ಮಂಗಳವಾರ, ಮೇ 5, 2020

ಮೋದಿ ಎಕನಾಮಿಕ್ಸ್



ಖಾಲಿ ತಲೆ ಹಾಗೂ ಮಾತುಗಳನ್ನು ಬಂಡವಾಳವಾಗಿಸಿಕೊಂಡ ಒಬ್ಬ ವ್ಯಕ್ತಿ ದೇಶದ ಆಡಳಿತದ ಚುಕ್ಕಾಣಿ ಹಿಡಿದರೆ. ಆರ್ಥಿಕತೆ ಹೇಗೆ ತಳಹಿಡಿಯಬಹುದು ಎಂಬುದಕ್ಕೆ ವರ್ತಮಾನದ ಭಾರತ ಈಗ ಸಾಕ್ಷಿಯಾಗಿದೆ.
ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ, ಓಡಿ ಹೋದವರನ್ನು ಹಿಡಿದು ತರುತ್ತೇನೆ ಎಂಬ ಅಫೀಮಿಗೆ ಸಮನಾದ ಮಾತುಗಳನ್ನು ಆಡುತ್ತಾ, ಭಕ್ತರನ್ನು ಸದಾ ಅಮಲಿನಲ್ಲಿ ಇಡುವ ಕ್ರಿಯೆಯಲ್ಲಿ ತೊಡಗಿರುವ ಪ್ರಧಾನಿ ಮೋದಿಗೆ ಶತಮಾನದಲ್ಲಿ ಭಾರತದ ಆರ್ಥಿಕತೆ ಅರ್ಥವಾಗುವ ಸಂಭವ ಕಡಿಮೆ.
ನೋಟು ನಿಷೇದದ ಪ್ರಕರಣ ಮತ್ತು ಕೊರನಾ ಪ್ರಯುಕ್ತ ದಿಢೀರನೆ ತೆಗೆದುಕೊಂಡ ತೀರ್ಮಾನದಿಂದ ದುಡಿಯುವ ವರ್ಗವನ್ನು ಕತ್ತಲೆಗೆ ನೂಕಿದ ಘಟನೆ ಎರಡೂ ಸಂಗತಿಗಳು ಭಾರತದ ಆರ್ಥಿಕತೆ ಮತ್ತು ಬೆಳವಣಿಗೆಯನ್ನು ಎರಡು ದಶಕಗಳ ಹಿಂದಕ್ಕೆ ನೂಕಿವೆ.
ಇದೀಗ ೬೮ ಸಾವಿರ ಕೋಟಿ ಹಿಂತಿರುಗಿ ಬರಲಾಗದ ಸಾಲವನ್ನು ಚುಕ್ತಮಾಡಲಾಗಿದೆ. ಇದೆಲ್ಲವೂ ಕಳ್ಳ ಕೈಗಾರಿಕೋದ್ಯಮಿಗಳ ಸಾಲವಾಗಿರುವುದು ವಿಶೇಷ. ಇದರಲ್ಲಿ ಬಾಬಾ ರಾಮ್ದೇವ್ ಇತ್ತೀಚೆಗೆ ವಶಪಡಿಸಿಕೊಂಡಿರುವ ರುಚಿಅಂಡ್ ಸೋಯಾ ಕಂಪನಿಯ .೨೦೦ ಕೋಟಿ ಸಾಲವೂ ಸೇರಿದೆ. ಬಾಬಾ ರಾಮ್ ದೇವ್ ನೇತೃತ್ವದ ಪತಾಂಜಲಿ ಕಂಪನಿ ಕಳೆದ ವರ್ಷ .೫೦೦ ಕೋಟಿ ಲಾಭ ಗಳಿಸಿದೆ.
Loan waive ಅಂದರೆ ಸಾಲಮನ್ನಾ ಬೇರೆ, Loan Write off ಅಂದರೆ, ಸಾಲದ ಲೆಕ್ಕ ಪತ್ರದಿಂದ ಅಮಾನತ್ತುಗೊಳಿಸುವ ಕ್ರಿಯೆ ಬೇರೆ. ಎಂದು ಭಕ್ತರು ವಾದಿಸುವುದುಂಟು.
ಇದು ಅಳಿಯ ಅಲ್ಲ, ಮಗಳ ಗಂಡ ಎಂದಂತೆ. ಇಲ್ಲಿ ಸಾಲ ಮನ್ನಾ ಎದ್ದು ಕಾಣದಿದ್ದರೂ, ಅನುತ್ಪಾದಕ ಆಸ್ತಿ ಎಂದು ಕರೆಯಲಾಗುವ ವಸೂಲಿಯಾಗದ ಸಾಲವನ್ನು ವಾರ್ಷಿಕ ಲೆಕ್ಕ ಪತ್ರದಿಂದ ಹೊರಗಿಡಲಾಗುತ್ತದೆ. ರೀತಿಯಲ್ಲಿ ೨೦೧೪ ರಿಂದ ಇಲ್ಲಿಯವರೆ ಅಂದರೆ, ಮೋದಿ ಆಡಳಿತದಲ್ಲಿ ಒಟ್ಟು ಲಕ್ಷದ ೨೦ ಸಾವಿರ ಕೋಟಿ ಸಾಲದ ಹಣವನ್ನು ಲೆಕ್ಕ ಪತ್ರದಿಂದ ಅಳಿಸಿಹಾಕಿ ಅಮಾನತ್ತಿನಲ್ಲಿ ಇಡಲಾಗಿದೆ.
ಕಳೆದ ವರ್ಷ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಮಾಹಿತಿ ಹಕ್ಕಿನಡಿ ಅರ್ಜಿಸಲ್ಲಿಸಿದಾಗ ರಿಸರ್ವ್ ಬ್ಯಾಂಕ್ ಒಟ್ಟು ಲಕ್ಷದ ೫೫ ಸಾವಿರ ಕೋಟಿ ಸಾಲವನ್ನು ಅಮಾನತ್ತಿನಲ್ಲಿ ಇಡಲಾಗಿದೆ ಎಂದು ತಿಳಿಸಿತ್ತು.ಜೊತೆಗೆ ೨೦೧೮-೧೯
ಸಾಲಿನಲ್ಲಿ ೨ಲಕ್ಷದ ೫೦ ಸಾವಿರ ಹಣವನ್ನು ಮನ್ನಾ ಅಂದರೆ ಅಮಾನತ್ತು ಮಾಡಿರುವುದಾಗಿ ತಿಳಿಸಿತ್ತು.
