ಶುಕ್ರವಾರ, ಮೇ 24, 2013

ನೆಲದ ತಾಯಿಗೆ ನಮಸ್ಕಾರ



                         ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ
                         ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ
                         ಕಟ್ಟಕಡೆಯ ಮೀನನ್ನು ಹಿಡಿದ ನಂತರ
                         ಆಗಷ್ಟೇ ನಿನಗೆ ಗೊತ್ತಾಗುತ್ತದೆ,
                         ಹಣವನ್ನು ತಿನ್ನಲಾಗುವುದಿಲ್ಲ ಎಂದು.
                                                ( ವಂದನಾ ಶಿವ ಅವರ ಕೃತಿಯಿಂದ)
ಡಾ.ವಂದನಾ ಶಿವ ಎಂಬ ಹೆಸರು ಈ ದೇಶದ ಜನಸಾಮಾನ್ಯರಿಗೆ ಅಪರಿಚಿತವಾದರೂ, ಪರಿಸರಪ್ರಿಯರಿಗೆ ಮತ್ತು ಸುಸ್ಥಿರ ಕೃಷಿಯಲ್ಲಿ ಪ್ರೀತಿ ಇರುವ ಎಲ್ಲರಿಗೂ ಪ್ರಿಯವಾದ ಮತ್ತು ಆತ್ಮೀಯವಾದ ಹೆಸರು. ಜಾಗತೀಕರಣದ ನೆಪದಲ್ಲಿ ತೃತೀಯ ರಾಷ್ಟ್ರಗಳನ್ನು ಕೊಳ್ಳೆ ಹೊಡೆಯಲು ನಿಂತ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅವುಗಳ ಮಾಲೀಕರು ಕನಸಿಲ್ಲೂ ಬೆಚ್ಚಿಬೀಳಬಹುದಾದ ಹಾಗೂ  ಜಾಗತಿಕ ಮಟ್ಟದಲ್ಲಿ ಸದಾ ಎಚ್ಚರದ ಸ್ಥಿತಿಯಲ್ಲಿ  ಚಾಲ್ತಿಯಲ್ಲಿರುವ ಹೆಸರು.
ತಮ್ಮ ಮಾರುಕಟ್ಟೆಯ ವಿಸ್ತರಣೆಗೋಸ್ಕರ ವಿಶ್ವ ವಾಣಿಜ್ಯ ಮಂಡಳಿಯನ್ನು ಹುಟ್ಟು ಹಾಕಿ , ದೇಶ-ದೇಶಗಳ ನಡುವಿನ ಗಡಿರೇಖೆಯನ್ನು ಅಳಿಸಿ ಹಾಕುವುದರ ಮೂಲಕ ಮಾರುಕಟ್ಟೆಯ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವ ಮುಂದುವರಿದ ರಾಷ್ಟ್ರಗಳ ಮುಖವಾಡವನ್ನು ಕಳಚಿ ಹಾಕುತ್ತಾ, ಕಳೆದ ಮೂರು ದಶಕಗಳಿಗಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಗತ್ತನ್ನು ಸುತ್ತುತ್ತಿರುವ ವಂದನಾ ಶಿವ ಅವರ ಹೋರಾಟವನ್ನು