ಸೋಮವಾರ, ಜೂನ್ 10, 2013

ಕಾಡ್ಗಿಚ್ಚಿನ ಕರಾಳ ಕಥೆ

ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚು ದಿನ ನಿತ್ಯದ ಸಂಗತಿಯೇನೊ ಎಂಬಂತಾಗಿ ಈ ಸಂಗತಿ ಯಾರ ಎದೆಗೂ ತಾಕದ ಮೋಕ ಜೀವಿಗಳ ಮೌನ ರೋದನವಾಗಿ,  ಒಂದರ್ಥದಲ್ಲಿ ನಿಜವಾದ ಅರಣ್ಯ ರೋದನವಾಗಿದೆ. ಹತ್ತಿ ಉರಿಯುವ ಅರಣ್ಯದ ಅಗ್ನಿಜ್ವಾಲೆಯಲ್ಲಿ ಯಾವೊಂದು ಪ್ರತಿರೋಧವಿಲ್ಲದೆ ಬೆಂದುಹೋಗುವ ಹಕ್ಕಿಗಳಗೂಡು, ಅವುಗಳಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ ಹಕ್ಕಿಮರಿಗಳು, ನೆಲದ ಮೇಲಿನ ಚಿಟ್ಟೆ, ಪತಂಗ, ಹಾವು, ಕಪ್ಪೆ, ಹುಳ ಉಪ್ಪಟೆಗಳು, ಇರುವೆ ಗೂಡು, ಮರದಮೇಲಿನ ಮಂಗಗಳ ಚೀರಾಟ, ದಿಕ್ಕುತಪ್ಪಿ ಅಲೆಯುವ ಹರಿಣಿ, ಆನೆ, ಹುಲಿ, ಚಿರತೆಗಳ ಗಳ ಹಿಂಡು ಹೀಗೆ ಇವುಗಳ ಆರ್ತನದಕ್ಕೆ ಕಣ್ಣಾಗುವವರು, ಕಿವಿಯಾಗುವವರು ಯಾರೂ ಜಗತ್ತಿನಲ್ಲಿ ಇಲ್ಲವೆನೋ ಎಂದೆನಿಸುತ್ತದೆ. ಅರಣ್ಯ ಹತ್ತಿ ಉರಿಯುವಾಗ ಇಂತಹ ದುರ್ಘಟನೆಗಳಿಗೆ ಹಲವಾರು  ಬಾರಿ ಸಾಕ್ಷಿಯಾಗಿರುವ  ನನ್ನಂತಹವನಿಗೆ ಇವೆಲ್ಲವೂ ಜೀವ ಹಿಂಡುವ ಸಂಗತಿಗಳು.
ಅರಣ್ಯದಲ್ಲಿ ಅಗ್ನಿ ಆಕಸ್ಮಿಕ ಎನ್ನುವುದು ಅರಣ್ಯದ ಇತಿಹಾಸದಷ್ಟು ಹಳೆಯ ಸಂಗತಿ. ಆದರೆ, ಹಿಂದಿನ ದಿನಗಳಲ್ಲಿ  ಅರಣ್ಯದಲ್ಲಿ ನೈಸರ್ಗಿಕವಾಗಿ ಅಗ್ನಿ ಆಕಸ್ಮಿಕ ಸಂಭವಿಸುತ್ತಿದ್ದುದು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ. ಒಂದನೇಯದಾಗಿ, ಮರಗಳಿಗೆ ಸಿಡಿಲು ಬಡಿದಾಗ, ಎರಡನೇಯದು ಬಿದಿರು ಬೆಳೆಯುವ ಪ್ರದೇಶದಲ್ಲಿ, ಜೋರಾಗಿ ಗಾಳಿ ಬೀಸಿದ ಸಂದರ್ಭದಲ್ಲಿ  ಬಿದಿರು ಬೊಂಬುಗಳ ತಿಕ್ಕಾಟದಿಂದ ಉಂಟಾಗುತ್ತಿದ್ದ ಬೆಂಕಿಯ ಕಿಡಿಯಿಂದಾಗಿ ಮಾತ್ರ.