ಸೋಮವಾರ, ಆಗಸ್ಟ್ 18, 2014

ನಲ್ಮೆಗೆ ಮತ್ತೊಂದು ಹೆಸರು ನಲ್ಲೂರ್ ಪ್ರಸಾದ್.

                 

                       ಮನವೆ ಲಿಂಗವಾದ ಬಳಿಕ ಇನ್ನಾರ ನೆನೆವುದಯ್ಯಾ?
                       ಭಾವವೆ ಐಕ್ಯವಾದ ಬಳಿಕ ಬಯಸುವುದಿನ್ನಾರನು?
                       ಭ್ರಮೆಯಳಿದ ನಿಜವು ಸಾಧ್ಯವಾದ ಬಳಿಕ
                       ಅರಿವುದಿನ್ನಾರನು ಗುಹೇಶ್ವರಾ?
                                                     :- ಅಲ್ಲಮ ಪ್ರಭು

ಅವು 1970 ದಶಕದ ದಿನಗಳು. ಬಾಲ್ಯದ ಹಸಿವು, ಬಡತನ ಮತ್ತು ಅಪಮಾನಗಳಿಂದ ಘಾಸಿಗೊಂಡಿದ್ದ ನಾನು ನರಕದಿಂದ ಪಾರಾಗಲು ಇರುವ ಏಕೈಕ ಮಾರ್ಗ ಅಕ್ಷರ ಎಂದು ನಂಬಿಕೊಂಡಿದ್ದಕಾಲ. 1972 ರಲ್ಲಿ ಪ್ರಕಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ  ನಂತರ ನನ್ನನ್ನು ಓದಿಸಲಾಗದೆ ಅಸಹಾಯಕಾಗಿದ್ದ ನನ್ನಪ್ಪ, ಎರಡು ವರ್ಷಗಳ ಕಾಲ ನನ್ನನ್ನು ಹಸು ಮತ್ತು ಕುರಿ ಮೇಯಿಸಲು ಹಾಕಿದ್ದ. (ನನ್ನೂರು ಕೊಪ್ಪದಿಂದ ಎಂಟು ಕಿಲೋಮೀಟರ್ ದೂರದ ಬೆಸಗರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಪ್ರತಿದಿನ ಹದಿನಾರು ಕಿ.ಮಿ. ಬರಿಗಾಲಲ್ಲಿ ನಡೆದು ಹೈಸ್ಕೂಲ್ ಮುಗಿಸಿದ್ದೆ.) ಎರಡು ವರ್ಷಗಳಲ್ಲಿ ನಮ್ಮ ತೋಟದಲ್ಲಿ ಒಣಗಿ ಬೀಳುತ್ತಿದ್ದ ತೆಂಗಿನ ಗರಿಗಳನ್ನು ಹಳ್ಳದ ನೀರಿನಲ್ಲಿ ನೆನೆ ಹಾಕಿ ನಂತರ ಎಣೆದು, ನನ್ನೂರಿನ ಭಾನುವಾರದ ಸಂತೆಯಲ್ಲಿ ಒಂದು ರೂಪಾಯಿಗೆ ನಾಲ್ಕು ಉಂಡೆಯಂತೆ ದಲಿತರಿಗೆ ಮಾರಾಟ ಮಾಡುತ್ತಿದ್ದೆ. (ಒಂದು ಉಂಡೆಯೆಂದರೆ ಎರಡು ಹೆಣೆದ ಗರಿಗಳು) ಹೀಗೆ ಉಳಿಸಿದ ಹಣದಲ್ಲಿ ಮತ್ತೇ ಬೆಸಗರಹಳ್ಳಿಯ ಸರ್ಕಾರಿ ಕಾಲೇಜಿಗೆ 1976 ರಲ್ಲಿ ಪಿ.ಯು.ಸಿ. ಗೆ ಸೇರ್ಪಡೆಯಾಗಿ 1978 ರಲ್ಲಿ ತೇರ್ಗಡೆಯಾಗಿದ್ದೆ.
