ಮಂಗಳವಾರ, ಜೂನ್ 25, 2013

ಮೂಕ ಪ್ರಾಣಿಗಳ ಮೌನ ರೋಧನ


ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿರಬೇಕಾದ ಪ್ರಾಣಿಗಳೆಲ್ಲವೂ ನಾಡಿನತ್ತ ಮುಖ ಮಾಡುತ್ತಿವೆ .ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಆವರಿಸಿಕೊಂಡ ಬರದ ಛಾಯೆಯ ಪರಿಣಾಮ ಆಹಾರ, ನೀರು ಇಲ್ಲದೆ ದಿಕ್ಕೆಟ್ಟು ಅಲೆಯುತ್ತಿರುವ ವನ್ಯ ಮೃಗಗಳು, ನಾಡಿಗೆ ಬಂದು ಸಂಘರ್ಷ ಮತ್ತು ಸಾವಿನ ಮೂಲಕ  ದಿನ ನಿತ್ಯ ಸುದ್ಧಿಯಾಗುತ್ತಿವೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡ ಕಾಡಾನೆಗಳ ಗುಂಪು ಸೃಷ್ಟಿಸಿದ ಆತಂಕ ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಇದೊಂದು ರೋಚಕ ಸುದ್ಧಿಯೆಂಬಂತೆ ನಮ್ಮ ದೃಶ್ಯ ಮಾಧ್ಯಮಗಳು ಒಂದೇ ಸಮನೆ ಗಂಟಲು ಹರಿದುಕೊಳ್ಳುತ್ತಿವೆ. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಡುವ ನಮ್ಮ ಅರಣ್ಯ ಇಲಾಖೆ ಮತ್ತು ಸರ್ಕಾರ ಅಕ್ಷರಶಃ ಕಂಗೆಟ್ಟು ಕುಳಿತಿವೆ. ಮನುಷ್ಯ ಮತ್ತು ಪ್ರಾಣಿಗಳ ಈ ಸಂಘರ್ಷದ ಹಿಂದಿರುವ ಕಟುವಾಸ್ತವವನ್ನು ಗ್ರಹಿಸಲಾರದ ನಮ್ಮ ಜನಸಾಮಾನ್ಯರು ಆನೆಗಳಿಗೆ ಪಟಾಕಿ, ಸಿಡಿಮದ್ದು ಗಳ ಮೂಲಕ ಬೆದರಿಕೆ ಹಾಕಿ ಮೋಜಿನ ಮೂಲಕ ಮನರಂಜನೆ ಪಡೆಯುತ್ತಿದ್ದಾರೆ.  ಈ ದಿನ ಪ್ರಕಟವಾದ ವಿಜಯಕರ್ನಾಟಕದ ಮುಖಪುಟದ ವರದಿ ಮತ್ತು ಪ್ರಜಾವಾಣಿಯ ಸಂಪಾದಕೀಯ  ಮಾತ್ರ ವ್ಯವಸ್ಥೆಯ ಕಣ್ಣು ತೆರಸುವಂತಿವೆ.
