ಗುರುವಾರ, ನವೆಂಬರ್ 16, 2017

ಕರ್ನಾಟಕ ಸಂಗೀತಕ್ಕೆ ನಾವಿನ್ಯತೆ ತಂದುಕೊಟ್ಟ ಅರಿಯಕುಡಿ ರಾಮಾನುಜಾ ಅಯ್ಯಂಗಾರ್


ಕರ್ನಾಟಕ ಸಂಗೀತದಲ್ಲಿ ಸಂಪ್ರದಾಯ ಮತ್ತು ಪರಿಶುದ್ಧತೆಯ ಲಯಬದ್ಧವಾದ ಸಂಗೀತ ಹಾಗೂ ಬದ್ಧತೆಯ ಜೊತೆಗೆ ಗಮಕಶುದ್ಧತೆಗೆ ಆದ್ಯತೆಯನ್ನು ನೀಡಿ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರಲ್ಲಿ ಅರಿಯಕುಡಿ ರಾಮಾನುಜಾ ಅಯ್ಯಂಗಾರ್ ಬಹು ಮುಖ್ಯರು. 1910-20 ದಶಕದಲ್ಲಿ ಎಂಟತ್ತು ಗಂಟೆಗಳ ಕಾಲ ನಿರಂತರವಾಗಿ ರಾತ್ರಿಯ ಸಂಗೀತ ಕಚೇರಿಗಳಲ್ಲಿ ಕಲಾವಿದರು ಪ್ರಸ್ತುತ ಪಡಿಸುತ್ತದ್ದ ವಾಗ್ಗೇಯಕಾರರ ಕೃತಿಗಳೆಂದರೆ, ಕೇವಲ ಮೂರು ನಾಲ್ಕಕ್ಕೆ ಸೀಮಿತವಾಗಿರುತ್ತಿತ್ತುಇಡೀ ಸಂಗೀತ ಕಚೇರಿಯನ್ನು ರಾಗಾಲಾಪನೆಗೆ, ಕಲ್ಪನಾಸ್ವರಗಳಿಗೆ ಮತ್ತು ನೆರವಲ್ ಗೆ ಕಲಾವಿದರು ತಮ್ಮ ಸಮಯವನ್ನು ಮೀಸಲಾಗಿಡುತ್ತಿದ್ದರು. ಇಲ್ಲಿ ಸಂಗೀತದ ಸೌಂದರ್ಯ ಅಥವಾ ವಾಗ್ಗೇಯಕಾರರ ಕೃತಿಗಳ ಮಹತ್ವಕ್ಕಿಂತ ಗಾಯಕರ ಹಾಗೂ ಪಕ್ಕವಾದ್ಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ದೊರೆತು ನಿಜವಾದ ಸಂಗೀತ ಹಿನ್ನಲೆಗೆ ಸರಿಯುತ್ತಿತ್ತು. ಕೇವ¯ ಸಂಗೀತಾಸಕ್ತರ ಸ್ವತ್ತಾಗಿದ್ದ ಕರ್ನಾಟಕ ಸಂಗೀತವನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವ ನಿಟ್ಟಿನಲ್ಲಿ ಅರಿಯಕುಡಿಯವರು ಮಾಡಿದ ಪ್ರಯೋಗ ಅಂದರೆ, ಕಚೇರಿಯ ಅವಧಿಯನ್ನು ಮೂರರಿಂದ ನಾಲ್ಕು ಗಂಟೆಗೆ ಇಳಿಸಿ, ಹೆಚ್ಚಿನ ಕೃತಿಗಳಿಗೆ ಮತ್ತು ರಾಗಗಳಿಗೆ ಅವಕಾಶ ಮಾಡಿಕೊಟ್ಟರಲ್ಲದೆ, ಕಛೇರಿಯಲ್ಲಿ ದೇವರನಾಮ, ಕೀರ್ತನೆ, ತಿಲ್ಲಾನ, ಪದಂ ಮತ್ತು ಜಾವಳಿ ಇವುಗಳಿಗೆ ಅವಕಾಶ ಕಲ್ಪಿಸುವುದರ ಮೂಲಕ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಿದರು. ಕಾರಣಕ್ಕಾಗಿ ಅವರನ್ನು ಆಧುನಿಕ ಕರ್ನಾಟಕದ ಸಂಗೀತದ ಪಿತಾಮಹಾ ಎಂದು ಸಂಗೀತ ಲೋಕದಲ್ಲಿ ಕರೆಯಲಾಗಿದೆ.
