ಭಾನುವಾರ, ಮಾರ್ಚ್ 16, 2014

ನೀರೆಂಬ ನೀಲಿ ಚಿನ್ನ


ಇಡೀ ಜಗತ್ತನ್ನು ಗೆಲ್ಲಲು ಹೊರಟ ಮಹತ್ವಾಕಾಂಕ್ಷಿ ಗ್ರೀಸ್ ಅಲೆಕ್ಷಾಂಡರ್ ಕ್ರಿಸ್ತಪೂರ್ವ 326 ರಲ್ಲಿ ಭಾರತದ ನೆಲದಲ್ಲಿದ್ದನಿರಂತರ ಯುದ್ಧದಿಂದ ಬಸವಳಿದ ಅವನ ಸೈನಿಕರ ಅಸಹಾಕಾರಕ್ಕೆ ಮಣಿದು ಅಂತಿಮವಾಗಿ 323 ರಲ್ಲಿ ಅಂದಿನ ಪರ್ಷಿಯಾ ಮೂಲಕ ( ಇಂದಿನ ಇರಾಕ್, ಇರಾನ್ ಮತ್ತು ಟರ್ಕಿ) ಗ್ರೀಸ್ ದೇಶಕ್ಕೆ ಭೂಮಾರ್ಗದಲ್ಲಿ ಪ್ರಯಾಣ ಹೊರಟ ಆದರೆ ಕೇವಲ ಮುವತ್ತೇರಡರ ಅಲೆಕ್ಷಾಂಡರ್ ಮಾರ್ಗ ಮಧ್ಯದಲ್ಲಿ ನಿಗೂಡ ಕಾಯಿಲೆ ತುತ್ತಾಗಿ ಮರಣವನ್ನಪ್ಪಬೇಕಾಯಿತು. ಅರ್ಧ ಜಗತ್ತನ್ನು ಗೆದ್ದಿದ್ದ ಅಲೆಕ್ಷಾಂಡರ್ ತಾನು ಸಾಯುವ ಕೊನೆಯ ಗಳಿಗೆಯಲ್ಲಿ ಬಯಸಿದ್ದು  ಕೇವಲ ಒಂದು ಬೊಗಸೆ ನೀರನ್ನು ಮಾತ್ರ. ಅವನ ದುರಾದೃಷ್ಟಕ್ಕೆ ಮರುಭೂಮಿಯಲ್ಲಿ  ಅದೂ ಸಹ ದಕ್ಕಲಿಲ್ಲ. ತನ್ನ ದೈನೇಸಿ ಸ್ಥಿತಿಯಲ್ಲಿ ತನ್ನ ಶವವನ್ನು ಹೂಳುವಾಗ ನನ್ನ ಹಸ್ತಗಳೆರೆಡು  ಭೂಮಿಯ ಮೇಲೆ ಎಲ್ಲರಿಗೂ ಕಾಣುವಂತಿರಲಿ ಎಂದು ತನ್ನ ಸೈನಿಕರಿಗೆ ದೊರೆ ಅಲೆಕ್ಷಾಂಡರ್ ಆದೇಶಿಸಿದ್ದ. ಬರಿಗೈಲಿ ಭೂಮಿಗೆ ಬಂದ ಅಲೆಕ್ಷಾಂಡರ್ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲಿಲ್ಲಎಂಬ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶ ಅವನದಾಗಿತ್ತು. ಇಂತಹ ಚರಿತ್ರೆಯ ಕಟು ವಾಸ್ತವ ಸಂಗತಿಗಳು ಮತ್ತು ಕಹಿ ಸತ್ಯಗಳು ಜಗತ್ತಿಗೆ ಅರಿವಾದಾಗ ಮಾತ್ರ ನಮಗೆ ನೀರಿನ ಮಹತ್ವವೂ ಅರಿವಾಗಬಲ್ಲದು.

