ಮಂಗಳವಾರ, ಫೆಬ್ರವರಿ 18, 2025

ಕಾಂಗ್ರೇಸ್ ಗುಜರಿ ಅಂಗಡಿಯಲ್ಲಿ ಕೊಳೆಯುತ್ತಿರುವ ಪ್ರತಿಭಾವಂತರು.



ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಒಬ್ಬ ನಾಯಕನ ಅನಿವಾರ್ಯತೆ ತಾತ್ಕಾಲಿಕವೇ ಹೊರತು, ಆತನನ್ನು ಶಾಶ್ವತವಾಗಿ ಬಿಂಬಿಸಲಾಗದು. ಈ ದೇಶದ ದುರಂತವೆಂದರೆ ಒಬ್ಬ ರೈತ ಎನಿಸಿಕೊಂಡವನಿಗೆ ಕನಿಷ್ಠ ನೇಗಿಲು, ಗುದ್ದಲಿ ಹಿಡಿಯುವ ಅರ್ಹತೆ ಇರುತ್ತದೆ. ಅದೇ ರೀತಿಯಲ್ಲಿ ಚಮ್ಮಾರನಿಗೆ ಚರ್ಮದ ಹದ ಮಾಡುವ ಮತ್ತು ಪಾದರಕ್ಷೆಗಳನ್ನು ಹೊಲಿಯುವ ಅರ್ಹತೆ ಇರುತ್ತದೆ. ಆದರೆ, ಇಲ್ಲಿ ರಾಜಕಾರಣಿ ಮತ್ತು ಪತ್ರಕರ್ತ ಎನಿಸಿಕೊಂಡ ವ್ಯಕ್ತಿಗಳಿಗೆ ಯಾವ ಅರ್ಹತೆಯ ಅಗತ್ಯವಿಲ್ಲ. ಅಷ್ಟು ಮಾತ್ರವಲ್ಲದೆ ನಿವೃತ್ತಿಯ ಪ್ರಶ್ನೆಯೇ ಇಲ್ಲ. ಅವನ ಹೆಣ ಕೊಳೆಯದಿದ್ದರೆ, ಅದನ್ನು ಅಧಿಕಾರದ ಕುರ್ಚಿಯಲ್ಲಿಟ್ಟು ಅಧಿಕಾರ ನಡೆಸಲು ಇಂದಿನ ರಾಜಕಾರಣದ ಅಯೋಗ್ಯರು ಸಿದ್ಧರಿದ್ದಾರೆ.
ಇಂದಿನ ದಿನಗಳಲ್ಲಿ ಪಕ್ಷಗಳಲ್ಲಿ ಮತ್ತು ಅಧಿಕಾರದಲ್ಲಿ ಮಿಂಚುವುದು ಎಂದರೆ, ತಮ್ಮ ನಾಲಿಗೆಯನ್ನು ಹಳೆಯ ಎಕ್ಕಡಗಳಾಗಿ ಪರಿವರ್ತಿಸಿಕೊಂಡು ಪಕ್ಷದ ಶಿಸ್ತನ್ನು ಮೀರಿ ವರ್ತಿಸುವುದು ಎಂಬಂತಾಗಿದೆ. ಇದಕ್ಕೆ ಉದಾಹರಣೆ ಎಂದರೆ, ಈಗಿನ ಕಾಂಗ್ರೇಸ್ ಪಕ್ಷದ ಸಚಿವ ಕೆ.ಎನ್. ರಾಜಣ್ಣ ಮತ್ತು ಬಿ.ಜೆ.ಪಿ.ಯ ಬಸವನಗೌಡ ಯತ್ನಾಳ್ ಎಂಬ ಅಯೋಗ್ಯ ರಾಜಕಾರಣಿಗಳು ಸಾಕ್ಷಿಯಾಗಿದ್ದಾರೆ. ಇಂದಿನ ಸಿದ್ಧರಾಮಯ್ಯನವರ ಸರ್ಕಾರದ 34 ಸಚಿವರಲ್ಲಿ ಐದಾರು ಮಂದಿ ಹೊರತು ಪಡಿಸಿದರೆ, ಉಳಿದವರು ನಡೆದಾಡುವ ಶವಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು.
ಈಶ್ವರ ಖಂಡ್ರೆ, ಹೆಚ್.ಕೆ.ಪಾಟೀಲ್, , ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳಕರ. ಸಂತೋಷ್ ಲಾಡ್ ಇಂತಹವರು ತಮ್ಮ ನಡೆ ನುಡಿ ಮತ್ತು ವಹಿಸಿದ ಖಾತೆಗಳಲ್ಲಿ ಕ್ರಿಯಾಶೀಲರಾಗಿರುವುದನ್ನು ಹೊರತು ಪಡಿಸಿದರೆ, ಉಳಿದವರು ಅಧಿಕಾರಕ್ಕೆ ಜಾತಿ ಬೆಂಬಲವನ್ನು ನೆಚ್ಚಿ ಕೂತಿದ್ದಾರೆ. ಮುಖ್ಯಮಂತ್ರಿಯ ಹುದ್ದೆಗೆ ಹಾತೊರೆಯುವ ಮತ್ತು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಇಲ್ಲ ಸಲ್ಲದ ಹೇಳಿಕೆ ನೀಡುವ ಈ ದಂಡಪಿಂಡಗಳು ಒಮ್ಮೆ ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದಬೇಕು.
ಕರ್ನಾಟಕದ ಅತಿ ಕಡಿಮೆ ಇರುವ ಜಾತಿ ಸಮುದಾಯದಿಂದ ಬಂದ ದೇವರಾಜ ಅರಸು, ಧರ್ಮಸಿಂಗ್, ವೀರಪ್ಪಮೊಯ್ಲಿ ಇಂತಹವರು ಕಾಂಗ್ರೇಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾದರೆ, ರಾಮಕೃಷ್ಣ ಹೆಗ್ಡೆ ಜನತಾ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಇವರು ಜಾತಿ ಸಂಘಟನೆಯ ಬಲದಿಂದ ಮುಖ್ಯಮಂತ್ರಿಯಾದವರಲ್ಲ.
ತಾವು ಪ್ರತಿನಿಧಿಸುವ ಕ್ಷೇತ್ರದಿಂದ ಜಾತಿ ಮತ್ತು ಹಣ ಹಾಗೂ ತೋಳ್ಬಲದಿಂದ ಗೆದ್ದು ಬಂದವರೆಲ್ಲಾ ನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಲು ಅರ್ಹರಾಗುವುದಿಲ್ಲ. ಕೆ.ಎನ್.ರಾಜಣ್ಣ, ಜಿ.ಪರಮೇಶ್ವರ, ಕೆ.ಹೆಚ್. ಮುನಿಯಪ್ಪ ಇವರ ಸಾಧನೆ ಮತ್ತು ವಹಿಸಿದ ಖಾತೆಗಳಲ್ಲಿ ತೋರಿದ ನೈಪುಣ್ಯತೆಯನ್ನು ಯಾರಾದರೂ ಬಲ್ಲವರು ಹೇಳಲಿ ನೋಡೋಣ.
ಬಸ್ ಡ್ರೈವರ್ ಆಗಿದ್ದವನು ಕ್ಲೀನರ್ ಹುದ್ದೆ ಬಯಸಿದಂತೆ, ಏಳು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಕೆ.ಹೆಚ್. ಮುನಿಯಪ್ಪ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮಗೆ ಮತ್ತು ಪುತ್ರಿಗೆ ಟಿಕೇಟ್ ಪಡೆದುದಲ್ಲದೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಳಿಯನಿಗೆ ಕೋಲಾರ ಕ್ಷೇತ್ರದಿಂದ ಟಿಕೇಟ್ ಗಾಗಿ ಹೋರಾಟ ನಡೆಸಿದ್ದರು. ಇವರ ಯೋಗ್ಯತೆ ಏನೆಂಬುದನ್ನು ಅಲ್ಲಿನ ಮತದಾರರು ಜೆ.ಡಿ.ಎಸ್. ನ ಹೊಸ ಯುವಕ ಮಹೇಶ್ ಬಾಬುವನ್ನು ಆಯ್ಕೆ ಮಾಡುವುದರ ಮೂಲಕ ತೋರಿಸಿಕೊಟ್ಟರು.
ಕಾಂಗ್ರೇಸ್ ಪಕ್ಷದ ಕುರಿತಾಗಿ ಭಜನೆ ಮಾಡುವುದು ಚಿಂತನೆಯ ಲಕ್ಷಣ ಎಂದುಕೊಂಡಿರುವ ವೈಚಾರಿಕ ಹಾಗೂ ಪ್ರಗತಿಪರರು ಎಂಬ ಬೃಹಸ್ಪತಿಗಳಿಗೆ ಸಿದ್ಧರಾಮಯ್ಯನವರ ಸಚಿವ ಸಂಪುಟದಲ್ಲಿ ಕಾಂಗ್ರೇಸ್ ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಗೆ ಸಚಿವ ಸ್ಥಾನ ಏಕೆ ದೊರೆಯಲಿಲ್ಲ ಎಂಬುದು ಗೊತ್ತಿಲ್ಲವೆ? ಈಡಿಗ ಜಾತಿಯ ಕೋಟಾದಲ್ಲಿ ನೀಡಿದ ಸಚಿವ ಸ್ಥಾನಕ್ಕೆ ಹರಿಪ್ರಸಾದ್ ಅವರಿಗಿಂತ, ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪ ಹೇಗೆ ಅರ್ಹರಾದರು ಎಂಬುದರ ಬಗ್ಗೆ ಇವರು ಉತ್ತರಿಸಬೇಕಾಗಿದೆ ಮತ್ತು ಈವರೆಗೆ ಅತ್ಯಂತ ಕಳಪೆಯಾಗಿ ನಿರ್ವಹಿಸಿದ ಪ್ರಾಥಮಿಕ ಶಿಕ್ಷಣ ಖಾತೆಯ ಬಗ್ಗೆ ಇವರೆಲ್ಲರೂ ಯೋಚಿಸಬೇಕಾಗಿದೆ.
ಈಗಾಗಲೇ ಇಪ್ಪತ್ತು ತಿಂಗಳು ಮುಗಿಸಿದ ಸಿದ್ಧರಾಮಯ್ಯನವರ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಹೊರತು ಪಡಿಸಿದರೆ, ಅಭಿವೃದ್ಧಿ ಮತ್ತು ಇತರೆ ಯೋಜನೆಗಳಲ್ಲಿ ಸಾಧನೆ ಶೂನ್ಯ. ಇಂದಿನ ಮಾಧ್ಯಮಗಳು ಈಗಿನ ಸರ್ಕಾರದ ಸಚಿವರ ಖಾತೆಗಳ ಪ್ರಗತಿ ಕುರಿತು ಸರಣಿಯೋಪಾದಿಯಲ್ಲಿ ಸಮೀಕ್ಷಾ ವರದಿ ಪ್ರಕಟಿಸಿದರೆ, ಸಚಿವರೆಂಬ ಗುಜರಿ ಮಾಲುಗಳ ಬಣ್ಣ ಸಾರ್ವಜನಿಕವಾಗಿ ಬಯಲಾಗಬಲ್ಲದು. ಪ್ರಜಾವಾಣಿ ಬಳಗ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ.