ಅರಿಯಕುಡಿ ರಾಮಾನುಜನ್ ಕರ್ನಾಕಟ ಸಂಗೀತವನ್ನು ಪ್ರವೇಶಿಸುವ ವೇಳೆಗೆ ದಿಗ್ಗಜರು ಎನಿಸಿಕೊಂಡ ಪಟ್ಟಣಂ ಸುಬ್ರಮಣ್ಯಮ ಅಯ್ಯರ್, ಮಹಾವೈದ್ಯನಾಥ ಅಯ್ಯರ್, ಪುಷ್ಪವನಂ ಅಯ್ಯರ್, ವೀಣಾ ಧನಮ್ಮಾಳ್, ಟೈಗರ್ ವರದಾಚಾರ್, ಕಾಂಚಿಪುರಂ ನೈನಾಪಿಳ್ಳೈ, ಮುಸುರಿ ಸುಬ್ರವ್ಮಣಂ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಹಾಗೂ ಅವರ ಗುರುಗಳಾದ ಪೂಚ್ಚಿ ಶ್ರೀನಿವಾಸ ಅಯ್ಯಂಗಾರ್ ಇಂತಹ ಮಹಾನ್ ಕಲಾವಿದರು ಸಂಗೀತ ಕ್ಷೇತ್ರದಲ್ಲಿ ತಮ್ಮ  ಸಂಗೀತ ಶ್ರೀಮಂತಿಕೆಯನ್ನು ಪ್ರದರ್ಶಿಸಿ ಅತ್ಯಂತ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಇಂತಹ ಮಹಾನುಭಾವರು ಉಳಿಸಿಕೊಂಡು ಬಂದಿದ್ದ ಸಂಗೀತ ಕಚೇರಿಯ ಪದ್ಧತಿಯನ್ನು ಬದಲಾವಣೆ ಮಾಡುವುದು ಸುಲಭದ ಸಂಗತಿಯಾಗಿರಲಿಲ್ಲ. ಆದರೆ, ತಮ್ಮ ನಾಲ್ಕನೆಯ ವಯಸ್ಸಿನಿಂದ; ಮುವತ್ತನೆಯ ವಯಸ್ಸಿನವರೆಗೆ ಸತತ ಇಪ್ಪತ್ತಾರುವ ವರ್ಷಗಳ ಕಾಲ ಸಂಗೀತವನ್ನು ಧ್ಯಾನಿಸಿ, ಅದನ್ನು ಉಸಿರಾಗಿಸಿಕೊಂಡು ಬಂದಿದ್ದ ಅರಿಯಕುಡಿಯವರೆಗೆ ಶುದ್ಧ ಹಾಗೂ ಸಾಂಪ್ರದಾಯಿಕ ಸಂಗೀತ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ತ್ರಿಮೂರ್ತಿ ವಾಗ್ಗೇಯಕಾರರಾದ ತ್ಯಾಗರಾಜರು, ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ಕೃತಿಗಳನ್ನು ಅರೆದು ಕುಡಿದಂತಿದ್ದ ಅವರಿಗೆ; ಎಲ್ಲಾ ಕೃತಿಗಳಿಗೆ ಹಾಗೂ ಸಂಗೀತದ ಎಲ್ಲಾ ರಾಗಗಳಿಗೂ ಕಚೇರಿಗಳಲ್ಲಿ ಪ್ರಾಧಾನ್ಯತೆ ನೀಡಬೇಕು ಎಂಬ ಆಸೆಗಿಂತ ಹೆಚ್ಚಾಗಿ ಛಲವಿತ್ತು. ಅದನ್ನು ಮಾಡಿತೋರಿಸುವುದರ ಜೊತೆಗೆ ನಿರಂತರ ಐವತ್ತು ವರ್ಷಗಳ ಕಾಲ ತಾವು ನೀಡಿದ ಸಂಗೀತ ಕಚೇರಿಗಳಲ್ಲಿ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದರು. ಅರಿಯಕುಡಿ ರಾಮಾನುಜಾ ಅಯ್ಯಂಗಾರ್ ಅವರ ಸಂಗೀತ ಕಚೇರಿಯೆಂದರೆ, ಕೇವಲ ಪ್ರತಿಭಾ ಪ್ರದರ್ಶನ ಅಥವಾ ತೋರಿಕೆಯ ಕಾರ್ಯಕ್ರಮವಾಗುತ್ತಿರಲಿಲ್ಲ. ಅದು ಶುದ್ಧ ಸಂಗೀತದ ಕಚೇರಿಯಾಗಿರುತ್ತಿತ್ತು. 1950-60 ದಶಕದಲ್ಲಿ ತಮಿಳುನಾಡಿನಲ್ಲಿ ಅರಿಯಕುಡಿಯವ ಗಾಯನ, ಟಿ.ಚೌಡಯ್ಯನವರ ಪಿಟಿಲು ವಾದನ ಮತ್ತು ಪಾಲ್ಘಾಟ್ ಮಣಿ ಅಯ್ಯರ್ ಅವರ ಮೃದಂಗವಾದನ ಕಚೇರಿ ಎಂದರೆ, ಸಾಕು ತ್ರಿಮೂರ್ತಿಗಳ ಕಾರ್ಯಕ್ರಮಕ್ಕೆ ಎಂಟರಿಂದ ಹತ್ತು ಸಾವಿರ ಮಂದಿ ಸಂಗೀತ ರಸಿಕರು ನೆರೆಯುತ್ತಿದ್ದರು.

