ಗುರುವಾರ, ಡಿಸೆಂಬರ್ 29, 2016

ಸುದ್ದಿ ಮನೆಯ ದಾವಂತದಲ್ಲಿ ಬಸವಳಿಯುತ್ತಿರುವ ಭಾಷೆ



ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ  ಕಾಲಕ್ಕೆ  ತಕ್ಕಂತೆ ಬದಲಾವಣೆಯಾಗುತ್ತಿದ್ದಂತೆ ಸಂವಹನ ಮಾಧ್ಯಮಗಳ ಕಾರ್ಯ ವೈಖರಿಯಿಂದ ಹಿಡಿದು, ಅವುಗಳ ಸಂವಹನ ಭಾಷೆ ಕೂಡ ಬದಲಾಗುತ್ತಿದೆ. ಇದು ಜಗದ ನಿಯಮ ಕೂಡ ಹೌದು. ಆದರೆ, ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ನಾವು ಬಳಸುವ ಸಂಹವನದ ಭಾಷೆಯ ಮೇಲೆ ಎಚ್ಚರಿಕೆ ಮತ್ತು ನಿಗಾ ಇರಬೇಕಾದದ್ದು ಕೂಡ ಅಗತ್ಯವಾಗಿದೆ. ಸುದ್ಧಿ ಮನೆಗಳು ಅಂದರೆ, ಅದು ದೃಶ್ಯ ಮಾಧ್ಯಮವಾಗಿರಲಿ, ಪತ್ರಿಕಾ ಮಾಧ್ಯಮವಾಗಿರಲಿ ಅಥವಾ ಆಕಾಶವಾಣಿ ಕೇಂದ್ರವಾಗಿರಲಿ ಈ ಎಲ್ಲಾ ಮಾಧ್ಯಮಗಳ ಮೇಲೆ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ನೈತಿಕ ಜವಾಬ್ದಾರಿಯಿರುತ್ತದೆ.
ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ  ಕ್ಷಿಪ್ರಕ್ರಾಂತಿಯ ಫಲವಾಗಿ, ಜಗತ್ತಿನ ಮಾಹಿತಿಗಳೆಲ್ಲವೂ ಇಂದು ಮನುಷ್ಯನ ಬೆರಳ ತುದಿಗೆ ಬಂದು ಕೂತಿವೆ. ಇಡೀ ಜಗತ್ತೇ ಕಿರಿದಾಗಿ ಒಂದು ಹಳ್ಳಿ ಎಂಬ ಕಲ್ಪನೆ ಎಲ್ಲರ ಮನದಲ್ಲಿ ಸಾಕಾರಗೊಳ್ಳುತ್ತಿದೆ.  ಅದರಲ್ಲೂ ಇತ್ತೀಚೆಗಿನ ಸಾಮಾಜಿಕ ತಾಣಗಳು ಅಂದರೆ, ವಿಶೇಷವಾಗಿ ಫೇಸ್ ಬುಕ್, ಟ್ವಿಟ್ಟರ್, ವ್ಯಾಟ್ಸ್ ಅಪ್, ಬ್ಲಾಗ್  ಮುಂತಾದ ತಾಣಗಳು ಸುದ್ಧಿಮನೆಗೆ ಪರ್ಯಾಯವಾಗಿ ಅಂದರೆ, ಮಾಧ್ಯಮ ರಂಗಕ್ಕೆ ಪರ್ಯಾಯವಾಗಿ  ಕಾರ್ಯ ನಿರ್ವಹಿಸತೊಡಗಿವೆ. ಇದರಿಂದಾಗಿ ಸುದ್ಧಿಮನೆಗಳ ಮುಖ್ಯಸ್ಥರಿಗೆ  ಓದುಗರಿಗೆ, ,ವೀಕ್ಷರಿಗೆ ಅಥವಾ ಕೇಳುಗರಿಗೆ ಏನನ್ನು ನೀಡಬೇಕು? ಯಾವ ರೀತಿಯಲ್ಲಿ ನೀಡಬೇಕು ಹಾಗೂ ನಾವು ನೀಡುವ ವಿಷಯ ಎಷ್ಟು ಅವಧಿಯನ್ನು ಒಳಗೊಂಡಿರಬೇಕು ಎಂಬುದರಿಂದ ಹಿಡಿದು, ಭಾಷೆ, ವಿಷಯ ಹೀಗೆ ಅನೇಕ  ಸವಾಲುಗಳನ್ನು ಸುದ್ಧಿಮನೆಯ ಮುಖ್ಯಸ್ಥರ ಮುಂದೆ ಇಟ್ಟಿವೆ. ಜೊತೆಗೆ ನಾವು ಬಳಸುವ ಭಾಷೆ ಗುಣಮಟ್ಟ ಕುರಿತಂತೆ ಹಲವು ಜಿಜ್ಞಾಸೆಗಳನ್ನು ತಂದೊಡ್ಡಿವೆ.
ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಡುತ್ತಿದ್ದಂತೆ, ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಅನಿರೀಕ್ಷಿತ ಬದಲಾವಣೆಗಳಾದವು. ಹಿಂದೆ ಸುದ್ಧಿಗಳ ನಡುವೆ ಜಾಹಿರಾತುಗಳು ಇದ್ದ ಕಾಲವಿತ್ತು. ಇದೀಗ ಜಾಹಿರಾತುಗಳ ನಡುವೆ ಸುದ್ಧಿಗಳನ್ನು ಓದುವ, ಕೇಳುವ, ನೋಡುವ ಕಾಲಘಟ್ಟದಲ್ಲಿ ನಾವಿದ್ದೀವಿ.  ಹಾಗಾಗಿ ಎಲ್ಲವೂ ಸಂಕ್ಷಿಪ್ತವಾಗಿರಬೇಕು ಮತ್ತು ಓದುಗರ ಅಥವಾ ಕೇಳುಗರ ಮನಕ್ಕೆ ತಾಕುವಂತೆ ಇರಬೇಕು ಎಂಬ ಮನಸ್ಥಿತಿಯಲ್ಲಿ ಇಂದಿನ ಸುದ್ಧಿ ಮಾಧ್ಯಮ ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಹಾಗಾಗಿ ಪತ್ರಿಕೆ ಅಥವಾ ದೃಶ್ಯ ಮಾಧ್ಯಮದ ಭಾಗವಾದ ಛಾನಲ್ ಗಳಲ್ಲಿ ನಾವು ಬಳಸುವ ಭಾಷೆ ಕುರಿತಂತೆ ತುಂಬಾ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದ ಆಕಾಶವಾಣಿ ಕೇಂದ್ರಗಳು ಯಾವಾಗಲೂ ಭಾಷೆಯ ಬಳಕೆ ಕುರಿತಂತೆ ಹಾಕಿಕೊಂಡಿರುವ ನಿಯಮಾವಳಿಗಳು ಹಾಗೂ ಆಯಾ ಪ್ರಾಧೇಶಿಕ ಭಾಷೆಯಲ್ಲಿ ಪ್ರಸಾರವಾಗುವ ವಾರ್ತೆಗಳು ಅಥವಾ ಇನ್ನಿತರೆ ಕಾರ್ಯಕ್ರಮಗಳು ನಿಜಕ್ಕೂ  ಎಲ್ಲರಿಗೂ ಮಾದರಿಯಾಗಿವೆ.