ಕಳೆದ ಒಂದು ದಶಕದಲ್ಲಿ  ಭಾರತದ ಆನೆ, ಹುಲಿ ಮತ್ತು ಚಿರತೆಗಳ ಸಂತತಿ  ಗಣನೀಯವಾಗಿ ಕುಸಿಯುತ್ತಿದೆ. ಇವುಗಳಿಗೆ ಮೀಸಲಿಟ್ಟಿದ್ದ ಅಭಯಾರಣ್ಯಗಳು ಉಳ್ಳವರ ಪಾಲಿನ ಮೋಜಿನ ತಾಣಗಳಾಗಿ ಪರಿವರ್ತನೆಗೊಂಡಿವೆ. ಪ್ರವಾಸಿಗರಾಗಿ, ಬೇಟೆಗಾರರಾಗಿ, ನಿಸರ್ಗ ಪ್ರೇಮಿಗಳಾಗಿ ಹೀಗೆ ಹಲವು ರೂಪದಲ್ಲಿ  ಅರಣ್ಯ ಪ್ರಪಂಚಕ್ಕೆ ಕಾಲಿಡುತ್ತಿರು ಮಾನವ ಪ್ರಾಣಿಗಳ ಹಸ್ತಕ್ಷೇಪದಿಂದಾಗಿ ವನ್ಯ ಮೃಗಗಳು ತಮ್ಮ ನಿಸರ್ಗ ಸಹಜ ಬದುಕನ್ನು ಕಳೆದುಕೊಂಡಿವೆ. ಭಾರತದಲ್ಲಿ ನಿಸರ್ಗದ ಸಮತೋಲನ ತಪ್ಪಿ ದಶಕಗಳೇ ಉರುಳಿಹೋಗಿವೆ. ಆಧುನಿಕತೆ ಮತ್ತು ಅಭಿವೃದ್ಧಿ ನಮಗೆ ಎಲ್ಲವನ್ನು ವಾಣಿಜ್ಯ ಮತ್ತು ಮನರಂಜನೆಯ ದೃಷ್ಟಿಯಿಂದ ನೋಡುವುದನ್ನು ಕಲಿಸಿದೆ.

ಏಷ್ಯಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಆನೆಗಳನ್ನು ಪಡೆದ ಕೀರ್ತಿ ಒಂದು ಕಾಲದಲ್ಲಿ ಕರ್ನಾಟಕಕ್ಕೆ ಇತ್ತು. ( 28 ಸಾವಿರ ಆನೆಗಳು) 2010 ರ ಗಣತಿಯ ಪ್ರಕಾರ 5350 ರಿಂದ 6230 ಆನೆಗಳು ಇರಬಹುದೆಂದು ಅಂದಾಜಿಸಲಾಗಿದೆ. ಒಂದು ಸಮಾಧಾನಕರ ಸಂಗತಿಯೆಂದರೆ, 1983ರಲ್ಲಿ 3579 ಸಂಖ್ಯೆಯಲ್ಲಿದ್ದ ಆನೆಗಳ ಸಂತತಿ ವೃದ್ಧಿಸಿದೆ. 10 ನೇ ಶತಮಾನದಿಂದ ಕರ್ನಾಟಕದ  ಹೊಯ್ಸಳರು, ಚಾಲಿಕ್ಯರು, ವಿಜಯನಗರದ ಅರಸರು ಮತ್ತು ಟಿಪ್ಪುಸುಲ್ತಾನ್ ನಂತರ ಮೈಸೂರು ಅರಸರು ಇವರುಗಳ ಪ್ರೀತಿಯಿಂದಾಗಿ ರಾಜ್ಯದಲ್ಲಿ ಆನೆಗಳ ಸಂತತಿ ಈವರೆಗೆ ಉಳಿದುಕೊಂಡು ಬಂದಿದೆ.
ಕಳೆದ ಐದು ವರ್ಷಗಳಲ್ಲಿ ಆನೆಗಳು ತಮ್ಮ ವ್ಯಾಪ್ತಿ ಪ್ರದೇಶವನ್ನು  ಬಿಟ್ಟು ನಾಡಿನತ್ತ ಮುಖ ಮಾಡಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಆದರೆ, ಈ ಕುರಿತಂತೆ ನಮ್ಮ ಅರಣ್ಯ ಇಲಾಖೆ ತಲೆಕೆಡಿಸಿಕೊಂಡ ಉದಾಹರಣೆಗಳಿಲ್ಲ. ಹೋಗಲಿ ರಾಜ್ಯ ಹೈಕೋರ್ಟ್ ಸೂಚನೆ ಮೇರೆಗೆ 2012 ಸೆಪ್ತಂಬರ್ ತಿಂಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಹಿರಿಯ ವಿಜ್ಙಾನಿ ಪ್ರೋ.ರಮಣ್ ಸುಕುಮಾರ್ ನೇತೃತ್ವದ ಹದಿಮೂರು ತಜ್ಙ ಸದಸ್ಯರುಗಳನ್ನು ಒಳಗೊಂಡ  ಆನೆ ಕಾರ್ಯಪಡೆಯ (Elephant task force ) ತಂಡವೊಂದು 141 ಪುಟಗಳ ವರದಿಯನ್ನು ಸಲ್ಲಿಸಿದೆ. 
