ಸೋಮವಾರ, ಜನವರಿ 23, 2017

ಭಾರತ ಮತ್ತು ಬಯಲು ಶೌಚಾಲಯ


ಹದಿನೇಳು ವರ್ಷಗಳ ಹಿಂದೆ ಅಂದರೆ, ಇದೇ  ಎರಡು ಸಾವಿರದ ಇಸವಿಯಲ್ಲಿ F DzsÀĤPÀ ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವಿಶ್ವ ಸಂಸ್ಥೆಶತಮಾನದ ಅಭಿವೃದ್ಧಿಯ ಗುರಿಗಳು( Millenium Devlopments Goals) ಎಂಬ ಹದಿನೈದು ವರ್ಷಗಳ ಯೋಜನೆಯನ್ನು ರೂಪಿಸಿತು. ಯೋಜನೆಯಲ್ಲಿ ಜಾಗತಿಕವಾಗಿ ಸಾಧಿಸಬೇಕಾದ  ಎಂಟು ವಿಷಯಗಳನ್ನು ಗುರಿಗಳನ್ನಾಗಿ ನಿರ್ಧರಿಸಲಾಗಿತ್ತು. ಅವುಗಳಲ್ಲಿ ಪ್ರಮಖವಾದವುಗಳೆಂದರೆ, ಬಡತನ ನಿವಾರಣೆ, ಲಿಂಗತಾರತಮ್ಯ ನಿವಾರಣೆ, ಮಹಿಳೆಯರಿಗೆ ಪುರುಷರಿಗೆ ಸಮಾನವಾಗಿ ಇರುವ ಹಕ್ಕುಗಳನ್ನು ಅಸ್ತಿತ್ವಕ್ಕೆ ತರುವುದು, ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವುದು, ಹೆರಿಗೆ ಸಂದರ್ಭದಲ್ಲಿನ ಮಹಿಳೆಯರ ಸಾವು ತಡೆಗಟ್ಟುವುದು, ಜಗತ್ತಿನ ಎಲ್ಲಾ ಪ್ರಜೆಗಳಿಗೆ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಹಾಗೂ ವಸತಿ ನಿರ್ಮಾಣಏಡ್ಸ್, ಹೆಚ್, , ವಿ ಒಳಗೊಂಡಂತೆ ಮಲೇರಿಯಾ, ವಾಂತಿ ಬೇಧಿ ಮುಂತಾದ ಕಾಯಿಲೆಗಳನ್ನು ತಡೆಗಟ್ಟುವುದು. ಹೀಗೆ ಜಗತ್ತಿನ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳ ವಿವಿಧ ರಂಗಗಳ ತಜ್ಙರ ನೇತೃತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಯಿತು. ಯೋಜನೆ ಜಾರಿಗೆ ಬಂದ ಏಳೂವರೆ ವರ್ಷಗಳ ನಂತರ ಕ್ರಮಿಸಿದ ಅರ್ಧ ದಾರಿಯಲ್ಲಿ ನಿಂತು, ಗುರಿಗಳ ಸಾಧನೆ ಕುರಿತು ನಡೆಸಿದ ಅಧ್ಯಯನ  ವರದಿ 2008ರಲ್ಲಿ ಪ್ರಕಟವಾಯಿತು. ವರದಿಯಲ್ಲಿ ತಜ್ಙರು ನಿರಾಸೆ ಮತ್ತು ಸಾಧಿಸಲಾಗದ ಅಸಹಾಯಕತೆಯನ್ನು ವ್ಯಕ್ತ ಪಡಿಸಿದ್ದರು. ಕೆಲವು ರಂಗಗಳಲ್ಲಿ ಯೋಜನೆ ವಿಫಲವಾಗಿತ್ತು. ( ನೋಡಿ- Millenium Devlopment goals Report-2008)   ವಿಶೇಷವಾಗಿ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ಥಾನ, ನೇಪಾಳ, ಬಂಗ್ಲಾ ಮುಂತಾದ ರಾಷ್ಟ್ರಗಳಲ್ಲಿ ಬಡತನ ನಿವಾರಣೆ ಮತ್ತು ಕುಡಿಯುವ ನೀರು, ಶೌಚಾಲಯ ಸಮಸ್ಯೆಗಳಲ್ಲಿ ಗಮನಾರ್ಹ ಬದಲಾವಣೆಯಾಗಿರಲಿಲ್ಲ. 2012 ವರದಿಯ ಪ್ರಕಾರ  ನೇಪಾಳ ಮತ್ತು ಶ್ರೀಲಂಕಾ ಒಂದಿಷ್ಟು ಪ್ರಗತಿ ಸಾಧಿಸಿವೆ. ಇಂತಹ ವೈಪಲ್ಯಗಳನ್ನು ಗುರಿಯಾಗಿಟ್ಟು ಕೊಂಡು ಭಾರತ ಸರ್ಕಾರ ಶೌಚಾಲಯ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲುನಿರ್ಮಲ್ ಭಾರತ್ ಅಭಿಯಾನ್ಎಂಬ ಆಂಧೋಲನವನ್ನು ಆರಂಭಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ ಇಪ್ಪತ್ತು ಲಕ್ಷ ಮನೆಗಳನ್ನು 35 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ  »A¢£À ಯು.ಪಿ.. ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಗಿರಿಜಾ ವ್ಯಾಸ್ ಘೋಷಿಸಿದ್ದರು.
ಭಾರತದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನೇತಾರರು ಬಣ್ಣ ಬಣ್ಣದ ಮಾತು ಮತ್ತು ಅಕರ್ಷಕ ಯೋಜನೆಗಳನ್ನು ಘೋಷಿಸಬಲ್ಲರೆ ಹೊರತು ಜಾರಿಯಾದ ಯೋಜನೆಗಳನ್ನು ಸುಸ್ಥಿಯಲ್ಲಿ ಕಾಪಾಡಿಕೊಳ್ಳಲು ಅಸಮರ್ಥರು. ದೇಶದ ಎಲ್ಲಾ ಸಮಸ್ಯೆಗಳಿಗೆ ಖಾಸಾಗಿಕರಣವೇ ಮದ್ದು ಎಂದು ನಂಬಿರುವ ಮಹಾನುಭಾವರು ಆದ್ಯತೆಯ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮುಂತಾವುಗಳನ್ನು ಖಾಸಾಗಿ ಕ್ಷೇತ್ರಕ್ಕೆ ಒಪ್ಪಿಸಿ ಕಣ್ಮುಚ್ಚಿ ಕುಳಿತ್ತಿದ್ದಾರೆ. ಇಂತಹವರ ಅಸಮರ್ಥತೆಯಿಂದಾಗಿ ಭಾರತದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ, ಆರೋಗ್ಯ, ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮಗಳಾಗಿ ದೇಶದ ಜ್ವಲಂತ ಸಮಸ್ಯೆಗಳಾಗಿ ಉಳಿದಿವೆ, ಮುಂದಕ್ಕೂ ಉಳಿಯುತ್ತವೆ.
ಭಾರತದ ಶೌಚಾಲಯ ಸಮಸ್ಯೆಗಳನ್ನು ಕುರಿತು. 2009ರಲ್ಲಿ ಏಷ್ಯಾ ಡೆವಲಪ್ ಮೆಂಟ್ ಬ್ಯಾಂಕ್ ಪ್ರಕಟಿಸಿರುವ ಅಧ್ಯಯನ ವರದಿIndia sanitation for All” ಹಾಗೂ ವಿಶ್ವ ಬ್ಯಾಂಕ್ 2011ರಲ್ಲಿ ಪ್ರಕಟಿಸಿರುವWater and sanitation program-2011 ಎಂಬ ಅಧ್ಯಯನಗಳು ಇಲ್ಲಿನ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿದಂತಿವೆ. ಜಗತ್ತಿನ ಇಪ್ಪತ್ತು ರಾಷ್ಟ್ರಗಳಲ್ಲಿ ಅಲ್ಲಿನ ಜನಸಂಖ್ಯೆಯ ಶೇಕಡ 35 ರಷ್ಟು ಜನ ಶೌಚಾಲಯದಿಂದ ವಂಚಿತರಾಗಿದ್ದರೆ, ಭಾರತದಲ್ಲಿ ಜನಸಂಖ್ಯೆಯ ಶೇಕಡ 53ರಷ್ಟು ಜನ ಶೌಚಾಲಯಗಳಲ್ಲದೆ ಬಯಲು ವಿಸರ್ಜನೆಯ ಮೊರೆ ಹೋಗುತ್ತಿದ್ದಾರೆ. ಇವರಲ್ಲಿ ಶೇಕಡ 74 ರಷ್ಟು ಜನಸಂಖ್ಯೆ ಭಾರತದ ಗ್ರಾಮಾಂತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಭಾರತದ ಇಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಐದು ವರ್ಷಗಳ ಕೆಳಗಿನ ಮಕ್ಕಳು ರೋಗರುಜಿನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕುತೂಹಲಕಾರಿಯಾದ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಇಂಗ್ಲೆಂಡಿನ ಸಸ್ಸೆಕ್ಸ್ ವಿ.ವಿ. Institute of Devlopment studies ವಿಭಾಗದ ರಾಬರ್ಟ್ ಛೆಂಬರ್ಸ್ ಎಂಬುವರು ಕುರಿತು ಅಧ್ಯಯನ ನಡೆಸಿದ್ದಾರೆ. ಯೂನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ. ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ , ನೈರ್ಮಲ್ಯದ ಕೊರತೆ ಹಾಗೂ ಜಲ ಮೂಲಗಳ ಶುಚಿತ್ವ ನಾಶಗೊಳ್ಳುತ್ತಿದ್ದು ಇವುಗಳ ನೇರ ಪರಿಣಾಮಕ್ಕೆ ಮಕ್ಕಳು  ಬಲಿಯಾಗುತ್ತಿದ್ದಾರೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ.
ಇದು ಭಾರತದ ವೈರುಧ್ಯವೆಂದರೂ ತಪ್ಪಾಗಲಾರದುಭಾರತದ ಸುಮಾರು 120ಕೋಟಿ ಜನಸಂಖ್ಯೆಗೆ 92 ಕೋಟಿ ಮೊಬೈಲ್ ಗಳಿಗೆ, ಆದರೆ,  ದೇಶದಲ್ಲಿ ಶೇಕಡ 50 ರಷ್ಟು ಶೌಚಾಲಯಗಳಿಲ್ಲ. ಈ ದೇಶದಲ್ಲಿ ಪ್ರತಿದಿನ ಅರ್ಥವಿಲ್ಲದ ಖಾಲಿಮಾತುಗಳಿಗೆ ಮೊಬೈಲ್ ಮೂಲಕ  ಜನ ಕೋಟ್ಯಾಂತರ ರೂಪಾಯಿ ಹಣ ವ್ಯಯಮಾಡುತ್ತಿದ್ದಾರೆ.   ಹಣದಲ್ಲಿ ತಮ್ಮ ಮನೆಗೊಂದು ಶೌಚಾಲಯ ಕಟ್ಟಿಸಬಹುದು ಎಂಬ ಜ್ಙಾನ ಕೂಡ ನಮ್ಮ ಜನರಿಗಿಲ್ಲ. ಪ್ರತಿದಿನ ಭಾರತದಲ್ಲಿ ಮೊಬೈಲ್ ಕಂಪನಿಗಳಿಗೆ ಹರಿದು ಹೋಗುತ್ತಿರುವ ಹಣದಲ್ಲಿ ಕನಿಷ್ಟ ದಿನವೊಂದಕ್ಕೆ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಬಯಲು ವಿಸರ್ಜನೆ ಗ್ರಾಮದಿಂದ ದೂರದ ಹೊಲ ಗದ್ದೆ, ಕೆರೆ ಕಟ್ಟೆ ಸಮೀಪ ನಡೆದರೆ, ನಗರಗಳಲ್ಲಿ ಮನೆಯ ಸಮೀಪ, ಅಥವಾ ರೈಲ್ವೆ ಹಳಿಗಳ ಸಮೀಪವೆ ನಡೆಯುತ್ತದೆ. ಮುಂಬೈ ನಗರಕ್ಕೆ ಬೆಳಗಿನ ಜಾವ ರೈಲಿನ ಮೂಲಕ ತಲುಪುವ ಪ್ರಯಾಣಿಕರಿಗೆ ನಗರದ ಹಳಿಗಳುದ್ದಕ್ಕೂ ಸಾಲಾಗಿ ಅಂಡು ತೋರಿಸುತ್ತಾ ಕುಳಿತ ಜನರು ಎದುರಾಗುತ್ತಾರೆ. ಇವರು ನಮಗೆ ಸ್ವಾಗತ ಕೋರುತ್ತಿದ್ದಾರಾ? ಅಥವಾ ಧಿಕ್ಕಾರದ ಪ್ರದರ್ಶನ ಮಾಡುತ್ತಿದ್ದಾರಾ? ಎಂಬ ಗೊಂದಲ ಕ್ಷಣಕಾಲ ಪ್ರಯಾಣಕರಲ್ಲಿ ಉಂಟಾದರೆ ಆಶ್ಚರ್ಯವಿಲ್ಲ.. ಕೊಳಗೇರಿಯಲ್ಲಿ ವಾಸಿಸುವ ಮಂದಿ ಎಷ್ಟು ನಿರ್ಲಿಪ್ತರೆಂದರೆ, ಅವರ ಗುಪ್ತಾಂಗಗಳನ್ನು ಪ್ರದರ್ಶನಕ್ಕಿಟ್ಟು ಕುಳಿತ ಅವರ ಮುಖದಲ್ಲಿ  ದಿಗಂಬರ ಜೈನ ಮುನಿಯ ಸ್ಥಿತಿ ಪ್ರಜ್ಙತೆ ಮನೆ ಮಾಡಿಕೊಂಡಿರುತ್ತದೆ.
ಇಂತಹ ಅಪಮಾನ ಹಾಗು ಆತಂಕಕಾರಿ ವಿಷಯಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಭಾರತ ವಿಶ್ವದ ಬಲಿಷ್ಟ ಆರ್ಥಿಕ ಬೆಳವಣಿಗೆಯ ರಾಷ್ಟ್ರ ಎಂದು ಪ್ರತಿಬಿಂಬಿಸಿಕೊಳ್ಳುವುದು ನಿಜಕ್ಕೂ ಆತ್ಮವಂಚನೆಯ ಕೆಲಸವಾಗುತ್ತದೆ. ಭಾರತದಲ್ಲಿ ಶೌಚಾಲಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಪ್ರತಿ ಮನೆಗೂ ಕಡ್ಡಾಯ ಮಾಡಲು ಅನೇಕ ಜಾಗತಿಕ ಸಂಸ್ಥೆಗಳು ಸಲಹೆ ಸೂಚನೆ ನೀಡಿವೆ. ಇದಲ್ಲದೆ, ಅನೇಕ ಯುವ ವಿಜ್ಙಾನಿಗಳು, ಸ್ವಯಂಸೇವಾ ಸಂಸ್ಥೆಗಳು ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ವೆಚ್ಚದ ಆಧುನಿಕ ತಂತ್ರಜ್ಙಾನ ಮತ್ತು ಪರಿಸರ ಸ್ನೇಹಿಯಾದ ಶೌಚಾಲಯದ ಉಪಕರಣಗಳನ್ನು ಅವಿಷ್ಕರಿಸಿದ್ದಾರೆ.ಇದರ ಪ್ರಯೋಜನವನ್ನು ನಮ್ಮ ಸರ್ಕಾರಗಳು ಪ್ರಮಾಣಿಕವಾಗಿ ಬಳಸಿಕೊಳ್ಳಬೇಕು. ನಗರಗಳಲ್ಲಿ ವಸತಿ ಸಮಸ್ಯೆಯಿಂದಾಗಿ ಕೊಳಗೇರಿಗಳಲ್ಲಿ ವಾಸಿಸುವ ಬಡವರಿಗೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಗ್ರಾಮಾಂತರ ಪ್ರದೇಶದ ಜನತೆಯಲ್ಲಿ ಬಯಲು ಮಲ ವಿಸರ್ಜನೆಯ ಪರಿಣಾಮಗಳನ್ನು ತಿಳಿಸಿ ಶೌಚಾಲಯಗಳನ್ನು ಹೊಂದುವಂತೆ ಅವರ ಮನ ಒಲಿಸಬೇಕು. ಕೆಲಸ ಮಾಡಬೇಕಾದ ಸರ್ಕಾರದ ಕಛೇರಿಗಳ ಶೌಚಾಲಯಗಳು, ಬಸ್ ನಿಲ್ದಾಣದ ಶೌಚಾಲಯಗಳು, ಮತ್ತು ನಗರ ಸಭೆ, ಮಹಾನಗರ ಪಾಲಿಕೆ ನಿರ್ಮಿತ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವಾಗ ಜನತೆ ಸರ್ಕಾರದ ಮಾತುಗಳನ್ನು ಕೇಳಬಲ್ಲರೆ? ಇದು ಸಧ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ. ಈಗಿನ ನಮ್ಮ ಸರ್ಕಾರದ ಯೋಜನೆಗಳು ಹೇಗಿವೆಯೆಂದರೆ, ತಿಪ್ಪೆಗುಂಡಿಯ ಮೇಲೆ ನಿಂತು ಶುಚಿತ್ವದ ಪಾಠ ಹೇಳುವ ಮೂರ್ಖ ಶಿಖಾಮಣಿಯ ಚಿಂತನೆಗಳಂತಿವೆ.