ಇತ್ತೀಚೆಗಿನ ದಿನಗಳಲ್ಲಿ ಜನ ಸಾಮಾನ್ಯರ ನಡುವೆ ಸ್ಮಾರ್ಟ್ ಫೋನ್ ಗಳು, ಮತ್ತು ಇಂಟರ್ ನೆಟ್ ಹಾಗೂ ಇ-ಮೈಲ್ ಸಂದೇಶಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಪ್ರಾದೇಶಿಕ ಭಾಷೆ ಮತ್ತು ಇಂಗ್ಲೀಷ್ ಭಾಷೆಗಳ ನಡುವೆ ಇದ್ದ ಗಡಿ ರೇಖೆಯು ಹಂತಹಂತವಾಗಿ ಅಳಿಸಿಹೋಗುತ್ತಿದೆ. ಇಂಗ್ಲೀಷ್ ಭಾಷೆಯು ತಂತ್ರಜ್ಞಾನದ ಮುಖ್ಯ ಭಾಷೆಯಾದ ಕಾರಣ ಪ್ರಾದೇಶಿಕ ಭಾಷೆಗಳ ನುಡಿಗಟ್ಟುಗಳ ಜೊತೆಗೆ  ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರ ಪರೋಕ್ಷ ಪರಿಣಾಮವನ್ನು ದೃಶ್ಯ ಮಾಧ್ಯಮಗಳ ಸುದ್ದಿ ಛಾನಲ್ ಗಳು ಬಿತ್ತರಿಸುವ ಮುಖ್ಯಾಂಶಗಳಿಂದ  ಹಿಡಿದು, ವಾರ್ತೆಗಳ ವಿವರಣೆಯಲ್ಲಿ ನಾವು ಕಾಣಬಹುದು. ವಿಷಾಧದ ಸಂಗತಿಯೆಂದರೆ, ಇಂತಹ ಪ್ರಯೋಗವು  ಭಾಷೆಯೊಂದರ ಬೆಳವಣಿಯ ದೃಷ್ಟಿಯಿಂದ ತೀರಾ ಅಪಾಯಕಾರಿಯಾದುದು.
ಸುದ್ದಿ ಮನೆಗಳಲ್ಲಿ  ಸಂವಹನದ ಮಾಧ್ಯಮವಾಗಿ ಬಳಕೆಯಾಗುವ ಭಾಷೆಯು ಅದು ಸ್ಥಳಿಯ ಪ್ರಾದೇಶಿಕ ಭಾಷೆಯಾಗಿರಬಹುದು ಇಲ್ಲವೆ, ಅದೇ ನೆಲದ ಇನ್ನೊಂದು ಉಪಭಾಷೆಯಾಗಿರಬಹುದು ಅಂದರೆ, ಕೊಡವ, ಕೊಂಕಣ, ತುಳು ಅಥವಾ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಮರಾಠಿ ಮತ್ತು ಉರ್ದು ಭಾಷೆ ಮಿಶ್ರಿತ ಕನ್ನಡ ಭಾಷೆಯಾಗಿರಬಹುದು. ಇವುಗಳನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸುವಾಗ ಸುದ್ದಿ ಮನೆಯ ಮುಖ್ಯಸ್ಥರಿಗೆ ಮತ್ತು ವಾರ್ತಾ ವಾಚಕರಿಗೆ ಹಾಗೂ ಪತ್ರಿಕೆಗಳ ಉಪಸಂಪಾದಕರಿಗೆ ಸಮುದಾಯದ ನಾಡಿ ಮಿಡಿತ ಕುರಿತಂತೆ ಜ್ಞಾನವಿರಬೇಕು. ವಿಶೇಷವಾಗಿ ದೃಶ್ಯ ಮಾಧ್ಯಮ ಮತ್ತು ರೇಡಿಯೋ ಕಾರ್ಯಕ್ರಮಗಳಲ್ಲಿ ಬಳಸುವ ಭಾಷೆಯು ಆದಷ್ಟು ಸರಳವಾಗಿ ಎಲ್ಲರಿಗೂ ನಿಲುಕವಂತಿರಬೇಕು. ಏಕೆಂದರೆ, ದೃಶ್ಯ ಮಾಧ್ಯಮಗಳ ವೀಕ್ಷಕರು ಮತ್ತು ಆಕಾಶವಾಣಿಯ ಕೇಳುಗರು ಇಬ್ಬರೂ ಅಗೋಚರ ವ್ಯೆಕ್ತಿಗಳಾಗಿದ್ದು, ಅವರಲ್ಲಿ ಅನಕ್ಷರಸ್ತರು ಇರುತ್ತಾರೆ ಎಂಬ ಎಚ್ಚರಿಕೆ ಈ ಎರಡು ಮಾಧ್ಯಮಗಳಿಗೆ ಇರಬೇಕಾದ್ದು ಅತ್ಯಾವಶ್ಯಕ. ಏಕೆಂದರೆ, ಪತ್ರಿಕೆಗಳು  ಓದು ಬಲ್ಲ ಅಕ್ಷರಸ್ತರ ಮಾಧ್ಯಮವಾದರೆ, ರೇಡಿಯೋ ಮತ್ತು ದೃಶ್ಯ ಮಾಧ್ಯಮಗಳು ಎಲ್ಲಾ ಬಗೆಯ ಜನರ ಮಾಧ್ಯಮಗಳಾಗಿರುತ್ತವೆ.
