ಬುಧವಾರ, ಫೆಬ್ರವರಿ 26, 2020

ದೇಶಭಕ್ತಿಯೆಂಬ ಉನ್ಮಾದ



 ಕಳೆದ ಒಂದು ವರ್ಷದಿಂದೇಚೆಗೆ ದೇಶದ ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ದೇಶಭಕ್ತಿ ಎಂಬ ಪದ ಅಥವಾ ಪರಿಕಲ್ಪನೆ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರುವದರ ಮೂಲಕ ಪರ-ವಿರೋಧಗಳ ಸಂಘರ್ಷದಲ್ಲಿ ಹಲವು ಅವಘಡಗಳಿಗೆ ಕಾರಣವಾಗುತ್ತಿದೆ. ಜೊತೆಗೆ ಸಮುದಾಯಗಳ ಮತ್ತು  ನಾಗರೀಕರ ನಡುವೆ ಸೌಹಾರ್ದದತೆಯ ಬದಲಾಗಿ ವೈಷಮ್ಯವನ್ನು ಹುಟ್ಟುಹಾಕುತ್ತಿದೆ. ಮೂಲಕ ಎರಡು ವಿಭಿನ್ನ ತಾತ್ವಿಕ ಸಿದ್ಧಾಂತ ಹೊಂದಿದ ಬಣಗಳ ನಡುವೆ ಯಾವುದೇ ಸಂವಾದ ಸಾಧ್ಯವಿಲ್ಲ ಎಂಬ ನಿರ್ಣಾಯಕ ಹಂತವನ್ನು ತಲುಪಿದೆ.

ಮೊನ್ನೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಮುಸ್ಲಿಂ ಸಮುದಾಯದ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ದಿಡೀರನ್ ಕಾಣಿಸಿಕೊಂಡ ಅಮೂಲ್ಯ ಲಿನಯೋ ಎಂಬ ಯುವತಿ ಯಾವ ಕಾರಣವೂ ಇಲ್ಲದೆ ಪಾಕಿಸ್ತಾನ ಜಿಂದಾಬಾದ್ ಎಂದು ಮೂರು ಬಾರಿ ಘೋಷಣೆಯನ್ನು  ಕೂಗುವುದರ ಮೂಲಕ ಜೈಲು ಪಾಲಾದಳು.   ಘಟನೆ ಸಂಭವಿಸಿದ ಮರುದಿನ  ಟೌನ್ ಬಳಿ ಪ್ರತಿಭಟಿಸುತ್ತಿದ್ದವರ ನಡುವೆ ಭಿತ್ತಿ ಪತ್ರವನ್ನು ಪ್ರದರ್ಶಿಸುವುದರ   ಮೂಲಕ  ಆದ್ರಾ ಎಂಬ ಮತ್ತೊಬ್ಬ  ಯುವತಿಯೂ ಸಹ  ಅಮೂಲ್ಯಳ ಹಾಗೆ ದೇಶ ದ್ರೋಹದ ಆರೋಪದಡಿ ಬಂಧಿತಳಾಗಿ ಪರಪ್ಪನ ಅಗ್ರಹಾರದ ಸೆರೆಮನೆಗೆ  ಸೇರ್ಪಡೆಯಾದಳು.  ಹಸಿ ಹಸಿಯಾದ ಹಾಗೂ ಪ್ರೌಢತೆಯಿಲ್ಲದ ಇಂತಹ ಇಂತಹ ನಡುವಳಿಕೆಗಳಿಂದಾಗಿ ಈಗ ಭಾರತದಲ್ಲಿ ದೇಶ ಭಕ್ತಿಯೆಂಬುದು ಒಂದು ರೀತಿಯ ಉನ್ಮಾದವಾಗಿದೆ ಎಂದು ವ್ಯಾಖ್ಯಾನಿಸಬಹುದು.
ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂಬಂತೆ ಇತ್ತಿಚೆಗಿನ ದಿನಗಳಲ್ಲಿ ದೇಶದ  ಎಲ್ಲಾ ವಿಷಯಗಳಿಗೂ ಪಾಕಿಸ್ತಾನವನ್ನು ಎಳೆ ತರುವ ಚಾಳಿ ಹೆಚ್ಚಾಗುತ್ತಿದೆ. ಜೊತೆಗೆ ಸರ್ಕಾರಗಳು ಆಡಳಿತಾತ್ಮಕವಾಗಿ ಎಸೆಗಿದ ತಮ್ಮ ತಪ್ಪುಗಳನ್ನು ಪಾಕಿಸ್ತಾನದ ನೆಪದಲ್ಲಿ ಮುಚ್ಚಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ಚಾಲ್ತಿಯಲ್ಲಿದೆ.  ಆಡಳಿತದ ಚುಕ್ಕಾಣಿ ಹಿಡಿದ ರಾಷ್ಟ್ರವೊಂದg ನಾಯಕ ಅಥವಾÀ ಸರ್ಕಾರ ಎಸೆಗುವ  ಪ್ರಮಾದಗಳಿಗೆ ಅಲ್ಲಿನ ನಾಗರೀಕರನ್ನು ದ್ವೇಷಿಸುವ ಹಂತಕ್ಕೆ ನಾವು ಬೆಳೆದುನಿಂತಿದ್ದೆವೆ. ಕೇವಲ ಎಪ್ಪತ್ಮೂರು ವರ್ಷಗಳ ಹಿಂದೆ ನಮ್ಮ ಸಹೋದರರಾಗಿ ಬದುಕಿದ್ದ ಪಾಕಿಸ್ತಾನದ  ಜನತೆ ಈಗ  ಭಾರತದ ಪಾಲಿಗೆ ಶತೃಗಳಾಗಿದ್ದಾರೆ. ಇದು ನಮ್ಮ ದೃಷ್ಟಿಕೋನದ ಕೊರತೆಯಲ್ಲದೆ ಬೇರೇನೂ ಅಲ್ಲ. ಪಾಕಿಸ್ತಾನವನ್ನು ಆಳಿದ ಬಹುತೇಕ  ರಾಜಕೀಯ ಪಕ್ಷಗಳ ನಾಯಕರು ಭಾರತದ ಮೇಲಿನ ದ್ವೇಷದಿಂದ ಭಯೊತ್ವಾದನೆಯನ್ನು ಹುಟ್ಟು ಹಾಕುವುದರ ಜೊತೆಗೆ ಅದನ್ನು ಪೋಷಿಸುತ್ತಾ ಬಂದರು. ಅದರ ಅಂತಿಮ ಫಲವನ್ನು ಇದೀಗ ಅಲ್ಲಿನ ಜನತೆ ಅನುಭವಿಸಬೇಕಿದೆ.  ಕೇವಲ 1972 ರಲ್ಲಿ ಉದಯಿಸಿದ ನಮ್ಮ ನೆರೆಯ ಬಾಂಗ್ಲಾ ದೇಶವು ಏಷ್ಯಾ ಖಂಡದ ಅತ್ಯಂತ ಬಡರಾಷ್ಟ್ರ ಎಂಬ  ಶಾಪವನ್ನು ಕಳಚಿಕೊಂಡು, ಬಡತನ ಮತ್ತು ನಿರುದ್ಯೋಗ ನಿವಾರಣೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ರಗಳನ್ನು ಹಿಂದಿಕ್ಕುವುದರ ಮೂಲಕ ಜಗತ್ತಿನ ಗಮನ ಸೆಳೆದಿದೆ. ಪಾಕಿಸ್ತಾನದ ಸರ್ಕಾರಕ್ಕೆ ಮತ್ತು ಅಲ್ಲಿನ ನಾಯಕರಿಗೆ ತಮ್ಮ ನೆಲದ ಬಡತನದ ನಿವಾರಣೆಗಿಂತ ಭಾರತದ ಮೇಲಿನ ದ್ವೇó ಪ್ರಥಮ ಆದ್ಯತೆಯಾದ ಕಾರಣ  ಪಾಕಿಸ್ತಾನವೆಂಬುದು ಅನಕ್ಷರತೆ, ಬಡತನ, ಮೌಡ್ಯ ಹಾಗೂ ನಿರುದ್ಯೋಗ, ಭಯೋತ್ಪಾದನೆಗಳ ಕೂಪವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ರಗಳ ವಿಶ್ವಾಸವನ್ನು ಕಳೆದುಕೊಂಡು ಏಕಾಂಗಿಯಾಗಿದೆ.

ಇಂತಹ ದಯನೀಯವಾದ ಸ್ಥಿತಿಯಲ್ಲಿರುವ ಪಾಕಿಸ್ತಾನವನ್ನು ಮತ್ತು ಅಲ್ಲಿನ ಜನತೆಯನ್ನು ನಮ್ಮ ದೇಶದ ರಾಜಕೀಯದಲ್ಲಿ ಎಳೆದು ತಂದು ಚರ್ಚಿಸುವುದು ಅಥವಾ ದ್ವೇಷಿಸುವುದು ದೇಶಭಕ್ತಿ ಎಂಬ ಹಂತ ತಲುಪಿರುವ ಇಲ್ಲಿನ  ಬಲಪಂಥೀಯರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ. ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಥವಾ ಮಾಧ್ಯಮಗಳು ಪರಿಣಾಮಕಾರಿಯಾಗಿರುವ ಹಿನ್ನಲೆಯಲ್ಲಿ ಎಲ್ಲರಿಗೂ ದಿಡೀರ್ ಪ್ರಸಿದ್ಧಿ ಪಡೆಯುವ ಮಾನಸಿಕ ಜಾಡ್ಯ ಅಂಟಿಕೊಂಡಿದೆ.. ಅಮೂಲ್ಯ ಮತ್ತು ಆದ್ರಾ ಎಂಬ ಯುವತಿಯರ ನಡೆ  ಕೂಡ ಇಂತಹದ್ದೆ. ಹಾಗಾದರೆ ದೇಶಭಕ್ತಿ ಎದರೇನು? ವಂದೇ ಮಾತರಂ ಗೀತೆಯನ್ನು ಹಾಡುವುದು, ಸಾರ್ವಜನಿಕವಾಗಿ ಹನುಮಾನ್ ಚಾಲಿಸ ಶ್ಲೋಕ ಪಠಿಸುವುದು ದೇಶಭಕ್ತಿಯಾಗಬಲ್ಲದೆ?  ನಿಜ ಹೇಳಬೇಕೆಂದರೆ, ನನಗೆ ಇಂದಿಗೂ ಸಹ ಒಂದು ಸಾಲು ತಪ್ಪಿಲ್ಲದೆ ರಾಷ್ಟ್ರ ಗೀತೆಯನ್ನಾಗಲಿ, ಜಯಭಾರತ ಜನನಿಯ ತನುಜಾತೆ ಎಂಬ ಕರ್ನಾಟಕದ ನಾಡಗೀತೆಯನ್ನಾಗಲಿ ಹಾಡಲು ಬರುವುದಿಲ್ಲ. ಹಾಗಾದರೆ, ನಾನು ದೇಶದ್ರೋಹಿಯೇ? ಇಲ್ಲಿ ವಾಸಿಸಲು ನನಗೆ ಹಕ್ಕಿಲ್ಲವೆ?