ಇಲ್ಲಿ ಅಮಾನತ್ತು ಅಥವಾ Loan Write Off ಎಂದರೆ, ಸಾಲವನ್ನ ಬ್ಯಾಂಕುಗಳು ತಮ್ಮ ವಾರ್ಷಿಕ ವರದಿಯಲ್ಲಿ ತೋರಿಸುವುದಿಲ್ಲ. ಇದರಿಂದಾಗಿ ಅವುಗಳು ಹಿಂತಿರುಗಿ ಬರಲಾಗದ ಸಾಲ ನಮ್ಮ ಬ್ಯಾಂಕ್ ನಲ್ಲಿ ಕಡಿಮೆ ಎಂದು ವಾರ್ಷಿಕ ವರದಿಯಲ್ಲಿ ತೋರಿಸಿಕೊಳ್ಳುತ್ತವೆ.
ಸುಸ್ತಿದಾರರಿಂದ ಹಣ ವಸೂಲಿ ಮಾಡುತ್ತೇವೆ ಎಂದು ಹೇಳುತ್ತಾ ಹೋಗುತ್ತವೆ. ಅವರ ಸಾವಿನ ನಂತರ ಮನ್ನಾ ಮಾಡುತ್ತವೆ.
ಇದು ವಂಚನೆಗಾಗಿ ಮತ್ತು ಜನಸಾಮಾನ್ಯರನ್ನು ಮರಳು ಮಾಡುವುದಕ್ಕೆ ಕಂಡುಕೊಂಡ ಹೊಸ ವಿಧಾನ.
ವಿಶ್ವ ಬ್ಯಾಂಕ್ ಸಮೀಕ್ಷೆಯ ಪ್ರಕಾರ ೨೦೦೮ ರಲ್ಲಿ ಭಾರತದ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಶೇಕಡ. ರಷ್ಟಿತ್ತು. ೨೦೧೯ ರಲ್ಲಿ ಪ್ರಮಾಣ ಶೇಕಡ . ರಷ್ಟಿದೆ. ಇದು ತೀರಾ ಅಪಾಯಕಾರಿ ಸಂಗತಿ ಎಂದು ಎಚ್ಚರಿಸಿದೆ.
ಬ್ಯಾಂಕಿಂಗ್ ಪರಿಭಾಷೆಯಲ್ಲಿ ವಿಂಡೋ ಡ್ರೆಸ್ಸಿಂಗ್ ಎಂಬ ಶಬ್ದವಿದೆ. ಅಂದರೆ ಕಿಟಿಯಲ್ಲಿ ಕಾಣುವ ದೇಹವನ್ನು ಮಾತ್ರ ಶೃಂಗಾರ ಮಾಡುವುದು ಎಂದರ್ಥ.
ನಿಮಗೆಲ್ಲಾ ತಿಳಿದಿರುವಂತೆ ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಬ್ಯಾಂಕುಗಳು ನಮ್ಮ ಖಾತೆಯಲ್ಲಿ ಇರುವ ಹಣವನ್ನು ತೆಗೆಯದಂತೆ ಮನವೊಲಿಸುತ್ತವೆ. ಜೊತೆಗೆ ವ್ಯಾಪಾರಸ್ಥರಿಂದ ಎರಡು ದಿನದ ಮಟ್ಟಿಗೆ ಅವರ ಖಾತೆಯಲ್ಲಿ ಅಪಾರ ಪ್ರಮಾಣದ ಹಣ ಇರುವಂತೆ ನೋಡಿಕೊಳ್ಳುತ್ತವೆ.
ಏಕೆಂದರೆ, ವಾರ್ಷಿಕ ಲೆಕ್ಕ ಪತ್ರ ದಲ್ಲಿ ಮಾರ್ಚ್ ೩೦ ಕ್ಕೆ ಕೊನೆಗೊಂಡ ಲೆಕ್ಕ ಪತ್ರದ ಪ್ರಕಾರ ನೀಡಿರುವ ಸಾಲದ ಪ್ರಮಾಣದ ಹತ್ತು ಪಟ್ಟು ಹೆಚ್ಚು ಹಣ ಠೇವಣಿ ರೂಪದಲ್ಲಿ ಬ್ಯಾಂಕಿನಲ್ಲಿದೆ ಎಂದು ತೋರಿಸುವ ಹುನ್ನಾರ ತಂತ್ರದಲ್ಲಿ ಅಡಗಿದೆ.
ಇಂತಹ ಸೂಕ್ಷ್ಮ ಸಂಗತಿಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಇನ್ನೂ ದೇಶಭಕ್ತರಿಗೆ ಅವರ ಜನ್ಮದಲ್ಲಿ ಅರ್ಥವಾಗುವುದಿಲ್ಲ.
ಭಾರತಕ್ಕೆ ಆವರಿಸುವ ಕೊರನಾ ಖಾಯಿಲೆಯಿಂದ ಆರ್ಥಿಕತೆಗೆ ಈಗ ಬಿದ್ದಿರುವ ಹೊಡೆತ ನನ್ನ ದೃಷ್ಟಿಯಲ್ಲಿ ತೀರಾ ಕಡಿಮೆ. ಮುಂದೈತೆ ಮಾರಿ ಹಬ್ಬ. ಕೊರನಾ ಸಮಸ್ಯೆಯ ನಂತರದ ಭಾರತದ ಆರ್ಥಿಕತೆ‌‌ ಸುಧಾರಿಸಲು ಕನಿಷ್ಟ ಇಪ್ಪತ್ತು ವರ್ಷ ಬೇಕಾಗಬಹುದು.
ಕೊನೆಯ ಮಾತು - ಕಳೆದ ಒಂದು ದಶಕದಲ್ಲಿ ಒಟ್ಟು ಎಂಟು ಲಕ್ಷ ಕೋಟಿ ಅನುತ್ಪಾದಕ ಸಾಲವನ್ನು ಭಾರತದಲ್ಲಿ ಅಮಾನತ್ತು ಮಾಡಲಾಗಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಸಹ ಒಟ್ಟು ಒಂದು ಲಕ್ಷದ ಎಂಬತ್ತು ಸಾವಿರ ಕೋಟಿ ಹಣವನ್ನು ಚುಕ್ತಾ ಮಾಡಿದೆ. ಹಣ ವಸೂಲಿಯಾಗುವ ಅಥವಾ ವಾಪಸ್ ಬರುವ ಸಂಭವವಿಲ್ಲ.
ಸ್ಮಶಾನಕ್ಕೆ ಹೋದ ಹೆಣ ಮತ್ತು ತಿರುಪತಿ ಹುಂಡಿಗೆ ಹಾಕಿದ ಹಣ ವಾಪಸ್ ಬರುವುದುಂಟೆ?

