ಹೆಗ್ಗೋಡು ಎಂದರೆ, ನೀನಾಸಂ, ನೀನಾಸಂ ಎಂದರೆ, ಕೆ.ವಿ. ಸುಬ್ಬಣ್ಣ ಎಂದು ಇಡೀ ಕನ್ನಡನಾಡಿಗೆ ಪರಿಚಯವಾಗಿದ್ದ, ಸಾಂಸ್ಕೃತಿಕ ಚಿಂತಕ, ನಾಟಕಕಾರ ಮತ್ತು ಅನುವಾದಕ ಕೆ.ವಿ. ಸುಬ್ಬಣ್ಣನವರು. ನಮ್ಮನ್ನು ಅಗಲಿ, (2005 ರ ಜುಲೈ 16) ಇಂದಿಗೆ ಇಪ್ಪತ್ತೊಂದು ವರ್ಷವಾದರೂ ಸದಾ ತಮ್ಮ ವಿಭಿನ್ನ ಆಸಕ್ತಿಗಳ ಕಣಜವಾಗಿ ನಮ್ಮನ್ನು ಕಾಡುತ್ತಲೇ ಇದ್ದಾರೆ. ಬಹುಶಃ ನನಗೆ ತಿಳಿದ ಮಟ್ಟಿಗೆಅರವತ್ತರ ದಶಕದಲ್ಲಿ ಮೈಸೂರು ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿ, ಉಪನ್ಯಾಸಕರ ಹುದ್ದೆಗೆ ಆಸಕ್ತಿ ತೋರಿಸದೆ, ಕೃಷಿ ಲೋಕದತ್ತ ತೆರಳಿದವರು ಪೂರ್ಣಚಂದ್ರ ತೇಜಸ್ವಿ ಮತ್ತು ಕೆ.ವಿ. ಸುಬ್ಬಣ್ಣನವರು ಮಾತ್ರ. ಈ ಹಿರಿಯ ಚೇತನಗಳು ಮಲೆ ಮತ್ತು ಮಳೆನಾಡಿನಲ್ಲಿ ಕೃಷಿ ಲೋಕದಲ್ಲಿದ್ದುಕೊಂಡು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
ಸಾಗರದಿಂದ ಸುಮಾರು ಹದಿನೈದು ಕಿಲೊಮೀಟರ್ ದೂರದಲ್ಲಿರುವ ಹೆಗ್ಗೋಡು ಎಂಬ ಪುಟ್ಟಗ್ರಾಮದಲ್ಲಿ ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡು, ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಅವರು ಮಾಡಿದ ದಾಖಲೆಗಳು ಹೆಗ್ಗೋಡಿನತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದವು. ಹೆಗ್ಗೋಡಿನಲ್ಲಿ ಅವರು ಸ್ಥಾಪಿಸಿದ ನೀಲಕಂಠೇಶ್ವರ ನಾಟ್ಯ ಸಂಘವು ನೀನಾಸಂ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಿತು. ತಮ್ಮ ಪುತ್ರ ಅಕ್ಷರ ಇವರ ಹೆಸರಿನಲ್ಲಿ ಸ್ಥಾಪಿಸಿದ ಅಕ್ಷರ ಪ್ರಕಾಶನವು ಕನ್ನಡದ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಯಿತು.. ಪ್ರಕಾಶನ ಸಂಸ್ಥೆಗಾಗಿ, ನಿನಾಸಂ ನಾಟಕ ಮಂದಿರದ ಪಕ್ಕದಲ್ಲಿ ಸರಸ್ವತಿ ಮುದ್ರಣಾಲಯವನ್ನು ಸ್ಥಾಪಿಸಿ, ಐದಾರು ಮಂದಿಗೆ ಶಾಶ್ವತ ಉದ್ಯೋಗ ದೊರಕುವಂತೆ ಮಾಡಿದ್ದರು. ನಿನಾಸಂ ನ ನಾಟಕಗಳು, ಮತ್ತು ಅಕ್ಷರ ಪ್ರಕಾಶನದ ಪ್ರಕಟಣೆಗಳು ಅಲ್ಲಿಯೇ ಮುದ್ರಣವಾಗುತ್ತಿದ್ದವು.