ಸರ್ಕಾರಗಳ ಇಂತಹ ಅವಿವೇಕಗಳ ಪರಿಣಾಮವಾಗಿ ಭಾರತದ ಪ್ರಜೆ ವರ್ಷವೊಂದಕ್ಕೆ ಸರಾಸರಿ 48 ಡಾಲರ್ ಹಣವನ್ನು ( ಅಂದಾಜು ಮೂರುಸಾವಿರ ರೂಪಾಯಿ) ನೈರ್ಮಲ್ಯ ಕೊರತೆಯಿಂದಾದ ರೋಗ ರುಜಿನಗಳಿಗೆ ವ್ಯಯಮಾಡುತ್ತಿದ್ದಾನೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದ ಶೇಕಡ ಆರರಷ್ಟಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಪ್ರಮಾಣ ಕೇವಲ ಶೇಕಡ ಒಂದರಿಂದ ಎರಡರಷ್ಟಿದೆ. ಭಾರತದ ಗ್ರಾಮಾಂತರ ಪ್ರದೇಶಗಳ ಸ್ಥಿತಿ ಗತಿ ಹಿಂದೆಂದಿಗಿಂತಲೂ ಈಗ  ಶೋಚನೀಯವಾಗಿದೆ ಎಂಬ ಕಟು ವಾಸ್ತವ ಸಂಗತಿಯನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಲು, ಮಾನಸಿಕರಾಗಿ ಸಿದ್ದರಾಗಿಲ್ಲ. ಆದರೆ, ಗ್ರಾಮಭಾರತದ ಎಲ್ಲಾ ನೋವು, ಸಂಕಟಗಳಿಗೆ ನೇರ ಬಲಿಯಾಗುತ್ತಿರುವವರು ನಮ್ಮ ಮಹಿಳೆಯರು. JA§ÄzÀ£ÀÄß £ÁªÀÅ ªÀÄ£ÀUÁt¨ÉÃQzÉ.  ಇವೊತ್ತಿಗೂ,ನಮ್ಮ ಗ್ರಾಮಭಾರತದ  ಮಹಿಳೆಯರು ಕುಡಿಯುವ ನೀರಿಗಾಗಿ, ಮತ್ತು ಉರವಲು ಕಟ್ಟಿಗೆಗಾಗಿ ಪ್ರತಿದಿನ ಆರರಿಂದ ಎಂಟು ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಾರೆ ಎಂಬ ಸತ್ಯವನ್ನು ವರ್ತಮಾನದ ಸಮಾಜಕ್ಕೆ ಮನದಟ್ಟು ಮಾಡಿಕೊಡುವುದು ನಿಜಕ್ಕೂ ತ್ರಾಸದಾಯಕ ಸಂಗತಿ.
 ದೇಶದ ಬಹುತೇಕ ದಲಿತರು, ಹಿಂದುಳಿದ ವರ್ಗದ ಕುಟುಂಬಗಳು, ಮತ್ತು ಆದಿವಾಸಿ ಜನಾಂಗ ನಿಸರ್ಗದಲ್ಲಿ ಸಿಗುವ ಸೌದೆ ಮತ್ತು ಜಾನುವಾರುಗಳ ಸಗಣಿಯನ್ನು ತಮ್ಮ ದಿನನಿತ್ಯದ ಅಡುಗೆಯ ಬಳಕೆಗಾಗಿ ಅವಲಂಬಿಸಿವೆ. ಇದರಿಂದಾಗಿ ಹದಗೆಟ್ಟ ಬಡವರ ಆರೋಗ್ಯ ಸಧ್ಯದ ಸ್ಥಿತಿಯಲ್ಲಿ ದೇಶದ ಅಪೌಷ್ಟಿಕತೆ ಮತ್ತು ಕಲುಷಿತ ನೀರು ಸೇವನೆ ಹಾಗೂ ಶೌಚಾಲಯ ಸಮಸ್ಯೆಯ ನಂತರ ಮೂರನೇ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.