ನನ್ನನ್ನು ಬೆಳಿಸಿದ ಪೋಷಕರಾಗಲಿ, ಕಲಿಸಿದ ಗುರು ಹಿರಿಯರಾಗಲಿ, ರಾಷ್ಟ್ರಗೀತೆ ಅಥವಾ ನಾಡಗೀತೆ ಕಂಠಪಾಠ ಮಾಡಿಕೊಳ್ಳುವುದು ದೇಶಭಕ್ತಿ ಎಂದು ಹೇಳಿಕೊಡಲಿಲ್ಲ. ಬದಲಾಗಿ, ರಾಷ್ಟ್ರದ ಚಿಹ್ನೆಯಾದ ರಾಷ್ಟ್ರ ಧ್ವಜ,  ನಮ್ಮೆಲ್ಲರ ಆತ್ಮದಂತಿರುವ ಸಂವಿಧಾನ, ಅಲ್ಲಿನ ಕಾನೂನುಗಳನ್ನು ಗೌರವಿಸುವುದರ ಜೋತೆಗೆ  ನಮ್ಮ ನೆರೆ ಹೊರೆಯವರನ್ನು ಜಾತಿ, ಧರ್ಮಗಳ  ಎಲ್ಲೆ ಮೀರಿ ಪ್ರೀತಿಸುವುದನ್ನು ಹೇಳಿಕೊಟ್ಟರು. ಬಸವಣ್ಣ, ಗಾಂಧೀಜಿಯರಿಂದ ಹಿಡಿದು ನನ್ನ ತಲೆಮಾರಿನ ಕುÉವೆಂಪು, ನೆರೆಯ ತಮಿಳುನಾಡಿನ ಸುಬ್ರಮಣ್ಯ ಭಾರತಿಯಾರ್ ಹಾಗೂ ಕವಿ ಮಹಮ್ಮದ್ ಇಕ್ಬಾಲ್ ರವರಿಂದ ಕಲಿತ ದೇಶ ಭಕ್ತಿ ಗೀತೆಗಳಲ್ಲಿನ  ವಿಶ್ವ ಮಾನವ ಪರಿಕಲ್ಪನೆ ಕೂಡ ಇದಾಗಿದೆ. ಬಹುಮುಖಿ ಸಂಸ್ಸøತಿಯ ನೆಲವಾದ ಭಾರತದಲ್ಲಿ ಬಾಳಿದ ಸಾಧು ಸಂತರು, ತತ್ವ ಪದಕಾರರು ಹಾಗೂ  ಸೂಫಿಗಳು ಜಪಿಸಿದ ಮಂತ್ರ ಇದೇ ಅಲ್ಲವೆ? ನಮ್ಮ ಉತ್ತರ ಕರ್ನಾಟಕದ ಹಿಂದೂ ಧರ್ಮದ ಬ್ರಾಹ್ಮಣ ಗುರು ಗೋವಿಂದ ಭಟ್ಟರಿಗೂ. ಮುಸ್ಲಿಂನಾದ  ಶಿಶುನಾಳರಿಗೂ ಎಲ್ಲಿಯ ಸಂಬಂಧ? “ ಹಾಕಿದ ಜನಿವಾರವ, ಸದ್ಗುರುನಾಥ ಹಾಕಿದ ಜನಿವಾರವಎಂದು ಹಾಡಿದ ಶಿಶುನಾಳ  ಷರೀಪರನ್ನು ಮರೆಯಲು ಸಾಧ್ಯವೆ? ಇಡೀ ನಾಡಿಗೆ ಸೌಹಾರ್ಧತೆತೆಯನ್ನು ಸಾರಿದ ಇಂತಹ ಅಪರೂಪದ ಗುರುಶಿಷ್ಯರ ಜೋಡಿ, ಎಲ್ಲರೂ  ವಿಷ ಕಕ್ಕುತ್ತಿರುವ ದುರಿತ ಕಾಲದಲ್ಲಿ ನೆನಪಾಗುತ್ತಿಲ್ಲ.   ಇದು ವರ್ತಮಾನದ ದುರಂತವೂ ಹೌದು ನಾವುಗಳು ವಿಸ್ಮೃತಿಗೆ ಜಾರಿರುವ ಕುರುಹು ಹೌದು..

ಭಾರತೀಯ ಸಾಹಿತ್ಯದ  ಕಥಾ ಲೋಕದಲ್ಲಿ ತನ್ನ ವಿಭಿನ್ನ ಕಥಾವಸ್ತುಗಳಿಂದ ಹೆಸರಾಗಿದ್ದ  ಮಲೆಯಾಳಂ ಭಾಷೆಯ ಕಥಾ ಕಣಜವೆನಿಸಿರುವ ದಿವಂಗತ ವೈಕಂ ಮಹಮ್ಮದ್ ಬಷೀರ್ ತಮ್ಮ ಆತ್ಮಕಥೆಯ ಭಾಗದಂತಿರುವಜನ್ಮ ದಿನಂಎಂಬ ಸಣ್ಣ ಕಥೆಯಲ್ಲಿ ಒಂದು ಕಡೆ ಹೀಗೆ ಹೇಳಿಕೊಂಡಿದ್ದಾರೆ. “ ಭಾರತದ ಪ್ರತಿಯೊಂದು ಪಟ್ಟಣಗಳಲ್ಲಿ ನಾನು ಎಷ್ಟೋ ವರ್ಷಗಳವರೆಗೆ ಅಲೆದಾಡಿದೆ. ಅಲ್ಲಿ ನಡೆದಾಡುತ್ತಾ ಎಷ್ಟೋ ಜಾತಿಗಳಾಗಿ ಬದುಕಿದೆ. ಯಾರ್ಯಾರೋ ಕೊಟ್ಟ ಆಹಾರವನ್ನು ಅವರ ಜಾತಿ ಯಾವುದು? ಧರ್ಮ ಯಾವುದು? ಎಂದು ಪ್ರಶ್ನಿಸಿದೆ ಕೃತಜ್ಞಾಪೂರ್ವಕವಾಗಿ ಸ್ವೀಕರಿಸಿ ಹಸಿವನ್ನು ನೀಗಿಸಿಕೊಂಡೆ. ಹಾಗಾಗಿ ನನ್ನ ರಕ್ತ, ಮಾಂಸ, ಮಜ್ಜೆ ಇವೆಲ್ಲವೂ ಕೇವಲ ನನ್ನದು ಮಾತ್ರವಲ್ಲ, ಇಡೀ ಭಾರತದ್ದಾಗಿವೆ. ಕರಾಚಿಯಿಂದ ಕೊಲ್ಕತ್ತದವರೆಗೆ, ಕಾಶ್ಮಿರದಿಂದ ಕನ್ಯಾಕುಮಾರಿಯವರೆಗೆ ನನಗೆ ಎಲ್ಲೆಡೆ ಸ್ನಹಿತರಿದ್ದಾರೆ. ಇಂದಿಗೂ ಸಹ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಸ್ನೇಹವು ಸುಗಂಧದ ಹಾಗೆ ಎಲ್ಲೆಡೆ ಹರಡಲಿ ಎಂಬುದು ನನ್ನ ಮಹಾದಾಸೆಅಷ್ಟೇನೂ ಓದದ ವೈಕಂರಬರು ತಮ್ಮ ಕೊನೆಯ ದಿನಗಳಲ್ಲಿಯೂ ಸಹ ಇದೇ ಮಾತನ್ನು ಪುನರುಚ್ಚರಿಸುತ್ತಿದ್ದರು.  ಭಾರತದ ನೆಲದಲ್ಲಿ ಜನಿಸಿದ   ಕಲಾವಿದನಿಗೆ,  ಕವಿಗೆ, ಬರಹಗಾರನಿಗೆ ಹಾಗೂ  ರಾಜಕೀಯ ನೇತಾರ ಎನಿಸಿಕೊಂಡವನಿಗೆ  ಜಾತಿ ಮತ್ತು ಧರ್ಮಗಳ ಸೂತಕವಿರಬಾರದು. ನಮ್ಮ ಅನೇಕ ಪ್ರಾತಃ ಸ್ಮರಣೀಯರು ಇಂತಹ ಆದರ್ಶದ ಬದುಕನ್ನು ಬದುಕಿ ಹೋಗಿರುವಾಗ, ನಮ್ಮಗಳ ನಡುವೆ ಏಕೆ ಇಂತಹ ಅಸಹನೆ ಮತ್ತು ದ್ವೇಷ ಹುಟ್ಟಿತು?  ಗಾಂಧೀಜಿಯವರು ಮತ್ತು ಬಾಲ ಗಂಗಾಧರ ತಿಲಕರು ಪ್ರತಿಪಾದಿಸಿದ ರಾಷ್ಟ್ರ ಭಕ್ತಿ ಅಥವಾ ದೇಶಭಕ್ತಿ ಖಂಡಿತಾ ಇದಾಗಿರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು.
ನಮ್ಮ ನಡುವಿನ  ಕನ್ನಡದ ಕವಿ ಹಾಗೂ ಮಿತ್ರ ಪೀರ್ ಭಾಷಾ ದಶಕದ ಹಿಂದೆ ಬರೆದ ಕವಿತೆಯೊಂದರ ಸಾಲುಗಳಿವು.

ಅಕ್ಕಾ ಸೀತಾ, ನಿನ್ನಂತೆ
ನಾನೂ ಸಹ ಇಲ್ಲಿ ಕಳಂಕಿತನು
 ನೀನು ಪಾತಿವೃತ್ಯಕ್ಕೆ, ನಾನು ದೇಶಭಕ್ತಿಗೆ
ಪ್ರತಿದಿನ  ಇಲ್ಲಿ ಕೊಂಡ ಹಾಯಬೇಕು.

