ಶನಿವಾರ, ಜೂನ್ 15, 2013

ಅಪ್ಪಿಕೊ ( ಚಿಪ್ಕೊ) ಚಳವಳಿಯ ಕಥನ-ಎರಡು

1950 ರ ದಶಕದ ನಂತರ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ನಿರ್ಮಾಣಗೊಂಡ ರಸ್ತೆಗಳು ಮತ್ತೆ  1962 ರ ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧ ದ ನಂತರ ಇನ್ನಷ್ಟು ವಿಸ್ತಾರಗೊಂಡವು. ಅಲ್ಲದೆ, ಭಾರತ ಸೇನಾ ಪಡೆಯು ಗಡಿ ಭಾಗದಲ್ಲಿ ಮತ್ತಷ್ಟು ಸೇನೆಯನ್ನು ಜಮಾವಣೆ ಮಾಡಿತು. ನಂತರ ಘರ್ ವಾಲ್ ಮತ್ತು ತೆಹ್ರಿ ಹಾಗೂ ಚಮೋಲಿ ಪ್ರದೇಶಗಳಲ್ಲಿ ಸೈನಿಕರ ಮತ್ತು ಅಧಿಕಾರಿಗಳ  ವಸತಿ ಬಡಾವಣೆಗಳು, ಹುಟ್ಟಿಕೊಂಡವು. ಇದರಿಂದಾಗಿ ಹಿಮಾಲಯದ ತಣ್ಣನೆಯ ಗಿರಿಶಿಖರಗಳಂತೆ , ನಿರುದ್ಯೋಗ ಮತ್ತು ಕೃಷಿ ಜಮೀನುಗಳ ಕೊರತೆಯ ನಡುವೆಯೂ ತಣ್ಣಗೆ ಬದುಕಿದ್ದ ಅಲ್ಲಿನ ಜನರ ಸಾಮಾಜಿಕ ಬದುಕಿನಲ್ಲಿ ಪಲ್ಲಟವೊಂದು ಆರಂಭಗೊಂಡಿತು. ರಸ್ತೆ ನಿರ್ಮಾಣ ಮತ್ತು ಸೇನಾ ಪಡೆಯ ಕಛೇರಿ, ವಸತಿ ನಿರ್ಮಾಣ ಕಾರ್ಯಗಳಲ್ಲಿ ದುಡಿಯಲು ಕೆಲಸ ಸಿಗತೊಡಗಿತು. ಆದರೆ, ನೀಡುತ್ತಿದ್ದ ಕೂಲಿದರದಲ್ಲಿ ಮಾತ್ರ ತಾರತಮ್ಯ ಎದ್ದು ಕಾಣುತ್ತಿತ್ತು. ಈ ಪ್ರಾಂತ್ಯದ ಜನರ ಮುಗ್ಧತನವನ್ನು ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರು ಕಡಿಮೆ ಕೂಲಿ ಹಣವನ್ನು ಪಾವತಿಸಿ, ಉಳಿದ ಹಣವನ್ನು ತಮ್ಮ ಜೇಬಿಗಿಳಿಸುತ್ತಿದ್ದರು. ಇಂತಹ ಸಮಯದಲ್ಲಿ ಮುಗ್ಧ ಜನರ ಪಾಲಿಗೆ ಆಧಾರವಾಗಿ ಬಂದವರು ಚಾಂಡಿಪ್ರಸಾದ್ ಭಟ್. 
