ಶನಿವಾರ, ಜುಲೈ 18, 2026

ನಾಡಗೀತೆ ಅಪಮಾನ ಸಲ್ಲದು.




ರಾಷ್ಟ್ರಕವಿ ಕುವೆಂಪು ರಚಿಸಿದ ‘’ಜಯ ಭಾರತ ಜನನಿಯೆ ತನುಜಾತೆ’’ ಎಂಬ ಕವಿತೆಯು ಕರ್ನಾಟಕ ಸರ್ಕಾರದ ನಾಡಗೀತೆಯಾದ ನಂತರದ ವರ್ಷಗಳಲ್ಲಿ ಅದರ ಕುರಿತು ವಿವಾದಗಳು ಮತ್ತೆ ಮತ್ತೆ ತಲೆ ಎತ್ತುತ್ತಿವೆ. ವಾಸ್ತವವಾಗಿ ಕುವೆಂಪು ಅವರು ಬರೆದ ಈ ಗೀತೆಯು ನಾಡಗೀತೆಯ ಉದ್ದೇಶಕ್ಕಾಗಿ ಬರೆದ ಕವಿತೆಯಲ್ಲ. ಈ ಕವಿತೆಯ ಕುರಿತಾಗಿ ಅಮೂಲಾಗ್ರ ಚರಿತ್ರೆಯನ್ನು ನನ್ನ ಆತ್ಮೀಯ ಮಿತ್ರರಾದ ಹಾಗೂ ಕುಪ್ಪಳ್ಳಿಯಲ್ಲಿ ಹಂಪಿ ಕನ್ನಡ ವಿ.ವಿ.ಯ ಕುವೆಂಪು ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ.ಕೆ.ಸಿ.ಶಿವಾರೆಡ್ಡಿಯವರು ಅರವತ್ತೆಂಟು ಪುಟಗಳಲ್ಲಿ ‘’ನಾಡಗೀತೆ: ಬುದ್ದನನ್ನು ಬದ್ಧನನ್ನಾಗಿ ಮಾಡುವುದೆ?’’ ಎಂಬ ಶಿರ್ಷಿಕೆಯ ಕೃತಿಯು ಮುದ್ರಣಕ್ಕೆ ಅಣಿಯಾಗಿದ್ದು, ಮುಂದಿನವಾರ ನಾಡಿನೆಲ್ಲೆಡೆ ದೊರೆಯಲಿದೆ.
ಈ ಕೃತಿಯಲ್ಲಿ ಕುವೆಂಪು 1924 ರಲ್ಲಿ ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಬರೆಯಲು ಶುರುಮಾಡಿದ ಈ ಕವಿತೆಗೆ ಅನೇಕ ವರ್ಷಗಳ ಕಾಲ ತಿದ್ದುಪಡಿ ಮಾಡಿದ ಇತಿಹಾಸವೂ ಇದೆ. ಜೊತೆಗೆ ಕೊಳಲು ಎಂಬ ಕವನ ಸಂಕಲನದಲ್ಲಿ ಸೇರ್ಪಡೆಯಾಗಿದ್ದ ಈ ಕವಿತೆಯನ್ನು ಕುವೆಂಪು ಅವರು ನಾಲ್ಕನೇ ಮುದ್ರಣದ ಸಂದರ್ಭದವರೆಗೆ ಅನೇಕ ಬಾರಿ ತಿದ್ದಿದ್ದಾರೆ. ಈ ಜಗತ್ತಿನಲ್ಲಿ ಒಂದು ಕೃತಿಯನ್ನು ತಿದ್ದುವ ಅವಕಾಶ ಇರುವುದು ಸಾಹಿತ್ಯದ ಸೃಷ್ಟಿಕರ್ತನಿಗೆ ಮಾತ್ರ ವೇ ಹೊರತು, ಬೇರೆ ಯಾರಿಗೂ ಇಲ್ಲಎಂಬ ಕನಿಷ್ಠ ಪ್ರಜ್ಞೆ ನಮ್ಮೆಲ್ಲರಿಗೂ ಇರಬೇಕು.
