ಬುಧವಾರ, ಅಕ್ಟೋಬರ್ 3, 2018

ಗಾಂಧಿವಾದಿಯೊಂದಿಗೆ ಮಾತುಕತೆ : ಗಾಂಧಿ ವಿಚಾರಗಳಿಗಿಂತ ಆಚಾರಗಳ ಅನುಷ್ಠಾನ ಮುಖ್ಯ : ಪ್ರಸನ್ನ ಹೆಗ್ಗೋಡು



ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡು ಎಂಬ ಗ್ರಾಮ  ಭೌಗೂಳಿಕ ನಕ್ಷೆಯಲ್ಲಿ ಒಂದು ಪುಟ್ಟ ಹಳ್ಳಿ. ಆದರೆ, ಇಂದು ಗ್ರಾಮವು  ರಂಗಭೂಮಿ ಚಟುವಟಿಕೆ, ಸಾಹಿತ್ಯ ಮತ್ತು ಸಂಸ್ಕøತಿಗಳ ಚಟುವಟಿಕೆಗಳು ಮತ್ತು ಗಾಂಧಿಜಿಯ ಪರಿಕಲ್ಪನೆಗಳ ಅನುಷ್ಠಾನಗಳ  ಕೇಂದ್ರ ಬಿಂದುವಾಗಿ ಇಡೀ ಭಾರತವನ್ನು ಸೂಜಿಗಲ್ಲಿನಂತೆ  ಆಕರ್ಷಿಸುತ್ತಿದೆ. ಇದಕ್ಕೆ ಕಾರಣ ರಾದವರು ನಾಡಿನ ಸುಪ್ರಸಿದ್ಧ ಸಾಂಸ್ಕøತಿಕ ಚಿಂತಕರಾಗಿದ್ದ ಕೆ.ವಿ. ಸುಬ್ಬಣ್ಣನವರು. ಅವರು ಹುಟ್ಟು ಹಾಕಿದ ಭವ್ಯ ಪರಂಪರೆಯನ್ನು ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಅವರ ಪುತ್ರ  ಕೆ.ವಿ. ಅಕ್ಷರ ಮುಂದುವರಿಸಿದ್ದಾರೆ. ಅದೇ ರೀತಿ ಹೆಗ್ಗೋಡಿನ ಈಚೆಗಿನ ಭೀಮನಕೋಣೆ ಗ್ರಾಮದಲ್ಲಿ ಚರಕ ಸಂಸ್ಥೆಯನ್ನು ಮತ್ತು ಆಚೆಗಿನ ಊರಾದ ಹೊನ್ನೆಸರದಲ್ಲಿ ಶ್ರಮಜೀವಿಗಳ ಆಶ್ರಮವನ್ನು ಸ್ಥಾಪಿಸುವುದರ ಮೂಲಕ ಸುಪ್ರಸಿದ್ಧ ರಂಗಕರ್ಮಿ ಪ್ರಸನ್ನ ರವರು ಗಾಂಧಿಯವರ ಸಿದ್ಧಾಂತಗಳನ್ನು ಪ್ರಯೋಗದ ಮೂಲಕ ಆಚರಣೆಗೆ ತರುವುದರ ಮೂಲಕ ಮಹಾತ್ಮನ ಚಿಂತನೆಗಳನ್ನು ಜೀವಂತವಾಗಿರಿಸಿದ್ದಾರೆ.
ತಮ್ಮ ವೈಶಿಷ್ಟಪೂರ್ಣ ಚಿಂತನೆಗಳ ಮೂಲಕ ನಾಡಿನ ಗಮನ ಸೆಳೆದಿದ್ದ ಕೆ.ವಿ.ಸುಬ್ಬಣ್ಣನವರು "ಹಳ್ಳಿಯೆಂಬುದು ಮೂಲಭೂತವಾಗಿ ಒಂದು ವಿಶ್ವ" ಎಂಬುದನ್ನು ತಮ್ಮ ಕ್ರಿಯೆಗಳ ಮೂಲಕ ಮಾಡಿ ತೋರಿಸಿಕೊಟ್ಟವರು. ಮುಂಬೈ ಮೂಲದ ಖ್ಯಾತ ರಂಗಕರ್ಮಿ ಅತುಲ್ ತಿವಾರಿಯವರು ಸುಬ್ಬಣ್ಣನವರ  ಹೆಗ್ಗೋಡು ಗ್ರಾಮವನ್ನು ಹೀಗೆ ಬಣ್ಣಿಸಿದ್ದಾರೆ. " ನಾವು ಒಂದಷ್ಟು ಗೆಳೆಯರು ಪ್ರಥಮ ಬಾರಿಗೆ ಹೆಗ್ಗೋಡಿಗೆ ಹೊರಟಾಗ ಮುಂಬೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿದೆವು. ನಂತರ ಬೆಂಗಳೂರಿನಿಂದ ಶಿವಮೊಗ್ಗಕಗಕೆ ರೈಲಿನಲ್ಲಿ ಸಂಚರಿಸಿ, ಅಲ್ಲಿಂದ ಸಾಗರಕ್ಕೆ ಬಸ್ ನಲ್ಲಿ ಪ್ರಯಾಣಿಸಿದೆವು. ಸಾಗರದಿಂದ ಹೆಗ್ಗೋಡಿಗೆ ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡಿ ಊರು ತಲುಪಿದಾಗ  " ಗ್ಲೋಬಲ್ ವಿಲೇಜ್" ಎಂಬ ಪರಿಕಲ್ಪನೆಯನ್ನು ಸುಬ್ಬಣ್ಣನವರು ಅಕ್ಷರಶಃ ಆಚರಣೆಗೆ ತಂದಿದ್ದಾರೆ ಎನಿಸಿತು" ತಿವಾರಿಯವರ   ಮಾತು ರೂಪಕದ ಭಾಷೆಯಂತೆ ಕಂಡು ಬಂದರೂ ಸಹ, ಕೆ.ವಿ.ಸುಬ್ಬಣ್ಣ ಮತ್ತು ಪ್ರಸನ್ನ ರಂತಹ ರಂಗಭೂಮಿಯ ಚಿಂತಕರಿಂದಾಗಿ ಗಾಂಧೀಜಿಯವರು ಕನಿಸಿದ್ದ " ಗ್ರಾಮಭಾರತ" ಹೆಗ್ಗೋಡು ಗ್ರಾಮದಲ್ಲಿ ಸಾಕ್ಷತ್ಕಾರಗೊಂಡಿದೆ ಎನ್ನಬಹುದು.