ಕವಿ ಪೀರ್ ಭಾಷಾ ದಾಖಲಿಸಿದ  ದುಸ್ವಪ್ನದಂತಹ ಅಕ್ಷರ ರೂಪದÀ ಭಾವನೆಗಳು ಇಂದಿಗೂ ಬದಲಾಗಲಿಲ್ಲ. ಅನುಮಾನಗಳು ಮತ್ತು ಅಪಮಾನಗಳ ನಡುವೆ ಬದುಕುವ ಅಲ್ಪ ಸಂಖ್ಯಾತರಿಗೆ, ಇಲ್ಲಿನ ದಲಿತರು ಮತ್ತು ಆದಿವಾಸಿಗಳಿಗೆ ತುರ್ತು ಅಗತ್ಯವಿರುವುದು  ಘನತೆಯಿಂದ ಕೂಡಿದ ಬದುಕೇ ಹೊರತು, ದೇಶಭಕ್ತಿ ಪಾಠವಲ್ಲ, ಇದು ಇಲ್ಲಿನ ಪ್ರತಿಯೋಬ್ಬ ನಾಗರೀಕನ ಪ್ರಜ್ಞೆಯ ಭಾಗವಾಗಬೇಕು.  ದೇಶದ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಬೇಕೆ? ಬೇಡವೆ? ಎಂಬುದರ ಕುರಿತು ಸುಪ್ರೀಂ ಕೋರ್ಟ್ ರೀತಿ ವ್ಯಾಖ್ಯಾನಿಸಿದೆ.
ಒಂದು ರಾಷ್ಟ್ರದ ನಾಗರೀಕನಾಗಿ ಅಥವಾ ಪ್ರಜೆಯಾಗಿ , ರಾಷ್ಟ್ರದ ಘನತೆ. ಗೌರವ, ಪ್ರತಿಷ್ಟೆ ಮತ್ತು ಅಲ್ಲಿನ ಅಸ್ಮಿತೆಗಳನ್ನು ಗೌರವಿಸುವುದು ಪ್ರತಿಯೋಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿರುತ್ತದೆ. ದೇಶದ ಅಖಂಡತೆ ಮತ್ತು ಭದ್ರತೆಯ ದೃಷ್ಟಿಯಿಂದ ಇದು ಅನಿವಾರ್ಯ. ಆದರೆ, ಇಂತಹ ಸಾಂಕೇತಿಕವಾದ ಅಲಿಖಿತ ನಿಯಮಗಳನ್ನು  ವ್ಯಾಖ್ಯಾನಿಸುವವರು ಮತ್ತು ನಿಯಂತ್ರಿಸುವವರು ಯಾರು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ದೇಶಭಕ್ತಿ ಎಂದರೆ, ಆಡಳಿತಾರೂಢ ಪಕ್ಷದ ಎಲ್ಲಾ ನೀತಿ, ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದಲ್ಲ, ಅಂತಹ ದೇಶಭಕ್ತಿಯನ್ನು ತಿರಸ್ಕರಿಸುವ ಸಾರ್ವಭಾಮ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಕೆಲವು ಸಂದರ್ಭಗಳಲ್ಲಿ ಪ್ರಭುತ್ವ ವಿರೋಧಿ ನಿಯಮಗಳನ್ನು ವಿರೋಧಿಸುವ  ಸಾಂವಿಧಾನಕ ಹಕ್ಕನ್ನು ಭಾರತೀಯ ನಾಗರೀಕರಿಗೆ ನಮ್ಮ ಸಂವಿಧಾನ ನೀಡಿದೆ

ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿರುವ ದೇಶಭಕ್ತಿ ಕುರಿತಾದ ಅಂಶಗಳು ಪರ-ವಿರೋಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಕಣ್ಣನ್ನು ತೆರಸುವಂತಿವೆ. ಮಹಾತ್ಮ ಗಾಂಧೀಜಿಯವರು ಕೂಡ ತಮ್ಮಪ್ರಭುತ್ವ ಮತ್ತು ಜನತೆಎಂಬ ಲೇಖನದಲ್ಲಿನಾನು ವ್ಯೆಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡುತ್ತೇನೆ. ಆದರೆ. ಮನುಷ್ಯ ಮೂಲತಃ ಸಂಘ ಜೀವಿ ಎಂಬುದನ್ನು ಮರೆಯಬಾರದು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಂಯಮ ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ಕಡ್ಡಾಯ. ಇಲ್ಲದಿದ್ದರೆ, ಅನಿಯಮಿತ ಸ್ವಾತಂತ್ರ್ಯವೆಂಬುದು ಅರಣ್ಯದ ಮೃಗಗಳ ವರ್ತನೆಯ ಪ್ರತಿರೂಪವಾಗಿ ಬಿಡುತ್ತದೆಎಂದು ಪ್ರತಿಪಾದಿಸಿದ್ದಾರೆ.
ಪರಸ್ಪರ ನಂಬಿಕೆ, ವಿಶ್ವಾದ ಕುಸಿದು ಹೋಗುತ್ತಿರುವ ಅಪನಂಬಿಕೆಯ ಕಾಲಘಟ್ಟದಲ್ಲಿ ಮಹಾತ್ಮರ ಬದುಕು, ಸಂದೇಶಗಳು ಮಾತ್ರ ದೇಶವನ್ನು  ಮುನ್ನೆಡಸಬಲ್ಲವು. ಮತ್ತು ಬಹುಸಂಸ್ಕತಿಯ ಭಾರತವನ್ನು ಕಾಪಾಡಬಲ್ಲವು.