ಇವರು 1956 ರಲ್ಲಿ ಈ ಪ್ರದೇಶಕ್ಕೆ ಬೇಟಿ ನೀಡಿದ್ದ ಜಯಪ್ರಕಾಶ್ ನಾರಾಯಣರ ಚಿಂತನೆಗಳಿಂದ ಪ್ರೇರಿತರಾಗಿದ್ದವರು. ಗಾಂಧೀಜಿ  ಕನಸಿದ್ದ ಗ್ರಾಮಸ್ವರಾಜ್ಯದ ಮಾದರಿಯಲ್ಲಿ ಹಳ್ಳಿಗಳನ್ನು ರೂಪಿಸಬೇಕೆಂಬ ಕನಸು ಹೊತ್ತಿದ್ದ ಜಯಪ್ರಕಾಶ ನಾರಾಯಣರು, ಹಿಮಾಲಯದ ತಪ್ಪಲಿನ ಜನರ ಬವಣೆಗಳನ್ನು ಅರಿತುಕೊಳ್ಳಲು ಈ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಿದ್ದರು. ಈ ಸಮಯದಲ್ಲಿ, ಗೋಪೇಶ್ವರ್ ಎಂಬ ಹಳ್ಳಿಯಲ್ಲಿ ಜನಸಿದ್ದ ಯುವಕ ಚಾಂಡಿ ಪ್ರಸಾದ್ ಭಟ್ ಜೀವನ ನಿರ್ವಹಣೆಗೆ ಋಷಿಕೇಶದಲ್ಲಿ ಪ್ರವಾಸಿಗರ ಬಸ್ಸುಗಳಿಗೆ ಏಜೆಂಟ್ ಆಗಿ,ಹಾಗೂ ಅಲ್ಲಿನ ಕಚೇರಿಯೊಂದರಲ್ಲಿ ಮುಂಗಡ ಟಿಕೇಟ್ ವಿತರಿಸುವ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೆ.ಪಿ. ಯವರ ಸಂಪರ್ಕಕ್ಕೆ ಬಂದ ನಂತರ, ಉದ್ಯೋಗಕ್ಕೆ ರಾಜಿನಾಮೆ ನೀಡಿ, ಗಾಂಧಿ ಪರಿಕಲ್ಪನೆಯ ಹಳ್ಳಿಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದರು.
ಗ್ರಾಮಸ್ವರಾಜ್ಯದ ಮೊದಲ ಪ್ರಯತ್ನವಾಗಿ ಅಲ್ಲಿನ ಜನತೆಗೆ ಸಮಾನ ವೇತನ, ಹಾಗೂ ಎಲ್ಲರಿಗೂ ಉದ್ಯೋಗ ದೊರಕಿಸಿಕೊಡಲು, “ ದಶೋಲಿ ಗ್ರಾಮ ಸ್ವರಾಜ್ಯ ಸಂಘ” ಎಂಬ ಸಹಕಾರ ಸಂಘವನ್ನು ಸ್ಥಾಪಿಸಿದರು. ಆರಂಭದಲ್ಲಿ 30 ಮಂದಿ ಸದಸ್ಯರು ಮತ್ತು 700 ಮಂದಿ ಸದಸ್ಯರಲ್ಲದ ಅರೆ ಕೂಲಿ ಕಾರ್ಮಿಕರು ಸಂಘದ ಅಡಿಯಲ್ಲಿ ದುಡಿಯತೊಡಗಿದರು. ಸಂಘ ಸ್ಥಾಪನೆಯಾದ ನಂತರ ಸಿಗುತ್ತಿದ್ದ ಕೂಲಿದರದಲ್ಲಿ ಹೆಚ್ಚಳವಾಯಿತು. ಅಲ್ಲದೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೈ ಮತ್ತು ಬಾಯಿಗಳು ಬಂದ್ ಆದವು. ಇದರಿಂದ ಸ್ಪೂರ್ತಿಗೊಂಡ ಚಾಂಡಿ ಪ್ರಸಾದ್ ಭಟ್ , ಕೂಲಿ ಕೆಲಸಕ್ಕೆ ಬದಲಾಗಿ ಸೇನಾಪಡೆಯಿಂದ ಮತ್ತು ಆಗಿನ ಉತ್ತರ ಪ್ರದೇಶದ  ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಮತ್ತು ಮನೆಗಳು, ಸೇತುವೆಗಳ ನಿರ್ಮಾಣದ ಗುತ್ತಿಗೆ ಕೆಲಸವನ್ನು ಸಂಘದ ಪರವಾಗಿ ಪಡೆದು ನಿರ್ವಹಿಸತೊಡಗಿದರು. ಈ ಪ್ರಯತ್ನದ ಫಲವಾಗಿ ಸಂಘದ ಆದಾಯ ಕೇವಲ ಮೂರು ವರ್ಷಗಳಲ್ಲಿ ದ್ವಿಗುಣಗೊಂಡಿತು. ಆನಂತರ ಸಹಕಾರಿ ಸಂಘದ ನೇತೃತ್ವದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ಸಲಕರಣೆಗಳು ಮತ್ತು ಮನೆ ಬಳಕೆಗೆ ಬೇಕಾದ ಮರದ ಉಪಕರಣಗಳನ್ನು ತಯಾರಿಸಲು ಮುಂದಾದರು. ದಶೋಲಿ ಗ್ರಾಮ ಸ್ವರಾಜ್ಯದ ಸಂಘದ ಚಟುವಟಿಕೆಗಳನ್ನು ಇಡೀ ಪ್ರಾಂತ್ಯಕ್ಕೆ ವಿಸ್ತರಿಸಿ, ಎಂಟು ಶಾಖಾ ಕಛೇರಿಗಳನ್ನು ತೆರೆದರು.