ಕಳೆದ ಎರಡೂವರೆ ದಶಕಗಳಿಂದ ಪ್ರಸನ್ನ ಹೆಗ್ಗೊಡು ಎಂದು ಚಿರಪರಿಚಿತರಾಗಿರುವ ರಂಗಕರ್ಮಿ ಪ್ರಸನ್ನರವರು ದೇಶಕಂಡ ಅತ್ಯುತ್ತಮ ರಂಗಕರ್ಮಿಗಳಲ್ಲಿ ಒಬ್ಬರು. ಲೇಖಕರಾಗಿ, ನಾಟಕಕಾರರಾಗಿ ಎಡಪಂಥಿಯ ಚಿಂತನೆಗಳೊಂದಿಗೆ ಗುರುತಿಸಿಕೊಂಡು ಸಮುದಾಯ ತಂಡದ ಮೂಲಕ ನೂರಾರು ನಾಟಕಗಳನ್ನು ನಾಡಿಗೆ ನೀಡಿದ್ದಾರೆ.  ತಮ್ಮ ರಂಗಚಟುವಟಿಕೆಯ ನಡುವೆ  ಇಪ್ಪತ್ತೈದು ವರ್ಷಗಳ ಹಿಂದೆ ಹೆಗ್ಗೋಡಿನ ಬಳಿ ಚರಕ ಸಂಸ್ಥೆಯನ್ನು ಆರಂಭಿಸಿ ಕೈ ಮಗ್ಗದ ಉತ್ಪನ್ನಗಳಿಗೆ ಚಾಲನೆ ನೀಡುವುದರ ಮೂಲಕ  ಮಹಿಳಾಸಬಕಲೀಕರಣ, ದೇಶಿವಾದ ಹಾಗೂ ಗ್ರಾಮಾಭಿವೃದ್ಧಿ ಮತ್ತು ಗ್ರಾಮೋದ್ಯೋಗ ಚಟುವಟಿಕೆಗಳಿಗೆ ಒತ್ತು ನೀಡುವುದರೊಂದಿಗೆ ಗಾಂದಿಯವರü ಚಿಂತನೆಗಳಿಗೆ ಮರುಜೀವ ನೀಡಿದ್ದಾರೆ.
ಮಾತು ಮತ್ತು ಕೃತಿಯ ನಡುವೆ ಕಂದಕವಿರಬಾರದೆಂದು ಬಲವಾಗಿ ನಂಬಿರುವ ಪ್ರಸನ್ನರವರು ಸರಳವಾದ ಬದುಕಿಗೆ ತಮ್ಮನ್ನು ಒಗ್ಗಿಸಿಕೊಂಡು ಅಪ್ಪಟ ಗಾಂಧೀಜಿಯ ವಾರಸುದಾರರಂತೆ ಸರಳವಾದ ಮಾರ್ಗದಲ್ಲಿ ಬದುಕುತ್ತಿರುವವರಲ್ಲಿ ಮುಖ್ಯರಾದವರು. ಗಾಂಧಿ ಚಿಂತನೆಗಳೊಂದಿಗೆ ನಿರಂತರ ಅನುಸಂಧಾನ ಮಾಡುತ್ತಿರುವ ಪ್ರಸನ್ನರವರು  ತಮ್ಮ ಪ್ರಯೋಗ ಹಾಗೂ ತಾವು ನಡೆದು ಬಂದ ಹಾದಿಯ ಹೆಜ್ಜೆಯ ಗುರುತುಗಳನ್ನು ಇಲ್ಲಿ  ಮಾತುಗಳ ಮೂಲಕ ಹಂಚಿಕೊಂಡಿದ್ದಾರೆ.

ಪ್ರಶ್ನೆ- ನೀವು ಎಡಪಂಥೀಯ ಚಿಂತಕರಾಗಿ ಗುರುತಿಸಿಕೊಂಡಿದ್ದವರು. ತಟ್ಟನೆ ಗಾಂಧಿಮಾರ್ಗದತ್ತ ಹೊರಳಿದ್ದು ಏಕೆ? ಟರ್ನಿಂಗ್ ಪಾಯಿಂಟ್ ಎನ್ನಬಹುದಾದ ಅನಿರೀಕ್ಷಿತ ತಿರುವಿಗೆ ಪ್ರೇರಣೆಯಾದ ಅಂಶಗಳು ಯಾವುವು?