ಈ ಎರಡು ಆಕಸ್ಮಿಕ ಅನಾಹುತಗಳಿಗೆ ಪರಿಹಾರವೂ ಕೂಡ ಆ ಕಾಲದಲ್ಲಿ ಇತ್ತು. ಸಿಡಿಲು ಬಡಿದಾಗ ಸೃಷ್ಟಿಯಾಗುತ್ತಿದ್ದ ಕಾಡ್ಗಿಚ್ಚಿಗೆ ಸುರಿಯುತ್ತಿದ್ದ ಮಳೆ ನೈಸರ್ಗಿಕವಾಗಿ ಬೆಂಕಿಯನ್ನು ನಂದಿಸುತ್ತಿತ್ತು. ಬಿದಿರು ಮರಗಳು ಇರುವ ಅರಣ್ಯ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಸುತ್ತಲೂ ಕಂದಕವನ್ನು ತೋಡುವುದರ ಮೂಲಕ  ಬೆಂಕಿ ಇತರೆ ಪ್ರದೇಶಗಳಿಗೆ ಹರಡದಂತೆ ತಡೆಯುವ ಕ್ರಮ ಜಾರಿಯಲ್ಲಿತ್ತು. ಈ ಪದ್ಧತಿಯನ್ನು 1870 ರಲ್ಲಿ ಬ್ರಿಟೀಷರು Forest Fire Line ಎಂಬ ಯೋಜನೆಯಡಿ ಜಾರಿಗೆ ತಂದಿದ್ದರು. ಈ ನಿಯಮ ಇಂದಿಗೂ ಭಾರತದ ಎಲ್ಲಾ ಅರಣ್ಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದೆ. ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಅರಣ್ಯಪ್ರದೇಶಗಳಲ್ಲಿ ರಸ್ತೆಯ ಇಕ್ಕೆಲಗಳಿಗೂ  ಇದನ್ನು ವಿಸ್ತರಿಸಲಾಗಿದೆ
     ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ನಡುವೆಯೂ ಅರಣ್ಯ ಪ್ರದೇಶಗಳಲ್ಲಿ  ಹೆಚ್ಚಿದ ಮಾನವನ ಚಟುವಟಿಕೆ ಮತ್ತು ಅನಗತ್ಯ ಹಸ್ತಕ್ಷೇಪದಿಂದಾಗಿ ಭಾರತದಲ್ಲಿ ಪ್ರತಿವರ್ಷ ಸರಾಸರಿ 33 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಅರಣ್ಯಗಳ ಪ್ರದೇಶಗಳಲ್ಲಿ ಇರುವ ಗಿರಿಶಿಖರ, ಜಲಪಾತ ಇಲ್ಲವೇ ಇತ್ತೀಚೆಗೆ ನಾಯಿಕೊಡೆ ಅಣಬೆಗಳಂತೆ ಎಲ್ಲೆಡೆ ತಲೆ ಎತ್ತುತ್ತಿರುವ ರಿಸಾರ್ಟ್ ಗಳ ಪ್ರಭಾವದಿಂದಾಗಿ ಇಂತಹ ಜಾಗಗಳಿಗೆ ಪ್ರವಾಸಿಗರು ಹೆಚ್ಚಾಗಿ ಬೇಟಿ ನೀಡುತ್ತಿದ್ದಾರೆ. ಅವರು ಸೇದಿ ಬಿಸಾಡಿದ ಬೀಡಿ ಅಥವಾ ಸಿಗರೇಟಿನ ತುಂಡು ಬಹುತೇಕ ಅಗ್ನಿ ಅವಘಡಗಳಿಗೆ ಕಾರಣವಾಗುತ್ತಿದೆ. ಇವರ ಜೊತೆಗೆ ಅರಣ್ಯದಲ್ಲಿ ಪ್ರಾಣಿಗಳ ಬೇಟಿಗಾಗಿ ಸಂಚರಿಸುವ ಅಕ್ರಮ ಬೇಟೆಗಾರರು, ಮತ್ತು ಮರಗಳ ಕಳ್ಳಸಾಗಾಣಿಕೆದಾರರಿಗೆ  ದಟ್ಟವಾದ ಅರಣ್ಯದಲ್ಲಿ ಬೆಳೆದು ನಿಂತಿರುವ ಪೊದೆಗಳು ಅವರ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಹಿನ್ನಲೆಯಲ್ಲಿ ಬೆಂಕಿ ಹಾಕಿರುವ ನಿರ್ದೇಶನಗಳು ಸಾಕಷ್ಟಿವೆ. ಕಳೆದ ಒಂದು ದಶಕದಿಂದ ಭಾರತದಲ್ಲಿ ಸಂಭವಿಸುತ್ತಿರುವ ಬಹುತೇಕ ಅರಣ್ಯದ ಕಾಡ್ಗಿಚ್ಚು ಮಾನವ ನಿರ್ಮಿತ ಅನಾಹುತಗಳಾಗಿರುವುದು ವಿಶೇಷ.