ಶನಿವಾರ, ಏಪ್ರಿಲ್ 25, 2020

ನರಹತ್ಯೆ ಮತ್ತು ಜಗುಲಿ ಸಂಸ್ಕೃತಿ





ಮೊನ್ನೆ ಮಹಾರಾಷ್ಟ್ರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾಧುಗಳನ್ನು ಹಾಗೂ  ಚಾಲಕನನ್ನು ಮಕ್ಕಳ ಕಳ್ಳರೆಂದು ಭಾವಿಸಿ ಜನರು  ಹತ್ಯೆ ಮಾಡಿದ್ದಾರೆ. ಈ ಸುದ್ದಿ ಪ್ರಸಕ್ತ ಭಾರತದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಕಳೆದ  ಆರರೇಳು ವರ್ಷಗಳಿಂದ ಮಕ್ಕಳ ಕಳ್ಳರು, ಮಾತಗಾತಿಯರು, ಗೋವುಗಳ ಕಳ್ಳಸಾಗಾಣಿಕೆದಾರರು ಎಂಬ ಹಣೆಪಟ್ಟಿಯೊಂದಿಗೆ ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಮತ್ತು ಅಮಾಯಕರನ್ನು ಗ್ರಾಮ ಭಾರತದಲ್ಲಿ  ನಿರ್ಧಯವಾಗಿ ಕೊಲ್ಲಲಾಗುತ್ತಿದೆ. ಮನುಷ್ಯ ಮನಷ್ಯನನ್ನು ಕೊಲ್ಲುವುದು ಅನಾಗರೀಯಕತೆಯ ಕಾಲದಲ್ಲಿ ಮತ್ತು ಯುದ್ಧದಲ್ಲಿ ಎಂದು ತಿಳಿದುಕೊಂಡಿದ್ದ ನಮಗೆ ಈಗ ನಾವು ಬದುಕುತ್ತಿರುವ ಕಾಲಘಟ್ಟ ಯಾವುದು ಎಂಬ ಪ್ರಶ್ನೆ ಎದುರಾಗಿದೆ.
ಈ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಯಾವೊಬ್ಬ ಅಪರಿಚಿತ ವ್ಯಕ್ತಿಯೂ ಹಳ್ಳಿಗಳಿಗೆ ಕಾಲಿಡದಂತೆ ಅವನನ್ನು ಅಥವಾ ಅವಳನ್ನು ಅಸಹಾಯಕತೆಗೆ ದೂಡಿದೆ. ಭಾರತದ ನಿಜವಾದ ಆತ್ಮದಂತಿರುವ ಹಳ್ಳಿಗಳಿಗೆ ಮತ್ತು ಅಲ್ಲಿನ ಜನರ ಎದೆಯೊಳಕ್ಕೆ ಈ ಕ್ರೌರ್ಯದ ಹಾಗೂ ಅಪನಂಬಿಕೆಯ ವಿಷವನ್ನು ತುಂಬಿದವರು ಯಾರು? ಇದು ಉತ್ತರವಿಲ್ಲದ ಪ್ರಶ್ನೆ. ನಾನು ಹಳ್ಳಿಗಾಡಿನ ಸಂಸ್ಕೃತಿಯಿಂದ ಬಂದವನು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಕಾಲ ಒಂದಿತ್ತು ಆದರೆ, ಈಗ ಆ ಮಾತನ್ನು ಹೇಳಲು ನನಗೀಗ ಹಿಂಜರಿಕೆಯಾಗುತ್ತಿದೆ. ಇಂದಿನ ಹಳ್ಳಿಗಳು ಅಪನಂಬಿಕೆ, ದ್ವೇಷ ಮತ್ತು ದಳ್ಳುರಿಗಳ ಕೊಂಪೆಯಾಗಿವೆ. ನಗರ ಸಂಸ್ಕೃತಿಯ ಕಾಡ್ಗಿಚ್ಚಿನಿಂದ ಅರಬೆಂದ ನಿತ್ಯ ಹರಿದ್ವರ್ಣದ ಕಾಡಿನಂತೆ ಗೋಚರಿಸುತ್ತಿವೆ.
