ಸೋಮವಾರ, ಜೂನ್ 24, 2013

ಮುಂಗಾರು ಮಳೆ ಮತ್ತು ಬಿತ್ತನೆಯ ಬವಣೆಗಳು

ಅದೊಂದು ಕಾಲವಿತ್ತು. ಮೊದಲ ಮುಂಗಾರು ಹನಿ ಇಳೆಗೆ ಬಿದ್ದೊಢನೆ ರೈತನ ಎದೆಯೊಳಗೆ ಪುಳಕ, ರೋಮಾಂಚನಗಳು ಉಂಟಾಗುತ್ತಿದ್ದವು. ಮಳೆ ಬಿದ್ದ ಮಾರನೆ ದಿನ ಎತ್ತು, ನೇಗಿಲ ಜೊತೆ ಭೂಮಿಯತ್ತ ಹೊರಟ ಅವನ ನಡಿಗೆಯಲ್ಲಿ, ಯುದ್ಧರಂಗಕ್ಕೆ ಹೊರಟ ಯೋಧನೊಬ್ಬ ಗತ್ತು ಇರುತ್ತಿತ್ತು. ಈಗ ಬಿತ್ತನೆ ಬೀಜಗಳ ಪರದಾಟ, ರಸಗೊಬ್ಬರಕ್ಕಾಗಿ ಅಹಾಕಾರ, ಕೂಲಿ ಕಾರ್ಮಿಕರ ಸಮಸ್ಯೆ, ಹೀಗೆ ಹತ್ತಾರು ಸಂಕಟಗಳ ಸರಮಾಲೆ ಮುಂಗಾರಿನ ಮಳೆಯ ಜೊತೆ ಅವನ ಕೊರಳಿಗೆ ಸುತ್ತಿಕೊಳ್ಳುತ್ತಿವೆ. ಇವೆಲ್ಲವೂ ವ್ಯವಸ್ಥೆ ಸೃಷ್ಟಿಸಿದ ನರಕವೇನಲ್ಲ, ಬದಲಾಗಿ ತನ್ನ ಸ್ವಯಂಕೃತ ಅಪರಾಧದಿಂದಾಗಿ ರೈತನೂ ಸಹ ಭಾಗಿಯಾಗಿದ್ದಾನೆ.
ಪ್ರತಿ ಮುಂಗಾರು ಸಮಯದಲ್ಲಿ ಬಿತ್ತನೆ ಚಟುವಟಿಕೆ ಆರಂಭಗೊಳ್ಳುತ್ತಿದ್ದಂತೆ, ಬಿತ್ತನೆ ಬೀಜಗಳ ಕಾಳಸಂತೆಯ ಮಾರಾಟಗಾರರು ಚುರುಕಾಗುತ್ತಾರೆ. ಬೀಜಕಂಪನಿಗಳು ದಿಡೀರನರ ಬೆಲೆ ಏರಿಸಿ ರೈತ ಸಮುದಾಯದ ಸುಲಿಗೆಗೆ ಕೈಜೋಡಿಸುತ್ತವೆ. ಈ ದೇಶದಲ್ಲಿ ಕೃಷಿ ರಂಗದ ಮೇಲೆ ನಿಖರವಾದ ನಿಯಂತ್ರಣವಿಲ್ಲದ ಅಸಮರ್ಥ ಸರ್ಕಾರಗಳೂ ಇದರಲ್ಲಿ ಭಾಗಿಯಾಗಿವೆ.
ಭಾರತದಲ್ಲಿ ಪ್ರತಿವರ್ಷ 15 ಸಾವಿರ ಕೋಟಿ ರೂಪಾಯಿಗಳ ಬಿತ್ತನೆ ಬೀಜಗಳ ವ್ಯಾಪಾರ ನಡೆಯುತ್ತಿದೆ.  ಈಗಲೂ ದೇಶದ ಅರ್ಧಕ್ಕಿಂತ ಕಡಿಮೆ ರೈತರು ತಮ್ಮ ಸಾಂಪ್ರದಾಯಕ ಬಿತ್ತನೆ ಬೀಜಗಳನ್ನು ಬೇಸಾಯಕ್ಕಾಗಿ  ಬಳಸುತ್ತಿದ್ದಾರೆ. ವಿಶೇಷವಾಗಿ ಭತ್ತ, ರಾಗಿ, ಜೋಳ, ಗೋಧಿ ಮುಂತಾದ ಆಹಾರ ಧಾನ್ಯಗಳ ಬೀಜವನ್ನು ರೈತರು ತಾವೇ ಸಂಗ್ರಹಿಸಿ ಇಟ್ಟುಕೊಂಡು, ಕೃಷಿಗೆ ಉಪಯೋಗಿಸುತ್ತಿದ್ದಾರೆ.
