ಶುಕ್ರವಾರ, ಮಾರ್ಚ್ 2, 2018

ವಿದರ್ಭದ ವಿಧವೆಯರ ನೋವಿನ ಕಥನಗಳು


ಕಳೆದ  ಹದಿನೈದು ದಿನಗಳ ಅವಧಿಯಲ್ಲಿ ನಾನು ಓದಿದ ಒಂದು ಲೇಖನ ಮತ್ತು ಒಂದು ಕೃತಿ ಇವುಗಳು ನಾವು ಈವರೆಗೆ ಯೋಚಿಸಿದ ಜಗತ್ತನ್ನು ಮತ್ತು ಅದರೊಳಗಿನ ನತದೃಷ್ಟರ ನೋವಿನ ಬದುಕನ್ನು ತೆರೆದಿಡುವ ಮೂಲಕ ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿವೆ. ಕಳೆದ ಪೆಬ್ರವರಿ ಹದಿನೇಳರಂದು ಹಿಂದೂಇಂಗ್ಲೀಷ್ ದಿನಪತ್ರಿಕೆಯಲ್ಲಿ ಜ್ಯೋತಿ ಶೇಲರ್ ಎಂಬ ಹೆಣ್ಣು ಮಗಳು ಬರೆದ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ಮಾನಸಿಕ ಸ್ಥಿತಿಗತಿ ಹಾಗೂ ಮಕ್ಕಳು ಅನುಭವಿಸುತ್ತಿರುವ ತಬ್ಬಲಿತನ ಕುರಿತು ಬರೆದಸೈಲೆಂಟ್ ಸಫರರ್ಸ್” ( ನಿಶಬ್ದವಾಗಿ ನರಳುವವರು ಅಥವಾ ನೋವನ್ನುಣ್ಣುವವರು) ಎಂಬ ಲೇಖನ ಮತ್ತು ಇದೇ ವರ್ಷ ಜನವರಿ ತಿಂಗಳಿನಲ್ಲಿ ಆಕ್ಸ್ಫರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನದಿಂದ ಪ್ರಕಟವಾಗಿರುವ ಹಾಗೂ ಕೋಟ ನೀಲಿಮಾ ಎಂಬ ಆಂಧ್ರ ಮೂಲದ ಲೇಖಕಿ ಹಾಗೂ ಪತ್ರಕರ್ತೆ ಬರೆದಿರುವವಿಡೋಸ್ ಆಫ್ ವಿದರ್ಭ” ( ವಿದರ್ಭದ ವಿಧವೆಯವರು) ಎಂಬ ಕೃತಿಯು ರೈತರ ಆತ್ಮಹತ್ಯೆಯ ನಂತರ ಬದುಕುಳಿದಿರುವ ಕುಟುಂಬದ ಸದಸ್ಯರು ಅನುಭವಿಸುತ್ತಿರುವ ನರಕ ಸದೃಶ್ಯ ಧಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುತ್ತವೆ.
ಭಾರತದ ಸಾಮಾಜಿಕ ಅಥವಾ ರಾಜಕೀಯ ಇಲ್ಲವೆ ಸಾಂಸ್ಕತಿಕ ಬದುಕು ದಿಕ್ಕೆಟ್ಟಾಗ ಅವುಗಳಿಗೆ ಪರಿಹಾರ ಹುಡುಕಿ ಮಾರ್ಗ ತೋರಿಸಬೇಕಾದ ದೇಶದ ವಿಶ್ವ ವಿದ್ಯಾಲಯಗಳು ಕೊಳೆತು ನಾರುವ ತಿಪ್ಪೆಗುಂಡಿಗಳಾಗಿವೆ.  ಮಾಧ್ಯಮಗಳು ಆಳುವವರ ಮತ್ತು ಉಳ್ಳವರ ತುತ್ತೂರಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ದಯನೀಯ ಸ್ಥಿತಿಯಲ್ಲಿ ವಿದೇಶದ ವಿಶ್ವ ವಿದ್ಯಾಲಯಗಳು ಇಲ್ಲಿನ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರುವ ಪರಿಯನ್ನು ಗಮನಿಸಿದಾಗ ನಿಜಕ್ಕೂ ನಾವೆಲ್ಲಾ ತಲೆ ತಗ್ಗಿಸಬೇಕು ಎನಿಸುತ್ತದೆ. ಭಾರತದ ಬುಡಕಟ್ಟು ಜನಾಂಗಗಳ ಬವಣೆಗಳ ಕುರಿತು ಐವತ್ತು ವರ್ಷಗಳಿಂದ ಅಮೇರಿಕಾ ಮತ್ತು ಇಂಗ್ಲೇಂಡಿನ ಹತ್ತಕ್ಕೂ ಹೆಚ್ಚು ವಿ.ವಿ.ಗಳು ಅಧ್ಯಯನ ನಡೆಸುತ್ತಿವೆ. ನಕ್ಸಲ್ ಸಮಸ್ಯೆ ಕುರಿತು ಹಾಗೂ ದಕ್ಷಿಣ ಭಾರತದ ದೇವದಾಸಿಯರ ಸಾಂಸ್ಕøತಿಕ ಪಲ್ಲಟಗಳ ಕುರಿತು ಜಪಾನ್ ಮತ್ತು ಅಮೇರಿಕಾದ ನಾಲ್ಕು ವಿ.ವಿ.ಗಳು ಅಧ್ಯಯನ ಪ್ರಕಟಿಸಿವೆ. ಇವುಗಳ ಜೊತೆಗೆ ಅಮೇರಿಕಾದ ಕ್ಯಾಲಿಪೋರ್ನಿಯಾದ ವಿಶ್ವ ವಿದ್ಯಾಲಯವು ಕಳೆದ ಹತ್ತು ವರ್ಷಗಳಿಂದ ಭಾರತದ ರೈತರ ಆತ್ಮ ಹತ್ಯೆ ಕುರಿತಂತೆ ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದೆ. ನಮ್ಮ ವಿಶ್ವವಿದ್ಯಾಲಯಗಳು ರಾಜಕಾರಣಿಗಳನ್ನು ಒಳಗೊಂಡಂತೆ ಅಪಾತ್ರರಿಗೆ ಡಜನ್ ಗಟ್ಟಲೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ತೋರುತ್ತಿರುವ ಆಸಕ್ತಿಯನ್ನು ಇಂತಹ ಅಧ್ಯಯನಗಳತ್ತ ತಿರುಗಿಸಿದ್ದರೆ ದೇಶ ಒಂದಿಷ್ಟು ಸುಧಾರಣೆಯಾಗುತ್ತಿತ್ತು.  ವಿದೇಶಿ ವಿ.ವಿ.ಗಳು ನಮ್ಮ ಭಾರತದಲ್ಲಿ ನಡೆಸುತ್ತಿರುವ ಅಧ್ಯಯನದ ಕಾರ್ಯವೈಖರಿ ಈವರೆಗೆ ನಮ್ಮ ಹೃದಯವನ್ನು ತಟ್ಟಿಲ್ಲ. ಇದು ಪರೋಕ್ಷವಾಗಿ ನಮ್ಮಗಳ ಬೌದ್ಧಿಕ ದಾರಿದ್ರ್ಯವಲ್ಲದೆ  ಬೇರೇನೂ ಅಲ್ಲ.
