ಶುಕ್ರವಾರ, ಸೆಪ್ಟೆಂಬರ್ 8, 2017

ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ ಎಂದು ನುಡಿದ ಮಹಾನುಭಾವರ ಪುತ್ರಿಯನ್ನ ಹತ್ಯೆಗೈದರು.

ಮೊನ್ನೆ ಸೆಪ್ಟಂಬರ್ ಐದರಂದು ರಾತ್ರಿ ಎಂಟು ಗಂಟೆಗೆ ಸುಮಾರಿಗೆ ಕರ್ನಾಟಕದ ಧೀಮಂತ ಪತ್ರಕರ್ತೆ, ವಿಚಾರವಾದಿಯಾಗಿದ್ದ ಗೌರಿ ಲಂಕೇಶ್ ರವರನ್ನು ಹತ್ಯೆ ಮಾಡುವುದರ ಮೂಲಕ ಮೂಲಭೂತವಾದಿಗಳು ಮತ್ತೇ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ. ಎರಡು ವರ್ಷಗಳ ಅಂತರದಲ್ಲಿ ಅಂದರೆ, 2015 ಆಗಸ್ಟ್ 30 ರಂದು ನಾಡಿನ ಹಿರಿಯ ಸಂಶೋಧಕ, ವಿಚಾರವಾದಿ ಡಾ.ಎಂ.ಎಂ. ಕಲ್ಬುರ್ಗಿಯವರ ಹತ್ಯೆಯ ನಂತರ ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೆಯ ಹೇಯ ಕೃತ್ಯವಿದು. ನೆರೆಯ ಮಹರಾಷ್ಟ್ರದಲ್ಲಿ ನಡೆದ ದಾಬೋಲ್ಕರ್ ಮತ್ತು ಪಾನ್ಸರೆ ಹತ್ಯೆಗಳ ನಂತರ ನಡೆದ ನಾಲ್ಕನೆಯ ವಿಚಾರವಾದಿಗಳ ಹತ್ಯೆ ಇದಾಗಿದೆ. ದುರಂತವೆಂದರೆ, ಈವರೆಗೆ ನಡೆದಿದ್ದ ಮೂವರು ವಿಚಾರವಾದಿಗಳ ಕೊಲೆಗೆ ಸಂಬಂಧಿಸಿದ್ದಂತೆ ವಿಚಾರಣೆ ನಡೆಯುತ್ತಿದೆಯೇ ಹೊರತು ಈವರೆಗೆ ಅಪರಾಧಿಗಳು ಪತ್ತೆಯಾಗಿಲ್ಲ.
ಮೇಲಿಂದ ಮೇಲೆ ಸಂಭವಿಸುತ್ತಿರುವ ಇಂತಹ ಘಟನೆಗಳು ಅಭಿವ್ಯಕ್ತಿಯ ಸ್ವಾತಂತ್ರ್ಯದ ಕತ್ತು ಹಿಸುಕುವಿಕೆಯ ಪ್ರಾಯೋಜಿತ ಕಾರ್ಯಕ್ರಮಗಳಂತೆ ಜರುಗುತ್ತಿವೆ. ಯಾವುದೇ ನಿರ್ಧಿಷ್ಟ ವ್ಯಕ್ತಿ ಅಥವಾ ಸಂಘಟನೆಗಳತ್ತ ನೇರವಾಗಿ ಬೆರಳು ತೋರಿಸಲು ಸಾಧ್ಯವಾಗದಿದ್ದರೂ ಕಳೆದ ಮೂರು ನಾಲ್ಕು ವರ್ಷಗಳಿಂದ ದೇಶದ ಬಲಪಂಥಿಯ ಸಂಘಟನೆಗಳು ಎಲ್ಲಾ ವಿಚಾರವಂತರ ವಿರುದ್ಧ ಸಾರಿರುವ ನೇರ ಸಮರವನ್ನು ಗಮನಿಸಿದರೆ, ಇದು ಧಾರ್ಮಿಕ ಭಯೋತ್ಪಾದನೆಯ ಕೃತ್ಯವಲ್ಲದೆ ಬೇರೇನೂ ಅಲ್ಲ ಎನಿಸುತ್ತಿದೆ.