ಪ್ರಸನ್ನ- ನನ್ನ ಪಾಲಿಗೆ ಇದು ಅನಿರೀಕ್ಷಿತ ತಿರುವೇನಲ್ಲ. ನಾನು ಭಾಗಿಯಾಗಿದ್ದ ಸಮುದಾಯ ನಾಟಕ ಚಳುವಳಿಯಲ್ಲಿ ಇಂತಹ ಅಂಶಗಳು ಒಳಗೊಂಡಿದ್ದವು. ಅಲ್ಲಿ ಎಡಪಂಥೀಯ ಚಿಂತನೆಗಳೊಂದಿಗೆ ಸಮತಾವಾದ, ಸಮಾಜವಾದ ಮತ್ತು ಗಾಂಧಿವಾದದ ತಿರುಳುಗಳು ಮಿಳಿತಗೊಂಡಿದ್ದವು. ಹಾಗಾಗಿ ಗಾಂಧೀಜಿಯವರ ಚಿಂತನೆಗಳ ಕುರಿತಾದ ಒಲವು ನನಗೆ ಮೊದಲಿನಿಂದಲೂ ಇತ್ತು. ಅದೇ ರೀತಿಯಲ್ಲಿ ನನ್ನ ಎಡಪಂಥಿಯ ಚಿಂತಕ ಗೆಳೆಯರೊಂದಿಗಿನ ನನ್ನ ಕೆಲವು  ತಕರಾರುಗಳು ಸಹ ಇದ್ದವು.
ನನಗೆ ಮೂರು ವಿಷಯಗಳಲ್ಲಿ ಎಡಪಂಥಿಯ ಸಿದ್ಧಾಂತಗಳೊಂದಿಗೆ ಭಿನ್ನಾಭಿಪ್ರಾಯವಿದೆ. ಒಂದು ದೇವರು, ಎರಡನೆಯದಾಗಿ ಯಂತ್ರ ಮತ್ತು ಮೂರನೆಯದಾಗಿ ಹಿಂಸೆ. ಇವುಗಳ ಕುರಿತಾಗಿ ಅವರು ಸ್ಪಷ್ಟವಾಗಿಲ್ಲ.
ದೇವರ ಕುರಿತಂತೆ ಅವರಿಗೆ ಖಚಿತ ನಿಲುಗಳಿಲ್ಲ. ಅದೇ ರೀತಿ ಯಂತ್ರ ನಾಗರೀಕತೆ ಕುರಿತಂತೆ ಅವರ ಚಿಂತನೆಗಳಲ್ಲಿ ಗೊಂದಲವಿದೆ. ಅವರ ದೃಷ್ಟಿಕೋನ ಬಂಡವಾಳಶಾಹಿ ಜಗತ್ತು ನಶಿಸಿ, ಕಾರ್ಮಿಕರ ಕೈಗೆ ಪ್ರಭುತ್ವ ದೊರಕಬೇಕೆಂಬುದೇ ಆಗಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಯಂತ್ರನಾಗರೀಕತೆ ದುಡಿಯುವ ಕೈಗಳಿಂದ ಅನ್ನದ ಬಟ್ಟಲನ್ನು ಕಸಿದುಕೊಳ್ಳುತ್ತಿದೆ ಎಂಬುದನ್ನು ಅವರು ಗಮನಿಸಿಲ್ಲ. ಇವುಗಳ ಜೊತೆಗೆ ದೇಶ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಹಿಂಸೆಯ ಕುರಿತಾಗಿ ದೇಶದ ಯಾವುದೇ ಎಡರಂಗದ ಸಂಘಟನೆಗಳಿಂದ ಸ್ಪಷ್ಟೀಕರಣ ಬಹಿರಂಗಗೊಂಡಿಲ್ಲ. ನಕ್ಸಲರು ನಡೆಸುತ್ತಿರುವ ಹಿಂಸಾತ್ಮಕ ಚಟುವಟಿಕೆಗಳ ಕುರಿತು ಮೌನ ವಹಿಸಿರುವುದು ನನ್ನ ತಕರಾರಿಗೆ ಮೂಲಕಾರಣವಾಗಿತ್ತು. ಇವಿಷ್ಟನ್ನು ಹೊರತುಪಡಿಸಿದರೆ, ನಾನು ಸಂಪೂರ್ಣವಾಗಿ ಬದಲಾಗಿಲ್ಲ. ಎಲ್ಲಾ ಪ್ರಗತಿಪರ ಸಂಘನೆUಳೊಂದಿಗೆ ನನ್ನ ಬಾಂಧವ್ಯ ಇಂದಿಗೂ ಮುಂದುವರಿದಿದೆ.
ಪ್ರಶ್ನೆ- ನಿಮ್ಮ ಮೇಲೆ ಪ್ರಭಾವಿಸಿದ ಗಾಂಧೀಜಿಯವರ ಚಿಂತನೆಗಳು ಯಾವುವು?