ಈ ವರದಿಯಲ್ಲಿ ಕೂಲಂಕುಶವಾಗಿ ಕರ್ನಾಟಕದ 19 ಅರಣ್ಯವಲಯಗಳಲ್ಲಿ ಹಂಚಿಹೋಗಿರುವ ಆನೆಗಳ ಸಂತತಿ, ಮತ್ತು ಬಂಡಿಪುರ, ಮಳವಳ್ಳಿ, ಸಾವನ್ ದುರ್ಗ, ಅರಕಲಗೂಡು, ಆಲೂರು, ಸಕೇಲೇಶ್ವರ ಈ ಪ್ರದೇಶಗಳಲ್ಲಿ ಆನೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ರೈತರ ವಿದ್ಯತ್ ಬೇಲಿಗೆ ಮತ್ತು  ದಂತಕ್ಕಾಗಿ ಬಲಿಯಾಗುತ್ತಿರುವ ಆನೆಗಳ ಸ್ಥಿತಿ ಮತ್ತು ಅಭಯಾರಣ್ಯಗಳಲ್ಲಿ ತಲೆಯೆತ್ತುತ್ತಿರುವ ರೆಸಾರ್ಟ್ ಗಳು, ಆನೆಗಳ ಸಹಜ ವಲಸೆಗೆ ಇದ್ದ ಕಾರಿಡಾರ್ ಗಳು ಮುಚ್ಚಿ ಹೋಗಿರುವ ಸಂಗತಿ ಎಲ್ಲವನ್ನೂ ಅಂಕಿ ಅಂಶಗಳ ಸಹಿತ ವಿವರಿಸಿ, ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸೂಚಿಸಲಾಗಿದೆ. ಅಲ್ಲದೆ ಸಕಲೇಶ್ವರ ಮತ್ತು ಹಾಸನದ ಆಲೂರು ಬಳಿ ರೈತರ ಜಮೀನಿಗೆ ನುಗ್ಗಿ ಹಾನಿಯುಂಟು ಮಾಡುತ್ತಿರು ಓರ್ವ ಸಲಗ ಸೇರಿದಂತೆ 26 ಆನೆಗಳನ್ನು ಸ್ಥಳಾಂತರಿಸಲು ವರದಿಯಲ್ಲಿ ಸೂಚಿಸಲಾಗಿದೆ. ಆದರೆ ಇದನ್ನು ಓದಲಾರದಷ್ಟು ಅವಿವೇಕಿಗಳು ಮತ್ತು ಸೋಮಾರಿಗಳಾಗಿರುವ ನಮ್ಮ ಅರಣ್ಯಾಧಿಕಾರಿಗಳು, ಅರಣ್ಯದ ನಡುವೆ ಇರುವ ಐಷಾರಾಮದ ಅತಿಥಿಗೃಹದಲ್ಲಿ ತಮ್ಮ ಹೆಂಡತಿ, ಮಕ್ಕಳು ಮತ್ತು ಸ್ನಹಿತರ ಜೊತೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಆನೆಗಳು ಸಾಯುತ್ತಿರುವುದನ್ನು ಗಮನಿಸಿದ ರಾಜ್ಯ ಉಚ್ಛ ನ್ಯಾಯಾಲಯ ಕಳೆದ ವಾರ ಸ್ವಯಂಪ್ರೇರಿತವಾಗಿ ಅರ್ಜಿಯೊಂದನ್ನು ದಾಖಲಿಸಿಕೊಂಡು ಅರಣ್ಯ ಇಲಾಖೆಗೆ ನೋಟೀಸ್ ಜಾರಿ ಮಾಡಿದೆ. ಈ ಕೂಡಲ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ದುರಂತದ ಅಧ್ಯಾಯವೊಂದು ನಮಗಾಗಿ ಕಾದಿದೆ ಎಂಬುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ವಿಶೇಷವಾಗಿ ದೃಶ್ಯ ಮಾಧ್ಯಮಗಳು ಆನೆಗಳು ನಾಡಿಗೆ ಬಂದ ಸಂದರ್ಭದಲ್ಲಿ  ದಿನವಿಡಿ ಕಿಟಾರನೆ ಕಿರುಚಿಕೊಳ್ಳುವುದನ್ನು ಬಿಟ್ಟು ಸಮಸ್ಯೆಯ ಪರಿಹಾರಕ್ಕೆ ತಜ್ಙರ ಜೊತೆ ಕುಳಿತು ಚರ್ಚಿಸಿ ಪರಿಹಾರ ಹುಡುಕಬೇಕಿದೆ. ಕಳೆದ 2012 ರ ಜನವರಿಯಿಂದ ಡಿಸಂಬರ್ ವರೆಗೆ ಕರ್ನಾಟಕದಲ್ಲಿ 183 ಆನೆಗಳು ಮೃತಪಟ್ಟಿವೆ. ಕ್ರಮವಾಗಿ ಜನವರಿ-9, ಪೆಬ್ರವರಿ-12, ಮಾರ್ಚಿ-12, ಏಪ್ರಿಲ್-18, ಮೇ-30, ಜೂನ್-25, ಜುಲೈ-19, ಆಗಸ್ಟ್-15, ಸೆಪ್ಟಂಬರ್-16, ಅಕ್ಟೋಬರ್-12, ನವಂಬರ್-9, ಡಿಸಂಬರ್-6 ಹೀಗೆ ಸಾವನ್ನಪ್ಪಿವೆ. ಇದರಲ್ಲಿ, ದಂತಕ್ಕಾಗಿ ಬೇಟೆ, ಅಪಘಾತ, ವಿದ್ಯುತ್ ಸ್ಪರ್ಶ ಮುಂತಾದ ಅನಾಹುತಗಳಿಗಿಂತ ಬೇಸಿಗೆಯ ದಿನಗಳಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಸಂಖ್ಯೆ ಮತ್ತು ಆಹಾರ, ನೀರಿಲ್ಲದೆ ಸತ್ತ ಆನೆಗಳ ಸಂಖ್ಯೆ ಹೆಚ್ಚಿನಾದಾಗಿದೆ. ಪ್ರತಿದಿನ ಒಂದು ಆನೆಗೆ 200 ರಿಂದ 250 ಕೆ.ಜಿ.ಯಷ್ಟು ಹಸಿರು ಹುಲ್ಲು, ಬಿದಿರು ಮತ್ತು 150 ಲೀಟರ್ ನೀರು ಬೇಕಾಗಿದೆ. ಈ ಸಂಗತಿಯನ್ನು ನಾವು ಅರ್ಥೈಸಿಕೊಂಡರೆ, ಈ ಮೂಕ ಪ್ರಾಣಿಗಳು ನಾಡಿಗೇಕೆ ನುಗ್ಗಿ ಬರುತ್ತಿವೆ ಎಂಬುದು ಮನದಟ್ಟಾಗುತ್ತದೆ. ದಕ್ಷಿಣ ಭಾರದಲ್ಲಿ ಆನೆಗಳ ದುರಂತ ಒಂದು ಬಗೆಯದಾದರೆ, ಪೂರ್ವ ಭಾರತದ ರಾಜ್ಯಗಳ ಆನೆಗಳ ದುರಂತ ಇನ್ನೊಂದು ಬಗೆಯದು.