ಅಯೋಗ್ಯರು ತುಂಬಿ ತುಳುಕಾಡುವ ಕಾಂಗ್ರೇಸ್ ಪಕ್ಷದಲ್ಲಿ ಬಿ.ಕೆ.ಹರಿಪ್ರಸಾದ್, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್ ಎಂಬ ನಿಷ್ಠಾವಂತ ಪ್ರತಿಬೆಗಳು ಅವಕಾಶ ವಂಚಿತರಾಗಿದ್ದಾರೆ. ಬಿ.ಎಲ್. ಶಂಕರ್ ಮತ್ತು ಕೋಲಾರ ಮೂಲದ ವಿ.ಆರ್. ಸುದರ್ಶನ್ ಅವರನ್ನು ಕಳೆದ ನಲವತ್ತು ವರ್ಷಗಳಿಂದ ತೀರಾ ಹತ್ತಿರದಿಂದ ನೋಡಿದವನು ನಾನು. ಅವರ ಓದು, ವಿದ್ವತ್ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಯ ನಡೆ ನುಡಿ ಹೇಗಿರಬೇಕೆಂದು ತೋರಿಸಿಕೊಟ್ಟವರು ಅವರು. ಇಬ್ಬರೂ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ ಹುದ್ದೆಯನ್ನು ಅತ್ಯಂತ ಘನತೆಯಿಂದ ನಿರ್ವಹಿಸಿದವರು. ಇವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಬೇಕು ಎಂಬ ಕನಿಷ್ಠ ಪ್ರಜ್ಞೆ ಕಾಂಗ್ರೇಸ್ ಗೆ ಇಲ್ಲವಾಗಿದೆ.
ಇದು ಕರ್ನಾಟಕ ಕಾಂಗ್ರೇಸ್ ಕಥೆಯಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿಯೂ ಇದೆ ಧಾರುಣ ಕಥೆ ಇದೆ. ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ಎಂಬ ಮುದಿ ಗೂಬೆಗಾಗಿ ಸಚಿನ್ ಪೈಲೆಟ್ ಎಂಬ ಯುವಕನ ಭವಿಷ್ಯವನ್ನು ಹಾಳುಗೆಡವಲಾಯಿತು. ಮಧ್ಯಪ್ರದೇಶದಲ್ಲಿ ದಿಗ್ವಿಜಯ ಸಿಂಗ್ ಮತ್ತು ಕಮಲನಾಥ್ ಎಂಬ ಗುಜರಿ ಸರಕುಗಳಿಗಾಗಿ ಜ್ಯೋತಿರಾಧ್ಯ ಸಿಂಧೆ ಭವಿಷ್ಯ ಮಸುಕಾದಾಗ, ಆ ಯುವಕ ಪಕ್ಷ ತ್ಯೆಜಿಸಿ ಬಿ.ಜೆ.ಪಿ. ಸೇರುವುದರೊಂದಿಗೆ ಕೇಂದ್ರ ಸಚಿವರಾದರು. ಒಂದು ಕಾಲದಲ್ಲಿ ಕಾಂಗ್ರೇಸ್ ಪಕ್ಷದ ರಾಜ್ಯವಾಗಿದ್ದ ಮಧ್ಯಪ್ರದೇಶವನ್ನು ಈ ಶತಮಾನದಲ್ಲಿ ಬಿ.ಜೆ.ಪಿ.ಯಿಂದ ವಶಪಡಿಸಿಕೊಳ್ಳುವುದು ಕಾಂಗ್ರೇಸ್ ಗೆ ಕಷ್ಟ.
ದೆಹಲಿ ಜವಹರಲಾಲ್ ವಿ.ವಿ.ಯ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಪ್ರಚಂಡ ವಾಗ್ಮಿಯಾಗಿ ಮೋದಿಯನ್ನು ಮತ್ತು ಬೆ.ಜೆ.ಪಿ. ಸರ್ಕಾರವನ್ನು ತರ್ಕಬದ್ಧವಾಗಿ ಮಾಧ್ಯಮಗಳ ಮುಂದೆ ತರಾಟೆಗೆ ತಗೆದುಕೊಳ್ಳುವ ಕನ್ಹಯ ಕುಮಾರ್ ನಂತಹ ಪ್ರತಿಭಾವಂತ ಯುವಕ ಇಂದು ರಾಜ್ಯಸಭೆಯಲ್ಲಿ ಇರಬೇಕಿತ್ತು. ಮೋದಿಯವರನ್ನು ನಿರ್ಧಾಕ್ಷಿಣ್ಯವಾಗಿ ಎದುರಿಸುವ ತಾಕತ್ತು ಇಂದು ಕಾಂಗ್ರೇಸ್ ಪಕ್ಷದಲ್ಲಿ ರಾಹುಲ್ ಮತ್ತು ಪ್ರಿಯಾಂಕ ವಾರ್ಧಗೆ ಮಾತ್ರ ಇದೆ. ಅವರಿಗೆ ಪರ್ಯಾಯವಾಗಿ ರಾಜ್ಯಸಭೆಯಲ್ಲಿ ಕನ್ಹಯ್ಯ ಕುಮಾರ್ ಎಂಬ ಬಿಹಾರ ಮೂಲದ ದಲಿತ ಹುಡುಗ ಇರಬೇಕಿತ್ತು ಎಂದು ಕಾಂಗ್ರೇಸ್ ಪಕ್ಷಕ್ಕೆ ಏಕೆ ಅನಿಸುತ್ತಿಲ್ಲ? ಆ ಯುವಕ ಇಂದು ದೆಹಲಿಯ ಹಿಂದುಳಿದ ಪ್ರದೇಶವೊಂದರ ಕೊಠಡಿಯೊಂದರಲ್ಲಿ ವಾಸ ಮಾಡುತ್ತಿದ್ದಾನೆ. ಭಾರತ ಜೋಡೋ ಯಾತ್ರೆಯ ನಂತರ ಪಕ್ಷ ಈತನನ್ನು ಮರೆತಂತಿದೆ.
ಒಂದು ಪಕ್ಷಕ್ಕೆ ಹಿನ್ನಡೆ ಅಥವಾ ಮುನ್ನಡೆ ಎಲ್ಲವೂ ತಾತ್ಕಾಲಿಕ. ಪಕ್ಷ ಬಲಿಷ್ಠವಾಗಬೇಕಾದರೆ ತಳಮಟ್ಟದ ಸಂಘಟನೆ ಮುಖ್ಯವಾಗಿರಬೇಕು. ಎಪ್ಪತ್ತು ತುಂಬಿದ ಮುದಿ ಹೋರಿಗಳನ್ನು ಕಸಾಯಿಖಾನೆಗೆ ಅಟ್ಟುವುದರ ಮೂಲಕ ಯುವ ಪ್ರತಿಭಾವಂತರಿಗೆ ಮತ್ತು ಸಜ್ಜನರಿಗೆ ಕಾಂಗ್ರೇಸ್ ಪಕ್ಷದಲ್ಲಿ ಸ್ಥಾನ ದೊರೆಯಬೇಕಿದೆ. ಇಂದಿನ ಯುವ ತಲೆಮಾರು ಕಾಂಗ್ರೇಸ್ ಪಕ್ಷದತ್ತ ಆಸಕ್ತಿ ತೋರುತ್ತಿಲ್ಲ. ಏಕೆಂದರೆ, ಅವರು ಪಕ್ಷ ಸೇರಿದರೆ, ಸಾಯುವತನಕ ಸಾಮ್ ( ವ್ಯಾಯಾಮ) ಮಾಡಬೇಕೇ ಹೊರತು ಭೀಮನಾಗಲು ಸಾಧ್ಯವಿಲ್ಲ.ಇಂದಿನ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ನಿಗಮ ಮಂಡಳಿಗೆ ಕಾರ್ಯಕರ್ತರನ್ನು ನೇಮಕ ಮಾಡಲು ಈವರೆಗೂ ಸಾಧ್ಯವಾಗಿಲ್ಲ.
ಕತ್ತೆ ಕಾಯುವ ವೃತ್ತಿಯ ಹೆಸರು ಈಗ ಕರ್ನಾಟಕ ರಾಜಕೀಯದಿಂದ ಬದಲಾಗಿದೆ. ಅದನ್ನು ಮುಖ್ಯಮಂತ್ರಿಗಳ ಸಲಹೆಗಾರರು ಎಂದು ಕರೆಯಲಾಗುತ್ತದೆ. ಹದಿನಾರು ಮಂದಿ ಸಲಹೆಗಾರರು ಏನನ್ನು ಕಿಸಿದು ಕಟ್ಟೆ ಹಾಕುತ್ತಿದ್ದಾರೆ ಎಂಬುದಕ್ಕೆ ಸಿದ್ಧರಾಮಯ್ಯನವರು ಉತ್ತರಿಸಬೇಕು. ಕಾಂಗ್ರೇಸ್ ಪಕ್ಷಕ್ಕೆ ದಲಿತರು, ಅಲ್ಪಸಂಖ್ಯಾರು, ಹಿಂದುಳಿದವರು ಆಸ್ತಿ ಎನ್ನುವ ಪರಿಕಲ್ಪನೆ ಈಗ ಬದಲಾಗಿದೆ. ದೆಹಲಿಯಲ್ಲಿ ನಡೆದ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ದಲಿತರು ಮತ್ತು ಮುಸ್ಲಿಂರು ಪ್ರಾಬಲ್ಯವಿದ್ದ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಅಮ್ ಆದ್ಮಿ ಪಕ್ಷ, ಹಾಗೂ ಒಂದನ್ನು ಬಿ.ಜೆ.ಪಿ. ವಶಪಡಿಸಿಕೊಂಡಿವೆ. ಎಪ್ಪತ್ತು ಸ್ಥಾನಗಳ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಗ್ರೇಸ್ ಪಕ್ಷ ಶೂನ್ಯ. ಶತಮಾನದ ಗುಜರಿ ಅಂಗಡಿಯನ್ನು ವಿಸರ್ಜಿಸಿ ಹೊಸದಾಗಿ ಪಕ್ಷವನ್ನು ಸಂಘಟಿಸಬೇಕಿದೆ
ದೇಶದ ಹಿಂದುಳಿದ ಹಾಗೂ ಅತ್ಯಂತ ಹೆಚ್ಚು ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗ ಇರುವ ಉತ್ತರ ಪ್ರದೇಶ ರಾಜ್ಯದಲ್ಲಿ ಮೇಲ್ಜಾತಿ ಸಂಘಟಕರಿಂದ ಕೂಡಿದ ಬಿ.ಜೆ.ಪಿ. ಹೇಗೆ ಒಂದು ದಶಕದಿಂದ ಅಧಿಕಾರದಲ್ಲಿದೆ ಹಾಗೂ ಗದ್ದುಗೆಯನ್ನು ಶಾಶ್ವತವಾಗಿರಿಸಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಕುರಿತು ಚಿಂತಿಸಬೇಕಿದೆ. ಇದಕ್ಕೆ ವೈಚಾರಿಕ ಚಿಂತನೆಯ ಹೆಸರಿನಲ್ಲಿ ತೌಡು ಕುಟ್ಟುವ ಅವಶ್ಯಕತೆಯಿಲ್ಲ, ತತ್ವ ಸಿದ್ಧಾಂತಗಳ ಬಗ್ಗೆ ನಮ್ಮ ವಿರೋಧವಿದ್ದರೂ ತಳ ಮಟ್ಟದ ಸಂಘಟನೆ ಹೇಗಿರಬೇಕು ಎಂಬುದನ್ನು ಸಂಘ ಪರಿವಾರದಿಂದ ಕಾಂಗ್ರೇಸ್ ಒಳಗೊಂಡು ಇತರೆ ಎಲ್ಲಾ ಪಕ್ಷಗಳು ಕಲಿಯಬೇಕಿದೆ.
ಎನ್.ಜಗದೀಶ್ ಕೊಪ್ಪ
See insights and ads
All reactions:
Giridhar Karkala, Srinivas Kakkilaya and 247 others