ಅರಿಯಕುಡಿ ರಾಮಾನ್ಮಜಾ ಅಯ್ಯಂಗಾರ್ ಅವರದು ಬಾಲ್ಯದಿಂದಲೂ ಸಾಂಪ್ರದಾಯಕವಾದ ಶ್ರದ್ಧೆಯ ಬದುಕು. ಪ್ರತಿಯೊಂದು ವಿಷಯದಲ್ಲಿ ಅಚ್ಚುಕಟ್ಟುತನವಿರಬೇಕೆಂಬುದು ಅವರ ಹಂಬಲ. ಇದನ್ನು ನಿರಂತರವಾಗಿ ಅವರು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡಿ ಬಂದರು. ಇದಕ್ಕೆ ಹಿನ್ನಲೆಯಾಗಿ ಅವರು ಹುಟ್ಟಿ ಬೆಳೆದು ಬಂದ ಕುಟುಂಬದ ಪರಿಸರವೂ ಹಾಗಿತ್ತು. ಅವರ ತಂದೆ ತಿರುವೆಂಗಡತ್ತಂ ಅಯ್ಯಂಗಾರ್, ವೇದ,ಶಾಸû್ರಗಳು, ಸಂಸ್ಕತ ಮತ್ತು ಜೋತಿಷ್ಯದ ವಿದ್ವಾಂಸರಾಗಿ ಹೆಸರು ಮಾಡಿದ್ದರು. ತಮ್ಮ ಹುಟ್ಟೂರಾದ ರಾಮನಾಥಪ್ಮರಂ ಜಿಲ್ಲೆಯ  ಅರಿಯಕುಡಿ ಸಮೀಪದ ದೇವಕೋಟೆ ಎಂಬಲ್ಲಿ ವಾಸವಾಗಿದ್ದ ಕುಟುಂಬ ಅನುಕೂಲಸ್ಥ ಕುಟುಂಬವಾಗಿತ್ತು. 1889 ರಲ್ಲಿ ಜನಿಸಿದ ರಾಮಾನುಜಾ ಅಯ್ಯಂಗಾರ್ರವರಿಗೆ ಬಾಲ್ಯದಲ್ಲಿಯೇ ಸಂಗೀತದ ಒಲವಿದ್ದ ಕಾರಣ, ಅವರ ತಂದೆಯವರು ಮನೆಯಲ್ಲಿ ಸಂಗೀತ ಶಿಕ್ಷಣ ವ್ಯವಸ್ಥೆ ಮಾಡಿದ್ದರುಪುದುಕೋಟೈನಲ್ಲಿ ವಾಸಿಸುತ್ತಿದ್ದ ಮಲಯಪ್ಪ ಅಯ್ಯರ್ ಎಂಬ ಸಂಗೀತ ವಿದ್ವಾಂಸರನ್ನು ತಮ್ಮ ಮನೆಗೆ ಬರಮಾಡಿಕೊಂಡ ತಿರುವೆಂಗಡತ್ತಂ ಮಗನಿಗೆ ಸಂಗೀತ ಶಿಕ್ಷಣ ನೀಡಲು ಆರಂಭಿಸಿದರು. ಅರಿಯಕುಡಿಯವರ ಹನ್ನೊಂದನೆಯ ವಯಸ್ಸಿನಲ್ಲಿ ಉಪನಯನ ಮತ್ತು ವೇದಭ್ಯಾಸ ಮಾಡಿಸಿ, ಸಂಪೂರ್ಣವಾಗಿ ಸಂಗೀತದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಬಾಲಕ ರಾಮಾನ್ಮಜಾ ಅಯ್ಯಂಗಾರ್ ಅವರ ಹಾಡುಗಳನ್ನು ಗಮನಿಸಿದ್ದ ವಿದ್ವಾಂಸರಾದ ಮುತ್ತಯ್ಯ ಭಾಗವರ್ ಒಮ್ಮೆ ಅರಿಯಕುಡಿಯವರನ್ನು ಸೇತ್ತೂರು ಜಮೀನ್ದಾರ್ ಬಳಿ ಕರೆದೊಯ್ದು ಹಾಡು ಹೇಳಿಸಿದಾಗ, ಜಮೀನ್ದಾರ ಅರಿಯಕುಡಿಯವರ ಸಂಗೀತ ಕೇಳಿ ನೂರು ರೂಪಾಯಿ ಇನಾಮು ನೀಡಿದ್ದರು.
ಮೂರು ವರ್ಷಗಳ ಕಾಲ ಮನೆಯಲ್ಲಿ ಶಿಕ್ಷಣ ಪಡೆದ ಮಗನನ್ನು ತಿರುವೆಂಗಡತ್ತಂ ರವರು ತಿರುಚರಾಪಳ್ಳಿಗೆ ಕರೆದೊಯ್ದು ಅಲ್ಲಿನ ಶ್ರೀರಂಗಂ ನಲ್ಲಿ ವಾಸಿಸುತ್ತಿದ್ದ ನಾಮಕ್ಕಲ್ ನರಸಿಂಹ ಅಯ್ಯಂಗಾರ್ ರವರ ಬಳಿ ಹೆಚ್ಚಿನ ಶಿಕ್ಷಣಕ್ಕಾಗಿ ವ್ಯವಸ್ಥೆ ಮಾಡಿದರು. ನರಸಿಂಹಯ್ಯಂಗಾರ್ ಕಾಲಕ್ಕೆ ಪಲ್ಲವಿ ಅಯ್ಯಂಗಾರ್ ಎಂದು ತಮಿಳುನಾಡಿನಲ್ಲಿ ಪ್ರಸಿದ್ಧಿಯಾಗಿದ್ದರು. ಅವರ ಬಳಿ ಎರಡು ವರ್ಷ ಶಿಕ್ಷಣ ಪಡೆದ ಅರಿಯಕುಡಿಯವರು, ನಂತರ ಪೂಚಿ ಶ್ರೀನಿವಾಸ ಅಯ್ಯಂಗಾರ್ ಬಳಿ ಅಭ್ಯಾಸ ಮಾಡಿದರು. ಅರಿಯಕುಡಿಯವರಿಗೆ ಸ್ವತಂತ್ರವಾಗಿ ಸಂಗೀತ ಕಚೇರಿ ನಿಡುವ ಅವಕಾಶ ಒಮ್ಮೆ ಅನಿರೀಕ್ಷಿತವಾಗಿ ಒದಗಿ ಬಂದಿತು.  