ಹತ್ತಿರದಿಂದ ಗಮನಿಸಿದ ನನಗೆ , ತಾಯಿಕೋಳಿಯೊಂದು  ರಣ ಹದ್ದುಗಳಿಂದ ತನ್ನ ಮರಿಗಳನ್ನು ಕಾಪಾಡಿಕೊಳ್ಳಲು ನಡೆಸುವ ಹೋರಾಟ ನೆನಪಿಗೆ ಬರುತ್ತದೆ. ( 12 ವರ್ಷದ ಹಿಂದೆ ಜಾಗತೀಕರಣ ಕುರಿತ ನನ್ನ ಅಧ್ಯಯನದ ಸಂದರ್ಭದಲ್ಲಿ  ಭೌದ್ಧಿಕ ಆಸ್ತಿ  ಹಕ್ಕುಗಳ ಕುರಿತು ಇವರ ಬಳಿ ದೆಹಲಿಯಲ್ಲಿ ಒಂದು ವಾರ ಪಾಠ ಹೇಳಿಸಿಕೊಂಡಿದ್ದೆ. )
ಭಾರತ ಮತ್ತು ಅಫ್ರಿಕಾ ಸೇರಿದಂತೆ ಕೃಷಿಯ ಪಾರಂಪರಿಕ ಹಕ್ಕುಗಳನ್ನು ಬಹುರಾಷ್ರೀಯ ಕಂಪನಿಗಳಿಂದ ರಕ್ಷಿಸುವುದು ನನ್ನ ಬದುಕಿನ ಪರಮ ಗುರಿ ಎಂಬಂತೆ ಹೋರಾಡುತ್ತಿರುವ ವಂದನಾ ಶಿವ, ಕೃಷಿಜಗತ್ತು; ಜಗತ್ತಿನಿಂದ ಮಹಿಳೆಯರನ್ನು ಹೊರಗಿಟ್ಟ ನಂತರ ಆಗಿರುವ, ಆಗುತ್ತಿರುವ ದುರಂತ ಕಥನಗಳನ್ನು ಜಗತ್ತಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದಾರೆ. ಬೀಜ ಸ್ವಾತಂತ್ರ್ಯ ವೆಂಬುದು ಜಗತ್ತಿನ ರೈತರ ಜನ್ಮಸಿದ್ಧ ಹಕ್ಕು ಎಂಬುದನ್ನು ಪ್ರತಿಪಾದಿಸಿ, ನಮ್ಮ ಬೀಜ ಸ್ವಾತಂತ್ರ್ಯವನ್ನು ಕಸಿದ ಮಾನ್ಸಂಟೊ, ಕಾರ್ಗಿಲ್ ಮುಂತಾದ ಕಂಪನಿಗಳ ಕಳ್ಳತನವನ್ನು ಜಗತ್ತಿಗೆ  ಅನಾವರಣಗೊಳಿಸಿದ ಕೀರ್ತಿ ಡಾ. ವಂದನಾಶಿವಗೆ ಸಲ್ಲುತ್ತದೆ. ಇವರು ಬರೆದಿರುವ ಸ್ಟೋಲನ್ ಹಾರ್ವೆಸ್ಟ್ ( ಕದ್ದ ಫಸಲು) ಬಯೋ ಪೈರಸಿ ( ಜೈವಿಕ ನಕಲು) ಕೃತಿಗಳು  ಹಾಗೂ ವೈಲೆನ್ಸ್ ಇನ್ ದ ಗ್ರೀನ್ ರೆವ್ಯುಲೂಷನ್ ( ಹಸಿರು ಕ್ರಾಂತಿಯೊಳಗಿನ ಹಿಂಸೆ) ಹಾಗೂ ಮೊನೊಕಲ್ಷರ್ ಇನ್ ದ ಮೈಂಡ್ ( ಮನಸ್ಸಿನೊಳಗಿನ ಏಕರೂಪಿ ಸಂಸ್ಕೃತಿ) , ವಾಟರ್ ವಾರ್ಸ್ ( ನೀರಿನ ಯುದ್ಧಗಳು) ಇವೆಲ್ಲವೂ ಜಾಗತಿಕ ಕೃಷಿಲೋಕದ ಸಂಕಟಗಳನ್ನು ವಿವರಿಸುವ ಅಧ್ಯಯನಗಳು, ಮೂಲತಃ ಭೌತಶಾಸ್ತ್ರದ ವಿಜ್ಙಾನಿಯಾದ ಡಾ. ವಂದನಾ ಶಿವ , ಕೃಷಿ ಜಗತ್ತಿನತ್ತ ಮುಖಮಾಡಿದ್ದು ಈ ನೆಲದ ಪುಣ್ಯವೆಂದೇ ಭಾವಿಸಬೇಕು.

