ಶುಕ್ರವಾರ, ಮೇ 3, 2019

ಆದಿವಾಸಿಗಳ ಪಾಲಿಗೆ ಮರಣ ಶಾಸನವಾದ ನೂತನ ಅರಣ್ಯ ಕಾಯ್ದೆ



.

ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಪೆಬ್ರವರಿ 13 ರಂದು  ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು  ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಅರಣ್ಯದ ಮೇಲಿನ ಹಕ್ಕುಗಳ ಅರ್ಜಿಗಳ ಪರಿಶೀಲನಾ ಕಾರ್ಯಕೂಡ ಬಿರುಸಿನಿಂದ ನಡೆಯುತ್ತಿದೆ. 2006 ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಆದಿವಾಸಿಗಳಿಗೆ ದಯಪಾಲಿಸಿದ್ದ ಇದೇ ಸರ್ವೋಚ್ಛನ್ಯಾಯಾಲಯವು  ಇದೀಗ ಎಲ್ಲರನ್ನು ಸಾಮೂಹಿಕವಾಗಿ ಅರಣ್ಯಗಳಿಂದ ತೆರವುಗೊಳಿಸಬೇಕು ಎಂಬ ತೀರ್ಪು ನೀಡುವುದರ ಮೂಲಕ ತನ್ನ ಧ್ವಂದ್ವ ನೀತಿಯನ್ನು ಅನಾವರಣಗೊಳಿಸಿದೆ
ಮೂರು ಕೋಟಿಗೂ ಅಧಿಕ ಮಂದಿ ಬುಡಕಟ್ಟು ಸಮುದಾಯದ ಜನತೆ ಭಾರತದ ಅರಣ್ಯಗಳಲ್ಲಿ ಅನೇಕ ಶತಮಾನಗಳದಿಂದಲೂ ಬದುಕು ಕಟ್ಟಿಕೊಂಡಿದ್ದಾರೆ. ಅವರ ಜೊತೆಗೆ ಅರಣ್ಯದಂಚಿನಲ್ಲಿ ಬದುಕುತ್ತಿರುವ ಹಿಂದುಳಿದ ಹಲವಾರು ಸಮುದಾಯಗಳು, ಬೇಸಾಯ ಮತ್ತು ಅರಣ್ಯದ ಕಿರುಉತ್ಪನ್ನಗಳನ್ನು ನಂಬಿ ಬದುಕುತ್ತಿವೆ.  ಈ ತೀರ್ಪಿನ ವಿರುದ್ಧ  ಈಗಾಗಲೇ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ. ಜೊತೆಗೆ ದೇಶ್ಯಾದ್ಯಂತ ನಾಗರೀಕರಿಂದ ಪ್ರತಿಭಟನೆ ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಮನಗಂಡ ನ್ಯಾಯಾಲಯ ತಾತ್ಕಾಲಿಕವಾಗಿ ತನ್ನ ತೀರ್ಪನ್ನು ತಡೆ ಹೊಡಿದಿದೆ. ಈ ನಡುವೆ ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯವು ಅತ್ಯಂತ ಗುಪ್ತವಾಗಿ ನೂತನ ಅರಣ್ಯಕಾಯ್ದೆಯೊಂದನ್ನು ರಚಿಸಿದ್ದು, ಅದನ್ನು ಜಾರಿಗೆ ತರಲು  ಹುನ್ನಾರ ನಡೆಸಿದೆ. ಅಕಸ್ಮಾತ್ ಈ ಕಾಯ್ದೆಯು ಜಾರಿಗೆ ಬಂದಿದ್ದೇ ಆದರೆ, ಇದನ್ನು ನಾವು ಭಾರತದ ಆದಿವಾಸಿಗಳ  ಪಾಲಿಗೆ ಮರಣ ಶಾಸನ   ಎಂದು ಬಣ್ಣಿಸಬಹುದು.
1927 ರ ಸ್ವಾತಂತ್ರ ಪೂರ್ವದಲ್ಲಿ ಬ್ರಿಟೀಷರು ಜಾರಿಗೆ ತಂದಿದ್ದ ಅರಣ್ಯ ಕಾಯ್ದೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವುದರ ಮೂಲಕ   “ ತಿದ್ದುಪಡಿಯಾದ ಅರಣ್ಯ ಕಾಯ್ದೆ-1927” ಎಂದು ಕರೆಯಲಾಗಿರುವ  ಈ ನೂತನ ಕಾಯ್ದೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸಾರ್ವಭೌಮ ಹಕ್ಕನ್ನು ನೀಡಲಾಗಿದೆ. ಅರಣ್ಯದೊಳಕ್ಕೆ ಅತ್ರಿಕ್ರಮ ಪ್ರವೇಶ ಮಾಡಿದವರನ್ನು ಗುಂಡಿಟ್ಟ ಕೊಲ್ಲುವ ಅವಕಾಶವನ್ನು ನೀಡುವುದರ ಜೊತೆಗೆ, ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳನ್ನು ರಾಜ್ಯ ಸರ್ಕಾರಗಳು ವಿಚಾರಣೆ ಒಳಪಡಿಸದಂತೆ ನಿರ್ಬಂಧಿಸಲಾಗಿದೆ. ಇದಿಷ್ಟೂ ಸಾಲದೆಂಬಂತೆ ಈ ಅಧಿಕಾರಿಗಳು ಯಾವುದೇ ಅರಣ್ಯವನ್ನು ಕಾಯ್ದಿಟ್ಟ ಅರಣ್ಯ ಎಂದು ಘೋಷಿಸುವ ಹಕ್ಕನ್ನು ನೀಡಲಾಗಿದೆ. ಒಟ್ಟಾರೆ ಈ ಕಾಯ್ದೆಯು ಟಿಂಬರ್ ಮಾಫಿಯಾಗಳಿಗೆ ಮತ್ತು ಒಡಿಸ್ಸಾ, ಮಧ್ಯಪ್ರದೇಶ, ಛತ್ತೀಸ್ ಗಡ ರಾಜ್ಯಗಳ ಅರಣ್ಯ ಭೂಮಿಯಲ್ಲಿ ಹೇರಳವಾಗಿರುವ ಖನಿಜ ಸಂಪತ್ತಿನ ಮೇಲೆ ಕಣ್ಣಿರುವ ಕಾರ್ಪೊರೇಟ್ ಬೃಹತ್ ಕಂಪನಿಗೆ ನೆರವಾಗುವ ದೃಷ್ಟಿಕೋನದಿಂದ ರಚಿತವಾದ ಕಾನೂನು ಎಂದು ಹೇಳಬಹುದು. ಜನಪ್ರತಿನಿಧಿಗಳು ಮತ್ತು ಕಾರ್ಪೊರೇಟ್ ಕುಳ ಅಂಗ್ಯೆ ಮೇಲೆ ಆಡುವ ಗಿಣಿಗಳಂತಾಗಿರುವ ಅಧಿಕಾರಿಗಳು ರೂಪಿಸಿರುವ ಈ ನೂತನ ಅರಣ್ಯ ಕಾಯ್ದೆಯನ್ನು ಜಾರಿಗೆ ಬಾರದಂತೆ ನೊಡಿಕೊಳ್ಳುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತ ನಾಗರೀಕರ ಮೇಲಿದೆ. ಇಲ್ಲದಿದ್ದರೆ, ಆದಿವಾಸಿಗಳ ಪರ ಕಾಳಜಿ ಇರುವ ಮಾನವ ಹಕ್ಕುಗಳ ಹೋರಾಟಗಾರರನ್ನು ಈವರೆಗೆ ನಗರ ನಕ್ಸಲರು ಎಂದು ಕರೆಯುತ್ತಿದ್ದ ಆಡಳಿತ ವ್ಯವಸ್ಥೆ ಇನ್ನು ಮುಂದೆ ಅವರನ್ನು ವಿಚಾರಣೆಗೆ ಒಳಪಡಿಸದೆ, ಗುಂಡಿಟ್ಟು ಕೊಂದರೂ ಆಶ್ಚರ್ಯ ಪಡಬೇಕಿಲ್ಲ. ಈಗಾಗಲೇ ದೆಹಲಿಯ ಜವಹರಲಾಲ್ ವಿ.ವಿ.ಯ ಪ್ರೊಫೆಸರ್ ಸಾಯಿಭಾಬಾ, ಛತ್ತೀಸ್ ಘಡದ ರಾಯ್ ಪುರದ ಡಾ.ಬ್ರಿಯಾಂಕ್ ಸೇನ್.ಅವರ ಪತ್ನಿ ಇಳಾ ಸೇನ್, ಮಾನವ ಹಕ್ಕುಗಳ ಹೋರಾಟಗಾರರಾದ ಸುಮಾ ಭಾರದ್ವಜ್ ಮತ್ತು ಅರುಣ್ ಫೆರಿರಾ ಇವರೆಲ್ಲಾ ಒಂದಲ್ಲಾ ಒಂದು ಬಗೆಯಲ್ಲಿ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.

ಆದಿವಾಸಿಗಳೆಂದರೆ, ಆರಣ್ಯ ನಾಶಕರು ಎಂದು ನಂಬಿರುವ ಇಂದಿನ ಆಡಳಿತ ವ್ಯವಸ್ಥೆಯ ತಲೆಯೊಳಗೆ ಮಲ ತುಂಬಿಕೊಂಡಿದೆ ಎಂದರೆ, ತಪ್ಪಾಗಲಾರದು. ಈ ದೇಶದಲ್ಲಿ ಇನ್ನೂ ಅರಣ್ಯ ಮತ್ತು ಅಲ್ಲಿನ ಜೀವಸಂಕುಲ ಜೀವಂತವಾಗಿದ್ದರೆ ಅಥವಾ ಸುರಕ್ಷಿತವಾಗಿದ್ದರೆ ಅದು ಅರಣ್ಯವಾಸಿಗಳಾದ ಆದಿವಾಸಿಗಳಿಂದ ಮತ್ತು ಅವರು ನಂಬಿಕೊಂಡು ಬಂದಿರುವ  ನಮ್ಮ ನೆಲಮೂಲ ಸಂಸ್ಕೃತಿ ಮತ್ತು ಪರಂಪರೆಯಿಂದ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಇದರ ಜೊತೆಗೆ ನಮ್ಮ ಜನಪದರು ಗ್ರಾಮೀಣ ಭಾಗದಲ್ಲಿ ನಾಗಬಮ. ದೇವರ ಕಾಡು ಹೆಸರಿನಲ್ಲಿ ಅರಣ್ಯವನ್ನು ಪೋಷಿಸಿಕೊಂಡು ಬಂದಿದ್ದಾರೆ. ಅರಣ್ಯಾಧಿಕಾರಿಗಳು ಎಂಬ ಈ ಬಿಳಿಯಾನೆಗಳಿಂದ  ಭಾರತದಲ್ಲಿ ಅರಣ್ಯಗಳು ಮತ್ತು ಅಲ್ಲಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಅಭಿವೃದ್ಧಿಯಾಗಿದ್ದರೆ ಅದು ಅವರ ಕಡತಗಳಲ್ಲಿ ಮಾತ್ರ.
ಈಗಾಗಲೇ ಭಾರತದ ಗ್ರಾಮೀಣ ಜಗತ್ತನ್ನು ನರಕ ಮಾಡಿರುವ ಆಡಳಿತ ವ್ಯವಸ್ಥೆಯಿಂದಾಗಿ ಹಳ್ಳಿಗಳು ನರಕಗಳಾಗಿ, ಕೃಷಿ ಉದ್ಯಮ ನೆಲಕಚ್ಚುವುದರ ಎಲ್ಲರೂ ನಗರದತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮವೆಂಬಂತೆ ದೇಶದ ನಗರಗಳು ತುಂಬಿತುಳುಕಾಡುತ್ತಾ, ಅಡ್ಡಾದಿಡ್ಡಿ ಬೆಳೆಯುತ್ತಾ, ಕುಡಿಯುವ ನೀರು, ಒಳಚರಂಡಿ, ಸಾರಿಗೆ, ರಸ್ತೆ, ವಸತಿ, ಕಸವಿಲೇವಾರಿ ಹೀಗೆ ಎಲ್ಲಾ ಸೇವಾ ವಲಯಗಳು ಮತ್ತು ಯೋಜನೆಗಳು ಹಿಡಿತಕ್ಕೆ ಸಿಗದೆ ತಲೆಕೆಳಕಾಗಿವೆ. ಇಂತಹ ಸ್ಥಿತಿಯಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿದರೆ ಅವರ ಭವಿಷ್ಯದ ಗತಿಯೇನು?  ಅವರೂ ಸಹ ನೆಲದ ಮೇಲಿನ ನರಕಗಳಂತಿರುವ ನಗರಗಳಿಗೆ ಜಮೆಯಾಗಬೇಕೆ?