ಭಾರತದಲ್ಲಿ ರೈತರ ಆತ್ಮಹತ್ಯೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಇದಕ್ಕೆ ಸುಮಾರು ಮೂರು ದಶಕಗಳ ಇತಿಹಾಸವಿದೆ. ಕ್ಯಾಲಿಪೋರ್ನಿಯಾ ವಿ.ವಿ. ಅಧ್ಯಯನದ ಪ್ರಕಾರ ಮುವತ್ತು ವರ್ಷಗಳಲ್ಲಿ ಮಹಾರಾಷ್ಟ್ರ, ಆಂಧ್ರ, ಕರ್ನಾಟಕ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಒಟು 59 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು. ಸಾವುಗಳಲ್ಲಿ ಶೇಕಡ 79 ರಷ್ಟು ಬರಗಾಲ, ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮೆಣಸಿನಕಾಯಿ ಬೆಳೆಗಳಿಂದ, ವಿಫಲವಾದ ಕೊಳವೆ ಬಾವಿಗಳಿಂದ, ದುಬಾರಿಯಾದ ಬಿತ್ತನೆ ಬೀಜ ಮತ್ತು ರಸಾಯನಿಕ ಗೊಬ್ಬರದಿಂದಾಗಿ ಸಂಭವಿಸಿವೆ ಎಂದು ವರದಿಯಿಂದ ದೃಢಪಟ್ಟಿದೆ. ಮುಂಬೈನ ಇಂದಿರಾಗಾಂಧಿ ಇನ್ಸಿಟ್ಯುಟ್ ಆಫ್ ಡೆವಲಪ್ ಮೆಂಟ್ ಎಂಬ ಸಂಸ್ಥೆ ದಕ್ಷಿಣ ಭಾರತದ ರೈತರ ಆತ್ಮಹತ್ಯೆ ಕುರಿತು ಅಧ್ಯಯನ ಮಾಡಿ ಇದೇ ಫಲಿತಾಂಶವನ್ನು ಪ್ರಕಟಿಸಿದೆ. ಆಶ್ಚರ್ಯಕರ ಸಂಗತಿ ಎಂದರೆ, ಭಾರತದ ಅತಿ ಹೆಚ್ಚು ಜನಸಂಖ್ಯೆ ಮತ್ತು ಜನ ಸಾಂದ್ರತೆ ಇರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಸೇರಿದಂತೆ ಉತ್ತರ ಭಾರತದಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿದರೆ ತೀರಾ ಕಡಿಮೆ ಇದೆ. 2009 ರಿಂದ 2016 ರರವರೆಗೆ ಮಹಾರಾಷ್ಟ್ರ ರಾಜ್ಯದಲ್ಲಿ 23 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಅಲ್ಲಿನ ಸರ್ಕಾರವು ರೈತರಿಗಾಗಿ 34 ಸಾವಿರ ಕೋಟಿ ರೂಪಾಯಿಗಳ ವಿಶೆಷ ಪ್ಯಾಕೇಜ್ ಘೋಷಿಸಿದ ನಂತರವೂ 1520 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಸರ್ಕಾರ ನೀಡುವ ಪರಿಹಾರದಿಂದ ರೈತರ ಬದುಕು ಎಂದಿಗೂ ಹಸನಾಗುವುದಿಲ್ಲ ಎಂಬುದನ್ನು ಹದಿನೈದು ವರ್ಷಗಳ ಹಿಂದೆ ನಮ್ಮ ನಡುವಿನ ಮಾನವೀಯ ಮುಖವುಳ್ಳ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ತಮ್ಮ ಸುಧೀರ್ಘ ಓಡಾಟ ಮತ್ತು ಅಧ್ಯಯನದ ಮುಖಾಂತರ ನಮಗೆ  ತೋರಿಸಿಕೊಟ್ಟರು. ಆದರೆ, ಆಳುವ ಸರ್ಕಾರಗಳಿಗೆ ಮತ್ತು ನಮ್ಮ ನಡುವಿನ ಕೂಗುಮಾರಿ ಸಂಸ್ಸøತಿಯ ಮಾಧ್ಯಮಗಳಿಗೆ ಕುರಿತು ಅಧ್ಯಯನ ಮಾಡುವ ಅಥವಾ ಅಂತಹ ಹಿರಿಯ ಜೀವವೊಂದರ ಮಾರ್ಗದರ್ಶನ ಪಡೆಯುವ ಮನಸ್ಸಿಲ್ಲ.
2002 ಜುಲೈ ತಿಂಗಳಿನ ಒಂದು ಶನಿವಾರ ಪಿ.ಸಾಯಿನಾಥ್ ಬೆಂಗಳೂರು ನಗರದಲ್ಲಿದ್ದರು. ದಿನ ಮದ್ದೂರು ತಾಲ್ಲೂಕು ಕೇಂದ್ರದಿಂದ ಮೂರು ಅಥವಾ ನಾಲ್ಕು ಕಿ.ಮಿ. ದೂರವಿರುವ ವರಗೇರಹಳ್ಳಿ ಎಂಬ ಗ್ರಾಮದಲ್ಲಿ ಶಂಕರೇಗೌಡ ಎಂಬ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾಯಿನಾಥ್ ಅವರು ಬೆಂಗಳೂರಿನ  ಹಿರಿಯ ಪತ್ರಕರ್ತಮಿತ್ರ ಕೆ.ಜಿ.ವಾಸುಕಿ ಮೂಲಕ ಮಂಡ್ಯದಲ್ಲಿದ್ದ ನನ್ನ ಮಿತ್ರ ಹಾಗೂ ಟಿವಿ ಯಲ್ಲಿ ಮಂಡ್ಯ ಜಿಲ್ಲಾ ವರದಿಗಾರರಾಗಿದ್ದ ದಿವಂಗತ ಇಳೆಕಾನ್ ಶ್ರೀಕಂಠ ಅವರನ್ನು ಸಂಪರ್ಕಿಸಿ, ಮಧ್ಯಾಹ್ನದ ವೇಳೆಗೆ ವರಗೇರಹಳ್ಳಿಗೆ ಭೇಟಿ ನೀಡಿದ್ದರು. ಘಟನೆ ಸಂಭವಿಸಿ ಎರಡು ವರ್ಷದ ನಂತರ ಒಮ್ಮೆ ಸಾಯಿನಾಥ್ ಮದ್ದೂರು ನಗರದ ಮೂಲಕ ಬೆಂಗಳೂರಿನಿಂದ ಮೈಸೂರು ನಗರಕ್ಕೆ ಪ್ರಯಾಣಿಸುವಾಗ, ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಶಂಕರೇಗೌಡ ನೆನಪಾಗಿ ಮತ್ತೇ ವರಗೇರಹಳ್ಳಿಗೆ ಭೇಟಿ ನೀಡಿದರು. ಅವರು ಶಂಕರೇಗೌಡನ ಮನೆಗೆ ಹೋದ ವೇಳೆಯಲ್ಲಿ ಆತನ ವಿಧವಾ ಪತ್ನಿ ಬಯಲಿನಲ್ಲಿ ಎಮ್ಮೆ ಮೇಯಿಸುತ್ತಾ ಕುಳಿತಿದ್ದಳು. ಆಕೆಯನ್ನು ಭೇಟಿ ಮಾಡಿ  ಯೋಗಕ್ಷೇಮ ವಿಚಾರಿಸಿದ ಸಾಯಿನಾಥ್ ಅವರು, ಸರ್ಕಾರ ನೀಡುತ್ತಿರುವ ಪಡಿತರದ ಬಗ್ಗೆ ವಿವರ ಪಡೆದುಕೊಂಡರು. ಸರ್ಕಾರದ ವರದಿಯ ವಿಳಂಬದಿಂದಾಗಿ ಆಕೆಗೆ ಪರಿಹಾರದ ಹಣ ದೊರಕಿರಲಿಲ್ಲ.