1981 ರಲ್ಲಿ ತಮಿಳುಭಾಷೆಯಲ್ಲಿ ಬಿಡುಗಡೆಯಾದ ಕೆ.ಬಾಲಚಂದರ್ ರವರ “ ತಣ್ಣೀರ್, ತಣ್ಣೀರ್” ಸಿನಿಮಾವನ್ನು ನಾನು ಪ್ರಥಮವಾಗಿ ನೋಡಿದ್ದು ತಿರುಪತಿಯ ಚಿತ್ರಮಂದಿರದಲ್ಲಿ.ಆ ಚಿತ್ರದ ನಾಯಕಿ ಹೇಳುವ ಒಂದು ಡೈಲಾಗ್ ಇವೊತ್ತಿಗೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡು ಬಿಟ್ಟಿದೆ.
ಒಬ್ಬ ಖೈದಿ ರಾತ್ರೋ ರಾತ್ರಿ ಜೈಲಿನಿಂದ ತಪ್ಪಿಸಿಕೊಂಡು ನಡೆಯುತ್ತಾ ಅನೇಕ ಹಳ್ಳಿಗಳನ್ನು ದಾಟುತ್ತಾ ಹೋಗುತ್ತಿರುತ್ತಾನೆ. ಮಧ್ಯಾಹ್ನದ ವೇಳೆಗೆ ಹಸಿವು ಮತ್ತು ನೀರಡಿಕೆಯಿಂದ ಒಂದು ಹಳ್ಳಿಯನ್ನು ತಲುಪುತ್ತಾನೆ. ಆ ಹಳ್ಳಿ ಒಂದು ಕುಗ್ರಾಮ. ಕುಡಿಯುವ ನೀರಿಗಾಗಿ ಎಂಟತ್ತು ಕಿಲೊಮೀಟರ್ ದೂರ ಹೋಗಿ ಮಹಿಳೆಯರು ನೀರು ಹೊತ್ತು ತರಬೇಕಾದ ಸ್ಥಿತಿ.  ಯಾರೊಬ್ಬರೂ ಅವನಿಗೆ ನೀರು ಕೊಡಲು ನಿರಾಕರಿಸುತ್ತಾರೆ. ನಿರಾಸೆಯಿಂದ ಹಳ್ಳಿಯಿಂದ ಹೋಗುತ್ತಿರುವ  ಸಮಯದಲ್ಲಿ ಖೈದಿಗೆ ಆಗ ತಾನೆ  ಉರಿಬಿಸಿನಲ್ಲಿ ತಲೆಯ ಮೇಲೆ ಹಾಗೂ ಸೊಂಟದಲ್ಲಿ ನೀರು ಹೊತ್ತು ಹಳ್ಳಿಗೆ ಬರುತ್ತಿರುವ ಹೆಣ್ಣುಮಗಳು ಕಾಣುತ್ತಾಳೆ. ಅವಳ ಬಳಿ ತೆರಳಿ ನೀಗಿಗಾಗಿ ಕೈಯೊಡ್ಡಿದ್ದಾಗ ಆಕೆ ಹೇಳುವ ಮಾತಿದು, “ ಅಣ್ಣಯ್ಯಾ, ಈ ಊರಿನಲ್ಲಿ ನೀನು ಹೆಂಗಸರ ಶೀಲ ಬೇಕಾದರೆ ಕೇಳು ಕೊಟ್ಟುಬಿಡುತ್ತಾರೆ ಆದರೆ, ನೀರು ಕೊಡಲಾರರು” ಒಂದು ಹಳ್ಳಿಯ ಕುಡಿಯುವ ನೀರಿನ ಅಭಾವ ಕುರಿತು ಕಟು ವಾಸ್ತವ ಸಂಗತಿಯನ್ನು ಹೀಗೂ ಹೇಳಬಹುದೆ ಎಂದು ನಮಗೆ ಆಶ್ಚರ್ಯವಾಗುತ್ತದೆ. ನಂತರ  ಅನುಕಂಪದಿಂದ ಆತನ ಬೊಗಸೆಗೆ ನೀರು ಸುರಿಯುತ್ತಾಳೆ, ಆತನ ದಾಹವನ್ನು ನೀಗಿಸುತ್ತಾಳೆ.