( ಕರಾವಳಿ ಮುಂಜಾವು ದಿನ ಪತ್ರಿಕೆಯ " ಜಗದಗಲ" ಅಂಕಣಕ್ಕೆ ಬರೆದ ಲೇಖನ)



ಗುರುವಾರ, ಜನವರಿ 5, 2017

ಭಾರತದ ಕ್ರೀಡಾ ಸಂಸ್ಥೆಗಳೆಂಬ ಕಳ್ಳರ ಕೂಟಗಳು



ಇದನ್ನು ನೀವು ಈ ದೇಶದ ನಾಗರೀಕರ ಪ್ರಜ್ಞೆಗೆ ಆವರಿಸಿಕೊಂಡಿರುವ ವಿಸ್ಮೃತಿ ಎಂದು ಬೇಕಾದರೂ ಕರೆಯಬಹುದು ಇಲ್ಲವೆ ಭಾರತದ ಕೀಡಾರಂಗಕ್ಕೆ ತಟ್ಟಿರುವ ಹಾಗೂ ವಿಮೋಚನೆಯಾಗದ  ಶಾಪ ಎಂದು ಸಹ ಕರೆಯಬಹುದು. ಏಕೆಂದರೆ, ಕಳೆದ ವಾರ ಭಾರತದ ಒಲಿಂಪಿಕ್ ಕ್ರೀಡಾ ಸಂಸ್ಥೆಗೆ ಇಬ್ಬರು ಕಳಂಕಿತರು ಮಾತ್ರವಲ್ಲ, ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಸಂಪಾದನೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌತಾಲ ಎಂಬುವರನ್ನು ಜೀವಿತಾವಧಿಗೆ ಗೌರವ ಅಧ್ಯಕ್ಷರನ್ನಾಗಿ ಮಾಡಿರುವ ವಿಷಯ ಭಾರತದ ನಾಗರೀಕರು ತಲೆ ತಗ್ಗಿಸುವ ಸಂಗತಿ. ಮೂಲತಃ ಕನ್ನಡಿಗರಾಗಿದ್ದು ಪುಣೆಯಲ್ಲಿ ಉದ್ಯಮಿಯಾಗಿರುವ ಸುರೇಶ್ ಕಲ್ಮಾಡಿ ಕಾಂಗ್ರೇಸ್ ಪಕ್ಷದ ವತಿಯಿಂದ ರಾಜ್ಯ ಸಭೆಯ ಸದಸ್ಯರಾಗಿದ್ದರು. ಭಾರತದ ಒಲಿಂಪಿಕ್ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ 45 ಕೋಟಿ ರೂಪಾಯಿನಷ್ಟು ಅಕ್ರಮವೆಸಗಿ ಹತ್ತು ತಿಂಗಳು ಕಾಲ ಜೈಲು ವಾಸ ಅನುಭವಿಸಿದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಕಲ್ಮಾಡಿ ಈಗಲೂ ಸಹ ವಿಚಾರಣೆ ಎದುರಿಸುತ್ತಿದ್ದಾರೆ. ಹರಿಯಾಣ ಮೂಲದ ಶಾಸಕರಾಗಿರುವ ಅಭಯ್ ಚೌತಾಲ ಮೇಲೆ ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ನ್ಯಾಯಾಲಯದಲ್ಲಿ ಅರ್ಧ ಡಜನ್ ಗೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳು ಇವೆ.
ಕಳೆದ ವಾರ ಚೆನ್ನೈ ನಗರದಲ್ಲಿ ನಡೆದ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಇಬ್ಬರು ಕಳಂಕಿತರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವ ಒಲಿಂಪಿಕ್ ಕ್ರೀಡಾ ಸಂಸ್ಥೆಯ ಸದಸ್ಯರೆಂಬ  ಮಹನೀಯರನ್ನು ಭಾರತದ ಜನತೆ “ ನೀವು ಹೊಟ್ಟೆಗೆ ಏನು ತಿನ್ನುತ್ತೀರಾ?” ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ. ಭಾರತದ ಕ್ರೀಡೆಗಳ ಕುರಿತಂತೆ ಮತ್ತು ಅವುಗಳ ಮಹತ್ವ, ಹಾಗೂ ಕ್ರೀಡೆಗಳ ಹಿಂದೆ ಇರುವ ಭಾರತದ ಯುವಜನಾಂಗದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಪತ್ತು  ಇವುಗಳ ಕುರಿತು ಎಳ್ಳಷ್ಟು ಜ್ಞಾನವಿಲ್ಲದ ಇಂತಹ ಅವಿವೇಕಿಗಳು ಇಂದು ಭಾರತದ ಕ್ರೀಡಾಸಂಸ್ಥೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಭಾರತದ ನೂರ ಇಪ್ಪತ್ತು ಕೋಟಿ ಜನಸಂಖ್ಯೆಯಲ್ಲಿ ಕ್ರೀಡೆಗಳಿಂದ ವಿಶೇಷವಾಗಿ  ಓಟ, ಲಾಂಗ್ ಜಂಪ್, ಹೈ ಜಂಪ್, ಮುಂತಾದ ಸ್ಪರ್ಧೆಗಳಲ್ಲಿ  ಈವರಗೆ ಚಿನ್ನದ ಪದಕ ಬೇಡ ,ಕನಿಷ್ಟ ಒಂದು ಕಂಚಿನ ಪದಕವನ್ನು ತಂದು ಕೊಡುವ ಒಬ್ಬ ಕ್ರೀಡಾಪಟುವನ್ನು ನಾವು ತಯಾರು ಮಾಡಿಲ್ಲ ಎಂಬ ವಿಷಯವು ನಮಗೆ ನಾಚಿಕೆಗೆಡಿನ ಸಂಗತಿ ಎಂದು ಅನಿಸಲಿಲ್ಲ. ಏಕೆಂದರೆ, ಕ್ರೀಡೆ ಎಂದರೆ ಕೇವಲ ಕ್ರಿಕೇಟ್ ಎಂಬ ಭ್ರಮೆಯಲ್ಲಿ ನಾವು ಮುಳುಗಿ ಏಳುತ್ತಿದ್ದೇವೆ. ನಮ್ಮ ಮಾಧ್ಯಮಗಳು ಸಹ ಇದನ್ನೇ ಪ್ರತಿಬಿಂಬಿಸುತ್ತಾ ಭಾರತೀಯರ ಮಿದುಳನ್ನು ತೊಳೆಯುವ ಕ್ರಿಯೆಯಲ್ಲಿ ನಿರತವಾಗಿವೆ.
ಈವರೆಗೆ ಒಲಂಪಿಕ್ ಕ್ರೀಡಾ ಇತಿಹಾಸದಲ್ಲಿ ಅಂದರೆ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆದಿರುವ ಒಟ್ಟು  ಮುವತ್ತು ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತಕ್ಕೆ ಈವರೆಗೆ ಒಂಬತ್ತು ಚಿನ್ನ, ಆರು ರಜತ ಮತ್ತು  ಹನ್ನೊಂದು ಕಂಚಿನ ಪದಕಗಳು ಸೇರಿದಂತೆ ಒಟ್ಟು ಇಪ್ಪತ್ತಾರು ಪದಕಗಳು ಲಭ್ಯವಾಗಿವೆ. ಇವುಗಳಲ್ಲಿ ಹಾಕಿಯಲ್ಲಿ ಭಾರತ ತಂಡ ಈವರೆಗೆ ಎಂಟು ಚಿನ್ನ, ಒಂದು ರಜತ ಹಾಗೂ ಎರಡು ಕಂಚಿನ ಪದಕವನ್ನು ಗೆದ್ದಿದೆ. 1928 ರಿಂದ 1980 ರವರೆಗೆ ಎಂಟು ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡವು 1980 ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಂತರ ತನ್ನ ಸಾರ್ವ ಭೌಮತ್ವವನ್ನು ಕಳೆದುಕೊಂಡಿತು. ಇದನ್ನು ಹೊರತು ಪಡಿಸಿದರೆ, ಬೆರಣಿಕೆಯಷ್ಟು ಕ್ರೀಡಾ ಪಟುಗಳು ತಮ್ಮ ವೈಯಕ್ತಿಕ ಶ್ರಮ ಮತ್ತು ಸಾಧನೆಯಿಂದ  ಒಲಂಪಿಕ್ ಕ್ರೀಡೆಯಲ್ಲಿ ಪದಕಗಳಿಗೆ ಮುತ್ತಿಟ್ಟಿದ್ದಾರೆ. 1952 ರ ಒಲಿಂಪಿಕ್ ನಲ್ಲಿ ದಾದಾ ಸಾಹೇಬ್ ಎಂಬ ಕುಸ್ತಿ ಪಟು ಕಂಚಿನ ಪದಕ, 1996 ರಲ್ಲಿ ಲಿಯಾಂಡರ್ ಪೇಸ್ ಟೆನ್ನಿಸ್ ನಲ್ಲಿ ಕಂಚಿನ ಪದಕ, 2000 ರ ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಆಂಧ್ರಪ್ರದೇಶದ  ಕರ್ಣಂ ಮಲ್ಲೇಶ್ವರಿ ವೇಯ್ಟ್ ಲಿಪ್ಟಿಂಗ್ ನಲ್ಲಿ ಕಂಚು, 2004 ರಲ್ಲಿ ರಾಜವರ್ಧನ್ ರಾಠೋಡ್ ಶೋಟಿಂಗ್ ನಲ್ಲಿ ರಜತ ಪದಕ ಮತ್ತು 2008 ರಲ್ಲಿ ಅಭಿನವ ಬಿಂದ್ರಾ ಶೂಟಿಂಗ್ ನಲ್ಲಿ ಪ್ರಪಥಮವಾಗಿ ಚಿನ್ನದ ಪದಕ ಗೆದ್ದುಕೊಟ್ಟರು. 2008 ರ ಒಲಿಂಪಿಕ್ಸ್ ಕ್ರೀಡೆಯಲ್ಲಿ ವಿಜೇಂದರ್ ಸಿಂಗ್ ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದರು. 2012 ರ ಕ್ರೀಡಾಕೂಟದಲ್ಲಿ ಪ್ರಥಮ ಬಾರಿಗೆ ಆರು ಪದಕಗಳನ್ನು ಗೆಲ್ಲುವುದರ ಮೂಲಕ ಭಾರತದ ಕ್ರೀಡಾಪಟುಗಳು ದಾಖಲೆ ನಿರ್ಮಿಸಿದರು. ಗಗನ್ ನಾರಂಗ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು, ವಿಜಯಕುಮಾರ್ ರೈಫಲ್ ಶೋಟಿಂಗ್ ನಲ್ಲಿ ರಜತ, ನೈನಾ ಸೆಹ್ವಾಲ್ ಟೆನ್ನಿಸ್ ನಲ್ಲಿ ರಜತ, ಕುಸ್ತಿ ವಿಭಾಗದಲ್ಲಿ ಯೋಗೇಶ್ವರ್ ದತ್ ಕಂಚು ಮತ್ತು ಸುಶೀಲ್ ಕುಮಾರ್ ರಜತ ಗೆದ್ದುಕೊಟ್ಟರೆ, ಮೇರಿ ಕೋಂ. ಮಹಿಳಾ ಬಾಕ್ಷಿಂಗ್ ಸ್ಪರ್ಧೆಯಲ್ಲಿ ಕಂಚಿ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. 2016 ರ ರಿಯೋ ಒಲಿಂಪಿಕ್ಸ್ ಕ್ರೀಡೆಗೆ ದಾಖಲೆ ಎನ್ನಬಹುದಾದ  119 ಮಂದಿ ಕ್ರೀಡಾ ಪಡುಗಳು ಭಾಗವಹಿಸಿದ್ದರು. ಆದರೆ, ಇಬ್ಬರು  ಮಹಿಳಾ ಕ್ರೀಡಾ ಪಟುಗಳು ಭಾರತದ ಮಾನ ಕಾಪಾಡಿದರು. ಇವರಲ್ಲಿ ಪಿ.ವಿ.ಸಿಂಧು ಬ್ಯಾಡ್ ಮಿಂಟನ್ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದರೆ, ಪಂಜಾಬಿನ ಸಾಕ್ಷಿ ಎಂಬ ಹೆಣ್ಣು ಮಗಳು ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಳು.
ಒಲಿಂಪಿಕ್ ಕ್ರೀಡಾಕೂಟದದಲ್ಲಿ ವಿಜೇತರಾಗಿರುವ ಬಹುತೇಕ ಕ್ರೀಡಾಪಟುಗಳ  ಸಾಧನೆಯ ಹಿಂದೆ ಅವರ ಹೆತ್ತ ತಂದೆ ತಾಯಿಗಳ ತ್ಯಾಗ, ಕೋಚ್ ಗಳ ಶ್ರದ್ಧೆ ಹಾಗೂ ಗೆದ್ದೇ ಗೆಲ್ಲುವನೆಂಬ ಕ್ರೀಡಾಪಟುಗಳ ಛಲ ಇವುಗಳು ಎದ್ದು ಕಾಣುತ್ತವೆ. ಆದರೆ, ಭಾರತದ ಯಾವುದೇ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಪಾತ್ರ ವಹಿಸಿರುವುದು ಅಥವಾ ಕ್ರೀಡಗೆ ಬೆಂಬಲವಾಗಿ ನಿಂತಿರುವುದು  ಕಂಡು ಬರುವುದಿಲ್ಲ. ಭಾರತದ ಕ್ರಿಕೇಟ್, ವಾಲಿಬಾಲ್, ಪುಟ್ಬಾಲ್, ಹಾಕಿ ಫೇಡರೇಶನ್, ಸೇರಿಂದತೆ ಬಹುತೇಕ ಕ್ರೀಡಾ ಸಂಸ್ಥೆಗಳಲ್ಲಿ ಭಾರತದ ಕಳಂಕಿತ ರಾಜಕಾರಣಿಗಳು ಸೇರಿಕೊಂಡಿದ್ದು ಭಾರತದ ಕ್ರೀಡೆಗಳನ್ನು ಹಳ್ಳ ಹಿಡಿಸುವುದರ ಜೊತೆಗೆ ಕ್ರಿಕೇಟ್ ನಂತಹ ಜನಪ್ರಿಯ ಕ್ರೀಡೆಯನ್ನು ಜೂಜಿನ ಕ್ರೀಡೆಯಾಗಿ ಪರಿವರ್ತಿಸಿದ್ದಾರೆ. ಭಾರತ ಕ್ರಿಕೇಟ್ ನಿಯಂತ್ರಣ ಮಂಡಳಿಯನ್ನು ಹೊರತು ಪಡಿಸಿದರೆ,ಬಹುತೇಕ ಕ್ರೀಡಾ ಸಂಸ್ಥೆಗಳು ಕೇಂದ್ರ ಸರ್ಕಾರದ ಧನ ಸಹಾಯದ ಮೂಲಕ ಅಸ್ತಿತ್ವದಲ್ಲಿವೆ.ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕೂಡ ಭಾರತದ ಕ್ರೀಡೆಗಳ ಅವನತಿಗೆ ಪರೋಕ್ಷವಾಗಿ ಕಾರಣವಾಗಿದೆ. ಭಾರತದ ಕ್ರಿಕೇಟ್ ಮಂಡಳಿಯನ್ನು ಸ್ವಚ್ಛಗೊಳಿಸಲು ಸುಪ್ರೀಂ ಕೊರ್ಟ್ ಬೀಸಿರುವ ಚಾಟಿಯೇಟುಗಳು ಇದೀಗ ಭಾರತದ ಇತರೆ  ಕ್ರೀಡಾ ಸಂಸ್ಥೆಗಳ ಮೇಲೂ ಬೀಳಬೇಕಾಗಿದೆ.