ಕೃಷಿ ಚಟುವಟಿಕೆಗೆ ಬೇಕಾದ ಮರಗಳನ್ನು ಪಡೆಯಲು ಸರ್ಕಾರದ ಅರಣ್ಯ ಇಲಾಖೆಯ ಬಳಿ ಹೋದಾಗ, ಅಲ್ಲಿಯವರೆಗೆ ಗುಪ್ತವಾಗಿ ನಡೆಯುತ್ತಿದ್ದ ಮರಗಳ ಮಾರಣ ಹೋಮದ ಅವ್ಯವಹಾರ ಬೆಳಕಿಗೆ ಬಂದು ಘರ್ ವಾಲ್ ನ ಜನತೆ ಎಚ್ಚೆತ್ತುಕೊಳ್ಳುವಂತೆ ಮಾಡಿತು. ಸಾಮಾನ್ಯವಾಗಿ ಭೂಸವೆತದಿಂದಾಗಿ ನೆಲಕ್ಕೆ ಉರುಳಬಹುದಾದ ಮರಗಳನ್ನು ಮಾತ್ರ ಕಡಿಯಲು ಗುತ್ತಿಗೆದಾರರಿಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಅರಣ್ಯಾಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಭೂಮಿಗೆ ಬೇರು ಬಿಟ್ಟು ಭದ್ರವಾಗಿರುವ ಮರಗಳನ್ನು ಸಹ ಧರೆಗೆ ಉಳರುಳುವ ಮರಗಳು ಎಂದು ಗುರುತು ಹಾಕುವುದರ ಮೂಲಕ  ಕಡಿಯಲು ಅನುಮತಿ ನೀಡುತ್ತಿದ್ದರು.
ಇದೇ ವೇಳೆಗೆ 1970ರಲ್ಲಿ ಹಿಮಾಲಯದ ತಪ್ಪಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವೊಂದು ಅಲ್ಲಿನ ಜನರಿಗೆ ಪರಿಸರ ರಕ್ಷಣೆ ಕುರಿತು ಪರೋಕ್ಷವಾಗಿ ಪಾಠ ಕಲಿಸಿತ್ತು. ಅಲ್ಲಿನ ಜನ ತಮ್ಮ ಜೀವಮಾನದಲ್ಲಿ ಎಂದೂ ಕಂಡಿರದ ದುರಂತ ಘಟನೆಗೆ ಸಾಕ್ಷಿಯಾದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಅಲಕಾನಂದ ನದಿ 1970 ರಲ್ಲಿ ಪ್ರವಾಹದ ರೂಪದಲ್ಲಿ ತನ್ನ ರೌದ್ರ ರೂಪವನ್ನು ಪ್ರದರ್ಶಿಸಿತು. ಸುಮಾರು 60 ಅಡಿ ಎತ್ತರದಷ್ಟು ಉಕ್ಕಿ ಹರಿದ ಅಲಕಾನಂದ ನದಿಯ ನೀರು ಒಂದು ಗ್ರಾಮವನ್ನು ಸಂಪೂರ್ಣವಾಗಿ ಕಬಳಿಸಿತು. ನೂರಾರು ಮನೆಗಳು ಕೊಚ್ಚಿ ಹೋದವು. 