ನನಗೆ ಎಂಬತ್ತರ ದಶಕದಲ್ಲಿ, ಬೆಂಗಳೂರಿನಲ್ಲಿ ಯು.ಆರ್.ಅನಂತಮೂರ್ತಿಯವರ ಪರಿಚಯವಾದ ಕೆ.ವಿ. ಸುಬ್ಬಣ್ಣನವರ ಬಹುಮುಖಿ ಪ್ರತಿಭೆಯ ಕುರಿತು ಆಸಕ್ತಿಯ ಜೊತೆಗೆ ಅಪಾರ ಗೌರವವಿತ್ತು. ಅನಂತಮೂರ್ತಿ ಮತ್ತು ಸುಬ್ಬಣ್ಣನವರ ಬಳಿ ನಾನು ಕಂಡ ಒಂದೇ ರೀತಿಯ ಗುಣವೆಂದರೆ, ಎಲ್ಲಾ ಬಗೆಯ ಟೀಕೆಗಳನ್ನು ನಗು ಮುಖದಿಂದ ಸ್ವೀಕರಿಸಿ, ಶಾಂತವಾಗಿ ಉತ್ತರಿಸುತ್ತಿದ್ದರು. ನನಗೆ ಅಕ್ಷರ ಪ್ರಕಾಶನದ ಬಗ್ಗೆ ಒಂದು ರೀತಿಯಲ್ಲಿ ಸಾತ್ವಿಕ ಸಿಟ್ಟಿತ್ತು. ನಾನು ಅದನ್ನು ಅಗ್ರಹಾರದ ಪ್ರಕಾಶನ ಎಂದು ಕರೆಯುತ್ತಿದ್ದೆ. ಏಕೆಂದರೆ, ಕೇವಲ ಪ್ರಸಿದ್ಧ ಬ್ರಾಹ್ಮಣ ಬರಹಗಾರರ ಕೃತಿಗಳು ಮಾತ್ರ ಪ್ರಕಟವಾಗುತ್ತಿದ್ದವು. 1988 ರಲ್ಲಿ ಜೋಗದ ಜಲಪಾತ ನೋಡಲು ಹೋಗಿದ್ದ ನಾನು, ಸಾಗರದಲ್ಲಿ ಉಳಿದುಕೊಂಡಿದ್ದೆ. ಬೆಳಿಗ್ಗೆ ಎದ್ದು ಹೆಗ್ಗೋಡಿಗೆ ಹೋಗಿ ಇಡೀ ದಿನ ಸುಬ್ಬಣ್ಣನರ ಜೊತೆ ಕಾಲ ಕಳೆದಿದ್ದೆ. ಈ ಸಂದರ್ಭದಲ್ಲಿ ನನ್ನ ಅಸಮಾಧಾನವನ್ನು ಅವರೆದುರು ಹೊರಹಾಕಿದ್ದೆ.