1912 ರಲ್ಲಿ ಅವರ ತಂದೆ ತಿರುವೆಂಡತ್ತಂ ಕುರಿತು ಅಪಾರ ಗೌರವ ಇಟ್ಟುಕೊಂಡಿದ್ದ ದೇವಕೋಟೆಯ ಶ್ರೀಮಂತ ಸೋಮಸುಂದರಂ ಎಂಬುವರು ತಮ್ಮ ಪುತ್ರಿಯ ವಿವಾಹ ಸಂದರ್ಭದಲ್ಲಿ ಅರಿಯಕುಡಿಯವರ ಸಂಗೀತದ ಗುರುಗಳಾದ ಪೂಚ್ಚಿ ಶ್ರೀನಿವಾಸ ಅಯ್ಯಂಗಾರ್ ಅವರ ಸಂಗೀತ ಕಚೇರಿಯನ್ನು ಏರ್ಪಡಿಸಿದ್ದರು. ಗುರುವಿನ ಗಾಯನವಾದ ಬಳಿಕ ಶಿಷ್ಯನಾದ ಅರಿಯಕುಡಿಯು ಸ್ವಲ್ಪ ಹೊತ್ತು ಸಂಗೀತ ಕಚೇರಿ ನಡೆಸಿಕೊಡಬೇಕೆಂದು ಎಲ್ಲಾ ಹಿರಿಯರಿಂದ ಬೇಡಿಕೆ ಬಂದಾಗ, ಗುರುವಿನ ಅಪ್ಪಣೆ ಪಡೆದ ಅರಿಯಕುಡಿಯುವರು ಜೀವನದಲ್ಲಿ ಪ್ರಥಮವಾಗಿ ಸಂಗೀತ ಕಾರ್ಯಕ್ರಮ ನೀಡುವುದರ ಮೂಲಕ ಎಲ್ಲರಿಂದ ಪ್ರಶಂಸೆಗೆ ಪಾತ್ರರಾದರು. ಆನಂತರವೂ ಅವರು ಗುರುವಿನ ಬಳಿ ಶಿಕ್ಷಣ ಪಡೆಯುತ್ತಾ, ನಮ್ಮ ಕನ್ನಡಿಗರಾದ ಭೈರವಿ ಕೆಂಪೇಗೌಡರನ್ನು ಒಳಗೊಂಡು, ಅನೇಕ ಸಂಗೀತ ವಿದ್ವಾಂಸರ ಕಚೇರಿಯಲ್ಲಿ ಪಾಲ್ಗೊಳ್ಳುತ್ತಾ ಸಂಗೀತವನ್ನು ಮನನ ಮಾಡಿಕೊಂಡರು. 1918 ರಲ್ಲಿ ತಿರುವಯ್ಯಾರಿನಲ್ಲಿ ನಡೆಯುವ ತ್ಯಾಗರಾಜರ ಆರಾಧನೆಯಲ್ಲಿ ಪ್ರಪಥಬಾರಿಗೆ ಸ್ವಂತಂತ್ರ ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು.

ಇತ್ತ ಮದ್ರಾಸ್ ನಗರದಲ್ಲಿ ದೇವಸ್ಥಾನ, ರಾಜಾಶ್ರಯಗಳಿಂದ ಸಂಗಿತವನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಅನೇಕ ಸ್ವತಂತ್ರ ಗಾನಸಭಾಗಳು ಹುಟ್ಟಿಕೊಂಡಿದ್ದ ಕಾರಣದಿಂದಾಗಿ ಅರಿಯಕುಡಿ ರಾಮಾನ್ಮಜಾ ಅಯ್ಯಮಗಾರ್ ರವರಿಗೆ ನಿರಂತರವಾಗಿ ಕಾರ್ಯಕ್ರಮಗಳು ದೊರೆಯತೊಡಗಿದವುಕಚೇರಿಯ ಸ್ವರೂಪದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಿಕೊಂಡು ಹಾಡುತ್ತಿದ್ದ ಅರಿಯಕುಡಿಯವರು ಬೇಡಿಕೆಯ ಕಲಾವಿದರಾದರು. ಅವರು ಕೃತಿ, ರಾಗ, ಸ್ವರ, ಪಲ್ಲವಿ, ಹೀಗೆ ಯಾವುದನ್ನೇ ಅವರು ಹಾಡಿದರೂ ಸಹ ಅವುಗಳಲ್ಲಿ  ಅವರ ಸ್ವಂತಿಕೆಯ ಛಾಪು ಎದ್ದುಕಾಣುತ್ತಿತ್ತು. ಸಂಗೀತ ಕೃತಿಯ ಯಾವುದೇ ಸಾಹಿತ್ಯವನ್ನು ಅವರು ಅನಾವಶ್ಯಕವಾಗಿ ವಿಸ್ತರಿಸಿ ಹಾಡುತ್ತಿರಲಿಲ್ಲ. ಸಂಪ್ರದಾಯವನ್ನು ಕಾಪಾಡಿಕೊಂಡು, ಗಮಕಯುಕ್ತವಾಗಿರುತ್ತಿತ್ತು. ರಾಗಗಳ ಆಲಾಪನೆಯನ್ನು ಮೂರು ಅಥವಾ ನಾಲ್ಕು ನಿಮಿಷಕ್ಕೆ ಸೀಮಿತಗೊಳಿಸುತ್ತಿದ್ದರು. ಸಾಮಾನ್ಯವಾಗಿ ವರ್ಣದೊಂದಿಗೆ ಕಚೇರಿ ಆರಂಬಿಸುತ್ತಿದ್ದ ಅವರು; ಅದೇ ರಾಗದಲ್ಲಿ ರಾಗ,ತಾನ ಪಲ್ಲವಿಯನ್ನು ಹಾಡುತ್ತಿದ್ದರು. ಮಧ್ಯಮಕಾಲ, ಶುದ್ಧ ಮದ್ಯಮ, ಪ್ರತಿ ಮಧ್ಯಮ ಕೃತಿಗಳು, ವಿಳಂಬಕಾಲದ ಕೃತಿಗಳನ್ನು ಸಮಯೋಚಿತವಾಗಿ ಹಾಡುತ್ತಾ ಎಲ್ಲಾ ವರ್ಗದ ರಸಿಕರನ್ನು ಮೆಚ್ಚಿಸುತ್ತಿದ್ದರು ಜೊತೆಗೆ ಸಂಗೀತದ ಎಲ್ಲಾ ವಾಗ್ಗೇಯಕಾರರ ಕೃತಿಗಳಿಗೆ ಆದ್ಯತೆಯನ್ನು ನೀಡುತ್ತಿದ್ದರು. ಇವುಗಳಲ್ಲದೆ, ಕಚೇರಿಯ ಕೊನೆಯ ಭಾಗದಲ್ಲಿ ದೇವರನಾಮ, ತಿಲ್ಲಾ, ಪದಂ, ಜಾವಳಿ ಹಾಗೂ ತಮಿಳಿನ ತಿರುಪ್ಪಾವೈಗಳು ಇರುತ್ತಿದ್ದವು. 