.

ಗುರುವಾರ, ಡಿಸೆಂಬರ್ 5, 2019

ಕಾಡುವ ಕಥೆಗಳ ಕಣಜ ಎಸ್.ಗಂಗಾಧರಯ್ಯನವರ " ದೇವರ ಕುದುರೆ" ಕಥಾಸಂಕಲನ



ಎಸ್.ಗಂಗಾಧರಯ್ಯ ಈಗಾಗಲೇ ಕನ್ನಡದ ಕಥಾ ಲೋಕದಲ್ಲಿ ಹೆಸರು ಮಾಡಿದವರು. ಜೊತೆಗೆ ಕನ್ನಡದಲ್ಲಿ ಶ್ರೇಷ್ಠ ಅನುವಾದಕರಲ್ಲಿ ಒಬ್ಬರಾಗಿರುವ ಇವರು ಮಳೆಯಾಳಂ ಭಾಷೆಯ ವೈಕಂ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ತಾನೊಬ್ಬ ಸೂಕ್ಷ್ಮ ಮನಸ್ಸಿನ ಅನುವಾದಕ ಮತ್ತು ಕಥೆಗಾರ ಎಂಬುದನ್ನು ತೋರಿಸಿಕೊಟ್ಟವರು. ಈ  ಹಿಂದೆ  ಒಂದು ಉದ್ದನೆಯ ಬೆರಳು ಕಥಾ ಸಂಕಲನದಿಂದ ಗಮನ ಸೆಳೆದಿದ್ದ ಗಂಗಾಧರಯ್ಯನವರು, ಇದೀಗ ಒಂದು ದಶಕದ ನಂತರ ಧ್ಯಾನಿಸಿ ಬರೆದ ಕಥೆಗಳನ್ನು " ದೇವರ ಕುದುರೆ" ಎಂಬ ಹೆಸರಿನಲ್ಲಿ ನಮ್ಮ ಮುಂದಿರಿಸಿದ್ದಾರೆ.
ಈ ಕಥೆಗಳನ್ನು ಓದುವ ಮುನ್ನ ಕಥೆಗಾರ ಬರೆದಿರುವ ಪ್ರಸ್ತಾವನೆ ಮತ್ತು ಮುನ್ನಡಿ ಬರೆದಿರುವ ಚಿಂತಕ ಎಸ್ ನಟರಾಜ ಬೂದಾಳು ಬರೆದಿರುವ ಮುನ್ನುಡಿ ಈ ಎರಡು ಬರಹಗಳನ್ನು ಓದುಗರು ಜೀರ್ಣಿಸಿಕೊಳ್ಳಲು ಕನಿಷ್ಟ ಎರಡು ದಿನಗಳ ಕಾಲಾವಕಾಶ ಬೇಕು. ಅದೇ ರೀತಿ ಇಲ್ಲಿನ ಕಥೆಗಳು ಒಂದೇ ಓದಿಗೆ ದಕ್ಕುವ ಕಥೆಗಳಲ್ಲ. ಒಂದೊಂದು ಕಥೆ ಮತ್ತು ಅವುಗಳ ಪಾತ್ರಗಳು ಕಥೆಯನ್ನು ಓದಿ ಮುಗಿಸಿದ ನಂತರವೂ  ಓದುಗರ ಮನಸ್ಸನ್ನು ಗಾಡವಾಗಿ ತಟ್ಟುತ್ತವೆ.
ನಾವು ಬದುಕುತ್ತಿರುವ ವರ್ತಮಾನದ ಬದುಕಿಗೆ ಮುಖಾಮುಖಿಯಾಗಿ, ಅವಸಾನದ ಅಂಚಿಗೆ ದೂಡಲ್ಪಡುತ್ತಿರುವ ಗ್ರಾಮೀಣ ಬದುಕು, ನಶಿಸಿ ಹೋಗುತ್ತಿರುವ ಮನುಷ್ಯರ ಸಂಬಂಧಗಳು, ಕಳಚಿಕೊಳ್ಳುತ್ತಿರುವ ನೈತಿಕತೆಯ ಕೊಂಡಿಗಳು, ಕಲುಷಿತಗೊಳ್ಳುತ್ತಿರುವ ನೆಲ ಜಲ ಮತ್ತು ಮನುಷ್ಯರ ಮನಸ್ಸುಗಳು ಹಾಗೂ ಮೌನವಾಗಿ ನರಳುತ್ತಿರುವ ದನ ಕರುವಿನಂತಹ ಮೂಕ ಪ್ರಾಣಿಗಳ ನಿಟ್ಟುಸಿಗೆ ದನಿಯಾದವರಂತೆ ಬರೆಯುವ ಗಂಗಾಧರಯ್ಯ, ತಮ್ಮ ಅಭಿವ್ಯಕ್ತಿಯಲ್ಲಿ ಮತ್ತು ಭಾಷೆಯ ಬಳಕೆಯಲ್ಲಿ ಎಲ್ಲಿಯೂ ಆವೇಶಕ್ಕೆ ಮತ್ತು ಭಾವೋದ್ರೇಕಕ್ಕೆ ಒಳಪಡದೆ ಗ್ರಾಮೀಣ ಬದುಕಿನ ದುರಂತಗಳನ್ನು ತಣ್ಣನೆಯ ಭಾಷೆಯಲ್ಲಿ ಹೇಳುವುದರ ಮೂಲಕ ತಾನೊಬ್ಬ ನುರಿತ ಕಥೆಗಳ ಕಸುಬುದಾರ ಎಂಬುದನ್ನು ಈ ದೇವರ ಕುದುರೆ ಕಥಾ ಸಂಕಲನದ ಮೂಲಕ ಸಾಬೀತು ಪಡಿಸಿದ್ದಾರೆ.