1952 ರ ನವಂಬರ್ 5 ರಂದು ಡೆಹರಾಡೂನ್ ಗಿರಿಧಾಮದಲ್ಲಿ ಅರಣ್ಯಾಧಿಕಾರಿಯ ಮಗಳಾಗಿ ಜನಿಸಿದ ವಂದನಾ, ಬಾಲ್ಯದ ಶಿಕ್ಷಣವನ್ನು ನೈನಿತಾಲ್ ನ ಸೆಂಟ್ ಮೇರಿ ಕಾನ್ವೆಂಟ್ ನಂತರ ದೆಹರಾಡೂನಿನ ಜೀಸಸ್- ಮೇರಿ ಶಾಲೆಯಲ್ಲಿ ಪೂರೈಸಿದರು. ಆನಂತರ ಚಂಡಿಗಡದಲ್ಲಿ ಪದವಿ ಹಾಗೂ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಕೆನಡಾದಲ್ಲಿ “ಪೌಂಡೇಶನ್ ಆಫ್ ಕ್ವಾಂಟಂ ಥಿಯರಿ” ವಿಷಯ ಕುರಿತು ಪಿ.ಹೆಚ್.ಡಿ. ಮುಗಿಸಿದರು. ಹಿಮಾಲಯದ ತಪ್ಪಲಲ್ಲಿ ಬೆಳೆದು, ಕೃಷಿಗೆ ಬೆನ್ನೆಲುಬಾಗಿದ್ದ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಬಾಲ್ಯದಿಂದ ಸ್ವತಃ ಕಣ್ಣಾರೆ ನೋಡಿದ್ದ ವಂದನಾ ಅವರಿಗೆ ವಿದ್ಯಾಭ್ಯಾಸ ಮುಗಿಸುತ್ತಿದ್ದ ವೇಳೆಗೆ ಆರಂಭವಾದ ಚಿಪ್ಕೋ ( ಅಪ್ಪಿಕೊ) ಚಳವಳಿ ಸೂಜಿಗಲ್ಲಿನಂತೆ ಸೆಳೆಯಿತು. ಹಿಮಾಲಯದ ತಪ್ಪಲಿನ ಅರಣ್ಯದ ಮರಗಳು ಕಂಟ್ರಾಕ್ಟರ್ ಗಳ  ಕೊಡಲಿಗೆ ಬಲಿಯಾಗಿ ನೆಲಕ್ಕೆ ಉರುಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ರೈತ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಅವುಗಳ ಉಳಿಸಿದ ಪರಿ ವಂದನಾ ಶಿವ ಅವರ ಮೇಲೆ ತೀವ್ರ ಪರಿಣಾಮ ಬೀರಿತು. ಈ ಕಾರಣಕ್ಕಾಗಿ ಭಾರತದ ಪರಿಸರ ಮತ್ತು ಕೃಷಿ ಜಗತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶದಲ್ಲಿನ ಉದ್ಯೋಗದ ಆಮೀಷವನ್ನು ನಿರಾಕರಿಸಿ, ಡೆಹರಾಡೂನ್ ನಲ್ಲಿ ನೆಲೆ ನಿಂತರು. ಗಿರಿಧಾಮದ ಹೊರ ವಲಯದಲ್ಲಿ ಕಣಿವೆಯೊಂದರ ಬಳಿ ಐದು ಎಕರೆ ಪ್ರದೇಶವನ್ನು ಖರೀದಿಸಿ, 1982 ರಲ್ಲಿ “ಪೌಂಡೇಷನ್ ಪಾರ್ ಸೈನ್ಸ್, ಟೆಕ್ನಾಲಜಿ ಅಂಡ್ ಎಕಾಲಾಜಿ ‘ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ 1991 ರಲ್ಲಿ ಇದೇ ಸ್ಥಳದಲ್ಲಿ “ ನವಧಾನ್ಯ ಟ್ರಸ್ಟ್’ ಎಂಬ ಸಂಸ್ಥೆ ಆರಂಭಿಸಿ, ತೃತೀಯ ಜಗತ್ತಿನ ಎಲ್ಲಾ ರಾಷ್ಟ್ರಗಳ ಪಾರಂಪರಿಕವಾಗಿ ಕೃಷಿಯಲ್ಲಿ ಬಳಕೆ ಮಾಡುತ್ತಾ ಬಂದಿದ್ದ ಬೀಜಗಳನ್ನು ಸಂರಕ್ಷಿಸುವ ಕಾರ್ಯ ಕೈಗೊಂಡರು. ಈಗ ಆಫ್ರಿಕಾ ರಾಷ್ರಗಳ ಮೆಕ್ಕೆಜೋಳ, ಅನೇಕ ಕಿರಿಧಾನ್ಯಗಳು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚಿನ ವಿವಿಧ ಆಹಾರ ಬೆಳೆಗಳ ಬೀಜಗಳನ್ನು ರಕ್ಷಿಸಿ ಇಡಲಾಗಿದೆ.ಜೊತೆಗೆ ಇತ್ತೀಚೆಗೆ ದೆಹಲಿಯಲ್ಲಿ ಕಛೆರಿ ತೆರೆಯಲಾಗಿದ್ದು, ಸಾವಯವ ಕೃಷಿ ಕುರಿತು ಪ್ರಚಾರೋಂಧಲನವನ್ನು ಕೈಗೊಳ್ಳಲಾಗುತ್ತಿದೆ.
ನಮ್ಮದೇಶದಿಂದ ಕದ್ದೋಯ್ದಿದ್ದ  ಬಸುಮತಿ ಅಕ್ಕಿಯ ತಳಿಗಳು ಮತ್ತು ಅರಿಶಿನದ ಮೇಲೆ ಅಮೇರಿಕಾ ದ ಬಹುರಾಷ್ಟ್ರೀಯ ಕಂಪನಿಗಳು ಪಡೆದುಕೊಂಡಿದ್ದ ಪೇಟೆಂಟ್ ಹಕ್ಕಿನ ವಿರುದ್ಧ  ಅಂತರಾಷ್ಟ್ರೀಯ ನ್ಯಾಯಲಯದಲ್ಲಿ ದಾವೆ ಹೂಡಿ ಗೆದ್ದ ಕೀರ್ತಿ ಇವರದು.
ಎಂಟು ವರ್ಷದ ಹಿಂದೆ ಇವರು ಆಫ್ರಿಕಾ ರಾಷ್ಟ್ರಗಳಲ್ಲಿ ತಿರುಗಾಟ ನಡೆಸಿ, ಮಳೆಯ ಅಭಾವ, ಮತ್ತು ಬರಗಾಲದಲ್ಲೂ ಬೆಳೆಯುವ ಅನೇಕ ಜೋಳದ ಬೆಳಯ ಬೀಜಗಳನ್ನು ಸಂಗ್ರಹಿಸಿ, ನಮ್ಮ ಅಪರೂಪದ ಕೆಲವು ತಳಿಗಳ ಬೀಜಗಳನ್ನು ಅವರಿಗೆ ನೀಡಿ, ಅಲ್ಲಿನ ಜೋಳದ ಬೀಜಗಳನ್ನು ಭಾರತಕ್ಕೆ ತಂದಿದ್ದರು. ಇದನ್ನು ಪ್ರತಿಭಟಿಸಿ ವಿಶ್ವ ವಾಣಿಜ್ಯ ಮಂಡಳಿಯಲ್ಲಿ ಇವರ ಮೇಲೆ ಅನೇಕ ಕಂಪನಿಗಳು ದೂರು ದಾಖಲಿಸಿದ್ದವು. ಈ ಸಂದರ್ಭದಲ್ಲಿ ಪಶ್ಚಿಮದ ಜಗತ್ತಿಗೆ ಮುಟ್ಟಿನೋಡಿಕೊಳ್ಳುವಂತೆ ವಂದನಾ ಶಿವ ಉತ್ತರ ನೀಡಿದ್ದರು. “ಬೀಜ ವಿನಿಮಯ ಪದ್ಧತಿಯಲ್ಲಿ ಬೀಜಗಳು ಮಾರಾಟದ ಸರಕಲ್ಲ, ಅದು ತೃತೀಯ ಜಗತ್ತಿನ ಜ್ಞಾನ ಪರಂಪರೆಯ ಶಿಸ್ತುಗಳಲ್ಲಿ ಒಂದು. ನಮ್ಮ ಪೂರ್ವಿಕರ ಜ್ಞಾನವನ್ನು ಯಾರೂ ಬೇಕಾದರೂ ಹಂಚಿಕೊಳ್ಳಬಹುದು. ಇದಕ್ಕೆ ಬಹುರಾಷ್ಟ್ರೀಯ ಕಂಪನಿಗಳೆಂಬ ದೊಣ್ಣೆ ನಾಯಕರ ಅನುಮತಿ ಬೇಕಾಗಿಲ್ಲ” ಎಂದು ಮರ್ಮಕ್ಕೆ ತಾಗುವಂತೆ ಹೇಳಿದ್ದರು.