1967ರಲ್ಲಿ ನಿಧನರಾದ ಅರಿಯಕುಡಿ ರಾಮಾನುಜಾ ಅಯ್ಯಂಗಾರ್; ತಮಿಳುನಾಡಿನಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾನ್ ಹೀಗೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು. ಅವರು ಕರ್ನಾಟಕ ಸಂಗೀತಕ್ಕೆ ನಿರ್ಮಿಸಿಕೊಟ್ಟ ಚೌಕಟ್ಟು ಇಂದಿಗೂ ಸಹ ಅಲಿಖಿತ ಸಂವಿಧಾನದಂತೆ ಸಂಗೀತ ಕಚೇರಿಯಲ್ಲಿ  ಬಳಕೆಯಾಗುತ್ತಿರುವುದು ವಿಶೇಷವಾಗಿದೆ.
( ವಾರ್ತಾ ಭಾರತಿ ದಿನಪತ್ರಿಕೆಯ “ ಸ್ವರ ಸನ್ನಿಧಿ” ಅಂಕಣ ಬರಹ)


ಶುಕ್ರವಾರ, ನವೆಂಬರ್ 10, 2017

ನೂತನ ವೈದ್ಯಕೀಯ ಸೇವಾ ಕಾಯ್ದೆ ಕುರಿತ ಪರ ಮತ್ತು ವಿರೋಧದ ನಿಲುವುಗಳು


ಕರ್ನಾಟಕ ರಾಜ್ಯ ಸರ್ಕಾರ ಇದೇ ನವಂಬರ್ 13 ರಂದು ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಖಾಸಾಗಿ ವೈದ್ಯಕೀಯ ಸೇವೆಗಳ ಮೇಲಿನ ನಿಯಂತ್ರಣ ಮಸೂದೆ ಕುರಿತಂತೆ ಖಾಸಾಗಿ ವ್ಶೆದ್ಯರು ಮತ್ತು ಆಸ್ಪತ್ರೆಗಳ ಸಮೂಹದಿಂದ ತೀವ್ರತರವಾದ ವಿರೋಧ ವ್ಯಕ್ತವಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ಅಖಿಲ ಭಾರತ ವೈದ್ಯಕೀಯ ಸಂಘದ ವತಿಯಿಂದ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಬೆಳಗಾವಿಗೆ ತೆರಳಿ ಅಧಿವೇಶನ ನಡೆಯುವ ಸ್ಥಳದಲ್ಲಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಮುನ್ಸೂಚನೆಯೆಂಬಂತೆ ವಾರದ ಹಿಂದೆ ರಾಜ್ಯದ ಬಹುತೇಕ ಖಾಸಾಗಿ ಆಸ್ಪತ್ರೆಗಳು ತಮ್ಮ  ಸೇವೆಯನ್ನು ಬಂದ್  ಮುಷ್ಕರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವೈದ್ಯರ ಪ್ರತಿಭಟನೆಗಳು ಏನೇ ಇರಲಿ, ಸಧ್ಯದ ಸ್ಥಿತಿಯಲ್ಲಿ ಜನಸಾಮಾನ್ಯರ ಹಿತದೃಷ್ಟಿಯಿಂದ ಇಂತಹದ್ದೊಂದು ಕಾಯ್ದೆ ತೀರಾ ಅವಶ್ಯಕವಾಗಿತ್ತು ಎಂಬುದು ಬಹುತೇಕ ಪ್ರಜ್ಞಾವಂತ ನಾಗರೀಕರ ಅನಿಸಿಕೆಯಾಗಿದೆ. ವೈದ್ಯ ವೃತ್ತಿಯನ್ನು ಎಂದಿಗೂ ದಂಧೆ ಅಥವಾ ಉದ್ಯಮ ಎಂದು ಭಾವಿಸದೆ ಅದೊಂದು ಪವಿತ್ರವಾದ ವೃತ್ತಿ ಅಥವಾ ಜನಾರ್ಧನ ಸೇವೆ ಎಂದು ನಂಬಿಕೊಂಡು ದುಡಿಯುತ್ತಿರುವ ಸಾವಿರಾರು ಖಾಸಾಗಿ ವೈದ್ಯರನ್ನು ಇಂದಿಗೂ ನಾವು ರಾಜ್ಯದ ಪ್ರತಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಕಾಣಬಹುದು. ಆದರೆ, ಇಂತಹ ಮಹಾತ್ಮರು ಎಂದು ಕರೆಯಬಹುದಾದ ಮಾನವೀಯ ಹೃದಯವುಳ್ಳ ವೈದ್ಯರು ಸುಲಿಗೆಕೋರರ ನಡುವೆ ತೀರಾ ನಗಣ್ಯರಾಗಿದ್ದಾರೆ ಎನ್ನುವುದು ಕೂಡ ಅಷ್ಟೇ ಕಟುವಾದ ವಾಸ್ತವ ಸಂಗತಿ