ಒಂದು ಕಾಲದಲ್ಲಿ ಸಭ್ಯ ಕ್ರೀಡೆ ಎನಿಸಿಕೊಂಡಿದ್ದ ಕ್ರಿಕೆಟ್ ಪಂದ್ಯವನ್ನು ಟೆಸ್ಟ್ ಪಂದ್ಯಗಳಿಂದ  ಐವತ್ತು ಓವರ್ ಗಳ ಪಂದ್ಯಗಳನ್ನಾಗಿ ಪರಿವರ್ತಿಸಿ ಜನಪ್ರಿಯಗೊಳಿಸಲಾಯಿತು. ಈ ಪಂದ್ಯಕ್ಕೆ ಸಿಕ್ಕ ಜನಪ್ರಿಯತೆ ಹಾಗೂ ಜಾಹಿರಾತು ಕಂಪನಿಗಳು ಹರಿಸಿದ   ಹಣದ ಹೊಳೆ  ಇವೆಲ್ಲವೂ ಕ್ರಿಕೆಟ್ ನ ಚಹರೆಯನ್ನು ಬದಲಾಯಿಸಿತು. ನಂತರ ರಾಜಸ್ಥಾನ ಮೂಲದ ಲಲಿತ್ ಮೋದಿ ಎಂಬ ಮಹಾ ಚಾಣಾಕ್ಷನೊಬ್ಬ ಐವತ್ತು ಓವರ್ ಪಂದ್ಯವನ್ನು ಇಪ್ಪತ್ತು ಓವರ್ ಗಳಿ ಗೆ ಇಳಿಸುವುದರ ಮೂಲಕ ಕ್ರಿಕೇಟ್ ಎಂಬ ಕ್ರೀಡೆಯನ್ನು ಜೂಜಾಟವನ್ನಾಗಿ ಪರಿವರ್ತಿಸಿದ. ಪಂದ್ಯಗಳ ಪ್ರಸಾರದ ಹಕ್ಕು, ತಂಡಗಳ ಹರಾಜು, ಮತ್ತು ಈ ಪಂದ್ಯಗಳಿಗೆ ಹರಿದು ಜನಸಾಗರದಿಂದ ಕ್ರಿಕೆಟ್ ಮಂಡಳಿಯ ಖಜಾನೆ ತುಂಬಿ ತುಳುಕಾಡತೊಡಗಿತು. ಇದರಿಂದಾಗಿ ಮಂಡಳಿಗಳಿಗೆ ಮಾಜಿ ಕ್ರೀಡಾ ಪಟುಗಳ ಬದಲಾಗಿ  ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾತ್ರವಲ್ಲದೆ, ರಾಜ್ಯ ಮಟ್ಟದ ಕ್ರೀಡಾ ನಿಯಂತ್ರಣ ಮಂಡಳಿಗಳಿಗೆ  ದೇಶದ ರಾಜಕಾರಣಿಗಳು, ಮತ್ತು ಕೈಗಾರಿಕೋದ್ಯಮಿಗಳು ಕಾಲಿಟ್ಟರು.. ಕೊಲ್ಕತ್ತ ಮೂಲದ  ಜಗನ್ಮೋಹನ್ ದಾಲ್ಮಿಯಾ, ಚೆನ್ನೈ ಮೂಲದ ಶ್ರೀನಿವಾಸನ್ ಎಂಬ ಉದ್ಯಮಿಗಳು ಭಾರತ ಕ್ರಿಕೇಟ್ ಮಂಡಳಿಗೆ ನುಸುಳಿದರು.  ಮುಂಬೈ ಕ್ರಿಕೇಟ್ ಮಂಡಳಿಗೆ ಶರದ್ ಪವಾರ್, ದೆಹಲಿ ಕ್ರಿಕೆಟ್ ಮಂಡಳಿಗೆ ಅರುಣ್ ಜೇಟ್ಲಿ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ರಂತಹ ರಾಜಕಾರಣಿಗಳು ಪ್ರವೇಶ ಪಡೆದು ಭಾರತದ ಕ್ರಿಕೇಟ್ ಅನ್ನು ಒಂದು ಬೃಹತ್ ಉದ್ಯಮವನ್ನಾಗಿ ಪರಿವರ್ತಿಸಿ, ಅದರ ಸೂತ್ರಗಳನ್ನು ತಮ್ಮ ಕೈಗೆತ್ತಿಕೊಂಡಿದ್ದರು. ಅದೃಷ್ಟವಶಾತ್ ಇದೀಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಹಲವು ಮಹತ್ವದ ನಿಯಾಮವಳಿಗಳನ್ನು ರೂಪಿಸಿ ಎಲ್ಲರನ್ನು ಕಸ ಗುಡಿಸಿ ಹಾಕುವಂತೆ   ಮಂಡಳಿಯಿಂದ  ಹೊರಗೆ ಬಿಸಾಕಿದೆ. ಎಪ್ಪತ್ತು ವರ್ಷ ದಾಟಿದ ವ್ಯೆಕ್ತಿಗಳು ನಿಯಂತ್ರಣ ಮಂಡಳಿಯಲ್ಲಿ ಇರಬಾರದು, ಕ್ರೀಡೆಗೆ ಸಂಬಂಧ ಪಡೆದ ವ್ಯೆಕ್ತಿಗಳು ಆಯ್ಕೆ ಸಮಿತಿಯಲ್ಲಿ  ಸ್ಥಾನ ಪಡೆಯಬಾರದು ಹಾಗೂ ಮೂರು ವರ್ಷದ ಅವಧಿಗಿಂತ ಹೆಚ್ಚಿನ ಕಾಲ ಅಧಿಕಾರದಲ್ಲಿ ಮುಂದುವರಿಯಬಾರದು ಎಂಬ ಮಹತ್ವದ ನಿರ್ಣಯವನ್ನು ಜಾರಿಗೆ ತಂದಿದೆ. ಭಾರತದ ಕ್ರಿಡೆಗಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಇಂತಹ ಶಿಫಾರಸ್ಸುಗಳನ್ನು ಸೂಚಿಸಿದ ಮಾಜಿ ನ್ಯಾಯ ಮೂರ್ತಿ ಲೋಧಾ ನೇತೃತ್ವದ ಸಮಿತಿಗೆ ಮತ್ತು ಈ ಶಿಫಾರಸ್ಸುಗಳಿಗೆ ಅಂಕಿತ ಹಾಕಿದ ಸುಪ್ರೀಂ ಕೋರ್ಟಿಗೆ ಭಾರತೀಯರು ಸದಾ ಕೃತಜ್ಞರಾಗಿರಬೇಕು. ಇಂತಹದ್ದೇ ಶಿಫಾರಸ್ಸುಗಳು ಭಾರತದ ಕ್ರೀಡಾ ಸಂಸ್ಥೆಗಳಲ್ಲಿ ಜಾರಿಗೆ ಬರುವುದರ ಮೂಲಕ ಮಾಜಿ ಕ್ರೀಡಾಪಟುಗಳ ನೇತೃತ್ವದಲ್ಲಿ ನಡೆಯುವಂತಾಗಬೇಕು. ಇದು ಜಾರಿಗೆ ಬಂದರೆ, ಕಳ್ಳಕಾಕರ ಗೂಡಾಗಿರುವ ಭಾರತದ ಕ್ರೀಡೆಗೆ ಮೋಕ್ಷ ಸಿಕ್ಕಂತಾಗುತ್ತದೆ.

 ( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣದಿಂದ)

ಗುರುವಾರ, ಡಿಸೆಂಬರ್ 29, 2016

ಸುದ್ದಿ ಮನೆಯ ದಾವಂತದಲ್ಲಿ ಬಸವಳಿಯುತ್ತಿರುವ ಭಾಷೆ



ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ  ಕಾಲಕ್ಕೆ  ತಕ್ಕಂತೆ ಬದಲಾವಣೆಯಾಗುತ್ತಿದ್ದಂತೆ ಸಂವಹನ ಮಾಧ್ಯಮಗಳ ಕಾರ್ಯ ವೈಖರಿಯಿಂದ ಹಿಡಿದು, ಅವುಗಳ ಸಂವಹನ ಭಾಷೆ ಕೂಡ ಬದಲಾಗುತ್ತಿದೆ. ಇದು ಜಗದ ನಿಯಮ ಕೂಡ ಹೌದು. ಆದರೆ, ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ನಾವು ಬಳಸುವ ಸಂಹವನದ ಭಾಷೆಯ ಮೇಲೆ ಎಚ್ಚರಿಕೆ ಮತ್ತು ನಿಗಾ ಇರಬೇಕಾದದ್ದು ಕೂಡ ಅಗತ್ಯವಾಗಿದೆ. ಸುದ್ಧಿ ಮನೆಗಳು ಅಂದರೆ, ಅದು ದೃಶ್ಯ ಮಾಧ್ಯಮವಾಗಿರಲಿ, ಪತ್ರಿಕಾ ಮಾಧ್ಯಮವಾಗಿರಲಿ ಅಥವಾ ಆಕಾಶವಾಣಿ ಕೇಂದ್ರವಾಗಿರಲಿ ಈ ಎಲ್ಲಾ ಮಾಧ್ಯಮಗಳ ಮೇಲೆ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ನೈತಿಕ ಜವಾಬ್ದಾರಿಯಿರುತ್ತದೆ.
ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ  ಕ್ಷಿಪ್ರಕ್ರಾಂತಿಯ ಫಲವಾಗಿ, ಜಗತ್ತಿನ ಮಾಹಿತಿಗಳೆಲ್ಲವೂ ಇಂದು ಮನುಷ್ಯನ ಬೆರಳ ತುದಿಗೆ ಬಂದು ಕೂತಿವೆ. ಇಡೀ ಜಗತ್ತೇ ಕಿರಿದಾಗಿ ಒಂದು ಹಳ್ಳಿ ಎಂಬ ಕಲ್ಪನೆ ಎಲ್ಲರ ಮನದಲ್ಲಿ ಸಾಕಾರಗೊಳ್ಳುತ್ತಿದೆ.  ಅದರಲ್ಲೂ ಇತ್ತೀಚೆಗಿನ ಸಾಮಾಜಿಕ ತಾಣಗಳು ಅಂದರೆ, ವಿಶೇಷವಾಗಿ ಫೇಸ್ ಬುಕ್, ಟ್ವಿಟ್ಟರ್, ವ್ಯಾಟ್ಸ್ ಅಪ್, ಬ್ಲಾಗ್  ಮುಂತಾದ ತಾಣಗಳು ಸುದ್ಧಿಮನೆಗೆ ಪರ್ಯಾಯವಾಗಿ ಅಂದರೆ, ಮಾಧ್ಯಮ ರಂಗಕ್ಕೆ ಪರ್ಯಾಯವಾಗಿ  ಕಾರ್ಯ ನಿರ್ವಹಿಸತೊಡಗಿವೆ. ಇದರಿಂದಾಗಿ ಸುದ್ಧಿಮನೆಗಳ ಮುಖ್ಯಸ್ಥರಿಗೆ  ಓದುಗರಿಗೆ, ,ವೀಕ್ಷರಿಗೆ ಅಥವಾ ಕೇಳುಗರಿಗೆ ಏನನ್ನು ನೀಡಬೇಕು? ಯಾವ ರೀತಿಯಲ್ಲಿ ನೀಡಬೇಕು ಹಾಗೂ ನಾವು ನೀಡುವ ವಿಷಯ ಎಷ್ಟು ಅವಧಿಯನ್ನು ಒಳಗೊಂಡಿರಬೇಕು ಎಂಬುದರಿಂದ ಹಿಡಿದು, ಭಾಷೆ, ವಿಷಯ ಹೀಗೆ ಅನೇಕ  ಸವಾಲುಗಳನ್ನು ಸುದ್ಧಿಮನೆಯ ಮುಖ್ಯಸ್ಥರ ಮುಂದೆ ಇಟ್ಟಿವೆ. ಜೊತೆಗೆ ನಾವು ಬಳಸುವ ಭಾಷೆ ಗುಣಮಟ್ಟ ಕುರಿತಂತೆ ಹಲವು ಜಿಜ್ಞಾಸೆಗಳನ್ನು ತಂದೊಡ್ಡಿವೆ.
ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಡುತ್ತಿದ್ದಂತೆ, ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಅನಿರೀಕ್ಷಿತ ಬದಲಾವಣೆಗಳಾದವು. ಹಿಂದೆ ಸುದ್ಧಿಗಳ ನಡುವೆ ಜಾಹಿರಾತುಗಳು ಇದ್ದ ಕಾಲವಿತ್ತು. ಇದೀಗ ಜಾಹಿರಾತುಗಳ ನಡುವೆ ಸುದ್ಧಿಗಳನ್ನು ಓದುವ, ಕೇಳುವ, ನೋಡುವ ಕಾಲಘಟ್ಟದಲ್ಲಿ ನಾವಿದ್ದೀವಿ.  ಹಾಗಾಗಿ ಎಲ್ಲವೂ ಸಂಕ್ಷಿಪ್ತವಾಗಿರಬೇಕು ಮತ್ತು ಓದುಗರ ಅಥವಾ ಕೇಳುಗರ ಮನಕ್ಕೆ ತಾಕುವಂತೆ ಇರಬೇಕು ಎಂಬ ಮನಸ್ಥಿತಿಯಲ್ಲಿ ಇಂದಿನ ಸುದ್ಧಿ ಮಾಧ್ಯಮ ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಹಾಗಾಗಿ ಪತ್ರಿಕೆ ಅಥವಾ ದೃಶ್ಯ ಮಾಧ್ಯಮದ ಭಾಗವಾದ ಛಾನಲ್ ಗಳಲ್ಲಿ ನಾವು ಬಳಸುವ ಭಾಷೆ ಕುರಿತಂತೆ ತುಂಬಾ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದ ಆಕಾಶವಾಣಿ ಕೇಂದ್ರಗಳು ಯಾವಾಗಲೂ ಭಾಷೆಯ ಬಳಕೆ ಕುರಿತಂತೆ ಹಾಕಿಕೊಂಡಿರುವ ನಿಯಮಾವಳಿಗಳು ಹಾಗೂ ಆಯಾ ಪ್ರಾಧೇಶಿಕ ಭಾಷೆಯಲ್ಲಿ ಪ್ರಸಾರವಾಗುವ ವಾರ್ತೆಗಳು ಅಥವಾ ಇನ್ನಿತರೆ ಕಾರ್ಯಕ್ರಮಗಳು ನಿಜಕ್ಕೂ  ಎಲ್ಲರಿಗೂ ಮಾದರಿಯಾಗಿವೆ.
ಇತ್ತೀಚೆಗಿನ ದಿನಗಳಲ್ಲಿ ಜನ ಸಾಮಾನ್ಯರ ನಡುವೆ ಸ್ಮಾರ್ಟ್ ಫೋನ್ ಗಳು, ಮತ್ತು ಇಂಟರ್ ನೆಟ್ ಹಾಗೂ ಇ-ಮೈಲ್ ಸಂದೇಶಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಪ್ರಾದೇಶಿಕ ಭಾಷೆ ಮತ್ತು ಇಂಗ್ಲೀಷ್ ಭಾಷೆಗಳ ನಡುವೆ ಇದ್ದ ಗಡಿ ರೇಖೆಯು ಹಂತಹಂತವಾಗಿ ಅಳಿಸಿಹೋಗುತ್ತಿದೆ. ಇಂಗ್ಲೀಷ್ ಭಾಷೆಯು ತಂತ್ರಜ್ಞಾನದ ಮುಖ್ಯ ಭಾಷೆಯಾದ ಕಾರಣ ಪ್ರಾದೇಶಿಕ ಭಾಷೆಗಳ ನುಡಿಗಟ್ಟುಗಳ ಜೊತೆಗೆ  ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರ ಪರೋಕ್ಷ ಪರಿಣಾಮವನ್ನು ದೃಶ್ಯ ಮಾಧ್ಯಮಗಳ ಸುದ್ದಿ ಛಾನಲ್ ಗಳು ಬಿತ್ತರಿಸುವ ಮುಖ್ಯಾಂಶಗಳಿಂದ  ಹಿಡಿದು, ವಾರ್ತೆಗಳ ವಿವರಣೆಯಲ್ಲಿ ನಾವು ಕಾಣಬಹುದು. ವಿಷಾಧದ ಸಂಗತಿಯೆಂದರೆ, ಇಂತಹ ಪ್ರಯೋಗವು  ಭಾಷೆಯೊಂದರ ಬೆಳವಣಿಯ ದೃಷ್ಟಿಯಿಂದ ತೀರಾ ಅಪಾಯಕಾರಿಯಾದುದು.
ಸುದ್ದಿ ಮನೆಗಳಲ್ಲಿ  ಸಂವಹನದ ಮಾಧ್ಯಮವಾಗಿ ಬಳಕೆಯಾಗುವ ಭಾಷೆಯು ಅದು ಸ್ಥಳಿಯ ಪ್ರಾದೇಶಿಕ ಭಾಷೆಯಾಗಿರಬಹುದು ಇಲ್ಲವೆ, ಅದೇ ನೆಲದ ಇನ್ನೊಂದು ಉಪಭಾಷೆಯಾಗಿರಬಹುದು ಅಂದರೆ, ಕೊಡವ, ಕೊಂಕಣ, ತುಳು ಅಥವಾ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಮರಾಠಿ ಮತ್ತು ಉರ್ದು ಭಾಷೆ ಮಿಶ್ರಿತ ಕನ್ನಡ ಭಾಷೆಯಾಗಿರಬಹುದು. ಇವುಗಳನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸುವಾಗ ಸುದ್ದಿ ಮನೆಯ ಮುಖ್ಯಸ್ಥರಿಗೆ ಮತ್ತು ವಾರ್ತಾ ವಾಚಕರಿಗೆ ಹಾಗೂ ಪತ್ರಿಕೆಗಳ ಉಪಸಂಪಾದಕರಿಗೆ ಸಮುದಾಯದ ನಾಡಿ ಮಿಡಿತ ಕುರಿತಂತೆ ಜ್ಞಾನವಿರಬೇಕು. ವಿಶೇಷವಾಗಿ ದೃಶ್ಯ ಮಾಧ್ಯಮ ಮತ್ತು ರೇಡಿಯೋ ಕಾರ್ಯಕ್ರಮಗಳಲ್ಲಿ ಬಳಸುವ ಭಾಷೆಯು ಆದಷ್ಟು ಸರಳವಾಗಿ ಎಲ್ಲರಿಗೂ ನಿಲುಕವಂತಿರಬೇಕು. ಏಕೆಂದರೆ, ದೃಶ್ಯ ಮಾಧ್ಯಮಗಳ ವೀಕ್ಷಕರು ಮತ್ತು ಆಕಾಶವಾಣಿಯ ಕೇಳುಗರು ಇಬ್ಬರೂ ಅಗೋಚರ ವ್ಯೆಕ್ತಿಗಳಾಗಿದ್ದು, ಅವರಲ್ಲಿ ಅನಕ್ಷರಸ್ತರು ಇರುತ್ತಾರೆ ಎಂಬ ಎಚ್ಚರಿಕೆ ಈ ಎರಡು ಮಾಧ್ಯಮಗಳಿಗೆ ಇರಬೇಕಾದ್ದು ಅತ್ಯಾವಶ್ಯಕ. ಏಕೆಂದರೆ, ಪತ್ರಿಕೆಗಳು  ಓದು ಬಲ್ಲ ಅಕ್ಷರಸ್ತರ ಮಾಧ್ಯಮವಾದರೆ, ರೇಡಿಯೋ ಮತ್ತು ದೃಶ್ಯ ಮಾಧ್ಯಮಗಳು ಎಲ್ಲಾ ಬಗೆಯ ಜನರ ಮಾಧ್ಯಮಗಳಾಗಿರುತ್ತವೆ.
ದುರದೃಷ್ಟಕರ ಸಂಗತಿಯೆಂದರೆ, ವರ್ತಮಾನದ ಜಗತ್ತಿನಲ್ಲಿ ಸುದ್ಧಿ ಛಾನಲ್ ಗಳ ಭಾಷೆಯಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಭಾಗವನ್ನು ಇಂಗ್ಲೀಷ್ ಭಾಷೆಯು ಆಕ್ರಮಿಸಿಕೊಂಡಿದೆ. ಉದಾಹರಣೆಗೆ  ಬ್ರೇಕಿಂಗ್ ನ್ಯೂಸ್/ ಟೀಮ್ ಇಂಡಿಯಾ/, ಪೋಲಿಸ್ ಫೈಲ್,/ ಕ್ರೈಮ್ ಸ್ಟೋರಿ/ ಫಿಲ್ಮಿ ಫಾಂಡ/ ಬೌಂಡರಿ ಲೈನ್/ ಮುಂತಾದ ಶೀರ್ಷಿಕೆಗಳು ಕಾರ್ಯಕ್ರಮಗಳಿಗೆ ಇಟ್ಟ ಹೆಸರುಗಳಾದರೆ, ವಾರ್ತೆಗಳ ವಿವರಣೆಯಲ್ಲಿ ಬಳಸುವ ಡಬ್ಬಲ್ ಮರ್ಡರ್, ಡಬ್ಬಲ್ ಬ್ಯಾರಲ್ ಗನ್, ಸಿ.ಎಮ್. ಎಲೆಕ್ಷನ್, ಹೋಂ ಮಿನಿಷ್ಟರ್, ಆಕ್ಸಿಡೆಂಟ್,   ಹೀಗೆ ನೂರಾರು ಇಂಗ್ಲೀಷ್ ಶಬ್ದಗಳು ದಿನ ನಿತ್ಯ ನಮ್ಮ ಕಿವಿಯ ಮೇಲೆ ಬೀಳುತ್ತಿವೆ. ಇಂತಹ ಅವಸರದ ಪ್ರಕ್ರಿಯೆಯು ನಮ್ಮ ಮಾತೃ ಭಾಷೆಯನ್ನು ಕೊಂದು ಹಾಕುವ ಕ್ರಿಯೆಯಾಗಬಲ್ಲದೆ ಹೊರತು. ಹೊಸ ಹೊಸ ಶಬ್ದಗಳನ್ನು ಹುಟ್ಟು ಹಾಕಲು ಸಹಕಾರಿಯಾಗುವುದಿಲ್ಲ.
ದೃಶ್ಯ ಮಾಧ್ಯಮ ಜಗತ್ತು ಕುರಿತಂತೆ  ವಿಶೇಷ ಅಧ್ಯಯನ ಮಾಡಿ ಈ ವಿಷಯದಲ್ಲಿ  ಪಿ.ಹೆಚ್.ಡಿ. ಪದವಿ ಪಡೆದಿರುವ ಹಿರಿಯ ಪತ್ರಕರ್ತ,  ಹಾಗೂ ಹತ್ತು ವರ್ಷಗಳ ಕಾಲ ಉದಯ ಟಿ.ವಿ.ಯಲ್ಲಿ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸಿ, ಇದೀಗ  ತುಮಕೂರು  ಸಿದ್ಧಾರ್ಥ ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿರುವ  ಡಾ. ಬಿ.ಟಿ. ಮುದ್ದೇಶ್. ದೃಶ್ಯ ಮಾಧ್ಯಮಗಳಿಂದಾಗಿ  ಮಾತೃ ಭಾಷೆಯೆಂಬುದು ಹೇಗೆ ಸೆವೆಯುತ್ತಿದೆ ಎಂಬುದನ್ನು ಅವರು ಇಂಗ್ಲೀಷ್ ಶಬ್ದಗಳು ಬಳಕೆಯಾಗುತ್ತಿರುವುದನ್ನು ಪಟ್ಟಿ ಮಾಡಿದ್ದಾರೆ.  ಜೊತೆಗೆ ಕಾರ್ಯಕ್ರಮದ ನಡುವೆ ಇಂಗ್ಲೀಷ್ ಭಾಷೆ ಹೇಗೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ ಎಂಬುದನ್ನು ಉದಾಹರಣೆ ಸಹಿತ  ಮನಮುಟ್ಟುವಂತೆ ವಿವರಿಸಿದ್ದಾರೆ. ಇವುಗಳ ಜೊತೆ  ಜೊತೆಗೆ ಭಾಷೆಯ ಅನುವಾದ ಮತ್ತು ಉಪಯೋಗ ಕುರಿತು ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ಭಾಷಾಂತರ ಇಲ್ಲವೇ ಅನುವಾದ ಕ್ರಿಯೆಯು ಯಾವಾಗಲೂ ಸೃಜಲಶೀಲವಾಗಿರಬೇಕು.
ಭಾಷಾಂತರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಭಾಷೆಗಳ ಮೇಲೆ ಪತ್ರಕರ್ತರಿಗೆ ಹಿಡಿತವಿದ್ದರೆ ಭಾಷಾಂತರವು ಸರಳವೂ ಹಾಗೂ ಅರ್ಥಪೂರ್ಣವಾಗಿರುತ್ತದೆ.
ಭಾಷಾಂತರ ಕ್ರಿಯೆಯಲ್ಲಿ ಲೇಖನ ಅಥವಾ ಲೇಖಕನ ಮೂಲ ಆಶಯಕ್ಕೆ ಧಕ್ಕೆ ಬಾರದಂತಿರಬೇಕು.
ಭಾಷಾಂತರ ಮಾಡುವಾಗ ಆಯಾ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ ನುಡಿಗಟ್ಟುಗಳನ್ನು ಭಾಷಾಂತರ ಕ್ರಿಯೆಯಲ್ಲಿ ಬಳಸಬೇಕು.
ಭಾಷಾಂತರವೆನ್ನುವುದು ಒಂದು ಕಲೆಯಾದುದರಿಂದ ಬಹುಭಾಷೆಗಳ ಪರಿಚಯ, ಪ್ರಭುತ್ವ ಅಗತ್ಯವಾದರೂ ಸಹ ಭಾಷಾಂತರ ಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ಎರಡು ಭಾಷೆಯ ಮೇಲಿನ ಹಿಡಿತ ಅನಿವಾರ್ಯ.
ಭಾಷಾಂತರಕಾರ ಅಥವಾ ಅನುವಾದಕ  ಪರಕಾಯ ಪ್ರವೇಶ ಮಾಡುವ ಸಾಮಾರ್ಥ್ಯವುಳ್ಳವನಾಗಿರಬೇಕು.
ಭಾಷಾಂತರಕಾರ ಕೇವಲ ಶಬ್ಧದ ಕಣಜವಾದರೆ ಸಾಲದು, ಹೊಸ ಪದಪುಂಜಗಳನ್ನು ಸೃಷ್ಟಿಸುವ ಸಾಮರ್ಥ್ಯವುಳ್ಳವನಾಗಿರಬೇಕು.