ಭೇಟಿಯ ನಂತರ ಸಾಯಿನಾಥ್ ಅವರು ಹಿಂದೂ ಇಂಗ್ಲೀಷ್ ದಿನ ಪತ್ರಿಕೆಯಲ್ಲಿ ಲೇಖನ ಬರೆದು, ಆತ್ಮಹತ್ಯೆ ಮಾಡಿಕೊಂಡ ಅನ್ನದಾತನೊಬ್ಬನ ಪತ್ನಿಗೆ ಸರ್ಕಾರವು ಪ್ರತಿ ದಿನ ನೂರು ಗ್ರಾಂ ಅಕ್ಕಿ ( ತಿಂಗಳಿಗೆ ಮೂರು ಕೇ,ಜಿ.) 67 ಗ್ರಾಂ ಗೋಧಿ( 2 ಕೆ.ಜಿ. ಗೋಧಿ) ಮತ್ತು 33 ಗ್ರಾಂ ಸಕ್ಕರೆ ( ಒಂದು ಕೆ.ಜಿ.ಸಕ್ಕರೆ) ನಿಗದಿ ಪಡಿಸಿದೆ. ಆದರೆ, ಭಾರತದ ಜೈಲುಗಳಲ್ಲಿರುವ ಕೊಲೆಗಡುಕರಿಗೆ, ದರೋಡೆಕೋರರಿಗೆ ಪ್ರತಿ ದಿನ ಊಟಕ್ಕೆ 200 ಗ್ರಾಂ ಅನ್ನ 80 ಗ್ರಾಂ ತರಕಾರಿ ಮತ್ತು ಬೇಳೆ, ಎರಡು ಚಪಾತಿ, ವಾರಕ್ಕೆ ಒಮ್ಮೆ 120 ಗ್ರಾಂ ಮಾಂಸ, ತಲೆಗೆ 30 ಮಿ.ಲಿ.ಕೊಬ್ಬರಿ ಎಣ್ಣೆ ಇತ್ಯಾದಿ ವಿವರಗಳ ಪಟ್ಟಿಯನ್ನು ನೀಡಿ ದೇಶದಲ್ಲಿ ಆಳುವ ಸರ್ಕಾರಗಳು ಅನ್ನದಾತನಿಗೆ ನೀಡುತ್ತಿರುವ ಸವಲತ್ತುಗಳ ಕುರಿತು ನಮ್ಮೆಲ್ಲರ ಕಣ್ಣು ತೆರೆಸಿದ್ದರು. ಆದರೆ, ಇಂತಹ ಮಾದರಿಗಳು ನಮ್ಮ ಮಾಧ್ಯಮಗಳಿಗೆ ಮತ್ತು ವಿ.ವಿ.ಗಳಿಗೆ ಎಂದೂ ಮಾರ್ಗದರ್ಶನವಾಗಲಿಲ್ಲ.
ಇದೀಗ ಪಿ.ಸಾಯಿನಾಥ್ ಜನಿಸಿದ ನೆಲದಿಂದ ಬಂದಿರುವ ಆಂಧ್ರದ ವಿಜಯವಾಡದ ಹಿರಿಯ ಪತ್ರಕರ್ತಕೆ.ವಿ.ಎಸ್. ರಮಾಶರ್ಮ ಎಂಬುವರ ಪುತ್ರಿ ಕೋಟ ನೀಲಿಮಾ ಅವರು ಸಾಯಿನಾಥ್ ಮಾದರಿಯಲ್ಲಿ ಅಧ್ಯಯನ ನಡೆಸಿ ವಿದರ್ಭದ ವಿಧವೆಯರು ಕೃತಿಯ ಮೂಲಕ ರೈತರ ಆತ್ಮಹತ್ಯೆಯ ನಂತರ ಅವರ ಪತ್ನಿಯರು ಮತ್ತು ಮಕ್ಕಳು ಅನುಭವಿಸುತ್ತಿರುವ ನೋವಿನ ಕಥನವನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಕಳೆದ ಇಪ್ಪತ್ತೆರೆಡು ವರ್ಷದಿಂದ ದೆಹಲಿಯಲ್ಲಿ ವಾಸವಾಗಿರುವ ನೀಲಿಮಾ, ಪತ್ರಕರ್ತೆ, ಲೇಖಕಿ ಹಾಗೂ ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.  2013 ರಲ್ಲಿ ಈಕೆ ಬರೆದಶೂಸ್ ಆಫ್ ಡೆಡ್” ( ಸತ್ತವನ ಪಾದರಕ್ಷೆ) ಎಂಬ ಕಾದಂಬರಿಯು   ಅತ್ಯಂತ ಜನಪ್ರಿಯವಾಗಿದ್ದು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬವೊಂದರ ಕಥನವನ್ನು ಒಳಗೊಂಡಿತ್ತು. ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಹಾಗೂ ಆಡು ಕುಳಂ ಮತ್ತು ವಿಸಾರಣೈ ಎಂಬ ರಾಷ್ಟ್ರ ಪ್ರಶಸ್ತಿ ಗಳಿಸಿದ ಚಿತ್ರಗಳನ್ನು ನಿರ್ಮಿಸಿದ ವೆಟ್ರಿಮಾರನ್ ಇದೀಗ ಕಾದಂಬರಿಯನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ.