ಇವೊತ್ತಿಗೂ ತಿಂಗಳಿಗೆ ಇಪ್ಪತ್ತು ದಿನ ಜಗತ್ತಿನ ಯಾವುದಾದರೊಂದು ರಾಷ್ಟ್ರದ ವಿ.ವಿ.ಯಲ್ಲಿ ಉಪನ್ಯಾಸ ಮಾಡುತ್ತಾ, ಇಲ್ಲವೆ ಜೈವಿಕ ತಂತ್ರಜ್ಞಾನದ ಕೃಷಿ ಮತ್ತು ಕುಲಾಂತರಿ ತಳಿಗಳ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳಿಗೆ ಕೈ ಜೋಡಿಸಿ, ಪ್ರತಿಭಟಿಸುತ್ತಾ ದಣಿವರಿಯದ ತಾಯಿಯ ಹಾಗೆ ಬದುಕುತ್ತಿರುವ ವಂದನಾ ಶಿವರನ್ನು ನಾನು, ಧ್ವನಿಯಿಲ್ಲದವರ ತಾಯಿ ಎಂದು ಕರೆಯಲು ಇಚ್ಚಿಸುತ್ತೇನೆ.
ಈವರೆಗೆ ನೊಬಲ್ ಪ್ರಶಸ್ತಿ ಹೊರತು ಪಡಿಸಿ ಜಗತ್ತಿನ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. 1993ರಲ್ಲಿ ರೈಟ್ ಲಿವ್ ಹುಡ್ ಪ್ರಶಸ್ತಿ, 1995 ರಲ್ಲಿ ವಿಶ್ವಸಂಸ್ಥೆಯ ಗ್ಲೋಬಲ್ 500 ಪ್ರಶಸ್ತಿ, 1997 ರಲ್ಲಿ ಡೆನ್ಮಾರ್ಕ್ ರಾಷ್ಟ್ರದ ಗೋಲ್ಡನ್ ಪ್ಲಾಂಟ್ ಪ್ರಶಸ್ತಿ, 1998 ರಲ್ಲಿ ಥೈಲಾಂಡ್ ರಾಣಿಯವರಿಂದ ವಿಶೇಷ ಪ್ರಶಸ್ತಿ, ಮತ್ತು ಜಗತ್ತಿನ ಮಹಿಳಾ ಚಳವಳಿಗೆ ನೀಡಿದ ಅತ್ಯಮೂಲ್ಯ ಕೊಡುಗೆಗಾಗಿ ಸ್ಪೇನ್ ಸರ್ಕಾರದ ಅಲ್ಪನ್ಯೂ ಕೆಮಿನ್ ಪ್ರಶಸ್ತಿಸೇರಿದಂತೆ ನೂರಾರು ಪ್ರಶಸ್ತಿಗಳು ಮತ್ತು ಅನೇಕ ಗೌರವ ಡಾಕ್ಟರೇಟ್ ಪದವಿಗಳು ಲಭ್ಯವಾಗಿವೆ

ಜಾಗತಿಕ ಕೃಷಿಲೋಕದಲ್ಲಿ ಘಟಿಸುತ್ತಿರುವ ವಂಚನೆಗಳ ಕುರಿತಂತೆ ಇವರು ಬರೆಯುತ್ತಿರುವ ಅನೇಕ ಲೇಖನಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ನಿಯತವಾಗಿ ಪ್ರಕಟಗೊಳ್ಳುತ್ತಿವೆ.ಇತ್ತೀಚೆಗೆ ಇವರು ಬರೆದ “ ಇಂಡಿಯ ಡಿವೈಡೆಡ್ “ ಕೃತಿ ಭಾರತದ ಎಲ್ಲಾ ರಂಗಗಳ ( ಸಾಮಾಜಿಕ, ರಾಜಕೀಯ, ಧಾರ್ಮಿಕ ವಲಯ) ಹುಳುಕುಗಳತ್ತ ಬೊಟ್ಟು ಮಾಡಿ ತೋರಿಸುತ್ತದೆ. ಜಾಗತೀಕರಣವನ್ನು ಹಾಡಿ ಹೊಗಳಿ, “ ದಿ ವರ್ಲ್ಡ್ ಈಸ್ ಪ್ಲಾಟ್” ಎಂಬ ಕೃತಿ ಬರೆದ ಪುಲಿಟ್ಜರ್ ಪ್ರಶಸ್ತಿ ವಿಜೇತ ಹಾಗೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಅಂಕಣಕಾರ ಥಾಮಸ್ ಪ್ರೈಡ್ ಮನ್ ನನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡು ಆತನ ಭೌದ್ಧಿಕ ಮಿತಿಯನ್ನು ಎತ್ತಿ ತೋರಿಸಿ ಬರೆದ ಲೇಖನಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಡಾ. ವಂದನಾ ಶಿವ ಅವರ ಪ್ರಖರ ಪ್ರತಿಭೆಯನ್ನು ಎತ್ತಿ ತೋರಿಸಿದವು
ಕೊನೆಯ ಮಾತು- ಇದು ಹತ್ತು ವರ್ಷದ ಹಿಂದೆ ನಡೆದ ಘಟನೆ.. ಮಂಡ್ಯ ನಗರದಲ್ಲಿ ಏರ್ಪಡಿಸಲಾಗಿರುವ    ರೈತ ಮಹಿಳೆಯರ ಸಮಾವೇಶಕ್ಕೆ ಬರುತ್ತಿದ್ದೇನೆ. ಬಂದು ಕಾಣು ಎಂದು  ಒಂದು ಸಂದೇಶವನ್ನು ವಂದನಾಶಿವ, ನನಗೆ ದೆಹಲಿಯಿಂದ  ರವಾನಿಸಿದ್ದರು. ಹುಬ್ಬಳ್ಳಿಯಿಂದ ಹಿಂದಿನ ದಿನವೇ  ಮಂಡ್ಯ ತಲುಪಿ , ಸಮಾವೇಶ ಆಯೋಜಿಸಿದ್ದ ಸಹೋದರಿಯರಾದ ಸುನಂದಾ ಜಯರಾಮ್ ಮತ್ತು ನಾಗರೇವಕ್ಕ ಜೊತೆ ಕೈಜೋಡಿಸಿದ್ದೆ. ಬೆಳಿಗ್ಗೆ  ಹತ್ತು ಗಂಟೆಗೆ ರೈತ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ , ಎಂಟು ಗಂಟೆಗೆ ಬೆಂಗಳೂರು ನಗರ ಬಿಟದಟರೆ ಸಾಕು  ಎಂದು ಅವರಿಗೆ ಸೂಚಿಸಿದ್ದೆ. ಅದರಂತೆ ಎಂಟುಗಂಟೆಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟ ವಂದನಾಶಿವ ಅವರಿಗೆ ಚನ್ನಪಟ್ಟಣದಲ್ಲಿ ನಡೆಯುತ್ತಿದ್ದ ರಸ್ತೆ ತಡೆ ಚಳವಳಿಯಿಂದ ನಿಗದಿತ ಸಮಯಕ್ಕೆ ಬರಲಾಗಲಿಲ್ಲ. ಒಂದು ಗಂಟೆ ತಡವಾಗಿ ಬಂದ ಅವರು, ವೇದಿಕೆಯ ಹಿಂಭಾಗದ ಕೊಠಡಿಯಲ್ಲಿ ಅವರಿಗಾಗಿ ತಂದು ಇಡಲಾಗಿದ್ದ  .