ಆ ಹೆಣ್ಣುಮಗಳ ಅಂತಃಕರಣ ಮತ್ತು ಪ್ರೀತಿಗೆ ಮನಸೋತ ಖೈದಿ, ನೀರಿನ ಅಭಾವ ಕುರಿತು  ಆಕೆಯನ್ನು ಕೇಳಿದಾಗ, ಎಂಟತ್ತು ಕಿ.ಮಿ.ದೂರದ ನಾಲೆಯನ್ನು ಹಳ್ಳಿಯತ್ತ ತಿರುಗಿಸಲು  ಊರಿನ ಗಂಡಸರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮನಸ್ಸಿಲ್ಲ ಎಂಬ ಸಂಗತಿ ನಾಯಕಿಯಿಂದ ತಿಳಿಯುತ್ತದೆ. ತನ್ನ ಹಿನ್ನಲೆಯನ್ನು ಹೇಳಿಕೊಳ್ಳದ ಖೈದಿ, ಆ ಹೆಣ್ಣುಮಗಳನ್ನು ತಂಗಿಯೆಂದು ಭಾವಿಸಿ, ಆಕೆಯ ಆಶ್ರಯದಲ್ಲಿ ಉಳಿದುಕೊಂಡು ಏಕಾಂಗಿಯಾಗಿ ನಾಲುವೆ ತೋಡಿ ಊರಿಗೆ ನೀರು ಹರಿಸಲು ಪ್ರಯತ್ನಿಸುತ್ತಾನೆ. ಒಂದು ಬೊಗಸೆ ನೀರು ಮತ್ತು ಹೆಣ್ಣಿನ ಅಂತಃಕರಣ ಹೇಗೆ ಒಬ್ಬ ಖೈದಿಯ ಮನಪರಿವರ್ತನೆ ಮಾಡಬಲ್ಲದು ಎಂಬುದಕ್ಕೆ ಹಾಗೂ ಹಳ್ಳಿಗಳ ನಿಜವಾದ ಮಾನವೀಯ ಮುಖಕ್ಕೆ ಈ ಚಿತ್ರ ಇವೊತ್ತಿಗೂ ಸಾಕ್ಷಿಯಾಗಿದೆ. ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸರಿತಾಳ ಪಾತ್ರ ಆಕೆ ನಿಜಕ್ಕೂ ಭಾರತದ ಶ್ರೇಷ್ಠ ಅಭಿನೇತ್ರಿ ಎಂದು ಸಾಬೀತು ಪಡಿಸಿದೆ,
ನಾನು ಮತ್ತು ನನ್ನ ತಲೆಮಾರಿನ ಅನೇಕ ಬರಹಗಾರರು ಹುಟ್ಟಿ ಬೆಳೆದ ಹಳ್ಳಿಗಳು ಹೀಗೆಯೇ ಇದ್ದವು. ಎಲ್ಲರ ಮನೆಯ ಮುಂದೆ ಜಗುಲಿಗಳಿದ್ದವು. ಊರಿಗೆ ಬರುತ್ತಿದ್ದ ಮಡಿಕೆ ಮಾರುವವರುಮ ಕಸಬರಿಕೆ ಮಾರುವವರು, ಪಾತ್ರೆ ಹಾಗೂ ಬಟ್ಟೆಗಳನ್ನು ತಲೆಯ ಮೇಲೆ ಹೊತ್ತು ಮಾರುವವರು ನಮ್ಮ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಬಾಯಾರಿಯಾದಾಗ ಮಜ್ಜಿಗೆ, ಹಸಿವಾಗಿದ್ದಾಗ ಊಟ ಎಲ್ಲರ ಮನೆಗಳಲ್ಲಿ ಅವರಿಗೆ ದೊರೆಯುತ್ತಿತ್ತು. ಎಂತಹ ಬಡರೈತನ ಮನೆಯಲ್ಲಿಯೂ ಸಹ ಯಾರಾದರೂ ಬಂದರೆ ಇರಲಿ ಎಂದು ಅಗತ್ಯಕ್ಕಿಂತ ಎರಡು ಅಥವಾ ಮೂರು ಮುದ್ದೆಗಳನ್ನು ಹೆಚ್ಚಿಗೆ ಮಾಡಿ ಇಡುತ್ತಿದ್ದರು.
ಇನ್ನು, ಹಳ್ಳಿಗಾಡಿನ ಹೆಣ್ಣು ಮಕ್ಕಳಿಗೆ ಸೂಜಿ, ದಾರ, ಕರಿಮಣಿ, ಹೇರ್ ಪಿನ್, ಪೌಡರ್ ಇತ್ಯಾದಿಗಳನ್ನು  ಸೂಟ್ ಕೇಸ್ ನಂತಹ ಪೆಟ್ಟಿಗೆಯಲ್ಲಿ ಇಟ್ಟುಕೊಂಡು, ಕಂಕುಳಲ್ಲಿ ಮಗು ಇಟ್ಟುಕೊಂಡು ಬರುತ್ತಿದ್ದ ಹೆಣ್ಣುಮಕ್ಕಳಿಗೆ ನಮ್ಮ ಅವ್ವಂದಿರು ಅಥವಾ ಅಕ್ಕ ತಂಗಿಯರು ಮಧ್ಯಾಹ್ನದ ವೇಳೆ ಅವರಿಗೆ ಊಟ ಹಾಕಿ, ಮಗುವಿಗೆ ಕುಡಿಯಲು ಹಾಲು ಒದಗಿಸುತ್ತಿದ್ದರು.
ಎಂತಹ ಬಡತನದ ನಡುವೆಯೂ ಸಹ ಬಡವರು ತಮ್ಮ ವೃತ್ತಿಯನ್ನು ಬಿಡುತ್ತಿರಲಿಲ್ಲ. ಹಳ್ಳಿಗೆ ಹೋದರೆ, ಊಟಕ್ಕೆ ತೊಂದರೆಯಿಲ್ಲ ಎಂಬ ಭರವಸೆ ಅವರ ಬದುಕಿಗೆ ಬೆಳಕಿನ ದಾರಿಯಂತೆ ತೋರುತ್ತಿತ್ತು. ಹುಣಸೆ ಬೀಜ, ಬೇವು ಮತ್ತು ಹೊಂಗೆ ಬೀಜ ಕಲೆ ಹಾಕಲು ಬರುತ್ತಿದ್ದ ಮುಸ್ಲಿಂ ಮಂದಿ ಊರಿನ ಜನತೆಗೆಲಾ ಸಾಬಣ್ಣ ಆಗಿರುತ್ತಿದ್ದರು.ಅವರ ಹೆಣ್ಣು ಮಕ್ಕಳ ಮದುವೆಗೆ ಅಕ್ಕಿ, ತೆಂಗಿನ ಕಾಯಿ, ಬಾಳೆಹಣ್ಣು, ಆರ್ಥಕ ಸಹಾಯ ಇವೆಲ್ಲವೂ  ಹಳ್ಳಿಗಳಿಂದ ಧಾರಾಳವಾಗಿ ಸಿಗುತ್ತಿತ್ತು. ಅಲ್ಲಿನ ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಅವರೂ ಸಹ  ನಮ್ಮಂತೆ ಮನನುಷ್ಯರು ಎಂಬ ಉದಾತ್ತ ಮಾನವೀಯ ಪ್ರಜ್ಞೆ ಅಶಿಕ್ಷಿತರಾದ ಹಳ್ಳಿಗರಲ್ಲಿ ಮನೆ ಮಾಡಿತ್ತು.