ಪದವಿ ಓದಲು ಮತ್ತೇ ನನ್ನ ಬಡತನ ಅಡ್ಡಿಯಾದಾಗ ಬೆಂಗಳೂರಿನ ಚಾಮರಾಜಪೆಟೆಯಲ್ಲಿದ್ದ ನನ್ನ ದೊಡ್ಡಮ್ಮನ ಮಗಳು ಮನೆ ಹೊಕ್ಕು ಅಕ್ಕ ಮತ್ತು ಭಾವನ ಬಳಿ ಒಂದು ಹಿಡಿ ಅನ್ನ ಮತ್ತು ಒಂದಿಷ್ಟು ಅಕ್ಷರಕ್ಕಾಗಿ ಅಕ್ಷರಶಃ ಅಂಗಲಾಚಿದ್ದೆ. ಅವರು ತೋರಿದ ಕರುಣೆ, ಪ್ರೀತಿ ಮತ್ತು  ವಿಶ್ವಾಸದಿಂದ ಮನೆಯಿಂದ (ಮಕ್ಕಳ ಕೂಟದ ಬಳಿ) ಕೂಗಳತೆಯಲ್ಲಿದ್ದ ವಿ.ವಿ.ಪುರಂ ಸಂಜೆ ಕಾಲೇಜಿಗೆ 1978 ಜುಲೈ ತಿಂಗಳಿನಲ್ಲಿ ಸೇರ್ಪಡೆಯಾಗಿದ್ದೆ. ನನ್ನ ಭಾವನವರು ತಮ್ಮ ಸ್ನಹಿತರ ಮೂಲಕ ಗಾಂಧಿನಗರದ ಕಿಸಾನ್ ಸೀಡ್ಸ್ ಕಾರ್ಪೊರೇಶನ್ ಎಂಬ ಸಂಸ್ಥೆಯಲ್ಲಿ ಒಂದು ಕೆಲಸವನ್ನು ಕೊಡಿಸಿಕೊಟ್ಟಿದ್ದರು. ಹೀಗೆ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ತಬ್ಬಲಿಯಂತೆ ಅನಾಥನಾಗಿ, ಬಡತನವೆಂಬ ನರಕದ ಬಾಗಿಲು ದಾಟಲು ವಿದ್ಯೆಯೊಂದೇ ಅಂತಿಮ ಎಂದು ನಾನು ನಂಬಿಕೊಂಡಿದ್ದ ಕಾಲದಲ್ಲಿ ನನಗೆ ನಲ್ಲೂರು ಪ್ರಸಾದ್ ಎಂಬ ವಿಸ್ಮಯಕಾರಿ ಅಧ್ಯಾಪಕನೊಬ್ಬನ  ದರ್ಶನವಾಯಿತು. ಜಾನಪದ ತಜ್ಞರೆಂದು ಹೆಸರಾದ ಮಂಡ್ಯ ಜಿಲ್ಲೆಯ  ಡಿ.ಲಿಂಗಯ್ಯನವರು ಪ್ರಾಂಶುಪಾಲರಾಗಿದ್ದ ಸಂಜೆ ಕಾಲೇಜಿನ ತರಗತಿಗೆ ನಾನು ಹಾಜರಾಗುವ ವೇಳೆ ಅದೇ ಕಲಾ ಮತ್ತು ವಿಜ್ಞಾನ ಕಾಲೇಜಿನ ಮುಂದೆ ಜುಬ್ಬ ಪೈಜಾಮ ಧರಿಸಿದ ಎತ್ತರ ಹಾಗೂ ಬಲಿಷ್ಟ ಕಾಯದ ನಲ್ಲೂರು ಪ್ರಸಾದ್ರವರು ಸಿಗರೇಟ್ ಸೇದುತ್ತಾ ತಮ್ಮ ಮುಂದೆ ಜಮಾಯಿಸಿದ ಶಿಷ್ಯ ಕೋಟಿಯ ಎದೆಗೆ  ತಮ್ಮ ಎತ್ತರದ ಗಡಸು ಧ್ವನಿಯಲ್ಲಿ ವೈಚಾರಿಕತೆಯ ಬೀಜವನ್ನು ಬಿತ್ತುತ್ತಿದ್ದರು. ಹಳ್ಳಿಗಾಡಿನಿಂದ ಬಂದು ಕೀಳರಿಮೆಯಿಂದ ಬಳಲುತ್ತಿದ್ದ ಹುಡುಗರಿಗೆ ಅಪ್ಪಟ ಗ್ರಾಮೀಣ ಭಾಷೆಯಲ್ಲಿ ಪ್ರೀತಿಯಿಂದ ಗದರುತ್ತಾ, ಬೈಯುತ್ತಾ ಆತ್ಮ ವಿಶ್ವಾಸ ತುಂಬುತ್ತಿದ್ದರು. ವಿ.