ಶುಕ್ರವಾರ, ಫೆಬ್ರವರಿ 14, 2025

ಟಿಪ್ಪು ವಿರೋಧಿಗಳು ಒಮ್ಮೆ ನೋಡಲೇ ಬೇಕಾದ ಸಿನಿಮಾ ‘’ ರಜಾಕಾರ್’’



.

ಅಂದಿನ ಹೈದರಾಬಾದ್ ಸಂಸ್ಥಾನಕ್ಕೆ ನಮ್ಮ ಕರ್ನಾಟಕದ ಗುಲ್ಬರ್ಗಾ, ಬೀದರ್, ರಾಯಚೂರು ಜಿಲ್ಲೆಗಳು ಸೇರಿದಂತೆ ಅನೇಕ ಭಾಗಗಳು ಸೇರಿದ್ದವು. ಕನ್ನಡ, ಮರಾಠಿ ಮತ್ತು ತೆಲುಗು ಭಾಷೆಯ ಜನರ ನಡುವೆ ಅಧಿಕಾರ ಮಾತ್ರ ಮುಸ್ಲಿಂ ದೊರೆಗಳ ಕೈಯಲ್ಲಿತ್ತು. ಹದಿನೈದನೇ ಶತಮಾನದಿಂದ ಬಿಜಾಪುರದ ಆದಿಲ್ ಶಾಹಿ, ಗುಲ್ಬರ್ಗದ ಬಹುಮನಿ ಸುಲ್ತಾನರು, ಗೊಲ್ಕಂಡಾದ ನಿಜಾಮರು ಹಾಗೂ ಮೊಗಲರ ಆಳ್ವಿಕೆಯಲ್ಲಿ ಅಲ್ಲಿನ ಜನತೆ ಆಳಿಸಿಕೊಂಡಿದ್ದಾರೆ. ಆದರೆ, ಇಪ್ಪತ್ತನೇ ಶತಮಾನದ ಅವಧಿಯಲ್ಲಿ ಹೈದರಾಬಾದ್ ನಿಜಾಮನಾಗಿದ್ದ ಮೀರ್ ಉಸ್ಮಾನ್ ಆಲಿಖಾನ್ ಆಳ್ವಿಕೆಯಲ್ಲಿ ಆತನು ಸ್ವತಂತ್ರ ಭಾರತಕ್ಕೆ ಸೇರಲು ಇಚ್ಚಿಸದೆ, ಹೈದರಾಬಾಧ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವಾಗಿಸಲು ನಡೆಸಿದ ಹೋರಾಟ ಅತ್ಯಂತ ಅಮಾನುಷವಾದುದು.
ದಕ್ಷಿಣ ಕರ್ನಾಟಕದ ಜನತೆಗೆ ರಜಾಕೋರ ದಾಳಿ, ಲೂಟಿ, ಕೊಲೆ ಮತ್ತು ಅತ್ಯಾಚಾರದ ಬಗ್ಗೆ ತಿಳಿದಿರುವುದು ಅತ್ಯಲ್ಪ. ರಜಾಕೋರರ ಹಾವಳಿ ಎಂದಷ್ಟೇ ಓದಿಕೊಂಡಿರುವ ನಾವು ಇಂದಿನ ಹೈದರಾಬಾದ್ ಕರ್ನಾಟಕದ ಜನತೆ 1947 ಆಗಸ್ಟ್ 15 ರಿಂದ 1948 ಸೆಪ್ಟಂಬರ್ 18 ರವರೆಗೆ ನಡೆಸಿರುವ ಹೋರಾಟ, ಜೀವ ತೆತ್ತ ಪರಿ ಇವೆಲ್ಲವೂ ಈ ಜಗತ್ತಿನ ಯಾವುದೇ ಹೋರಾಟಕ್ಕೆ ಮಿಗಿಲಾಗಿ ನಿಲ್ಲುವಂತಹದ್ದು. ಇಪ್ಪತ್ತೈದು ವರ್ಷಗಳ ಹಿಂದೆ ಉದಯ ಟಿ.ವಿ. ಪ್ರಾದೇಶಿಕ ಕಚೇರಿಯ ಮುಖ್ಯಸ್ಥನಾಗಿ ಹುಬ್ಬಳ್ಳಿಗೆ ಹೋದನಂತರ ಇಪ್ಪತ್ತುವರ್ಷಗಳ ಕಾಲ ಧಾರವಾಡದಲ್ಲಿ ನೆಲೆ ನಿಂತು ಕಾಯಾ, ವಾಚಾ, ಮನಸಾ, ಅಲ್ಲಿನ ಮಣ್ಣಿನ ಮಗನಂತೆ ಬದುಕಿದೆ.
ಬೀದರ್, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳು ನನ್ನ ವ್ಯಾಪ್ತಿಗೆ ಬರುತ್ತಿದ್ದ ಕಾರಣ, ಅತ್ತ ಕಡೆ ಹೋದಾಗ, ಅಲ್ಲಿನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಮಿತ್ರರ ಮಾತುಗಳಿಗೆ ಇಡೀ ರಾತ್ರಿ ಕಿವಿಗೊಟ್ಟು ಕೇಳುತ್ತಿದ್ದೆ, ಬೀದರ್ ಜಿಲ್ಲೆಯಲ್ಲಿ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರರಾಗಿದ್ದು ನಂತರ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದ ದೇವು ಪತ್ತಾರ್ ಹಾಗೂ ಬೀದರ್ ಜಿಲ್ಲೆಯ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದ ಹೃಷಿಕೇಶ್ ಬಹದ್ದೂರ್ ಹಾಗೂ ಉತ್ತರ ಕರ್ನಾಟಕದ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಮದನ್ ಮೋಹನ್, ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಮೋಹನ ಹೆಗ್ಡೆ ಇವರೆಲ್ಲರೂ ನನ್ನ ಪಾಲಿಗೆ ಮಾಹಿತಿ ಕಣಜವಾಗಿದ್ದರು.
ಇಪ್ಪತ್ತು ವರ್ಷದ ಹಿಂದೆ ಒಮ್ಮೆ ಕಾರ್ಯನಿಮಿತ್ತ ರಾಯಚೂರಿಗೆ ಹೋಗಿದ್ದಾಗ, ಅಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ದಸ್ತಗೀರ್ ಸಾಬ್ ದಿನ್ನಿ ಎಂಬ ಮಿತ್ರ (ಈಗ ಬಳ್ಳಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ) ನನ್ನನ್ನು ನನ್ನ ಪ್ರೀತಿಯ ಕವಿ ಜಂಬಣ್ಣ ಅಮರಚಿಂತ ಅವರ ಮನೆಗೆ ಕರೆದೊಯ್ದರು. ಅಂದಿನಿಂದ ಅತ್ತಕಡೆ ಹೋದಾಗಲೆಲ್ಲಾ ಅವರ ಬಾಯಲ್ಲಿ ಅವರು ತಮ್ಮ ತಂದೆ ಮತ್ತು ತಾಯಿ ಹಾಗೂ ಹಿರಿಯರಿಂದ ಕೇಳಿಸಿಕೊಂಡ ರಜಾಕೋರರ ದಾಳಿಯ ಕಥನವನ್ನು ನನಗೆ ವಿವರಿಸುತ್ತಿದ್ದರು. ಶಾಂತರಸ, ಚಂದ್ರಕಾಂತ ಕುಸನೂರು, ಜಂಬಣ್ಣ ಅಮರಚಿಂತ ಮೂವರು ಬಾಲ್ಯದಲ್ಲಿ ಉರ್ದು ಮಾಧ್ಯಮದಲ್ಲಿ ಓದಿದವರು. ಮೂವರನ್ನೂ ಭೇಟಿಯಾಗಿ ಅವರ ಬಾಲ್ಯದ ಕಥೆಗಳನ್ನು ಮತ್ತು ರಜಾಕೋರರ ಕ್ರೌರ್ಯದ ಕಥನವನ್ನು ಕೇಳಿದ ಭಾಗ್ಯ ನನ್ನದು. ಜಂಬಣ್ಣನವರು ತಮ್ಮ ಆಥ್ಮ ಕಥನವನ್ನು ಕಾದಂಬರಿಯ ರೂಪದಲ್ಲಿ ‘’‘’ಬೂಟುಗಾಲಿನ ಸದ್ದು’’ ಎಂಬ ಶೀರ್ಷಿಕೆಯಡಿ ಬರೆದಿದ್ದಾರೆ.
1947 ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಖಚಿತವಾಗುತ್ತಿದ್ದಂತೆ, ಹೈದರಾಬಾದ್ ನಿಜಾಮನು ತನ್ನ ಸೈನಿಕರಿಗೆ ಬ್ರಿಟೀಷರಿಂದ ತರಬೇತಿ ಕೊಡಿಸುವುದರ ಜೊತೆಗೆ ಹೇರಳವಾಗಿ ಹಣವನ್ನು ನೀಡಿ ಅವರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದನು. ಜೊತೆಗೆ ಹೈದರಾಬಾದ್ ಅನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸುವಂತೆ ಆಮೀಷವೊಡ್ಡಿದ್ದನು. 1947 ರ ಆಗಸ್ಟ್ 15 ರಂದು ಪಾಕಿಸ್ತಾನ ರಾಷ್ಟ್ರ ಘೋಷಣೆಯಾಗುತ್ತಿದ್ದಂತೆ, ಹೈದರಾಬಾದ್ ಸಂಸ್ಥಾನವು ತುರ್ಕಿಸ್ತಾನ ಎಂದು ತನ್ನದೇ ರೇಡಿಯೋ ಕೇಂದ್ರವಾದ ಡೆಕ್ಕನ್ ರೇಡಿಯೋ ಮೂಲಕ ಘೋಷಿಸಿಕೊಂಡನು. ಪಾಕಿಸ್ತಾನಕ್ಕೆ ಇಪ್ಪತ್ತುಕೋಟಿ ರೂಪಾಯಿ ಹಣವನ್ನು ನೀಡಿ, ಮಹಮದ್ ಜಿನ್ನಾ ಅವರ ಮೂಲಕ ಸ್ವತಂತ್ರ ರಾಷ್ಟ್ರ ಎಂಬ ಮಾನ್ಯತೆಯನ್ನು ಘೋಷಿಸಿ, ಇತರೆ ಮುಸ್ಲಿಂ ರಾಷ್ಟ್ರಗಳು ವಿಶ್ವಸಸಂಸ್ಥೆಯ ಮೇಲೆ ಒತ್ತಡ ತರುವಂತೆ ನೋಡಿಕೊಂಡನು.
ಹೈದರಾಬಾದ್ ನಿಜಾಮನ ಹುಚ್ಚಾಟಕ್ಕೆ ಆಸರೆಯಾಗಿ ನಿಂತದ್ದು ರಜಾಕೋರರ ಸಂಘಟನೆ. ಪರ್ಷಿಯನ್ ಭಾಷೆಯಲ್ಲಿ ರಜಾಕೋರ್ ಎಂದರೆ, ಸ್ವಯಂ ಸೇವಕರು ಎಂದರ್ಥ. 1938-40 ರ ನಡುವೆ ಕೌನ್ಸಿಲ್ ಆಫ್ ಮುಸ್ಲಿಂ ಯೂನಿಟಿ ಹೆಸರಿನಲ್ಲಿ ಬಹದ್ದೂರ್ ಯಾರ್ ಜಂಗ್ ಎಂಬುವವನ ನೇತೃತ್ವದಲ್ಲಿ ರೂಪುಗೊಂಡ ಈ ಸಂಘಟನೆಯು 1947 ರ ಸಮಯಕ್ಕೆ ಮಹಾರಾಷ್ಟ್ರದ ಲಾತೂರ್ ಮೂಲದ ಕಾಸಿಂ ರಿಜ್ವಿ ಎಂಬ ಹಲಾಲುಕೋರನ ನೇತೃತ್ವದಲ್ಲಿ ನಿಜಾಮನ ಪರ್ಯಾಯ ಸೇನೆಯಾಗಿ ಪರಿವರ್ತನೆಗೊಂಡಿತು. ನಿಜಾಮನ ಹೇರಳವಾದ ಸಂಪತ್ತಿನ ಬೆಂಬಲ, ಕುದುರೆ, ಪಿರಂಗಿಗಳು, ಬಂದೂಕಗಳು ರಜಾಕೋರರ ಕೈಗೆ ದೊರೆತವು.
ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ಭಾರತಕ್ಕೆ ಸೇರಿಸಬೇಕೆಂದು ಆಂಧ್ರ ಮಹಾಸಭಾ ಸಂಘಟನೆ, ಕಮ್ಯೂನಿಸ್ಟ್ ಕಾರ್ಯಕರ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಚಳುವಳಿಯನ್ನು ರೂಪಿಸಿದಾಗ, ನಿಜಾಮನು ಸ್ಥಳೀಯ ಜಮೀನ್ದಾರರುಗಳು ಮತ್ತು ರಜಾಕೋರರ ಸೇನೆಯ ಮೂಲಕ ಇಡೀ ಹೈದರಾಬಾದ್ ಸಂಸ್ಥಾನದಲ್ಲಿ ಹೋರಾಟಗಾರರ ರುಂಡಗಳನ್ನು ಚಂಡಾಡಿದನು. ಇಂದಿನ ಗುಲ್ಬರ್ಗಾ ಜಿಲ್ಲೆಯ 98 ಗ್ರಾಮಗಳ ಮೇಲೆ ದಾಳಿ ನಡೆಸಿ, 42 ಮಂದಿಯನ್ನು ಹತ್ಯೆಗೈದು, 36 ಮಹಿಳೆಯರ ಮೇಲೆ ಬಹಿರಂಗವಾಗಿ ಅತ್ಯಾಚಾರವೆಸಗಲಾಯಿತು. ಬೀದರ್ ಜಿಲ್ಲೆ 176 ಗ್ರಾಮಗಳ ಮೇಲೆ ದಾಳಿ ಹಾಗೂ 120 ಹೋರಾಟಗಾರ ಕೊಲೆ ಮತ್ತು 23 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರೆ, ರಾಯಚೂರು ಜಿಲ್ಲೆಯ 94 ಗ್ರಾಮಗಳ ಮೇಲೆ ದಾಳಿ ನಡೆಸಿ, 25 ಮಂದಿಯನ್ನು ಹತ್ಯೆಗೈದು, 63 ಮಂದಿ ಮಹಿಳೆಯರ ಮೇಲೆ ರಜಾಕೋರರು ಅತ್ಯಾಚಾರ ನಡೆಸಿದ್ದಾರೆ. ಕನ್ನಡದ ನೆಲೆದಲ್ಲಿ ಈ ಬಗೆಯ ಕ್ರೌರ್ಯವಾದರೆ, ಅಂದಿನ ಅವಿಭಜಿತ ಆಂಧ್ರದಲ್ಲಿ ಏನು ನಡೆದಿರಬಹುದು ಊಹಿಸಿ.
ರಜಾಕೋರರು ಬರುತ್ತಿದ್ದಾರೆ ಎಂದರೆ ಸಾಕು ಜನತೆ ಗ್ರಾಮಗಳನ್ನು ತೊರೆದು ಕಾಡು ಮತ್ತು ಹಳ್ಳ, ಕೊಳ್ಳಗಳಲ್ಲಿ ಅವಿತುಕೊಳ್ಳುತ್ತಿದ್ದರು. ಮನೆಯಲ್ಲಿದ್ದ ದವಸ, ಧಾನ್ಯ, ಜಾನುವಾರು, ಮೇಕೆ ಎಲ್ಲವೂ ರಜಾಕೋರರ ಪಾಲಾಗುತ್ತಿದ್ದವು. ನಿರಂತರ ಒಂದು ವರ್ಷ ನಡೆದ ಈ ಅಮಾನುಷ ಕೃತ್ಯಕ್ಕೆ ಅಂದಿನ ಕೇಂದ್ರ ಗೃಹಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಸ್ಪಂದಿಸದಿದ್ದರೆ, ದಕ್ಷಿಣ ಭಾರತದಲ್ಲಿ ಮತ್ತೊಂದು ತುರ್ಕಿಸ್ತಾನ ಸೃಷ್ಟಿಯಾಗುತ್ತಿತ್ತು. ಪ್ರಧಾನಿ ನೆಹರೂ ಅವರ ಮಾತನ್ನು ಮೀರಿ, ಅವರು ಕಾಶ್ಮೀರದಿಂದ ಸೇನೆಯನ್ನ ಕರೆಸಿ ಹೈದರಾಬಾದಿಗೆ ರವಾನಿಸಿದರು. ಏಕೆಂದರೆ, ಹೈದರಾಬಾದ್ ನಿಜಾಮನ ಪೋಲಿಸರು ಹಳ್ಳಿಗಳ ಹೋರಾಟಗಾರರ ಕೊಡಲಿ, ಮಚ್ಚು ಇವುಗಳನ್ನು ವಶಪಡಿಸಿಕೊಂಡು ಅವುಗಳನ್ನು ರಜಾಕೋರಿಗೆ ಒಪ್ಪಿಸುತ್ತಿದ್ದರು. ಈ ವಿಷಯ ತಿಳಿದ ವಲ್ಲಬಾಯ್ ಪಟೇಲ್ ಅವರು ಮೇಜರ್ ಜನರರ್ ಚೌಧುರಿ ನೇತೃತ್ವದಲ್ಲಿ ಸೇನೆಯನ್ನು ಕಳಹಿಸಿ, ನಿಜಾಮನಿಗೆ ಗೃಹಬಂಧನ ವಿಧಿಸಿದಾಗ, ಅಂತಿಮವಾಗಿ ನಿಜಾನಮನು ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸುವುದಾಗಿ 1948 ಸೆಪ್ಟಂಬರ್ 18 ರಂದು ರೇಡಿಯೋ ಮೂಲಕ ಅಂತಿಮವಾಗಿ ಘೋಷಿಸಿದನು.
ಆ ವೇಳೆಗಾಲೇ ತನ್ನ ಹೇರಳವಾದ ಸಂಪತ್ತನ್ನು ವಜ್ರ, ಚಿನ್ನ, ಹಣ ಎಲ್ಲವನ್ನೂ ಇಂಗ್ಲೇಂಡ್ ಗೆ ಸಾಗಿಸಿದ್ದನು. ಕಾಸಿಂ ರಿಜ್ವಿ ನಿಜಾಮನಿಂದ ಹಣ ಪಡೆದು ಪಾಕಿಸ್ತಾನದ ಕರಾಚಿಗೆ ಪಲಾಯನಗೈದನು. ಆದರೆ, ಈ ನೆಲದಲ್ಲಿ ನೆಮ್ಮದಿಯ ಸ್ವತಂತ್ರ್ಯದ ಬದುಕಿಗೆ ನೂರಾರು ಪುರುಷರು, ಮಹಿಳೆಯರು ಪ್ರಾಣತೆತ್ತರು. ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ನಾಗಮ್ಮ, ಹಟ್ಟಿ ಗುರುಬಸವ್ವ ಈ ಮಹಿಳಾಮಣಿಗಳು ತಂಡವನ್ನು ಕಟ್ಟಿಕೊಂಡು ಹೋರಾಡಿದ ಪರಿಯು ಒಂದು ಕಾದಂಬರಿಯಾಗಬಲ್ಲದು.
ಕಳೆದ ವರ್ಷ ಯಾಟ ಸತ್ಯನಾರಾಯಣ ಎಂಬ ವ್ಯಕ್ತಿ ಕಥೆ, ಚಿತ್ರಕಥೆ ಬರೆದು ರಜಾಕೋರ್ ಎಂಬ ಹೆಸರಿನಲ್ಲಿ ಹಿಂದಿ, ತೆಲುಗು, ತಮಿಳುಭಾಷೆಯನ್ನು ಚಿತ್ರ ನಿರ್ದೇಶನ ಮಾಡಿದ್ದಾನೆ. ಇತಿಹಾಸಕ್ಕೆ ನಿಷ್ಠನಾಗಿದ್ದರೂ ಸಹ ಬಲಪಂಥೀಯ ಧೋರಣೆಯ ಹಿನ್ನಲೆಯಲ್ಲಿ ರಜಾಕೋರರ ಹಿಂಸೆಯನ್ನು ವೈಭವೀಕರಿಸಿದ್ದಾನೆ ಎಂದು ನನಗೆ ಅನಿಸಿತು.
ಪ್ರಥಮ ಪ್ರಯತ್ನದಲ್ಲಿ ಆತ ಇಂತಹ ಸಿನಿಮಾ ಮಾಡುಬಹುದೆ? ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾನೆ. ಸರ್ದಾರ್ ವಲ್ಲಬಾಯ್ ಪಟೇಲ್ ಪಾತ್ರದಲ್ಲಿತೇಜ್ ಸಪ್ರು ಮತ್ತು ಕಾಸಿಂ ರಿಜ್ವಿ ಪಾತ್ರದಲ್ಲಿ ರಾಜು ಅರ್ಜುನ್ ಗಮನ ಸೆಳೆಯುತ್ತಾರೆ. ಟಿಪ್ಪು ಸುಲ್ತಾನ್ ಕುರಿತು ವಿಷ ಕಕ್ಕುವ ವಿಷ ಜಂತುಗಳು ಒಮ್ಮೆ ಈ ಸಿನಿಮಾವನ್ನು ಒಮ್ಮೆ ನೋಡಬೇಕು. ನಿಜಾಮ ಮತ್ತು ಟಿಪ್ಪುವಿನ ವ್ಯಕ್ತಿತ್ವದ ಅರಿವಾಗುತ್ತದೆ.
ಎನ್.ಜಗದೀಶ್ ಕೊಪ್ಪ.