ಭಾರತದ ಹಿಮಾಲಯದ ತಪ್ಪಲು ಮತ್ತು ಭಾರತ ಮತ್ತು ಬರ್ಮಾ ಗಡಿಭಾಗದಲ್ಲಿರುವ ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶ ಹಾಗೂ ಪಶ್ಚಿಮಘಟ್ಟದ ಶ್ರೇಣಿಯಲ್ಲಿರುವ ಅರಣ್ಯಗಳಲ್ಲಿ ಅತಿ ಹೆಚ್ಚು ಅಗ್ನಿ ಅನಾಹುತಗಳು ಸಂಭವಿಸುತ್ತಿವೆ, ಭಾರತದಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಒರಿಸ್ಸಾ ರಾಜ್ಯ ಎರಡನೆಯ ಸ್ಥಾನದಲ್ಲಿದ್ದು,ಕರ್ನಾಟಕ ರಾಜ್ಯ ಮೂರನಯ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಸವಿರುವ ದಂಡಕಾರಣ್ಯ ಎಂದು ಕರೆಯಲಾಗುವ ಮಧ್ಯಪ್ರದೇಶ ಮತ್ತು ಛತ್ತೀಸ್ಘಡ ಅರಣ್ಯ ಪ್ರದೇಶಗಳಲ್ಲಿ ನಕ್ಸಲರು ಬೀಡು ಬಿಟ್ಟಿರುವ ಕಾರಣ ಕಾಡ್ಗಿಚ್ಚು ಇಲ್ಲವೆನೋ ಎಂಬಂತೆ ಭಾಸವಾಗುತ್ತಿದೆ. ನಕ್ಸಲರ ಭಯದಿಂದ ಇಲ್ಲಿ ಮರಗಳ್ಳರು, ಬೇಟೆಗಾರರು ಕಾಲಿಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ಮಧ್ಯ ಪ್ರದೇಶದಲ್ಲಿ ಅಗ್ನಿಗೆ ಕೇವಲ 35 ಹೆಕ್ಟೇರ್ ಅರಣ್ಯ ಪ್ರದೇಶ ಆಹುತಿಯಾಗಿದೆ.  ಭಾರತದಲ್ಲಿ ಸಾಮಾನ್ಯವಾಗಿ ಅರಣ್ಯದ ಕಾಡ್ಗಿಚ್ಚು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಸಿಗೆಯ ಅವಧಿಯಲ್ಲಿ ಸಂಭವಿಸುತ್ತಿದೆ. ಆ ದಿನಗಳಲ್ಲಿ ಒಣಗಿದ ಗಿಡಗೆಂಟೆಗಳು, ಹುಲ್ಲುಗಾವಲು  ಮತ್ತು ಮರದ ತರಗೆಲೆಗಳು ಕಾಡ್ಗಿಚ್ಚು  ಹಬ್ಬಲು ಕಾರಣವಾಗುತ್ತಿವೆ.
2012 ರ ಲ್ಲಿ ಒರಿಸ್ಸಾ ರಾಜ್ಯದಲ್ಲಿ ಒಟ್ಟು 2700 ಹೆಕ್ಟೇರ್ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ಕೋರಾಪೆಟ್ ಜಿಲ್ಲೆಯಲ್ಲಿ 500 ಮತ್ತು ಗಂಜಾಂ ಜಿಲ್ಲೆಯಲ್ಲಿ 287 ಘಟನೆಗಳು ಜರುಗಿವೆ. ಮಹಾರಾಷ್ಟ್ರದಲ್ಲಿ 2011 ರಲ್ಲಿ ಒಟ್ಟು 72 ಸಾವಿರ ಹೆಕ್ಟೇರ್ ಪ್ರದೇಶ ಮತ್ತು 2012 ರಲ್ಲಿ 24 ಸಾವಿರ ಹೆಕ್ಟೇರ್ ಪ್ರದೇಶ ಕಾಡ್ಗಿಚ್ಚಿನಿಂದಾಗ ಹಾನಿಗೊಳಗಾಗಿದೆ. ಮಹಾರಾಷ್ಟ್ರದಲ್ಲಿ  ಹಾನಿಯಾಗಿರುವ ಬಹುತೇಕ ಅರಣ್ಯಪ್ರದೇಶ ಮುಂಬೈ- ಪೂನಾ ನಡುವಿನ ಕಣಿವೆ ಪ್ರದೇಶಗಳಲ್ಲಿ. ( ಇಲ್ಲಿ ಮಹಾಬಲೇಶ್ವರ, ಲೊಕಂಡವಾಲ ಗಿರಿಧಾಮಗಳಿದ್ದು ಸಾವಿರಕ್ಕೂ ಅಧಿಕ ರೆಸಾರ್ಟ್ ಗಳಿವೆ)