ಜಗತ್ತಿನ ಯಾವುದೇ ರಾಷ್ಟ್ರ ಅಥವಾ ರಾಜ್ಯ ಸರ್ಕಾರಗಳು ತಮ್ಮ ಪ್ರಜೆಗಳ ಬದುಕನ್ನು ಉತ್ತಮ ಸ್ಥಿತಿಯಲ್ಲಿಟ್ಟು ಕಲ್ಯಾಣ ರಾಜ್ಯ ಎನ್ನುವ ಸ್ಥಿತಿ ನಿರ್ಮಾಣ ಮಾಡಬೇಕಾದರೆ, ಅವರ ಮೂಲಭೂತ ಸೌಕರ್ಯಗಳಾದ ಅನ್ನ, ವಸತಿ, ನೀರು, ರಸ್ತೆ ಇಂತಹ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ  ಜನರ ಕೈಗೆಟುಕುವ ದರದಲ್ಲಿ ಶಿಕ್ಷಣ ಮತ್ತು ಆರೋಗ್ಯ ದೊರಕುವಂತಿರಬೇಕು. ಆದರೆ, ಜಗತ್ತಿನ ಬಹುತೇಕ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ರಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡು ಸೇವಾ ವಲಯಗಳು ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿವೆ, ಭಾರತದಲ್ಲಿ ಬಹುತೇಕ ಎನ್ನುವುದರ ಬದಲಾಗಿ ಶೇಕಡ 75 % ರಷ್ಟು  ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳು ಮತ್ತು ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳು ಜನಪ್ರತಿನಿಧಿಗಳು ಎನಿಸಿಕೊಂಡ ಸಚಿವರು, ಸಂಸದರು, ಶಾಸಕರು ಹಾಗೂ ಪ್ರಭಾವಿ ಮಠಗಳು ಮತ್ತು ಕೈಗಾರಿಕೋದ್ಯಮಿಗಳ ಒಡೆತನದಲ್ಲಿವೆ. ಇವರ ಸೇವಾ ಮನೋಭಾವವು ಬಡಜನರ ಪಾಲಿಗೆಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿಎಂಬಂತಿದೆ. ಸೇವೆ ಎಂಬ ಹೆಸರಿನ ಶಬ್ದದ ಜಾಗದಲ್ಲಿ  ಇದೀಗ ವ್ಯವಹಾರ ಎಂಬ ಪದ ಬಂದು ಕೂತಿದೆ. ಯಾವುದೇ ಬಡವ, ಹಳ್ಳಿಯ ರೈತ ಅಥವಾ ಮಧ್ಯಮ ವರ್ಗದ ನಾಗರೀಕ ಇಂದುಸೂಪರ್ ಸ್ಪೆಷಾಲಿಟಿ ಆಸ್ಪತ್ರೆಎಂಬ ಚರ್ಮ ಸುಲಿಯವ ಹಾಗೂ ಮೈ ನೆತ್ತರನ್ನು ಹೀರುವ ಆಧುನಿಕ ಜಗತ್ತಿನ ಮನುಷ್ಯರ ಕಸಾಯಿಖಾನೆಗೆ ಹೋಗಲಾರದವರಾಗಿದ್ದಾರೆ. ಇಂತಹ ಹೈಟೆಕ್ ಸೇವೆಗಳು ಉಳ್ಳವರಿಂದ ಉಳ್ಳವರಿಗಾಗಿ ಎಂಬ ಅಲಿಖಿತ ನಿಯಮದಡಿ ಜಾರಿಯಲ್ಲಿವೆ. ಇವುಗಳಿಗೆ ಪೂರಕವಾಗಿ ವೈದ್ಯಕೀಯ ವಿಮೆ ಎಂಬ ಹಗಲು ದರೋಡೆಯ ವ್ಯವಸ್ಥೆಯೊಂದು ವೈದ್ಯಕೀಯ ಸೇವೆಯ ಹೆಸರಿನ  ಜೊತೆ ಕೈ ಜೋಡಿಸಿದೆ. ಸ್ಥಿತಿಯಲ್ಲಿ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಯ್ದೆಗೆ ಜನಸಾಮಾನ್ಯರು ಮತ್ತು ಪ್ರಜ್ಞಾವಂತ ನಾಗರೀಕರು ಕೈಜೋಡಿಸುವ ಅಗತ್ಯವಿದೆ.
ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಭಾರತವು ಜಾಗತೀಕರಣ ವ್ಯವಸ್ಥೆಗೆ ತೆರೆದುಕೊಂಡ ಫಲವಾಗಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಕ್ರಾಂತಿಯಿಂದಾಗಿ ಭಾರತೀಯರು ವಿಶೇಷವಾಗಿ ಇಂಜಿನಿಯರಿಂಗ್ ಪದವೀಧರರು ಮಾಸಿಕ ಒಂದು ಲಕ್ಷರೂಪಾಯಿ ವೇತನ ಪಡೆಯುವಷ್ಟು ಪ್ರಭಾವಶಾಲಿಯಾದರು. ಆದರೆ, ಬಂಡವಾಳಶಾಹಿ ಜಗತ್ತು  ಇವರಿಗೆ ಬಲಗೈಲಿ ನೀಡಿದ ವೇತನವನ್ನು ಎಡಗೈಲಿ ಕಿತ್ತುಕೊಳ್ಳುವ ವೈದ್ಯಕೀಯ ವಿಮೆ ಎಂಬ ಹುನ್ನಾರ  ಎನ್ನಬಹುದಾದ ಯೋಜನೆಯನ್ನು ರೂಪಿಸಿತುತೆರಿಗೆ ವಿನಾಯತಿ ಪಡೆಯಲು ಉದ್ಯೋಗಿಗಳು ತನ್ನನ್ನು ಒಳಗೊಂಡಂತೆ, ತನ್ನ ಕುಟುಂಬ, ತಂದೆ, ತಾಯಿಗಳನ್ನು ವಿಮೆಗೆ ಒಳಪಡಿಸುವುದರ ಮೂಲಕ ತೆರಿಗೆ ವಿನಾಯತಿಯನ್ನು ಪಡೆದರು. ಆರೋಗ್ಯ ವಿಮಾ ಯೋಜನೆಯ ಮೂಲಕ ಖಾಸಾಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಗಳ ನಸೀಬು ಬದಲಾಯಿತು. ಆಸ್ಪತ್ರೆಗೆ ದಾಖಲಾದ ರೋಗಿಗೆ ವೈದ್ಯಕೀಯ ವಿಮೆ ಇದೆ ಎಂದು ಗೊತ್ತಾದಕೂಡಲೆ, ತಮ್ಮ ವೈದ್ಯಕೀಯ ಸೇವಾ ವೆಚ್ಚವನ್ನು ದುಪ್ಪಟ್ಟು ಮಾಡಲಾಯಿತು. ಕೊಠಡಿಯ ಬಾಡಿಗೆ ದರ ಪದ್ಧತಿ ಜಾರಿಗೆ ಬಂದಿತು. ವಿಶೇಷ ಕೊಠಡಿಯ ಬಾಡಿಗೆ ದರವನ್ನು ಪಂಚತಾರ ಹೋಟೆಲ್ ಕೊಠಡಿ ದರಕ್ಕೆ ಸಮನಾಗಿ ಏರಿಸಿ, ವೈದ್ಯಕೀಯ ಸೇವಾದರವನ್ನು ಸಹ ಹೆಚ್ಚಿಸಲಾಯಿತು.ಇದೇ ಚಾಳಿಯನ್ನು ಎಲ್ಲಾ ಖಾಸಾಗಿ ವೈದ್ಯಕೀಯ ಸೇವಾ ಸಂಸ್ಥೆಗಳು ಅನುಸರಿಸತೊಡಗಿದವು. ಎಂ.ಬಿ.ಬಿ.ಎಸ್. ಕೋರ್ಸಿಗೆ ಒಂದು ಕೋಟಿ ರೂಪಾಯಿ ಮತ್ತು ಸ್ನಾತಕೋತ್ತರ ಪದವಿ ಅಥವಾ ಡಿಪ್ಲಮೋ ಕೋರ್ಸಿಗೆ ಮೂರು ಕೋಟಿ ರೂಪಾಯಿ  ಡೊನೆಷನ್ ಪಾವತಿಸಿ, ವೈದ್ಯನಾಗಿ ಪದವಿ ಪಡೆದು ಸೇವೆ ಸಲ್ಲಿಸಲು ಬರುವ ವ್ಯಕ್ತಿಯಿಂದ ಯಾವ ಆದರ್ಶವನ್ನಾಗಲಿ ಅಥವಾ ಸೇವಾ ಮನೋಭಾವವನ್ನಾಗಲಿ ನಾವು ನಿರೀಕ್ಷಿಸಲು ಸಾಧ್ಯ?