ಆ ದಿನ ನನ್ನನ್ನು ಮುದ್ರಣಾಲಯಕ್ಕೆ ಕರೆದೊಯ್ದು, ಅಲ್ಲಿನ ಕೆಲಸಗಾರರು, ನಡೆಯುತ್ತಿದ್ದ ಪುಸ್ತಕಗಳ ಮುದ್ರಣ ಮತ್ತು ಬೈಂಡಿಂಗ್ ಕೆಲಸ ತೋರಿಸಿ, ಇವರ ಹೊಟ್ಟೆ ತುಂಬಿಸುವುದು ನಮ್ಮ ಆದರ್ಶಗಳಲ್ಲ ಕಣೋ ಎಂದು ನುಡಿದಿದ್ದರು. ನಂತರ, ನಾಟ್ಯಮಂದಿರದ ಮುಂದೆ ಇದ್ದ ಕಿರಾಣಿ ಅಂಗಡಿ ಬಳಿ ಕರೆದೊಯ್ದು, ಅಲ್ಲಿನ ಜಗುಲಿಯ ಮೇಲೆ ಕಾಲು ಮೇಲೆ ಕಾಲು ಹಾಕಿಕೊಂಡು ಗೋಡೆಗೆ ಒರಗಿ ಕುಳಿತು, ಎಲೆ ಅಡಿಕೆ ಜಗಿಯುತ್ತಾ, ಪ್ರಕಾಶನ ಸಂಸ್ಥೆ ಮತ್ತು ನಿನಾಸಂ ಸಂಸ್ಥೆಯ ಉದ್ಯೋಗಿಗಳಿಗೆ ನೆಮ್ಮದಿ ಒದಗಿಸಲು, ನಮ್ಮೊಳಗೆ ಒಂದಿಷ್ಟು ವ್ಯವಹಾರಿಕ ಬುದ್ದಿಯೂ ಇರಬೇಕು ಜಗದೀಶಾ ಎಂದು ಶಾಂತವಾಗಿ ನುಡಿದಿದ್ದರು.
ಎಂಬತ್ತೈದರ ವೇಳೆಗೆ ಕರ್ನಾಟಕಕ್ಕೆ ಕಂಪ್ಯೂಟರ್, ಡಿ.ಟಿ.ಪಿ. ವ್ಯವಸ್ಥೆ ಬಂದಿತ್ತು. ಅವರಿಗೆ ಪ್ರಕಾಶನದ ಪುಸ್ತಕಗಳನ್ನು ಆಫ್ ಸೆಟ್ ಮುದ್ರಣ ಮಾಡಿಸುವ ಒಲವಿರಲಿಲ್ಲ. ನಾನು ಪದೇ ಪದೆ ಈ ಕುರಿತು ಹೇಳುತ್ತಿದ್ದೆ. ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ, ಅವರನ್ನು ಚಾಮರಾಜಪೇಟೆಯ ಲಕ್ಷ್ಮಿ ಮುದ್ರಣಾಲಯಕ್ಕೆ ಕರೆದುಕೊಂಡು ಹೋಗಿ ಹೊಸ ವ್ಯವಸ್ಥೆಯನ್ನು ತೋರಿಸಿದ್ದೆ. ನಿಮ್ಮ ಪ್ರೆಸ್ ಕೆಲಸಗಾರರಿಗೆ ಬೇರೆ ಕೆಲಸ ಕೊಡಿ ಸಾರ್, ಪುಸ್ತಕಗಳು ಅಚ್ಚುಕಟ್ಟಾಗಿ ಮುದ್ರಣವಾಗಲಿ ಎಂದು ಹೇಳಿದ್ದೆ. ಕೊನೆಗೂ ಸುಬ್ಬಣ್ಣ ಒಪ್ಪಿದರು. ನನಗೆ ನೆನಪಿರುವಂತೆ, ಯು.ಆರ್. ಅನಂತಮೂರ್ತಿಯವರ ಭವ ಎಂಬ ಕಾದಂಬರಿಯನ್ನು ಆಪ್ ಸೆಟ್ ಮುದ್ರಣ ಮಾಡಿಸಿದರು. ದೆಹಲಿಯಲ್ಲಿ ವಾಸವಾಗಿದ್ದ ಶಾ.ಬಾಲುರಾವ್ ಅವರನ್ನು ನನಗೆ ಪರಿಚಯ ಮಾಡಿಕೊಟ್ಟು, ಅವರ ಬ್ರೆಕ್ಟ್ ನ ಕವಿತೆಗಳ ಕೃತಿಯನ್ನು ಉಡುಗೊರೆಯಾಗಿ ಕೊಡಿಸಿದ್ದರು. ಶಾ.ಬಾಲುರಾವ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದವರು ಎಂಬುದು ಅಲ್ಲಿಯವರೆಗೂ ನನಗೆ ತಿಳಿದಿರಲಿಲ್ಲ
