ಬುಧವಾರ, ಮೇ 29, 2013

ಮಹಾನಗರಗಳೆಂಬ ನರಕಗಳು

ಇದು ಈ ದೇಶದ ಮಹಾನಗರಗಳ ಅವಸಾನದ ಕಥೆ ಮಾತ್ರವಲ್ಲ, ಜಗತ್ತಿನ ಎಲ್ಲಾ ಮಹಾ ನಗರಗಳ ಅವಸಾನದ ಕಥನವೂ ಹೌದು. ಜಗತ್ತಿನ ಅಭಿವೃದ್ಧಿಗೆ ನಗರೀಕರಣವೊಂದೇ ಮದ್ದು ಎಂಬ ಚಿಂತನೆಯ ಕಸವನ್ನು ಜಾಗತೀಕರಣದ ರೂವಾರಿಗಳು ನಮ್ಮ ತಲೆಗೆ ತುಂಬಿದ ಫಲವಾಗಿ ನಗರಗಳು ಇಂದು ನರಕಗಳಾಗಿವೆ.ಪಶ್ಚಿಮದ ಜಗತ್ತು ಮತ್ತು ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ರಾಶಿ, ರಾಶಿ, ಉತ್ಪಾದನೆ ಮಾಡಿ ಗುಡ್ಡೆಹಾಕುತ್ತಿರುವ ವಸ್ತುಗಳಿಗೆ ಹಾಗೂ ಆಹಾರೊತ್ಪನ್ನಗಳಿಗೆ ತೃತೀಯ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳು ಪ್ರಮುಖ ಮಾರುಕಟ್ಟೆಯಾಗಿವೆ. ಅವರ ಸರಕುಗಳು ಬಿಕರಿಯಾಗಬೇಕಾದರೆ,ವರ್ತಮಾನದ  ಜಗತ್ತಿನಲ್ಲಿ ನಗರಗಳು ಸೃಷ್ಟಿಯಾಗಬೇಕು ಮತ್ತು ನಗರಗಳ ಮೂಲಕವಾಗಿ ಗ್ರಾಹಕ ಮಿಕಗಳು ಸಹ ಬೆಳೆಯುತ್ತಿರಬೇಕು. ಏಕೆಂದರೆ, ಹಳ್ಳಿಗಳಲ್ಲಿ ವಾಸಿಸುತ್ತಾ, ಚಡ್ಡಿ ತೊಟ್ಟು ಮುದ್ದೆ ತಿನ್ನುವ ಅಥವಾ ಪಂಚೆ, ಕಚ್ಚೆತೊಟ್ಟು ರೊಟ್ಟಿ ತಿನ್ನುವ ವ್ಯಕ್ತಿಗಳು ಅವರ ಪಾಲಿಗೆ ಗ್ರಾಹಕಲಾಗರಾರು. ಅವರಿಗೆ ಬರ್ಮುಡ ಚಡ್ಡಿ, ಟೀ ಶರ್ಟ್, ಬನಿಯನ್ ತೊಟ್ಟು ಬೆಳಿಗ್ಗೆ ತಿಂಡಿಗೆ ನ್ಯೂಡಲ್ಸ್ ಅಥವಾ ಕಾರ್ನ್ ಪ್ಲೆಕ್ಸ್ ತಿಂದು, ಮಧ್ಯಾಹ್ನ ಊಟಕ್ಕೆ ಪಿಜ್ಜಾ ಬರ್ಗರ್ ತಿಂದು, ಕೊಕಾಕೋಲಾ, ಪೆಪ್ಸಿ ಕುಡಿಯುವ, ರಾತ್ರಿ ಕೆಂಟಕಿ ಚಿಕನ್ ತಿಂದು ವಿದೇಶಿ ವಿಸ್ಕಿ ಹೀರುವ ಗಿರಾಕಿಗಳು ಬೇಕು. ಇದಲ್ಲದೆ, ಪ್ರತಿ ಆರುತಿಂಗಳಿಗೆ ಮೊಬೈಲ್, ಪ್ರತಿವರ್ಷಕ್ಕೆ ಕಾರು, ಬೈಕ್, ಲ್ಯಾಪ್ ಟಾಪ್ ಬದಲಿಸುತ್ತಿರುವ ಗ್ರಾಹಕರು ಬೇಕು. ಇಂತಹವರು ಸೃಷ್ಟಿಯಾಗುವುದು ನಗರಗಳಲ್ಲಿ ಮಾತ್ರ. ಹಾಗಾಗಿ ಜಗತ್ತಿನ ಗ್ರಾಮೀಣ ಜನತೆ ಜಾಗತೀಕರಣದ ವಕ್ತಾರರ ಪಾಲಿಗೆ ಅನುತ್ಪಾದಕ ಜೀವಿಗಳು. ( ಇತ್ತೀಚೆಗೆ ಗ್ರಾಮಗಳಿಗೂ ಸಹ ಎಲ್ಲಾ ಸಂಸ್ಕೃತಿ  ಹರಡುತ್ತಿದೆ.ಪ್ರತಿ ಹಳ್ಳಿಯ ಅಂಗಡಿಗಳಲ್ಲಿ, ಉಪ್ಪು ಬೇಳೆ ಇಲ್ಲದಿದ್ದರೂ, ಕೊಕಾಕೋಲಾ ಮತ್ತು ಮೊಬೈಲ್ ಗಳು ದೊರೆಯುತ್ತವೆ)
ನಾವು ಆಧುನಿಕ ಜಗತ್ತಿನ, ವಿಶೇಷವಾಗಿ ಪಾಶ್ಚಿಮಾತ್ಯ ಜಗತ್ತಿನ ಹುನ್ನಾರಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ನಮ್ಮ ಭವಿಷ್ಯ ಖಂಡಿತಾ ಉಜ್ವಲವಾಗಿರುವುದಿಲ್ಲ ಎಂಬುದನ್ನು ಮೊದಲು ಮನಗಾಣಬೇಕಾಗುತ್ತದೆ.
ಭಾರತವನ್ನು ಸರಿ ಸುಮಾರು ಎರಡು ಶತಮಾನಗಳ ಕಾಲ ಆಳಿದ  ಬ್ರಿಟೀಷರು, ಪೋರ್ಚುಗೀಸರು, ಡಚ್ಚರ ಕುರಿತಂತ ನಮ್ಮ ಅಸಮಾಧಾನಗಳು ಏನೇ ಇರಲಿ, ಕಟ್ಟಡ ನಿರ್ಮಾಣ, ನಗರಗಳ ನಿರ್ಮಾಣ ಕುರಿತಂತೆ ಅವರಿಗೆ ಇದ್ದ ಅಭಿರುಚಿಗೆ ನಾವು ತಲೆ ಬಾಗಲೇಬೇಕು. ಪೋರ್ಚುಗೀಸರು ನಿರ್ಮಿಸಿದ ಪಾಂಡಿಚೇರಿ, ಡಚ್ಚರು ನಿರ್ಮಿಸಿದ ನಾಗಪಟ್ಟಣಂ  ಹಾಗೂ ಬ್ರಿಟೀಷರು ರೂಪಿಸಿದ ಕೊಲ್ಕತ್ತ, ಮುಂಬೈ, ದೆಹಲಿ, ಹಾಗೂ ಬೆಂಗಳೂರು ( ಕಂಟೊನ್ಮೆಂಟ್) ಚೆನ್ನೈ ನಗರದ ಕೆಲವು ಪ್ರದೇಶಗಳು ಇವೊತ್ತಿಗೂ ನಮ್ಮೆದುರು ಸಾಕ್ಷಿಯಾಗಿವೆ.
ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ಕಟ್ಟಡ, ಬೆಂಗಳೂರಿನ ಸೆಂಟ್ರಿಲ್ ಕಾಲೇಜ್ ಮತ್ತು ಹೈಕೋರ್ಟ್ ಕಟ್ಟಡಗಳು, ಕೊಲ್ಕತ್ತನಗರದ ರೈಟರ್ಸ್ ಬಿಲ್ಟಿಂಗ್, ಮುಂಬೈನ ವಿಕ್ಟೋರಿಯ ಟರ್ಮಿನಲ್ ರೈಲ್ವೆ ನಿಲ್ದಾಣ, ದೆಹಲಿಯ ಕನಾಟ್ ಪ್ಲೆಸ್ ಮತ್ತು ಲೋಧಿ ಮಾರ್ಗದಲ್ಲಿರುವ ಕಟ್ಟಡಗಳು ಹಾಗೂ ರಾಷ್ಟ್ರಪತಿ ಭವನದ ಕಟ್ಟಡ ಮತ್ತು ಅವುಗಳ ವಾಸ್ತು ಶಿಲ್ಪ ಇವೊತ್ತಿಗೂ ನಮಗೆ ಮಾದರಿಯಾಗಿವೆ. ಅವರು ನಿರ್ಮಿಸಿದ ಬಹುತೇಕ ಕಟ್ಟಡಗಳ ವಿಶೇಷತೆ ಎಂದರೆ, ನೆಲದಿಂದ ಹನ್ನರೆಡು ಅಡಿ ಯಿಂದ ಹದಿನಾಲ್ಕು ಅಡಿ ಎತ್ತರಕ್ಕೆ ನಿರ್ಮಿಸಿದ ಮಾಳಿಗೆ ಮತ್ತು ಹತ್ತು ಅಡಿ ಎತ್ತರದ ಬಾಗಿಲುಗಳು, ಎಂಟು ಎತ್ತರ ಹಾಗೂ ನಾಲ್ಕು ಅಡಿ ಅಗಲದ ಕಮಾನುಗಳು ಇಲ್ಲವೆ, ಕಿಟಕಿಗಳು ಇವೆಲ್ಲವೂ, ಅವರು ಭಾರತದ ಹವಾಮಾನ ಮತ್ತು ಪ್ರಾದೇಶಿಕತೆ ತಕ್ಕಂತೆ ಭಿನ್ನವಾಗಿ ಇರುವ ಪ್ರಾಕೃತಿಕ ಲಕ್ಷಣಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಿದ ವಾಸ್ತು ಶಿಲ್ಪದ ಪರಿಕಲ್ಪನೆಗಳಾಗಿವೆ.
1857 ರ ಸಿಪಾಯಿ ದಂಗೆ ಘಟನೆ ನಂತರ ಬ್ರಿಟೀಷರು, 1858ರಲ್ಲಿ ದೆಹಲಿ ನಗರವನ್ನು ಪುನರ್ ರೂಪಿಸಿದ ಬಗೆಯನ್ನು ಖ್ಯಾತ ಉರ್ದು ಹಾಗೂ ಪರ್ಶಿಯನ್ ಕವಿ ಮಿರ್ಜಾ ಗಾಲಿಬ್ ನ ಜೀವನ ಚರಿತ್ರೆ ಬರೆದಿರುವ, ಲೇಖಕ ಮತ್ತು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಪವನ್ ಕುಮಾರ್ ವರ್ಮ ತಮ್ಮ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ.
ಭಾರತದ ಸ್ವಾತಂತ್ರ್ಯಾನಂತರ ದೇಶದ ನಗರಗಳನ್ನು ಅಭಿವೃದ್ಧಿ ಪಡಿಸಲು , 1964 ಮತ್ತು 65 ರಲ್ಲಿ ಪ್ರಯತ್ನಿಸಲಾಯಿತು. ದೇಶದ ಬಹುತೇಕ ನಗರಗಳಲ್ಲಿ ಯೋಜನಾಬದ್ಧವಾದ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ನಾಗರೀಕರಿಗೆ ನೀಡಲಾಯಿತು. ನಂತರದ ದಿನಗಳಲ್ಲಿ ಆಳುವ ಸರ್ಕಾರಗಳ ನಿರ್ಲಕ್ಷ್ಯತನ ಮತ್ತು ಜನಪ್ರತಿನಿಧಿಗಳ ಅಯೋಗ್ಯತನದಿಂದಾಗಿ ಇಂತಹ ಯೋಜನೆಗಳು ಸರ್ಕಾರಗಳ ಕೈಯಿಂದ ಜಾರಿ ಭೂಮಾಫಿಯ ಜಗತ್ತಿನ ಅಂಗಳಕ್ಕೆ ಬಿದ್ದಿವೆ. ಸರ್ಕಾರಗಳು ಸಮರ್ಪಕವಾಗಿ ನಿರ್ವಹಿಸಲಾಗದ ಕ್ರೇತ್ರಗಳನ್ನು ಖಾಸಾಗಿಕರಣಗೊಳಿತ್ತಾ ನಡೆದಿವೆ. ಹಾಗಾಗಿ ಇಂದು ಶಿಕ್ಷಣ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳು ಲೂಟಿಕೋರರ ಮತ್ತು ಲಫಂಗರ ಕೈಯಲ್ಲಿವೆ.
ನಗರಗಳ ಅಭಿವೃದ್ಧಿಯ ಕುರಿತಂತೆ  ವ್ಯಾಖ್ಯಾನಗಳು ಬದಲಾಗಿವೆ. ಮಾಲ್ ಗಳು, ಮಲ್ಟಿಪ್ಲಕ್ಷ್, ಚಿತ್ರಮಂದಿರಗಳು, ಪಂಚತಾರ ಹೋಟೆಲ್ ಗಳು, ಬೃಹತ್ ಕ್ರಿಕೇಟ್ ಸ್ಟಡಿಯಂಗಳಷ್ಟೇ ನಗರವಲ್ಲ, ಇದಕ್ಕಿಂತ ಮುಖ್ಯವಾಗಿ ಕುಡಿಯುವ ಸ್ವಚ್ಛನೀರು, ಒತ್ತಡವಿಲ್ಲದ ನಗರಸಾರಿಗೆ, ವಸತಿ ನಿವಾಸಗಳು, ಒಳಚರಂಡಿ ವ್ಯವಸ್ಥೆ, ಸಮರ್ಪಕ ಕಸವಿಲೆವಾರಿ, ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆ ಇವೆಲ್ಲವೂ ಒದು ನಗರ ಹೊಂದಿರಬೇಕಾದ ಅವಶ್ಯಕವಾದ ಲಕ್ಷಣಗಳು. ಆದರೆ  ಈ ಲಕ್ಷಣಗಳನ್ನು ಹೊರತಪಡಿಸಿ ಉಳಿದೆಲ್ಲಾ ಲಕ್ಷಣಗಳನ್ನು ಮಹಾನಗರಗಳು ಒಳಗೊಂಡಿವೆ.
10 ಲಕ್ಷ ಜನತೆ ವಾಸಿಸುವ ನಗರಕ್ಕೆ ದಿನವೊಂದಕ್ಕೆ 6 ಲಕ್ಷ, 25ಸಾವಿರ ಟನ್ ನೀರು, 2ಸಾವಿರ ಟನ್ ಆಹಾರ ಧಾನ್ಯಗಳು, 9.500 ಟನ್ ಇಂಧನ, ಬೇಕಾಗುತ್ತದೆ ಎಂದು ಅಂದಾಜಿಸಿರುವ ತಜ್ಙರು, ಇದರಿಂದಾಗಿ ದಿನವೊಂದಕ್ಕೆ 5 ಲಕ್ಷ ಟನ್ ಕೊಳಚೆ ನೀರು, 2 ಸಾವಿರ ಟನ್ ಕಸ ಮತ್ತು 950 ಟನ್ ವಾಯು ಮಾಲಿನ್ಯ ಹೊರಬೀಳುತ್ತದೆ ಎಂದಿದ್ದಾರೆ.
ಭಾರತದ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೆ ದಿವೊಂದಕ್ಕೆ  ಸರಾಸರಿ 175 ರಿಂದ 204 ಲೀಟರ್ ಬೇಕಾಗಿದೆಯೆಂದು ಜಕಾರಿಯ ನೇತೃತ್ವದ ಸಮಿತಿ ಹೇಳಿದೆ. ಕೊಲ್ಕತ್ತ ನಗರದಲ್ಲಿ 274 ಲೀಟರ್, ಮುಂಬೈನಲ್ಲಿ 194 ಲೀಟರ್, ದೆಹಲಿಯಲ್ಲಿ 90 ಲೀಟರ್ ಬಳಕೆಯಾಗುತ್ತಿದೆ. ( ಅಮೇರಿಕಾದ ಚಿಕಾಗೊ ನಗರದಲ್ಲಿ ಪ್ರತಿ ಪ್ರಜೆ 1058 ಲೀಟರ್ ಮತ್ತು ಲಾಸ್ ಏಸಂಜಲಿಸ್ ನಗರದಲ್ಲಿ 1260 ಲೀಟರ್ ನೀರು ಬಳಕೆಯಾಗುತ್ತಿದೆ.)

ಇನ್ನು ಸಾರ್ವಜನಿಕ ಸಾರಿಗೆ ವ್ಯವ್ಸಸ್ಥೆಯಂತೂ ನಗರಗಳಲ್ಲಿ ಹೇಳ ತೀರದಾಗಿದೆ. ಪ್ರತಿ ಹತ್ತು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ 1284 ಚದುರ ಕಿಲೋ ಮೀಟರ್ ವ್ಯಾಪ್ತಿಯ ರಸ್ತೆಯ ಪ್ರದೇಶಗಳಿರಬೇಕು ಎಂದು ನಗರಾಭಿವೃದ್ಧಿ ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಆದರೆ, 1970ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಚಂಡಿಘರ್ ನಗರ 1260 ಚದುರ ಕಿ.ಮಿ. ಹೊಂದಿದ್ದರೆ, ಅಹಮ್ಮದಾಬಾದ್ 680, ಮುಂಬೈ 380 ಹೀಗೆ ಅರ್ಧದಷ್ಟು ರಸ್ತೆಯ ಪ್ರದೇಶಗಳನ್ನು ಭಾರತದ ನಗರಗಳು ಹೊಂದಿವೆ. ದಶಕದ ಹಿಂದೆ ಒಂದು ಗಂಟೆ ಅವಧಿಯಲ್ಲಿ ಒಂದು ಗಂಟೆಗೆ 6 ಸಾವಿರ ಎಲ್ಲಾ ವಿಧವಾದ ವಾಹನಗಳು ಸಂಚರಿಸುತ್ತಿದ್ದವು. ಇದೀಗ ಭಾರತದ ನಗರಗಳಲ್ಲಿ ಪ್ರತಿ ಗಂಟೆಗೆ 14 ಸಾವಿರ ವಾಹನಗಳು ಚಲಿಸುತ್ತವೆ. 2004ರಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ 1215 ಹೊಸ ವಾಹನಗಳು ರಸ್ತೆಗಳಿಯುತ್ತಿದ್ದವು . ಬಹುಷಃ ಈ ಪ್ರಮಾಣ ಈಗ ಮೂರುಪಟ್ಟು ಹೆಚ್ಚಾಗಿರಬಹುದು. ನಗರಗಳಲ್ಲಿ ವಾಹನಗಳ ದಟ್ಟಣೆಯಿಂದಾಗಿ ವಾಯುಮಾಲಿನ್ಯದ ಜೊತೆಗೆ ಶಬ್ಧ ಮಾಲಿನ್ಯ ಕೂಡ ಹೆಚ್ಚುತ್ತಿದೆ. ಕನಿಷ್ಟ 70 ಡಿ.ಬಿ. ಇರಬೇಕಾದ ಶಬ್ಧ ಮಾಲಿನ್ಯನದ ಪ್ರಮಾಣ ಚೆನ್ನೈ ನಗರದಲ್ಲಿ 89, ಮುಂಬೈನಲ್ಲಿ 85. ದೆಹಲಿ 89 ಕೊಲ್ಕತ್ತ 87, ಬೆಂಗಳೂರು 83 , ಕೊಚ್ಚಿನ್ 80, ಕಾನ್ಪುರ ಮತ್ತು ಮಧುರೈ ನಗರಗಳಲ್ಲಿ 79 ಹಾಗೂ ತಿರುವನಂತಪುರದಲ್ಲಿ 70ರಷ್ಟಿದೆ.. 2011ರಲ್ಲಿ ನಡೆಸಲಾದ ಅಧ್ಯಯನದಲ್ಲಿ ಜಗತ್ತಿನ ಅತಿ ಹೆಚ್ಚು  ನಲವತ್ತೊಂದು ವಾಯುಮಾಲಿನ್ಯ ನಗರಗಳಲ್ಲಿ ದೆಹಲಿ ನಾಲ್ಕನೆಯ ಸ್ಥಾನ, ಕೊಲ್ಕತ್ತ ಆರನೇಯ ಸ್ಥಾನ ಮತ್ತು ಚೆನ್ನೈ ನಗರ ಹದಿನಾಲ್ಕನೇ ಸ್ಥಾನ ಪಡೆದಿವೆ. (ಇತ್ತೀಚೆಗಿನ ಅಧ್ಯಯನದಲ್ಲಿ ಬೆಂಗಳೂರು ನಗರ ಸ್ಥಾನ ಪಡೆದಿದ್ದರೆ, ಆಶ್ಚರ್ಯವಿಲ್ಲ.)
ಮಹಾನಗರಗಳ ಬಹುದೊಡ್ಡ ಸಮಸ್ಯೆಗಳಲ್ಲಿ ಪ್ರಮುಖವಾದವುಗಳೆಂದರೆ,, ವಸತಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಮುಖ್ಯವಾದವು. ಪ್ರತಿ ವರ್ಷ ದೇಶದ ಮಹಾನಗರಗಳಲ್ಲಿ 17 ಲಕ್ಷ ಮನೆಗಳ ಬೇಡಿಕೆಯಿದ್ದು, ಬೇಡಿಕೆಗೆ ತಕ್ಕಂತೆ ಮನೆಗಳನ್ನು ಪೂರೈಸಲು ಸರ್ಕಾರಗಳು ಸೋತಿವೆ. ಹಾಗಾಗಿ ದೇಶದೆಲ್ಲೆಡೆ  ವಸತಿ ಕ್ರೇತ್ರದಲ್ಲಿ ಭೂಮಾಫಿಯ ತಲೆ ಎತ್ತಿದೆ. ಬಣ್ಣ ಬಣ್ಣದ ಕರಪತ್ರಗಳಲ್ಲಿ ತಾವು ನಿರ್ಮಿಸುವ ಅಪಾರ್ಟ್ ಮೆಂಟ್ ಗಳ ಬಗ್ಗೆ, ಅಥವಾ ಮನೆಗಳ ಬಗ್ಗೆ ನೂರಾರು ಆಮೀಷವೊಡ್ಡುವ ಬಿಲ್ಡರ್ ಗಳು ನಂತರದ ಸಮಸ್ಯೆಗಳನ್ನು ಗ್ರಾಹಕರ ತಲೆಗೆ ವರ್ಗಾಯಿಸುತ್ತಿದ್ದಾರೆ. 40 ರಿಂದ 60 ಲಕ್ಷರೂಪಾಯಿ ನೀಡಿ ಅಪಾರ್ಟ್ ಮೆಂಟ್ ಗಳಲ್ಲಿ ಮನೆಗಳನ್ನು ಖರೀದಿಸುವ ಗ್ರಾಹಕರು, ನಂತರ ನಿರ್ವಹಣಾ ವೆಚ್ಚವಾಗಿ ಎಂಟು ಸಾವಿರದಿಂದ ಹತ್ತು ಸಾವಿರ ರೂಪಾಯಿ ಹಾಗೂ ನೀರಿನ ಸಮಸ್ಯೆಯಿಂದಾಗಿ ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂ.( ಬೆಂಗಳೂರಿನಲ್ಲಿ ನಾಲ್ಕು ಸಾವಿರ ಲೀಟರ್ ನೀರಿಗೆ 900ರೂಪಾಯಿ) ವಿದ್ಯುತ್ ಬಿಲ್ ಎರಡರಿಂದ ಮೂರು ಸಾವಿರ ಹೀಗೆ ಸ್ವಂತ ಮನೆ ಹೊಂದಿದ್ದರೂ ಕೂಡ ತಿಂಗಳಿಗೆ ಹನ್ನೆರಡರಿಂದ ಹದಿನೈದು ಸಾವಿರ ವೆಚ್ಚ ಮಾಡಬೇಕಾದ ಸ್ಥಿತಿ.


ಈ ದಿನಗಳಲ್ಲಿ ನಗರದ ಹೃದಯ ಭಾಗ ಅಥವಾ ಹತ್ತಿರದಲ್ಲಿ ಇರುವ ಬಢಾವಣೆಗಳಲ್ಲಿ ತಲೆ ಎತ್ತುತ್ತಿರುವ ವಸತಿ ಸಂಕೀರ್ಣಗಳಲ್ಲಿ ಎಲ್ಲರೂ ಮನೆ ಪಡೆಯಲು ಆಶಿಸುತ್ತಾರೆ. ಆದರೆ, ನಲವತ್ತು ವರ್ಷಗಳ ಹಿಂದೆ ಕೇವಲ ಒಂದು ಸಾವಿರ ಮನೆಗಳಿಗೆ ಅಥವಾ ಅದರಲ್ಲಿ ವಾಸಿಸಬಹುದಾದ ಐದು ಸಾವಿರ ಜನತೆಗಾಗಿ, ಕುಡಿಯುವ ನೀರಿನ ಕೊಳವೆ, ಓಳಚರಂಡಿ ಚರಂಡಿ ಗಳನ್ನು ನಿರ್ಮಿಸಲಾಗಿರುತ್ತದೆ. ಈಗ ಐದು ಮಂದಿ ವಾಸಿಸುತ್ತಿದ್ದ ಮನೆಯನ್ನು ತೆಗೆದು, ನಲವತ್ತು ಕುಟುಂಬಗಳು ವಾಸಿಸುವ ಅಪಾರ್ಟ್ ಮೆಂಟ್ ನಿರ್ಮಾಣವಾದರೆ, ಐದು ಮಂದಿಗೆ ಇದ್ದ ನೀರು, ವಿದ್ಯುತ್  ಪೂರೈಕೆ, ಅಥವಾ ಒಳ ಚರಂಡಿ ವ್ಯವಸ್ಥೆ ಇನ್ನೂರು ಐವತ್ತು ಮಂದಿಗೆ ಸಾಧ್ಯವೆ? ಹಾಗಾಗಿ ಇಂದು 25 ಸಾವಿರ ಮಂದಿ ವಾಸಿಸ ಬಹುದಾದ ಬಡಾವಣೆಗಳಲ್ಲಿ 2.5 ಲಕ್ಷ ವಾಸಿಸುವ ಹಾಗೆ ವಸತಿ ಸಂಕೀರ್ಣಗಳನ್ನು ನಿರ್ಮಿಸಿ , ಬಿಲ್ಡರ್ ಗಳು ಮುಂದೆ ಬರುಬಹುದಾದ ಎಲ್ಲಾ ಸಮಸ್ಯೆಗಳನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸುತ್ತಿದ್ದಾರೆ. ನಗರಗಳ ಅಭಿವೃದ್ಧಿ ಕುರಿತು ಕ್ರಮಬದ್ಧ ಯೋಜನೆಗಳ ಬಗ್ಗೆ ಸರ್ಕಾರಗಳಿಗೆ ಯಾವುದೇ ದೂರದೃಷ್ಟಿಯ ಆಲೋಚನೆಗಳು ಇಲ್ಲದಿರುವ ಕಾರಣ ನಗರಗಳು ನರಕಗಳಾಗಿ ಅಲ್ಲಿ ವಾಸಿಸುವ ಜನ ಒತ್ತಡದ ಬದುಕಿನಲ್ಲಿ ಮುಳುಗಿ ಏಳುವಂತಾಗಿದೆ. ನಗರಗಳಲ್ಲಿ ಪ್ರತಿ ಐವತ್ತು ಅಡಿಯಿಂದ ನೂರು ಅಡಿ ಅಂತರದಲ್ಲಿ ಕೊಳವೆ ಬಾವಿಗಳಿದ್ದು ಅಂತರ್ಜಲ ಸಾವಿರಾರು ಅಡಿಗಳ ಆಳಕ್ಕೆ ಇಳಿದಿದೆ. ಅಂತರ್ಜಲ ಹೆಚ್ಚಿಸುತ್ತಿದ್ದ ಕೆರೆಗಳೆಲ್ಲಾ ಬಡಾವಣೆಗಳಾಗಿವೆ. ಒಂದು ಕಾಲದಲ್ಲಿ ಎಂಬತ್ತು ಕೆರೆಗಳಿದ್ದ ಬೆಂಗಳೂರಿನಲ್ಲಿ ಈಗ ಹುಡುಕಿದರೆ, ಎಂಟರಿಂದ ಹತ್ತು ಕೆರೆಗಳು ಸಿಗಬಹುದು. ಹೋಗಲಿ ಮಳೆ ನೀರು ಇಂಗಲು ಭೂಮಿಯಾದರೂ ಇದೆಯಾ? ಉದ್ಯಾನವನಗಳನ್ನು ಹೊರತು ಪಡಿಸದರೆ, ಉಳಿದೆಲ್ಲಾ ಭೂ ಭಾಗವನ್ನು ರಸ್ತೆ, ಪುಟ್ ಬಾತ್, ಮತ್ತು ವಸತಿ ನಿರ್ಮಾಣದ ನೆಪದಲ್ಲಿ ಕಾಂಕ್ರಿಟ್ ಮತ್ತು ಟಾರ್ ನಿಂದ ಮುಚ್ಚಲಾಗಿದೆ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ನಾವು ವಾಸಿಸುವ ಮನೆಗಳ ಸುತ್ತ ಬಿಡಲಾಗಿರುವ ಖಾಲಿ ಜಾಗವನ್ನು ಸಹ ಕಲ್ಲುಚಪ್ಪಡಿ ಇಲ್ಲವೆ ಸಮೆಂಟ್ ಸ್ಲಾಬ್ ಗಳಿಂದ ಮುಚ್ಚಲು ಹೊರಟಿದ್ದಿವೆ. ನಮ್ಮ ಪಾದಗಳಿಗೆ ಮಣ್ಣು ತಾಗುವುದು ಅಸಹ್ಯ ಎಂಬ ಪ್ರಜ್ಙೆ ನಮ್ಮೊಳಗೆ ಬೆಳೆದು ನಿಂತಿದೆ.
ಇವುಗಳ ಜೊತೆಗೆ ಕಸವಿಲೆವಾರಿ ಸಮಸ್ಯೆ ಇತ್ತೀಚೆಗಿನ ದಿನಗಳಲ್ಲಿ ಮಹಾನಗರಗಳ ಅತಿ ದೊಡ್ಡ ಸವಾಲಾಗಿದೆ. ಬದಲಾದ ನಮ್ಮ ಅನುಭೋಗದ ವೈಖರಿ, ಪ್ಲಾಸ್ಟಿಕ್ ಬಳಕೆಯ ವ್ಯಾಮೋಹ. ಪದೇ ಪದೇ ಬಲಾಯಿಸುವ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಮಮತೆ ಇವೆಲ್ಲಾ ಪರೋಕ್ಷವಾಗಿ ಕಸವಿಲೆವಾರಿಗೆ ತೊಡಕಾಗಿವೆ. ಭಾರತದ ಪ್ರಮುಖ 40 ನಗರಗಳಲ್ಲಿ ಪ್ರತಿ ನಿತ್ಯ 55 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ 4.500 ಟನ್, ದೆಹಲಿಯಲ್ಲಿ 6000 ಟನ್, ಕೊಲ್ಕತ್ತದಲ್ಲಿ 5.500 ಟನ್ ಮುಂಬೈನಲ್ಲಿ 4.800 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕೇವಲ ಶೇಕಡ ಎಪ್ಪತ್ತರಷ್ಟು ಮಾತ್ರ ವಿಲೆವಾರಿಯಾಗುತ್ತಿದೆ. ಉಳಿದ ಕಸ ಅಲ್ಲಿಯೇ ಕೊಳೆತು ನಾರುತ್ತಿದೆ.
ಇಂದಿನ ಆತುರದ ದಿನಗಳಲ್ಲಿ ಯಾರಿಗೂ ನಗರಗಳ ಕುರಿತು ಯೋಚಿಸುವ ವ್ಯವಧಾನವಿಲ್ಲ. ಇನ್ನೂ ಸದಾ ಓಡುತ್ತಿರಬೇಕಾದ ದಾವಂತದ ಬದುಕಿನಲ್ಲಿ ಸಿಲುಕಿರುವ ನಗರದ ಜನತೆ ತಾವು ಇಟ್ಟ ಹೆಜ್ಜೆಯನ್ನು ಹಿಂತಿರುಗಿ ನೋಡಲಾರದಷ್ಟು ಅಸಹಾಯಕರಾಗಿದ್ದಾರೆ. ಇನ್ನು ನಗರಗಳ ಭವಿಷ್ಯಗಳ ಯಾರು ಚಿಂತಿಸಿ ಫಲವೇನು? ಅಭಿವೃದ್ಧಿಯ ವಿಕಾರಗಳ ಕುರಿತು ಬರೆಯುವುದು ಅಥವಾ ಮಾತನಾಡುವುದು ಸಿನಿಕತನ ಎಂಬಂತಾಗಿರುವ ಈ ವರ್ತಮಾನದ ದಿನಗಳು ನಿಜಕ್ಕೂ ದಿಗಿಲು ಹುಟ್ಟಿಸುವಂತಿವೆ.


1 ಕಾಮೆಂಟ್‌:

  1. ಈ ಲೇಖನ ಓದಿ ನಿಜಕ್ಕೂ ದಿಗಿಲು ಹುಟ್ಟಿಸಿದೆ. ಏನು ಕೇಡಿಗೆ ನಗರಗಳು ಹೀಗೆ ಬೆಳೆಯುತ್ತಿವೆಯೇನೋ ಎಂದೆನಿಸುತ್ತದೆ. ನಗರಗಳಲ್ಲಿ ನೆಲೆಸುವ ನಮ್ಮಂತ ಜನರು ಸಾಧ್ಯವಾದಷ್ಟು ಎಚ್ಚೆತ್ತುಕೊಂಡು ನೆಡೆದರೆ ಒಬ್ಬರನ್ನ ನೋಡಿ ಮತ್ತೊಬ್ಬರು ಬದಲಾಗುತ್ತಾರೆಂದೆನಿಸುತ್ತದೆ. ಆದರೆ ಬದಲಾವಣೆಯನ್ನ ಜಾರಿಗೊಳಿಸುವವರು ಯಾರು ಅದೇ ಯಕ್ಷ ಪ್ರಶ್ನೆ..?!! ಹಳ್ಳಿಗಾಡಿನ ಜನರಿಗೂ ನಗರ ಜೀವನ ಖುಷಿ ನೀಡುತ್ತದೆ ಹಳ್ಳಿಗಳೂ ಈಗೀಗ ಸಿಟಿ ಆಗುತ್ತಲಿವೆ ಬೇಸಾಯ ಬೇಡವಾಗಿದೆ.

    ಸುಮ್ಮನೆ ವ್ಯವಸಾಯ, ಭೂಮಿ ಎಂದು ಕುಳಿತರೆ ತಿಂಗಳಿಗೆ ಎಷ್ಟು ಸಿಗುತ್ತೆ ಅದರ ಬದಲು ಒಂದು ಗಾರ್ಮೆಂಟ್ ಕೆಲಸಕ್ಕೆ ಹೋದರೆ ತಿಂಗಳಿಗೆ ೫ ಸಾವಿರ ಕಾಣಬಹುದು ಎಂದು ನಗರಗಳತ್ತ ಮುಖ ಮಾಡುತ್ತಲಿದ್ದಾರೆ ಇದರಲ್ಲಿ ಹಳ್ಳಿಗರ ತಪ್ಪು ಇದೆಯೋ ಇಲ್ಲವೋ ಗೊತ್ತಿಲ್ಲ ಪರಿಸ್ಥಿತಿಗಳು ಕೈ ಮೀರಿ ಸಾಗುತ್ತಲಿವೆ... ಇದಕ್ಕೆ ಪರಿಹಾರ ಮಾತ್ರ ಕಾಣುತ್ತಿಲ್ಲ..

    ಪ್ರತ್ಯುತ್ತರಅಳಿಸಿ