 ಬಿ.ಟಿ. ಮುದ್ದೇಶ್ ಅವರ ಈ ಮಾತುಗಳಿಗೆ ಪೂರಕವಾಗಿ ಕಳೆದ ಅರ್ಧ ಶತಮಾನದಿಂದ ಕರ್ನಾಟಕದ ಸುದ್ದಿಮನೆಗಳಲ್ಲಿ ಅನೇಕ ಮಹಾನುಭಾವರು ಪತ್ರಿಕೋದ್ಯಮಕ್ಕೆ ಅನೇಕ ನುಡಿಗಟ್ಟುಗಳನ್ನು ರೂಪಿಸಿಕೊಟ್ಟಿರುವುದರ ಜೊತೆಗೆ ಅನೇಕ ಹೊಸ ಹೊಸ ಪದಗಳನ್ನು ಸೃಷ್ಟಿಸಿ ಕೊಡುಗೆಯಾಗಿ ನೀಡಿದ್ದಾರೆ ಇವರುಗಳಲ್ಲಿ   ಪ್ರಜಾವಾಣಿಯ ಟಿ.ಎಸ್.ಆರ್,  ಕನ್ನಡ ಪ್ರಭದ ಖಾದ್ರಿ ಶಾಮಣ್ಣ, ವೈ.ಎನ್.ಕೃಷ್ಣಮೂರ್ತಿ, ಇವರುಗಳನ್ನು ಮುಖ್ಯವಾಗಿ ಹೆಸರಿಸಬಹುದು. ಇವುಗಳ ಜೊತೆಗೆ ಬಹುಮುಖ್ಯವಾಗಿ ಪತ್ರಿಕೋದ್ಯಮದ ಭಾಷೆಯೆಂಬುದು ಒಣ ಭಾಷೆ ಅಥವಾ ನಿರ್ಜೀವ ಭಾಷೆ ಎಂಬ ಕಲ್ಪನೆ ಇದ್ದ ಸಂದರ್ಭದಲ್ಲಿ ಕನ್ನಡದ ಖ್ಯಾತ ಸಾಹಿತಿ ಪಿ.ಲಂಕೇಶರು 1980 ರ ದಶಕದಲ್ಲಿ ಪತ್ರಿಕೋದ್ಯಮದ ಭಾಷೆಗೆ ಸಾಹಿತ್ಯದ ಭಾಷೆಯನ್ನು ಕಸಿ ಮಾಡುವುದರ ಮೂಲಕ ಹೊಸ ಜೀವ ಕಳೆಯನ್ನು ತುಂಬಿದರು. ಇದಕ್ಕೂ ಕನ್ನಡದ ಕಥಾಲೋಕದ ಪಿತಾಮಹಾರೆಂದು ಹೆಸರಾದ ಮಾಸ್ತಿಯವರು  ತಮ್ಮ “ಜೀವನ” ಪತ್ರಿಕೆಯಲ್ಲಿ ಇಂತಹದ್ದೇ ಪ್ರಯೋಗವನ್ನು ಮಾಡಿದ್ದರು. ಪಿ.ಲಂಕೇಶ್ ರವರು ತಮ್ಮ ವಾರಪತ್ರಿಕೆಯಲ್ಲಿ ಬಳಸಿದ ಅತ್ಯಂತ ಸರಳವಾದ ಕನ್ನಡ ಭಾಷೆ ಹಾಗೂ ಹುಟ್ಟು ಹಾಕಿದ ನುಡಿಗಟ್ಟುಗಳು ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟವು. ಜೊತೆಗೆ ನನ್ನ ತಲೆ ಮಾರಿನ ಅನೇಕ ಪತ್ರಕರ್ತರಿಗೆ ಸ್ಪೂರ್ತಿಯನ್ನು ತುಂಬಿದವು.
ಕೇವಲ ಪ್ರಾಸಕ್ಕೆ ಕಟ್ಟು ಬಿದ್ದು, ಹೊಸ ಹೊಸ ತಲೆ ಬರಹಗಳನ್ನು ನೀಡಿ  ತಮ್ಮ ಚಮತ್ಕಾರಕ್ಕೆ ತಾವೇ ಸಂಭ್ರಮಿಸುತ್ತಿರುವ ಪತ್ರಿಕೆಗಳ ಸಂಪಾದಕರ ಮೇಲೆ ಭಾಷೆಯನ್ನು ಉಳಿಸುವ ಮತ್ತು ಬೆಳಸುವ ನೈತಿಕ ಜವಾಬ್ದಾರಿಯೊಂದು  ಸದಾ ಅವರ ಮೇಲಿರುತ್ತದೆ. ಏಕೆಂದರೆ, ಯಾವುದೇ ಪ್ರಾದೇಶಿಕ ಭಾಷೆಯಾಗಿರಲಿ ಅದು  ಸುದ್ದಿ ಮನೆಯ ದಾವಂತದಲ್ಲಿ ಬಸವಳಿಯಬಾರದು ಮತ್ತು ನಶಿಸಿಹೋಗಬಾರದು.
( ಧಾರವಾಡ ಆಕಾಶವಾಣಿಗೆ ನೀಡಿದ ವಿಶೇಷ ಉಪನ್ಯಾಸದ  ಲಿಖಿತ ರೂಪ)
                                                                                                                                                                                                             