ಕೋಟ ನೀಲಿಮಾ ಅವರು 2014 ರಿಂದ 2016 ವರೆಗೆ ಸತತ ಎರಡು ವರ್ಷಗಳ ಕಾಲ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಜಿಲ್ಲೆಗಳಲ್ಲಿ ( ಅಮರಾವತಿ, ಅಕೋಲ, ಯವತ್ಮಾಳ್, ವಾರ್ಧಾ, ಭಂಡಾರ, ಗೋಂಡಿಯ, ಚಂದ್ರಾಪುರ್, ಬುಲ್ಡನಾ ಜಿಲ್ಲೆಗಳು) ಸಂಚರಿಸಿ, ಅಲ್ಲಿನ ಜನ್ ಆಂಧೋಲನ್ ಸಮಿತಿಯ ಕಿಶೋರ್ ತಿವಾರಿ ನೆರವಿನಿಂದ ರೈತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕೃತಿಯಲ್ಲಿ ಅಮರವಾತಿ ಹಾಗೂ ಯವತ್ನಾಳ್ ಎಂದು ಎರಡು ಭಾಗಗಳನ್ನಾಗಿ ಮಾಡಿಕೊಂಡಿರುವ ಲೇಖಕಿ ತಲಾ ಒಂಬತ್ತು ಅಧ್ಯಾಯಗಳುಳ್ಳ ಒಟ್ಟು ಹದಿನೆಂಟು ಅಧ್ಯಾಯಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಹದಿನೆಂಟು  ರೈತರ ಕುಟುಂಬಗಳ ದಾರುಣ ಸ್ಥಿತಿಯನ್ನು ವಿವರಿಸಿದ್ದಾರೆ.   ರೈತ ವಿಧವೆಯರು ತಮ್ಮ ಗಂಡಂದಿರುವ ಮಾಡಿದ ಸಾಲವನ್ನು ತೀರಿಸಲು ಹೋರಾಡುತ್ತಿರುವ ಪರಿ ಹಾಗೂ ಕೆಲವು ವಿಧವೆಯವರು ಪ್ರತಿ ದಿನ ಕೇವಲ ನೂರು ರೂಪಾಯಿಗೆ ಕೃಷಿ ಕೂಲಿ ಕಾರ್ಮಿಕರಾಗಿ ದುಡಿದು ಮಕ್ಕಳನ್ನು ಸಾಕುತ್ತಿರುವ ಜೀವನ, ಅವಿಭಕ್ತ ಕುಟುಂಬಗಳಲ್ಲಿ ಅತ್ತೆ-ಮಾವ ಮತ್ತು ಮೈದುನರಿಂದ ಅನುಭವಿಸುತ್ತಿರುವ ಕಿರುಕುಳ ಎಲ್ಲವನ್ನೂ ಸವಿವರವಾಗಿ ದಾಖಲಿಸಿದ್ದಾರೆ. ಕೃತಿಯಲ್ಲಿನ ನೋವಿನ ಅನುಭವಗಳೆಲ್ಲವೂ ರೈತ ವಿಧವೆಯರಾದರೆ, ಜ್ಯೋತಿ ಶೇಲರ್ ಬರೆದ ಲೇಖನದಲ್ಲಿ ಕಣ್ಣಾರೆ ಕಂಡ ತಮ್ಮ ತಂದೆಯವರ ಆತ್ಮಹತ್ಯೆಯ ಚಿತ್ರವನ್ನು ಮರೆಯಲಾಗದೆ ಬಳಲುತ್ತಿರುವ ಮಕ್ಕಳ ನೋವಿನ ಚಿತ್ರಣವಿದೆ. ಅಪ್ಪನ ಸಾವಿನ ನಂತರ ತನ್ನ ಹದಿನಾಲ್ಕನೆಯ ವಯಸ್ಸಿಗೆ ಕುಟುಂಬದ ಜವಬ್ದಾರಿ ಹೊತ್ತು ದುಡಿಯುತ್ತಿರುವ ಹಾಗೂ  ಬಾಲ್ಯ ಮತ್ತು ಹರೆಯ ಏನೆಂದು ತಿಳಿಯದ ಪವನ್ ಪರ್ವೆ ಎಂಬ ಯುವಕನ ಬದುಕಿನ ಹೋರಾಟ ಮತ್ತು ಮನೆಯ ಮಧ್ಯಭಾಗದಲ್ಲಿ ನೇಣು ಬಿಗಿದುಕೊಂಡ ಅಪ್ಪನ ಚಿತ್ರವನ್ನು ಮರೆಯಲಾಗದೆ ಇಂದಿಗೂ ಶೋಕಿಸುತ್ತಿರುವ ಬಾಲಕಿ ನಿಕಿಯ ಎಂಬಾಕೆಯ ಮಾನಸಿಕ ತುಮಲಗಳು ಓದುಗರನ್ನು ನಿರಂತರ ಕಾಡುತ್ತವೆ.  

(ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣ ಬರಹ)

ಗುರುವಾರ, ಫೆಬ್ರವರಿ 22, 2018

ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಒಂದಿಷ್ಟು ನೆನಪುಗಳು


ಕರ್ನಾಟಕ ಕಂಡ ಅಪರೂಪದ ಜನಪ್ರತಿನಿಧಿರೈತ ನಾಯಕ ಹಾಗೂ ಸಜ್ಜನ ವ್ಯಕ್ತಿತ್ವದ ಹೋರಾಟಗಾರ ಕೆ.ಎಸ್. ಪುಟ್ಟಣ್ಣಯ್ಯನವರ ನಿಧನದೊಂದಿಗೆ ರಾಜ್ಯದಲ್ಲಿ ರೈತ ಸಂಘದ ಚಳುವಳಿಯ ಸೈದ್ಧಾಂತಿಕ ಹೋರಾಟವು ಒಂದು ರೀತಿಯಲ್ಲಿ ತಾರ್ಕಿಕ ಅಂತ್ಯ ಕಂಡಂತಾಗಿದೆ. ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ನಂತರ ಮುಂದುವರಿದಿದ್ದ ರೈತಸಂಘಟನೆಯ ಹೋರಾಟವು ಕೆ.ಎಸ್. ಪುಟ್ಟಣ್ಣಯ್ಯನಂತಹ ನಾಯಕರ ನಿರ್ಗಮನದ ನಂತರವೂ ರಾಜ್ಯದಲ್ಲಿ ಮುಂದುವರಿಯಬಹುದು ಅಥವಾ ಸಂಘಟನೆಗೆ ಹೊಸ ನಾಯಕರೂ  ಹುಟ್ಟಿ ಬರಬಹುದು. ಆದರೆ, ಇವೆಲ್ಲವೂ ನಿಸ್ವಾರ್ಥದಿಂದ ಕೂಡಿದ ಹಾಗೂ ರೈತ ಸಮುದಾಯದ ಸುಖ ದುಃಖಗಳಿಗೆ ಸ್ಪಂದಿಸಬಲ್ಲ ಹೋರಾಟಗಳಾಗುತ್ತವೆ ಎಂಬುದರ ಕುರಿತು ನನಗೆ ಯಾವುದೇ ರೀತಿಯ ನಂಬಿಕೆಯಿಲ್ಲ.  1980 ರಲ್ಲಿ ಆರಂಭವಾದ ರೈತ ಹೋರಾಟದ ದಿನಗಳಿಂದ ಹಿಡಿದು  2004 ರವರೆಗೆ ಅಂದರೆ, ಪ್ರೊ.ಎಂ.ಡಿ ನಂಜುಂಡಸ್ವಾಮಿಯವರು ನಿಧನರಾಗುವವರೆಗೆ ರೈತ ಸಂಘÀಟನೆಯ ಅನೇಕ ನಾಯಕರ ಜೊತೆ ಒಡನಾಡುತ್ತಾ, ಚಳುವಳಿಯಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುತ್ತಾ ಬಂದವರಲ್ಲಿ ನಾನೂ ಒಬ್ಬನಾಗಿದ್ದೆ. . ಅದೇ ರೀತಿ   ನಂತರದ ದಿನಗಳಲ್ಲಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಎರಡು ಸಂಘಟನೆಗಳ ನಾಯಕರ ಸ್ವಾರ್ಥ, ಕಪಟತನ ಇವುಗಳನ್ನು ನೋಡಿ ಬೇಸತ್ತು ಅವುಗಳ ಜೊತೆಗಿನ ಎಲ್ಲಾ ಭಾವನಾತ್ಮಕ ಸಂಬಂಧಗಳನ್ನು ಕಳೆದು ಕೊಂಡವರಲ್ಲಿ ಸಹ ನಾನೂ ಒಬ್ಬನಾಗಿದ್ದೇನೆ.
ಕರ್ನಾಟಕ ರಾಜ್ಯ ರೈತ ಸಂಘಟನೆಗೆ  ಆರಂಭದ ದಿನಗಳಿಂದಲೂ, ಆರ್ಥಿಕವಾಗಿ, ನೈತಿಕವಾಗಿ ಹೋರಾಟದ ಬಲ ತುಂಬಿದ್ದು ಮಾತ್ರವಲ್ಲದೆಇಡೀ ನಾಡು ರೈತ ಸಂಘದತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಮಂಡ್ಯ ಜಿಲ್ಲೆಯ ರೈತನಾಯಕರು ವಹಿಸಿದ ಪಾತ್ರ ನಿರ್ಣಾಯಕವಾದುದು. ಮಂಡ್ಯ ಜಿಲ್ಲೆಗೆ ರೈತ ಹೋರಾಟವನ್ನು ವಿಸ್ತರಿಸುವಲ್ಲಿ ಶ್ರಮಿಸಿದವರೆಂದರೆ, ವಕೀಲರಾದ ಹನಕೆರೆಯ  ಹೆಚ್. ಶ್ರೀನಿವಾಸ್ಹೊಸ ಬೂದನೂರು ಗ್ರಾಮದ ಎಂ.ಶ್ರೀನಿವಾಸ್, ಕೊಪ್ಪಗ್ರಾಮದ ಕೆ.ಕೃಷ್ಣ, ಕೋಣಸಾಲೆ ಗ್ರಾಮದ ನರಸರಾಜು, ವರಗೇರಳ್ಳಿಯ ಅಶೋಕ್ ಮತ್ತು  ಬೂತನ ಹೊಸೂರು ಗ್ರಾಮದ ಎಸ್.ಡಿ. ಜಯರಾಂ ಇವರು ಪ್ರಮುಖರುಆದರೆ, ರೈತಸಂಘದ ದುರಂತವೆಂಬಂತೆ ಕಳೆದ ಮೂರೂವರೆ ದಶಕಗಳ ಕಾಲ ನಿರಂತರವಾಗಿ ದುಡಿದ ಮಂಡ್ಯ ಜಿಲ್ಲೆಯ ರೈತ ಸಂಘಟನೆಯ ಬಹುತೇಕ ನಾಯಕರು ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. 1981 ಡಿಸಂಬರ್ ತಿಂಗಳಿನಲ್ಲಿ ಪ್ರಥಮವಾಗಿ ನೆರೆಯ ಹಾಸನ ಮತ್ತು ಶಿವಮೊಗ್ಗ ಮೂಲಕ ರೈತ ಸಂಘದ ಹೋರಾಟವನ್ನು ಬರಮಾಡಿಕೊಂಡು ಅದರ ಸಂಘಟನಾ ಕಾರ್ಯದರ್ಶಿಯಾಗಿ ದುಡಿದ ಎಸ್.ಡಿ. ಜಯರಾಂ ಎಂಬ ನಾಯಕ ತನ್ನ 44 ನೇಯ ವಯಸ್ಸಿಗೆ ಇಪ್ಪತ್ತು ವರ್ಷಗಳ ಹಿಂದೆ ನಿಧನರಾದರು. ( ಕೆ.ಎಸ್.ಪುಟ್ಟಣ್ಣಯ್ಯನವರನ್ನು 1983 ರಲ್ಲಿ ರೈತ ಸಂಘಕ್ಕೆ ಕರೆದುಕೊಂಡು ಬಂದವರಲ್ಲಿ ಎಸ್.ಡಿ.ಜಯರಾಂ ಪ್ರಮುಖರು) ನಂತರ ಏಳೆಂಟು ವರ್ಷಗಳ ಹಿಂದೆ 1981 ರಿಂದ ಮನೆ, ಮಠವನ್ನು ತೊರೆದು ನಿರಂತರವಾಗಿ ರೈತಸಂಘದ ಚಳುವಳಿ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಮದ್ದೂರು ತಾಲ್ಲೂಕು ವರೆಗೇರಳ್ಳಿ ಅಶೋಕ ಎಂಬ ಗೆಳೆಯ ಮೃತಪಟ್ಟನು.