ಕರ್ನಾಟಕದಲ್ಲಿ ನಡೆದಿರುವ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಇವರಿಬ್ಬರ ಹತ್ಯೆಯನ್ನು ಕೂಲಂಕುಶವಾಗಿ ಪರಾಮರ್ಶಿಸಿದರೆ, ಇಂತಹ ಹತ್ಯೆಗಳ ಹಿಂದೆ ಬಲು ದೊಡ್ಡದಾದ ಸಂಘಟನೆ ಒಂದು ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದು, ಬಾಡಿಗೆ ಹಂತಕರನ್ನು ನೇಮಕ ಮಾಡಿಕೊಂಡಿದೆ ಎನಿಸುತ್ತಿದೆ. ಇದಕ್ಕಿಂತ ಹೆಚ್ಚಾಗಿ ಹತ್ಯೆಗೆ ನಿರ್ಧಿಷ್ಟ ದಿನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಸಂಘಟನೆ ಅತಿಯಾದ ಬುದ್ಧಿವಂತಿಕೆಯನ್ನು ತೋರುತ್ತಿದೆ. ಉದಾಹರಣೆಗೆ ಕಲ್ಬುರ್ಗಿಯವರ ಹತ್ಯೆಯಾದ ದಿನಾಂಕವನ್ನು ಗಮನಿಸಿ. ಆದಿನ ಅಂದರೆ, 30-8-2015 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರಗಳ ಪೋಲಿಸ್ ಆಯುಕ್ತರಾಗಿದ್ದ ಶಿವಕುಮಾರ್ ಎಂಬುವರು ನಿವೃತ್ತರಾಗುತ್ತಿದ್ದರು. ದಿನ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪಾಂಡುರಂಗ ರಾಣೆಯವರು ಬೆಳಿಗ್ಗೆ ಹತ್ತು ಗಂಟೆಗೆ ಅಧಿಕಾರ ಸ್ವೀಕರಿಸಬೇಕಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಸಮಾರಿಗೆ ಕಲ್ಬುರ್ಗಿಯವರ ಹತ್ಯೆ ನಡೆಯಿತು. ಹೊಸ ಅಧಿಕಾರಿಗೆ ಮಹಾನಗರದ ಮಾಹಿತಿ ಇಲ್ಲದ ಸಂದರ್ಭದಲ್ಲಿ ಹತ್ಯೆ ನಡೆಯಿತು. ಹಿಂದೆ ಅವಳಿ ನಗರದಲ್ಲಿ ಪೊಲೀಸ್ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ, ಕಥೆಗಾರ ಬೆಸಗರಹಳ್ಳಿ ರಾಮಣ್ಣನವರ ಪುತ್ರ ಹಾಗೂ ಬೆಳಗಾವಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಇವರು ಧಾರವಾಡಕ್ಕೆ ಆಗಮಿಸಿ, ಕಲ್ಬುರ್ಗಿಯವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಯಿತು. ಈಗ ನಡೆದಿರುವ ಗೌರಿ ಲಂಕೇಶ್ ಅವರ ಹತ್ಯೆಗೆ ಆಯ್ಕೆ ಮಾಡಿಕೊಂಡಿರುವ ದಿನಾಂಕದಲ್ಲಿಯೂ ಸಹ ಇಂತಹದ್ದೇ ಹುನ್ನಾರ ಅಡಗಿರುವ ಹಾಗೆ ಕಾಣುತ್ತಿದೆ. ಬಿ.ಜೆ.ಪಿ. ಪಕ್ಷ ಮಂಗಳೂರಿನಲ್ಲಿ ಸೆಂಪ್ಟಂಬರ್ 7 ರಂದು ಆಯೋಜಿಸಿದ್ದ ಬೈಕ್ ರ್ಯಾಲಿಯ ಮೇಲೆ ನಿಷೇದ ಹೇರಿ ರಾಜ್ಯದ ಪೊಲೀಸರು ಸೆಪ್ಟಂಬರ್ 5 ರಿಂದ ರಾಜ್ಯಾದ್ಯಂತ ಬಂದೂಬಸ್ತ್ ಕಾರ್ಯಕ್ರಮದಲ್ಲಿ ತೊಡಗಿರುವಾಗ ಗೌರಿಯವರ ಹತ್ಯೆಯಾಗಿದೆ. ಎರಡೂ ಹತ್ಯೆಗಳಲ್ಲಿ ಅನೇಕ ರೀತಿಯ ಸಾಮ್ಯತೆಗಳು ಕಂಡು ಬರುತ್ತಿವೆ. ಕಲ್ಬುರ್ಗಿ ಹಂತಕರು ಮನೆಯ ಬಾಗಿಲನ್ನು ತಟ್ಟಿ, ಅವರ ಶ್ರೀಮತಿಯವರ ಜೊತೆಸರ್ ಅವರನ್ನು ನೋಡಬೇಕಿತ್ತುಎಂದು ಕನ್ನಡದಲ್ಲಿ ಮಾತನಾಡಿದ್ದಾರೆ. ಮೊನ್ನೆಯ ಗೌರಿಯವರ ಹತ್ಯೆ ಸಂದರ್ಭದಲ್ಲಿ ಮನೆಯ ಗೇಟ್ ತೆರೆಯಲು ಹೊರಟ ಅವರನ್ನು ಮೇಡಂ ಎಂದು ಸಂಬೋಧಿಸುವುದರ ಮೂಲಕ ಅವರು ಹಿಂತಿರುಗಿ ನೋಡುವಂತೆ ಮಾಡಿ, ಅವರ ಎದೆಗೆ ಮತ್ತು ಹಣೆಗೆ ಹತ್ತಿರದಿಂದ ಗುಂಡಿಟ್ಟಿದ್ದಾರೆ. ತೀರಾ ಹತ್ತಿರದಿಂದ ಕಲ್ಬುರ್ಗಿಯವರ ಹಣೆಗೆ ಗುಂಡಿಟ್ಟ ರೀತಿಯಲ್ಲಿ ಗೌರಿಯವರಿಗೂ ಹಣೆಗೆ ಗುಂಡಿಟ್ಟು ಕೊಲ್ಲಲಾಗಿದೆ. ಎರಡೂ ಹತ್ಯೆಗಳು ಒಂದು ಪ್ರಬಲವಾದ ಸಂಘಟನೆಯೊಂದರಿಂದ ವ್ಯವಸ್ಥಿತವಾಗಿ ನಡೆದಿದೆ ಎಂಬುದಕ್ಕೆ ಮೇಲಿನ ಘಟನೆಗಳು ನಮಗೆ ಸಾಕ್ಷ್ಯವನ್ನು ಒದಗಿಸುತ್ತವೆ .ಆದರೆ, ಕೈಯಲ್ಲಿ ಹಿಡಿದು ಓದುವುದು ಇರಲಿ, ಮಕ್ಕಳ ಮುಕುಳಿ ಒರೆಸಲು ನಾಲಾಯಕ್ಕಾದ ಕನ್ನಡದ ಕೆಲವು ದಿನಪತ್ರಿಕೆಗಳು ಇದು ನಕ್ಸಲಿಯರ ಕೃತ್ಯ ಎಂದು ಬಿಂಬಿಸುತ್ತಾ, ತನಿಖೆಯ ಜಾಡು ತಪ್ಪಿಸುವುದರ ಜೊತೆಗೆ ಕೆಲವು ಸಂಘಟನೆಗಳ  ಪರ ವಕಾಲತ್ತು ವಹಿಸಲು ಮುಂದಾಗಿವೆ.