.

ಗುರುವಾರ, ಫೆಬ್ರವರಿ 6, 2025

ಕನ್ನಡ ಸಾಹಿತ್ಯ ಚರಿತ್ರೆ ಕುರಿತಾದ ಅನನ್ಯ ಕೃತಿಯೊಂದರ ಕುರಿತು.



ಕನ್ನಡ ಸಾಹಿತ್ಯದ ಪ್ರಾಧ್ಯಾಪಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ ಹಾಗೂ ಕುವೆಂಪು ಸಾಹಿತ್ಯ ಕುರಿತಾಗಿ ಆಳವಾದ ಅಧ್ಯಯನ ಮಾಡಿರುವ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ ಹಾಗೂ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಅವರು ಇತ್ತೀಚೆಗೆ ಬರೆದಿರುವ ‘’ಕನ್ನಡ ಸಾಹಿತ್ಯ, ಪರಂಪರೆ ಮತ್ತು ವರ್ತಮಾನ’’ ಎಂಬ ಕೃತಿಯು ಕನ್ನಡ ಸಾಹಿತ್ಯದ ಇತಿಹಾಸ ಕುರಿತು ಸಂಕ್ಷಿಪ್ತ ಒಳನೋಟವನ್ನು ನೀಡುವ ಮಹತ್ವದ ಕೃತಿ.

ವರ್ತಮಾನದಲ್ಲಿ ಕನ್ನಡ ಭಾಷಾ ಉಪನ್ಯಾಸ ಮತ್ತು ಪ್ರಾದ್ಯಾಪಕ ವೃತಿಯಲ್ಲಿ ಮೂರು ನಾಲ್ಕು ದಶಕ ಕಾಲವನ್ನು ಸೆವೆಸಿರುವ ಬಹುತೇಕ ಮಹನೀಯರು ( ಎಲ್ಲರೂ ಅಲ್ಲ) ಕನ್ನಡ ಭಾಷೆ ಮತ್ತು ಅದರ ಘನವಾದ ಇತಿಹಾಸವನ್ನು ಆಧುನಿಕ ತಲೆಮಾರಿಗೆ ತಲುಪಿವುದನ್ನು ಮರೆತು, ಬಾಢೂಟವನ್ನು ಒಳಗೊಂಡಂತೆ ಇಡೀ ಜಗತ್ತಿನ ಸಮಸ್ಯೆಗಳಿಗೆ ಉತ್ತರ ಹುಡುಕುತ್ತಿದ್ದಾರೆ. ಇಂತಹವರು ಒಮ್ಮೆ ನರಹಳ್ಳಿ ಅವರ ಈ ಕೃತಿಯನ್ನು ಗಮನಿಸಬೇಕು. ವರ್ತಮಾನ ಜಗತ್ತಿಗೆ ಬಾಡೂಟ ಸಂಸ್ಕೃತಿ ಮುಖ್ಯವೋ, ಜ್ಞಾನ ಸಂಸ್ಕೃತಿ ಮುಖ್ಯವೋ ಎಂಬುದು ಅರ್ಥವಾಗುತ್ತದೆ.

ನಾಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಅಭಿನವ ಪ್ರಕಾಶನ ಈವರೆಗೆ ಪ್ರಕಟಿಸಿರುವ ಮಹತ್ವದ ಕೃತಿಗಳಲ್ಲಿ ಸಾವಿರ ಪ್ರಕಟಣೆಯಾಗಿ ಈ ಕೃತಿಯು ಪ್ರಕಟವಾಗಿದೆ. 182 ಪುಟಗಳ ಈ ಕೃತಿಯಲ್ಲಿ ನರಹಳ್ಳಿ ಸರ್ ಅವರು ಹಲ್ಮಿಡಿ ಶಾಸನ, ಕವಿರಾಜ ಮಾರ್ಗ, ವಡ್ಡರಾಧನೆ, ಪಂಪ, ನಾಗವರ್ಮ, ದುರ್ಗಸಿಂಹ, ಬಸವಣ್ಣ, ಅಲ್ಲಮ, ಅಕ್ಕಮಹಾಧೇವಿ, ಹರಿಹರ, ರಾಘವಾಂಕ, ಜನ್ನ, ಕುಮಾರ ವ್ಯಾಸ, ಕನಕದಾಸ, ರತ್ನಾಖರವರ್ಣಿ, ಸರ್ವಜ್ಞ, ಲಕ್ಷ್ಮೀಶ ಮತ್ತು ಮುದ್ದಣ್ಣ ಹೀಗೆ ನಮ್ಮ ಕನ್ನಡ ಸಾಹಿತ್ಯವನ್ನು ಉತ್ತುಂಗ ಶಿಖರೇಕ್ಕಿರಿಸಿದ ಮಹಾನ್ ರತ್ನಗಳ ಸೃಜನಶೀಲತೆಯನ್ನು ಇಲ್ಲಿ ಹಲವು ಆಯಾಮಗಳಿಂದ ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ರನ್ನ ದಾಖಲಾಗದೆ ಉಳಿದದ್ದು ಈ ಕೃತಿಯ ಒಂದು ಸಣ್ಣ ಕೊರತೆ. ಏಕೆಂದರೆ, ಬಿ.ಎಂ.ಶ್ರೀ ಅವರ ರನ್ನನ ಗದಾಯುದ್ಧ ನಾಟಕ ಮೂಲಕ ನನ್ನಂತಹವನಿಗೆ ರನ್ನ ಪರಿಚಯವಾದವನು. ಆತನ ಕುರಿತಾಗಿ ನನಗಿನ್ನೂ ಮೋಹ ಇಂಗಿಲ್ಲ. ಐವತ್ತು ವರ್ಷಗಳ ಹಿಂದೆ ಪಿ.ಯು.ಸಿ.ಯಲ್ಲಿ ಓದಿದ ದುರ್ಯೋಧನನ ವಿಲಾಪಂ ಭಾಗದ ಪ್ರತಿ ಸಾಲುಗಳನ್ನು ಮರೆತಿಲ್ಲ.

ಏಕೆಂದರೆ, ಕನ್ನಡ ಸಾಹಿತ್ಯವನ್ನು ಅಧಿಕೃತವಾಗಿ ಓದಲಾಗದೆ, ಬೇರೆ ವಿಷಯವನ್ನು ಆಯ್ಕೆ ಮಾಡಿಕೊಂಡ ನನ್ನಂತಹವರಿಗೆ ಇಂದಿಗೂ ಸಹ ಹಳಗನ್ನಡ ಎಂದರೆ ಕಬ್ಬಿಣದ ಕಡಲೆ ಎಂಬ ಭಾವನೆ ನೆಲೆಯೂರಿದೆ. ಈ ಕಾರಣಕ್ಕಾಗಿ ನನ್ನಂತಹವರು ಪಂಪ, ರನ್ನ, ಜನ್ನ, ಇಂತಹವರನ್ನು ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ, ತೀನಂಶ್ರೀ, ಡಿ.ಎಲ್. ನರಸಿಂಹಚಾರ್, ಮುಂತಾದ ಸಾಹಿತ್ಯ ದಿಗ್ಗಜರ ಮೂಲಕ ಸರಳ ಕನ್ನಡದಲ್ಲಿ ಓದಲು ಸಾಧ್ಯವಾಯಿತು ಮತ್ತು ಪಂಪ ಮಹಾಭಾರತ, ರನ್ನನ ಗಧಾಯುದ್ಧ, ಜನ್ನನ ಯಶೋಧರ ಚರಿತೆ, ರತ್ನಾಕರನ ಭರತೇಶ ವೈಭವ ಈ ಎಲ್ಲಾ ಕೃತಿಗಳು ಮತ್ತು ಕೃತಿಕಾರ ದಾರ್ಶನಿಕ ಒಳನೋಟಗಳು ನಮಗೆ ದಕ್ಕಿದವು. ಈ ಕೃತಿಯ ಬರೆವಣಿಗಾಗಿ ಅವರು ಒಟ್ಟು 114 ಕೃತಿಗಳನ್ನು ಅವಲೋಕಿಸಿದ್ದಾರೆ. ಅವರ ಅಧ್ಯನಯದ ಶ್ರದ್ಧೆ ಮತ್ತು ತಲ್ಲೀನತೆ ಎಂತಹದ್ದು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.