ಆಧುನಿಕತೆ ಮತ್ತು ಅಭಿವೃದ್ಧಿಯ ನೆಪದಲ್ಲಿ ದಾಪುಗಾಲು ಹಾಕುತ್ತಿರುವ ವರ್ತಮಾನದ ಜಗತ್ತಿಗೆ ತನ್ನ ನಿಶ್ಚಿತ ಗುರಿ ಏನೆಂಬುದರ ಬಗ್ಗೆ ಕಾಳಜಿಯಿದ್ದಂತೆ ಕಾಣುವುದಿಲ್ಲ. ಮನುಷ್ಯನ ಜ್ಞಾನ ವಿಕಾಸವಾದಂತೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾಗುತ್ತಿದ್ದಂತೆ, ಆಧುನಿಕ ಜಗತ್ತಿನ ಮನುಷ್ಯನಲ್ಲಿ ಪ್ರಕೃತಿಯನ್ನು ಮಣಿಸುವ, ಶೋಷಿಸುವ ಅಹಂಕಾರ ತಲೆಯೆತ್ತತೊಡಗಿದೆ. ನೆಲದ ನೀರು, ಗಾಳಿ, ಗಿಡ, ಮರ, ಪ್ರಾಣಿ, ಬೆಟ್ಟ, ಗುಡ್ಡ ಏನೊಂದು ಅವನ ವಕ್ರದೃಷ್ಟಿಯಿಂದ ಪಾರಾಗಲು ಅವಕಾಶವಿಲ್ಲದಂತಾಗಿದೆ, ನಾವು ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ, ಇಲ್ಲಿಯ ಪರಿಸರವನ್ನು ಉಳಿಸಿ, ಬೆಳಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ನೈತಿಕ ಜವಾಬ್ದಾರಿಯೊಂದು ನಮ್ಮ ಮೇಲಿದೆ ಎಂಬ ಪ್ರಜೆÐ ಇದೀಗ ವಿಸ್ಮøತಿಗೆ ಜಾರಿದೆ. ಹಾಗಾಗಿ  ನೈಸರ್ಗಿಕ ಕೊಡುಗೆಯಾದ  ನೀರು ಕೂಡ ಇಂದಿನ ದಿನಗಳಲ್ಲಿ ಮಾರಾಟದ ಸರಕಾಗಿ ಬಿಕರಿಯಾಗುತ್ತಿದೆ. ಉಳ್ಳವರಿಗಷ್ಟೇ ಜಗತ್ತು ಎಂಬ ಅಘೋಷಿತ ನಿಯಮವೊಂದು  ಯಾವುದೇ ಗಡಿರೇಖೆಗಳು ಮತ್ತು ಭಾಷೆಯÀ ಹಂಗಿಲ್ಲದೆ  ವರ್ತಮಾನದಲ್ಲಿ ಜಾರಿಯಲ್ಲಿದೆ.
ಹರಿಯವ ನೀರಿಗೆ ಗಂಗೆಯೆಂದು ಪೂಜಿಸಿ ಕೈಯೆತ್ತಿ ಮುಗಿದವರ ಕಣ್ಣೆದುರು ನೆಲದ ಮೇಲಿನ ನೀರು, ಕಲುಷಿತಗೊಂಡು ಕುಡಿಯಲು ಆಗದೆ, ಬಳಸಲೂ ಆಗದ ಸ್ಥಿತಿಯಲ್ಲಿ ನಿಷ್ಪ್ರಯೋಜಕವಾಗಿದೆ. ಅಭಿವೃದ್ದಿಯೆಂದರೆ, ನಿಸರ್ಗದ ಮೇಲಿನ ಅಘೋಷಿತ ಯುದ್ಧ ಎಂಬ ಸ್ಥಿತಿಯಲ್ಲಿರುವ ಇಪ್ಪತ್ತೊಂದನೆಯ ಶತಮಾನದಲ್ಲಿ ಇದರ ನೇರ ಪರಿಣಾಮಕ್ಕೆ ಒಳಗಾದವರು ಮಾತ್ರ ಕಡು ಬಡವರುಅಮೃತ ಎಂದು ಕರೆಸಿಕೊಳ್ಳುವ ಹಾಲಿಗೂ, ನೀರಿಗೂ ಬೆಲೆಯಲ್ಲಿ ಈಗ  ಯಾವ ವೆತ್ಯಾಸವೂ ಉಳಿದಿಲ್ಲ.


ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಯುದ್ಧವೆಂಬುದು ನಡೆಯುವುದಾದರೆ, ಅದು ನೀರಿಗಾಗಿ ಮಾತ್ರಎಂಬ ಮಾತು  ಕಳೆದ ಎರಡು ದಶಕಗಳಿಂದ ಕ್ಲೀಷೆಯ ಮಾತಿನಂತೆ ತೋರತೊಡಗಿದೆ. ಅತ್ಯಾಧುನಿಕತೆ ಮತ್ತು ನಾಗರೀಕತೆಯ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಮನುಷ್ಯನ ಅನುಭೋಗ ಪ್ರವೃತ್ತಿಯಿಂದಾಗಿ ನಿಸರ್ಗದ ಕೊಡುಗೆಗಳಾದ ಗಾಳಿ, ನೀರು ಇನ್ನಿಲ್ಲದಂತೆ ಕಲುಷಿತಗೊಂಡವು. ಕಾರಣಕ್ಕಾಗಿ ಖ್ಯಾತ ನಾಟಕಕಾರ ಬರ್ನಾಡ್ ಷಾ, “ ವಿಜ್ಞಾನ ಅಥವಾ ತಂತ್ರಜ್ಞಾನದಿಂದ ಒಂದು ಸಮಸ್ಯೆ ಪರಿಹಾರವಾಯಿತು ಎಂದರೆ, ಹತ್ತು ಸಮಸ್ಯೆಗಳು ಹೊಸದಾಗಿ ಸೃಷ್ಟಿಯಾದವು ಎಂದರ್ಥಎಂಬ ಅರ್ಥಗರ್ಭಿತ ಮಾತುಗಳನ್ನಾಡಿದ್ದನು. ಕಳೆದ ಇಪ್ಪತ್ತು ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆದ ನಷ್ಟ, ಈಗ ಕೇವಲ ಐವತ್ತು ವರ್ಷಗಳಲ್ಲಿ ಜರುಗಿದೆ ಎಂದರೆ, ಮನುಷ್ಯನ ಭವಿಷ್ಯದ ಹಾದಿ ಯಾವುದು? ಎಂಬುದು ಸಧ್ಯÀ ನಮ್ಮ ಮುಂದಿರುವ ಪ್ರಶ್ನೆ. ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಪರಿಸರದ ರಕ್ಷಣೆಗಾಗಿ ಹಲವಾರು ಆಚರಣೆಗಳು ಜಾರಿಯಲ್ಲಿವೆ. ವಿಶ್ವ ಸಂಸ್ಥೆಯು ಶುದ್ಧ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರ್ಚ್ 22 ದಿನಾಂಕವನ್ನು ವಿಶ್ವ ಜಲಾ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಇಂತಹ ಆಚರಣೆಗಳ ನೆಪದಲ್ಲಿ  ನಡೆಯುವ ಕಾರ್ಯಕ್ರಮಗಳು ನೀರಿನ ಮಹತ್ವದ ಬಗ್ಗೆ ಒಂದಿಷ್ಟು ಅರಿವು ಮೂಡಿಸಿದಾಗ ಮಾತ್ರ ಆಚರಣೆಗೆ ಒಂದಿಷ್ಟು  ಅರ್ಥ ಬರಲು ಸಾಧ್ಯ.
ಸಧ್ಯ ಭೂಮಿಯುನ್ನು ಶೇಕಡ 70 ಭಾಗ ನೀರು ಆವರಿಸಿಕೊಂಡಿದ್ದರೂ ಸಹ ಇದರಲ್ಲಿ ಶೇಕಡ 97.5 ರಷ್ಟು ನೀರು ಸಮುದ್ರದಲ್ಲಿ ಶೇಖರವಾಗಿದೆ. ಉಳಿಕೆ ಭಾಗದ ನೀರಾದ 35 ಚದುರ ಘನ ಕಿಲೋಮೀಟರ್Àನಷ್ಟು ನೀರಿನಲ್ಲಿ ಶೇಕಡ 68.7 ರಷ್ಟು ನೀರು ಹಿಮಗೆಡ್ಡೆಯ ರೂಪದಲ್ಲಿದೆ. ಶೇಕಡ 30 ರಷ್ಟು ನೀರು ಅಂತರ್ಜಲ ರೂಪದಲ್ಲಿದ್ದು, ಭೂಮಿಯ ಮೇಲ್ಪದರಿನಲ್ಲಿ 0.03 ರಷ್ಟು ನೀರಿದೆ. ನೀರಿನ ಪ್ರಮಾಣದಲ್ಲಿ ಶೇಕಡ 87 ರಷ್ಟು ಕೊಳಗಳಲ್ಲಿ, ಶೇಕಡ 11 ರಷ್ಟು ಭಾಗ ಜೌಗು ಪ್ರದೇಶದಲ್ಲಿ ಮತ್ತು ಶೇಕಡ 2ರಷ್ಟು ನೀರು ನದಿಗಳಲ್ಲಿ ಶೇಖರವಾಗಿದೆ ಎಂದು ಅಂದಾಜಿಸಲಾಗಿದೆ.