ಮೂಲ ಕೃತಿಯಲ್ಲಿ ಇದ್ದ ಬೌದ್ದರುದ್ಯಾನ ಎಂಬ ಪದವನ್ನು ಸೇರ್ಪಡೆ ಮಾಡುವುದು ತಿದ್ದುಪಡಿ ಎನಿಸಿಕೊಳ್ಳಲಾಗದು. ಕವಿತೆಯ ಯಾವುದೋ ಚರಣ ಅಥವಾ ಸಾಲಿನಲ್ಲಿರುವ ಶಬ್ದವನ್ನು ತಂದು ಮತ್ತೊಂದು ಸಾಲಿಗೆ ಸೇರಿಸುವುದಕ್ಕೆ ನಮಗೆ ಯಾವುದೇ ಹಕ್ಕು ಅಥವಾ ನೈತಿಕತೆ ಇಲ್ಲ. ಇದು ರಾಷ್ಟ್ರಕವಿಯ ಕವಿತೆಯನ್ನು ತಿರುಚಿದ ಅಪರಾದ ಎನಿಸಿಕೊಳ್ಳುತ್ತದೆ.
ಕವಿತೆಯಲ್ಲಿರುವ ಕೆಂಪೇಗೌಡ, ಟಿಪ್ಪು, ಹೈದರ ಎಂಬ ಶಬ್ದಗಳನ್ನು ನಾಡಗೀತೆಯಲ್ಲಿ ಸೇರಿಸಿ ಎಂದು ಇತರೆ ಸಮುದಾಯಗಳು ಬೇಡಿಕೆ ಇಟ್ಟರೆ, ಸರ್ಕಾರ ತಿದ್ದುಪಡಿ ಮಾಡಲು ಸಿದ್ಧವಿದೆಯಾ? ಈ ಪ್ರಶ್ನೆಗೆ ಕನ್ನಡ ಜನತೆಗೆ ಸರ್ಕಾರ ಉತ್ತರಿಸಬೇಕಾಗುತ್ತದೆ. 2004 ರಲ್ಲಿ ಡಾ. ಪಾಟೀಲ ಪುಟ್ಟಪ್ಪನವರು ಕಿತ್ತೂರು ಚೆನ್ನಮ್ಮ ಹೆಸರಿಲ್ಲ ಎಂದು ಆಕ್ಷೇಪಣೆ ಎತ್ತಿದ್ದರು. ಈ ಬಾರಿಯ ತಜ್ಞರ ಸಭೆಯಲ್ಲಿಯೂ ಕೂಡಾ ಅಕ್ಕಮಹಾದೇವಿ ಮತ್ತು ಕಿತ್ತೂರು ಚೆನ್ನಮ್ಮ ಹೆಸರನ್ನು ಸೇರಿಸಬೇಕೆಂದು ಇಬ್ಬರು ಸದಸ್ಯರು ಆಗ್ರಹಪಡಿಸಿದ್ದರು.
ಬೌದ್ದ ಧರ್ಮಗಳ ಗುರುಗಳು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಬೌದ್ದರುದ್ಯಾನ ಪದವನ್ನು ಸೇರಿಸಲು ಹೊರಟಿರುವ ಸರ್ಕಾರಕ್ಕೆ ನನ್ನ ಮೂಲಭೂತ ಪ್ರಶ್ನೆ ಹೀಗಿದೆ.
ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಸರ್ಕಾರವು ಅಸ್ತಿತ್ವಕ್ಕೆ ಬಂದ ಸಂಧರ್ಭದಲ್ಲಿ ಹಿಂದೂ ಧರ್ಮಗುರುಗಳ ಬೇಡಿಕೆಯ ಹಿನ್ನೆಲೆಯಲ್ಲಿ ನಾಡಗೀತೆಯಲ್ಲಿರುವ ‘’ ಕ್ರೈಸ್ತ ಮುಸಲ್ಮಾನ’’ ಎಂಬ ಶಬ್ದವನ್ನು ತೆಗೆದು ಹಾಕಿದರೆ, ಇದನ್ನು ಪ್ರಶ್ನಿಸುವ ನೈತಿಕ ಹಕ್ಕು ನಿಮಗೆ ಇರುತ್ತದಯೇ?