30 ಪ್ರಯಾಣಿಕರಿದ್ದ (ಯಾತ್ರಾರ್ಥಿಗಳು) ಬಸ್ ಹಾಗೂ 5 ಸೇತುವೆಗಳು ಗುರುತು ಸಿಗದ ರೀತಿಯಲ್ಲಿ ನದಿಯಲ್ಲಿ ಕೊಚ್ಚಿ ಹೋದವು. ಒಟ್ಟು 200 ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು. ನದಿಯ ಪ್ರವಾಹ ಇಳಿದ ನಂತರ, ಇಡೀ ಪರಿಸ್ಥಿಯನ್ನು ಅವಲೋಕಿಸಿದಾಗ ಮಾನವನ ಸ್ವಾರ್ಥ ಮತ್ತು ಹಸ್ತಕ್ಷೇಪ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿದ್ದವು. ಪ್ರವಾಹಕ್ಕೆ ಮುನ್ನ ಒಂದು ದಶಕದ ಅವಧಿಯಲ್ಲಿ ನದಿಯ ಪಾತ್ರದ ಹಿಮಾಲಯದ ಪರ್ವತ ಪ್ರದೇಶದಲ್ಲಿ ಲಕ್ಷಾಂತರ ಮರಗಳನ್ನು ಕಡಿದು ಹಾಕಲಾಗಿತ್ತು. ಮರಗಳ ವಿರಳತೆ ಮತ್ತು ಮಣ್ಣಿನ ಸೆವೆತದಿಂದಾಗಿ, ಭೂಮಿಗೆ ಬಿದ್ದ ಮಳೆ ನೀರು, ನೆಲದಲ್ಲಿ ಇಂಗುವ ಬದಲು ಪರ್ವತಗಳ ಇಳಿಜಾರಿನ ಮೂಲಕ ಅಲಕಾನಂದಾ ನದಿಯ ಒಡಲು ಸೇರಿತ್ತು.ಈ ಘಟನೆ ಅಲ್ಲಿನ ಜನಕ್ಕೆ ಮರಗಳ ಮಹತ್ವದ ಬಗ್ಗೆ ಅರಿವು ಮೂಡಿಸಿತ್ತು.
ಸರ್ಕಾರದ ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು,  ಮತ್ತು ಕಡಿಯುವ ಮರಗಳ ಸಂಖ್ಯೆ ತಿಳಿಯಲು ನಿರ್ಧರಿಸಿದ ಸಂಘದ ಸದಸ್ಯರು, ತಾವೂ ಕೂಡ ಮರಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸತೊಡಗಿದರು. ಅಲ್ಲಿಯವರೆಗೆ ಬಿಸಾಕುವ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಮರಗಳ ಬೆಲೆ ದಿಡೀರನೆ ಏರತೊಡಗಿತು. ಜೊತೆಗೆ ಹರಾಜಿನಲ್ಲಿ ಭಾಗವಹಿಸಿದೆ ಇದ್ದರೆ ದಶೋಲಿ ಗ್ರಾಮಸ್ವರಾಜ್ಯ ಸಂಘಕ್ಕೆ ಪುಕ್ಕಟೆಯಾಗಿ ಮರಗಳನ್ನು ಕೊಡುವುದಾಗಿ ಆಮೀಷ ತೋರಿಸಲಾಯಿತು. ಇಂತಹ ಆಸೆಗಳಿಗೆ ಮಣಿಯದ ಚಾಂಡಿ ಪ್ರಸಾದ್ ಭಟ್ ಮರಗಳ ಮಾರಣ ಹೋಮದ ಬಗ್ಗೆ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಸಂಧರ್ಭದಲ್ಲಿ ಅವರು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಆಶ್ರಯಿಸಿದ್ದರು.