ಕಾಫಿ, ಬಿಸ್ಕೆಟ್ ಗಳನ್ನು ತಿನ್ನಲು ನಿರಾಕರಿಸಿ ನೇರವಾಗಿ ವೇದಿಕೆಗೆ ಹೋದರು. ಕಾರ್ಯಕ್ರಮ ಮುಗಿಯಲು ಹತ್ತಿರವಾಗುತ್ತಿದ್ದಂತೆ, ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ನನ್ನನ್ನು ವೇದಿಕೆ ಹಿಂಭಾಗಕ್ಕೆ ಬರುವಂತೆ ಕಣ್ಸನ್ನೆಯಲ್ಲಿ ಸೂಚಿಸಿದರು. ಹತ್ತಿರಕ್ಕೆ ಹೋಗುತ್ತಿದ್ದಂತೆ” ಭಯ್ಯಾ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ತಿಂಡಿ ತರಿಸು ಎಂದರು.ಕೂಡಲೇ ನಮ್ಮ ಉದಯ ಟಿ.ವಿ. ವರದಿಗಾರನನ್ನು ಕಳಿಸಿ ಎರಡು ರವೆ ಇಡ್ಲಿ, ಚಹಾ ತರಿಸಿದೆ. ತಿಂಡಿ ತಂದ ನಂತರ ನಾನೇ “ ಮೇಡಂ, ನೀವು ತಿಂಡಿ ತಿಂದು ನಂತರ ವೇದಿಕೆ ಹತ್ತ ಬಹುದಾಗಿತ್ತು” ಎಂದೆ. ಆ ಕ್ಷಣದಲ್ಲಿ ಅವರು ನೀಡಿದ ಉತ್ತರ ಹೀಗಿತ್ತು. “ತಮ್ಮಾ, ನೀವು ಗಂಡಸರು ಗೂಳಿಗಳ ಹಾಗೆ ಸಿಕ್ಕ ಹೊಟೇಲ್ ಗಳಿಗೆ ನುಗ್ಗಿ ಹಸಿವನ್ನು ಹಿಂಗಿಸಿಕೊಳ್ಳುತ್ತೀರಿ. ಆದರೆ, ನಮ್ಮ ಮಹಿಳೆಯರು ಸಮಾವೇಶ ಮುಗಿಸಿ, ತಮ್ಮ ಹಳ್ಳಿಗಳ ಮನೆಗೆ ಹೋಗಿ ಊಟ ಮಾಡುತ್ತಾರೆ,ಮತ್ತು  ತಡೆ ಹಿಡಿದ ಮೂತ್ರ ವಿಸರ್ಜಿಸುತ್ತಾರೆ. ಇಂತಹ ಸಂಕಟಗಳ ಅರಿವು ಇರುವ ನಾನು, ಒಂದು ಗಂಟೆ ಕಾರ್ಯಕ್ರಮಕ್ಕೆ ತಡವಾಗಿ ಬಂದು ತಿಂಡಿ ತಿನ್ನುತಾ ಕೂರುವುದು ಸರಿಯೆ? “ ಇಂತಹ ಆಲೋಚನೆಯನ್ನು ಎಂದೂ ಜನ್ಮದಲ್ಲಿ ಯೋಚಿಸಿರದ ನಾನು ಆ  ಕ್ಷಣಕ್ಕೆ ಮೌನದಲ್ಲಿ ಹೂತು ಹೋದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