ನಾಡಗೀತೆ ಕುರಿತಾದ ಪ್ರಶ್ನೆಗಳಿಗೆ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ನೀಡಿರುವ ಪತ್ರಿಕ್ರಿಯೆಗಳನ್ನು ಓದಿದರೆ, ಗೆದ್ದಲು ಕಟ್ಟಿರುವ ನಮ್ಮ ಚಿತ್ತಕ್ಕೆ ಹೊಸ ರೂಪ ಬರಬಲ್ಲದು. ತೇಜಸ್ವಿಯವರ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ.


ಒಂದು-
ಎಲ್ಲ ಜಾತಿ ಪಂಥಗಳೂ ತಮ್ಮ ತಮ್ಮ ಮತಾಚಾರ್ಯರಿಗೆ ನಾಡಗೀತೆಯಲ್ಲಿ ಜಾಗ ದೆÆರಕಬೇಕೆಂದು ಆಗ್ರಹಪಡಿಸಿದರೆ ನಾಡಗೀತೆ, ಜಾತಿ ಮತ್ತು ಮತಾಚಾರ್ಯರ ದೊಡ್ಡ ಪಟ್ಟಿಯಾಗುತ್ತದೆಯೇ ವಿನಃ ನಾಡಗೀತೆಯಾಗುವುದಿಲ್ಲ.
ಕವಿ ತನ್ನ ಔಚಿತ್ಯಪ್ರಜ್ಞೆ ಬಳಸಿ ಗೀತೆಯ ಛಂದಸ್ಸಗೀತಕ್ಕೂ ಲಯಕ್ಕೂ ಅನುಗುಣವಾದಂಥ ಹಲವು ಹೆಸರುಗಳನ್ನು ಸೇರಿಸಿರಬಹುದು. ಹಲವನ್ನು ಸೇರಿಸಿಲ್ಲದಿರಬಹುದು. ಮೀಸಲಾತಿ ಪಟ್ಟಿಯಲ್ಲಿ ತಮ್ಮ ಜಾತಿಯನ್ನೂ ಸೇರಿಸಿ ಎಂದು ಎಲ್ಲ ಜಾತಿಯವರೂ ಆಗ್ರಹಪಡಿಸುವಂತೆ ನಾಡಗೀತೆಯಲ್ಲೂ ಸೇರಿಸಬೇಕೆಂದು ಹೇಳುವುದು ಸರಿಯಲ್ಲ.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು, ಸಂ. 14, ಪು. 341
ಪ್ರತಿಕ್ರಿಯೆ-ಎರಡು
ನಾಡಗೀತೆಯನ್ನು ನಾವು ಆಯಾ ಕಾಲದ ಮತೀಯ ಮತ್ತು ರಾಜಕೀಯಒತ್ತಡಗಳಿಗೆ ಅನುಗುಣವಾಗಿ ತಿದ್ದುತ್ತ ಹೋಗುವುದು ಬಹಳ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಕುವೆಂಪುರವರೇ ತಿದ್ದಿಕೊಟ್ಟಿದ್ದರು ಎಂಬುದರಿಂದ ಹಿಡಿದು, ಏನಾದರೂ ಮಾಡಿಕೊಳ್ಳಿ ಎಂದು ಹೇಳಿದ್ದರು ಎಂಬ ಶ್ರೀ ಜಿ. ನಾರಾಯಣರವರ ಹೇಳಿಕೆಯವರೆಗೆ ನಾನಾ ಬಗೆಯ ಪ್ರತಿಪಾದನೆಯನ್ನು ಹಲವರು ಮಂಡಿಸಿದ್ದಾರೆ.