ಇವೊತ್ತಿಗೂ ಹಿಮಾಲಯದ ತಪ್ಪಲಿನ ಪ್ರದೇಶದ ಹಳ್ಳಿಗಳಲ್ಲಿ ನಿಸರ್ಗದ ಜೊತೆ, ಮಹಿಳೆಯರಿಗೆ  ಪುರುಷರಿಗಿಂತ  ಹೆಚ್ಚು  ನಿಕಟವಾದ ಒಡನಾಟವಿದೆ. ಉರುವಲು ಸೌದೆ, ಮತ್ತು  ತಮ್ಮ  ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಅರಣ್ಯದ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವವರು ಮಹಿಳೆಯರು.  ಅರಣ್ಯ ಮತ್ತು ಮರಗಳ ಬಗ್ಗೆ ಪವಿತ್ರವಾದ ಭಾವನೆ ಹೊಂದಿದ್ದಾರೆ.ಜೊತೆಗೆ ಅಲ್ಲಿನ ಪ್ರದೇಶಗಳಲ್ಲಿ ಮರಗಳ ಕುರಿತು ಜಾನಪದ ಪರಿಕಲ್ಪನೆಯೊಂದು ಆ ಜನರ ಎದೆಯಲ್ಲಿ ಜೀವಂತವಾಗಿದೆ. ಅದೇನೆಂದರೆ, “ ನಾನು ಈ ಮರದಿಂದ ಪಡೆಯುತ್ತಿರುವ ನೆರಳು, ತಿನ್ನತ್ತಿರುವ ಹಣ್ಣು, ಪಡೆಯುತ್ತಿರುವ ಉರುವಲು ಕಟ್ಟಿಗೆ ಅಥವಾ  ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಿರುವ ಸೊಪ್ಪು ಇವೆಲ್ಲವೂ ನನಗೆ ಮಾತ್ರ ಸೀಮಿತವಲ್ಲ. ಇವುಗಳು ನನ್ನ ಮುಂದಿನ ತಲೆಮಾರುಗಳಿಗೂ ಸಲ್ಲುತ್ತವೆ” ಇಂತಹ ಸುಂದರ  ಪರಿಕಲ್ಪನೆಯೊಂದು ಜೀವಂತ  ಇರುವ ಕಾರಣಕ್ಕಾಗಿ  ಮರಗಳನ್ನು ಕಡಿಯುವ ಗುತ್ತಿಗಾರರ ರಕ್ಷಣೆಗೆ ಬಂದ ಪೊಲೀಸರ ಬಂದೂಕಿನ ಕೊಳವೆಗೆ , ರೇಣಿ ಎಂಬ ಗ್ರಾಮದ ಅನಕ್ಷರಸ್ತ ಹೆಣ್ಣು ಮಗಳಾದ ಗೌರದೇವಿ ಎಂಬಾಕೆ ತನ್ನ ಎದೆಯ ಮೇಲಿನ ಸೆರಗು ಬಿಸಾಕಿ ಎದೆ ಕೊಟ್ಟು ನಿಲ್ಲಲು ಸಾಧ್ಯವಾಯಿತು. ಆಕೆ, ಗುತ್ತಿಗೆ ದಾರರ  ರಕ್ಸಣೆಗೆ ಬಂದ ಪೊಲೀಸರಿಗೆ ಹೇಳಿದ ಮಾತುಗಳಿವು.” ಮೊದಲು ನನ್ನನ್ನು ಉರುಳಿಸಿ ನಂತರ ಮರಗಳನ್ನು ಉರುಳಿಸಿ.”

iಇಂತಹ ಪರಿಕಲ್ಪನೆಗಳ ಸ್ಪೃಷ್ಟ ಅರಿವಿದ್ದ ಚಾಂಡಿ ಪ್ರಸಾದ್ ಭಟ್  1970 ರಿಂದ 1773 ರ ವರೆಗೆ ಹಿಮಾಲಯದ ಹಳ್ಳಿ, ಹಳ್ಳಿಗಳನ್ನು ತಿರುಗಿ ಜನತೆಯನ್ನು ಮರಗಳ ರಕ್ಷಣೆಗಾಗಿ ಸಂಘಟಿಸಿದರು, ಅವರು ಸತತ ಮೂರು ವರ್ಷಗಳ ಕಾಲ ಘರ್ ವಾಲ್, ತೆಹ್ರಿ ಪ್ರಾಂತ್ಯದಲ್ಲಿ ಸಂಚರಿಸಿ  ಬಹಿರಂಗ ಸಭೆ, ಭಾಷಣ ಮತ್ತು ಜಾಥ ನಡೆಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಸಂಧರ್ಭದಲ್ಲಿ ಅವರಿಗೆ ಮಧ್ಯ ವಯಸ್ಕಿನ ಧೀರ ಮಹಿಳೆ ಗೌರದೇವಿ ದೊರಕಿದಳು.
                                             ( ಮುಂದುವರಿಯುವುದು)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