ಮಂಗಳವಾರ, ಆಗಸ್ಟ್ 4, 2026

ಅನ್ನದಾತರ ಸ್ಮಶಾನವಾದ ಗ್ರಾಮಭಾರತ



ಭಾರತದ ನೆಲದಲ್ಲಿ ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಜನರ ಅನ್ನದ ಬಟ್ಟಲು ಮತ್ತು ಬದುಕಿನ ಜೀವನಾಡಿಯಾಗಿದ್ದ ಕೃಷಿ ಲೋಕವು ಇಂದು ನಮ್ಮನ್ನಾಳುವ ಸರ್ಕಾರಗಳ ಪಾಲಿಗೆ ಎಂದಿಗೂ ಬೇಡವಾದ ಕಸದ ತೊಟ್ಟಿ ಎಂಬಂತಾಗಿದೆ. ಜಾಗತೀಕರಣದ ಹೆಸರಿನಲ್ಲಿ ದೇಶದ ಗಡಿ ಬಾಗಿಲುಗಳು ಸರಕು ಮತ್ತು ಸೇವೆ ಹೆಸರಿನಲ್ಲಿ ತೆರೆದುಕೊಂಡ ನಂತರ ಈ ದೇಶದ ಅನ್ನದಾತ ಅಕ್ಷರಶಃ ಅನಾಥನಾಗಿದ್ದಾನೆ ಕಳೆದ ಜುಲೈ ತಿಂಗಳ ಪರಿಸರ ಕುರಿತ ಡೌನ್ ಟು ಅರ್ಥ್ ಎಂಬ ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯು ಪ್ರಕಟಿಸಿರುವ ಕೃಷಿ ಲೋಕದ ಅಧ್ಯಯನದ ವರದಿಗಳು ಓದುಗರನ್ನು ಬೆಚ್ಚಿ ಬೀಳಿಸುತ್ತವೆ. ಕಾಸಿದ್ದವನು ಕೈಲಾಸ ಕಂಡ ಎಂಬ ಗಾದೆಯಂತೆ, ಹಣವಿದ್ದವನು ಭಾರತದ ಕೃಷಿ ಲೋಕವನ್ನು ನಂಬಿ ಬದುಕುವ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಇಲ್ಲವಾಗಿದೆ.
ತನಗೆ ಬೇಕಾದ ಅಕ್ಕಿ, ಬೇಳೆ, ಗೋಧಿ, ಸಕ್ಕರೆ ಮಾತ್ರವಲ್ಲದೆ, ತರಕಾರಿ ಮತ್ತು ಹಣ್ಣುಗಳನ್ನು ವಿದೇಶದಿಂದ ಕ್ಷಣ ಮಾತ್ರದಲ್ಲಿ ಆಮದು ಮಾಡಿಕೊಳ್ಳಬಲ್ಲ ಮಾರ್ಗವನ್ನು ಕಂಡುಕೊಂಡಿದ್ದಾನೆ. ಇದರಿಂದಾಗಿ ಉಳ್ಳವರಿಗೆ ಇಲ್ಲಿನ ನೆಲ ಮತ್ತು ಜಲದ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ಈಗ ಜಾಗತೀಕರಣದ ವೇಷ ತೊಟ್ಟ ಬಂಡವಾಳ ಶಾಹಿಗಳ ಆಡುಂಬೊಲವಾಗಿರುವ ಭಾರತದಲ್ಲಿ ಕೃಷಿ ಕ್ಷೇತ್ರವು ಯಾರಿಗೂ ಬೇಡವಾಗಿದೆ. ವಿದೇಶಿ ಬಂಡವಾಳ, ಮಾಹಿತಿ ತಂತ್ರಜ್ಞಾನದ ಜಗತ್ತು