ಪಕ್ಷ ಬೇಧವಿಲ್ಲದೆ ಎಲ್ಲಾ ಕೇಂದ್ರ ಸರ್ಕಾರಗಳು ಆದಿವಾಸಿಗಳ ಬದುಕಿನ ಜೊತೆ ನಿರಂತರವಾಗಿ  ಚೆಲ್ಲಾಟವಾಡುತ್ತಲೇ ಬಂದಿವೆ. ಅವರಿಗೊಂದು  ಶಾಶ್ವತ ನೆಲೆ ಕಲ್ಪಿಸಿಕೊಡಲು ವಿಫಲವಾಗಿವೆ. ಈಗವರೆಗಿನ ಕಾನೂನುಗಳು, ತಿದ್ದುಪಡಿಗಳು ಮತ್ತು ಶಿಫಾರಸ್ಸುಗಳು ಅವರನ್ನೂ ಸದಾ ಅತಂತ್ರದ ಸ್ಥಿತಿಯಲ್ಲಿ ನಿಲ್ಲಿಸಿವೆ. 1976 ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ಆದಿವಾಸಿಗಳನ್ನು ಅರಣ್ಯದಿಂದ ಹೊರದಬ್ಬಬೇಕೆಂದು ಶಿಫಾರಸ್ಸು ಮಾಡಿತ್ತು. ಇದರ ಅನ್ವಯ  1980ರಲ್ಲಿ ಭಾರತದ ಅರಣ್ಯ ರಕ್ಷಣಾ ಕಾಯ್ದೆಯು ಜಾರಿಗೆ ಬಂದಿತು. ಆದರೆ, 1988 ರಲ್ಲಿ ಜಾರಿಯಾದ ಮತ್ತೊಂದು ಭಾರದ ಅರಣ್ಯ ನಿಯಮವೊಂದು ಜಾರಿಗೆ ಬಂದು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದೆ ಕರುಣೆ ತೋರಿತು. ಜೊತೆಗೆ 1996 ರಲ್ಲಿ ಅಸ್ತಿತ್ವಕ್ಕೆ ತರಲಾದ  ಬುಡಕಟ್ಟು ಜನಾಂಗಗಳ ರಕ್ಷಾಣಾ ಕಾಯ್ದೆಯು ಆದಿವಾಸಿಗಳ ಪಾಲಿಗೆ ರಕ್ಷಣಾ ಗೋಡೆಯಾಗಿ ಪರಿಣಮಿಸಿತು. ಇವೆಲ್ಲಾ ಗೊಂದಲಗಳ ನಡುವೆಯೂ ಅರಣ್ಯವಾಸಿಗಳ ಬಲುದಿನಗಳ ಬೇಡಿಕೆಯಾದ “ ಜಲ್, ಜಂಗಲ್, ಜಮೀನ್’ ( ಜಲ, ಅರಣ್ಯ ಮತ್ತು ಜಮೀನು) ಪೂರ್ಣವಾಗಿ ಯಶಸ್ವಿಯಾಗಲಿಲ್ಲ.  ನಕ್ಸಲ್ ಹಿಂಸಾಚಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮತ್ತು ಆದಿವಾಸಿಗಳು ಮಾವೋವಾದಿ ನಕ್ಸಲ ರ ಹಿಡಿತಕ್ಕೆ ಸಿಲುಕದಿರಲಿ ಎಂಬ ಆಲೋಚನೆಯಿಂದ 2006 ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ದಯಪಾಲಿಸಿದ ಸುಪ್ರೀಂ ಕೋರ್ಟ್ ನ  ಮಹತ್ವದ ತೀರ್ಪಿನಿಂದಾಗ ಅವರುಗಳು ಒಂದಿಷ್ಟು  ಕಾಲ ನೆಮ್ಮದಿಯಿಂದ ಇದ್ದರು. ಜೊತೆಗೆ ತಮ್ಮ ಹಕ್ಕು ಸ್ಥಾಪಿಸಲು ಹೋರಾಡುತ್ತಿದ್ದಾರೆ. ಇಂದಿಗೂ ಕೂಡ ದೇಶಾದ್ಯಂತ ರಾಜ್ಯಗಳ ಅರಣ್ಯ ಇಲಾಖೆಗಳಲ್ಲಿ ಅರಣ್ಯವಾಸಿಗಳು ಅಧಿಕೃತ ವಾಸ ಕುರಿತಂತೆ ಮತ್ತು ಅವರು ಹೊಂದಿರುವ ಭೂಮಿ ಕುರಿತಂತೆ ನಾಲ್ಕು ಲಕ್ಷದ 21 ಸಾವಿರ ಅರ್ಜಿಗಳು ವಿಲೆವಾರಿಯಾಗದೆ ಕೊಳೆಯುತ್ತಿವೆ. ಈವರೆ 79 ಸಾವಿರ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಕರ್ನಾಟಕದಲ್ಲಿ 53 ಸಾವಿರದ 785 ಅರ್ಜಿಗಳು ಬಾಕಿ ಉಳಿದಿವೆ. ಛತ್ತೀಸ್ ಗಡ ರಾಜ್ಯದ  ಒಟ್ಟು ವಿಸ್ತಿರ್ಣದ ಶೇಕಡ 44 ರಷ್ಟು ಅರಣ್ಯ ಭೂಮಿಯಿದ್ದು ಅರಣ್ಯವಾಸಿಗಳಿಗೆ ಅದು ಶಾಶ್ವತ ನೆಲೆಯಾಗಿದೆ. ಜೊತೆಗೆ ಮಧ್ಯಪ್ರದೇಶ ಮತ್ತು ಒಡಿಸ್ಸಾ ರಾಜ್ಯದಲ್ಲಿಯೂ ಕೂಡ ಅತ್ಯಧಿಕ ಮಂದಿ ಅರಣ್ಯವಾಸಿಗಳಿದ್ದಾರೆ. ಸರ್ವೋಚ್ಛ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮವಾದ ವಿಷಯಗಳನ್ನು ಎಲ್ಲಾ ಆಯಾಮಗಳಿಂದಲೂ ಹಾಗೂ ಆದಿವಾಸಿಗಳ ಇತಿಹಾಸವನ್ನು, ಅವರ ವರ್ತಮಾನದ ಬದುಕನ್ನು ಮತ್ತು ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ತನ್ನ ತೀರ್ಪನ್ನು ನೀಡಬೇಕಿದೆ.