ಒರಿಸ್ಸಾ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 310 ಆನೆಗಳು ಮೃತಪಟ್ಟಿವೆ. ಇವುಗಳಲ್ಲಿ ಶಿಕಾರಿ, ಸಹಜ ಸಾವು, ಇವುಗಳಿಗಿಂತ, ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಆನೆಗಳ ಸಂಖ್ಯೆ ಹೆಚ್ಚಿನಾದಾಗಿದೆ. 2012ರ ಡಿಸಂಬರ್ 29 ರಂದು ಹೌರ-ಚೆನ್ನೈ ನಡುವೆ ಸಂಚರಿಸುವ ಕೋರಮಂಡಲ್ ಎಕ್ಸ್ ಪ್ರಸ್ ರೈಲಿಗೆ ಸಿಲುಕಿ ಗಂಜಾಂ ಜಿಲ್ಲೆಯ ಅರಣ್ಯದಲ್ಲಿ 8 ಆನೆಗಳು ಮೃತಪಟ್ಟವು. ಒರಿಸ್ಸಾದಲ್ಲಿ 14 ಆನೆಗಳ ಕಾರಿಡಾರ್ ಗಳು ಇದ್ದು, ಅಲ್ಲಿರುವ ಆನೆಗಳ ಸಂಖ್ಯೆ ಕೇವಲ 1930 ಮಾತ್ರ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಸಿಲಿಗುರಿ- ಅಲಿಪುರ್ದರ್ ನಡುವಿನ  168 ಕಿ.ಮಿ. ರೈಲು ಮಾರ್ಗದಲ್ಲಿ 8 ವರ್ಷಗಳ ಅವಧಿಯಲ್ಲಿ ರೈಲಿಗೆ ಸಿಲುಕಿ 43 ಆನೆಗಳು ಮೃತಪಟ್ಟಿವೆ. ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ರೈಲಿನ ವೇಗ 40 ಕಿ.ಮಿ. ಇರಬೇಕು ಎಂಬ ನಿಯಮವನ್ನು ಭಾರತೀಯ ರೈಲ್ವೆ ಇಲಾಖೆ ಗಾಳಿಗೆ ತೂರಿದೆ. ಭಾರತದ ಅರಣ್ಯಗಳಲ್ಲಿ ಒಟ್ಟು 88 ಆನೆಗಳ ಕಾರಿಡಾರ್ ಗಳು ಇದ್ದು ಇವುಗಳ ಸುರಕ್ಷತೆಗೆ ಅರಣ್ಯ ಇಲಾಖೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕನಿಷ್ಟ ಅರಣ್ಯ ಪ್ರಧೇಶಗಳಲ್ಲಿ ರೈಲು ಮಾರ್ಗ ಇರುವ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿ, ಪ್ರತಿ ಒಂದು ಕಿಲೋಮೀಟರ್ ದೂರದಲ್ಲಿ  ಹಳಿಗಳ ಕೆಳಗೆ 10 ಅಡಿ ಅಗಲ ಮತ್ತು 10 ಅಡಿ ಆಳದ ಸುರಂಗ ರಸ್ತೆ ನಿರ್ಮಾಣವಾದರೆ, ಪ್ರಾಣಿಗಳ ಚಲನಕ್ಕೆ ಧಕ್ಕೆ ಬರುವುದಿಲ್ಲ, ಜೊತೆಗೆ ಅವುಗಳು ಅಪಘಾತಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದು. ಆದರೆ, ಉಳ್ಳವರು ಕುಡಿದ ನೀರು ಹೊಟ್ಟೆಯಲ್ಲಿ ಅಲುಗಾಡದ ಹಾಗೆ ಕಾರಿನಲ್ಲಿ ಚಲಿಸಲು  ಪ್ರತಿ ಕಿಲೋಮೀಟರ್ ಗೆ ನಾಲ್ಕರಿಂದ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಿಸಲು ಆಸಕ್ತಿ ತೋರುವ  ನಮ್ಮ ಸರ್ಕಾರಗಳಿಗೆ ಮೂಕ ಪ್ರಾಣಿಗಳ ಪ್ರಾಣದ ಬಗ್ಗೆ ಯಾವ ಕಾಳಜಿಯೂ ಇದ್ದಂತಿಲ್ಲ. ಏಕೆಂದರೆ, ಹೆದ್ದಾರಿಯ ಶುಲ್ಕದ ನೆಪದಲ್ಲಿ ಜನರ ಮೈ ಚರ್ಮ ಸುಲಿಯುವ ಹಾಗೆ ಪ್ರಾಣಿಗಳ ಚರ್ಮ ವನ್ನು ಸುಲಿಯಲಾಗದು ಎಂಬ ಸತ್ಯವನ್ನು ನಮ್ಮ ಸರ್ಕಾರಗಳು ಕಂಡುಕೊಂಡಿವೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