ಈಗ ಅಂತಹ ಪ್ರಜ್ಞೆಯನ್ನು ಮತ್ತು ಮನುಷ್ಯ ಸಂಬಂಧ ಕುರಿತಾದ ನಂಬಿಕೆಯನ್ನು ಎಲ್ಲಿ ಹುಡುಕಿ ತರೋಣ. ಊರುಗಳಲ್ಲಿದ್ದ ಜಗುಲಿ ಮನೆ ಮಾಯವಾಗಿವೆ, ಆರ್.ಸಿ.ಸಿ. ಮನೆ ಎದ್ದು ನಿಂತಿವೆ. ಅಪರಿಚತರು, ಭಿಕ್ಷುಕರು, ವ್ಯಾಪಾರಿಗಳು ರಾತ್ರಿಯ ವೇಳೆ ತಂಗುತ್ತಿದ್ದ ದೇವಸ್ಥಾನದ ಆವರಣ, ಶಾಲೆಗಳ ಹೊರಜಗುಲಿ ಇವುಗಳಿಗೆ ಕಾಂಪೌಂಡ್ ನಿರ್ಮಿಸಿ ಬೀಗ ಜಡಿಯಲಾಗಿದೆ. ಈ ಬೀಗ ಒಂದರ್ಥದಲ್ಲಿ ನಮ್ಮ ಮನಸ್ಸಿಗೆ ನಾವು ಹಾಕಿಕೊಂಡಿರುವ ಬೀಗಗಳಲ್ಲದೆ ಬೇರೇನೂ ಅಲ್ಲ,

ಶನಿವಾರ, ಏಪ್ರಿಲ್ 4, 2020

ಭಾರತಕ್ಕೆ ಬೇಕಾಗಿರುವ ಸಾಕ್ರೇಟಿಸ್ ನ ಸಂತತಿ



ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದ ನೇತಾರನಿಗೆ ಸುಗಮ ಆಡಳಿತಕ್ಕೆ ಬೇಕಾದ ಸೂತ್ರಗಳೇನು? ಎಂದು ಕೇಳಿದರೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜನತೆಯ ಶ್ರೇಯೋಭಿವೃದ್ಧಿ ಕುರಿತ ಬದ್ಧತೆ ಇವುಗಳು ಮಾತ್ರ ಎಂಬುವುದು ಎಲ್ಲಾ ಪ್ರಜ್ಞಾವಂತ ನಾಗರೀಕರ ನಂಬಿಕೆಯಾಗಿತ್ತು.