ಕಳೆದ ಡಿಸಂಬರ್ ನಲ್ಲಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ ಕೃತಿಯನ್ನ ನಲವತ್ತು ದಿನಗಳ ಕಾಲ ನಿಧಾನವಾಗಿ ಓದಿ ಜೀರ್ಣಿಸಿಕೊಂಡೆ. ಇಲ್ಲಿನ ಪ್ರಾಚೀನ ಕೃತಿಕಾರರ ಕುರಿತಾಗಿ ನರಹಳ್ಳಿಯವರು ಅಪರೂಪದ ಒಳನೋಟಗಳನ್ನು ನೀಡುತ್ತಾ, ಕನ್ನಡ ವಿಮರ್ಶಾ ಲೋಕದ ತಜ್ಞರು ನೀಡಿರುವ ವ್ಯಾಖ್ಯಾನವನ್ನು ಸಹ ಪ್ರಸ್ತಾಪಿಸಿದ್ದಾರೆ. ಕುವೆಂಪು, ಜಿ.ಎಸ್.ಎಸ್, ಜಿ.ಹೆಚ್.ನಾಯಕ, ಕುರ್ತುಕೋಟಿ, ಅಮೂರ್, ಡಿ.ಆರ್. ನಾಗರಾಜ ಹೀಗೆ ಹಲವರ ಚಂತನೆಗಳು ಸಹ ಈ ಕೃತಿಯಲ್ಲಿ ನಮಗೆ ದೊರೆಯುತ್ತವೆ. ವಚನಕಾರರ ಬಗ್ಗೆ ಬರೆಯುವಾಗ, ಪ.ಗು.ಹಳಖಟ್ಟಿ, ಎಲ್.ಬಸವರಾಜು ಮುಂತಾದವರ ಚಿಂತನೆಯೂ ಸಹ ಒಳಗೊಂಡಿದೆ. ಕುವೆಂಪು ಕುರಿತಾದ ಡಾ.ನರಹಳ್ಳಿ ಅವರ ಚಿಂತನೆಗಳಿಂದ ಪ್ರಭಾವಿತನಾದ ನಾನು ಅವರ ಕೃತಿಗಳ ಶ್ರದ್ಧಾವಂತ ಓದುಗರಲ್ಲಿ ನಾನೂ ಒಬ್ಬ. ಈ ಕೃತಿಗಾಗಿ ಅವರು ಅಧ್ಯಯನ ಮಾಡಿದ 114 ಕೃತಿಗಳ ವಿವರ ನೀಡಿದ್ದಾರೆ. ಅಷ್ಟು ಸಾಕು. ಅವರ ಬದ್ಧತೆ ಮತ್ತು ಶ್ರದ್ಧೆ ನಮಗೆ ಅರಿವಾಗುತ್ತದೆ.

ಕನ್ನಡ ಸಾಹಿತ್ಯ ಪರಂಪರೆಯ ಕುರಿತಾಗಿ ತಮ್ಮ ಪ್ರಸ್ತಾವನೆಯಲ್ಲಿ ಲೇಖಕರು ನವ್ಯಕಾಲದ ನಂಬಿಕೆಯನ್ನು ಪ್ರಸ್ತಾಪಿಸಿದ್ದಾರೆ. ಹೌದು 1970 ರ ದಶಕದಲ್ಲಿ ನವ್ಯರು ಪ್ರಾಚೀನ ಸಾಹಿತ್ಯದ ಓದಿನ ಅವಶ್ಯಕತೆ ಇಲ್ಲ ಎಂದು ನಂಬಿದ್ದರು. ಆದರೆ, ನರಹಳ್ಳಿಯವರು ಬರೆದಿರುವ ‘’ ವಾಗ್ವಾದ ಪರಂಪರೆಯ ವಾರಸುದಾರರು ನಾವು’’ ಎಂಬ ಅಧ್ಯಾಯವು ಏಕಕಾಲಕ್ಕೆ ನಮಗೆ ಲೇಖಕರ ಚಿಂತನೆಯೊಂದಿಗೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಪರಿಚಯ ಮಾಡಿಕೊಡುತ್ತದೆ. ಸಾಹಿತ್ಯ ಪರಂಪರೆ ಏಕೆ ಮುಖ್ಯ ಎಂಬುದಕ್ಕೆ ಮುದ್ದಣ್ಣನ ಮುದ್ದಣ್ಣ ಮನೋರಮೆಯ ಪ್ರಸಂಗದ ಬರೆಯುತ್ತಾ, ಆತನ ಕಾಲಘಟ್ಟದಲ್ಲಿ ಬದುಕಿದ್ದ ಸೇಡಿಯಾಪು ಕೃಷ್ಣಭಟ್ಟರು, ಪಂಜೆ ಮಂಗೇಶರಾಯರು, ಗೋವಿಂದ ಪೈ, ಗುಲ್ವಾಡಿ ವೆಂಖಟರಾಯರು, ಮುಂತಾದ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಚೇತನಗಳನ್ನು ಸ್ಮರಿಸುವುದರ ಮೂಲಕ ಅವರ ಕೃತಿಗಳ ಕುರಿತಾಗಿ ಸ್ಮರಿಸಿದ್ದಾರೆ.

ಈ ಕೃತಿಯಲ್ಲಿ ಶಿವಕೋಟ್ಯಾಚಾರ್ಯನ ವಡ್ಡರಾಧನೆ ಮತ್ತು ರಾಘವಾಂಕನ ಹರಿಶ್ಚಂದ್ರ ಕಾವ್ಯದ ಬರೆಯುವಾಗ ನರಹಳ್ಳಿ ಬಾಲಸುಹ್ಮಣ್ಯ ಅವರು ನಮಗೆ ಅನೇಕ ಒಳನೋಟಗಳನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದ ಇತಿಹಾಸದ ವಿವಿಧ ಮಗ್ಗುಲುಗಳನ್ನು ನಮಗೆ ಪರಿಚಯಿಸಿದ್ದಾರೆ. ಹದಿನೈದನೇ ಶತಮಾನದಲ್ಲಿ ರಾಘವಾಂಕನು ತನ್ನ ಸೋದರ ಮಾವ ಹರಿಹರನಿಂಗಿಂತ ಭಿನ್ನ ಪ್ರಕಾರದಲ್ಲಿ ಕಾವ್ಯ ಸೃಷ್ಟಿಗೆ ತೊಡಗಿಕೊಂಡ ಪರಿಯನ್ನು ದಾಖಲಿಸುವುದರ ಜೊತೆಗೆ ಹರಿಶ್ಚಂದ್ರ ಕಾವ್ಯದ ಬರೆಯುತ್ತಾ ಲೇಖಕರು
‘’ ಹರಿಶ್ಚಂದ್ರಕಾವ್ಯ ಅನೇಕ ದೃಷ್ಟಿಗಳಿಂದ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ವೀರೇಶ ಚರಿತೆಯಂತೆ ಇದು ಪುರಾಣದ ಅವತಾರ ಕಲ್ಪಿತ ಕಥೆಯಲ್ಲ, ಸೋಮನಾಥ ಚರಿತೆಯಂತೆ ವೀರ ಮಾಹೇಶ್ವರ ನಿಷ್ಟೆಯನ್ನು ಪ್ರದರ್ಶಿಸುವ ಕಥಾನಕವೂ ಅಲ್ಲ, ಸಿದ್ಧರಾಮ ಪುರಾಣದಂತೆ ಶಿವನ ಅಂಶಾವಾತಾರ ಭೂಲೋಕದಲ್ಲಿ ಶರಣನಾಗಿ ಜನಿಸಿ ಶೈವಧರ್ಮವನ್ನು ಪ್ರತಿಪಾದನೆ ಮಾಢಿದ ಕಥೆಯೂ ಅಲ್ಲ, ಯಾವ ಮತ ಮತ್ತು ಜಾತಿಗಳ ಹಂಗಿಲ್ಲದೆ ಸಾರ್ವಕಾಲಿಕ ಮೌಲ್ಯವೊಂದನ್ನು ಅಂದರೆ, ಸತ್ಯವನ್ನು ಪ್ರತಿಪಾದಿಸುವ ಕನ್ನಡದ ಮೊದಲ ಕೃತಿ ಸತ್ಯಹರಿಶ್ಚಂದ್ರ’’ ಎಂದು ಹೇಳುವುದರ ಮೂಲಕ ಅನ್ಯವಾದ ಒಳನೋಟವನ್ನು ಓದುಗರ ಮುಂದೆ ಇರಿಸಿದ್ದಾರೆ.

ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ ಎಂಬ ಈ ಕೃತಿಯು ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಅಧ್ಯಾಪಕರಿಗೆ ಕೈ ದೀವಿಗೆ ರೂಪದಲ್ಲಿದೆ. ಕನ್ನಡದ ಸಾಹಿತ್ಯ ಮತ್ತು ಕೃತಿಗಳನ್ನು ಪ್ರತಿ ದಶಕಕ್ಕೆ ಒಮ್ಮೆ ವಿಮರ್ಶೆಯ ಒರೆಗಲ್ಲಿಗೆ ಹಚ್ಚಬೇಕಿದೆ. ಅಂತಹ ಸನ್ನಿವೇಶದಲ್ಲಿ ಮಾತ್ರ ನಮಗೆ ಹೊಸ ಹೊಸ ದೃಷ್ಟಿಕೋನ ಲಭ್ಯವಾಗಬಲ್ಲದು. ಇಂದು ಕನ್ನಡದ ಕಾವ್ಯ ಲೋಕದಲ್ಲಿ ತೊಡಗಿಸಿಕೊಂಡಿರುವ ಎಷ್ಟು ಮಂದಿ ಡಾ.ಕೆಪ್ರಭುಶಂಕರ ಅವರ ‘’ ಭಾವಗೀತ’’ ಮತ್ತು ಡಾ.ಜಿ.ಎಸ್.ಶಿವರುದ್ರಪ್ಪನವರ ‘’ ಸೌಂಧರ್ಯ ಸಮೀಕ್ಷೆ’’ ಓದಿದ್ದಾರೆ ಎಂಬುದು ಗೊತ್ತಿಲ್ಲ. ಕುವೆಂಪು ಅವರ ಮಾರ್ಗದರ್ಶನದಲ್ಲಿ ಅವರ ಹೆಮ್ಮೆಯ ಶಿಷ್ಯರ ಪಿ,ಹೆಚ್.ಡಿ. ಪ್ರಬಂಧ ರೂಪದ ಕೃತಿಗಳು ಇವು. ಇಂದಿಗೂ ಸಹ ಕಾವ್ಯದ ಸೃಷ್ಟಿಗೆ ಮತ್ತು ಸೃಜನಶೀಲತೆಗೆ ಮಾರ್ಗದರ್ಶಕ ಕೃತಿಗಳಾಗಿವೆ. ಅಲ್ಲಮಪ್ರಭು ಹೇಳಿದ ಹಾಗೆ ‘’ ಹಿಂದಣ ಹೆಜ್ಜೆಯ ಕಂಡನಲ್ಲದೆ, ನಿಂದಣ ಹೆಜ್ಜೆಯನರಿಯಬಾರದು’’ ಎಂಬ ಮಾತಿನ ಹಿನ್ನಲೆಯಲ್ಲಿ ಡಾ. ನರಹಳ್ಳಿಯವರು ಕನ್ನಡಿಗರ ಮುಂದೆ ಇಂತಹ ಅಪರೂಪದ ಕೃತಿಯನ್ನು ಇರಿಸಿದ್ದಾರೆ.

ಧನ್ಯವಾದಗಳು ಸರ್. ಖಾಲಿಯಾಗಿದ್ದ ನಾನು ನಿಮ್ಮ ಚಿಂತನೆಗಳಿಂದ ಮತ್ತೊಮ್ಮೆ ಮೈದುಂಬುವಂತಾಯಿತು.

ಎನ್.ಜಗದೀಶ್ ಕೊಪ್ಪ. 

ಭಾನುವಾರ, ಫೆಬ್ರವರಿ 2, 2025

ಭಾರತದ ಪುರಾತನ ದೇವಾಲಯಗಳ ನೈಜ ಇತಿಹಾಸ



ಭಾರತದ ಇತಿಹಾಸದ ಅಧ್ಯಯನ ಮತ್ತು ಗ್ರಹಿಕೆಗೆ ಪ್ರತಿಯೊಬ್ಬ ಸಂಶೋಧಕನಿಗೆ ಹಾಗೂ ಓದುಗನಿಗೆ ಮುಕ್ತವಾದ ಮನಸ್ಸು ಇದ್ದರೆ ಮಾತ್ರ ನೈಜ ಇತಿಹಾಸವನ್ನು ಗ್ರಹಿಸಲು ಸಾಧ್ಯ ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ಪುನರ್ ವ್ಯಾಖ್ಯಾನಿಸುವ ನೆಪದಲ್ಲಿ ಹುಸಿ ಇತಿಹಾಸಕಾರರು ಆಧುನಿಕ ಭಾರತದ ಯುವ ತಲೆಮಾರಿನ ಎದೆಗೆ ವಿಷವನ್ನು ತುಂಬುತ್ತಿದ್ದಾರೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ, ಟಿಪ್ಪು ಸುಲ್ತಾನ್ ಆಡಳಿತ ಕುರಿತಂತೆ ಹಬ್ಬಿಸಲಾಗುತ್ತಿರುವ ಸುಳ್ಳು ವದಂತಿ. ಟಿಪ್ಪು ಸುಲ್ತಾನ್ ಕನ್ನಡ ಭಾಷೆಯ ವಿರೋಧಿಯಾಗಿದ್ದನು. ಆತನ ಆಡಳಿತ ಭಾಷೆ ಪರ್ಷಿಯನ್ ಆಗಿತ್ತು ಎಂದು ಹೇಳಲಾಗುತ್ತಿದೆ. ಕಚೇರಿ, ಟಪಾಲು, ಅಮುಲ್ದಾರ್, ತಹಸಿಲ್ದಾರ್, ಶಿರಸ್ತೆದಾರ್ ಇವೆಲ್ಲವೂ ಪರ್ಷಿಯನ್ ಶಬ್ದಗಳು ಎಂದು ಹೇಳುವ ಅವಿವೇಕಿಗಳು ಒಮ್ಮೆ ಮರಾಠಿ ಶಬ್ದಕೋಶವನ್ನು ಸಹ ಅವಲೋಕಿಸಿದರೆ ಒಳಿತು. ಮೊಗಲರ ಆಳ್ವಿಕೆಯ ಕಾಲದಿಂದಲೂ ಉರ್ದು, ದೇವನಾಗರಿ ಲಿಪಿ ಅಥವಾ ಹಿಂದಿ, ಮರಾಠಿ ಈ ಭಾಷೆಗಳ ಶಬ್ದಗಳು ಆಡಳಿತದಲ್ಲಿ ಮಿಳಿತಗೊಂಡು ಅವುಗಳು ಬ್ರಿಟೀಷರ ಕಾಲದಿಂದಲೂ ಎಲ್ಲಾ ಸಂಸ್ಥಾನಗಳ ನಡುವೆ ಸಂವಹನದ ಭಾಷೆಯಾಗಿದ್ದವು.
ಟಿಪ್ಪುವಿನ ಆಡಳಿತದಲ್ಲಿ ಸ್ಥಳೀಯ ಭಾಷೆಯಾಗಿ ಕನ್ನಡವೂ ಸಹ ಅಸ್ತಿತ್ವದಲ್ಲಿತ್ತು. ಇದಕ್ಕೆ ಉದಾಹರಣೆಯಾಗಿ ಟಿಪ್ಪು ಸುಲ್ತಾನನು ಶೃಂಗೇರಿ ಶಾರದಾಂಬೆಯ ಪೀಠಕ್ಕೆ ಕನ್ನಡದಲ್ಲಿ ಬರೆದಿರುವ ಹದಿನೇಳು ಪತ್ರಗಳನ್ನು ನೋಡಬಹುದು. ಅದೇ ರೀತಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ನೀಡಿರುವ ಕಾಣಿಕೆಗಳ ಮೇಲೆ ಕನ್ನಡದ ಹೆಸರುಗಳಿವೆ. ಟಿಪ್ಪು ಸುಲ್ತಾನನ್ನು ಹಿಂದೂ ವಿರೋಧಿ ಎಂದು ಪ್ರತಿಬಿಂಬಿಸುವ ಅರೆ ತಿಳುವಳಿಕೆಯ ಇತಿಹಾಸಕಾರರು ಟಿಪ್ಪುವಿನ ಆಸ್ಥಾನದಲ್ಲಿ ಆರು ಮಂದಿ ಕನ್ನಡ ಮಾತೃಭಾಷೆಯ ಬ್ರಾಹ್ಮಣ ಸಚಿವರಿದ್ದರು ಜೊತೆಗೆ ದಿವಾನರಾಗಿದ್ದ ಪೂರ್ಣಯ್ಯನವರು ಸಹ ಬ್ರಾಹ್ಮಣರಾಗಿದ್ದರು ಎಂಬುದನ್ನು ಮರೆಯುತ್ತಾರೆ. ಇಂದು ದೇಶಾದ್ಯಂತ ಹಿಂದೂ ದೇವಾಲಯಗಳ ಮೇಲೆ ಮಸೀದಿಗಳು ನಿರ್ಮಾಣವಾಗಿದೆ ಎಂದು ಮಧ್ಯಕಾಲೀನ ಇತಿಹಾಸವನ್ನು ತಿರುಚಲು ಹೊರಟಿರುವ ನವಭಾರತದ ಇತಿಹಾಸಕಾರರು ಅದಕ್ಕೂ ಮುನ್ನ ಅಂದರೆ ಕ್ರಿಸ್ತಪೂರ್ವ ಮತ್ತು ನಂತರದ ಕ್ರಿಸ್ತಶಕ ಭಾರತದಲ್ಲಿ ಬೌದ್ಧ ಧರ್ಮದ ಸ್ತೂಪಗಳು ಮತ್ತು ಜೈನ ಮಂದಿರಗಳನ್ನು ನಾಶಗೊಳಿಸಿ, ಅವುಗಳ ಮೇಲೆ ಹಿಂದೂ ದೇವಾಲಯಗಳನ್ನು ನಿರ್ಮಿಸಿರುವ ಇತಿಹಾಸ ಕುರಿತು ಏಕೆ ಮಾತನಾಡುವುದಿಲ್ಲ. ಈ ಘಟನೆಗಳ ಕುರಿತಾಗಿ ಇಂದಿಗೂ ಸಹ ಸಾಕ್ಷಾಧಾರಗಳು ಲಭ್ಯವಿವೆ. ಮಸೀದಿಗಳ ಕೆಳಗೆ ಹಿಂದೂ ದೇವಾಲಯಗಳು ಇದ್ದವು ಎನ್ನುವುದಾದರೆ, ಹಿಂದೂ ದೇವಾಲಯಗಳ ಕೆಳಗೆ ಬೌದ್ಧ ಸ್ತೂಪಗಳು ಮತ್ತು ಜೈನ ಮಂದಿರಗಳು ಇದ್ದವು ಎಂಬುದಕ್ಕೆ ಸಾಜ್ಷಾಧಾರಗಳು ಇರುವಾಗ, ದೇವಾಲಯಗಳನ್ನು ಕೆಡವಿ ಬೌದ್ಧ ಮತ್ತು ಜೈನ ಮಂದಿರಗಳನ್ನು ಈಗ ನಿರ್ಮಾಣ ಮಾಡಲು ಸಾಧ್ಯವೆ? ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುವುದಿಲ್ಲ ಏಕೆ?
ಬಹುತೇಕ ಹಿಂದೂತ್ವ ಸಿದ್ಧಾಂತಗಳು ಭಾರತೀಯ ಇತಿಹಾಸದ ಪುರಾತನ ಕಾಲವನ್ನು ಸಾಮಾಜಿಕ ಸಾಮರಸ್ಯದಿಂದ ಗುರುತಿಸಲ್ಪಟ್ಟ ಸುವರ್ಣಯುಗವೆಂದು ಮಾತ್ರ ನೋಡುತ್ತವೆ, ಹಿಂದೂ ಧರ್ಮವು ಯಾವುದೇ ಧಾರ್ಮಿಕ ಹಿಂಸಾಚಾರದಿಂದ ದೂರವಿತ್ತು ಎಂದು ಹೇಳುವ ಇವರು, ಮಧ್ಯಯುಗವನ್ನು ಮುಸ್ಲಿಂ ಆಡಳಿತಗಾರರು ಹಿಂದೂಗಳ ಮೇಲೆ ದಾಳಿ ಮಾಡಿದ ಭಯೋತ್ಪಾದನೆಯ ಆಳ್ವಿಕೆಯ ಹಂತ ಎಂದು ಚಿತ್ರಿಸುತ್ತಾರೆ. ಮುಸ್ಲಿಂ ಆಡಳಿತಗಾರರು ವಿವೇಚನೆಯಿಲ್ಲದೆ ಹಿಂದೂ ದೇವಾಲಯಗಳನ್ನು ಕೆಡವಿದರು ಮತ್ತು ಹಿಂದೂ ವಿಗ್ರಹಗಳನ್ನು ಭಗ್ನಗೊಳಿಸಿದರು ಎಂಬ ನಂಬಿಕೆ ಅವರ ಗ್ರಹಿಕೆಗೆ ಮೂಲ ಕೇಂದ್ರವಾಗಿದೆ. ಮುಸಲ್ಮಾನರ ಆಳ್ವಿಕೆಯಲ್ಲಿ ಅರವತ್ತು ಸಾವಿರ ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅವರು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ, ಆದರೆ ಅವುಗಳಲ್ಲಿ ಶೇಕಡಾ ಎಂಬತ್ತಕ್ಕೂ ಹೆಚ್ಚು ದೇವಾಲಯಗಳ ನಾಶಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಮತ್ತೊಂದೆಡೆ, ಐತಿಹಾಸಿಕ ಪುರಾವೆಗಳ ಮೇಲ್ನೋಟದ ಸಮೀಕ್ಷೆಯು ಇಸ್ಲಾಂ ಧರ್ಮದ ಆಗಮನದ ಮೊದಲು ಭಾರತದಲ್ಲಿ ಪ್ರತಿಸ್ಪರ್ಧಿ ಧಾರ್ಮಿಕ ಸಂಸ್ಥೆಗಳ ಕೆಡವುವಿಕೆ ಮತ್ತು ಅಪವಿತ್ರಗೊಳಿಸುವಿಕೆ ಮತ್ತು ಅವುಗಳ ವಿಗ್ರಹಗಳ ಸ್ವಾಧೀನವು ಇರಲಿಲ್ಲ ಎಂದು ಆಧುನಿಕ ಇತಿಹಾಸಕಾರರು ತೋರಿಸುತ್ತಿದ್ದಾರೆ.
ಪ್ರಾಚೀನ ಭಾರತದಲ್ಲಿ ಬ್ರಾಹ್ಮಣ ಅಥವಾ ಪುರೋಹಿತಶಾಹಿಗಳು ಹಾಗೂ ಅವರು ನಂಬಿಕೊAಡಿದ್ದ ಹಿಂದೂ ಧರ್ಮದ ವೇದ, ಉಪನಿಷತ್ತುಗಳು ಅಸ್ತಿತ್ವದಲ್ಲಿ ಇದ್ದ ಮಾದರಿಯಲ್ಲಿ ಬ್ರಾಹ್ಮಣೇತರ ಧರ್ಮಗಳು ಮತ್ತು ತಳ ಸಮುದಾಯದ ಪಂಗಡಗಳು ಸಹ ಅಸ್ತಿತ್ವದಲ್ಲಿದ್ದವು. ಈ ಸಮುದಾಯಗಳ ನಡುವೆ ಯಾವುದೇ ಸಾಮರಸ್ಯ ಇರಲಿಲ್ಲ. ಜೊತೆಗೆ ಎರಡು ಬ್ರಾಹ್ಮಣ ಪಂಗಡಗಳಾದ ವೈಷ್ಣವ ಮತ್ತು ಶೈವ ಧರ್ಮಗಳ ನಡುವೆ ಕೂಡಾ ಒಮ್ಮತವಿರಲಿಲ್ಲ. ಇಷ್ಟು ಮಾತ್ರವಲ್ಲದೆ ಕ್ರಿಸ್ತ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಬೌದ್ಧ ಮತ್ತು ಜೈನ ಧರ್ಮಗಳ ಅನುಯಾಯಿಗಳು ಸಹ ನಿರಂತರವಾಗಿ ಜಗಳವಾಡುತ್ತಿದ್ದರು. ಬುದ್ಧನ ಮರಣಾ ನಂತರ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಅನುಸರಿಸಿ, ವಿಶ್ವ ವ್ಯಾಪಿ ಪ್ರಚಾರ ಮಾಡಿದನು. ನಂತರದ ದಿನಗಳಲ್ಲಿ ಅಶೋಕನ ಪುತ್ರರು ವಿಭಿನ್ನ ಧರ್ಮಗಳನ್ನು ಅನುಕರಿಸಿದ ಬಗ್ಗೆ ನಮಗೆ ಸಾಕ್ಷಾಧಾರಗಳು ದೊರೆಯುತ್ತವೆ.
ಹನ್ನೆರಡನೆಯ ಶತಮಾನದ ಕಾಶ್ಮೀರಿ ಪಠ್ಯದಲ್ಲಿ ದಾಖಲಾಗಿರುವ ಪಠ್ಯದಲ್ಲಿ ಅಂದರೆ, ಕಲ್ಹಣನ ರಾಜತರಂಗಿಣಿ ಕೃತಿಯಲ್ಲಿ ಅಶೋಕನ ಪುತ್ರರಲ್ಲಿ ಒಬ್ಬನಾದ ಜಲೌಕನನ್ನು ಕುರಿತಾಗಿ ಉಲ್ಲೇಖಿಸಲಾಗಿದೆ. ಅವನು ತಂದೆಗಿಂತ ಭಿನ್ನವಾಗಿ, ಶೈವ ಧರ್ಮವನ್ನು ಅಪ್ಪಿಕೊಂಡಿದ್ದನು ಮತ್ತು ಬೌದ್ಧ ಮಠಗಳನ್ನು ನಾಶಪಡಿಸಿದನು. ಬೌದ್ಧ ಸಂಸ್ಕೃತ ಕೃತಿಯಾದ ದಿವ್ಯವದನಾದಲ್ಲಿ ಬ್ರಾಹ್ಮಣ ಆಡಳಿತಗಾರ ಪುಷ್ಯಮಿತ್ರ ಶುಂಗನನ್ನು ಬೌದ್ಧರ ಮಹಾನ್ ಶೋಷಕ ಎಂದು ವಿವರಿಸುತ್ತದೆ. ಅವನು ದೊಡ್ಡ ಸೈನ್ಯದೊಂದಿಗೆ ಸ್ತೂಪಗಳನ್ನು ಧ್ವಂಸಗೊಳಿಸಿದನು, ಮಠಗಳನ್ನು ಸುಟ್ಟುಹಾಕಿದನು ಶುಂಗರ ಸಮಕಾಲೀನನಾದ ವ್ಯಾಕರಣಕಾರ ಪತಂಜಲಿಯ ಬರಹಗಳಲ್ಲಿ ಈ ಪುರಾವೆ ಸಿಗುತ್ತದೆ. ಪತಾಂಜಲಿಯು ತನ್ನ ಮಹಾಭಾಷ್ಯದಲ್ಲಿ ಬ್ರಾಹ್ಮಣರು ಮತ್ತು ಶ್ರಮಣರು ಹಾವು ಮತ್ತು ಮುಂಗುಸಿಗಳAತೆ ಶಾಶ್ವತ ಶತ್ರುಗಳು ಎಂದು ಹೇಳಿರುವುದು ಸಹ ದಾಖಲಾಗಿದೆ. ಮೌರ್ಯರ ನಂತರದ ಅವಧಿಯಲ್ಲಿ ಬೌದ್ಧಧರ್ಮದ ಮೇಲೆ ಬ್ರಾಹ್ಮಣ ಆಕ್ರಮಣಕ್ಕೆ ವೇದಿಕೆಯನ್ನು ಸಿದ್ಧಪಡಿಸಲಾಯಿತು, ವಿಶೇಷವಾಗಿ ಪುಷ್ಯಮಿತ್ರ ಶುಂಗನ ಅಡಿಯಲ್ಲಿ, ಅಶೋಕನ ಅವಧಿಯಲ್ಲಿ ಪಾಟಲಿಪುತ್ರದಲ್ಲಿ ನಿರ್ಮಿಸಲಾಗಿದ್ದ ಕುಕುಟಾರಾಮ ಮಠವನ್ನು ನಾಶಪಡಿಸಿರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ.