ಇದು ಜಾಗತಿಕ ಮಟ್ಟದ ನೀರಿನ ಅಂಕಿ ಅಂಶವಾದರೆ, ನೀರಿನ ಲಭ್ಯತೆಯ ಅಂಕಿ ಅಂಶಗಳತ್ತ ಗಮನ ಹರಿಸಿದರೆ, ನಿಜಕ್ಕೂ ಭವಿಷ್ಯದ ಬಗ್ಗೆ ಆತಂಕ ಮುಡುತ್ತದೆ. ಜಗತ್ತಿನ ಜನಸಂಖ್ಯೆಯಲ್ಲಿ ( ಅಂದಾಜು 700 ಕೋಟಿ) ಶೇಕಡ 60 ರಷ್ಟು ಜನತೆ ವಾಸಿಸುತ್ತಿರುವ ಏಷ್ಯಾ ಖಂಡದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೇವಲ ಶೇಕಡ 37 ರಷ್ಟು ಶುದ್ಧ ಕುಡಿಯುವ ನೀರು ಮಾತ್ರ ಲಭ್ಯವಾಗುತ್ತಿದೆ. ಜಗತ್ತಿನ ಶೇಕಡ 13 ರಷ್ಟು ಇರುವ ಆಫ್ರಿಕಾ ಖಂಡಕ್ಕೆ ಶೇಕಡ 11 ರಷ್ಟು, ಶೇಕಡ ಒಂದರಷ್ಟು ಜನಸಂಖ್ಯೆ ಇರುವ ಆಸ್ಟ್ರೇಲಿಯಾ ಖಂಡದಲ್ಲಿ ಶೇಕಡ 6 ರಷ್ಟು ನೀರು ದೊರೆಯುತ್ತಿದೆ. ದಕ್ಷಿಣ ಅಮೇರಿಕಾ ಖಂಡದ ಜನಸಂಖ್ಯೆ ಜಗತ್ತಿನ ಶೇಕಡ 6 ರಷ್ಟು ಇದ್ದು, ಶೇಕಡ 26 ರಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆಯಿದೆ. ಉತ್ತರ ಅಮೇರಿಕಾದ ಜನಸಂಖ್ಯೆ  ಜಾಗತಿಕ ಮಟ್ಟದ ಶೇಕಡ 8 ರಷ್ಟಿದ್ದು, ನೀರಿನ ಲಭ್ಯತೆಯ ಪ್ರಮಾಣ ಶೇಕಡ 15 ರಷ್ಟಿದೆ.
ಜಗತ್ತಿನ ತೃತೀಯ ಜಗತ್ತಿನ ರಾಷ್ಟ್ರಗಳಾದ ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನೀರಿನ ಕೊರತೆ ಎಲ್ಲಾ ರಾಷ್ಟ್ರಗಳ ಸರ್ಕಾರಗಳ ಪಾಲಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆ 2000 ದಲ್ಲಿ ಶತಮಾನದ ಅಭಿವೃದ್ದಿಯ ಗುರಿಗಳು (Milleniam Devlopment Goals) ಎಂಬ 15 ವರ್ಷಗಳ ಅವಧಿಯ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿತ್ತು. ಯೋಜನೆ ಮುಂದಿನ ವರ್ಷ ಅಂತ್ಯ ಗೊಳ್ಳಲಿದ್ದು, ಇದರ ಮುಖ್ಯ ಗುರಿಗಳಾಗಿದ್ದ ಜಾಗತಿಕ ಮಟ್ಟದ ಆರೋಗ್ಯ, ಹಸಿವು ಮತ್ತು ಬಡತನ ನಿವಾರಣೆ ಹಾಗೂ ಶುದ್ಧ  ಕುಡಿಯುವ ನೀರಿನ ಯೋಜನೆಗಳಲ್ಲಿ ಆರೋಗ್ಯ ಮತ್ತು ಬಡತನ ಒಂದಿಷ್ಟು ಸುಧಾರಿಸಿದ್ದು, ಶೌಚಾಲಯ ಮತ್ತು ಕುಡಿಯುವ ನೀರು ಇವುಗಳು ಸಮಸ್ಯೆಗಳಾಗಿ ಉಳಿದಿವೆ ಎಂದು ಅರ್ಥಶಾಸ್ತ್ರಜ್ಞರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಎರಡು ದಶಕದಲ್ಲಿ ತೀವ್ರಗೊಂಡ ಜಾಗತೀಕರಣ ಮತ್ತು ಉದಾರೀಕರಣದ ಫಲವಾಗಿ ಜಗತ್ತಿನ ನಗರಗಳು ಅಸ್ವಾಭಾವಿಕವಾಗಿ  ಬೆಳಯತೊಡಗಿರುವುದು ಯೊಜನೆಯ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.