ಆದರೆ, ಈಗ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಎಂಬ ಮಹಾಶಯ ಹೊಸ ಸೂತ್ರವನ್ನು ಕಂಡು ಹಿಡಿದಿದ್ದಾರೆ. ಜನತೆಯನ್ನು ಮುಠಾಳರನ್ನಾಗಿ ಮಾಡಿದರೆ, ಅವರು ಏನನ್ನೂ ಪ್ರಶ್ನಿಸಿದರೆ
 ಪ್ರಭುತ್ವ ಮತ್ತು ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿ ತೋರಿಸಿದ್ದಾರೆ, ಅವರ ಈ ಸಂಶೋಧನೆಗೆ 2020 ರ ಸಾಲಿನ ನೋಬೆಲ್ ಪ್ರಶಸ್ತಿ ಸಿಗಲೇಬೇಕು. ( ಸಿಕ್ಕರೂ ಆಶ್ಚರ್ಯವಿಲ್ಲ)

ಜಗತ್ತನ್ನು ಬಾಧಿಸುತ್ತಿರುವ ಕೊರೊನಾ ವೈರಸ್ ಕುರಿತಂತೆ ಎಲ್ಲಾ ರಾಷ್ಟ್ರಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಹೋರಾಟ ಮಾಡುತ್ತಿದ್ದರೆ, ಭಾರತದಲ್ಲಿ ತಣಿಗೆ, ಚೊಂಬು, ತಟ್ಟೆ, ಲೋಟ, ಗಂಟೆ ಜಾಗಟೆಗಳ ಮೂಲಕ ಬೀದಿಗಿಳಿದು ಹೋರಾಟ ಮಾಡಲು ಕರೆ ನೀಡಿದ್ದಾಯಿತು. ಈಗ ಮೊಂಬತ್ತಿ ಬೆಳಗಿರಿ ಎಂಬ ಕರೆ ನೀಡಲಾಗಿದೆ.  ದೀಪದ ಬೆಳಕಿಗೆ ವೈರಸ್ ಗಳು ಆಕರ್ಷಿತವಾಗಿ ಸುಟ್ಟು ಹೋಗುತ್ತವೆ ಎಂದು ಕರ್ನಾಟಕ ಬಿ,ಜೆ,ಪಿ. ಶಾಸಕ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾನೆ, ಈತ ಹಿಂದೆ ಕರ್ನಾಟಕದ ಆರೋಗ್ಯ ಸಚಿವನಾಗಿದ್ದ ಎಂಬುದು ನಮ್ಮ ದುರಂತ, ( ಕೆ.ರಾಮದಾಸ್) ಇದಕ್ಕಿಂತ ದುರಂತೆವೆಂದರೆ, ಹೆಚ್.ಆರ್. ರಂಗನಾಥ್ ಎಂಬ ಮಾನಸಿಕ ಅಸ್ವಸ್ಥನಾದ ಪತ್ರಕರ್ತನೊಬ್ಬ ತನ್ನ ಚಾನಲ್ ನಲ್ಲಿ ( ಪಬ್ಲಿಕ್ ಟಿ.ವಿ) ನರೇಂದ್ರ ಮೋದಿಯ ದೀಪದ ರಜಸ್ಯ ಎಂಬ ಹೆಸರಿನಲ್ಲಿ ಮುಖಹೇಡಿ ಜ್ಯೋತಿಷಿಗಳನ್ನು ಕೂರಿಸಿಕೊಂಡು ತೌಡು ಕುಟ್ಟುತ್ತಿದ್ದಾನೆ.

ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ಕ್ರಿಶ್ತಪೂರ್ವ 399 ರಲ್ಲಿ ಬದುಕಿದ್ದ ಹಾಗೂ ತನ್ನ ನಿಷ್ಟುರ ಸತ್ಯಗಳ ಮೂಲಕ ಜಗತ್ತಿಗೆ ರಾಜಕೀಯ ಮತ್ತು ತತ್ವಶಾಸ್ತ್ರಗಳ ಸಿದ್ಧಾಂತಗಳನ್ನು ನೀಡಿದ ಗ್ರೀಕ್ ನ ಸಾಕ್ರೇಟಿಸ್ ಎಂಬ ತತ್ವಜ್ಞಾನಿ.
1969 ರಿಂದ ಕಥೆ, ಕಾದಂಬರಿ ಓದುತ್ತಿದ್ದ ನಾನು 1976 ರಲ್ಲಿ ಪ್ರಥಮ ಬಾರಿಗೆ ಎ.ಎನ್. ಮೂರ್ತಿರಾಯರ “ ಸಾಕ್ರೇಟಿಸನ ಕೊನೆಯ ದಿನಗಳು” ಎಂಬ ಕೃತಿಯನ್ನು ಓದಿದೆ. ನನ್ನ ಬದುಕಿನಲ್ಲಿ ನಾನು ಓದಿದ ಮೊದಲ ವೈಚಾರಿಕ ಕೃತಿ ಅದು. ಅದೇ ವರ್ಷ ನಾನು ಓದುತ್ತಿದ್ದ ಬೆಸಗರಹಳ್ಳಿಯ ಸರ್ಕಾರಿ ಪಿ.ಯು.ಸಿ. ಕಾಲೇಜಿನ ಇಕ್ಷು ಸುಧಾ ಎಂಬ ವಾರ್ಷಿಕ ವಿಶೇಷಾಂಕಕ್ಕೆ ಇದೇ ಸಾಕ್ರೇಟಿಸ್ ಕುರಿತು ಜೀವನದಲ್ಲಿ ಪ್ರಥಮ ಲೇಖನವನ್ನು ಬರೆದೆ.