ನಾನು 1989 ರಲ್ಲಿ ವಿವಾಹವಾದ ನಂತರ ವಿದ್ಯಾಭ್ಯಾಸ ಮುಂದುವರಿಸುವ ಉದ್ದೇಶದಿಂದ, ಪತ್ನಿಯನ್ನು ಊರಿನಲ್ಲಿರಿಸಿ, ಮೈಸೂರು ವಿ.ವಿ.ಗೆ ಎಂ.ಎ. ಗೆ ಸೇರಿದ್ದೆ. ಸ್ನಾತಕೋತ್ತರ ಪದವಿ ಮುಗಿದ ನಂತರ ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಗೆ ಸೇರ್ಪಡೆಯಾಗಿದ್ದೆ. ಕೊಪ್ಪದ ನನ್ನ ಮನೆಗೆ ದೂರವಾಣಿ ಸಂಪರ್ಕವಿತ್ತು. 1993 ರ ಸೆಪ್ಟಂಬರ್ ತಿಂಗಳಲ್ಲಿ ಒಂದು ರಾತ್ರಿ ಫೋನ್ ಮಾಡಿದ ಸುಬ್ಬಣ್ಣನವರು, ಜಗದೀಶಾ, ನೀನು ಈ ವರ್ಷ ಅಕ್ಟೋಬರ್ ತಿಂಗಳ ನೀನಾಸಂ ಶಿಬಿರಕ್ಕೆ ಬಾರೋ, ದೆಹಲಿಯ ಆಶೀಷ್ ನಂದಿ ಮತ್ತು ಬೆಂಗಳೂರಿನ ಡಿ.ಆರ್.ನಾಗರಾಜ್ ಅವರ ವಿಶೇಷ ಉಪನ್ಯಾಸಗಳಿವೆ. ಶಾ.ಬಾಲುರಾವ್ ಕೂಡಾ ಪತ್ನಿಯ ಜೊತೆಗೆ ಹೆಗ್ಗೋಡಿಗೆ ಬರ್ತಿದ್ದಾರೆ. ಅನಂತಮೂರ್ತಿ ಕೂಡಾ ಒಂದು ವಾರ ಇಲ್ಲೇ ಇರ್ತಾರೆ’’ ಎಂದು ತಿಳಿಸಿದಾಗ, ಮರು ಮಾತಿಲ್ಲದೆ, ಆ ವರ್ಷ ನೀನಾಸಂ ಶಿಬಿರದಲ್ಲಿ ಭಾಗವಹಿಸಿದ್ದೆ.
ಆ ವೇಳೆಗಾಗಲೇ, ಅನಂತಮೂರ್ತಿಯವರು ಕೇರಳದ ತಿರುವನಂತಪುರಂ ಮಹಾತ್ಮಗಾಂಧಿ ವಿ.ವಿ. ಉಪಕುಲಪತಿಯಾಗಿ ಸೇವೆ ಸಲ್ಲಿಸಿ, ಮಣಿಪಾಲದ ಟಿ.ಎಂ. ಪೈ ಪ್ರತಿಷ್ಟಾನದ ಮಹಾತ್ಮಗಾಂಧಿ ಪೀಠದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ, ಮಣಿಪಾಲ್ ನಲ್ಲಿ ವಾಸವಾಗಿದ್ದರು. ಹೆಗ್ಗೋಡಿನಲ್ಲಿ ನನ್ನನ್ನು ನೋಡಿದಾಕ್ಷಣ, ಓಹೋ ನೀನು ಬಂದಿದ್ದೀಯಾ? ಎಂದು ಕೇಳಿದಾಗ, ಸುಬ್ಬಣ್ಣನವರು, ಅನಂತಮೂರ್ತಿಯವರಿಗೆ, ‘’ ಅನಂತು ನೀನು ಭವ ಕಾದಂಬರಿ ಬರೆಯಲು ನೇಪಾಳದ ಕಠ್ಮಂಡು ವರೆಗೆ ಹೋಗಬೇಕಿರಲಿಲ್ಲ. ಅಂತಹ ಕೆಟ್ಟ ಕಾದಂಬರಿಯನ್ನು ಹೆಗ್ಗೋಡಿನಲ್ಲಿ ಕುಳಿತು ಬರೆಯಬಹುದಿತ್ತು’’ ಎಂದು ಜಗದೀಶ ಹೇಳ್ತಾ ಇದ್ದ ಕಣೋ’’ ಎನ್ನುತ್ತಿದ್ದಂತೆ, ಅನಂತಮೂರ್ತಿಯವರ ಪತ್ನಿ ಎಸ್ತರ್ ಮೇಡಂ ಜೋರಾಗಿ ನಕ್ಕುಬಿಟ್ಟರು. ಅವರಿಗೂ ಕೂಡಾ ಆ ಕಾದಂಬರಿ ಇಷ್ಟವಾಗಿರಲಿಲ್ಲ.