ಕರ್ನಾಟಕದ ಅರಣ್ಯದ ಸ್ಥಿತಿ ಗತಿ ಕೂಡ  ಮಹಾರಾಷ್ಟ್ರಕ್ಕಿಂತ ಭಿನ್ನವಾಗಿಲ್ಲ. ನಾಗರಹೊಳೆ ಅಭಯಾರಣ್ಯದಲ್ಲಿ 1999 ರಲ್ಲಿ 9008 ಹೆಕ್ಟೇರ್ ಅರಣ್ಯ ಮತ್ತು 2004ರಲ್ಲಿ 9505 ಹೆಕ್ಟೇರ್ ಹಾಗೂ 2012 ರಲ್ಲಿ 3912 ಹೆಕ್ಟೇರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗಿದೆ. ಬಂಡಿಪುರ ಅರಣ್ಯದಲ್ಲಿ 2004ರಲ್ಲಿ ಸಂಭವಿಸಿದ ದುರಂತದಲ್ಲಿ 22 ಸಾವಿರ ದ 657 ಹೆಕ್ಟೇರ್ ಹಾಗೂ 2012 ರಲ್ಲಿ 2267 ಹೆಕ್ಟೇರ್ ಅರಣ್ಯ ಸುಟ್ಟು ಕರಕಲಾಯಿತು. ಭದ್ರಾ ಅಭಯಾರಣ್ಯದಲ್ಲಿ 1999 ರಲ್ಲಿ 2.500 ಹೆಕ್ಟೇರ್ ಮತ್ತು 2012ರಲ್ಲಿ 446 ಹೆಕ್ಟೇರ್ ಅರಣ್ಯ ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಆಹುತಿಯಾಗಿದೆ.( ಒಂದು ಹೆಕ್ಟೇರ್= 2.5 ಎಕರೆ ಪ್ರದೇಶ) ಕರ್ನಾಟಕ ರಾಜ್ಯವೊಂದರಲ್ಲಿ ಅಗ್ನಿ ಅನಾಹುತದಿಂದ ಪ್ರತಿವರ್ಷ 55 ಕೋಟಿ ರೂಪಾಯಿ ಮೌಲ್ಯದ ಸಾಗುವಾನಿ(ತೇಗ) ನಂದಿ, ಹೊನ್ನೆ, ಸಿಲ್ವರ್ ಓಕ್ ಮುಂತಾದ ಮರಗಳ ಸಂಪತ್ತು ನಾಸವಾಗುತ್ತಿದೆ ಎಂದು ತಜ್ಙರು ಅಂದಾಜಿಸಿದ್ದಾರೆ. ಜೊತೆಗೆ  ಜಗತ್ತಿನ ಪರಿಸರ ತಜ್ಙರು Hot Spot  ಎಂದು ಕರೆಯಲಾಗುವ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ತಾಣಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗುತ್ತಿರುವುದು ಮತ್ತು ಪಶ್ಚಿಮಘಟ್ಟಗಳಲ್ಲಿ ಶೇಕಡ 60 ರಷ್ಟು ಅಮೂಲ್ಯವಾದ ತೇಗ, ಹೊನ್ನೆ, ಮರಗಳು ಕಡಿಮೆಯಾಗಿರುವುದನ್ನು ಏಷ್ಯಾ ನೇಚರ್ ಕನ್ಸರ್ ವೇಶನ್ ಪೌಂಡೇಶನ್ ಸಂಸ್ಥೆಯ ನರೇಂದ್ರ ಕೋದಂಡ ಪಾಣಿ ಎಂಬ ತಜ್ಙರು ಗುರುತಿಸಿದ್ದಾರೆ.
ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ನೆಪದಲ್ಲಿ ಆಧುನಿಕತೆಯ ಕರಾಳ ಹಸ್ತ ಕ್ಷೇಪ ಹೀಗೆಯೇ ಅರಣ್ಯಪ್ರದೇಶದಲ್ಲಿ ಮುಂದುವರಿದರೆ, ನಮ್ಮ ಮುಂದಿನ ತಲೆಮಾರು ಅರಣ್ಯ, ಹಸಿರು ಮತ್ತು, ಪಕ್ಷಿ, ಪ್ರಾಣಿಗಳನ್ನು ಭೂಪಟದಲ್ಲಿ, ಚಿತ್ರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ನೋಡುವ ದಿನಗಳು  ದೂರವಿಲ್ಲ ಎನಿಸುತ್ತಿದೆ.
ಇತ್ತೀಚೆಗೆ ಉಪಗ್ರಹದ ಮೂಲಕ ಸಂಗ್ರಹಿಸುವ  ಛಾಯಾಚಿತ್ರಗಳು ಹಾಗೂ ಅರಣ್ಯ ಪ್ರದೇಶದಲ್ಲಿ ನಿರಂತ ಗಸ್ತು ತಿರುಗುವ ಕಾವಲು ಪಡೆಗಳ ಮೂಲಕ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಅರಣ್ಯ ರಕ್ಷಣೆಗಾಗಿ ನೂರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಆದರೆ, ಈ ಹಣ ಮತ್ತು ಯೋಜನೆ ನಮ್ಮ ಅರಣ್ಯಾಧಿಕಾರಿಗಳ ಪಾಲಿಗೆ ಚಿನ್ನದ ತತ್ತಿ ಇಡುವ ಕೋಳಿಯಂತಾಗಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