ಶುಕ್ರವಾರ, ಜೂನ್ 21, 2013

ಹಸಿವು, ಬಡತನ ಮತ್ತು ಆಹಾರ ಭದ್ರತೆ

ಭಾರತದ ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಂಡಿರುವ ಸಂಸತ್ತಿನಲ್ಲಿ ಆಹಾರಭದ್ರತೆ ಕುರಿತಾದ ಮಸೂದೆ ರಾಜಕೀಯ ಪಕ್ಷಗಳ ಬೌದ್ಧಿಕ ದಿವಾಳಿತನದಿಂದಾಗಿ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದೆ.  ದೇಶದ ಕೋಟ್ಯಾಂತರ ಜನ ಇಂದಿಗೂ ಹಸಿವಿನಿಂದ ಬಳಲತ್ತಾ ಖಾಲಿ ಹೊಟ್ಟೆಯಲ್ಲಿ ದಿನ ರಾತ್ರಿಮಲಗುತ್ತಿದ್ದಾರೆ. ಇಲ್ಲಿನ ಜನರ ಬಡತನ ಮತ್ತು ಅನಕ್ಷರತೆ,ಹಾಗೂ ಅಜ್ಙಾನಗಳು ಪ್ರತಿಯೊಂದು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ವಿಷಯಗಳಾಗುತ್ತಾ, ಅಧಿಕಾರ ಹಿಡಿಯುವ ಅದೃಷ್ಟದ ಬಾಗಿಲುಗಳಾಗಿವೆ.

ಒಂದೆಡೆ ಹಸಿವಿನಿಂದ ಕಂಗೆಟ್ಟ ಬಡವರು, ಇನ್ನೊಂದೆಡೆ, ಗೋದಾಮುಗಳಲ್ಲಿ ಸಮರ್ಪಕವಾಗಿ ವಿತರಣೆಯಾಗದೆ ಕೊಳೆಯುತ್ತಿರುವ ಆಹಾರ ಧಾನ್ಯಗಳು, ಕಣ್ಣಿಗೆ ರಾಚುವಂತಹ ಇಂತಹ ಕಟು ವಾಸ್ತವ ಸಂಗತಿಗಳನ್ನು ಮುಚ್ಚಿಕೊಳ್ಳಲು ಅಭಿವೃದ್ಧಿ ಕುರಿತಂತೆ ಪುಂಖಾನು ಪುಂಖವಾಗಿ ಹಸಿ ಸುಳ್ಳುಗಳನ್ನು ಹೇಳುತ್ತಿರುವ ಸರ್ಕಾರಗಳು, ಇಂತಹ ಅಯೋಮಯ ಸ್ಥಿತಿಯಲ್ಲಿ  ಅಸಮರ್ಪಕ ಆಡಳಿತವನ್ನು ನಾವು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ.
ವಿಶ್ವ ಆಹಾರ ಯೋಜನಾ ಮಂಡಳಿಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಲ್ಲಿ ಶೇಕಡ, 25 ರಷ್ಟು ಮಂದಿ ಭಾರತದಲ್ಲಿ ಇದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನ 86 ಕೋಟಿ 80 ಲಕ್ಷ ಜನತೆಯಲ್ಲಿ, ಬಾರತದಲ್ಲಿ 27 ಕೋಟಿ, 70 ಲಕ್ಷ ಜನರಿದ್ದಾರೆ.  ಈ ಧಾರುಣ ಸ್ಥಿತಿಯಲ್ಲಿ ಜನತೆಯ ಹಸಿವನ್ನು ನೀಗಸಲು ಕೇಂದ್ರ ಸರ್ಕಾರ ಸಿದ್ಧಪಡಿಸಿದ ಆಹಾರ ಭದ್ರತೆಯ ಮಸೂದೆ ಬಡವರ ಪಾಲಿಗೆ ಸಂಜೀವಿನಿಯಾಗುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ, ಜನಪ್ರತಿನಿಧಿಗಳ ಇಚ್ಛಾ ಕೊರತೆ,ಮತ್ತು  ರಾಜಕೀಯ ಪಕ್ಷ ಮತ್ತು ನೇತಾರರನ್ನು ಆರಾಧಿಸುವ ಭಾರತದ ಜನ ಸಾಮಾನ್ಯರ ಬೌದ್ಧಿಕ ದಾರಿದ್ರ್ಯದ ಕಾರಣದಿಂದಾಗಿ ಮಸೂದೆಗೆ ಇನ್ನೂ ಮುಕ್ತಿ ದೊರಕಿಲ್ಲ.