ಸುಬ್ಬಣ್ಣನರ ಮಾತಿಗೆ ಮನಸಾರೆ ನಕ್ಕು ಅನಂತಮೂರ್ತಿಯವರು, ‘’ ಇವನು ಮಂಡ್ಯದ ನಡೆದಾಡುವ ನಾಡ ಬಾಂಬ್ ಕಣೋ, ಎನ್ನುತ್ತಾ, 1980 ರ ಗಿರಿಯವರ ಗತಿ ಸ್ಥಿತಿ ಕಾದಂಬರಿ ಕುರಿತು ಬೆಂಗಳೂರು ಸೆಂಟ್ರಿಲ್ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯುತ್ತಿದ್ದಾಗ, ನನ್ನ ಮೇಲೆ ಮತ್ತು ನವ್ಯ ಸಾಹಿತ್ಯದ ಮೇಲೆ ಕೋಗಾಡಿದ್ದ ಕಣೊ, ಎಂದು ಹೇಳುತ್ತಾ ನಗಾಡಿದ್ದರು. ಈ ಕಾರಣದಿಂದಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಕಟು.ಟೀಕೆ ಮತ್ತು ವಿಮರ್ಶೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದ ಕೆ.ವಿ.ಸುಬ್ಬಣ್ಣ ಮತ್ತು ಅನಂತಮೂರ್ತಿಯವರ ಬಗ್ಗೆ ಇಂದಿಗೂ ನನಗೆ ಅಪಾರ ಗೌರವವಿದೆ.
ಕೆ.ವಿ.ಸುಬ್ಬಣ್ಣನವರು ಪೋರ್ಡ್ ಪೌಂಡೇಶನ್ ವತಿಯಿಂದ ಹಣ ಪಡೆದ ಕಾರಣದಿಂದಾಗಿ 1980 ಮತ್ತು 90 ರ ದಶಕದಲ್ಲಿ ಬಂಡಾಯ ಸಾಹಿತಿಗಳಿಂದ ವ್ಯಾಪಕ ಟೀಕೆಯನ್ನು ಎದುರಿಸಿದರು. ಆದರೆ, ಅವರು ಆ ಹಣವನ್ನು ಮತ್ತು ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುವ ಫಿಲಿಪೈನ್ಸ್ ನ ಮ್ಯಾಗ್ಸಸೆ ಪ್ರಶಸ್ತಿಯ ಹಣವನ್ನು ನೀನಾಸಂ ಕೇಂದ್ರದ ಅಭಿವೃದ್ಧಿಗೆ ಬಳಸಿರುವುದನ್ನು ಕಣ್ಣಾರೆ ನೋಡಿದಾಗಲೇ ನಮಗೆ ಅರ್ಥವಾಗುವುದು. ಅಂತಹ ಬದ್ಧತೆಯ ಬದುಕು ಕೆ.ವಿ.ಸುಬ್ಬಣ್ಣನವರದು. ಅವರ ಅಭಿರುಚಿಗಳು ವಿಶೇಷವಾದವು ಸುಬ್ಬಣ್ಣನವರ ಸಂಗ್ರಹದಲ್ಲಿ ಐವತ್ತಕ್ಕೂ ಹೆಚ್ಚು ಜಗತ್ತಿನ ಶ್ರೇಷ್ಠ ಸಿನಿಮಾ ಸಂಗ್ರಹಗಳಿದ್ದವು. ನಾನು ಸತ್ಯಜಿತ್ ರಾಯ್ ಅವರ ಪಥೇರ್ ಪಾಂಚಾಲಿ ಹಾಗೂ ಇಂಗ್ಲೀಷ್ ಸಿನಿಮಾ ಬೈಸಿಕಲ್ ಥೀವ್ಸ್ ಸಿನಿಮಾಗಳನ್ನು ಅಲ್ಲಿಯೇ ನೋಡಿ ಪ್ರಭಾವಿತನಾಗಿದ್ದೆ.