ಪ್ರಸನ್ನ- ಕ್ರೈಸ್ತ ಧರ್ಮದಲ್ಲಿ ನೋವಾ ಎಂಬ ಸಂತನೊಬ್ಬನ ಕಥೆಯೊಂದಿದೆ. ಒಮ್ಮೆ ಜಗತ್ತಿನಲ್ಲಿ ಪ್ರಳಯವಾಗಲು ಆರಂಭಿಸಿತು. ನೋವಾ ದೇವರನ್ನು ಪ್ರಾರ್ಥಿಸತೊಡಗಿದ. ದೇವರು ಪ್ರತ್ಯಕ್ಷನಾಗಿ ಪ್ರಳಯ ಮತ್ತು ಪ್ರವಾಹದಿಂದ ಪಾರಾಗಲು ಅವನಿಗೆÉಂದಿಗೂ ಮುಳಗದ ದೋಣಿಯೊಂದನ್ನು ವರವಾಗಿ ನೀಡಿದನಂತೆ. ನೋವಾ ತಾನೊಬ್ಬನೇ ದೋಣಿಯಲ್ಲಿ ಕುಳಿತು ಪ್ರಯಾಣಿಸಿದೆ, ತನ್ನ ಸುತ್ತ ಮುತ್ತ ಇದ್ದ ಸಕಲೆಂಟು ಜೀವರಾಶಿಗಳನ್ನು ದೋಣಿಯಲ್ಲಿ ಹಾಕಿಕೊಂಡು ಪ್ರಳಯದಿಂದ ಪಾರಾದನು ಎಂಬ ಕಥೆ ನನಗೆ ಯಾವಾಗಲೂ ಮಹಾತ್ಮರನ್ನು ನೆನಪಿಸುತ್ತದೆ. ಗಾಂಧಿ ತಾವು ಬದುಕಿದ್ದ ಕಾಲಘಟ್ಟದಲ್ಲಿ ತಮ್ಮೊಬ್ಬರ ಬಗ್ಗೆ ಅಥವಾ ತಮ್ಮ ಕುಟುಂಬದ ಕುರಿತಾಗಿ ಚಿಂತಿಸಲಿಲ್ಲ. ತಮ್ಮ ಕಣ್ಣೆದುರುಗಿನ ಎಲ್ಲಾ ಸಂಕಟ, ನೋವುಗಳನ್ನು ತನ್ನ ನೋವು ಎಂದು ಪರಿಭಾವಿಸಿದರು. ಅದೇ ರೀತಿ ಅಸಮಾನತೆಯನ್ನು ತನಗಾಗುತ್ತಿರುವ ಅಪಮಾನವೆಂದು ಪರಿಗಣಿಸಿ ಹೋರಾಡಿದರು. ಇದು ನನಗೆ ಬಹಳವಾಗಿ ಕಾಡಿದ ಮತ್ತು ಇಂದಿಗೂ ಕಾಡುತ್ತಿರುವ ಮಹಾತ್ಮನ ಗುಣ.
ಪ್ರಶ್ನೆ- ಗಾಂಧೀಜಿಯವರ ಯಂತ್ರನಾಗರೀಕತೆಯ ವಿರೋಧವನ್ನು ತಪ್ಪಾಗಿ ಗ್ರಹಿಸಿದವರು ಹೆಚ್ಚು ಮಂದಿ ಇದ್ದಾರೆ. ನೀವು " ಯಂತ್ರಗಳನ್ನು ಕಳಚೋಣ  ಬನ್ನಿ" ಎಂಬ ಕೃತಿ ರಚಿಸಿದಾಗ ಅದೇ ವಿರೋಧಾಭಾಸಗಳನ್ನು ಎದುರಿಸಬೇಕಾಯಿತು. ಸಿಂಗರ್ ತನ್ನ ಮಡದಿ ಬಟ್ಟೆಗೆ ಹೊಲಿಗೆ ಹಾಕಲು ಕಷ್ಟಪಡುವುದನ್ನು ನೋಡಲಾರದೆ ಹೊಲಿಗೆ ಯಂತ್ರವನ್ನು ಅವಿಷ್ಕರಿಸಿದ. ಇದನ್ನು ಸ್ವತಃ ಗಾಂಧಿಯವರು ಪ್ರಸ್ತಾಪಿಸಿ ಸಿಂಗರ್ನನ್ನು ಕೊಂಡಾಡಿದ್ದಾರೆ. ಹಾಗಾಗಿ ಗಾಂಧೀಜಿಯವರ ಯಂತ್ರಗಳ ಕುರಿತಾದ ಚಿಂತನೆಗಳನ್ನು ಕಾಲಘಟ್ಟದಲ್ಲಿ ಸಮಾಜಕ್ಕೆ ಮನದಟ್ಟು ಮಾಡಿಕೊಡುವ ಬಗೆ  ಹೇಗೆ?
ಪ್ರಸನ್ನ- ನಾವು ಯಂತ್ರಗಳ ತಾತ್ವಿಕತೆ ಮತ್ತು ಅವುಗಳ ಉಪಯೋಗದ ಸಾಧ್ಯತೆಗಳನ್ನು ಸರಿಯಾದ ನೆಲೆಯಲ್ಲಿ ಗ್ರಹಿಸುವುದರ ಮೂಲಕ ಅರ್ಥಮಾಡಿಕೊಳ್ಳಬೇಕು.  ತಾತ್ವಿಕ ದೃಷ್ಟಿಯಿಂದ ನೋಡಿದಾಗ ಯಂತ್ರಗಳಿಗೆ ಜಾತಿ,ಧರ್ಮ, ಮೇಲು, ಕೀಳು ಎಂಬ ಹಂಗಿಲ್ಲ ಅಥವಾ ಅರಿವಿಲ್ಲ. ವಿಷಯದಲ್ಲಿ ಅವುಗಳು ಮುಕ್ತವಾಗಿವೆ. ಆದರೆ, ಮನುಷ್ಯನ ಲಾಭಕೋರತನದಿಂದಾಗಿ ಅವುಗಳು ದುರುಪಯೋಗವಾಗುತ್ತಿವೆ. ಕಮ್ಯೂನಿಷ್ಟರಿಗೂ ಸಹ ವಿಷಯದಲ್ಲಿ ತಪ್ಪು ಗ್ರಹಿಕೆಗಳಿವೆ. ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಯಂತ್ರಗಳನ್ನು ಬಿಡಿಸಿ ಅವುಗಳನ್ನು ಕಾರ್ಮಿಕರ ಕೈಗೆ ಒಪ್ಪಿಸಬೇಕೆಂದು ಅವರು ಬಯಸುತ್ತಾರೆ. ಆದರೆ, ಇದೇ ಯಂತ್ರಗಳು ದುಡಿಯುವ ಕೈಗಳಿಂದ ಕೆಲಸವನ್ನು ಕಿತ್ತುಕೊಳ್ಳುತ್ತವೆ ಎಂಬುವುದನ್ನು ಅವರು ಯೋಚಿಸುವುದಿಲ್ಲ. ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿದ ಹಿನ್ನಲೆ ಅಥವಾ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯ ಹಿನ್ನಲೆಯನ್ನು ನಾವು ಸ್ಪಷ್ಟವಾಗಿ ಗ್ರಹಿಸಬೇಕು.