ಇಂದಿನ ಅವರಸರದ ಜಗತ್ತಿನಲ್ಲಿ ಸದಾ ಓದುಗರ ನೆನಪಿನಲ್ಲಿರಬೇಕೆಂಬ ಹಪಾಹಪಿಯಲ್ಲಿ "ಸಂತೆಗೆ ಮುನ್ನ ಮೂರು ಮೊಳ ನೇಯ್ದರು" ಎಂಬ ಗಾದೆಯಂತೆ ಹಲವು ಲೇಖಕರು ಕಥೆ ಮತ್ತು ಕಾದಂಬರಿಗಳನ್ನು ಬರೆಯುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ, ಅವುಗಳು ಕೇವಲ ಮನರಂಜನೆ ಅಥವಾ ಕಾಲವನ್ನು ತಳ್ಳುವ ಸಾಹಿತ್ಯ ಪ್ರಕಾರಗಳಾದವೇ ಹೊರತು, ನಿಜ ಲೇಖಕನೊಬ್ಬನ  ತಲ್ಲಣದ ಕಥೆಗಳಾಗಿ ಉಳಿದಿಲ್ಲ.  ಕುರುಡರ ಊರಿನಲ್ಲಿ  ಕನ್ನಡಿ ಮಾರುವ ಕಾಯಕದವರಂತೆ ಕಾಣುವ ಕಥೆ ಮತ್ತು ಕಾದಂಬರಿಗಾರರಿಗಿಂತ ಭಿನ್ನವಾಗಿ  ಗಂಗಾಧರಯ್ಯನವರು  ತಮ್ಮ ಸತ್ವಭರಿತ ಕಥೆಗಳ ಮೂಲಕ .ಓದುಗರ ಮನಸ್ಸಿನಲ್ಲಿ ಶಾಸ್ವತವಾಗಿ ಉಳಿದುಕೊಳ್ಳುತ್ತಾರೆ.
ಒಂದು ಕಥಾ ವಸ್ತುವನ್ನು ಹೇಗೆ ನಿರ್ವಹಿಸಬೇಕು? ಪಾತ್ರಗಳ ಪೋಷಣೆ ಹೇಗಿರಬೇಕು, ಮತ್ತು ಭಾಷೆಯ ಬಳಕೆಯಲ್ಲಿ ಇರಬೇಕಾದ ಎಚ್ಚರ ಹಾಗೂ ಕಥೆಗೆ ಪರಿಸರವನ್ನು ಕಟ್ಟಿಕೊಡುವ ರೀತಿ ಈ ಎಲ್ಲಾ ಕೌಶಲ್ಯಗಳನ್ನು ಇಂದಿನ ಯುವ ಲೇಖಕರು ಗಂಗಾಧರಯ್ಯನವರ ದೇವರ ಕುದುರೆ ಸಂಕಲನದಿಂದ ಕಲಿಯಬಹುದಾಗಿದೆ.

ಕಳೆದ ನಲವತ್ತು ವರ್ಷಗಳಿಂದ ನನ್ನೊಳಗೆ ದಾಖಲಾಗಿರುವ ಡಾ.ಬೆಸಗರಳ್ಳಿ ರಾಮಣ್ಣ  ಮತ್ತು ದೇವನೂರರ ಕಥೆಗಳು, ಶ್ರೀ ಕೃಷ್ನ ಆಲನಹಳ್ಳಿಯವರ ಬುಜಂಗಯ್ಯನ ದಶಾವತಾರ ಕಾದಂಬರಿ, ಪ್ರೊ. ಕಾಳೇಗೌಡ ನಾಗವಾರರ " ಬೆಟ್ಟ, ಮಳೆ, ಸಾಲು" ಎಂಬ ಒಂದು ನೀಳ್ಗತೆ, ಯಶವಂತ ಚಿಂತಾಲರ ಕಥೆಗಳು ಇವುಗಳಲ್ಲದೆ, ಕಳೆದ ಇಪ್ಪತ್ತೈದು ವರ್ಷಗಳಿಂದ ಬರೆಯುತ್ತಿರುವ ಅಮರೇಶ ನುಗುಡೋಣಿ, ಮೊಗಳ್ಳಿ ಗಣೇಶ್ ಕಥೆಗಳು, ಬಾಳಾಸಾಹೇಬ್ ಲೋಕಾಪುರ ಅವರ ಕಥೆ ಮತ್ತು ಕಾದಂಬರಿಗಳಂತೆ ಗಂಗಾಧರಯ್ಯನವರ ಈ ಕಥೆಗಳು ನನ್ನನ್ನು ಕಾಡತೊಡಗಿವೆ.