ಗೌರಿ ಲಂಕೇಶ್ ಲಂಕೇಶ್ ಜೊತೆ ನನಗೆ  ಆಪ್ತವಾದ ಯಾವುದೇ ರೀತಿಯ ಒಡನಾಟವಿರಲಿಲ್ಲ. ಅವರು ಲಂಕೇಶ್ ನಿಧಾನಾನಂತರ ಪತ್ರಿಕೆಯನ್ನು ಆರಂಭಿಸಿದ ನಂತರ ಅಪರೂಪಕ್ಕೆ ದೂರವಾಣಿಯಲ್ಲಿ ಮಾತ್ರ ಮಾತನಾಡುತ್ತಿದ್ದೆ. ಮಂಡ್ಯದ ಪ್ರೊ.ಹೆಚ್. ಎಲ್. ಕೇಶವಮೂರ್ತಿಯವರ ಮೂಲಕ ಪರಿಚಯವಾದ ನಂತರ  ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಹಾಗೂ ಸಹಚರರು ಗೌರಿ ವಿರುದ್ಧ ಹಾಕಿದ್ದ ಮಾನನಷ್ಟ ಮೊಕೊದ್ದಮೆಯ ವಿಚಾರಣೆಗಾಗಿ ಬರುವ ಮುನ್ನ ಫೋನ್ ಮಾಡುತ್ತಿದ್ದರು. ಹುಬ್ಬಳ್ಳಿಯಲ್ಲಿ ನಮ್ಮ ಉದಯ ಟಿ.ವಿ. ಪ್ರಾದೇಶಿಕ ಕಛೇರಿ ಇರುವ ಕಟ್ಟಡದಲ್ಲಿರುವ ಹೊಟೇಲ್ ಮೆಟ್ರೊಪಾಲಿಸ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ನಾನು ಎಷ್ಟೋ ಬಾರಿ ಪ್ರವಾಸಿ ಮಂದಿರದಲ್ಲಿ ಕೊಠಡಿ ಬುಕ್ ಮಾಡಿದರೆ, ಅಲ್ಲಿಗೆ ಹೋಗಲು ನಿರಾಕರಿಸಿ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ತೀರಾ ಸ್ವಾಭಿಮಾನಿ ಹೆಣ್ಣು ಮಗಳಾದ ಅವರು ವ್ಯಯಕ್ತಿಕವಾಗಿ ಯಾರೊಬ್ಬರಿಗೂ ಅನಾವಶ್ಯಕವಾಗಿ ತೊಂದರೆ ಕೊಡಲು ಇಷ್ಟಪಡುತ್ತಿರಲಿಲ್ಲ. ಜೊತೆಗೆ ಯಾವುದೇ ರೀತಿಯ ನೆರವನ್ನು ಪಡೆಯಲು ಇಷ್ಟ ಪಡುತ್ತಿರಲಿಲ್ಲ. “ನೀವು ನನಗೆ ಪತ್ರಕರ್ತೆ ಗೌರಿ ಲಂಕೇಶ್ ಅಲ್ಲ, ನಮ್ಮ ಮೇಷ್ಟ್ರು ಮಗಳು ಮಾತ್ರ, ಅವರ ಋಣ ನನ್ನ ತಲೆಮಾರಿನ ಮೇಲೆ ಅಗಾಧವಾಗಿದೆ, ಯಾವುದೇ ಸಂಕೋಚವಿಲ್ಲದೆ ನೆರವು ಕೇಳಿಎಂದಾಗ ಮಾತ್ರ ಸ್ವಲ್ಪ ಹಗುರವಾಗುತ್ತಿದ್ದರು. ಭಾರತದ ನಕ್ಸಲ್ ಇತಿಹಾಸ ಕುರಿತು ನಾನು ಬರೆದಎಂದೂ ಮುಗಿಯದ ಯುದ್ಧಕೃತಿಗಾಗಿ ಕರ್ನಾಟಕದ ಸಾಕೇತ್ ರಾಜನ್ ಕುರಿತು ಅನೇಕ ಮಾಹಿತಿಗಳನ್ನು ಅವರು ನನ್ನೊಂದಿಗೆ ಹಂಚಿಕೊಂಡಿದ್ದರು. ಗೌರಿ ಮತ್ತು ಸಾಕೇತ್ ರಾಜನ್ ದೆಹಲಿಯಲ್ಲಿ ಮಾಸ್ ಕಮ್ಯೂನಿಕೇಶನ್  ಕುರಿತು ಒಟ್ಟಿಗೆ ಅಧ್ಯಯನ ಮಾಡಿದ್ದರುಸಾಕೇತ್ ಒಂದು ವರ್ಷ ಸೀನಿಯರ್ ಆಗಿದ್ದರು.
ಗೌರಿಯವರ ಬದುಕಿನಲ್ಲಿ ಅನೇಕ ಅನಿರೀಕ್ಷಿತ ಬದಲಾವಣೆಗಳಾಗಿ ಅವರೊಳಗೆ ಪಕ್ವತೆಯ ಮಾತೃ ಹೃದಯವೊಂದು ಸೃಷ್ಟಿಯಾಗಿತ್ತು. ಅಮೇರಿಕಾದ ವಾಷಿಂಗ್ಟನ್ ನಗರದಲ್ಲಿ ಇಂಡಿಯನ್ ಎಕ್ಸ್ಪ್ರಸ್ ಪತ್ರಿಕೆಯ ವಿಶೇಷ ವರದಿಗಾರರಾಗಿದ್ದ ಚಿದಾನಂದ ರಾಜಘಟ್ಟ ಇವರೊಂದಿಗಿನ ವೈವಾಹಿಕ ಬದುಕಿನ ಸಂಬಂಧ ಮುರಿದು ಬಿದ್ದ ನಂತರ, ವಾಪಸ್ ಭಾರತಕ್ಕೆ ಬಂದು ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಹೆಸರು ಮಾಡಿದ್ದರು. ತಂದೆ ಲಂಕೇಶ್ ನಿಧನಾನಂತರ ಪತ್ರಿಕೆಯ ಜವಾಬ್ದಾರಿ ವಹಿಸಿಕೊಂಡು, ಕನ್ನಡದಲ್ಲಿ ಬರೆಯುವದನ್ನು, ಚಿಂತಿಸುವುದನ್ನು ರೂಢಿಸಿಕೊಂಡರು. ಪತ್ರಿಕೆಯ ಜವಬ್ದಾರಿ ವಹಿಸಿಕೊಂಡ ಅಲ್ಪ ಕಾಲದಲ್ಲಿ ಸಹೋದರನೊಂದಿಗೆ ಕಲಹ ಉಂಟಾದ ಪರಿಣಾಮ,  ಗೌರಿ ಲಂಕೇಶ್ ಪತ್ರಿಕೆ ಹೆಸರಿನಲ್ಲಿ  ಹೊಸ ಪತ್ರಿಕೆಯನ್ನು ಆರಂಭಿಸಿ, ಅಪ್ಪನ ಆದರ್ಶವನ್ನು, ಚಿಂತನೆಗಳನ್ನು ತಮ್ಮ ಪತ್ರಿಕೆಯಲ್ಲಿ ಮುಂದುವರಿಸುವುದರ ಮೂಲಕ ಕರ್ನಾಟಕದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖ ಪಾತ್ರವಹಿಸಿದರು. ನಮ್ಮ ನಾಡಿನ ದುರಂತವೆಂದರೆ, “ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ಎಂದು ನುಡಿದ ಲಂಕೇಶ್ ರವರ ಪುತ್ರಿ ಗೌರಿ ಹಂತಕರ ಗುಂಡಿಗೆ ಬಲಿಯಾದದ್ದು ನೋವಿನ ಸಂಗತಿ.
ಗೌರಿ ಲಂಕೇಶ್ ಅವರನ್ನು ನಕ್ಸಲಿಯರ ಬೆಂಬಲಿಗರು ಎಂದು ಬಲಪಂಥಿಯರು ಬೊಬ್ಬೆ ಹೊಡೆಯುತ್ತಿದ್ದಾರೆಆದರೆ, ಗೌರಿಯವರು ಎಂದೂ ಹಿಂಸೆಯನ್ನು ಬೆಂಬಲಿಸಿದವರಲ್ಲ. ನಕ್ಸಲಿಯರ ಗುರಿಗಳ ಬಗ್ಗೆ ಅನುಕಂಪವಿದ್ದ ಗೌರಿಯವರು ಹೋರಾಟವನ್ನು ಹಿಂಸೆಯ ಮೂಲಕ ಮುಂದುವರಿಸುವುದರ ಬದಲು ಅರಣ್ಯದಿಂದ ಹೊರಬಂದು, ಬಂದೂಕ ತ್ಯೆಜಿಸಿ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಮುಂದುವರಿಸಬೇಕು ಎಂಬುದು ಅವರ ನಿಲುವಾಗಿತ್ತು. ಕಾರಣಕ್ಕಾಗಿ ಅನೇಕ ನಕ್ಸಲ್ ಹೋರಾಟಗಾರರನ್ನು ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಕರೆತಂದರು. ಕರ್ನಾಟಕದಲ್ಲಿ ಮತೀಯವಾದ ವಿಕೃತ ರೂಪ ತಾಳುತ್ತಾ ಬೆಳೆಯುತ್ತಿದ್ದ ಸಂದರ್ಭದಲ್ಲಿ ಹದಿನೈದು ವರ್ಷಗಳ ಹಿಂದೆ ಕೋಮು ಸೌಹಾರ್ಧ ವೇದಿಕೆಯನ್ನು ಹುಟ್ಟು ಹಾಕಿ ಹಗಲು ರಾತ್ರಿ ಶ್ರಮಿಸಿದರು. ಇತ್ತೀಚೆಗಿನ ವರ್ಷಗಳಲ್ಲಿ ಪದೇ ಪದೇ ಆರೋಗ್ಯ ಅವರಿಗೆ ಕೈ ಕೊಡುತ್ತಿತ್ತು. ಆದರೆ, ಯಾವುದೇ ಕಾರಣಕ್ಕೂ ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಕಳೆದ ಪೆಬ್ರವರಿ ತಿಂಗಳಿನಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ನಡೆದ ನನ್ನ ಮತ್ತು ಅವರ ಭೇಟಿಯು ಕೊನೆಯ ಭೇಟಿಯಾಯಿತು. ಕವಿಯಿತ್ರಿಯರಾದ ಹೆಚ್,ಎಲ್, ಪುಷ್ಪಾ ಮತ್ತು ಡಾ.ಕೆ. ಷರೀಫಾ ಜೊತೆ ಬಂದಿದ್ದ ಗೌರಿಯವರು ಅನಾರೋಗ್ಯದಿಂದ ತೀರಾ ಸೊರಗಿದ್ದರು.
ಇಂತಹ ಅನಾರೋಗ್ಯದ ನಡೆವೆಯೂ ಸಹ ಅವರು ಇತ್ತೀಚೆಗೆ ದೆಹಲಿಗೆ ಹೋಗಿ ಅಲ್ಲಿನ ಜವಹರಲಾಲ್ ನೆಹರೂ ವಿ.ವಿ.. ವಿದ್ಯಾರ್ಥಿಗಳಾದ ಮೇವೇಶ್ ಜಿಗ್ನಾನಿ, ಶೈಹ್ಲಾ ರಷೀದ್, ಕನಯ್ಯಾ ಇವರನ್ನು ಭೇಟಿ ಮಾಡಿ, ಇವರು ನನ್ನ ದತ್ತು ಮಕ್ಕಳು ಎಂದು ಘೋಷಿಸುವುದರ ಮೂಲಕ  ಅವರಿಗೆ ನೈತಿಕ ಬೆಂಬಲ ಸೂಚಿಸಿ ಬಂದಿದ್ದರು. ಗೌರಿ ಲಂಕೇಶ್ ಅವರ ದೆಹಲಿ ಭೇಟಿ ಮತ್ತು ವಿದ್ಯಾರ್ಥಿ ಸಂಘಟನೆಗೆ ಅವರು ನೀಡಿದ ಬೆಂಬಲ  ಹತ್ಯೆಗೆ ಕಾರಣವಾಗಿರಬಹುದೆ? ಅನುಮಾನ ನನ್ನನ್ನು ಸದಾ ಕಾಡುತ್ತಿದೆ. ಆದರೆ, ಬಂದೂಕಿನ ಮೂಲಕ ಧ್ವನಿ ಅಡಗಿಸಲು ಹೊರಟ ಮತಾಂಧರರು ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ. ವ್ಯಕಿಯನ್ನು ಮಾತ್ರ ಅವರು ಕೊಲ್ಲಬಲ್ಲರು ಆದರೆಅವರು ನಂಬಿದ್ದ ತತ್ವ ಸಿದ್ಧಾಂತಗಳನ್ನು ಕೊಲ್ಲಲಾಗದು. ಗಾಂಧಿಯನ್ನು ಹತ್ಯೆ ಮಾಡಲಾಯಿತೇ ವಿನಃ ಅವರ ನಂಬಿಕೆ, ಸಿದ್ಧಾಂತಗಳನ್ನು ಹತ್ಯೆ ಮಾಡಲಾಗಲಿಲ್ಲ. ಅವುಗಳು ಹಲವು ರೂಪದಲ್ಲಿ ಜನಮಾನಸದಲ್ಲಿ ಬೆಳೆಯುತ್ತಾ ಹೋಗುತ್ತವೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