ಮನುಷ್ಯನ ಅಗತ್ಯತೆಗೆ ಎಂತಹ ಯಂತ್ರಗಳು ಬೇಕು ಎಂಬುದನ್ನುನಾವು ಅರಿತುಕೊಳ್ಳಬೇಕು. ಇಂದು ಯಾವುದೇ ಆಸ್ಪತ್ರೆಗೆ ಹೋಗಿ ನೋಡಿ ಅತ್ಯಾಧುನಿಕ ಯಂತ್ರಗಳು ಕಾಣುತ್ತವೆ. ನೋವಿಲ್ಲದೆ ಶಸ್ತ್ರಚಿಕಿತ್ಸೆ ಮಾಡುವುದರಿಂದ ಹಿಡಿದು ನಮ್ಮ ಅಂಗಾಂಗಗಳನ್ನು ಪರೀಕ್ಷಿಸಿ ಫಲಿತಾಂಶ ನೀಡುವ ಯಂತ್ರಗಳು, ರಕ್ತವನ್ನು ಹೀರಿ ಬೇರ್ಪಡಿಸುವ ಯಂತ್ರಗಳು ಹೀಗೆ ತರಾವರಿ ಯಂತ್ರಗಳು ಕಾಣಸಿಗುತ್ತವೆ. ಆದರೆ, ಇದರ ಅಂತಿಮ ಫಲಿತಾಶ ಏನು ಎಂದರೆ, ಇವುಗಳು ಮನುಷ್ಯನ ಸಾವನ್ನು ಮುಂದೂಡಬಲ್ಲ ಯಂತ್ರಗಳೇ ಹೊರತು ಅವನ ಆರೋಗ್ಯವನ್ನು ಕಾಪಾಡುವ ಅಥವಾ ಸದಾ ಸುಸ್ಥಿಯಲ್ಲಿಡುವ ಯಂತ್ರಗಳಲ್ಲ. ಮನುಷ್ಯನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು ದೈಹಿಕ ಶ್ರಮ ಅಂದರೆ, ಕಾಯಕವೇ ಹೊರತು ಯಂತ್ರಗಳಲ್ಲ. ಹಿತಮಿತವಾದ ಆಹಾರ ಸೇವನೆಯಿಂದ ಹಿಡಿದು ಎಲ್ಲಾ ವಿಷಯಗಳಲ್ಲಿ ಮಿತವಾದ ಹಾಗೂ ಸರಳವಾದ ಬದುಕು ಮಾತ್ರ ಮನುಷ್ಯನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ಥಿಯಲ್ಲಿ ಇಡಬಲ್ಲವು.
ಉದಾಹರಣೆಗೆ ಹೇಳುವುದಾರೆ, ನಾವೀಗ ಕುಳಿತಿರುವ ಶ್ರಮಜೀವಿ ಆಶ್ರಮದಿಂದ ಹೆಗ್ಗೋಡಿಗೆ ಕೇವಲ ಒಂದು ಕಿಲೊಮೀಟರ್ ಅಂತರವಿದೆ. ಸಾಗರಕ್ಕೆ  ಬಸ್ ಹಿಡಿಯಲು ನಾವು ಇಲ್ಲಿಂದ ಹೆಗ್ಗೋಡಿಗೆ ಹೋಗಲು ದ್ವಿಚಕ್ರ ವಾಹನ ಅಥವಾ ಕಾರು ಬೇಕೆ? ಕಾಲ್ನಡಿಗೆಯಲ್ಲಿ ಕೇವಲ ಐದಾರು ನಿಮಿಷದ  ದೂರದ ಪ್ರಯಾಣಕ್ಕೆ ನಾವು ಯಂತ್ರಗಳ ಮೊರೆ ಹೋಗುತ್ತೇವೆ. ಗಾಂಧೀಜಿಯವರಿಗೆ ಇಂತಹ ವಿಷಯಗಳಲ್ಲಿ ವಿರೋಧವಿತ್ತು. ಅವರ ದೃಷ್ಟಿಯಲ್ಲಿ ಚರಕ, ರಾಟೆ, ಕುಡುಗೋಲು, ನೇಗಿಲು, ಕೈ ಮಗ್ಗ, ಕಂಬಾರಿಕೆಯ ಚಕ್ರ ಇವೆಲ್ಲವೂ ಮನುಷ್ಯನ ಬಹುಪಯೋಗಿ ಯಂತ್ರಗಳಾಗಿದ್ದವು. ಬೃಹತ್ ಯಂತ್ರನಾಗರೀಕತೆ ಮನುಷ್ಯನಿಗಷ್ಟೇ ಅಲ್ಲದೆ, ನಿಸರ್ಗಕ್ಕೆ ಮತ್ತು ಜೀವಸಂಕುಲಕ್ಕೆ ಅಪಾಯಕಾರಿಯಾದುದು ಎಂಬುದು ಅವರ ನಿಲುವಾಗಿತ್ತು.