ಇತ್ತೀಚೆಗಿನ ದಿನಗಳಲ್ಲಿ ತೀವ್ರಗೊಂಡ ನಗರೀಕರಣದಿಂದಾಗಿ ಗ್ರಾಮಾಂತರ ಪ್ರದೇಶಗಳಿಂದ ನಗರಗಳಿಗೆ ವಲಸೆ ಬರುವ ಜನರು ವಸತಿ, ಶೌಚಾಲಯ ಮತ್ತು ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಅಬಿವೃಧ್ಧಿಯ ವಿಕೃತಿಗಳ ಫಲವೆನೊ? ಎಂಬಂತಿರುವ ಹಾಗೂ  ಯಾವುದೇ ಮಾನವೀಯ ಮುಖವಿಲ್ಲದೆÀ ಜಾಗತೀಕರಣದ ಪ್ರತಿನಿಧಿಗಳಂತೆ ಕಾಣುವ ವಿಶ್ವಬ್ಯಾಂಕ್,( World Bank) ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ,(International monetory Found) ಮತ್ತು ವಿಶ್ವ ವಾಣಿಜ್ಯ ಸಂಘಟನೆ (World Trade organizationಇವುಗಳು, ಇಂಗ್ಲೆಂಡ್, ಅಮೇರಿಕಾ, ಮತ್ತು ಪ್ರಾನ್ಸ್ ಹಾಗೂ ಕೆನಡಾ ಮೂಲದ  ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನೀರಿನ ಖಾಸಾಗಿಕರಣ ಯೋಜನೆಗಳನ್ನು ತೃತೀಯ ಜಗತ್ತಿನ ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳಲ್ಲಿ ಜಾರಿಯಲ್ಲಿಟ್ಟಿವ್ದೆ, ಇದರ ಪರಿಣಾಮವಾಗಿ  ನೈಸರ್ಗಿಕವಾಗಿ ಪುಕ್ಕಟೆ ದೊರೆಯುತ್ತಿದ್ದ ನೀರು ಇಂದು ಬಡಜನತೆಯ ಪಾಲಿಗೆ ಕೈಗೆಟುಕದ ನೀಲಿ ಚಿನ್ನವೆಂಬಂತಾಗಿದೆ. ನೀರಿನ ಖಾಸಾಗಿಕರಣ ಬಹುರಾಷ್ರೀಯ ಕಂಪನಿಗಳ ಪಾಲಿಗೆ ಬಂಡವಾಳವಿಲ್ಲದ ಲಾಭದ ದಂಧೆಯಾಗಿದೆ. ಆಮೀಷಕ್ಕೆ ಬಲಿಯಾದ ಜಗತ್ತಿನ ಹಲವು ರಾಷ್ರಗಳ ಸರ್ಕಾರಗಳು ತಮ್ಮ ನೆಲದ ನದಿಗಳನ್ನು ಬಹುರಾಷ್ರೀಯ ಕಂಪನಿಗಳಿಗೆ ಗುತ್ತಿಗೆ ನೀಡಿವೆ. “ಹೊಳೆ ನೀರಿಗೆ ದೊಣೆ ನಾಯಕನ ಅಪ್ಪಣೆಯಾ?” ಎಂಬ ಮಾತು ಇಪ್ಪೊಂದನೆಯ  ಶತಮಾನದಲ್ಲಿ ತನ್ನ ಅರ್ಥ ಕಳೆದುಕೊಂಡಿದೆ.