ಮಧ್ಯಪ್ರದೇಶವು ಸೇರಿದಂತೆ ಉತ್ತರ ಭಾರತದಲ್ಲಿ ಬೌದ್ಧ ಸ್ಥಳಗಳು ಮತ್ತು ಸ್ಮಾರಕಗಳ ನಾಶ ಮತ್ತು ಸ್ವಾಧೀನವು ಮೌರ್ಯ ಸಾಮ್ರಾಜ್ಯದ ನಂತರದ ಶತಮಾನಗಳಲ್ಲಿ ನಡೆದಂತೆ ತೋರುವ ಅನೇಕ ಸ್ಥಳಿಗಳಿವೆ. ಉದಾಹರಣೆಗೆ, ಕುಶಾನರ ಕಾಲದಲ್ಲಿ ಪಶ್ಚಿಮ ಭಾಗದ ಉತ್ತರ ಪ್ರದೇಶದಲ್ಲಿ ಪ್ರವರ್ಧಮಾನಕ್ಕೆ ಬಂದ ಪಟ್ಟಣವಾದ ಮಥುರಾದಲ್ಲಿ, ಭೂತೇಶ್ವರ ಮತ್ತು ಗೋಕರ್ಣೇಶ್ವರದಂತಹ ಕೆಲವು ಇಂದಿನ ಹಿಂದೂ ದೇವಾಲಯಗಳು ಪ್ರಾಚೀನ ಕಾಲದಲ್ಲಿ ಬೌದ್ಧ ಸ್ಥಳಗಳಾಗಿದ್ದವು. ಕುಶಾನರ ಕಾಲದಲ್ಲಿ ಬೌದ್ಧ ಕೇಂದ್ರವಾಗಿದ್ದ ಕತ್ರಾ ದಿಬ್ಬವು ಮಧ್ಯಕಾಲೀನ ಅವಧಿಯಲ್ಲಿ ಹಿಂದೂ ಧಾರ್ಮಿಕ ಸ್ಥಳವಾಯಿತು. ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ವಾರಣಾಸಿ ಬಳಿಯ ಸಾರನಾಥ ಬ್ರಾಹ್ಮಣರ ಆಕ್ರಮಣಕ್ಕೆ ಗುರಿಯಾಯಿತು. ಇದರ ನಂತರ ಪ್ರಾಯಶಃ ಗುಪ್ತರ ಕಾಲದಲ್ಲಿ, ಮುಖ್ಯ ದೇಗುಲ ಎಂದು ಕರೆಯಲ್ಪಡುವ ಮುಂಭಾಗದಲ್ಲಿ ಮೌರ್ಯರು ಅಲ್ಲಿನ ಕಟ್ಟಡದ ಅವಶೇಷಗಳನ್ನು ಮರುಬಳಕೆ ಮಾಡುವ ಮೂಲಕ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಿದರು. ಈ ದೇವಾಲಯವನ್ನು ದೊಡ್ಡ ಅಶೋಕನ ಸ್ತೂಪದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಗುಪ್ತರ ಅವಧಿಯ ಅಂತ್ಯದ ವೇಳೆಗೆ ಈ ಸ್ಥಳವನ್ನು ಬೌದ್ಧರು ಆಕ್ರಮಿಸಿಕೊಂಡರು ನಂತರ ಮತ್ತೆ ಬೌದ್ಧರಲ್ಲದವರು ಪುನಃ ಆಕ್ರಮಿಸಿಕೊಂಡರು.
ಅAತರಾಷ್ಟ್ರೀಯ ಪುರಾತತ್ತ್ವ ಶಾಸ್ತ್ರಜ್ಞ ಅಲೋಯಿಸ್ ಆಂಟನ್ ಫ್ಯೂರರ್ ಅವರು ತಮ್ಮ ಒಂದು ಲೇಖನದಲ್ಲಿ ಹೀಗೆ ವಿವರಿಸಿದ್ದಾರೆ. "ಬೌದ್ಧ ಧರ್ಮದ ಮೇಲೆ ಬ್ರಾಹ್ಮಣ ಧರ್ಮವು ತನ್ನ ಅಂತಿಮ ವಿಜಯವನ್ನು ಗಳಿಸಿತು." ಉತ್ತರ ಬಿಹಾರದಲ್ಲಿನ ವೈಶಾಲಿಯು ಬುದ್ಧನಿಗೆ ಸಂಬAಧಿಸಿದ ಪ್ರಮುಖ ನಗರವಾಗಿತ್ತು, ಅಲ್ಲಿನ ಉದ್ಯಾನವನದಲ್ಲಿ ಅವನು ಕುಶಿನಗರಕ್ಕೆ ತೆರಳುವ ಮುನ್ನ ಕೆಲವು ವರ್ಷಗಳನ್ನು ಕಳೆದಿದ್ದನು. ಪಾಹ್ಸಿಯಾನ್ ಎಂಬ ಚೀನಿ ಯಾತ್ರಿಕನು ವೈಶಾಲಿ ನಗರದ ವೇಶ್ಯೆ ಅಮ್ರಪಾಲಿ ನಿರ್ಮಿಸಿದ ಸ್ತೂಪದ ಅಸ್ತಿತ್ವವನ್ನು ಮಾತ್ರ ಉಲ್ಲೇಖಿಸುತ್ತಾನೆ. ಆದರೆ, ಮತ್ತೊಬ್ಬ ಸಮಕಾಲೀನ ಚೀನೀ ಯಾತ್ರಿಕ ಜೀ ಸೆಂಗ್ಜೈ ಎಂಬಾತನ ದಿನಚರಿಯಲ್ಲಿ ವೈಶಾಲಿಯಲ್ಲಿ ಬೌದ್ಧ ಉಪಾಸಕ ವಿಮಲಕೀರ್ತಿಯ ನಿವಾಸವು ವೈದಿಕರಿಂದ ನಾಶವಾಯಿತು ಎಂದು ದಾಖಲಾಗಿದೆ. ಗುಪ್ತರ ಕಾಲದ ನಂತರದ ಶತಮಾನಗಳಲ್ಲಿ, ಹಲವಾರು ಬ್ರಾಹ್ಮಣ ಚಿಂತಕರು ಮತ್ತು ದೇಶದ ವಿವಿಧ ಭಾಗಗಳ ತತ್ವಜ್ಞಾನಿಗಳು ಬೌದ್ಧರ ವಿರುದ್ಧ ಬೃಹತ್ ಸೈದ್ಧಾಂತಿಕ ಆಕ್ರಮಣವನ್ನು ಪ್ರಾರಂಭಿಸಿದರು, ಹರ್ಷವರ್ಧನನ ಆಳ್ವಿಕೆಯಲ್ಲಿ ಕ್ರಿಸ್ತಶಕ 630 ಮತ್ತು 645 ರ ನಡುವೆ ಭಾರತಕ್ಕೆ ಭೇಟಿ ನೀಡಿದ ಚೀನೀ ಬೌದ್ಧ ಯಾತ್ರಿಕ ಮತ್ತು ಪ್ರವಾಸಿ ಹ್ಯೂಯೆನ್ ತ್ಸಾಂಗ್, ಆರನೇ ಶತಮಾನದ ಅವಧಿಯಲ್ಲಿ ಹೂಣರ ದೊರೆ ಮಿಹಿರಾಕುಲ ಎಂಬಾತನು ಶಿವನ ಭಕ್ತನಾಗಿದ್ದು ಒಂದು ಸಾವಿರದ ಆರನೂರು ಬೌದ್ಧ ಸ್ತೂಪಗಳು ಮತ್ತು ಮಠಗಳನ್ನು ನಾಶಪಡಿಸಿದನು ಮತ್ತು ಸಾವಿರಾರು ಜನರನ್ನು ಕೊಂದನು ಎಂದು ದಾಖಲಿಸಿದ್ದಾನೆ.
ದೇಶದ ಕೆಲವು ಭಾಗಗಳಲ್ಲಿ, ಕಾಶ್ಮೀರದಲ್ಲಿರುವಂತೆ, ಆಡಳಿತಗಾರರು ವೈಯಕ್ತಿಕ ದ್ವೇಷ ಮತ್ತು ನೀತಿಯ ವಿಷಯವಾಗಿ ದೇವಾಲಯಗಳು ಮತ್ತು ಬೌದ್ಧ ಸಂಸ್ಥೆಗಳನ್ನು ಕೆಡವಲು ಆದೇಶಿಸಿದರು. ಕಲ್ಹಣನು ರಾಜ ನಾರದನ ಬಗ್ಗೆ ಆಸಕ್ತಿದಾಯಕ ಉಲ್ಲೇಖವನ್ನು ಮಾಡುತ್ತಾನೆ, ಅವನು ತನ್ನ ಹೆಂಡತಿಯನ್ನು ಮೋಹಿಸಿದ ಬೌದ್ಧ ಸನ್ಯಾಸಿಯಿಂದ ಕೋಪಗೊಂಡ ಪರಿಣಾಮವಾಗಿ ಸೇಡು ತೀರಿಸಿಕೊಳ್ಳಲು "ಸಾವಿರಾರು ವಿಹಾರಗಳನ್ನು ಸುಟ್ಟುಹಾಕಿದನು" ಎಂದು ಹೇಳುವುದರ ಜೊತೆಗೆ ಹತ್ತನೇ ಶತಮಾನದ ರಾಜ ಕ್ಷೇಮಗುಪ್ತನ ಬಗ್ಗೆಯೂ ದಾಖಲಿಸಿದ್ದಾನೆ. ಕ್ಷೇಮಗುಪ್ತನು ಶ್ರೀನಗರದಲ್ಲಿರುವ ಜಯೇಂದ್ರವಿಹಾರದ ಬೌದ್ಧ ಮಠವನ್ನು ನಾಶಪಡಿಸಿದನು ಮತ್ತು ಕ್ಷೇಮಗೌರೀಶ್ವರ ದೇವಾಲಯದ ನಿರ್ಮಾಣಕ್ಕೆ ಅದರ ವಸ್ತುಗಳನ್ನು ಬಳಸಿದನು ಎಂದು ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. ಪಠ್ಯದಲ್ಲಿ ಉಲ್ಲೇಖಿಸಲಾದ ಕಾಶ್ಮೀರಿ ರಾಜರಲ್ಲಿ, ಕ್ರಿಸ್ತಶಕ 1089 ರಿಂದ 1111 ರವರೆಗೆ ಆಳಿದ ಹರ್ಷದೇವ ಅತ್ಯಂತ ಕುಖ್ಯಾತನಾಗಿದ್ದನು. ಅವನು ವ್ಯವಸ್ಥಿತವಾಗಿ ಹಿಂದೂ ಮತ್ತು ಬೌದ್ಧ ದೇವಾಲಯಗಳನ್ನು ಸಂಪತ್ತಿಗಾಗಿ ಲೂಟಿ ಮಾಡಿದನು ಮತ್ತು ಕೆಡವಿದನು ಮತ್ತು ದೇವಾಲಯಗಳ ನಾಶ ಮತ್ತು ವಿಗ್ರಹಗಳನ್ನು ಕೆಡುವುವ ಸಲುವಾಗಿ ಭಕ್ತಪತಣ್ಣ ನಾಯಕ ಎಂಬಾತನನ್ನು ವಿಶೇಷ ಅಧಿಕಾಯಾಗಿ ನೇಮಕ ಮಾಡಿದ್ದನು. ಎಂದು ರಾಜರಂಗಿಣಿಯಲ್ಲಿ ಉಲ್ಲೇಖಿಸಲಾಗಿದೆ.
ಬುದ್ಧನ ಜ್ಞಾನೋದಯದ ಸ್ಥಳವಾದ ಬಿಹಾರದ ಬೋಧಗಯಾದಲ್ಲಿ ಶಿವನ ಆರಾಧಕನಾಗಿದ್ದ ದೊರೆ ಶಶಾಂಕನು ಬೋಧಿ ವೃಕ್ಷವನ್ನು ಕಡಿದು ಸ್ಥಳೀಯ ದೇವಾಲಯದಿಂದ ಬುದ್ಧನ ಪ್ರತಿಮೆಯನ್ನು ತೆಗೆದುಹಾಕಿದನು, ಅದನ್ನು ಮಹೇಶ್ವರನ ಪ್ರತಿಮೆಯಿಂದ ಬದಲಾಯಿಸುವಂತೆ ಆದೇಶಿಸಿದನು ಎಂದು ಹ್ಯೂಯೆನ್ ತ್ಸಾಂಗ್ ದಾಖಲಿಸಿದ್ದಾನೆ. ಈ ಸ್ಥಳವು ಭಾರತೀಯ ಇತಿಹಾಸದುದ್ದಕ್ಕೂ ಧಾರ್ಮಿಕ ಸ್ಪರ್ಧೆಯ ತಾಣವಾಗಿ ಉಳಿದಿದೆ. ಸಾಂಪ್ರದಾಯಿಕ ದಾಖಲೆಗಳು ಮತ್ತು ಪುರಾತತ್ತ್ವ ಶಾಸ್ತ್ರದ ಪುರಾವೆಗಳ ಪ್ರಕಾರ ಅಲ್ಲಿನ ಮಹಾಬೋಧಿ ದೇವಾಲಯವನ್ನು ಪದೇ ಪದೇ ನಾಶಪಡಿಸಲಾಯಿತು ಮತ್ತು ಪುನರ್ನಿರ್ಮಿಸಲಾಯಿತು. ಆರಂಭಿಕ ಮಧ್ಯಕಾಲೀನ ಪುರಾಣ ಗ್ರಂಥಗಳಲ್ಲಿ ಹನ್ನೊಂದನೆಯ ಶತಮಾನದ ಮಧ್ಯಭಾಗದಲ್ಲಿ ವಿಷ್ಣು ದೇವಾಲಯವನ್ನು ಸ್ಥಾಪಿಸಲು ಒಂದು ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ವಿಷ್ಣು ದೇವಾಲಯದ ನಿರ್ಮಾಣಕ್ಕೆ ಬೌದ್ಧ ಸ್ಮಾರಕಗಳ ಅವಶೇಷಗಳನ್ನು ಬಳಸಿಕೊಳ್ಳಲಾಯಿತು. ಆಧುನಿಕ ವಿಷ್ಣುಪಾದ ದೇವಾಲಯವನ್ನು ಇಂದೋರ್‌ನ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಎಂಬಾಕೆ ಹದಿನೆಂಟನೇ ಶತಮಾನದ ಕೊನೆಯಲ್ಲಿ ನಿರ್ಮಿಸಿದಳು.
ಗಯಾದಿಂದ ಈಶಾನ್ಯಕ್ಕೆ ಎಂಬತ್ತು ಕಿಲೋಮೀಟರ್‌ಗಳ ದೂರದಲ್ಲಿ ನಳಂದದಲ್ಲಿ ಅಂತಾರಾಷ್ಟ್ರೀಯವಾಗಿ ಹೆಸರಾಂತ ಬೌದ್ಧ ವಿಶ್ವವಿದ್ಯಾನಿಲಯವಿದ್ದು, ಹ್ಯೂಯೆನ್ ತ್ಸಾಂಗ್ ಐದು ವರ್ಷಗಳಿಗಿಂತ ಹೆಚ್ಚು ಕಾಲ ಈ ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದನು. ವಿಶಾಲವಾದ ಸನ್ಯಾಸಿಗಳ ಸಂಕೀರ್ಣವನ್ನು ಹೊಂದಿದ್ದ ಈ ಜಾಗದಲ್ಲಿ ಶೈವ ಧರ್ಮದ ಬ್ರಾಹ್ಮಣ ದೇವಾಲಯವನ್ನು ಏಳನೇ ಶತಮಾನದ ಮಧ್ಯದಲ್ಲಿ ನಿರ್ಮಿಸಲಾಯಿತು ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ತಮಿಳುನಾಡಿನ ಕಾಂಚಿಪುರಂ ಪಟ್ಟಣದ ಕಾಮಾಕ್ಷಿ ದೇವಸ್ಥಾನವು ಸಹ ನಿರ್ಮಾಣವಾಯಿತು. ಈ ಸ್ಥಳದ ಸುತ್ತಲೂ ಹಲವಾರು ಬುದ್ಧನ ಚಿತ್ರಗಳ ಆವಿಷ್ಕಾರವು ಇದನ್ನು ಬೌದ್ಧ ಕಟ್ಟಡದ ಮೇಲೆ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ ಒಡಿಸ್ಸಾದ ಪುರಿ ಜಿಲ್ಲೆಯ ಪೂರ್ಣೇಶ್ವರ, ಕೇದಾರೇಶ್ವರ, ಕಂಠೇಶ್ವರ, ಸೋಮೇಶ್ವರ ಮತ್ತು ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಮೇಲೆ ನಿರ್ಮಿಸಲಾಗಿದೆ ಅಥವಾ ಅವುಗಳಿಂದ ಪಡೆದ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಆಂಧ್ರಪ್ರದೇಶದಲ್ಲಿ ಅನೇಕ ಬೌದ್ಧ ಸ್ಥಳಗಳನ್ನು ಬ್ರಾಹ್ಮಣರು ಸ್ವಾಧೀನಕ್ಕೆ ಪಡೆದ ಹಲವಾರು ನಿದರ್ಶನಗಳಿವೆ. ಗುಂಟೂರು ಜಿಲ್ಲೆಯ ಚೆಜೆರ್ಲಾದಲ್ಲಿ ಮಧ್ಯಕಾಲೀನ ಅವಧಿಯಲ್ಲಿ ಬೌದ್ಧ ಮಠವನ್ನು ಕಪೋತೇಶ್ವರ ದೇವಾಲಯವಾಗಿ ಪರಿವರ್ತಿಸಲಾಗಿದೆ. ನಾಗಾರ್ಜುನಕೊಂಡದಲ್ಲಿ ಬೌದ್ಧ ಸ್ತೂಪ ಮತ್ತು ವಿಹಾರಗಳನ್ನು ನಾಶಪಡಿಸಿದ್ದು ಗುಪ್ತರ ಕಾಲದಲ್ಲಿ ನಡೆದ ಈ ಘಟನೆಯು "ನಿರ್ದಯ" ಮತ್ತು "ಭಯಾನಕ" ಕೃತ್ಯ ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಚೀನಿ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಕೂಡಾ ಅಮರಾವತಿಯಲ್ಲಿ ಕೃಷ್ಣಾ ನದಿಯ ದಂಡೆಯ ಮೇಲೆ ಮಹಾ ಸ್ತೂಪದಿಂದ ಕೆಲವು ಮೀಟರ್ ದೂರದಲ್ಲಿ ಶಿವ ದೇವಾಲಯವನ್ನು ನಿರ್ಮಿಸಲಾಗಿದೆ ಇದು ಬಹುಶಃ ಬೌದ್ಧ ಸ್ಥಳವನ್ನು ಅತಿಕ್ರಮಿಸಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಶಂಕರ ಚಾರ್ಯರ ನೇತೃತ್ವದ ಬ್ರಾಹ್ಮಣ ಚಳುವಳಿಯ ಪರಿಣಾಮವಾಗಿ ದಕ್ಷಿಣ ಪ್ರದೇಶದಲ್ಲಿ ಬೌದ್ಧಧರ್ಮವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು.

