ಶನಿವಾರ, ಅಕ್ಟೋಬರ್ 12, 2013

ಗಾಂಧಿ ಅರ್ಥಶಾಸ್ತ್ರದ ರೂವಾರಿ ಜೆ.ಸಿ. ಕುಮಾರಪ್ಪ ಒಂದು ನೆನಪು

ವಾರ್ಧಾ ಬಳಿಯ ಸೇವಾಗ್ರಾಮದಲ್ಲಿ ಇಂದಿಗೂ ಸಹ ಅಲ್ಲಿನ ಪ್ರತಿ ದಿನದ ಚಟುವಟಿಗಳು ಪ್ರಾರ್ಥನೆಯಾದ ನಂತರ, ಜೆ.ಸಿ. ಕುಮಾರಪ್ಪ ವಾಸವಾಗಿದ್ದ ಕುಟೀರದ ಬಳಿ  ನಮನ ಸಲ್ಲಿಸುವುದರೊಂದಿಗೆ, ಅಲ್ಲಿರುವ ಗ್ರಾಮೀಣ ವಿಜ್ಙಾನ ಕೇಂದ್ರದಲ್ಲಿ ಕಾರ್ಯಗಳು ಆರಂಭಗೊಳ್ಳುತ್ತವೆ. ಜಗತ್ತು ಈಗಾಗಲೆ ಭಾರತವೂ ಸೇರಿದಂತೆ ಆಧುನಿಕ ಜಗತ್ತು  ಗುರುತಿಸಿರುವ ಗಾಂಧಿ ಅರ್ಥಶಾಸ್ತ್ರವನ್ನು ಪ್ರಯೋಗ ಮತ್ತು ಫಲಿತಾಂಶಗಳ ಮೂಲಕ ಜಾರಿಗೆ ತಂದವರು ಜೆ.ಸಿ. ಕುಮಾರಪ್ಪ.
ಗಾಂಧೀಜಿ ಅಮೂರ್ತವಾಗಿ ಏನೇನು ಕನಸಿದ್ದರೊ, ಅವೆಲ್ಲವನ್ನು ಸಾಕಾರಗೊಳಿಸಿದ ಕುಮಾರಪ್ಪ, ಗಾಂಧೀಜಿಯವರ ಚಿಂತನೆಗಳಿಗೆ ಮೂರ್ತ ಸ್ವರೂಪ ನೀಡುವುದರ ಮೂಲಕ ಅರ್ಥಶಾಸ್ತ್ರಕ್ಕೆ ಹೊಸ ವ್ಯಾಖ್ಯಾನ ನೀಡಿದರು. ಗ್ರಾಮಭಾರತ ಕುರಿತಂತೆ, ಕೈಗಾರಿಕೆಗಳ ವಿಕೇಂದ್ರೀಕರಣ, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ, ಪರಿಸರಕ್ಕ ಧಕ್ಕೆಯಾಗದಂತೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹಾಗೂ ಶ್ರಮ ವಿಭಜನೆ ಹೀಗೆ ತಮ್ಮ ಪ್ರತಿಭೆ ಮತ್ತು ಚಿಂತನೆಯನ್ನು ಧಾರೆಯೆರೆದ ಜೆ.ಸಿ. ಕುಮಾರಪ್ಪನವರುದೈನಂದಿನ ಬದುಕಿನ ಲೌಕಿಕ ವ್ಯವಹಾರಕ್ಕೆ ಆಧ್ಯಾತ್ಮದ ಸ್ಪರ್ಶ ನೀಡಿ, ಶಾಶ್ವತ ಅರ್ಥಶಾಸ್ತ್ರ ಮತ್ತು ನಶ್ವರ ಅರ್ಥಶಾಸ್ತ್ರ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕುವುದರ ಮೂಲಕ ಗಾಂಧಿ ಅರ್ಥಶಾಸ್ತ್ರ ಎಂಬ ಜಾÐನ ಶಾಖೆಯೊಂದನ್ನು ಅಸ್ತಿತ್ವಕ್ಕೆ ತಂದರು.
ಮೂಲತಃ ಕ್ರೈಸ್ತ ಧರ್ಮಕ್ಕೆ ಸೇರಿದ ಕುಮಾರಪ್ಪನವರ ಪೂರ್ಣ ಹೆಸರು ಜೋಸೆಪ್ ಕಾರ್ನೆಲಿಯಸ್  ಎಂದು. ತಮಿಳುನಾಡಿನ ತಂಜಾವೂರಿನಲ್ಲಿ 4-1-1892 ರಲ್ಲಿ ಜನಸಿದ ಕುಮಾರಪ್ಪನªರ ಪೂರ್ವಿಕರು ಮೂಲತಃ ಹಿಂದುಗಳಾಗಿದ್ದು, ಬ್ರಿಟೀಷರ ಆಳ್ವಿಕೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಇಂಗ್ಲೇಂಡ್ ಮತ್ತು ಅಮೇರಿಕಾದಲ್ಲಿ ಸಾರ್ವಜನಿಕ ಹಣಕಾಸು ಮತ್ತು ಲೆಕ್ಕ ಪರಿಶೋಧಕ ವಿóಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಿದ್ದ ಕುಮಾರಪ್ಪ, ಅಂದಿನ ಬಾಂಬೆ ನಗರದಲ್ಲಿ ಬ್ರಿಟೀಷ್ ಸಂಸ್ಥೆಯೊಂದರಲ್ಲಿ ಲೆಕ್ಕ ಪರಿಶೋಧಕನಾಗಿ ವೃತ್ತಿ ಆರಂಭಿಸಿ, ನಂತರ ತಮ್ಮದೆ ಸ್ವಂತ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಎಂದೂ ಹಣದ ಮೇಲೆ ಮೋಹ ಬೆಳಸಿಕೊಳ್ಳದ ಕುಮಾರಪ್ಪ, “ ಮನುಷ್ಯನಿಗೆ ಹಣ ಸಂಪಾದನೆ ಮುಖ್ಯವಲ್ಲ, ರಾಜಕೀಯವಾಗಿ, ಸಾಮಾಜಿಕವಾಗಿ, ಶುದ್ಧಚಾರಿತ್ರ್ಯ ಕಾಪಾಡಿಕೊಂಡು, ಆಧ್ಯಾತ್ಮಕವಾಗಿಯೂ ಕೂಡ ಮನುಷ್ಯ ನೆಮ್ಮದಿ ಪಡೆಯಬಹುದುಎಂದು ಪ್ರತಿ ಪಾದಿಸುತ್ತಿದ್ದರು. ಜೊತೆಗೆ ಎಂದೂ ತಪ್ಪು ಮಾಡಬೇಡಿ, ನೀವು ಮಾಡುವ ತಪ್ಪಿಗೆ ಮತ್ತೊಬ್ಬರು ನರಳುತ್ತಾರೆಎಂದೂ ಸದಾ ಎಚ್ಚರಿಸುತ್ತಿದ್ದರು, ಜೊತೆಗೆ ಇಂತಹ ನೈತಿಕ ಪ್ರಜೆÐಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಕುಮಾರಪ್ಪನವರ ಇಂತಹ ಶಿಸ್ತಿನ ಜೀವನ ಮತ್ತು ವಿಚಾರೆಧಾರೆ, ಅಂತಿಮವಾಗಿ ಅವರನ್ನು ಗಾಂಧೀಜಿಯವರತ್ತ ಕೊಂಡೊಯ್ದು ನಿಲ್ಲಿಸಿತು.
ಕುಮಾರಪ್ಪನವರ ಆರ್ಥಿಕ ಶಿಸ್ತು, ಮತ್ತು ಆಧ್ಯಾತ್ಮಕ ಒಲವು ಇವುಗಳ ಹಿಂದೆ ಅವರ ಹೆತ್ತ ತಾಯಿಯವರ ಪ್ರಭಾವ ದಟ್ಟವಾಗಿದೆ. ಅವರ ತಂದೆ ಎಸ್.ಡಿ. ಕಾರ್ಲೆನಿಯಸ್  ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರಿಂದ ಅವರದು ಮಧ್ಯಮವರ್ಗದ ಕುಟುಂಬವಾಗಿತ್ತು. ಕುಮಾರಪ್ಪನವರ ತಾಯಿ ಎಸ್ತರ್ ರಾಜನಾಯಕನ್ ತಮ್ಮ ಗೃಹ ಕೃತ್ಯದ ಜೊತೆಗೆ ಪೇಟೆಗೆ ಹೋಗಿ ಕೋಳಿ ಮತ್ತು ಮೊಟ್ಟೆಗಳನ್ನು ತಂದು ತಮ್ಮ ಬಡಾವಣೆಯಲ್ಲಿ ಮಾರಾಟ ಮಾಡುತ್ತಿದ್ದರು. ಇದರ ಲೆಕ್ಕಾಚಾರ ಬರೆದಿಡುವ ಜವಾಬ್ದಾರಿ ಬಾಲಕ ಕುಮಾರಪ್ಪನವರ ಮೇಲಿತ್ತು. ಪ್ರತಿ ತಿಂಗಳು ಕೋಳಿಗಳು ಮತ್ತು ಮೊಟ್ಟೆಗಳಿಗೆ ವಿನಿಯೋಗಿಸಿದ ಬಂಡವಾಳ, ಹಾಗೂ ಅವುಗಳ ಮಾರಾಟದಿಂದ ಬಂದ ಲಾಭ ಇವೆಲ್ಲನ್ನೂ ಕರಾರುವಕ್ಕಾಗಿ ಕುಮಾರಪ್ಪ ಲೆಕ್ಕ ಬರೆದು ತಾಯಿಗೆ ಒಪ್ಪಿಸುತ್ತಿದ್ದರು. ವರ್ಷದ ಕೊನೆಯಲ್ಲಿ ಬಂದ ಲಾಭದಲ್ಲಿ ಶೇಕಡ ಇಪ್ಪತ್ತೈದು ಭಾಗವನ್ನು ಅವರ ತಾಯಿ ಕ್ರಿಸ್ ಮಸ್ ಹಬ್ಬದ ಸಮಯದಲ್ಲಿ ಬಡವರಿಗೆ ದಾನದ ರೂಪದಲ್ಲಿ ನೀಡುತ್ತಿದ್ದರು. ಹೀಗೆ ಬಾಲ್ಯದಲ್ಲಿ ತಾಯಿಯಿಂದ ಕಲಿತ ಲೆಕ್ಕಾಚಾರ ಮತ್ತು ಧಾನ ಧರ್ಮದಂತಹ ಆಚಾರ, ವಿಚಾರ, ಶಿಸ್ತು ಇವೆಲ್ಲವೂ  ಕುಮಾರಪ್ಪನವರ ಬದುಕಿನುದ್ದಕ್ಕೂ ಅವರನ್ನು ಆವರಿಸಿಕೊಂಡವು.

1913 ರಲ್ಲಿ ಲಂಡನ್ ನಗರಕ್ಕೆ ತೆರಳಿ, ಲೆಕ್ಕ ಪರಿಶೋಧಕನಾಗಿ ತರಬೇತಿ ಮತ್ತು ಪದವಿಯನ್ನು ಪಡೆದು , 1919 ರಲ್ಲಿ ಭಾರತಕ್ಕೆ ವಾಪಸ್ ಬಂದ ಕುಮಾರಪ್ಪ, ಅವರ ತಂದೆ ತಾಯಿಯ ಸಲಹೆಯಂತೆ ಬಾಂಬೆ ನಗರದಲ್ಲಿ ನೆಲೆ ನಿಂತು. ಬ್ರಿಟೀಷ್ ಲೆಕ್ಕ ಪರಿಶೋಧನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಬಾರತದ ಜನಸಾಮಾನ್ಯರು ಮತ್ತು ವರ್ತಕರನ್ನು ತೆರಿಗೆ ರೂಪದಲ್ಲಿ ಸುಲಿಯುತ್ತಿರುವ ಸಂಗತಿ ಅವರ ಗಮನಕ್ಕೆ ಬಂದಿತು. 1924 ರಲ್ಲಿ ಬ್ರಿಟೀಷ್ ಸಂಸ್ಥೆಯ ಉದ್ಯೋಗ ತೊರೆದು ಕಾರ್ಲೆನಿಯಸ್ ಅಂಡ್ ದೇವರ್ಎಂಬ ಹೆಸರಿನಲ್ಲಿ ಸ್ವಂತ ಸಂಸ್ಥೆಯನ್ನು ಆರಂಭಿಸಿ, ಆರ್ಥಿಕ ಮತ್ತು ತೆರಿಗೆ ಸಲಹೆಗಾರರಾಗಿ ವೃತ್ತಿ ಜೀವನ ಆರಂಭಿಸಿದರು. 1927 ರಲ್ಲಿ ಸಾರ್ವಜನಿಕ ಹಣಕಾಸು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಉದ್ದೇಶದಿಂದ ಅಮೇರಿಕಾದ ಕೊಲಂಬಿಯ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ಅಲ್ಲಿನ ಸ್ಥಳೀಯ ಚರ್ಚ್ ಒಂದರಲ್ಲಿ ಕುಮಾರಪ್ಪ ನೀಡಿದ್ದಭಾರತದ ಬಡತನ ಕುರಿತ ಉಪನ್ಯಾಸದ ವರದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟವಾಗಿತ್ತು. ಇದು ಅವರ ಗುರುಗಳಾದ ಡಾ.ಸಲಿಗ್‍ಮನ್  ಅವರ ಗಮನಕ್ಕೆ ಬಂತು. ತಮ್ಮ ಶಿಷ್ಯನ ಪ್ರತಿಭೆಯನ್ನು ಗಮನಿಸಿದ ಸಲಿಗ್ ಮನ್ಎಂ.ಎ, ಪದವಿಯಲ್ಲಿ ಭಾರತದ ಬಡತನ ಮತ್ತು ಸಾರ್ವಜನಿಕ ಹಣಕಾಸುವಿಷಯ ಕುರಿತು ಪ್ರಬಂಧ ಬರೆಯಲು ಸೂಚಿಸಿದರು. ಈ ಕುರಿತು ಅಧ್ಯಯನ ಆರಂಭಿಸಿದ ಕುಮಾರಪ್ಪನವರಿಗೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸುಲಿಗೆಯ ವೈಖರಿಯ ಇತಿಹಾಸ ಅವರೆದುರು ಅನಾವರಣಗೊಂಡಿತ್ತು. ಈ ಸಂದರ್ಭದಲ್ಲಿ  ಬ್ರಿಟೀಷ್ ಸರ್ಕಾರದ ವಿರುದ್ಧ ಅವರೆಷ್ಟು  ಕ್ರೋಧಗೊಂಡಿದ್ದÀರೆಂದರೆ, ತಮ್ಮ ಮೂಲ ಹೆಸರಾದ ಜೋಸೆಪ್ ಕಾರ್ಲೆನಿಯಸ್ ಹೆಸರಿನ ಮುಂದೆ ಮತ್ತೆ ತಮ್ಮ ಪೂರ್ವಿಕರ ಹೆಸರಾದ ಹಿಂದೂ ಧರ್ಮದ ಕುಮಾರಪ್ಪ ಎಂಬ ಹೆಸರನ್ನು ಸೇರಿಸಿಕೊಂಡರು. 1929 ರಲ್ಲಿ ಭಾರತಕ್ಕೆ ಹಿಂತಿರುಗಿ ಬಂದ ಕುಮಾರಪ್ಪ, ಸಿ. ಹೆಚ್. ಸಫಾರಿವಾಲ ಎಂಬುವರ ಸಲಹೆ ಮೇರೆಗೆ ಗಾಂಧೀಜಿಯನ್ನು ಬೇಟಿ ಮಾಡಿದರು. ಆ ವೇಳೆಗಾಗಲೆ ಮದನ್ ಮೋಹನ್ ಮಾಳವೀಯ ಮುಖಾಂತರ ಕುಮಾರಪ್ಪನವರ ಬರಹಗಳನ್ನು ಓದಿದ್ದ ಗಾಂಧೀಜಿ, ತನ್ನಂತೆ ಭಾರತದ ಹಳ್ಳಿಗಳ ಬಗ್ಗೆ ಚಿಂತಿಸುತ್ತಿರುವ ವಿದ್ಯಾವಂತ ಯುವಕ ಕುಮಾರಪ್ಪನವರ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. 1929 ರ ಕೊನೆಯ ದಿನಗಳಲ್ಲಿ ಬಾಂಬೆಯಿಂದ ಅಹಮದಾಬಾದ್‍ಗೆ ತೆರಳಿದ ಕುಮಾರಪ್ಪ, ಸಬರಮತಿ ಆಶ್ರಮದಲ್ಲಿ ಗಾಂಧೀಜಿಯನ್ನು ಬೇಟಿ ಮಾಡಿದರು. ಆವರೆಗೆ ಕೇವಲ ಪತ್ರಿಕೆಗಳಲ್ಲಿ ಪ್ರಕಟವಾಗುವ ಚಿತ್ರಗಳಲ್ಲಿ ಮಾತ್ರ ಗಾಂಧಿಯನ್ನು ನೋಡಿದ್ದ ಕುಮಾರಪ್ಪ, ಮೊದಲ ಬಾರಿಗೆ ಅವರನ್ನು ನೋಡಿದಾಗ, ಸ್ವಲ್ಪ ಕಾಲ ಗೊಂದಲವುಂಟಾಯಿತು. ಸಬರಮತಿ ಆಶ್ರಮದ ತಮ್ಮ ನಿವಾಸದ ಎದುರುಗಿನ ಬೇವಿನ ಮರದ ನೆರಳಿನಲ್ಲಿ ಸಗಣಿಯಿಂದ ಸಾರಿಸದ್ದ ನೆಲದ ಮೇಲೆ ಕುಳಿತ  ಓರ್ವ ವೃದ್ಧ  ಚರಕದಿಂದ ನೂಲು ನೇಯುತ್ತಿರುವುದನ್ನು ಕಂಡು ಹತ್ತಿರಕ್ಕೆ ಹೋದಾಗ, ಅವರು ಗಾಂಧಿಯೊ? ಅಲ್ಲವೊ? ಎಂಬ ಅನುಮಾನವುಂಟಾಯಿತು. ಕುಮಾರಪ್ಪ ನೇರವಾಗಿ ಅವರನ್ನೇ ಕೇಳಿದರು. ನೀವು ಮೋಹನ ದಾಸ್ ಕರಮಚಂದ ಗಾಂಧಿ ತಾನೆ? ಹಲ್ಲಿಲ್ಲದ ತಮ್ಮ ಬೊಚ್ಚುಬಾಯಿಯಲ್ಲಿ ಮುಖದ ತುಂಬಾ ನಗು ತಂದುಕೊಂಡ ಗಾಂಧೀಜಿ ಹೌದು ನಾನೇ ಆ ಗಾಂಧಿಎಂದು ಕುಮಾರಪ್ಪನವರಿಗೆ ಉತ್ತರಿಸಿದ್ದರು. ಸೂಟು ಬೂಟು ಧರಿಸಿ ಹೋಗಿದ್ದ ಕುಮಾರಪ್ಪನವರಿಗೆ ಕೂರಲು ಕುರ್ಚಿಯೊಂದನ್ನು ತರಿಸಿದಾಗ, ಅದರ ಮೇಲೆ ಗಾಂಧೀಜಿ ಎದುರು ಕೂರಲು ನಿರಾಕರಿಸಿದ ಕುಮಾರಪ್ಪ ಕಷ್ಟ ಪಟ್ಟು ನೆಲದ ಮೇಲೆ  ಕುಳಿತರು
ಕುಮಾರಪ್ಪನವರ ಪ್ರಬಂಧ ಹಾಗೂ ಲೇಖನಗಳ ಕುರಿತು ಮೆಚ್ಚುಗೆಯ ಮಾತನಾಡಿದ ಗಾಂಧೀಜಿ, ತಾವು ಸಂಪಾದಿಸುತ್ತಿದ್ದ ಯಂಗ್ ಇಂಡಿಯ ಮತ್ತು ಹರಿಜನ ಪತ್ರಿಕೆಗಳಿಗೆ ಲೇಖನ ಬರೆಯುವಂತೆ ಕುಮಾರಪ್ಪನವರನ್ನು ಆಹ್ವಾನಿಸಿದರು. ಅಲ್ಲದೆ, ಗುಡಿ ಕೈಗಾರಿಕೆ, ಮತ್ತು ಸ್ಥಳೀಯ ದೇಶಿ ತಂತ್ರಜಾÐನ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಗುಜರಾತಿನ ಖೇಡ್ ಜಿಲ್ಲೆಯ ಮಾಟಾರ್ ತಾಲ್ಲೂಕಿನ ಅಧ್ಯಯನ ನಡೆಸುವಂತೆ ವಿನಂತಿಸಿಕೊಂಡರು. ಗಾಂಧೀಜಿ ಅಣತಿಯಂತೆ  ಕುಮಾರಪ್ಪ ಅಧ್ಯಯನ ಮುಗಿಸಿ ಬರುವದರೊಳಗೆ, ಮಹಾತ್ಮ ತಮ್ಮ ಉಪ್ಪಿನ ಸತ್ಯಾಗ್ರಹದ ಅಂಗವಾಗಿ ಕಾಲ್ನಡಿಗೆಯಲ್ಲಿ ಅಹಮದಾಬಾದಿನಿಂದ 240 ಕಿಲೋಮೀಟರ್ ದೂರದ ಸೂರತ್ ಸಮೀಪದ ದಂಡಿಗೆ ಪ್ರಯಾಣ ಆರಂಭಿಸಿದ್ದರು. ಒಮ್ಮೆ ಮಾರ್ಗ ಮಧ್ಯೆ ಗಾಂಧೀಜಿಯನ್ನು ಬೇಟಿ ಮಾಡಿದಾಗ, ಕುಮಾರಪ್ಪನವರಿಗೆ ಗಾಂಧೀಜಿ ಮತ್ತೊಂದು ಜವಾಬ್ದಾರಿ ವಹಿಸಿದರು. ಯಾವುದೇ ಸಂದರ್ಭದಲ್ಲಿ ತಾನು ಮತ್ತು ಮಹದೇವ ದೇಸಾಯಿ ( ಗಾಂಧಿಯವರ ಆಪ್ತ ಕಾರ್ಯದರ್ಶಿ) ಬ್ರಿಟೀಷ್ ಸರ್ಕಾರದಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಇದ್ದು, ನಾವು ಬಂಧಿಸಲ್ಪಟ್ಟರೆ, ಯಂಗ್ ಇಂಡಿಯ ಪತ್ರಿಕೆಯ ಸಂಪಾದಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಗಾಂಧೀಜಿ  ವಿನಂತಿಸಿಕೊಂಡರು. ಅವರ ನಿರೀಕ್ಷೆಯಂತೆ ಉಪ್ಪಿನ ಸತ್ಯಾಗ್ರಹ ವೇ¼ಯಲ್ಲಿÉ ಗಾಂಧಿಜಿ ಬಂಧಿಸಲ್ಪಟ್ಟಾಗ, ಯಂಗ್ ಇಂಡಿಯಾ ಪತ್ರಿಕೆಯ ಸಂಪಾದಕನಾಗಿ ಹೊಣೆ ಹೊತ್ತ ಕುಮಾರಪ್ಪ, ಬ್ರಿಟೀಷ್ ಸರ್ಕಾರದ ವಿರುದ್ಧ ಪತ್ರಿಕೆಯಲ್ಲಿ ಲೇಖನ ಬರೆದರು. ಅದರ ಪರಿಣಾಮವಾಗಿ ಅವರೂ ಸಹ ಬಂಧನಕ್ಕೊಳಗಾಗಿ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಆನಂತರ ಮತ್ತೊಮ್ಮೆ ಇಂತಹದ್ದೇ ಕೃತ್ಯವೆಸಗಿ ಮತ್ತೆ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದರು. 
ತಮ್ಮ ಬದುಕು ತೆಗೆದು ಕೊಂಡ ಅನಿರೀಕ್ಷಿತ ತಿರುವುಗಳ ಫಲವಾಗಿ ಕುಮಾರಪ್ಪನವರಿಗೆ ಸರಮನೆಯ ವಾಸದ ಅವಧಿಯಲ್ಲಿ ಅವರ ಬದುಕಿನ ಅಲೋಚನಾ ಕ್ರಮ ಬದಲಾವಣೆಗೊಂಡಿತು. ಭಾರತವನ್ನು ಬ್ರಿಟೀಷರಿಂದ ಬಿಡುಗಡೆ ಮಾಡುವುದರ ಜೊತೆ ಜೊತೆಗೆ ಇಲ್ಲಿನ ಜನರನ್ನು ಬಡತನದಿಂದ ಮತ್ತು ಸಂಕಟಗಳಿಂದ  ಮುಕ್ತಿ ಗೊಳಿಸಬೇಕೆಂಬ ಛಲ ಉಂಟಾಯಿತು. ಈ ಛಲ ಅವರನ್ನು ಭಾರತದ ಗ್ರಾಮೀಣಭಿವೃದ್ಧಿ ಮತ್ತು ನಮ್ಮ ಪೂರ್ವಿಕರ ದೇಶಿಯ ಜಾÐನ ಶಿಸ್ತುಗಳನ್ನು ಪುನರ್ ರೂಪಿಸಲು ಪ್ರೇರಣೆಗೊಳಿಸಿತು. ಭಾರತದ ಹಳ್ಳಿಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಹಳ್ಳಿಗಳಲ್ಲಿ ವಾಸಮಾಡಿದಾಗ ಮಾತ್ರ, ಗ್ರಾಮಭಾರತದ ನಾಡಿ ಮಿಡಿತ ಅರಿಯಲು ಸಾಧ್ಯ ಎಂಬ ತೀರ್ಮಾನಕ್ಕೆ ಬಂದರು. ಇದೇ ಸಮಯಕ್ಕೆ ಸರಿಯಾಗಿ, 1934 ರಲ್ಲಿ ಬಿಹಾರದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ  ನೆಲಸಮವಾದ ಹಳ್ಳಿಗಳ ಪುನರುಜ್ಜೀವನ ಮತ್ತು ಸಂತ್ರಸ್ತರ ಪುನರ್ವಸತಿ ಕಾರ್ಯ ಈ ಎರಡು ಜವಾಬ್ದಾರಿಗಳು ಕುಮಾರಪ್ಪನವರ ಹೆಗಲೇರಿದವು. ಗಾಂಧೀಜಿಯವರು ಭೂಕಂಪದ ಸಂತಸ್ತರಿಗಾಗಿ  ದೇಶಾದ್ಯಂತ ಸಂಗ್ರಹಿಸಿದ್ದ ಪರಿಹಾರದ ಹಣವನ್ನು ಕುಮಾರಪ್ಪನವರ ಕೈಗಿತ್ತು, ನೂರಾರು ಕಾರ್ಯಕರ್ತರ ಪಡೆಯೊಂದನ್ನು ಅವರ ಜೊತೆ ಬಿಹಾರಕ್ಕೆ ಕಳಿಸಿಕೊಟ್ಟರು.
ಕುಮಾರಪ್ಪನವರ ಆರ್ಥಿಕ ಶಿಸ್ತು ಮತ್ತು ಹಣಕಾಸು ನಿರ್ವಹಣೆಯಲ್ಲಿ ಅವರಿಗಿದ್ದ ಬದ್ಧತೆ ಇವೆಲ್ಲವನ್ನೂ ಸ್ವತಃ ಗಾಂಧೀಜಿ ಕಣ್ಣಾರೆ ಕಂಡು, ಅನುಭವಿಸಿ ಮೆಚ್ಚುಗೆ ಸೂಚಿಸಿದರು. ಪರಿಹಾರದ ಹಣದಲ್ಲಿ ಪ್ರತಿ ಕಾರ್ಯಕರ್ತನಿಗೆ ಊಟಕ್ಕಾಗಿ ಪ್ರತಿ ದಿನ ಮೂರಾಣೆ ( ಹದಿನೆಂಟು ಪೈಸೆ) ಖರ್ಚು ಮಾಡುತ್ತಿದ್ದ ಕುಮಾರಪ್ಪ, ತಾವು ಕೂಡ ಅಷ್ಟೇ ಹಣದಲ್ಲಿ ಬಿಹಾರದಲ್ಲಿ ಬದುಕತೊಡಗಿದರು. ಗಾಂಧೀಜಿ ಬಿಹಾರಕ್ಕೆ ಬೇಟಿ ನೀಡಲು ಬಂದಾಗ, ಮಹಾದೇವ ದೇಸಾಯಿ ಅವರಿಗೆ ಮುಂಚಿತವಾಗಿ ಕಾಗದ ಬರೆದ ಕುಮಾರಪ್ಪನವರು, ‘ ನಿಮಗೆ ಮತ್ತು ಬಾಪು ಇಬ್ಬರಿಗೂ ಬಿಹಾರ ಪ್ರವಾಸದ ಸಮಯದಲ್ಲಿ ದಿನಕ್ಕೆ ಮೂರಾಣೆಯಂತೆ ಖರ್ಚು ಮಾಡಲು ಸಾಧ್ಯ, ನಿಮ್ಮ ಮೋಟಾರು ವಾಹನದ ಪೆಟ್ರೋಲು, ಇತರೆ ಖರ್ಚುಗಳನ್ನು ನೀವು ವೈಯಕ್ತಿವಾಗಿ ಭರಿಸಬೇಕುಎಂದು ತಿಳಿಸಿದರು. ಕುಮಾರಪ್ಪನವರ ಮಾತಿಗೆ ತಲೆ ಬಾಗಿದ ಗಾಂಧೀಜಿ ಇತರೆ ಖರ್ಚುಗಳನ್ನು ಸ್ವಂತವಾಗಿ ಭರಿಸಿದರು. ಅಲ್ಲದೆ, ಕುಮಾರಪ್ಪನವರ ಶಿಸ್ತು ಬದ್ಧತೆಗಳನ್ನು ಮೆಚ್ಚಿ ಅವರಿಗೆ ಕಾಲೋನಿಯಲ್ ಸಾಹೇಬ್ಎಂಬ ತಮಾಷೆಯ ಬಿರುದನ್ನು ಕೊಟ್ಟು ಹೋದರು.

ಕುಮಾರಪ್ಪನವರಿಗೆ ಇದ್ದ ಆಳವಾದ ಒಳನೋಟ ಮತ್ತು ಅಭಿವೃದ್ಧಿ ಬಗೆಗಿನ ಕಲ್ಪನೆ ಇವುಗಳನ್ನು ಗಮನಿಸಿದ ಗಾಂಧೀಜಿತನ್ನ ಸಹೋದರನ ಪುತ್ರ ಸ್ಥಾಪಿಸಿದ್ದ ಗ್ರಾಮೀಣ ವಿಜ್ಙಾನ ಕೇಂದ್ರ ಜವಬ್ದಾರಿ ವಹಿಸಿದರು. 1934 ರಿಂದ 1948 ರ ವರೆಗೆ ಕುಮಾರಪ್ಪನವರಿಗೆ ವಾರ್ಧಾದ ಸೇವಾಗ್ರಾಮ ಅವರ ಪಾಲಿನ ಪ್ರಯೋಗಶಾಲೆ ಮತ್ತು ಕರ್ಮಭೂಮಿಯಾಯಿತು. ಆಧುನಿಕ ಜಗತ್ತು ಅವಲಂಬಿಸಿದ್ದ ವಸ್ತುಗಳ ಬದಲಾಗಿ ಪರ್ಯಾಯ ವಸ್ತುಗಳ ಹುಡುಕಾಟದಲ್ಲಿ ತೊಡಗಿದರು. ಕೃಷಿಯಲ್ಲಿ ರಸಾಯನಿಕ ಗೊಬ್ಬರಗಳ ಬದಲಾಗಿ ಹಸಿರಲೆ ಗೊಬ್ಬರವನ್ನು ರೈತರಿಗೆ ಪರಿಚಯಿಸಿದರು. ಸೀಮೆಎಣ್ಣೆ ಬದಲಾಗಿ, ನೈಸರ್ಗಿಕವಾಗಿ ಹೊಂಗೆ, ಬೇವು ಬೀಜಗಳಿಂದ ತಯಾರಿಸಿದ ತೈಲಗಳನ್ನು ದೀಪಗಳಿಗೆ ಬಳಸಲು ಉತ್ತೇಜನ ನೀಡಿದರು. ಟ್ರಾಕ್ಷರ್ ಬದಲಾಗಿ ರೈತರಿಗೆ ಅನೇಕ ಸುಧಾರಿತ ನೇಗಿಲುಗಳನ್ನು ಅವಿಷ್ಕರಿಸಿ ಪರಿಚಯಿಸಿದರು. ಸಾಬೂನು ಉತ್ಪಾದನೆಗೆ  ಪೆಟ್ರೋಲ್ ಅಧಾರಿತ ಕಚ್ಛಾ ವಸ್ತುಗಳನ್ನು ಬಳಸುವ ಬದಲು ಅರಣದಲ್ಲಿ ಉಚಿತವಾಗಿ ದೊರೆಯುವ ವನಸ್ಪತಿ ಬಳಸಲಾರಂಬಿಸಿದರು. ಉರವಲಿನಂತೆ ಬಳಕೆಯಾಗುತ್ತಿದ್ದ ಕಬ್ಬಿನ ಸಿಪ್ಪೆಯನ್ನು ಕಾಗದ ಉತ್ಪಾದನೆಗೆ ಬಳಸಿ ಇತರರಿಗೆ ಪ್ರೇರಣೆಯಾದರು. ಚರಕ ಮತ್ತು ಕೈಮಗ್ಗಗಳನ್ನು ಪರಿಷ್ಕರಿಸಿ, ಹತ್ತಿ ನೂಲು ಮತ್ತು ಬಟ್ಟೆಯ ಉತ್ಪಾದನೆ ಹೆಚ್ಚಾಗುವಂತೆ ನೋಡಿಕೊಂಡರು. ಇವೆಲ್ಲವೂ ಕುಮಾರಪ್ಪನವರು ಹೊಸದಾಗಿ ಕಂಡು ಹಿಡಿದ ತಂತ್ರಜ್ಙಾನಗಳಾಗಿರಲಿಲ್ಲ, ಬದಲಾಗಿ ನಾವು ಮರೆತು ಕೈ ಬಿಟ್ಟಿದ್ದ ನಮ್ಮವೇ ಆದ ದೇಶಿ ತಂತ್ರಜ್ಙಾನಗಳಾಗಿದ್ದವು. ಪ್ರಕೃತಿಯನ್ನು ಯಾವ ಕಾರಣಕ್ಕೂ ಶೋಷಿಸಿದೆ ಅದರ ಕೊಡುಗೆಗಳನ್ನು ಬಳಸಿಕೊಳ್ಳಬೇಕೆಂಬುದು ಕುಮಾರಪ್ಪನವರ ಅಚಲ ನಿಲುವಾಗಿತ್ತು. ಅಣೆಕಟ್ಟುಗಳ ಬದಲಾಗಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟಲು ರೈತರಿಗೆ ಪ್ರೋತ್ಸಾಹಿಸಿದರು. ಅವರ ಇಂತಹ ಪ್ರಯೋಗ ಮತ್ತು ಚಿಂತನೆಗಳಿಂದಾಗಿ “Economy Of Permanence, A Quest For A Social Order Based On Non- Violence”( ಶಾಶ್ವತ ಅರ್ಥಶಾಸ್ತ್ರ ಮತ್ತು ಅಹಿಂಸೆಯನ್ನು ಅಧರಿಸಿದ ಸಮಾಜ ವ್ಯವಸ್ಥೆಯ ಅನ್ವೇಷಣೆ.) ಎಂಬ ಕೃತಿ ರಚನೆ ಅವರಿಂದ ಸಾಧ್ಯವಾಯಿತು.
ಕುಮಾರಪ್ಪನವರಿಗೆ ಇದ್ದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಿಂದಾಗಿ, ಅವರನ್ನು ಅಖಿಲ ಭಾರತ ಸಣ್ಣ ಕೈಗಾರಿಕೆಗಳ ಒಕ್ಕೂಟದ ಕಾರ್ಯದರ್ಶಿ ಸ್ಥಾನ ಅವರನ್ನು ಅರಸಿಕೊಂಡು ಬಂದಿತು. ಗಾಂಧಿ ಮತ್ತು ಅವರ ಅನುಯಾಯಿಗಳು, ಇಡೀ ದೇಶಕ್ಕೆ ಸ್ವರಾಜ್ಯ ಮತ್ತು ಸ್ವಾವಲಂಬಿತನದ ಚಳುವಳಿಯನ್ನು ಹರಡುವ ಉದ್ದೇಶದಿಂದ, ಸೇವಾಗ್ರಾಮವನ್ನು ಕೇಂದ್ರವಾಗಿಟ್ಟು ಆರಂಭವಾದ ಈ ಒಕ್ಕೂಟದ ಕಾರ್ಯದರ್ಶಿಯಾಗಿಯೂ ಸಹ ಕುಮಾರಪ್ಪ ಕಾರ್ಯನಿರ್ವಹಿಸುತ್ತಾ, ಗಾಂಧಿ ಚಿಂತನೆಗಳ ವಾರಸುದಾರರಂತೆ ಸೇವಾಗ್ರಾಮದಲ್ಲಿ ಬದುಕತೊಡಗಿದರು. ಆದರೆ, 1945ರಲ್ಲಿ ಸ್ವಾತಂತ್ರ್ಯದ ದಿನಗಳು ಹತ್ತಿರವಾಗುತ್ತಿದ್ದಂತೆ, ಗಾಂಧೀಜಿ ಮತ್ತು ಕುಮಾರಪ್ಪನವರಿಗೆ ಇದ್ದ ಕನಸುಗಳು ಛಿದ್ರವಾಗತೊಡಗಿದವು. ಬ್ರಿಟೀಷ್ ಆಳ್ವಿಕೆಯಲ್ಲಿ ನೆಹರೂ ನೇತೃತ್ವದ ಉಸ್ತುವಾರಿ ಸರ್ಕಾರಕ್ಕೆ ಗಾಂಧಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆಗಳು, ವೃದ್ಧನೊಬ್ಬನ ಹಪಾಹಪಿತನದಂತೆ ಕಂಡು ಬಂದವು. ನೆಹರೂ ಗುಡಿಕೈಗಾರಿಕೆಗಳ ಯೋಜನೆಗಳನ್ನು ನೇರವಾಗಿ ತಿರಸ್ಕರಿಸಿದರು. ಈ ಕುರಿತು 1945 ರ ಅಕ್ಟೋಬರ್ 5 ಮತ್ತು 9 ನೇ ದಿನಾಂಕಗಳ ನಡುವೆ ಗಾಂಧಿ ಮತ್ತು ನೆಹರು ನಡುವೆ ತೀರಾ ಖಾರವಾದ ಪ್ರತಿಕ್ರಿಯೆಗಳನ್ನು ಒಳಗೊಂಡ ಪತ್ರಗಳ ಸಮರವೂ  ನಡೆಯಿತು. 1947 ರಲ್ಲಿ ಸ್ವಾತಂತ್ರ್ಯ ಹತ್ತಿರವಾಗುತ್ತಿದ್ದಂತೆ, ಭಾರತ ವಿಭಜನೆ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾದ ಪರಿಣಾಮಳಿಂದ ಗಾಂಧೀಜಿ , ನೆಹರೂ ಮತ್ತು ಪಟೇಲ ರಿಂದ ಮೂಲೆಗೆ ಒತ್ತರಿಸಲ್ಪಟ್ಟ್ಪು ಅಕ್ಷರಶಃ ಏಕಾಂಗಿಯಾದರು.
ಈ ಎಲ್ಲಾ ಬೆಳವಣಿಗೆಗಳಿಂದ ವಿಚಲಿತರಾಗಿ ನೊಂದುಕೊಂಡ ಕುಮಾರಪ್ಪನವರು ಗಾಂಧೀಜಿ ಹತ್ಯೆಯ ನಂತರ , ಪಂಚವಾರ್ಷಿಕ ಯೋಜನೆಗಳಿಗೆ ಸಲಹೆಗಾರರಾಗಿ ಇರುವಂತೆ ನೆಹರೂ ನೀಡಿದ ಆಹ್ವಾನವನ್ನು ತಿರಸ್ಕರಿಸಿದರು. 1948ರಲ್ಲಿ ಸೇವಾಗ್ರಾಮದಿಂದ ತಮಿಳುನಾಡಿಗೆ ಬಂದ ಅವರುಮಧುರೈ ಸಮೀಪದ ಕಳ್ಳುಪಟ್ಟಿ ಎಂಬ ಗ್ರಾಮದಲ್ಲಿ ಅರವತ್ತು ಎಕರೆ ಭೂಮಿ ಖರೀದಿಸಿ, ಗಾಂಧಿ ನಿಕೇತನ ಎಂಬ ಆಶ್ರಮ ಸ್ಥಾಪಿಸಿ, ತಾವು ಹಿಂದೆ ಸೇವಾಗ್ರಾಮದಲ್ಲಿ ಆರಂಭಿಸಿದ್ದ ಎಲ್ಲಾ ಯೋಜನೆಗಳನ್ನು ಮುಂದುವರಿಸಿದರು. ಗಾಂಧಿ ನಿಕೇತನ ಆಶ್ರಮದ ಚಟುವಟಿಕೆಗಳು ಅಂತರಾಷ್ಟ್ರ ಮಟ್ಟದಲ್ಲಿ ಗಮನ ಸೆಳದವು. ಅಮೇರಿಕಾದ ಗಾಂಧಿ ಎಂದು ಕರೆಸಿಕೊಳ್ಳುತ್ತಿದ್ದ ಮಾರ್ಟಿನ್ ಲೂಥರ್ ಕಿಂಗ್ ಎರಡು ಬಾರಿ ಬೇಟಿ ನೀಡಿದ್ದರು. ಗಾಂಧಿ ಚಿಂತನೆಗಳ ಮತ್ತೊಬ್ಬ ಪ್ರತಿಪಾದಕ ಹಾಗೂ ಜಗತ್ತಿನ ಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾದ ಶೂ ಮಾಕರ್ ಕೂಡ ಇಲ್ಲಿಗೆ ಬೇಟಿ ನೀಡಿದ್ದರು. ಹೀಗೆ ಸತತ ಹನ್ನೆರೆಡು ವರ್ಷಗಳ ಕಾಲ ಆಶ್ರಮವನ್ನು ಮುನ್ನೆಡೆಸಿದ ಕುಮಾರಪ್ಪನವರು ಗಾಂಧೀಜಿ ಇನ್ನಿಲ್ಲವಾದ ದಿನ ಅಂದರೆ, 1960ರ ಜನವರಿ 30 ರಂದು ನಿಧನ ಹೊಂದಿದರು.  ಅವರನ್ನು ಗಾಂಧಿ ನಿಕೇತನದಲ್ಲಿ ಮಣ್ಣು ಮಾಡಿ, ಅವರ ಸಮಾಧಿ ನಿರ್ಮಿಸಲಾಗಿದೆ. ಪ್ರತಿ ದಿನ ಅವರ ಸಮಾಧಿಗೆ ನಮನ ಸಲ್ಲಿಸುವುದರ ಮೂಲಕ ನಿಕೇತನದ ಚಟುವಟಿಕೆ ಆರಂಭಗೊಳ್ಳುತ್ತವೆ.(ವಾರ್ಧಾದ ಸೇವಾಗ್ರಾಮದಲ್ಲೂ ಕೂಡ ಇದೇ ಆಚರಣೆ ಮುಂದುವರಿದಿದೆ) ಇದೀಗ ಗಾಂಧೀಜಿ ತತ್ವಗಳ ಅಡಿಯಲ್ಲಿ ಅವರ ಅನುಯಾಯಿಗಳು ಆಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ, ಕುಮಾರಪ್ಪನವರ ನೆನಪಿಗಾಗಿ ವಿದ್ಯಾ ಸಂಸ್ಥೆಗಳನ್ನು ಆರಂಭಿಸಿಲಾಗಿದ್ದುಗ್ರಾಮೀಣ ಕುಲ ಕಸುಬು ಮತ್ತು ಗೃಹ ಕೈಗಾರಿಕೆ ಕುರಿತಂತೆ ಡಿಪ್ಲಮೊ ಕೋರ್ಸುಗಳು ಆಶ್ರಮದಲ್ಲಿ ನಡೆಯುತ್ತಿವೆ, ಮಧುರೈ ನ ಕಾಮರಾಜ್ ವಿಶ್ವವಿದ್ಯಾನಿಲಯದಿಂದ ಗಾಂಧಿನಿಕೇತನ ಆಶ್ರಮದ ವಿದ್ಯಾ ಸಂಸ್ಥೆ ಮಾನ್ಯತೆ ಪಡೆದಿದೆ.
ಈ ಸಂಸ್ಥೆಯಿಂದ ಪ್ರೇರಣೆಗೊಂಡು, ಕರುಣಾಕರನ್ ಎಂಬ ಇಂಜಿನಿಯರ್ ವಿದ್ಯಾರ್ಥಿ 1980 ದಶಕದಲ್ಲಿ ಅದೇ ತಮಿಳುನಾಡಿನ ದಿಂಡಿಗಲ್ ಜಿಲ್ಲಾ ಕೇಂದ್ರದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿ ಸೇಲಂ-ಮಧುರೈ ಹೆದ್ದಾರಿಯಲ್ಲಿ ಆರಂಭಿಸಿರುವ ಗಾಂಧಿ ಗ್ರಾಮ ಎಂಬ ಸಂಸೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ, ಇಲ್ಲಿ ತಯಾರಾಗುವ ಗೃಹ ಬಳಕೆಯ ಹಾಗೂ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾದ ವಸ್ತುಗಳು ಇಡೀ ತಮಿಳುನಾಡಿನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿವೆ.

ಆಧುನಿಕತೆಯ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಅನುಭೋಗ ಮತ್ತು ಲೋಲುಪತೆಯ ಬೆನ್ನಟ್ಟಿ ಹೊರಟಿರುವ ಭಾರತದ ಹೊಸ ತಲೆಮಾರಿಗೆ ಕುಮಾರಪ್ಪ ಮತ್ತು ಗಾಂಧಿ ಚಿಂತನೆಗಳು ಈಗ ಅಪ್ರಸ್ತುತ ಎನಿಸಬಹುದು. ಆದರೆ, ಗಾಂಧೀಜಿ ಹೊತ್ತಿಸಿದ ಸ್ವಾವಲಂಬಿತನದ ಬದುಕಿನ ಮೂಲ ಮಂತ್ರದ ಆ ಬೆಳಕಿನ ದೀಪ ಈಗಲೂ ಹಲವು ರೂಪಗಳಲ್ಲಿ ಆರದೆ ಉರಿಯುತ್ತಿದೆ. ಗಾಂಧಿ ಮತ್ತು ಕುಮಾರಪ್ಪನವರ ಮುಂದುವರೆದ ವಾರಸುದಾರರಂತೆ ಕಾಣಬರುವ ಉತ್ತರಪ್ರದೇಶದ ವಾರಾಣಾಸಿಯ ಬನರಾಸ್ ವಿ.ವಿ.ಯ ಪ್ರೊ. ಸಹಸ್ರಬುಧೆ, “ಲೋಕ ವಿದ್ಯಾಎಂಬ ಸಂಸ್ಥೆಯೊಂದನ್ನು ಆರಂಭಿಸಿ, ಜನಸಮಾನ್ಯರಿಗೆ ಪರಿಷ್ಕರಿಸಿದ ಹಾಗೂ ಅಧುನಿಕ ಬದುಕಿಗೆ ಹೊಂದಿಕೊಳ್ಳಬಹುದಾದ ದೇಶಿ ತಂತ್ರಜಾÐನಗಳನ್ನು ತಲುಪಿಸುತ್ತಿದ್ದಾರೆ. ಅಲ್ಲದೆ, ಇತ್ತೀಚೆಗಿನ ದಿನಗಳಲ್ಲಿ ಗಾಂಧಿಯವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಲ್ಲಿ ಅವರು ರಚಿಸಿದ ಆಧುನಿಕ ವಿಜಾÐನಕ್ಕೆ ಗಾಂಧಿಯವರ ಸವಾಲುಎಂಬ ಕೃತಿ ಮಹಾತ್ಮನನ್ನು ಗ್ರಹಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.  ಈ ಕೃತಿ ಕನ್ನಡದಲ್ಲೂ ಲಭ್ಯವಾಗುತ್ತಿದೆ. ನನ್ನ ಮಿತ್ರ ಡಾ. ಕೆ. ಪುಟ್ಟಸ್ವಾಮಿ ಇದನ್ನು ಅನುವಾದ ಮಾಡಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ  ಪ್ರಕಟಿಸಿದೆ. ಆಸಕ್ತರು ಓದಲೇ ಬೇಕಾದ ಅನನ್ಯ ಕೃತಿ ಇದಾಗಿದೆ.  ಅದೇ ರೀತಿ ರಜನಿ ಭಕ್ಷಿ ಬರೆದ ಬಾಪು ಕುಟಿಇಂಗ್ಲೀಷ್ ಕೃತಿಯನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದ್ದು, ಇದರ ಕನ್ನಡ ಅನುವಾದವನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. ಗಾಂಧೀಜಿಯನ್ನು ಹಾಗೂ ಅವರ ಚಿಂತನೆಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಎರಡು ಕೃತಿಗಳು ಸಹಕಾರಿಯಾಗಲಿವೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