ಒಂದು ವೇಳೆ ರಾಜ್ಯಗಳ ಒತ್ತಡ ಅಥವಾ ಮೇಲ್ಮನವಿಯನ್ನು ಪರಿಗಣಿಸಿ ಅವರ ಒಕ್ಕಲೆಬ್ಬಿಸುವಿಕೆಯನ್ನು ನ್ಯಾಯಾಲಯವು ತಡೆದು. ಅವರಿಗೆ ಹಕ್ಕನ್ನು ದಯಪಾಲಿಸಿದರೂ ಸಹ ಆದಿವಾಸಿಗಳ ಹೋರಾಟ ಕೊನೆಗೊಳ್ಳುವುದಿಲ್ಲ. ಏಕೆಂದರೆ, ತೆರೆಮರೆಯಲ್ಲಿ ಹೊಸ ಅರಣ್ಯ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ಬಗ್ಗೆ ಆದಿವಾಸಿಗಳು ಸೇರಿದಂತೆ ಪ್ರಜ್ಞಾವಂತ ನಾಗರೀಕರು ಎಚ್ಚರದಿಂದ ಇರಬೇಕಾಗಿದೆ. , ಈ ಹೊಸ ಕಾಯ್ದೆಯನ್ನು ರೂಪಿಸುವಾಗ ಪ್ರಜ್ಞಾಪೂರ್ವಕವಾಗಿ ಕೇಂದ್ರ ಬುಡಕಟ್ಟು ಸಚಿವಾಲಯದ ಅಧಿಕಾರಿಗಳನ್ನು ಮತ್ತು ಪರಿಸರವಾದಿಗಳು ಮತ್ತು ಮಾನವ ಹಕ್ಕು ಆಯೋಗದ ಸದಸ್ಯರನ್ನು ದೂರ ಇಟ್ಟು ಕೇವಲ ಅರಣ್ಯಧಾಇಕಾರಿಗಳು ಮಾತ್ರ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಆಡಳಿತ ಶಾಹಿಯ ಹುನ್ನಾರದಂತೆ ಕಾಣುತ್ತಿದೆ.
( ಮಾಹಿತಿ ಸೌಜನ್ಯ-  ಡೌನ್ ಟು ಅರ್ಥ್, ಇಂಗ್ಲೀಷ್ ಪಾಕ್ಷಿಕ, ನವದೆಹಲಿ)


ಸೋಮವಾರ, ಏಪ್ರಿಲ್ 29, 2019

ನಮ್ಮೊಳಗಿದ್ದೂ ನಮ್ಮವರಾಗದ ಸಿದ್ದಿ ಜನಾಂಗ


ನಮ್ಮೊಳಗಿದ್ದೂ ನಮ್ಮವರಾಗದ ಸಿದ್ದಿ ಜನಾಂಗ

ಇತ್ತೀಚೆಗಿನ ವರ್ಷಗಳಲ್ಲಿ ಭಾರತಕ್ಕೆ ಬರುವ ಆಫ್ರಿಕಾ ಮೂಲದ ವಿದ್ಯಾರ್ಥಿ ಸಮುದಾಯದ ಮೇಲೆ ದೇಶಾದ್ಯಂತ ಭಾರತೀಯ ನಾಗರೀಕರಲ್ಲಿ ಸಂ¸ಶಯ ಮತ್ತು ಅಸಹನೆ ಹೆಚ್ಚುತ್ತಿದೆ. ಸೋಮಾಲಿಯಾ, ಇಥಿಯೋಪಿಯಾ, ನ್ಶೆಜಿರಿಯಾ, ಕೀನ್ಯ ಹೀಗೆ ಆಗ್ನೆಯ ಮತ್ತು ಪಶ್ಚಿ ಆಫ್ರಕಾ ರಾಷ್ರಗಳಿಂದ ಬರುತ್ತಿರುವ ಕೆಲವರು  ವಿದ್ಯಾರ್ಥಿಗಳ ಸೋಗಿನಲ್ಲಿ ಭಾರತದ ಹಲವು ನಗರಗಳಲ್ಲಿ ಸೈಬರ್ ವಂಚನೆ, ಮೋಸ, ಅಫೀಮು ಮಾರಾಟ, ವೈಶ್ಯವಾಟಿಕೆಯಲ್ಲಿ ತೊಡಗಿಕೊಂಡಿರುವುದು ಇಂತಹ ಅಸಹನೆಗೆ ಕಾರಣವಾಗಿರುವುದರ ಜೊತೆಗೆ ಹಲ್ಲೆಯಂತಹ ಪ್ರಕರಣಗಳು ನಿರಂತರವಾಗಿ  ಸಹ ನಡೆಯುತ್ತಿವೆ.

ಆಫ್ರಿಕಾ ಮೂಲದ ಕಪ್ಪು ಜನಾಂಗವೆಂದರೆ, ಮೋಸ, ವಂಚನೆಯಲ್ಲಿ ಪಳಗಿದವರು ಎಂಬ ನಂಬಿಕೆ ದಿನೇ ದಿನೆ ದಟ್ಟವಾಗುತ್ತಿದೆ. ಕಾರಣದಿಂದಾಗಿ ಕಪ್ಪುಜನಾಂಗವನ್ನು   ಸಂಶಯ ಕಣ್ಣುಗಳಿಂದ ನೋಡುವ ಹವ್ಯಾಸ ಕೂಡ ಬೆಳೆಯುತ್ತಿದೆ. ಕಪ್ಪನೆಯ ಮೈ ಬಣ್ಣ, ಬಲಾಡ್ಯವಾದ ಹಾಗೂ ಹುರಿಗಟ್ಟಿದಂತಹ ದೇಹ, ದಪ್ಪನೆಯ ತುಟಿಗಳು ಮತ್ತು ದಟ್ಟವಾದ ಗುಂಗುರು ಕೂದಲು ಇವುಗಳ ಲಕ್ಷಣವನ್ನು ಹೊಂದಿರುವ ಜನಾಂಗವನ್ನು ವಂಚಕರೆಂದು ನಾವೆಲ್ಲಾ ಭಾವಿಸಿರುವಾಗ, ಇದೇ ನೆಲದಲ್ಲಿ ಕಳೆದ ಒಂದು ಸಾವಿರದ  ನಾಲ್ಕನೂರು ವರ್ಷಗಳಿಂದ  ಆಫ್ರಿಕಾದ ಆಗ್ನೇಯ ಭಾಗದ  ಬಂಟು ಬುಡಕಟ್ಟು ಸಮುದಾಯಕ್ಕೆ ಸೇರಿದ ಸಿದ್ದಿ ಜನಾಂಗದ ಜನತೆ ಸ್ಥಳಿಯ ನೆಲಮೂಲ ಸಂಸ್ಕೃತಿಯನ್ನು ಒಪ್ಪಿಕೊಂಡು ನಮ್ಮೊಳಗಿದ್ದೂ ನಮ್ಮವರಾಗದೆ ಅನಾಮಿಕರಂತೆ ಬದುಕುತ್ತಿದೆ.
ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಮತ್ತು ಆಂಧ್ರದ ಹೈದರಾಬಾದ್ ಹಾಗೂ ಪಶ್ಚಿಮ ಬಂಗಾಳದ ಕೊಲ್ಕತ್ತ ಸೇರಿದಂತೆ, ದೆಹಲಿ, ಲಕ್ನೋ ಹಾಗೂ ಪಾಕಿಸ್ತಾನದ ಕರಾಚಿ ನಗರ ಮತ್ತು ಬೆಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಿದ್ದಿ ಜನಾಂಗವು ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ಅಳವಡಿಸಿಕೊಂಡು ಬದುಕುತ್ತಿದೆ. ಸ್ಥಳಿಯ ಭಾಷೆ, ಆಹಾರ, ಉಡುಗೆ ಮತ್ತು ತೊಡುಗೆಗಳ ಮೂಲಕ ಸ್ಥಳಿಯ ಸಮುದಾಯದ ಅನುಕಂಪದಲ್ಲಿ ಕೃಷಿ ಕೂಲಿಕಾರ್ಮಿಕರಾಗಿ, ಜೀತದಾಳುಗಳಾಗಿ ಮತ್ತು ಅರಣ್ಯದ ನಡುವೆ ಗುಡಿಸಲು ಕಟ್ಟಿಕೊಂಡು  ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಬದುಕುತ್ತಿರುವ ಸಿದ್ಧಿ ಜನಾಂಗದ ಜನಸಂಖ್ಯೆ ಭಾರತದಲ್ಲಿ ಸುಮಾರು ಐವತ್ತಾರಿಂದ ಎಪ್ಪತ್ತು  ಸಾವಿರವಿದ್ದರೆ, ನೆರೆಯ ಪಾಕಿಸ್ಥಾನದಲ್ಲಿ ಎಂಬತ್ತು ಸಾವಿರ ಜನಸಂಖ್ಯೆಯಷ್ಟು ಇದ್ದಾರೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಅಂಕೋಲ, ಯಲ್ಲಾಪುರ, ಹಳಿಯಾಳ, ಜೋಯಿಡ ಮತ್ತು ಬೆಳಗಾವಿಯ ಖಾನಾಪುರ ಹಾಗೂ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪಶ್ಚಿಮ ಕರಾವಳಿಯ ಹಳ್ಳಿಗಳು ಮತ್ತು ಗುಜರಾತಿನಲ್ಲಿ ಭರೂಚ್ ಜಿಲ್ಲೆಯಲ್ಲಿ ಬಹುತೇಕ ಮಂದಿ ನೆಲೆಗೊಂಡಿದ್ದಾರೆ. ಕರ್ನಾಟಕದಲ್ಲಿ 10, 477, ಮಂದಿ, ಗುಜರಾತಿನಲ್ಲಿ 8,611, ಹೈದರಾಬಾದ್ ನಗರದಲ್ಲಿ 1800, ಗೋವಾ,ಡಯು,ಡಾಮನ್ ನಲ್ಲಿ 193 ಮಂದಿ ಸಿದ್ದಿಗಳು ವಾಸಿಸುತ್ತಿದ್ದಾರೆಂದು ಹೇಳಲಾಗಿದೆ. ಕನಾಟಕದಲ್ಲಿರುವ ಸಿದ್ದಿ ಜನಾಂಗವು ನಾನೂರು ವರ್ಷಗಳ ಹಿಂದೆ ಪೂರ್ಚುಗೀಸರ ಗುಲಾಮರಾಗಿ ಭಾರತಕ್ಕೆ ಬಂದವರಾಗಿದ್ದಾರೆ. ಆದರೆ, ದೆಹಲಿ, ಲಕ್ನೋ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವಾಸಿಸುತ್ತಿರುವ ಸಿದ್ದಿ ಜನಾಂಗವು ಏಳನೇ ಶತಮಾನದಲ್ಲಿ ಭಾರತಕ್ಕೆ ದಾಳಿ ಮಾಡಿದ ಮುಸ್ಲಿಂ ದಾಳಿಕೋರರ ಸೇನೆಯ ಕಾಲಾಳುಗಳಾಗಿ ಬಂದ ಸುಧಿರ್ಘವಾದ ಇತಿಹಾಸವಿದೆ. ಇವರಲ್ಲಿ ಅನೇಕರು ಸ್ಥಳೀಯ ಸಂಸ್ಥಾನಗಳಲ್ಲಿ ಜಮಾವಣೆಗೊಂಡರು. ಅರಬ್ಬರು ಆಫ್ರಿಕಾದ ಆಗ್ನೇಯ ಪ್ರಾಂತ್ಯದಿಂದ ಇವರನ್ನು ಕರೆತಂದು ಭಾರತದ ಸಂಸ್ಥಾನದ ದೊರೆಗಳಿಗೆ ಮಾರಾಟ ಮಾಡುತ್ತಿದ್ದರು. ಕಠಿಮ ದುಡಿಮೆ, ಸಾಹಸ ಹಾಗೂ ಸ್ವಾಮಿ ನಿಷ್ಠಗೆ ಹೆಸರಾದ ಸಿದ್ದಿ ಜನಾಂಗದಲ್ಲಿ ಹಲವರು ಸೇನೆಯ ದಂಡನಾಯಕರಾಗಿ ಸೇವೆ ಸಲ್ಲಿಸಿದ ಇತಿಹಾಸ ಭಾರತದ ಚರಿತ್ರೆಯಲ್ಲಿ ದಾಖಲಾಗಿದೆ.  ಹೈದರಾಬಾದಿನ ನಿಜಾಮನ ಸೇನೆಗೆ ಮತ್ತು ಬಂಗಾಳದ ನವಾಬನ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಲು ಬಂದ ಸಿದ್ದಿ ಜನಾಂಗದಲ್ಲಿ ಇದೀಗ ಕೇವಲ ಬೆರಳಣಿಕೆಯಷ್ಟು ಮಾತ್ರ ಉಳಿದಿದ್ದಾರೆ.  ಇವರಿಂಗಿಂತ ಭಿನ್ನವಾದ ಇತಿಹಾಸ ನಮ್ಮ ಪಶ್ಚಿಮ ಘಟ್ಟದ ಕರಾವಳಿಯ ಸಿದ್ದಿ ಜನಾಂಗದ್ದಾಗಿದೆ. ಪೂರ್ಚುಗೀಸರ ಮೂಲಕ  ಮೂಲಕ ಗುಲಾಮರಾಗಿ ಭಾರತಕ್ಕೆ ಬಂದು ಬದುಕು ಕಟ್ಟಿಕೊಂಡಿರುವ ಇವರನ್ನು ನತದೃಷ್ಟ ಜನಾಂಗ ಎನ್ನಬಹುದು.  ಮುಗ್ದತನ ಮತ್ತು ತಾಳ್ಮೆ ಹಾಗೂ ಸಹಿಷ್ಣುತೆಗೆ  ಹೆಸರಾದ ಆಫ್ರಿಕಾದ ಜನಾಂಗವನ್ನು ಯುರೋಪಿಯನ್ನರು ತಮ್ಮ ಸಾಧನೆಗೆ, ಸಾಮ್ರಾಜ್ಯ ಸ್ಥಾಪನೆ ಮತ್ತು ವಿಸ್ತರಣೆಗೆ ದಾಳಗಳಂತೆ, ಪ್ರಾಣಿಗಳಂತೆ ಬಳಸಿಕೊಂಡಿದ್ದು ಜಗತ್ತಿನ ಮನುಕುಲದ ಇತಿಹಾಸದಲ್ಲಿ ಕ್ರೌರ್ಯದ ಪರಮಾವಧಿ ಎಂದು ಬಣ್ಣಿಸಬಹುದು.