 

ಪ್ರಶ್ನೆ- ಗಾಂಧೀಜಿಯವರು ಪ್ರತಿಪಾದಿಸಿದ ಸಹಕಾರಿ ತತ್ವ ಮನುಷ್ಯನ ಒಳಿತು ಮತ್ತು ಅಭಿವೃದ್ಧಿಗೆ ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ಧಿ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮೂಲಾಧಾರ ಎಂಬಂತಿತ್ತು. ಆದರೆ, ಈಗಿನ ಸಹಕಾರ ಸಂಘಗಳು ರಾಜಕೀಯ ಪುಡಾರಿಗಳನ್ನು ಹುಟ್ಟುಹಾಕುವ ಸಂಸ್ಥೆಗಳಾಗಿವೆ.   ಕುರಿತು ನಿಮ್ಮ ಅಭಿಪ್ರಾಯ ಏನು?
ಪ್ರಸನ್ನ- ಸಹಕಾರ ತತ್ವ ಹೊಸದೇನಲ್ಲ. ಅದು ಗಾಂಧೀಜಿಯವರಿಗಿಂತ ಮೊದಲು ಹಲವು ರೂಪಗಳಲ್ಲಿ  ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಲ್ಲಿತ್ತು. ಸಮತಾವಾದ, ಸಮಾಜವಾದ ಚಿಂತನೆಯ ಬೇರುಗಳು ಇದರಲ್ಲಿ ಅಡಕವಾಗಿವೆ. ನಿಮ್ಮ ಮಾತು ನಿಜ; ಸರ್ಕಾರದ ಮಧ್ಯಪ್ರವೇಶದಿಂದಾಗಿ ಸಹಕಾರಿ ತತ್ವದ ಮೂಲ ಆಶಯಗಳು ಮಣ್ಣು ಪಾಲಾಗಿವೆ. 1947 ನಂತರದ ಭಾರತದಲ್ಲಿ ರೂಪಿತವಾಗಿರುವ ಕಾನೂನುಗಳು ಬಹಳಷ್ಟು ಗಟ್ಟಿಯಾಗಿವೆ. ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರೆ,ಇಂದು ನಾವು ಎದುರಿಸುತ್ತಿರುವ ಲಿಂಗ ಅಸಮಾನತೆ, ಅಸ್ಪøಶ್ಯತೆ ಅಥವಾ ಭ್ರಷ್ಟಾಚಾರ ಇಂತಹುಗಳು ಇರುತ್ತಿರಲಿಲ್ಲ. ಗಾಂಧೀಜಿಯವರ ಶಿಷ್ಯ ಹಾಗೂ ಭಾರತ ಕಂಡ ನೈಜ ಅರ್ಥಶಾಸ್ತ್ರಜ್ಞ ಜೆ.ಸಿ. ಕುಮಾರಪ್ಪನವರು ಭಾರತದ ಸಂವಿಧಾನ ಕುರಿತಂತೆ ಒಂದು ಕಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ನಾಗರೀಕ ಹಕ್ಕುಗಳ ಕುರಿತಾಗಿ ಒತ್ತಿ ಹೇಳಿದ ಸಂವಿಧಾನವು, ಅದೇ ರೀತಿಯಲ್ಲಿ ನಾಗರೀಕರ ಜವಬ್ದಾರಿಗಳ ಕುರಿತಾಗಿ ಒತ್ತಿ ಹೇಳಬೀಕಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು
ಸರ್ಕಾರದ ಹಸ್ತಕ್ಷೇಪವಿಲ್ಲದ ಜಾಗದಲ್ಲಿ ಅನೇಕ ಸಹಕಾರಿ ಸಂಘ ಸಂಸ್ಥೆಗಳು ಇಂದಿಗೂ ಅಸ್ತಿತ್ವದಲ್ಲಿದ್ದು ಮಾದರಿಯಾಗಿವೆ. ಆದರೆ, ಅವುಗಳು ಅಲ್ಲಲ್ಲಿ ಸಣ್ಣಪ್ರಮಾಣದಲ್ಲಿ ಕಂಡು ಬರುತ್ತವೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಗಾಂಧೀಜಿಯವರ ಆಶಯದಂತೆ ಸಹಕಾರದ ತತ್ವವನ್ನು ಪಾಲಿಸುತ್ತಾ ಯಶಸ್ವಿನ ಮಾರ್ಗದಲ್ಲಿ ಮುಂದುವರಿದಿವೆ.
ಪ್ರಶ್ನೆ_ ಇಂದಿನ ಇಪ್ಪತ್ತೊಂದನೆಯ ಜಾಗತೀರಣದ ಭರಾಟೆಯ ಮಾರುಕಟ್ಟೆಯ ಪ್ರಭುತ್ವದಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಮತ್ತು  ಅವುಗಳನ್ನು ಯುವ ತಲೆ ಮಾರಿಗೆ ದಾಟಿಸುವ ಬಗೆ ಹೇಗೆ?
