ಶುಕ್ರವಾರ, ಫೆಬ್ರವರಿ 14, 2025

ಟಿಪ್ಪು ವಿರೋಧಿಗಳು ಒಮ್ಮೆ ನೋಡಲೇ ಬೇಕಾದ ಸಿನಿಮಾ ‘’ ರಜಾಕಾರ್’’



.

ಅಂದಿನ ಹೈದರಾಬಾದ್ ಸಂಸ್ಥಾನಕ್ಕೆ ನಮ್ಮ ಕರ್ನಾಟಕದ ಗುಲ್ಬರ್ಗಾ, ಬೀದರ್, ರಾಯಚೂರು ಜಿಲ್ಲೆಗಳು ಸೇರಿದಂತೆ ಅನೇಕ ಭಾಗಗಳು ಸೇರಿದ್ದವು. ಕನ್ನಡ, ಮರಾಠಿ ಮತ್ತು ತೆಲುಗು ಭಾಷೆಯ ಜನರ ನಡುವೆ ಅಧಿಕಾರ ಮಾತ್ರ ಮುಸ್ಲಿಂ ದೊರೆಗಳ ಕೈಯಲ್ಲಿತ್ತು. ಹದಿನೈದನೇ ಶತಮಾನದಿಂದ ಬಿಜಾಪುರದ ಆದಿಲ್ ಶಾಹಿ, ಗುಲ್ಬರ್ಗದ ಬಹುಮನಿ ಸುಲ್ತಾನರು, ಗೊಲ್ಕಂಡಾದ ನಿಜಾಮರು ಹಾಗೂ ಮೊಗಲರ ಆಳ್ವಿಕೆಯಲ್ಲಿ ಅಲ್ಲಿನ ಜನತೆ ಆಳಿಸಿಕೊಂಡಿದ್ದಾರೆ. ಆದರೆ, ಇಪ್ಪತ್ತನೇ ಶತಮಾನದ ಅವಧಿಯಲ್ಲಿ ಹೈದರಾಬಾದ್ ನಿಜಾಮನಾಗಿದ್ದ ಮೀರ್ ಉಸ್ಮಾನ್ ಆಲಿಖಾನ್ ಆಳ್ವಿಕೆಯಲ್ಲಿ ಆತನು ಸ್ವತಂತ್ರ ಭಾರತಕ್ಕೆ ಸೇರಲು ಇಚ್ಚಿಸದೆ, ಹೈದರಾಬಾಧ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವಾಗಿಸಲು ನಡೆಸಿದ ಹೋರಾಟ ಅತ್ಯಂತ ಅಮಾನುಷವಾದುದು.
ದಕ್ಷಿಣ ಕರ್ನಾಟಕದ ಜನತೆಗೆ ರಜಾಕೋರ ದಾಳಿ, ಲೂಟಿ, ಕೊಲೆ ಮತ್ತು ಅತ್ಯಾಚಾರದ ಬಗ್ಗೆ ತಿಳಿದಿರುವುದು ಅತ್ಯಲ್ಪ. ರಜಾಕೋರರ ಹಾವಳಿ ಎಂದಷ್ಟೇ ಓದಿಕೊಂಡಿರುವ ನಾವು ಇಂದಿನ ಹೈದರಾಬಾದ್ ಕರ್ನಾಟಕದ ಜನತೆ 1947 ಆಗಸ್ಟ್ 15 ರಿಂದ 1948 ಸೆಪ್ಟಂಬರ್ 18 ರವರೆಗೆ ನಡೆಸಿರುವ ಹೋರಾಟ, ಜೀವ ತೆತ್ತ ಪರಿ ಇವೆಲ್ಲವೂ ಈ ಜಗತ್ತಿನ ಯಾವುದೇ ಹೋರಾಟಕ್ಕೆ ಮಿಗಿಲಾಗಿ ನಿಲ್ಲುವಂತಹದ್ದು. ಇಪ್ಪತ್ತೈದು ವರ್ಷಗಳ ಹಿಂದೆ ಉದಯ ಟಿ.ವಿ. ಪ್ರಾದೇಶಿಕ ಕಚೇರಿಯ ಮುಖ್ಯಸ್ಥನಾಗಿ ಹುಬ್ಬಳ್ಳಿಗೆ ಹೋದನಂತರ ಇಪ್ಪತ್ತುವರ್ಷಗಳ ಕಾಲ ಧಾರವಾಡದಲ್ಲಿ ನೆಲೆ ನಿಂತು ಕಾಯಾ, ವಾಚಾ, ಮನಸಾ, ಅಲ್ಲಿನ ಮಣ್ಣಿನ ಮಗನಂತೆ ಬದುಕಿದೆ.
ಬೀದರ್, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳು ನನ್ನ ವ್ಯಾಪ್ತಿಗೆ ಬರುತ್ತಿದ್ದ ಕಾರಣ, ಅತ್ತ ಕಡೆ ಹೋದಾಗ, ಅಲ್ಲಿನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಮಿತ್ರರ ಮಾತುಗಳಿಗೆ ಇಡೀ ರಾತ್ರಿ ಕಿವಿಗೊಟ್ಟು ಕೇಳುತ್ತಿದ್ದೆ, ಬೀದರ್ ಜಿಲ್ಲೆಯಲ್ಲಿ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರರಾಗಿದ್ದು ನಂತರ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದ ದೇವು ಪತ್ತಾರ್ ಹಾಗೂ ಬೀದರ್ ಜಿಲ್ಲೆಯ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದ ಹೃಷಿಕೇಶ್ ಬಹದ್ದೂರ್ ಹಾಗೂ ಉತ್ತರ ಕರ್ನಾಟಕದ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಮದನ್ ಮೋಹನ್, ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಮೋಹನ ಹೆಗ್ಡೆ ಇವರೆಲ್ಲರೂ ನನ್ನ ಪಾಲಿಗೆ ಮಾಹಿತಿ ಕಣಜವಾಗಿದ್ದರು.
ಇಪ್ಪತ್ತು ವರ್ಷದ ಹಿಂದೆ ಒಮ್ಮೆ ಕಾರ್ಯನಿಮಿತ್ತ ರಾಯಚೂರಿಗೆ ಹೋಗಿದ್ದಾಗ, ಅಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ದಸ್ತಗೀರ್ ಸಾಬ್ ದಿನ್ನಿ ಎಂಬ ಮಿತ್ರ (ಈಗ ಬಳ್ಳಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ) ನನ್ನನ್ನು ನನ್ನ ಪ್ರೀತಿಯ ಕವಿ ಜಂಬಣ್ಣ ಅಮರಚಿಂತ ಅವರ ಮನೆಗೆ ಕರೆದೊಯ್ದರು. ಅಂದಿನಿಂದ ಅತ್ತಕಡೆ ಹೋದಾಗಲೆಲ್ಲಾ ಅವರ ಬಾಯಲ್ಲಿ ಅವರು ತಮ್ಮ ತಂದೆ ಮತ್ತು ತಾಯಿ ಹಾಗೂ ಹಿರಿಯರಿಂದ ಕೇಳಿಸಿಕೊಂಡ ರಜಾಕೋರರ ದಾಳಿಯ ಕಥನವನ್ನು ನನಗೆ ವಿವರಿಸುತ್ತಿದ್ದರು. ಶಾಂತರಸ, ಚಂದ್ರಕಾಂತ ಕುಸನೂರು, ಜಂಬಣ್ಣ ಅಮರಚಿಂತ ಮೂವರು ಬಾಲ್ಯದಲ್ಲಿ ಉರ್ದು ಮಾಧ್ಯಮದಲ್ಲಿ ಓದಿದವರು. ಮೂವರನ್ನೂ ಭೇಟಿಯಾಗಿ ಅವರ ಬಾಲ್ಯದ ಕಥೆಗಳನ್ನು ಮತ್ತು ರಜಾಕೋರರ ಕ್ರೌರ್ಯದ ಕಥನವನ್ನು ಕೇಳಿದ ಭಾಗ್ಯ ನನ್ನದು. ಜಂಬಣ್ಣನವರು ತಮ್ಮ ಆಥ್ಮ ಕಥನವನ್ನು ಕಾದಂಬರಿಯ ರೂಪದಲ್ಲಿ ‘’‘’ಬೂಟುಗಾಲಿನ ಸದ್ದು’’ ಎಂಬ ಶೀರ್ಷಿಕೆಯಡಿ ಬರೆದಿದ್ದಾರೆ.
1947 ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಖಚಿತವಾಗುತ್ತಿದ್ದಂತೆ, ಹೈದರಾಬಾದ್ ನಿಜಾಮನು ತನ್ನ ಸೈನಿಕರಿಗೆ ಬ್ರಿಟೀಷರಿಂದ ತರಬೇತಿ ಕೊಡಿಸುವುದರ ಜೊತೆಗೆ ಹೇರಳವಾಗಿ ಹಣವನ್ನು ನೀಡಿ ಅವರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದನು. ಜೊತೆಗೆ ಹೈದರಾಬಾದ್ ಅನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸುವಂತೆ ಆಮೀಷವೊಡ್ಡಿದ್ದನು. 1947 ರ ಆಗಸ್ಟ್ 15 ರಂದು ಪಾಕಿಸ್ತಾನ ರಾಷ್ಟ್ರ ಘೋಷಣೆಯಾಗುತ್ತಿದ್ದಂತೆ, ಹೈದರಾಬಾದ್ ಸಂಸ್ಥಾನವು ತುರ್ಕಿಸ್ತಾನ ಎಂದು ತನ್ನದೇ ರೇಡಿಯೋ ಕೇಂದ್ರವಾದ ಡೆಕ್ಕನ್ ರೇಡಿಯೋ ಮೂಲಕ ಘೋಷಿಸಿಕೊಂಡನು. ಪಾಕಿಸ್ತಾನಕ್ಕೆ ಇಪ್ಪತ್ತುಕೋಟಿ ರೂಪಾಯಿ ಹಣವನ್ನು ನೀಡಿ, ಮಹಮದ್ ಜಿನ್ನಾ ಅವರ ಮೂಲಕ ಸ್ವತಂತ್ರ ರಾಷ್ಟ್ರ ಎಂಬ ಮಾನ್ಯತೆಯನ್ನು ಘೋಷಿಸಿ, ಇತರೆ ಮುಸ್ಲಿಂ ರಾಷ್ಟ್ರಗಳು ವಿಶ್ವಸಸಂಸ್ಥೆಯ ಮೇಲೆ ಒತ್ತಡ ತರುವಂತೆ ನೋಡಿಕೊಂಡನು.
ಹೈದರಾಬಾದ್ ನಿಜಾಮನ ಹುಚ್ಚಾಟಕ್ಕೆ ಆಸರೆಯಾಗಿ ನಿಂತದ್ದು ರಜಾಕೋರರ ಸಂಘಟನೆ. ಪರ್ಷಿಯನ್ ಭಾಷೆಯಲ್ಲಿ ರಜಾಕೋರ್ ಎಂದರೆ, ಸ್ವಯಂ ಸೇವಕರು ಎಂದರ್ಥ. 1938-40 ರ ನಡುವೆ ಕೌನ್ಸಿಲ್ ಆಫ್ ಮುಸ್ಲಿಂ ಯೂನಿಟಿ ಹೆಸರಿನಲ್ಲಿ ಬಹದ್ದೂರ್ ಯಾರ್ ಜಂಗ್ ಎಂಬುವವನ ನೇತೃತ್ವದಲ್ಲಿ ರೂಪುಗೊಂಡ ಈ ಸಂಘಟನೆಯು 1947 ರ ಸಮಯಕ್ಕೆ ಮಹಾರಾಷ್ಟ್ರದ ಲಾತೂರ್ ಮೂಲದ ಕಾಸಿಂ ರಿಜ್ವಿ ಎಂಬ ಹಲಾಲುಕೋರನ ನೇತೃತ್ವದಲ್ಲಿ ನಿಜಾಮನ ಪರ್ಯಾಯ ಸೇನೆಯಾಗಿ ಪರಿವರ್ತನೆಗೊಂಡಿತು. ನಿಜಾಮನ ಹೇರಳವಾದ ಸಂಪತ್ತಿನ ಬೆಂಬಲ, ಕುದುರೆ, ಪಿರಂಗಿಗಳು, ಬಂದೂಕಗಳು ರಜಾಕೋರರ ಕೈಗೆ ದೊರೆತವು.
ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ಭಾರತಕ್ಕೆ ಸೇರಿಸಬೇಕೆಂದು ಆಂಧ್ರ ಮಹಾಸಭಾ ಸಂಘಟನೆ, ಕಮ್ಯೂನಿಸ್ಟ್ ಕಾರ್ಯಕರ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಚಳುವಳಿಯನ್ನು ರೂಪಿಸಿದಾಗ, ನಿಜಾಮನು ಸ್ಥಳೀಯ ಜಮೀನ್ದಾರರುಗಳು ಮತ್ತು ರಜಾಕೋರರ ಸೇನೆಯ ಮೂಲಕ ಇಡೀ ಹೈದರಾಬಾದ್ ಸಂಸ್ಥಾನದಲ್ಲಿ ಹೋರಾಟಗಾರರ ರುಂಡಗಳನ್ನು ಚಂಡಾಡಿದನು. ಇಂದಿನ ಗುಲ್ಬರ್ಗಾ ಜಿಲ್ಲೆಯ 98 ಗ್ರಾಮಗಳ ಮೇಲೆ ದಾಳಿ ನಡೆಸಿ, 42 ಮಂದಿಯನ್ನು ಹತ್ಯೆಗೈದು, 36 ಮಹಿಳೆಯರ ಮೇಲೆ ಬಹಿರಂಗವಾಗಿ ಅತ್ಯಾಚಾರವೆಸಗಲಾಯಿತು. ಬೀದರ್ ಜಿಲ್ಲೆ 176 ಗ್ರಾಮಗಳ ಮೇಲೆ ದಾಳಿ ಹಾಗೂ 120 ಹೋರಾಟಗಾರ ಕೊಲೆ ಮತ್ತು 23 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರೆ, ರಾಯಚೂರು ಜಿಲ್ಲೆಯ 94 ಗ್ರಾಮಗಳ ಮೇಲೆ ದಾಳಿ ನಡೆಸಿ, 25 ಮಂದಿಯನ್ನು ಹತ್ಯೆಗೈದು, 63 ಮಂದಿ ಮಹಿಳೆಯರ ಮೇಲೆ ರಜಾಕೋರರು ಅತ್ಯಾಚಾರ ನಡೆಸಿದ್ದಾರೆ. ಕನ್ನಡದ ನೆಲೆದಲ್ಲಿ ಈ ಬಗೆಯ ಕ್ರೌರ್ಯವಾದರೆ, ಅಂದಿನ ಅವಿಭಜಿತ ಆಂಧ್ರದಲ್ಲಿ ಏನು ನಡೆದಿರಬಹುದು ಊಹಿಸಿ.
ರಜಾಕೋರರು ಬರುತ್ತಿದ್ದಾರೆ ಎಂದರೆ ಸಾಕು ಜನತೆ ಗ್ರಾಮಗಳನ್ನು ತೊರೆದು ಕಾಡು ಮತ್ತು ಹಳ್ಳ, ಕೊಳ್ಳಗಳಲ್ಲಿ ಅವಿತುಕೊಳ್ಳುತ್ತಿದ್ದರು. ಮನೆಯಲ್ಲಿದ್ದ ದವಸ, ಧಾನ್ಯ, ಜಾನುವಾರು, ಮೇಕೆ ಎಲ್ಲವೂ ರಜಾಕೋರರ ಪಾಲಾಗುತ್ತಿದ್ದವು. ನಿರಂತರ ಒಂದು ವರ್ಷ ನಡೆದ ಈ ಅಮಾನುಷ ಕೃತ್ಯಕ್ಕೆ ಅಂದಿನ ಕೇಂದ್ರ ಗೃಹಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಸ್ಪಂದಿಸದಿದ್ದರೆ, ದಕ್ಷಿಣ ಭಾರತದಲ್ಲಿ ಮತ್ತೊಂದು ತುರ್ಕಿಸ್ತಾನ ಸೃಷ್ಟಿಯಾಗುತ್ತಿತ್ತು. ಪ್ರಧಾನಿ ನೆಹರೂ ಅವರ ಮಾತನ್ನು ಮೀರಿ, ಅವರು ಕಾಶ್ಮೀರದಿಂದ ಸೇನೆಯನ್ನ ಕರೆಸಿ ಹೈದರಾಬಾದಿಗೆ ರವಾನಿಸಿದರು. ಏಕೆಂದರೆ, ಹೈದರಾಬಾದ್ ನಿಜಾಮನ ಪೋಲಿಸರು ಹಳ್ಳಿಗಳ ಹೋರಾಟಗಾರರ ಕೊಡಲಿ, ಮಚ್ಚು ಇವುಗಳನ್ನು ವಶಪಡಿಸಿಕೊಂಡು ಅವುಗಳನ್ನು ರಜಾಕೋರಿಗೆ ಒಪ್ಪಿಸುತ್ತಿದ್ದರು. ಈ ವಿಷಯ ತಿಳಿದ ವಲ್ಲಬಾಯ್ ಪಟೇಲ್ ಅವರು ಮೇಜರ್ ಜನರರ್ ಚೌಧುರಿ ನೇತೃತ್ವದಲ್ಲಿ ಸೇನೆಯನ್ನು ಕಳಹಿಸಿ, ನಿಜಾಮನಿಗೆ ಗೃಹಬಂಧನ ವಿಧಿಸಿದಾಗ, ಅಂತಿಮವಾಗಿ ನಿಜಾನಮನು ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸುವುದಾಗಿ 1948 ಸೆಪ್ಟಂಬರ್ 18 ರಂದು ರೇಡಿಯೋ ಮೂಲಕ ಅಂತಿಮವಾಗಿ ಘೋಷಿಸಿದನು.
ಆ ವೇಳೆಗಾಲೇ ತನ್ನ ಹೇರಳವಾದ ಸಂಪತ್ತನ್ನು ವಜ್ರ, ಚಿನ್ನ, ಹಣ ಎಲ್ಲವನ್ನೂ ಇಂಗ್ಲೇಂಡ್ ಗೆ ಸಾಗಿಸಿದ್ದನು. ಕಾಸಿಂ ರಿಜ್ವಿ ನಿಜಾಮನಿಂದ ಹಣ ಪಡೆದು ಪಾಕಿಸ್ತಾನದ ಕರಾಚಿಗೆ ಪಲಾಯನಗೈದನು. ಆದರೆ, ಈ ನೆಲದಲ್ಲಿ ನೆಮ್ಮದಿಯ ಸ್ವತಂತ್ರ್ಯದ ಬದುಕಿಗೆ ನೂರಾರು ಪುರುಷರು, ಮಹಿಳೆಯರು ಪ್ರಾಣತೆತ್ತರು. ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ನಾಗಮ್ಮ, ಹಟ್ಟಿ ಗುರುಬಸವ್ವ ಈ ಮಹಿಳಾಮಣಿಗಳು ತಂಡವನ್ನು ಕಟ್ಟಿಕೊಂಡು ಹೋರಾಡಿದ ಪರಿಯು ಒಂದು ಕಾದಂಬರಿಯಾಗಬಲ್ಲದು.
ಕಳೆದ ವರ್ಷ ಯಾಟ ಸತ್ಯನಾರಾಯಣ ಎಂಬ ವ್ಯಕ್ತಿ ಕಥೆ, ಚಿತ್ರಕಥೆ ಬರೆದು ರಜಾಕೋರ್ ಎಂಬ ಹೆಸರಿನಲ್ಲಿ ಹಿಂದಿ, ತೆಲುಗು, ತಮಿಳುಭಾಷೆಯನ್ನು ಚಿತ್ರ ನಿರ್ದೇಶನ ಮಾಡಿದ್ದಾನೆ. ಇತಿಹಾಸಕ್ಕೆ ನಿಷ್ಠನಾಗಿದ್ದರೂ ಸಹ ಬಲಪಂಥೀಯ ಧೋರಣೆಯ ಹಿನ್ನಲೆಯಲ್ಲಿ ರಜಾಕೋರರ ಹಿಂಸೆಯನ್ನು ವೈಭವೀಕರಿಸಿದ್ದಾನೆ ಎಂದು ನನಗೆ ಅನಿಸಿತು.
ಪ್ರಥಮ ಪ್ರಯತ್ನದಲ್ಲಿ ಆತ ಇಂತಹ ಸಿನಿಮಾ ಮಾಡುಬಹುದೆ? ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾನೆ. ಸರ್ದಾರ್ ವಲ್ಲಬಾಯ್ ಪಟೇಲ್ ಪಾತ್ರದಲ್ಲಿತೇಜ್ ಸಪ್ರು ಮತ್ತು ಕಾಸಿಂ ರಿಜ್ವಿ ಪಾತ್ರದಲ್ಲಿ ರಾಜು ಅರ್ಜುನ್ ಗಮನ ಸೆಳೆಯುತ್ತಾರೆ. ಟಿಪ್ಪು ಸುಲ್ತಾನ್ ಕುರಿತು ವಿಷ ಕಕ್ಕುವ ವಿಷ ಜಂತುಗಳು ಒಮ್ಮೆ ಈ ಸಿನಿಮಾವನ್ನು ಒಮ್ಮೆ ನೋಡಬೇಕು. ನಿಜಾಮ ಮತ್ತು ಟಿಪ್ಪುವಿನ ವ್ಯಕ್ತಿತ್ವದ ಅರಿವಾಗುತ್ತದೆ.
ಎನ್.ಜಗದೀಶ್ ಕೊಪ್ಪ.