ಇಂಗ್ಲೇಂಡಿನ ರಾಯ್ ಮೋಕ್ಸ್ಹ್ಯಾಂ ಎಂಬ ಲೇಖಕ ತನ್ನ ಯವ್ವನದ ದಿನಗಳಲ್ಲಿ ಪಶ್ಚಿಮ ಆಫ್ರಿಕಾದ ಚಹಾ ತೋಟದಲ್ಲಿ ಹದಿಮೂರು ವರ್ಷಗಳ ಕಾಲ ದುಡಿದು ತನ್ನ ತಾಯ್ನಾಡಿಗೆ ಹಿಂತಿರುಗಿದ ನಂತರ ಆಫ್ರಿಕಾ ಸಂಸ್ಕøತಿ ಮತ್ತು ಕಲೆ ಕುರಿತಂತೆ ವಸ್ತು ಸಂಗ್ರಾಹಲಯವನ್ನು ಆರಂಭಿಸಿದ್ದಲ್ಲದೆ, ಲಂಡನ್ ವಿಶ್ವ ವಿದ್ಯಾಲಯದಲ್ಲಿ ಪ್ರಾಚೀನ ಇತಹಾಸ ಮತ್ತು ದಾಖಲೆಗಳ ಸಂರಕ್ಷಕನಾಗಿ ಸೇವೆ ಸಲ್ಲಿಸಿದ. ಈತ ತನ್ನ ನಿವ್ಲತ್ತಿಯ ನಂತರ ಬ್ರಿಟೀಷ್ ಈಸ್ಟ್ ಇಚಿಡಿಯಾ ಕಂಪನಿ ಮತ್ತು ಪೂರ್ಚುಗೀಸರು ಇವರು ಭಾರತದ ನಡೆಸಿದ ದಬ್ಬಾಳಿಕೆ, ವಂಚನೆ, ಹಾಗೂ ಹಿಂಸೆಯ ಇತಿಹಾಸವನ್ನು ತನ್ನಥೆಪ್ಟ್ ಇಂಡಿಯಎಂಬ ಅಪರೂಪದ ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾನೆ. ಪ್ರತಿ ಸಮುದ್ರಯಾನದ ಸಂದರ್ಭದಲ್ಲಿ ಆಫ್ರಿಕಾದ ಮುಗ್ದ ಜನಾಂಗವನ್ನು ಸೆರೆ ಹಿಡಿದು ಅವರನ್ನು ಸನುದ್ರಯಾನz ಸಂದರ್ಭದಲ್ಲಿ  ಗುಲಾಮರಂತೆ ದುಡಿಸಿಕೊಂಡು ಆನಂತರ ಭಾರತದ ಸಂಸ್ಥಾನಗಳಿಗೆ ಮಾರಾಟ ಮಾಡಿದ ವಾಸ್ಕೋಡಿಗಾಮ, ಹಾಗೂ ಅರಬ್ ವ್ಯಾಪಾರಿಗಳ ಇತಿಹಾಸವನ್ನು ದಾಖಲಿಸಿದ್ದಾನೆ.

ಭಾರತಕ್ಕೆ ಬಂದ ಸಿದ್ದಿ ಜನಾಂಗದಲ್ಲಿ ಗುಜರಾತಿನ ಭರೂಚ್ ಜಿಲ್ಲೆಯ ಬಳಿ ಸಚಿನ್ ಎಂಬ  ಒಂದು ಪುಟ್ಟ ಸಂಸ್ಥಾನವನ್ನು ಆಳಿದ ಸಿದ್ದಿ ನವಾಬನ ಇತಿಹಾಸದ ಜೊತೆಗೆ  ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರದ ಒಂದು ಕಿಲೊಮೀಟರ್ ದೂರದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ 22 ಎಕರೆ ವಿಸ್ತಿರ್ಣದ ಜಂಜಿರಾ ಕೊಟೆಯನ್ನು ಕಟ್ಟಿಕೊಂಡು ಆಳಿದ ಸಿದ್ದಿ ಜನಾಂಗದ ಇತಿಹಾಸವೂ ದಾಖಲಾಗಿದೆದೆ. ಅಹಮದ್ ನಗರದ ಸುಲ್ತಾನ ಬಳಿ ಮಲ್ಲಿಕ್ ಅಂಬರ್ ಎಂಬಾತ ಪ್ರಧಾನ ಮಂತ್ರಿಯಾಗಿದ್ದರೆ, ದೆಹಲಿಯ ರಜಿಯಾ ಸುಲ್ತಾನಳ ಬಳಿ ದಂಡನಾಯಕ, ಆಪ್ತ ಸಹಾಯಕ ಹಾಗೂ ಪ್ರೇಮಿ ಎಲ್ಲವೂ ಆಗಿದ್ದ ಜಮಾಲುದ್ದೀನ್ ಯಾಕಬ್ ಎಂಬ ಸಿದ್ದಿ ಯುವಕನ ರೋಚಕ ಇತಿಹಾಸವು ಭಾರತದ ಚರಿತ್ರೆಯ ಪುಟಗಳಲ್ಲಿ ಕುತೂಹಲಕಾರಿ ಅಧ್ಯಾಯವಾಗಿದೆ.