ಅಶೋಕನ ಕಾಲದಿಂದಲೂ ಬೌದ್ಧ ಧರ್ಮದ ಕೇಂದ್ರವಾಗಿದ್ದ ಕರ್ನಾಟಕ ರಾಜ್ಯದಲ್ಲಿ ಬೌದ್ಧ ವಿಹಾರಗಳನ್ನು ಶೈವರು ಸ್ಪಷ್ಟವಾಗಿ ಸ್ವಾಧೀನಪಡಿಸಿಕೊಂಡ ಎರಡು ಪ್ರಮುಖ ಸ್ಥಳಗಳನ್ನು ನಾವು ನೋಡಬಹುದಾಗಿದೆ. ಉತ್ತರ ಕರ್ನಾಟಕದ ಐಹೊಳೆಯು ಚಾಲುಕ್ಯರ ಸಾಂಸ್ಕೃತಿಕ ರಾಜಧಾನಿಯಾಗಿತ್ತು. ಇಲ್ಲಿ ಆರನೆಯ ಶತಮಾನಕ್ಕೆ ಸೇರಿದ ಲಾಡ್ ಖಾನ್ ದೇವಾಲಯವು ಮೂಲತಃ ಸರಳ ಚೌಕಾಕಾರದ ಸಭಾಂಗಣವಾಗಿತ್ತು ಮತ್ತು ಬೌದ್ಧ ವಿಹಾರದ ಕೇಂದ್ರ ಸಭಾಂಗಣವಾಗಿತ್ತು. ನಂತರ ಇದು ಗೋಡೆಗಳು, ಕಿಟಕಿಗಳು, ನೆಲಮಾಳಿಗೆ ಮತ್ತು ಛಾವಣಿಯ ದೇಗುಲಗಳೊಂದಿಗೆ ಸೂರ್ಯ-ನಾರಾಯಣನಿಗೆ ಮೀಸಲಾದ ದೇವಾಲಯವಾಗಿ ರೂಪಾಂತರಗೊoಡಿತು. ಇನ್ನೊಂದು ಉದಾಹರಣೆಯು ದಕ್ಷಿಣ ಕರ್ನಾಟಕದ ಮಂಗಳೂರಿನ ಕದ್ರಿಯ ಮಂಜುನಾಥ ದೇವಾಲಯಕ್ಕೆ ಸಂಬಂಧಪಟ್ಟಿದೆ. ಅಲ್ಲಿದ್ದ ಕದರಿಕಾ ವಿಹಾರ ಎಂಬ ಬೌದ್ಧ ಮಠವನ್ನು 1068 ರಲ್ಲಿ ಶೈವ ದೇವಾಲಯವಾಗಿ ಪರಿವರ್ತಿಸಲಾಯಿತು. ಇದಕ್ಕೆ ಈಗ ಪರಶುರಾಮನ ಪುರಾಣ ಕಥೆಯನ್ನು ಜೋಡಿಸಲಾಗಿದೆ.
ಮಾಹಿತಿ ಸೌಜನ್ಯ- ದ್ವಿಜೇಂದ್ರ ನಾರಾಯಣ್ ಜಾ ಅವರ ‘’ಎಗೇನೆಸ್ಟ್ ದಿ ಗ್ರೈನ್: ನೋಟ್ಸ್ ಆನ್ ಐಡೆಂಟಿಟಿ, ಇನ್ ಟಾಲರೆನ್ಸ್ ಅಂಡ್ ಹಿಸ್ಟರಿ’’ ಕೃತಿಯಿಂದ.
( ಹೊಸತು ಮಾಸಪತ್ರಿಕೆಯ ಬಹು ಸಂಸ್ಕೃತಿ ಅಂಕಣ ಬರಹ)
ಡಾ.ಎನ್.ಜಗದೀಶ್ ಕೊಪ್ಪ