2050 ವೇಳೆಗೆ ಜಗತ್ತಿನ ಜನಸಂಖ್ಯೆ ಈಗಿನ 700 ಕೋಟಿಯಿಂದ 1000 ಕೋಟಿಗೆ ತಲುಪುವ ಸಾದ್ಯತೆಯಿದ್ದು ಇವರಿಗೆ ಕುಡಿಯುವ ನೀರು ಒದಗಿಸುವ ಬಗೆ ಹೇಗೆ? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಸದ್ಯದ ಬೇಡಿಕೆಗಿಂತ ಶೇಕಡ 80 ರಷ್ಟು ಹೆಚ್ಚಿನ ನೀರಿನ ಅವಶ್ಯಕತೆ ಇದೆ ಎಂದು ಜಲತಜ್ಞರು ಅಂದಾಜಿಸಿದ್ದಾರೆ. ಉತ್ತರ ಚೀನಾ, ಮಧ್ಯಪ್ರಾಚ್ಯ, ಭಾರತ ಮತ್ತು ದಕ್ಷಿಣ ಅಮೇರಿಕಾ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ನೀರಿನ ಕೊರತೆ ಅನುಭವಿಸುವ ರಾಷ್ಟ್ರಗಳು ಎಂದು ಗುರುತಿಸಲಾಗಿದೆ. 2030 ವೇಳೆಗೆ ಭಾರತವೂ ಸೇÉರಿದಂತೆ  ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುವ ಕಾರಣ ಅರ್ಧದಷ್ಟು ಜನಸಂಖ್ಯೆ ಕೊಳಗೇರಿ ನಿವಾಸಿಗಳಾಗುತ್ತಾರೆ ಎಂಬುದು ತಜ್ಞರ ಲೆಕ್ಕಾಚಾರ. ಭಾರತದಲ್ಲಿ ಸರಾಸರಿ ಒಬ್ಬ ವ್ಯೆಕ್ತಿಗೆ 70 ರಿಂದ 90 ಲೀಟರ್ ನೀರಿನ ಅವಶ್ಯಕತೆ ಇದ್ದು, ನಗರಗಳ ಕೊಳಗೇರಿಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯೆಕ್ತಿಗೆ ಲಭ್ಯವಾಗುತ್ತಿರುವ ನೀರಿನ ಪ್ರಮಾಣ ಕೇವಲ 8 ಲೀಟರ್ ಮಾತ್ರ. ಮುಂಬೈ ನಗರದ ಕೊಳಗೇರಿಯಲ್ಲಿ ಪ್ರತಿ 5040 ಜನಸಂಖ್ಯೆಗೆ ಒಂದು ಶೌಚಾಲಯವಿದೆ ಎಂದರೆ, ಅಲ್ಲಿನ ನಿವಾಸಿಗಳ ಬದುಕು ಹೇಗಿರಬಹುದು ಊಹಿಸಿ.
ಭಾರತದ 32 ಪ್ರಮುಖ ನಗರಗಳ ಪೈಕಿ 22 ನಗರಗಳು ಕುಡಿಯುವ ನೀರಿನ ಅಭಾವ ಎದುರಿಸುತ್ತಿವೆ, ಇವುಗಳಲ್ಲಿ ಜೆಮ್ಶೆಡ್ಪುರ, ಬೇಡಿಕೆಯ  ಶೇಕಡ 70 ರಷ್ಟು ಕೊರತೆ ಎದುರಿಸುತ್ತಿದ್ದು ಮೊದಲನೆಯ ಸ್ಥಾನದಲ್ಲಿದೆ. ನಂತರ ಕಾನ್ಪುರ, Àನಾಬಾದ್, ಮೀರತ್, ಫರಿದಾಬಾದ್, ವಿಶಾಖಪಟ್ಟಣ, ಮಧುರೈ, ಹೈದರಾಬಾದ್ ನಗರಗಳು ಶೇಕಡ 30 ರಷ್ಟು ನೀರಿನ ಕೊರತೆ ಎದುರಿಸುತ್ತಿವೆ. ಮುಂಬೈ ನಗರ ಶೇಕಡ 24 ಮತ್ತು  ದೆಹಲಿ ನಗರದಲ್ಲಿ ಶೆಕಡ 17 ರಷ್ಟು ನೀರಿನ ಕೊರತೆಯಿದೆ. ಕುಡಿಯುವ ನೀರಿಗಾಗಿ ಕಂಡು ಹಿಡಿದ ಕೊಳವೆ ಬಾವಿಯ ತಂತ್ರಜ್ಞಾನ ಈಗ ಬಹುತೇಕ ಬೇಸಾಯಕ್ಕೆ ಮೀಸಲಾಗಿದೆ. ಅನಾವಶ್ಯಕವಾಗಿ ವಾಣಿಜ್ಯ ಬೆಳೆಗಳಿಗೆ ಕೊಳವೆ ಬಾವಿ ಮೂಲಕ ನೀರು ಉಣಿಸುತ್ತಿರುವ ಪರಿಣಾಮ ದೇಶದೆಲ್ಲೆಡೆ, ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ.


