ಸಲ್ ಸಂಘಟನೆಗಳ ನಡುವಿನ ಯುದ್ಧವಾಗಿ ಮಾರ್ಪಟ್ಟು ಹಿಂಸೆಯ ಹಾದಿಯನ್ನು ತುಳಿಯಿತು. ಹೋರಾಟದ ನಡುವೆ ಸಿಲುಕಿದ ಭಾರತದ ಅಮಾಯಕ ಸಮುದಾಯವಾದ ಬುಡಕಟ್ಟು ಜನಾಂಗ ಎಲ್ಲಾ ಅಭಿವೃದ್ಧಿಯಿಂದ ವಂಚಿತವಾಗಬೇಕಾಯಿತು.
ಒಂದು ನೆಮ್ಮದಿಯ ಸಂಗತಿಯೆಂದರೆ, ಇಡೀ ರಾಷ್ಟ್ರಾದ್ಯಂತ ನಕ್ಸಲರು ಮತ್ತು ಸರ್ಕಾರಗಳ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಹಿಂಸೆಯ ಪ್ರಮಾಣ ಕ್ರಮೇಣ ಇಳಿಮುಖವಾಗುತ್ತಿದೆ. (2012 ಸಮೀಕ್ಷೆಯ ವರದಿ) ಜಾರ್ಖಂಡ್ ಮತ್ತು ಛತ್ತೀಸ್ಗಡ್ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಆಶಾಭಾವನೆ ಮೂಡುವಂತಿದೆ. ನಕ್ಸಲ್ ಚಳವಳಿಯನ್ನು ಹುಟ್ಟುಹಾಕಿದ ಆಂಧ್ರಪ್ರದೇಶದಲ್ಲಿ ಕೇವಲ 13 ಸಾವುಗಳು ಸಂಭವಿಸಿವೆ. ಜಾರ್ಖಂಡ್ನಲ್ಲಿ 160 ಸಾವು ( 2011 ರಲ್ಲಿ 182 ) ಛತ್ತೀಸ್ಗಡದಲ್ಲಿ 107 ( 2011 ರಲ್ಲಿ 204 ) ಬಿಹಾರದಲ್ಲಿ 43ಸಾವು  (2011 ರಲ್ಲಿ 63) ಪಶ್ಚಿಮ ಬಂಗಾಳದಲ್ಲಿ 6 ಸಾವು( 2011 ರಲ್ಲಿ 45) ಹೀಗೆ ಭಾರತದಲ್ಲಿ 2011ರಲ್ಲಿ 1760 ಪ್ರಕರಣಗಳು ನಡೆದು, 611 ನಾಗರೀಕರು ಮತ್ತು 99 ನಕ್ಸಲರು ಮೃತಪಟ್ಟಿದ್ದರೆ, 2012 ಅವಧಿಯಲ್ಲಿ 1365 ಪ್ರಕರಣಗಳು ದಾಖಲಾಗಿ 409 ನಾಗರೀಕರು ಮತ್ತು 74 ನಕ್ಸಲರು ಮೃತಪಟ್ಟಿದ್ದಾರೆ. ಒಟ್ಟಾರೆ ಸರ್ಕಾರ ಮತ್ತು ನಕ್ಸಲ್ ಸಂಘಟನೆಗಳಿಗೆ ಸಂಘÀರ್ಷ ಮತ್ತು ಹಿಂಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಮೂಡತೊಡಗಿದೆ.




ಭಾರತದ ನಕ್ಸಲ್ ಇತಿಹಾಸದಲ್ಲಿ ಪೊಲೀಸರತ್ತ, ಅಥವಾ ಸರ್ಕಾರಗಳತ್ತ ಇಲ್ಲವೆ, ನಕ್ಸಲ್ ಸಂಘಟನೆಗಳತ್ತ ಬೆರಳು ತೋರಿಸಿ ಆರೋಪ ಹೊರಿಸುವ ಮುನ್ನ ಉಭಯ ಬಣಗಳು ಎಲ್ಲಿ ಎಡವಿದವು ಎಂಬುದರತ್ತ ಗಮನಹರಿಸಿ ಹಿಂಸೆ ಮತ್ತು ಹೋರಾಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ  ಸಾಂಘಿಕ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಮುಕ್ತ ಮನಸ್ಸಿನಿಂದ ಕೈ ಜೋಡಿಸಬೇಕಿದೆ. ಇತಿಹಾಸದ ಘಟನೆಗಳನ್ನು ಕೆದಕುತ್ತಾ ಪರಸ್ಪರ ಆರೋಪ ಮಾಡಿ ಕಾಲ ಕಳೆಯುವ ಬದಲು, ಹಿಂಸೆಯಿಂದ ಮುಕ್ತವಾದ ಜಗತ್ತಿನತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಸೃಷ್ಟಿಸಬೇಕಾದ ಸಮಾಜದಲ್ಲಿ ಹಿಂಸೆ, ಬಡತನ, ಅಪಮಾನ, ಶೋóಷಣೆಗಳಿಲ್ಲದೆ ದಲಿತರು, ಬುಡಕಟ್ಟು ಜನಾಂಗದ ಆದಿವಾಸಿಗಳು, ಮತ್ತು ಅಲ್ಪಸಂಖ್ಯಾತರು ಇವರೆಲ್ಲಾ ಭಯಮುಕ್ತರಾಗಿ ಸಮಾನ ಗೌರವದಿಂದ ಬದುಕುವಂತಹ ವಾತಾವರಣವನ್ನು  ನಿರ್ಮಾಣ ಮಾಡುವ ನೈತಿಕ ಹೊಣೆ  ಅಕ್ಷರ  ಬಲ್ಲ ನಮ್ಮೆಲ್ಲರ ಮೇಲಿದೆವೈದ್ಯನೊಬ್ಬ ಖಾಯಿಲೆಯ ಮೂಲಕ್ಕೆ ಕೈ ಹಾಕುವಂತೆ ನಾವುಗಳು ಕೂಡ ಸಮಸ್ಯೆಗಳ ಬುಡಕ್ಕೆ ಕೈ ಹಾಕಬೇಕಿದೆ. ಸಮಾಜದಲ್ಲಿ ಅನೇಕ ರೂಪದಲ್ಲಿ ತಾಂಡವಾಡುತ್ತಿರುವ  ಹಿಂಸೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ಭಾರತದ ನಕ್ಸಲ್ ಹೋರಾಟದ ಇತಿಹಾಸ ಅಥವಾ ಅದು ಹಿಡಿದ ಹಿಂಸೆಯ ಮಾರ್ಗ ಕುರಿತಂತೆ ನಮ್ಮಗಳ ಅಸಮಾಧಾನ ಏನೇ ಇರಲಿ, ಅವರುಗಳ ಹೋರಾಟದಲ್ಲಿ ಎಲ್ಲಿಯೂ ಸ್ವಾರ್ಥವೆಂಬುದು ಇರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇಂದಿಗೂ ಮೂಕ ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿಗಳು ಮತ್ತು ಹಿಂದುಳಿದ ಬುಡಕಟ್ಟು ಜನಾಂಗಗಳ ನೆಮ್ಮದಿಯ ಬದುಕಿಗಾಗಿ ನಕ್ಸಲಿಸಂ ಹೆಸರಿನಲ್ಲಿ ಸಾವಿರಾರು ವಿದ್ಯಾವಂತ ಯುವಕರು ಪ್ರಾಣತೆತ್ತಿದ್ದಾರೆ. ಇವರ ಹೋರಾಟದ ಹಿಂದಿನ ಕಾಳಜಿಯನ್ನು ನಮ್ಮನ್ನಾಳುವ ಸರ್ಕಾರಗಳು ಅರಿಯುವ ಮನಸ್ಸು ಮಾಡಿದ್ದರೆ, ನಕ್ಸಲ್ ಸಂಘಟನೆಗಳು ಮತ್ತು ಸರ್ಕಾರಗಳ ನಡುವಿನ ಸಂಘರ್ಷಕ್ಕೆ ರಕ್ತದ ಕಲೆಗಳು ಅಂಟಿಕೊಳ್ಳುತ್ತಿರಲಿಲ್ಲಸಂಘರ್ಷಕ್ಕೆ ಮೂಲ ಕಾರಣರಾದ ಭಾರತದ ಅರಣ್ಯವಾಸಿ ಆದಿವಾಸಿಗಳ ಬದುಕು ಭಾರತ ಸ್ವಾತಂತ್ರ್ಯಾನಂತರದ 67 ವರ್ಷಗಳಲ್ಲಿ ಹಸನಾಗಿದೆಯಾ? ಅದೂ ಇಲ್ಲ.