ಇಂತಹ ಭವ್ಯ ಇತಿಹಾಸದ ಪಳೆಯುಳಿಕೆಗಳಂತೆ ಬದುಕಿರುವ ಸಿದ್ದಿ ಜನಾಂಗ ಜನರು ಯಾವುದೇ ಪೂರ್ವಗ್ರಹವಿಲ್ಲದೆ ತಾವು ನೆಲೆ ನಿಂತ ನೆಲದ ಭಾಷೆ ಮತ್ತು ಧರ್ಮವನ್ನು ಅಪ್ಪಿಕೊಮಡಿದ್ದಾರೆ. ಪಾಕಿಸ್ತಾನದಲ್ಲಿ ಸಿದ್ದೀಸ್ ಎಂದು ಕರೆಸಿಕೊಳ್ಳುವ ಇವರು ಉರ್ದು ಭಾಷೆ ಮತ್ತು ಇಸ್ಲಾಂ ಧರ್ಮವನ್ನು ಅಪ್ಪಿಕೊಂಡಿದ್ದಾರೆ. ಭಾರತದಲ್ಲಿ ಹಿಂದು-ಮುಸ್ಲಿಂ- ಕ್ರೈಸ್ತ ಧರ್ಮ ಹೀಗೆ ಮೂರು ಧರ್ಮಗಳಿಗೆ ಹಂಚಿ ಹೋಗಿರುವ ಇವರು ಕನ್ನಡ, ಕೊಂಕಣಿ, ಮರಾಠಿ, ಸಿಂದಿ, ಗುಜರಾತಿ, ಬಂಗಾಳಿ ಭಾಷೆಯನ್ನಾಡುತ್ತಾರೆ. ಕರ್ನಾಟಕದಲ್ಲಿರುವ ಬಹುತೇಕ ಸಿದ್ದಿ ಜನಾಂಗದ ಜನರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು ಕನ್ನಡ ಮತ್ತು ಕೊಂಕಣಿ ಭಾಷೆಯನ್ನಾಡುತ್ತಾರೆ. ತಮ್ಮ ಪೂರ್ವಿಕರ ಸಂಸ್ಸøತಿಯನ್ನು ಹಾಡು ಮತ್ತು ನ್ಲತ್ಯಗಳ ಮೂಲಕ ಇಂದಿಗೂ ಕಾಯ್ದಿಟ್ಟುಕೊಂಡು ಬಂದಿರುವ ಇವರು ಹಬ್ಬ ಹರಿದಿನಗಳಲ್ಲಿ ನಿಧನರಾಗಿರುವ ಹಿರಿಯ ಪ್ರಜೆಯನ್ನು ಬಲು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ವಿಶೇಷವಾಗಿ ಹೋಳಿ ಮತ್ತು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಇಂತಹ ಪೂಜೆಗಳನ್ನು ನೆರವೇರಿಸುತ್ತಾರೆ. ಹಲವು ಧರ್ಮಗಳ ನಡುವೆ ಹಂಚಿ ಹೋಗಿರುವ ಸಿದ್ದಿ ಜನಾಂಗದಲಿ ತಮ್ಮ ಕುಟುಂಬದಿಂದ  ಹೆಣ್ಣನ್ನು ಕೊಡುವ ಅಥವಾ ತರುವ ವಿಚಾರದಲ್ಲಿ ಧರ್ಮದ ಕಟ್ಟಳೆಯಿಲ್ಲದಿರುವುದು ವಿಶೇಷವಾಗಿದೆ. ಗಂಡು- ಹೆಣ್ಣು ಎರಡೂ ಧರ್ಮದ ಗುರುಗಳು ವಿವಾಹ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿಕೊಡುತ್ತಾರೆ. ವಿಧವಾ ವಿಹಾರ ಮತ್ತು ವಿವಾಹ ವಿಚ್ಚೇಧಿತರ ಪುನರ್ ವಿವಾಹಕ್ಕೆ ಜನಾಂಗದಲ್ಲಿ ಅವಕಾಶವಿದೆ.
ಇಲ್ಲಿಯವರೆ ಸಮಾಜದ ಕುಹಕದ ಕಣ್ಣಿಗೆ ಬಲಿಯಾಗಿ ಅಪಮಾನಿತರಂತೆ ಬದುಕುತ್ತಿದ್ದ ಸಿದ್ದಿ ಜನಾಂಗವನ್ನು ಭಾರತ ಸರ್ಕಾರ ಇತ್ತೀಚೆಗಿನ ವರ್ಷಗಳಲ್ಲಿ ಪರಿಶಿಷ್ಷ ವರ್ಗದ ಗುಂಪಿಗೆ ಸೇರಿಸಿದ್ದರ ಫಲವಾಗಿ ನಿಧಾನವಾಗಿ ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಸೌಲಭ್ಯಗಳನ್ನು ಜನಾಂಗವು ಪಡೆಯುವಚಿತಾಗಿದೆ. ಇದರ ಜೊತೆಗೆ ಭಾರತದ ಸವೋಚ್ಛನ್ಯಾಯಾಲಯವು ಅರಣ್ಯವಾಸಿಗಳನ್ನು ಅರಣ್ಯದಿಂದ ಒಕ್ಕಲೆಬ್ಬಿಸಬೇಕು ಎಂದು ನೀಡಿರುವ ಇತ್ತೀಚೆಗಿನ ತೀರ್ಪು ಬಹುತೇಕ ಸಿದ್ದಿ ಜನಾಂಗವನ್ನು ಬೀದಿಗೆ ದೂಡುವ ಸಾಧ್ಯತೆಗಳಿವೆ.