ನನ್ನ ತಲೆಮಾರಿನ ಲೇಖಕರಿಗೆ ಯಾವ ತಲೆಮಾರಿಗೂ ದಕ್ಕದ  ವರ ಮತ್ತು ಶಾಪ ಎರಡೂ ದಕ್ಕಿವೆ, ಅದೇನೆಂದರೆ, ನಾವು ನಮ್ಮ ಕಣ್ಣೆದುರು ಕರಗಿ ಹೋದ ಅಪ್ಪಟ ಮನುಷ್ಯ ಲೋಕದ ಗ್ರಾಮೀಣ ಜಗತ್ತನ್ನು, ಅಲ್ಲಿನ ಹಬ್ಬ, ಜಾತ್ರೆ, ಪರಿಷೆ, ಜಾನಪದ ಸಂಸ್ಕೃತಿಯ ವೈವಿದ್ಯತೆಗೆ ಸಾಕ್ಷಿಯಾದೆವು. ಅದೇ ರೀತಿ ಕಳೆದ ಮೂರು ದಶಕದಲ್ಲಿ ನಮ್ಮೆದುರು ತೆರೆದು ಕೊಂಡ, ಕೃತಕ ನಗು, ಅಳು, ಹಾಗೂ ಮೈಥುನದ ಜಗತ್ತು, ನಾವು ಹೊಂದಿಕೊಳ್ಳಲಾಗದ ನಗರ ಸಂಸ್ಕೃತಿ ಹಾಗೂ ಅಲ್ಲಿನ ವೇಗ ಇವುಗಳಿಗೂ  ಸಹ ನಾವು ಸಾಕ್ಷಿಯಾದೆವು. ವರ್ತಮಾನದ ಬದುಕಿನಲ್ಲಿ ಪರದೇಶಿಗಳಂತೆ ಇಲ್ಲವೆ ಅಬ್ಬೇಪಾರಿ ಕೂಸಿನಂತೆ ಬದುಕುತ್ತಿರುವ ನನ್ನ ತಲೆಮಾರಿನ ಎಲ್ಲಾ ತವಕಗಳಿಗೆ ಮತ್ತು ತಲ್ಲಣಗಳಿಗೆ ಗಂಗಾಧರಯ್ಯ ನಮ್ಮ ಪರವಾಗಿ ಇಲ್ಲಿ ಧ್ವನಿ ಕೊಟ್ಟಿದ್ದಾರೆ ಎಂದು ಅನಿಸತೊಡಗಿದೆ. ಇಲ್ಲಿನ ಕಥೆಗಳಾದ ಕರ್ಬಾಲು, ಗುಡ್ಡದ ಕೂಸು,  ಕೋರು ನಿಂತಹ ಕಥೆಗಳಿಗೆ ನಾನು ತಲ್ಲಣಗೊಂಡು ರಾತ್ರಿಯ ನಿದ್ದೆಗಳನ್ನು ಕಳೆದುಕೊಂಡಿದ್ದೀನಿ.
ಪದುಮದೊಳಗೆ ಬಿಂದು ಸಿಲುಕಿ, ದೇವರ ಕುದುರೆ, ಅಜ್ಜಿಯ ಕೋಲು, ಚಿಕ್ಕನ ನವಿಲು ಮರಿಗಳು ಹೀಗೆ ಅನೇಕ ಕಥೆಗಳು ಮತ್ತು ನಿರೂಪಣೆಗೆ ಕಥೆಗಾರ ಬಳಸಿರುವ ತಿಪಟೂರು ಸುತ್ತಮುತ್ತಲಿನ ಅಪ್ಪಟ ಗ್ರಾಮೀಣ ಭಾಷೆ ಇವೆಲ್ಲವೂ ಕಥೆಗಳ ಘನತೆಯನ್ನು ಹೆಚ್ಚಿಸಿವೆ. ಗಂಗಾಧರಯ್ಯನವರು ತಮ್ಮ ಕಥೆಗಳಲ್ಲಿ ಕಟ್ಟಿಕೊಡುವ ಕೆರೆ, ತೊರೆ, ಗುಡ್ಡ, ಕಣಿವೆ, ಪ್ರಾಣಿ ಪಕ್ಷಿಗಳು, ಹೂವಿನ ಗಿಡಗಳು ಇವೆಲ್ಲವೂ ನಾವು ಕಳೆದುಕೊಂಡ ಬಾಲ್ಯದ ಲೋಕಕ್ಕೆ ಮರಳಿ ಕೊಂಡೊಯ್ಯುತ್ತವೆ. ಇಂತಹ ಕಾಡುವ ಕಥೆಗಳನ್ನು ನೀಡಿ ನಮ್ಮ ಮನ ತಣಿಸಿದ ಗಂಗಾಧರಯ್ಯನವರಿಗೆ ಅಭಿನಂದನೆಗಳು. ಅವರ ಮುಂದಿನ ಕೃತಿಗಾಗಿ ರಾಮನಿಗಾಗಿ ಕಾದ ಶಬರಿಯಂತೆ ಕಾಯುತ್ತೇನೆ. ಕುವೆಂಪುರವರು ತಮ್ಮ ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಹೇಳುವ " ಶಬರಿಗಾದನು ಅತಿಥಿ ದಾಶರಥಿ" ಎನ್ನುವ ಹಾಗೆ ಗಂಗಾಧರಯ್ಯನವರು ಒಂದು ಕಾದಂಬರಿಯ ಮೂಲಕ ಬರಲಿ.

ಜಗದೀಶ್ ಕೊಪ್ಪ