                                                

ಸೋಮವಾರ, ಡಿಸೆಂಬರ್ 26, 2016

ನೋಟು ನಿಷೇದವೆಂಬ ಪ್ರಹಸನ


ಸ್ವಾತಂತ್ರ್ಯಾನಂತರದ ಭಾರತದಲ್ಲಿ ಯಾವೊಬ್ಬ ಪ್ರಧಾನಿಯೂ ಇಷ್ಟೊಂದು ಮೂರ್ಖತನ ಮತ್ತು ಅವಿವೇಕತನದಿಂದ ನಡೆದುಕೊಂಡಿರಲಿಲ್ಲ. ನರೇಂದ್ರ ಮೋದಿಯವರ ಹುಚ್ಚಾಟಗಳು ಮತ್ತು ಆವೇಶಗಳಿಗೆ ಭಾರತದ ಆರ್ಥಿಕತೆಯು ಅಧಃಪತನದತ್ತ ಕುಸಿಯುತ್ತಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ ಭಾರತದ ಪ್ರಧಾನ ಮಂತ್ರಿಯ ಹುದ್ದೆಯ ಘನತೆ ಮತ್ತು ಅದಕ್ಕಿರುವ ಗೌರವ  ಇವೆರೆಡೂ  ನರೇಂದ್ರಮೋದಿಯವರಿಗಾಗಲಿ, ಅಥವಾ ಅವರ ಹುಚ್ಚಾಟಗಳನ್ನು ಬೆಂಬಲಿಸುತ್ತಿರುವ ನಮೋ ಬ್ರಿಗೆಡ್  ಭಕ್ತರೆಂಬ ಅವಿವೇಕಿಗಳಾಗಲಿ ಈವರೆಗೆ ಅರ್ಥವಾಗಿಲ್ಲ.
ಬಹುಮುಖಿಯ ಭಾಷೆ ಮತ್ತು ಸಂಸ್ಕೃತಿಯ ನೆಲವಾದ ಭಾರತಲ್ಲಿ ನಿಜವಾದ ಹೃದಯವಿರುವುದು ಅನಕ್ಷರಸ್ತರು ಮತ್ತು ಅಮಾಯಕ ಕೃಷಿಕರು ಹಾಗೂ ಕೂಲಿಕಾರ್ಮಿಕರು ಅಗಾಧವಾಗಿ ವಾಸವಾಗಿರುವ ಹಳ್ಳಿಗಳಲ್ಲಿ ಎಂಬ ಸೂಕ್ಷ್ಮತೆಯನ್ನು ಅರಿಯಲಾಗದ ಒಬ್ಬ ಜನನಾಯಕ ಅಥವಾ ಪ್ರಧಾನಿ ಈ ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಕುರಿತು ಮಾತನಾಡುವುದು ಅಥವಾ ಕ್ಯಾಶ್ ಲೆಸ್ ಎಕಾನಮಿ ( ನಗದು ರಹಿತ ಆರ್ಥಿಕ ವ್ಯವಸ್ಥೆ) ಬಗ್ಗೆ ಮಾತನಾಡುವುದೆಂದರೆ, ಆತನಿಗೆ ಗ್ರಾಮ ಭಾರತದ ಆರ್ಥಿಕ ವ್ಯವಸ್ಥೆಯಾಗಲಿ, ಅಲ್ಲಿನ ಆರ್ಥಿಕ ಚಟುವಟಿಕೆಗಳ ಕುರಿತಾಗಲಿ ಎಳ್ಳಷ್ಟು ಜ್ಞಾನವಿಲ್ಲ ಎಂದರ್ಥ.  ಒಂದು ರಾಷ್ಟ್ರದ ಪ್ರಧಾನಿಯಾದವನು ಎಲ್ಲಾ ವಿಷಯಗಳಲ್ಲೂ ಪಾರಂಗತನಾಗಿರಬೇಕಿಲ್ಲ ನಿಜ  ಆದರೆ, ತನ್ನ ಬಳಿ ಕನಿಷ್ಟ ಎಲ್ಲಾ ವಲಯಗಳ ವಿಷಯ ತಜ್ಞರನ್ನು ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಆಡಳಿತವೆಂಬುವುದು ಮಂಗನಾಟ ಇಲ್ಲವೆ ದೊಂಬರಾಟವಾಗುತ್ತದೆ. ನಂವಂಬರ್ 8 ರಂದು ಸಾವಿರ ಮತ್ತು ಐನೂರು ಮುಖಬೆಲೆಯ ಕರೆನ್ಸಿ ನೋಟುಗಳ ಮೇಲೆ ನಿಷೇಧ ಹೇರಿದ ನಂತರ ಈವರೆಗೆ ಕೇಂದ್ರ ಹಣಕಾಸು ಇಲಾಖೆ ಮತ್ತು ಕೇಂದ್ರ ಬ್ಯಾಂಕಾದ ರಿಸರ್ವ್ ಬ್ಯಾಂಕ್ ನಿಂದ ತಿದ್ದುಪಡಿ ಮಾಡಲಾದ ಮತ್ತು ವಾಪಸ್ ಪಡೆಯಲಾದ ಒಟ್ಟು ಸುತ್ತೋಲೆಗಳ ಸಂಖ್ಯೆ 59 ಕ್ಕೆ ಏರಿದೆ. ಇದನ್ನು ಹುಚ್ಚಾಟ ಎಂದು ಕರೆಯದೆ ಬೇರೇನೆಂದು ಕರೆಯಲು ಸಾಧ್ಯ?
ಕೇಂದ್ರಸರ್ಕಾರದ  ಮೇಲುಸ್ತುವಾರಿ ಇದ್ದರೂ ಸಹ ಇಲ್ಲಿಯವರೆಗೆ ಭಾರತದ ಆರ್ಥಿಕತೆಯ ಮೇಲೆ ನಿಗಾ ಇರಿಸಿಕೊಂಡು, ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿದ್ದ ರಿಸರ್ವ್ ಬ್ಯಾಂಕ್ ಎಂಬ ಸಂಸ್ಥೆಯ ಗೌರವ ಮಣ್ಣು ಪಾಲಾಗಿದೆ. ಭಾರತದ ಭ್ಯಾಂಕುಗಳ ಮೇಲೆ ನಿಗಾ ಇರಿಸಿ, ಆರ್ಥಿಕ ಅಪರಾಧಗಳು ಸಂಭವಿಸದಂತೆ ತಡೆಯೊಡ್ಡುತ್ತಿದ್ದ ರಿಸರ್ವ್ ಬ್ಯಾಂಕಿನ ಅಧಿಕಾರಿಗಳು ಭ್ರಷ್ಟರಾಗಿ ಜೈಲು ಸೇರುತ್ತಿದ್ದಾರೆ. ಎಂತಹ ವಿಷಮ ಸ್ಥಿತಿಯಲ್ಲಿಯೂ ಸಹ ಕೇಂದ್ರ ಸರ್ಕಾರದೊಂದಿಗೆ ರಾಜಿಯಾಗದೆ, ಭಾರತದ ಆರ್ಥಿಕ ಚಟುವಟಿಕೆಗೆ ರಕ್ಷಕನಂತಿದ್ದ ರಿಸರ್ವ್ ಬ್ಯಾಂಕಿನ ಗೌರ್ನರ್ ಹುದ್ದೆ ಇದೀಗ ಪ್ರಧಾನಿಯೊಬ್ಬನ ಸೇವಕನ ಹುದ್ದೆಯ ಮಟ್ಟಕ್ಕೆ ಕುಸಿದೆ. ಈಗಿನ ಗೌರ್ನರ್ ಊರ್ಜಿತ್ ಪಟೇಲ್ ಒಬ್ಬ ಬೆನ್ನುಮೂಳೆಯಿಲ್ಲದ ಆರ್ಥಿಕ ತಜ್ಞ ಎಂಬುದು ಸಾಬೀತಾಗಿದೆ. ರಘರಾಂ ರಾಜನ್ ಎಂಬ ನೇರ ನಡುವಳಿಕೆಯ ನಿಷ್ಟುರ ವ್ಯೆಕ್ತಿ ಗೌರ್ನರ್ ಸ್ಥಾನದಲ್ಲಿ ಇರುವವರೆಗೂ ಪ್ರಧಾನಿ ಮೋದಿಯ ಈ ಹುಚ್ಚಾಟಕ್ಕೆ ಕಡಿವಾಣವಿತ್ತು. ಅವರು ಸ್ಥಾನ ತ್ಯೆಜಿಸುತ್ತಿದ್ದಂತೆ ನೋಟು ನಿಷೇಧದ ಪ್ರಹಸನದಿಂದಾಗಿ ಭಾರತದ ಆರ್ಥಿಕ ಚಟುವಟಿಕೆಗೆ ದೊಡ್ಡ ಹೊಡೆತ ಬಿದ್ದಿತು. ಜಪಾನ್ ಸಂಸ್ಥೆಯೊಂದರ ಸಮೀಕ್ಷೆಯ ಪ್ರಕಾರ ಭಾರತದ ಆರ್ಥಿಕತೆ ಇಪ್ಪತ್ತು ವರ್ಷದ ಹಿಂದಿನ ಬೆಳವಣಿಗೆಯ ಮಟ್ಟಕ್ಕೆ ಕುಸಿದಿದೆ. ಕೃಷಿ, ಕೈಗಾರಿಕೆ ಮತ್ತು ವಾಹನ ಉದ್ಯಮ, ಪ್ರವಾಸೋದ್ಯಮ ಮತ್ತು ಮನರಂಜನೆ ಹಾಗೂ ಸೇವೆ ಸೇರಿದಂತೆ ಎಲ್ಲಾ ರಂಗಗಳಿಗೂ ಪಾರ್ಶ್ವವಾಯು ಬಡಿದಂತಾಗಿದೆ. ರಫ್ತಿನ ಪ್ರಮಾಣ ಕುಸಿದಿದೆ. ಪ್ರತಿ ನಿತ್ಯ ಈ ದೊಂಬರಟದಿಂದ ಬ್ಯಾಂಕುಗಳಿಗೆ  ಪ್ರತಿ ದಿನ ಮೂರು ಸಾವಿರ ಕೋಟಿ ಖರ್ಚು ವೆಚ್ಚವಾಗುತ್ತಿದೆ. ಶೇಕಡ 86 ರಷ್ಟು ಪಾಲು ಚಲಾವಣೆಯಲ್ಲಿದ್ದ ನೋಟುಗಳನ್ನು ಹಿಂತೆಗೆದುಕೊಂಡ ನಂತರ ಕೇವಲ ಮೂರನೇ ಒಂದರಷ್ಟು ಭಾಗ ಮಾತ್ರ ಹೊಸ ನೋಟುಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ಬಿಡಲು ಸಾಧ್ಯವಾಗಿದೆ.