ಸದಾ ಗ್ರೀಕ್ ನ ರಸ್ತೆಗಳಲ್ಲಿ ನಿಂತು ಯುವಕರನ್ನು ಪ್ರಶ್ನೆಗಳ ಮೂಲಕ ಪ್ರಚೋದಿಸುವ ಜೊತೆಗೆ ತಪ್ಪುದಾರಿಗೆ ಎಳೆಯುತ್ತಿದ್ದಾನೆ ಎಂದು ಆರೋಪಿಸಿ, ಅಂದಿನ ಗ್ರೀಕ್ ನ ಪ್ರಭುತ್ವ ಸಾಕ್ರೇಟಿಸ್ನನ್ನು ನ್ಯಾಯಾಲಯಕ್ಕೆ ಎಳೆಯಿತು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕ್ಷಮೆ ಕೋರಲು ನಿರಾಕರಿಸಿದ ಸಾಕ್ರೇಟಿಸ್ ಗೆ ನ್ಯಾಯಾಲಯ ವಿಷ ಕುಡಿಸಿ ಸಾಯಿಸುವ ಮರಣ ದಂಡನೆ ವಿಧಿಸಿದಾಗ ಎದೆಗುಂದದ ಸಾಕ್ರೇಟೀಸ್, “ ನಾನು ಸತ್ಯವನ್ನು ಹೇಳಿ ಸಾಯಲು ಹೊರಟಿದ್ದೇನೆ. ನೀವು ಸುಳ್ಳುಗಳನ್ನು ಸಮರ್ಥಿಸಿಕೊಂಡು ಬದುಕಲು ಹೊರಟಿದ್ದೀರಿ” ಇವುಗಳನ್ನು ಶ್ರೇಷ್ಠ ಮಾರ್ಗ ಯಾವುದು ಎಂಬುದನ್ನು ಎದೆ ಮುಟ್ಟಿ ಪರೀಕ್ಷಿಸಿಕೊಳ್ಳಿ” ಎಂದು ಪ್ರಭತ್ವಕ್ಕೆ ನೇರ ಸವಾಲನ್ನು ಎಸೆದ.

ಸಾಕ್ರೇಟಿಸ್ ನ ಶಿಚ್ಯರಲ್ಲಿ ಪ್ಲೇಟೊ ಪ್ರಮುಖನಾದವನು. ( ರಾಜಕೀಯ ಶಾಸ್ತ್ರದ ಪಿತಾ ಮಹಾ ಎಂದು ಕರೆಯುವ  ಅರಿಸ್ಟಾಟಲ್ ಪ್ಲೇಟೊನ ಶಿಷ್ಯ)  ತನ್ನ ಗುರುವನ್ನು ಕ್ಷಮೆ ಕೋರಲು ಒತ್ತಾಯಿಸಿದಾಗ, ಶಿಷ್ಯರ ಒತ್ತಾಯವನ್ನು ನಿರಾಕರಿಸಿ, ಜೈಲು ಅಧಿಕಾರಿ ತಂದಿತ್ತ ವಿಷದ ಬಟ್ಟಲನ್ನು ನಗುತ್ತಾ ಕುಡಿದುಬಿಟ್ಟ. ಶರೀರಕ್ಕೆ ವಿಷ ಏರುವವರೆಗೂ ಮಾತನಾಡುತ್ತಲೇ ಇದ್ದ ಸಾಕ್ರೇಟಿಸ್, ಜೈಲಿನ ಅಧಿಕಾರಿಯ ಕುಟುಂಬದ ಬಗ್ಗೆ ವಿಚಾರಿಸಿದ. ನಂತರ ಶಿಷ್ಯರತ್ತ ತಿರುಗಿ ಸತ್ಯ ಎಷ್ಟೇ ಕಠೋರವಾಗಿರಲಿ ಅಥವಾ ಕಹಿಯಾಗಿರಲಿ ಅದರಿಂದ ದೂರ ಸರಿಯಬೇಡಿ ಎಂದು ತನ್ನ ಕೊನೆಯ ಸಂದೇಶವನ್ನು ಹೇಳಿದ.

ಸತ್ಯಕ್ಕಿಂತ, ಧರ್ಮ, ಜಾತಿ, ಮುಠಾಳತನ ಮತ್ತು ಅವಿವೇಕತನ ಅಧಿಕವಾಗಿರುವ ಇಂದಿನ ಭಾರತಕ್ಕೆ ತುರ್ತಾಗಿ ಸಾಕ್ರೇಟಿಸ್ ನ ಸಣತತಿ ಬೇಕಾಗಿದೆ.