ಶಿಬಿರದಲ್ಲಿ ಇದ್ದಾಗ, ನಾನು ಪ್ರತಿದಿನ ಸಂಜೆ ಮಾಂಸಹಾರ ಊಟಕ್ಕಾಗಿ. ಸಾಗರಕ್ಕೆ ಹೋಗುತ್ತಿದ್ದೆ ನಾಟಕ ಮತ್ತು ನೃತ್ಯ ಕುರಿತಂತೆ ಆಸಕ್ತಿ ಇರಲಿಲ್ಲ. ಒಂದು ದಿನ ಸುಬ್ಬಣ್ಣನವರು ನನ್ನನ್ನುಕರೆದು ಜಗದೀಶಾ, ನೀನು ಈ ದಿನ ಎಲ್ಲಿಯೂ ಹೋಗಬೇಡ. ತೇಜಸ್ವಿಯವರ ‘’ ಕಿರಗೂರಿನ ಗಯ್ಯಾಳಿಗಳು’’ ನಾಟಕವಿದೆ ಎಂದು ಹೇಳಿದಾಗ, ಆ ರಾತ್ರಿ ನೀನಾಸಂ ರಂಗಮಂದಿರದಲ್ಲಿ ನಾಟಕ ನೋಡಿ ವಿಸ್ಮಯಗೊಂಡೆ. ಒಂದು ಕೃತಿಯನ್ನು ಹೀಗೂ ನಾಟಕ ರೂಪಕ್ಕೆ ಇಳಿಸಬಹುದೆಂದು ಆ ದಿನ ನನಗೆ ಮನವರಿಕೆಯಾಯಿತು. ಇಂದಿಗೂ ನನಗೆ ಆಶ್ಚರ್ಯಕರ ಸಂಗತಿ ಎಂದರೆ, ತೇಜಸ್ವಿ, ಸುಬ್ಬಣ್ಣ ಇಬ್ಬರೂ ನಗರ ಸಂಸ್ಕೃತಿಯನ್ನು ತೊರೆದು, ತಾವಿದ್ದ ಸ್ಥಳವನ್ನೇ ಸೃಜಶೀಲತೆಯ ಕೇಂದ್ರವನ್ನಾಗಿ ಮಾಡಿಕೊಂಡದ್ದು ಸಾಮಾನ್ಯ ವಿಷಯವಲ್ಲ.