ನಾನು ಕಳೆದ ಮೂರು ವರ್ಷಗಳಿಂದ ಈ ತಿದ್ದುಪಾಡಿನ ಬಗ್ಗೆ ಕುವೆಂಪುರವರ ಸಮ್ಮತಿ ಇತ್ತೆನ್ನುವುದಕ್ಕೆ ಏನಾದರೂ ಕನಿಷ್ಠ ದಾಖಲೆಗಳಾದರೂ ಇದೆಯೇ ಎಂದು ವ್ಯಾಪಕವಾಗಿ ಅಭ್ಯಾಸ ಮತ್ತು ತನಿಖೆ ಮಾಡಿದ್ದೇನೆ. ಯಾವುದೇ ನಂಬಲರ್ಹ ದಾಖಲೆಯೂ ಇಲ್ಲವೆಂದು ವಿಷಾದದದಿಂದ ನಾನು ತೀರ್ಮಾನಕ್ಕೆ ಬಂದಿದ್ದೇನೆ.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಜಗತ್ತು, ಸಂಪುಟ 14, ಪುಟ 285
ಪ್ರತಿಕ್ರಿಯೆ-ಮೂರು
ಕುವೆಂಪುರವರ ಯಾವ ಸ್ಪಷ್ಟ ಅನುಮತಿಯೂ ಇಲ್ಲದೆ ಯಾವುದೋ ಲೇಖನದಲ್ಲಿ ಉದ್ಧರಿಸಿರುವ ಪರಿಷತ್ ಪ್ರಕಟಿತ ಕವನದ ಆವೃತ್ತಿಯನ್ನು ಕುವೆಂಪುರವರ ಅಧಿಕೃತ ಆವೃತ್ತಿ ಎಂದು ಘೋಷಿಸಲು ಜನಗಳು ಒತ್ತಾಯ ಮಾಡಿದಂತೆಲ್ಲಾ ಇದನ್ನು ತಿದ್ದಲು, ಕಾನೂನು ಮಂತ್ರಿಗಳಿಗೆ ಪರವಾನಗಿ ಇದೆಯೇ?
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ನಾಡಗೀತೆಯೇ ಕುವೆಂಪು ಅವರ ಕವನದ ಅಧಿಕೃತ ಆವೃತ್ತಿ ಎಂದು ಚಂದ್ರೇಗೌಡರಂಥವರು ತುತ್ತೂರಿ ಊದುತ್ತಿದ್ದಾರೆ.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು, ಪುಟ 402, ಸಂಪುಟ 14
ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ ಏನೆಂದರೆ, ನಿಮಗೆ ಹಲವು ಧರ್ಮ ಅಥವಾ ವ್ಯಕ್ತಿಗಳ ಹೆಸರು ಸೇರಿಸಬೇಕು ಎಂಬ ಇಚ್ಚೆ ಇದ್ದರೆ, ದಯವಿಟ್ಟು ಕುವೆಂಪು ನಾಡಗೀತೆಯನ್ನು ಕೈ ಬಿಟ್ಟು, ನಿಮಗೆ ಬೇಕಾದ ನಾಡಗೀತೆಯನ್ನು ಬರೆಯಿಸಿಕೊಳ್ಳುವುದರ ಮೂಲಕ ಅಳವಡಿಸಿಕೊಳ್ಳಿ. ಇದು ಕುವೆಂಪು ಅವರಿಗೆ ನೀವು ಮಾಡುವ ಅಪಮಾನವಲ್ಲ, ನೀವು ನೀಡಿದ ನಿಜವಾದ ಗೌರವವಾಗುತ್ತದೆ.

ಮಾಹಿತಿ ಸೌಜನ್ಯ- ಡಾ.ಕೆ.ಸಿ.ಶಿವಾರೆಡ್ಡಿ.ಬೆಂಗಳೂರು;
ಜಗದೀಶ್ ಕೊಪ್ಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