ಇವೆರೆಡು ಸಾವುಗಳನ್ನು ಮಂಡ್ಯ ಹಾಗೂ ರಾಜ್ಯ ರೈತ ಸಂಘಟನೆಗಳು ಜೀರ್ಣಿಸಿಕೊಳ್ಳುವ ಮೊದಲೇ ಕಳೆದ ಜನವರಿ ತಿಂಗಳು 24 ರಂದು ಬೆಸಗರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದು, ರೈತ ಹೋರಾಟಕ್ಕಾಗಿ ಅವಿವಾಹಿತನಾಗಿ ಉಳಿದು ದುಡಿಯುತ್ತಿದ್ದ ಹಾಗೂ ರಾಜ್ಯ ರೈತಸಂಘದ ಉಪಾಧ್ಯಕ್ಷನಾಗಿದ್ದ ಕೋಣಸಾಲೆ ನರಸರಾಜು ಹೃದಯಾಫಘಾತದಿಂದ ನಿಧನನಾದನು. ಇದಕ್ಕೂ ಮುನ್ನ ನನ್ನೂರಿನ ಕೆ.ಕೃಷ್ಣ ಕೊಪ್ಪ ಅವರು ಕಳೆದ ನವಂಬರ್ ತಿಂಗಳಲ್ಲಿ ನಿಧನರಾದರು.. ಕೆ.ಎಸ್. ಪ್ಮಟ್ಟಣ್ಣಯ್ಯನವರ ಆಪ್ತ ಬಳಗದಲ್ಲಿ ಒಬ್ಬನಾಗಿದ್ದ ನರಸರಾಜು ನಿಧನದಿಂದ ತೀರಾ ನೊಂದಿದ್ದ ಕೆ.ಎಸ್.ಪ್ಮಟ್ಟಣ್ಣಯ್ಯ ಒಂದು ರೀತಿಯಲ್ಲಿ ಏಕಾಂಗಿತನದ ನೋವನ್ನು ಅನುಭವಿಸುತ್ತಿದ್ದರು. ಕೆ.ಎಸ್. ಪುಟ್ಟಣ್ಣಯ್ಯನವರು ರೈತ ಸಂಘಕ್ಕೆ ಬರುವ ಮುಂಚಿನ ದಿನಗಳಿಂದಲೂ ನನಗೆ ಪರಿಚಿತರು.  “ಅಣ್ಣಯ್ಯಾಎಂದು ಅವರು ನನ್ನನ್ನು ಸಂಬೋಧಿಸುತ್ತಿದ್ದರೆ, ನಾನು ಅವರನ್ನು ಪುಟ್ಟಣ್ಣ ಎಂದು ಸಂಬೋಧಿಸುತ್ತಿದ್ದೆಕಳೆದ ಮೂರು ದಶಕಗಳ ಕಾಲ ತಮ್ಮ ಜೊತೆ ಹೋರಾಟದಲ್ಲಿ ಕೈಜೋಡಿಸಿದ್ದ  ಶ್ರೀರಂಗಪಟ್ಟಣ ತಾಲ್ಲೂಕು ರೈತ ಸಂಘಟನೆಯ ನಾಯಕ ನಂಜುಂಡೇಗೌಡಇತ್ತೀಚೆಗೆ ರಾಜಕೀಯ ಆಕಾಂಕ್ಷೆಯಿಂದ ಏಕಾಏಕಿ ರೈತಸಂಘವನ್ನು ತೊರೆದು ಬಿ.ಜೆ.ಪಿ. ಪಕ್ಷವನ್ನು ಸೇರಿದ್ದು ಅವರಿಗೆ ನೋವು ತಂದಿತ್ತು. ಜೊತೆಗೆ ಗೆಳೆಯ ನರಸರಾಜುವಿನ ಅಗಲಿಕೆ ಹಾಗೂ ಇತ್ತೀಚೆಗೆ ಪದೇ ಪದೇ ಕೈ ಕೊಡುತ್ತಿದ್ದ ಅವರ ಆರೋಗ್ಯ ಇವೆಲ್ಲವೂ ಪುಟ್ಟಣ್ಣಯ್ಯನವರನ್ನು ಚಿಂತೆಗೀಡು ಮಾಡಿದ್ದವು. ಮೈಸೂರು ನಗರದ ವಿಜಯನಗರದ ಮೂರನೆಯ ಹಂತದಲ್ಲಿ ಬಸವರಾಜು ಸರ್ಕಲ್ ಹತ್ತಿರ ಅವರ ಮನೆಯ ಸಮೀಪ ಕೇವಲ ಕೂಗಳತೆಯಲ್ಲಿ ನನ್ನ ಮಗನ ಮನೆ ಇರುವುದರಿಂದ ಮೈಸೂರಿಗೆ ಹೋದ ಸಂದರ್ಭದಲ್ಲಿ  ಖಾಸಾಗಿ ಭೇಟಿಯಾಗಿ ಮಾತನಾಡುತ್ತಿದ್ದೆ. ಸಂದರ್ಭಗಳಲ್ಲಿ ಯಾವುದೇ ಮುಚ್ಚು ಮರೆಯಿಲ್ಲದೆ ತಮ್ಮ ನೋವು, ಕಷ್ಟ ಸುಖಗಳನ್ನು ಪುಟ್ಟಣ್ಣಯ್ಯನವರು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಇಂತಹ  ಸಹೃದಯರ ಅನಿರೀಕ್ಷಿತ ನಿರ್ಗಮನ ನನ್ನಂತಹವರ ಪಾಲಿಗೆ ತುಂಬಲಾರದ ಶೂನ್ಯ ಎನಿಸತೊಡಗಿದೆ. ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ನಂತರ ಅವರಷ್ಟೇ ಪ್ರಭಾವಶಾಲಿಯಾಗಿ ರೈತಸಂಘವನ್ನು ಮುನ್ನಡೆಸಿದ ಕೀರ್ತಿ ಕೆ.ಎಸ್.ಪುಟ್ಟಣ್ಣಯ್ಯನವರದು.