ತೇಜಸ್ವಿಯವರು ಮೂಡಿಗೆರೆಯ ತೋಟದಲ್ಲಿ ಕುಳಿತು, ಕರ್ವಾಲೋ, ಕಾಡು ಮತ್ತು ಕ್ರೌರ್ಯ ಜುಗಾರಿ ಕ್ರಾಸ್, ಚಿದಂಬರರಹಸ್ಯ, ಮಾಯಾಲೋಕ ಕಾದಂಬರಿಗಳು ಮತ್ತು ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಹುಲಿಯೂರಿನ ಸರಹದ್ದು ಕಥಾ ಸಂಕಲನಗಳು ಸೇರಿದಂತೆ ಅನುವಾದವೂ ಸೇರಿದಂತೆ ಹಲವಾರು ಕೃತಿಗಳನ್ನು ಬರೆದರು. ಕೆ.ವಿ.ಸುಬ್ಬಣ್ಣನವರು ಕುವೆಂಪುಗೆ ಪುಟ್ಟ ಕನ್ನಡಿ ಮತ್ತು ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಎರಡು ಮಹತ್ವದ ಕೃತಿಗಳ ಜೊತೆಗೆ ಅಸಂಖ್ಯಾತ ಸಂಸ್ಕೃತ ಮತ್ತು ಗ್ರೀಕ್, ನಾಟಕಗಳು ಸೇರಿದಂತೆ, ಜಗತ್ತಿನ ಅತ್ಯುತ್ತಮ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ನೀನಾಸಂ ಮೂಲಕ ತಿರುಗಾಟ ಕಾರ್ಯಕ್ರಮದ ಅಡಿಯಲ್ಲಿ ಇಡೀ ಕರ್ನಾಟಕಕ್ಕೆ ಪರಿಚಯಿಸಿದರು. ಇಂದು ಕರ್ನಾಟಕದಲ್ಲಿ ನೂರಾರು ರಂಗಭೂಮಿಯ ಕಲಾವಿದರು, ರಂಗಕರ್ಮಿಗಳು ಉದಯವಾಗಲು ಕೆ.ವಿ.ಸುಬ್ಬಣ್ಣ ಅವರ ನೀನಾಸಂ ಸಂಸ್ಥೆ ಕಾರಣವಾಗಿದೆ.
ಓರ್ವ ವ್ಯಕ್ತಿಯನ್ನು ಜಾತಿ ಅಥವಾ ಧರ್ಮದ ಗೂಟಕ್ಕೆ ಬಿಗಿದು ನೋಡುವುದರ ಬದಲು ಆ ವ್ಯಕ್ತಿಯ ಸೃಜನಶೀಲತೆಯನ್ನು ಮತ್ತು ಸಾಧನೆಯನ್ನು ಮುಕ್ತವಾಗಿ ವ್ಯಾಖ್ಯಾನಿಸುವ ಗುಣ ಇಂದಿನ ವರ್ತಮಾನದ ಜಗತ್ತಿಗೆ ತುರ್ತು ಅಗತ್ಯವಾಗಿದೆ. ನನ್ನ ಪಾಲಿಗೆ ಲಂಕೇಶ್, ತೇಜಸ್ವಿ, ಅನಂತಮೂರ್ತಿಯವರ ಜೊತೆಗೆ ಕೆ.ವಿ.ಸುಬ್ಬಣ್ಣ ಕೂಡಾ ಮುಖ್ಯರು. ಇವರೆಲ್ಲರಿಂದ ನನ್ನ ಬೌದ್ಧಿಕ ಪ್ರಜ್ಞೆ ವಿಸ್ತಾರಗೊಂಡಿದೆ. ಈಗ ಗಿರೀಶ್ ಕಾರ್ನಾರ್ಡ್ ಬಿ.ವಿ.ಕಾರಾಂತ ಮತ್ತು ಕೆ.ವಿ.ಸುಬ್ಬಣ್ಣನವರ ನಾಟಕಗಳ ಕುರಿತಾಗಿ ಮತ್ತು ರಂಗಭೂಮಿಗೆ ಅವರ ಕೊಡುಗೆ ಕುರಿತಾಗಿ ಗಂಭೀರ ಅಧ್ಯಯನ ನಡೆಯಬೇಕಿದೆ. ಕರ್ನಾಟಕದಲ್ಲಿರುವ ವಿ.ವಿ.ಗಳು ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಾಗಿರುವ ಕಾರಣ ಅವುಗಳಿಂದ ಏನನ್ನೂ ನಿರೀಕ್ಷಿಸಲಾಗದು.
ಜಗದೀಶ್ ಕೊಪ್ಪ, ಮೈಸೂರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