ನಮ್ಮ ನಡುವಿನ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರಗುಹಾ  2011 ರಲ್ಲಿ ಆಗಸ್ಟ್ ಹದಿನೈದರೆಂದು ದೆಹಲಿಯ ಹಿಂದೂಸ್ತಾನ್ ಟೈಮ್ಸ್ ದಿನ ಪತ್ರಿಕೆಗೆಟ್ರೈಬಲ್ ಟ್ರ್ಯಾಜಿಡಿಸ್ ( ಬುಡಕಟ್ಟು ಜನಾಂಗಗಳ ದುರಂತ) ಎಂಬ ವಿಶೇಷ ಲೇಖನವನ್ನು ಬರೆದಿದ್ದರು. ಭಾರತದ ಆದಿವಾಸಿಗಳ ಸಮಸ್ಯೆಯನ್ನು ನಿಖರವಾಗಿ ಗುರುತಿಸಿರುವ ಗುಹಾ ಅವರು, ನಮ್ಮ ಜನಪ್ರತಿನಿಧಿಗಳ ಕಪಟ ನಾಟಕವನ್ನೂ ಸಹ ಲೇಖನದಲ್ಲಿ ನಿಷ್ಟುರವಾಗಿ ಅನಾವರಣಗೊಳಿಸಿದ್ದಾರೆ.
2010 ಆಗಸ್ಟ್ ತಿಂಗಳಿನಲ್ಲಿ ಒರಿಸ್ಸಾದಲ್ಲಿ ಆದಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ ಇನ್ನು ಮುಂದೆ ದೆಹಲಿಯಲ್ಲಿ ನಿಮ್ಮ ಪರವಾಗಿ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಮರೆತು ಹೋದ ಪ್ರಸಂಗವನ್ನು ಪ್ರಸ್ತಾಪಿಸುತ್ತಾ ಭಾರತದ ಬುಡಕಟ್ಟು ಅಥವಾ ಆದಿವಾಸಿಗಳ ಸಮಸ್ಯೆಯನ್ನು ಏಳು ಬಗೆಯಲ್ಲಿ  ರಾಮಚಂದ್ರ ಗುಹಾ ಗುರುತಿಸಿದ್ದಾರೆ. ಅವುಗಳು ಕೆಳಗಿನಂತಿವೆ.
ಒಂದು -:  ದಟ್ಟವಾದ ಅರಣ್ಯದಲ್ಲಿ ತಮ್ಮದೇ ಆದ ಸಂಸ್ಕøತಿಯ ನೆರಳಿನಲ್ಲಿ ಮತ್ತು ಸಮೃದ್ಧ ಖನಿಜ ಸಂಪತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಬದುಕಿರುವ ಆದಿವಾಸಿಗಳು ಇಂದು ಅಭಿವೃದ್ಧಿಯ ನೆಪದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯದಲ್ಲಿ ನಿರಂತವಾಗಿ ನಡೆದಿರುವ ಮರಗಳ ಮಾರಣಹೋಮ ಇವೆಲ್ಲವೂ ಅವರನ್ನು ಆದುನಿಕ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅತಂತ್ರರನ್ನಾಗಿ ಮಾಡಿವೆ.

ಎರಡು -:  ಭಾರತದಲ್ಲಿ ದಲಿತರಿಗೆ ದಿಕ್ಕುದೆಸೆಯಾಗಿ ಡಾ. ಬಿ.ಆರ್.ಅಂಬೇಡ್ಕರ್ ಜನ್ಮತಾಳಿದ ಹಾಗೆ ಬುಡಕಟ್ಟು ಜನಾಂಗದ ಸಮುದಾಯಕ್ಕೆ ಒಬ್ಬ ಅಂಬೇಡ್ಕರ್ ದೊರೆಯದಿರುವುದು ಅವರ ಅವರ ಶೋಚನೀಯ ಬದುಕಿಗೆ ಕಾರಣವಾಗಿದೆ.

ಮೂರು -: ಭಾರತಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಹರಿದು ಹಂಚಿಹೋಗಿರುವ ಬುಡಕಟ್ಟು ಜನಾಂಗ ಇಲ್ಲಿಯವರೆಗೆÀ ಯಾವುದೇ ರಾಜಕೀಯ ಪಕ್ಷಗಳಿಗೆ ದಲಿತರು ಅಥವಾ ಅಲ್ಪಸಂಖ್ಯಾತರ ಹಾಗೆ ಮತಬ್ಯಾಂಕ್ಗಳಾಗಿ ಗೋಚರಿಸಲಿಲ್ಲ.

ನಾಲ್ಕು -: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನಾಂಗಕ್ಕಾಗಿ ಮೀಸಲಿಟ್ಟ ಉದ್ಯೋಗಗಳು ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾವಂತರ ಪಾಲಾದವು.

ಐದು -:  ಇವರುಗಳ ಆಶೋತ್ತರಗಳನ್ನು ಈಡೇರಿಸಲು ಉನ್ನತ ಹುದ್ದೆಯಲ್ಲಿ ಬುಡಕಟ್ಟು ಜನಾಂಗದಿಂದ ಬಂದ ಮೇಲ್ಮಟ್ಟದ ಅಧಿಕಾರಿಯಾಗಲಿ, ಅಥವಾ ಒಬ್ಬ ಜನಪ್ರತಿನಿಧಿಯಾಗಲಿ ಇಲ್ಲದಿರುವುದರಿಂದ ಆದಿವಾಸಿಗಳ ಸಮಸ್ಯೆಗಳು ಈವರೆಗೆ ಸರ್ಕಾರಗಳ ಕಣ್ಣಿಗೆ ಗೋಚರವಾಗಿಲ್ಲ.

ಆರು -: ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಗಳ ಬದುಕು ಪರಿಸರಕ್ಕೆ ಮಾರಕವಾಗದಂತೆ, ದೇಶಿ ಜ್ಞಾನಪರಂಪರೆಯಿಂದ ಕೂಡಿದ್ದು ಅವರುಗಳು ಕಾಪಾಡಿಕೊಂಡು ಬಂದಿರುವ ಜ್ಞಾನ ಶಿಸ್ತುಗಳನ್ನು ಸುಲಭವಾಗಿ ಆಧುನಿಕ ಬದುಕಿಗಾಗಲಿ ಅಥವಾ ತಂತ್ರಜ್ಞಾನಕ್ಕಾಗಲಿ ಅಳವಡಿಸಲು ಸಾಧ್ಯವಾಗಿಲ್ಲ.

ಏಳು-: ಪಶ್ಚಿಮ ಬಂಗಾಳದ ಸಂತಾಲ್ ಭಾಷೆಯೊಂದನ್ನು ಹೊರತು ಪಡಿಸಿದರೆ ಸಮುದಾಯಗಳ ಉಳಿದ ಮಾತೃಭಾಷೆಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಕಾರಣದಿಂದಾಗಿ ಬುಡಕಟ್ಟು ಜನಾಂಗದ ಮಕ್ಕಳು ಮಾತೃ ಭಾಷೆಯ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಲಭಿಸಿ  ಆರೂವರೆ ದಶಕಗಳ ನಂತರವೂ ಯಾವ ಪಕ್ಷಗಳಾಗಲಿ, ಸರ್ಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಅಥವಾ ಯೋಜನೆಗಳನ್ನು ರೂಪಿಸಿದ್ದನ್ನು ನಾವುಗಳು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದೆ ಹೋಗಿದ್ದರೆ, ನತದೃಷ್ಟರು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದರು ಎಂಬುದು ನಾವು ಅರಗಿಸಿಕೊಳ್ಳಲೇ ಬೇಕಾಗಿರುವ ಸತ್ಯ.
ಸಮಾಧಾನದ ಸಂಗತಿಯೆಂದರೆ, ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾದಂತಿದೆಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.
2003 ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ, ನಕ್ಸಲರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲ್ಲಿನ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು  ಕೇಂದ್ರ ಸರ್ಕಾರ ಗ್ರಹಿಸಿದೆ. ಇದರಿಂದಾಗಿ  ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007 ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012 ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ 2012 ವೇಳೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ  ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ..ಎಸ್. ಅಧಿಕಾರಿ ಶರ್ಮ ಮಧ್ಯಸ್ತಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕು ಮಾತ್ರ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರ್ಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ  ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವ ಸಂಭವ ತೀರಾ ಕಡಿಮೆ. ನಕ್ಸಲ್ ಚಳವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳದಂತೆ ತಡೆಯಬೇಕುಇದಕ್ಕಿರುವ ಏಕೈಕ ಪರಿಹಾರವೆಂದರೆ, ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದಜಲ್, ಜಂಗಲ್, ಜಮೀನ್ಎಂಬ ಬೇಡಿಕೆಗಳನ್ನು ಈಡೇರಿಸುವುದು.


ಅರಣ್ಯದಲ್ಲ್ರಿ ಅತಂತ್ರರಾಗಿರುವ ಆದಿವಾಸಿ ಜನಾಂಗಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರ್ಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಹಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನುತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು, ಮಸಾಲೆ ಪದಾರ್ಥಗಳು ಇವುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತವಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಲ್ಲಿ ಕುಡಿಯುವ ಶುದ್ಧ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೊದಲು ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು.
ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಸರ್ಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕಲು ಸಾಧ್ಯನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಹೊಣೆಗಾರಿಕೆ ಪ್ರಮುಖ ಪಾತ್ರ ವಹಿಸಲಿದೆ. ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುಧ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್ಸಿಂಗ್, ಸುಂದರಯ್ಯ, ಜ್ಯೋತಿಬಸು, ಸೋಮನಾಥಚಟರ್ಜಿ ಇಂತಹ ನಾಯಕರು ಮತ್ತು ಅವರ ಚಿಂತನೆಯ ಮಾದರಿಗಳು ಬೇಕಾಗಿವೆ. ಕಮ್ಯೂನಿಷ್ಟ್ ಪಕ್ಷದ ವೈಫಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ಧದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಏಳಿಗೆಯ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯೂನಿಷ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸೀತಾರಾಮ್ ಯಚೂರಿ, ಬೃಂದಾಕಾರಟ್, ರಾಜಾ, ದಾಸ್ಗುಪ್ತಾ ಮುಂತಾದ ಬದ್ಧತೆಯುಳ್ಳ ಪ್ರಜ್ಞಾವಂತ ನಾಯಕರಿದ್ದರೂ ಸಹ ಕಮ್ಯೂನಿಷ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕøತಿಯ ಜನರಂತೆ ಚಿಂತಿಸುತ್ತಿರುವುದು ವರ್ತಮಾನದ ದುರಂತ. ಉಳ್ಳವರ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಇವರು ಮನಗಾಣಬೇಕಿದೆ.

ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ದಗೊಳ್ಳುವ ಉಧಾರ ಮನಸ್ಸುಗಳು ಬೇಕಾಗಿವೆಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡೂ ಕಡೆಯಿಂದ ಶಾಂತಿ ಮತ್ತು ನೆಮ್ಮದಿಗಾಗಿ ತುಡಿಯುವ ಮುಕ್ತ ಮನಸ್ಸುಗಳು ಮಾತ್ರಹಿಂಸಾತ್ಮಕ ನಕ್ಸಲ್ ಹೋರಾಟದ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೆ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ಧವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಇಂತಹ ನೋವಿನ ಗಳಿಗೆಯಲ್ಲಿ ನಾವುಗಳು ಮೌನ ಸಾಕ್ಷಿಯಾಗಬೇಕಾಗುತ್ತದೆ. ಮಾನವೀಯತೆಗಾಗಿ ಹಂಬಲಿಸುವ  ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯವಾದ ಅಂತಹ ಜಗತ್ತು ಎಂದೂ  ಬಾರದಿರಲಿ. ನೆಲದ ಮೆಲೆ ಪ್ರತಿ ಜೀವಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ ಎಂಬುದನ್ನು ಸಾಭೀತು ಪಡಿಸುವ ದೃಷ್ಟಿಯಲ್ಲಾದರೂ ಯುದ್ಧ ಕೊನೆಗಾಣಬೇಕಾಗಿದೆ.

(ಕೇಂದ್ರ ಸರ್ಕಾರದ ಯೋಜನಾ ಆಯೋಗದ “ ಯೋಜನಾ” ಪತ್ರಿಕೆಯಲ್ಲಿ ಪ್ರಕಟವಾದ ಆಹ್ವಾನಿತ ಲೇಖನ)

ಶುಕ್ರವಾರ, ಡಿಸೆಂಬರ್ 26, 2014

ಗಾಂಧೀಜಿ ಚಿಂತನೆಗಳ ವಾರಸುದಾರ ಬಾಬಾ ಅಮ್ಟೆ ಒಂದು ನೆನಪು




ತಮ್ಮ ಚಿಂತನೆ, ತ್ಯಾಗ, ಬಲಿದಾನ ಮತ್ತು ದೂರದರ್ಶಿತ್ವ  ಮುಂತಾದದ ಒಳನೋಟಗಳಿಂದ ಭಾರತವನ್ನೂ ಒಳಗೊಂಡಂತೆ ಇಪ್ಪತ್ತನೆಯ ಶತಮಾನದ ಜಗತ್ತನ್ನು ಇನ್ನಿಲ್ಲದಂತೆ ಕಾಡಿದವರು ಮಹಾತ್ಮ ಗಾಂಧೀಜಿ. ಇಂದು ಗಾಂಧಿ ನಮ್ಮೊಡನೆ ಇಲ್ಲದಿದ್ದರೂ ಸಹ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಅವರು ಹೊತ್ತಿಸಿದ ಜ್ಞಾನದ ಕಿಡಿಯನ್ನು ಹಲವು ಬಗೆಯಲ್ಲಿ, ಹಲವು ರೂಪದಲ್ಲಿ ಜೀವಂತ ಹಲವು ಮಹನೀಯರು ನಮ್ಮೊಡನೆ ಇದ್ದರೆ, ಇನ್ನು ಕೆಲವು ತಮ್ಮ ಹೆಜ್ಜೆಯ ಗುರುತುಗಳನ್ನು ದಾಖಲಿಸಿ ಹೋಗಿದ್ದಾರೆ. ಅಂತಹವರಲ್ಲಿ ನಮ್ಮ ನೆರೆಯ ಮಹಾರಾಷ್ಟ್ರದ ಚಂದ್ರಪುರ್ ಜಿಲ್ಲೆಯ ಬಾಬಾ ಅಮ್ಟೆ ಒಬ್ಬರು. ಅವರು ಬದುಕಿದ್ದರೆ 26-12-14 ಕ್ಕೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಅವರ  ಸಾಧನೆ ಮತ್ತು ಆಧರ್ಶೀನಿಯವಾದ ಬದುಕು  ಈಗ ಯಾರಿಗೂ ನೆನಪಾಗುತ್ತಿಲ್ಲ.


ಗಾಂಧಿಗಿರಿಯ ಫಸಲುಗಳು ಎಂದು ಕರೆಯಬಹುದಾದ ಶೂ ಮಾಕರ್, ಲೂಯಿಫಿಶರ್, ರೋನಾಲ್ಡ್ ಡಂಕನ್, ಜೆ.ಸಿ.ಕುಮಾರಪ್ಪ, ಮಹದೇವದೇಸಾಯಿ, ಮೆಡಲಿನ್ ಸ್ಲೆಡ್, (ಮೀರಾ ಬೆಹನ್) ಕರುಣಾಕರನ್, ರವೀಂದ್ರ ಶರ್ಮ, ಸಿ.ವಿ.ಶೇಷಾದ್ರಿ, ಸುರೇಂದ್ರಕೌಲಗಿ ಹೀಗೆ ಅನೇಕ ಸಾಧಕರ ನಡುವೆ ಬಾಬಾ ಅಮ್ಟೆ ಕೂಡ ಪ್ರಮುಖರು.
ಬಾಬಾ ರವರು 1914 ಡಿಸಂಬರ್ 26 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗನ್ ಘಾಟ್ ಎಂಬಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ( ಮೂಲ ಹೆಸರು ಮುರುಳಿದಾಸ್, ಬಾಬಾ ಎಂಬುದು ತಂದೆ ತಾಯಿ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ಇವರ ತಂದೆ ದೇವಿಲಾಲ್ ಸಿಂಗ್ ಬ್ರಿಟೀಷ್ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿದ್ದರು ( ತಾಯಿ ಶ್ರೀಮತಿ ಲಕ್ಷ್ಮಿ ಬಾಯಿ ಅಮ್ಟೆ)  ಬಾಬಾ ಅಮ್ಟೆ ನಾಗಪುರದಲ್ಲಿ ಕಾನೂನು ಪದವಿ ಮುಗಿಸಿ, ಒಂದಷ್ಟು ವರ್ಷಗಳ ಕಾಲ ವಕೀಲ ವೃತ್ತಿಯನ್ನು ಕೈಗೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟೀಷ್ ಸರ್ಕಾರದಿಂದ ಬಂಧಿತರಾಗುತ್ತಿದ್ದ ಹೋರಾಟಗಾರರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು.  ಆನಂತರ 1942 ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರ ಸಂಪರ್ಕಕ್ಕೆ ಬಂದರು. ಆ ವೇಳೆಗಾಗಲೆ ಅವರೊಳಗಿನ ಆತ್ಮಸಾಕ್ಷಿಯ ಪ್ರಜ್ಞೆ ಜಾಗೃತವಾಗಿತ್ತು. ಒಂದೇ ಒಂದು ಗಿಡ ನೆಡದ ನಾನು, ಬಿಸಿಲಿನ ತಾಪ ತಾಳಲಾರದೆ ಮರದ ನೆರಳನ್ನು ಆಶ್ರಯಿಸಲು ಯಾವ ನೈತಿಕ ಹಕ್ಕಿದೆ? ನ್ಯಾಯಾಲಯದಲ್ಲಿ ಕೇವಲ ಹದಿನೈದು ನಿಮಿಷದ ವಾದಕ್ಕೆ ಐವತ್ತು ರೂಪಾಯಿ ಶುಲ್ಕ ಪಡೆಯುವ ನಾನು ಮತ್ತು  ಎರಡು ರೂಪಾಯಿ ಕೂಲಿಗೆ ದಿನವಿಡಿ ಬಿಸಿಲಿನಲ್ಲಿ ದುಡಿಯುವ ಕೂಲಿಗಾರ ಇವುಗಳ ನಡುವೆ ಇಷ್ಟೊಂದು ಅಂತರವೇಕೆ? ಇಂತಹ ಅನೇಕ ಪ್ರಶ್ನೆಗಳಿಗೆ ಅವರು ಗಾಂಧಿಯವರ ಚಿಂತನೆಗಳಲ್ಲಿ ಉತ್ತರ ಕಂಡುಕೊಂಡರು. ಗಾಂಧೀಜಿವರು ವಾರ್ಧ ಬಳಿ ಸೇವಾಗ್ರಾಮ ಆರಂಭಿಸಿದಾಗ  ವಕೀಲಿ ವೃತ್ತಿ ತ್ಯಜಿಸಿ ಸೇವಾಗ್ರಾಮ ಸೇರಿಕೊಂಡರು. ಒಮ್ಮೆ ಬ್ರಿಟೀಷ್ ಯೋಧನಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಬಾಲಕಿಯನ್ನು ಅಮ್ಟೆಯವರು ರಕ್ಷಿಸಿದ್ದರು. ಈ ವಿಷಯ ತಿಳಿದ ಗಾಂಧೀಜಿಯವರು ಬಾಬಾ ಅಮ್ಟೆಯವರಿಗೆ “ ಅಭಯ್ ರಕ್ಷಕ್” ಎಂಬ ಬಿರುದು ನೀಡಿ, ಪ್ರೀತಿಯಿಂದ ಅವರನ್ನು ಅದೇ ಹೆಸರಿನಿಂದ ಕರೆಯುತ್ತಿದ್ದರು.

ಗಾಂಧೀಜಿಯವರ ಸನೀಹದಲ್ಲಿ ಗ್ರಾಮಭಾರತದ ಬಗ್ಗೆ ಮತ್ತು ದೀನ ದಲಿತರ ಬಗ್ಗೆ ಸೃಷ್ಟ ಆಲೋಚನೆಗಳನ್ನು ಕಂಡುಕೊಂಡ ಬಾಬಾ ಆಮ್ಟೆಯವರು, ಸ್ವಾತಂತ್ರ್ಯಾ ನಂತರ ಅಂದರೆ 1949 ರ ಆಗಸ್ಟ್ ಹದಿನೈದರಂದು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆನಂದವನ ಎಂಬ ಹೆಸರಿನಲ್ಲಿ ಆಶ್ರಮ ತೆರೆದು, ಕುಷ್ಟರೋಗಿಗಳ ಹಾರೈಕೆ, ಬಡವರ ವೃತ್ತಿ ನೈಪುಣ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಗುಡಿಕೈಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಿದರು. ಆಶ್ರಮ ಸ್ಥಾಪನೆಗೆ ಪ್ರೇರಣೆಯಾದ ಸಂಗತಿಯೊಂದನ್ನು ಬಾಬಾ ಅಮ್ಟೆ ಈ ರೀತಿ ಹೇಳಿಕೊಂಡಿದ್ದಾರೆ. “ ಒಂದು ದಿನ ರಸ್ತೆ ಬದಿಯಲ್ಲಿ ಮುದುಡಿ ಬಿಸಾಡಿದ ಕಂಬಳಿಯೊಂದರಲ್ಲಿ ಜೀವವೊಂದು ಉಸಿರಾಡುತ್ತಿತ್ತು. ಹೋಗಿ ನೋಡಿದಾಗ, ಕುಷ್ಟ ರೋಗದಿಂದ ಕೈ ಕಾಲಿನ ಬೆರಳುಗಳನ್ನು ಕಳೆದುಕೊಂಡು, ಕೇವಲ ಮೂಗಿನ ಒಳ್ಳೆಗಳಷ್ಟೇ ಕಾಣುತ್ತಿದ್ದ ಪುರುಷ ಜೀವವೊಂದು ಬಿಸಿಲು-ಮಳೆ- ಚಳಿಯ ನಡುವೆ ಉಸಿರಾಡುತ್ತಿತ್ತು. ಆ ಜೀವ ಮಲಗಿದ್ದ ಜಾಗದಲ್ಲಿ ಬಿದಿರಿನ ಗಳಗಳನ್ನು ನೆಟ್ಟು ಹೊದಿಕೆ ಹೊದಿಸಿ ನೆರಳು ಕಲ್ಪಿಸಿಕೊಟ್ಟೆ. ತಿನ್ನಲು ಆಹಾರ, ಕುಡಿಯಲು ನೀರು ಕೊಟ್ಟು, ಆತನನ್ನು ಉಪಚರಿಸಲು ಪ್ರಯತ್ನಿಸಿದೆ. ಆದರೆ, ತುಳಸಿರಾಂ ಎನ್ನುವ ಆ ಜೀವ ನನ್ನ ತೋಳಿನಲ್ಲಿ ಪ್ರಾಣ ಬಿಟ್ಟಿತು. ಆತನ ಸಾವು ಹಲವು ತಿಂಗಳ ಕಾಲ ನನ್ನನ್ನು ಎಡಬಿಡದೆ ಕಾಡಿತು. ಅಂತಿಮವಾಗಿ ಕುಷ್ಟ ರೋಗಿಗಳ ಶುಶ್ರೂಷೆಗೆ ನನ್ನ ಬದುಕನ್ನು ಮುಡಿಪಾಗಿಟ್ಟೆ” ಬಾಬಾ ಅಮ್ಟೆಯವರ ಈ ಮಾತುಗಳು ನನಗೆ ಮನುಕುಲಕ್ಕೆ ಬರೆದ ಭಾಷ್ಯವೇನೋ ಎಂಬಂತೆ ತೋರುತ್ತವೆ.
ಇಂದು ಆನಂದ ವನ ಬೃಹತ್ ಸೇವಾ ಕೇಂದ್ರವಾಗಿ ಬೆಳೆದು ನಿಂತಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಡ, ಈ ಮೂರು ರಾಜ್ಯಗಳ ನಡುವಿನ ಗಡಿ ಪ್ರದೇಶದಲ್ಲಿರುವ ಆನಂದವನ, ಮಹಾರಾಷ್ಟರದ ಚಂದ್ರಾಪುರ, ಗೊಂಡಿಯ, ಭಂಡಾರ ಜಿಲ್ಲೆಗಳು, ಮಧ್ಯಪ್ರದೇಶದ ಬಾಳ್ ಗಾಟ್, ಛತ್ತೀಸ್ ಗಡದ ರಾಯ್ ಪುರ್, ಬಿಲಾಸ್ ಪುರ್ ಜಿಲ್ಲೆಗಳ ಅರಣ್ಯದಲ್ಲಿ ಬದುಕುತ್ತಿರುವ ಲಕ್ಷಾಂತರ ಅರಣ್ಯವಾಸಿಗಳ ಪಾಲಿಗೆ ಸಂಜೀವಿನಿಯಾಗಿದೆ. ಅವರ ಪತ್ನಿ ಸಾಧನಾ ಅಮ್ಟೆಯವರ ಬೆಂಬಲದಿಂದ ಬೃಹತ್ ಸಂಸ್ಥೆಯಾಗಿ ಬೆಳೆದ ಆನಂದವನ ಈಗ  ಅವರ ಮಕ್ಕಳಾದ ಡಾ.ವಿಕಾಸ್ ಮತ್ತು ಡಾ.ಪ್ರಕಾಶ್ ಅಮ್ಟೆ ಹಾಗೂ ಸೊಸೆಯಂದಿರಾದ ಡಾ. ಮಂದಾಕಿನಿ, ಡಾ.ಭಾರತಿ ಇವರ ತ್ಯಾಗಮಯ ಜೀವನದಿಂದ ದಂಡಕಾರಣ್ಯದಲ್ಲಿ ಬಡವರ ಮತ್ತು ಆದಿವಾಸಿಗಳ ಪಾಲಿಗೆ ಬದುಕಿನ ದಾರಿದೀಪವಾಗಿದೆ.


ಮೂರು ವರ್ಷದ ಹಿಂದೆ ನಕ್ಸಲ್ ಕಥನದ ಅಧ್ಯಯನಕ್ಕಾಗಿ ಈ ಪ್ರದೇಶದಲ್ಲಿ ಓಡಾಡುತ್ತಿದ್ದಾಗ, ನಾಗಪುರದ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ವರದಿಗಾರ ಮಿತ್ರನ ಜೊತೆ ಆನಂದವನಕ್ಕೆ ಬೇಟಿ ನೀಡಿ ಗಾಂಧೀಜಿಯ ಚಿಂತನೆ ಜೀವಂತವಾಗಿರುವುದನ್ನು ಕಂಡು ಮೂಕನಾಗಿದ್ದೆ. ಒಬ್ಬ ವ್ಯಕ್ತಿಯಲ್ಲಿ ನಿರ್ಧಿಷ್ಟ ಗುರಿ ಮತ್ತು ಛಲಗಳಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಬಾಬಾ ಅಮ್ಟೆಯವರ ಸಾಧನೆಗಳನ್ನು ನಮ್ಮ ಮುಂದಿವೆ. ಈ ದೇಶದ ಭಾರತ ರತ್ನ ಪ್ರಶಸ್ತಿಯನ್ನು ಹೊರತು ಪಡಿಸಿ, ಬಹುತೇಕ ಪ್ರಶಸ್ತಿಗಳು, ಎಂಟು ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ, ರಾಮನ್ ಮ್ಯಾಗ್ಸಸೆ, ಹಾಗೂ ವಿಶ್ವಸಂಸ್ಥೆಯ ಪ್ರಶಸ್ತಿಗಳನ್ನು ಪಡೆದ ಬಾಬಾ ರವರು ತಮ್ಮ ಇಳಿವಯಸ್ಸಿನಲ್ಲಿ ಬೆನ್ನುಮೂಳೆ ಮುರಿತದಿಂದ  ಹಿನ್ನಡೆ ಅನುಭವಿಸಿದರು. ಆನಂದವನದಲ್ಲಿ ಸದಾ ಕೂಲಿಕಾರರ ಮಕ್ಕಳ ಜೊತೆ ಆಟವಾಡುವುದು, ಅರಣ್ಯದ ಪ್ರಾಣಿಗಳನ್ನು ಸಾಕಿ ಅವುಗಳ ಶುಶ್ರೂಷೆ ಮಾಡುವುದು ಅವರ ಮೆಚ್ಚಿನ ಹವ್ಯಾಸವಾಗಿತ್ತು. 2008 ರ ಪೆಬ್ರವರಿ 9 ರಂದು ಭಾಬಾ ಅಮ್ಟೆ ನಿಧನರಾದರು. ಆದರೆ ಅವರ ಕನಸುಗಳು ಇಂದಿಗೂ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮೂಲಕ ಮುಂದುವರಿದು ಸಾಕಾರಗೊಳ್ಳುತ್ತಿವೆ. 


ಬಾಬಾ ಅಮ್ಟೆಯವರ ಮೊಮ್ಮಗ ಕೌಸ್ತುಭ ಎಂಬ ಯುವಕ ಗುಡಿಕೈಗಾರಿಕೆಗಳ ಚಟುವಟಿಕೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿದ್ದರೆ. ಪ್ರಕಾಶ್ ಅಮ್ಟೆ ಮತ್ತು ವಿಕಾಸ್ ಅಮ್ಟೆ ಹಾಗೂ ಅವರ ಪತ್ನಿಯರು ಆಸ್ಪತ್ರೆ ಮತ್ತು ಆಶ್ರಮಗಳ ಹೊಣೆ ಹೊತ್ತಿದ್ದಾರೆ. ಇತ್ತೀಚೆಗೆ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಮರಾಠಿ ಭಾಷೆಯಲ್ಲಿ ಬಾಬಾ ಅವರ ಪುತ್ರ ಪ್ರಕಾಶ್ ಅಮ್ಟೆಯವರ ಜೀವನ ಕುರಿತು ಸಿನಿಮಾ ತೆರೆಕಂಡಿದೆ. ನಾನಾಪಾಟೇಕರ್ ಪ್ರಕಾಶ್ ಅಮ್ಟೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈ ವರ್ಷದ ಯಶಸ್ವಿ ಮರಾಠಿ ಸಿನಿಮಾಗಳಲ್ಲಿ ಒಂದಾಗಿದ್ದು ಇದರಲ್ಲಿ ಬಾಬಾ ಅಮ್ಟೆಯವರ ಜೀವನ ಸಂದೇಶಗಳನ್ನೂ ಸಹ ನಾವು ಕಾಣಬಹುದಾಗಿದೆ.