ಮಂಡ್ಯ ಜಿಲ್ಲೆಯಜನರೆಂದರೆ. ಒರಟುತನಕ್ಕೆ ಮತ್ತು ನೇರಾವಾದ ನಡೆ ಮತ್ತು ನುಡಿಗೆ ಹೆಸರುವಾಸಿ ನಿಜ. ಆದರೆ, ಇದರ ಜೊತೆಗೆ  ಅವರು ಅದ್ದೂರಿಯ ಆತಿಥ್ಯಕ್ಕೆ ಅದರಲ್ಲೂ ವಿಶೇಷವಾಗಿ ಮಾಂಸಹಾರದ ಭೋಜನಕ್ಕೆ ಪ್ರಸಿದ್ಧಿಯಾದವರು. ಅದರಲ್ಲೂ ವಿಶೇಷವಾಗಿ ಪಾಂಡುವಪುರದ ರೈತರು ಆತಿಥ್ಯ ನೀಡುವುದರಲ್ಲಿ ಎತ್ತಿದ ಕೈ. ನಾನು ಮಂಡ್ಯದಲ್ಲಿ ಇದ್ದ ದಿನಗಳಲ್ಲಿ ಪ್ರತಿಭಾನವಾರ ಪುಟ್ಟಣ್ಣಯ್ಯನವರ ಊರಾದ ಕ್ಯಾತನಹಳ್ಳಿ ಅಥವಾ ಪಾಂಡುವಪುರಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಜನತಾ ಕ್ಲಿನಿಕ್ ನಡೆಸುತ್ತಿದ್ದ ಕ್ಯಾತನಹಳ್ಳಿಯ ನನ್ನ ಆತ್ಮೀಯ ಮಿತ್ರರಾದ ಡಾ.ಕೆ.ಶ್ರೀನಿವಾಸ್ ಅಥವಾ ಅದೇ ಊರಿನ ಪುಟ್ಟಣ್ಣಯ್ಯನವರ ಕೈಗೆ ಸಿಕ್ಕರೆ ಭರ್ಜರಿ ಭೋಜನ ಕಟ್ಟಿಟ್ಟ ಬುತ್ತಿ ಎನ್ನುವ ಹಾಗಿತ್ತು.  ಭಾರತದ ಎಲ್ಲಾ ಪ್ರದೇಶಗಳಲ್ಲಿ ಅನ್ನ, ಚಪಾತಿಯ ಮುಖ್ಯ ಆಹಾರವಾಗಿದ್ದು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಪಲ್ಯ ಇವುಗಳು ಸೈಡ್ ಐಟಂ ಗಳಾದರೆ, ಮಂಡ್ಯ ಗೌಡರ ಮಾಂಸಹಾರದ ಭೋಜನದಲ್ಲಿ ಅನ್ನ ಮತ್ತು ಮುದೆ ಇತ್ಯಾದ್ದಿ ಸೈಡ್ ಐಟಂಗಳಾಗಿ,  ಮಾಂಸವು ಮುಖ್ಯ ಆಹಾರವಾಗಿರುವುದು ವಿಶೇಷ. ಇಂತಹ ಪದ್ಧತಿಯ ಆತಿಥ್ಯವನ್ನು ನಿರಂತರವಾಗಿ ನೀಡುತ್ತಾ ಬಂದವರಲ್ಲಿ ಪುಟ್ಟಣ್ಣಯ್ಯ ಮತ್ತು ಗೆಳೆಯರನ್ನು ಮರೆಯಲಾಗದು. ಕ್ಯಾತನಹಳ್ಳಿಗೆ ಹೋದಾಗ ಯಾವುದೋ ಅರಳಿಕಟ್ಟೆಯ ಮೇಲೆ ಅಥವಾ ಕಾಲುವೇ ಏರಿಯ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಾ ಕೂರುತ್ತಿದ್ದ ಪುಟ್ಟಣ್ಣಯ್ಯನವರನ್ನು ನಾವು ಕಾಣಬಹುದಿತ್ತು.
ಕೆ.ಎಸ್. ಪ್ಮಟ್ಟಣ್ಣಯ್ಯನವರು ಕ್ಯಾತನಹಳ್ಳಿಯ ಸಾಕಷ್ಟು ಸಿರಿವಂತವಾದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಮಂಡ್ಯ ನಗರಕ್ಕಿಂತ ಮೈಸೂರು ನಗರಕ್ಕೆ ಅವರ ಹುಟ್ಟೂರು ಕ್ಯಾತನಹಳ್ಳಿ ಹತ್ತಿgವಿದ್ದುದರಿಂದ ಅವರು ಪ್ರೌಢಶಾಲೆಯ ಶಿಕ್ಷಣದ  ನಂತರ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಡಿ.ಬನುಮಯ್ಯ ಕಾಲೇಜಿನಲ್ಲಿ ಬಿ.. ಪದವಿ ಗಳಿಸಿ, ವಾಪಸ್ ಊರಿಗೆ ತೆರಳಿ ವ್ಯವಸಾಯದಲ್ಲಿ ನಿರತರಾಗಿದ್ದರು.   ಪೌರಾಣಿಕ ನಾಟಕ, ಜಾನಪದ ಕಲೆಗಳು ಮತ್ತು ಕಬಡ್ಡಿ ಕ್ರೀಡೆಯ ಕುರಿತು ಅಪಾರ ಆಸಕ್ತಿ ಇದ್ದ ಪುಟ್ಟಣ್ಣಯ್ಯನವರ ತನ್ನೂರಿನಲ್ಲಿ ಯುವ ರೈತ ಸಂಘವನ್ನು ಕಟ್ಟಿಕೊಂಡು  ಸದಾ ಕ್ರಿಯಾಶೀಲರಾಗಿದ್ದರು. (ಕುರುಕ್ಷೇತ್ರ ನಾಟಕದಲ್ಲಿ ಪುಟ್ಟಣ್ಣಯ್ಯ ಅಭಿನಯಿಸುತ್ತಿದ್ದ ದುರ್ರೋಧನನ ಪಾತ್ರವನ್ನು ನಾವ್ಯಾರೂ ಮರೆಯುವಂತಿಲ್ಲ) 1970 ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯುವಕರು ಸಾಮಾಜಿಕ ನಾಟಕಗಳ ಪ್ರದರ್ಶನದ ನೆಪದಲ್ಲಿ ಮಂಡ್ಯ ನಗರದಿಂದ ರಂಗಭೂಮಿಯ ನಟಿಯರನ್ನು ಕರೆತಂದು, ಸಿನಿಮಾ ಹಾಡುಗಳ ಕ್ಯಾಸೆಟ್ ಹಾಕಿಕೊಂಡು ಕುಣಿಯುತ್ತಿದ್ದ ದಿನಗಳಲ್ಲಿ ಕೆಟ್ಟ ಪರಂಪರೆಗೆ ಅಂತ್ಯ ಹಾಡಬೇಕೆಂದು ನಿರ್ಧರಿಸಿ, 1976 ರಲ್ಲಿ ನನ್ನೂರು ಕೊಪ್ಪದಲ್ಲಿ ನಾವು ಒಂದಿಷ್ಟು ಸಮಾನ ಮನಸ್ಕ ಗೆಳೆಯರು ಪ್ರತಿ ವರ್ಷ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದೆವುಪುಟ್ಟಣ್ಣಯ್ಯನವರು ತನ್ನೂರಿನ ನಾಟಕ ತಂಡವನ್ನು ಕರೆತಂದುಅಲ್ಲೇ ಕುಂತವ್ರೆಎಂಬ ಹೆಸರಿನ ಅಸ್ಪøಶ್ಯತೆಯ ಕುರಿತು ಜಾಗೃತಿ ಮೂಡಿಸುವ ನಾಟಕವೊಂದನ್ನು ಪ್ರದರ್ಶಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಇಂತಹ ಕ್ರಿಯಾಶೀಲ ಹಾಗೂ ಸದಾ ಜನಪರವಾಗಿ ಆಲೋಚಿಸುತ್ತಿದ್ದ ಕೆ.ಎಸ್. ಪುಟ್ಟಣ್ಣ ಎರಡು ಬಾರಿ ಶಾಸಕರಾಗಿ ವಿಧಾನ ಸಭೆಯಲ್ಲಿ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಮತ್ತು  ಹೇಗೆ ಮಾತನಾಡಬೇಕು ಎಂಬುದರ ಕುರಿತು ಎಲ್ಲರಿಗೂ ಮಾದರಿಯಾಗಿದ್ದರು.