ವಿ. ಪುರಂ ಕಲಾ ಮತ್ತು ವಿಜ್ಞಾನ  ಕಾಲೇಜಿನಲ್ಲಿ ತಿಂಗಳಿಗೆ ಕನಿಷ್ಟ ಎರಡಾದರೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಟಕ, ಸಂಗೀತ, ಜಾನಪದ ಹಾಡುಗಳು, ಕನ್ನಡ ಸಾಹಿತ್ಯ ಕುರಿತಂತೆ ಚರ್ಚೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕಾಲದಲ್ಲಿ ಸಂಜೆ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮ ಜಾರಿಯಲ್ಲಿ ಇರದಿದ್ದ ಕಾರಣ ನಾನು, ನನಗೆ ಅರ್ಥವಾಗದ ಅರ್ಥಶಾಸ್ತ್ರ, ಸಮಾಜ ಶಾಸ್ತ್ರ ತರಗತಿಗಳಿಂದ ತಪ್ಪಿಸಿಕೊಂಡು   ನಲ್ಲೂರ್ ಪ್ರಸಾದ್ ಅವರ ಸಾಂಸ್ಕøತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದ್ದೆನೇರ ಪರಿಚಯವಿಲ್ಲದ ನಲ್ಲೂರ್ ಪ್ರಸಾದ್ ಅವರನ್ನು ನಾನು ಆರಂಭದ ಕಂಡ  ದಿನಗಳ ನೆನಪುಗಳಿವು.

ದಶಕದ ನಂತರ ಒಬ್ಬ ಪತ್ರಕರ್ತನಾಗಿ, ಕವಿಯಾಗಿ ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಅವರ ಸ್ನೇಹ ವಲಯಕ್ಕೆ ನಾನೂ ಸಹ ಸೇರ್ಪಡೆಯಾದೆ. ಸದಾ ತಾಯಿ ಕೊಳಿಯೊಂದು ತನ್ನ ಮರಿಗಳನ್ನು ಜೊತೆಯಲ್ಲಿ ಕರೆದುಕೊಂಡು ತಿರುಗುವ ಹಾಗೆ ಶಿಷ್ಯರನ್ನು ಕಟ್ಟಿಕೊಂಡು ಓಡಾಡುತ್ತಿದ್ದ ನಲ್ಲೂರ್ ಪ್ರಸಾದ್, ನಾಡಿನ ಮೂಲೆ ಮೂಲೆಯಿಂದ ಬೆಂಗಳೂರು ನಗರಕ್ಕೆ ಬಂದು ದಿಕ್ಕೆಟ್ಟವರಂತೆ ಕಾಣುತ್ತಿದ್ದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅಪ್ಪಟ ಹಳ್ಳಿ ಭಾಷೆಯಲ್ಲಿ ಬೈಯುತ್ತಾ, ಆತ್ಮವಿಶ್ವಾಸ ತುಂಬುತ್ತಾ ಬದುಕುವ ಬಗೆಯನ್ನು ಹೇಳಿಕೊಡುತ್ತಿದ್ದರು. ಕಾರಣಕ್ಕಾಗಿ ಅವರ ಹೃದಯ ವೈಶಾಲ್ಯತೆಗೆ ಮಾರುಹೋಗಿದ್ದೆ. ಮೇಲುನೋಟಕ್ಕೆ ಅಪ್ಪಟ ಗೌಡನಂತೆ ಕಾಣುವ ನಲ್ಲೂರ್ಪ್ರಸಾದ್  ಅವರ ನಡೆ ಮತ್ತು ನುಡಿಯಲ್ಲಿ ನಾನು ತಾಯ್ತನದ ಹೆಂಗರುಳನ್ನು ನಾನು ಕಂಡುಕೊಂಡಿದ್ದೆ.
 ನನಗಿಂತ ಒಂಬತ್ತು ವರ್ಷ ದೊಡ್ಡವರಾದ ನಲ್ಲೂರ್ ಪ್ರಸಾದ್ ಅವರನ್ನು ಸಾರ್ ಎಂದು ಕರೆಯುತ್ತಿದ್ದ ನನಗೆ ಮುಂದಿನ ದಿನಗಳಲ್ಲಿ ಅಣ್ಣಾ ಎಂದು ಕರೆಯುವ ಸಂದರ್ಭವೂ ಒದಗಿ ಬಂದಿತು. ಕನ್ನಡ ಕಥಾಲೋಕದ ದಿಗ್ಗಜ ಎನಿಸಿಕೊಂಡ ನನ್ನ ಮಂಡ್ಯ ಜಿಲ್ಲೆಯ ಕಥೆಗಾರ ಡಾ.ಬೆಸಗರಹಳ್ಳಿ  ರಾಮಣ್ಣನವರು ನನ್ನನ್ನು ಒಳಗೊಂಡಂತೆ ಅನೇಕ ಗೆಳೆಯರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೈ ಹಿಡಿದು ನಡೆಸಿಕೊಂಡು ಬಂದವರು. ಅವರು ಮಾತ್ರ ನಮ್ಮೆಲ್ಲರನ್ನೂ ಪ್ರೀತಿಯಿಂದಕಂದಾಎಂದು ಕರೆಯುತ್ತಿದ್ದರು. ಇದೇ ರೀತಿಯ ಸಂಬೋಧನೆಯನ್ನು ನಾನು ನಲ್ಲೂರ್ ಅವರಲ್ಲಿ ಕಂಡಾಗ, ನನ್ನ ಪಾಲಿಗೆ ಇಲ್ಲವಾಗಿರುವ ರಾಮಣ್ಣ, ಪ್ರಸಾದ್ ಎಂಬ ಅಣ್ಣನ ರೂಪದಲ್ಲಿ  ಸ್ಥಾನ  ತುಂಬಿದರಲ್ಲ ಎಂಬ ಸಂತೋಷ ಮತ್ತು  ತೃಪ್ತಿ ನನ್ನದಾಯಿತು.
ವಚನಕಾರ್ತಿ ಅಕ್ಕ ಮಹಾದೇವಿ ತನ್ನ ವಚನವೊಂದರಲ್ಲಿನೊಂದವರ ನೋವ ನೋಯದವರೆತ್ತ ಬಲ್ಲರೊಎಂದು ಹೇಳುವ ಹಾಗೆ ಗ್ರಾಮೀಣ ಸಂಸ್ಕತಿಯಿಂದ ಬಂದು ಅಕ್ಷರ ಲೋಕಕ್ಕೆ ಪ್ರಥಮವಾಗಿ ತರೆದುಕೊಂಡ ನನ್ನ ತಲೆಮಾರಿನ ತಲ್ಲಣ ಮತ್ತು ತಳಮಳಗಳನ್ನು ಒಡಲಲ್ಲಿ ಒತ್ತು ತಿರುಗುವಂತೆ ಕಾಣುವ ನಲ್ಲೂರ್ ಅವರು, ತಾನು ಬೇರು ಕತ್ತರಿಸಿಕೊಂಡು ಬಂದ ತನ್ನ ಗ್ರಾಮಸಂಸ್ಕøತಿ ಮತ್ತು ಅದರ ಮೇಲಿನ ಪ್ರೀತಿಯನ್ನು ತೊರೆಯಲಾರದೆ, ಇತ್ತ ನಗರ ಸಂಸ್ಕøತಿಗೆ ಸಂಪೂರ್ಣ ತೆರೆದುಕೊಳ್ಳಲಾಗದೆ ಒದ್ದಾಡಿದವರು, ತನ್ನೊಳಗಿನ ಧರ್ಮ ಸಂಕಟಕ್ಕೆ ಒಳಗೊಳಗೆ ಅತ್ತವರು. ಅವರ ಇಂತಹ ಮಾನಸಿಕ ತಾಕಲಾಟಗಳು ಅವರನ್ನು ಮಾನವೀಯ ಮುಖವುಳ್ಳ ಒಬ್ಬ ಶ್ರೇಷ್ಠ ಜಾನಪದ ವಿಧ್ವಾಂಸನಾಗಿ, ಶ್ರೇಷ್ಠ ಕವಿಯಾಗಿ, ಅಧ್ಯಾಪಕನಾಗಿ ಮತ್ತು ನಾಡು ಕಂಡ ಅತ್ಯುತ್ತಮ ವಾಗ್ಮಿ ಹಾಗೂ ಸಾಂಸ್ಕøತಿಕ ಸಂಘಟಕಕಾರನಾಗಿ  ರೂಪಿಸಿದವು.

ನಲ್ಲೂರು ಪ್ರಸಾದ್ ಅವರ ವ್ಯಕ್ತಿತ್ವದ ವಿಶೇಷವೆಂದರೆ, ಅವರಲ್ಲಿರುವ ನಾಯಕತ್ವದ ಗುಣ. ಒಂದು ಚಳುವಳಿಯಾಗಲಿ ಅಥವಾ ಸಂಘಟನೆಯಾಗಲಿ ಅದರ ನಾಯಕತ್ವ ವಹಿಸಿಕೊಂಡವನಿಗೆ ಪ್ರಾಥಮಿಕವಾಗಿ ತನ್ನ ಒಡನಾಡಿಗಳ ಸಲಹೆ ಮತ್ತು ಸೂಚನೆಗಳನ್ನು ಹಾಗೂ ಟೀಕೆ ಟಿಪ್ಪಣಿಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳವ ಗುಣವಿರಬೇಕು. ವರ್ತಮಾನದ ಸಾಮಾಜಿಕ ಚಳುವಳಿಗಳ ವಿಫಲತೆಯ ಹಿಂದೆ ಇರುವ ಬಹು ಮುಖ್ಯ ಅಂಶ ಇದೇ ಆಗಿದೆ. ಕನಾಟಕದ ರೈತ ಮತ್ತು ದಲಿತ ಚಳುವಳಿಗಳ ವಿಫಲತೆ ವಿಶಾಲ ಮನೋಭಾವದ ನಾಯಕರ ಕೊರತೆ ಕಾರಣವಾದುದನ್ನು ನಾವು ಅಲ್ಲಗೆಳೆಯಲಾಗದು. ಒಂದು ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸುವ ವ್ಯಕ್ತಿ ಮಾತ್ರ ನಾಯಕನಾಗಬಲ್ಲ. ಇಂತಹ ಗುಣ ನಮ್ಮ ನೆಲದಲ್ಲಿ ಬಸವಣ್ಣನಿಗಿತ್ತು, ಭಾರತದಲ್ಲಿ ಗಾಂಧೀಜಿಯವರಿಗೆ ಇತ್ತು. ಇಂತಹ ಉದಾತ್ತ ಪರಂಪರೆಯನ್ನು ತನ್ನದಾಗಿಸಿಕೊಂಡು ಮೈಗೂಡಿಸಿಕೊಂಡಿರುವ ನಲ್ಲೂರ್ ಪ್ರಸಾದ್ ಅವರಲ್ಲಿ ಎಲ್ಲರ ಧ್ವನಿಗೆ ಕಿವಿಯಾಗುವ, ಕಣ್ಣೀರಿಗೆ ಕರವಸ್ತ್ರವಾಗುವ ಗುಣಗಳಿವೆ ಕಾರಣಕ್ಕಾಗಿ ಅವರಿಗೆ ನಾಡಿನುದ್ದಕ್ಕೂ ಪ್ರೀತಿಸಬಲ್ಲ ಗೆಳೆಯರಿದ್ದಾರೆ, ಶಿಷ್ಯ ಸಮುದಾಯವಿದೆ. ವಿಧ್ವಾಂಸರ ಒಡನಾಟವಿದೆ. ವರ್ತಮಾನದ ಜಗತ್ತಿನಲ್ಲಿ ಕನ್ನಡ ಭಾಷೆ, ರೈತ ಸಮುದಾಯದ ಬವಣೆ ಮತ್ತು ದಲಿತ ಹಾಗೂ ಹಿಂದುಳಿದವರ ರಕ್ಷಣೆ ಇವೆಲ್ಲವೂ ಹೋರಾಟವೆಂಬ ನೆಪದಲ್ಲಿ ಹಲವರಿಗೆ ಉದ್ಯೋಗ ಹಾಗೂ ಉದ್ಯಮವಾಗಿರುವ ಸಂದರ್ಭದಲ್ಲಿ ಗಂಭೀರವಾಗಿ ಯೋಚಿಸಬಲ್ಲ, ನಾಡನ್ನು ಮುನ್ನಡೆಸಬಲ್ಲ ನಿಜವಾದ ಸಾಂಸ್ಕøತಿಕ ಮತ್ತು ಸಾಮಾಜಿಕ ನಾಯಕರ ಅಗತ್ಯವಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಡ್ಯ ಗಡಿ ಭಾಗದ ಕೊನೆಯ ಹಳ್ಳಿಗಳಲ್ಲಿ ಒಂದಾದ ನಲ್ಲೂರಿನ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ಜನಿಸಿರುವ ಪ್ರಸಾದ್ ಅವರಲ್ಲಿ ಗಾಂಧಿಜಿಯವರಿಗೆ ಇದ್ದ  ಕಠೋರ ನಿಯಮ, ಸತ್ಯವನ್ನು ನೇರವಾಗಿ ಹೇಳುವ ಎದೆಗಾರಿಕೆ ಮತ್ತು ತಾಯ್ತನದ ಗುಣಗಳಿವೆ. ಕಾರಣಕ್ಕಾಗಿ ಅವರು ಕನ್ನಡದ ಶಕ್ತಿ ಕೇಂದ್ರವೆನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಯಿತು.
ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಚಂದ್ರಶೇಖರಪಾಟಿಲರ ವಿರುದ್ಧ ಸೋಲಪ್ಪಿದಾಗ, ತಮ್ಮ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ ಪ್ರಸಾದ್, ತಮ್ಮ ತೆರೆದ ಮನಸ್ಸಿನಿಂದ ಚಂದ್ರಶೇಖರ ಪಾಟೀಲರ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದರು. ನಲ್ಲೂರ್ ಪ್ರಸಾದ್ ಅವರ ನಡೆ ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯಾದ್ಯಂತ ಅಪಾರ ಗೆಳೆಯರನ್ನು ಸಂಪಾದಿಸಿಕೊಟ್ಟಿತಲ್ಲದೆ, ನಂತರದ ಅವಧಿಗೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪರೋಕ್ಷವಾಗಿ ನೆರವಾಯಿತು.


ಗ್ರಾಮೀಣ ಸಂಸ್ಕøತಿಯ ಹಿನ್ನಲೆಯಿಂದ ಬಂದ   ಹಳ್ಳಿಗಾಡಿನ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ ಮತ್ತು ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಕಲಿಯುವ ಸಂದರ್ಭದಲ್ಲಿ ಅನುಭವಿಸಬೇಕಾದ ಕೀಳರಿಮೆ, ಅನಾಥ ಪ್ರಜ್ಞೆ ಇವೆಲ್ಲವನ್ನೂ ಸ್ವತಃ ಅನುಭವಿಸಿ ಬೆಳೆದಿರುವ ನಲ್ಲೂರ್ ತಮ್ಮ ಬದುಕಿನುದ್ದಕ್ಕೂ ತಮಗಿದ್ದ ಆತ್ಮವಿಶ್ವಾಸದ ಮೂಲಕ ಎಲ್ಲಾ ಅಪಮಾನ ಮತ್ತು ಕೀಳರಿಮೆಗಳನ್ನು ಮೆಟ್ಟಿನಿಂತವರು. ಹಾಗಾಗಿ ಶಾಲಾ ಕಾಲೇಜು ದಿನಗಳಲ್ಲಿ ಅವರೊಳಗೊಬ್ಬ ನಾಯಕ ರೂಪುಗೊಂಡಿದ್ದ. ನಾಯಕನೊಳಗೆ ಕೇವಲ ನಾಯಕತ್ವ ವಹಿಸುವ ಗುಣವಲ್ಲದೆ ನಾಟಕ, ಸಂಗೀತ, ಕಲೆ, ಸಾಹಿತ್ಯವನ್ನು ಆಸ್ವಾದಿಸುವ ಮತ್ತು ಸೃಷ್ಟಿಸುವ ಸೃಜನಶೀಲತೆಯೂ ಮನೆ ಮಾಡಿತ್ತು. ಕರ್ನಾಟಕದ ಬಲಿಷ್ಟ ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳದರೂ ಅವರೊಳಗೆ ಜಾತಿ ಮತ್ತು ಧರ್ಮವನ್ನು ಮೀರುವ ಗುಣಗಳಿದ್ದವು. ತನ್ನದೇ ಆದ ಹಾಸನ ಜಿಲ್ಲೆಯ ಪ್ರತಿಭಾವಂತ ದಲಿತ ಕವಿಯಾಗಿರುವ ಸುಬ್ಬು ಹೊಲೆಯಾರ್ ಅವರನ್ನು ಉದ್ದೇಶಿಸಿ ತಮ್ಮ ರೆಕ್ಕೆ ಬಡಿಯುವ ಮುನ್ನಕವನ ಸಂಕಲನದ ಕವಿತೆಯೊಂದರಲ್ಲಿ  ಹೀಗೆ ಬರೆದುಕೊಂಡಿದ್ದಾರೆ.
                    ಹೇಗಿದ್ದಿ ಸುಬ್ಬು?
                    ಕೇಳಲು ಕಷ್ಟವಾಗಿದೆ ನನಗೆ
                    ಶೂದ್ರ ತ್ರಿಶೂಲ ತಿವಿದ
                    ಗೌಡ ಪರಂಪರೆಯ
                    ಪರದೇಸಿಯ ಕೂಸು ನಾನು.
                    ನಿನ್ನ ನೋವಿಗೆ ನನ್ನ ನಿಟ್ಟುಸಿರು
                    ನಿನ್ನ ಅವಮಾನಕ್ಕೆ ನನ್ನ ತಗ್ಗಿದ ತಲೆ.
ಸಾಲುಗಳು ನಲ್ಲೂರು ಪ್ರಸಾದ್ ಅವರ ಆತ್ಮ ಸಾಕ್ಷಿಯ ಪ್ರಜ್ಞೆಗೆ ಸಾಕ್ಷಿಯಂತಿವೆ. ಶತ ಶತ ಮಾನಗಳ ಕಾಲ ಪುರೊಹಿತಶಾಹಿಯ ಕಾಲಲ್ಲಿ ತುಳಿಸಿಕೊಂಡ ಅಪಮಾನದ ಮತ್ತು ನೋವಿನ ಚರಿತ್ರೆಯನ್ನು ಬೆನ್ನಿಗೆ ಕಟ್ಟಿಕೊಂಡು ಬಂದಿರುವ ಶೂದ್ರ ಜಾತಿಯ ಸಮುದಾಯದಲ್ಲಿ  ಜನಿಸಿದ್ದರೂ ಕೂಡತನ್ನ ಒಡಲೊಳಗೆ  ಅಪಮಾನದ ಹಾಡಗಳನ್ನು ಬಚ್ಚಿಟ್ಟುಕೊಂಡು ಇನ್ನೊಬ್ಬರ ನೋವಿನ ಹಾಡಿಗೆ ದನಿಯಾಗುವ ನಲ್ಲೂರ್ ಪ್ರಸಾದ್ ಅವರ ಪರಿ ನಿಜಕ್ಕೂ  ಅಚ್ಚರಿ ಪಡುವಂತಹದ್ದು. ಮಾನವಿಯತೆಯ ನೆಲೆಯಲ್ಲಿ ಒಬ್ಬ ಅಪ್ಪಟ ಮನುಷ್ಯನೊಬ್ಬ ಬದುಕಬಹುದಾದ ಶ್ರೇಷ್ಠವಾದ ಬದುಕಿನ ದಾರಿ  ಇದು ಎಂದು ನನಗನಿಸಿದೆ. ಇದು ಒಂದು ರೀತಿಯಲ್ಲಿ ಅಲ್ಲಮ ಪ್ರಭು ಹೇಳುವ ಕಂಗಳಲಿ ನಟ್ಟ ಗಾಯವನಾರಿಗೆ ತೋರಬಹುದಯ್ಯಾ?” ಎನ್ನುವ ಸ್ಥಿತಿ.
ಜಗದ ನೀತಿ ನಿಯಮಗಳು ಏನೇ  ಇರಲಿ, ತಾನು ನಡೆದದ್ದು ದಾರಿ ಎಂಬಂತೆ ಕುವೆಂಪು ವಿಚಾರಧಾರೆಯಲ್ಲಿ ಬೆಳೆದು,  “ ಯಾವ ಶಾಸ್ತ್ರ ಏನು ಹೇಳಿದರೇನು? ಎದೆಗಿಂತ ಮಿಗಿಲಾದ ದನಿ ಇಹುದೇನು? ಎಂಬ ಅವರ ಕವಿತೆಯ ಸಾಲಿನಂತೆ ಬದುಕುತ್ತಿರುವ ನಲ್ಲೂರು ಪ್ರಸಾದ್, ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ  “ಆನು ಒಲಿದಂತೆ ಹಾಡುವೆ ನಿನಗೆ ಕೇಡಿಲ್ಲವಾಗಿಎಂಬ ಬಸವಣ್ಣನ ವಚನದಂತೆ ನಡೆಯುತ್ತಿರುವವರುಕಳೆದ ಕಾಲು ಶತಮಾನದಿಂದ ಇಂತಹ ಒಬ್ಬ ಅಣ್ಣನ ಜೊತೆ ಕಿರಿಯ ಗೆಳಯನಾಗಿ, ತಮ್ಮನಾಗಿ  ಬದುಕುತ್ತಿರುವ ನನಗೆ  ಇವೆಲ್ಲವೂ   ಬದುಕಿನ ಅವಿಸ್ಮರಣೀಯ ಕ್ಷಣಗಳು ಎನಿಸಿವೆ.
                         ( ಡಾ. ನಲ್ಲೂರ್ ಪ್ರಸಾದ್ ಅವರ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