ಹಾಗೂ ಗಂಟೆಗೆ ಇನ್ನೂರು ಕಿಲೊಮೀಟರ್ ವೇಗದಲ್ಲಿ ಚಲಿಸುವ ವಿದೇಶಿ ಕಾರುಗಳು, ಹಣವಂತರು ಕುಡಿದ ನೀರು ಹೊಟ್ಟೆಯೊಳಗೆ ಅಲುಗಾಡದಂತೆ ಗ್ರಾಮಭಾರತದ ಹಳ್ಳಿಗಳನ್ನು ಇಬ್ಬಾಗವಾಗಿ ಸೀಳಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಗಳು ಇವೆಲ್ಲವೂ ಸರ್ಕಾರಗಳ ಆದ್ಯತೆಗಳಾಗಿವೆ. ಶತ ಶತಮಾನಗಳ ಕಾಲ ಈ ದೇಶಕ್ಕೆ ಅಡಿಪಾಯವಾಗಿದ್ದ ಮತ್ತು ಅನ್ನದಾತನಾಗಿದ್ದ ರೈತನ ಕುಟುಂಬವು ಬೀದಿಗೆ ಬಿದ್ದಿರುವ ಕುರಿತು ಬರೆಯುವುದು ಅಥವಾ ಚರ್ಚಿಸುವುದು ಸಿನಿಕತನದ ವಿಷಯ ಎಂಬಂತಾಗಿದೆ. ಕಳೆದ ಮೂರು ದಶಕಗಳಲ್ಲಿ ಈ ದೇಶದಲ್ಲಿ ಮೂರು ಲಕ್ಷದ ತೊಂಬತ್ತನಾಲ್ಕು ಸಾವಿರ ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ದಿನಾ ಸಾಯುವವರೆಗ ಅಳುವವರು ಯಾರು? ಇದು ಇಂದಿನ ಭಾರತದ ನಾಗರೀಕರ ಪ್ರಶ್ನಯಾಗಿದೆ.
ಈ ದೇಶದ ದುರಂತವೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವೊಬ್ಬ ಜನಪ್ರತಿನಿಧಿ ಅಥವಾ ನಾಯಕರೆನಿಸಿಕೊಂಡವರಿಗೆ ಈ ಸಾವುಗಳು ನನ್ನ ಕುಟುಂಬದ ಸಾವು ಎನಿಸುತ್ತಿಲ್ಲ. ಎಂದಿಗೂ ಲಾಭವನ್ನು ನಿರೀಕ್ಷಿಸದೆ, ಕೃಷಿಯನ್ನು ಕಾಯಕವೆಂಬಂತೆ ನಂಬಿ ಬದುಕಿದ ರೈತನು ತಾನು ಬೆಳೆದ ಬೆಳೆಗೆ ನಿರ್ಧಿಷ್ಠ ಬೆಲೆ ಕೇಳದೆ ಅನ್ನ ಹಾಕಿದ ಇತಿಹಾಸವು, ರೈತನ ಸಾವು ಆತ್ಮ ಬಂಧುವಿನ ದುರಂತ ಎಂದು ಯಾವೊಬ್ಬ ರಾಜಕೀಯ ನಾಯಕನ ಎದೆಯ ಕದ ತಟ್ಟಲಿಲ್ಲ. ಇದೀಗ ರೈತರ ಜೊತೆಗೆ ಕೃಷಿ ಕಾರ್ಮಿಕರು ಮತ್ತು ಭೂರಹಿತ ಬಡವರ ಸಾವಿನ ವರದಿಗಳು ನಮ್ಮನ್ನು ಆತಂಕಕ್ಕೆ ದೂಡಿವೆ. ಇಲ್ಲಿನ ಅಂಕಿ ಅಂಶಗಳು ಯಾವುದೋ ಒಂದು ಸಂಘಟನೆ ಅಥವಾ ರಾಜಕೀಯ ಪಕ್ಷ ಸಿದ್ಧಪಡಿಸಿದ ದಾಖಲೆಗಳಲ್ಲ. ಕೇಂದ್ರ ಸರ್ಕಾರದ ಒಡೆತನದ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಪ್ರಕಟಿಸಿರುವ ಅಂಕಿ ಅಂಶಗಳಾಗಿವೆ. ಉದ್ಯೋಗವಿಲ್ಲದ ಅತಂತ್ರಸ್ಥಿತಿ, ಮಕ್ಕಳ ಶಿಕ್ಷಣಕ್ಕೆ ನೆರವಾಗಲಾರದ ಅಸಹಾಯಕತೆ ಮತ್ತು ತಮ್ಮ ಕುಟುಂಬಗಳ ಅನಾರೋಗ್ಯಕ್ಕೆ ವೈದ್ಯಕೀಯ ವೆಚ್ಚವನ್ನು ಭರಿಸಲಾಗದ ರೈತರು ಮತ್ತು ಕೂಲಿ ಕಾರ್ಮಿಕರು ದೇಶಾದ್ಯಂತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಕಳೆದ ಮೂರು ದಶಕಗಳಿಂದ ನಿರಂತರಾಗಿ ನಡೆಯುತ್ತಿರುವ ಈ ಆತ್ಮಹತ್ಯೆಯ ಸಾವುಗಳಿಗೆ ಕೇಂದ್ರ ಸರ್ಕಾರವು 2010 ರಲ್ಲಿ ಪರಿಚಯಿಸಿದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯು ತಕ್ಕಮಟ್ಟಿಗೆ ತಡೆಯೊಡ್ಡಲು ಸಹಾಯಕವಾಗಿತ್ತು. ಆದರೆ ಇತ್ತೀಚೆಗಿನ 2023 ರ ಅಂಕಿ ಅಂಶಗಳು ತೀವ್ರವಾದ ರೈತರ ಮತ್ತು ಕೂಲಿ ಕಾರ್ಮಿಕರ ಸಾವಿನ ಏರಿಕೆಯ ಪ್ರಮಾಣವನ್ನು ತೋರಿಸುತ್ತಿವೆ. ವಿಶೇಷವಾಗಿ ಕೃಷಿ ಕಾರ್ಮಿಕರಲ್ಲಿ ಆತ್ಮಹತ್ಯೆ ಪ್ರಕಟರಣಗಳು ಹೆಚ್ಚಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ದತ್ತಾಂಶದ ಪ್ರಕಾರ, ಕಳೆದ ಇಪ್ಪತ್ತೆಂಟು ವರ್ಷಗಳ ವಿಶ್ಲೇಷಣೆಯ 1990 ರ ದಶಕದ ಮಧ್ಯಭಾಗದಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಶೇಕಡಾ ಎರಡೂವರೆ ಪಟ್ಟು ಹೆಚ್ಚಾಗಿತ್ತು. 1995 ರಿಂದ 2023 ರ ನಡುವೆ ಮೂರು ಲಕ್ಷದ ತೊಂಬತ್ತನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರು, 2000 ರ ದಶಕದ ಆರಂಭದಲ್ಲಿ ಈ ಬಿಕ್ಕಟ್ಟು ಉತ್ತುಂಗಕ್ಕೇರಿತು.
ಬಿಟಿ ಹತ್ತಿ ಬೆಳೆಯ ತ್ವರಿತ ಹರಡುವಿಕೆ, ಹೆಚ್ಚುತ್ತಿರುವ ಕೃಷಿ ಉತ್ಪಾದನೆಯ ವೆಚ್ಚಗಳು ಮತ್ತು ಪುನರಾವರ್ತಿತ ಬೆಳೆಗಳ ವೈಫಲ್ಯಗಳ ಫರಿಣಾಮವಾಗಿ ದೇಶಾದ್ಯಂತ ರೈತರ ಸಂಕಷ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿ ಶೇಕಡಾ 75 ರಷ್ಟು ರೈತರ ಆತ್ಮಹತ್ಯೆಗಳು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ, ಇದು ಬಲವಾದ ಪ್ರಾದೇಶಿಕ ಕೇಂದ್ರೀಕರಣವನ್ನು ಸೂಚಿಸುತ್ತದೆ. 2023 ರಲ್ಲಿ ಮಹಾರಾಷ್ಟ್ರದಲ್ಲಿ 4,151 ರೈತರು ಮತ್ತು ಕರ್ನಾಟಕದಲ್ಲಿ 2,423 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾವಿನ ಪರಂಪರೆ ಈಗಲೂ ಮುಂದುವರಿದಿದೆ. 2000 ರ ದಶಕದಲ್ಲಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿಟಿ ಹತ್ತಿಯ ತ್ವರಿತ ಹರಡುವಿಕೆ ಮೂಲ ಕಾರಣ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ಸಸ್ಟೈನಬಲ್ ಅಗ್ರಿಕಲ್ಚರ್ (ಸಿಎಸ್ಎ) ನಡೆಸಿದ ವಿಶ್ಲೇಷಣೆಯು ದೃಢಪಡಿಸಿದೆ.
ಪ್ರತಿ ಒಂದು ಲಕ್ಷ ಕೃಷಿ ನಿರತ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯವಾರು ಆತ್ಮಹತ್ಯೆ ದರಗಳನ್ನು ಆಧರಿಸಿದ ಅಧ್ಯಯನವು, ಹೆಚ್ಚಿನ ಇಳುವರಿ ಮತ್ತು ಕೀಟ ನಿರೋಧಕತೆಯ ಭರವಸೆಗಳನ್ನು ಈಡೇರಿಸುವಲ್ಲಿ ಬಿ.ಟಿ. ಹತ್ತಿಯು ವಿಫಲವಾದುದು ರೈತರು ಆತ್ಮಹತ್ಯೆ ಕಾರಣವೆಂದು ದೃಢಪಟ್ಟಿದೆ. ರೈತರು ತೀವ್ರವಾಗಿ ಏರುತ್ತಿರುವ ಕೃಷಿ ಉತ್ಪಾದನೆಯ ವೆಚ್ಚಗಳ ಕಾರಣದಿಂದ ಸಾಲ ಮಾಡುವುದರೊಂದಿಗೆ ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ಎದುರಿಸಿದರು. ಪುನರಾವರ್ತಿತ ಬೆಳೆಗಳ ವೈಫಲ್ಯಗಳು, ವಿಶ್ವಾಸಾರ್ಹ ಬೆಂಬಲದ ಬೆಲೆ ಇಲ್ಲದಿರುವುದು ಸೇರಿ, ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ದೀರ್ಘಕಾಲದ ಮತ್ತು ಅಧಿಕ ಬಡ್ಡಿಯ ಸಾಲದ ಕೂಪಕ್ಕೆ ತಳ್ಳಿದವು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಪ್ರಮುವಾಗಿವೆ. ಕಳೆದ 28 ವರ್ಷಗಳಲ್ಲಿ ಈ ಎರಡೂ ರಾಜ್ಯಗಳು ಒಟ್ಟಾಗಿ ಒಂದು ಲಕ್ಷದ ಎಪ್ಪತ್ತು ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿವೆ.
ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಅಥವಾ ಕೃಷಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಂಕಿ ಅಂಶಗಳು ಈ ದೇಶವು ಸಾಗುತ್ತಿರುವ ಹಾದಿಯನ್ನು ನಮ್ಮೆದೆರು ತೆರೆದು ತೋರಿಸಿವೆ. ಆತ್ಮಹತ್ಯೆ ಕುರಿಂತಂತೆ ರಾಷ್ಟ್ರೀಯ ಅಂಕಿಅಂಶಗಳಲ್ಲಿ ಮಧ್ಯಪ್ರದೇಶ ರಾಜ್ಯವು ಸಹ ನಿರಂತರವಾಗಿ ಅಗ್ರಸ್ಥಾನದಲ್ಲಿದೆ, ರೈತರ ಬಿಕ್ಕಟ್ಟು ಕೇವಲ ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂಬುದನ್ನು ದಾಖಲೆಯು ಒತ್ತಿಹೇಳುತ್ತದೆ. 1995 ರಲ್ಲಿ ಭಾರತ ವಿಶ್ವ ವ್ಯಾಪಾರ ಸಂಸ್ಥೆ (WTO) ಗೆ ಸೇರ್ಪಡೆಗೊಂಡ ನಂತರ ಕೃಷಿ ಬಿಕ್ಕಟ್ಟು ತೀವ್ರಗೊಂಡಿತು ಎಂಬುದನ್ನು ವಿಶ್ಲೇಷಣೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಕೃಷಿ ಸಬ್ಸಿಡಿಗಳು ಕಡಿಮೆಯಾಗುವುದರ ಜೊತೆಗೆ ಕೃಷಿ ಉತ್ಪನ್ನಗಳ ಆಮದು ಹೆಚ್ಚಾಗುವುದರಿಂದ ಭಾರತದಲ್ಲಿ ರೈತ ಸಮುದಾಯದ ಕೃಷಿ ಆದಾಯವು ದುರ್ಬಲಗೊಂಡಿತು. ವಿಶೇಷವಾಗಿ ಸಣ್ಣ ಕೃಷಿಕರಿಗೆ ಜೀವನ ದುಸ್ತರವಾಯಿತು. ಮಳೆಯಾಶ್ರಿತ ಭೂಮಿಯಲ್ಲಿ ಬೇಸಾಯ ಮತ್ತು ಮಾರುಕಟ್ಟೆ ಆಧಾರಿತ ವಾಣಿಜ್ಯ ಬೆಳೆಗಳಲ್ಲಿ ಪ್ರಾಬಲ್ಯ ಹೊಂದಿರುವ ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ, ಕೆಲವು ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಆತ್ಮಹತ್ಯೆ ಸಂಖ್ಯೆಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.
ಈ ವಾಸ್ತವಿಕ ಅಂಕಿ ಅಂಶಗಳು ವಿಶಾಲವಾದ ಕೃಷಿ ಸುಧಾರಣೆಯ ಅನುಪಸ್ಥಿತಿಯಲ್ಲಿ ಅಲ್ಪಾವಧಿಯ ಪರಿಹಾರದ ಮಿತಿಗಳನ್ನು ಒತ್ತಿ ಹೇಳುವುದರೊಂದಿಗೆ, ಗ್ರಾಮೀಣ ಆರ್ಥಿಕತೆಯಲ್ಲಿ ಆಗಿರುವ ಗಮನಾರ್ಹ ಬದಲಾವಣೆಯನ್ನು ಅನಾವರಣಗೊಳಿಸಿವೆ. ಕೃಷಿಕರಿಗಿಂತ ಹೆಚ್ಚಾಗಿ ಕೃಷಿ ಕೂಲಿ ಕಾರ್ಮಿಕರು ಈಗ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆಗಳಿಗೆ ಕಾರಣರಾಗಿದ್ದಾರೆ. 2023 ರಲ್ಲಿ ದಾಖಲಾದ 10,786 ಸಾವುಗಳಲ್ಲಿ 6,096 ಕೃಷಿ ಕಾರ್ಮಿಕರು ಮತ್ತು 4,690 ಕೃಷಿಕರು ಸಾವನ್ನಪ್ಪಿದ್ದಾರೆ. ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಮಾನಸಿಕ ಖಿನತ್ತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಶಿಕ್ಷಣದ ಶುಲ್ಕ ಭರಿಸಲಾಗದ ಚಿಂತೆ, ಕುಟುಂಬದ ಸದಸ್ಯರ ಅನಾರಗ್ಯಕ್ಕೆ ದುಬಾರಿ ವೈದ್ಯಕೀಯ ವೆಚ್ಚ ಭರಿಸಲಾಗದ ಅಸಹಾಯಕತೆ ಒಂದು ಕಡೆಯಾದರೆ, ಹವಾಮಾನ ವೈಪರಿತ್ಯದ ಕಾರಣ, ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗುತ್ತಿರುವ ರೈತರ ಕೃಷಿ ಫಸಲು ರೈತ ಸಮುದಾಯದ ಮಾನಸಿಕ ಸ್ಥಿರತೆಯನ್ನು ದುರ್ಬಲಗೊಳಿಸಿವೆ. ಇವುಗಳ ಜೊತೆಗೆ ಅರಣ್ಯದಂಚಿನ ಭೂಮಿಗಳಲ್ಲಿ ಬೇಸಾಯ ವೃತ್ತಿಯಲ್ಲಿರುವ ರೈತರಿಗೆ ತಾನು ಬೆಳೆದ ಫಸಲು ಕೈ ಸೇರುತ್ತದೆ ಎಂಬ ವಿಶ್ವಾಸವಿಲ್ಲ. ಇದರಿಂದಾಗಿ 2023 ರಲ್ಲಿ ದೇಶದಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆಗಳಲ್ಲಿ 2022 ಕ್ಕೆ ಹೋಲಿಸಿದರೆ ಶೇಕಡಾ 75 ಕ್ಕಿಂತ ಹೆಚ್ಚಾಗಿದೆ. ಒಟ್ಟಾರೆಯಾಗಿ, ಬಿಕ್ಕಟ್ಟಿನ ಪ್ರಮಾಣವು ದೊಡ್ಡದಾಗಿ ಬೆಳೆಯುತ್ತಿದೆ. ಇದು ಪ್ರತಿ ವರ್ಷ ಸರಾಸರಿ 13,600 ಸಾವುಗಳಿಗೆ ಕಾರಣವಾಗುತ್ತದೆ.
ಸಂಶೋಧಕರ ಪ್ರಕಾರ ಬರಗಾಲ, ಬೆಳೆದ ಫಸಲುಗಳ ಬೆಲೆ ಕುಸಿತ, ದುರ್ಬಲವಾಗಿರುವ ಬೆಳೆ ವಿಮೆ ಮತ್ತು ಸಾಂಸ್ಥಿಕ ಸಾಲಗಳ ಲಭ್ಯತೆಯ ಪ್ರಮಾಣದಲ್ಲಿ ಕುಗ್ಗುವಿಕೆ ಇವುಗಳು ಆತ್ಮಹತ್ಯೆಗೆ ಕಾರಣವಾಗಿವೆ. ಕೃಷಿ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ಆಳವಾದ ಗ್ರಾಮೀಣ ಭಾರತದ ಸಂಕಷ್ಟವನ್ನು ಸೂಚಿಸುತ್ತವೆ. ಕಾರ್ಮಿಕರು ವೇತನ ಮತ್ತು ಜೀವನದ ಅಭದ್ರತೆ, ನಿರುದ್ಯೋಗ, ಆಹಾರ ಬೆಲೆಗಳ ಏರಿಕೆ ಮತ್ತು ಸೀಮಿತ ಸಾಮಾಜಿಕ ರಕ್ಷಣೆಯಿಂದ ವಂಚಿರಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ರೈತರ ಆತ್ಮಹತ್ಯೆಗಳು ದ್ವಿಗುಣಗೊಂಡಿದ್ದರೂ ಸಹ ಮಹಾರಾಷ್ಟ್ರವು ಹೆಚ್ಚಿನ ಕೃಷಿ ಲೋಕದ ವಿಮೆಯ ಪರಿಹಾರಗಳನ್ನು ತಿರಸ್ಕರಿಸುತ್ತಿದೆ. ಇತ್ತ ಕರ್ನಾಟಕದ ಸರ್ಕಾರಗಳು ಅನಗತ್ಯ ವಿಳಂಭ ಮಾಡುವುದರ ಮೂಲಕ ಸಂತ್ರಸ್ತರನ್ನು ಸಾವು-ಬದುಕಿನ ನಡುವೆಯ ಜೋಕಾಲಿಯಲ್ಲಿ ತೂಗುತ್ತಿವೆ.
ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಯಾಗಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ (NCRB) ವರದಿಯ ಪ್ರಕಾರ, 2024 ರಲ್ಲಿ ದೇಶಾದ್ಯಂತ 10,546 ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, 30,617 ಜನರು ಅನಾರೋಗ್ಯದಿಂದಾಗಿ ತಮ್ಮ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಮಾನಸಿಕ ಅಸ್ವಸ್ಥತೆಯು 14,305 ಆತ್ಮಹತ್ಯೆಗಳಿಗೆ ಕಾರಣವಾಗಿದ್ದರೆ, 14,075 ಪ್ರಕರಣಗಳು ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿವೆ ಎಂದು ವರದಿ ಹೇಳುತ್ತದೆ. 2024 ರಲ್ಲಿ ಪ್ರತಿದಿನ ಸರಾಸರಿ ಶೇಕಡಾ 84 ಜನರು ಅನಾರೋಗ್ಯದ ಕಾರಣದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ಪ್ರವೃತ್ತಿ ಅನೇಕ ವರ್ಷಗಳಿಂದ ಸೃಷ್ಟಿಯಾಗುತ್ತಿದೆ. ಅನಾರೋಗ್ಯಕ್ಕೆ ಕಾರಣವಾದ ಆತ್ಮಹತ್ಯೆಗಳು ಸುಮಾರು ಶೇಕಡಾ 45 ರಷ್ಟು ಏರಿಕೆಯಾಗಿವೆ.

ಬೇಸಾಯ, ನೀನು ಸಾಯ ಎಂಬ ಮಾತು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಇದರಿಂದಾಗಿ ಈಗ ಎಲ್ಲರೂ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ದೇಶದ ಅತ್ಯುನ್ನುತ್ತ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯು ಎರಡು ರ್ಷಗಳ ಹಿಂದೆ ರಾಜಧಾನಿ ದೆಹಲಿ ನಗರದಲ್ಲಿ ಡಿಸಂಬರ್ ತಿಂಗಳ ಕೊರೆಯುವ ಚಳೆಯಲ್ಲಿ ಉತ್ತರಭಾರತದ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ನಡು ರಸ್ತೆಯಲ್ಲಿ ಧರಣಿ ಕುಳಿತಾಗ ಅವರತ್ತ ತಿರುಗಿ ನೋಡಲಿಲ್ಲ. ಎರಡು ತಿಂಗಳು ಧರಣಿ ಕುಳಿತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲದ ಬೆಲೆಯನ್ನು ಘೋಷಿಸಿ ಎಂದು ಕೇಳಿಕೊಂಡರೂ ಸಹ, ಅವರ ಬಳಿ ಹೋಗಿ ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸಾಮಾನ್ಯ ಪ್ರಜ್ಞೆ ಕೂಡಾ ಪ್ರಧಾನಿಗೆ ಇಲ್ಲವಾಗಿತ್ತು. ರೈತರು ದೆಹಲಿಗೆ ಬಾರದಂತೆ ತಡೆಯೊಡ್ಡಲು, ರಸ್ತೆಗೆ ಚೂಪಾದ ಉದ್ದನೆಯ ಮೊಳೆಗಳನ್ನು ಜೋಡಿಸುವುದರ ಜೊತೆಗೆ ಸಿಮೆಂಟ್ ತಡೆಗೋಡೆಗಳನ್ನುನಿರ್ಮಿಸಲಾಗಿತ್ತು. ಕೃಷಿ ಆಧಾರಿತ ಭಾರತದಲ್ಲಿ ಪ್ರಧಾನಿ ಹುದ್ದೆಯಲ್ಲಿದ್ದ ವ್ಯೆಕ್ತಿಯೊಬ್ಬನು ರೈತರಿಗೆ ತೋರಿದ ಗೌರವದ ವೈಖರಿ ಇದು.
ಈ ಜಗತ್ತಿನಲ್ಲಿ ಎಲ್ಲಿಯಾದರೂ, ಈರುಳ್ಳಿ ಗೋಣಿ ಚೀಲ ತಯಾರಿಸುವ ಸೆಣಬಿನಿಂದ ಮಾಡಿರುವ ಒಂದು ಶಾಲು ಮತ್ತು ಶನಿಮಹಾತ್ಮನ ಪೋಟೊ ಅಳತೆಯ ಆಕಾರದ ಒಂದು ಅಭಿನಂದನಾ ಪತ್ರ ನೀಡುತ್ತಾರೆ ಎಂದರೆ, ದೇಶಗಳಿರಲಿ, ಖಂಡಗಳನ್ನೇ ದಾಟಿ ಹೋಗುವ ಈ ಮಹಾನುಭಾವನಿಗೆ ಭಾರತದ ಉದ್ಯೋಗ ಕ್ಷೇತ್ರಕ್ಕೆ ಅಸ್ತಿಭಾರವಾಗಿರುವ ಕೃಷಿಲೋಕದತ್ತ ತಿರುಗಿ ನೋಡುವ ಅಥವಾ ಚಿಂತಿಸುವ ವ್ಯವಧಾನ ಇಲ್ಲವಾಗಿದೆ. ಜವಹರಲಾಲ್ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಡಾ.ಮನಮೋಹನ್ ಸಿಂಗ್ ರಂತಹ ದೂರದೃಷ್ಟಿಯುಳ್ಳ ಅನುಭವಿಗಳು ಭಾರತದ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಬಡತನದ ನಿರ್ಮೂಲನೆ ಅವರುಗಳ ಮುಖ್ಯ ಗುರಿ ಮತ್ತು ಯೋಜನೆಯಾಗಿತ್ತು. ಇಂದಿನ ಪ್ರಧಾನಿ ನರೇಂದ್ರಮೋದಿಗೆ ಬಡವರು ಮತ್ತು ರೈತರ ನಿರ್ಮೂಲನೆ ಮೂಲ ಗುರಿಯಾಗಿದೆ. ಇಂದಿನ ಸರ್ಕಾರಕ್ಕೆ ಬೇಕಾಗಿರುವುದು ರೈತರು ಮತ್ತು ಕೃಷಿ ಕಾರ್ಮಿಕರೆಂಬ ಶ್ರಮಜೀವಿಗಳಲ್ಲ ಬದಲಾಗಿ, ಅಯೋಧ್ಯೆಯಲ್ಲಿರುವ ಶ್ರೀ ರಾಮ ದೇಗುಲದ ಹುಂಡಿಗೆ ಕಣ್ಣುಮುಚ್ಚಿಕೊಂಡು ಹಣ ಹಾಕುವ ಅಂಧ ಭಕ್ತರು ಮಾತ್ರ.
ಮಾಹಿತಿ ಸೌಜನ್ಯ- ಡೌನ್ ಟು ಅರ್ಥ್ (ಇಂಗ್ಲೀಷ್ ಪಾಕ್ಷಿಕ ಪತ್ರಿಕೆ)
( ಆಗಸ್ಟ್ ತಿಂಗಳ ಹೊಸತು ಮಾಸಪತ್ರಿಕೆಯ ಬಹುಸಂಸ್ಕೃತಿ ಅಂಕಣ ಬರಹ)