ನಾನು ಬಲ್ಲಂತೆ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರಲ್ಲಿ ಒಬ್ಬ ಅದ್ಭುತ ಆಲೋಚನಾಗಾರ ಮತ್ತು ಸಂಘಟನಕಾರನಿದ್ದ. ಅದೇ ರೀತಿಯಲ್ಲಿ ಅವರೊಳಗೆ ವಿಧ್ವಂಸಕನೂ ಇದ್ದ. ಒಂದು ಸಂಘಟನೆಯಲ್ಲಿ ನಾಯಕನಾದವನಿಗೆ ಇರಬೇಕಾದ ತಾಳ್ಮೆ ಅಥವಾ ವಿವೇಚನೆ ಅವರಲ್ಲಿ ಇರಲಿಲ್ಲ. ಆರಂಭದ ದಿನಗಳಲ್ಲಿ ಎಂ.ಡಿ. ಸುಂದರೇಶ್, ಹಾಸನದ ಮಂಜುನಾಥ ದತ್ತ ಮತ್ತು ಶಿವಮೊಗ್ಗದ ಕೆ.ಟಿ.ಗಂಗಾಧರ್ ಇವರ ಮಾತಿಗೆ ಮನ್ನಣೆ ನೀಡುತ್ತಿದ್ದ ನಂಜುಂಡಸ್ವಾಮಿಯವರು ನಂತರ ದಿನಗಳಲ್ಲಿ ಸುಂದರೇಶ್ ಅವರ ನಿಧನ ಮತ್ತು ದತ್ತ ಹಾಗೂ ಗಂಗಾಧರ್ ಇವರು ರೈತ ಸಂಘದಿಂದ ನಿರ್ಗಮಿಸಿದ ನಂತರ ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನೋಭಾವ ಬೆಳಸಿಕೊಂಡಿದ್ದರು. ಚುನಾವಣೆ ವಿಷಯದಲ್ಲಿ ಹಾಗೂ ಹಣಕಾಸು ಹಾಗೂ ಇನ್ನಿತರೆ ವಿಷಯಗಳಲ್ಲಿ ಉಂಟಾದ ಬಿರುಕು ರೈತ ಸಂಘ ಒಡೆಯಲು ಕಾರಣವಾಯಿತು. ಇಂತಹ ಸ್ಥಿತಿಯಲ್ಲಿ ನಂಜುಂಡಸ್ವಾಮಿಯವರಿಂದ ಸಿಡಿದು, ಅವರಷ್ಟೇ ಪ್ರಬಲವಾಗಿ ರೈತ ಸಂಘಟನೆಯನ್ನು ಕಟ್ಟಿ ಮುನ್ನಡೆಸಿದವರಲ್ಲಿ ಪುಟ್ಟಣ್ಣಯ್ಯನವರು ಪ್ರಮುಖರು.

ಕೆ.ಎಸ್. ಪುಟ್ಟಣ್ಣಯ್ಯ ತಮ್ಮ ಗುರು ಪ್ರೊ. ನಂಜುಂಡಸ್ವಾಮಿಯವರಿಂದ ವೈಚಾರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರೂ ಸಹ ಎಂದಿಗೂ ಅವರ ಕುರಿತು ಖಾಸಾಗಿ, ಸಾರ್ವಜನಿಕವಾಗಿ ಕೆಟ್ಟ ಮಾತುಗಳನ್ನಾಡಿದವರಲ್ಲ. ನಂಜುಂಡಸ್ವಾಮಿ ನಿಧನರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಪುಟ್ಟಣ್ಣಯ್ಯನವರು ರಾಜರಾಜೆಶ್ವರಿ ನಗರದ ಅವರ ಮನೆಗೆ ಹೋದಾಗ, ನಂಜುಂಡಸ್ವಾಮಿಯವರ ಮಕ್ಕಳು ಮತ್ತು ಅವರ ಪತ್ನಿ ನಡೆದುಕೊಂಡ ರೀತಿಯನ್ನು ಯಾವೊಬ್ಬ ರೈತ ಸಂಘದ ಕಾರ್ಯಕರ್ತ ಇವೊತ್ತಿಗೂ ಕ್ಷಮಿಸಲಾರ. ಆದರೆ, ಪುಟ್ಟಣ್ಣಯ್ಯನವರು ಅಂತಹ ಅಪಮಾನಗಳನ್ನು ಮರೆತಿದ್ದರುಪ್ರೊಪೆಸರ್  ನಿಧನಾನಂತರ ರೈತ ಸಂಘಟನೆಗಳು ಒಗ್ಗೂಡಬೇಕು, ರೈತ ಸಮುದಾಯಕ್ಕೆ ಒಳಿತಾಗಬೇಕು ಎಂದು ಹಂಬಲಿಸಿದ ಅವರು, ಎಲ್ಲಾ ಪ್ರಗತಿ ಪರ ಸಂಘಟನೆಗಳ ಜೊತೆ ಕೈ ಜೋಡಿಸುತ್ತಾ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕೆಟ್ಟು ಕೆರ ಹಿಡಿದಿರುವ ಇವೊತ್ತಿನ ಸಾರ್ವಜನಿಕ ಬದುಕು, ರಾಜಕೀಯ ಅಥವಾ ಸಾಮಾಜಿಕ ಹೋರಾಟದಲ್ಲಿ ಪುಟ್ಟಣ್ಣಯ್ಯನಂತಹ ಅಸಾಮಾನ್ಯ ಹೋರಾಟಗಾರನನ್ನು ಹುಡುಕಿ ತರುವುದು ನಿಜಕ್ಕೂ ಕಷ್ಟದ ಸಂಗತಿ. ಇನ್ನು ಮುಂದೆ ಕನಾಟಕದ ಸಾಮಾಜಿಕ ಹೋರಾಟದ ಇತಿಹಾಸದಲ್ಲಿ ಪ್ರೊ.ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯನಂತಹ ಹೋರಾಟಗಾರರು ದಂತೆ ಕಥೆಗಳಾಗಿ  ಉಳಿದುಕೊಳ್ಳಬಲ್ಲರು.
( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣ ಬರಹ)