ಬುಧವಾರ, ಮೇ 7, 2014

ಎಸ್.ಎಂ. ಕೃಷ್ಣ ಹೇಳಿದ ಅಂಬೇಡ್ಕರ್ ಕಥನ


ಕಳೆದ ಮೇ ಎರಡರಂದು ಶುಕ್ರವಾರ ನನ್ನ ಸಂಬಂಧಿಕರ ಮಗಳೊಬ್ಬಳ ವಿವಾಹದ ಸಲುವಾಗಿ ಬೆಂಗಳೂರು ನಗರದಲ್ಲಿದ್ದೆ.  ಆ ದಿನ ಸಂಜೆ ಬಹಳ ದಿನಗಳ ನಂತರ ಸದಾಶಿವ ನಗರದಲ್ಲಿರುವ ಎಸ್.ಎಂ. ಕೃಷ್ಣ ಅವರ ಮನೆಗೆ ತೆರಳಿ ಅವರನ್ನು ಬೇಟಿ ಮಾಡಿದೆ. ಮೇ ಒಂದರಂದು 83 ನೇ ವರ್ಷಕ್ಕೆ ಕಾಲಿಟ್ಟ ಎಸ್.ಎಂ. ಕೃಷ್ಣ ಅವರ ಜೀವನ ಮತ್ತು ಸಾಧನೆಗಳ ಕುರಿತಂತೆ  ನಿವೃತ್ತ ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಎನ್,ವೆಂಕಟಾಚಲಯ್ಯ ಮತ್ತು ದೇ.ಜ.ಗೌ.ಇವರ ನೇತೃತ್ವದಲ್ಲಿ ಸುಮಾರು ಒಂದು ಸಾವಿರ ಪುಟಗಳ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕೃತಿಗಳು ಸಿದ್ಧವಾಗುತ್ತಿವೆ. ಹಸ್ತ ಪ್ರತಿಯನ್ನು ನೋಡುವುದು ಮತ್ತು ಅವುಗಳ  ಕುರಿತು  ಕೃಷ್ಣ ಅವರ ಜೊತೆ ಮಾತನಾಡುವುದು ನನ್ನ ಉದ್ದೇಶವಾಗಿತ್ತು. ಆ ದಿನ ಸಂಜೆ ಏಳುಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ನನ್ನೊಂದಿಗೆ ಏಕಾಂತದಲ್ಲಿ ಕುಳಿತ ಎಸ್.ಎಂ. ಕೃಷ್ಣ ಅವರು, ತಮ್ಮ ಬಾಲ್ಯದ  ಬದುಕಿನ ಹಲವಾರು ನೆನಪುಗಳನ್ನು ನನ್ನೊಂದಿಗೆ ಹಂಚಿಕೊಂಡರು.  ಇದಕ್ಕೆ ಪ್ರಮುಖವಾದ ಕಾರಣವೂ ಇತ್ತು..
ಮಂಡ್ಯ ಜಿಲ್ಲೆಯ ಇತಿಹಾಸ ಕುರಿತ  “ಸಿರಿನಾಡು” ಎಂಬ ಕೃತಿ ಹಾಗೂ ಅವರ ತಂದೆಯವರಾದ ಎಸ್. ಸಿ. ಮಲ್ಲಯ್ಯನವರನ್ನು  ಕುರಿತು ಮುವತ್ತು ಪುಟಗಳ “ ನೆಲದ ಸಿರಿ” ಎಂಬ ಪುಟ್ಟ ಕೃತಿಯೊಂದನ್ನು ರಚಿಸಿದ್ದ ನನಗೆ, ಅವರ ತಂದೆಯವರಿಗಿದ್ದ ಪ್ರಗತಿ ಪರ ಆಲೋಚನಾಕ್ರಮಗಳು  ಸೋಜಿಗವಾಗಿ, ವಿಸ್ಮಯದ ಸಂಗತಿಗಳಾಗಿ ಉಳಿದುಬಿಟ್ಟಿವೆ. ಹಾಗಾಗಿ  ಎಸ್.ಎಂ. ಕೃಷ್ಣರವರನ್ನು ಬೇಟಿಯಾದಾಗಲೆಲ್ಲಾ ಅವರ ತಂದೆಯವರ ಬಗ್ಗೆ  ಚರ್ಚಿಸುವುದು ನನಗೆ ಇಷ್ಟವಾದ ಸಂಗತಿ.
ಸೋಮನಹಳ್ಳಿ ಚಿಕ್ಕೇಗೌಡ ಮಲ್ಲಯ್ಯ ಎಂಬ ಹೆಸರಿನ ಎಸ್.ಕೃಷ್ಣ ಅವರ ತಂದೆಯವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರತಿನಿಧಿಗಳ ಸಭೆಗೆ ಸದಸ್ಯರಾಗಿದ್ದವರು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಸ್ಪರ್ಧಿಸಬೇಕಾದರೆ, ಅಥವಾ ಮತ ಚಲಾವಣೆ ಮಾಡಬೇಕಾದರೆ, ಪದವೀಧರರಾಗಿರಬೇಕು, ಇಲ್ಲವೇ ಮೈಸೂರು ಸಂಸ್ಥಾನಕ್ಕೆ ವಾರ್ಷಿಕ ವಾಗಿ ಹನ್ನೆರೆಡು ರೂಪಾಯಿ ತೆರಿಗೆ ಕಟ್ಟುವ ವ್ಯಾಪಾರಸ್ಥ ಅಥವಾ ಜಮೀನ್ದಾರನಾಗಿರಬೇಕಿತ್ತು. ಮದ್ದೂರು ತಾಲ್ಲೋಕಿನ ಸೋಮನಹಳ್ಳಿಯ ಜಮೀನ್ದಾರರ ಕುಟುಂಬವಾದ ಚಿಕ್ಕೇಗೌಡ ಮತ್ತು ಅವರ ಮಗ ಮಲ್ಲಯ್ಯ ಅವರಿಗೆ ಈ ಅರ್ಹತೆಯಿತ್ತು. ಹಾಗಾಗಿ ಮೈಸೂರು ಪ್ರಜಾಪ್ರತಿನಿಧಿಯ ಸಭೆಯ ಸದಸ್ಯರಾಗಿ  ಆಯ್ಕೆಯಾದ ಮಲ್ಲಯ್ಯನವರು ಮದ್ದೂರು ಮತ್ತು ಮಂಡ್ಯತಾಲ್ಲೂಕಿನಲ್ಲಿ  ಮಾಡಿದ ಅನೇಕ ಅಭಿವೃದ್ಧಿ ಕೆಲಸಗಳು ಇಂದಿಗೂ ಸಾಕ್ಷಿಯಾಗಿ ನಮ್ಮೆದುರು ನಿಂತಿವೆ. ಹಣಕಾಸಿನ  ಕೊರತೆಯ ಕಾರಣದಿಂದಾಗಿ ಮದ್ದೂರು ತಾಲ್ಲೂಕಿನ ಹಳ್ಳಿಗಳಲ್ಲಿ ಪಶು ವೈದ್ಯಕೀಯ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಿಂದೇಟು ಹಾಕಿದ ಸಂದರ್ಭದಲ್ಲಿ , ತಮ್ಮ ಗೆಳೆಯರ ಮನವೊಲಿಸಿ, ಹಲವಾರು ಹಳ್ಳಿಗಳಲ್ಲಿ ಕಟ್ಟಡಗಳನ್ನು ಉಚಿತವಾಗಿ ಸರ್ಕಾರಕ್ಕೆ ಕೊಡಿಸಿದ ಕೀರ್ತಿ ಮಲ್ಲಯ್ಯನವರದು. ಇಂದಿಗೂ ಸಹ ನನ್ನೂರಾದ ಕೊಪ್ಪದಲ್ಲಿ ಚಿಕ್ಕೇಗೌಡ ಪಶು ವೈದ್ಯಶಾಲೆ ಮತ್ತು ಕಾಳೇಗೌಡ ಆಸ್ಪತ್ರೆ ಎಂಬ ಹೆಸರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳು ಕಾರ್ಯನಿರ್ವಹಿಸುತ್ತಿವೆ. ಕೊಪ್ಪ ಗ್ರಾಮದ ಚಿಕ್ಕೇಗೌಡ ಎಂಬುವರು ಮತ್ತು ಪಕ್ಕದ ಅವ್ವೇರಹಳ್ಳಿ ಗ್ರಾಮದ ಕಾಳೆಗೌಡ ಎಂಬುವರು ಆಸ್ಪತ್ರೆಗಳಿಗಾಗಿ ಉಚಿತವಾಗಿ ಜಮೀನು ಮತ್ತು ಕಟ್ಟಡಗಳನ್ನು ನೀಡಿದ್ದರು. ಇಂತಹ ಅನೇಕ ಕಟ್ಟಡಗಳನ್ನು ಮದ್ದೂರು ತಾಲ್ಲೂಕಿನಾದ್ಯಂತ ನಾವು ಇಂದಿಗೂ  ನೋಡಬಹುದಾಗಿದೆ. ಇವರಿಂದ ಸ್ಪೂರ್ತಿಗೊಂಡಿದ್ದ ಮಾಜಿ ಸಂಸದ ಜಿ. ಮಾದೇಗೌಡರು ಇಪ್ಪತ್ತೈದು ವರ್ಷಗಳ ಹಿಂದೆ ತಮ್ಮ ಹುಟ್ಟೂರಾದ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿಯಲ್ಲಿ ತಾವು ಹುಟ್ಟಿದ ಮನೆಯನ್ನು ಸರ್ಕಾರಕ್ಕೆ ತಮ್ಮ ತಾಯಿಯ ಹೆಸರಿನಲ್ಲಿ ದಾನ ಮಾಡಿದ್ದು, ಗುರುದೇವರಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
                                                   ಎಸ್.ಸಿ. ಮಲ್ಲಯ್ಯನವರು

ಆ ಕಾಲದ ಎಲ್.ಎಸ್. ಎಂದು ಕರೆಸಿಕೊಳ್ಳುತ್ತಿದ್ದ ಏಳನೇಯ ತರಗತಿಯವರಿಗೆ ಓದಿದ್ದ ಮಲ್ಲಯ್ಯನವರೊಳಗೆ ಮನೆ ಮಾಡಿದ್ದ ಸಾಮಾಜಿಕ ಸುಧಾರಣೆಯ ಕನಸುಗಳು ನಿಜಕ್ಕೂ ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತವೆ.. 1930 ದಶಕದಲ್ಲಿ ಹಳ್ಳಿಮಕ್ಕಳ ವಿದ್ಯಾಬ್ಯಾಸಕ್ಕಾಗಿ ತಮ್ಮೂರಿನಲ್ಲಿ “ಒಕ್ಕಲಿಗರ ವಸತಿ ನಿಲಯ” ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದ ಅವರು  ಹಳ್ಳಿಯ ಮಕ್ಕಳಿಗೆ ಜಾತಿ ಬೇಧವಿಲ್ಲದೆ ಉಚಿತ ಶಿಕ್ಷಣ ನೀಡುತ್ತಿದ್ದರು. ಸಮೀಪದ ಕೋಲೂರಿನ ವೆಂಕಟಯ್ಯ ಎಂಬ ದಲಿತ ವಿದ್ಯಾರ್ಥಿಗೆ ಮತ್ತು ನಿಡಗಟ್ಟದ ಕಾಳಯ್ಯ ಎಂಬ ಮತ್ತೊಬ್ಬ ಅಂಧ ದಲಿತ ವಿದ್ಯಾರ್ಥಿಗೆ ಹಾಸ್ಟಲ್ ನಲ್ಲಿ ಅವಕಾಶ ಕಲ್ಪಿಸಿ, ಸಾಮೂಹಿಕ ಭೋಜನ ಮತ್ತು ಸಾಮೂಹಿಕ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಕಾಳಯ್ಯ ಅಂಧ ವಿದ್ಯಾರ್ಥಿಯನ್ನು ಮೈಸೂರಿಗೆ ಕರೆದುಕೊಂಡು ಹೋಗಿ, ಅವನಿಗೆ,  ಸಂಗೀತದ ಶಿಕ್ಷಣ ಕೊಡಿಸಿದ ಅಪರೂಪದ ಹೃದಯವಂತಿಕೆ ಎಸ್.ಸಿ. ಮಲ್ಲಯ್ಯನವರದು.
1934 ರಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಬೇಟಿ ನೀಡಿದ ಗಾಂಧೀಜಿಯವರು ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ತೆರಳುವಾಗ ಮಾರ್ಗ ಮಧ್ಯೆ ರಸ್ತೆಯ ಪಕ್ಕದಲ್ಲಿರುವ ಸೋಮನಹಳ್ಳಿಯ ಮಲ್ಲಯ್ಯನವರ ಮನೆಗೆ ಮತ್ತು ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿದ್ದರು. ವಸತಿ ನಿಲಯದಲ್ಲಿ ಇಬ್ಬರು ಹರಿಜನ ವಿದ್ಯಾರ್ಥಿಗಳು ಇರುವುದನ್ನು ಕಂಡು ಸೋಜಿಗ ಪಟ್ಟಿದ್ದರು. ಹರಿಜನ ಫಂಡ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ಗಾಂಧೀಜಿಯವರ ಜೋಳಿಗೆಗೆ ಮಲ್ಲಯ್ಯನವರು ತಮ್ಮ ಪುತ್ರ ಬಾಲಕನಾಗಿದ್ದ ಎಸ್.ಎಂ. ಕೃಷ್ಣ ಮೂಲಕ ಎರಡು ರೂಪಾಯಿ ಕಾಣಿಕೆ ನೀಡಲು ಹೋದಾಗ, ಗಾಂಧೀಜಿಯವರಿಗೆ ಎಸ್.ಎಂ.ಕೃಷ್ಣ  ಅವರ ಕಿವಿಯಲ್ಲಿದ್ದ ಓಲೆಗಳ ಮೇಲೆ ಕಣ್ಣು ಬಿತ್ತು. ಆಗ ಗಾಂಧಿಜಿಯವರು ಮಲ್ಲಯ್ಯನವರನ್ನು ಉದ್ದೇಶಿಸಿ ನನಗೆ ಹಣ ಬೇಡ, ನಿಮ್ಮ ಮಗನ ಕಿವಿಯಲ್ಲಿರುವ ಓಲೆಗಳು ಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಗಾಂಧೀಜಿಯವರ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಮಲ್ಲಯ್ಯನವರು ಕೂಡಲೇ ಮಗನ ಕಿವಿಯಲ್ಲಿದ್ದ ಓಲೆಗಳನ್ನು ಬಿಚ್ಚಿ ಎರಡು ರೂಪಾಯಿ ಹಣದ ಜೊತೆ ಓಲೆಗಳನ್ನು ಹರಿಜನ ಫಂಡ್ ಗೆ ಧಾನ ನೀಡಿದರು. ಈ ವಿಷಯ ಅಂದಿನ “ದ ಹಿಂದು” ಇಂಗ್ಲೀಷ್ ದಿನಪತ್ರಿಕೆಯಲ್ಲಿ ಮುಖಪುಟದ ಸುದ್ಧಿಯಾಗಿ ಚಿತ್ರ ಸಮೇತ ದಕ್ಷಿಣ ಭಾರತದಾತ್ಯಂತ ಪ್ರಕಟವಾಗಿತ್ತು. ( ಇಂದಿಗೂ ಈ ಚಿತ್ರವನ್ನು ಎಸ್, ಎಂ. ಕೃಷ್ಣ ಅವರ ಮನೆಯಲ್ಲಿ ನೋಡಬಹುದು)ಸ್ವಾತಂತ್ರ್ಯ ಪೂರ್ವದ ಮಂಡ್ಯ ಜಿಲ್ಲೆಯಲ್ಲಿನ ಇಂತಹ ಹಲವಾರು ಸಂಗತಿಗಳು  ಜಾತಿ, ಧರ್ಮವನ್ನು ಮೀರಿ ಘಟಿಸಿರುವುದು ನಿಜಕ್ಕೂ ಸೋಜಿಗದ ವಿಷಯ. 1938 ರಲ್ಲಿ ಮದ್ದೂರು ಬಳಿಯ ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆದ ಸಂದರ್ಭದಲ್ಲಿ ಹೋರಾಟಕ್ಕೆ ಮಾರ್ಗದರ್ಶನ ಮಾಡಲು ಬಂದ ಸಿದ್ಧಲಿಂಗಯ್ಯ ಮತ್ತು ಉತ್ತರ ಕರ್ನಾಟಕದ ಲಿಂಗಾಯತ ನಾಯಕರು ಹಾಗೂ ಸ್ಥಳೀಯ ಎಂ.ಎನ್. ಜೋಯಿಸ್ ಮತ್ತು ವೀರಕೇಸರಿ ಸೀತಾರಾಮಶಾಸ್ತ್ರಿ ಎಂಬ ಬ್ರಾಹ್ಮಣ ನಾಯಕರು ಇವರೆಲ್ಲರೂ ಮದ್ದೂರು ತಾಲ್ಲೂಕಿನ ಒಕ್ಕಲಿಗ ಮತ್ತು ದಲಿತ ನಾಯಕರು ಸಿದ್ಧಪಡಿಸಿದ ಆಹಾರವನ್ನು ಸಾಮೂಹಿಕ ಭೋಜನ ಕೂಟದಲ್ಲಿ ನಿರಂತರ ಹದಿನೈದು ದಿನಗಳ ಕಾಲ ಸ್ವೀಕರಿಸಿದ್ದರು. ಮಳವಳ್ಳಿಯ ಸುಬ್ಬೇಗೌಡ ಎಂಬ ಸ್ವಾತಂತ್ರ್ಯ ಹೋರಾಟಗಾರರು, ತಮ್ಮೂರಿನಲ್ಲಿದ್ದ ಕುನ್ನೀರು ಕಟ್ಟೆ ಎಂಬ ಕೆರೆಗೆ ನೂರಾರು ಹರಿಜನರನ್ನು ಕರೆದೊಯ್ದು ನೀರು ಕುಡಿಸುವುದರ ಮೂಲಕ ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರಿಗೆ ಜಾತಿಯ ಸೋಂಕಿಲ್ಲ ಎಂದು ಪ್ರತಿಪ್ರಾದಿಸಿದ್ದರು. ಇದರ ಜೊತೆಗೆ ಮಂಡ್ಯ ನಗರದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರವಿರುವ  ಹೊನಗಾನಹಳ್ಳಿ ಎಂಬ ಗ್ರಾಮದಲ್ಲಿ ಪುಟ್ಟಣ್ಣಯ್ಯ ಎಂಬ ಯುವ ಶಿಕ್ಷಕ ತನ್ನೂರಿನ ಹರಿಜನರನ್ನು ಕರೆದೊಯ್ದು ಕೆರೆಯಲ್ಲಿ ನೀರು ಕುಡಿಸಿದ್ದ. ಇದರಿಂದ ಸಿಟ್ಟಿಗೆದ್ದ ಊರಿನ ಜನತೆ ಹುಣಸೆಕಡ್ಡಿಗಳಿಂದ ಪುಟ್ಟಣ್ನಯ್ಯನವರನ್ನು ಮೂರ್ಚೆ ಹೋಗುವಂತೆ ಥಳಿಸಿದ್ದರು. “ಹರಿಜನರನ್ನು ಪ್ರಾಣಿಗಳಂತೆ ನೋಡುವ ನೀವು ಮನುಷ್ಯರಲ್ಲ, ಮನುಷ್ಯರಿಲ್ಲದ ಊರಿನಲ್ಲಿ ನಾನು ಇರುವುದಿಲ್ಲ” ಎಂದು ಘೋಷಿಸಿಕೊಂಡ ಪುಟ್ಟಣ್ಣಯ್ಯ ಆ ಕ್ಷಣದಲ್ಲಿ ಹುಟ್ಟಿದ ಊರನ್ನು ತೊರೆದು ಕೃಷ್ಣರಾಜಪೇಟೆಯ ಹೇಮಾವತಿ ನದಿತಿರದಲ್ಲಿರುವ ಹೇಮಗಿರಿ ಬೆಟ್ಟದಲ್ಲಿ ನೆಲೆನಿಂತರು. ಮಕ್ಕಳಿಗೆ ಪಾಠ ಹೇಳುತ್ತಾ, ಕೊನೆಗೆ ಒಂದು ಶಿಕ್ಷಣ ಸಂಸ್ಥೆಯನ್ನು ಸಹ ಸ್ಥಾಪಿಸಿದರು. ತಮ್ಮ ಕೊನೆಯ ಉಸಿರು ಇರುವವರೆಗೆ ಊರಿಗೆ ಕಾಲಿಡಲಿಲ್ಲ. ಅವರ ನಿಧನಾನಂತರ ಶಿಕ್ಷಣ ಸಂಸ್ಥೆಯನ್ನು ಆದಿಚುಂಚನಗಿರಿ ಮಠಕ್ಕೆ ವಹಿಸಿಕೊಡಲಾಯಿತು. ಹದಿನೈದು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಹೊನಗಾನಹಳ್ಳಿ ಗ್ರಾಮದಲ್ಲಿ ಪುಟ್ಟಣ್ಣಯ್ಯ ಹೆಸರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ.

ಈ ಮೇಲ್ಕಂಡ ಸಂಗತಿಗಳನ್ನು ಎಸ್.ಎಂ. ಕೃಷ್ಣ ಅವರ ಬಳಿ ಪ್ರಸ್ತಾಪಿಸಿದ ನಾನು, ಮಂಡ್ಯ ಜಿಲ್ಲೆಯಲ್ಲಿ ಇಂತಹ ಮನಸ್ಸುಗಳು ಇದ್ದುದರ ಬಗ್ಗೆ ಮತ್ತು ಅವರ ತಂದೆಯವರ ಜಾತ್ಯಾತೀತ ಮನೋಭಾವದ ಬಗ್ಗೆ ಕುತೂಹಲ ವ್ಯಕ್ತಪಡಿಸಿದೆ. ಆಗ, ಕೃಷ್ಣ ಈವರೆಗೆ ನಾನು ಕೇಳದೆ ಉಳಿದು ಹೋಗಿದ್ದ ಅಚ್ಚರಿಯ ಇತಿಹಾಸದ ಪುಟಗಳನ್ನು ನನ್ನೆದುರು ಬಿಚ್ಚಿಟ್ಟರು.
1930 ರ ದಶಕದಲ್ಲಿ ಅವರ ತಂದೆಯ ಆತ್ಮೀಯ ಸ್ನಹಿತರಾದ ಮದ್ದೂರಿನ ಸುಬ್ಬರಾವ್ ಎಂಬುವರು ಮುಂಬೈ ನಗರದಲ್ಲಿ ಬ್ರಿಟೀಷ್ ಸರ್ಕಾರದ ಒಡೆತನದಲ್ಲಿದ್ದ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ತೀರಾ ಪ್ರಗತಿ ಪರ ಮನಸ್ಸಿನ ಸುಬ್ಬುರಾವ್, ಮುಂಬೈ ನಗರದಲ್ಲಿ ಅಂಬೇಡ್ಕರ್ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಾ. ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾಗಿದ್ದರು. ಬಾಂಬೆ ಸುಬ್ಬುರಾವ್ ಎಂದು ಮಂಡ್ಯ ಜಿಲ್ಲೆಯಲ್ಲಿ  ಕರೆಸಿಕೊಳ್ಳುತ್ತಿದ್ದ  ಅವರು ಮದ್ದೂರಿಗೆ ಬಂದಾಗಲೆಲ್ಲಾ, ಅಂಬೇಡ್ಕರ್ ಚಿಂತನೆ ಮತ್ತು ಹೋರಾಟಗಳನ್ನು ಮಲ್ಲಯ್ಯನವರಿಗೆ ವಿವರಿಸುತ್ತಿದ್ದಂತೆ. ಇದು ಮಲ್ಲಯ್ಯನವರ ಮೇಲೆ ಅಗಾಧ ಪರಿಣಾಮ ಬೀರಿತು. ಕೊನೆಗೊಮ್ಮೆ ಅಂಬೇಡ್ಕರ್ ಅವರನ್ನು ಬೇಟಿ ಮಾಡುವ ಅಪೇಕ್ಷೆಯನ್ನು ಮಲ್ಲಯ್ಯನವರು ಸುಬ್ಬುರಾವ್ ಮುಂದೆ  ವ್ಯಕ್ತಪಡಿಸಿದಾಗ, ರಾವ್ ಅವರು ಅಂಬೇಡ್ಕರ್ ಅವರಿಗೆ ಪತ್ರ ಬರೆದರಂತೆ.

ಸುಬ್ಬುರಾವ್ ಮೂಲಕ ಮಲ್ಲಯ್ಯನವರ ಬಗ್ಗೆ ಕೇಳಿ ತಿಳಿದಿದ್ದ ಹಾಗೂ ಪತ್ರಿಕೆಗಳಲ್ಲಿ ಓದಿದ್ದ ಅಂಬೇಡ್ಕರ್ ಅವರು ಅಂತಹ ವ್ಯಕ್ತಿಯನ್ನು ಬೇಟಿ ಮಾಡುವುದು ನಿಜಕ್ಕೂ ಸಂತಸದ ಸಂಗತಿ. ಮಲ್ಲಯ್ಯನವರು ದೆಹಲಿಗೆ ಬಂದಾಗ, ಯಾವುದೇ ಪೂರ್ವಾನುಮತಿಯಿಲ್ಲದೆ ನನ್ನನ್ನು ಬೇಟಿ ಮಾಡಬಹುದು ಎಂದು ಪತ್ರ ಬರೆದರು. ಅಂತಿಮವಾಗಿ 1946 ರ ಮೊದಲ ದಿನಗಳಲ್ಲಿ ಪ್ರಜಾಪ್ರತಿನಿಧಿಸಭೆಯ ಪ್ರತಿನಿಧಿಯಾಗಿ ದೆಹಲಿಗೆ ತೆರಳಿದ್ದ ಮಲ್ಲಯ್ಯನವರು ಡಾ. ಅಂಬೇಡ್ಕರ್ ಅವರನ್ನು ಬೇಟಿ ಮಾಡಿ ಬಂದರು. ಆ ಬೇಟಿಯ ಘಟನೆಯನ್ನು ತುಂಬಾ ಸಂತೋಷದಿಂದ ಯುವಕನಾಗಿದ್ದ ಕೃಷ್ಣರವರ ಬಳಿ ಮಲ್ಲಯ್ಯನವರು ಹೇಳಿಕೊಳ್ಳುತ್ತಿದ್ದದನ್ನು ಕೃಷ್ಣ ಭಾವುಕರಾಗಿ ನೆನಪಿಸಿಕೊಂಡರು.
ಅಂಬೇಡ್ಕರ್ ಬೇಟಿಯಿಂದ ಸೋಮನಹಳ್ಳಿ ಗ್ರಾಮದಲ್ಲಿ ಆದ ಪ್ರಮುಖ ಬದಲಾವಣೆಯೆಂದರೆ, ಊರಾಚೆ ಇದ್ದ ದಲಿತರನ್ನು ಮಲ್ಲಯ್ಯನವರು, ತಮ್ಮ ಮನೆಯ ಮುಂದೆ ಇದ್ದ ಹೊಲದಲ್ಲಿ ಬಡಾವಣೆ ನಿರ್ಮಿಸಿ ವಾಸಕ್ಕೆ ಅನುಕೂಲ ಕಲ್ಪಿಸಿಕೊಟ್ಟರು. ನಾನು ಮನೆಯಿಂದ ಹೊರಬಂದಾಗ, ನನ್ನ ಕಣ್ಣ ಮುಂದೆ ಹರಿಜನರು ಇರಬೇಕು, ಅವರ ನೋವು, ನಲಿವುಗಳು ನನ್ನ ಕಣ್ಣುಗಳಿಗೆ ಕಾಣುವಂತೆ ಇರಬೇಕು ಎಂದು ಮಲ್ಲಯ್ಯ ಅಪೇಕ್ಷೆ ಪಟ್ಟ ಸಂಗತಿಯನ್ನು ಹೇಳುವಾಗ, ಕೃಷ್ಣ  ಅವರ ಗಂಟಲು ಗದ್ಗದಿತವಾಗಿತ್ತು.  ಇಂದಿಗೂ ನಾವು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಇರುವ ಸೋಮನಹಳ್ಳಿಯಲ್ಲಿ, ಬೆಂಗಳೂರಿನಿಂದ ಹೋಗುವಾಗ, ರಸ್ತೆಯ ಎಡಭಾಗಕ್ಕೆ ಕೃಷ್ಣ ಅವರು ಹುಟ್ಟಿ ಬೆಳೆದ ಮನೆ ಮತ್ತು ಅವರ ತಂದೆಯವರ ವಿದ್ಯಾಸಂಸ್ಥೆ ಮತ್ತು ಬಲಭಾಗಕ್ಕೆ ಹರಿಜನರ ಬಡಾವಣೆಯನ್ನು ಕಾಣಬಹುದು. ಹಳೆಯ ನೆನಪುಗಳ  ಭಾವುಕ ಕ್ಷಣಗಳಲ್ಲಿ ಕನ್ನಡದ ಪದಗಳಿಗೆ ತಡಕಾಡುತ್ತಿದ್ದ ಕೃಷ್ಣರವರು ನೇರವಾಗಿ ಇಂಗ್ಲೀಷ್ ಭಾಷೆಗೆ ಜಿಗಿಯುತ್ತಿದ್ದರು. ಒಮ್ಮೆಯೂ ಅವರ ಬಾಯಲ್ಲಿ ಅಂಬೇಡ್ಕರ್ ಎಂಬ ಶಬ್ಧ ಹೊರಬರಲಿಲ್ಲ. ಅಂಬೇಡ್ಕರ್ ಹೆಸರು ಹೇಳುವಾಗಲೆಲ್ಲಾ ಡಾ. ಅಂಬೇಡ್ಕರ್ ಎಂದು ನುಡಿಯುತ್ತಿದ್ದರು. ಉಳಿದ  ಒಕ್ಕಲಿಗ ಜಾತಿಯ ರಾಜಕಾರಣಿಗಳಿಗೆ ಹೋಲಿಸಿದಾಗ, ಎಸ್.ಎಂ. ಕೃಷ್ಣ ರವರು ಏಕೆ ಜಾತಿ ಸಂಘಟನೆಯೊಂದಿಗೆ ಪ್ರಬಲವಾಗಿ ಗುರುತಿಸಿಕೊಳ್ಳಲಿಲ್ಲ ಎಂಬುದಕ್ಕೆ ನನಗೆ ಇಲ್ಲಿ ಉತ್ತರ ಸಿಕ್ಕಿತ್ತು.
ವರ್ತಮಾನದ ರಾಜಕೀಯ ದ್ವೇಷ ಮತ್ತು ಚಾರಿತ್ರ್ಯ ವಧೆ ಮಾಡುವಂತಹ ರಾಜಕೀಯ ನಾಯಕರ  ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿ, 1968 ರಿಂದ ಇಲ್ಲಿಯವರೆಗೆ ನಾನು ಗಮನಿಸಿದ ಹಾಗೆ ನಿಮ್ಮ ರಾಜಕೀಯ ಎದುರಾಳಿಗಳ ಕುರಿತು ನಿಮ್ಮ ಬಾಯಲ್ಲಿ ಕೆಟ್ಟ ಶಬ್ದಗಳು ಹೊರಬಂದಿಲ್ಲ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಕೃಷ್ಣ ಅವರು, “ಇದು ನಾನು ನನ್ನ ತಂದೆಯಿಂದ ಕಲಿತ ಮೊದಲ ರಾಜಕೀಯ ಪಾಠ” ಎಂದರು. ನನ್ನ ತಂದೆ ಕೇವಲ ತೀರಾ ಚಿಕ್ಕ ವಯಸ್ಸಿಗೆ (55ವರ್ಷಕ್ಕೆ) ತೀರಿ ಹೋದರು. ಅವರ ಬಾಯಲ್ಲಿ ಎಂದೂ ರಾಜಕೀಯ ಎದುರಾಳಿಗಳ ಬಗ್ಗೆ ಕೆಟ್ಟ ಶಬ್ದವನ್ನು ನಾನು ಕೇಳಲಿಲ್ಲ. ಹಾಗಾಗಿ ನಾನೂ ಕೂಡ ಈವರೆಗೆ ರಾಜಕೀಯದಲ್ಲಿ ಸೊಂಟದ ಕೆಳಗಿನ ಭಾಷೆ ಬಳಸಿಲ್ಲ, ಮುಂದೆಯೂ ಬಳಸುವುದಿಲ್ಲ ಎಂದರು.
ಎಸ್.ಎಂ. ಕೃಷ್ಣ ಎಂಬ  ಹಿರಿಯ ಜೀವದೊಂದಿಗೆ ಎರಡು ಗಂಟೆ ಕಾಲ ಕುಳಿತು ಮಾತನಾಡಿದಾಗ. ನಮ್ಮ ಕಣ್ಣೆದುರು ಕಳೆದು ಹೋದ ಮಾನವೀಯ ಮುಖವೊಂದರ  ಸಮಾಜದ ದರ್ಶನವಾಯಿತು. ಎಲ್ಲಿಯ ಒಕ್ಕಲಿಗ ಜಾತಿಯ ಸೋಮನಹಳ್ಳಿ ಮಲ್ಲಯ್ಯ ? ಎಲ್ಲಿಯ ಬ್ರಾಹ್ಮಣ ಜಾತಿಯ ಮದ್ದೂರು ಸುಬ್ಬರಾವ್? ಎಲ್ಲಿಯ ದಲಿತ ವರ್ಗದ ಅಂಬೇಡ್ಕರ್? ಮನುಷ್ಯತ್ವ ಮತ್ತು ಮಾನವೀಯತೆ ಎಂಬುದು ಜಾತಿ-ಧರ್ಮಗಳನ್ನು ಮೀರಿದ ಸಂಗತಿ ಎಂದು ಈ ಮೂವರು  ಮಹಾನುಭಾವರು ಪರಿಭಾವಿಸಿದ ಕ್ರಮ ಈ ಕ್ಷಣಕ್ಕೂ ನನ್ನನ್ನು ತಣ್ಣಗೆ ಕುಳಿತು ಯೋಚಿಸುವಂತೆ ಮಾಡಿದೆ.
ಇಂತಹ ಘಟನೆಗಳು ಮಂಡ್ಯ ಜಿಲ್ಗೆಗೆ ಮಾತ್ರ ಸೀಮಿತ ಎಂದು ನಾನು ಭಾವಿಸಿಲ್ಲ. ಪ್ರತಿ ಜಿಲ್ಲೆಯಲ್ಲೂ ಇಂತಹ ಸಂಗತಿಗಳು ಇತಿಹಾಸದ ಗರ್ಭದಲ್ಲಿ ಹೂತು ಹೋಗಿವೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ‘ ರಾಮಕೃಷ್ಣ ಹೆಗ್ಗೆಡೆ ಹೇಳಿದ ಗಾಂಧಿ ಕಥನ” ಎಂಬ ಲೇಖನವನ್ನು ಇದೇ ಬ್ಲಾಗ್ ನಲ್ಲಿ ನಾನು ದಾಖಲಿಸಿದ್ದೇನೆ. ಆಸಕ್ತರು ಗಮನಿಸಬಹುದು. ಇಂದಿನ ಸಮಾಜದಲ್ಲಿ ವಿಷ ಕಕ್ಕುವರು ಮಾತ್ರವಲ್ಲ, ಲೇಖನಿಗಳು ಕೂಡ ವಿಷ ಕಕ್ಕುತ್ತಿರುವ ಆತಂಕದ ಸಂದರ್ಭದಲ್ಲಿ  ಇಂತಹ ಹಿರಿಯ ಜೀವಗಳ ಇಂತಹ ನೆನಪುಗಳು ಮತ್ತು ಮಾತುಗಳು ನಮ್ಮನ್ನು ಅಪ್ಪಟ ಮನುಷ್ಯರಾಗುವ ಹಾದಿಯಲ್ಲಿ ಕೊಂಡೊಯ್ಯಬಲ್ಲವು  ಎಂಬುದು ನನ್ನ ಬಲವಾದ ನಂಬಿಕೆ.

1 ಕಾಮೆಂಟ್‌: