ಸೋಮವಾರ, ಆಗಸ್ಟ್ 17, 2026

ಆರ್.ಎಸ್.ಎಸ್. ಕಾರ್ಯಕರ್ತರಿಗೆ ಸ್ವಾತಂತ್ರ್ಯ ಇತಿಹಾಸದ ಪಾಠಗಳು



ಅಯ್ಯಾ ಮಿತ್ರರೇ, ನನ್ನೊಳಗೆ ನಿಮ್ಮ ಕುರಿತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದನ್ನು ಹೊರತು ಪಡಿಸಿದರೆ, ಬೇರೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲಕಣ್ರಪ್ಪ. . ನಿಮ್ಮ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ನನಗೆ ಕಳೆದ ಮೂರು ದಶಕಗಳಿಂದಲೂ ಪರಿಚಯ. ಬೆಂಗಳೂರು ಮಲ್ಲೇಶ್ವರಂ ನ ಕ್ರೀಡಾಂಗಣ ಸಮೀಪವಿದ್ದ ನಿಮ್ಮ ರಾಜ್ಯ ಬಿ.ಜೆ.ಪಿ. ಕಚೇರಿಯಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿದ್ದುಕೊಂಡು, ಪತ್ರಕರ್ತರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿಗೆ ನಾನು ವಿಸ್ಮಯಗೊಂಡಿದ್ದೆ. ಸಾಮಾನ್ಯ ಹೆಂಚಿನ ಹಳೆಯ ಕಟ್ಟಡವಾಗಿದ್ದ ನಿಮ್ಮ ಕಚೇರಿಗೆ ನಾವು ಒಂದಿಷ್ಟು ಜನ ಪತ್ರಕರ್ತರು ನಿಮ್ಮ ನಾಯಕರನ್ನು ಭೇಟಿ ಮಾಡಲು ಹೋದರೆ, ಅತ್ಯಂತ ಗೌರವದಿಂದ ನಮ್ಮನ್ನು ನಡೆಸಿಕೊಳ್ಳುತ್ತಿದ್ದರು. ಸಮೀಪದ ವಿದ್ಯಾರ್ಥಿ ಭವನದಿಂದ ಕಾಫಿ ತರಿಸಿ ಕುಡಿಸಿ, ನಾಯಕರಿಗೆ ದೂರವಾಣಿ ಕರೆ ಮಾಡಿ ನಾವು ಬಂದಿರುವ ವಿಷಯ ತಿಳಿಸಿ, ಅವರೊಂದಿಗೆ ಸಂಪರ್ಕ ಕಲ್ಪಿಸುತ್ತಿದ್ದರು.
ವೈಯಕ್ತಿಕ ಭಿನ್ನಾಭಿಪ್ರಾಯದ ನಡುವೆಯೂ ಅವರ ಬಗ್ಗೆ ಇಟ್ಟುಕೊಂಡಿದ್ದ ಗೌರವವು ನಿನ್ನೆ ಕರಗಿ ಹೋಯಿತು. ಭಾರತಕ್ಕೆ ಚರಕದಿಂದ ಅಥವಾ ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬರಲಿಲ್ಲ ಎಂಬ ಅವಿವೇಕದ ಮಾತುಗಳನ್ನಾಡುವ ಮೊದಲು ಈ ವ್ಯಕ್ತಿ, ಭಾರತದಲ್ಲಿ ಯಾರಾದರೂ ಗಾಂಧಿಜಿ ಒಬ್ಬರಿಂದ ಮಾತ್ರ ಸ್ವಾತಂತ್ರ್ಯ ಲಭಿಸಿತು ಎಂದು ಹೇಳಿರುವ ಮಾತುಗಳನ್ನು ದಾಖಲೆಯ ಮೂಲಕ ಸಾಬೀತು ಪಡಿಸಿಬೇಕಿತ್ತು. ಅದು ಸಾಧ್ಯವೆ? ಅನಕ್ಷಸ್ತರು ತುಂಬಿದ್ದ ಅಂದಿನ ಭಾರತದಲ್ಲಿ ಗಾಂಧಿಯನ್ನು ಎಂದೂ ನೋಡದ ಕೋಟ್ಯಾಂತರ ಜನತೆ ಆ ಮಹಾತ್ಮನ ಮಾತಿಗೆ ಮತ್ತು ಚಿಂತನೆಗೆ ಹೇಗೆ ಒಲಿದರು ಎಂಬುದನ್ನು ಸಂತೋಷ್ ಒಮ್ಮೆ ತಣ್ಣಗೆ ಕುಳಿತು ಯೋಚಿಸಿದ್ದರೆ, ಇಂತಹ ಅವಿವೇಕತನದ ಮಾತುಗಳು ಅವರ ಬಾಯಿಂದ ಹೊರಬರುತ್ತಿರಲಿಲ್ಲ.
ಮದನ್ ಲಾಲ್ ಡಿಂಗ್ರಾ, ಸಾವರ್ಕರ್, ಭಗತ್ ಸಿಂಗ್, ಚೆಂದ್ರಶೇಖರ ಅಜಾದ್ ಮುಂತಾದವರನ್ನು ತಮ್ಮ ಮಾತುಗಳಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಎಂದು ಸ್ಮರಿಸಿದ್ದಾರೆ. ಈ ಮಾತುಗಳನ್ನು ಅತಿಶಯದ ಮಾತುಗಳು ಎಂದು ನಾನು ಹೇಳಲಾರೆ ಆದರೆ, ಡಿಂಗ್ರಾ ಮತ್ತು ಸಾವರ್ಕರ್ ಕುರಿತ ಇತಿಹಾಸವನ್ನು ಮಾತ್ರ ನಿಮ್ಮ ಮುಂದೆ ತರಲು ಇಚ್ಚಿಸುತ್ತೇನೆ. ಮದನ್ ಲಾಲ್ ಡಿಂಗ್ರಾ ಲಂಡನ್ ನಗರದಲ್ಲಿ ಓದುತ್ತಿದ್ದಾಗಲೇ ಬ್ರಿಟಿಷರ ಬಗ್ಗೆ ಆಕ್ರೋಶಗೊಂಡಿದ್ದನು. ಸಾವರ್ಕರ್ ಸಂಪರ್ಕಕ್ಕೆ ಬಂದು, ಅವರ ಅಭಿನವ್ ಭಾರತ್ ಮಂಡಲ ಎಂಬ ರಹಸ್ಯ ಸಂಘಟನೆಯನ್ನು ಸೇರಿಕೊಂಡಿದ್ದನು. ಆತನಿಗೆ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಕರ್ಜನ್ ನನ್ನು ಕೊಲ್ಲುವ ಉದ್ದೇಶ ವಿತ್ತು. ಆದರೆ, ಅದೇ ಹೆಸರಿನ ಸರ್.ವಿಲಿಯಂ ಕರ್ಜನ್ ಎಂಬ ಇನ್ನೊಬ್ಬ ಅಧಿಕಾರಿಯನ್ನು ಹತ್ಯೆ ಮಾಡಿ, ಬ್ರಿಟಿಷ್ ಸರ್ಕಾರದಿಂದ ಬಂಧನಕ್ಕೆ ಒಳಗಾಗಿ, 1909 ರ ಆಗಸ್ಟ್ ತಿಂಗಳಿನಲ್ಲಿ ಲಂಡನ್ ನಗರದಲ್ಲಿ ಮರಣ ದಂಡನೆಗೆ ಒಳಗಾದನು.
ಮದನ್ ಲಾಲ್ ಡಿಂಗ್ರಾಗೆ ಆಶ್ರಯ ಮತ್ತು ಶಸ್ತ್ರಾಸ್ತ್ರ ( ಪಿಸ್ತೂಲ್) ಒದಗಿಸಿದ ಆರೋಪದಡಿ ಬಂದನಕ್ಕೆ ಒಳಗಾದ ಮತ್ತು ವಿನಾಯಕ ದಾಮೋದರ್ ಎಂದು ಆ ವೇಳೆಯಲ್ಲಿ ಕರೆಸಿಕೊಳ್ಳುತ್ತಿದ್ದ ಸಾವರ್ಕರ್ ಅವರನ್ನು ಹೆಚ್ಚಿನ ವಿಚಾರಣೆಗೆ ಭಾರತಕ್ಕೆ ( ಮುಂಬೈಗೆ) ಕರೆತರುವಾಗ, ಹಡಗು ಪ್ರಾನ್ಸ್ ನ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದಾಗ, ಈ ಮಹಾಶಯ ತಪ್ಪಿಸಿಕೊಳ್ಳಲು ಯತ್ನಿಸಿ, ಸಮುದ್ರಕ್ಕೆ ಹಾರಿದಾಗ, ಪ್ರಾನ್ಸ್ ಪೊಲೀಸರು ಬಂಧಿಸಿ ಸೆರೆಮನೆಗೆ ತಳ್ಳಿದರು. ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದ ಸಾವರ್ಕರ್ ಅವರನ್ನು ಬ್ರಿಟಿಷ್ ಸರ್ಕಾರ ಮತ್ತೆ ವಶಕ್ಕೆ ಪಡೆದು ಐವತ್ತು ವರ್ಷಗಳ ಸುಧೀರ್ಘ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾ್ ಸೆಲ್ಯೂಲರ್ ಜೈಲಿಗೆ ತಳ್ಳಿತು. ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾವರ್ಕರ್, ಬ್ರಿಟಿಷ್ ಸರ್ಕಾರಕ್ಕೆ ನಿರಂತರ ಕ್ಷಮಾರ್ಪಣೆಯ ಪತ್ರ ಬರೆಯುತ್ತಾ, ( ಒಟ್ಟು ಹನ್ನೊಂದು ಬಾರಿ) ಅಲ್ಲಿಂದ ಬಿಡುಗಡೆಗೊಂಡು, ಸ್ವಂತ ಊರಾದ ಮಹಾರಾಷ್ಟ್ರದ ರತ್ನಗಿರಿ ಬಳಿ ಗೃಹಬಧನದಲ್ಲಿದ್ದರು.
ಜೀವನ ನಿರ್ವಹಣೆಗಾಗಿ ಬ್ರಿಟಿಷ್ ಸರ್ಕಾರದ ಬಳಿ ಬಿಕ್ಷೆ ಬೇಡಿ, ಅಂಗಲಾಚಿದ ಪರಿಣಾಮ ಮಾಸಿಕ ನಿರ್ಬಂಧಿತ ಭತ್ಯೆ ಪಡೆಯುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಯಾವ ಹೋರಾಟಗಾರನು ಬ್ರಿಟಿಷರಿಂದ ಅಂತಹ ಎಂಜಲು ಕಾಸನ್ನು ಪಡೆದಿರಲಿಲ್ಲ. ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿ ಲಾಹೋರ್ ಜೈಲಿನಲ್ಲಿದ್ದು,1931 ರ ಮಾರ್ಚ್ ತಿಂಗಳಲ್ಲಿ ಗಲ್ಲಿಗೇರಿದ ಭಗತ್ ಸಿಂಗ್ ಮತ್ತು ಆತನ ಸಹಚರರು ಬ್ರಿಟಿಷರಿಗೆ ಕ್ಷಮಾರ್ಪಣೆ ಪತ್ರ ಬರೆಯಲಿಲ್ಲ, ಭತ್ಯೆ ಹೆಸರಿನಲ್ಲಿ ಹಣ ಪಡೆಯಲಿಲ್ಲ. ಈಗ ಹೇಳಿ, ಯಾರು ನಿಜವಾದ ಸ್ವಾತಂತ್ರ್ಯ ಹೋರಾಟಗಾರು?
ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಹಾನ್ ದೇಶಭಕ್ತರಂತೆ ಮತ್ತು ಇತಿಹಾಸಕಾರರಂತೆ ಮಾತನಾಡುವ ನಿಮಗೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಟಿಪ್ಪು ಸುಲ್ತಾನ್ ಹೆಸರು ಹೇಳಲು ಏಕೆ ಹಿಂಜರಿಕೆ? ಸ್ವತಃ ಬ್ರಿಟಿಷ್ ಸರ್ಕಾರ ಅಂದರೆ, ಈಸ್ಟ್ ಇಂಡಿಯಾ ಕಂಪನಿ ಒಪ್ಪಿಕೊಂಡಿರುವಂತೆ ಭಾರತದಲ್ಲಿ ಅವರಿಗೆ ದೊಡ್ಡ ಸವಾಲು ಒಡ್ಡಿದ ಏಕೈಕ ಸಂಸ್ಥಾನದ ದೊರೆ ಟಿಪ್ಪು ಸುಲ್ತಾನ್ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಅಯ್ಯಾ, ಮಿತ್ರರಾ, ಕೊಲ್ಕತ್ತಾ ನಗರದಲ್ಲಿರುವ ಬೃಹತ್ ವಿಕ್ಟೊರಿಯಾ ಸ್ಮಾರಕ ಭವನದಲ್ಲಿ ಎರಡನೇ ಮಹಡಿಯಲ್ಲಿ ಇಡೀ ಶ್ರೀರಂಗಪಟ್ಟಣದ ಕೃತಕ ಮಾದರಿಯನ್ನು ಹತ್ತು ಅಡಿ ಅಗಲ ಇಪ್ಪತ್ತುಅಡಿ ಉದ್ದದ ಟೇಬಲ್ ಮೇಲೆ ಸೃಷ್ಟಿ ಮಾಡಿ ಇಡಲಾಗಿದೆ. ಜೊತೆಗೆ ಇತರೆ ವಿವರಗಳಿವೆ. ಬ್ರಿಟಿಷರನ್ನು ಹಗಲಿರುಳು ಕಾಡಿದ ಟಿಪ್ಪುವಿನ ಹೆಸರನ್ನು ಹೇಳಲು ನಿಮ್ಮ ನಾಲಿಗೆಗೆ ಯಾವ ಬಗೆಯ ಲಕ್ವಾ ಹೊಡೆದಿದೆ? ಹೇಳಬಲ್ಲಿರಾ?
ಹದಿನೆಂಟನೇ ಶತಮಾನದ ಟಿಪ್ಪು ಸುಲ್ತಾನ್ ಇರಲಿ, ಇಪ್ಪತ್ತನೇ ಶತಮಾನದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿ ಜೊತೆ ಕೈ ಜೋಡಿಸಿ ಹೋರಾಡಿದ ಮೌಲನಾ ಅಜಾದ್ ಮತ್ತು ಭಾರತದ ವಾಯುವ್ಯ ಪ್ರಾಂತ್ಯದ ಬೆಲೂಚಿಸ್ಥಾನದಿಂದ ಬಂದ ಖಾನ್ ಅಬ್ದಲ್ ಗಫರ್ ಖಾನ್ ಹಾಗೂ ಇತರೆ ನಾಯಕರ ಹೆಸರು ಬಿ.ಎಲ್.ಸಂತೋಷ್ ಅಥವಾ ನಿಮ್ಮಿಂದ ಎಂದಾದರೂ ಕೇಳಿ ಬಂದಿರುವ ಇತಿಹಾಸ ಉಂಟೆ? ನಿಮಗೆ ಕನಿಷ್ಠ ಇಪ್ಪತ್ತೈದು ಮಂದಿ ಮುಸ್ಲಿಂ ಮಹಿಳೆಯರ ದಾಖಲೆಯನ್ನು ನಾನು ನೀಡಬಲ್ಲೆ. ನನ್ನ ಪದಗಳಿವೆ ಎದೆಯೊಳಗೆ ಎಂಬ ಸಂಶೋಧನಾ ಕೃತಿಯಲ್ಲಿ 1875 ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಾರ್ಯಕರ್ತರಿಗೆ ಆಶ್ರಯ ನೀಡಿ, ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಕಾರಣಕ್ಕೆ ಕಾನ್ಪುರದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲ್ಪಟ್ಟ ಇಪ್ಪತ್ತೊಂದು ಮುಸ್ಲಿಂ ಸಂಗೀತಗಾರ್ತಿಯರು ಮತ್ತು ನೃತ್ಯಗಾತಿಯರ ವಿವರಗಳಿವೆ. ದಯವಿಟ್ಟು ಓದಿ ಮತ್ತು ಎದೆಯೊಳಗಿನ ವಿಷವನ್ನು ಕಡಿಮೆ ಮಾಡಿಕೊಳ್ಳಿ.
ಅಯ್ಯಾ ಅವಿವೇಕಿ ಮಿತ್ರರಾ, ನಿಮ್ಮ ಹಿಂದೂ ರಾಷ್ಟ್ರದ ಹುಚ್ಚುತನವನ್ನು ದಯವಿಟ್ಟು ತ್ಯೆಜಿಸಿ. ನಿಮ್ಮಂತೆ, ಪಾಕಿಸ್ತಾನದಲ್ಲಿ ಮುಸ್ಲಿಂ ರಾಷ್ಟ್ರಕ್ಕಾಗಿ ಹಗಲಿರುಳು ಶ್ರಮಿಸಿದ ಓರ್ವ ವ್ಯಕ್ತಿ 1948 ರಲ್ಲಿ ಅಲ್ಲಿಂದ ಗಡಿಪಾರಾಗಿ ಲಂಡನ್ ನಗರದಲ್ಲಿ ಬೀದಿ ನಾಯಿಯಂತೆ ಪ್ರಾಣ ಬಿಟ್ಟನು. ಆತನ ಇತಿಹಾಸವನ್ನು ಒಮ್ಮೆ ಓದಿ ನೋಡಿ. ಚೌಧುರಿ ರೆಹಮತ್ ಆಲಿ ಎಂಬ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಗಳಿಸಿದ್ದ ಈ ವ್ಯಕ್ತಿ 1933 ರಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕೆ ಪಾಕಿಸ್ತಾನ ಎಂಬ ಹೆಸರನ್ನು ನೀಡಿದ ಕೀರ್ತಿಗೆ ಒಳಗಾಗಿದ್ದಾನೆ. ಪಾಕಿಸ್ತಾನ ಎಂಬ ಹೆಸರಿನ ಪ್ರತಿಯೊಂದು ಅಕ್ಷರದ ಹಿಂದೆ ಪಂಜಾಬ್, ಆಫ್ಘಾನಿಸ್ತಾನ್, ಕಾಶ್ಮೀರ್, ಸಿಂದ್, ಮತ್ತು ಬೆಲೂಚಿಸ್ತಾನ್ ಹೆಸರುಗಳಿರುವುದನ್ನು ನಾವು ಗಮನಿಸಬಹುದು.
1947 ರಲ್ಲಿ ಭಾರತ ಪಾಕ್ ವಿಭಜನೆಯಾದಾಗ, ಅಲ್ಲಿನ ಅಧ್ಯಕ್ಷ ಜಿನ್ನಾ ಮತ್ತು ಪ್ರಥಮ ಪ್ರಧಾನಿ ಲಿಯಾಕತ್ ಖಾನ್ ಅವರಿಗೆ ನೂತನ ಪಾಕಿಸ್ತಾನದ ಹಿಂದೂ, ಸಿಖ್ ಹಾಗೂ ಪಾರ್ಸಿ ಗಳ ಬಗ್ಗೆ ಯಾವುದೇ ಅಸಮಾಧಾನ ಇರಲಿಲ್ಲ. ಅವರೆಲ್ಲರೂ ಪಾಕಿಸ್ತಾನದ ಗೌರವಾನ್ವಿತ ನಾಗರೀಕರು ಎಂದು ಪರಿಗಣಿಸಿದ್ದರು. ಆದರೆ, ಚೌಧಿರಿ ರೆಹಮತ್ ಮಾತ್ರ ಇಲ್ಲಿನ ಹಿಂದೂ ರಾಷ್ಟ್ರ ಭಕ್ತರ ಶೈಲಿಯಲ್ಲಿ ಪಾಕಿಸ್ತಾನದ ಹಿಂದೂ ಮತ್ತು ಸಿಖ್ ಸಮುದಾಯದ ವಿರುದ್ಧ ವಿಷ ಕಾರುತ್ತಾ, ಲೇಖನಗಳನ್ನು ಬರೆಯುತ್ತಾ, ಸರ್ಕಾರದ ನೀತಿಗಳನ್ನು ಖಂಡಿಸುತ್ತಿದ್ದನು. 1948 ರ ಸೆಂಪ್ಟಂಬರ್ ತಿಂಗಳಲ್ಲಿ ಮಹಮದ್ ಆಲಿ ಜಿನ್ನಾ ನಿಧನಾನಂತರ, ಪ್ರಧಾನಿ ಲಿಯಾಕತ್ ಆಲಿ ಖಾನ್ ಅವರು 1948 ರ ಅಕ್ಟೋಬರ್ ತಿಂಗಳಲ್ಲಿ ಈ ಪರಮ ಮುಸ್ಲಿಂ ವಾದಿಯನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಿದರು.
ದೇಶಭ್ರಷ್ಟನಾದ ಚೌಧುರಿ ರೆಹಮತ್ ಲಂಡನ್ ನಗರಕ್ಕೆ ಬಂದು ಅಲ್ಲಿನ ಕಾನೂನು ಸೇವಾ ಸಂಸ್ಥೆಗಳಲ್ಲಿ ಗುಮಾಸ್ತನಾಗಿ ದುಡಿಯುತ್ತಾ, ಒಂಟಿಯಾಗಿ ಬದುಕು ದೂಡುತ್ತಿದ್ದನು. 1951 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ನಿಧನವಾಗಿ ಅನಾಥ ಹೆಣವಾದನು. ಆನಂತರ ಪಾಕ್ ಸರ್ಕಾರವು ಲಂಡನ್ ನಗರದಲ್ಲಿದ್ದ ರಾಯಭಾರಿ ಕಚೇರಿ ಮೂಲಕ ಆಸ್ಪತ್ರೆ ಬಿಲ್ ಹಣವನ್ನು ಪಾವತಿಸಿ, ಲಂಡನ್ ನಗರದಲ್ಲಿ ಅಂತ್ಯಕ್ರಿಯೆ ನೆರವೇರಿಸಿತು.

ಆರ್.ಎಸ್.ಎಸ್. ಹಿಂದೂ ರಾಷ್ಟ್ರದ ಭಕುತ ಮಣಿಗಳಾ, ಭಾರತದ ಇತಿಹಾಸವನ್ನು ಗಂಭೀರವಾಗಿ ಓದಿಕೊಳ್ಳಿರಯ್ಯ, ಈ ಜಗತ್ತಿನ ನೆಲದಲ್ಲಿ ಹಾರಾಡಿದ ಯಾವ ಸಾಮ್ರಾಟನೂ ಶಾಶ್ವತವಾಗಿ ಉಳಿದಿಲ್ಲ. ಎಲ್ಲರೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿರುವ ಗಾಂಧೀಜಿ ಮತ್ತು ಅವರ ಸಹವರ್ತಿಗಳಾದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪೊಳ್ಳು ಭಾಷಣಗಳಿಂದ ಅಳಿಸಲು ಸಾಧ್ಯವಿಲ್ಲ. ಏಕೆಂದರೆ, ಈ ನೆಲದಲ್ಲಿ ದಾರ್ಶನಿಕ ಚಿಂತನೆಗಳಿಗೆ ಎಂದಿಗೂ ಸಾವಿಲ್ಲ.
ಪಾಕಿಸ್ತಾನದ ಚೌಧುರಿ ರೆಹಮತ್ ರೀತಿಯಲ್ಲಿ ನೀವೂ ಬೀದಿಯ ಹೆಣವಾಗುವುದು ಬೇಡ ಕಣ್ರಯ್ಯಾ. ಈಗ ಎದ್ದು ನಿಂತಿರವ ಜೆನ್ ಜಿ ಎಂಬ ಯುವತಲೆಮಾರಿನ ಚಿಂತನೆಯು ನಮ್ಮ ತಲೆ ಮಾಸಿದ ಚಿಂತನೆಗಳಿಂತ ಅರ್ಧ ಶತಮಾನಗಳ ಕಾಲ ಮುಂದಿದೆ. ಈ ವಾಸ್ತವ ಸತ್ಯವನನ್ನು ಅರ್ಥ ಮಾಡಿಕೊಂಡು ಮಾತನಾಡಲು ಕಲಿಯಿರಿ.
ಚಿತ್ರ ಒಂದು- ಚೌಧುರಿ ರೆಹಮತ್
ಚಿತ್ರ ಎರಡು- ಲಂಡನ್ ನಗರದಲ್ಲಿರುವ ಆತನ ಸಮಾಧಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