ಭಾರತದ ಬಹು ದೊಡ್ಡ ದುರಂತವೆಂದರೆ, ಆಫ್ರಿಕಾ ಮೂಲದ ಬುಡಕಟ್ಟು ಜನಾಂಗದ ದೈಹಿಕ ಸಾಮಥ್ರ್ಯವನ್ನು ಈವರೆಗೆ ಸರಿಯಾಗಿ ಗ್ರಹಿಸದೆ, ಜನಾಂಗವನ್ನು ಬಳಸಿಕೊಳ್ಳದೇ ಇರುವುದು. ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಿಗೆ ಶತಮಾನಗಳ ಹಿಂದೆ ಗುಲಾಮರಾಗಿ ಮಾರಾಟವಾದ ನಿಗ್ರೋ ಜನಾಂಗದ ಯುವ ಕ್ರೀಡಾ ಪಟುಗಳು ಇಂದು ದೇಶಗಳ ಕ್ರೀಡಾರಂಗದ ಅಮೂಲ್ಯ ಆಸ್ತಿಗಳಾಗಿ ಪರಿಗಣಿಸಲ್ಪಟ್ಟಿದ್ದಾರೆ. 1984 ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಕಾರ್ಲ್ಲೂಯಿಸ್ ಓಟದ ಸ್ಪರ್ಧೆಯಲ್ಲಿ ನಿರ್ಮಿಸಿದ ದಾಖಲೆ ( ನಾಲ್ಕು ಚಿನ್ನದ ಪದಕ) ಅಮೇರಿಕಾ ಸರ್ಕಾರದ ಕಣ್ಣನ್ನು ತೆರೆಸಿತು. ಇಂದು ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಅಮೇರಿಕಾ ದೇಶಕ್ಕೆ ಪದಕ ತಂದುಕೊಡುವ ಕ್ರೀಡಾಪಟುಗಳಲ್ಲಿ ಶೇಕಡ 75 ರಷ್ಟು ಮಂದಿ ಕಪ್ಪು ಜನಾಂಗದ ಪ್ರತಿಭೆಗಳು ಎಂಬುದನ್ನು ನಾವು ಮರೆಯಬಾರದು. ಟೆನ್ನಿಸ್ ಕ್ರೀಡೆಯಲ್ಲಿ ಅರ್ಥರ್ ಆಶ್, ವಿಲಿಯಮ್ಸ್ ಸಹೋದರಿಯರು ಇತಿಹಾಸವನ್ನೇ ನಿರ್ಮಿಸಿದ್ದಾರೆ. ಇದರಿಂದ ಸ್ಪೂರ್ತಿಗೊಂಡ ಭಾರತದ ಕೇಂದ್ರ ಸರ್ಕಾರವು ಸಹ À 1980 ದಶಕದಲ್ಲಿ ಮಾರ್ಗರೇಟ್ ಆಳ್ವ ನೇತ್ರದಲ್ಲಿ ವಿಶೇಷ ಪ್ರಾಂತ್ಯ ಕ್ರೀಡಾ ಯೋಜನೆ ಎಂಬ ಕಾರ್ಯಕ್ರಮವನ್ನು ರೂಪಿಸಿತ್ತು. ಭಾರತದ ಬುಡಕಟ್ಟು ಜನಾಂಗದ ಯುವಕ ಯುವತಿಯರಿಗೆ ಶಿಕ್ಷಣದ ಜೊತೆಗೆ  ಕ್ರೀಡೆಯಲ್ಲಿ ತರಬೇತು ನೀಡುವ ಯೋಜನೆಯನ್ನು ಆರಂಭಿಸಿತು. ಆದರೆ, ಆಳುವ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಭಂಡತನದಿಂದ ಎಲ್ಲವೂ ಮಣ್ಣು ಪಾಲಾಗಿದೆ. 1990 ದಶಕದಲ್ಲಿ ಗೋವಾದ ಸಲ್ಗಾಂವಕರ್ ಪುಟ್ಬಾಲ್ ಕ್ಲಬ್ ನಲ್ಲಿ ಆಟವಾಡುತ್ತಿದ್ದ ಜುಜೆ ಸಿದ್ದಿ ಎಂಬ ಆಟಗಾರ ರಾಷ್ಟ್ರೀಯ ತಂಡದ ಆಟಗಾರನಾಗಿ ಸೇವೆ ಸಲ್ಲಿಸಿದ್ದನ್ನು ಹೊರತು ಪಡಿಸಿದರೆ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಸಿದ್ದಿ ಜನಾಂಗ ಇನ್ನೂ ಹೊರ ಹೊಮ್ಮಿಲ್ಲ. ಈಗಿನ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ದೂರದ ಕಾಲ್ನಡಿಗೆ, ಓಟ ಮುಂತಾದ ಸ್ಪರ್ಧೆಗಳಲ್ಲಿ ಇಂತಿಯೋಪಿಯಾ ದೇಶದಂತಹ ಬಡತನ ಮತ್ತು ಹಸಿವನ್ನು ಹಾಸಿ ಹೊದ್ದು ಮಲಗುವ ದೇಶಗಳ ಕ್ರೀಡಾ ಪಡುಗಳು ಚಿನ್ನದ ಪದಕ ಗಳಿಸಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಇನ್ನಾದರೂ ನಮ್ಮ ಸರ್ಕಾರಗಳು ಸಿದ್ದಿ ಜನಾಂಗದ ದೈಹಿಕ ಸಾಮರ್ಥೈವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ಮನಸ್ಸು ಮಾಡಬೇಕಿದೆ. ಅವರ ಸಾಂಸ್ಕøತಿಕ ಇತಿಹಾಸವನ್ನು ದಾಖಲಿಸುವ ನಿಟ್ಟಿನಲ್ಲಿ ದೆಹಲಿಯ ಇಂದಿರಾಗಾಂಧಿ ಸೆಮಟರ್ ಫಾರ್ ಕಲ್ಚರಲ್ ಹಿಸ್ಟರಿಸ್ ಆಫ್ ಸಿದ್ದಿಸ್ ಆಫ್ ಕರ್ನಾಟಕಎಂಬ ಯೋಜನೆಯ ಮೂಲಕ( ಬೆಂಗಳೂರು ಶಾಖೆ) ಸಿದ್ದಿ ಜನಾಂಗದ ಹಾಡುಗಳು, ಲಾವಣಿಗಳು, ನೃತ್ಯ ಇತ್ಯಾದಿಗಳನ್ನು ದಾಖಲಿಸಿದೆ. ಜೊತೆಗೆ ಇತ್ತೀಚೆಗಿನ ವರ್ಷಗಳಲ್ಲಿ ಆದುನಿಕ ಶಿಕ್ಷಣಕ್ಕೆ ತೆರೆದುಕೊಂಡ ಸಿದ್ದಿ ಜನಾಂಗದ ಯುವಕ, ಯುವತಿಯರಲ್ಲಿ ಹಲವಾರು ಮಂದಿ ಪದವೀಧರರಾಗಿದ್ದು ತಮ್ಮ ಜನಾಂಗದ ಕುಂದು ಕೊರತೆಗಳ ಕುರಿತಂತೆ ಸಮಾಜದ ಮತ್ತು ಸರ್ಕಾರದ ಗಮನ ಸೆಳೆಯಲ್ಲಿ ಯಶಶ್ವಿಯಾಗಿದ್ದಾರೆ.
 ( 2019 ಮೇ ತಿಂಗಳ ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಚಿತ್ರಗಳು ಸೌಜನ್ಯ- ವಿಕಿಪಿಡಿಯ ಮತ್ತು ಅಂತರ್ಜಾಲದಿಂದ ತೆಗೆದುಕೊಳ್ಳಲಾಗಿದೆ.