1951 ರಲ್ಲಿ ಭಾರತದಲ್ಲಿ 36 ಕೋಟಿ ಜನಸಂಖ್ಯೆ ಇದ್ದ ಸಮಯದಲ್ಲಿ ನೀರಿನ ಲಭ್ಯತೆಯ ಪ್ರಮಾಣ ಪ್ರತಿ ವ್ಯಕ್ತಿಗೆ ವರ್ಷವೊಂದಕ್ಕೆ 5ಲಕ್ಷದ 77 ಸಾವಿರ ಲೀಟರ್ ನೀರು ಇತ್ತು. ಇದು 2010 ವೇಳೆಗೆ ಒಂದು ಲಕ್ಷದ 82 ಸಾವಿರ ಲೀಟರ್ ಪ್ರಮಾಣಕ್ಕೆ ಕುಸಿದಿದ್ದು, ಮುಂದಿನ 2050 ವೇಳೆಗೆ 1ಲಕ್ಷದ 14 ಸಾವಿರಕ್ಕೆ ಕುಸಿಯಬಹುದೆಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಪ್ರತಿ ದಿನ 1620 ಮಕ್ಕಳು ನೀರಿಗೆ ಸಂಬಂಧಿಸಿದ ಕಾಯಿಲೆಗಳಿಂದ ಅಸುನೀಗುತ್ತಿದ್ದಾರೆ. ಇದು ದೇಶದಲ್ಲಿ ಸಂಭವಿಸುತ್ತಿರುವ ವಾಹನ ಅಪಘಾತ, ಏಡ್ಸ್, ಮತ್ತು ಮಲೇರಿಯಾ ಕಾಯಿಲೆಗಳ ಕಾರಣದಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಿದೆ.
ಅಭಿವೃದ್ಧಿ ಕುರಿತು ಪುಂಖಾನುಪುಂಖವಾಗಿ  ಭಾಷಣ ಬಿಗಿಯುವ ನಮ್ಮ ನಾಯಕರಿಗೆ ಭಾರತದಲ್ಲಿರುವ ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ 90 ಕೋಟಿ 70 ಲಕ್ಷ ಜನಸಂಖ್ಯೆಗೆ ಶೌಚಾಲಯವಿಲ್ಲ ಮತ್ತು ಕುಡಿಯುವ ಶುದ್ದ ನೀರಿನ ವ್ಯೆವಸ್ಥೆಯಿಲ್ಲ ಎಂಬ ವಾಸ್ತವದ ಬಗ್ಗೆ ಅರಿವಿಲ್ಲ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇಕಡ 14 ರಷ್ಟು ಮಾತ್ರ ಶೌಚಾಲಯಗಳಿವೆ. ಭಾರತದ 100 ಕೋಟಿ ಜನರ ಕೈಯಲ್ಲಿ ಮೊಬೈಲ್ಗಳಿವೆ ಆದರೆ. ಮುಕ್ಕಾಲು ಮಂದಿಗೆ ಶೌಚಾಯಲವಿಲ್ಲವೆಂಬುದು ನಮಗೆ ಅಪಮಾನದ ಸಂಗತಿಯಾಗಿ ಉಳಿದಿಲ್ಲ ಅಭಿವೃದ್ಧಿ ಎಂಬುದು ಹೇಗೆ ವಿಕೃತ ರೂಪ ತಾಳಬಹುದೆಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.
ಕೇವಲ ಕಣ್ಣಿಗೆ ಗೋಚರಿಸುವ ರಸ್ತೆ, ಸೇತುವೆ, ಬೃಹತ್ತಾದ ಕಟ್ಟಡಗಳು, ಅಣೆಕಟ್ಟುಗಳು ಇಂತಹುಗಳನ್ನು ನಾವು ಅಭಿವೃದ್ದಿಯ ಸಂಕೇತಗಳೆಂದು  ವ್ಯಾಖ್ಯಾನಿಸುತ್ತೇವೆ. ದಿಕ್ಕಿನಲ್ಲಿ ನಿಜಕ್ಕೂ  ನಮ್ಮ ಅಲೋಚನಾ ಕ್ರಮಗಳು ಬದಲಾಗಬೇಕಿದೆ. ಮನುಷ್ಯನೊಬ್ಬನ ಘನÀತೆಯ ಬದುಕಿಗೆ ತೀರಾ ಅವಶ್ಯಕವಾದ ಮೂಲಭೂತ ಸೌಕರ್ಯಗಳೆನಿಸುವ ನೀರು, ವಸತಿ, ಆರೋಗ್ಯ ಮತ್ತು ಶಿಕ್ಷಣ ಇವುಗಳಿಗೆ ಆದ್ಯತೆ ನೀqಬೇಕಿÀದೆ, ಕೇವಲ ರಾಜಕೀಯ ಪ್ರೇರಿತ ರಿಯಾಯಿತಿ ಯೋಜನೆ ಮೂಲಕ ಬಡವರನ್ನು ಬಡವರನ್ನಾಗಿ ಇಡುವ ಹುನ್ನಾರಗಳು ಯಾವೊತ್ತಿಗೂ ಸಾಮಾನ್ಯ ಜನರನ್ನು ಉದ್ಧಾರಮಾಡಲಾರವು. ಅವೆಲ್ಲವೂ ಕ್ಷಣಿಕದ ಆಮೀಷಗಳು ಮಾತ್ರ.



ತಾವು ಬದುಕುವುದರ ಜೊತೆಗೆ ತಮ್ಮ ಪರಿಸರಕ್ಕೆ ಒಂದಿನಿತೂ ಧಕ್ಕೆಯಾಗದಂತೆ, ಎರವಾಗದಂತೆ ಸರಳವಾಗಿ ಬದುಕಿ ಬಾಳಿಹೋದ ನಮ್ಮ ಪೂರ್ವಿಕರ ಜೀವನಕ್ರಮ ಮತ್ತು ಅವರ ಜ್ಞಾನಶಿಸ್ತು ನಮಗೆ  ಮಾರ್ಗದರ್ಶನವಾಗಬೇಕಿದೆ. ಬಡತನ ನಿವಾರಣೆಗಿಂತ ಬಡವರ ನಿರ್ಮೂಲನೆ ಮುಖ್ಯವೆಂಬಂತೆ ತೋರುತ್ತಿರುವ ಆಧುನಿಕ ಅಭಿವೃದ್ಧಿಯ ರಕ್ಕಸನ ಕೈಯಲ್ಲಿ ಸಿಲುಕಿರುವÀ ನಮ್ಮ ಹಳ್ಳಿಗಳು ನಾಶವಾಗುತ್ತಿರುವ ಪರಿಣಾಮ, ನಮ್ಮ ಜಲ ಸಂಪನ್ಮೂಲಗಳಾದ ಕೆರೆ, ಕೊಳ್ಳ, ಹಳ್ಳಗಳು ನಾಶವಾಗುತ್ತಿವೆ, ಇಲ್ಲವೇ ಬತ್ತುತ್ತಿವೆ. ನದಿಗಳು ದೇಶದ ಮಹಾನ್ ನಗರಗಳ ಕೊಳಚೆಯ ನೀರನ್ನು ಸಮುದ್ರಕ್ಕೆ ಸಾಗಿಸುವ ರಾಜಕಾಲುವೆಗಳಾಗಿ ಪರಿವರ್ತನೆ ಹೊಂದಿವೆ. ಇದೊಂದು ರೀತಿಯಲ್ಲಿ ಅಧುನಿಕ ಮನುಷ್ಯನ ಮೋಹಿನಿ ಭಸ್ಮಾಸೂರನ ಕಥನವೆಂದರೆ ತಪ್ಪಾಗಲಾರದು.
ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನರಿವರ್ಸ್ ಆಫ್ ಎಂಪೈರ್ಕೃತಿಯಲ್ಲಿ ಯಾವುದೇ ಮನುಕುಲದ ಇತಿಹಾಸ ನೀರು ಅಥವಾ ನದಿಯ ಇತಿಹಾಸವಿಲ್ಲದೆ ಪೂರ್ಣವಾಗಲಾರದು ಎಂದಿದ್ದಾನೆ. ಆದರೆ ನಾವೀಗ ನೀರಿನ ಮಹತ್ವ ಮತ್ತು ಅದರ ಹಂಗು ತೊರೆದು ಟೊಳ್ಳು ಇತಿಹಾಸ ಸೃಷ್ಟಿಸಲು ಹೊರಟಿದ್ದೀವಿ.

                                       ( ದಿನಾಂಕ 16-3-2014ರ ವಿಜಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