ದುರದೃಷ್ಟಕರ ಸಂಗತಿಯೆಂದರೆ, ವರ್ತಮಾನದ ಜಗತ್ತಿನಲ್ಲಿ ಸುದ್ಧಿ ಛಾನಲ್ ಗಳ ಭಾಷೆಯಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಭಾಗವನ್ನು ಇಂಗ್ಲೀಷ್ ಭಾಷೆಯು ಆಕ್ರಮಿಸಿಕೊಂಡಿದೆ. ಉದಾಹರಣೆಗೆ  ಬ್ರೇಕಿಂಗ್ ನ್ಯೂಸ್/ ಟೀಮ್ ಇಂಡಿಯಾ/, ಪೋಲಿಸ್ ಫೈಲ್,/ ಕ್ರೈಮ್ ಸ್ಟೋರಿ/ ಫಿಲ್ಮಿ ಫಾಂಡ/ ಬೌಂಡರಿ ಲೈನ್/ ಮುಂತಾದ ಶೀರ್ಷಿಕೆಗಳು ಕಾರ್ಯಕ್ರಮಗಳಿಗೆ ಇಟ್ಟ ಹೆಸರುಗಳಾದರೆ, ವಾರ್ತೆಗಳ ವಿವರಣೆಯಲ್ಲಿ ಬಳಸುವ ಡಬ್ಬಲ್ ಮರ್ಡರ್, ಡಬ್ಬಲ್ ಬ್ಯಾರಲ್ ಗನ್, ಸಿ.ಎಮ್. ಎಲೆಕ್ಷನ್, ಹೋಂ ಮಿನಿಷ್ಟರ್, ಆಕ್ಸಿಡೆಂಟ್,   ಹೀಗೆ ನೂರಾರು ಇಂಗ್ಲೀಷ್ ಶಬ್ದಗಳು ದಿನ ನಿತ್ಯ ನಮ್ಮ ಕಿವಿಯ ಮೇಲೆ ಬೀಳುತ್ತಿವೆ. ಇಂತಹ ಅವಸರದ ಪ್ರಕ್ರಿಯೆಯು ನಮ್ಮ ಮಾತೃ ಭಾಷೆಯನ್ನು ಕೊಂದು ಹಾಕುವ ಕ್ರಿಯೆಯಾಗಬಲ್ಲದೆ ಹೊರತು. ಹೊಸ ಹೊಸ ಶಬ್ದಗಳನ್ನು ಹುಟ್ಟು ಹಾಕಲು ಸಹಕಾರಿಯಾಗುವುದಿಲ್ಲ.
ದೃಶ್ಯ ಮಾಧ್ಯಮ ಜಗತ್ತು ಕುರಿತಂತೆ  ವಿಶೇಷ ಅಧ್ಯಯನ ಮಾಡಿ ಈ ವಿಷಯದಲ್ಲಿ  ಪಿ.ಹೆಚ್.ಡಿ. ಪದವಿ ಪಡೆದಿರುವ ಹಿರಿಯ ಪತ್ರಕರ್ತ,  ಹಾಗೂ ಹತ್ತು ವರ್ಷಗಳ ಕಾಲ ಉದಯ ಟಿ.ವಿ.ಯಲ್ಲಿ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸಿ, ಇದೀಗ  ತುಮಕೂರು  ಸಿದ್ಧಾರ್ಥ ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿರುವ  ಡಾ. ಬಿ.ಟಿ. ಮುದ್ದೇಶ್. ದೃಶ್ಯ ಮಾಧ್ಯಮಗಳಿಂದಾಗಿ  ಮಾತೃ ಭಾಷೆಯೆಂಬುದು ಹೇಗೆ ಸೆವೆಯುತ್ತಿದೆ ಎಂಬುದನ್ನು ಅವರು ಇಂಗ್ಲೀಷ್ ಶಬ್ದಗಳು ಬಳಕೆಯಾಗುತ್ತಿರುವುದನ್ನು ಪಟ್ಟಿ ಮಾಡಿದ್ದಾರೆ.  ಜೊತೆಗೆ ಕಾರ್ಯಕ್ರಮದ ನಡುವೆ ಇಂಗ್ಲೀಷ್ ಭಾಷೆ ಹೇಗೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ ಎಂಬುದನ್ನು ಉದಾಹರಣೆ ಸಹಿತ  ಮನಮುಟ್ಟುವಂತೆ ವಿವರಿಸಿದ್ದಾರೆ. ಇವುಗಳ ಜೊತೆ  ಜೊತೆಗೆ ಭಾಷೆಯ ಅನುವಾದ ಮತ್ತು ಉಪಯೋಗ ಕುರಿತು ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ಭಾಷಾಂತರ ಇಲ್ಲವೇ ಅನುವಾದ ಕ್ರಿಯೆಯು ಯಾವಾಗಲೂ ಸೃಜಲಶೀಲವಾಗಿರಬೇಕು.
ಭಾಷಾಂತರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಭಾಷೆಗಳ ಮೇಲೆ ಪತ್ರಕರ್ತರಿಗೆ ಹಿಡಿತವಿದ್ದರೆ ಭಾಷಾಂತರವು ಸರಳವೂ ಹಾಗೂ ಅರ್ಥಪೂರ್ಣವಾಗಿರುತ್ತದೆ.
ಭಾಷಾಂತರ ಕ್ರಿಯೆಯಲ್ಲಿ ಲೇಖನ ಅಥವಾ ಲೇಖಕನ ಮೂಲ ಆಶಯಕ್ಕೆ ಧಕ್ಕೆ ಬಾರದಂತಿರಬೇಕು.
ಭಾಷಾಂತರ ಮಾಡುವಾಗ ಆಯಾ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ ನುಡಿಗಟ್ಟುಗಳನ್ನು ಭಾಷಾಂತರ ಕ್ರಿಯೆಯಲ್ಲಿ ಬಳಸಬೇಕು.
ಭಾಷಾಂತರವೆನ್ನುವುದು ಒಂದು ಕಲೆಯಾದುದರಿಂದ ಬಹುಭಾಷೆಗಳ ಪರಿಚಯ, ಪ್ರಭುತ್ವ ಅಗತ್ಯವಾದರೂ ಸಹ ಭಾಷಾಂತರ ಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ಎರಡು ಭಾಷೆಯ ಮೇಲಿನ ಹಿಡಿತ ಅನಿವಾರ್ಯ.
ಭಾಷಾಂತರಕಾರ ಅಥವಾ ಅನುವಾದಕ  ಪರಕಾಯ ಪ್ರವೇಶ ಮಾಡುವ ಸಾಮಾರ್ಥ್ಯವುಳ್ಳವನಾಗಿರಬೇಕು.
ಭಾಷಾಂತರಕಾರ ಕೇವಲ ಶಬ್ಧದ ಕಣಜವಾದರೆ ಸಾಲದು, ಹೊಸ ಪದಪುಂಜಗಳನ್ನು ಸೃಷ್ಟಿಸುವ ಸಾಮರ್ಥ್ಯವುಳ್ಳವನಾಗಿರಬೇಕು.

 ಬಿ.ಟಿ. ಮುದ್ದೇಶ್ ಅವರ ಈ ಮಾತುಗಳಿಗೆ ಪೂರಕವಾಗಿ ಕಳೆದ ಅರ್ಧ ಶತಮಾನದಿಂದ ಕರ್ನಾಟಕದ ಸುದ್ದಿಮನೆಗಳಲ್ಲಿ ಅನೇಕ ಮಹಾನುಭಾವರು ಪತ್ರಿಕೋದ್ಯಮಕ್ಕೆ ಅನೇಕ ನುಡಿಗಟ್ಟುಗಳನ್ನು ರೂಪಿಸಿಕೊಟ್ಟಿರುವುದರ ಜೊತೆಗೆ ಅನೇಕ ಹೊಸ ಹೊಸ ಪದಗಳನ್ನು ಸೃಷ್ಟಿಸಿ ಕೊಡುಗೆಯಾಗಿ ನೀಡಿದ್ದಾರೆ ಇವರುಗಳಲ್ಲಿ   ಪ್ರಜಾವಾಣಿಯ ಟಿ.ಎಸ್.ಆರ್,  ಕನ್ನಡ ಪ್ರಭದ ಖಾದ್ರಿ ಶಾಮಣ್ಣ, ವೈ.ಎನ್.ಕೃಷ್ಣಮೂರ್ತಿ, ಇವರುಗಳನ್ನು ಮುಖ್ಯವಾಗಿ ಹೆಸರಿಸಬಹುದು. ಇವುಗಳ ಜೊತೆಗೆ ಬಹುಮುಖ್ಯವಾಗಿ ಪತ್ರಿಕೋದ್ಯಮದ ಭಾಷೆಯೆಂಬುದು ಒಣ ಭಾಷೆ ಅಥವಾ ನಿರ್ಜೀವ ಭಾಷೆ ಎಂಬ ಕಲ್ಪನೆ ಇದ್ದ ಸಂದರ್ಭದಲ್ಲಿ ಕನ್ನಡದ ಖ್ಯಾತ ಸಾಹಿತಿ ಪಿ.ಲಂಕೇಶರು 1980 ರ ದಶಕದಲ್ಲಿ ಪತ್ರಿಕೋದ್ಯಮದ ಭಾಷೆಗೆ ಸಾಹಿತ್ಯದ ಭಾಷೆಯನ್ನು ಕಸಿ ಮಾಡುವುದರ ಮೂಲಕ ಹೊಸ ಜೀವ ಕಳೆಯನ್ನು ತುಂಬಿದರು. ಇದಕ್ಕೂ ಕನ್ನಡದ ಕಥಾಲೋಕದ ಪಿತಾಮಹಾರೆಂದು ಹೆಸರಾದ ಮಾಸ್ತಿಯವರು  ತಮ್ಮ “ಜೀವನ” ಪತ್ರಿಕೆಯಲ್ಲಿ ಇಂತಹದ್ದೇ ಪ್ರಯೋಗವನ್ನು ಮಾಡಿದ್ದರು. ಪಿ.ಲಂಕೇಶ್ ರವರು ತಮ್ಮ ವಾರಪತ್ರಿಕೆಯಲ್ಲಿ ಬಳಸಿದ ಅತ್ಯಂತ ಸರಳವಾದ ಕನ್ನಡ ಭಾಷೆ ಹಾಗೂ ಹುಟ್ಟು ಹಾಕಿದ ನುಡಿಗಟ್ಟುಗಳು ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟವು. ಜೊತೆಗೆ ನನ್ನ ತಲೆ ಮಾರಿನ ಅನೇಕ ಪತ್ರಕರ್ತರಿಗೆ ಸ್ಪೂರ್ತಿಯನ್ನು ತುಂಬಿದವು.
ಕೇವಲ ಪ್ರಾಸಕ್ಕೆ ಕಟ್ಟು ಬಿದ್ದು, ಹೊಸ ಹೊಸ ತಲೆ ಬರಹಗಳನ್ನು ನೀಡಿ  ತಮ್ಮ ಚಮತ್ಕಾರಕ್ಕೆ ತಾವೇ ಸಂಭ್ರಮಿಸುತ್ತಿರುವ ಪತ್ರಿಕೆಗಳ ಸಂಪಾದಕರ ಮೇಲೆ ಭಾಷೆಯನ್ನು ಉಳಿಸುವ ಮತ್ತು ಬೆಳಸುವ ನೈತಿಕ ಜವಾಬ್ದಾರಿಯೊಂದು  ಸದಾ ಅವರ ಮೇಲಿರುತ್ತದೆ. ಏಕೆಂದರೆ, ಯಾವುದೇ ಪ್ರಾದೇಶಿಕ ಭಾಷೆಯಾಗಿರಲಿ ಅದು  ಸುದ್ದಿ ಮನೆಯ ದಾವಂತದಲ್ಲಿ ಬಸವಳಿಯಬಾರದು ಮತ್ತು ನಶಿಸಿಹೋಗಬಾರದು.
( ಧಾರವಾಡ ಆಕಾಶವಾಣಿಗೆ ನೀಡಿದ ವಿಶೇಷ ಉಪನ್ಯಾಸದ  ಲಿಖಿತ ರೂಪ)
                                                                                                                                                                                                             

                                                

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