ನಗದು ರಹಿತ ವ್ಯವಸ್ಥೆ ಎಂಬುದು ಒಂದು ರೀತಿಯಲ್ಲಿ ಭಾರತದ ನಾಗರೀಕನಿಗೆ ಇರುವ ಸಂವಿಧಾನಬದ್ಧ ಖಾಸಾಗಿ ಬದುಕಿನ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ದೀಪಕ್ ಸಿಂಗ್ ಎಂಬ ತಜ್ಞರು ಅರ್ಥಪೂರ್ಣವಾದ ವಾದವನ್ನು ನಮ್ಮ ಮುಂದಿಟ್ಟಿದ್ದಾರೆ. ಎಲ್ಲವೂ ಡೆಬಿಟ್ ಕಾರ್ಡ್ ಅಥವಾ ಕ್ರಡಿಟ್ ಕಾರ್ಡ್ ಮೂಲಕ ನಡೆದರೆ, ವ್ಯಕ್ತಿಯೊಬ್ಬ ಏನನ್ನು ಖರೀದಿಸಿದ, ಏನನ್ನು ಕುಡಿದ, ಏನನ್ನು ತಿಂದ ಎಂಬುವುದರಿಂದ ಹಿಡಿದು, ಆತ ಎಲ್ಲಿ ಹೋಗಿದ್ದ? ಯಾವ ಹೋಟೆಲ್ ನಲ್ಲಿ ಮಲಗಿ ಎದ್ದು ಬಂದ ಎಲ್ಲವೂ ಜಾಹಿರಾಗುವುದರ ಮೂಲಕ ನಾಗರೀಕನಿಗೆ ಖಾಸಾಗಿ ಬದುಕು ಎಂಬುವುದು ಇರುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕಾಗಿ ಜರ್ಮನಿ ಸೇರಿದಂತೆ ಅನೇಕ ಮುಂದುವರಿದ ಯುರೋಪ್ ರಾಷ್ಟ್ರಗಳಲ್ಲಿ ನಾಗರೀಕರ ಗೌಪ್ಯತೆಯ ಬದುಕನ್ನು ಕಾಪಾಡುವ ನಿಟ್ಟಿನಲ್ಲಿ ಶೇಕಡ 98 ರಷ್ಟು ವ್ಯವಹಾರವು ನಗದು ರೂಪದಲ್ಲಿ ನಡೆಯುವದನ್ನು ನಮ್ಮ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಮೇರಿಕಾದಲ್ಲಿ ಶೇಕಡ 46 ರಿಂದ 48 ರಷ್ಟು ವ್ಯವಹಾರವು ನಗದು ರೂಪದಲ್ಲಿ ನಡೆಯುತ್ತಿದೆ ಎಂಬುದನ್ನು ದಾಖಲಿಸಿದ್ದಾರೆ. ಭಾರತದಂತಹ ಶೇಕಡ 60 ರಷ್ಟು ಅನಕ್ಷರಸ್ತರು ಇರುವ ದೇಶದಲ್ಲಿ ಮತ್ತು ಶೇಕಡ 98 ರಷ್ಟು ಮಂದಿ ಅಸಂಘಟಿತ ವಲಯದ ಕಾರ್ಮಿಕರು ದುಡಿದು ತಿನ್ನುವುದು ನಗದು ರೂಪಾಯಿಗಳ  ವ್ಯವಹಾರದಲ್ಲಿ ಎಂಬ ಕನಿಷ್ಟ ಜ್ಞಾನ ಈ ದೇಶದ ಪ್ರಧಾನಿಗೆ ಇಲ್ಲ ಎಂದರೆ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಈ ದೇಶದ ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ ಈವರೆಗೆ ಬ್ಯಾಂಕುಗಳಲ್ಲಿ ಇರುವ ಖಾತೆಗಳ ಸಂಖ್ಯೆ 47 ಕೋಟಿ ಮಾತ್ರ. ಇವುಗಳಲ್ಲಿ ಒಬ್ಬ ವ್ಯೆಕ್ತಿ ಎರಡು ಮೂರು ಉಳಿತಾಯ ಖಾತೆಗಳನ್ನು ವಿವಿಧ ಬ್ಯಾಂಕುಗಳಲ್ಲಿ ತೆರೆದಿರುವುದುಂಟು. ಅಂದರೆ ಸುಮಾರು 35 ರಿಂದ 40 ಕೋಟಿ ನಾಗರೀಕರು ಖಾತೆ ಹೊಂದಿರಬಹುದು. ಇಂತಹ ವಾತಾವರಣದಲ್ಲಿ ನಗದು ರಹಿರ ವ್ಯವಹಾರವೆಂಬುವುದು ಭಾರತದ ಸಂದರ್ಭದಲ್ಲಿ ಪ್ರಹಸನವಲ್ಲದೆ ಬೇರೇನೂ ಆಗಲಾರದು. ಇಲ್ಲಿನ ಬಡಜನತೆಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಮೂಲಭೂತ ಬೇಡಿಕೆಗಳಾದ ನೀರು, ವಸತಿ, ಶೌಚಾಲಯ, ಆರೋಗ್ಯ ವ್ಯವಸ್ಥೆ ಇವುಗಳಿಗೆ ಒತ್ತು ನೀಡುವುದನ್ನು ಬಿಟ್ಟು, ಕಾಳಧನವನ್ನು ಮಟ್ಟ ಹಾಕುತ್ತೀನಿ, ನಕಲಿ ನೋಟುಗಳ ಹಾವಳಿ ತಡೆಯುತ್ತೀನಿ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಭಾರತಕ್ಕೆ ನೆರೆಯ ಪಾಕಿಸ್ತಾನದ ಉಗ್ರ ಸಂಘಟನೆಗಳ ಮೂಲಕ ನಕಲಿ ನೋಟುಗಳು  ಹರಿದು ಬರುತ್ತಿರುವುದು ನಿಜ. ಇದರ ಬಗ್ಗೆ ಎರಡು ಮಾತಿಲ್ಲ. ನಕಲಿ  ನೋಟುಗಳು ಭಾರತಕ್ಕೆ ನೇಪಾಳದ ಮೂಲಕ ಹರಿದು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಏಕೆಂದರೆ, ಭಾರತ ಮತ್ತು ನೇಪಾಳ ಗಡಿಭಾಗದಲ್ಲಿ ವೀಸಾ/ಪಾಸ್ ಪೋರ್ಟ್ ಗಳ ತಪಾಸಣೆಯಿಲ್ಲದೆ, ಭಾರತ ಮತ್ತು ನೇಪಾಳ ನಾಗರೀಕರು ಮುಕ್ತವಾಗಿ ಸಂಚರಿಸಬಹುದು. ಇದನ್ನು ಉಗ್ರಗಾಮಿ ಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಜೊತೆಗೆ ಭಾರತ ಮತ್ತು ಬಂಗ್ಲಾ ಹಾಗು ಭಾರತ ಮತ್ತು ಮ್ಯಾನ್ಮರ್ ಗಡಿಭಾಗಳಲ್ಲಿ ಬಿಗಿಯಾದ ತಪಾಸಣೆ ಇಲ್ಲ. ಈ ದೇಶದ ಪ್ರಧಾನಿಗೆ ನಕಲಿ ನೋಟುಗಳ ಹಾವಳಿ ತಡೆಯುವ ಮನಸ್ಸಿದ್ದರೆ ಈ ಗಡಿ ಭಾಗಗಳನ್ನು ಬಿಗಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಯಾವುದೇ ಮುಂದಾಲೋಚನೆಯಿಲ್ಲದೆ, ತಜ್ಞರ ಸಲಹೆ ಪಡೆಯದೆ, ಜಾರಿಗೆ ತಂದ ನೋಟು ನಿಷೇಧ ಪ್ರಕ್ರಿಯೆಯಿಂದಾಗಿ ದೇಶದ ಆರ್ಥಿಕ ಚಟುವಟಿಕೆ ನಲುಗಿ ಹೋಗಿದೆ. ದಿನ ನಿತ್ಯ ದುಡಿದು ತಿನ್ನುವ ಮಂದಿ ಹೈರಾಣಾಗಿದ್ದಾರೆ. ನರೇಂದ್ರಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಲಕ್ಷಾಂತರ ರೇಷ್ಮೆ ಕೈಮಗ್ಗ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಪಂಜಾಬಿನ ಲೂಧಿಯಾನದಲ್ಲಿ ಹಾಗೂ ಕಾಶ್ಮೀರದಲ್ಲಿ ಉಣ್ಣೆ ಉಡುಪು ತಯಾರು ಮಾಡುವ ಗುಡಿ ಕೈಗಾರಿಕೆಗಳು ಮುಚ್ಚಿವೆ. ನಗರಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕೆಲಸವಿಲ್ಲದೆ ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ.  ಡಿಸಂಬರ್ ತಿಂಗಳ 16-31 ರ ಸಂಚಿಕೆ “ ಡೌನ್ ಟು ಅರ್ಥ್” ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯಲ್ಲಿ ಭಾರತದ ಕೃಷಿ, ಸಣ್ಣ ಉದ್ಯಮಗಳು, ಮೀನುಗಾರಿಕೆ, ಹೀಗೆ ಹಲವು ರಂಗಗಳು ನಿಸ್ತೇಜನ ಗೊಂಡಿರುವ ಸಂಗತಿಗಳನ್ನು ಆರ್ಥಿಕ ತಜ್ಞರು ಅಂಕಿ ಅಂಶಗಳ ಸಮೇತ ನಮ್ಮ ಮುಂದಿರಿಸಿದ್ದಾರೆ. ಹೊಸ ನೋಟುಗಳು ಮಾತ್ರ ನೇರವಾಗಿ ಬ್ಯಾಂಕಿನಿಂದ ಉಳ್ಳವರ ಮನೆಯ ತಿಜೋರಿಗಳಿಗೆ ಜಮೆಯಾಗುತ್ತಿವೆ. ಪ್ರತಿ ನಿತ್ಯ ಹೊರ ಬರುತ್ತಿರುವ ಕರ್ಮಕಾಂಡಗಳು ನೋಟು ನಿಷೇಧ ಪ್ರಕ್ರಿಯೆಯ ವಿಫಲತೆಗೆ ನಮಗೆ ಸಾಕ್ಷಿಯನ್ನು ಒದಗಿಸುತ್ತಿವೆ. ಯಾವುದೇ ರಾಷ್ಟ್ರದ ಆರ್ಥಿಕ ಚಟುವಟಿಕೆ ಎನ್ನುವುದು ಒಂದು ಸರಪಳಿಯ ಕ್ರಿಯೆ ಇದ್ದಂತೆ. ಅಕಸ್ಮಾತ್ ಸರಪಳಿಯ ಒಂದು ಕೊಂಡಿ ಕಳಚಿಬಿದ್ದರೆ, ಇಡೀ ವ್ಯವಸ್ಥೆ ಕಳಚಿ ಬೀಳುವ ಸಾಧ್ಯತೆಯಿದೆ. ಭಾರತದ ಆರ್ಥಿಕತೆ ಇದೀಗ ಅಂತಹ ಅಪಾಯದ ಮಟ್ಟವನ್ನು ತಲುಪಿದೆ. ಈ ಕಾರಣಕ್ಕಾಗಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ನುಡಿದಿರುವ “ ನೋಟು ನಿಷೇಧ ವಿಷಯದಲ್ಲಿ  ಯಾರೊಬ್ಬರೂ ಆರ್ಥಿಕ ತಜ್ಞರಾಗುವ ಅವಶ್ಯಕತೆಯಿಲ್ಲ. ಆದರೆ, ಕನಿಷ್ಟ ದೇಶದ ಆರ್ಥಿಕ ಚಟುವಟಿಕೆಗಳ ಕುರಿತು ಪ್ರಾಥಮಿಕ ಜ್ಞಾನವಿರಬೇಕು” ಎಂದು ಹೇಳಿರುವ ಮಾತು ಪ್ರಧಾನಿ ನರೇಂದ್ರಮೋದಿಗೆ ತಾಕುವಂತಿದೆ.
( ಕರಾವಳಿ ಮುಂಜಾವು ದಿನ ಪತ್ರಿಕೆಯ "ಜಗದಗಲ" ಅಂಕಣಕ್ಕಾಗಿ ಬರೆದ ಲೇಖನ)