ಸೋಮವಾರ, ನವೆಂಬರ್ 9, 2015

ಟಿಪ್ಪು ಸುಲ್ತಾನ್- ಅಖಂಡ ಭಾರತದ ಕನಸುಗಾರ


ಟಿಪ್ಪು ಸುಲ್ತಾನ್ ಎಂಬುದು ಕೇವಲ ದೊರೆ ಅಥವಾ ಸಾಮಂತನೊಬ್ಬನ  ಹೆಸರು ಮಾತ್ರವಲ್ಲ, ಅದು ಅಖಂಡ ಭಾರತದ ಕನಸಿನ, ಶೌರ್ಯದ, ಧರ್ಮ ಸಹಿಷ್ಣುತೆಯ, ಮಾದರಿ ಆಡಳಿತದ ಹೀಗೆ ಹಲವು ಸಂಗಮಗಳ ಪ್ರತೀಕ. ಟಿಪ್ಪು ಸುಲ್ತಾನ್  ಸ್ವಾತಂತ್ರ್ಯ ಪೂರ್ವದ ಭಾರತ ದೇಶ ಕಂಡ ಒಬ್ಬ ಅಪ್ರತಿಮ ವೀರ ಸೇನಾನಿ ಹಾಗೂ ಶ್ರೀರಂಗಪಟ್ಟಣದ ದೊರೆ ಮಾತ್ರವಾಗಿರದೆಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯಲ್ಲಿ ನಲುಗುತ್ತಿದ್ದ ಭಾರತವನ್ನು ಅವರ ಕಪಿಮುಷ್ಟಿಯಿಂದ ಬಿಡಿಸಲು ಕನಸು ಕಂಡು ನಿರಂತರ ಅವರೊಂದಿಗೆ ಸೆಣಸಿದ ಕನಸುಗಾರ. ಜೊತೆಗೆ ಹಗಲಿರುಳು ಬ್ರಿಟಿಷರನ್ನು ದುಃಸ್ವಪ್ನದಂತೆ ನಿರಂತರ ಕಾಡಿದ ಅಪ್ರತಿಮ ವೀರಸಾಮಾನ್ಯ ಸಿಪಾಯಿಯೊಬ್ಬನ ಪುತ್ರನಾಗಿ ಜನಿಸಿದ ಟಿಪ್ಪು ಸುಲ್ತಾನ್, ಒಬ್ಬ ದೊರೆಯಾಗಿದ್ದುಕೊಂಡು ಯುದ್ಧಭೂಮಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ  ಮಡಿದು ಹುತಾತ್ಮನಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ  ಮಹಾ ಯೋಧ. ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಮೈಸೂರು ಸೇನೆಗೆ ತನ್ನ ಯುದ್ಧ ತಂತ್ರ, ಸಂಘಟನಾ ಚಾತುರ್ಯದಿಂದಾಗಿÀ ಹೈದರ್ ಆಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಇಬ್ಬರೂ ಜಾಗತಿಕ ಮನ್ನಣೆ ದೊರಕಿಸಿಕೊಟ್ಟರು. ಅಷ್ಟು ಮಾತ್ರವಲ್ಲದೆ, ಸಿರಿ ಸಂಪತ್ತು, ನೆಮ್ಮದಿ, ಸಹ ಬಾಳ್ವೆ, ಧರ್ಮ ಸಹಿಷ್ಣುತೆಯಲ್ಲಿ ಮೈಸೂರು ಸಂಸ್ಥಾನವನ್ನು ಭಾರತದಲ್ಲಿ ಉತ್ತುಂಗಕ್ಕೇರಿಸಿದ ಮಹಾನ್ ಮಾನವತಾವಾದಿಗಳು.
 ಟಿಪ್ಪು ಸುಲ್ತಾನ್ ಮಡಿದು ಎರಡು ಶತಮಾನ ಕಳೆದರೂ ಸಹ ಇಂದಿಗೂ ತನ್ನ ಹದಿನಾರು ವರ್ಷದ ಅರ್ಥಪೂರ್ಣ ಹಾಗೂ ಘನತೆಯ ಆಳ್ವಿಕೆ ಮತ್ತು  ಶೌರ್ಯ ಇವುಗಳ ಮೂಲಕ ಪ್ರಾತಃಸ್ಮರಣೀಯನಾಗಿದ್ದಾನೆ. ಇದಕ್ಕಿಂತ ಹೆಚ್ಚಾಗಿ ಬ್ರಿಟಿಷರೊಡನೆ ಕಾದಾಡುತ್ತಲೇ ಭಾರತದ ಇತರೆ ಸಂಸ್ಥಾನಗಳನ್ನು ಒಗ್ಗೂಡಿಸಲು ಶ್ರಮಿಸಿದ ಆತನ ಕಾಳಜಿ, ಭಾರತದ ಸಂಸ್ಖøತಿ ಕುರಿತಂತೆ ಆತನಿಗಿದ್ದ ಅತೀವ ಪ್ರೀತಿ ಮತ್ತು ಗೌರವಗಳಿಂದಾಗಿ ಟಿಪ್ಪು ಸುಲ್ತಾನ್ ಇವೊತ್ತಿಗೂ ಭಾರತದ ರಾಜಕಾರಣಕ್ಕೆ ಮಾದರಿಯಾಗಿದ್ದಾನೆ.
ದಕ್ಷಿಣ ಭಾರತದ ರಾಜಕೀಯ ಏಳು ಬೀಳುಗಳ ಇತಿಹಾಸದಲ್ಲಿ ಮೈಸೂರು ಸಂಸ್ಥಾನ ಅಥವಾ ಶ್ರೀರಂಗಪಟ್ಟಣದ ಹೈದರಾಲಿ ಹಾಗೂ ಆತನ ಪುತ್ರ ಟಿಪ್ಪು ಸುಲ್ತಾನ್ ಎರಡು ಹೆಸರುಗಳು ಅಜರಾಮರವಾಗಿ ಉಳಿದು ಹೋಗಿವೆ. ಹೈದರಾಲಿಯು ಯಾವುದೇ ರಾಜ ವಂಶಸ್ಥ ಕುಟುಂಬದಿಂದ ಬಂದವನಲ್ಲ. ಈಗಿನ ಬೆಂಗಳೂರು ಬಳಿಯ  ದೇವನ ಹಳ್ಳಿಯ ಬೂದಿಕೋಟೆಯಲ್ಲಿ 1721 ರಲ್ಲಿ ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದವನುಮನೆಯಲ್ಲಿನ  ಬಡತನವನ್ನು ತಾಳಲಾರದೆ, ಆತನ ತಾಯಿಯು ತನ್ನ ಸೋದರಳಿಯನಾದ ಹೈದರ್ ಸಾಬ್ ಮೂಲಕ ಮೈಸೂರು ಸೇನೆಗೆ ತನ್ನ ಇಬ್ಬರು ಮಕ್ಕಳಾದ ಷಹಬಾಚ್ ಮತ್ತು  ಹೈದರಾಲಿಯನ್ನು ಸೇನೆಗೆ ಸೇರಿಸಿದಳು. ಆರಂಭದ ದಿನಗಳಲ್ಲಿ ಮೈಸೂರು ಸೇನೆಯಲ್ಲಿ ಆನೆಯ ಮಾಹುತನಾಗಿ ಯುದ್ಧರಂಗದ ಮುಂಚೂಣಿಯಲ್ಲಿದ್ದು ಕೊಂಡು ಯುದ್ಧ ರಂಗದ ಕಲೆಗಳನ್ನು ಕರಗತ ಮಾಡಿಕೊಂಡ ಹೈದರಾಲಿ, 1749 ರಲ್ಲಿ ಮೈಸೂರು ಸೇನೆಯು ದೇವನಹಳ್ಳಿಗೆ ಮುತ್ತಿಗೆ ಹಾಕಿದಾಗ ತನ್ನ ಪರಾಕ್ರಮವನ್ನು ಅನಾವರಣಗೊಳಿಸುವುದರ ಮೂಲಕ ದೇವನಹಳ್ಳಿಯನ್ನು ಮೈಸೂರು ದೊರೆಗೆ ಗೆದ್ದು ಕೊಟ್ಟನು.
( ಹೈದರಾಲಿ)

1751 ರಲ್ಲಿ ಮೈಸೂರು ದೊರೆ ನಂಜರಾಜನು ತಿರುಚಿನಾಪಳ್ಳಿಗೆ ಮುತ್ತಿಗೆ ಹಾಕಿದಾಗ ಅಲ್ಲಿ ಬ್ರಿಟೀಷರ ಸೈನ್ಯದ ವಿರುದ್ಧ ಮೈಸೂರು ಸೇನೆಗೆ ಸೋಲುಂಟಾಯಿತು. ಆದರೆ, ಯುದ್ಧದಲ್ಲಿ ಹೈದರಾಲಿಗೆ ಯುರೋಪಿಯನ್ನರ ಯುದ್ಧ ತಂತ್ರ, ಕೌಶಲ್ಯ ಹಾಗೂ ಬಂದೂಕು, ಪಿರಂಗಿಗಳ ಬಳಕೆಯ ಪರಿಚಯವಾಯಿತು. ಬಡತನದ ಕಾರಣ ಅನಕ್ಷರಸ್ಥನಾಗಿದ್ದ ಹೈದರಾಲಿಯು ವಿಷಯಗಳನ್ನು ಗ್ರಹಿಸುವುದರಲ್ಲಿ ಸೂಕ್ಷ್ಮ ಹಾಗೂ ಚತುರಮತಿಯಾಗಿದ್ದನು. ಸೋಲಿನಿಂದಾಗಿ ಮೈಸೂರು ಸಂಸ್ಥಾನದಲ್ಲಿ ಅರಾಜಕತೆ ಉಂಟಾದ ಕಾರಣ, ವಂಶಪಾರಂಪರ್ಯವಾಗಿ ದಳವಾಯಿ ಹಾಗೂ ಮಂತ್ರಿ ಸ್ಥಾನ ಪಡೆಯುತ್ತಿದ್ದ ಕೆಲವು ವ್ಯೆಕ್ತಿಗಳ ಕೈಯಲ್ಲಿ ಅಧಿಕಾರದ ಕೇಂದ್ರೀಕೃತವಾಯಿತು, ಇದರಿಂದ ಬೇಸತ್ತ  ಹೈದರಾಲಿಯು 1761 ರಲ್ಲಿ  ಕ್ಷಿಪ್ರ ಕ್ರಾಂತಿಯಮೂಲಕ ಮೈಸೂರು ಅರಮನೆಯ ಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡನು. ವೇಳೆಗೆ ಸೇನೆಯ ದಂಡನಾಯಕನ ಸ್ಥಾನದಲ್ಲಿದ್ದ ಹೈದರಾಲಿ ತಾನು ಮೈಸೂರು ಸಂಸ್ಥಾನದ ದೊರೆ ಅಥವಾ ಒಡೆಯ ಎಂದು ಘೋಷಿಸಿಕೊಳ್ಳದೆ, ಯಾವುದೇ ರೀತಿಯ ರಾಜ ಪೋಷಾಕು ಧರಿಸದೆ, ಮೈಸೂರು ದೊರೆಯನ್ನು ಸಿಂಹಾಸನದ ಮೇಲೆ ಕೂರಿಸಿ, ತಾನು ರಾಜ ಕಾರ್ಯಕರ್ತ ಅಂದರೆ, ರಾಜನ ಪ್ರಧಾನ ಮಂತ್ರಿ ಮತ್ತು ಸೇನಾಧಿಪತಿ ಎಂದು ಬಹಿರಂಗವಾಗಿ ಘೋಷಿಸಿಕೊಂಡನು. ಪ್ರತಿ ವರ್ಷ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದ ದಸರಾ ಹಬ್ಬದ ಆಚರಣೆಗೆ ಸಕಲ ಪ್ರೊತ್ಸಾಹವನ್ನು ನೀಡಿ, ತಾನೂ ಸಹ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದನು. (ಮುಂದಿನ ದಿನಗಳಲ್ಲಿ ಅಂದರೆ ಹೈದರಾಲಿಯ ನಿಧನಾನಂತರ ತನ್ನ ತಂದೆಯ ನಿಲುವಿಗೆ ಭಿನ್ನವಾಗಿ ಚಿಂತಿಸಿದ ಟಿಪ್ಪು ಸುಲ್ತಾನ್ ತಾನು ಮೈಸೂರಿನ ಬಾದಶಹನೆಂದು ಘೋಷಿಸಿಕೊಂಡನು) ಮೈಸೂರಿನ ರಾಜಕೀಯ ಇತಿಹಾಸದಲ್ಲಿ ಹೈದರಾಲಿಯ ಆಡಳಿತಕ್ಕೆ ಮಹತ್ವದ ಸ್ಥಾನವಿದೆ. ನೆರೆಯ ಮರಾಠರು, ಹಾಗೂ ಅಕ್ಕ ಪಕ್ಕದ ಸಂಸ್ಥಾನಗಳ ದಾಳಿ, ಅನೀರಿಕ್ಷಿತವಾಗಿ ಎದುರಾಗುತ್ತಿದ್ದ ಬರ ಮತ್ತು ಅತೀವೃಷ್ಟಿಗಳ ನಡುವೆ ಮೈಸೂರು ಸಂಸ್ಥಾನವನ್ನು ಸುಸ್ಥಿಯಲ್ಲಿ ಇಟ್ಟಿದ್ದನು. ಹೈದರಾಲಿಯು ಮರಣ ಹೊಂದುವ ವೇಳೆಗೆ ಮೈಸೂರು ಸಂಸ್ಥಾನ ವಿಸ್ತಾರಗೊಂಡು ಸುರಕ್ಷಿತವಾಗಿತ್ತು. ಉತ್ತರ ಭಾಗದ ಕೃಷ್ಣಾ ಮತ್ತು ತುಂಗಾಭದ್ರ ವರೆಗೆ ದಕ್ಷಿಣದಲ್ಲಿ ಕೇರಳದ ಮಲಬಾರ್ ವರೆಗೆ, ಪೂರ್ವದಲ್ಲಿ ತಮಿಳುನಾಡಿನ ವೆಲ್ಲೂರು ಪಶ್ಚಿಮದಲ್ಲಿ  ಕೊಡಗು, ಮಂಗಳೂರು, ಭಟ್ಕಳ, ಹೊನ್ನಾವರದವರೆಗೆ ಸಾಮ್ರಾಜ್ಯ ವಿಸ್ತರಣೆಗೊಂಡಿತ್ತು. ಮೈಸೂರು ದೊರೆಗಳ ಆಳ್ವಿಕೆಯಲ್ಲಿ ವಾರ್ಷಿಕವಾಗಿ ನಲವತ್ತು ಲಕ್ಷ ರೂಪಾಯಿ ಆದಾಯವಿದ್ದುದು ಹೈದರಾಲಿ ಆಳ್ವಿಕೆಯಲ್ಲಿ ಒಂದು ಕೋಟಿ ಹತ್ತು ಲಕ್ಷರೂಪಾಯಿವರೆಗೆ ಏರಿತ್ತುಚಿತ್ತೂರಿನ ನರಸಿಂಗರಾಯನ ಪೇಟೆ ಬಳಿ ನಡೆದ ಯುದ್ದದಲ್ಲಿ ಹೈದರಾಲಿಯು 1782 ಡಿಸಂಬರ್ ನಲ್ಲಿ ಮೃತನಾದನು. ಮೊದಲು ಕೋಲಾರದ ಫತೇ ಮಹಮದ್ ಗೋರಿಯ ಬಳಿ ಸಮಾಧಿ ಮಾಡಲಾಗಿದ್ದ ಅವನ ಕಳೇಬರವನ್ನು  ಶ್ರೀರಂಗಪಟ್ಟಣಕ್ಕೆ ತಂದು  ಟಿಪ್ಪುಸುಲ್ತಾನ್ ನಿರ್ಮಿಸಿದ ಬೃಹತ್ ಗೋರಿಯಲ್ಲಿ ಹೂಳಲಾಯಿತು.
ಟಿಪ್ಪುಸುಲ್ತಾನ್ ಆಡಳಿತ ಅವಧಿಯಲ್ಲಿನ ಬಹುತೇಕ ಗುಣಾತ್ಮಕ ಅಂಶಗಳಲ್ಲಿ ಆತನ ತಂದೆ ಹೈದರಾಲಿಯ ಪ್ರಭಾವವಿದೆ. ಹೈದರಾಲಿಯು ಉತ್ತಮ ಯೋಧ, ಆಕ್ರಮಣಶಾಲಿ ಮನೋಭಾವದ ವ್ಯಕ್ತಿತ್ವ, ಉತ್ತಮ ಆಡಳಿತಗಾರ, ಇವೆಲ್ಲವೂ ಟಿಪ್ಪುಸುಲ್ತಾನ್ ಗೆ ತಂದೆಯಿಂದ ಬಳುವಳಿಯಾಗಿ ಬಂದಿದ್ದವು. ಕಾರಣಕ್ಕಾಗಿಹೈದರ್ ನಾಮಕೃತಿ ರಚಿಸಿರುವ ನಲ್ಲಪ್ಪ ಎಂಬ ಅರಮನೆಯ ಇತಿಹಾಸಕಾರ ಹೈದರಾಲಿಯನ್ನುದೈವ ಬ್ರಹ್ಮ, ದ್ವೇಷ ರಹಿತಅಂದರೆ, ಬ್ರಾಹ್ಮಣರ ಕುರಿತು ದ್ವೇಷವಿಲ್ಲದ ದೊರೆ ಎಂದು ಬಣ್ಣಿಸಿದ್ದಾನೆ. ಟಿಪ್ಪುಸುಲ್ತಾನ್ ಅನುಕರಿಸಿದ ರಾಜನೀತಿಯಲ್ಲಿ ಹೈದರಾಲಿಯ ರಾಜನೀತಿಯ ಲಕ್ಷಣಗಳನ್ನು ನಾವು ಕಾಣಬಹುದಾಗಿದೆ. ಹೈದರಾಲಿಯು ತನ್ನ ಪುತ್ರ ಟಿಪ್ಪು ಸುಲ್ತಾನ್ ಬರೆದ ನೀತಿ ಪಾಠದ ಪತ್ರವೊಂದು ಉತ್ತಮ ರಾಜ್ಯಾಡಳಿತಕ್ಕೆ ನೀಡಿದ ಸಂವಿಧಾನದಂತಿದೆ.
ಮಗನೇ ನಾನು ನನ್ನ ಪೂರ್ವಿಕರಿಂದ ಪಡೆಯದ ಒಂದು ಸಾಮ್ರಾಜ್ಯವನ್ನು ನಿನಗೆ ಬಿಡುತ್ತಿದ್ದೇನೆ. ಹಿಂಸೆಯಿಂದ ಗಳಿಸಿದ ರಾಜದಂಡವು ಯಾವಾಗಲೂ ನಶ್ವರವಾದುದು. ನೀನು ನಿನ್ನ ರಾಜ್ಯದ ಆಂತರೀಕ ವ್ಯವಹಾರದಲ್ಲಿ ಎಳ್ಳಷ್ಟೂ ಹೆದರಬೇಕಾಗಿಲ್ಲ. ಆದರೆ, ನಿನ್ನ ದೃಷ್ಟಿಯನ್ನು ಬಹು ದೂರದವರೆಗೆ ಒಯ್ಯುವುದು ಅತ್ಯಾವಶ್ಯಕ. ಮೊಗಲ್ ಸಾಮ್ರಾಜ್ಯವು ಔರಂಗಜೇಬನ ಪತನದಿಂದಾಗಿ ಭಾರತವು ಏಷ್ಯಾದ ಸಾಮ್ರಾಜ್ಯಗಳಲ್ಲಿ ತನ್ನ ಸ್ಥಾನಮಾನಗಳನ್ನು ಕಳೆದುಕೊಂಡಿದೆ. ಸುಂದರನಾಡು ಅಂತಃಕಲಹದಿಂದ ಹರಿದು ಹಂಚಿ ಹೋಗಿದೆ. ಜುನರು ನಾನಾ ಮತಗಳಿಗೆ ಹಂಚಿ ಹೋಗಿದ್ದಾರೆ. ಹಾಗಾಗಿ ದೇಶ ಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದುಗಳು ಶಾಸ್ತ್ರಾನುಭವದಿಂದ ಪಡೆದ ಶಾಂತಿಸೂತ್ರದಿಂದ ಮೃದುವಾಗಿ ತಮ್ಮ ನಾಡನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಆದ್ದರಿಂದ ನಾಡು ಪರಕೀಯರಿಗೆ ತುತ್ತಾಗಿದೆ. ಮಗನೇ ನಿನ್ನ ಪ್ರಯತ್ನಗಳನ್ನೆಲ್ಲಾ ಒಗ್ಗೂಡಿಸಿ ಈಗ ಭಾರತದಲ್ಲಿ ಸರ್ವ ಶಕ್ತರಾಗಿರುವ ಇಂಗ್ಲೀಷರನ್ನು ಯುದ್ಧದ ಮೂಲಕ ದುರ್ಬಲಗೊಳಿಸುವುದು ಅತ್ಯಾವಶ್ಯಕ. ಯುರೋಪಿಯನ್ನರಿಗೆ ನಿಖರವಾದ ಚಾತುರ್ಯವಿದೆ ಅವರ ಮೇಲೆ ಯಾವಾಗಲೂ ಅವರ ಅಸ್ತ್ರವನ್ನೇ ಉಪಯೋಗಿಸು. ಪ್ರೆಂಚರ ಸಹಾಯದಿಂದ ಮಾತ್ರ ನೀನು ಅವರನ್ನು ಮಣಿಸಬಲ್ಲೆ. ಪರಾಕ್ರಮವು ನಮ್ಮನ್ನು ಸಿಂಹಾಸನಕ್ಕೆ ಏರಿಸಬಲ್ಲದು. ಆದರೆ, ಚಕ್ರಾಧಿಪತ್ಯ ಕಾಯ್ದುಕೊಳ್ಳಲು ಅದು ಸಾಲದು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಪುಕ್ಕಲುತನದಿಂದ ನಾವು ಸಿಂಹಾಸನವನ್ನು ಗೆಲ್ಲಬಹುದು, ಆದರೆ ಶೀಘ್ರವಾಗಿ ಅದನ್ನು ಜನರ ಪ್ರೀತಿಗೆ, ಗೌರಕ್ಕೆ ನಾವು ಒಪ್ಪಿಸದೇ ಹೋದಲ್ಲಿ ರಾಜ್ಯವು ನಮ್ಮ ಕೈ ಬಿಟ್ಟು ಹೋಗಬಹುದು

                                                    (ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಮಾಧಿಗಳು)
ಟಿಪ್ಪು ಸುಲ್ತಾನ್ ಗೆ ತನ್ನ ತಂದೆ ಹೈದರಾಲಿ ಹಾಕಿಕೊಟ್ಟ ಆಡಳಿತದ ಮಾರ್ಗದರ್ಶಿ ಸೂತ್ರಗಳು ಮೈಸೂರು ಸಂಸ್ಥಾನವನ್ನು ಸದಾ ಸುಸ್ಥಿಯಲ್ಲಿಡಲು ಕಾರಣವಾದವು. ತನ್ನ ಆಡಳಿತಾವಧಿಯಲ್ಲಿ ಬ್ರಿಟೀಷರು ಮಾತ್ರವಲ್ಲದೆ, ಪುಣೆಯ ಮರಾಠು, ಹೈದರಾಬಾದಿನ ನಿಜಾಮರು, ಕೇರಳದ ತಿರುವಾಂಕೂರಿನ ರಾಜ ಇವರ ಜೊತೆ ನಿರಂತರ ಕಾದಾಡುತ್ತಲೇ ಮೈಸೂರು ಸಂಸ್ಥಾನವನ್ನು ಭಾರತದ ಇತರೆ ಸಂಸ್ಥಾನಗಳಿಗಿಂತ ಎತ್ತರಕ್ಕೇರಿಸಿ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ.
1799 ಮೇ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿದ ನಂತರ ಆತನ ರಾಜ್ಯಾಡಳಿತ ಮತ್ತು ವ್ಯೆಕ್ತಿತ್ವ ಕುರಿತಂತೆ ಬ್ರಿಟೀಷ್ ವಸಾಹತು ಶಾಹಿ ಕಾಲದ ಬ್ರಿಟೀಷ್ ಇತಿಹಾಸಕಾರರಿಂದ ಚರಿತ್ರೆಯನ್ನು ಸೃಷ್ಟಿಸಲಾಗಿದ್ದು, ಬಹುತೇಕ ಕೃತಿಗಳಲ್ಲಿ ಟಿಪ್ಪು ಸುಲ್ತಾನ್ ನನ್ನು ಮತಾಂಧನೆಂದೂ, ಹಿಂದೂ ಧರ್ಮದ ದ್ವೇಷಿಯೆಂದು ಚಿತ್ರಿಸಲಾಗಿದೆ. ಇದು ಕೇವಲ ಒಂದು ಮಗ್ಗುಲಿನ ಚರಿತ್ರೆಯಾಗಿದೆ. ನಮ್ಮ ಮುಂದಿರುವ ಐತಿಹಾಸಿಕ ದಾಖಲೆಗಳು, ಅನೇಕ ಹಿಂದೂ ದೇವಾಲಯಗಳು, ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಗಳು ಟಿಪ್ಪು ಮತ್ತು ಹೈದರಾಲಿಯ ಧರ್ಮ ಸಹಿಷ್ಣುತೆಗೆ ಸಾಕ್ಷಿಗಳಾಗಿವೆ. ಕೊಡಗಿನ ಕೊಡವ ಜನಾಂಗದ ಮೇಲೆ, ಕೇರಳ್ ಮಲಬಾರಿನ ನಾಯರ್ ಗಳ ಮೇಲೆ ಮತ್ತು ಮಂಗಳೂರಿನ ಕ್ಯಾಥೊಲಿಕ್ ಪಂಗಡದ ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ ನಿರ್ಧಾಕ್ಷಿಣ್ಯವಾಗಿ ನಡೆದುಕೊಂಡಿರುವುದು ನಿಜವಾದರೂ, ಅದು ಯುದ್ಧ ನೀತಿಯ ಒಂದು ಅಂಗವಾಗಿದೆಯೆ ಹೊರತು, ಧರ್ಮದ ಹಿನ್ನಲೆಯಲ್ಲಿ ಅಲ್ಲ. ಕೇರಳದ ಕೊಚ್ಚಿನ್ ಬಂದರನ್ನು  ತಿರುವಾಂಕೂರು ದೊರೆ ಬ್ರಿಟೀಷರಿಗೆ ನೀಡಿದ್ದುಬ್ರಿಟೀಷ್ ಸೇನೆಯು ಮೈಸೂರಿನ ಮೇಲೆ ಮುತ್ತಿಗೆ ಹಾಕಲು  ಪಿರಿಯಾಪಟ್ಟಣ ಬಳಿ ಬೀಡು ಬಿಟ್ಟಿದ್ದ ಸಮಯದಲ್ಲಿ  ಕೊಡವರು ಅವರಿಗೆ ದಿನಸಿ, ಇನ್ನಿತರೆ ಅವಶ್ಯಕ ವಸ್ತುಗಳನ್ನು ನೀಡುವುದರ ಮೂಲಕ ನೆರವಾದ್ದು ಇವೆಲ್ಲವೂ ಟಿಪ್ಪು ಸುಲ್ತಾನ್ ಸಿಟ್ಟಿಗೆ ಕಾರಣವಾದ ಸಂಗತಿಗಳಾಗಿವೆ. ಕ್ರೈಸ್ತರ ಮೇಲಿನ ಸಿಟ್ಟಿಗೆ ಅವರು ಪರಂಗಿಯರು ಹಾಗೂ ಇಂಗ್ಲೇಂಡ್ ಮೂಲದವರು ಎಂಬುವುದು ಮುಖ್ಯವಾಗಿತ್ತು.


ಟಿಪ್ಪುಸುಲ್ತಾನ್ ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿರುವ ಸಾಧನೆಯ ಹೆಜ್ಜೆ ಗುರುತುಗಳು ಇನ್ನೂ  ಹಸಿರಾಗಿ ಉಳಿದಿವೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆಹದಿನೆಂಟನೇ ಶತಮಾನದ ಕಾಲಘಟ್ಟದ ಟಿಪ್ಪು ಸುಲ್ತಾನನಿಗೆ ಇಂತಹ ಒಳನೋಟಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.. ಬಹುಮುಖಿ ಸಂಸ್ಸøತಿಯ ಆರಾಧಕ ಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು ನಾಡು ಮತ್ತು ನುಡಿಯನ್ನು ಪ್ರೀತಿಸಿದವನು. ಇದಕ್ಕೆ ಮುಖ್ಯ ಕಾರಣವೆಂದರೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಇವರ ವಂಶಸ್ಥರು ಸೂಫಿ ಸಂತ ಚಿಸ್ತಿ ಬಂಡೆ ನವಾಜ್ ಪರಂಪರೆಯಿಂದ ಬಂದವರಾಗಿದ್ದರು. ಟಿಪ್ಪುವಿನ ಕೆಳಗಿನ ಕ್ರಾಂತಿಕಾರಿ ಆಲೋಚನೆಗಳು ಮತ್ತು ಕಾರ್ಯಗಳು ನಮಗೆ ಇಂದಿಗೂ ಮಾದರಿಯಾಗಿವೆ.




ತನ್ನ ಸಂಸ್ಥಾನದಲ್ಲಿ  ಕೃಷಿಗೆ ಆಧ್ಯತೆ ನೀಡಿ ಶ್ರೀರಂಗಪಟ್ಟಣದ ಬಳಿ ಹರಿಯುವ ಕಾವೇರಿ ನದಿಗೆ ಮೊದಲ ಅಣೆಕಟ್ಟು ನಿರ್ಮಾಣ ಮಾಡಿದನು. ಇದೇ ಜಾಗದಲ್ಲಿ 1924 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್. ವಿಶ್ವೇಶ್ವರಯ್ಯನವರ ಮೂಲಕ ಕೃಷ್ಣರಾಜ ಸಾಗರ ಎಂಬ ನೂತನ ಅಣೆಕಟ್ಟು ನಿರ್ಮಾಣ ಮಾಡಿದರು. ಚೀನಾದಿಂದ ರೇಷ್ಮೆ ಆಮದಾಗುತ್ತಿದ್ದನನ್ನು ಕಂಡ ಟಿಪ್ಪು, ಮೊದಲ ಬಾರಿಗೆ ಕನ್ನಡದ ನೆಲದಲ್ಲಿ ರೇಷ್ಮೆ ಬೆಳೆಯನ್ನು ಪರಿಚಯಿಸಿದನು. ಜೊತೆಗೆ ತನ್ನ ತಂದೆಯ ಹೈದರಾಲಿಯ ಕನಸಿನಂತೆ ಬೆಂಗಳೂರು ನಗರದಲ್ಲಿ ಪ್ರಪಥಮ ಜೈವಿಕ ಉದ್ಯಾನವನವನ್ನು ಲಾಲ್ ಬಾಗ್ ಹೆಸರಿನಲ್ಲಿ ಅಭಿವೃದ್ಧಿಪಡಿಸಿದನು. ಟಿಪ್ಪು ಸುಲ್ತಾನ್ ಪರಿಚಯಿಸಿದ ಜಗತ್ತಿನ ವಿವಿಧ ಬಗೆಯ ಮಾವಿನ ಹಣ್ಣುಗಳ ತಳಿಯನ್ನು ಹಾಗೂ ಮಾವಿನ ತೋಟಗಳನ್ನು ನಾವು ಇಂದಿಗೂ ಸಹ ಟಿ.ನರಸಿಪುರ ಮತ್ತು ಮಳ್ಳವಳ್ಳಿ ತಾಲ್ಲೂಕಿನ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಸದಾ ಹೊಸ ತಂತ್ರಜ್ಞಾನಕ್ಕೆ ತುಡಿಯುತ್ತಿದ್ದ ಅವನು ಭಾರತದಲ್ಲಿ ಮೊದಲ ಬಾರಿಗೆ ಸೇನೆಯಲ್ಲಿ ಪ್ರೆಂಚರ ಸಹಾಯದಿಂದ ಕ್ಷಿಪಣಿ ಮತ್ತು ರಾಕೇಟ್ ಗಳನ್ನು ಬಳಸುವುದರ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾದನು, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಟಿಪ್ಪುವಿಗೆ ಎಷ್ಟೊಂದು ಆಸಕ್ತಿಯಿತ್ತು ಇತ್ತು ಎಂಬುದಕ್ಕೆ 1786 ಡಿಸಂಬರ್ 29 ರಂದು ಅವನು ಪರ್ಷಿಯನ್ ವಿದ್ವಾಂಸ  ಕಾಸ್ನಿ ಎಂಬಾತನಿಗೆ ಪತ್ರ ಬರೆಯುತ್ತಾಯುರೋಪಿನಿಂದ ಬರುತ್ತಿರುವ ಪುಸ್ತಕವೊಂದು ಶಾಖ ಮಾಪಕವನ್ನು ಕುರಿತ ವಿಷಯವನ್ನು ಒಳಗೊಂಡಿದೆ. ಅದನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿ ನನಗೆ ಕಳುಹಿಸಿಕೊಂಡುಎಂದು ಬರೆದಿರುವ ದಾಖಲೆ ಇಂದಿಗೂ ಪತ್ರಾಗಾರದಲ್ಲಿ ಇದೆ.
ಮದ್ಯಪಾನದ ಕಡು ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಇದರಿಂದ  ಜನರ ಆರೋಗ್ಯ ಮತ್ತು ನೈತಿಕತೆ ಕುಸಿಯುತ್ತದೆ ಎಂದು ಬಲವಾಗಿ ನಂಬಿದ್ದ ಕಾರಣಕ್ಕಾಗಿ ವಿದೇಶಿಯರನ್ನು ಹೊರತು ಪಡಿಸಿ, ಸ್ಥಳೀಯ ಜನರಿಗೆ ಮದ್ಯ ಮಾರಾಟವನ್ನು ನಿಷೇಧಿಸಿದ್ದ, ಕುರಿತು 1798 ಡಿಸಂಬರ್ 11 ರಂದು ರಾಲಿ ಎಂಬಾತನಿಗೆ ಟಿಪ್ಪು ಸುಲ್ತಾನ್ ಪತ್ರ ಬರೆದಿದ್ದಾನೆ. ನನ್ನ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ಪಾನ ನಿಷೇಧವಾಗುವುದು ನನ್ನ ಹೃದಯಕ್ಕೆ ಸಂತೋಷವಾಗುವ ವಿಚಾರ ಎಂದು ಬಣ್ಣಿಸಿಕೊಂಡಿದ್ದಾನೆ. ಟಿಪ್ಪು ಸುಲ್ತಾನ್ ಸೆರೆ ಹಿಡಿದ ಖೈದಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ಇತಿಹಾಸದ ಪುಟಗಳಲ್ಲಿ ಆರೋಪಿಸಿಕೊಂಡು ಬರಲಾಗಿದೆ. ಆದರೆ, 1786 ರಲ್ಲಿ ಬ್ರಿಟನ್ ಸೇನೆಯ ಮುಖಂಡ ರಾಬ್ ಸನ್ ಎಂಬಾತ ದಾಖಲಿಸಿರುವ ಬರೆವಣಿಗೆ ರೀತಿ ಇದೆ. “ ಟಿಪ್ಪು ಸಾಹೇಬನು ಕರ್ನಲ್ ಬ್ರೈತ್ ವೈಟ್ ಮತ್ತು ಇತರೆ ಖೈದಿಗಳನ್ನು ತನ್ನ ಬಳಿ ಕರೆತರುವಂತೆ ಆಜ್ಞಾಪಿಸಿ ಅವರುಗಳ ಗಾಯವನ್ನು ಸ್ವತಃ ಪರೀಕ್ಷಿಸಿದನು. ನಂತರ ಗಾಯಾಳುಗಳಿಗೆ ಔಷಧೊಪಚಾರ ಮಾಡಲು ಪ್ರೆಂಚ್ ವೈದ್ಯರೊಡನೆ ಹಳ್ಳಿಗಳಿಗೆ ಕಳಿಸಿಕೊಟ್ಟನು. ಖೈದಿಗಳು ಧರಿಸಲು ನವಿರಾದ ಬೆಳ್ಳನೆಯ ಉಡುಪುಗಳನ್ನು ನೀಡಿದನು. ಗಾಯಗಳಿಗೆ ಪಟ್ಟಿ ಕಟ್ಟಲು ಒರಟು ಬಟ್ಟೆಗಳು ಮತ್ತು ಮುವತ್ತು ಪಗೋಡ ನಾಣ್ಯಗಳನ್ನು ನೀಡಿದನುಬ್ರಿಟೀಷ್ ಸೇನೆಯ ದಂಡನಾಯಕನನ್ನು ಟಿಪ್ಪು ಸುಲ್ತಾನ್ ಬಂಧಿಖಾನೆಯಲ್ಲಿ ಇಟ್ಟಿದ್ದನೇ  ಹೊರತು ನೆಲಮಾಳಿಗೆಯಲ್ಲಿ ಅಲ್ಲಇಂತಹ ಅನೇಕ ಅಮೂಲ್ಯ ದಾಖಲೆಗಳು ಟಿಪ್ಪು ಸುಲ್ತಾನನ ಮಾನವೀಯ ಮುಖಗಳ ಮೇಲೆ ಬೆಳಕು ಚಲ್ಲುತ್ತವೆ.




                                            (ಶೃಂಗೇರಿಯ ಶಾರದಾಂಬೆಯ ದೇಗುಲ ಮತ್ತು ವಿಗ್ರಹ)

ಟಿಪ್ಪು ಸುಲ್ತಾನ್ ಹಿಂದೂ ಧರ್ಮವನ್ನು ಮತ್ತು ಹಿಂದೂಗಳನ್ನು ಎಷ್ಟೊಂದು ಗೌರವ ಮತ್ತು ಭಕ್ತಿಯಿಂದ ಕಾಣುತ್ತಿದ್ದ ಎಂಬುದಕ್ಕೆ 1794 ರಲ್ಲಿ ರೊಡರಿಕ್ ಮೆಕನ್ಜಿ ಎಂಬಾತ ಬರೆದ ಬರೆವಣಿಗೆ ನಮ್ಮೆದುರು ಸಾಕ್ಷಿಯಾಗಿದೆ. ವರ್ಷವೊಂದಕ್ಕೆ ತಮಿಳುನಾಡು ಒಳಗೊಂಡಂತೆ ಮೈಸೂರು ಸಂಸ್ಥಾನದಲ್ಲಿ ಒಟ್ಟು 156 ದೇವಾಸ್ಥಾನಗಳಿಗೆ ಆರ್ಥಿಕ ನೆರವು ನಿಡುತ್ತಿದ್ದ ಸಂಗತಿಗಳು ದಾಖಲಾಗಿವೆ. ಕಾಂಚಿಪುರಂ ದೇವಸ್ಥಾನದ ನಿರ್ಮಾಣಕ್ಕೆ 10 ಸಾವಿರ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ ಸಂಗತಿ, ಮೈಸೂರಿನ ಚಾಮುಂಡೇಶ್ವರಿ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಗಳಿಗೆ ಚಿನ್ನ ಹಾಗೂ ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ನೀಡಿರುವ ವಿಷಯ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದ ಎರಡು ಪಂಗಡಗಳ ಆರ್ಚಕರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ, ದೇಗುಲಕ್ಕೆ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕೊಡುಗೆಯಾಗಿ ನೀಡಿರುವ ಸಂಗತಿಗಳು ದಾಖಲಾಗಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮರಾಠರ ದಾಳಿಯಿಂದ ಅಂದರೆ, 1990-92 ನಡುವಿನ ಮೂರನೆಯ ಮೈಸೂರು ಯುದ್ಧದ ಸಮಯದಲ್ಲಿ ಸರ್ದಾರ್ ಪರುಶರಾಂ ಭಾವೂ ಮತ್ತು ಆತನ ಸೇನಾನಿ ಪಟವರ್ಧನ ಇವರುಗಳು ಬಿದನೂರು ಪ್ರಾಂತ್ಯದ ಮೇಲೆ ದಂಡೆತ್ತಿ ಬಂದಾಗ ಶೃಂಗೇರಿ ಶಾರದಾ ಪೀಠದ ಚಿನ್ನಾಭರಣಗಳು ಮತ್ತು ಅರವತ್ತು ಲಕ್ಷ ರೂಪಾಯಿಗಳನ್ನು ದೋಚಿ, ಶಾರದೆಯ ವಿಗ್ರಹವನ್ನು ಭಗ್ನಗೊಳಿಸಿದ್ದರು. ಹಾನಿಗೊಳಗಾದ ಹಾಗೂ ಜಗದ್ಗುರು ಶಂಕರಾಚಾಯ್ರು ಸ್ಥಾಪಿಸಿದ ಶೃಂಗೇರಿಯ ಶಾರದಾ ಪೀಠದ ಶಾರದೆಯ ವಿಗ್ರಹ ಮತ್ತು ದೇಗುಲ ಇವುಗಳ ದುರಸ್ತಿಗೆ ಅಪಾರವಾದ ನೆರವನ್ನು ನೀಡಿ ಶಾರದಾಂಬೆಯ ವಿಗ್ರಹದ ಪುನರ್ ಪ್ರತಿಷ್ಟಾಪನೆಗೆ ಟಿಪ್ಪು ನೆರವಾದನು. ಜೊತೆಗೆ ಶ್ರೀರಂಗಪಟ್ಟಣದಿಂದ ಎರಡು ನೂತನ ಪಲ್ಲಕ್ಕಿಗಳನ್ನು ಕಳುಹಿಸಿ, ಅವುಗಳಲ್ಲಿ ಒಂದನ್ನು ತಾಯಿ ಶಾರದಾಂಬೆಗೆ, ಮತ್ತೊಂದನ್ನು ಜಗದ್ಗುರುಗಳು ಬಳಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದನು. ಶೃಂಗೇರಿಯ ಸುತ್ತ ಮುತ್ತ ಇದ್ದ ಬ್ರಾಹ್ಮಣರ ಅಗ್ರಹಾರಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಶೃಂಗೇರಿ ಮಠದಲ್ಲಿ ಪ್ರತಿನಿತ್ಯ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನ ದಾಸೋಹ ನಡೆಸುವಂತೆ ವಾರ್ಷಿಕ ಅನುದಾನವನ್ನು ಘೋಷಿಸಿದನು. 1793 ರಲ್ಲಿ ಶೃಂಗೇರಿಯ ಸ್ವಾಮೀಜಿ( ಶ್ರೀ ಸಚ್ಚಿದಾನಂದ ಭಾರತಿ) ಬರೆದಿರುವ ಪತ್ರದಲ್ಲಿ ಟಿಪ್ಪು ಸುಲ್ತಾನನುನೀವು ಜಗದ್ಗುರುಗಳು. ಲೋಕೋದ್ಧಾರಕ್ಕೂ, ಮಾನವ ಕಲ್ಯಾಣಕ್ಕೂ ನೀವು ಯಾವಾಗಲೂ ತಪಸ್ಸನ್ನು ಆಚರಿಸುತ್ತೀರಿ. ನಮ್ಮ ಏಳಿಗೆ ಮತ್ತು ಅಭಿವೃದ್ಧಿಗಾಗಿ ಪ್ರಾರ್ಥಿಸಿ. ನಿಮ್ಮಮತಹ ಪವಿತ್ರ ಜೀವಿಗಳು ಯಾವ ನಾಡಿನಲ್ಲೇ ವಾಸಿಸುತ್ತಿರಲಿ, ನಾಡು ಒಳ್ಳೆಯ ಮಳೆ ಬೆಳೆಗಳಿಂದ ವರ್ಧಿಸುತ್ತದೆಎಂದು ಪ್ರಾರ್ಥಿಸಿಕೊಂಡಿದ್ದಾನೆ. 1792 ರಿಂದ 1798 ರವರೆಗಿನ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಶೃಂಗೇರಿ ಮಠಕ್ಕೆ ಬರೆದಿರುವ ಪತ್ರಗಳು ಈಗಲೂ ಸಹ ಸುರಕ್ಷಿತವಾಗಿವೆ. ಇದಕ್ಕಿಂತ ಮಹತ್ವದ ಸಂಗತಿಯೆಂದರೆ, ಮೈಸೂರು ನಗರದಲ್ಲಿ ಪ್ರಥಮವಾಗಿ ಕ್ರೈಸ್ತ ಧರ್ಮದ ಜನರ ಪ್ರಾರ್ಥನೆಗಾಗಿ ಟಿಪ್ಪು ಸುಲ್ತಾನ್ ಚರ್ಚ್ ಒಂದನ್ನು ನಿರ್ಮಾಣ ಮಾಡಿರುವುದನ್ನು ಪ್ರಸ್ತಾಪಿಸಿರುವ ಬಿ.. ಸಲಟೋರ್ ಎಂಬ ವಿದ್ವಾಂಸ ಟಿಪ್ಪು ಸುಲ್ತಾನ್ ನನ್ನುಹಿಂದೂ ಧರ್ಮದ ರಕ್ಷಕಎಂದು ಕರೆದಿದ್ದಾನೆ.
ಟಿಪ್ಪುವಿನ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿ ಬೆಂಗಳೂರು ನಗರದಲ್ಲಿ ಇರುವ ಬೇಸಿಗೆ ಅರಮನೆಗೆ ಹೊಂದಿಕೊಂಡಂತೆ ಇರುವ ಕೋಟೆ ಶ್ರೀ ವೆಂಕಟೇಶ್ವರ ದೇವಸ್ಥಾನ, ಅನತಿ ದೂರದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಶ್ರೀ ರಾಮ ಮಂದಿರ ಇವೆಲ್ಲವೂ ಟಿಪ್ಪುವಿನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿವೆ. ಅಷ್ಟೇ ಏಕೆ? 1799 ರಲ್ಲಿ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಮಡಿದ ಸಂದರ್ಭದಲ್ಲಿ ಆತನ ಸಂಸ್ಥಾನದ ಮುಖ್ಯ ಮಂತ್ರಿಯಾಗಿದ್ದವರು ದಿವಾನ್ ಪೂರ್ಣಯ್ಯ, ಇವರು ಬ್ರಾಹ್ಮಣರು ಎಂಬುದನ್ನು ನಾವು ಮರೆಯಬಾರದು. ಟಿಪ್ಪು ಸುಲ್ತಾನ್ ಕೋಮುವಾದಿಯಾಗಿದ್ದರೆ, ಓರ್ವ ಬ್ರಾಹಣ ವ್ಯೆಕ್ತಿಗೆ ತನ್ನ ಅಸ್ಥಾನದಲ್ಲಿ ಅತ್ಯುನ್ನುತ ಹುದ್ದೆ ನೀಡಲು ಸಾಧ್ಯವಿತ್ತೆಭಾರತ ಹಾಗೂ ಕರ್ನಾಟಕ ನೆಲ ಕಂಡ ಇಂತಹ ಒಬ್ಬ ಧೀರೋತ್ತಮನನ್ನು ಮತ್ತು ಮಹಾನ್ ಮಾನವತಾವಾದಿಯನ್ನು ಸ್ಮರಣೆ ಮಾಡಿ ಗೌರವಿಸುವುದೆಂದರೆ, ಅದು ನಮ್ಮನ್ನು ನಾವು ಗೌರವಿಸಿಕೊಂಡಂತೆ.


(ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಕೈ ಪಿಡಿಗೆ ಸಿದ್ಧಪಡಿಸಿದ ಲೇಖನ ಹಾಗೂ ವಾರ್ತಾ ಭಾರತಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಗಾಂಧೀಜಿಯವರನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ ಬಂಡಾಯ ಮನೋಭಾವದ ಶಿಷ್ಯ


ಇದು ಮೂರು ತಿಂಗಳ ಹಿಂದಿನ ಸಂಗತಿ. ಮಹಾತ್ಮ ಗಾಂಧಿಯವರ ಶಿಷ್ಯ ಪರಂಪರೆ ಕುರಿತು ನಾನು ಬರೆದ “ ಗಾಂಧಿಗಿರಿಯ ಫಸಲುಗಳು” ಎಂಬ ಕೃತಿಗಾಗಿ ಅವರ ಶಿಷ್ಯರ ಕುರಿತು ಅಧ್ಯಯನದಲ್ಲಿ ನಿರತನಾಗಿದ್ದೆ. ಈ ಸಂದರ್ಭದಲ್ಲಿ ಗಾಂಧಿ ಕುರಿತು ಕಳೆದ ನಲವತ್ತು ವರ್ಷಗಳಿಂದ ಅಧ್ಯಯನದಲ್ಲಿ ನಿರತರಾಗಿರುವ ಆಸ್ಟ್ರೇಲಿಯಾದ ಸಮಾಜ ವಿಜ್ಞಾನಿ ಪ್ರೊ. ಥಾಮಸ್ ವೆಬರ್ ಅವರ “ Gandhi At First Sight”  ಎಂಬ ಕೃತಿ ಓದುತ್ತಿರುವಾಗ ನನಗೆ ಗಾಂಧೀಜಿಯವರ ಬಂಡಾಯ ಶಿಷ್ಯರೊಬ್ಬರ ಪರಿಚಯವಾಯಿತು. ಅವರು ಬಂಗಾಳದ ನಿರ್ಮಲ್ ಕುಮಾರ್ ಬೋಸ್. ಅವರು ಕುರಿತು ನಾನು ಈವರೆಗೆ ಕೇಳಿರಲಿಲ್ಲ, ಜೊತೆಗೆ ಓದಿರಲಿಲ್ಲ. ಗಾಂಧೀಜಿಯವರ ಅಂತಿಮ ವರ್ಷಗಳಲ್ಲಿ ಅಂದರೆ, 1947 ರ ಮೊದಲ ಭಾಗದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಗಾಂಧೀಜಿಯವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಬೋಸ್ ರವರು 1947 ರ ಮಾರ್ಚ್ ತಿಂಗಳಿನಲ್ಲಿ ಗಾಂಧೀಜಿ  ನಡೆಸಿದ ಬ್ರಹ್ಮ ಚರ್ಯ ಪ್ರಯೋಗವನ್ನು ಖಂಡಿಸಿ, ಅವರ ವಿರುದ್ಧ ಸಿಡಿದೆದ್ದವರು. ಜೊತೆಗೆ ತನ್ನ ಮಾನಸಿಕ ಗುರು ಗಾಂಧಿಯವರನ್ನು ಯಾವುದೇ ಮುಲಾಜಿಲ್ಲದೆ ಅಗ್ನಿ ಪರೀಕ್ಷೆಗೆ ಒಳಪಡಿಸಿದವರು.

ಥಾಮಸ್ ವೆಬರ್ ರವರು ನಿರ್ಮಲ ಕುಮಾರ್ ಬೋಸ್ ಬರೆದ “ My Days with Gandhi” ಎಂಬ ಕೃತಿಯನ್ನು ಗಾಂಧಿ ಕುರಿತಂತೆ ಭಾರತದಲ್ಲಿ ಪ್ರಕಟವಾಗಿರುವ ಕ್ಲಾಸಿಕ್ ಕೃತಿ ಎಂದು ಬಣ್ಣಿಸಿದ್ದಾರೆ. 1953 ರಲ್ಲಿ ಪ್ರಕಟವಾಗಿರುವ ಈ ಕೃತಿಯನ್ನು ಓರಿಯಂಟ್ ಬ್ಲಾಕ್ ಸ್ವಾನ್ ಎಂಬ ಪ್ರಕಾಶನ ಸಂಸ್ಥೆ 1974 ಮತ್ತು 1999 ರಲ್ಲಿ ಮರು ಮುದ್ರಣ ಮಾಡಿದೆ. ಎರಡು ತಿಂಗಳ ಹುಡುಕಾಟದ ನಂತರ  ಈ ಕೃತಿ ಕಳೆದ ವಾರ ನನಗೆ ದಕ್ಕಿತು. 260 ಪುಟಗಳ ಈ ಕೃತಿಗೊಂದು ದೊಡ್ಡ ಇತಿಹಾಸವಿದೆ. ಗಾಂಧೀಜಿಯವರ ಬ್ರಹ್ಮ ಚರ್ಯ ಕುರಿತು ಆಕ್ರೋಶ ವ್ಯಕ್ತ ಪಡಿಸಿ, ಅವರ ಆತ್ಮ ಸಾಕ್ಷಿಗೆ ಯಾವೊಬ್ಬ ಶಿಷ್ಯನೂ ಹಾಕಲಾರದಂತಹ ಮಾರ್ಮಿಕ ಪ್ರಶ್ನೆಗಳನ್ನು ಕೇಳಿದ ನಿರ್ಮಲ್ ಕುಮಾರ್ ಬೋಸ್ ಅವರಿಂದ ದೂರವಾದರೂ ಅವರ ಮೇಲಿನ ಗೌರವ ಕಳೆದುಕೊಂಡಿರಲಿಲ್ಲ. 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ ಅವರ ನೆನಪಿನಲ್ಲಿ ತಮ್ಮ ಒಡನಾಟದ ನೆನಪುಗಳನ್ನು ಕುರಿತು ಈ ಕೃತಿಯನ್ನು ರಚಿಸಿ, ಗಾಂಧೀಜಿರವರ ಸಾಹಿತ್ಯದ ಪ್ರಕಟಣೆಗೆ ಮೀಸಲಾಗಿರುವ ಅಹಮದಾಬಾದಿನ ನವಜೀವನ ಟ್ರಸ್ಟ್ ಗೆ ಪ್ರಕಟಣೆಗಾಗಿ ಕಳಿಸಿಕೊಟ್ಟರು. ಆದರೆ, “ಬ್ರಹ್ಮ ಚರ್ಯ ಪ್ರಯೋಗ ಕುರಿತಾದ ನಿಮ್ಮ ಹಾಗೂ ಗಾಂಧೀಜಿ ನಡುವೆ ನಡೆದಿರುವ ಪತ್ರ ವ್ಯವಹಾರದ ಭಾಗವನ್ನು ತೆಗೆದು ಹಾಕಿದರೆ ಪ್ರಕಟಿಸುತ್ತೇವೆ” ಎಂಬ ಷರತ್ತನ್ನು ಬೋಸ್ ರವರ ಮುಂದಿಟ್ಟಿತು. ಇದಕ್ಕೆ ಒಪ್ಪದ ನಿರ್ಮಾಲ್ ಕುಮಾರ್ ಬೋಸ್ ಅಂತಿಮವಾಗಿ 1953 ರಲ್ಲಿ ತಾವೇ ಸ್ವತಃ ಪರಕಟಿಸಿದರು. ಥಾಮಸ್ ವೆಬರ್ ಹೇಳಿದಂತೆ ನಿಜಕ್ಕೂ ಈ ಕೃತಿ ಕ್ಲಾಸಿಕ್ ಕೃತಿ ಹೌದು. ಪುಟ 133 ರಿಂದ 178 ರವರೆಗೆ ಸುಮಾರು 35 ಪುಟಗಳಲ್ಲಿ ಹರಡಿರುವ ಬ್ರಹ್ಮ ಚರ್ಯ ಪ್ರಯೋಗ ಕುರಿತಾದ  ಗುರು-ಶಿಷ್ಯರ ವಾದ – ಪ್ರತಿವಾದ ನಿಜಕ್ಕೂ ನಮ್ಮನ್ನು ದಂಗು ಪಡಿಸುತ್ತದೆ. ಕೃತಿಯುದ್ದಕ್ಕೂ ಗಾಂಧೀಜಿ ತಮ್ಮ ಪ್ರಯೋಗಕ್ಕೆ ಬಳಸಿಕೊಂಡ ಮನು ಮತ್ತು ವಿಭಾ ಗಾಂಧಿ ಹಾಗೂ ಅವರ ವೈದ್ಯೆಯಾಗಿದ್ದ ಸುಶೀಲಾ ನಾಯರ್ ರವರನ್ನು  ಎ.ಬಿ.ಸಿ. ಎಂದು ಬೋಸ್ ರವರು, ಅವರ ಮಾನಸಿಕ ತುಮಲಗಳು ಮತ್ತು ಬ್ರಹ್ಮ ಚರ್ಯ ಕುರಿತಂತೆ ಮನೋವಿಶ್ಲೇಷಣೆಗಳನ್ನು ಗಾಂಧಿಯವರ ಮುಂದಿಡುತ್ತಾ, ತಮ್ಮ ಗುರುವನ್ನು ವಿಚಲಿತರನ್ನಾಗಿ ಮಾಡುತ್ತಾರೆ. 


ಆಶ್ಚರ್ಯಕರ ಸಂಗತಿಯೆಂದರೆ, ಗಾಂಧೀಜಿಯವರ ತಮ್ಮ ಮಗನ ವಯಸ್ಸಿನ ಶಿಷ್ಯ ಎತ್ತಿದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾ ಹೋಗುತ್ತಾರೆ. ಕೊನೆಗೆ ತಮ್ಮ ಪ್ರಯೋಗ ಕುರಿತಂತೆ ಹರಿಜನ ಪತ್ರಿಕೆಯಲ್ಲಿ ಐದು ಲೇಖನಗಳನ್ನು ಬರೆದು ಪ್ರಕಟಿಸುತ್ತಾರೆ. ಇದೂ ಸಾಲದೆಂಬಂತೆ ತಮ್ಮ ಪ್ರಾರ್ಥನಾ ಸಮಯದಲ್ಲಿ ನಿರ್ಮಲ್ ಕುಮಾರ್ ಎತ್ತಿರುವ ಪ್ರಶ್ನೆಗಳನ್ನು ಪ್ರಸ್ತಾಪಿಸಿ ಅವುಗಳಿಗೆ ವಿವರಣೆ ನಿಡುತ್ತಾರೆ. ಆದರೆ, ಯಾರೊಬ್ಬರೂ ಗಾಂಧೀಜಿಯವರ ವಾದವನ್ನು ಒಪ್ಪುವುದಿಲ್ಲ. ಆದರೆ, ಗಾಂಧೀಜಿಯವರು ತಾವು ಇಂಗ್ಲೇಂಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೂ ಇಂತಹ ಪ್ರಯೋಗ ನಡೆಸಿ ಮನಸ್ಸನ್ನು ನಿಗ್ರಹಿಸಿಕೊಳ್ಳುತ್ತಿದ್ದೆ ಎಂದು ಹೇಳಿಕೊಳ್ಳುವುದರ ಮೂಲಕ ತಮ್ಮ ಬ್ರಹ್ಮ ಚರ್ಯೆ ಪ್ರಯೋಗ ಕುರಿತು ಯಾವುದೇ ವಿಷಾದ ವ್ಯಕ್ತ ಪಡಿಸುವುದಿಲ್ಲ.
1992 ರಿಂದ ನಾನು ಗಾಂಧಿ ಕುರಿತಂತೆ ಮಾತನಾಡುತ್ತಾ, ಬರೆಯುತ್ತಾ ಬಂದಿದ್ದೀನಿ. ಆದರೆ, ನನ್ನ ದೃಷ್ಟಿಯಲ್ಲಿ ಪೂನಾ ಒಪ್ಪಂಧ ಮತ್ತು ಬ್ರಹ್ಮ ಚರ್ಯೆಯ ಪ್ರಯೋಗ  ಇವೆರೆಡೂ ಗಾಂಧೀಜಿಯವರ ಬದುಕಿನಲ್ಲಿ ಚಾರಿತ್ರಿಕ ಪ್ರಮಾದಗಳು. ಈ ನನ್ನ ನಂಬಿಕೆ ಮತ್ತಷ್ಟು ಬಲವಾಯಿತು.

ಭಾನುವಾರ, ನವೆಂಬರ್ 8, 2015

ಬಿಹಾರ ಚುನಾವಣೆ- ಮಂತ್ರವಾಗದ ಮೋದಿಯವರ ಮಾತುಗಳು



ಕಳೆದ ಒಂದೂವರೆ ವರ್ಷದ ಹಿಂದೆ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ತಾವಾಡುವ ಮಾತುಗಳಲ್ಲಿ ಅಪಾರ ನಂಬಿಕೆಯಿಟ್ಟವರು. ಇದೇ ನೆಲೆಯಲ್ಲಿ ಇಡೀ ದೇಶದಲ್ಲಿ ಬಿ.ಜೆ.ಪಿ. ಪಕ್ಷದ ಸಾಮ್ರಾಜ್ಯವನ್ನು ವಿಸ್ತರಿಸುವ ಕನಸು ಕಂಡವರು. ಆದರೆ, ಅವರ ಕನಸಿನ ಕುದುರೆಯ ನಾಗಾಲೋಟಕ್ಕೆ ಬಿಹಾರದಲ್ಲಿ ಜೆ.ಡಿ.ಯು. ಪಕ್ಷದ ನಿತೀಶ್ ಕುಮಾರ್ ಭದ್ರವಾದ ಕಡಿವಾಣ ಹಾಕಿದ್ದಾರೆ. ಭಾರತದ  ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರಿಗೆ ಇದು ಎರಡನೆಯ ಬಾರಿ ಆಗುತ್ತಿರುವ  ಮುಖಭಂಗ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಚುನಾವಣೆಯಲ್ಲಿ ಅಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮೋದಿಯವರಿಗೆ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿದ್ದರು. ಈ ಸೋಲಿನ ಹಿನ್ನಲೆಯಲ್ಲಿ ಭಾರಿ ಸಿದ್ಧತೆ ಮತ್ತು ಚಾಣಕ್ಷ ನಡೆಗಳ ಮೂಲಕ ಬಿಹಾರದ ಚುನಾವಣೆಗೆ ಇಳಿದ ಮೋದಿ ಮತ್ತು ಅವರ ಆಪ್ತ ಅಮಿತ್ ಷಾ ಅವರ ಮೋಡಿಗೆ ಮತ್ತು ಆಮೀಷಕ್ಕೆ ಬಿಹಾರದ ಜನತೆ ಮರುಳಾಗಲಿಲ್ಲ. ಚುನಾವಣೆಗೆ ಮುನ್ನ ನರೇಂದ್ರ ಮೋದಿಯವರು  ಬಿಹಾರ ರಾಜ್ಯಕ್ಕೆ ಘೋಷಿಸಿದ ಒಂದು ಕಾಲು ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಗೆ ಅಲ್ಲಿನ ಮತದಾರರು ಚುನಾವಣಾ ಫಲಿತಾಂಶದ ಮೂಲಕ ಬೆನ್ನು ತಿರುಗಿಸಿದ್ದಾರೆ. ಕಣ್ಣಿಗೆ ಕಾಣದ ಕನಸಿನ ಗೋಪುರಕ್ಕಿಂತ ಕಣ್ಣೆದುರುವ ಇರುವ  ನೈಜವಾದ ಪುಟ್ಟ ಗುಡಿಸಲು ನಮಗೆ ಮುಖ್ಯ ಎಂಬ ಸಂದೇಶವನ್ನು ಮೊದಿಗೆ ರವಾನಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆ.ಡಿ.ಯು. ಮತ್ತು , ಲಾಲು ಪ್ರಸಾದರ ಆರ್.ಜೆ.ಡಿ ಹಾಗೂ ಕಾಂಗ್ರೇಸ್ ಪಕ್ಷ ಇವುಗಳ ಮೈತ್ರಿ ಕೂಟದ ಈ ಗೆಲವು ಎನ್.ಡಿ.ಎ. ಮೈತ್ರಿ ಕೂಟಕ್ಕೆ ಹಲವಾರು ಎಚ್ಚರಿಕೆಯ ಸಂದೇಶಗಳನ್ನು ಹಾಗೂ ಬಡ ಭಾರತೀಯನ ಮನದಾಳದ ಇಂಗಿತವನ್ನು ರವಾನಿಸಿವೆ. ಹಲವಾರು ಜ್ವಲಂತ ಸಮಸ್ಯೆಗಳ ನಡುವೆ ಅಂದರೆ, ಹಸಿವು, ಕುಡಿಯುವ ಶುದ್ಧನೀರು, ಆರೋಗ್ಯ, ಶಿಕ್ಷಣ ಹಾಗೂ ವಸತಿ ಇವುಗಳು ನಮಗೆ ಮುಖ್ಯವೇ ಹೊರತು, ನೀವು ಪ್ರತಿಪಾದಿಸುತ್ತಿರುವ ಅಥವಾ ಈ ದೇಶದ ಸಮಾಜದ ಮುಖ್ಯವಾಹಿನಿಗೆ ತಂದು ಚರ್ಚಿಸುತ್ತಿರುವ ಗೋ ಮಾಂಸ ಸೇವನೆ ಅಥವಾ ಭಗವದ್ಗೀತೆ ಮಾತ್ರ ಹಿಂದೂ ಪವಿತ್ರ ಗ್ರಂಥ ಇಂತಹ ಕ್ಷುಲ್ಲಕ ಸಂಗತಿಗಳು ನಮಗೆ ಮುಖ್ಯವಲ್ಲ ಎಂದು ಕಪಾಳಕ್ಕೆ ಹೊಡೆದಂತೆ ಮತದಾರರು ಪ್ರತಿಕ್ರಿಯಿಸಿರುವುದನ್ನು ನಾವು ಬಿಹಾರ ಚುನಾವಣೆಯ ಫಲಿತಾಂಶದಲ್ಲಿ ಕಾಣಬಹುದು.

ಗ್ರಾಮಗಳ ಮತ್ತು ಬಡವರು ಹಾಗೂ ಹಿಂದುಳಿದ ವರ್ಗದವರ ತೊಟ್ಟಿಲಿನಂತಿರುವ ಬಹು ಸಂಸ್ಕೃತಿ ಹಾಗೂ ಬಹು ಮುಖಿ ಸಮಾಜವನ್ನು ಒಳಗೊಂಡಿರುವ ಭಾರತಕ್ಕೆ ಬೇಕಾಗಿರುವುದು ಮೇಕಿಂಗ್ ಇಂಡಿಯವೂ ಅಲ್ಲ, ಅಥವಾ ಡಿಜಿಟಲ್ ಇಂಡಿಯವೂ ಅಲ್ಲ, ಇದಕ್ಕಿಂತ ಮುಖ್ಯವಾಗಿ ಉಳ್ಳವರ ಭಾರತದೊಳಗೆ ಇಲ್ಲದವರ ಭಾರತದಲ್ಲಿ ಎಲ್ಲ ಧರ್ಮ ಮತ್ತು ಜಾತಿಗಳ ನಡುವೆ ಸಹಬಾಳ್ವೆ ಹಾಗೂ ಹಸಿವು, ನೀರಡಿಕೆಯ ನಡುವೆಯೂ ಭೂಮಿಯನ್ನು ಹಾಸಿಗೆಯನ್ನಾಗಿ ಮಾಡಿ, ಆಕಾಶವನ್ನು ಹೊಂದಿಕೆಯನ್ನಾಗಿಸಿಕೊಂಡಿರುವ ನಮಗೆ ನೆಮ್ಮದಿಯ ಹಾಗೂ ಭಯ ಮುಕ್ತ ಭಾರತ ಮುಖ್ಯ ಎಂಬುದನ್ನು ಅಪಾರ ಸಂಖ್ಯೆ ಬಡವರು ಮತ್ತು ಅನಕ್ಷಸ್ತರು ಇರುವ ಬಿಹಾರ ರಾಜ್ಯ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದೆ.
ಕಳೆದ ಒಂದೂವರೆ ವರ್ಷದ ಅವಧಿಯ ಆಳ್ವಿಕೆಯಲ್ಲಿ, ಸಾಕ್ಷಿ ಮಹಾರಾಜ್, ಆದಿತ್ಯ ಯೋಗಿನಾಥ್,ನಂತಹ ಕ್ರಿಮಿನಲ್ ಹಿನ್ನಲೆಯುಳ್ಳ ಸಂಸತ್ ಸದಸ್ಯರನ್ನೂ ಒಳಗೊಂಡತೆ ದೇಶದ ಸಂಘಪರಿವಾರದ  ಅನೇಕ ಹರುಕು ಬಾಯಿ ದಾಸರಿಗೆ ಮಾತನಾಡಲು ಅವಕಾಶ ಕೊಟ್ಟು, ಮೌನಕ್ಕೆ ಜಾರುವುದರ ಜೊತೆಗೆ ವಿದೇಶ ಸುತ್ತುತ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕನೆಂದು ಪ್ರತಿ ಬಿಂಭಿಸಿಕೊಳ್ಳುವುದನ್ನು ಬಿಟ್ಟು “ ನಾನು ಭಾರತದ ಪ್ರಧಾನಿ” ಎಂಬುದನ್ನು ಈಗಲಾದರೂ ಮೋದಿ ಮನವರಿಕೆ ಮಾಡಿಕೊಳ್ಳಬೇಕಿದೆ. ಜೊತೆಗೆ ತಾವು ಈವರೆಗೆ ಘೋಷಿಸಿರುವ ಸ್ಮಾರ್ಟ್ ಸಿಟಿ ಯೋಜನೆಗಳಿಂದ ಹಿಡಿದು, ಮೇಕಿಂಗ್ ಇಂಡಿಯ, ಡಿಜಿಟಲ್ ಇಂಡಿಯ ಇವೆಲ್ಲವೂ ಕಾರ್ಪೋರೇಟ್ ಜಗತ್ತಿನ ಸಾಮ್ರಾಜ್ಯವನ್ನು ವಿಸ್ತರಿಸುವ ಯೋಜನೆಗಳೇ ಹೊರತು ಭಾರತದ ಹಳ್ಳಿಗಳ ಅಥವಾ ಬಡವರನ್ನು ಉದ್ಧಾರ ಮಾಡುವ ಯೋಜನೆಗಳಲ್ಲ ಎಂದು ಮೋದಿ ಮತ್ತು ಅವರ ಬಣ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಇನ್ನೂ ಬಿಹಾರದ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದಾಗ, ಮೋದಿಯ ಮಾತುಗಳಿಗಿಂತ ನಿತೀಶ್ ಕುಮಾರ್ ರವರ ಶುದ್ಧ ಚಾರಿತ್ರ್ಯ ಹಾಗೂ ಎಂತಹವ ಎದೆಗೂ ತಾಕುವಂತಹ ಅವರ ಶುದ್ಧವಾದ ಮನದಾಳದ ಮಾತುಗಳು ಜಯಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದವು. ಇದಕ್ಕಿಂತ ಮುಖ್ಯವಾಗಿ ಮೋದಿಯ  ಆರ್ಭಟ ಮತ್ತು ಪ್ರಚಾರದ ಅಬ್ಬರದ ನಡುವೆ ಮತಗಳು ಹಂಚಿ ಹೋಗಬಾರದೆಂದು ನಿತೀಶ್ ಕುಮಾರ್ ಜೊತೆ ಕೈ ಜೋಡಿಸಿದ ಲಾಲು ಪ್ರಸಾದ್ ರವರ ಜಾಣ ನಡೆಯನ್ನು ಮತ್ತು ರಾಷ್ಟ್ರೀಯ ಪಕ್ಷವಾಗಿದ್ದರೂ ಮೋದಿಯವರನ್ನು ಮಣಿಸಲು ಹಿರಿತನ, ಕಿರಿತನ ಮುಖ್ಯವಲ್ಲ ಎಂದು ನಿತಿಶ್-ಲಾಲು ಜೋಡಿಗೆ ಬೆನ್ನೆಲುಬಾಗಿ ನಿಂತ ಕಾಂಗ್ರೇಸ್ ಪಕ್ಷದ ನಿಲುವನ್ನೂ ಸಹ ನಾವು ಅಬಿನಂದಿಸಬೇಕಿದೆ.


ನರೇಂದ್ರ ಮೋದಿ ಮತ್ತು ಅವರ ಸಂಘ ಪರಿವಾರದ ಪುರುಷೋತ್ತಮರು ಇನ್ನಾದರೂ ಈ ದೇಶಕ್ಕೆ ಉಳ್ಳವರ ಭಾರತ ಮುಖ್ಯವೂ ಅಥವಾ ಇಲ್ಲದವರ ಭಾರತ ಮುಖ್ಯವೂ ಎಂಬುದನ್ನು ನಿದ್ರೆಯಿಲ್ಲದ ರಾತ್ರಿಯನ್ನು ಕಳೆಯುವಾಗ ಯೋಚಿಸಿದರೆ ಒಳಿತು. ಏಕೇಂದರೆ, ಯಾರು ಏನನ್ನು ತಿನ್ನುತ್ತಾರೆ, ಏನನ್ನು ವಿಸರ್ಜಿಸುತ್ತಾರೆ ಎಂಬುವುದು ಮುಖ್ಯವಲ್ಲ. ಯಾರು ಏನನ್ನೂ ಕುಡಿಯದೆ, ತಿನ್ನದೆ ಮಲಗುತ್ತಾರಲ್ಲಾ ಅವರ ಕುರಿತು ಯೋಚಿಸುವುದು ಮನುಕುಲಕ್ಕೆ ಒಳಿತು. ಈ ದೇಶದ ಅನೇಕ ಮಹನೀಯರು ಮತ್ತು ದಾರ್ಶನೀಕರು ನಮ್ಮ ಬಿಟ್ಟು ಹೋಗಿರುವ ಸಂದೇಶಗಳಲ್ಲಿ ಇದು ಮುಖ್ಯವಾದುದು.

ಗುರುವಾರ, ಅಕ್ಟೋಬರ್ 29, 2015

ಆಚಾರ್ಯ ವಿನೋಬಾ ಭಾವೆ, ನೆಹರೂ ಗೆ ಹೇಳಿದ ಮಾತು ಮೋದಿಗೂ ಅನ್ವಯಿಸುತ್ತದೆ



1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು. 1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು. ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ. ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು. ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು.



1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ” ಇಂತಹದ್ದೇ ಮಾತುಗಳನ್ನು ನಾವೀಗ ಮೇಕಿಂಗ್ ಇಂಡಿಯಾ ಮತ್ತು  ಡಿಜಿಟಲ್ ಇಂಡಿಯಾ ಎಂದು ಜಪಿಸುತ್ತಿರುವ ಮೋದಿಗೂ ಹೇಳಬೇಕಾಗಿದೆ.

ಸೋಮವಾರ, ಅಕ್ಟೋಬರ್ 26, 2015

ರೈತರ ಆತ್ಮಹತ್ಯೆ ಕುರಿತ ಸಾಕ್ಷ್ಯ ಚಿತ್ರ " ಧರೆ ಹೊತ್ತಿ ಉರಿದೊಡೆ" ಕುರಿತು ಒಂದಿಷ್ಟು ಅನಿಸಿಕೆಗಳು



ನಮ್ಮ ನಡುವಿನ ಹಿರಿಯ ಪತ್ರಕರ್ತರಾದ ಕೆ.ಜಿ. ವಾಸುಕಿ ( ಕೆಸ್ತೂರು ಗುಂಡಪ್ಪ ವಾಸುಕಿ) ಯವರು  ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತೆ ಮಾಯಾ ಜಗದೀಪ್ ಇವರ ಜೊತೆಗೂಡಿ ನಿರ್ಮಿಸಿರುವ ರೈತರ , ವಿಶೇಷವಾಗಿ ರೈತರ ಆತ್ಮಹತ್ಯೆಯನ್ನು ಗುರಿಯಾಗಿರಿಸಿಕೊಂಡು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಯಾರಿಸಿರುವ ಸುಮಾರು 29 ನಿಮಿಷಗಳ ಸಾಕ್ಷ್ಯ ಚಿತ್ರ “ ಧರೆ ಹೊತ್ತಿ ಉರಿದೊಡೆ” ನಮ್ಮೆಲ್ಲರ ಕಣ್ಣು ತೆರೆಸುವಂತಿದೆ.
ಈ ತಲೆ ಮಾರಿನ ಪತ್ರಕರ್ತರಿಗೆ ವಾಸುಕಿಯವರು ಅಪರಿಚಿತರಾಗಿ ಉಳಿದಿದ್ದಾರೆ. ಆದರೆ ಅವರು ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದುಕೊಂಡು, ಸುಮಾರು ಎರಡು ದಶಕಗಳ ಕಾಲ ಏಷ್ಯಾ ನ್ಯೂಸ್ ಇಂಟರ್ ನ್ಯಾಷನಲ್ ಎಂಬ ಜಗತ್ ಪ್ರಸಿದ್ಧ ರಾಯಿಟರ್ ಸುದ್ಧಿ ಸಂಸ್ಥೆಯ  ದಕ್ಷಿಣ ಏಷ್ಯಾ ವಿಭಾಗದ ಅಂಗ ಸಂಸ್ಥೆಯಾದ ದ ಏಷ್ಯಾ ನ್ಯೂಸ್ ಇಂಟರ್ ನ್ಯಾಷನಲ್ ಸುದ್ದಿ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದವರು. (ಇದೀಗ ದೆಹಲಿಯ ಪಯೋನಿರ್ ಇಂಗ್ಲೀಷ್ ದಿನಪತ್ರಿಕೆಯ ಕರ್ನಾಟಕದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.) ಹೀಗೆ ಅಂತರಾಷ್ರೀಯ ಮಟ್ಟದ ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ವಾಸುಕಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿರುವ ಮಾಯಾ ಜಗದೀಪ್ ಇಬ್ಬರೂ ತಮ್ಮ ಅನುಭವ, ಮತ್ತು ನೆಲದ ಸಂಸ್ಕೃತಿಯ ಕುರಿತು ತಮಗಿರುವ  ಅಪಾರ ಕಾಳಜಿ ಪ್ರೀತಿ ಮತ್ತು ಬದ್ಧತೆಯನ್ನು ಈ ಸಾಕ್ಷ್ಯ ಚಿತ್ರದ ಮೂಲಕ ಸಾಭೀತು ಪಡಿಸಿದ್ದಾರೆ. ಸಾಕ್ಷ್ಯ ಚಿತ್ರಕ್ಕೆ ನೀಡಿರುವ “ ಧರೆ ಹೊತ್ತಿ ಉರಿದೊಡೆ” ಎಂಬ ವಚನದ ಸಾಲೊಂದರ ಶೀರ್ಷಿಕೆ ಹಾಗೂ ಸಂದರ್ಭಾನುಸಾರವಾಗಿ ಬಳಕೆಯಾಗಿರುವ ಇತರೆ ವಚನಗಳು, ಕುವೆಂಪು ಗೀತೆ, ಕುಮಾರವ್ಯಾಸ ಕಾವ್ಯ ಹೀಗೆ ತಮ್ಮ ಕನ್ನಡದ ಮೇಲಿನ ಪ್ರೀತಿಯನ್ನು ರೈತರ ಸಮಸ್ಯೆಯನ್ನು ಕಟ್ಟಿಕೊಡುವಾಗ ಪರಿಣಾಮಕಾರಿಯಾಗಿ ಬಳಸಿದ್ದಾರೆ.
ವಾಸುಕಿ ಅಂತರಾಷ್ಟ್ರೀಯ ಮಟ್ಟದ ಇಂಗ್ಲೀಷ್ ಮಾಧ್ಯಮದ ಪತ್ರಕರ್ತರಾಗಿ ಇವೊತ್ತಿಗೂ ನನ್ನ ತಲೆ ಮಾರಿಗೆ ಮಾದರಿಯಾದವರು. ಭಾರತದ ಪತ್ರಿಕೋದ್ಯಮದಲ್ಲಿ ಗ್ರಾಮೀಣ ಭಾರತದ ಬವಣೆಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಅದನ್ನು ಜಾಗತಿಕ ಸಮಸ್ಯೆಯಾಗಿ ಪರಿಗಣಿಸುವಂತೆ, ತಮ್ಮ ನಿರಂತರ ಅಧ್ಯಯನ ಮತ್ತು ಲೇಖನಗಳ ಮೂಲಕ ಪರೋಕ್ಷ ಒತ್ತಡ ಹೇರಿದ ಪಿ. ಸಾಯಿನಾಥ್ ರವರ ಜೊತೆ ನಿರಂತರ ಒಡನಾಡಿರುವ ಕೆ.ಜಿ. ವಾಸುಕಿಯವರಯ ಕರ್ನಾಟಕ ರೈತರ ಸಮಸ್ಯೆಗಳ ಕುರಿತಂತೆ  ಅವರ ಜೊತೆಯಲ್ಲಿ ಕರ್ನಾಟಕವನ್ನು ಸುತ್ತಿದವರು. ಹಾಗಾಗಿ ಈ ಸಾಕ್ಷ್ಯ ಚಿತ್ರದಲ್ಲಿ ನಿಖರವಾದ ಅಧ್ಯಯನ, ಆಳವಾದ ಸಂಶೋಧನೆ ಮತ್ತು ಸಮಸ್ಯೆಯನ್ನು ನಿಖರವಾಗಿ ಗುರುತಿಸುವ ಬೌದ್ಧಿಕ ಶಕ್ತಿ ಎಲ್ಲವೂ ಎದ್ದು ಕಾಣುತ್ತವೆ.

ನನಗಿನ್ನೂ ನೆನಪಿದೆ.  2002 ರ ಶ್ರಾವಣ ಮಾಸದ ಸಮಯ. ಎಸ್. ಎಂ. ಕೃಷ್ಣ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದರು. ಹುಬ್ಬಳ್ಳಿಯ  ಉದಯ ಟಿ.ವಿ.ಯ ಪ್ರಾದೇಶಿಕ ಕಛೇರಿಯ ಮುಖ್ಯಸ್ಥನಾಗಿ  ವರ್ಗವಾಗಿ ಬಂದಿದ್ದೆ. ನನ್ನ ಕುಟುಂಬ ಮಂಡ್ಯ ನಗರದಲ್ಲಿ ವಾಸವಾಗಿತ್ತು. ಪ್ರತಿ ಹದಿನೈದು ದಿನ  ಅಥವಾ ತಿಂಗಳಿಗೆ ಎರಡು ದಿನ ರಜೆ ಹಾಕಿ ಮಂಡ್ಯಕ್ಕೆ ಹೋಗುತ್ತಿದ್ದೆ. ಒಂದು ದಿನ ಬೆಳಿಗ್ಗೆ ಮಂಡ್ಯ ಜಿಲ್ಲೆಯ ಈ ಟಿ.ವಿ.ಯ ವರದಿಗಾರರಾಗಿದ್ದ ಇಳೆಕಾನ್ ಶ್ರೀಕಂಠ ಎಂಬ ಹಿರಿಯ ಪತ್ರಕರ್ತರ ಜೊತೆ ಕಾಫಿ ಕುಡಿಯುತ್ತಾ  ಹರಿಪ್ರಿಯ ಹೋಟೆಲ್ ನಲ್ಲಿ ಕುಳಿತಿದ್ದೆ. ಅದು ಸುಮಾರು ಬೆಳಗಿನ ಒಂಬತ್ತು ಗಂಟೆಯ ಸಮಯ. ಆ ದಿನ ಮದ್ದೂರು ಪಟ್ಟಣದ ಸುಮಾರು ಮೂರು ಮೈಲಿ ದೂರವಿರುವ ವರಗೇರಹಳ್ಳಿ ಎಂಬ ಗ್ರಾಮದಲ್ಲಿ ಶಂಕರೇಗೌಡ ಎಂಬ ರೈತ ಆತ್ಮ ಹತ್ಯೆ ಮಾಡಿಕೊಂಡಿದ್ದ. ವಾಸುಕಿಯವರಿಂದ ಶ್ರೀಕಂಠ ರವರಿಗೆ ಪೋನ್ ಬಂತು. ನಾನು ಮಂಡ್ಯಕ್ಕೆ ಬಂದಿರುವುದಾಗಿ ಶ್ರೀಕಂಠ ವಾಸುಕಿಗೆ ತಿಳಿಸಿದರು. ನನ್ನ ಜೊತೆ ಮಾತನಾಡಿದ ಅವರು ಸಾಯಿನಾಥ್ ಬೆಂಗಳೂರಿನಲ್ಲಿದ್ದಾರೆ. ನಾವಿಬ್ಬರೂ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ರೈತನ ಅಂತ್ಯ ಕ್ರಿಯೆಗೆ ಬರುವುದಾಗಿ ತಿಳಿಸಿದರು.
ನಾನು ಮತ್ತು ಕೂಡಲೇ ವರಗೇರಳ್ಳಿಯ ರೈತ ಮುಖಂಡನಾಗಿದ್ದ ವಿ.ಅಶೋಕ್ ಗೆ ವಿಷಯ ತಿಳಿಸಿ ಅವರು ಬರುವವರೆಗೂ ಅಂತ್ಯಕ್ರಿಯೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದೆವು. ಆ ದಿನ ಜಿಟಿ.ಜಿಟಿ ಮಳೆ. ವಾಸುಕಿ ಮತ್ತು ಸಾಯಿನಾಥ್ ಮದ್ದೂರು ತಲುಪುವುದು ಮೂರು ಗಂಟೆಯಾಯಿತು. ಆದರೆ. ಮಧ್ಯಾಹ್ನ ಎರಡು ಗಂಟೆಯವರೆಗೆ ಕಾದಿದ್ದ ಊರಿನ ಜನತೆ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ದೇಹವನ್ನು ಒಣಗಿದ ಕಟ್ಟಿಗೆಗಳ ನಡುವೆ ಇಟ್ಟು. ಮಳೆಯ ಕಾರಣ ಸೀಮೆ ಎಣ್ಣೆ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ವರಗೇರಹಳ್ಳಿ ಗ್ರಾಮಕ್ಕೆ ಬರುವದರೊಳಗೆ ಚಿತೆ ಹೊತ್ತಿ ಉರಿದು ಬೂದಿಯಾಗಿತ್ತು. ನಂತರ ವಾಸುಕಿ, ಸಾಯಿನಾಥ್ ಇಬ್ಬರೂ ಮೃತ ರೈತನ ಮನೆಗೆ ತೆರಳಿ, ವಿಧವೆ ಪತ್ನಿಯ ಚಿತ್ರ ತೆಗೆದುಕೊಂಡು, ರೈತನ ಜಮೀನಿನ ವಿವರ, ಮಾಡಿದ್ದ ಸಾಲದ ವಿವರ ಇವುಗಳನ್ನು ತಮ್ಮ ಡೈರಿಯಲ್ಲಿ ದಾಖಲಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳಿದರು.
ಈ ಘಟನೆ ನಡೆದ ಎರಡು ವರ್ಷಗಳ ನಂತರ ಒಮ್ಮೆ ಸಾಯಿನಾಥ್ ರವರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿರುವಾಗ ಮದ್ದೂರಿನ ಎಳನೀರು ಮಾರುಕಟ್ಟೆಯ ಬಳಿ ಎಳನೀರು ಕುಡಿಯಲು ನಿಂತಾಗ ಅವರಿಗೆ ವರಗೇರಳ್ಳಿ ಗ್ರಾಮ ನೆನಪಾಗಿ ಮತ್ತೇ ಮೃತ ರೈತನ ಮನೆಗೆ ಬೇಟಿ ಕೊಟ್ಟರು. ಆದಿನ ಮೃತ ರೈತನ ಪತ್ನಿ ಮನೆಗೆ ಬೀಗ ಹಾಕಿ ಊರಾಚೆಗಿನ ಬಯಲಿನಲ್ಲಿ ಇದ್ದ ಹಸುವೊಂದನ್ನು ಮೇಯಿಸುತ್ತಾ ಕುಳಿತಿದ್ದಳು. ಕಾರಿನ ಚಾಲಕನ ನೆರವಿನಿಂದ ಆಕೆಯನ್ನು ಬೇಟಿಮಾಡಿ  ಸ್ಥಿತಿಗತಿ ವಿಚಾರಿಸಿಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣ ಬಂದಿರಲಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಸಿಗುತ್ತಿದ್ದ ತಿಂಗಳಿಗೆ ಒಂದು ಕೇಜಿ ಸಕ್ಕರೆ, ಮೂರು ಕೆ,ಜಿ, ಗೋಧಿ ಮತ್ತು ಐದು ಕೆ.ಜಿ. ಅಕ್ಕಿ ಆಕೆಗೆ ಆಸರೆಯಾಗಿದ್ದವು. ಈ ಕುರಿತು ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಸುಧೀರ್ಘ ಲೇಖನ ಬರೆದ ಪಿ.ಸಾಯಿನಾಥ್ ರವರು, ಮೃತ ರೈತನ ಪತ್ನಿಗೆ ಸರ್ಕಾರ ನಿಗದಿ ಪಡಿಸಿರುವ ದಿನ ನಿತ್ಯದ ಪಡಿತರ ಅಂದರೆ, ದಿನಕ್ಕೆ 33 ಗ್ರಾಂ ಸಕ್ಕರೆ, 67 ಗ್ರಾಂ ಗೋಧಿ, 167 ಗ್ರಾಂ ಅಕ್ಕಿಯ ಜೊತೆ ಜೈಲುಗಳಲ್ಲಿ ಕೊಲೆ ಸುಲಿಗೆ ಮಾಡಿರುವ ಖೈದಿಗಳಿಗೆ ನಿಗದಿ ಪಡಿಸಿರುವ ಪಡಿತರ ದಿನವೊಂದಕ್ಕೆ 60 ಗ್ರಾಂ ಬೇಳೆ, 80 ಗ್ರಾಂ ತರಕಾರಿ, 200 ಗ್ರಾಂ ಅನ್ನ, ವಾರಕ್ಕೆ 120 ಗ್ರಾಂ ಮಾಂಸ, ಮತ್ತು ಒಂದು ಮೊಟ್ಟೆ ಹಾಗೂ ತಲೆಗೆ 10 ಗ್ರಾಂ ಎಣ್ಣೆ ಈ ಸವಲತ್ತುಗಳ ಜೊತೆಗೆ ಹೋಲಿಕೆ ಮಾಡಿ ಅನ್ನದಾತನ ಪತ್ನಿ ಹೇಗೆ ನಿರ್ಗತಿಕಳಾಗಿ ಬದುಕುತ್ತಿದ್ದಾಳೆ ಎಂಬುದನ್ನು ನಾವು ಈವರೆಗೆ ಗ್ರಹಿಸಲಾಗದ ಸತ್ಯ ಸಂಗತಿಗಳೊಂದಿಗೆ ದಾಖಲಿಸಿದ್ದರು.





ರೈತರ ಜ್ವಲಂತ ಸಮಸ್ಯೆಗಳ ಕುರಿತು ಇಂತಹ  ಆಳವಾದ ಒಳನೋಟಗಳನ್ನು ಸಾಯಿನಾಥ್ ಮೂಲಕ ದಕ್ಕಿಸಿಕೊಂಡಿರುವ ಪತ್ರಕರ್ತ ವಾಸುಕಿಯವರು ಸಾಕ್ಷ್ಯ ಚಿತ್ರದಲ್ಲಿ ಸಮಸ್ಯೆಯ ಮೂಲಕ್ಕೆ ಕೈ ಹಾಕಿದ್ದಾರೆ. ರೈತ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದೆ, ಅದರ ಪ್ರತಿಫಲವನ್ನು ಮಾರುಕಟ್ಟೆಯ ದಲ್ಲಾಳಿಗಳು ಮತ್ತು ವರ್ತಕರು ನುಂಗಿ ನೀರು ಕುಡಿಯುತ್ತಿರುವುದನ್ನು ಸಮರ್ಥವಾಗಿ ದಾಖಲಿಸಿದ್ದಾರೆ. ಇದಕ್ಕಾಗಿ ಬಾಗಲಕೋಟೆಯ ಮಹಾಲಿಂಗ ಪುರದ ಬೆಲ್ಲದ ಮಾರುಕಟ್ಟೆ, ಮದ್ದೂರಿನ ಎಳನೀರಿನ ಮಾರುಕಟ್ಟೆ, ರಾಮನಗರದ ರೇಷ್ಮೆ ಮಾರುಕಟ್ಟೆ ಇಲ್ಲಿಗೆ ಬೇಟಿ ನೀಡಿ ಎಲ್ಲಾ ಬಗೆಯ ರೈತರ ಬವಣೆಗಳನ್ನು ದಾಖಲಿಸಿದ್ದಾರೆ. ಜೊತೆಗೆ ರೈತರ ಆತ್ಮಹತ್ಯೆ ಕುರಿತಂತೆ ಮನರೋಗ ತಜ್ಞರು,  ಬೆಲೆ ಏರಿಳಿತ ಕುರಿತಂತೆ  ಮಾರುಕಟ್ಟೆಯ ತಜ್ಞರ ಸಂದರ್ಶನ ನಡೆಸಿದ್ದಾರೆ. ರೈತರ ಫಲವತ್ತಾದ ಭೂಮಿ ಅಭಿವೃದ್ಧಿಯ ನೆಪದಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗುತ್ತಿರುವ ಸನ್ನಿವೇಶವನ್ನು ಇಲ್ಲಿ ಪ್ರಸ್ತಾಪಿಸಿರುವುದು ಈ ಸಾಕ್ಷ್ಯ ಚಿತ್ರದ ವಿಶೇಷ.
ರೈತರ ಸಮಸ್ಯೆಗೆ ಹೆಗಲಿಗೆ ಕೇವಲ  ಹಸಿರು ಟವಲ್ ಹಾಕಿಕೊಂಡು ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಸಾಲದು ಇಡೀ ವ್ಯವಸ್ಥೆ ಎಲ್ಲಿ ಎಡವಿದೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.  ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗಿರುವ ಈ ಸಾಕ್ಷ್ಯ ಚಿತ್ರವನ್ನು ನಾವೆಲ್ಲರೂ ನೋಡಲೇ ಬೇಕಿದೆ. ಇಂತಹ ಒಂದು ಅಪರೂಪದ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿರುವ ವಾಸುಕಿ ಮತ್ತು ಮಾಯಾ ಅವರಿಗೆ  ರೈತರ ಪರವಾಗಿ ಅಭಿನಂದನೆಗಳು ಮತ್ತು ಕೃತಜ್ಞತೆಗಳು.

 ಇದೇ ಅಕ್ಟೋಬರ್ 30 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಸ್ಪೀಕರ್ ಶ್ರೀ ಕಾಗೂಡು ತಿಮ್ಮಪ್ಪನವರಿಂದ ಈ ಸಾಕ್ಷ್ಯ ಚಿತ್ರ ಬಿಡುಗಡೆಯಾಗುತ್ತಿದೆ. ಆಸಕ್ತರು ಸಾಕ್ಷ್ಯ ಚಿತ್ರದ ಮಾಹಿತಿಗಾಗಿ ಕೆ.ಜಿ.ವಾಸುಕಿ. ಮೊಬೈಲ್. ನಂ.9845032321 ಮತ್ತು ಮಾಯಾಜಗದಿಪ್ -94484900006 ಇವರನ್ನು ಸಂಪರ್ಕಿಸಬಹುದು.

ಗುರುವಾರ, ಅಕ್ಟೋಬರ್ 22, 2015

ಭೂಮಿಗೀತ ಬ್ಲಾಗ್ ಓದುಗರಿಗೆ ಕೃತಜ್ಞತೆಗಳು





ಗೆಳೆಯರೇ, ಎರಡೂವರೆ ವರ್ಷಗಳ ಹಿಂದೆ ಅಂದರೆ, 2013 ಏಪ್ರಿಲ್ 14 ರಂದು ನಾನು ಆರಂಭಿಸಿದ ಭೂಮಿಗೀತ ಬ್ಲಾಗ್ ಗೆ ದಿನ 25 ಸಾವಿರ ಓದುಗರು ಮತ್ತು 3 ಲಕ್ಷದ 40 ಸಾವಿರ ಆಸಕ್ತರು ಬೇಟಿ ನೀಡಿದಂತಾಯಿತು. ಒಟ್ಟು 170 ಲೇಖನಗಳನ್ನು ಬರೆದಿದ್ದು ಮೊದಲ ವರ್ಷ 13-14 ನಡುವೆ 104 ಲೇಖನಗಳನ್ನು ಬರೆದು ಅಡಕಗೊಳಿಸಿದ್ದೆ. ನಂತರದ ಒಂದೂವರೆ ವರ್ಷದಲ್ಲಿ ಕೇವಲ 66 ಲೇಖನಗಳನ್ನು ಮಾತ್ರ ಬರೆಯಲು ನನಗೆ ಸಾಧ್ಯವಾಯಿತು.
ನನ್ನ ಮಗ ಅನನ್ಯ ರೂಪಿಸಿಕೊಟ್ಟಿದ್ದ ಬ್ಲಾಗ್ ನಲ್ಲಿ ಲೇಖನ ಬರೆಯುವುದು, ಚಿತ್ರಗಳನ್ನು ಅಡಕಗೊಳಿಸುವ ವಿದ್ಯೆಯನ್ನು ನನ್ನ ಮಿತ್ರ ಹಾಗೂ ಸಾಪ್ಟ್ ವೇರ್ ತಂತ್ರಜ್ಞ ರವಿ ಅರೇಹಳ್ಳಿ ಕಲಿಸಿಕೊಟ್ಟರು. ನಾನು ಬರೆದಿರುವ 170 ಲೇಖನಗಳಲ್ಲಿ ಕೃಷಿ ಮತ್ತು ಪರಿಸರಕ್ಕೆ ಹಾಗೂ ಅಭಿವೃದ್ಧಿ ಕುರಿತಂತೆ ನೂರಕ್ಕೂ ಹೆಚ್ಚು ಲೇಖನಗಳಿಗೆ. ಅವುಗಳನ್ನು ಈಗಲೂ ಓದುಗರು ಹೆಕ್ಕಿ ಓದುತ್ತಿದ್ದಾರೆ. ಹಾಗಾಗಿ ಮುಂದಿನ ಜನವರಿಯಿಂದ ಭೂಮಿಗೀತ ಬ್ಲಾಗ್ ಅನ್ನು ಪರಿಸರ ಕುರಿತ ಅಂತರ್ಜಾಲ ಪತ್ರಿಕೆಯನ್ನಾಗಿ ರೂಪಿಸುತ್ತಿದ್ದೇನೆ, ಜನವರಿಯಿಂದ ನಾನೊಬ್ಬನೇ ಅಲ್ಲದೆ, ನಾಡಿನ ಎಲ್ಲಾ ಪರಿಸರ ತಜ್ಞರು ಮತ್ತು ಕೃಷಿ ತಜ್ಞರನ್ನು ಒಳಗೊಳ್ಳುವಂತೆ ಮಾಡುತ್ತಿದ್ದೇನೆ.
ಕಳೆದ 25 ವರ್ಷಗಳಿಂದ ನಾನು ಸಂಗ್ರಹಿಸಿ ಇಟ್ಟುಕೊಂಡಿರುವ ಡೌನ್ ಟು ಅರ್ಥ್ ಪತ್ರಿಕೆಯಿಂದ ಜಗತ್ತಿನ ನೆಲ-ಜಲ-ಗಾಳಿ ಕುರಿತಂತೆ ಬಂದಿರುವ ಸಾವಿರಾರು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವುದರ ಜೊತೆಗೆ ಪರಿಸರಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಪ್ರಕಟವಾಗಿರುವ ಕೃತಿಗಳ ಸಂಕ್ಷಿಪ್ತ ಮಾಹಿತಿಯನ್ನು ಅಡಕಗೊಳಿಸಲು ನಿರ್ಧರಿಸಿದ್ದೀನಿ. ಈವರೆಗೆ ಒನ್ ಮ್ಯಾನ್ ಆರ್ಮಿಯಾಗಿದ್ದ ತಾಣ ಜನವರಿಯಿಂದ ಕೃಷಿ ಮತ್ತು ಪರಿಸರ ತಜ್ಞರ ಚಿಂತನೆಯ ತಾಣವಾಗಿ ಹೊರ ಹೊಮ್ಮಲಿದೆ. ಎಂದಿನಂತೆ ಮಿತ್ರ ರವಿ ಅರೇಹಳ್ಳಿ ಮಾರ್ದರ್ಶನದಲ್ಲಿ ಹೊಸ ವೆಬ್ ತಾಣ ಸಿದ್ಧವಾಗಲಿದೆ. ಭೂಮಿಗೀತ ಬ್ಲಾಗ್ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ ಎಲ್ಲಾ ಸಮಾನ ಮನಸ್ಕ ಓದುಗರಿಗೆ ಕೃತಜ್ಞತೆಗಳು.
ಡಾ. ಎನ್. ಜಗದೀಶ್ ಕೊಪ್ಪ