 ಈಗಾಗಲೇ ಕ್ಲಿನಿಕಲ್ ಎಸ್ಟಾಬ್ಲಿಸ್ ಮೆಂಟ್ ಕಾಯ್ದೆ-2010 ಇದನ್ನು ಜಾರಿಗೆ ತರಲು ದೇಶದ ಹನ್ರ್ನೆಂದು ರಾಜ್ಯಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಿರುವ ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್, ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಕಾಯ್ದೆಯು ವೈದ್ಯರು ನ್ಶೆತಿಕತೆಯ ಆಧಾರದ ಮೇಲೆ ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ನುಡಿದಿದ್ದಾರೆ. ನೂತನ ಕಾಯ್ದೆಯಲ್ಲಿ ರೋಗಿಗೆ ಗುಣ ಮಟ್ಟದ  ಸೇವೆ ನೀಡುವಲ್ಲಿ ವಿಫಲವಾದ ವೈದ್ಯರು ಅಥವಾ ಖಾಸಾಗಿ ಆಸ್ಪತೆಗಳ ಮೇಲೆ ದಂಡ ವಿಧಿಸುವ ಅಂದರೆ, ಈಗಿರುವ ದಂಡದ ಪ್ರಮಾಣವನ್ನು ಹೆಚ್ಚಿಸುವ ಮತ್ತು ನ್ಯಾಯಾಲಯದ ಮೂಲಕ ಶಿಕ್ಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿರುತ್ತದೆ. ಜೊತೆಗೆ ನಗರ ಮತ್ತು ಪಟ್ಟಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಸನೀಹದಲ್ಲಿ ಯಾವುದೇ ಖಾಸಾಗಿ ಆಸ್ಪತ್ರೆಗಳನ್ನು ಸ್ಥಾಪಿಸಲು ನೂತನ ಮಸೂದೆಯಲ್ಲಿ ಅವಕಾಶವಿರುವುದಿಲ್ಲ.
ಪ್ರತಿಯೊಬ್ಬ ರೋಗಿಯ ಚಿಕಿತ್ಸಾ ವೆಚ್ಚದ ವಿವರ ಹಾಗೂ ನೀಡಿದ ವೈದ್ಯಕೀಯ ಸೇವೆಯ ವಿವರ ಮತ್ತು ರೋಗಿಯು ನೀಡಬಹುದಾದ ದೂರನ್ನು ಪರಾಮರ್ಶೆ ನಡೆಸಲು ನೊಂದಣಿ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ಪುನರ್ರಚನೆ ಮಾಡುವುದರ ಜೊತೆಗೆ ಪ್ರತಿ ಜಿಲ್ಲಾ ಮಟ್ಟದಲ್ಲಿ ವಿವಿಧ ವಲಯಗಳ ಪ್ರತಿನಿಧಿಗಳು ಇರುವಂತಹ ಕುಂದು ಕೊರತೆಗಳ ವಿಚಾರಣಾ ಸಮಿತಿಯನ್ನು ರಚಿಸಲು ಸರ್ಕಾರ ಉದ್ದೇಶಿಸಿದೆ. ತಪ್ಪು ಎಸಗಿದ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಬಂಧಿಸುವ ಹಾಗೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಅವಕಾಶ ಇರುವುದು ಖಾಸಾಗಿ ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಇಲ್ಲಿ ಸರ್ಕಾರವು ಇಷ್ಟಂದು ವೀರಾವೇಶದಿಂದ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಹೊರಟಿರುವ ಸಂದರ್ಭದಲ್ಲಿ ಈವರೆಗಿನ ಸರ್ಕಾರಗಳು ಎಲ್ಲಿ ಎಡವಿದೆವು ಎಂಬುದರ ಕುರಿತು ಒಮ್ಮೆ ಆತ್ಮ ವಿಮರ್ಶೇ ಮಾಡಿಕೊಳ್ಳಬೇಕಿದೆ, ಗ್ರಾಮೀಣ ಪ್ರದೇಶದಿಂದ ಹಿಡಿದು; ನಗರ ಪಟ್ಟಣ ಆಸ್ಪತ್ರೆಗಳನ್ನು ಇಲಿ ಹೆಗ್ಗಣಗಳ ಗೋದಾಮುಗಳಾಗಿ ಪರಿವರ್ತಿಸಿ ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವಂತೆ ಮಾಡಿದ್ದು, ಖಾಸಾಗಿ ಮೆಡಿಕಲ್ ಕಾಲೇಜುಗಳ ಮೇಲೆ ನಿಯಂತ್ರಣ ಸಾಧಿಸಲಾಗದೆ, ಕ್ಯಾಪಿಟೇಶನ್ ಮಾಫಿಯಾ ಎದುರು ಮಂಡಿಯೂರಿ ಕುಳಿತಿದ್ದು ಇವೆಲ್ಲವೂ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಇಂತಹ ಅಯೋಮಯ ಸ್ಥಿತಿಯಲ್ಲಿ ಮದವೇರಿದ ಗೂಳಿಗೆ ಮೂಗುದಾರ ಹಾಕಲು ಹೊರಟಿರುವ ಸರ್ಕಾರದ ಉದ್ದೇಶ ಈಡೇರುವ ಕುರಿತು ಯಾರಿಗೂ  ಭರವಸೆ ಇಲ್ಲಈಗಾಗಲೇ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಪಸ್ವರಗಳು ಎದ್ದಿವೆ., ಇಲ್ಲಿಯೂ ಪ್ರಭಾವಶಾಲಿಗಳ ಅಂದರೆ, ಆಸ್ಪತ್ರೆ , ಮೆಡಿಕಲ್ ಕಾಲೇಜುಗಳ ಪಿತಾಮಹಾರ ಕೈವಾಡ ಎದ್ದು ಕಾಣುತ್ತಿದೆ. ಕುರಿತು ಸರ್ಕಾರದ  ಮುಂದಿನ ಹೆಜ್ಜೆಯನ್ನು ನಾವೆಲ್ಲರೂ ಕಾದು ನೋಡಬೇಕಾಗಿದೆ.
( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ ಬರಹ)