.

ಗುರುವಾರ, ಫೆಬ್ರವರಿ 6, 2025

ಕನ್ನಡ ಸಾಹಿತ್ಯ ಚರಿತ್ರೆ ಕುರಿತಾದ ಅನನ್ಯ ಕೃತಿಯೊಂದರ ಕುರಿತು.



ಕನ್ನಡ ಸಾಹಿತ್ಯದ ಪ್ರಾಧ್ಯಾಪಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ ಹಾಗೂ ಕುವೆಂಪು ಸಾಹಿತ್ಯ ಕುರಿತಾಗಿ ಆಳವಾದ ಅಧ್ಯಯನ ಮಾಡಿರುವ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ ಹಾಗೂ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಅವರು ಇತ್ತೀಚೆಗೆ ಬರೆದಿರುವ ‘’ಕನ್ನಡ ಸಾಹಿತ್ಯ, ಪರಂಪರೆ ಮತ್ತು ವರ್ತಮಾನ’’ ಎಂಬ ಕೃತಿಯು ಕನ್ನಡ ಸಾಹಿತ್ಯದ ಇತಿಹಾಸ ಕುರಿತು ಸಂಕ್ಷಿಪ್ತ ಒಳನೋಟವನ್ನು ನೀಡುವ ಮಹತ್ವದ ಕೃತಿ.

ವರ್ತಮಾನದಲ್ಲಿ ಕನ್ನಡ ಭಾಷಾ ಉಪನ್ಯಾಸ ಮತ್ತು ಪ್ರಾದ್ಯಾಪಕ ವೃತಿಯಲ್ಲಿ ಮೂರು ನಾಲ್ಕು ದಶಕ ಕಾಲವನ್ನು ಸೆವೆಸಿರುವ ಬಹುತೇಕ ಮಹನೀಯರು ( ಎಲ್ಲರೂ ಅಲ್ಲ) ಕನ್ನಡ ಭಾಷೆ ಮತ್ತು ಅದರ ಘನವಾದ ಇತಿಹಾಸವನ್ನು ಆಧುನಿಕ ತಲೆಮಾರಿಗೆ ತಲುಪಿವುದನ್ನು ಮರೆತು, ಬಾಢೂಟವನ್ನು ಒಳಗೊಂಡಂತೆ ಇಡೀ ಜಗತ್ತಿನ ಸಮಸ್ಯೆಗಳಿಗೆ ಉತ್ತರ ಹುಡುಕುತ್ತಿದ್ದಾರೆ. ಇಂತಹವರು ಒಮ್ಮೆ ನರಹಳ್ಳಿ ಅವರ ಈ ಕೃತಿಯನ್ನು ಗಮನಿಸಬೇಕು. ವರ್ತಮಾನ ಜಗತ್ತಿಗೆ ಬಾಡೂಟ ಸಂಸ್ಕೃತಿ ಮುಖ್ಯವೋ, ಜ್ಞಾನ ಸಂಸ್ಕೃತಿ ಮುಖ್ಯವೋ ಎಂಬುದು ಅರ್ಥವಾಗುತ್ತದೆ.

ನಾಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಅಭಿನವ ಪ್ರಕಾಶನ ಈವರೆಗೆ ಪ್ರಕಟಿಸಿರುವ ಮಹತ್ವದ ಕೃತಿಗಳಲ್ಲಿ ಸಾವಿರ ಪ್ರಕಟಣೆಯಾಗಿ ಈ ಕೃತಿಯು ಪ್ರಕಟವಾಗಿದೆ. 182 ಪುಟಗಳ ಈ ಕೃತಿಯಲ್ಲಿ ನರಹಳ್ಳಿ ಸರ್ ಅವರು ಹಲ್ಮಿಡಿ ಶಾಸನ, ಕವಿರಾಜ ಮಾರ್ಗ, ವಡ್ಡರಾಧನೆ, ಪಂಪ, ನಾಗವರ್ಮ, ದುರ್ಗಸಿಂಹ, ಬಸವಣ್ಣ, ಅಲ್ಲಮ, ಅಕ್ಕಮಹಾಧೇವಿ, ಹರಿಹರ, ರಾಘವಾಂಕ, ಜನ್ನ, ಕುಮಾರ ವ್ಯಾಸ, ಕನಕದಾಸ, ರತ್ನಾಖರವರ್ಣಿ, ಸರ್ವಜ್ಞ, ಲಕ್ಷ್ಮೀಶ ಮತ್ತು ಮುದ್ದಣ್ಣ ಹೀಗೆ ನಮ್ಮ ಕನ್ನಡ ಸಾಹಿತ್ಯವನ್ನು ಉತ್ತುಂಗ ಶಿಖರೇಕ್ಕಿರಿಸಿದ ಮಹಾನ್ ರತ್ನಗಳ ಸೃಜನಶೀಲತೆಯನ್ನು ಇಲ್ಲಿ ಹಲವು ಆಯಾಮಗಳಿಂದ ಚರ್ಚಿಸಿದ್ದಾರೆ. ಈ ಕೃತಿಯಲ್ಲಿ ರನ್ನ ದಾಖಲಾಗದೆ ಉಳಿದದ್ದು ಈ ಕೃತಿಯ ಒಂದು ಸಣ್ಣ ಕೊರತೆ. ಏಕೆಂದರೆ, ಬಿ.ಎಂ.ಶ್ರೀ ಅವರ ರನ್ನನ ಗದಾಯುದ್ಧ ನಾಟಕ ಮೂಲಕ ನನ್ನಂತಹವನಿಗೆ ರನ್ನ ಪರಿಚಯವಾದವನು. ಆತನ ಕುರಿತಾಗಿ ನನಗಿನ್ನೂ ಮೋಹ ಇಂಗಿಲ್ಲ. ಐವತ್ತು ವರ್ಷಗಳ ಹಿಂದೆ ಪಿ.ಯು.ಸಿ.ಯಲ್ಲಿ ಓದಿದ ದುರ್ಯೋಧನನ ವಿಲಾಪಂ ಭಾಗದ ಪ್ರತಿ ಸಾಲುಗಳನ್ನು ಮರೆತಿಲ್ಲ.

ಏಕೆಂದರೆ, ಕನ್ನಡ ಸಾಹಿತ್ಯವನ್ನು ಅಧಿಕೃತವಾಗಿ ಓದಲಾಗದೆ, ಬೇರೆ ವಿಷಯವನ್ನು ಆಯ್ಕೆ ಮಾಡಿಕೊಂಡ ನನ್ನಂತಹವರಿಗೆ ಇಂದಿಗೂ ಸಹ ಹಳಗನ್ನಡ ಎಂದರೆ ಕಬ್ಬಿಣದ ಕಡಲೆ ಎಂಬ ಭಾವನೆ ನೆಲೆಯೂರಿದೆ. ಈ ಕಾರಣಕ್ಕಾಗಿ ನನ್ನಂತಹವರು ಪಂಪ, ರನ್ನ, ಜನ್ನ, ಇಂತಹವರನ್ನು ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ, ತೀನಂಶ್ರೀ, ಡಿ.ಎಲ್. ನರಸಿಂಹಚಾರ್, ಮುಂತಾದ ಸಾಹಿತ್ಯ ದಿಗ್ಗಜರ ಮೂಲಕ ಸರಳ ಕನ್ನಡದಲ್ಲಿ ಓದಲು ಸಾಧ್ಯವಾಯಿತು ಮತ್ತು ಪಂಪ ಮಹಾಭಾರತ, ರನ್ನನ ಗಧಾಯುದ್ಧ, ಜನ್ನನ ಯಶೋಧರ ಚರಿತೆ, ರತ್ನಾಕರನ ಭರತೇಶ ವೈಭವ ಈ ಎಲ್ಲಾ ಕೃತಿಗಳು ಮತ್ತು ಕೃತಿಕಾರ ದಾರ್ಶನಿಕ ಒಳನೋಟಗಳು ನಮಗೆ ದಕ್ಕಿದವು. ಈ ಕೃತಿಯ ಬರೆವಣಿಗಾಗಿ ಅವರು ಒಟ್ಟು 114 ಕೃತಿಗಳನ್ನು ಅವಲೋಕಿಸಿದ್ದಾರೆ. ಅವರ ಅಧ್ಯನಯದ ಶ್ರದ್ಧೆ ಮತ್ತು ತಲ್ಲೀನತೆ ಎಂತಹದ್ದು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.

ಕಳೆದ ಡಿಸಂಬರ್ ನಲ್ಲಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ ಕೃತಿಯನ್ನ ನಲವತ್ತು ದಿನಗಳ ಕಾಲ ನಿಧಾನವಾಗಿ ಓದಿ ಜೀರ್ಣಿಸಿಕೊಂಡೆ. ಇಲ್ಲಿನ ಪ್ರಾಚೀನ ಕೃತಿಕಾರರ ಕುರಿತಾಗಿ ನರಹಳ್ಳಿಯವರು ಅಪರೂಪದ ಒಳನೋಟಗಳನ್ನು ನೀಡುತ್ತಾ, ಕನ್ನಡ ವಿಮರ್ಶಾ ಲೋಕದ ತಜ್ಞರು ನೀಡಿರುವ ವ್ಯಾಖ್ಯಾನವನ್ನು ಸಹ ಪ್ರಸ್ತಾಪಿಸಿದ್ದಾರೆ. ಕುವೆಂಪು, ಜಿ.ಎಸ್.ಎಸ್, ಜಿ.ಹೆಚ್.ನಾಯಕ, ಕುರ್ತುಕೋಟಿ, ಅಮೂರ್, ಡಿ.ಆರ್. ನಾಗರಾಜ ಹೀಗೆ ಹಲವರ ಚಂತನೆಗಳು ಸಹ ಈ ಕೃತಿಯಲ್ಲಿ ನಮಗೆ ದೊರೆಯುತ್ತವೆ. ವಚನಕಾರರ ಬಗ್ಗೆ ಬರೆಯುವಾಗ, ಪ.ಗು.ಹಳಖಟ್ಟಿ, ಎಲ್.ಬಸವರಾಜು ಮುಂತಾದವರ ಚಿಂತನೆಯೂ ಸಹ ಒಳಗೊಂಡಿದೆ. ಕುವೆಂಪು ಕುರಿತಾದ ಡಾ.ನರಹಳ್ಳಿ ಅವರ ಚಿಂತನೆಗಳಿಂದ ಪ್ರಭಾವಿತನಾದ ನಾನು ಅವರ ಕೃತಿಗಳ ಶ್ರದ್ಧಾವಂತ ಓದುಗರಲ್ಲಿ ನಾನೂ ಒಬ್ಬ. ಈ ಕೃತಿಗಾಗಿ ಅವರು ಅಧ್ಯಯನ ಮಾಡಿದ 114 ಕೃತಿಗಳ ವಿವರ ನೀಡಿದ್ದಾರೆ. ಅಷ್ಟು ಸಾಕು. ಅವರ ಬದ್ಧತೆ ಮತ್ತು ಶ್ರದ್ಧೆ ನಮಗೆ ಅರಿವಾಗುತ್ತದೆ.

ಕನ್ನಡ ಸಾಹಿತ್ಯ ಪರಂಪರೆಯ ಕುರಿತಾಗಿ ತಮ್ಮ ಪ್ರಸ್ತಾವನೆಯಲ್ಲಿ ಲೇಖಕರು ನವ್ಯಕಾಲದ ನಂಬಿಕೆಯನ್ನು ಪ್ರಸ್ತಾಪಿಸಿದ್ದಾರೆ. ಹೌದು 1970 ರ ದಶಕದಲ್ಲಿ ನವ್ಯರು ಪ್ರಾಚೀನ ಸಾಹಿತ್ಯದ ಓದಿನ ಅವಶ್ಯಕತೆ ಇಲ್ಲ ಎಂದು ನಂಬಿದ್ದರು. ಆದರೆ, ನರಹಳ್ಳಿಯವರು ಬರೆದಿರುವ ‘’ ವಾಗ್ವಾದ ಪರಂಪರೆಯ ವಾರಸುದಾರರು ನಾವು’’ ಎಂಬ ಅಧ್ಯಾಯವು ಏಕಕಾಲಕ್ಕೆ ನಮಗೆ ಲೇಖಕರ ಚಿಂತನೆಯೊಂದಿಗೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಪರಿಚಯ ಮಾಡಿಕೊಡುತ್ತದೆ. ಸಾಹಿತ್ಯ ಪರಂಪರೆ ಏಕೆ ಮುಖ್ಯ ಎಂಬುದಕ್ಕೆ ಮುದ್ದಣ್ಣನ ಮುದ್ದಣ್ಣ ಮನೋರಮೆಯ ಪ್ರಸಂಗದ ಬರೆಯುತ್ತಾ, ಆತನ ಕಾಲಘಟ್ಟದಲ್ಲಿ ಬದುಕಿದ್ದ ಸೇಡಿಯಾಪು ಕೃಷ್ಣಭಟ್ಟರು, ಪಂಜೆ ಮಂಗೇಶರಾಯರು, ಗೋವಿಂದ ಪೈ, ಗುಲ್ವಾಡಿ ವೆಂಖಟರಾಯರು, ಮುಂತಾದ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಚೇತನಗಳನ್ನು ಸ್ಮರಿಸುವುದರ ಮೂಲಕ ಅವರ ಕೃತಿಗಳ ಕುರಿತಾಗಿ ಸ್ಮರಿಸಿದ್ದಾರೆ.

ಈ ಕೃತಿಯಲ್ಲಿ ಶಿವಕೋಟ್ಯಾಚಾರ್ಯನ ವಡ್ಡರಾಧನೆ ಮತ್ತು ರಾಘವಾಂಕನ ಹರಿಶ್ಚಂದ್ರ ಕಾವ್ಯದ ಬರೆಯುವಾಗ ನರಹಳ್ಳಿ ಬಾಲಸುಹ್ಮಣ್ಯ ಅವರು ನಮಗೆ ಅನೇಕ ಒಳನೋಟಗಳನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದ ಇತಿಹಾಸದ ವಿವಿಧ ಮಗ್ಗುಲುಗಳನ್ನು ನಮಗೆ ಪರಿಚಯಿಸಿದ್ದಾರೆ. ಹದಿನೈದನೇ ಶತಮಾನದಲ್ಲಿ ರಾಘವಾಂಕನು ತನ್ನ ಸೋದರ ಮಾವ ಹರಿಹರನಿಂಗಿಂತ ಭಿನ್ನ ಪ್ರಕಾರದಲ್ಲಿ ಕಾವ್ಯ ಸೃಷ್ಟಿಗೆ ತೊಡಗಿಕೊಂಡ ಪರಿಯನ್ನು ದಾಖಲಿಸುವುದರ ಜೊತೆಗೆ ಹರಿಶ್ಚಂದ್ರ ಕಾವ್ಯದ ಬರೆಯುತ್ತಾ ಲೇಖಕರು
‘’ ಹರಿಶ್ಚಂದ್ರಕಾವ್ಯ ಅನೇಕ ದೃಷ್ಟಿಗಳಿಂದ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ವೀರೇಶ ಚರಿತೆಯಂತೆ ಇದು ಪುರಾಣದ ಅವತಾರ ಕಲ್ಪಿತ ಕಥೆಯಲ್ಲ, ಸೋಮನಾಥ ಚರಿತೆಯಂತೆ ವೀರ ಮಾಹೇಶ್ವರ ನಿಷ್ಟೆಯನ್ನು ಪ್ರದರ್ಶಿಸುವ ಕಥಾನಕವೂ ಅಲ್ಲ, ಸಿದ್ಧರಾಮ ಪುರಾಣದಂತೆ ಶಿವನ ಅಂಶಾವಾತಾರ ಭೂಲೋಕದಲ್ಲಿ ಶರಣನಾಗಿ ಜನಿಸಿ ಶೈವಧರ್ಮವನ್ನು ಪ್ರತಿಪಾದನೆ ಮಾಢಿದ ಕಥೆಯೂ ಅಲ್ಲ, ಯಾವ ಮತ ಮತ್ತು ಜಾತಿಗಳ ಹಂಗಿಲ್ಲದೆ ಸಾರ್ವಕಾಲಿಕ ಮೌಲ್ಯವೊಂದನ್ನು ಅಂದರೆ, ಸತ್ಯವನ್ನು ಪ್ರತಿಪಾದಿಸುವ ಕನ್ನಡದ ಮೊದಲ ಕೃತಿ ಸತ್ಯಹರಿಶ್ಚಂದ್ರ’’ ಎಂದು ಹೇಳುವುದರ ಮೂಲಕ ಅನ್ಯವಾದ ಒಳನೋಟವನ್ನು ಓದುಗರ ಮುಂದೆ ಇರಿಸಿದ್ದಾರೆ.

ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ ಎಂಬ ಈ ಕೃತಿಯು ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಅಧ್ಯಾಪಕರಿಗೆ ಕೈ ದೀವಿಗೆ ರೂಪದಲ್ಲಿದೆ. ಕನ್ನಡದ ಸಾಹಿತ್ಯ ಮತ್ತು ಕೃತಿಗಳನ್ನು ಪ್ರತಿ ದಶಕಕ್ಕೆ ಒಮ್ಮೆ ವಿಮರ್ಶೆಯ ಒರೆಗಲ್ಲಿಗೆ ಹಚ್ಚಬೇಕಿದೆ. ಅಂತಹ ಸನ್ನಿವೇಶದಲ್ಲಿ ಮಾತ್ರ ನಮಗೆ ಹೊಸ ಹೊಸ ದೃಷ್ಟಿಕೋನ ಲಭ್ಯವಾಗಬಲ್ಲದು. ಇಂದು ಕನ್ನಡದ ಕಾವ್ಯ ಲೋಕದಲ್ಲಿ ತೊಡಗಿಸಿಕೊಂಡಿರುವ ಎಷ್ಟು ಮಂದಿ ಡಾ.ಕೆಪ್ರಭುಶಂಕರ ಅವರ ‘’ ಭಾವಗೀತ’’ ಮತ್ತು ಡಾ.ಜಿ.ಎಸ್.ಶಿವರುದ್ರಪ್ಪನವರ ‘’ ಸೌಂಧರ್ಯ ಸಮೀಕ್ಷೆ’’ ಓದಿದ್ದಾರೆ ಎಂಬುದು ಗೊತ್ತಿಲ್ಲ. ಕುವೆಂಪು ಅವರ ಮಾರ್ಗದರ್ಶನದಲ್ಲಿ ಅವರ ಹೆಮ್ಮೆಯ ಶಿಷ್ಯರ ಪಿ,ಹೆಚ್.ಡಿ. ಪ್ರಬಂಧ ರೂಪದ ಕೃತಿಗಳು ಇವು. ಇಂದಿಗೂ ಸಹ ಕಾವ್ಯದ ಸೃಷ್ಟಿಗೆ ಮತ್ತು ಸೃಜನಶೀಲತೆಗೆ ಮಾರ್ಗದರ್ಶಕ ಕೃತಿಗಳಾಗಿವೆ. ಅಲ್ಲಮಪ್ರಭು ಹೇಳಿದ ಹಾಗೆ ‘’ ಹಿಂದಣ ಹೆಜ್ಜೆಯ ಕಂಡನಲ್ಲದೆ, ನಿಂದಣ ಹೆಜ್ಜೆಯನರಿಯಬಾರದು’’ ಎಂಬ ಮಾತಿನ ಹಿನ್ನಲೆಯಲ್ಲಿ ಡಾ. ನರಹಳ್ಳಿಯವರು ಕನ್ನಡಿಗರ ಮುಂದೆ ಇಂತಹ ಅಪರೂಪದ ಕೃತಿಯನ್ನು ಇರಿಸಿದ್ದಾರೆ.

ಧನ್ಯವಾದಗಳು ಸರ್. ಖಾಲಿಯಾಗಿದ್ದ ನಾನು ನಿಮ್ಮ ಚಿಂತನೆಗಳಿಂದ ಮತ್ತೊಮ್ಮೆ ಮೈದುಂಬುವಂತಾಯಿತು.

ಎನ್.ಜಗದೀಶ್ ಕೊಪ್ಪ. 

ಭಾನುವಾರ, ಫೆಬ್ರವರಿ 2, 2025

ಭಾರತದ ಪುರಾತನ ದೇವಾಲಯಗಳ ನೈಜ ಇತಿಹಾಸ



ಭಾರತದ ಇತಿಹಾಸದ ಅಧ್ಯಯನ ಮತ್ತು ಗ್ರಹಿಕೆಗೆ ಪ್ರತಿಯೊಬ್ಬ ಸಂಶೋಧಕನಿಗೆ ಹಾಗೂ ಓದುಗನಿಗೆ ಮುಕ್ತವಾದ ಮನಸ್ಸು ಇದ್ದರೆ ಮಾತ್ರ ನೈಜ ಇತಿಹಾಸವನ್ನು ಗ್ರಹಿಸಲು ಸಾಧ್ಯ ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ಪುನರ್ ವ್ಯಾಖ್ಯಾನಿಸುವ ನೆಪದಲ್ಲಿ ಹುಸಿ ಇತಿಹಾಸಕಾರರು ಆಧುನಿಕ ಭಾರತದ ಯುವ ತಲೆಮಾರಿನ ಎದೆಗೆ ವಿಷವನ್ನು ತುಂಬುತ್ತಿದ್ದಾರೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ, ಟಿಪ್ಪು ಸುಲ್ತಾನ್ ಆಡಳಿತ ಕುರಿತಂತೆ ಹಬ್ಬಿಸಲಾಗುತ್ತಿರುವ ಸುಳ್ಳು ವದಂತಿ. ಟಿಪ್ಪು ಸುಲ್ತಾನ್ ಕನ್ನಡ ಭಾಷೆಯ ವಿರೋಧಿಯಾಗಿದ್ದನು. ಆತನ ಆಡಳಿತ ಭಾಷೆ ಪರ್ಷಿಯನ್ ಆಗಿತ್ತು ಎಂದು ಹೇಳಲಾಗುತ್ತಿದೆ. ಕಚೇರಿ, ಟಪಾಲು, ಅಮುಲ್ದಾರ್, ತಹಸಿಲ್ದಾರ್, ಶಿರಸ್ತೆದಾರ್ ಇವೆಲ್ಲವೂ ಪರ್ಷಿಯನ್ ಶಬ್ದಗಳು ಎಂದು ಹೇಳುವ ಅವಿವೇಕಿಗಳು ಒಮ್ಮೆ ಮರಾಠಿ ಶಬ್ದಕೋಶವನ್ನು ಸಹ ಅವಲೋಕಿಸಿದರೆ ಒಳಿತು. ಮೊಗಲರ ಆಳ್ವಿಕೆಯ ಕಾಲದಿಂದಲೂ ಉರ್ದು, ದೇವನಾಗರಿ ಲಿಪಿ ಅಥವಾ ಹಿಂದಿ, ಮರಾಠಿ ಈ ಭಾಷೆಗಳ ಶಬ್ದಗಳು ಆಡಳಿತದಲ್ಲಿ ಮಿಳಿತಗೊಂಡು ಅವುಗಳು ಬ್ರಿಟೀಷರ ಕಾಲದಿಂದಲೂ ಎಲ್ಲಾ ಸಂಸ್ಥಾನಗಳ ನಡುವೆ ಸಂವಹನದ ಭಾಷೆಯಾಗಿದ್ದವು.
ಟಿಪ್ಪುವಿನ ಆಡಳಿತದಲ್ಲಿ ಸ್ಥಳೀಯ ಭಾಷೆಯಾಗಿ ಕನ್ನಡವೂ ಸಹ ಅಸ್ತಿತ್ವದಲ್ಲಿತ್ತು. ಇದಕ್ಕೆ ಉದಾಹರಣೆಯಾಗಿ ಟಿಪ್ಪು ಸುಲ್ತಾನನು ಶೃಂಗೇರಿ ಶಾರದಾಂಬೆಯ ಪೀಠಕ್ಕೆ ಕನ್ನಡದಲ್ಲಿ ಬರೆದಿರುವ ಹದಿನೇಳು ಪತ್ರಗಳನ್ನು ನೋಡಬಹುದು. ಅದೇ ರೀತಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ನೀಡಿರುವ ಕಾಣಿಕೆಗಳ ಮೇಲೆ ಕನ್ನಡದ ಹೆಸರುಗಳಿವೆ. ಟಿಪ್ಪು ಸುಲ್ತಾನನ್ನು ಹಿಂದೂ ವಿರೋಧಿ ಎಂದು ಪ್ರತಿಬಿಂಬಿಸುವ ಅರೆ ತಿಳುವಳಿಕೆಯ ಇತಿಹಾಸಕಾರರು ಟಿಪ್ಪುವಿನ ಆಸ್ಥಾನದಲ್ಲಿ ಆರು ಮಂದಿ ಕನ್ನಡ ಮಾತೃಭಾಷೆಯ ಬ್ರಾಹ್ಮಣ ಸಚಿವರಿದ್ದರು ಜೊತೆಗೆ ದಿವಾನರಾಗಿದ್ದ ಪೂರ್ಣಯ್ಯನವರು ಸಹ ಬ್ರಾಹ್ಮಣರಾಗಿದ್ದರು ಎಂಬುದನ್ನು ಮರೆಯುತ್ತಾರೆ. ಇಂದು ದೇಶಾದ್ಯಂತ ಹಿಂದೂ ದೇವಾಲಯಗಳ ಮೇಲೆ ಮಸೀದಿಗಳು ನಿರ್ಮಾಣವಾಗಿದೆ ಎಂದು ಮಧ್ಯಕಾಲೀನ ಇತಿಹಾಸವನ್ನು ತಿರುಚಲು ಹೊರಟಿರುವ ನವಭಾರತದ ಇತಿಹಾಸಕಾರರು ಅದಕ್ಕೂ ಮುನ್ನ ಅಂದರೆ ಕ್ರಿಸ್ತಪೂರ್ವ ಮತ್ತು ನಂತರದ ಕ್ರಿಸ್ತಶಕ ಭಾರತದಲ್ಲಿ ಬೌದ್ಧ ಧರ್ಮದ ಸ್ತೂಪಗಳು ಮತ್ತು ಜೈನ ಮಂದಿರಗಳನ್ನು ನಾಶಗೊಳಿಸಿ, ಅವುಗಳ ಮೇಲೆ ಹಿಂದೂ ದೇವಾಲಯಗಳನ್ನು ನಿರ್ಮಿಸಿರುವ ಇತಿಹಾಸ ಕುರಿತು ಏಕೆ ಮಾತನಾಡುವುದಿಲ್ಲ. ಈ ಘಟನೆಗಳ ಕುರಿತಾಗಿ ಇಂದಿಗೂ ಸಹ ಸಾಕ್ಷಾಧಾರಗಳು ಲಭ್ಯವಿವೆ. ಮಸೀದಿಗಳ ಕೆಳಗೆ ಹಿಂದೂ ದೇವಾಲಯಗಳು ಇದ್ದವು ಎನ್ನುವುದಾದರೆ, ಹಿಂದೂ ದೇವಾಲಯಗಳ ಕೆಳಗೆ ಬೌದ್ಧ ಸ್ತೂಪಗಳು ಮತ್ತು ಜೈನ ಮಂದಿರಗಳು ಇದ್ದವು ಎಂಬುದಕ್ಕೆ ಸಾಜ್ಷಾಧಾರಗಳು ಇರುವಾಗ, ದೇವಾಲಯಗಳನ್ನು ಕೆಡವಿ ಬೌದ್ಧ ಮತ್ತು ಜೈನ ಮಂದಿರಗಳನ್ನು ಈಗ ನಿರ್ಮಾಣ ಮಾಡಲು ಸಾಧ್ಯವೆ? ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುವುದಿಲ್ಲ ಏಕೆ?
ಬಹುತೇಕ ಹಿಂದೂತ್ವ ಸಿದ್ಧಾಂತಗಳು ಭಾರತೀಯ ಇತಿಹಾಸದ ಪುರಾತನ ಕಾಲವನ್ನು ಸಾಮಾಜಿಕ ಸಾಮರಸ್ಯದಿಂದ ಗುರುತಿಸಲ್ಪಟ್ಟ ಸುವರ್ಣಯುಗವೆಂದು ಮಾತ್ರ ನೋಡುತ್ತವೆ, ಹಿಂದೂ ಧರ್ಮವು ಯಾವುದೇ ಧಾರ್ಮಿಕ ಹಿಂಸಾಚಾರದಿಂದ ದೂರವಿತ್ತು ಎಂದು ಹೇಳುವ ಇವರು, ಮಧ್ಯಯುಗವನ್ನು ಮುಸ್ಲಿಂ ಆಡಳಿತಗಾರರು ಹಿಂದೂಗಳ ಮೇಲೆ ದಾಳಿ ಮಾಡಿದ ಭಯೋತ್ಪಾದನೆಯ ಆಳ್ವಿಕೆಯ ಹಂತ ಎಂದು ಚಿತ್ರಿಸುತ್ತಾರೆ. ಮುಸ್ಲಿಂ ಆಡಳಿತಗಾರರು ವಿವೇಚನೆಯಿಲ್ಲದೆ ಹಿಂದೂ ದೇವಾಲಯಗಳನ್ನು ಕೆಡವಿದರು ಮತ್ತು ಹಿಂದೂ ವಿಗ್ರಹಗಳನ್ನು ಭಗ್ನಗೊಳಿಸಿದರು ಎಂಬ ನಂಬಿಕೆ ಅವರ ಗ್ರಹಿಕೆಗೆ ಮೂಲ ಕೇಂದ್ರವಾಗಿದೆ. ಮುಸಲ್ಮಾನರ ಆಳ್ವಿಕೆಯಲ್ಲಿ ಅರವತ್ತು ಸಾವಿರ ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅವರು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ, ಆದರೆ ಅವುಗಳಲ್ಲಿ ಶೇಕಡಾ ಎಂಬತ್ತಕ್ಕೂ ಹೆಚ್ಚು ದೇವಾಲಯಗಳ ನಾಶಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಮತ್ತೊಂದೆಡೆ, ಐತಿಹಾಸಿಕ ಪುರಾವೆಗಳ ಮೇಲ್ನೋಟದ ಸಮೀಕ್ಷೆಯು ಇಸ್ಲಾಂ ಧರ್ಮದ ಆಗಮನದ ಮೊದಲು ಭಾರತದಲ್ಲಿ ಪ್ರತಿಸ್ಪರ್ಧಿ ಧಾರ್ಮಿಕ ಸಂಸ್ಥೆಗಳ ಕೆಡವುವಿಕೆ ಮತ್ತು ಅಪವಿತ್ರಗೊಳಿಸುವಿಕೆ ಮತ್ತು ಅವುಗಳ ವಿಗ್ರಹಗಳ ಸ್ವಾಧೀನವು ಇರಲಿಲ್ಲ ಎಂದು ಆಧುನಿಕ ಇತಿಹಾಸಕಾರರು ತೋರಿಸುತ್ತಿದ್ದಾರೆ.
ಪ್ರಾಚೀನ ಭಾರತದಲ್ಲಿ ಬ್ರಾಹ್ಮಣ ಅಥವಾ ಪುರೋಹಿತಶಾಹಿಗಳು ಹಾಗೂ ಅವರು ನಂಬಿಕೊAಡಿದ್ದ ಹಿಂದೂ ಧರ್ಮದ ವೇದ, ಉಪನಿಷತ್ತುಗಳು ಅಸ್ತಿತ್ವದಲ್ಲಿ ಇದ್ದ ಮಾದರಿಯಲ್ಲಿ ಬ್ರಾಹ್ಮಣೇತರ ಧರ್ಮಗಳು ಮತ್ತು ತಳ ಸಮುದಾಯದ ಪಂಗಡಗಳು ಸಹ ಅಸ್ತಿತ್ವದಲ್ಲಿದ್ದವು. ಈ ಸಮುದಾಯಗಳ ನಡುವೆ ಯಾವುದೇ ಸಾಮರಸ್ಯ ಇರಲಿಲ್ಲ. ಜೊತೆಗೆ ಎರಡು ಬ್ರಾಹ್ಮಣ ಪಂಗಡಗಳಾದ ವೈಷ್ಣವ ಮತ್ತು ಶೈವ ಧರ್ಮಗಳ ನಡುವೆ ಕೂಡಾ ಒಮ್ಮತವಿರಲಿಲ್ಲ. ಇಷ್ಟು ಮಾತ್ರವಲ್ಲದೆ ಕ್ರಿಸ್ತ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಬೌದ್ಧ ಮತ್ತು ಜೈನ ಧರ್ಮಗಳ ಅನುಯಾಯಿಗಳು ಸಹ ನಿರಂತರವಾಗಿ ಜಗಳವಾಡುತ್ತಿದ್ದರು. ಬುದ್ಧನ ಮರಣಾ ನಂತರ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಅನುಸರಿಸಿ, ವಿಶ್ವ ವ್ಯಾಪಿ ಪ್ರಚಾರ ಮಾಡಿದನು. ನಂತರದ ದಿನಗಳಲ್ಲಿ ಅಶೋಕನ ಪುತ್ರರು ವಿಭಿನ್ನ ಧರ್ಮಗಳನ್ನು ಅನುಕರಿಸಿದ ಬಗ್ಗೆ ನಮಗೆ ಸಾಕ್ಷಾಧಾರಗಳು ದೊರೆಯುತ್ತವೆ.
ಹನ್ನೆರಡನೆಯ ಶತಮಾನದ ಕಾಶ್ಮೀರಿ ಪಠ್ಯದಲ್ಲಿ ದಾಖಲಾಗಿರುವ ಪಠ್ಯದಲ್ಲಿ ಅಂದರೆ, ಕಲ್ಹಣನ ರಾಜತರಂಗಿಣಿ ಕೃತಿಯಲ್ಲಿ ಅಶೋಕನ ಪುತ್ರರಲ್ಲಿ ಒಬ್ಬನಾದ ಜಲೌಕನನ್ನು ಕುರಿತಾಗಿ ಉಲ್ಲೇಖಿಸಲಾಗಿದೆ. ಅವನು ತಂದೆಗಿಂತ ಭಿನ್ನವಾಗಿ, ಶೈವ ಧರ್ಮವನ್ನು ಅಪ್ಪಿಕೊಂಡಿದ್ದನು ಮತ್ತು ಬೌದ್ಧ ಮಠಗಳನ್ನು ನಾಶಪಡಿಸಿದನು. ಬೌದ್ಧ ಸಂಸ್ಕೃತ ಕೃತಿಯಾದ ದಿವ್ಯವದನಾದಲ್ಲಿ ಬ್ರಾಹ್ಮಣ ಆಡಳಿತಗಾರ ಪುಷ್ಯಮಿತ್ರ ಶುಂಗನನ್ನು ಬೌದ್ಧರ ಮಹಾನ್ ಶೋಷಕ ಎಂದು ವಿವರಿಸುತ್ತದೆ. ಅವನು ದೊಡ್ಡ ಸೈನ್ಯದೊಂದಿಗೆ ಸ್ತೂಪಗಳನ್ನು ಧ್ವಂಸಗೊಳಿಸಿದನು, ಮಠಗಳನ್ನು ಸುಟ್ಟುಹಾಕಿದನು ಶುಂಗರ ಸಮಕಾಲೀನನಾದ ವ್ಯಾಕರಣಕಾರ ಪತಂಜಲಿಯ ಬರಹಗಳಲ್ಲಿ ಈ ಪುರಾವೆ ಸಿಗುತ್ತದೆ. ಪತಾಂಜಲಿಯು ತನ್ನ ಮಹಾಭಾಷ್ಯದಲ್ಲಿ ಬ್ರಾಹ್ಮಣರು ಮತ್ತು ಶ್ರಮಣರು ಹಾವು ಮತ್ತು ಮುಂಗುಸಿಗಳAತೆ ಶಾಶ್ವತ ಶತ್ರುಗಳು ಎಂದು ಹೇಳಿರುವುದು ಸಹ ದಾಖಲಾಗಿದೆ. ಮೌರ್ಯರ ನಂತರದ ಅವಧಿಯಲ್ಲಿ ಬೌದ್ಧಧರ್ಮದ ಮೇಲೆ ಬ್ರಾಹ್ಮಣ ಆಕ್ರಮಣಕ್ಕೆ ವೇದಿಕೆಯನ್ನು ಸಿದ್ಧಪಡಿಸಲಾಯಿತು, ವಿಶೇಷವಾಗಿ ಪುಷ್ಯಮಿತ್ರ ಶುಂಗನ ಅಡಿಯಲ್ಲಿ, ಅಶೋಕನ ಅವಧಿಯಲ್ಲಿ ಪಾಟಲಿಪುತ್ರದಲ್ಲಿ ನಿರ್ಮಿಸಲಾಗಿದ್ದ ಕುಕುಟಾರಾಮ ಮಠವನ್ನು ನಾಶಪಡಿಸಿರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ.
ಮಧ್ಯಪ್ರದೇಶವು ಸೇರಿದಂತೆ ಉತ್ತರ ಭಾರತದಲ್ಲಿ ಬೌದ್ಧ ಸ್ಥಳಗಳು ಮತ್ತು ಸ್ಮಾರಕಗಳ ನಾಶ ಮತ್ತು ಸ್ವಾಧೀನವು ಮೌರ್ಯ ಸಾಮ್ರಾಜ್ಯದ ನಂತರದ ಶತಮಾನಗಳಲ್ಲಿ ನಡೆದಂತೆ ತೋರುವ ಅನೇಕ ಸ್ಥಳಿಗಳಿವೆ. ಉದಾಹರಣೆಗೆ, ಕುಶಾನರ ಕಾಲದಲ್ಲಿ ಪಶ್ಚಿಮ ಭಾಗದ ಉತ್ತರ ಪ್ರದೇಶದಲ್ಲಿ ಪ್ರವರ್ಧಮಾನಕ್ಕೆ ಬಂದ ಪಟ್ಟಣವಾದ ಮಥುರಾದಲ್ಲಿ, ಭೂತೇಶ್ವರ ಮತ್ತು ಗೋಕರ್ಣೇಶ್ವರದಂತಹ ಕೆಲವು ಇಂದಿನ ಹಿಂದೂ ದೇವಾಲಯಗಳು ಪ್ರಾಚೀನ ಕಾಲದಲ್ಲಿ ಬೌದ್ಧ ಸ್ಥಳಗಳಾಗಿದ್ದವು. ಕುಶಾನರ ಕಾಲದಲ್ಲಿ ಬೌದ್ಧ ಕೇಂದ್ರವಾಗಿದ್ದ ಕತ್ರಾ ದಿಬ್ಬವು ಮಧ್ಯಕಾಲೀನ ಅವಧಿಯಲ್ಲಿ ಹಿಂದೂ ಧಾರ್ಮಿಕ ಸ್ಥಳವಾಯಿತು. ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ವಾರಣಾಸಿ ಬಳಿಯ ಸಾರನಾಥ ಬ್ರಾಹ್ಮಣರ ಆಕ್ರಮಣಕ್ಕೆ ಗುರಿಯಾಯಿತು. ಇದರ ನಂತರ ಪ್ರಾಯಶಃ ಗುಪ್ತರ ಕಾಲದಲ್ಲಿ, ಮುಖ್ಯ ದೇಗುಲ ಎಂದು ಕರೆಯಲ್ಪಡುವ ಮುಂಭಾಗದಲ್ಲಿ ಮೌರ್ಯರು ಅಲ್ಲಿನ ಕಟ್ಟಡದ ಅವಶೇಷಗಳನ್ನು ಮರುಬಳಕೆ ಮಾಡುವ ಮೂಲಕ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಿದರು. ಈ ದೇವಾಲಯವನ್ನು ದೊಡ್ಡ ಅಶೋಕನ ಸ್ತೂಪದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಗುಪ್ತರ ಅವಧಿಯ ಅಂತ್ಯದ ವೇಳೆಗೆ ಈ ಸ್ಥಳವನ್ನು ಬೌದ್ಧರು ಆಕ್ರಮಿಸಿಕೊಂಡರು ನಂತರ ಮತ್ತೆ ಬೌದ್ಧರಲ್ಲದವರು ಪುನಃ ಆಕ್ರಮಿಸಿಕೊಂಡರು.
ಅAತರಾಷ್ಟ್ರೀಯ ಪುರಾತತ್ತ್ವ ಶಾಸ್ತ್ರಜ್ಞ ಅಲೋಯಿಸ್ ಆಂಟನ್ ಫ್ಯೂರರ್ ಅವರು ತಮ್ಮ ಒಂದು ಲೇಖನದಲ್ಲಿ ಹೀಗೆ ವಿವರಿಸಿದ್ದಾರೆ. "ಬೌದ್ಧ ಧರ್ಮದ ಮೇಲೆ ಬ್ರಾಹ್ಮಣ ಧರ್ಮವು ತನ್ನ ಅಂತಿಮ ವಿಜಯವನ್ನು ಗಳಿಸಿತು." ಉತ್ತರ ಬಿಹಾರದಲ್ಲಿನ ವೈಶಾಲಿಯು ಬುದ್ಧನಿಗೆ ಸಂಬAಧಿಸಿದ ಪ್ರಮುಖ ನಗರವಾಗಿತ್ತು, ಅಲ್ಲಿನ ಉದ್ಯಾನವನದಲ್ಲಿ ಅವನು ಕುಶಿನಗರಕ್ಕೆ ತೆರಳುವ ಮುನ್ನ ಕೆಲವು ವರ್ಷಗಳನ್ನು ಕಳೆದಿದ್ದನು. ಪಾಹ್ಸಿಯಾನ್ ಎಂಬ ಚೀನಿ ಯಾತ್ರಿಕನು ವೈಶಾಲಿ ನಗರದ ವೇಶ್ಯೆ ಅಮ್ರಪಾಲಿ ನಿರ್ಮಿಸಿದ ಸ್ತೂಪದ ಅಸ್ತಿತ್ವವನ್ನು ಮಾತ್ರ ಉಲ್ಲೇಖಿಸುತ್ತಾನೆ. ಆದರೆ, ಮತ್ತೊಬ್ಬ ಸಮಕಾಲೀನ ಚೀನೀ ಯಾತ್ರಿಕ ಜೀ ಸೆಂಗ್ಜೈ ಎಂಬಾತನ ದಿನಚರಿಯಲ್ಲಿ ವೈಶಾಲಿಯಲ್ಲಿ ಬೌದ್ಧ ಉಪಾಸಕ ವಿಮಲಕೀರ್ತಿಯ ನಿವಾಸವು ವೈದಿಕರಿಂದ ನಾಶವಾಯಿತು ಎಂದು ದಾಖಲಾಗಿದೆ. ಗುಪ್ತರ ಕಾಲದ ನಂತರದ ಶತಮಾನಗಳಲ್ಲಿ, ಹಲವಾರು ಬ್ರಾಹ್ಮಣ ಚಿಂತಕರು ಮತ್ತು ದೇಶದ ವಿವಿಧ ಭಾಗಗಳ ತತ್ವಜ್ಞಾನಿಗಳು ಬೌದ್ಧರ ವಿರುದ್ಧ ಬೃಹತ್ ಸೈದ್ಧಾಂತಿಕ ಆಕ್ರಮಣವನ್ನು ಪ್ರಾರಂಭಿಸಿದರು, ಹರ್ಷವರ್ಧನನ ಆಳ್ವಿಕೆಯಲ್ಲಿ ಕ್ರಿಸ್ತಶಕ 630 ಮತ್ತು 645 ರ ನಡುವೆ ಭಾರತಕ್ಕೆ ಭೇಟಿ ನೀಡಿದ ಚೀನೀ ಬೌದ್ಧ ಯಾತ್ರಿಕ ಮತ್ತು ಪ್ರವಾಸಿ ಹ್ಯೂಯೆನ್ ತ್ಸಾಂಗ್, ಆರನೇ ಶತಮಾನದ ಅವಧಿಯಲ್ಲಿ ಹೂಣರ ದೊರೆ ಮಿಹಿರಾಕುಲ ಎಂಬಾತನು ಶಿವನ ಭಕ್ತನಾಗಿದ್ದು ಒಂದು ಸಾವಿರದ ಆರನೂರು ಬೌದ್ಧ ಸ್ತೂಪಗಳು ಮತ್ತು ಮಠಗಳನ್ನು ನಾಶಪಡಿಸಿದನು ಮತ್ತು ಸಾವಿರಾರು ಜನರನ್ನು ಕೊಂದನು ಎಂದು ದಾಖಲಿಸಿದ್ದಾನೆ.
ದೇಶದ ಕೆಲವು ಭಾಗಗಳಲ್ಲಿ, ಕಾಶ್ಮೀರದಲ್ಲಿರುವಂತೆ, ಆಡಳಿತಗಾರರು ವೈಯಕ್ತಿಕ ದ್ವೇಷ ಮತ್ತು ನೀತಿಯ ವಿಷಯವಾಗಿ ದೇವಾಲಯಗಳು ಮತ್ತು ಬೌದ್ಧ ಸಂಸ್ಥೆಗಳನ್ನು ಕೆಡವಲು ಆದೇಶಿಸಿದರು. ಕಲ್ಹಣನು ರಾಜ ನಾರದನ ಬಗ್ಗೆ ಆಸಕ್ತಿದಾಯಕ ಉಲ್ಲೇಖವನ್ನು ಮಾಡುತ್ತಾನೆ, ಅವನು ತನ್ನ ಹೆಂಡತಿಯನ್ನು ಮೋಹಿಸಿದ ಬೌದ್ಧ ಸನ್ಯಾಸಿಯಿಂದ ಕೋಪಗೊಂಡ ಪರಿಣಾಮವಾಗಿ ಸೇಡು ತೀರಿಸಿಕೊಳ್ಳಲು "ಸಾವಿರಾರು ವಿಹಾರಗಳನ್ನು ಸುಟ್ಟುಹಾಕಿದನು" ಎಂದು ಹೇಳುವುದರ ಜೊತೆಗೆ ಹತ್ತನೇ ಶತಮಾನದ ರಾಜ ಕ್ಷೇಮಗುಪ್ತನ ಬಗ್ಗೆಯೂ ದಾಖಲಿಸಿದ್ದಾನೆ. ಕ್ಷೇಮಗುಪ್ತನು ಶ್ರೀನಗರದಲ್ಲಿರುವ ಜಯೇಂದ್ರವಿಹಾರದ ಬೌದ್ಧ ಮಠವನ್ನು ನಾಶಪಡಿಸಿದನು ಮತ್ತು ಕ್ಷೇಮಗೌರೀಶ್ವರ ದೇವಾಲಯದ ನಿರ್ಮಾಣಕ್ಕೆ ಅದರ ವಸ್ತುಗಳನ್ನು ಬಳಸಿದನು ಎಂದು ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. ಪಠ್ಯದಲ್ಲಿ ಉಲ್ಲೇಖಿಸಲಾದ ಕಾಶ್ಮೀರಿ ರಾಜರಲ್ಲಿ, ಕ್ರಿಸ್ತಶಕ 1089 ರಿಂದ 1111 ರವರೆಗೆ ಆಳಿದ ಹರ್ಷದೇವ ಅತ್ಯಂತ ಕುಖ್ಯಾತನಾಗಿದ್ದನು. ಅವನು ವ್ಯವಸ್ಥಿತವಾಗಿ ಹಿಂದೂ ಮತ್ತು ಬೌದ್ಧ ದೇವಾಲಯಗಳನ್ನು ಸಂಪತ್ತಿಗಾಗಿ ಲೂಟಿ ಮಾಡಿದನು ಮತ್ತು ಕೆಡವಿದನು ಮತ್ತು ದೇವಾಲಯಗಳ ನಾಶ ಮತ್ತು ವಿಗ್ರಹಗಳನ್ನು ಕೆಡುವುವ ಸಲುವಾಗಿ ಭಕ್ತಪತಣ್ಣ ನಾಯಕ ಎಂಬಾತನನ್ನು ವಿಶೇಷ ಅಧಿಕಾಯಾಗಿ ನೇಮಕ ಮಾಡಿದ್ದನು. ಎಂದು ರಾಜರಂಗಿಣಿಯಲ್ಲಿ ಉಲ್ಲೇಖಿಸಲಾಗಿದೆ.
ಬುದ್ಧನ ಜ್ಞಾನೋದಯದ ಸ್ಥಳವಾದ ಬಿಹಾರದ ಬೋಧಗಯಾದಲ್ಲಿ ಶಿವನ ಆರಾಧಕನಾಗಿದ್ದ ದೊರೆ ಶಶಾಂಕನು ಬೋಧಿ ವೃಕ್ಷವನ್ನು ಕಡಿದು ಸ್ಥಳೀಯ ದೇವಾಲಯದಿಂದ ಬುದ್ಧನ ಪ್ರತಿಮೆಯನ್ನು ತೆಗೆದುಹಾಕಿದನು, ಅದನ್ನು ಮಹೇಶ್ವರನ ಪ್ರತಿಮೆಯಿಂದ ಬದಲಾಯಿಸುವಂತೆ ಆದೇಶಿಸಿದನು ಎಂದು ಹ್ಯೂಯೆನ್ ತ್ಸಾಂಗ್ ದಾಖಲಿಸಿದ್ದಾನೆ. ಈ ಸ್ಥಳವು ಭಾರತೀಯ ಇತಿಹಾಸದುದ್ದಕ್ಕೂ ಧಾರ್ಮಿಕ ಸ್ಪರ್ಧೆಯ ತಾಣವಾಗಿ ಉಳಿದಿದೆ. ಸಾಂಪ್ರದಾಯಿಕ ದಾಖಲೆಗಳು ಮತ್ತು ಪುರಾತತ್ತ್ವ ಶಾಸ್ತ್ರದ ಪುರಾವೆಗಳ ಪ್ರಕಾರ ಅಲ್ಲಿನ ಮಹಾಬೋಧಿ ದೇವಾಲಯವನ್ನು ಪದೇ ಪದೇ ನಾಶಪಡಿಸಲಾಯಿತು ಮತ್ತು ಪುನರ್ನಿರ್ಮಿಸಲಾಯಿತು. ಆರಂಭಿಕ ಮಧ್ಯಕಾಲೀನ ಪುರಾಣ ಗ್ರಂಥಗಳಲ್ಲಿ ಹನ್ನೊಂದನೆಯ ಶತಮಾನದ ಮಧ್ಯಭಾಗದಲ್ಲಿ ವಿಷ್ಣು ದೇವಾಲಯವನ್ನು ಸ್ಥಾಪಿಸಲು ಒಂದು ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ವಿಷ್ಣು ದೇವಾಲಯದ ನಿರ್ಮಾಣಕ್ಕೆ ಬೌದ್ಧ ಸ್ಮಾರಕಗಳ ಅವಶೇಷಗಳನ್ನು ಬಳಸಿಕೊಳ್ಳಲಾಯಿತು. ಆಧುನಿಕ ವಿಷ್ಣುಪಾದ ದೇವಾಲಯವನ್ನು ಇಂದೋರ್‌ನ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಎಂಬಾಕೆ ಹದಿನೆಂಟನೇ ಶತಮಾನದ ಕೊನೆಯಲ್ಲಿ ನಿರ್ಮಿಸಿದಳು.
ಗಯಾದಿಂದ ಈಶಾನ್ಯಕ್ಕೆ ಎಂಬತ್ತು ಕಿಲೋಮೀಟರ್‌ಗಳ ದೂರದಲ್ಲಿ ನಳಂದದಲ್ಲಿ ಅಂತಾರಾಷ್ಟ್ರೀಯವಾಗಿ ಹೆಸರಾಂತ ಬೌದ್ಧ ವಿಶ್ವವಿದ್ಯಾನಿಲಯವಿದ್ದು, ಹ್ಯೂಯೆನ್ ತ್ಸಾಂಗ್ ಐದು ವರ್ಷಗಳಿಗಿಂತ ಹೆಚ್ಚು ಕಾಲ ಈ ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದನು. ವಿಶಾಲವಾದ ಸನ್ಯಾಸಿಗಳ ಸಂಕೀರ್ಣವನ್ನು ಹೊಂದಿದ್ದ ಈ ಜಾಗದಲ್ಲಿ ಶೈವ ಧರ್ಮದ ಬ್ರಾಹ್ಮಣ ದೇವಾಲಯವನ್ನು ಏಳನೇ ಶತಮಾನದ ಮಧ್ಯದಲ್ಲಿ ನಿರ್ಮಿಸಲಾಯಿತು ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ತಮಿಳುನಾಡಿನ ಕಾಂಚಿಪುರಂ ಪಟ್ಟಣದ ಕಾಮಾಕ್ಷಿ ದೇವಸ್ಥಾನವು ಸಹ ನಿರ್ಮಾಣವಾಯಿತು. ಈ ಸ್ಥಳದ ಸುತ್ತಲೂ ಹಲವಾರು ಬುದ್ಧನ ಚಿತ್ರಗಳ ಆವಿಷ್ಕಾರವು ಇದನ್ನು ಬೌದ್ಧ ಕಟ್ಟಡದ ಮೇಲೆ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ ಒಡಿಸ್ಸಾದ ಪುರಿ ಜಿಲ್ಲೆಯ ಪೂರ್ಣೇಶ್ವರ, ಕೇದಾರೇಶ್ವರ, ಕಂಠೇಶ್ವರ, ಸೋಮೇಶ್ವರ ಮತ್ತು ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಮೇಲೆ ನಿರ್ಮಿಸಲಾಗಿದೆ ಅಥವಾ ಅವುಗಳಿಂದ ಪಡೆದ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಆಂಧ್ರಪ್ರದೇಶದಲ್ಲಿ ಅನೇಕ ಬೌದ್ಧ ಸ್ಥಳಗಳನ್ನು ಬ್ರಾಹ್ಮಣರು ಸ್ವಾಧೀನಕ್ಕೆ ಪಡೆದ ಹಲವಾರು ನಿದರ್ಶನಗಳಿವೆ. ಗುಂಟೂರು ಜಿಲ್ಲೆಯ ಚೆಜೆರ್ಲಾದಲ್ಲಿ ಮಧ್ಯಕಾಲೀನ ಅವಧಿಯಲ್ಲಿ ಬೌದ್ಧ ಮಠವನ್ನು ಕಪೋತೇಶ್ವರ ದೇವಾಲಯವಾಗಿ ಪರಿವರ್ತಿಸಲಾಗಿದೆ. ನಾಗಾರ್ಜುನಕೊಂಡದಲ್ಲಿ ಬೌದ್ಧ ಸ್ತೂಪ ಮತ್ತು ವಿಹಾರಗಳನ್ನು ನಾಶಪಡಿಸಿದ್ದು ಗುಪ್ತರ ಕಾಲದಲ್ಲಿ ನಡೆದ ಈ ಘಟನೆಯು "ನಿರ್ದಯ" ಮತ್ತು "ಭಯಾನಕ" ಕೃತ್ಯ ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಚೀನಿ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಕೂಡಾ ಅಮರಾವತಿಯಲ್ಲಿ ಕೃಷ್ಣಾ ನದಿಯ ದಂಡೆಯ ಮೇಲೆ ಮಹಾ ಸ್ತೂಪದಿಂದ ಕೆಲವು ಮೀಟರ್ ದೂರದಲ್ಲಿ ಶಿವ ದೇವಾಲಯವನ್ನು ನಿರ್ಮಿಸಲಾಗಿದೆ ಇದು ಬಹುಶಃ ಬೌದ್ಧ ಸ್ಥಳವನ್ನು ಅತಿಕ್ರಮಿಸಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಶಂಕರ ಚಾರ್ಯರ ನೇತೃತ್ವದ ಬ್ರಾಹ್ಮಣ ಚಳುವಳಿಯ ಪರಿಣಾಮವಾಗಿ ದಕ್ಷಿಣ ಪ್ರದೇಶದಲ್ಲಿ ಬೌದ್ಧಧರ್ಮವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು.

ಅಶೋಕನ ಕಾಲದಿಂದಲೂ ಬೌದ್ಧ ಧರ್ಮದ ಕೇಂದ್ರವಾಗಿದ್ದ ಕರ್ನಾಟಕ ರಾಜ್ಯದಲ್ಲಿ ಬೌದ್ಧ ವಿಹಾರಗಳನ್ನು ಶೈವರು ಸ್ಪಷ್ಟವಾಗಿ ಸ್ವಾಧೀನಪಡಿಸಿಕೊಂಡ ಎರಡು ಪ್ರಮುಖ ಸ್ಥಳಗಳನ್ನು ನಾವು ನೋಡಬಹುದಾಗಿದೆ. ಉತ್ತರ ಕರ್ನಾಟಕದ ಐಹೊಳೆಯು ಚಾಲುಕ್ಯರ ಸಾಂಸ್ಕೃತಿಕ ರಾಜಧಾನಿಯಾಗಿತ್ತು. ಇಲ್ಲಿ ಆರನೆಯ ಶತಮಾನಕ್ಕೆ ಸೇರಿದ ಲಾಡ್ ಖಾನ್ ದೇವಾಲಯವು ಮೂಲತಃ ಸರಳ ಚೌಕಾಕಾರದ ಸಭಾಂಗಣವಾಗಿತ್ತು ಮತ್ತು ಬೌದ್ಧ ವಿಹಾರದ ಕೇಂದ್ರ ಸಭಾಂಗಣವಾಗಿತ್ತು. ನಂತರ ಇದು ಗೋಡೆಗಳು, ಕಿಟಕಿಗಳು, ನೆಲಮಾಳಿಗೆ ಮತ್ತು ಛಾವಣಿಯ ದೇಗುಲಗಳೊಂದಿಗೆ ಸೂರ್ಯ-ನಾರಾಯಣನಿಗೆ ಮೀಸಲಾದ ದೇವಾಲಯವಾಗಿ ರೂಪಾಂತರಗೊoಡಿತು. ಇನ್ನೊಂದು ಉದಾಹರಣೆಯು ದಕ್ಷಿಣ ಕರ್ನಾಟಕದ ಮಂಗಳೂರಿನ ಕದ್ರಿಯ ಮಂಜುನಾಥ ದೇವಾಲಯಕ್ಕೆ ಸಂಬಂಧಪಟ್ಟಿದೆ. ಅಲ್ಲಿದ್ದ ಕದರಿಕಾ ವಿಹಾರ ಎಂಬ ಬೌದ್ಧ ಮಠವನ್ನು 1068 ರಲ್ಲಿ ಶೈವ ದೇವಾಲಯವಾಗಿ ಪರಿವರ್ತಿಸಲಾಯಿತು. ಇದಕ್ಕೆ ಈಗ ಪರಶುರಾಮನ ಪುರಾಣ ಕಥೆಯನ್ನು ಜೋಡಿಸಲಾಗಿದೆ.
ಮಾಹಿತಿ ಸೌಜನ್ಯ- ದ್ವಿಜೇಂದ್ರ ನಾರಾಯಣ್ ಜಾ ಅವರ ‘’ಎಗೇನೆಸ್ಟ್ ದಿ ಗ್ರೈನ್: ನೋಟ್ಸ್ ಆನ್ ಐಡೆಂಟಿಟಿ, ಇನ್ ಟಾಲರೆನ್ಸ್ ಅಂಡ್ ಹಿಸ್ಟರಿ’’ ಕೃತಿಯಿಂದ.
( ಹೊಸತು ಮಾಸಪತ್ರಿಕೆಯ ಬಹು ಸಂಸ್ಕೃತಿ ಅಂಕಣ ಬರಹ)
ಡಾ.ಎನ್.ಜಗದೀಶ್ ಕೊಪ್ಪ

 ಮಹಾ ಕುಂಭಮೇಳದ ವರದಿ

ಮತ್ತು
ಮಾಧ್ಯಮಗಳ ಕೂಪ ಮಂಡೂಕಗಳು.
ಉತ್ತರಪ್ರದೇಶದ ಪ್ರಯಾಗ್ ರಾಜ್ ಎಂದು ಕರೆಸಿಕೊಳ್ಳುತ್ತಿರುವ ಅಲಹಾಬಾದ್ ನ ಗರದ ಹೊರವಲಯದ ತ್ರಿವೇಣಿ ಸಂಗಮ ಎಂದು ಕರೆಯುವ ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಸ್ಥಳದಲ್ಲಿ ಕುಂಭ ಮೇಳ ನಡೆಯುತ್ತಿದೆ. ಈ ಮೂರು ನದಿಗಳಲ್ಲಿ ಸರಸ್ವತಿ ನದಿ ಈಗ ಅಸ್ತಿತ್ವದಲ್ಲಿ ಇದ್ದಂತೆ ಕಾಣುವುದಿಲ್ಲ. ಅದು ಭೂಮಿಯೊಳೆಗೆ ಹರಿದುಬಂದು ಸಂಗಮ ಸೇರುತ್ತದೆ ಎಂಬ ಕಾಗಕ್ಕನ, ಗೂಬಕ್ಕನ ಕಥೆಯನ್ನು ಚಾಲ್ತಿಯಲ್ಲಿಡಲಾಗಿದೆ.
ಸುಳ್ಳು ಹೇಳಿಕೆ ಮತ್ತು ಕಟ್ಟು ಕಥೆಗಳ ಮೂಲಕ ಧರ್ಮವನ್ನು ಚಾಲನೆಯಲ್ಲಿ ಇಟ್ಟು, ದೇಶದ ಜನರಿಗೆ ಮಂಕು ಬೂದಿ ಎರೆಚುವ ಕಾಯಕವನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕೇಂದ್ರ ಮತ್ತು ಉತ್ತರ ಪ್ರದೇಶದ ಅಪಕ್ವ ಹೇಳಿಕೆಗಳನ್ನು ವರದಿ ಮಾಡುತ್ತಿರುವ ಮಾಧ್ಯಮದ ಮುಠಾಳರಿಗೆ ಈ ವಿಷಯದಲ್ಲಿ ಒಂದಿಷ್ಟು ವಿವೇಕತನ ಇರಬೇಕಾಗಿತ್ತು. ಅದೂ ಇಲ್ಲವಾಗಿದೆ.
ನಲವತ್ತೈದು ಕೋಟಿ ಜನ ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಲಿದ್ದಾರೆ ಎಂಬ ಹೇಳಿಕೆಯಿಂದ ಹಿಡಿದು ಪ್ರತಿ ದಿನ ಒಂದು ಕೋಟಿಯಿಂದ ಮೂರು ಕೋಟಿ ಭಕ್ತರು ಸ್ನಾನ ಮಾಡಿದರು ಎಂಬ ವರದಿಯನ್ನು ಪ್ರಕಟಿಸುವ ಮುನ್ನ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು ಈಗ ಅದು ಇಲ್ಲವಾಗಿದೆ. ಹೇಳಿಕೆ ನೀಡುವ ಸರ್ಕಾರಗಳಿಗೆ ಮತ್ತು ಪ್ರಕಟಿಸುತ್ತಿರುವ ಮಾಧ್ಯಮಗಳಿಗೆ ಸಾವಿರ, ಲಕ್ಷ ಮತ್ತು ಕೋಟಿ ಸಂಖ್ಯೆಗಳ ನಡುವಿನ ಅಂತರ ಮರೆತು ಹೋಗಿದೆ. ಇದಕ್ಕೆ ಯಾವ ಅರ್ಥಶಾಸ್ತ್ರದ ಪರಿಣಿತಿ ಬೇಕಾಗಿಲ್ಲ. ಸಾಮಾನ್ಯ ಲೆಕ್ಕಾಚಾರ ಸಾಕು.
ಅಲಹಾಬಾದ್ ನಗರದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳಿವೆ. ಈ ನಿಲ್ದಾಣಗಳಲ್ಲಿ ಮುಖ್ಯ ನಿಲ್ದಾಣದಲ್ಲಿ ಎಂಟು ಪ್ಲಾಟ್ ಪಾರಂ ಹೊರತು ಪಡಿಸಿದರೆ, ಉಳಿದ ನಿಲ್ದಾಣಗಳಲ್ಲಿ ಮೂರರಿಂದ ಐದು ಮಾತ್ರ ಪ್ಲಾಟ್ ಫಾರಂಗಳಿವೆ. ಒಂದು ದಿನಕ್ಕೆ ಕುಂಬ ಮೇಳಕ್ಕೆ ಐನೂರು ರೈಲುಗಳು ಆಗಮಿಸಿದವು ಎಂದು ಕೊಂಡು ಲೆಕ್ಕ ಹಾಕಿದರೆ, ಒಂದು ಲೈಲಿನಲ್ಲಿ ಒಂದು ಸಾವಿರ ಎಂದರೆ, ಐದು ಲಕ್ಷ. ಇದಕ್ಕೆ ಬೇಕಾದರೆ ಎಕ್ಟ್ರಾ ಮೂರು ಲಕ್ಷ ಸೇರಿಸಿ.
ಅಲಹಬಾದ್ ಗೆ ದಿನ ನೂರು ವಿಮಾನಗಳು ಆಗಮಿಸಿದರೆ, ಸರಾ ಸರಿ, ಇನ್ನೂರು ಪ್ರಯಾಣಿಕರಂತೆ ಇಪ್ಪತ್ತು ಸಾವಿರ ಪ್ರಯಾಣಿಕರು. ಇದಕ್ಕೆ ಐದು ಸಾವಿರ ಸೇರಿಸಿಕೊಳ್ಳಿ.
ಇನ್ನು ಅಲಹಬಾದ್ ನಗರವನ್ನು ರಸ್ತೆ ಮೂಲಕ ಸಂಪರ್ಕಿಸುವ ಲಕ್ನೋ, ಕಾನ್ಪುರ, ವಾರಣಾಸಿ, ಗ್ವಾಲಿಯರ್ ಹೆದ್ದಾರಿಗಳ ಮೂಲಕ ಒಂದು ಲಕ್ಷ ಕಾರುಗಳು. ಅಂದರೆ, ಐದು ಲಕ್ಷ ಪ್ರವಾಶಿಗರು ಮತ್ತು ಹತ್ತು ಸಾವಿರ ಬಸ್ ಗಳು ಅಂದರೆ ಸರಾಸರಿ ಐವತ್ತು ಮಂದಿಯಂತೆ ಐದು ಲಕ್ಷ. ಒಟ್ಟಾರೆ. ರೈಲು, ವಿಮಾನ, ಕಾರು, ಬಸ್ ಗಳಲ್ಲಿ ಆಗಮಿಸುವ ಭಕ್ತರ ಸಂಖ್ಯೆ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ದಾಟುವುದಿಲ್ಲ. ಕೋಟಿ ಜನ ಭಕ್ತರು ಎಂದು ಪುಂಗುವುದಕ್ಕೆ ಕನಿಷ್ಠ ಜ್ಞಾನ ಬೇಡವೆ?
ನಗರಕ್ಕೆ ಬರುತ್ತಿರುವ ರೈಲು, ವಿಮಾನಗಳ ಸಂಖ್ಯೆಗಳ ನಿಖರ ಮಾಹಿತಿ ದೊರೆಯುತ್ತದೆ. ಅದೇ ರೀತಿ ರಸ್ತೆಯಲ್ಲಿ ಆಗಮಿಸಿದ ಪ್ರತಿಯೊಂದು ವಾಹನದ ಮಾಹಿತಿಗಳೂ ಸಹ ದೊರೆಯುತ್ತವೆ. ಸರ್ಕಾರ ಹೇಳುವ ಸಂಖ್ಯೆ ಮತ್ತು ವಾಸ್ತವವಾಗಿ ಆಗಮಿಸುತ್ತಿರುವ ಜನರ ಸಂಖ್ಯೆಯ ಕುರಿತಾಗಿ ನೈಜ ಮಾಹಿತಿ ನೀಡಬೇಕಾದುದು ಮಾಧ್ಯಮಗಳ ಕರ್ತವ್ಯ ಎಂದು ಏಕೆ ಅನಿಸುತ್ತಿಲ್ಲ.?
ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ಮುವತ್ತು ಅಥವಾ ನಲವತ್ತು ಲಕ್ಷ ಎಂದು ಹೇಳಲಾಗುತ್ತದೆ. ಇದರಲ್ಲಿ ಒಂದು ಕೋಟಿ ಜನರನ್ನು ಒಂದೆಡೆ ಸೇರಿಸಲು ಸಾಧ್ಯವೆ? ಊಹಿಸಿ ನೋಡಿ. ತ್ರಿವೇಣಿ ಸಂಗಮದ ವಿಸ್ತೀರ್ಣ ಮತ್ತು ಉದ್ದವನ್ನು ನಾನು ಸ್ವತಃ ಗಮನಿಸಿದ್ದೀನಿ. ಮೂರು ಕಿಲೊಮೀಟರ್ ಉದ್ದದಲ್ಲಿ ಗರಿಷ್ಠ ಮುವತ್ತು ಲಕ್ಷ ಜನ ಸೇರಬಹುದು. ಒಂದು ಕೋಟಿ ಎಂದು ಹೇಳುವ ಸರ್ಕಾರದ ಮಾತಿಗೆ ಕಿವಿಗೊಡುವ ಮುನ್ನ ಅಲ್ಲಿ ಹಾಕಿರುವ ತಾತ್ಕಾಲಿಕ ಗುಡಾರಗಳನ್ನು ಗಮನಸಿದರೆ, ಮಾಧ್ಯಮಗಳಿಗೆ ಒಂದು ಅಂದಾಜು ದೊರೆಯುತ್ತದೆ.
ಇಂತಹ ಸ್ಥಿತಿಯಲ್ಲಿ ಅಲ್ಲಿ ನಡೆಯುತ್ತಿರುವ ಕಾಲ್ತುಳಿತ, ಅಗ್ನಿ ದುರಂತ ಇವುಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಮರೆ ಮಾಚುವುದು, ಅಲ್ಲಿನ ವಕ್ತಾರರು ಹೇಳುವುದೇ ಸುದ್ದಿಯಾಗುವುದಾದರೆ, ಮಾಧ್ಯಮಗಳು ಏಕಿರಬೇಕು? ಇಡೀ ಕುಂಭಮೇಳದಲ್ಲಿ ಭಾಗವಹಿಸುವವರ ಸಂಖ್ಯೆ ನನ್ನ ಅಂದಾಜಿನ ಪ್ರಕಾರ ಹತ್ತು ಕೋಟಿ ದಾಟುವುದಿಲ್ಲ. ಇನ್ನು ನಲವತ್ತೈದು ಕೋಟಿ ಎನ್ನುವುದು ಅಗ್ರಹಾರದ ಹೊಸ ಪುರಾಣ. ಈಗಗಲೂ ಕಾಲ ಮಿಂಚಿಲ್ಲ. ನಗರಕ್ಕೆ ಆಗಮಿಸುವ ವಾಹನ, ರೈಲು, ವಿಮಾನಗಳ ಸಂಖ್ಯೆಯ ಮೂಲಕ ಅಧಿಕೃತ ದಾಖಲೆಯನ್ನು ಪ್ರಕಟಿಸಬಹುದು.
ಎನ್. ಜಗದೀಶ್ ಕೊಪ್ಪ.

See insights and ads
All reactions:
Panju Ganguli, Bhagya Lakshmi and 223 others

ಶುಕ್ರವಾರ, ಜನವರಿ 31, 2025

ದತ್ತಾತ್ರೇಯ ಹೊಸಬಾಳೆ ಅವರಿಗೊಂದು ಬಹಿರಂಗ ಪತ್ರ.


ಶ್ರೀ ದತ್ತಾತ್ರೇಯ ಹೊಸಬಾಳೆ ಅವರಿಗೆ.

ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಹುದ್ದೆಯಲ್ಲಿದ್ದುಕೊಂಡು, ನೀವು ನಂಬಿರುವ ಸಿದ್ಧಾಂತಕ್ಕೂ, ನಾನು ನಂಬಿಕೊಂಡು ಬಂದಿರುವ ಸಿದ್ಧಾಂತಕ್ಕೂ ಏಳು ಸಮುದ್ರಗಳ ಅಂತರವಿದೆ. ಆದರೂ ಸಹ ನಿಮ್ಮ ಬಗ್ಗೆ ಗೌರವ ಇಟ್ಟುಕೊಂಡಿದ್ದೀನಿ. ಕನ್ನಡಿಗರಾದ ನಿಮ್ಮ ಜೊತೆ ಇಂದಿಗೂ ಸಹ ಸಂವಾದ ಸಾಧ್ಯವಿದೆ ಎಂಬುದು ಮೊದಲನೆಯ ಕಾರಣವಾದರೆ, ಮೈಸೂರು ವಿಶ್ವ ವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿಮ್ಮ ಜೊತೆ ಸಂವಹನ ಸಾಧ್ಯ ಎಂದು ನಂಬಿದ್ದೀನಿ. ನೀವು ಕುವೆಂಪು, ಲಂಕೇಶ್, ಅನಂತಮೂರ್ತಿ ಹಾಗೂ ಜೆ.ಹೆಚ್.ಪಟೇಲ್, ಕಾಗೋಡು ತಿಮ್ಮಪ್ಪ ಮತ್ತು ಬಂಗಾರಪ್ಪ ಇಂತಹ ಮಹನೀಯರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದವರು.


ಈ ದಿನ ನೀವು ಗುಲ್ಬರ್ಗಾ ಜಿಲ್ಲೆಯ ಸೇಡಂ ನಲ್ಲಿ ನಿಮ್ಮ ಸಂಘಟನೆಯ ವತಿಯಿಂದ ನಡೆಸುತ್ತಿರುವ ಭಾರತೀಯ ಸಂಸ್ಕೃತಿ ಎಂಬ ಶಿಬಿರದಲ್ಲಿ ಯುವಕರ ಕೈಗೆ ಬಂದೂಕ ನೀಡಿ ನಕ್ಸಲರನ್ನಾಗಿ ಮಾಡಲಾಗುತ್ತಿದೆ ಎಂದು ಈ ದೇಶದ ಪ್ರಜ್ಞಾವಂತರ ಬಗ್ಗೆ ಆರೋಪಿಸಿದ್ದೀರಿ. ನೀವು ಮತ್ತು ನಿಮ್ಮ ಸಂಘಟನೆಯ ನಾಯಕರು ಹಿಂದೂ ಧರ್ಮದ ಭಜನೆ ಮತ್ತು ಹಿಂದುತ್ವ ಕುರಿತಾದ ಪುರಾಣ ಓದುವಿಕೆಯನ್ನು ಬದಿಗೊತ್ತಿ ಪ್ರಸಕ್ತ ಭಾರತದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ತೆರೆದ ಹೃದಯದಿಂದ ನೋಡುವುದನ್ನು ಕಲಿಯಬೇಕಿದೆ.

ನೀವು ಪ್ರತಿನಿಧಿಸುತ್ತಿರುವ ಆರ್.ಎಸ್.ಎಸ್. ಸಂಘಟನೆ ಮತ್ತು ಭಾರತೀಯ ಕಮ್ಯೂನಿಷ್ಟ್ ಪಕ್ಷ ಈ ಎರಡು ಸಂಘಟನೆಗಳಿಗೆ ಈಗ ಶತಮಾನೋತ್ಸವ. 1925 ರಲ್ಲಿ ಕೇವಲ ಎರಡು ಮೂರು ತಿಂಗಳ ಅವಧಿಯಲ್ಲಿ ಈ ಸಂಸ್ಥೆಗಳು ಜನ್ಮತಾಳಿದವು. ನಿಮಗಿಂತ ಮುಂಚೆ ಅಂದರೆ, 1921 ರಲ್ಲಿ ಆಂಧ್ರ ಮಹಾಸಭಾ ಎಂಬ ಸಂಘಟನೆಯು ಜನ್ಮತಾಳಿದ ಬಗ್ಗೆ ನಿಮಗೆ ಮಾಹಿತಿಯಿಲ್ಲ. ಮುಂದಿನ ಮಾರ್ಚ್ ತಿಂಗಳ ಹೊಸತು ಮಾಸ ಪತ್ರಿಕೆಗೆ ನಾನು ಬರೆಯುತ್ತಿರುವ ಬಹು ಸಂಸ್ಕೃತಿ ಎಂಬ ಅಂಕಣ ಬರಹಕ್ಕೆ ನೆರೆಯ ಆಂಧ್ರದ ಈ ಸಂಘಟನೆಯ ಇತಿಹಾಸ ಮತ್ತು 1944 ರಿಂದ 1955 ರ ವರೆಗೆ ನಡೆದ ತೆಲಂಗಾಣ ಹೋರಾಟ ಕುರಿತ ಕೃತಿಗಳನ್ನು ಓದುತ್ತಿದ್ದೀನಿ.

ದೆಹಲಿಯ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ನಿಂದ 1083 ರಲ್ಲಿ ಪ್ರಕಟಿಸಿರುವ ‘’ಭಾರತದಲ್ಲಿ ರೈತ ಚಳುವಳಿ 1920-50’’ ಹಾಗೂ 1981 ರಲ್ಲಿ ದೆಹಲಿಯ ವಿಕಾಸ್ ಪಬ್ಲಿಷಿಂಗ್ ಹೌಸ್ ನಿಂದ 1981 ರಲ್ಲಿ ಪ್ರಕಟವಾಗಿರುವ ‘’ ದ ತೆಲಂಗಾಣ ಮೂವ್ ಮೆಂಟ್’’ ಎಂಬ ಇಂಗ್ಲೀಷ್ ಕೃತಿಗಳನ್ನು ಓದಿರಿ. ಇವುಗಳ ಜೊತೆ 2013 ರಲ್ಲಿ ನಾನು ರಚಿಸಿರುವ ‘’ ಎಂದೂ ಮುಗಿಯದ ಯುದ್ಧ’’ ಎಂಬ ಭಾರತದ ನಕ್ಸಲ್ ಇತಿಹಾಸ ಕುರಿತ ಕೃತಿಯನ್ನೂ ಓದಿರಿ. ಸಪ್ನ ಬುಕ್ ಹೌಸ್ ನಿಂದ ಪ್ರಕಟವಾದ ಈ ಕೃತಿಯು ನನಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಂದುಕೊಡುವುದರ ಜೊತೆಗೆ ಈವರೆಗೆ ಐದು ಮುದ್ರಣಗಳನ್ನು ಕಂಡಿದೆ. ನಾವು ನೋಡುವ ಮತ್ತು ಗ್ರಹಿಸುವ ಜಗತ್ತನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಬೇಕು ಎಂಬ ನಂಬಿಕೆಯಲ್ಲಿ ವಿಶ್ವಾಸ ಇಟ್ಟವನು ನಾನು.

ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ದೇಶದ ಬಹುತೇಕ ಪ್ರದೇಶಗಳಲ್ಲಿ ವಿಶೇಷವಾಗಿ, ಬಂಗಾಳ, ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಅವಿಭಜಿತ ಆಂಧ್ರಪ್ರದೇಶದಲ್ಲಿ ಶೇಕಡ ಎಂಬತ್ತರಷ್ಟು ಭೂಮಿಯ ಒಡೆತನವು ಸಿರಿವಂತರ ಕೈಯಲ್ಲಿತ್ತು. ಅವರ ಕಪಿಮುಷ್ಟಿಯಲ್ಲಿ ನಲುಗುತ್ತಿದ್ದ ರೈತರು, ಕೃಷಿ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ನಕ್ಸಲ್ ಸಂಘಟನೆಗಳು ಉದ್ಭವಾದವು. ವಿದ್ಯಾವಂತರು ಕೈಗೆ ಬಂದೂಕ ತೆಗೆದುಕೊಂಡರು ಮತ್ತು ಯುವಕರಿಗೆ ನೀಡಿದರೇ ಹೊರತು, ಯಾವ ಹಿಂದೂ ಸಾಮ್ರಾಜ್ಯದ ಸ್ಥಾಪನೆ ಅವರ ಕನಸಾಗಿರಲಿಲ್ಲ. ಆ ಕಾಲಘಟ್ಟದಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಲು ಅಂಥಹ ಹೋರಾಟ ಅನಿವಾರ್ಯವಾಗಿತ್ತು. ಈ ಆಧುನಿಕ ಜಗತ್ತಿನಲ್ಲಿ ಅಂತಹ ಹೋರಾಟ ಅಗತ್ಯವಿಲ್ಲ. ಈ ಕಾರಣದಿಂದಾಗಿ ನಕ್ಸಲ್ ಹೋರಾಟ ತನ್ನ ಅಸ್ತಿತ್ವನ್ನು ಕಳೆದುಕೊಂಡು 25 ವರ್ಷವಾಯಿತು. ಈಗ ಅಂತಹ ಹೋರಾಟಗಳ ಕುರಿತಗಿ ಯಾರಿಗೂ ನಂಬಿಕೆಯಿಲ್ಲ. ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಹೋರಾಡಲು ಆಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆ ವೇದಿಕೆಯನ್ನು ಕಲ್ಪಿಸಿದೆ.

ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ನೀವು ಈ ದೇಶದ ಅರೆ ವಿದ್ಯಾವಂತ ಯುವಕರ ಕೈಗೆ ಧರ್ಮ ರಕ್ಷಣೆಯ ನೆಪದಲ್ಲಿ ತ್ರಿಶೂಲದ ಹೆಸರಿನಲ್ಲಿ ಮಾರಕ ಆಯುಧ ಮತ್ತು ಕತ್ತಿಗಳನ್ನು ನೀಡುತ್ತಿದ್ದೀರಲ್ಲಾ ಇದನ್ನು ಏನೆಂದು ಕರೆಯೋಣಾ? ನೀವು ಉದ್ಯೋಗವಿಲ್ಲದ ಯುವಕರ ಕೈಗೆ ನೀಡಬೇಕಾಗಿರುವುದು ಕತ್ತಿ, ಕುಡುಗೋಲು ಅಥವಾ ತ್ರಿಶೂಲ ಇವುಗಳಲ್ಲ, ಉದ್ಯೋಗವನ್ನು ನೀಡಬೇಕಾಗಿರುವುದು ನಿಜವಾದ ಹಾಗೂ ಮಾನವೀಯ ಧರ್ಮ. ನಿಮ್ಮನ್ನು ಪ್ರಶ್ನಿಸುವವರು ನಗರದ ನಕ್ಸಲರು. ಸರಿ ಒಪ್ಪೋಣ. ಹಾಗಾದರೆ, ನೀವು ಯಾರು? ಅಗ್ರಹಾರದ ನಕ್ಸಲರೇ?

ದತ್ತಾತ್ರೆಯ ಅವರೇ, ಉಳಿದ ರಾಜ್ಯಗಳ ವಿವರ ಬೇಡ. ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಕೇಂದ್ರ ಸರ್ಕಾರವು ಉತ್ತರ ಪ್ರದೇಶಕ್ಕೆ ನೀಡಿರುವ ಹಣ ಮತ್ತು ಕಾಶಿ, ಅಯೋಧ್ಯೆ, ಅಲಹಾಬಾದ್ ನ ಧಾರ್ಮಿಕ ಉತ್ಸವಗಳು ಹಾಗೂ ದೇಗುಲ ನಿರ್ಮಾಣಕ್ಕೆ ವಿನಿಯೋಗಿಸಿರುವ ಹಣವನ್ನು ಲೆಕ್ಕ ಹಾಕಿ ಮತ್ತು ನಿಮ್ಮದೇ ಸರ್ಕಾರದ ಆರ್ಥಿಕ ಅಂಕಿ ಅಂಶಗಳ ಸೂಚ್ಯಂಕವನ್ನು ತೆಗೆದು ನೋಡಿ. ಬಡತನ ನಿವಾರಣೆ ಅಥವಾ ಉದ್ಯೋಗ ಸೃಷ್ಟಿಯಾಗಿದೆಯಾ?

ದೇಶದ ಅಭಿವೃದ್ಧಿಗೆ ನೆರವಾಗುವುದು ಧರ್ಮ ಅಥವಾ ಧರ್ಮಾಧಾರಿತ ಕಟ್ಟು ಕತೆಗಳಲ್ಲ. ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮಾತ್ರ. ನಮಗಿಂತ ಅಧಿಕ ಜನಸಂಖ್ಯೆ ಇರುವ ಚೀನಾ ದೇಶವು ನಮಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಈಗ ಮಾದರಿಯಾಗಿದೆ.
ಇಂತಿ

ಎನ್.ಜಗದೀಶ್ ಕೊಪ್ಪ. 

ವ್ಯಾಖ್ಯಾನಕ್ಕೆ ನಿಲುಕದ ಮಹಾತ್ಮನ ಬದುಕು.



ದಿನಾಂಕ 25 ಶನಿವಾರ ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ಕರ್ನಾಟಕ ಸಂಗೀತದ ಮೇರು ಪ್ರತಿಭೆಗಳಾದ ವೀಣಾ ಧನಮ್ಮಾಳ್ ಮತ್ತು ಧನಕೋಟಿ ಅಮ್ಮಾಳ್ ಕುರಿತು ಬರೆದ ಎರಡು ಅಧ್ಯಾಯಗಳ ಮಾಹಿತಿ ಕುರಿತು ಮರು ಪರಿಶೀಲನೆಗಾಗಿ ಸಂಗೀತದ ಇತಿಹಾಸ ಕುರಿತ ಪುಸ್ತಕಗಳಿಗಾಗಿ ನನ್ನ ಲೈಬ್ರರಿಯಲ್ಲಿ ತಡಕಾಡುತ್ತಿದ್ದೆ. ಇಂಗ್ಲೀಷ್ ಪುಸ್ತಕಗಳ ಕಪಾಟಿನಲ್ಲಿ ಕೈ ಬೆರಳುಗಳಿಗೆ ತಾಕಿದ ಕಸ್ತೂರ ಬಾ ಅವರ ‘’ಅನ್ ಟೋಲ್ಡ್ ಸ್ಟೋರಿ ಆಫ್ ಕಸ್ತೂರಬಾ’’ ಕೃತಿಯ ಮುಂದಕ್ಕೆ ಬೆರಳುಗಳು ಚಲಿಸಲಿಲ್ಲ. ಪುಸ್ತಕ ಎಳೆದುಕೊಂಡು ದೂಳು ಒರೆಸಿ, 26 ರ ಭಾನುವಾರದಿಂದ ಮತ್ತೇ ಕೃತಿಯ ಮೇಲೆ ಕಣ್ಣಾಡಿಸಿದೆ. ನನ್ನ ಮೇಲೆ ಪ್ರಭಾವ ಬೀರಿದ ಕೃತಿಗಳಲ್ಲಿ ಇದೂ ಸಹ ಒಂದಾಗಿತ್ತು.

ಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಗಾಂಧಿಯ ದುರಂತಗಾಥೆ ಕುರಿತು ಸಪ್ನ ಬುಕ್ ಹೌಸ್ ಪ್ರಕಾಶನ ಸಂಸ್ಥೆಗಾಗಿ 2019 ರಲ್ಲಿ ‘’ ಮಹಾತ್ಮನ ಪುತ್ರ’’ ಎಂಬ ಹೆಸರಿನಲ್ಲಿ ಪುಸ್ತಕ ಬರೆಯುವಾಗ, ಈ ಕೃತಿಯನ್ನು ತರಿಸಿಕೊಂಡು ಓದಿದ್ದೆ. ಕಸ್ತೂರ ಬಾ ಮತ್ತು ಗಾಂಧೀಜಿ ಇಬ್ಬರೂ ತಂದೆ ತಾಯಿಯಾಗಿ ಅನುಭವಿಸಿದ ಮಾನಸಿಕ ವೇದನೆಗಳ ಬಗ್ಗೆ ತಳಮಳಗೊಂಡಿದ್ದೆ. ಕಸ್ತೂರ ಬಾ ಕುರಿತಾಗಿ ಇಂಗ್ಲೀಷ್ ಭಾಷೆಯಲ್ಲಿ ಐದಾರು ಕೃತಿಗಳು ಪ್ರಕಟವಾಗಿದ್ದರೂ ಸಹ, ಅವರ ಮೊಮ್ಮಗ ಹಾಗೂ ಮಣಿಲಾಲ್ ಗಾಂಧಿ ಅವರ ಪುತ್ರ ಅರುಣ್ ಗಾಂಧಿಯವರು ತಮ್ಮ ಪತ್ನಿ ಸುನಂದಾ ಅವರ ಜೊತೆಗೂಡಿ ರಚಿಸಿರುವ ಈ ಕೃತಿಗೆ ನಾನು ಪ್ರಥಮ ಆದ್ಯತೆಯನ್ನು ನೀಡಿದ್ದೆ. ಏಕೆಂದರೆ, ನೊಂದವರ ನೋವನ್ನು ನೊಂದವರಷ್ಟೇ ಬಲ್ಲರು. ಈ ಕೃತಿಯ ಪ್ರಸ್ತಾವನೆಯಲ್ಲಿ ಅರುಣ್ ಅವರು ತನ್ನ ಅಜ್ಜ ಮತ್ತು ಅಜ್ಜಿಯ ಕುರಿತಾಗಿ ಬರೆಯುತ್ತಾ, ‘’ ವಿಶಾಲವಾಗಿ ಹರಡಿದ ಬೃಹತ್ ಆಲದ ಮರದ ಕೆಳಗೆ ಏನೂ ಬೆಳೆಯುವುದಿಲ್ಲ’’ ಎಂಬ ಮಾತನಾಡಿದ್ದಾರೆ.

ಗಾಂಧೀಜಿ ಮತ್ತು ಕಸ್ತೂರ ಬಾ ಅವರ ಜೀವನ ಗಾಥೆಯನ್ನು ಗಮನಿಸಿದಾಗ, ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರೂ ಭಾರತದ ಸಾರ್ವಜನಿಕ ಬದುಕಿನಲ್ಲಿ ಅನಾಮಿಕರಾಗಿ ಉಳಿದುಕೊಂಡರು. ರಾಜಕಾರಣಿಯ ಮಗ ರಾಜಕಾರಣಿಯಾಗಿ, ಸಿನಿಮಾ ನಟನ ಮಗ ನಟನಾಗಿ, ಕ್ರಿಕೇಟ್ ತಾರೆಯರ ಮಕ್ಕಳು ಆಟಗಾರಾಗಿ, ಉದ್ಯಮಿ ಮಕ್ಕಳು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಲೋಕದಲ್ಲಿ ಗಾಂಧೀಜಿಯ ಸಂತಾನದಲ್ಲಿ ಯಾರೊಬ್ಬರು ಏನೂ ಆಗಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕಾಗಿ ಇಡೀ ಬದುಕನ್ನು ತೆತ್ತುಕೊಂಡ ಮಹಾತ್ಮ ಎಂದಿಗೂ ತನ್ನ ವೈಯಕ್ತಿಕ ನೋವನ್ನು ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ. ಗಾಂಧೀಜಿ ಕುರಿತಾಗಿ ಸಿದ್ಧಾಂತಗಳ ನೆಪದಲ್ಲಿ ವಿಷ ಕಕ್ಕುವ ವಿಷಜಂತುಗಳು ಒಮ್ಮೆ ತಣ್ಣಗೆ ಕುಳಿತು ಈ ಬಗ್ಗೆ ಯೋಚಿಸಬೇಕಾಗಿದೆ. ತನ್ನ ಮೇಲಿನ ಆರೋಪ ಅಥವಾ ದೂರನ್ನು ನನ್ನ ಜಾತಿಯ ಮೇಲಿನ ಹಲ್ಲೆ, ನಮ್ಮ ಸಮುದಾಯದ ಮೇಲಿನ ಹಲ್ಲೆ ಎಂದು ಬೊಬ್ಬಿರಿಯುವ ಇಂದಿನ ರಾಜಕಾರಣದ ಬಬ್ರುವಾಹನರು ಮತ್ತು ಮಹಾತ್ಮನ ಬದುಕಿನ ನಡುವೆ ಎಷ್ಟೊಂದು ಅಂತರವಿದೆ ಎಂಬುದು ಅರ್ಥವಾಗುತ್ತದೆ.
ಗುಜರಾತಿನ ರಾಜ್ ಕೋಟ್ ನಗರದ ಪ್ರಸಿದ್ಧ ವ್ಯಾಪಾರಿಯೊಬ್ಬರ ಪುತ್ರಿಯಾಗಿ ಜನಿಸಿದ ಕಸ್ತೂರ ಬಾ ಅವರು ವೃತ್ತಿಯಲ್ಲಿ ವಕೀಲರಾಗಿದ್ದ ಗಾಂಧಿಯವರನ್ನು ಕೈ ಹಿಡಿದು , ಒಡಲಾಳದ ನೋವುಗಳನ್ನು ನುಂಗುತ್ತಾ, ದಾಂಪತ್ಯ ಬದುಕಿನುದ್ದಕ್ಕೂ ಸಂತನೊಬ್ಬನ ಪತ್ನಿಯಾಗಿ ಅಕ್ಷರಶಃ ಸಂತಳಂತೆ ಬದುಕಿದುರು. ಅವರ ಬದುಕಿನ ಒಂದೊಂದು ಅಧ್ಯಾಯವು ಓದುಗರ ಮನಕರಗಿಸುತ್ತದೆ. 1942 ರಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿ ಘೋಷಿಸಿದಾಗ ಅವರ ಜೊತೆ ಬಂಧಿತರಾಗಿ ಪುಣೆಯ ಆಗಖಾನ್ ಅರಮನೆಯ ಗೃಹ ಬಂಧನದಲ್ಲಿ ಜೀವಿಸುತ್ತಾರೆ. 1942 ರ ಆಗಸ್ಟ್ ಮೊದಲ ವಾರ ಬಂಧಿತರಾದ ಮಹಾದೇವ ದೇಸಾಯಿ ಅವರು ಬಂಧನಕ್ಕೊಳಗಾದ ವಾರದಲ್ಲಿ ಅಂದರೆ, 1942 ರ ಆಗಸ್ಟ್ 15 ರಂದು ತಮ್ಮ ಐವತ್ತನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರೆ, 1944 ರ ಪೆಬ್ರವರಿ 22 ರಂದು ಅದೇ ಆಗಖಾನ್ ಅರಮನೆಯಲ್ಲಿ ಕಸ್ತೂರ ಬಾ ಅವರು ಹೃದಯಾಘಾತದಿಂದ ನಿಧನ ಹೊಂದಿದರು.
ಈಗ ಗಾಂಧಿ ಟ್ರಸ್ಟ್ ಆಗಿ ಪರಿವರ್ತನೆ ಹೊಂದಿರುವ ಆಗಖಾನ್ ಅರಮನೆಯ ಹಿಂಭಾಗ, ಮಹಾದೇವದಾಸಾಯಿ ಮತ್ತು ಕಸ್ತೂರಬಾ ಇಬ್ಬರ ಸಮಾಧಿಗಳಿವೆ. 320 ಪುಟಗಳ ಈ ಕೃತಿಯಲ್ಲಿ ಕೊನೆಯ ಎರಡು ಅಧ್ಯಾಯಗಳು ಓದುಗರ ಕಣ್ಣಲ್ಲಿ ನೀರು ತರಿಸುತ್ತವೆ, ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ತೆತ್ತುಕೊಂಡ ನಂತರ ಅವರು ಮತ್ತು ಕಸ್ತೂರ ಬಾ ಇಬ್ಬರೂ ತಮ್ಮ ನಾಲ್ವರು ಮಕ್ಕಳನ್ನು ಒಟ್ಟಿಗೆ ನೋಡಲು ಸಾಧ್ಯವಾಗಲಿಲ್ಲ. ಕಸ್ತೂರ ಬಾ ನಿಧನರಾದಾಗ, ಮಣಿಲಾಲ್ ದಕ್ಷಿಣ ಆಫ್ರಿಕಾದಲ್ಲಿ ಇದ್ದ ಕಾರಣ ಬರಲಾಗಲಿಲ್ಲ. ಹಿರಿಯ ಪುತ್ರ ಹರಿಲಾಲ್ ಮದ್ಯ ವ್ಯಸನಿಯಾಗಿ ಪುಣೆ ಮತ್ತು ಬಾಂಬೆ ನಗರದಲ್ಲಿ ಬೀದಿ ಬೀದಿ ಅಲೆಯುತ್ತಿದ್ದ ಕಾರಣ ಆತನು ತಾಯಿ ಮತ್ತು ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಅಂತಿಮವಾಗಿ ರಾಮದಾಸ್ ಮತ್ತು ದೇವದಾಸ್ ಇಬ್ಬರು ಪುತ್ರರು ತಾಯಿಯ ಅಂತ್ಯಕ್ರಿಯೆ ನೆರವೇರಿಸಿದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೆ ಭಾರತದ ನೆಲದಲ್ಲಿ ತನ್ನದು ಎಂಬ ಒಂದು ಮನೆಯಿರಲಿಲ್ಲ. ಒಂದು ಅಥವಾ ಎರಡು ಅವಧಿಗೆ ಜನಪ್ರತಿಯಾದರೆ ಸಾಕು, ಮಿನಿ ಸಾಮ್ರಾಜ್ಯವನ್ನು ನಿರ್ಮಿಸುವ ಇಂದಿನ ರಾಜಕಾರಣಿಗಳನ್ನು ಇಂದ್ರ, ಚೆಂದ್ರ ಎಂದು ಹೊಗಳುವ ಮುನ್ನ ನಮ್ಮ ಆತ್ಮ ಸಾಕ್ಷಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ.
ಗಾಂಧೀಜಿಯವರ ಜೊತೆ ಅವರ ಎಲ್ಲಾ ಬಗೆಯ ಹೋರಾಟಗಳಿಗೆ ತನು ಮನುವನ್ನು ತೆತ್ತ ಕಸ್ತೂರಬಾ ಅವರಿಗೆ ತಮ್ಮ ಹಿರಿಯ ಮಗ ಹರಿಲಾಲ್ ದುರಂತ ಬದುಕು ತೀವ್ರವಾಗಿ ಕಾಡಿತ್ತು. ಗಾಂಧೀಜಿಯ ಅನುಪಸ್ಥಿತಿಯಲ್ಲಿ ತಮ್ಮ ಮೊದಲ ಪುತ್ರ ಹರಿಲಾಲ್ ಮಗುವಾಗಿದ್ದಾಗ ಆತನ ಮೂಲಕ ನೆಮ್ಮದಿಯನ್ನು ಕಂಡಿದ್ದ ಕಸ್ತೂರ ಬಾ ಅವರು ನಂತರದ ದಿನಗಳಲ್ಲಿ ಬದುಕಿನುದ್ದಕ್ಕೂ ಒಳಗೊಳಗೆ ಅತ್ತು ದುಃಖ ನೀಗಿಸಿಕೊಂಡಿದ್ದರು. 1944 ರ ಜನವರಿ ತಿಂಗಳಿನಲ್ಲಿ ಎರಡು ಬಾರಿ ಹೃದಾಪಾಘಾತಕ್ಕೆ ಅವರು ಒಳಗಾದಾಗ, ಬ್ರಿಟಿಷ್ ಸರ್ಕಾರ ಅವರ ಮಕ್ಕಳಿಗೆ ಯಾವುದೇ ಅಡೆತಡೆ ಇಲ್ಲದೆ ತಂಧೆ ಮತ್ತು ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. ಕಸ್ತೂರ ಬಾ ಹರಿಲಾಲ್ ನನ್ನು ನೋಡಬೇಕು ಎಂದು ಇಚ್ಚಿಸಿದಾಗ, ಪುಣೆ ಪೊಲೀಸರು ಹರಿಲಾಲ್ ಗಾಗಿ ಹುಡುಕಾಟ ನಡೆಸಿ ನಂತರ ಬಾಂಬೆ ನಗರದಲ್ಲಿ ಪತ್ತೆ ಮಾಡಿ ಆತನನ್ನು ಕರೆತಂದು ಅಮ್ಮನ ಎದುರು ನಿಲ್ಲಿಸಿದರು.
ಅತ್ಯಂತ ಕೊಳಕಾದ ವಸ್ತ್ರಗಳನ್ನು ಧರಿಸಿದ್ದ ಹರಿಲಾಲ್ ಕಂಠಪೂರ್ತಿ ಕುಡಿದು ಹೆತ್ತ ತಾಯಿಯ ಎದುರು ನಿಲ್ಲುವ ಶಕ್ತಿಯನ್ನು ಕಳೆದುಕೊಂಡಿದ್ದನು. ತಾನು ಹೆತ್ತ ಪ್ರೀತಿಯ ಮಗನನ್ನು ಈ ಸ್ಥಿತಿಯಲ್ಲಿ ಕಣ್ಣಾರೆ ನೋಡಿದ ಕಸ್ತೂರ ಬಾ ಅವರು ಏನೊಂದು ಮಾತನಾಢದೆ, ಹಣೆ ಚಚ್ಚಿಕೊಂಡು ಸೆರಗಿನಲ್ಲಿ ಮುಖಮುಚ್ಚಿಕೊಂಡು ಗಳ ಗಳನೆ ಅತ್ತರು. ಅಂದಿನಿಂದ ಅವರು ಊಟ, ಔಷಧ ಎಲ್ಲವನ್ನೂ ತ್ಯೆಜಿಸಲು ನಿರ್ಧರಿಸಿದರು. ಪೆಬ್ರವರಿ 19 ರಂದು ಗಾಂಧಿ ಮತ್ತು ವೈದ್ಯರು ಕಸ್ತೂರ ಬಾ ಅವರಿಗೆ ಒತ್ತಾಯ ಮಾಡಬಾರದು ಎಂದು ನಿರ್ಧರಿಸಿದರು. ದೇವದಾಸ್ ಮತ್ತು ರಾಮದಾಸ್ ಅವರಿಗೆ ಸುದ್ದಿ ಮುಟ್ಟಿಸಲಾಯಿತು. ಕಿರಿಯ ಪುತ್ರ ದೇವದಾಸ್ ಪೆಬ್ರವರಿ 21 ರಂದು ತಾನು ಜೊತೆಯಲ್ಲಿ ತಂದಿದ್ದ ಗಂಗಾ ಜಲವನ್ನು ಅಮ್ಮನ ಬಾಯಿಗೆ ಹಾಕಿದರು. ಅಂದು ನೀರು ಕುಡಿದು ಮಲಗಿದ ಕಸ್ತೂರ ಬಾ 22 ರಂದು ಶಾಶ್ವತವಾಗಿ ಕಣ್ಣು ಮುಚ್ಚಿದರು.
ಕಸ್ತೂರ ಬಾ ಸಾವಿನ ನಂಥರ ರಾಷ್ಟ್ರದ ಗಣ್ಯರಿಗೆ ಮಾತ್ರ ಅರಮನೆಗೆ ಪ್ರವೇಶವಿತ್ತು. ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಅರಮನೆಯ ಆವರಣದಲ್ಲಿಅಂತ್ಯ ಸಂಸ್ಕಾರಕ್ಕೆ ಗಾಂಧೀಜಿ ನಿರ್ಧರಿಸಿದರು. ಬಾಂಬೆ ನಗರದ ಗಣ್ಯ ಉದ್ಯಮಿಗಳು ಶ್ರೀಗಂಧದ ಕಟ್ಟಿಗೆ ತರಲು ಆಲೋಚನೆ ಮಾಡುತ್ತಿದ್ದಂತೆ, ಸಾಮಾನ್ಯ ಕಟ್ಟಿಗೆ ಸಾಕು ನಾನು ಬಡವ ಅಂತಹುಗಳಿಗೆ ಖರ್ಚು ಮಾಡುವ ಶಕ್ತಿ ನನ್ನಲ್ಲಿ ಇಲ್ಲ ಎಂದು ಗಾಂಧಿ ನುಡಿದರು. ಆ ಸಮಯದಲ್ಲಿ ಅಲ್ಲೇ ಇದ್ದ ಬ್ರಿಟಿಷ್ ಮೇಲಾಧಿಕಾರಿ ಗಾಂಧೀಜಿ ಬಳಿ ತೆರಳಿ ನೀವು ಒಪ್ಪಿಗೆ ಕೊಟ್ಟರೆ ಯರವಾಡ ಜೈಲಿನಿಂದ 800 ಕೆ.ಜಿ. ಶ್ರೀಗಂಧ ಕಟ್ಟಿಗೆ ಇದೆ ತರಿಸುತ್ತೇನೆ ಎಂದನು. ಜೈಲಿಗೆ ಶ್ರೀಗಂಧ ಕಟ್ಟಿಗೆ ಹೇಗೆ ಬಂದಿತು ಎಂದು ಗಾಂಧೀಜಿ ವಿಚಾರಿಸಿದರು. ಆ ಅಧಿಕಾರಿ ಯಾವುದೇ ಮುಚ್ಚು ಮರೆ ಇಲ್ಲದೆ ‘’ ನೀವು 21 ದಿನ ಉಪವಾಸ ಸತ್ಯಾಗ್ರಹ ಮಾಡಿದಾಗ, ಬದುಕುವುದಿಲ್ಲ, ಸಾಯುತ್ತೀರಿ ಎಂದು ನಿರ್ಧರಿಸಿ ಸರ್ಕಾರ ಶ್ರೀಗಂಧವನ್ನು ತರಿಸಿ ಇಟ್ಟಿತ್ತು ಸರ್’ ಎಂದು ನುಡಿದನು.
ಗಾಂಧೀಜಿಯವರಿಗೆ ಪತ್ನಿ ಕಳೆದುಕೊಂಡ ದುಃಖದ ನಡುವೆ ಮುಖದಲ್ಲಿ ಮಂದಹಾಸ ಮಿಂಚಿತು. ‘’ಓಹ್, ಹಾಗಾದರೆ ಅದು ನನ್ನ ಆಸ್ತಿ’’ ಎಂದರು. ಜೊತೆಗೆ ಒಪ್ಪಿಗೆ ನೀಡಿದರು. ಮುಂಬೈ ನಗರದಲ್ಲಿದ್ದ ಸುಶೀಲಾ ನಯ್ಯರ್ ಮತ್ತು ಮೀರಾ ಬೆಹನ್ ಪುಣೆ ನಗರಕ್ಕೆ ಆಗಮಿಸ ಕಸ್ತೂರ ಬಾ ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಿ ಹೊಸ ಖಾದಿ ಸೀರೆ ತೊಡಿಸಿ, ಮಲ್ಲಿಗೆ ಹೂ ಮುಡಿಸಿ ಮಲಗಿಸಿದರು. ಗಾಂಧೀಜಿಯವರ ಅನೇಕ ಸಹವರ್ತಿಗಳ ನಡುವೆ ಅರಮನೆಯ ಹಿಂಭಾಗದಲ್ಲಿ ದೇವದಾಸ್ ತನ್ನ ತಾಯಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪತ್ನಿಯ ಚಿತೆ ಉರಿಯುತ್ತಿರುವಾಗ ಅದರ ಎದುರು ನಿಂತಿದ್ದ ಗಾಂಧೀಕಿಯವರು ದುಃಖ ತಡೆಯಲಾರದೆ ‘’ ಇಂದು ನನ್ನ ದೇಹದ ಮತ್ತು ಆತ್ಮದ ಅರ್ಧ ಭಾಗ ಸುಟ್ಟುಹೋಯಿತು’’ ಎಂದು ಎಲ್ಲರಿಗೂ ಕೇಳಿಸುವಂತೆ ಹೇಳಿ ಬಿಕ್ಕಿ ಬಿಕ್ಕಿ ಅತ್ತರು. ಆ ರಾತ್ರಿ ಮಕ್ಕಳಾದ ರಾಮದಾಸ್ ಮತ್ತು ದೇವದಾಸ್ ಇಬ್ಬರಿಗೂ ಆಗಖಾನ್ ಅರಮನೆಯಲ್ಲಿ ತಂಗಲು ಬ್ರಿಟಿಷ್ ಅಧಿಕಾರಿಗಳು ಅವಕಾಶ ನೀಡಿದರು. ಮರುದಿನ ತಾಯಿಯ ಚಿತಾಭಸ್ಮವನ್ನು ಸಂಗ್ರಹಿಸಿಕೊಂಡು ಅಲಹಾಬಾದಿನ ತ್ರಿವೇಣಿ ಸಂಗಮದತ್ತ ಅವರು ಹೋದರು.

1944 ರ ಪೆಬ್ರವರಿ 23 ರಂದು ದೇಶದ ಎಲ್ಲಾ ಪತ್ರಿಕೆಗಳು ಸಂಪಾದಕೀಯ ಲೇಖನ ಬರೆಯುವುದರ ಮೂಲಕ ಕಸ್ತೂರ ಬಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದವು. ಬಾಂಬೆಯ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆ ಆ ದಿನ ಅರ್ಥಪೂರ್ಣವಾದ ಸಂಪಾದಕೀಯ ಲೇಖನವನ್ನು ಪ್ರಕಟಿಸಿತು. ( ಕೃತಿಯಲ್ಲಿ ಅದು ಸಹ ದಾಖಲಾಗಿದೆ.) ಕಸ್ತೂರ ಬಾ ಅವರ ಸಾವಿನೊಂದಿಗೆ ಗಾಂಧೀಜಿಯವರ ಸಾರ್ವಜನಿಕ ಹೋರಾಟದ ಬದುಕು ಅಂತ್ಯಗೊಂಡಿತು. ಅವರು ಸೆರೆಮನೆಯಿಂದ ಅನಾರೋಗ್ಯದ ನಿಮಿತ್ತ ಬಿಡುಗಡೆಯಾಗುವ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವುದು ಖಚಿತವಾಗಿತ್ತು. ಅವರು ಸ್ವಾತಂತ್ರ್ಯದ ಹೋರಾಟವನ್ನು ಬದಿಗೊತ್ತು ಬುಗಿಲೆದ್ದ ಕೋಮುವಾದದ ದಳ್ಳುರಿಯನ್ನು ನಂದಿಸಲು ಶ್ರಮಿಸುತ್ತಾ , ಪತ್ನಿಯ ಸಾವಿನ ಜೊತೆ ಅರ್ಧ ಬೆಂದು ಹೋಗಿದ್ದ ಅವರು ಕೋಮು ದಳ್ಳುರಿಯಲ್ಲಿ ಪೂರ್ಣ ಬೆಂದು ಹೋದರು. ಗೋಡ್ಸೆ ಎಂಬ ಹಂತಕ ಮತ್ತು ಕ್ರೂರ ಮೃಗ ತನ್ನ ಪಿಸ್ತೂಲಿನಿಂದ ಹಾರಿಸಿದ ಮೂರು ಗುಂಡುಗಳು ಮಹಾತ್ಮ ಗಾಂಧಿ ಅವರ ದೇಹಕ್ಕೆ ತಾಗಲಿಲ್ಲ. ಬದಲಾಗಿ ತಾನು ಕನಸಿದ ಭಾರತದ ನನಗೆ ಧಕ್ಕಲಿಲ್ಲವಲ್ಲ ಎಂದು ಕೊರಗಿ ನಿರ್ಜೀವವಾಗಿದ್ದ ಗಾಂಧಿಯವರ ದೇಹಕ್ಕೆ. ಇದು ನಾವು ಅರಿಯಬೇಕಾದ ನೈಜ ಇತಿಹಾಸ.
ಇಂದು ಗಾಂಧೀಜಿಯವರನ್ನು ಟೀಕಿಸುವುದನ್ನು ವೃತ್ತಿ ಅಥವಾ ಹವ್ಯಾಸ ಮಾಡಿಕೊಂಡಿರುವ ಅವಿವೇಕಿಗಳು ಅರ್ಥ ಮಾಡಿಕೊಳ್ಳಬೇಕಾದ ಸತ್ಯ ಇದು. ಈ ಜಗತ್ತಿನಲ್ಲಿ ದಾರ್ಶನೀಕರಿಗೆ ದೇಶ, ಭಾಷೆ ಮತ್ತು ಧರ್ಮದ ಹಂಗಿಲ್ಲ. ಅವರು ಆಕಾಶದುದ್ದಕ್ಕೂ ಬೆಳೆದು ನಿಂತವರು. ಭಾರತದ ಬುದ್ಧ, ಬಸವಣ್ಣ, ಗಾಂಧಿ ಅವರಿಗೆ ಮತ್ತು ಅವರ ಚಿಂತನೆಗಳಿಗೆ ಎಂದಿಗೂ ಸಾವಿಲ್ಲ. ನೀವು ಟೀಕಿಸುವುದು ಎಂದರೆ, ಆಕಾಶಕ್ಕೆ ಉಗುಳಿದಂತೆ. ಅದು ಅಂತಿಮವಾಗಿ ನಿಮ್ಮ ಮುಖದ ಮೇಲೆ ಬೀಳುತ್ತದೆ.
( ಇಂದಿಗೆ ಗಾಂಧಿ ನಮ್ಮನ್ನು ಅಗಲಿ ಎಪ್ಪತ್ತಳು ವರ್ಷಗಳಾದವು. ಅವರ ನೆನಪಿಗಾಗಿ ಬರೆದ ಲೇಖನ. ಇಂತಹ ಲೇಖನಗಳನ್ನು ಇಂದಿನ ದಿನಪತ್ರಿಕೆಗಳಿಗೆ 400 ಅಥವಾ 500 ಶಬ್ದಗಳ ಮಿತಿಯಲ್ಲಿ ಚೌ ಚೌ ಬಾತ್ ಶೈಲಿಯಲ್ಲಿ ಬರೆಯಲಾಗದು)
ಎನ್.ಜಗದೀಶ್ ಕೊಪ್ಪ..