ಭಾರತದ ಪಡಿತರ ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಿ ಆಹಾರ ಭದ್ರತೆಯ ಮಸೂದೆಯನ್ನು ಜಾರಿಗೆ ತಂದದ್ದೇ ಆದರೆ, ಈ ದೇಶದ 21 ಕೋಟಿ ಬಡವರು ಮತ್ತು 6 ಕೋಟಿ ಮಕ್ಕಳು ಹಸಿವೆಂಬ ನರಕದಿಂದ ಹೊರಬರಲು ಅವಕಾಶದ.ಸಾಧ್ಯತೆಗಳಿವೆ.  ಭಾರತದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿದೆ. ಮಕ್ಕಳ ಈ ದುಸ್ಥಿಯಿಂದಾಗಿ ಭಾರತ ಸರ್ಕಾರ ಪ್ರತಿವರ್ಷ ಎರಡೂವರೆ ಸಾವಿರ ಕೋಟಿ ರೂಪಾಯಿಗಳನ್ನು ಆರೋಗ್ಯಕ್ಕಾಗಿ ವ್ಯಯ ಮಾಡುತ್ತಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಹಸಿವು ಮತ್ತು ಅಪೌಷ್ಟಿಕತೆಯಿಂದಾಗಿ ಭಾರತದ ಅಭಿವೃದ್ಧಿ ಬೆಳವಣಿಗೆ ದರದಲ್ಲಿ ಶೇಕಡ ಮೂರರಷ್ಟು ಕುಂಟಿತವಾಗಿದೆ ಎಂದು ಸಹ ಬ್ಯಾಂಕ್  ಅಭಿಪ್ರಾಯಪಟ್ಟಿದೆ,
ಜಗತ್ತಿನಲ್ಲಿ ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೆಯ ಸ್ಥಾನ ಎಂಬ ರೋಚಕ ವರದಿಗಳು ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ತಕ್ಷಣ ಭಾರತದ ಬಡವರ ಹಸಿವು ನೀಗುವುದಿಲ್ಲ. ಕೇವಲ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆಯನ್ನು ಸಮಗ್ರ ಅಭಿವೃದ್ಧಿಯ ಬೆಳವಣಿಗೆ ಎಂದು ಬಿಂಬಿಸುವುದರೊಂದಿಗೆ  ಅಬಿವೃದ್ಧಿ ಕುರಿತಂತೆ  ಜನ ಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನಗಳು ಇತ್ತೀಚೆಗೆ ಎಡಬಿಡದೆ ಸಾಗಿವೆ.
ಕಾರ್ಪೊರೇಟ್ ಸಂಸ್ಥೆಗಳು, ಮತ್ತು ದೇಶದ ಉಗ್ರ ಬಲಪಂಥೀಯರು, ಗುಜರಾತಿನ ನರೇಂದ್ರ ಮೋದಿಯನ್ನು ಅಭಿವೃದ್ಧಿಯ ಹರಿಕಾರ ಎಂದು ಹಾಡಿ ಹೊಗಳುವ ಮುನ್ನ ಒಮ್ಮೆ ಗುಜರಾತಿನ ಮಾನವ ಅಭಿವೃದ್ಧಿಯ ಬೆಳವಣಿಗೆ ದರವನ್ನು ಕೂಲಂಕುಶವಾಗಿ ಪರಶೀಲನೆ ಮಾಡುವುದು ಒಳಿತು.
ಗುಜರಾತ್ ರಾಜ್ಯದಲ್ಲಿ ಅಲ್ಲಿನ ಜನಸಂಖ್ಯೆಯಲ್ಲಿ(6ಕೋಟಿ,30ಲಕ್ಷ) ಶೇಕಡ 45 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಿ ಶೇಕಡ 36 ರಷ್ಟು ಪಾಲು ಇದ್ದರೆ, ಈ ಮಹಿಳೆಯರ ಪೈಕಿ ಶೇಕಡ 61 ರಷ್ಟು ಜನ ಮಹಿಳೆಯರು ಹಿಂದುಳಿದ ಜಾತಿ ಮತ್ತು ವರ್ಗಕ್ಕೆ ಸೇರಿದವರಾಗಿದ್ದಾರೆ.  ಗುಜರಾತ್ ರಾಜ್ಯ ಇತ್ತೀಚೆಗೆ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಬೆಳವಣಿಗೆ ಸಾಧಿಸಿದ್ದರೂ ಕೂಡ, ಗ್ರಾಮೀಣ ಪ್ರದೇಶದಲ್ಲಿ ನಿರೊದ್ಯೋಗಿಗಳ ಸಂಖ್ಯೆ ಶೇಕಡ 51 ರಷ್ಟನ್ನು ದಾಟಿದೆ. ಇದು ಗುಜರಾತ್ ಒಂದರ ಕಥೆಯಲ್ಲ, ಎಲ್ಲಾ ರಾಜ್ಯಗಳ ನೋವಿನ ಕಥೆ ಕೂಡ ಹೌದು.
 ಇಪ್ಪೊತ್ತೊಂದನ ಶತಮಾನದ ಜಗತ್ತಿನ ಅತಿಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ರಂತಹ ಪ್ರಧಾನಿ ಇದ್ದರೂ ಕೂಡ ಭಾರತ ಹಸಿವು ಮತ್ತು ನಿರೂದ್ಯೋಗದಿಂದ ಮುಕ್ತವಾಗಲು ಸಾಧ್ಯವಾಗಲಿಲ್ಲ. ಆದರೆ, ಭಾರತದಂತೆ ಬ್ರೆಜಿಲ್ ಕೂಡ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದು. ಆ ರಾಷ್ಟ್ರದ ಅಧ್ಯಕ್ಷ ಲೂಲ ನಮ್ಮ ಪ್ರಧಾನಿಯಂತೆ ವಿದ್ಯಾವಂತನಲ್ಲ, ತಜ್ಙನಲ್ಲ, ಆದರೆ ಎರಡು ಬಾರಿ ಅಧ್ಯಕ್ಷನಾಗಿ ಬ್ರೆಜಿಲ್ ರಾಷ್ಟವನ್ನು ಹಸಿವಿನಿಂದ ಮುಕ್ತಗೊಳಿಸಿ, ಅಬಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಬಗೆ ನಿಜಕ್ಕೂ ವಿಸ್ಮಯ ಮೂಡಿಸುತ್ತದೆ.
ಕೊಳಗೇರಿಯಲ್ಲಿ ಹುಟ್ಟಿ ಬೆಳೆದು, ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು , ನಂತರ ತನ್ನ  ತಾಯಿ ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾದಾಗ, ಅದೇ ಕೊಳಗೇರಿಯ ಗುಡಿಸಲಿನಲ್ಲಿ ಮಲತಂದೆಯ ಜೊತೆ ವಾಸಿಸುತ್ತಾ, ತಾಮ್ರ ದ ಕುಲುಮೆಯಲ್ಲಿ ಕೂಲಿ ಕಾರ್ಮಿಕ ನಾಗಿ ದುಡಿದು ಬದುಕು ಕಟ್ಟಿಕೊಂಡ ಲೂಲಾನ ಬದುಕು ಸೋಜಿಗವಷ್ಟೇ ಅಲ್ಲ, ಒಂದು ಅಪರೂಪದ ಯಶೋಗಾಥೆ.. ಮುಂದೆ ಕಾರ್ಮಿಕ ನಾಯಕನಾಗಿ ಬೆಳೆದು, ತನ್ನದೇ ಆದ ಲೇಬರ್ ಪಕ್ಷವನ್ನು ಕಟ್ಟಿ, ಅದನ್ನು ಅಧಿಕಾರಕ್ಕೆ ತರುವುದರ ಹಿಂದೆ ಲೂಲಾ ಹೃದಯದಲ್ಲಿ ಹಲವಾರು ಕನಸುಗಳಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ತಾನು ಬಾಲ್ಯದಲ್ಲಿ ಎದುರಿಸಿದ ಸಂಕಷ್ಟಗಳು ಆತನ ಎದೆಯಲ್ಲಿ ಹಸಿರಾಗಿದ್ದವು. ( ತಾಮ್ರದ ಕುಲುಮೆಯಲ್ಲಿ ಕೆಲಸ ಮಾಡುವಾಗ ತನ್ನ ಎಡಗೈನ ಎರಡು ಬೆರಳುಗಳನ್ನು ಲೂಲಾ ಕಳೆದುಕೊಂಡರು) ಕೆಲಸವಿಲ್ಲದ ದಿನಗಳಲ್ಲಿ ನಗರದ ಬೀದಿಗಳಲ್ಲಿ ಶೇಂಗಾ ಬೀಜ ಮಾರಿ ಬದುಕಿದ ಲೂಲಾ ರವರಿಗೆ  ಬಡವರ ಹಸಿವು ಅರ್ಥವಾಗಿತ್ತು. ಹಾಗಾಗಿ 2003 ರಲ್ಲಿ ಅವರು, ಬ್ರೆಜಿಲ್ ದೇಶದಲ್ಲಿ  ಪರಿಣಾಮಕಾರಿಯಾಗಿ ಜಾರಿಗೆ ತಂದ ಆಹಾರ ಭದ್ರತೆಯ ಮಸೂದೆಯಿಂದಾಗಿ  ಆ ದೇಶದ ಮಕ್ಕಳು ಅಪೌಷ್ಟಿಕತೆಯ ಕಾಯಿಲೆಯಿಂದ ಪಾರಾಗಿದ್ದಾರೆ, ಬಡವರನ್ನು ಮೇಲೆತ್ತಲು ಅವರು ಆಹಾರ ಭಧ್ರತೆ ಮಸೂದೆ ಜೊತೆಗೆ ಎಲ್ಲಾ ಬಡವರಿಗೂ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಹಾಗೂ ವಸತಿ ಯೋಜನೆಯನ್ನು ಜೋಡಿಸಿದ್ದಾರೆ. ಇದರ ಪರಿಣಾಮ ಆ ದೇಶದಲ್ಲಿ ಶೇಕಡ 67ರಷ್ಟು ಇದ್ದ ಮಕ್ಕಳ ಅಪೌಷ್ಟಿಕತೆ ಕೇವಲ ಐದು ವರ್ಷಗಳಲ್ಲಿ  ಶೇಕಡ 13 ಕ್ಕೆ ಇಳಿದಿದೆ. ಎರಡು ಕೋಟಿ ಜನ ಬಡತನದ ರೇಖೆಯಿಂದ ಮೇಲೆದ್ದು ಬಂದು ಸ್ವತಂತ್ರ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಬ್ರೆಜಿಲ್ ದೇಶ ಚೀನಾ ಹಾಗೂ ಭಾರತವನ್ನು ಮಾನವ ಅಭಿವೃದ್ಧಿ ದರದಲ್ಲಿ ಮೀರಿಸಿ, ಜಗತ್ತಿಗೆ ಮಾದರಿ ರಾಷ್ಟ್ರವಾಗಿದೆ. ನಮ್ಮ ಜನಪ್ರತಿನಿಧಿಗಳಾದ, ಗ್ರಾಮಪಂಚಾಯಿತಿ ಸದಸ್ಯನಿಂದ ಹಿಡಿದು, ನಗರ ಸಭೆ, ಪಟ್ಟಣ ಪಂಚಾಯಿತಿ ಸಭೆಯ ಸದಸ್ಯರು ಮತ್ತು  ಶಾಸಕರುಗಳೆಂಬ   ಅಯೋಗ್ಯರು, ರಸ್ತೆ ದುರಸ್ತಿ, ಚರಂಡಿ ನಿರ್ಮಾಣ, ಕಸ ವಿಲೆವಾರಿ ಯಂತಹ ಕ್ಷುಲ್ಲಕ ಸಂಗತಿಗಳ ಅದ್ಯಯನಕ್ಕಾಗಿ ವಿದೇಶ ಪ್ರವಾಸದ ಮೂಲಕ ಮೋಜು ಮಸ್ತಿ ಮಾಡಿದರು. ಕರ್ನಾಟಕ ರಾಜ್ಯ ಸತತ ಎರಡು ವರ್ಷಗಳ ಕಾಲ ತೀವ್ರ ಬರಗಾಲದಲ್ಲಿ ನರಳಿದರೂ ಸಹ ಆತ್ಮ ಸಾಕ್ಷಿಯ ಪ್ರಜ್ಙೆ ಇಲ್ಲದವರಂತೆ, ಪೈಪೋಟಿಗೆ ಬಿದ್ದು ತಮ್ಮ ಪತ್ನಿಯರ ಸಮೇತ ವಿದೇಶ ಪ್ರವಾಸ ಮಾಡಿ ಬಂದರು. ಅದರ ಬದಲು ಇವರು  ಒಮ್ಮೆ ಬ್ರೆಜಿಲ್ ಗೆ ಬೇಟಿ ನೀಡಿ, ಅಲ್ಲಿನ   ಅಭಿವೃದ್ಧಿಯನ್ನು ಗಮನಿಸಿ ಬಂದಿದ್ದರೆ, ಇವರಿಂದ ಈ ನಾಡು ಉದ್ಧಾರವಾಗುವುದು ಇರಲಿ, ಕನಿಷ್ಟ ಇವರ ತಲೆಯಲ್ಲಿರುವ ಸಗಣಿಯ ಪ್ರಮಾಣವಾದರೂ  ಸ್ವಲ್ಪ ಕಡಿಮೆಯಾಗುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