ದೇಶದ ಹಲವಾರು ರಾಜ್ಯ ಸರ್ಕಾರಗಳು ಬೀಜ ನಿಗಮವನ್ನು ಸ್ಥಾಪಿಸಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ವಿತರಣೆ ಮಾಡುತ್ತಿದ್ದರೂ ಸಹ,  ಅವುಗಳು ಹೈಬ್ರಿಡ್ ಬೀಜಗಳು, ಅವುಗಳ ಮರು ಬಳಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ರೈತರು ಅವುಗಳನ್ನು ತಿರಸ್ಕರಿಸುತ್ತಾ ಬಂದಿದ್ದರು. ಆದರೆ, ಇತ್ತೀಚೆಗೆ ಎಲ್ಲಾ ವಿಧವಾದ ಸಾಂಪ್ರದಾಯಕ ಬೀಜಗಳು ಕಲುಷಿತಗೊಳ್ಳುತ್ತಾ ಬಂದಿವೆ. ಹಾಗಾಗಿ ಅಸಲಿ ಮತ್ತ ನಕಲಿ ನಡುವಿನ ಗಡಿರೇಖೆ ಅಳಿಸಿ ಹೋಗಿದೆ.
ಭಾರತದಲ್ಲಿ ಶೇಕಡ 87 ರಷ್ಟು ಆಹಾರ ಧಾನ್ಯ ಬೆಳೆಗಳ ಬೀಜಗಳು ಮತ್ತು ಶೇಕಡ 13 ರಷ್ಟು ತರಕಾರಿ ಬೆಳೆಗಳ ಬೀಜಗಳು ರೈತರಿಂದ ಬಳಕೆಯಾಗುತ್ತಿವೆ. ಜಗತ್ತಿನಲ್ಲಿ ಎರಡನೇ  ಅತಿ ಹೆಚ್ಚು ಬೀಜ ಬಳಕೆ ಮತ್ತು ಕೃಷಿ ಚಟುವಟಿಕೆಯ ರಾಷ್ಟ್ರವಾಗಿರುವ ಭಾರತದ ಮೇಲೆ ಎಲ್ಲಾ ಬಹುರಾಷ್ಟ್ರೀಯ ಬೀಜ ಕಂಪನಿಗಳ ಕಣ್ಣು ಬಿದ್ದಿದೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದರ ಮೂಲಕ  ದುಬಾರಿ ಬೆಲೆಗೆ ಬಿತ್ತನೆ ಬೀಜ ಮತ್ತು ರಸಾಯನಿಕ ಗೊಬ್ಬರಗಳನ್ನು ಮಾರುವ ಪ್ರವೃತ್ತಿಯೂ ಸಹ ಹೆಚ್ಚಾಗತೊಡಗಿದೆ.
ಹೈಬ್ರಿಡ್ ಬೀಜಗಳು ಕುರಿತಂತೆ ಯಾವುದೇ ಉತ್ತರದಾಯಕತ್ವ ಕಂಪನಿಗಳಿಗೆ ಇಲ್ಲವಾದ ಕಾರಣ ಇಂತಹ ಬೀಜಗಳ ಬಳಕಗೆ ರೈತ ಹಿಂಜರಿಯುತ್ತಾನೆ. ಇವೊತ್ತಿಗೂ ಅನೇಕ ತರಕಾರಿ, ಹತ್ತಿ, ಜೋಳ ಮುಂತಾದ ಬೆಳೆಗಳ ಫಸಲು ಕೈ ಕೊಟ್ಟ ಉದಾಹರಣೆಗಳು ದಿನ ನಿತ್ಯ ಸುದ್ಧಿಯಾಗುತ್ತಿವೆ. ಇಳುವರಿ ಸ್ವಲ್ಪ ಕಡಿಮೆಯಾದರೂ ಚಿಂತೆ ಇಲ್ಲ, ರಸಗೊಬ್ಬರ, ಕೀಟನಾಶಕದಂತಹ ದುಬಾರಿ ವೆಚ್ಚದ ತಲೆನೋವುಗಳು ಇರುವುದಿಲ್ಲ ಎಂಬ ಏಕೈಕ ಕಾರಣದಿಂದಾಗಿ ರೈತರು ದೇಶೀ ಬಿತ್ತನೆ ಬೀಜಗಳ ಮೊರೆ ಹೋಗಿದ್ದಾರೆ. ಆದರೆ, ಎಣ್ಣೆಕಾಳು ಮತ್ತು ಮುಸುಕಿನ ಜೋಳದಂತಹ ವಾಣಿಜ್ಯಬೆಳೆಗಳಿಗೆ ಮಾತ್ರ  ಹೈಬ್ರಿಡ್ ಬೀಜಗಳನ್ನು ಬಳಸುತ್ತಿದ್ದಾರೆ.