ಪ್ರಸನ್ನ- ನಿಜ ಹೇಳಬೇಕೆಂದರೆ, ಗಾಂಧಿ ವಿಚಾರಧಾರೆಯನ್ನು ಉಪನ್ಯಾಸದ ಮೂಲಕವಾಗಲಿ, ಪುಸ್ತಕದ ಮೂಲಕವಾಗಲಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಅವರ ಆಚಾರಗಳನ್ನು ಅಂದರೆ, ಸಿದ್ಧಾಂತಗಳನ್ನು ಆಚರಣೆಗೆ ತಂದರೆ ಸಾಕು, ಅವುಗಳು ತಂತಾನೆ ವಿಚಾರಗಳಾಗಿ ಪ್ರಸಾರಗೊಳ್ಳುತ್ತವೆ. ಗಾಂಧೀಜಿಯವರು ಮಾತನಾಡಿದ್ದಕ್ಕಿಂತ ಹೆಚ್ಚಾಗಿ ಅವರಿಗೆ ಒಪ್ಪಿಗೆಯಾದ ವಿಚಾರಗಳನ್ನು ಆಚರಣೆಗೆ ತಂದರು. ಕಾರಣಕ್ಕಾಗಿ ನಾನು ಹೇಳುವುದಿಷ್ಟೇ, ಗಾಂಧಿ ಸಾಹಿತ್ಯವನ್ನು ಪ್ರಕಟಿಸುವುದನ್ನು ನಿಲ್ಲಿಸಿದರೆ ಕಾಗದದ ಉಳಿತಾಯದ ಜೊತೆಗೆ ಮರಗಳನ್ನು ನಾವು ಉಳಿಸಬಹುದು.
ಪ್ರಶ್ನೆ- ನಾನು ಗಮನಿಸಿದ ಹಾಗೆ ಈಗಿನ ಯುವತಲೆಮಾರು ಗಾಂಧೀಜಿ ಕುರಿತಂತೆ ತುಂಬಾ ಆಸಕ್ತಿ ತಾಳಿದ್ದಾರೆ. ನಿಮ್ಮ ಅನುಭವಕ್ಕೆ ಇದು ಬಂದಿದೆಯಾ?
ಪ್ರಸನ್ನ- ಹೌದು. ನಮ್ಮಲ್ಲಿಗೆ ನೂರಾರು ಮಂದಿ ಬರುತ್ತಿದ್ದಾರೆ. ಚರಕ ಸಂಸ್ಥೆಗೆ ಹಾಗೂ ಶ್ರಮಜೀವಿಗಳ ಆಶ್ರಮಕ್ಕೆ ಭೇಟಿ ಕೊಟ್ಟು, ಇಲ್ಲಿ ನೇಕಾರಿಕೆ, ಕೈ ಮಗ್ಗ, ಸಹಜ ಕೃಷಿ, ನೈಜ ಬಣ್ಣಗಳ ತಯಾರಿಕೆ, ಗ್ರಾಮಾಭಿವೃದ್ಧಿಯ ಚಟುವಟಿಕೆಗಳು ಇವುಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಜೊತೆಗೆ ಆಶ್ರಮದಲ್ಲಿ ಎರಡು-ಮೂರು ದಿನ ಇದ್ದು ಚಟುವಟಿಕೆಗಳಲ್ಲಿ ತಾವು ಸಹ ಪಾಲ್ಗೊಳ್ಳುತ್ತಿದ್ದಾರೆ.
ಪ್ರಶ್ನೆ- ನೀವು ಆಸಕ್ತರಿಗೆ  ಕುರಿತಂತೆ ನಿರಂತರವಾಗಿ ತರಬೇತಿ ಶಿಬಿರವನ್ನು ಏಕೆ ಏರ್ಪಡಿಸಬಾರದು?
ಪ್ರಸನ್ನ- ನನಗೂ ಆಸಕ್ತಿ ಇದೆ. ಆದರೆ. ಯಾವ ಕಾರಣಕ್ಕೂ  ಅದು ವ್ಯವಹಾರದ ಕಾರ್ಯಕ್ರಮವಾಗಬಾರದು ಎಂದು ನಿರ್ಧರಿಸಿದ್ದೀನಿ. ತಾವಾಗಿಯೇ ಆಸಕ್ತಿ ವಹಿಸಿ ಬರುವ ಉತ್ಸಾಹಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ. ಇದಕ್ಕಾಗಿ ಶ್ರಮ ಜೀವಿ ಆಶ್ರಮದಲ್ಲಿ ಮುವತ್ತು ಮಂದಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

 ಪ್ರಶ್ನೆ- ನಿಮ್ಮ ಚರಕ ಸಂಸ್ಥೆ ಕುರಿತು ಹೇಳಿ? ಅದರ ಚಟುವಟಿಕೆಯನ್ನು ರಾಜ್ಯಾದಂತ ವಿಸ್ತರಿಸಬಹುದಲ್ಲವೆ?
ಪ್ರಸನ್ನ- ಚರಕ ಸಂಸ್ಥೆಗೆ 24 ವರ್ಷ ತುಂಬಿ ಇದೀಗ 25 ವರ್ಷಕ್ಕೆ ಕಾಲಿಟ್ಟಿದೆ. ಚರಕ ¸ಂಸ್ಥೆಯು ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಏಳನೂರು ಮಂದಿಗೆ ಉದ್ಯೋಗ ನೀಡಿದೆ. ಗ್ರಾಮೋದ್ಯೋಗ ಚಟುವಟಿಕೆ ತಂತಾನೆ ಹರಡಬೇಕು.  ಚರಕ ಸಂಸ್ಥೆಯನ್ನು ಅಲ್ಲಿನ ಮಹಿಳೆಯರು ಮತ್ತು ಸಹೋದ್ಯೋಗಿಗಳು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ನಿರ್ವಹಿಸುತ್ತಿದ್ದಾರೆ. ಅದರ ವಿಸ್ತರಣೆಗೆ ಹೊರಟರೆ, ಅದಕ್ಕೊಬ್ಬ ಮೇನೇಜರ್, ಸೂಪರ್ ವೈಸರ್ ಹೀಗೆ ವ್ಯಕ್ತಿಗಳು ಬೇಕಾಗುತ್ತದೆ.  ರೀತಿಯಲ್ಲಿ ವಿಸ್ತರಿಸಲು ಹೊರಟರೆ ಚರಕ ಸಂಸ್ಥೆಯು ಸಮಾನತೆ ಆಧಾರ ಮೇಲೆ ಕಟ್ಟಿದ ಸಂಸ್ಥೆಯಾಗುವ ಬದಲು ಕಾರ್ಪೊರೇಟ್ ಸಂಸ್ಥೆಯಾಗುವ ಅಪಾಯವಿದೆ. ಹಾಗಾಗಿ ಅದನ್ನು ಸ್ವಯಂ ಅಭಿವೃದ್ಧಿ ಮತ್ತು ವಿಸ್ತರಿಸಿಕೊಳ್ಳುವ ಸಂಸ್ಥೆಯಾಗಬೇಕೆಂದು ಬಯಸಿದ್ದೇನೆ.
ಪ್ರಶ್ನೆ- ಈಗಿನ ವಾತಾವರಣದಲ್ಲಿ ಕೈಮಗ್ಗ ಉತ್ಪನ್ನಗಳಿಗೆ ಮತ್ತು  ನೇಕಾರಿಕೆ ವೃತ್ತಿಗೆ ಆಶಾದಾಯಕವಾದ ವಾತಾವರಣ ಇದೆಯಾ?

ಪ್ರಸನ್ನ- ಕೈ ಮಗ್ಗದ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ ಇದೆ. ಇತ್ತೀಚೆಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಉಳಿದ ವೃತ್ತಿಗೆ ಹೋಲಿಸಿದರೆ, ನೇಕಾರಿಕೆ ವೃತ್ತಿಯಿಂದ ಹಲವರು ವಿಮುಖರಾಗುತ್ತಿರುವುದು ನಿಜ. ಆದರೆ, ಮಹಿಳೆಯರು ಹಾಗೂ ಇತರೆ ವರ್ಗದವರು ಅಂದರೆ, ದಲಿತರು ಮತ್ತು ಬ್ರಾಹ್ಮಣರು ಸಹ ಜಾತಿ ಬೇಧವಿಲ್ಲದೆ ಕೈ ಮಗ್ಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಏಕೆಂದರೆ, ವೃತ್ತಿ ಮನೆಯೊಳಗೆ ಕುಳಿತು ಮಾಡುವಂತಹದ್ದು. ಸಾಮಾನ್ಯವಾಗಿ ಮಹಿಳೆಯರು ಇಂತಹ ವೃತ್ತಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ನೇಕಾರಿಕೆ ವೃತ್ತಿ ತೊರೆದು ಹೋದವರು ಮರಳಿ ಬರುತ್ತಿದ್ದಾರೆ. ಒಂದಿಷ್ಟು ಆದಾಯ ಕಡಿಮೆ ಎನಿಸಿದರೂ ಸಹ ವೃತ್ತಿಯ ಜೊತೆಗೆ ಇತರೆ ಉಪಕಸುಬುಗಳನ್ನು ಮಾಡುವ ಅವಕಾಶ ಇರುವುದರಿಂದ  ಆಶಾದಾಯಕವಾಗಿದೆ. ಆದರೆ, ಕೇಂದ್ರ ಸರ್ಕಾರ ಜಿ.ಎಸ್.ಟಿ. ತೆರಿಗೆಯ ಮೂಲಕ ಸಣ್ಣ ಘಟಕಗಳು ಮತ್ತು ಕೈಮಗ್ಗದ ಉದ್ದಿಮೆದಾರರ ಕುತ್ತಿಗೆ ಹಿಸುಕುತ್ತಿದೆ. ಈಗಿನ ತೆರಿಗೆ ನಿಯಮದಲ್ಲಿ ಒಬ್ಬ ಸಣ್ಣ ಉದ್ದಿಮೆದಾರ ಪಕ್ಕದ ರಾಜ್ಯಕ್ಕೆ ಹೋಗಿ  ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಿಯಮ ಬದಲಾಗಬೇಕು. ಕೈ ಮಗ್ಗದ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ತೆರಿಗೆಯಲ್ಲಿ ಸಂಪೂರ್ಣ ರಿಯಾಯಿತಿ ನೀಡಬೇಕಿದೆ. ಇದು ಕೇವಲ  ನನ್ನೊಬ್ಬನ ಬೇಡಿಕೆ ಮಾತ್ರವಾಗಿರದೆ, ಇಡೀ ದೇಶದ  ಸಣ್ಣ ವ್ಯಾಪರಸ್ಥರು ಮತ್ತು ಕೈ ಮಗ್ಗ ಘಟಕಗಳ ಬೇಡಿಕೆಯಾಗಿದೆ.


( ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆಯ ಗಾಂಧೀಜಿ ವಿಶೇಷ ಸಂಚಿಕೆ “ ಜನಪದ “ ಮಾಸಪತ್ರಿಕೆಗಾಗಿ ನಡೆಸಿದ ಸಂದರ್ಶನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