ಕೃಷಿ ರಂಗದ ದುಷ್ಪಾರಿಣಾಗಳು ಮತ್ತು ಅವ್ಯವಸ್ಥೆಗಳನ್ನು ಅರಿತ ಪರಿಣಿತ ಹಾಗೂ ಪ್ರಗತಿಪರ ರೈತರು ಇತ್ತೀಚೆಗೆ ಸಾವಯವ ಕೃಷಿಗೆ ಹೊರಳುತ್ತಿದ್ದು, ದುಬಾರಿ ವೆಚ್ಚದ ಕೃಷಿಗೆ ವಿದಾಯ ಹೇಳಿದ್ದಾರೆ ಅಲ್ಲದೆ, ಏಕಬೆಳೆಯ ಪದ್ಧತಿಗೆ ಜೋತು ಬೀಳದೆ, ಮಿಶ್ರ ಬೆಳೆಗಳ ಪ್ರಯೋಗ ಮಾಡುವುದರ ಮೂಲಕ ಯಶಸ್ವಿಯಾಗಿದ್ದಾರೆ.
ರೈತರ ಸ್ವಾವಲಂಬನೆಯ ಈ ಬದುಕಿನ ಮೇಲೆ ಕಣ್ಣಿಟ್ಟಿರುವ ಬಹುರಾಷ್ಟ್ರೀಯ ಬೀಜ ಕಂಪನಿಗಳು, ಈಗಾಗಲೇ ಏಷ್ಯಾ ರಾಷ್ಟ್ರಗಳ ಬಹುತೇಕ ಆಹಾರಧಾನ್ಯ, ಮತ್ತು  ಹಣ್ಣು ಹಾಗೂ ತರಕಾರಿ ಬೀಜಗಳನ್ನು ಕುಲಾಂತರಗೊಳಿಸಿ ಅವುಗಳ ಸಂತಾನ ಶಕ್ತಿಯನ್ನು ಹರಣಗೊಳಿಸುತ್ತಿವೆ. ಈ ರೀತಿ ಕ್ರೌರ್ಯಕ್ಕೆ ತುತ್ತಾಗಿ, ಏಷ್ಯಾ ರಾಷ್ಟ್ರಗಳಲ್ಲಿ ಅವಸಾನದ ಅಂಚಿಗೆ ತಲುಪಿರುವ ಬೀಜಗಳ ವಿವರ ಈ ಕೆಳಗಿನಂತಿವೆ.

ಒಂದು- ಆಹಾರ ಧಾನ್ಯ ಬೆಳೆಗಳ ಬೀಜಗಳು
ಬಾರ್ಲಿ, ಗಿಡ್ಡಗೋಧಿ, ಭತ್ತ, ಪ್ರೋಸೊ ಎಂಬ ಒರಟು ಧಾನ್ಯ, ಇತ್ಯಾದಿ

ಎರಡು – ತರಕಾರಿ ಬೀಜಗಳು
ಕೆಂಪು ಅವರೆ, ಎಲೆಕೋಸು, ಕ್ಯಾರೆಟ್, ಕುಂಬಳ, ಚೀನಾ ಕೋಸು, ಚಿಟ್ಟೆ ಅವರೆ, ಈರುಳ್ಳಿ, ಬಟಾಣಿ, ಮೂಲಂಗಿ ಮುಂತಾದವು

ಮೂರು- ಹಣ್ಣುಗಳ ಬೀಜಗಳು
ಸೇಬು, ಅಂಜೂರ, ದ್ರಾಕ್ಷಿ, ನಿಂಬೆ, ಬಾಳೆ, ಮಾವು, ಇತ್ಯಾದಿ.
ಇನ್ನೊಂದು ದಶಕದಲ್ಲಿ ನಮ್ಮ ಸಾಂಪ್ರದಾಯಕ ಹಣ್ಣು ಮತ್ತು ತರಕಾರಿ ಹಾಗೂ ಆಹಾರ ಧಾನ್ಯಗಳ ಫಸಲನ್ನು ನಾವು ಪಠ್ಯ ಪುಸ್ತಕದಲ್ಲಿ ಮತ್ತು ಸಂಗ್ರಹಿಸಿ ಇಡಲಾದ ಚಿತ್ರಗಳಲ್ಲಿ ನೋಡುವ ಸಾಧ್ಯತೆಗಳು ಹೆಚ್ಚಾಗಿವೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